`ಕೈಲಾಗದವರು ಮೈ ಪರಚಿಕೊಂಡರು’ ಇಂತಹದ್ದೊಂದು ಮಾತು ನಮ್ಮಂತಹವರನ್ನು ನೋಡಿಯೇ ಹುಟ್ಟಿರಬೇಕು, ಹಾಗಂತ ಮುಂಬಯಿ ದಾಳಿಯ ನಂತರ ಅನ್ನಿಸತೊಡಗಿದೆ. ಭಾರತದ ಮಾನ ಉಳಿಸಿಕೊಳ್ಳಲು ನಾವು ನಮ್ಮ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಬಹುದು. ದಾಳಿಯ ಗಾಯ ಮುಚ್ಚಲು ನಮ್ಮ ಶೌರ್ಯದ ಇತಿಹಾಸ ಹೇಳಬಹುದು, ಅಥವಾ ಮತ್ತಿನೇನೋ ನೆವ ಹೇಳಬಹುದು. ಆದರೆ ವಾಸ್ತವ ಇದೆಲ್ಲಕ್ಕಿಂತ ಭಿನ್ನವಾಗಿದೆ…
ನಮ್ಮ ಪುಣ್ಯ, ಭಯೋತ್ಪಾದಕರಿನ್ನೂ ಆರ್ಡಿಎಕ್ಸ್, ಎ.ಕೆ-೪೭ ಕಾಲದಲ್ಲಿಯೇ ಇದ್ದಾರೆ, ಅಥವಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅವರ ಬಳಿಯಿದ್ದರೂ ಅದನ್ನು ಪ್ರಯೋಗಿಸುವ ಸಾಹಸಕ್ಕೆ ಕೈಹಾಕುತ್ತಿಲ್ಲ. ಒಂದೊಮ್ಮೆ ರಾಸಾಯನಿಕ ಅಸ್ತ್ರಗಳೇನಾದರೂ ಭಯೋತ್ಪಾದಕರ ಕೈಗೆ ಸಿಕ್ಕರೆ…?
ಅಂತಹದ್ದೊಂದು ಸನ್ನಿವೇಶವನ್ನು ನೆನಸಿಕೊಂಡಾಗ ಮೈಯೆಲ್ಲಾ ನಡುಗಿತ್ತಿದೆ. ನಮ್ಮ ವ್ಯವಸ್ಥೆ ಇದೇ ರೀತಿ ಮುಂದುವರಿದರೆ ದೇಶದ ಮೇಲೆ ಅಂತಹ ಮಾರಾಕಾಸ್ತ್ರ ಪ್ರಯೋಗಕ್ಕೆ ಹೆಚ್ಚಿನ ದಿನವೇನೂ ಬೇಕಿಲ್ಲ. ನಾವೆಲ್ಲಾ ಅನಿವಾರ್ಯವಾಗಿ “ಪಾಕಿಸ್ತಾನ್ ಜಿಂದಾಬಾದ್” ಅನ್ನುವ ಕಾಲ ಸಮೀಪಿಸಿದರೂ ಅಚ್ಚರಿಯಿಲ್ಲ ಅನ್ನಿಸುತ್ತಿದೆ.
`ಜವಬ್ದಾರಿ ವ್ಯವಸ್ಥೆಯ ಮೇಲಿಲ್ಲ. ನಮ್ಮ ಮೇಲೆ ಇದೆ’ ಹಾಗಂತ ಹೇಳುವುದು ತುಂಬಾ ಸುಲಭ. ಆದರೆ ಕ್ಷೇತ್ರದ ಒಬ್ಬ ಶಾಸಕನಿಗೆ ಮೂಗುದಾರ ಹಾಕಲು ಸಾಮಾನ್ಯ ಪ್ರಜೆಗಳಿಂದ ಸಾಧ್ಯವಿದೆಯಾ?
ಭ್ರಷ್ಟತೆಯಿಂದ ಹೊರಗುಳಿದ ಸಮಾಜಮುಖಿ ಹೋರಾಟಗಾರನೊಬ್ಬನ ಮಾತನ್ನು ನಮ್ಮ ನಾಯಕರು ಕೇಳುತ್ತಾರಾ? ಒಮ್ಮೆ ಆಲೋಚಿಸಿ ನೋಡಿ…`ಮೊದಲ ಸಲ ಸದನಕ್ಕೆ ಆಯ್ಕೆಯಾಗಿರುವ ಶಾಸಕ ಆರು ತಿಂಗಳ ನಂತರ ಮಾತಾಡಿಸಿದರೆ, ನಾನು ಬ್ಯುಸಿ ಅನ್ನುತ್ತಿದ್ದಾನೆ’ ಹಾಗಂತ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಿದ್ದರು. ಇನ್ನು ಸಾಮಾನ್ಯ ಮನುಷ್ಯ ಆ ಶಾಸಕನ್ನು ಮಾತಾಡಿಸಿದರೆ, ಅವ ಹೇಗೆ ಪ್ರತಿಕ್ರಿಯಿಸಬಹುದು?
`ಮುಂದಿನ ಚುನಾವಣೆಯಲ್ಲಿ ಅವನನ್ನು ಸೋಲಿಸಿದರಾಯಿತು ಬಿಡಿ…’ಹಾಗಂತ ನಮಗೇ ನಾವೇ ಸಮಾಧಾನ ಹೇಳಿಕೊಳ್ಳಬೇಕು! ಆದರೆ ಪ್ರಜೆಗಳ ಸಹಾಯವಿಲ್ಲದೇ ಅವ ಮುಂದಿನ ಚುನಾವಣೆಯಲ್ಲಿ ಗೆದ್ದಿರುತ್ತಾನೆ! ಅಥವಾ ಸೋಲುತ್ತೇನೆ ಎಂಬುದು ಖಚಿತವಾದರೆ, ಜೀವಂತ ಪರ್ಯಂತಕ್ಕೆ ಸಾಕಗುವಷ್ಟು ಸಂಪಾದಿಸಿಬಿಡುತ್ತಾನೆ…ಒಬ್ಬ ಶಾಸಕನ ಕಥೆಯೇ ಹೀಗಾದರೆ, ಇನ್ನೂ ಮಂತ್ರಿಯಾದವರ ಕಥೆ? ವ್ಯವಸ್ಥೆಯ ಕಥೆ…?
ಯಾರನ್ನು ಹೆದರಿಸಬೇಕೆಂದು ಈ ಮಾತನ್ನು ಇಲ್ಲಿ ಇಡುತ್ತಿಲ್ಲ. ಸರಕಾರಕ್ಕೆ, ವ್ಯವಸ್ಥೆಗೆ ವಿರುದ್ಧವಾಗಿ ಒಂದು ಶಾಲೆ ನಿರ್ಮಿಸಬಹುದು. ಒಂದು ರಸ್ತೆ ಮಾಡಬಹುದು…ಆದರೆ ಪರ್ಯಾಯ ರಕ್ಷಣಾ ವ್ಯವಸ್ಥೆ ನಿರ್ಮಾಣ ಸಾಧ್ಯವಿಲ್ಲ. ರಕ್ಷಣಾ ಇಲಾಖೆ ಭ್ರಷ್ಟ ಸರಕಾರದ ಕಪಿಮುಷ್ಠಿಯಲ್ಲಿ ಸಿಲುಕಿ ಪರದಾಡುತ್ತಿರುವ ವಿಭಾಗ.
ಆ ಇಲಾಖೆಯಲ್ಲಿ ದೇಶಕ್ಕಾಗಿ ತುಡಿತವುಳ್ಳರಿದ್ದಾರೆ. ಭಯೋತ್ಪಾದಕರಿಗೆ ಕ್ಷಣ ಮಾತ್ರದಲ್ಲಿ ನೀರುಕುಡಿಸಬಲ್ಲ ಚಾಣಾಕ್ಯರಿದ್ದಾರೆ. ಆದರೆ ಅಧಿಕಾರ ಮಾತ್ರ ಶಿವರಾಜ್ ಪಾಟೀಲರಂಥ ದಕ್ಷಾತೀದಕ್ಷ ಮಂತ್ರಿಗಳ ಕೈಯಲ್ಲಿದೆ! ರಕ್ಷಣಾ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ವಿರೋಸುವ ಅಧಿಕಾರಿಗಳಿಗೆ ಅದೆಷ್ಟು ಕಿರುಕುಳ ನೀಡುತ್ತಾರೆ, ಅದೆಷ್ಟು ಸಲ ವರ್ಗಾವಣೆ ಮಾಡುತ್ತಾರೆ ಅಂತಾ ಆ ಇಲಾಖೆಯಲ್ಲಿರುವ ಯಾರನ್ನಾದರೂ ಸುಮ್ಮನೆ ಕೇಳಿ ನೋಡಿ…
ಒಬ್ಬ ಶಾಸಕ, ಒಂದು ಪಕ್ಷ , ಚುನಾವಣೆಗಾಗಿ ಖರ್ಚು ಮಾಡುವ ಹಣಕಾಸಿನ ಲೆಕ್ಕಾಚಾರ ಕೇಳಿದರೆ, ಅವರು ಚುನಾವಣೆ ನಂತರ ಸಂಪಾದಿಸುವ ಕಾಸು ಹೆಚ್ಚು ಅನ್ನಿಸುವುದಿಲ್ಲ! ಅವರು ಯಾರಿಗಾಗಿ ಆ ಪರಿ ಹಣ ಖರ್ಚು ಮಾಡುತ್ತಾರೆ ಅಂದರೆ…ಮತದಾರರಿಗಾಗಿ, ಮತಕ್ಕಾಗಿ! ಮತದಾರ ಸರಿಯಾದರೆ, ವ್ಯವಸ್ಥೆ ಸರಿಯಾಗಬಹುದಾ? ಎಲ್ಲಾ ಪಕ್ಷಗಳು, ಎಲ್ಲಾ ನಾಯಕರು ಒಂದೇ ಮನೋಭಾವದರು! ಅಂದಮೇಲೆ ಯಾರು ಸರಿಯಾದರೂ ವ್ಯವಸ್ಥೆ ಸರಿಯಾಗದು. ಸಾಮಾನ್ಯನೊಬ್ಬ ವ್ಯವಸ್ಥೆ ವಿರುದ್ಧ ಏನೂ ಮಾಡಲಾಗದು ಅಲ್ಲವೇ?
ಇನ್ನೂ, ನಮ್ಮ ಎಲ್ಲಾ ಇಲಾಖೆಗಳ ಕಥೆಯೂ ಹಾಗೆ. ಹೆಚ್ಚಿನ ಅಧಿಕಾರಿಗಳ ಹಣೆಯಬರಹವೇ ಹಾಗೆ. ಇದನ್ನು ವಿರೋಧಿಸುವ ಹೋರಾಟಗಾರರು ನಮ್ಮಲ್ಲಿ ಇಲ್ಲ ಅಂದೇನಲ್ಲ. ದುರಂತವೆಂದರೆ ಅಂತಹ ಹೋರಾಟಗಾರರೇ, ತಮ್ಮ ವೈಯಕ್ತಿಕ ಕೆಲಸವನ್ನು ಹಿಂದುಗಡೆಯಿಂದ ಲಂಚ ಕೊಟ್ಟು ಮಾಡಿಸಿಕೊಂಡುಬಿಡುತ್ತಾರೆ! ನಂತರ ಭ್ರಷ್ಟತೆಯ ವಿರುದ್ಧ, ವ್ಯವಸ್ಥೆ ವಿರುದ್ಧ ಪುಂಖಾನುಪುಂಕವಾಗಿ ಭಾಷಣ ಬಿಗಿಯುತ್ತಾರೆ.
ಹೋರಾಟ, ರಾಷ್ಟ್ರಪ್ರೇಮ ಎಲ್ಲಾ ಇವತ್ತು ಹೆಚ್ಚಿನ ಹೋರಾಟಗಾರರ ಅಸ್ತಿತ್ವ ಉಳಿಸಿಕೊಳ್ಳುವ ಸಾಧನವಾಗಿದೆ. ಇನ್ನೂ ಕೆಲವರಿಗೆ ಮನೆ, ಸೈಟು, ಕಾರುಗಳನ್ನೂ ಸಂಪಾದಿಸಿಕೊಡುತ್ತಿದೆ!
ಹಾಗಾದರೆ ತಪ್ಪು ಯಾರದ್ದು?
ಮತ್ತದೇ ರಾಗ, ಮತ್ತದೇ ಗೋಳು….ಗೊತ್ತಿಲ್ಲ. ಮೊನ್ನೆಯಿಂದಲೂ ತಪ್ಪಿತಸ್ಥರನ್ನು ಹುಡುಕುತ್ತಲೇ ಇದ್ದೆ…ಕೊನೆಯದಾಗಿ ನನಗೆ ಸಿಕ್ಕ ಉತ್ತರ…
ಅಲ್ಲಿ ಸಾಯುವ ಸೈನಿಕ ಸಾಯುತ್ತಲೇ ಇರುತ್ತಾನೆ, ದಾಳಿಯ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಅಧಿಕಾರಿಗಳ ವರ್ಗಾವರ್ಗಿ ನಡೆಯುತ್ತಲೇ ಇರುತ್ತದೆ. ಸೈನಿಕ, ಸಾಮಾನ್ಯ ಸತ್ತಾಗ, ಬಣ್ಣ ಬಣ್ಣದ ಬಟ್ಟೆಯೊಂದಿಗೆ ಶಿವರಾಜ್ ಪಾಟೀಲ್ ಸಂದರ್ಶನ…ಸತ್ತವರ ಕುಟುಂಬಕ್ಕೆ ಲಕ್ಷ ರೂ ಪರಿಹಾರ…ದಾಳಿ ನಡೆದ ೩-೪ ದಿನ ದೇಶಾದ್ಯಂತ ಹೈ ಅಲರ್ಟ್, ದಾಳಿ ಮುಗಿದು ೧೫ ದಿನವೋ, ತಿಂಗಳೋ ಕಳೆಯುವುದರೊಳಗೆ ಮತ್ತೊಂದು ದಾಳಿ….ಅಂದಹಾಗೆ ನನಗೆ ಸಿಕ್ಕ ಉತ್ತರ…
ವ್ಯವಸ್ಥೆಯೊಳಗೊಂದಾಗು ಮಂಕುತಿಮ್ಮ!
(ಈ ಬರಹ ನಿಮಗೆ ಅತಿಶಯೋಕ್ತಿ ಅನ್ನಿಸಬಹುದು. ಆದರೆ ಒಂದಿಷ್ಟು ಸುತ್ತಾಡಿ, ಸಮಾಜದ ಒಂದಿಷ್ಟು ವ್ಯಕ್ತಿಗಳನ್ನು ಒಡನಾಡಿ ಸಂಪಾಸಿದ ಅನುಭವಗಳೇ ಇಲ್ಲಿ ಹುದುಗಿವೆ)