ಹೇಗೆ ತೂಗಿ ನೋಡಿದರೂ, ಆವತ್ತು ಸಚಿನ್ ದ್ವಿಶತಕ ಭಾರಿಸಿದ್ದು ಎಲ್ಲಾ ಪತ್ರಿಕೆಗಳಲ್ಲಿ ಲೀಡ್ ಸುದ್ದಿಯಾಗಬೇಕಿತ್ತು. ಕೇಂದ್ರದ ರೈಲ್ವೆ ಮತ್ತು ವಿತ್ತ ಸಚಿವರು ಪ್ರತಿ ವರ್ಷ ಮುಗಂಡ ಪತ್ರ ಮಂಡಿಸುತ್ತಾರೆ. ಬಜೆಟ್, ಚುನಾವಣೆ ಫಲಿತಾಂಶ, ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ…ಇವೆಲ್ಲ ಸುದ್ದಿಮನೆಯಲ್ಲಿ ಪೂರ್ವನಿರ್ಧಾರಿತ ಲೀಡ್ ಸುದ್ದಿಗಳು. ವಿನ್ಯಾಸದಲ್ಲಿ ಸೈ ಎನ್ನಿಸಿಕೊಳ್ಳುವ ಹಪಹಪಿತನವಿರುವ ಪತ್ರಿಕೆಗಳು, ಬಜೆಟ್ ಮಂಡನೆಗೆ ವಾರ ಮೊದಲೇ ರಂಗ ತಯಾರಿ ನಡೆಸಿರುತ್ತವೆ! ಆವತ್ತು ಆಗಿದ್ದು ಕೂಡ ಹಾಗೆ! ಬಹುತೇಕ ಕನ್ನಡ ಪತ್ರಿಕೆಗಳು ಮಮತಾ ಬ್ಯಾನರ್ಜಿಯ ಮುಂಗಡ ಪತ್ರವನ್ನೇ ಲೀಡ್ ಮಾಡಿದವು. ಇನ್ನು ಹಲವು ಇಂಗ್ಲಿಷ್ ಪತ್ರಿಕೆಗಳು ಅರ್ಧ ಜಾಗ ಮಮತಾಗೆ ಮತ್ತರ್ಧ ಜಾಗವನ್ನು ಸಚಿನ್ಗೆ ನೀಡಿದವು.
ಆದರೆ, ನನ್ನ ಲೆಕ್ಕದಲ್ಲಿ ಸಚಿನ್ ದ್ವಿಶತಕ ಆವತ್ತು ಮೊದಲ ಲೀಡ್ ಸುದ್ದಿಯಾಗಬೇಕಿತ್ತು. ೧೯೭೧ರಿಂದ ಈವರೆಗೆ ನಡೆದ ಅಂತಾರಾಷ್ಟ್ರೀಯ ಏಕ ದಿನ ಪಂದ್ಯಗಳಲ್ಲಿ ಮೊತ್ತ ಮೊದಲ ದ್ವಿಶತಕ ದಾಖಲಾಗಿದೆ. ಆ ಗರಿ ಭಾರತದ ಬೆನ್ನಿನಲ್ಲಿದೆ. ಕ್ರಿಕೆಟ್ ಲೋಕದ ದೃವತಾರೆ ಸಚಿನ್ ತೆಂಡೂಲ್ಕರ್, ಸಯ್ಯದ್ ಅನ್ವರ್ ಅವರ ಏಕದಿನ ಪಂದ್ಯದ ಗರಿಷ್ಠ ರನ್ ದಾಖಲೆ ಮುರಿದು, ಮೊತ್ತ ಮೊದಲ ದ್ವಿಶತಕ ಭಾರಿಸಿದ್ದಾರೆ. ಕ್ರಿಕೆಟ್ನಲ್ಲಿ ೧೬ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿವೆ. ಆಸ್ಟ್ರೇಲಿಯಾದಂಥ ತಂಡದಲ್ಲಿ ಬಹುಮುಖ ಪ್ರತಿಭೆ ಹೊಂದಿರುವ ಆಟಗಾರರಿಗೆ ಯಾವತ್ತು ಕೊರತೆಯಾಗಿಲ್ಲ. ಇಷ್ಟೆಲ್ಲದರ ನಡುವೆ ಭಾರತೀಯ ಆಟಗಾರನೊಬ್ಬ ಸಾಧನೆ ಮಾಡಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು ತಾನೆ? ಕ್ರಿಕೆಟ್ಗೆ ಅದರದ್ದೆ ಆದ ಒಂದು ನೋಡುಗ ವಲಯವಿದೆ. ಸಾವಿರಾರು ಕ್ರೀಡೆಗಳ ನಡುವೆಯೂ ಕ್ರಿಕೆಟ್ ತನ್ನದೇ ಆದ ಜನಪ್ರಿಯತೆ ಗಳಿಸಿದೆ. ಇನ್ನೂ ಕ್ರಿಕೆಟ್ ಸುದ್ದಿಯನ್ನು, ಬಜೆಟ್ಗಿಂತ ಹೆಚ್ಚಾಗಿ ಜನ ಓದುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾವಿಲ್ಲ.
ಊಹುಂ, ಕನ್ನಡದ ಕೆಲ ಪತ್ರಿಕೆಗಳಿಗೆ ಅದೊಂದು ಮಹತ್ವದ ಸುದ್ದಿ ಅನ್ನಿಸಲಿಲ್ಲ. ಇಂಗ್ಲಿಷ್ನ ಕೆಲ ಪತ್ರಿಕೆಗಳಿಗೆ ಕೂಡ ಸಚಿನ್ ಡಬ್ಬಲ್ ಧಮಾಕ ರುಚಿಸಲಿಲ್ಲ. ಅವರೆಲ್ಲ ಬ್ಯಾನರ್ಜಿ ಬಜೆಟ್ ಸುದ್ದಿಯನ್ನೇ ಲೀಡ್ ಮಾಡಿದವು. ಹಾಗಾಗಿಯೇ ‘ದಿ ಎಕನಾಮಿಕ್ ಟೈಮ್ಸ್’ ಯಾವತ್ತೂ ಎಲ್ಲಾ ಪತ್ರಿಕೆಗಳಿಗಿಂತ ಭಿನ್ನ ಅನ್ನಿಸುವುದು. ವಾಣಿಜ್ಯ ಸುದ್ದಿಗಳಿಗೆ ಮೀಸಲಾದ ಪತ್ರಿಕೆಯ ಮುಖಪುಟದಲ್ಲಿ ಸಚಿನ್ ಭಾವಚಿತ್ರ ರಾರಾಜಿಸುತ್ತಿತ್ತು. ಮೊದಲ ಲೀಡ್ನಲ್ಲಿ ಸಚಿನ್ ಮತ್ತು ಜಾಹೀರಾತು ಸಂಬಂಧಿ ಲೇಖನವಿತ್ತು. ವಾಣಿಜ್ಯ ಪತ್ರಿಕೆಯೊಂದರಲ್ಲಿ ಮುಂಗಡ ಪತ್ರ ಎಂಬುದು ಮೂಲೆಗುಂಪಾಗಿತ್ತು. ಸುದ್ದಿಯ ಗ್ರಹಿಕೆಯಲ್ಲಿ, ಗೌಪ್ಯ ಸುದ್ದಿಯೊಂದನ್ನು ತಿಂಗಳುಗಳ ಮುಂಚಿತವಾಗಿ ಕಲೆ ಹಾಕುವುದರಲ್ಲಿ ಬಹುಶಃ ಎಕನಾಮಿಕ್ ಟೈಮ್ಸ್ ಮೀರಿಸುವ ಪತ್ರಿಕೆಯಿಲ್ಲ. ಹಿಂದುಸ್ತಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಏಷಿಯನ್ ಏಜ್, ಡಿಎನ್ಎ ಮೊದಲಾದ ಪ್ರತಿಷ್ಠಿತ ದಿನಪತ್ರಿಕೆಗಳನ್ನು ನಾಚಿಸುವಷ್ಟು ತಾಕತ್ತು ಎಕನಾಮಿಕ್ ಟೈಮ್ಸ್ಗಿದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ.
“ರೆವಾ ಎಲೆಕ್ಟ್ರಿಕ್ ಕಾರು ಕಂಪನಿಯನ್ನು ಮಹೀಂದ್ರ ಸಂಸ್ಥೆ ಖರೀದಿಸುತ್ತದೆ” ಎಂಬ ಸ್ಕೂಪ್ ಸುದ್ದಿಯನ್ನು ತಿಂಗಳುಗಳ ಹಿಂದೆ ಎಕನಾಮಿಕ್ ಟೈಮ್ಸ್ ಮುಖಪುಟದಲ್ಲಿ ಪ್ರಕಟಿಸಿತ್ತು. ವಾಣಿಜ್ಯ ಪುಟವನ್ನು ವಾಣಿಜ್ಯವಾಗಿಯೇ ನೋಡಿದರೆ, ರೇವಾ ಸಂಸ್ಥೆ ಮಾರಾಟ ಒಂದು ಮಹತ್ತರ ಸುದ್ದಿ. ರಾಷ್ಟ್ರಮಟ್ಟದ ದಿನಪತ್ರಿಕೆಯೊಂದಕ್ಕೆ ಮುಖಪುಟ ಸುದ್ದಿಯಾಗಿರುವ ರೇವಾ ಮಾರಾಟ, ರಾಜ್ಯದ ಪತ್ರಿಕೆಗಳಿಗೆ ಲೀಡ್ ಆಗಲೇಬೇಕಾದ ಸುದ್ದಿ. ಬೆಂಗಳೂರು ಮೂಲದ ಏಕೈಕ ಕಾರು ಉತ್ಪಾದಕ ಸಂಸ್ಥೆ ರೇವಾ. ನಮ್ಮ ದೇಶದಲ್ಲಿ ಸ್ವತಂತ್ರವಾಗಿ ಕಾರು ಉತ್ಪಾದನೆ ಮಾಡುವ ಯಾವ ಸಂಸ್ಥೆಯೂ ಇಲ್ಲ. ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಉತ್ಪಾದಕ ಘಟಕ ಹೊಂದಿವೆ. ಈ ದೃಷ್ಟಿಯಿಂದ ನೋಡಿದಾಗ ರೇವಾ ಸಂಸ್ಥೆ ಮಾರಾಟ ನಮಗೆ ಮಹತ್ತರದ ಸುದ್ದಿ. ಇವತ್ತು ಈ ಸುದ್ದಿ ಅಧಿಕೃತವಾಗಿ ಹೊರಬಂದಿದೆ. ಆದರೆ, ಎಕನಾಮಿಕ್ ಟೈಮ್ಸ್ ತಿಂಗಳ ಹಿಂದೆ ಈ ಸುದ್ದಿಯನ್ನು ಬಿತ್ತರಿಸಿತ್ತು!
ಏರ್ಟೆಲ್-ಜೈನ್ ಖರೀದಿ, ವಾಣಿಜ್ಯ ಸಂಬಂಧಿ ಸರಕಾರದ ಹೊಸ ನೀತಿಗಳು…ಹೀಗೆ ದೇಶದಲ್ಲಿನ ಎಲ್ಲಾ ವಾಣಿಜ್ಯ ಬೆಳವಣಿಗೆಗಳನ್ನು ಎಕನಾಮಿಕ್ ಟೈಮ್ಸ್ ವಾರಗಟ್ಟಲೆ ಮುಂಚಿತವಾಗಿ ಪ್ರಕಟಿಸಿರುತ್ತದೆ. ಇನ್ನು ವರದಿಗಾರಿಕೆ ಶೈಲಿಯ ಕುರಿತು ಕೆಮ್ಮುವಂತಿಲ್ಲ. ಯಾವ ವಾಕ್ಯವನ್ನು ಯಾರ ಬಾಯಿಯಿಂದ ಹೇಳಿಸಬೇಕು ಎಂಬ ವಿಷಯದಲ್ಲಿ ಅಲ್ಲಿನ ವರದಿಗಾರರ ನಿಪುಣರು! ವಿನ್ಯಾಸವೂ ಹಾಗೆ, ಸುದ್ದಿಗೆ ಸರಿಹೊಂದುವ ಅದೆಷ್ಟೊ ಕ್ರಿಯಾಶೀಲ ವಿನ್ಯಾಸಗಳು ಬರುತ್ತಿರುತ್ತವೆ. ಅಂದಹಾಗೆ ವಾಣಿಜ್ಯ ಪ್ರತಿಕೆಗಳಲ್ಲಿ ಸ್ಪರ್ಧೆ ಕೂಡ ಅದೇ ರೀತಿ ಇದೆ. ಬ್ಯೂಸಿನೆಸ್ ಲೈನ್ ಮೇಲ್ನೋಟಕ್ಕೆ ಸಪ್ಪೆ ಅನ್ನಿಸಿದರೂ, ಸುದ್ದಿಯಲ್ಲಿ ಪ್ರಬಲವಾದ ಪ್ರತಿಸ್ಪರ್ಧೆ ನೀಡುತ್ತದೆ. ಬ್ಯೂಸಿನೆಸ್ ಸ್ಟಾಂಡರ್ಡ್, ವಿನ್ಯಾಸ ಹಾಗೂ ಸುದ್ದಿಯಲ್ಲಿ ಎಕನಾಮಿಕ್ ಟೈಮ್ಸ್ಗೆ ಸರಿಸಾಟಿಯಾಗಿ ನಿಲ್ಲಬಲ್ಲದು. ಸ್ಪರ್ಧೆ ಹೆಚ್ಚಾದಾಗ ಪತ್ರಿಕೆಗಳ ಗುಣಮಟ್ಟ ಸುಧಾರಣೆ ಸಾಧ್ಯ ಎಂಬುದಕ್ಕೆ ವಾಣಿಜ್ಯ ವಲಯ ಉತ್ತಮ ಉದಾಹರಣೆ.
“ರೀ ವಿನಾಯಕ್, ಹಳದಿ ಬಣ್ಣದಲ್ಲಿ ಬರುತ್ತಲ್ಲ ಅದೇಯೇನ್ರಿ ಎಕನಾಮಿಕ್ ಟೈಮ್ಸ್ ಅಂದ್ರೆ. ನಮ್ಮ ಸರ್ ದಿನ ಓದ್ತಾ ಇರ್ತಾರೆ ಆ ಪತ್ರಿಕೆಯನ್ನ…”ಹಾಗಂತ ವಾಹಿನಿಯೊಂದರಲ್ಲಿ ಕೆಲಸ ಮಾಡುವ ಗೆಳತಿಯೊಬ್ಬಳು ಕೇಳುತ್ತಿದ್ದಳು! ನನಗೆ ನಗಬೇಕೊ, ಬೈಯ್ಯಬೇಕೋ ಗೊತ್ತಾಗಲಿಲ್ಲ. ಓದುಗರು ಒತ್ತಟ್ಟಿಗಿರಲಿ, ಬಹುಶಃ ಬಹುತೇಕ ಸ್ಥಳೀಯ ಪತ್ರಕರ್ತರ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿಯೇ ಇರಬೇಕು ನಮ್ಮ ನಾಡಿನ ವಾಣಿಜ್ಯ ಪುಟಗಳು ಕೇವಲ ಜಾಹೀರಾತು ಆಧಾರಿತವಾಗಿರುವುದು!