Feeds:
ಲೇಖನಗಳು
ಟಿಪ್ಪಣಿಗಳು

Archive for ಮೇ, 2008

ಹಾಯ್ ಕೋತಿ
ನಿನಗೆ ನಾನು ಪತ್ರ ಬರೆಯದೇ ತುಂಬಾ ದಿನಗಳೇ ಆಗಿಹೋಯಿತು ಮಾರಾಯಿತಿ. ಬರೀಬೇಕು ಅಂದುಕೊಂಡಿದ್ದೇ ಏನು ಮಾಡ್ತಿಯಾ ಹೇಳು ನಾನು ಬರೆಯಲಿಕ್ಕೆ ಅಂತಾ ಹೊರಟಾಗಲೆಲ್ಲಾ ನಮ್ಮ ಮನೆ  ಬೆಕ್ಕು ಅಡ್ಡಬಂತು! ನೀನೇ ಹೇಳಿದ್ದೆ ಅಲ್ವಾ ಕೆಲಸಕ್ಕೆ ಮುಂಚೆ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಾ! ಬೆಕ್ಕು ಇಲ್ಲದ ಹೊತ್ತು ನೋಡಿಕೊಂಡು ಬರೆಯೋವಾಗ ಇಷ್ಟುದಿನ ಆಯಿತು ನೋಡು! ಹೋಗ್ಲಿ ಬಿಡು ಆ ಲಾಂಗ್ ಸ್ಟೋರಿಗಳೆಲ್ಲಾ ಈಗ್ಯಾಕೆ? ಮತ್ತೆ  ಹೇಗಿದ್ದಿಯಾ? ಜೋಯ್ಸರು ಹೇಗಿದ್ದಾರೆ?!
 ಅಂದಹಾಗೆ ತುಂಗಾ ನದಿಗೆ ಹಾರಿ ಸಾಯುವ ನಿನ್ನ ಪ್ರಾಜೆಕ್ಟ್ ಏನಾಯಿತು?! ಈ ಕಾಗದ ನಿನ್ನ ಕೈ ಸೇರುವುದರೊಳಗೆ ನೀನು ಸತ್ತ ಸುದ್ದಿ ನನ್ನ ಕಿವಿ ಮುಟ್ಟಿದ್ದರೂ ಅಚ್ಚರಿ ಇಲ್ವೆನೋ ಅಲ್ವೇನೇ?! ಸುಮ್ನೆ ತಮಾಶೆ ಮಾಡಿದೆ ಕಣೇ…ನೀನು ಸತ್ತರೆ ಮತ್ತೆ ನಾನಿನ್ನೆಲ್ಲಿ ಬದುಕಿರುತ್ತೀನಿ ಅಲ್ವಾ?! ಹಾಳಾದ ದುಡಿಮೆ ಅನ್ನೋದು ತುಂಬಾ ಬೇಜಾರು ಬರಿಸಿ ಬಿಟ್ಟಿದೆ ಕಣೇ. ಜೀವನವೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಅದ್ಯಾಕೋ ತಿರ್ಥಹಳ್ಳಿಯ ಕಾಡಲ್ಲಿ ಒಂದಿಷ್ಟು ದಿನ ಹಾಯಾಗಿ ಇರೋಣ ಅಂತಾ ಆಲೋಚನೆ ಮಾಡ್ತಾ ಇದೀನಿ. ಮಲೆನಾಡು ಕಾಡಿನ ಪರಿಚಯವೇ ಮರೆತಂತಾಗಿದೆ. ಏ ನಿನಗೆ ನೆನಪಿದೆಯೇನೇ….ನಾನು ಈ ಹಾಳು ನಗರಕ್ಕೆ ಬರುವ ಮೊದಲು ನಾನು ನೀನು ಗುಡ್ಡ ಸುತ್ತಾ ಇದ್ದಿದ್ದು….ನೆರಳೆ ಹಣ್ಣು, ಮುಳ್ಳು ಹಣ್ಣು, ಪರಗಿ ಹಣ್ಣು ಅಂತೆಲ್ಲಾ ಕಾಡಲ್ಲಿ ಸಿಕ್ಕಸಿಕ್ಕ ಹಣನ್ನೆಲ್ಲಾ ತಿಂತಾ ಇದ್ದಿದ್ದು…ಕೋತಿಗಳ ತರಹ ಕಚ್ಚಾಡ್ತಾ ಇದ್ದಿದ್ದು…ಎಷ್ಟು ಸಖತ್ತಾಗಿ ಇತ್ತು ಅಲ್ವಾ ಆ ದಿನಗಳು? ಇವತ್ತು ನಂಗೆ ಅದೇ ತರಹ ಆಟ ಆಡಬೇಕು ಅನ್ನಿಸ್ತಾ ಇದೆ. ಆದ್ರೆ ಈ ಹಾಳು ಸಮಾಜ ಅದನ್ನ ಒಪ್ಪೋದೇ ಇಲ್ಲ ಕಣೇ…ಅದರಲ್ಲೂ ನಿಮ್ಮೂರಿನ ಆ ಗಯ್ಯಾಳಿಗಳು ನಾವು ಈಗಲೂ ಆಟ ಆಡಿದರೆ ಹುಚ್ಚು ಹಿಡಿದಿದೆ ಇವರಿಗೆ ಅಂತಾ ದೊಡ್ಡ ಸುದ್ದಿ ಹಬ್ಬಿಸಿ ಬಿಡ್ತಾರೆ. ಅದನೆಲ್ಲಾ ನೆನಸಿಕೊಂಡರೆ ಕೋಪ ಬರತ್ತೆ…
 ನಾನು ದೊಡ್ಡವನಾಗಲೇ ಬಾರದಿತ್ತು ಎಸ್ಸೆಸಲ್ಸಿಲೀ ಫೇಲಾಗಬೇಕಿತ್ತು ಅನ್ನಿಸತ್ತೆ ಎಷ್ಟೋ ಸಲ. ನಿನ್ನಜ್ಜಿ ನಿನ್ನಿಂದಲೇ ಆಗಿದ್ದು ಎಲ್ಲಾ, ಓದಬೇಕು ನೀನು, ಹಾಗಾಬೇಕು, ಇದಾಗಬೇಕು ಅಂತೆಲ್ಲಾ ಆವತ್ತು ಪುರಾಣ ನನ್ನ ತಲೆಗೆ ತುರುಕಿದವಳು, ನನ್ನನ್ನು ಕಾಲೇಜು ಮೆಟ್ಟಿಲು ಹತ್ತಿಸಿದವಳು ನೀನೇ ಬೇವರ್ಸಿ! ನಿಂಗೆ ನಿಮ್ಮಪ್ಪನಿಗಿಂತ ಕ್ರೂರ ಗಂಡ ಸಿಗಲಿ, ನಿನ್ನ ಗಂಡ ಕುಡಿಯುವವನು, ಇಸ್ಪೀಟ್ ಆಡುವವನು, ಅದಕ್ಕಿಂತಲೂ ಕ್ರೂರಿಯಾಗಿರಲಿ….ಕತ್ತೆ ನೀನು ನಾನು ಕಾಡಲಿ ಇರಬೇಕು ಅಂದುಕೊಂಡಿದ್ದನ್ನು ಹಾಳು ಮಾಡಿದವಳು….!!!!
 ಮತ್ತೆ ಸಮಾಚಾರ ಜೋಯ್ಸರು ಏನು ಮಾಡ್ತಾ ಇದಾರೆ. ಈಗಂತೂ ಚುನಾವಣೆ…ಜೋಯ್ಸರ ಜ್ಯೋತಿಷ್ಯದ ಬಿಸಿನೆಸ್ ಫುಲ್ ಜೋರಾ? ಸೋಮಯಾಜಿ ನೆಕ್ಸ್ಟ್ ಜ್ಯೋಯ್ಸರೆ ಇರಬೇಕು ಅಲ್ವಾ ಸುಳ್ಳು ಸುಳ್ಳು ಶಕುನ ಹೇಳೋರು…?!ನಿಮ್ಮಪ್ಪ ನಂಗೆ ಹೇಳಿದ ಒಂದೇ ಒಂದೇ ಒಂದು ಸತ್ಯ ಅಂದ್ರೆ ನಿಂಗೆ ಒಬ್ಬ ಲಫಂಗನ ಮಗಳು ಸಿಕ್ತಾಳೆ ಅಂತಾ! ಅದೊಂದು ಮಾತ್ರ ಸಖತ್ತಾಗಿ ಹೇಳಿದಾರೆ ಕಣೇ!

 ನಿನ್ನ ಜೊತೆ ನಿನ್ನ ಗ್ಯಾಂಗ್‌ನಲ್ಲಿ ಉರಿಯುತ್ತಿದ್ದ ಹುಡಿಗಿಯರೆಲ್ಲಾ ಹೇಗಿದಾರೆ ಈಗ? ಏ ಮೊನ್ನೆ ಯಾರೋ ಒಬ್ಬಳು ನಿನ್ನ ಜೊತೆ ಇದ್ದವಳು ಸಿಕ್ಕಿದ್ಲು. ನನ್ನ ನಿನ್ನ ಕ್ಲಾಸ್‌ಮೇಟ್ ಅಂತೆ ಪಿಯುಸಿಲಿ ನಂಗೊಂತು ಚೂರು ಗುರುತು ಸಿಕ್ಕಲಿಲ್ಲ. ಅವಳಾಗಿಯೇ ಮಾತಾಡಿಸಿದಳು ನಿನ್ನ ಹುಡುಗಿ ಫ್ರೆಂಡು ನಾನು ಅಂತಾ! ಏನೋ ಕಾಲೇಜು ಮುಗಿದ ಎಲ್ಲಾ ಮುಗೀತು. ಯಾರದ್ದು ಪರಿಚಯವೂ ಇಲ್ಲ ಏನೂ ಇಲ್ಲ. ನಮ್ಮದೊಂದು ತೀರ ಅವರದೊಂದು ತೀರ ಅಲ್ವಾ? ಅದನೆಲ್ಲಾ ನೆನೆಸಿಕೊಂಡರೆ ಯಾಕೋ ತುಂಬಾ ಬೇಜಾರಾಗತ್ತೆ. ನಮ್ಮ ಜೊತೆ ಕುಣಿದವರು ಕಿತ್ತಾಡಿದವರು ಯಾರು ಕೊನೆಗೆ ಸಿಗೋದೇ ಇಲ್ಲ…ಹೋಗ್ಲಿ ಬಿಡು ನನ್ನ ಜೊತೆ ಆವತ್ತಿಂದಲೂ ಜಗಳ ಆಡುತ್ತಿದ್ದ ನೀನಾದ್ರೂ ಇದಿಯಲ್ವಾ ಅಷ್ಟೆ ಸಮಧಾನ ನಂಗೆ. ಅಯ್ಯೋ ಆಫೀಸ್‌ಗೆ ಲೇಟಾಯಿತು …ಇನ್ನೊಂದು ಸಾರಿ ಮತ್ತೆ ಪತ್ರ ಬರಿತೀನಿ ಆಯಿತಾ…ಅಲ್ಲಿವರೆಗೂ ಬಾಯ್
                       ಕೋತಿಯಲ್ಲದವ

Read Full Post »

 ಊಹುಂ ಕಥೆ ಬರೆಯಲು ನಾನು ಒಲ್ಲೆ…. ಹಾಗಂದುಕೊಂಡೆ ಗೀಚಿದ ಕಥೆ ಅದು. ನನ್ನ ವಯಸ್ಸನ್ನು ಗುರುತಿಸಬಹುದಾದ ಕಥೆ. ಅದ್ಯಾಕೋ ಅದಕ್ಕೆ ಮರೀಚಿಕೆ ಅಂತಾ ಹೆಸರು ಕೊಡಬೇಕು ಅನ್ನಿಸಿತ್ತು. ಹಾಗೇ ಹೆಸರಿಟ್ಟಿದ್ದೆ.  ಅದೊಂದು ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಕಥೆ ಮೆಚ್ಚಿ ಹಲವು ಪತ್ರಗಳು ಬಂತು.
 ಮರೀಚಿಕೆಯ ಕಥೆ ಆರಂಭವಾಗುವುದೇ ಇಲ್ಲಿಂದ. ಅರೆ ಕಥೆ ಮುಗಿದ ಮೇಲೆ ಮತ್ತೆ ಆರಂಭ……? ಅಂತಾ ನೀವು ಕೇಳಬಹುದು. ಅದು ಕಥೆ. ಇದು….? ಅದರಲ್ಲಿ ಅವಳು ಬರೆದ ಪತ್ರವೂ ಒಂದಿತ್ತು. ಸಾರ್ ನಿಮ್ಮ ಕಥೆಯಲ್ಲಿನ ನಾಯಕಿ ನಾನೇಯೇನೋ ಅನ್ನಿಸುವ ಹಾಗೇ ನೀವು ಕಥೆ ಬರೆದ್ದಿದ್ದೀರಿ.  ರೀಯಲಿ “ಐ ಲೈಕ್ ದಟ್ ಸ್ಟೋರಿ” ಅಂತಾ ಬರೆದಿದ್ದಳು. ಅವಳು ಬರೆದ ಈ ಸಾಲು ಯಾವ ಭಾಷೆಯದು ಅಂತಾ ನನಗೆ ನಿಜಕ್ಕೂ ಆವತ್ತು ಅರ್ಥವಾಗಿರಲಿಲ್ಲ!  ಕೊನೆಗೊಂದು ದಿನ ಅದು ಇಂಗ್ಲೀಷು, ಅದರ ಅರ್ಥ ಹೀಗೆ ಅಂತಾ ಅವಳೇ ಹೇಳಿಕೊಟ್ಟಳು. ಆಮೇಲೆ ಗೊತ್ತಾಗಿದ್ದು ಆ ಪದದ ಅರ್ಥ!
 ಅಂದು ಬರೆದಿದ್ದ ಮರೀಚಿಕೆ ಲವ್, ಫೀಲು ಏನೂ ಗೊತ್ತಿಲ್ಲದೇ ಬರೆದಿದ್ದ ಬಾಲಿಶ ಕಥೆಯಾಗಿತ್ತು. ಸಿನಿಮಾ ನೋಡಿ, ನಾಲ್ಕಾರು ಕಥೆ ಓದಿ ನನ್ನದೇ ಆದ ಒಂದು ಕಲ್ಪನೆಯಲ್ಲಿ ಬರೆದ ಸಿನಿಕತನದ ಕಥೆಯಾಗಿತ್ತು. ಅದು ಹೇಗೆ ಅವಳಿಗೆ ತನ್ನ ಬದುಕಿನ ಕಥೆ ಅನ್ನಿಸಿತೋ, ಅವಳಿಗ್ಯಾಕೆ ಈ ಕಥಾ ನಾಯಕಿ ತಾನೇ ಅನ್ನಿಸಿತೋ ನನಗಂತೂ ಅರ್ಥವಾಗಲಿಲ್ಲ. ಅದನ್ನೇ ವಿಧಿ ಅಂತಾರಂತೆ. ಹಾಗಂತ ಆಮೇಲೆ ಅವಳೇ ಹೇಳಿದ್ದು. 
 ಅವ ಮಲೆನಾಡಿನ ಮಾಣಿ. ಗೊಲ್ಲರ ಹುಡುಗ. ಜಾತಿಯಲ್ಲಿ ಬ್ರಾಹ್ಮಣನಾಗಿದ್ದರೂ, ಬದುಕಿನಲ್ಲಿ, ವೃತ್ತಿಯಲ್ಲಿ ಗೊಲ್ಲನಾಗಿದ್ದ. ಊರಿನ ದನ ಮೇಯಿಸಿಕೊಂಡು, ಊರುಮಂದಿ ಕೊಡುತ್ತಿದ್ದ ದೋಸೆ, ಜೋನಿ ಬೆಲ್ಲ ತಿಂದುಕೊಂಡು ಬದುಕುತಿದ್ದ. ಕಾಡು ಮೇಡು ಸುತ್ತುವುದು, ಚಿಟ್ಟೆ ಹಿಡಿಯುವುದು, ಜೇನಿನ ಗೂಡಿಗೆ ಕಲ್ಲು ಹೊಡೆಯುವುದು, ಊರಿನ ನಾಯಿಗೆ ಕಲ್ಲು ಬಿಸಾಡುವುದು,  ಇಂತಹದ್ದೇ ದಿನಚರಿ ಆ ಮಾಣಿಯದ್ದು. ಯಾರ ಮನೆಯವರು ಯಾವ ಕೆಲಸ ಹೇಳಿದರೂ ಒಲ್ಲೆ ಅಂದ ಮಾಣಿ ಅವ ಅಲ್ಲ. ಹಾಗಾಗಿಯೇ ಊರಿನ ಹೆಂಗಸರಿಗೆಲ್ಲಾ ಅಂವ ಅಂದ್ರೆ ಇಷ್ಟ. ಆದ್ರೂ ಊರವರ ದೃಷ್ಟಿಯಲ್ಲಿ ಅವ ಒಂತರಹ ಕೆಲಸಕ್ಕೆ ಬಾರದವನಾಗಿದ್ದ! ಶಾಲೀ ಕಲಿತ ಮಾಣಿ ಅದಲ್ಲ. ಮಂತ್ರ ಕಲಿ ಅಂತಾ ಮಠಕ್ಕೆ ಬಿಟ್ಟು ಬಂದ್ರೆ ನಮ್ಮ ಮನೆ ಗೌರಿ ದನ ಮಠದಲ್ಲಿ ಇಲ್ಲ,  ಅಂತಾ ಓಡಿಬಂದ ಮಾಣಿ ಅವ. ಅವ ಮರುಳ ಅಲ್ಲದೇ ಮತ್ತಿನೆಂತೂ? ಇದು ಅವನ ಕುರಿತಾಗಿ ಊರವರು ಹಿಂದಿನಿಂದ ಆಡುತ್ತಿದ್ದ ಮಾತು!
 ಶಾಲೇ ಕಲಿತು, ನೌಕ್ರಿ ಹಿಡಿದು, ಕೊನೆಗೂ ಯಾವುದೂ ಬೇಡ ಅಂತಾ ಮನೆ ಸೇರಿ ಬೆಟ್ಟ ಸುತುತ್ತಾ ಬೇಜಾರಾದಗಲೆಲ್ಲಾ ಕಥೆ, ಕವನ ಗೀಚುತ್ತಾ ಬದುಕುತ್ತಿದ್ದವನು ನಾನು. ಚಿಟ್ಟೆ ಹಿಡಿಯುವುದು, ಪೀಟಿ ಹಿಡಿಯುವುದು ನಂಗೂ ಇಷ್ಟವಾಗಿದ್ದರೂ ನಾಯಿಗೆ, ಜೇನಿನ ಗೂಡಿಗೆ ಕಲ್ಲು ಹೊಡೆಯಬಾರದೆಂಬ ತಿಳುವಳಿಕೆಯಿತ್ತು. ಊರವರಿಗೆ ತಿಪ್ಪರಲಾಗ ಹಾಕಿದರೂ ಕೆಲಸ ಮಾಡಿಕೊಡಬಾರದು ಅಂತಾ ನಿರ್ಧರಿಸಿದ್ದ್ದೆ. ನನ್ನ ಬದುಕು ಹಳ್ಳಿ ಗುಗ್ಗು ತರಹದ್ದೆ. ನನ್ನನ್ನು ನೋಡಿ ಆಫೀಸ್‌ಲ್ಲಿ ಎಲ್ಲರೂ ಅಣಗಿಸುತ್ತಿದ್ದರು. ಬೋಳಿ ಮಕ್ಕಳಾ “ಕತ್ತೆ ಬಾಲ ಕುದುರೆ ಜುಟ್ಟು” ನಾನು ಬದುಕೋದೇ ಹೀಗೆ ಅಂತಾ ರೇಗಾಡಿಕೊಂಡು ಮನೆ ಸೇರಿದ ಪ್ರಾಣಿ. ಒಳ್ಳೇ ಮಾಣಿ ಪೇಪರಿಗೆಲ್ಲಾ ಬರೀತಾ ಅನ್ನುತ್ತಿದ್ದರು ಊರವರು ನನ್ನ ಕಂಡು!
 ಹೀಗೆ ಬದುಕು ನಡೆಸುತ್ತಿದ್ದ ಅವನ ಕಣ್ಣು ಚುಚ್ಚಿದ್ದು ರಜೆಗೆ ಅಂತಾ ಅಜ್ಜನ ಊರಿಗೆ ಬಂದಿದ್ದ ತಿಮ್ಮಣ್ಣ ಭಟ್ಟರ ಮೊಮ್ಮಗಳು. ಪಾಪ ಅವ ಬಡಪಾಯಿಪೆದ್ದು . ಅವನಿಗೆಲ್ಲಿ ಗೊತ್ತು ಡಾಕ್ಟರ್‍ ಆದವರು ಡಾಕ್ಟರನ್ನೇ ಇಷ್ಟಪಡಬೇಕು, ರ್‍ಯಾಂಕ್ ಬರುವವರು ರ್‍ಯಾಂಕ್ ಬರುವವರನ್ನೇ ಇಷ್ಟಪಡಬೇಕು ಅನ್ನುವ ಇವತ್ತಿನ ಹೊಸ ರೂಲ್ಸು! ಅವ ಅವಳ ಹಿಂದೆ ಬಿದ್ದ…..ಕೊನೆಗೂ ಬಿದ್ದೇ ಹೋದ…..ಆ ಡಾಕ್ಟರಮ್ಮ ಸತ್ತ್ಲು ಅಂತಾ ಬಿಕ್ಕುತ್ತಾ ಗುಡ್ಡದ ಮೇಲೆ ಗೌರಿ, ಗಂಗೆಯನ್ನು ಮೇಯಿಸುತ್ತಾ ಕಣ್ಣೀರಿಡುತ್ತಲೇ ಸತ್ತ. ಅವ ಕಣ್ಣು ತೆರದಿದ್ದೇ ಒಂದು ಸಲವಾಗಿತ್ತು. ಅದನ್ನು ಅವಳು ಪೂರ್ಣವಾಗಿ ತೆರೆಸ ಬಹುದಿತ್ತು. ಆದರೆ ಅವಳು ಕಣ್ಣನ್ನು ಮಾತ್ರವಲ್ಲ,  ಹೃದಯವನ್ನು ಮುಚ್ಚಿಸಿಬಿಟ್ಟಳು. ಹೀಗೆ ಆ ಕಥೆ ಎಂಡ್ ಮಾಡಿದ್ದೆ,  ಅನ್ನೋದು ನೆನಪು. ನಾಲ್ಕಾರು ಸೀನಿನ ಕಥೆಯದು. ನಗು, ಅಳು ಎಲ್ಲ ಸನ್ನಿವೇಶವನ್ನು ಹಠಕ್ಕೆ ಬಿದ್ದು ಸೃಷ್ಟಿಸಿದ್ದೆ ಅನ್ನಿಸತ್ತೆ. ಅವ ಅವಳಿಗೋಸ್ಕರ ಕೆಲವು ದಿನ ಊರು ಬಿಟ್ಟು ಹೋಗಿದ್ದ. ಹಾಗಾಗಿಯೇ ಇರಬೇಕು ಅದಕ್ಕೆ ನಾನು ಮರೀಚಿಕೆ ಅಂತಾ ಹೆಸರಿಟ್ಟಿದ್ದು.
 ಅರೆ ಅದೇ ಟೈಟಲ್ಲು ಮತ್ತಿಲ್ಯಾಕೆ? ಬೇರೆ ಯಾವ ಹೆಸರು ಸಿಗಲಿಲ್ಲವಾ? ಅಂತಾ ನೀವು ಪ್ರಶ್ನಿಸಬಹುದು. ಅದಕ್ಕೆ ಹೇಳಿದ್ದು ಕಥೆ ಮುಗಿದ ಮೇಲೆ ಆರಂಭವಾಗುವ ಕಥೆಯಿದು ಅಂತಾ! “ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ” ಅನ್ನುವ ತರಹ ಬದುಕಲು ಅಣಿಯಾಗಿದ್ದ ನಾನು ಅವಳಿಗ್ಯಾಕೆ ಇಷ್ಟವಾದೆ? ಎಂದು ನನಗಂತೂ ಅರ್ಥವಾಗಲಿಲ್ಲ! ಅರ್ಥವಾಗದಿದ್ದರೂ ನಾನ್ಯಾಕೆ ತಿರುಗಿ ಅವಳ ಪತ್ರಕ್ಕೆ ಉತ್ತರ ಬರೆದೆ ಅನ್ನುವುದನ್ನೂ ಕೂಡಾ ಅರ್ಥೈಸಿಕೊಳ್ಳಲಾಗದಷ್ಟು ಹೆಡ್ಡ ನಾನು! ಅವಳನ್ನು ಕೇಳಿದ್ದರೆ ಇದನ್ನೂ ವಿಧಿಯಾಟ ಅನ್ನುತ್ತಿದ್ದಳು! ಒಟ್ಟಲ್ಲಿ ನಾನು ಅವಳಿಗೆ ಉತ್ತರ ಬರೆದೆ. ಅವಳು ನನ್ನ ಬೆನ್ನ ಹಿಂದೆ ಬಿದ್ದಳು. ನನ್ನನ್ನು ಪಡೆದೇ ಪಡೆಯುತ್ತೀನಿ ಅಂತಾ ಕೂತಳು. ಮೊದಮೊದಲು ನನಗೂ ಅವಳ ಹಠ ಮಜಾ ಅನ್ನಿಸುತ್ತಿತ್ತು. ನಾನು ಒಂಚೂರು ಅವಳನ್ನು ಬೆಂಬಲಿಸಿದೆ! ಕೊನೆಗೂ ನನ್ನ ದೃಷ್ಟಿ ಕಾಡು ಮೇಡಿನತ್ತ ತಿರುಗಿತು. ಪ್ರೀತಿ, ಪ್ರೇಮ ಎಲ್ಲಾ ಸುಳ್ಳೇ ಸುಳ್ಳು ಅನ್ನಿಸತೊಡಗಿತು. ನಾನು ಅಲ್ಲಿಗೆ ಈ ಕಥೆಯನ್ನು ಎಂಡ್ ಮಾಡಿದೆ.
 ಊಹುಂ ಅವಳು ಬಿಡಲಿಲ್ಲ. ನಾನು ಸಿಗಲಿಲ್ಲ. ಮತ್ತದೇ ಕಥೆ….ಅವಳಿಗೂ ಅವನಿಗೂ ವ್ಯತ್ಯಾಸ ಅಂದ್ರೆ ಅವ ಗೊಲ್ಲ. ಇವಳು ಟೆಕ್ಕಿ. ಇಬ್ಬರೂ ಸೋತರು. ಮರೀಚಿಕೆಯಲ್ಲಿ ಇಬ್ಬರೂ ಸೋತರು. ಮರೀಚಿಕೆ ಬುದ್ದಿಯನ್ನು ಸೋಲಿಸಿತು. ಅಲ್ಲಲ್ಲ ಅವಳ ಭಾಷೆಯಲ್ಲೇ ಹೇಳುವುದಾದರೆ ಅದು ವಿಧಿ! ಆದ್ರೂ ಗೆದ್ದವ ನಾನಲ್ಲವೇ? ಹಾಗಂದುಕೊಂಡರೆ ನೀವು ಸೋತು ಬಿಡುತ್ತೀರಿ! ಹಾಗಾಗಿಯೇ ಅದನ್ನು ಈಗಲೂ ಮರೀಚಿಕೆ ಅಂತಲೇ ಕರೆದ್ದಿದ್ದು.

Read Full Post »

ನಕ್ಸಲರ ಅಟ್ಟಹಾಸಕ್ಕೆ ಮತ್ತೆರಡು ಹೆಣ ಬಿದ್ದಿದೆ. ಬಿಜೆಪಿಯನ್ನು ಬೆಂಬಲಿಸಬೇಡಿ ಅನ್ನುವ ಕರೆಗೆ ಓಗೊಡಲಿಲ್ಲ ಅಂತಾ ಅವರು ಕೊಲೆ ಮಾಡಿದ್ದಂತೆ! ಅದೇ ಕೊಲೆಯನ್ನು ಭಜರಂಗಿಗಳು, ಹಿಂದುವಾದಿಗಳು ಮಾಡಿದ್ದರೆ ನಮ್ಮ ನಾಡಿನ ಬುದ್ದಿಜೀವಿಗಳ ನಾಡಿಮಿಡಿತ ಏರಿಹೋಗುತ್ತಿತ್ತು! ಅಯ್ಯೋ ಅಮಾಯಕರನ್ನು ಕೊಂದರು…ಕರ್ನಾಟಕ ಮತ್ತೊಂದು ಗುಜಾರಾತ್ ಆಗುತ್ತಿದೆ…ಅಂತೆಲ್ಲಾ ಘ್ನಾನಪೀಠಿಗಳ ಪುಂಗಿ ಶುರುವಾಗುತ್ತಿತ್ತು. ಮಾನವೀಯತೆಯ ಭಾವ ಉಕ್ಕಿ ಉಕ್ಕಿ ಹರಿಯುತ್ತಿತ್ತು! ಆದರೆ ಅದೇ ಕೃತ್ಯವನ್ನು ನಕ್ಸಲೀಯರು ಮಾಡಿದರೆ ಬುದ್ದಿಜೀವಿಗಳ ಭಾವ ಯಾಕೆ ನಿಮಿರುವುದಿಲ್ಲ?!
 ನಾನು ಟ್ಯಾಬ್ಲಾಯ್ಡೊಂದಕ್ಕೆ ವರದಿಗಾರಿಕೆ ಮಾಡುತ್ತಿದ್ದಾಗ ಬೋಜಶೆಟ್ಟರನ್ನು ಮಾತಾಡಿಸಿದ್ದೆ. ಅವರಿಗೆ ಊರಿನಲ್ಲಿ ಬದುಕಲು ನಕ್ಸಲರು ನೀಡುತ್ತಿರುವ ಕಿರುಕುಳವನ್ನು, ಅವರು ಅದನ್ನು ಮೆಟ್ಟಿನಿಲ್ಲುತ್ತಿರುವ ರೀತಿಯನ್ನು ವಿವರಿಸಿದ್ದರು. ಮೊನ್ನೆಯಿಂದ ಅದ್ಯಾಕೋ ಆ ಶೆಟ್ಟರ ನೆನಪೇ ಕಾಡುತ್ತಿದೆ. ಹೆಬ್ರಿಯ ಹಳ್ಳಿಮೂಲೆಯೊಂದರಲ್ಲಿ ಶಾಲೆಯ ಅಧ್ಯಾಪಕರಾಗಿ ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಶೆಟ್ಟರಿಗೆ ಸಮಾಜೋದ್ದಾರಕ ನಕ್ಸಲರು ಮೃತ್ಯುಪಾಶವಾದರು.ಹೆಬ್ರಿಯಂತಹ ಕಾಡುಮೂಲೆಯ ಹಳ್ಳಿಯಲ್ಲಿ ಇದ್ದ ಸಮಸ್ಯೆಗಳಾದರೂ ಏನು? ನಕ್ಸಲಿಸಂ ಅಲ್ಲಿಗೆ ಯಾಕೆ ಬಂದು ವಕ್ಕರಿಸಿತು. ನಕ್ಸಲಿಸಂ ಬಂದ ಮೇಲೆ ಬಗೆಹರಿದ ಸಮಸ್ಯೆಗಳಾದರೂ ಏನು?!…..ಊಹುಂ ಇವ್ಯಾವುದಕ್ಕೂ ನಮ್ಮ ಘ್ನಾನಪೀಠಿಗಳ ಹತ್ತಿರ ಉತ್ತರವಿಲ್ಲ. ಹಳ್ಳಿಮೂಲೆಯ ಸಮಸ್ಯೆಗಳು ಕೇವಲ ಪಶ್ಚಿಮಘಟ್ಟದ ಹಳ್ಳಿಗೆ ಮಾತ್ರ ಸೀಮಿತವಲ್ಲ. ಭಾರತದ ಪ್ರತಿಯೊಂದು ಹಳ್ಳಿಗಳಿಗೂ ಇದೆ. ಅದರ ನಡುವೆ ನಮ್ಮ ನಾಡಿನ ಜನ ಶಾಂತಿಯಿಂದ, ನೆಮ್ಮದಿಯಿಂದ ಜೀವನ ನಡೆಸುತ್ತಾ ಬಂದಿದ್ದಾರೆ. ವಿದ್ಯುತ್ ಇಲ್ಲ, ಶಾಲೆಯಿಲ್ಲ…ಊಹುಂ ಇಂತಹ ಸಮಸ್ಯೆಗಳಿಗೆ ನಮ್ಮವರು ತಲೆಕೆಡಿಸಿಕೊಳ್ಳಲೇ ಇಲ್ಲ. ಅವರಿಗೆ ಚೆನ್ನಾಗಿ ಗೊತ್ತು ಈ ನಾಡಿನಲ್ಲಿ ಒಂದು ಹೊತ್ತಿನ ತುತ್ತು ಕೂಳಿಗೂ ಗತಿಯಿಲ್ಲದವರು ಅನೇಕರಿದ್ದಾರೆ ಎಂದು. ಅವನ್ನೆಲ್ಲಾ ಸರಿಪಡಿಸುತ್ತೇವೆ ಎಂದು ಕಾಡೊಳಗೆ ಹೋಗಿ ಮಂಗನಂತೆ ಕುಳಿತರೆ ಪ್ರಯೋಜನವಿಲ್ಲ ಎಂದು.
 ರಷ್ಯಾದಲ್ಲಿ ಕ್ರಾಂತಿಯಾಯಿತು, ಚೀನಾದಲ್ಲಿ ಅದಾಯಿತು…..ಹಾಗೆ ಭಾರತದಲ್ಲೂ ಇದಾಗತ್ತೆ! ಹೌದು ಆಗತ್ತೆ ಶಾಂತವಾಗಿದ್ದ ಮಲೆನಾಡಿನಲ್ಲಿ ರಕ್ತಹರಿಯತ್ತೆ. ಬುದ್ದಿಜೀವಿಗಳಿಂದ ಕಾಡಿಗೆ ಹೋಗಿ ಕುಳಿತ ಒಂದಿಷ್ಟು ಬಡವರ, ದಲಿತರ, ಪರದೇಶಿಗಳ ಹೆಣ ಬೀಳತ್ತೆ. ಇದನ್ನೆಲ್ಲಾ ಲಾಭವಾಗಿಸಿಕೊಂಡು, ಇದರಿಂದ ಪ್ರಚಾರಗಿಟ್ಟಿಸಿಕೊಂಡು ಹೋರಾಟ ಅದು ಇದು ಅಂತಾ ತಿರುಗಾಡಿ ಹಣಮಾಡುವ ಅಪ್ರತಿಮ ಹೋರಾಟಗಾರರ ಬೊಗಸೆ ತುಂಬತ್ತೆ ಅವರ ಮಕ್ಕಳು ವಿದೇಶಕ್ಕೆ ತೆರಳಲು ಸುಲಭವಾಗತ್ತೆ. ಅಷ್ಟೆ ಆಗುವುದು ಹೊರತು ಮತ್ತೇನೂ ಆಗಲಾರದು ನಾವು ಚೀನಾ ಮಾದರಿಯನ್ನು ಆರಾಧಿಸಲು ಹೊರಟರೆ!
 ಮಲೆನಾಡಿಗೆ ನಕ್ಸಲಿಸಂ ಕಾಲಿಟ್ಟು ಸುಮಾರು ದಶಕಗಳೇ ಕಳೆಯಿತು. ಶೃಂಗೇರಿ, ಕುದ್ರೆಮುಖ ಭಾಗದ ಎಷ್ಟು ಹಳ್ಳಿಗಳು ಉದ್ದಾರವಾಗಿವೆ? ಎಷ್ಟು ಹಳ್ಳಿಗಳಿಗೆ ನಕ್ಸಲರು ರಸ್ತೆ ಮಾಡಿದ್ದಾರೆ.ಎಷ್ಟು ಬಾವಿತೋಡಿದ್ದಾರೆ? ಎಷ್ಟು ಶಾಲೆ ಕಟ್ಟಿಸಿದ್ದಾರೆ? ಎಷ್ಟು ದಲಿತರಿಗೆ ಕೂರಿಸಿ ಊಟಹಾಕುತ್ತಿದ್ದಾರೆ?! ಅಂತಾ ಕೇಳಿದರೆ ಅಯ್ಯೋ ಅದನ್ನೆಲ್ಲಾ ಸರ್ಕಾರ ಮಾಡಬೇಕು! ಅದು ಮಾಡಲೀ ಅಂತಾನೇ ನಾವು ಕಾಡಲ್ಲಿ ಕುಳಿತು ಇಷ್ಟೆಲ್ಲಾ ಹೋರಾಟ ಮಾಡುತ್ತಿರುವುದು! ಅನ್ನುತ್ತಾರೆ ನೂರಕ್ಕೂ ಹೆಚ್ಚು ಜನರಿರುವ ನಕ್ಸಲ್ ತಂಡದವರು. ಅಲ್ಲಾ ಸ್ವಾಮಿ ಬಾವಿತೋಡಲು, ರಸ್ತೆಮಾಡಲು ಸರ್ಕಾರ ಯಾಕೆ ಬೇಕು ನೂರು ಮಂದಿ ಸಾಕಾಗುವುದಿಲ್ಲವೇ?
 ಬನ್ನಿ ನಮ್ಮ ನಾಡಿನಲ್ಲಿ ಒಂದಿಷ್ಟು ಸ್ತ್ರೀಶಕ್ತಿ ಕೇಂದ್ರಗಳಿವೆ. ಸರ್ಕಾರದ ಸಹಾಯವಿಲ್ಲದೇ ಅವು ಮಾಡುತ್ತಿರುವ ಕೆಲಸವನ್ನು ನೋಡಬಹುದು. ನಾಚಿಕೆ ಆಗಬೇಕು ನಕ್ಸಲರಿಗೆ ಒಬ್ಬ ಹೆಣ್ಣು ಮಗಳು ಮಾಡುವ ಕೆಲಸವನ್ನು ಮಾಡಲಾಗದೇ ಷಂಡರಂತೆ ಕಾಡಿಗೆ ಹೋಗಿ ಕುಳಿತುಕೊಳ್ಳಲು. ಅವರನ್ನು ಕಾಡಿಗೆ ಹೋಗುವಂತೆ ಪ್ರೇರೇಪಿಸುವ ಒಂದಿಷ್ಟು ಪ್ರಾಧ್ಯಾಪಕರಿಗೆ, ಬುದ್ದಿಜೀವಿಗಳಿಗೂ, ಹುಳಿ ಹುಳಿ ಸಂಪಾದಕರಿಗೂ ನಾಚಿಕೆಯಾಗಬೇಕಿತ್ತು. ಬುದ್ದಿ ಪರಾಕಾಷ್ಠೆ ಅತಿಯಾದರೇ ಸಮಾಧಿ ಸ್ಥಿತಿ ತಲುಪುತಾರಂತೆ! ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಡುತ್ತಾರಂತೆ! ನಿರ್ಲಿಪ್ತ ಸ್ಥಿತಿ ಅಂತಾರಲ್ಲಾ ಅಂತಹದ್ದೇ ಸ್ಥಿತಿ ತಲುಪುತ್ತಾರಂತೆ ನಮ್ಮ ನಾಡಿನ ಬುದ್ದಿಜೀವಿಗಳು ಅದೇ ಹಂತ ತಲುಪಿದವರು! ಎಲ್ಲವನ್ನು ತ್ಯಜಿಸಿ ನಿಂತಿರುವವರು!ಅವರಿಗೆಲ್ಲಾ ಚೆನ್ನಾಗಿ ಗೊತ್ತು ಈ ಹೋರಾಟದಲ್ಲಿ ಸಾಯುವವರು ಅಮಾಯಕರು ಹೊರತು ತಮ್ಮ ಹೆಂಡಿರು ಮಕ್ಕಳು , ತಾವು ಇಟ್ಟುಕೊಂಡವರು , ಕಟ್ಟಿಕೊಂಡವರು ಸಾಯುವುದಿಲ್ಲ ಅಂತಾ! ಯಾಕೋ ಇದನೆಲ್ಲಾ ನೋಡುತ್ತಿದ್ದರೆ ಶಿವರಾಮ ಕಾರಂತರ ಗೋಂಡಾರಣ್ಯ ಕಾದಂಬರಿ ನೆನಪಿಗೆ ಬರತ್ತೆ. ಇಂತಹವರನ್ನು ನೋಡಿಯೇ ಬಹುಶಃ ಕಾರಂತರು ಆ ಕಾದಂಬರಿ ಬರೆದಿರಬೇಕು!
 ಒಟ್ಟಲ್ಲಿ ಶಾಂತ ಮಲೆನಾಡಿನಲ್ಲಿ ರಕ್ತದೋಕಳಿ, ಅಮಾಯಕರ ಬಲಿ. ಈ ಹೋರಾಟಕ್ಕೆ ಶೀಘ್ರವಾಗಿ ಕಡಿವಾಣ ಹಾಕಲೇಬೇಕಿದೆ. ಬೇರು ಕೀಳದೇಮರ ಕಡಿದ್ರೆ ಪ್ರಯೋಜನವಿಲ್ಲ. ಹಾಗಾಗಿ ಯೂನಿವರ್ಸಿಟಿ ವಿದ್ಯಾರ್ಥಿಗಳನ್ನು ನಕ್ಸರನ್ನಾಗಿ ಪರಿವರ್ತಿಸುವ ಕೆಲ ಪ್ರಾದ್ಯಾಪಕರನ್ನು, ನಾಡಿನಲ್ಲಿ ಕುಳಿತು ನಕ್ಸಲ್ ಪರ ಸಂಪಾದಕೀಯ ಬರೆಯುವ ಕೆಲ ಹುಳಿಹುಳಿ ಸಂಪಾದಕರನ್ನು ಪೊಲೀಸರು ಮೊದಲು ಎನ್‌ಕೌಂಟರ್ ಮಾಡಿದ್ದರೆ ಚೆನ್ನಾಗಿತ್ತು.ಅದೆಲ್ಲಾ ಏನೇ ಇರಲಿ ಸತ್ತ ಬೋಜಶೆಟ್ಟಿಯ ಜೀವಕ್ಕೆ ಬೆಲೆತೆರುವವರು ಯಾರು?ಗುಜಾರಾತ್‌ನಲ್ಲಿ ಸತ್ತವರದ್ದು ಮಾತ್ರ ಜೀವವಾ? ಹೆಬ್ರಿಯವರದ್ದು ನಿರ್ಜಿವವಾ? ಇದೆಲ್ಲಾ ಯಾಕೆ ಅವಕ್ಕೆ….ಅಂದರೆ ಅವಕ್ಕೆ…ಅದೇ ಬಹಿರಂಗವಾಗಿ…ಅಲ್ಲಲ್ಲ ಅಂತರಂಗದಿಂದ ಬರೆಯುತ್ತಾವಲ್ಲ ಹುಳಿ ಹುಳಿ ಸಂಪಾದಕರು, ಬುದ್ದಿಯ ಪರಾಕಾಷ್ಠೆಯಿಂದ ನಿರ್ಲಿಪ್ತ ಸ್ಥಿತಿ ತಲುಪಿರುವವರಿಗೆ ಅರ್ಥವಾಗಲ್ಲ?!(ಹುಳಿ ಅಂದರೆ ಮಲೆನಾಡು ಬಾಷೆಯಲ್ಲಿ ಅಹಂಕಾರಿ ಅಂತಾ ಅರ್ಥ. ಅದನ್ನು ಇಲ್ಲಿ…..?!!!!)

Read Full Post »

ಮೊನ್ನೆ ಸಾಗರದಲ್ಲಿಅಣ್ಣನ ಪುಸ್ತಕದ ಬಿಡುಗಡೆ ಇತ್ತು ಅಂತಾ ನೆವ ಮಾಡಿಕೊಂಡು ಅಂತೂ ಎರಡು ದಿನದ ಮಟ್ಟಿಗೆ ಮನೆಗೆ ಹೋಗಿ ಬಂದೆ. ಬಸ್‌ಸ್ಯ್ಟಾಂಡ್ ಇಳಿದು ಮನೆ ಕಡೆ ಹೆಜ್ಜೆಹಾಕೋವಾಗ ಅದ್ಯಾಕೋ ದೀಡೀರನೇ ಮಲೆನಾಡಿನ ಬೇಸಿಗೆ ನೆನಪಾಯಿತು. ಅಂದಹಾಗೇ ಬೇಸಿಗೆಯಲ್ಲಿ ಮನೆಗೆ ಹೋಗದೇ,ನೇರಳೆ ಹಣ್ಣು, ಈಚಲು ಹಣ್ಣು, ಸಂಪಿಗೆ ಹಣ್ಣು , ಕಬ್ಬಿನಾಲೆ ಇವನೆಲ್ಲಾ ಕಾಣದೆ ಸುಮಾರು ಐದು ವರ್ಷಗಳೇ ಕಳೆದುಹೋಗಿತ್ತು.  ನಾವು ಇಸ್ಕುಲಿಗೆ ಹೋಗುತ್ತಿದ್ದ ಕಾಲದಲ್ಲಿ ಬೇಸಿಗೆ ಅಂದ್ರೆ ನಮಗೆ ಬೊಂಬಾಟ್ ಕಾಲ. ಆವಾಗಿನ ನಮ್ಮ ದಿನಚರಿ ಅಂದ್ರೆ…..ಛೇ ಇವತ್ತು ಅದನ್ನು ನೆನಸಿಕೊಂಡ್ರೆ ತುಂಬಾ ಫೀಲ್ ಆಗತ್ತೆ.
ಬೆಳಿಗ್ಗೆ ಆರು ಗಂಟೆಗೆ ಶುರು ನಮ್ಮ ಕಿರಿಕೆಟ್ಟು ಮ್ಯಾಚು! ಸುಮಾರು ಒಂಬತ್ತು ಘಂಟೆಗೆವರೆಗೂ ಕಿರಿಕೆಟ್ಟಾಡಿ ಕೊನೆಗೆ ಲೈಟಾಗೊಂದು ನಾಸ್ಟಾ ಮಾಡಿ ಅಪ್ಪ ಮನೇಲಿ ಇದ್ದಿದ್ದೂ ಹೌದಾದ್ರೆ ಗಡದ್ದಾಗಿ ಸ್ನಾನ ಮಾಡಿ ಅಪ್ಪನ ಎದುರಿಗೆ ಸಂಧ್ಯಾವಂದನೆ ಮಾಡೋ ನಾಟಕವಾಡಿ, ಗಾಯಿತ್ರಿ ಮಂತ್ರ ಹೇಳೋ ಕಾಲದಲ್ಲಿ ಯಾರ್ಯಾರದ್ದೋ ಹೆಸರು ಹೇಳಿ ಅಮ್ಮನ ಹತ್ರಾ ಬೈಸಿಕೊಂಡು ಕೊನೆಗೆ ಗುಡ್ಡ ಹತ್ತಿದ್ವೀ ಅಂದ್ರೆ ಶುರು ನೋಡಿ ನಮ್ಮ ದಿನಚರಿ!
ಹಾಳಾದ ಬೆಂಗಳೂರಿನಲ್ಲೂ ನಮ್ಮ ದಿನಚರಿಯಿದೆ. ಅದನ್ನಾ ಹೇಳಿದರೂ ಪ್ರಯೋಜನವಿಲ್ಲ ಬಿಡಿ. ಅಂದಹಾಗೇ ಗುಡ್ಡ ಹತ್ತುವ ಮೊದಲು ಒಂದಿಷ್ಟು ನೇರಳೆ ಹಣ್ಣಿನ ನೈವೇದ್ಯ ನಮಗೆ ಆಗಲೇ ಬೇಕಿತ್ತು. ಮಲೆನಾಡಿನಲ್ಲಿ ಬಿಡುವ ವಿಶಿಷ್ಟ ಹಣ್ಣುಗಳ ಪೈಕಿ ನೇರಳೆ ಉತ್ಕೃಷ್ಟವಾದದ್ದು. ನಾನು ಅತೀ ಇಷ್ಟಪಡುವ ಹಣ್ಣು ಅದೆ.ತುಂಬಾ ಸಿಹಿಯಾಗಿರುವ ತುಂಬಾ ರುಚಿಯುತವಾದ ಹಣ್ಣು ಅದು. ತಿಂದಷ್ಟು ತಿನ್ನಬೆಕು ಅನ್ಸತ್ತೆ. ಅದರ ಮುಂದೆ ನಿಮ್ಮ ಆಪಲ್ಲು, ಗ್ರೇಪು ಯಾವುದೂ ಅಲ್ಲ! ಅಷ್ಟು ರುಚಿ. ಅದನ್ನ ಒಂದು ರೌಂಡ್ ತಿಂದು ಮುಗಿಸಿ ನಮ್ಮ ಸೈನ್ಯ ಪಯಣ ಮುಂದುವರೆಸುವಾಗ ಘಂಟೆ ಹನ್ನೆರಡು ಆಗಿರುತ್ತಿತ್ತು. ಕೊನೆಗೆ ಗೇರು ಬ್ಯಾಣಕ್ಕೆ ನುಗ್ಗಿ ಒಂದಿಷ್ಟು ಗೇರು ಹಣ್ಣು ತಿಂದು ಯಾರದ್ದೋ ಬ್ಯಾಣದ ಗೇರು ಪೀಠ ಕದ್ದು ಅವರ ಹತ್ರಾ ಬೈಸಿಕೊಂಡು ರಂಪಾ ರಾಮಾಯಣ ಮುಗಿಯುವ ಹೊತ್ತಿಗೆ ಊಟದ ನೆನಪು. ನಿಜವಾಗ್ಲೂ ಊಟ ನಮಗೆ ಬೇಡದೇ ಹೋದ್ರು ಅಪ್ಪ, ಅಮ್ಮ ಬೈತಾರಲ್ಲ ಅಂತಾ ನಾವು ಅವರನ್ನ ಬೈದುಕೊಳ್ಳುತ್ತಾ ಊಟಕ್ಕೆ ಬರೋದು.
ಆಮೇಲೆ ದಿನಚರಿಯ ಎರಡನೇ ಅಧ್ಯಾಯ. ಈಚಲು ಹಣ್ಣಿನ ಬೇಟೆ! ಒಂತರಹ ಒಣ ದ್ರಾಕ್ಷಿ ರುಚಿಯುಳ್ಳಪಸಂದಾದ ಹಣ್ಣು ಅದು. ಈಗಂತೂ ಸುಡುಗಾಡು ನೀಲಗಿರಿ ಪ್ಲಾಂಟೇಶನ್ನಾಗಿ ಒಂದು ಈಚಲು ಮಟ್ಟಿನೇ ಇಲ್ಲ ನಮ್ಮ ಮನೆ ಹತ್ರಾ. ಇದಾದ ಮ್ಯಾಕೆ ಮರಕೋತಿ, ಮಣ್ಣು ಮಸಿ ಅಂತಾ ಹುಚ್ಚುಚ್ಚು ಆಟ. ಕೊನೆಗೆ ೪.೩೦ಕ್ಕೆ ಎಂಟರ್ ದೀ ಫೀಲ್ಡ್ ಫಾರ್ ಪ್ಲೇಯಿಂಗ್ ಕಿರಿಕೆಟ್ಟು. ಆಚೆ ಮನೆ ಅಜ್ಜ, ಇಚಿಗೆ ಕಾಡಜ್ಜನ ಮನೆ ಅಮ್ಮಮ್ಮ ಎಲ್ಲಾ ಗಟ್ಟಿಯಾಗಿ ನಿದ್ದೆ ಮಾಡ್ತಾ ಇದ್ದರೆ ನಾವು ಕೂಗಿ ಕಬ್ಬರಿಯುವುದು. ಅರೆನಿದ್ದೆಗಣ್ಣಲ್ಲಿದ್ದ ಅವರು ಬೆತ್ತ ತಗೊಂಡು ಆಲದ ಮರದವರೆಗೆ ನಮ್ಮನ್ನ ಬೆರೆಸಿಕೊಂಡು ಬರ್ತಾ ಇದ್ದಿದ್ದನ್ನು ನೆನಸಿಕೊಂಡ್ರೆ ಇವತ್ತಿಗೂ ನಗು ಬರತ್ತೆ.
                                                                                                           ಮುಂದುವರೆಯುವುದು…..

Read Full Post »