Archive for ಜುಲೈ, 2008
ಅವಳು ಕಥೆಯಾಗಿಯೇ ಉಳಿದಳು!
Posted in ಕಥೆ-ವ್ಯಥೆ! on ಜುಲೈ 25, 2008| 3 Comments »
ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎ.ಸಿ ರೂಮಿನಲ್ಲಿ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ “ಲಗೋರಿ” ಎಂದು ಕಿರುಚುತ್ತಾ ಕುಣಿದು ಕುಪ್ಪಳಿಸುತ್ತಿದ್ದ. “ಜುಮುರು ಮಳೆಯಲ್ಲಿ ತೊಯ್ಯ ಬೇಡವೋ ಥಂಡಿ ಆಗತ್ತೆ” ಅಂತಾ ಕೂಗಿ ಹೇಳಲು ತುಟಿ ತೆರೆದರೆ ಸ್ವರ ಸಹಕಾರ ನೀಡಲಿಲ್ಲ. ಅವಳ ನೆನಪು ಮಾಸಿಯೇ ಹೋಗಿದೆ. ಶ್ರವಣನ ಲಗೋರಿ ಎಂಬ ಕೂಗು ಕೇಳದಿದ್ದಿದರೆ ಇವತ್ತೂ ಕೂಡಾ ಅವಳು ನೆನಪಾಗುತ್ತಿರಲಿಲ್ಲ. ಯಾಕೆಂದರೆ ಅವಳನ್ನು ನೆನಪಿಸಿಕೊಳ್ಳಬೇಕಾದಷ್ಟು ನೆನಪಿಸಿಕೊಂಡು, ಅವಳಿಗಾಗಿ ಸುರಿಸಲು ಸಾಧ್ಯವಿರುವಷ್ಟು ಕಣ್ಣೀರು ಸುರಿಸಿ ಆಗಿ ಹೋಗಿದೆ! ಆದರೂ ಅವಳನ್ನು ನಾನಿಷ್ಟು ಬೇಗ ಮರೆಯಬಾರದಿತ್ತು. ನಾನು ಹಾಗಂದುಕೊಳ್ಳುವುದಕ್ಕೆ ಇರಬೇಕು ಅವಳು ಆಗಾಗ ಏನೇನೋ ನೆವದಿಂದ ನೆನಪಾಗುವುದು. ಸುಮ್ಮಸುಮ್ಮನೆ ನನ್ನಲ್ಲಿ ಕಣ್ಣೀರು ತರಿಸುವುದು!
ಚರ್ಚಿಸಲೂ ನಮಗೆ ಪುರುಸೊತ್ತಿಲ್ಲ!
Posted in ಚಿಂತನ ಚಾವಡಿ on ಜುಲೈ 11, 2008| 1 Comment »
ಏನು ಬ್ಯೂಸಿ ಅಂತೀರಾ…ನಮ್ಮ ಮಾತುಗಳು ಆರಂಭವಾಗುವುದೇ ಇಲ್ಲಿಂದ. ಪಿಕ್ನಿಕ್ಗೆ ಪುರುಸೊತ್ತು ಇದೆ, ಚಲನಚಿತ್ರ ಅಂದ್ರೆ ನಮ್ಮ ಕೆಲಸಗಳೆಲ್ಲಾ ಮರೆತು ಹೋಗತ್ತೆ. ಧಾರಾವಾಹಿ ನೋಡಲು ನಮ್ಮಲ್ಲಿ ಸಾಕಷ್ಟು ಸಮಯವಿದೆ. ಆದ್ರೂ ಒಂದಿಷ್ಟು ಕೆಲಸಗಳಿಗೆ ಮಾತ್ರ ನಮ್ಮದು ಅದೇ ರಾಗ! ಯಾವುದಾದರೂ ಒಳ್ಳೆ ಕೆಲಸ ಮಾಡುತ್ತೇವೆ, ಒಳ್ಳೆ ವಿಚಾರ ಹೇಳುತ್ತೇವೆ ಅಂತಾ ನಮ್ಮ ಈ ಪ್ಯಾಟಿ ಜನರನ್ನು ಕರೆದು ನೋಡಿ ಊಹುಂ ಸುತಾರಾಂ ಅವರಿಗೆ ಪುರುಸೊತ್ತಿರದು!
ಮೊನ್ನೆ ಅದ್ಯಾಕೋ ನನ್ನ ಸಂಚಿ ನಾಗಿ ಕಥೆ ಓದಿದ ವೆಂಕಟ ಲಕ್ಷ್ಮಿಯವರು ಇಂದಿನ ಕತೆಗಾರರ ಕುರಿತಾಗಿ ಮಾತಾಡಲು ಕುಳಿತರು. ಇವತ್ತಿನ ಬರಹಗಾರರಿಗೆಲ್ಲಾ ಪೇಶನ್ಸ್ ಇಲ್ಲ. ಕಥೆಗಳೆಲ್ಲಾ ಚಿಕ್ಕದಾಗುತ್ತಿದೆ. ವಿಷಯ ವಿಸ್ತಾರವಾದದ್ದನ್ನು ಆಯ್ದುಕೊಂಡು ನರೇಶನನ್ನು ಚಿಕ್ಕದಾಗಿ ಮಾಡುತ್ತಾರೆ. ನಿಮ್ಮ ಕಥೆಯೂ ಹಾಗೇ ಆಗಿದೆ ಅಂತಾ ಅವರು ಮಾತು ಮುಗಿಸಿದರು. ಆಫ್ಕೋರ್ಸ್ ಅದು ನಿಜ ಕೂಡಾ. ಆದರೆ ಅದಕ್ಕಿಂತ ಮುಖ್ಯವಾಗಿ ಕಥೆ ಓದುವ ಮಂದಿಗೆ ಎಷ್ಟು ಪೇಶನ್ಸ್ ಇದೆ ಅನ್ನೋದು ಮುಖ್ಯವಾಗತ್ತೆ.
ಶಿವರಾಮ ಕಾರಂತರು ಒಂದು ಕುಚೋದ್ಯ ಹೇಳುತ್ತಿದ್ದರು. ಅವರ ಮೂಕಜ್ಜಿಯ ಕನಸಿಗೆ ಪ್ರಶಸ್ತಿ ಬಂದಾಗ ಅನೇಕ ಕಡೆ ಅವರಿಗೆ ಸನ್ಮಾನ ಆಯಿತಂತೆ. ಸಾಕಷ್ಟು ಜನ ಅವರ ಕಾದಂಬರಿ ಗುಣಗಾನ ಮಾಡಿದರಂತೆ. ಆದ್ರೆ ಅದರಲ್ಲಿ ಮುಕ್ಕಾಲು ಪಾಲು ಜನ ಕಾದಂಬರಿ ಓದದೇ ಗುಣಗಾನ ಮಾಡಿದವರಂತೆ! ಈ ವಿಚಾರವನ್ನು ಕಾರಂತರು ತುಂಬಾ ಸೊಗಸಾಗಿ ಬರೆದುಕೊಳ್ಳುತ್ತಾರೆ.
ಇತ್ತೀಚೆಗೆ ನನ್ನ ಬರಹವನ್ನು ಸುಮ್ಸುಮ್ನೆ ಹೊಗಳುವವರೆ ಹೆಚ್ಚಾಗಿದ್ದಾರೆ. ನಾನು ಬ್ಲಾಗ್ ನಿಲ್ಲಿಸುತ್ತೀನಿ ಅಂತಾ ಮೊನ್ನೆ ಚೇತನಕ್ಕಾ ಅದ್ಯಾಕೋ ಗುನುಗುತ್ತಿದ್ದರು. ತಕ್ಷಣ ನನಗೆ ಕಾರಂತರ ಮಾತು ನೆನಪಾಯಿತು. ಒಂದು ಕೃತಿಯನ್ನು, ಬರಹವನ್ನು ಪೂರ್ಣ ಓದದೇ ಹೊಗಳುವ ಟ್ರೆಂಡು ಆವತ್ತಿನಿಂದ ಇವತ್ತಿನವರೆಗೂ ಇದೆ. ಸುದೀರ್ಘ ಬರಹವನ್ನೋ, ಕಥೆಯನ್ನೋ ಬರೆದರೆ ಅದರಲ್ಲೂ ಇಂಟರ್ ನೆಟ್, ಬ್ಲಾಗ್ಗಳಲ್ಲಿ ಬರೆದರೆ ಖಂಡಿತಾ ಜನ ಓದಲ್ಲ. ಅಂದಹಾಗೆ ಬ್ಲಾಗ್ ಎಂಬುದು ನನ್ನ ಮಟ್ಟಿಗಂತೂ ಪ್ರಭಾವಶಾಲಿ ಅನ್ನಿಸುವ ಓದುವ ಮಾಧ್ಯಮವಲ್ಲ.
ಮೊನ್ನೆ ಹೀಗೆ ಪುತ್ತೂರಿನ ಕುಂಟನಿ ನಿವಾಸದಿಂದ ಅಮೆರಿಕದ ಕೆಲ ಮಿತ್ರರ ಬ್ಲಾಗ್ವರೆಗೂ ಸುಮ್ನೆ ಒಂದು ವಾಕಿಂಗ್ ಹೋಗಿ ಬಂದೆ. ಎಷ್ಟೊಂದು ಅದ್ಬುತ ಬರಹಗಳಿದ್ದವು ಅಂದ್ರೆ ಕೆಲವು ವಾಸ್ತವವಾಗಿ ಚರ್ಚೆಯಾಗಬೇಕಿತ್ತು. ಆದ್ರೆ ಒಂದು ಕಮ್ಮೆಂಟ್ ಕೂಡ ಕೆಲ ಬರಹಗಳಿಗೆ ಇರಲಿಲ್ಲ. ವಾಸ್ತವವಾಗಿ ಬರಹಗಾರ ಜನ ಕಮ್ಮೆಂಟ್ ಮಾಡಲಿ, ಪ್ರತಿಕ್ರಿಯೆ ನೀಡಲಿ ಅಂತಾ ಬರೆಯುವುದಿಲ್ಲ( ನನ್ನಂತಹವನು, ಇತರರ ಕುರಿತು ನನಗೆ ಗೊತ್ತಿಲ್ಲ) ಆದ್ರೂ ಅಂತಹ ಬರಹದ ಕುರಿತು ಕನಿಷ್ಟ ಪಕ್ಷ ಚರ್ಚೆ ನಡೆಸಬೇಕು. ಸಾಹಿತ್ಯವಲಯದಲ್ಲಿ ಒಂದಿಷ್ಟು ವಿಚಾರ ಚರ್ಚೆಯಾಗಬೇಕು( ಯಾಕಂದ್ರೆ ಇಂದಿನ ಸಾಹಿತ್ಯವಲಯ ಜನಪ್ರಿಯ ವಾಗಿರುವುದೇ ಮಾತಿಗಾಗಿ, ಉಪದೇಶಕ್ಕಾಗಿ, ಚರ್ಚೆಗಾಗಿ ಹೊರತು ಕೃತಿಗಾಗಿ, ಕಾರ್ಯಕ್ಕಾಗಿ ಅಲ್ಲ!)
“ಇನ್ನೊಂದು ಸಾಹಿತ್ಯ ಚರಿತ್ರೆ” ಅಂತಾ ಆ ಪುಸ್ತಕದ ಹೆಸರು. ಸುಮತೀಂದ್ರ ನಾಡಿಗರು ಬರೆದ ಪುಸ್ತಕ. ಆಗಿನ ಕಾಲದಲ್ಲಿ ಸಾಹಿತಿಯೊಬ್ಬನ ಕವನ, ಲೇಖನಗಳು ಹೇಗೆ ಚರ್ಚೆಯಾಗುತ್ತಿತ್ತು, ಅನಂತಮೂರ್ತಿ, ಅಡಿಗರಂತಹ ದಿಗ್ಗಜರ ನಡುವೆ ಯಾವ ತರಹ ಒಂದು ವಿಚಾರದ ಕುರಿತಾಗಿ ಚರ್ಚೆ ನಡೆಯುತ್ತಿತ್ತು ಅನ್ನುವುದು ವಿವರಿಸುವ ಅದ್ಬುತ ಪುಸ್ತಕವದು. ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರನೊಬ್ಬ ಹೇಗೆ ವಿಕಸಿತಗೊಳ್ಳುತ್ತಾ ಹೋಗುತ್ತಾನೆ ಎಂಬುದನ್ನು ಆ ಪುಸ್ತಕದಿಂದ ಅರಿತುಕೊಳ್ಳಬಹುದು.
ಯಾವೊಬ್ಬನೂ ಹುಟ್ಟುತಲೇ ಸರ್ವಜ್ಞನಾಗುವುದಿಲ್ಲ. ತಪ್ಪುಗಳನ್ನು ತಿದ್ದಿಕೊಳ್ಳುತ್ತಲೇ ಫ್ರೌಡನಾಗುತ್ತಾ ಹೋಗುತ್ತಾನೆ. ಹಾಗೇ ಬರಹಗಾರನೊಬ್ಬ ಪ್ರೌಡನಾಗಲು ಆತನ ಲೇಖನದ ಮೇಲೆ ನಾವು ಹುಟ್ಟುಹಾಕುವ ಚರ್ಚೆ ಸಹಕಾರಿಯಾಗುತ್ತದೆ. ಜತೆಗೆ ನಮ್ಮ ಚಿಂತನಾ ಲಹರಿಯೂ ವಿಕಸಿತಗೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ಪು.ತಿ.ನ, ಅ.ನಕೃ, ಅಡಿಗ, ಮೊದಲಾದ ಸಾಹಿತಿಗಳ ಕಾಲದಲ್ಲಿ ಸಾಹಿತ್ಯ ಸಮಾಜದ ಚರ್ಚಿತ ವಿಷಯಗಳಲ್ಲಿ ಒಂದಾಗಿದ್ದು (ಲಂಕೇಶ್, ಅನಂತಮೂರ್ತಿ, ತೇಜಸ್ವಿ ಕಾಲದ ಸಾಹಿತ್ಯ ಸಮರವೇ ಬೇರೆ ತರಹದ್ದು!)ಅಂತಾ ನನ್ನಗನ್ನಿಸುತ್ತದೆ.
ಆದರೆ ಇವತ್ತು ನಮ್ಗೆ ಒಂದು ವಿಚಾರದ ಕುರಿತು ಚರ್ಚೆ ಮಾಡುವುದು ಹಾಳಾಗಲೀ, ಬರಹವನ್ನು ಸಂಪೂರ್ಣ ಓದುವಷ್ಟು ಪುರುಸೊತ್ತು ಇಲ್ಲ ಅಲ್ವಾ? ಅಂದಿನ ಜನಾಂಗಕ್ಕೂ ಇಂದಿನ ಪೀಳಿಗೆಗೂ ಇರುವ ವ್ಯತ್ಯಾಸ ಅದೇಷ್ಟು ಅಲ್ವಾ? ಹಾಗಾಗಿಯ ನಾನಂತೂ ಚಿಕ್ಕ ಚಿಕ್ಕ ಕಥೆಯನ್ನೇ ಬರೆಯುವುದು! ಅದು ಕಥೆಯೋ, ಬರಹವೋ ಅಂತಾ ನನಗೂ ಕೆಲವೊಮ್ಮೆ ಅರ್ಥವಾಗುವುದಿಲ್ಲ!
ಸಂಚಿ ನಾಗಿ ಮತ್ತು ಮೂರು ತಲೆಮಾರು
Posted in ಕಥೆ-ವ್ಯಥೆ! on ಜುಲೈ 7, 2008| 3 Comments »
ಸಂಚಿ ನಾಗಿ ಅಂತಾನೇ ಆಕೆ ನಮಗೆಲ್ಲಾ ಪರಿಚಿತೆ. ರಾಮ ಭಟ್ರ ಮನೆಯ ಕೆಸದಾಕೆ ಅವಳು. ಅವಳ ಕಥೆ ಮಗಳ ಕಥೆಗಿಂತಲೂ ದೊಡ್ಡದು. ಆದ್ರೂ ಮಗಳ ಕಥೆ ಅವಳಗಿಂತಲೂ ದೊಡ್ಡದು! ಕುಂದಾಪುರದ ಕಡೆಯವಳು, ಬಾಬು ಸೇರಿಗಾರನ ಜೊತೆ ಓಡಿಬಂದವಳು ಅಂತಾರೆ ಕೆಲವರು. ಇನ್ನೂ ಕೆಲವರು ನಾಗಿ ಅಂದ್ರೆ ಹುಟ್ಟಾ ಸೂಳೆ ಅಂತಾ ಮೂಗು ಮುರಿತಾರೆ. ಹಾಗಾಗಿ ನಮಗೆಲ್ಲಾ ನಾಗಿ ಅಂದ್ರೆ ಮೊದಲಿಂದಲೂ ಕೂತುಹಲ. ನಾಗಿ ಮ್ಯಾಲೆ ಎಂತಹದೋ ಒಂತರಹ ಗುಮಾನಿ! ಊರಿನ ಜನ ಏನೇ ಆಡಿಕೊಂಡರು ಎಲ್ಲರಿಗೂ ನಾಗಿ ಬೇಕು. ಚಿಕ್ಕ ಪುಟ್ಟ ಕೆಲಸಗಳು ಬಂದಾಗ ಊರ ಜನರ ಬಾಯಲ್ಲಿ ಮೊದಲು ಬರೋ ಹೆಸರು ನಾಗಿಯದ್ದು. ನಿತ್ಯ ಕೆಲಸ ರಾಮ ಭಟ್ರ ಮನೆಯಲ್ಲೇ ಆದರೂ ನಾಗಿ ಯಾವತ್ತು ಯಾರು ಹೇಳಿದ ಕೆಲಸ ನಿರಾಕರಿಸಿದವಳಲ್ಲ. ಮಾಡಿದ ಕೆಲಸಕ್ಕೆ ದುಡ್ಡು ಕೇಳಿದವಳೂ ಅಲ್ಲ. ಬಾಯಿ ತುಂಬಾ ತುಂಬುವ ಹೊಗೆಸೊಪ್ಪಿನ ಒಂದು ಎಲೆ ಅಡಿಕೆ ಕೊಟ್ಟು ಬಿಟ್ಟರೆ ಮುಗೀತು. ಮತ್ತೆ ನಾಗಿಗೆ ದುಡ್ಡು, ಕಾಸು ಏನೂ ಬ್ಯಾಡ. ಹಾಗಾಗಿಯೇ ಇರಬೇಕು ಅವಳಿಗೆ ಸಂಚಿ ನಾಗಿ ಅಂತಾ ಹೆಸರು ಬಂದಿದ್ದು!
ಬೊಮ್ಮನ ಗುಡ್ಡ. ಅದರ ಕೆಳಗೆ ಸೇರಿಗಾರರ ಕೇರಿ. ಅಲ್ಲೆ ಪುಟ್ಟದೊಂದು ಸೋಗೆ ಗುಡಿಸಲು. ನಾಗಿಗೂ ಒಂದು ಗುಡಿಸಲು ಇದೆ ಅಂತಾ ನಮಗೆಲ್ಲಾ ಗೊತ್ತಾಗಿದ್ದು ಆಕೆ ಮನೆ ಹೊದಿಕೆಗೆ ಅಂತಾ ಸೋಗೆ ಕೇಳಲು ಬರುತ್ತಿದ್ದರಿಂದ. ನಾಗಿ ಊರಿನ ಮಂದಿಗೆಲ್ಲಾ ಬೇಕಾದವಳು ಅನ್ನೋದೇನೋ ನಿಜ. ಆದರೆ ಊರಿನ ಮಕ್ಕಳ್ಯಾರೂ ನಾಗಿ ಮನೆ ಕಡೆ ಸುಳಿಯುವ ಹಾಗಿಲ್ಲ! ನಾಗಿ ಮನೆ ಊರಿನ ನಿಷೇಧಿತ ಪ್ರದೇಶ ಅಂದ್ರೂ ತಪ್ಪಗಲಾರದು. ನಾವೆಲ್ಲಾ ಶಾಲೆಗೆ ಹೋಗುವಾಗ ನಾಗಿ ಮನೆ ಇಲ್ಲೆಲ್ಲೋ ಬರತ್ತಂತೆ ಅಂದುಕೊಂಡು ಹೋಗುತ್ತಿದ್ದೇವು. ನಮ್ಮಂತ ಹುಡುಗರಿಗೆಲ್ಲಾ ನಾಗಿ ಜತೆ ನಾಗಿ ಮನೆಯೂ ಒಂದು ಕುತೂಹಲದ ವಸ್ತು.
ನಮ್ಮ ಜತೆಯೇ ಓದಿದ ಹುಡುಗಿ ಸುಮ. ನಾಗಿ ಮಗಳು ಅಂತಾ ನಮಗೆಲ್ಲಾ ಅವಳ ಮೇಲೆ ಒಂಚೂರು ಕರುಣೆ, ಹಿಡಿಯಷ್ಟು ಪ್ರೀತಿ. ನಾಗಿಗೆ ತದ್ವಿರುದ್ದದ ಸ್ವಭಾವ ಅವಳದ್ದು. ಬಜಾರಿ ಹೆಣ್ಣು. ಮೇಷ್ಟ್ರಿಗೆಲ್ಲಾ ಎದುರುತ್ತರ ಕೊಡುತ್ತಿದ್ದಳು. ಅಪ್ಪಾ ಗೊತ್ತಿಲ್ಲದ ಮಗಳೇ ಎಷ್ಟು ಸೊಕ್ಕು ನಿನಗೆ ಅಂತಾ ಮೇಷ್ಟ್ರು ಅವಳಿಗೆ ಹೊಡೆಯುತ್ತಿದ್ದರು. ಆವಾಗೆಲ್ಲಾ ನಮಗೆ ಆ ಭಾಷೆಯ ಅರ್ಥ ತಿಳಿತಾ ಇರ್ಲಿಲ್ಲ. ನಾಗಿ ಮಗಳಿಗೆ ಹೊಡೆದರು ಅನ್ನೋದೆ ನಮಗೆ ಖುಷಿ! ಆದ್ರೂ ಒಂದೊಂದ್ಸಾರಿ ಅಯ್ಯೋ ಪಾಪ ಅನ್ನಿಸುತ್ತಿತ್ತು. ಹೆಗಡೆ ಮಗಳು ಏನೂ ಮಾಡಿದರೂ ಹೊಡೆಯದ ಮೇಷ್ಟ್ರು, ನಾಗಿ ಮಗಳಿಗೆ ಮಾತ್ರ ಹೊಡಿತಾರೆ ಅಂತಾ ಸಿಟ್ಟು ಬರುತ್ತಿತ್ತು. ಆದ್ರೆ ಅವಳಿಗೆ ಮಾತ್ರ ಅದ್ಯಾವುದೂ ತಿಳಿಯುತ್ತಲೇ ಇರಲಿಲ್ಲ. ಅದೇ ತುಂಟುತನ, ಅದೇ ಪೆದ್ದುತನ ಅವಳದ್ದು.
ನಿತ್ಯ ಹುಣಸೆ ಬೀಜ, ಪೆರಲೆ ಹಣ್ಣು ತಂದು ಕೊಡುತ್ತಿದ್ದರಿಂದ ನನಗೆ ಸುಮಿ ಬಹಳ ಕೋಸ್ಲ್ ಫ್ರೆಂಡ್ ಆಗಿಬಿಟ್ಟಿದ್ದಳು! ಆದ್ರೂ ಅವಳ ಜತೆ ಹೆಚ್ಚು ಮಾತಾಡಲು ಹೆದರಿಕೆ. ಯಾರಾದ್ರೂ ನೋಡಿದರೆ ಬೈಯ್ಯುತಾರೆ ಅನ್ನೋ ಭಯ. ಸುಮಾರು ಎಸ್ಸೆಸ್ಸಲ್ಸಿ ಮುಗಿಯುವವರೆಗೂ ಅವಳು ನನ್ನ ಕ್ಲಾಸ್ಮೇಟು ಆಗಿದ್ದಳು. ನಾನು ಅಂದ್ರೆ ಅವಳಿಗೆ ತುಂಬಾ ಇಷ್ಟ. ಅವಳ ಮನಸಿನ ನೋವು ನಲಿವು ಎಲ್ಲವನ್ನು ಮುಚ್ಚುಮರೆ ಇಲ್ಲದೆ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಳು. ಹಾಗೇ ಕಥೆ ಹೇಳಬೇಕು ಅನ್ನಿಸಿದಾಗಲೆಲ್ಲಾ ಹುಣಸೆ ಬೀಜದ ನೆವದಲ್ಲಿ ನನ್ನ ಹತ್ತಿರ ಬರುತ್ತಿದ್ದಳು! ಹಾಗೇ ಒಂದು ದಿನ ಸುಮಿ, ನಾಗಿ ಹೇಳಿದ ಕಥೆ ಹೇಳಿದ್ದಳು.
ನಾಗಿ ತಾಯಿ ಕುಂದಾಪುರದಲ್ಲಿ ಸೂಳೆಗಾರಿಕೆ ಮಾಡಿಕೊಂಡು ಬದುಕುತ್ತಿದ್ದವಳಂತೆ. ಒಂದು ಮಗು ಆಗುತ್ತಿದ್ದ ಹಾಗೆ ಮಗಳಿಗೂ ಆ ಸುಳೇಗಾರಿಕೆ ಸೋಂಕು ತಾಗಬಾರದು ಅಂತಾ ಘಟ್ಟ ಹತ್ತಿ ಬಂದವಳು ನಾಗಿ ತಾಯಿ ಅಲಿಯಾಸ್ ಐಗಿನ ಮನೆ ಸುಬ್ಬಿ! ಐಗಿನ ಮನೆಯ ಐಯ್ಯನವರ ಮನೆ ಆಳಾಗಿ ಕೆಲಸ ಮಾಡುತ್ತಿದ್ದ ಸುಬ್ಬಿಗೆ ನಾಗಿ ಓದಬೇಕು, ಒಳ್ಳೆ ಹುಡುಗನ್ನ ಹುಡುಕಿ ನಾಗಿಗೊಂದು ಮದ್ವೆ ಮಾಡಬೇಕೆಂಬ ಆಸೆಯಿತ್ತು. ನಾಗಿ ಯಾವುದೇ ಕಾರಣಕ್ಕೂ ತನ್ನಂತೆ ಸೂಳೆ ಅನ್ನಿಸಿಕೊಳ್ಳಬಾರದೆಂಬ ಹಂಬಲವಿತ್ತು. ಹಾಗಾಗಿ ಮಗುವನ್ನು ಇಸ್ಕುಲಿಗೂ ಕಳುಹಿಸಿದಳು. ನಾಗಿ ಆಗೆಲ್ಲಾ ಚೆಂದದ ಚೆಂದನದ ಗೊಂಬೆಯಂತ ಹುಡುಗಿ. ತಾಯಿಗೆ ಮಗಳ ರೂಪದ್ದೇ ಚಿಂತೆ. ಯಾರ ಕಾಮುಕ ಕಣ್ಣಿಗೆ ಮಗಳು ಬೀಳುತ್ತಾಳೋ ಎಂಬುದೇ ಯೋಚನೆಯಾಗಿತ್ತು. ನಿತ್ಯ ಒಲೆ ಬುಡದಲ್ಲಿ ಕೂತು ಬೆಂಕಿ ಹಚ್ಚಿಸುವಾಗ ಮಗಳಿಗೆ ಬುದ್ದಿವಾದ ಹೇಳುತ್ತಿದ್ದಳು. ಬದುಕಿನ ಕುರಿತಾಗಿ ಕನಸು ಕಟ್ಟಿಕೊಡುತ್ತಿದ್ದಳು.
ನಾಗಿ ಆಗಿನ್ನು ಹೈಸ್ಕುಲ್ ಮೆಟ್ಟಿಲು ಹತ್ತಿದ್ದಳು. ಅದಾಗಲೇ ಒಂದೆರಡು ಮಂದಿ ನಾಗಿ ಹಿಂದೆ ಬಿದ್ದರು. ಹಾಗೆ ಬಿದ್ದವರಲ್ಲಿ ಐಯ್ಯನವರ ಮಗ ರಾಮು, ಹೆಗಡೆಯವರ ಮಗ ಸೋಮು ಇಬ್ಬರು ಅಗ್ರಗಣ್ಯರು. ಆಗತಾನೇ ಯೌವ್ವನ ಮೊಳಕೆಯೊಡೆದಿದ್ದ ನಾಗಿಗೆ ತಾಯಿ ಬಿಟ್ಟು ಮತ್ತೊಬ್ಬ ಸಂಗಾತಿ ಬೇಕಿತ್ತು. ಆ ಇಬ್ಬರು ಕುಬೇರ ಕುವರರು ನಾಗಿಯನ್ನು ಇಂದ್ರಲೋಕದಲ್ಲಿಯೇ ತೇಲಾಡಿಸಿದರು. ಪಟ್ಟಣಕ್ಕೆ ಕರೆದುಕೊಂಡು ಹೋಗಿ ಐಸ್ಕ್ರೀಂ ಕೊಡಿಸಿದರು. ಪಿಚ್ಚರ್ ತೋರಿಸಿದರು. ನಾನು ನಿನ್ನನ್ನು ಮದ್ವೆ ಆಗುತ್ತೇನೆ ಅಂತಲೂ ನಂಬಿಸಿದರು. ಕಷ್ಟದಲ್ಲಿ ಬದುಕಿದ ನಾಗಿಗೆ ಆ ಕ್ಷಣಿಕ ಸುಖಗಳೆಲ್ಲಾ ಮೈ ಮರೆಸಿತು. ಬದುಕು ಅಂದ್ರೆ ಇದೆ ಅನ್ನಿಸಿಬಿಟ್ಟಿತ್ತು.
ಆ ಗಳಿಗೆಯನ್ನು ರಾಮು, ಸೋಮು ಇಬ್ಬರೂ ಚೆನ್ನಾಗಿ ಉಪಯೋಗಿಸಿಕೊಂಡರು. ನಾಗಿಯಿಂದ ಪಡೆಯಬೇಕಾದ ಸುಖವನ್ನೆಲ್ಲಾ ಪಡೆದರು. ಹೀಗೆ ದಿನಗಳುರುಳುವಾಗ ಒಂದು ದಿನ ಹೊಟ್ಟೆ ಮುಂದುಬರುತ್ತಿರುವುದರ ಅರಿವು ನಾಗಿಗಾಯಿತು. ಭಯದಿಂದ ನಾಗಿ ಸೋಮು ಬಳಿ ಹೋದರೆ ಅವ ರಾಮುವಿನತ್ತ ಕೈ ತೋರಿದ. ರಾಮು ಸೋಮುವಿನತ್ತ ಕೈ ತೋರಿಸಿದ. ಇಷ್ಟಾಗುವಾಗ ವಿಚಾರ ಸುಬ್ಬಿ ಬಳಿ ಹೋಯಿತು. ಆದರೆ ಅದಾಗಲೇ ನಾಗಿಗೆ ಸೂಳೆ ಪಟ್ಟ ಸಿಕ್ಕಿತ್ತು. ಪಂಚಾಯಿತಿ ಕಟ್ಟೆ ನಾಗಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು. ಅವಳು ಸುಬ್ಬಿ ಮಗಳು ಎಂಬುದನ್ನು ಊರಿಗೂರೇ ಒತ್ತಿ ಒತ್ತಿ ಹೇಳಿತು. ಇದೇ ಕೊರಗಿನಲ್ಲಿ ಸುಬ್ಬಿ ಸತ್ತಳು. ನಂತರ ಬೇಸತ್ತ ನಾಗಿ ಊರು ತ್ಯಜಿಸಿ ನಮ್ಮೂರಿಗೆ ಬಂದಳು ಅಂತಾ ಸುಮಿ ನನಗೆ ಹೇಳಿದಳು. ನಾನು ಎಸ್ಸೆಸ್ಸಲ್ಸಿ ಮುಗಿಸಿ ಮುಂದಿನ ಓದಿಗೋಸ್ಕರ ಊರು ಬಿಟ್ಟೆ. ನಾನು ಊರಿಗೆ ಹೋದಾಗ ಸುಮಿ ಸಿಗಲಿಲ್ಲ. ಸುಮಿ ಊರಲ್ಲಿ ಇದ್ದಾಗ ನಾನು ಹೋಗಲಿಲ್ಲ! ಒಟ್ಟಾರೆ ಆ ಕಥೆ ಹೇಳಿದ ನಂತರ ಸುಮಿ ನನಗೆ ಸರಿಯಾಗಿ ಮಾತಿಗೆ ಸಿಗಲಿಲ್ಲ.
ಶಿವಮೊಗ್ಗದಲ್ಲಿ ಎಂ.ಎ ಓದುತ್ತಿರುವ ನಿಮ್ಮೂರಿನ ಹುಡುಗಿ ಸುಮಾ ನಕ್ಸಲ್ ಪಡೆ ಸೇರಿದ್ದಾಳಂತೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದನ್ನು ಖಚಿತಪಡಿಸಿಕೊಳ್ಳಲು ಗಡಿಬಿಡಿಯಿಂದ ಊರಿಗೆ ಓಡಿದ್ದೆ. ಅಷ್ಟು ಕಷ್ಟ ಅನುಭವಿಸಿದರೂ ಎಂದೂ ಸುಮಿ ಕೊಲೆ, ರಕ್ತಪಾತದ ಮಾತಾಡಿದವಳಲ್ಲ. ಬಂದೂಕು ಕಂಡವಳಲ್ಲ. ಆದ್ರೂ ಈಕೆ ಹೇಗೆ ನಕ್ಸಲ್ ಆದಳು ಎಂಬ ಪ್ರಶ್ನೆ ಬಸ್ಸಿನುದ್ದಕ್ಕೂ ನನ್ನನ್ನು ಕಾಡುತ್ತಲೇ ಇತ್ತು. ಇದೇ ಗುಂಗಿನಲ್ಲೇ ಊರು ತಲುಪಿದರೆ, ಊರಲ್ಲಿ ಸೂರ್ಯ ಮೂಡುತ್ತಿರುವಾಗಲೇ ಸ್ಮಶಾನ ಮೌನ ಆವರಿಸಿತ್ತು. ನನ್ನಂತೆ ಸೂಳೆಗಾರಿಕೆ ಮಾಡಿಕೊಂಡು ಬದುಕಿದ್ದರೂ ಒಂಚೂರು ಗೌರವ ಉಳಿಯುತ್ತಿತ್ತು. ಯಾರನ್ನೋ ಕೊಲ್ಲುವ ಹೆಣ್ಣಾಗಲು ಹೋಗಿ ಕೊನೆಗೂ ಜೀವ ತೆತ್ತಳಲ್ಲ ಎಂದು ನಾಗಿ ಒಂದೇ ಸಮನೆ ಕಿರುಚುತ್ತಿದ್ದಳು.
ಆ ದರಿದ್ರಾ ಪ್ರಾಧ್ಯಾಪಕನಿಂದಲೇ ಇವಳ ಬದುಕು ಹಾಳಾಗಿದ್ದು, ಅವನ ಮಗಳು ಮದ್ವೆಯಾಗಿ ಅಮೆರಿಕಾಗೆ ಹೋದಳು. ಅವನ ಮಾತು ಕಟ್ಟಿಕೊಂಡು ಕ್ರಾಂತಿ ಮಾಡಲು ಹೊರಟ ಇವಳು ಸ್ಮಶಾನ ಸೇರಿದಳು. ಈ ಮುಂಡೆವು ಇನ್ನೂ ಎಷ್ಟು ಮಕ್ಕಳನ್ನು ಹಾಳು ಮಾಡುತ್ತಾವೋ. ಇನ್ಮೇಲೆ ಮಕ್ಕಳನ್ನು ಇಸ್ಕೂಲಿಗೆ ಕಳುಹಿಸಬಾರದು ಎಂದು ಪಕ್ಕದಲ್ಲಿ ಯಾರೋ ಗುನುಗುತ್ತಿದ್ದರೆ, ನನಗೆ ಸುಬ್ಬಿ ಒಲೆ ಮುಂದೆ ಕುಳಿತು ನಾಗಿಗೆ ಮಾಡುತ್ತಿದ್ದ ಉಪದೇಶವನ್ನು ಸುಮಿ ವಿವರಿಸುತ್ತಿದ್ದದ್ದು ನೆನಪಾಗುತ್ತಿತ್ತು.
ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ?
Posted in ಕ್ರಿಯೇಟಿವ್ ಪೇಜ್ on ಜುಲೈ 1, 2008| 1 Comment »