Feeds:
ಲೇಖನಗಳು
ಟಿಪ್ಪಣಿಗಳು

Archive for ಸೆಪ್ಟೆಂಬರ್, 2009

ಬರೆದಿದ್ದೇ, ಬರೆದು, ಬರೆದು ಬೇಜಾರಾಗಿದೆ. ಹೊಸತೇನಾದ್ರು…ಅಂತಾ ಆಲೋಚಿಸುತ್ತಿದ್ದಾಗ ಸಿಕ್ಕವಳು ಲೈನು ಹಾಕಿದ ಆ ಹುಡುಗಿ! ಇವಳು ವಾಸ್ತವವೋ, ಕಲ್ಪನೆಯೋ ಅಂತಾ ಮಾತ್ರ ಯಾವ ಕಾರಣಕ್ಕೂ ಕೇಳಬೇಡಿ! ನಾನು ಲೈನು ಹೊಡೆಯುತ್ತಿದೆ ಎಂದರೆ, ನನ್ನ  ಶೇ.೯೦ರಷ್ಟು  ಮಿತ್ರರು ನಂಬಲಿಕ್ಕಿಲ್ಲ. ಆ ಪರಿ ಒಳ್ಳೆ  ಹುಡುಗ  ಈ ಕೋಡ್ಸರ!

ನನ್ನ ಪಾಲಿಗೆ ಡಿಗ್ರಿಯ ಮೂರು ವರ್ಷದ ಬದುಕು ಸಿಕ್ಕಾಪಟ್ಟೆ  ಮಸ್ತ್. ಓದುವುದೊಂದನ್ನು ಬಿಟ್ಟು  ಉಳಿದಿದ್ದೆಲ್ಲಾ  ಮಾಡಿದ್ದೇನೆ! ಮಠ, ಕಾಲೇಜು, ದುಡಿಮೆ…ಇವಿಷ್ಟೆ  ನನ್ನ  ಆಗಿನ ಪ್ರಪಂಚ. ನನ್ನದೇ ದುಡಿಮೆ. ನನ್ನದೇ ಖರ್ಚು. ಹಾಗಾಗಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಉಡುಪಿಯಲ್ಲಿ  ಓದುವ ಬಹುತೇಕರ ಹಣೆಬರಹ ಹೀಗೆ.  ಹಾಗಂತ, ಕಾರಿಡಾರ್‌ನಲ್ಲಿ  ನಿಂತು ಹುಡುಗಿಯರನ್ನು ಚುಡಾಯಿಸುವವರ ಗುಂಪಿನಲ್ಲಿ, ಪುಗಸಟ್ಟೆ  ಜಗಳ ಆಡಿಕೊಳ್ಳುವವರ ಗ್ಯಾಂಗ್‌ನಲ್ಲಿ, ಚಾಲುಕ್ಯಕ್ಕೆ ಹೋಗಿ ಸಿಗರೇಟು ಎಳೆಯುವ, ಪೂಲ್‌ಗೆ ಹೋಗಿ ಸ್ನೂಕರ್ ಆಡುವವರ ತಂಡದಲ್ಲಿ…ಊಹುಂ, ಎಲ್ಲೂ  ಕಾಣಿಸಿಕೊಳ್ಳಲಿಲ್ಲ.

ಗೋವಿಂದ ಕಲ್ಯಾಣ ಮಂಟಪ, ಶಾಮಿಲಿ, ಅಂಬಲ್ಪಾಡಿ ದೇವಸ್ಥಾನ…ಎಲ್ಲೇ  ಬಡಿಸುವುದು ಇದ್ದರೂ  ನಾವೊಂದಿಷ್ಟು  ಮಠದ ಹುಡುಗರು ಹಾಜರ್. ಅದಕ್ಕೆ ತಕ್ಕಂತೆ ಬೆಳಿಗ್ಗೆ  ಅಂತಿಮ ಅವ ಸಂಸ್ಕೃತ, ಮಧ್ಯಾಹ್ನ ಮೊದಲನೆ ಪಿರಿಯಡ್ ಇಂಗ್ಲೀಷ್. ಈ ಹುಡುಗರು ಕ್ಲಾಸಿಗೆ ಬಂಕ್ ಹಾಕಿ ಬಡಿಸಲು ಹೋಗುತ್ತಾರೆ ಅನ್ನೋದು ಪಿಪಿಸಿಯ ಎಲ್ಲಾ  ಅಧ್ಯಾಪಕರಿಗೂ ಗೊತ್ತಿತ್ತು. ಇನ್ನೂ ಮಜ ಅಂದ್ರೆ, ಕೆಲವು ಸಲ ಪಂಕ್ತಿ ನಡುವೆ ಲೆಕ್ಚರ್‌ಗಳು ಪ್ರತ್ಯಕ್ಷ! ಮೊದಲೆಲ್ಲ  ಭಯ ಆಗ್ತಿತ್ತು. ಆಮೇಲೆ ಮಾಮೂಲು. ಶೇ.೬೦ರಷ್ಟು  ಹಾಜರಿ ಉಳಿಸಿಕೊಂಡು ಉಳಿದೆಲ್ಲ  ತರಗತಿಗಳಿಗೂ ಬಂಕ್! ಸದಾ ನನಗೆ ಬೈಯ್ಯುವ ಮ್ಯಾಥ್ಸ್  ರಾಘು ಸರ್, ನನ್ನನ್ನು  ತಿಗಣೆಯಂತೆ ಕಾಡಿದ ಸೋಮಯಾಜಿ ಸರ್‌ಗಳ ಕಣ್ಣಿಗೇ ಬೀಳುತ್ತಿದೆ.

ಒಂತರಹ ಮಜವಾದ ಬದುಕು ಅದು. ಎಲ್ಲಾ  ಪ್ರಾಧ್ಯಾಪಕರು ನನಗೆ ಸಿಕ್ಕಾಪಟ್ಟೆ  ಬೈಯ್ಯುತ್ತಿದ್ದರು. ಸಾಮರ್ಥ್ಯಕ್ಕೆ ತಕ್ಕಷ್ಟು  ಅಂಕ ತೆಗೆಯಲ್ಲ, ಸರಿಯಾಗಿ ಓದಲ್ಲ  ಎಂಬುದಷ್ಟೆ  ಕಾರಣ. ೫ನೇ ಕ್ಲಾಸಿನಿಂದ ಸ್ವಂತದ ಖರ್ಚಿಗೆ ದುಡಿಕೊಳ್ಳುವುದು ರೂಡಿಯಾಗಿಬಿಟ್ಟಿತ್ತು. ಅದಕ್ಕಿಂತ ಹೆಚ್ಚಾಗಿ ದುಡಿಕೊಳ್ಳುವುದು ನನ್ನ ಪಾಲಿಗೆ ಅನಿವಾರ್ಯವಾಗಿತ್ತು. ಲಕ್ಷಗಟ್ಟಲೆ ಇನ್‌ವೆಸ್ಟ್  ಮಾಡಿ ಡಾಕ್ಟರ್, ಎಂಜಿನಿಯರ್ ಆದ್ರೆ, ೨೩ ವರ್ಷ ಕಷ್ಟಪಟ್ಟರೆ ಉಳಿದ ಬದುಕು ಸಂತೋಷವಾಗಿರತ್ತೆ ಅನ್ನೋದು ನಿಜ. ಆದ್ರೆ, ನನ್ನ  ಪಾಲಿಗೆ ಹಣಕ್ಕಿಂತ ಅನುಭವ, ವ್ಯಕ್ತಿತ್ವಗಳೇ ಬದುಕು. ಖಾಲಿ ಹಣ  ಸಂಪಾದನೆಗೆ ಎಂಜಿನಿಯರಿಂಗ್ ಪದವಿಯೇ ಬೇಕು ಅಂತೇನೂ ಇಲ್ಲ. ಇರೋ ಮೂರು ದಿನದಲ್ಲಿ  ಸಾಧ್ಯವಾದಷ್ಟು  ಹೊಸ ಕ್ಷೇತ್ರಗಳನ್ನು ಪರಿಚಯ ಮಾಡಿಕೊಳ್ಳಬೇಕು ಅನ್ನೋ ಹಂಬಲ. ಆ ಕಾರಣಕ್ಕಾಗಿಯೇ ಪತ್ರಿಕೋದ್ಯಮ ಆಯ್ದುಕೊಂಡಿದ್ದು. ಕೆಲಸವಿಲ್ಲದೆ, ಕೆಲಸವಿದ್ದರೂ ಸಂಬಳವಿಲ್ಲದೆ, ಸಂಬಳವಿದ್ದರೂ  ಬಾಡಿಗೆ ಕಟ್ಟಲು ಸಾಕಾಗದ ಒಂದು ವರ್ಷದ ನರಯಾತನೆಯ ನಡುವೆಯೂ ಈ ವೃತ್ತಿಯಲ್ಲಿ  ಉಳಿದುಕೊಂಡಿದ್ದು. ನಮ್ಮ ಮನೆಯವರಿಗೆ ನನ್ನ ಆಯ್ಕೆ ಇವತ್ತಿಗೂ ಇಷ್ಟವಿಲ್ಲ.

ಲವ್, ಫೀಲು…ಆ ಕಾಲದಲ್ಲಿ  ನನ್ನ  ಬದುಕಿನ ಕುರಿತು ನನಗೆ ಭರವಸೆಯಿರಲಿಲ್ಲ. ನನ್ನ ಬಗಲಿಗೆ ಇನ್ನೊಬ್ಬಳನ್ನು ಕಟ್ಟಿಕೊಂಡು ಅವಳ ಕನಸು ಕಸಿದುಕೊಳ್ಳಲು…ಈಗಲೂ ಸುತರಾಂ ಇಷ್ಟವಿಲ್ಲ. ಹಾಗಾಗಿಯೇ ನಾನು ಹುಡುಗಿ ಅನ್ನೋ ವಿಷಯದಿಂದ ಸ್ವಲ್ಪ  ದೂರ. ಈ ವಿಷಯದಲ್ಲಿ  ಅನೇಕ ಗೆಳೆಯರು ನನ್ನನ್ನು ಆಡಿಕೊಳ್ಳುತ್ತಾರೆ. ನನಗೆ ಒಂಚೂರು ಬೇಜಾರಿಲ್ಲ. ಅದಕ್ಕಿಂತ ಹೆಚ್ಚಾಗಿ ಹುಡುಗಿ, ಚೆಂದ, ಫೀಲಿಂಗು…ಇವೆಲ್ಲ  ಅವರವರ ಅಭಿರುಚಿ. ಈಗ ಇಷ್ಟವಾದವಳು ಇನ್ನೊಂದೆರಡು ವರ್ಷದ ನಂತರ ಇಷ್ಟವಾಗುತ್ತಾಳೆ ಅನ್ನಲು ಸಾಧ್ಯವಿಲ್ಲ. ಕೆಲ ಸಲ ಕೆಲವರು ಕಾರಣವಿಲ್ಲದೆಯೂ ಇಷ್ಟವಾಗಬಹುದು.

ಆದ್ರೂ ನೋಟ್ಸ್ ವಿಷಯಕ್ಕೆ ಹುಡುಗಿಯರೇ ಬೇಕು! ಇಂಟರ್‌ನಲ್‌ಗೆ ಮೂರುದಿನ ಮುಂಚೆ ನರ್ಮದಾ, ರಂಜನಿ, ರಂಜಿತಾ…ಮೂವರಲ್ಲಿ  ಯಾರಾದ್ರೂ ನೋಟ್ಸ್  ಕೊಟ್ಟಿಲ್ಲ  ಅಂದ್ರೆ ನಮ್ಮ  ಕಥೆ ಡಮಾರ್! ನಮ್ಮ  ಕ್ಲಾಸಲ್ಲಿ  ೨೪ ಹುಡುಗರು. ೮೫ ಹುಡುಗಿಯರು. ಹಾಗಾಗಿ ಅದೆಷ್ಟೊ  ಹುಡುಗಿಯರ ಹೆಸರು, ಪರಿಚಯ ಕಡೆವರೆಗೂ ಆಗಲಿಲ್ಲ. ನನಗೆ ಚೆನ್ನಾಗಿ ಪರಿಚಯವಿದ್ದದ್ದು, ನಾನು ಸರಿಯಾಗಿ ಮಾತಾಡಿದ್ದು ಈ ಮೂರು ಹುಡುಗಿಯರ ಹತ್ತಿರ ಮಾತ್ರ. ಈಗ ನರ್ಮದಾ ಮಾತ್ರ ಕಾಂಟ್ಯಾಕ್ಟ್‌ನಲ್ಲಿ  ಇದಾಳೆ. ಉಳಿದಿಬ್ಬರಿಗೆ ಮದ್ವೆ ಆಗಿ, ಮಕ್ಕಳೂ ಆಗಿರಬಹುದು. ಇದರಲ್ಲಿ  ಹುಡುಗಿಯರು ತುಂಬಾ ಫಾಸ್ಟ್. ಅವರಲ್ಲದಿದ್ದರೂ, ಅವರ ಹೆತ್ತವರು!

ಅಂದಹಾಗೆ ನಾನು ಲೈನು ಹಾಕಿದ ನನಗಿಂತ ಜೂನಿಯರ್ ಆಗಿದ್ದ ನೀಲಾವರದ ಆ ಹುಡುಗಿ ಹೆಸರು…?!(ನನ್ನ  ಮುಂದಿನ ಕಥೆಯಲ್ಲಿ  ಗ್ಯಾರಂಟಿ ಅವಳ ಹೆಸರನ್ನೇ ಬಳಸುತ್ತೇನೆ!!!)

Read Full Post »

‘ಸಿನಿಮಾ ಉದ್ಯಮ ಬದುಕಿಗೆ ಕಲಿಸಿದ ಪಾಠ ಅಪಾರ. ಇಲ್ಲಿ  ಸಾಕಷ್ಟು  ನೋವು ಅನುಭವಿಸಿದ್ದೇನೆ. ಉಡಾಫೆತನ ಮಾಡಿಕೊಂಡು ಒದೆ ತಿಂದಿರುವೆ. ತುಂಬಾ ಬೇಸರವಾಗಿ ಎರಡು ಸಲ ಉದ್ಯಮವನ್ನು ಬಿಟ್ಟು  ಕಾರ್ಪೊರೇಟ್ ಜಗತ್ತಿನೆಡೆ ಹೆಜ್ಜೆ ಹಾಕಿದ್ದೆ. ಶ್ರಮಕ್ಕೆ ತಕ್ಕ ಗೆಲುವು ಸಂಪಾದಿಸಲು ಬಹಳ ಕಾಲ ಕಾಯಬೇಕಾಯಿತು…’ ಎಂದು ಮಾತು ಆರಂಭಿಸಿದವರು ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್.

ಚಿತ್ರೀಕರಣವಿದ್ದರೆ, ಸಿನಿಮಾ ಪ್ರಂಪಚವೇ ಅವರಿಗೆ ಸರ್ವಸ್ವ. ಅದಿಲ್ಲವಾದರೆ,  ೭ರಿಂದ ೯ ಗಂಟೆಯೊಳಗೆ ಏಳುತ್ತಾರೆ. ನಿತ್ಯದ ಕಾರ್ಯಗಳು ಮುಗಿದ ನಂತರ ಸಿನಿಮಾ ಗೀತೆ ರಚನೆಯಲ್ಲಿ  ಮಗ್ನ. ಕೆಲವೊಮ್ಮೆ  ಓದಿನೊಂದಿಗೆ ಬಿಜಿ. ಇವುಗಳ ನಡುವೆ ತಮ್ಮ  ಪುಟಾಣಿ ಮಗು ಪುನರ್ವಸು ಜತೆಗೆ ಆಟ. ಮಧ್ಯಾಹ್ನ ಊಟದ ನಂತರ ಸಿನಿಮಾ ಚರ್ಚೆ.
೧೯೯೪ರಲ್ಲಿ  ಬೆಳದಿಂಗಳ ಬಾಲೆ ಚಿತ್ರದ ಮೂಲಕ ಸಿನಿಮಾಕ್ಕೆ ಕಾಲಿಟ್ಟ  ಭಟ್ಟರು,  ಒಂದೂವರೆಯಿಂದ ಎರಡು ವರ್ಷಕ್ಕೊಂದು ಚಿತ್ರ ಮಾಡುತ್ತಾರೆ. ಹಾನಗಲ್ ತಾಲೂಕಿನ ತಿಳುವಳ್ಳಿ  ಇವರ ಹುಟ್ಟೂರು. ೨ ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುವುದು ರೂಢಿ. ಅಣ್ಣ, ಅತ್ತಿಗೆಯ ಸಂಸಾರ  ಜತೆಗಿದೆ. ಅತ್ತೆ, ಮಾವ ಕೂಡ ಮಗಳು-ಅಳಿಯನ ಮನೆಯಲ್ಲಿದ್ದಾರೆ. ಹೀಗಾಗಿ ಮಹಾನಗರಿಯಲ್ಲೂ  ಇವರದ್ದು  ಅವಿಭಕ್ತ ಕುಟುಂಬ.

‘ನಾನು ಓದಿದ್ದು ಬಿ.ಎ., ಎಂ.ಎ ಮತ್ತು ಎಲ್‌ಎಲ್‌ಬಿಗಳಿಗೆ ಒಂದೊಂದು ವರ್ಷ ಪ್ರಯತ್ನ ಮಾಡಿದೆ. ಯಾವುದೂ ಪೂರ್ಣವಾಗಲಿಲ್ಲ. ಸಿನಿಮಾ ಪ್ರಪಂಚ ಪ್ರವೇಶಿಸಿದೆ. ಒಂದು ಹಂತದವರೆಗೂ ನನಗೆ ಕನ್ನಡ ಚಿತ್ರೋದ್ಯಮದ ಪರಿಚಯವಿರಲಿಲ್ಲ. ಪರಿಣಾಮವಾಗಿ ಸಾಕಷ್ಟು  ಸಲ ಅವಮಾನ ಅನುಭವಿಸಿದೆ. ಈಗ ಕಥೆ ಬಗೆಗಿನ ಚರ್ಚೆಯಲ್ಲೇ ಆರು ತಿಂಗಳ ಬದುಕು ಕಳೆದು ಹೋಗುತ್ತದೆ. ಸಿನಿಮಾ ಗೀತೆ ಜತೆಗೆ ಕವನವನ್ನೂ ಬರೆಯುತ್ತೇನೆ’ ಎಂದು ಭಟ್ಟರು ನಗುತ್ತಾರೆ.

ಹಿಂದಿ ಘಜಲ್‌ಗಳೆಂದರೆ ಅವರಿಗೆ ತುಂಬಾ ಇಷ್ಟ. ಮನಸು ಬಂದ್ರೆ ಹಾಡುವುದಂಟು. ಕೀ ಬೋರ್ಡ್ ಜತೆಗೆ ನಿಕಟ ನಂಟು. ದೇವರಿಗೂ ಈ ಯೋಗಿಗೂ ಯಾವುದೇ  ಸಂಬಂಧವಿಲ್ಲವಂತೆ. ಟಿವಿ, ರೆಡಿಯೋ, ಗಡಿಯಾರ ಮೊದಲಾದ ಉಪಕರಣಗಳನ್ನು ಬಿಚ್ಚುವುದರಲ್ಲಿ  ಇವರು ನಿಸ್ಸಿಮರು. ಲೀಗ್ ಮಟ್ಟದಲ್ಲಿ  ವಾಲಿಬಾಲ್ ಆಡಿದ ಅನುಭವವಿದೆ. ಕುಟುಂಬದೊಂದಿಗೆ ಪ್ರವಾಸ ಹೋಗೋದು, ಚಿತ್ರೀಕರಣ ಸ್ಥಳ ಹುಡುಕಾಟ ಮಾಮೂಲು. ರಾತ್ರಿ ೧೦.೩೦-೨ಗಂಟೆಯೊಳಗೆ ನಿದ್ದೆಗೆ ಜಾರುತ್ತಾರೆ.

‘ಬಹಳ ಹಿಂದೆ ವಿಭಿನ್ನ ರೀತಿಯಲ್ಲಿ  ವಿದ್ಯುತ್ ಉತ್ಪಾದನೆಯ ಕುರಿತು ಊರ ಹುಡುಗರ ಜತೆ ಕೆಲಸ ಮಾಡಿದ್ದೆ. ಈ ದೃಶ್ಯ ಮನಸಾರೆ ಚಿತ್ರದಲ್ಲಿ  ಬರುತ್ತೆ. ಜಪಾನಿ ಭಾಷೆಯ ಅಕಿರೊ ಕುರುಸೋವಾ.  ಹಿಂದಿಯ ಹೃಷಿಕೇಷ್ ಮುಖರ್ಜಿ ನನ್ನಿಷ್ಟದ ನಿರ್ದೇಶಕರು. ಸದ್ಯದಲ್ಲೇ  ನಿರ್ಮಾಪಕನಾಗುವ ಇರಾದೆಯಿದೆ. ಸ್ವಂತ ಬ್ಯಾನರ್‌ನಡಿ ಇನ್ನಷ್ಟು  ಚಿತ್ರಗಳು ಬರಲಿವೆ’ ಎಂದು ಮಾತು ಮುಗಿಸಿದರು ಭಟ್ಟರು.

Read Full Post »