Feeds:
ಲೇಖನಗಳು
ಟಿಪ್ಪಣಿಗಳು

Archive for ಮಾರ್ಚ್, 2015

ಅಕ್ಷರ ವಿಹಾರಕ್ಕೆ ಏಳಾಯ್ತು…

ನನ್ನ ಈ ಅಕ್ಷರ ವಿಹಾರ ಬ್ಲಾಗಿಗೆ ೭ ವರ್ಷ ತುಂಬಿದೆಯಂತೆ. ಹಾಗಂತ ವರ್ಲ್ಡ್‌ಪ್ರೆಸ್‌ನವರು ಬ್ಲಾಗ್‌ನ ಬರ್ತಡೆಗೊಂದು ವಿಶ್ ಮಾಡಿದ್ದಾರೆ. ೭ ವರ್ಷದಲ್ಲಿ ಬ್ಲಾಗಿಗೆ ಅಂತ ಸುಮಾರಷ್ಟು ಬರೆದಿರುವೆ. ಒಂದಷ್ಟು ಬಾಲಿಶವಾಗಿದೆ. ಇನ್ನೊಂದಷ್ಟು ಓಕೆ,ಓಕೆ. ಮತ್ತೊಂದಷ್ಟು ಒಂದು ಮಟ್ಟಕ್ಕಿದೆ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ನಮ್ಮ ಬದುಕೇ ಒಂದು ರೀತಿ ಬರವಣಿಗೆ. ದಿನ ಒಂದೆಲ್ಲ ಒಂದು ಬರೆಯುತ್ತಲೇ ಇರುತ್ತೇವೆ. ಆದ್ರೆ ಅಲ್ಲೆಲ್ಲ ನಮ್ಮ ಬರವಣಿಗೆಗೆ ಒಂದು ಚೌಕಟ್ಟಿದೆ. ಇತಿ-ಮಿತಿಯಿದೆ. ನಾವಲ್ಲಿ ಬರೆಯುವುದು ಒಂದು ಸಂಸ್ಥೆಗೆ. ಹೀಗಾಗಿ ನನ್ನ ಖುಷಿಗೆ, ಸ್ವತಂತ್ರವಾಗಿ ಬರೆಯಲು ವೇದಿಕೆ ಕಲ್ಪಿಸಿಕೊಟ್ಟಿದ್ದು ಈ ಬ್ಲಾಗ್. ಜೊತೆಗೆ ನನ್ನಂತೆ ಬರೆಯಬಲ್ಲ, ಚಿಂತಿಸಬಲ್ಲ ಹಾಗೂ ಬರೆದಿದ್ದನ್ನು ಪ್ರೀತಿಯಿಂದ ಓದುವ ಒಂದಷ್ಟು ಮಿತ್ರರನ್ನು ಗಳಿಸಿಕೊಟ್ಟಿದೆ.
ನಾನು ಬ್ಲಾಗ್ ಆರಂಭಿಸಿದಾಗ ಪತ್ರಕರ್ತರು ಬ್ಲಾಗ್‌ನಲ್ಲಿ ಬರೆಯವುದು ಅಪರಾಧ ಎನ್ನುವಂಥ ಕಾಲವಿತ್ತು. ಖಂಡಿತ ನಾನಂತು ಇದನ್ನು ಎದುರಿಸಿದ್ದೇನೆ. ಕೈಲಾಗದವರು ಬ್ಲಾಗ್‌ನಲ್ಲಿ ಮೈಪರಚಿಕೊಳ್ಳುತ್ತಾರೆ ಎನ್ನುತ್ತಿದ್ದರು. ಆಗೆಲ್ಲ ಈ ಬ್ಲಾಗ್, ಅಂತರ್ಜಾಲ ವೇದಿಕೆಗಳು ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ಜೊತೆಗೆ ಪತ್ರಿಕೋದ್ಯಮ ಕೂಡ ಇಷ್ಟರ ಮಟ್ಟಿಗೆ ಕಾರ್ಪೊರೇಟಿಕರಣಗೊಂಡಿರಲಿಲ್ಲ. ಕೊನೆಗೆ ಹಾಗೆಲ್ಲ ಮಾತನಾಡಿದವರು ವೆಬ್‌ಸೈಟ್, ಬ್ಲಾಗ್‌ಗಳಿಗೆ ಬಂದ್ರು ಅನ್ನೋದು ನಂತರದ ಮಾತು ಬಿಡಿ.
ನಾನು ಪಿಯುಸಿ ಓದಿದ್ದು ಉಜಿರೆಯಲ್ಲಿ. ಸಿದ್ಧವನಕ್ಕೆ ಎಲ್ಲ ಪತ್ರಿಕೆಗಳು ಬರುತ್ತಿದ್ದವು. ನಾವು ಓದುತ್ತಿದ್ದಾಗ ವಿಜಯಕರ್ನಾಟಕ ಉತ್ತುಂಗದಲ್ಲಿತ್ತು. ವಿಶ್ವೇಶ್ವರಭಟ್ಟರು, ಚಕ್ರವರ್ತಿ, ಪ್ರತಾಪ್‌ಸಿಂಹ ಮೊದಲಾದವರ ಅಂಕಣಗಳು ಬರುತ್ತಿತ್ತು. ಅದ್ನೆಲ್ಲ ಓದಿದ ನನಗೆ ಬರೆಯಬೇಕೆಂಬ ಹಂಬಲ ಶುರುವಾಯ್ತು. ಡಿಗ್ರಿಗೆ ಬಂದಾಗ ಬರವಣಿಗೆ ಶುರುವಾಗಿ ಕೊನೆಗೆ ಅದೇ ಬದುಕಾಯ್ತು. ಓದಿನ ಗೀಳು ಕಥೆ ಬರೆಯಲು ಸ್ಪೂರ್ತಿ ನೀಡ್ತು. ಆಗೆಲ್ಲ ಬರೆದಿದ್ದು ಸುಮಾರಷ್ಟು ತಿರಸ್ಕೃತಗೊಂಡಿತ್ತು. ತೀರ ಅನಿರೀಕ್ಷಿತವಾಗಿ ನನ್ನ ನೆಚ್ಚಿನ ಬರಹಗಾರರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ತು. ಸುದ್ದಿಮನೆಯ ಒಳಹೊರಗುಗಳನ್ನು ತಿಳಿದುಕೊಳ್ಳುವಂತಾಯ್ತು.
ನಾನು ಕಳೆದ ೮ ವರ್ಷಗಳಲ್ಲಿ ೫ ಸಂಸ್ಥೆ ಬದಲಿಸಿದ್ದೇನೆ. ಸುಮಾರಷ್ಟು ಜನ ಅದಕ್ಕೆ ಆಡಿಕೊಂಡ್ರು. ಆದ್ರೆ ನನ್ನ ಪಾಲಿಗೆ ಆ ಬದಲಾವಣೆ ಎಲ್ಲ ರೀತಿಯಲ್ಲೂ ಲಾಭ ಮಾಡಿಕೊಟ್ಟಿದೆ. ಹಾಗೆ ಬದಲಾವಣೆ ಮಾಡಿದ್ದರಿಂದ ನನಗೆ ಇವತ್ತು ಟ್ಯಾಬ್ಲಾಯ್ಡ್‌ನಿಂದ ಹಿಡಿದು ರಿಯಾಲಿಟಿ ಶೋಗಳವರೆಗಿನ ಬರವಣಿಗೆ ಗೊತ್ತಾಗಿದೆ. ಬೇರೆ-ಬೇರೆ ಮಾದರಿಯ ಕೆಲಸ ಕಲಿತ್ತಿದ್ದೇನೆ. ಕಾಮರ್ಸ್‌ನಿಂದ ಸಿನಿಮಾವರೆಗಿನ ಬರವಣಿಗೆ ಜಗತ್ತಿನ ಅರಿವಾಗಿದೆ. ಖಂಡಿತ ಎಲ್ಲ ಬರವಣಿಗೆಗಳು ಒಂದೇ ಅಲ್ಲ. ಪತ್ರಿಕೆಯಲ್ಲಿ ಯಾವುದೋ ಸುದ್ದಿ ಎಡಿಟ್ ಮಾಡಲಿಕ್ಕು, ಯಾವುದೋ ಒಂದು ರಿಯಾಲಿಟಿ ಶೋಗೆ ಸ್ಕ್ರಿಪ್ಟ್ ಬರೆಯವುದಕ್ಕೂ ತುಂಬಾ ವ್ಯತ್ಯಾಸವಿದೆ. ಸಾಪ್ತಾಹಿಕಕ್ಕೆ ಬರೆದ ಕಥೆಗಳೆಲ್ಲ ಧಾರವಾಹಿಗೆ ಕಥೆಯಾಗುವುದಿಲ್ಲ. ಇದೆಲ್ಲ ಅರ್ಥವಾಗಬೇಕು ಅಂದ್ರೆ ನಾಲ್ಕು ಕಡೆಗಳಲ್ಲಿ ಕೆಲಸ ಮಾಡಲೇಬೇಕು. ನಾವೆಷ್ಟು ಸರಿಯಾಗಿ, ಚೆನ್ನಾಗಿ ಬರೆಯುತ್ತೇವೆ ಎಂಬುದು ನಂತರದ ಮಾತು. ಆದ್ರೆ ಈ ಬದಲಾವಣೆ ನಾನು ಈ ಮಾದರಿಗೆ ತಕ್ಕಂತೆ ಬರೆಯಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತೆ.
ಮಾಧ್ಯಮದಲ್ಲಿ ಖಂಡಿತ ಈಗಲೂ ಬರವಣಿಗೆಗೆ ಬೆಲೆಯಿದೆ ಮತ್ತು ಚೆನ್ನಾಗಿ ಬರೆಯಬಲ್ಲವರ ಕೊರತೆಯಿದೆ. ಅದಕ್ಕೆ ಕಾರಣ ಮೊದಲೇ ಹೇಳಿದೆ. ಬರೆಯುವುದನ್ನು ಎಲ್ಲರು ಬರೆಯುತ್ತಾರೆ. ಆದ್ರೆ ಅದ್ರಲ್ಲಿ ಎಷ್ಟು ಅಂಶವನ್ನು ಬಳಸಿಕೊಳ್ಳುವವರು ಎಡಿಟ್ ಮಾಡಿಕೊಳ್ಳಬೇಕು ಎಂಬುದು ಮುಖ್ಯವಾಗುತ್ತದೆ. ಒಂದು ಅರ್ಧಗಂಟೆಯ ನ್ಯೂಸ್‌ಪ್ರೊಗ್ರಾಂ ಸ್ಕ್ರಿಪ್ಟ್ ಬೇಡುವ ಶ್ರಮ ಬೇರೆ ರೀತಿಯದ್ದು. ೩ ಸೆಗ್ಮೆಂಟ್‌ಗೆ ಕನಿಷ್ಟ ೬ ಪುಟಗಳಷ್ಟು ಬರೆಯಬೇಕು ಹಾಗೂ ಆ ಬರವಣಿಗೆ ಮಾದರಿ ಒಂದು ಪತ್ರಿಕೆ, ಒಂದು ಧಾರವಾಹಿ ಎಲ್ಲದಕ್ಕಿಂತ ಭಿನ್ನವಾಗಿದ್ದು. ನನಗಿನ್ನೂ ನೆನಪಿದೆ, ಸುವರ್ಣ ನ್ಯೂಸ್‌ನಲ್ಲಿದ್ದಾಗ ವ್ಯುಜಿಕ್ ಬಗ್ಗೆ ಒಂದು ಸ್ಕ್ರಿಪ್ಟ್ ಬರೆದಿದ್ದೆ. ಸ್ಟೀವ್ ಜಾಬ್ಸ್ ಕುರಿತು ಒಂದು ಸೆಗ್ಮೆಂಟ್ ಕಾರ್ಯಕ್ರಮ ಮಾಡಿದ್ದೆ…ಒಂದು ನ್ಯೂಸ್‌ಪ್ರೊಗ್ರಾಂನ ಸ್ಕ್ರಿಪ್ಟ್ ಹೇಗಿರಬೇಕು ಅನ್ನೋದಕ್ಕೆ ನೀವು ಟಿವಿ-೯ನ ವಾರೆಂಟ್ ಕಾರ್ಯಕ್ರಮ ನೋಡಬೇಕು. ನಾನು ಇವತ್ತಿಗೂ ಪುರುಸೊತ್ತಿದ್ದಾಗ ಆ ಕಾರ್ಯಕ್ರಮ ನೋಡ್ತೀನಿ. ಅದಕ್ಕೆ ನೀವು ಟಿವಿ ನೋಡ್ತಾ ಇರಬೇಕು ಅಂತಿಲ್ಲ. ಸುಮ್ಮನೆ ಟಿವಿ ಆನ್ ಮಾಡಿಟ್ಟು ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ವಾಯ್ಸ್‌ಓವರ್ ಕೇಳ್ತಾ ಇದ್ರೆ ಸಾಕು. ಈ ರೀತಿ ಸ್ಕ್ರಿಪ್ಟ್‌ನ್ನು ಆಜ್‌ತಕ್ ವಾಹಿನಿ ತುಂಬ ಅದ್ಭುತವಾಗಿ ಮಾಡುತ್ತೆ. ಅದರ ಕನ್ನಡೀಕರಣವನ್ನು ಟಿವಿ-೯ ಚೆನ್ನಾಗಿ ಮಾಡುತ್ತೆ. ಇಲ್ಲಿ ಒಂದು ಬರವಣಿಗೆಯ ತಾಕತ್ತನ್ನು ವಿವರಿಸಲು ಇದ್ನೆಲ್ಲ ಉದಾಹರಿಸಿದೆಯಷ್ಟೆ. ಕೆಲವರಿಗೆ ನ್ಯೂಸ್ ಚಾನೆಲ್ ಕ್ರೈಂ ಕುರಿತು ಅಸಮಾಧಾನವಿರಬಹುದು. ಆದ್ರೆ ಅದ್ರ ನಡುವೆಯೂ ಒಂದು ಕಾರ್ಯಕ್ರಮವನ್ನು ನೋಡುವಂತೆ ಮಾಡುವುದು ಸ್ಕ್ರಿಪ್ಟ್‌ನ, ನರೇಷನ್‌ನ ತಾಕತ್ತು.
ಮೊದಲು ಬರೆಯಲು ಶುರು ಮಾಡಿದಾಗ ಒಂದು ರೀತಿ ಭ್ರಮೆಯಿತ್ತು. ನನ್ನ ಒಂದು ಬರಹ ಸಮಾಜದಲ್ಲಿ ಏನೋ ಮಾಡಿಬಿಡುತ್ತೆ, ಒಂದು ಸಿರಿಯಲ್ ಬರೆದ್ರೆ ಬದುಕು ಬದಲಾಗಿಬಿಡುತ್ತೆ ಅಂತ! ಹೇಳಿದ್ನಲ್ಲ ಬದುಕಿನಲ್ಲಿ ಪ್ರತಿಯೊಂದು ಒಂದೊಂದು ಥರದ ಪಾಠ ಕಲಿಸುತ್ತೆ ಅಂತ. ಹಾಗೆ ಪ್ರತಿ ಬರವಣಿಗೆಯೂ ನಮ್ಮೊಳಗಿನ ಅಹಂಕಾರವನ್ನು, ಭ್ರಮೆಯನ್ನು ಮುರಿಯುತ್ತೆ. ಒಂದು ಬರಹ ಯಾರಿಗೋ ಸ್ಪೂರ್ತಿಯಾಗಬಹುದು ಹೊರತು ಅದ್ರಿಂದ ಏನು ಬದಲಾಗುವುದಿಲ್ಲ ಮತ್ತು ಯಾರೂ ಬದಲಾಗುವುದಿಲ್ಲ. ಏನೋ ಬದಲಾವಣೆಗೆ ಬರೆಯುತ್ತೇನೆ ಅಂದುಕೊಂಡರೆ ಅದು ಬರಹಗಾರನೊಬ್ಬನ ಭ್ರಮೆಯಷ್ಟೆ. ಹಾಗಂದುಕೊಂಡು ನನ್ನೊಳಗಿನ ಖುಷಿಗಾಗಿ ಬ್ಲಾಗ್‌ನಲ್ಲಿ ಬರೆದಿದ್ದು ಹೆಚ್ಚು. ನನ್ನ ಪಾಲಿಗೆ ಬರವಣಿಗೆ ಅನ್ನೋದು ಒಂಥರ ಬೇಸರ ಕಳೆಯುವ ಜೊತೆಗಾರ. ಏಕಾಂಗಿತನ ಹೋಗಲಾಡಿಸುವ ಸಾಧನ. ಜೊತೆಗೆ ಏಕಾಗ್ರತೆಯ ಮಾರ್ಗವೂ ಹೌದು.
ಇದ್ರಲ್ಲಿ ಎರಡು ವಿಧ. ಒಂದಷ್ಟು ದುಡ್ಡಿಗಾಗಿ ಅಥವಾ ಹೊಟ್ಟೆಪಾಡಿಗಾಗಿ ಬರೆಯುವುದು. ಒಂದಷ್ಟು ಎಲ್ಲಿ ಪ್ರಕಟವಾಗುತ್ತೆ, ಏನಕ್ಕೆ ಬರೆಯುತ್ತೇನೆ ಎಂದು ಖಂಡಿತ ಗೊತ್ತಿರುವುದಿಲ್ಲ. ಒಂದು ರೀತಿಯ ಸಾಫ್ಟ್‌ವೇರ್ ಔಟ್‌ಸೋರ್ಸಿಂಗ್ ಪ್ರಾಜೆಕ್ಟ್‌ಗಳಿದ್ದಂತೆ! ಕ್ಲೈಂಟ್ ಕಾಸು ಕೊಡ್ತಾರೆ, ಬರೆದು ಕೊಡ್ತೀನಿ ಅನ್ನುವಂಥದ್ದು. ಇನ್ನೊಂದು ಖುಷಿಗೆ ಬರೆಯುವುದು. ಅದಕ್ಕೆ ಕಾಸು ಬರಬೇಕು ಅಂತಿಲ್ಲ. ಜನ ಓದಿ ಖುಷಿಪಟ್ಟು ಪತ್ರಿಕ್ರಿಯೆ ಕೊಡಬೇಕು ಅಂತಿಲ್ಲ. ಅದನ್ನು ಬರೆದು ಮುಗಿಸಿದ ನಂತರ ಸಿಗುವ ಖುಷಿಗೆ, ಮತ್ತೆ ಓದಿದಾಗ ಆಗುವ ಆನಂದಕ್ಕೆ ಬೆಲೆಯಿಲ್ಲ.
ಯಸ್, ಬರವಣಿಗೆಗೆ ಇವತ್ತು ಬೆಲೆಯಿದೆ. ಸರಿಯಾಗಿ ಬರೆದ್ರೆ ತಿಂಗಳ ಅಂತ್ಯಕ್ಕೆ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್‌ನಷ್ಟು ದುಡಿಯಬಹುದು ಎಂಬುದಕ್ಕೆ ಉದಾಹರಣೆಯಾಗಿ ಹಲವು ಬರಹಗಾರರು ಸಿಗುತ್ತಾರೆ. ಈ ದುಡಿಮೆ ಎಷ್ಟು ದಿನ ಎಂಬುದು ಆತನ ವೈಯಕ್ತಿಕ ತಾಕತ್ತು ಮತ್ತು ಸಂಪರ್ಕಗಳನ್ನು ಅವಲಂಬಿಸಿರುತ್ತದೆ. ಹಾಗಂತ ಇದು ಖಂಡಿತ ಸುಲಭ ಎಂದುಕೊಳ್ಳಬೇಡಿ. ಉದಾಹರಣೆಗೆ ೨ ಸಿರಿಯಲ್‌ಗಳ ಸಂಬಳ ಎಣಿಸುವಾಗ ತುಂಬ ಆನಂದವಾಗುತ್ತೆ. ಆದ್ರೆ ಅದರ ಹಿಂದಿರುವ ರಗಳೆಯೂ ಅಷ್ಟೆ ಇದೆ. ದೇವರ ತಲೆ ಮೇಲೆ ಹೂವು ಮೂಡಿಸುವುದು ತಪ್ಪಬಹುದು. ಆದ್ರೆ ಒಂದು ದಿನವೂ ಸೀರಿಯಲ್ ಬರವಣಿಗೆ ತಪ್ಪುವುದಿಲ್ಲ. ಒಂದು ಎಪಿಸೋಡ್‌ಗೆ ಕನಿಷ್ಟ ೧೧-೧೩ ಪುಟದ ಸ್ಕ್ರಿಪ್ಟ್ ಬೇಕು. ಜ್ವರ ಬರ್ಲಿ, ನೆಗಡಿಯಾಗಲಿ, ಮದ್ವೆ-ಉಪನಯನಗಳಿರಲಿ, ನಿಮ್ಮ ಪಾಡಿಗೆ ನೀವು ಬರೆಯುತ್ತಲೇ ಇರಬೇಕು. ಒಂದು ವಾರಕ್ಕಾಗುವಷ್ಟು ಒಂದೇ ಸಲ ಬರೆದಿಟ್ಟು ಹೋಗಲು ಸಾಧ್ಯವಿಲ್ಲ. ಯಾಕಂದ್ರೆ ಇದ್ದಕ್ಕಿದ್ದಂತೆ ಯಾವುದೋ ನಟಿಗೆ ಹುಷಾರಿಲ್ಲದೆ ಸೀನ್‌ಗಳು ಬದಲಾಗುತ್ತವೆ. ಸ್ಕ್ರೀನ್‌ಪ್ಲೇನಲ್ಲಿ ವ್ಯತ್ಯಾಸವಾಗುತ್ತೆ. ಆ ಎಲ್ಲ ಬದಲಾವಣೆಗಳನ್ನು ತತಕ್ಷಣ ಮಾಡಿಕೊಡಲು ಬರಹಗಾರ ಸಿದ್ಧನಿರಬೇಕು.
ಮೊನ್ನೆ ಯಾರೋ ನಿರ್ಮಾಪಕರು ಬಂದಿದ್ರು. ಸಾರ್ ೭೫೦ ರೂ. ಕೊಡ್ತೀವಿ ಸೀರಿಯಲ್ ಬರೆದು ಕೊಡ್ತೀರಾ ಅಂತ. ಖಂಡಿತ ಇಷ್ಟು ಹಣಕ್ಕೂ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಬರೆಯುವವರಿದ್ದಾರೆ. ಯಾಕಂದ್ರೆ ಅವ್ರಿಗೆಲ್ಲ ಒಂದು ಸೀರಿಯಲ್ ಅಂತ ಸಿಕ್ಕಿದ್ರೆ ಸಾಕಾಗಿರುತ್ತೆ. ಅಷ್ಟರ ಮಟ್ಟಿಗೆ ಸ್ಪರ್ಧೆಯೂ ಇದೆ. ಇವೆಲ್ಲವನ್ನೂ ಎದುರಿಸಲು ನಾವು ತಯಾರಿರಬೇಕು. ಕೆಲ ನಿರ್ಮಾಪಕರಿಗೆ ಸ್ಕ್ರಿಪ್ಟ್ ಅಂತಾದ್ರೆ ಸಾಕು. ಅದ್ರ ಗುಣಮಟ್ಟ ಬೇಕಿಲ್ಲ. ’ಕಂಡಿದೀವಿ ಬಿಡ್ರಿ ನೀವೇನು ಬರೆದು ಕಿಸಿಯುತ್ತೀರಿ ಎಂಬುದನ್ನು. ಸ್ಕ್ರಿಪ್ಟ್‌ನಿಂದ ಒಂದು ಸೀರಿಯಲ್ ಓಡುವುದು ಅಷ್ಟರಲ್ಲೇ ಇದೆ’ ಎಂದು ಮುಲಾಜಿಲ್ಲದೆ ಹೇಳುತ್ತಾರೆ. ಈ ಉದ್ಯಮದಲ್ಲಿ ಯಾವಾಗ್ಲೂ ದುಬಾರಿಯೆನಿಸುವುದು ಬರಹಗಾರ ಮಾತ್ರ! ಹಾಗಂತ ಒಬ್ಬ ನಟನಿಗೋ, ಕ್ಯಾಮೆರಾದವನಿಗೋ ಈ ಮಾತು ಹೇಳಲು ಸಾಧ್ಯವಿಲ್ಲ. ಅದೆಲ್ಲ ಒಂದು ಸಂಘಟಿತ ಕ್ಷೇತ್ರ. ಆದ್ರೆ ಬರವಣಿಗೆ ಮಾತ್ರ ಅಸಂಘಟಿತ. ೫೦೦ರೂ-೫೦೦೦ ರೂ.ವರೆಗೂ ಸ್ಕ್ರಿಪ್ಟ್ ಬರೆಯುವವರಿದ್ದಾರೆ! ಎಲ್ಲವನ್ನು ಧನಾತ್ಮಕವಾಗಿ ತೆಗದುಕೊಂಡು, ಇಷ್ಟೆಲ್ಲ ಸವಾಲುಗಳನ್ನು ಎದುರಿಸಿಕೊಂಡು ಬರೆಯುವುದ್ರಿದೆ ಖಂಡಿತ ಇಲ್ಲಿಯೂ ಉತ್ತಮ ಆದಾಯ ಗಳಿಕೆ ಸಾಧ್ಯ…

Read Full Post »