Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2011

ಬರೆಯದೆ ಸಿಕ್ಕಾಪಟ್ಟೆ ದಿನಗಳಾಗಿದೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಜಿಗಿದಿರುವುದಕ್ಕೆ ಇದು ಮೊದಲ ಸಾಕ್ಷಿಯಾ ಅಂತಾ ಮಾತ್ರ ಕೇಳಬೇಡಿ! ಹಲವಾರು ದಿನಗಳಿಂದ ಏನು ಬರೆಯದ ನಿಧಿ, ಸುಶ್ರುತ, ವಿಕಾಸ್‌ರಂಥ ಒಂದಷ್ಟು ಬ್ಲಾಗ್ ಗೆಳೆಯರು ನನಗೆ ಸಾಥ್ ನೀಡುತ್ತಿದ್ದಾರೆ! ಹಾಗಾಗಿ ಇದು ದೃಶ್ಯ ಮಾಧ್ಯಮದ ಅಡ್ಡ-ಉದ್ದ ಪರಿಣಾಮವಲ್ಲ. ಅದ್ಯಾಕೊ ಬರೆಯಲು ಮನಸ್ಸಾಗುತ್ತಿಲ್ಲ. ಬರೆಯಲು ಮನಸ್ಸಾಗುತ್ತಿಲ್ಲ ಅನ್ನೋ ವಿಷಯವನ್ನೇ ಇಟ್ಟುಕೊಂಡು ಮತ್ತೆ ಬರೆಯಲು ಶುರುವಿಟ್ಟಿದ್ದೇನೆ!

ಬೆಂಗಳೂರು ಬೋರಾಗುತ್ತಿದೆ ಎಂಬ ರಾಗವನ್ನು ಮತ್ತೆ ಎಳೆಯುವಂತಿಲ್ಲ. ಮತ್ತ್ಯಾಕೆ ಇನ್ನೂ ಇಲ್ಲೇ ಇದ್ದೀರಾ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಉತ್ತರವಿದ್ದರೂ, ಅದನ್ನು ಹುಡುಕಾಡುವ ಸ್ಥಿತಿಯಿಲ್ಲ. ಇನ್ನೂ, ಕೆಲಸ ಬೇಜಾರು ಬಂದಿದೆ ಅಂತೇನಾದ್ರು ತಗಾದೆ ತೆಗೆದ್ರೆ, ನಾನೇ ಸರಿಯಿಲ್ಲ ಎಂಬ ತೀರ್ಮಾವನ್ನು ಸಮಾಜ ತೆಗೆದುಕೊಂಡು ಬಿಡುತ್ತದೆ. ಹೀಗಾಗಿ ಆ ವಿಚಾರದಲ್ಲಿ ಚೂರು ಕೆಮ್ಮುವಂತಿಲ್ಲ. ಇವೆರಡನ್ನು ಬಿಟ್ಟು ಸರಿಯಿಲ್ಲ ಅಂತಾ ಆರೋಪಿಸಲು ಮತ್ತ್ಯಾವ ವಿಚಾರವೂ ಸಿಗುತ್ತಿಲ್ಲ. ಒಟ್ನಲ್ಲಿ ಕನ್ನಡ ರಾಜ್ಯೋಸ್ತ(ತ್ಸ)ವದ ಶುಭ ಸಂದರ್ಭದಲ್ಲಿ ಬದುಕು ಟೋಟ್ಟಲಿ ಅಯೊಮಯ!

ಹೌದು, ಬದುಕು ಒಂದು ರೀತಿ ಸಂಕೀರ್ಣ ಅನ್ನಿಸುತ್ತಿದೆ ಅಥವಾ ನಾವು ಬದುಕುವ ರೀತಿಯೆ ಸಂಕೀರ್ಣಗೊಂಡಿದೆ. ನಮ್ಮೂರಲ್ಲಿ ಮಳೆಗಾಲ ಬಂತು ಅಂದ್ರೆ ೬ ತಿಂಗಳು ವಾಹನ ಸಂಚಾರವಿಲ್ಲ. ಜೀವ ಹೋಗುತ್ತೆ ಅಂದ್ರೆ ಹತ್ತಿರದಲ್ಲಿ ಆಸ್ಪತ್ರೆಯಿಲ್ಲ. ಅಡುಗೆ ಮಾಡಲು ಬೇಜಾರು ಅಂತಾ ಹೊಟೆಲ್‌ಗೆ ಹೋಗಲು ಸಾಧ್ಯವಿಲ್ಲ. ಇನ್ನೂ, ಇರೋ ಮೂರು ಮತ್ತೊಂದು ಗೇಣು ಜಾಗಕ್ಕೆ ನೂರೆಂಟು ಮಂದಿಯ ರಗಳೆ…ಹೀಗೆಲ್ಲ ಆಲೋಚಿಸಿ ನಾವೆಲ್ಲ ನಗರಗಳತ್ತ ಮುಖ ಮಾಡಿದ್ದು. ಅಂದುಕೊಂಡ ಹಾಗೆ ನಗರ ಎಂಬುದು ನಮ್ಮ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಿರುವುದು ಸುಳ್ಳಲ್ಲ. ಆದ್ರೆ ಈ ನಗರದಲ್ಲೂ ಅದರದ್ದೆ ಆದ ಒಂದಷ್ಟು ಸಮಸ್ಯೆಗಳಿವೆ. ಇವೆಲ್ಲ ಅರಿವಾಗುವುದು ಮನೆಗೆ ನೆಂಟರು ಬಂದಾಗ ನೀರು ಬರದೇ ಇದ್ದಾಗ, ಆಫೀಸಿಗೆ ತಡವಾಗಿ ಹೊರಟಾಗ ಟ್ರಾಫಿಕ್ ಜಾಮ್ ಆದಾಗ!

ನಿನ್ನೆ ನಾವು ಗೆಳೆಯರೊಂದಷ್ಟು ಜನ ಪಟಾಕಿ ಹೊಡೆಯುವ ಕುರಿತು ಮಾತನಾಡುತ್ತಿದ್ದೆವು. ನನಗೆ ಈ ಬೆಂಗಳೂರಿನ ಕುರಿತು ಅತಿಯಾಗಿ ಸಿಟ್ಟು ಬಂದಿದ್ದು ಈ ಸಲದ ದೀಪಾವಳಿಯಲ್ಲಿ ಇಲ್ಲಿನ ಪಟಾಕಿ ಹಾವಳಿ ನೋಡಿದಾಗ. ಯಾರದ್ದೊ ಮನೆಯಲ್ಲಿ ಹಚ್ಚಿದ ರಾಕೆಟ್ಟು ಇನ್ನ್ಯಾರದ್ದೊ ಮನೆ ಬಾಗಿಲಿಗೆ ಹೋಗಿ ಬೀಳುತ್ತದೆ. ಇದರ ಅರಿವು ಇರುವ ಬಿಇ, ಎಬಿಎಂ…ವಗೈರೆ,ವಗೈರೆ ಪದವೀಧರರುಗಳು ಪಟಾಕಿ ಹೊಡೆಯವುದು ಮಾತ್ರ ಬಿಡುವುದಿಲ್ಲ. ನಡು ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತವೆ. ಅವರೆಲ್ಲರಿಗೂ ತೊಂದರೆ ಕೊಟ್ಟು, ಎಲ್ಲರನ್ನೂ ತಡೆದು ನಿಲ್ಲಿಸಿಯಾದರೂ ಪಟಾಕಿ ಸರ ಹಚ್ಚಿ ವಿಕೃತ ಸಂತೋಷ ಅನುಭವಿಸುವುದು ನಗರ ಜೀವನಕ್ಕೆ ಸಾಕ್ಷಿ ಇರಬಹುದೆ?

ಊರಲ್ಲಿನ ಪಟಾಕಿ ಗಮ್ಮತ್ತು ಬೇರೆ. ರಾಕೆಟ್‌ನಲ್ಲಿ ಥರ-ಥರದ ಪ್ರಯೋಗಳು. ಬಾಟಲಿಯಲ್ಲಿ ರಾಕೆಟ್ ಇಡುವುದು, ತೆಂಗಿನಕಾಯಿ ಗರಟೆಯಲ್ಲಿ ರಾಕೆಟ್ ಇಡುವುದು, ಸುರುಸುರು ಕಡ್ಡಿಯನ್ನು ತಿರುಗಿಸಿ-ತಿರುಗಿಸಿ ಎಸೆಯುವುದು, ಬೇಲಿಯ ಗೂಟಕ್ಕೆ ಸರ ಪಟಾಕಿ ಹಚ್ಚುವುದು, ನೆಲಚಕ್ರವನ್ನು ಉರುಳಿಸಿ ಬಿಡುವುದು. ವಾಲೆಗರಿಯನ್ನು ಕೈಯಲ್ಲಿ ಹಿಡಿದು ಹೊಡೆಯುವುದು…ಪಟಾಕಿಯೊಂದಿಗೆ ಮಾಡಿದ ಪ್ರಯೋಗಗಳಿಗೆ ಲೆಕ್ಕವಿಲ್ಲ. ಅಂಥದ್ದೆ ಪ್ರಯೋಗಗಳು ಇಲ್ಲಿ ನಡೆದರೆ ಸಿಟ್ಟು ಬರುತ್ತದೆ. ಕಾರಣವಿಷ್ಟೆ ಊರಲ್ಲಿ ಒಬ್ಬ ಮಲಗುವಷ್ಟು ಜಾಗ, ಇಲ್ಲಿ ೩ ಕುಟುಂಬಗಳಿಗೆ ಆಸರೆ. ಇದು ನಗರದ ಮತ್ತೊಂದು ಮುಖ.

ಇನ್ನೂ ಕಚೇರಿಗಳಲ್ಲಂತೂ ಮನುಷ್ಯತ್ವ ಅನ್ನುವುದು ಕಳೆದುಹೋಗುತ್ತಿದೆ. ಪಕ್ಷ ರಾಜಕೀಯವಿದ್ದಂತೆ, ಆಫೀಸ್‌ಗಳಲ್ಲಿ ಬಣ ರಾಜಕೀಯ. ಬಹುಶಃ ಇದು ಪತ್ರಿಕೋದ್ಯಮದಿಂದ-ಸಾಫ್ಟ್‌ವೇರ್‌ವರೆಗೆ ಯಾವುದೇ ಕ್ಷೇತ್ರವನ್ನು ಬಿಟ್ಟಂತಿಲ್ಲ. ಯಾರಾದರು ಒಬ್ಬರನ್ನು ಇಷ್ಟಪಟ್ಟು ಮಾತನಾಡಿಸಿದರೆ ಮತ್ತೊಬ್ಬರಿಗೆ ಬೇಸರ. ಯಾರ ಜೊತೆಗಾದರು ಹೆಚ್ಚು ಸ್ನೇಹ ಬೆಳೆಸಿದರೆ, ಅದಕ್ಕೆ ಸಂಬಂಧಗಳ ತಳುಕು. ದಿನ ಕಳೆದಂತೆ ಅದೊಂದು ವಿಕೃತ ಸಂತೋಷದ ವಸ್ತುವಾಗಿಬಿಡುತ್ತದೆ. ನಮಗೆ, ಯಾರೊಂದಿಗಾದರೂ ಸಂಬಂಧ ಕಲ್ಪಿಸಿ ಮಾತನಾಡಿದರೆ, ನಮ್ಮ ಪಾಲಿಗದು ಮಜ ತೆಗೆದುಕೊಳ್ಳುವ ವಿಷಯವಾಗಿಬಿಡುತ್ತದೆ.

ಯಾರು ಎಷ್ಟು ದಿನ ಬದುಕುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದಾಗ್ಯೂ ಬದುಕಿದಷ್ಟು ದಿನ ಬದ್ಧ ವೈರಿಗಳಂತೆ ಆಡುವುದನ್ನು ಬಿಡುವುದಿಲ್ಲ. ಏನೊ ದೊಡ್ಡ ವಿಚಾರಕ್ಕೆ ಇವರುಗಳ ಮುನಿಸಿರಬಹುದೇ ಎಂದರೆ, ಊಹುಂ ಖಂಡಿತ ಇಲ್ಲ. ಆಫೀಸಿನಲ್ಲಿ ನಾನು ಹೇಳಿದ ಕಂಪನಿಯ ನೀರು ಬಾಟಲಿ ತರಿಸಲಿಲ್ಲ, ನಾನು ಹೇಳಿದ ವಿನ್ಯಾಸದ ಪೊರಕೆ(ಹಿಡಿಸುಡಿ) ತಂದಿಲ್ಲ. ಬದಲಾಗಿ ಅವರ ಗುಂಪಿನ ಮಾತು ಮೇಲಾಗಿದೆ ಎಂಬ ವಿಷಯಕ್ಕೆ ಕಿತ್ತಾಟ! ಅವನು ನನಗಿಂತ ಮೊದಲು ಇವನ್ನನ್ನು ಮಾತನಾಡಿಸಿದ ಎಂಬ ಕಾರಣಕ್ಕೆ ಹಗೆ. ಇದರಿಂದ ಲಾಭವೇನು ಎಂದರೆ ಯಾರಲ್ಲೂ ಉತ್ತರವಿಲ್ಲ. ಹಿಂದೆಲ್ಲ ರಾಜರ ಗೋರಿ ಮೇಲೆ ಶ್ರೀಯುತರು ಕ್ರಿ.ಶ ಇಷ್ಟರಿಂದ-ಇಷ್ಟವರೆಗೆ…ಸಾಮ್ರಾಜ್ಯವನ್ನು ಆಳಿದರು ಎಂದು ಇರುತ್ತಿತ್ತಂತೆ. ಮುಂದೆ ಕೆಲವರ ಗೋರಿಗೆ ಹಾಗೆ ಕೆತ್ತಿಸಬೇಕು. ಶ್ರೀಯುತರು ಈ ಬಣವನ್ನು ಇಷ್ಟರಿಂದ-ಇಷ್ಟರವರೆಗೆ…ಆಗಲಾದರೂ ಅವರ ಹಗೆತನಕ್ಕೆ ಅರ್ಥ ಬರಬಹುದು!

ತಂತ್ರಜ್ಞಾನ ವೃದ್ಧಿ ಎಂಬುದು ಈ ಬಣ ಕಾಳಗಕ್ಕೆ ತುಪ್ಪ ಸುರಿಯುತ್ತಿವೆ. ಇಬ್ಬರ ನಡುವೆ ಜಗಳ ತಂದಿಡಲು ವೇದಿಕೆಯಾಗುತ್ತಿವೆ. ಪತ್ರಿಕೋದ್ಯಮದ ಕುರಿತು ಪುಂಖಾನುಪುಂಖವಾಗಿ ಉಪದೇಶದ ಶಂಖ ಊದುವ ಒಂದಷ್ಟು ಬ್ಲಾಗ್‌ಗಳು ಬಣ ರಾಜಕೀಯದಲ್ಲಿ ಮುಳುಗಿ ಹೋಗಿವೆ. ಒಂದು ಗುಂಪಿನವರು ಮಾಡುವ ಹಾದರ ಅಲ್ಲಿ ಸುದ್ದಿಯಾಗುವುದಿಲ್ಲ. ಜೊತೆಗೆ ಬೇನಾಮಿ ಪ್ರತಿಕ್ರಿಯೆಗಳು. ಆಫೀಸಿನಲ್ಲಿ ಹಗೆತನವಿರುವವರ ಹೆಸರಿನಲ್ಲಿ ಕಮ್ಮೆಂಟ್ ದಾಖಲಿಸುವುದು. ವಾಸ್ತವವಾಗಿ ಅದರ ಅರಿವು ಆ ವ್ಯಕ್ತಿಗೆ ಇರುವುದೇ ಇಲ್ಲ. ಯಾರದ್ದೊ ಮೇಲ್ ಐಡಿ ನಕಲು ಮಾಡಿ ಜಗಳ ಹಚ್ಚಿಹಾಕುವುದು ಇತ್ತೀಚಿನ ದಿನಗಳಲ್ಲಿ ವಿಪರೀತವಾಗುತ್ತಿದೆ.

ಯಾವುದಾದರು ಅಷ್ಟೆ, ನಾವು ಸಮಸ್ಯೆ ಅಂದುಕೊಂಡರೆ ಮಾತ್ರ ಅದು ಸಮಸ್ಯೆಯಾಗುತ್ತದೆ. ಅದು ಸಮಸ್ಯೆಯೇ ಅಲ್ಲ, ಅವರು ಮಾತನಾಡಿದ್ದು ನಮಗೆ ಕೇಳಿಸಲೇ ಇಲ್ಲ ಅಂದುಕೊಂಡರೆ, ಅದು ಸಮಸ್ಯೆಯಾಗುವುದಿಲ್ಲ. ನಾವು ಕೂಡ ಅದೇ ಸಿದ್ಧಾಂತ ಅಳವಡಿಸಿಕೊಂಡರೆ ಮಾತ್ರ ಬದುಕಲು ಸಾಧ್ಯ. ಇಲ್ಲವಾದರೆ ಯಾರದ್ದೊ ಸಮಸ್ಯೆಗೆ ನಾವು ಅನಾಸಿನ್ ತಿನ್ನಬೇಕಾದ ದೃಶ್ಯ ಎಂಬಲ್ಲಿಗೆ ಇವತ್ತಿನ ಪ್ರಸಂಗ ಪೂರ್ಣಗೊಳ್ಳುತ್ತದೆ!

Read Full Post »