Feeds:
ಲೇಖನಗಳು
ಟಿಪ್ಪಣಿಗಳು

Archive for ಮಾರ್ಚ್, 2009

‘ಇನ್ನೊಂದು ಸಲ ವಿವಾದಿತ ವಿಚಾರಗಳನ್ನು ಎತ್ತಿಕೊಂಡು ಬ್ಲಾಗ್ ಕಡೆಗೆ ಕಾಲಿಟ್ಟರೆ, ನೀನು ಒಬ್ಬನೇ ಸಿಕ್ಕಾಗ ಹೊಡೆಯುತ್ತೇವೆ’  ಅಂತಾ ಸುಶ್ರುತನ ಗ್ಯಾಂಗ್ ಅವಾಜು ಹಾಕಿದೆ! ಬ್ಲಾಗ್ ಲೋಕ ತಣ್ಣಗೆ ಇರಬೇಕಂತೆ! ವಿವಾದಗಳು ಬೇಡವಂತೆ! ಬ್ಲಾಗ್  ಲೋಕದ ನಿದ್ದೆಗೆಡಿಸುವ ಒಂದಷ್ಟು  ಉಗ್ರ ಮಂದಿಯಲ್ಲಿ  ನಾನು ಒಬ್ಬನಂತೆ…ಅಬ್ಬಬ್ಬ  ಅದೆಷ್ಟೆಲ್ಲ  ಆರೋಪ ನನ್ನ ಮೇಲೆ! ಇನ್ನೊಂದು ಕ್ಷಣ ಅಲ್ಲೇ ನಿಂತಿದ್ದರೆ  ಬಹುಶಃ  ಹೊಡೆತವೇ ಬಿದ್ದು  ಬಿಡುತ್ತಿತ್ತೇನೋ ನನಗೆ! ಹಾಗಾಗಿ ನನಗೆ ಬರೆಯಲು ವಿಷಯಗಳೇ ಸಿಗುತ್ತಿಲ್ಲ  ಮಾರಾಯ್ರೆ! ಈ ಬೇಸಿಗೆ ದಿನದಲ್ಲಿ  ಮೈ-ಕೈಗಳನ್ನು ತಣ್ಣಗಿಟ್ಟುಕೊಳ್ಳುವುದೇ ಸಾಹಸವಾಗಿದೆ, ಬ್ಲಾಗ್ ಅನ್ನು ತಣ್ಣಗಿಡಬೇಕು ಅಂದ್ರೆ?! ಎ.ಸಿ ರೂಮಿನಲ್ಲಿ  ಕುಳಿತ ಮಂದಿಯನ್ನು ಸದಾ ಬೈಯ್ಯುತ್ತಿದ್ದವ, ಬ್ಲಾಗಿಗೆ ಎ.ಸಿ ಹಾಕಿಸಿದರೆ ನೀವೆಲ್ಲ  ನನಗೆ ಬೈಯ್ಯಬಹುದು ಅಲ್ವಾ?!

ಅಂದಹಾಗೆ, ಸುಶ್ರುತನ ಬೈಗುಳದಿಂದ ಮನಸಿಗೆ ಸ್ವಲ್ಪ  ರಿಲ್ಯಾಕ್ಸ್  ಸಿಗಲಿ ಅಂತಾ ಈ ಸಲ ಯುಗಾದಿ ಹಬ್ಬಕ್ಕೆ  ಮನೆಗೆ ಹೋಗಿದ್ದೆ! ಯುಗಾದಿಗೆ ಮನೆಗೆ ಹೋಗುವ ರೂಢಿ ಬಿಟ್ಟು  ೬-೭ ವರ್ಷವೇ ಕಳೆದು ಹೋಗಿತ್ತು.  ಅಪರೂಪಕ್ಕೆ ಹೋಗಿದ್ದಕ್ಕೋ, ಅಥವಾ ಅವಳು  ಊರಿಗೆ  ಬಂದಿದ್ದಕ್ಕೋ  ಗೊತ್ತಿಲ್ಲ , ಈ ಸಲ ಯುಗಾದಿಯಂತೂ ಸೂಪರ್!

ಏನೋ  ತಣ್ಣಗೆ  ಬರೆಯಬೇಕು ಅಂತಾ ಹೊರಟ್ಟಿದ್ದೇನೋ ನಿಜ. ಆದರೆ, ಏನು ಬರೆಯಲು ಹೊರಟಿರುವೆ ಎಂಬುದೇ ಮರೆತುಹೋಗಿದೆ.  ಮತ್ತದೇ ಬಣಗುಟ್ಟುವ ಊರಿನ ಕುರಿತು ಬರೆಯಲೇ…ಅಯ್ಯಯ್ಯೋ  ಮರೆತೇ ಬಿಟ್ಟಿದ್ದೆ…ಇಷ್ಟು  ದಿನ ಊರು ಮನೆ ಸುದ್ದಿಯನ್ನೆಲ್ಲ  ಕದ್ದು  ತಂದು ಕಥೆ, ಬರಹವನ್ನಾಗಿಸುತ್ತಿದೆ! ಈಗ ಅದಕ್ಕೂ ಕಡಿವಾಣ ಬಿದಿದ್ದೆ.  ನಾನು ಬ್ಲಾಗ್‌ನಲ್ಲಿ  ಬರೆಯುತ್ತಿರುವುದು ನಮ್ಮೂರಿನ ಮಂದಿಗೂ ಗೊತ್ತಾಗಿಬಿಟ್ಟಿದೆ. ’ಮಾಣಿ ನನ್ನ ಬಗ್ಗೆ  ಎಂತದೋ ಬರದ್ಯಡಲಾ, ಎಂತಾ ಅದು?’ ಹಾಗಂತ, ಕ್ರಿಷ್ಣಣ್ಣ  ಶಾನೇ ಖುಷಿಯಿಂದ ಕೇಳಿದರು! ಅಯ್ಯೋ ಕ್ರಿಷ್ಣಣ್ಣ,  ನಿನ್ನ  ಗುಣಗಾನ ಮಾಡಿದ್ದೇನೆ ಅಂತಾ ನಾನು ಯಾವ ಮುಖ ಇಟ್ಟುಕೊಂಡು ಹೇಳಲಿ ಹೇಳಿ?

ನಮ್ಮೂರಿನ ಮಂದಿ ಬ್ಲಾಗ್, ನೆಟ್  ಉಪಯೋಗಿಸುವಷ್ಟು  ಬುದ್ದಿವಂತರಾಗಿಲ್ಲ  ಎಂಬ ಭಂಡ ಧೈರ್ಯದ ಮೇಲೆ ಇಷ್ಟು  ದಿನ ಬರೆಯುತ್ತಿದ್ದೆ. ಬೆಂಗಳೂರಿಗೆ ಬಂದು, ಕುಳಿತಿರುವ ನಮ್ಮ  ಅಕ್ಕ-ಪಕ್ಕದ ಊರಿನ ಒಂದಷ್ಟು  ಪಡ್ಡೆ  ಹುಡುಗ, ಹುಡುಗಿಯರು ನನ್ನ  ಆಹಾರಕ್ಕೆ  ಕಲ್ಲು  ಹಾಕಿಬಿಟ್ಟಿದ್ದಾರೆ!  ನಾನು ಬರೆದಿದ್ದು, ಬರೆಯದೇ ಇರುವುದು…ಎಲ್ಲದಕ್ಕೂ  ಕಾಲು-ಬಾಲ ಸೇರಿಸಿ, ಉಪ್ಪು-ಕಾರದ ಒಗ್ಗರಣೆ ಹಾಕಿ, ವರದಿ ಒಪ್ಪಿಸುವ  ಪತ್ರಕರ್ತರಲ್ಲದ(ಟೆಕ್ಕಿಗಳು, ಅಕೌಟೆಂಟ್‌ಗಳು…)ಮಂದಿ ಹೆಚ್ಚಾಗಿಬಿಟ್ಟಿದ್ದಾರೆ! ಪರಿಸ್ಥಿತಿ ಯಾವ ಮಟ್ಟಕ್ಕೆ  ತಲುಪಿದೆ ಎಂದರೆ, ನಮ್ಮೂರಿನ ಯಲಕೋಡು ಅಮ್ಮಮ್ಮ(ಅಜ್ಜಿ) ಕೂಡ, ‘ಮಾಣಿ ಕಥೆ, ಕವನ ಎಲ್ಲ  ಬರಿತ್ಯಡಲಾ, ಎಷ್ಟು  ದುಡ್ಡು  ಸಿಕ್ತಾ  ಅದನ್ನೆಲ್ಲ  ಬರೆದರೆ, ನಿನ್ನ ಚೂರು-ಪಾರು ಖರ್ಚಿಗಾದ್ರೂ ಆಗ್ತನಾ?’ ಅಂತಾ ವಿಚಾರಿಸಲು ಶುರುವಿಟ್ಟಿದ್ದಾರೆ! ಅದ್ಯಾವ ಘಳಿಗೆಯಲ್ಲಿ  ಸುಶ್ರುತ ಸುಪಾರಿ ಕೊಟ್ಟನೋ ಗೊತ್ತಿಲ್ಲ. ನನ್ನೆಲ್ಲ  ಬರವಣಿಗೆಗೂ ವಿಘ್ನ  ಉಂಟಾಗಿದೆ. ಯಾವುದಕ್ಕೂ  ಒಂದ್ಸಲ ದೈವಜ್ಞ  ಸೋಮಯಾಜಿಗಳ ಹತ್ತಿರ  ಹೋಗಿ ಬರುತ್ತೇನೆ!

ನಮ್ಮೂರ ಮಂದಿಯ ಬದುಕು ನಿಜಕ್ಕೂ ತುಂಬಾ ಅದ್ಬುತ. ಅವರ ವ್ಯಕ್ತಿತ್ವ, ಅವರ ರೀತಿ-ನೀತಿ, ಬದುಕಿನ ಪಥ…ಎಲ್ಲವನ್ನು  ಸೂಕ್ಷ್ಮವಾಗಿ ಗ್ರಹಿಸಿದರೆ, ೩-೪ ಕಾದಂಬರಿ ಬರೆಯಬಹುದು. ಸಂವೇದನೆಯನ್ನು ಸರಿಯಾಗಿ ಸೆರೆ ಹಿಡಿದರೆ ನಾಲ್ಕಾರು ಪ್ರಶಸ್ತಿಗಳನ್ನು ಬಾಚಿಕೊಳ್ಳಬಹುದು…ಕ್ಷಮಿಸಿ, ಪಡೆದುಕೊಳ್ಳಬಹುದು!!! ಸಬ್ಸಿಡಿ ಹಣ, ಅಕಾಡೆಮಿ ಗ್ರ್ಯಾಂಟು…ಇವೆಲ್ಲವನ್ನೂ  ಪಡೆದುಕೊಳ್ಳಲು ವೇದಿಕೆ ಸಜ್ಜು  ಮಾಡಿಕೊಂಡರೆ, ನಮ್ಮೂರಿನ ಕುರಿತಾಗಿ ಧಾರಾವಾಹಿಯನ್ನೋ, ಸಿನಿಮಾವನ್ನೋ ಖಂಡಿತವಾಗಿಯೂ ಮಾಡಬಹುದು!!! ತಿಪ್ಪನ, ಚೌಡನ ಬದುಕನ್ನು ಸಮಾಜದ ಮುಂದಿಟ್ಟು , ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು.  ನನ್ನಂಥವ ಪ್ರಶಸ್ತಿ ಪಡೆದು ಮೂರು ದಶಕಗಳು ಕಳೆದರೂ, ತಿಪ್ಪ, ಚೌಡನ ಬದುಕಿನಲ್ಲಿ  ಯಾವುದೇ ಬದಲಾವಣೆ ಆಗದಿರುವುದನ್ನು,  ದುರಂತ ಅನ್ನಬೇಕೋ, ವಾಸ್ತವ ಅನ್ನಬೇಕೋ ನನಗಂತೂ ಗೊತ್ತಿಲ್ಲ. ಯಾಕೆಂದರೆ, ನಾನೀಗ ತಣ್ಣಗೆ  ಬರೆಯಲು ಹೊರಟಿರುವೆ!

ಚಪ್ಪಲಿಯೇ ಇಲ್ಲದೇ ಬದುಕುವ ನನ್ನಪ್ಪ, ಪಕ್ಕದ ಮನೆ ರಾಮಚಂದ್ರಣ್ಣ…ಪ್ಯಾಂಟಿನ ಪರಿವಿಲ್ಲದ ಶೇಷಜ್ಜ, ತನ್ನದೇ ಲಹರಿಯಲ್ಲಿ  ಲೆಕ್ಕಾಚಾರ ಹಾಕುವ ಶಣ್ಣಣ್ಣ…ಇಸ್ಪೀಟು ಆಡಿಕೊಂಡೇ ಜೀವನ ಕಳೆಯುವ ಸ್ವಾಮಿರಾಯ…ಅಂತಹ ಗಂಡಸರ ನಡುವೆಯೇ ಸಂಸಾರ ತೂಗಿಸಿಕೊಂಡು ಹೋಗುವ ಒಂದಷ್ಟು  ಹೆಂಗಸರು…ಎಲ್ಲರೂ  ಇವತ್ತು  ಬದಲಾಗುತ್ತಿದ್ದಾರಾ? ಅವರು ಬದಲಾಗದಿದ್ದರೂ, ನಾವು ಬಲವಂತವಾಗಿ ಅವರನ್ನು ಬದಲಾಯಿಸಲು ಹೊರಟ್ಟಿದ್ದೇವೆ. ಚಪ್ಪಲಿ  ಹಾಕದಿದ್ದರೆ ಕಾಲಿಗೆ ಮುಳ್ಳು ಚುಚ್ಚುತ್ತದೆ, ನೀನು ಪ್ಯಾಂಟು ಹಾಕದಿದ್ದರೆ ನಮಗ್ಯಾರೂ ಹೆಣ್ಣು ಕೊಡುವುದಿಲ್ಲ…ಏನೇನೊ ನೆವ ಹೇಳಿ ಅವರ ಸುಂದರ ಬದುಕನ್ನು ಕಸಿದುಕೊಳ್ಳುತ್ತಿದ್ದೇವೆ…ಕ್ಷಮಿಸಿ…ಪ್ರಗತಿ ಹಾದಿಯಲ್ಲಿ  ನಾವಿದ್ದೇವೆ! ಈ  ಜಗತ್ತು,  ಕೋಡ್ಸರ, ಖಂಡಿಕಾ, ಗೀಜಗಾರು, ಕುಗ್ವೆ…ಗಳಿಂದಿದಂಲೇ ಬದಲಾವಣೆ ಬಯಸಿದೇ ಎಂಬುದನ್ನು  ಸಾಬೀತುಪಡಿಸಲು ಹೊರಟಿದ್ದೇವೆ!!!

ಅರೆ, ನಾನು ಬರೆಯಲಿಕ್ಕೆ  ಹೊರಟ್ಟಿದ್ದೇ  ಬೇರೆಯದನ್ನು. ಅವಳ ಕುರಿತು, ಅವಳ ಜತೆ ಆಡಿದ ಜಗಳದ ಕುರಿತು ಬರೆಯಲು ಹೊರಟವ, ಎಲ್ಲೆಲ್ಲಿಗೋ ಸಾಗಿ ಬಂದು ಬಿಟ್ಟೆ! ರೈಲು ಗಾಡಿಯ ಕುರಿತು, ಕ್ರಿಕೆಟ್ ಆಟದ ಕುರಿತು, ವರದಹಳ್ಳಿ  ಪ್ರವಾಸದ ಕುರಿತು…ಕಡೆಗೆ ರಾಘಣ್ಣನ ಕುರಿತು ಬರೆಯಬೇಕು ಅಂದುಕೊಂಡವ…ಮತ್ತೆಲ್ಲಿಗೋ  ಹೋಗಿ ಬಿಟ್ಟಿದ್ದೇನೆ. ತಣ್ಣಗೆ ಬರೆಯಲು ನನ್ನಿಂದ ಸಾಧ್ಯವೇ ಇಲ್ಲವೇನೋ ಅಂದುಕೊಂಡಿದ್ದೆ. ತಣ್ಣಗೆ ಬರೆಯಲು  ಇನ್ನೂ ಎಷ್ಟೆಲ್ಲ   ಸರಕುಗಳಿವೆ ಮಾರಾಯ್ರೇ!!! ಎಲ್ಲವನ್ನೂ ನಿಧಾನವಾಗಿ, ಡೀಟೈಲ್ ಆಗಿ ಇನ್ನೊಮ್ಮೆ ಬರೆಯುವೆ.

ಅಂದಹಾಗೆ ಸುಶ್ರುತ, ಶ್ರೀನಿದಿ, ವಿಕಾಸ್…ಸುಪಾರಿಗೆ ಹೆದರಿ, ತಣ್ಣಗಿರುವುದನ್ನು ಮಾತ್ರ ಬರೆಯುತ್ತೇನೆ ಅಂದುಕೊಳ್ಳಬೇಡಿ. ದೈವಜ್ಞ   ಸೋಮಯಾಜಿಗಳ ಹತ್ತಿರ ಹೋಗಿ ಬಂದ ನಂತರ, ಬರಹದ ಲಹರಿಯನ್ನು ನೋಡಿ!!! ಕುವೆಂಪುವಿನಲ್ಲಿ  ತೇಜಸ್ವಿಯನ್ನು  ಅಪೇಕ್ಷಿಸುವುದು ಸರಿಯಲ್ಲ. ಕಾರಂತರಲ್ಲಿ, ಮಾಸ್ತಿಯ ಬರಹಗಳು ಹುಟ್ಟುವುದಿಲ್ಲ. ಹಾಗೆ,  ನನಗೆ ಸುಶ್ರುತನ ತರಹ ಬರೆಯಲು ಆಗುವುದಿಲ್ಲ.  ನಿದಿಗೆ ನನ್ನ  ತರಹ ಬರೆಯಲು ಸಾಧ್ಯವಾಗುವುದಿಲ್ಲ. ವಿಕಾಸ್, ಸಂದೀಪ್ ಕಾಮತ್ ತರಹ ತಣ್ಣಗೆ ತಲೆಹರಟೆ ಮಾಡುವುದು ಎಲ್ಲರಿಗೂ ಶಾನೇ ಕಷ್ಟದ  ಕೆಲಸ.  ಶಿವು, ಮತ್ತವರ ಹೊಸ ತಂಡದಿಂದ ಹೊರಬರುತ್ತಿರುವ ನವಿರು-ನವಿರಾದ ಬರಹಗಳು ನಮಗ್ಯಾರಿಗೂ ಬರೆಯಲು  ಸಾಧ್ಯವೇ ಆಗುವುದ್ಲಿಲ  ಅಲ್ವಾ?!!! ಅಂದಹಾಗೆ, ನನ್ನೆಲ್ಲ  ಮಿತ್ರರಿಗೂ ಹೊಸ ವರ್ಷದ, ಹೊಸ ಸಂವತ್ಸರದ ಶುಭಾಷಯಗಳು…

(ಸೂಚನೆ:-ಇದೊಂದು ಶುದ್ದಾತೀಶುದ್ದ  ಲಘು ಬರಹ ಅಂತಾ ಹೇಳಿಕೊಳ್ಳದೇ ಹೋದರೆ, ಇದನ್ನು ಮತ್ತೊಂದು ವಿವಾದಿತ ಬರಹ  ಅಂತಲೇ ಸ್ವೀಕರಿಸುತ್ತಾರೆನೋ ಕೆಲವರು ಎಂಬ ಭಯ ಮಾರಾಯ್ರೇ!!!)

Read Full Post »

ಸುಶ್ರುತನ ಸೂತ್ರ ತಪ್ಪಿದೆ, ವಿಕಾಸ್ ಎರಡೆಕ್ರೆ ಹೊಲದ ನಡುವೆ ಬಾವಿ ತೊಡಿಕೊಂಡು ಹಾರಲು ಸಜ್ಜಾಗಿದ್ದಾರೆ, ಶ್ರೀನಿದಿ ಸದಾ ಸೋಮಾರಿ ಎಂಬುದನ್ನು ಹೊಸತಾಗಿ ಹೇಳಬೇಕಿಲ್ಲ, ಶರ್ಮರಿಗೆ ಬಿಎಸ್‌ಎನ್‌ಎಲ್ ಪ್ರಾಬ್ಲಂ, ಕೋಡ್ಸರನಿಗೆ ವಿವಾದ ಹುಟ್ಟುಹಾಕಲು ಹೊಸ ವಿಷಯ ಸಿಕ್ಕಂತಿಲ್ಲ, ಚೇತನಕ್ಕ  ಊರಿಂದ ವಾಪಸ್ ಬಂದಂತಿಲ್ಲ, ಸುಪ್ರೀತ್‌ಗೆ ಎಕ್ಸಾಂ ಬ್ಯೂಸಿ…ಒಟ್ಟಲ್ಲಿ  ಎಲ್ಲ  ಬ್ಲಾಗಿಗರು ಶಾನೇ ಬ್ಯೂಸಿಯಾಗಿದ್ದಾರೆ, ಬ್ಲಾಗ್ ಲೋಕದ ಕ್ರೇಜು ಕಳೆದುಹೋಗಿದೆ ಅಂದುಕೊಳ್ಳುವ ಹೊತ್ತಿಗೆ….ಮೇ ಫ್ಲವರ್, ರವಿ ಹೆಗಡೆ ಜೊತೆ ಸೇರಿ ಹೊಸದೊಂದು ಆಪರೇಷನ್ ಆರಂಭಿಸಿದೆ!

ನಾವು ಪ್ರೈಮರಿ ಶಾಲೆಯಲ್ಲಿ  ತಾಲೂಕು ಮಟ್ಟದ  ಕ್ರೀಡಾಕೂಟಕ್ಕೆ ಹೋಗುತ್ತಿದ್ದೆವು. ಸಾಗರದ ನೆಹರೂ ಮೈದಾನದಲ್ಲಿ  ಓಡಿದವರಿಗೆಲ್ಲ   ಗ್ಲೂಕೋಸ್ ಕೊಡುತ್ತಿದ್ದರು. ಓಡಿದರೆ ಗ್ಲೂಕೋಸು ಪುಡಿ ಸಿಗತ್ತೆ ಅನ್ನುವ ಕಾರಣಕ್ಕಾಗಿಯೇ ನಾವೆಲ್ಲ  ರನ್ನಿಂಗ್ ರೇಸ್‌ನಲ್ಲಿ  ಭಾಗವಹಿಸುತ್ತಿದ್ದೆವು!  ಸುಸ್ತಾಗದಿರಲಿ, ಚೈತನ್ಯ ಬರಲಿ ಅಂತಾ ಗ್ಲೂಕೋಸು ಪುಡಿ ಕೊಡುತ್ತಿದದ್ದು ಅನ್ನುವುದು ಅರ್ಥವಾಗಲು ಬಹಳ ವರ್ಷಗಳೇ ಬೇಕಾಯಿತು ಬಿಡಿ! ಮೇ ಫ್ಲವರ್ ಚಟುವಟಿಕೆ ನೋಡಿದಾಗ ಆ ದಿನಗಳು ಮತ್ತ್ಯಾಕೋ ನೆನಪಾಯಿತು!

ಬ್ಲಾಗ್ ಲೋಕ ಇವತ್ತು ಇಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಅಂತಾದರೆ, ಅದರ ಹಿಂದೆ ಅವದಿ ಬಳಗದ, ಮೇಫ್ಲವರ್ ಮಿಡಿಯಾ ಹೌಸ್‌ನ ಕೈವಾಡ ಖಂಡಿತವಾಗಿಯೂ ಇದೆ. ಜಿ.ಎನ್ ಮೋಹನ್  ಎಂಡ್ ಕಂಪನಿ, ಆಗಾಗ ಏನೇನೋ ಪ್ರಯೋಗ ಮಾಡುತ್ತಿರುತ್ತದೆ! ಬ್ಲಾಗ್ ಲೋಕವನ್ನು ಜೀವಂತವಾಗಿ ಉಳಿಸಲು ಯತ್ನಿಸುತ್ತದೆ…

ಮೇ ಫ್ಲವರ್ ಬಳಗಕ್ಕೆ ನನ್ನದೊಂದು ಸಲಾಂ ಹೇಳುವ ಮುನ್ನ  ಒಂದಷ್ಟು  ವಿಚಾರಗಳಿವೆ… ಮೇಫ್ಲವರ್ ಕುರಿತಾಗಿ ನನಗೆ ಮತ್ತು ಕೆಲವರಿಗೆ  ಎರಡು ಕಾರಣಕ್ಕೆ ಪೂರ್ವಾಗ್ರಹವಿದೆ. ಒಬ್ಬ  ವ್ಯಕ್ತಿಯನ್ನು  ಪರಿಚಯಿಸುವಾಗ, ಅಗತ್ಯಕ್ಕಿಂತ ಹೆಚ್ಚು ಹೊಗಳಿಕೆ ಅವದಿಯಲ್ಲಿ  ಕಂಡುಬರುತ್ತದೆ. ಎರಡನೆಯದಾಗಿ ಮೇಫ್ಲವರ್ ಕರೆಸುವ ಸಂಪನ್ಮೂಲ ವ್ಯಕ್ತಿಗಳು ತೀರಾ ಎಡಪಂಥೀಯ ಧೋರಣೆ ಉಳ್ಳವರು ಅಥವಾ ಎಡಪಂಥದಲ್ಲಿ  ಸಕ್ರೀಯವಾಗಿ ಗುರುತಿಸಿಕೊಂಡವರು.  ಜಯನಗರದಲ್ಲೂ   ಮಂಥನ ಅಂತಾ ಒಂದು ತಂಡವಿದೆ. ಅಲ್ಲಿನ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಪ್ರತಿ ಸಲ ಬರುತ್ತದೆ. ಅದರ ಒಂದೆರಡು ಕಾರ್ಯಕ್ರಮಗಳಿಗೆ ಹೋಗಿದ್ದೇನೆ ಕೂಡ. ಅಲ್ಲಿನ ಕಾರ್ಯಕ್ರಮಗಳು ನನಗೆ ಸದಾ ಬಲಪಂಥೀಯ ಅನ್ನಿಸುತ್ತದೆ. ಹಾಗಾಗಿ ಇತ್ತೀಚೆಗೆ ಆ ಕಡೆ ಹೋಗುವುದನ್ನೇ ಬಿಟ್ಟಿದ್ದೇನೆ.

ರಾಷ್ಟ್ರೀಯತೆ, ವಾಸ್ತವತೆ ಎರಡನ್ನು ಹೊರತುಪಡಿಸಿ ಮತ್ತ್ಯಾವ ಸಿದ್ಧಾಂತವೂ ಈ ಪೀಳಿಗೆಗೆ ಬೇಡವಾಗಿದೆ. ಎಡ,ಬಲ, ನವ್ಯ, ಬಂಡಾಯ…ನಮ್ಮ ಹಿಂದಿನ ತಲೆಮಾರು ಇಂತಹ ಹೊಡೆದಾಟದಲ್ಲೇ ತಮ್ಮ  ಆಯುಷ್ಯ ಕಳೆದಿದೆ. ಹಾಗಾಗಿ ಆ ಕಚ್ಚಾಟ ಈ ತಲೆಮಾರಿಗೂ ಮುಂದುವರಿಯುವುದು ಬೇಡ ಎಂಬ ಆಶಯ ನನ್ನದು. ಹಾಗಂತ ನಾನು ರಾಷ್ಟ್ರೀಯ ವಿಚಾರದ ಪರ. ರಾಷ್ಟ್ರೀಯತೆ ಬಲಪಂಥೀಯರು ಗುತ್ತಿಗೆ ಪಡೆದ ಸರಕು ಎಂದು ನೀವು ಭಾವಿಸಿಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ. ನಮ್ಮ ದೇಶವನ್ನು, ಸಂಸ್ಕೃತಿಯನ್ನು  ಪ್ರೀತಿಸುವ ಹಕ್ಕು  ಪ್ರತಿಯೊಬ್ಬ  ನಾಗರೀಕನಿಗೂ ಇದೆ. ದೇಶವನ್ನು ನಕ್ಸಲರು ಪ್ರೀತಿಸುತ್ತಾರೆ ಎಂದಾದರೆ ನಾನು ಅವರನ್ನೂ ಬೆಂಬಲಿಸುತ್ತೇನೆ. ಇನ್ನು, ಹಾದರ…ಎಡದವರು ಮಾಡಿದರೂ ಹಾದರವೇ, ಬಲದವರು ಮಾಡಿದರೂ  ಅದು ಹಾದರವೇ ಎಂಬ ವಾದ ನನ್ನದು.

ಇನ್ನು  ಸಂಪನ್ಮೂಲ ವ್ಯಕ್ತಿಗಳು…ಒಂದು ಕಾರ್ಯಕ್ರಮ ಆಯೋಜನೆ ನಾವಂದುಕೊಂಡಷ್ಟು  ಸುಲಭವಲ್ಲ.  ಒಬ್ಬ  ಸಂಪನ್ಮೂಲ ವ್ಯಕ್ತಿ  ಕರೆಸುವಾಗ ಉಂಟಾಗುವ ತೊಂದರೆಗಳು ಸಾಕಷ್ಟು. ಜಯಂತ್ ಕಾಯ್ಕಿಣಿ, ನಾಗೇಶ್ ಹೆಗಡೆ….ಇಂತಹವರನ್ನು ಕರೆಸಬಹುದು ಎಂದು ನಾವು ಮೋಹನ್ ಅವರಿಗೆ ಪುಕ್ಕಟ್ಟೆ  ಸಲಹೆ ನೀಡುವುದು ತುಂಬಾ ಸುಲಭ. ಆದರೆ, ಅದರ ಕಷ್ಟ  ಅವರಿಗೆ ಮಾತ್ರ ಗೊತ್ತು. ಆದಾಗ್ಯೂ, ಮೇ ಫ್ಲವರ್ ಬಳಗಕ್ಕೆ  ಸಂಪನ್ಮೂಲ ವ್ಯಕ್ತಿಗಳ ಕೊರತೆಯಿಲ್ಲವೇನೋ  ಎಂಬ ಭಾವನೆ ನನ್ನದು. ನಿಸಾರ್, ಎಚ್.ಎಸ್.ವಿ…ಇವತ್ತಿನ ಯಾವ ಕಾರ್ಯಕ್ರಮಕ್ಕೆ  ಹೋದರೂ ಅವರದ್ದೇ  ಮುಖಗಳು! ಅದೇ ಹಳೆ ಕವಿತೆಗಳು, ಹಳೆ ರಾಗ! ವಿಜ್ಞಾನವೂ ಸಾಹಿತ್ಯದ ಒಂದು ಬಗೆ. ಕಲೆ, ಮನಃಶಾಸ್ತ್ರ….ಇವು ಸಾಹಿತ್ಯ ಪ್ರಕಾರಗಳೇ…ಹಾಗಾಗಿ, ಹೊಸ ಕ್ಷೇತ್ರದ ವ್ಯಕ್ತಿಗಳನ್ನು ಪರಿಚಯಿಸುವ ಪ್ರಯತ್ನವನ್ನು  ಮೇ ಫ್ಲವರ್ ಮಾಡಬಹುದು  ಎಂಬ ಆಶಯ ನನ್ನದು. ಹಾಗಂತ ಹಿರಿಯ ಸಾಹಿತಿಗಳ ಕುರಿತಾಗಿ ನನಗೆ ಗೌರವ ಇಲ್ಲ  ಎಂದೇನಲ್ಲ. ಖಂಡಿತವಾಗಿಯೂ ನಿಸಾರ್, ಎಚ್.ಎಸ್.ವಿ…ಅಂತಹವರ ಅನುಭವ ಬಲು ದೊಡ್ಡದು. ಆದರೂ ಅವರ ಮಾತುಗಳನ್ನು ಅರ್ಥೈಸಿಕೊಳ್ಳುವಷ್ಟು  ಪ್ರೌಢತೆ, ನನ್ನಲ್ಲಿ, ಸುಶ್ರುತ, ವಿಕಾಸ್….ನಮ್ಮಂತಹ ಯುವಕರಲ್ಲಿ  ಇಲ್ಲ  ಮೋಹನ್ ಸರ್…

ಶಿವರಾಮ ಕಾರಂತರು ಪತ್ರಿಕೆ ನಿಲ್ಲಿಸಿದ ಮೇಲೆ, ಎಲ್ಲರೂ ನಿಮ್ಮ  ಪತ್ರಿಕೆ ತುಂಬಾ ಚೆನ್ನಾಗಿತ್ತು, ಯಾಕೆ ನಿಲ್ಲಿಸಿಬಿಟ್ಟಿರಿ….ಅಂತಾ ಕನಿಕರದಿಂದ ಕಾರಂತರ ಬಳಿ ಕೇಳುತ್ತಾರಂತೆ. ಪತ್ರಿಕೆ ಬರುತ್ತಿದ್ದ  ಕಾಲದಲ್ಲಿ, ಅದನ್ನು ಕೊಳ್ಳುವವರು, ಪ್ರೋತ್ಸಾಹಿಸುವವರ ಸಂಖ್ಯೆ ವಿರಳವಾಗಿತ್ತಂತೆ! ಆ ನೋವನ್ನು ಕಾರಂತರು ತುಂಬಾ ಸೊಗಸಾಗಿ ಬರೆದುಕೊಳ್ಳುತ್ತಾರೆ.

ಸಾಹಿತ್ಯ ಕೃಷಿಯು ಒಂತರಹ ಅಂತಹದ್ದೇ! ‘ಕಿಸೆಯಲ್ಲಿನ ಕಾಸು ಖರ್ಚುಮಾಡಿಕೊಂಡು ನಾನೇಕೆ ಸಾಹಿತ್ಯ ಕೃಷಿ ಮಾಡಬೇಕು’ ಎಂಬ ಪ್ರಶ್ನೆಯನ್ನು ಬದಿಗಿಟ್ಟು , ಜಿ.ಎನ್ ಮೋಹನ್ ಬಳಗ ಮಾಡುತ್ತಿರುವ ಸಾಹಿತ್ಯ ಕೃಷಿಯನ್ನು ನಾವೆಲ್ಲ  ಖಂಡಿತ ಪ್ರೋತ್ಸಾಹಿಸಲೇ ಬೇಕು. ಬ್ಲಾಗ್ ಲೋಕದಲ್ಲಿ  ಗುಂಪುಗಾರಿಕೆ ಬೆಳೆಯುತ್ತಿರುವ, ಬರಹ ಎಂಬುದು ಪ್ರತಿಷ್ಠೆಯ ವಿಷಯವಾಗುತ್ತಿರುವ ಈ ಕಾಲದಲ್ಲಿ  ಎಲ್ಲ  ಬ್ಲಾಗಿಗರನ್ನು ಒಟ್ಟುಗೂಡಿಸಲು ಮೋಹನ್ ಅವರ ತಂಡ ಹೊರಟಿದೆ.  ಅವರಿಗೊಂದು ಸಲಾಂ…ಆ ತಾಣ ಹೊಡೆದಾಟಕ್ಕೊಂದು ವೇದಿಕೆಯಾಗದಿರಲಿ, ಗುಂಪುಗಾರಿಕೆ ಅಲ್ಲೂ  ಮರುಕಳಿಸದಿರಲಿ…ಎಂಬುದು ನಮ್ಮ ಆಶಯ. ನನ್ನ  ಹಾಗು ಕೆಲವರ ಪೂರ್ವಾಗ್ರಹವನ್ನು ಹೋಗಲಾಡಿಸಲು ಆ ಬಳಗ ಯತ್ನಿಸುತ್ತದೆ ಎಂಬ ನಂಬಿಕೆ…

ಅಂದಹಾಗೆ, ಅಕ್ಷರವಿಹಾರಕ್ಕೆ  ಒಂದು ವರ್ಷ ತುಂಬಿದೆ.  ವರ್ಷ ತುಂಬಿದಾಗ ಏನೇನೋ ಬರೆಯಬೇಕೆಂಬ ಕನಸಿತ್ತು! ಇತ್ತೀಚೆಗೆ ಬರವಣಿಗೆ ಎಂಬುದು ನನಗೂ ಪ್ರತಿಷ್ಠೆಯ ವಿಷಯವಾಗುತ್ತಿದೆ. ಬರಹ, ಬದುಕು ಇವೆರಡನ್ನೂ ನಾನು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳುವುದಿಲ್ಲ.  ಇರುವ ಮೂರು ದಿನದಲ್ಲಿ  ಹೊಡೆದಾಡಿಕೊಂಡು ಬದುಕಲು ನಾನು ಯಾವತ್ತೂ ಇಷ್ಟಪಡುವುದಿಲ್ಲ.  ಹಾಗಾಗಿ, ಬದುಕಿನ ವಿರಾಮಕ್ಕಾಗಿ ನಿರ್ಮಿಸಿಕೊಂಡ ವಿಹಾರಕ್ಕೂ ಪುಟ್ಟ  ವಿರಾಮ ಬೇಕೇನೋ ಅನ್ನಿಸುತ್ತದೆ. ಅದೇನೆ ಇರಲಿ,  ನನ್ನೆಲ್ಲ  ಬರವಣಿಗೆಯನ್ನು ಅಕ್ಕರೆಯಿಂದ ಪ್ರೋತ್ಸಾಹಿಸಿದ, ಪ್ರೀತಿಯಿಂದಲೇ ತಪ್ಪುಗಳನ್ನು ತಿದ್ದಿಕೊಟ್ಟ, ಬಹಳ ಸೊಗಸಾಗಿ ಕಾಲೆಳೆದ ನಿಮ್ಮೆಲ್ಲರಿಗೂ ಧನ್ಯವಾದಗಳು…ನಿಮ್ಮ  ಪ್ರೀತಿ, ಪ್ರೋತ್ಸಾಹ ಸದಾ ಈ ರೀತಿಯಾಗಿಯೇ ಇರಲಿ…

Read Full Post »

ಪಿಯುಸಿ ಓದುತ್ತಿದ್ದಾಗ ಸಿದ್ದವನದಲ್ಲಿ  ವಿಜಯ ಕರ್ನಾಟಕ ಪತ್ರಿಕೆಯ ಪರಿಚಯವಾಯಿತು. ಅಲ್ಲಿಂದ ಪತ್ರಿಕೆ ಓದುವ ಗೀಳು ಆರಂಭವಾಯಿತು. ಅದರಲ್ಲಿ ವಿಜ್ಞಾನದ ಕುರಿತಾಗಿ, ವಿದ್ಯುತ್ ಕುರಿತಾಗಿ ಆಗಾಗ ಬರೆಯುತ್ತಿದ್ದ  ಶ್ರೀಶ,  ಬಹುಶಃ  ಯುವಕರಾಗಿರಬೇಕು ಎಂಬ ಭಾವನೆ ನನ್ನಲ್ಲಿ  ಇತ್ತು.  ವಿಜ್ಞಾನದ ವಿದ್ಯಾರ್ಥಿಯಾದ ನನಗೆ ಅವರು ಬರೆಯುವ ಲೇಖನಗಳು ಒಂದಷ್ಟು  ಮಾಹಿತಿ ಒದಗಿಸುತ್ತಿತ್ತು.

ಎಚ್.ಆರ್ ಶ್ರೀಶ!

ದಪ್ಪನೆಯ, ಕಪ್ಪನೆಯ ವ್ಯಕ್ತಿ. ೪೦-೪೫ರ ಪ್ರಾಯದ ವ್ಯಕ್ತಿ ಪ್ರೆಸ್ ಕ್ಲಬ್ ಆವರಣದಲ್ಲಿ  ಕಾಣ ಸಿಕ್ಕರು. ಪಕ್ಕದಲ್ಲಿ  ಕುಳಿತ  ಮಿತ್ರರ್‍ಯಾರೋ ವಿ.ಕದ ಶ್ರೀಶ ಅಂದರೆ ಇವರೇ ನೋಡು ಅಂತಾ ಹೇಳಿದರು. ನನ್ನ ನಿರೀಕ್ಷೆ  ಕುಸಿದು ಬಿದ್ದಿತ್ತು! ಅಯ್ಯೋ ರಾಮ ಶ್ರೀಶ ಅಂದ್ರೆ ಇವರೇನಾ? ನನ್ನಲ್ಲಿ  ಒಂತರಹ ತಾತ್ಸಾರದ ಭಾವ! ಅವರು ನೋಡಲು ಚೆನ್ನಾಗಿರಲಿಲ್ಲ, ಕಪ್ಪಗಿದ್ದರು, ಯುವಕರಲ್ಲ  ಎಂಬ ಕಾರಣಕ್ಕೆ ನನಗೆ ಅವರ ಕುರಿತು ತಾತ್ಸಾರ ಮೂಡಿರಬೇಕು!

ವಿಜಯ ಕರ್ನಾಟಕಕ್ಕೆ ಕಾಲಿಟ್ಟ   ಎರಡು-ಮೂರು  ವಾರದಲ್ಲಿ  ಶ್ರೀಶರ ಪರಿಚಯವಾಯಿತು. ಇಡೀ ಆಫೀಸ್‌ನಲ್ಲಿ  ಶ್ರೀಶರ ಕುರಿತು ಗೌರವ ಭಾವನೆ. ಏನಾದ್ರು ಮಾಹಿತಿ ಬೇಕು ಅಂದ್ರೆ ಹೆಚ್ಚಿನವರು ಶ್ರೀಶರ ಬಳಿ ಹೋಗುತ್ತಾರೆ. ತಮ್ಮೆಲ್ಲ  ಕೆಲಸವನ್ನು ಬದಿಗಿಟ್ಟು  ಶ್ರೀಶ ಸರ್ ಗಂಟೆಗಟ್ಟಲೇ ಒಂದು ವಿಚಾರದ ಕುರಿತು ಮಾಹಿತಿ ನೀಡುತ್ತಾರೆ…ಮಾತಾಡಿಸಬೇಕು ಅಂತಾ ಅನ್ನಿಸಿದರೂ ಮಾತಾಡಿಸಲು ಭಯ. ಹೊಸಬರು, ಹಿರಿಯರನ್ನು ಮಾತಾಡಿಸುವುದು ಸರಿಯಲ್ಲವೇನೋ ಅನ್ನೋ  ಮುಜುಗರ…

ಒಂದು ದಿನ ಹೀಗೇ ಯಾವ ನೆವದಿಂದಲೋ  ಮಾತಾಡಿಸಿದೆ. ಯಾವ ಕಾರಣಕ್ಕೆ  ಮಾತನಾಡಿಸಿದೆ ಎಂಬುದು ನನಗೀಗ ನೆನಪಿಲ್ಲ.  ನಾನು ಇಂಟೆನ್‌ಶಿಪ್‌ಗೆ ಬಂದವನು ಎಂದು ಅವರು ಭಾವಿಸಿದ್ದರಂತೆ. ಅಲ್ಲಿಂದ ಮುಂದೆ ಶ್ರೀಶರ ಪರಿಚಯವಾಯಿತು…ಮೊದಲು ಮಧ್ಯಾಹ್ನ  ೧ ಗಂಟೆ  ಸಮಯದಲ್ಲಿ  ಆಫೀಸ್‌ನಲ್ಲಿ  ಇರುತ್ತಿದ್ದ  ಹಿರಿಯರ ಸಂಖ್ಯೆ ಕಡಿಮೆ.  ಶ್ರೀಶ ಸರ್ ಹೆಚ್ಚಾಗಿ ಇರುತ್ತಿದ್ದರು. ನನಗೂ ಎಕನಾಮಿಕ್ ಟೈಮ್ಸ್‌ನ ಕೆಲ ಪದಗಳು ಬಗೆಹರಿಯುತ್ತಿರಲಿಲ್ಲ. ಅವರ ಬಳಿ ಹೋಗಿ ಕೇಳುತ್ತಿದ್ದೆ.  ಹಾಗಾಗಿ ಮತ್ತಷ್ಟು  ಹತ್ತಿರವಾದರು.  ವಿಜ್ಞಾನ, ವಿದ್ಯುತ್ ಕ್ಷೇತ್ರಕ್ಕಾಗಿ ತಮ್ಮ  ಇಡೀ ಪತ್ರಿಕೋದ್ಯಮದ ಬದುಕನ್ನು  ಶ್ರೀಶ ಮುಡುಪಾಗಿಟ್ಟರು  ಅಂದರೆ ಬಹುಶಃ ತಪ್ಪಾಗಲಾರದು….

ಪ್ರತಿಭೆ, ಕ್ರಿಯಾಶೀಲತೆ, ಬರವಣಿಗೆ…ಇವೆಲ್ಲಕ್ಕಿಂತ ವ್ಯಕ್ತಿತ್ವ  ಮುಖ್ಯ ಎಂದು ನಂಬಿಕೊಂಡು ಬಂದವ ನಾನು. ಹಾಗಾಗಿಯೇ ನನಗೆ ಎಚ್.ಆರ್ ಶ್ರೀಶ, ವಸಂತ್ ನಾಡಿಗೇರ್, ರಾಧಾಕೃಷ್ಣ  ಭಡ್ತಿ, ಶರತ್ ಕಲ್ಕೋಡ್, ಈ ಸಂಜೆ ರಾಮಚಂದ್ರಣ್ಣರಂತಹ ಒಂದಷ್ಟು  ಪತ್ರಕರ್ತರು ತುಂಬಾ ಇಷ್ಟವಾಗುತ್ತಾರೆ. ಶ್ರೀಶರಂತೆ ವಿಚಾರ ಗೊತ್ತಿರುವ ಮಂದಿ ಸುದ್ದಿಮನೆಯಲ್ಲಿ  ಸಾಕಷ್ಟು  ಜನ ಸಿಗಬಹುದು. ಆದರೆ ಶ್ರೀಶರಂಥ ವ್ಯಕ್ತಿತ್ವ  ಹೊಂದಿದವರು ಸಿಗುವುದು ಕಷ್ಟ.  ಹಿರಿಯ ವರದಿಗಾರ, ಎಲ್ಲಾ  ಸರಕಾರಿ ಇಲಾಖೆಯ ಮುಖ್ಯಸ್ಥರು ನನ್ನ  ಮಾತನ್ನು  ಕೇಳುತ್ತಾರೆ…ಇವ್ಯಾವುದರ ಪರಿವೂ ಇಲ್ಲದೇ  ನನ್ನಂತ ಕಿರಿಯರಿಗೆ  ಶ್ರೀಶ ಸರ್ ಒಂದು ವಿಚಾರದ ಕುರಿತಾಗಿ ಹೇಳುವ ರೀತಿ ಎಲ್ಲರಿಗೂ ಬರುವುದಿಲ್ಲ.  ಸರಳತೆ, ಸಜ್ಜನಿಕೆ…ನಾನು ಹೆಚ್ಚು  ವಿವರಿಸಿದರೆ ಬಹುಶಃ  ಅದು ಹೊಗಳಿಕೆಯಾಗಬಹುದು. ಎಲ್ಲಾದರೂ ಸಿಕ್ಕರೇ ನೀವೇ ಒಮ್ಮೆ  ಶ್ರೀಶರನ್ನು  ಮಾತಾಡಿಸಿ. ಒಟ್ಟಿನಲ್ಲಿ  ಹೇಳುವುದಾದರೆ ನಾನು ಕಂಡ ಒಂದಷ್ಟು  ಅದ್ಬುತ ಪತ್ರಕರ್ತರ  ಸಾಲಿನಲ್ಲಿ   ಶ್ರೀಶ ಸರ್ ಕೂಡ ಒಬ್ಬರು.

ಎಚ್.ಆರ್ ಶ್ರೀಶ ಈಗ ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದಾರೆ.  ಒಬ್ಬ  ಶ್ರೇಷ್ಠ  ಪತ್ರಕರ್ತರು ನಮ್ಮ  ನಡುವಿನಿಂದ ಎದ್ದು  ಹೋಗುತ್ತಿದ್ದಾರೆ ಅನ್ನುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಣ್ಣು ತುಂಬಿ ಬಂದಿದೆ…ಹಾಗಾಗಿ ಅವರ ಕುರಿತು ಮೂರಕ್ಷರ ಬರೆದಿದ್ದೇನೆ. ನನ್ನಂತಹ ಕಿರಿಯವನಿಗೆ, ಅವರ ಕುರಿತು ಬರೆಯಲು ಯಾವ ಅರ್ಹತೆ ಇದೆ ಅಂತಾ ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ಶ್ರೀಶರಿಗೆ ೪೦-೪೫ರ ಪ್ರಾಯವಾಗಿರಬಹುದು ಎಂದು ನಾನು ಎಣಿಸಿದ್ದೆ. ೫೮ ಆಯಿತು ಎಂದು ಗೊತ್ತಾಗಿದ್ದು  ಈಗ! ಶ್ರೀಶ ಸರ್  ಮೂಲತಃ  ಎಲ್ಲಿಯವರು ಅಂತಾ ನನಗೆ ಗೊತ್ತಿಲ್ಲ. ಗಣೇಶ ಭವನದ ಬಳಿ ಅವರ ಮನೆಯಿದೆ ಅಂತಾ ಮಾತ್ರ ಗೊತ್ತು!  ಅವರ ಚೆಂದದ ನಗು ಯಾವತ್ತೂ  ಮಾಸದಿರಲಿ ಎಂಬ ಪ್ರಾರ್ಥನೆ  ಮಾತ್ರ ನನ್ನಿಂದ  ಅವರಿಗೆ ಕೊಡಬಹುದಾದ ವಸ್ತು. ನಮ್ಮ  ವೃತ್ತಿ  ಬದುಕಿನುದ್ದಕ್ಕೂ  ವ್ಯಕ್ತಿತ್ವದ ಪಾಠ ಕಲಿಸುವ ಅಂತಹ ಹಿರಿಯರು  ಸದಾ ಸಿಗುತ್ತಿರಲಿ ಎಂದು ದೇವರಲ್ಲಿ  ಪ್ರಾರ್ಥಿಸುವೆ…

Read Full Post »