Feeds:
ಲೇಖನಗಳು
ಟಿಪ್ಪಣಿಗಳು

Archive for ಜುಲೈ, 2009

ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ವ್ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಇಂಥದ್ದೊಂದು ಮಂತ್ರದ ಸಾಲು ಎಚ್‌ಎಸ್‌ಆರ್ ಲೇ ಔಟ್‌ನಲ್ಲಿರುವ ಕನ್ನಡದ ಕುಳ್ಳ ಬಂಗ್ಲೆ ಶ್ಯಾಮರಾವ್ ದ್ವಾರಕನಾಥರ ಮನೆಯಲ್ಲಿ  ಕೇಳಿಬರುತ್ತದೆ.

‘ಈವರೆಗೆ ೩೦೦ಕ್ಕೂ ಅದಿಕ ಸಿನಿಮಾಗಳಲ್ಲಿ  ನಟಿಸಿದ್ದೇನೆ. ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ  ನಿರ್ಮಾಪಕನಾಗಿ ಸರಿಸುಮಾರು ೫೦ ಚಿತ್ರಗಳಲ್ಲಿ  ದುಡಿದಿರುವೆ. ಕೇವಲ ೬ ವರ್ಷಗಳಲ್ಲಿ(೧೯೮೨-೧೯೮೮ರ ಅವಯಲ್ಲಿ) ೧೭ ಚಿತ್ರ ನಿರ್ಮಿಸಿದ್ದೆ. ಈ ವರ್ಷ ೩ ಚಿತ್ರಗಳಲ್ಲಿ  ಕಾಣಿಸಿಕೊಳ್ಳುವೆ. ನಟ,ನಾಯಕ, ನಿರ್ಮಾಪಕ, ನಿರ್ದೇಶಕನಾಗಿ ಚಿತ್ರರಂಗದಲ್ಲಿ  ಬೆಳೆಯಲು ರಾಘವೇಂದ್ರ ಸ್ವಾಮಿಗಳ ಅನುಗ್ರಹವೇ ಕಾರಣ. ರಾಯರಿಲ್ಲದೆ ನಾನಿಲ್ಲ. ಮಂತ್ರಾಲಯದಲ್ಲೊಂದು ಸ್ವಂತ ಮನೆ ಇದೆ. ವರ್ಷಕ್ಕೆ ಸಾಕಷ್ಟು  ಸಲ ರಾಯರ ಸನ್ನಿಧಾನಕ್ಕೆ ಹೋಗುವೆ’ ಎಂದು ಅಕ್ಕಿ ರೊಟ್ಟಿ  ಮತ್ತು ಚಹಾದೊಂದಿಗೆ ಮಾತಿಗೆ ಕುಳಿತರು ದ್ವಾರಕೀಶ್.

ಬೆಳಿಗ್ಗೆ  ೭.೩೦ಕ್ಕೆ ದಿನಪತ್ರಿಕೆ ಓದಿನೊಂದಿಗೆ ಅವರ ದಿನಚರಿ ಆರಂಭವಾಗುತ್ತದೆ. ದಿನಪತ್ರಿಕೆ ಹಾಕುವ ಹುಡುಗನೂ ಇವರ ಅಭಿಮಾನಿ. ಶುಕ್ರವಾರ ಎಲ್ಲ  ಪತ್ರಿಕೆಗಳನ್ನು ಇವರ ಮುಂದಿಟ್ಟು  ಚಿತ್ರರಂಗದ ಕುರಿತು ಸ್ವಲ್ಪ  ಹರಟೆ ಹೊಡೆಯುವುದು ಆ ಹುಡುಗನ ದಿನಚರಿ! ಚಿತ್ರೀಕರಣವಿದ್ದರೆ  ಬೆಳಿಗ್ಗೆ ೭ಗಂಟೆಗೆ ಮನೆ ಬಿಡುತ್ತಾರೆ. ಉಳಿದ ದಿನ ಹೆಂಡ್ತಿ, ಮಗ, ಸೊಸೆ ಜತೆಗೆ ತಿಂಡಿಗೆ ಕುಳಿತರೆ  ಭರ್ತಿಯಾಗಿ ಒಂದು  ಗಂಟೆ ಕಾಲ  ಸಿನಿಮಾ ವಿಮರ್ಶೆ. ೫ ಜನ ಗಂಡು ಮಕ್ಕಳಲ್ಲಿ  ಇಬ್ಬರು ವಿದೇಶದಲ್ಲಿದ್ದಾರೆ.  ಒಬ್ಬ ಮಗನ ಸಂಸಾರ ಇವರ ಜತೆಗಿದೆ. ಕುಟುಂಬದ ಜತೆ ಡೈನಿಂಗ್ ಟೇಬಲ್‌ನಲ್ಲಿ  ಊಟ/ತಿಂಡಿಗೆ ಕುಳಿತರೆ ಸಿನಿಮಾ ಮಾತುಕತೆ ಕಟ್ಟಿಟ್ಟ  ಬುತ್ತಿ. ಮೊಮ್ಮಗಳನ್ನು ಶಾಲೆಗೆ ಡ್ರಾಪ್ ಮಾಡಿ, ಬೆಳಿಗ್ಗೆ   ೯ ಗಂಟೆ ಸುಮಾರಿಗೆ  ಮನೆಯಲ್ಲಿಯೇ ಇರುವ ತಮ್ಮ ಪ್ರತ್ಯೇಕ ಕಚೇರಿಗೆ ಬಂದು ಕೂರುತ್ತಾರೆ. ೯ರಿಂದ ೧೧ರ ಅವ  ಸ್ನೇಹಿತರು, ಅಭಿಮಾನಿಗಳಿಗೆ ಮೀಸಲಿಟ್ಟ  ಸಮಯ. ೧೧.೩೦-೧೨ ಗಂಟೆ ಸುಮಾರಿಗೆ ದೇವರ ಮನೆ ಪ್ರವೇಶಿಸಿದರೆ,  ನಂತರದ ೨೦-೩೦ ನಿಮಿಷ ರಾಯರಿಗೆ ಅರ್ಪಣೆ.

೨.೩೦-೩.೩೦ ನಿದ್ದೆ/ಟಿವಿ ನೋಡುವ ಸಮಯ. ಸಂಜೆ ೪.೩೦-೫ಗಂಟೆಗೆ ಸೆಂಚುರಿ ಕ್ಲಬ್‌ಗೆ ಹೋಗುತ್ತಾರೆ.  ‘ಕ್ಲಬ್ ಎಂದಾಕ್ಷಣ ಗುಂಡು ಹಾಕುವ ಜಾಗ ಅಂತಾ ಅಂದುಕೊಳ್ಳಬೇಡಿ. ಅಲ್ಲಿ  ೬೦ವರ್ಷ ಮೇಲ್ಪಟ್ಟವರೇ ಇರುತ್ತಾರೆ. ಅಲ್ಲಿನ ಗ್ರಂಥಾಲಯಕ್ಕೆ  ಹೋಗುತ್ತೇನೆ. ಅರ್ಧ ಜನ ಓದುತ್ತಿರುತ್ತಾರೆ. ಇನ್ನು ಕೆಲವರು ಕುರ್ಚಿಯಲ್ಲೇ  ನಿದ್ದೆಗೆ ಜಾರಿರುತ್ತಾರೆ. ೭.೩೦-೮ಗಂಟೆ ವೇಳೆಗೆ  ದಿನಸಿ ಖರೀದಿ ಪೂರೈಸಿಕೊಂಡು ಮನೆಗೆ ಮರಳುತ್ತೇನೆ. ಹೆಂಡ್ತಿ  ಧಾರಾವಾಹಿಯಲ್ಲಿ  ಮುಳುಗಿರುತ್ತಾಳೆ. ಅವಳ ಹತ್ತಿರ ರಿಮೋಟ್ ಕಸಿದುಕೊಳ್ಳಲು ನಿತ್ಯವೂ ಜಗಳ ಆಡಬೇಕು. ಅರ್ಧ ಗಂಟೆ ವಾರ್ತೆ ವಿಕ್ಷೀಸುವೆ. ಊಟದ ನಂತರ ಡೈರಿ ಬರೆಯುತ್ತೇನೆ. ನಿತ್ಯವೂ ಡೈರಿ ಬರೆಯುವುದು ಉತ್ತಮ ಹವ್ಯಾಸ. ಇದರಿಂದಾಗಿ ಪ್ಲ್ಯಾಶ್‌ಬ್ಲಾಕ್‌ನ ನೆನಪುಗಳು ಸದಾ ಜತೆಗಿರುತ್ತದೆ. ೯.೩೦ಕ್ಕೆ ಹಾಸಿಗೆ ಏರಿದರೆ ಅರ್ಧ-ಮುಕ್ಕಾಲು ಗಂಟೆ ಚಿತ್ರರಂಗದ ಮಿತ್ರರ ಕರೆಗಳಲ್ಲೇ  ಮಗ್ನನಾಗಿರುವೆ. ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದು ಕಡಿಮೆ. ಮನಸ್ಸಿನ ನೆಮ್ಮದಿ ದೃಷ್ಟಿಯಿಂದ ಏಕಾಂಗಿಯಾಗಿ ಬದುಕುವುದು ಗೆಳೆಯ ರಜನಿಕಾಂತ್ ಕಲಿಸಿದ ಪಾಠ’ ಎನ್ನುತ್ತಾರೆ ಆಪ್ತ ಮಿತ್ರದ ರೂವಾರಿ.

ನಟರು, ಹೆಸರಿದ್ದಾಗ ಅಭಿಮಾನಿಗಳ ಭಯದಿಂದ ಹೊರ ಬರುವುದಿಲ್ಲ. ಹೆಸರು ಹೋದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮನಸ್ಸು ಬರುವುದಿಲ್ಲ. ಹೀಗಾಗಿ ನಾಲ್ಕು ಗೋಡೆಗಳ ನಡುವೆಯೇ ಸಿನಿಮಾ ಮಂದಿಯ ಜೀವನ ಕಳೆದುಹೋಗುತ್ತದೆ. ಈ ಗೊಂದಲದಿಂದ ಹೊರಬಂದು ಸಾಮಾನ್ಯನಂತೆ ಎಲ್ಲರ ಜತೆ ಬದುಕುವವ ನಿಜವಾದ ಕಲಾವಿದ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಇವರು, ಬಂಧು-ಬಳಗದವರ ಮನೆ ಕಾರ್ಯಕ್ರಮಗಳನ್ನು ತಪ್ಪಿಸುವುದಿಲ್ಲ. ಹುಟ್ಟೂರಾದ ಹುಣಸೂರಿಗೆ ವರ್ಷಕ್ಕೊಮ್ಮೆ ಹೋಗುತ್ತಾರೆ. ಮೈಸೂರಿನಲ್ಲಿರುವ ಅಣ್ಣನ ಮನೆಗೆ ಆಗಾಗ ಭೇಟಿ ನೀಡುತ್ತಾರೆ.

‘ಕಲಾವಿದರು ಹಣದ ಹಿಂದೆ ದುಂಬಾಲು ಬೀಳಬಾರದು. ತಮಿಳು/ತೆಲುಗಿನಂತೆ ಉತ್ತಮ ಕಥೆ, ನಿರ್ಮಾಪಕರಿಗೆ ನಾಯಕ/ನಾಯಕಿಯರು ಹೆಚ್ಚಿನ ಆದ್ಯತೆ ನೀಡಬೇಕು.  ಇಲ್ಲವಾದರೆ ಕನ್ನಡ ಸಿನಿಮಾ ಜಗತ್ತು ಕೂಡ ಮರಾಠಿ, ಬಂಗಾಳಿ, ಗುಜರಾತಿ ಚಿತ್ರ ರಂಗದ ರೀತಿಯಲ್ಲಿಯೇ ಮೂಲೆಗುಂಪಾಗಿ ಹೋಗುತ್ತದೆ. ನಾವೆಲ್ಲ ,  ನಮ್ಮ  ಭಾಷೆಯ ಚಿತ್ರ ರಂಗ ಬೆಳೆಯಬೇಕೆಂಬ ಕನಸು ಕಂಡವರು. ಈಗಿನ ಸಿನಿಮಾಗಳನ್ನು ನೋಡಿದರೆ ಬೇಸರವಾಗುತ್ತಿದೆ.  ಸದ್ಯಕ್ಕೆ ಯಾವ ಸಿನಿಮಾವನ್ನೂ ಮಾಡುವ ಇರಾದೆಯಿಲ್ಲ’ ಎಂದು ದ್ವಾರಕೀಶ್ ಮಾತು ಮುಗಿಸುವ ಹೊತ್ತಿಗೆ ಮನೆಗೆ ಅಭಿಮಾನಿಯೊಬ್ಬರ ಆಗಮನವಾಗಿತ್ತು .

ಮೂಲ ಹೆಸರು-ಬಂಗ್ಲೆ  ಶ್ಯಾಮರಾವ್ ದ್ವಾರಕನಾಥ್
ಜನ್ಮ ದಿನಾಂಕ- ೧೯.೦೮.೧೯೪೨
ಮೂಲ ಸ್ಥಳ-ಹುಣಸೂರು(ಮೈಸೂರು ಜಿಲ್ಲೆ)
ವಿದ್ಯಾಭ್ಯಾಸ- ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ವೀರ ಸಂಕಲ್ಪ(೧೯೬೪)
ಇಷ್ಟದ  ನಿರ್ದೇಶಕ-ವಿ.ಶಾಂತಾರಾಮ್(ಹಿಂದಿ)
ಇಷ್ಟದ ನಟ/ನಟಿ-ದಿಲೀಪ್ ಕುಮಾರ್

Read Full Post »

ಸಂಜೆ ವೇಳೆಯಲ್ಲಿ  ಬನಶಂಕರಿ ಎರಡನೇ ಹಂತದಲ್ಲಿರುವ ಅರಬಿಂದೋ ಶಾಲೆಯ ಮೈದಾನಕ್ಕೆ ಹೋದರೆ, ನಾಯಕ/ನಿರ್ದೇಶಕ ರಮೇಶ್ ಅರವಿಂದ್ ತಮ್ಮ ಪುಟಾಣಿ ಕಂದ ಅರ್ಜುನ್ ಜತೆ ಬ್ಯಾಟು, ಬಾಲು ಹಿಡಿದು ನಿಂತಿರುತ್ತಾರೆ. ಕ್ರಿಕೆಟ್ ಆಡುತ್ತಾ, ಮಗನ ಹಿಂದೆ ಓಡುತ್ತಿರುತ್ತಾರೆ!  ಚಲನಚಿತ್ರದಲ್ಲಿ  ಡಬ್ಬಲ್ ಆಕ್ಟಿಂಗ್ ಮಾತ್ರ ಮಾಡುತ್ತೇನೆ. ಸಂಸಾರದ ನೌಕೆಯಲ್ಲಿ ಮಗ, ಗಂಡ, ಅಪ್ಪ…ಹಲವಾರು ಪಾತ್ರ ಎಂದು ನಕ್ಕರು ಜಿ.ರಮೇಶ್.

‘ರಾತ್ರಿ ಎಷ್ಟೇ  ತಡವಾಗಿ ಮಲಗಿದರೂ ಕೂಡ, ಪ್ರತಿ ನಿತ್ಯ ಬೆಳಿಗ್ಗೆ  ೬.೧೫ಕ್ಕೆ ಏಳುತ್ತೇನೆ. ೭ಗಂಟೆವರೆಗೂ  ಮನೆಯಲ್ಲಿ  ಬೇರೆ ಯಾರೂ ಎದ್ದಿರುವುದಿಲ್ಲ.  ಈ ವೇಳೆಯಲ್ಲಿ   ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಅಗತ್ಯವಾದ ಯೋಗ, ವ್ಯಾಯಾಮಗಳನ್ನು ಮಾಡುತ್ತೇನೆ.  ಚಿತ್ರೀಕರಣವಿದ್ದರೆ ೬.೩೦-೭ ಗಂಟೆಯೊಳಗೆ ಮನೆ ಬಿಡುತ್ತೇನೆ. ಮನೆಯಿಂದಲೇ ಮೇಕಪ್ ಮಾಡಿಕೊಂಡು ಕಾರಿನಲ್ಲಿ  ಡ್ರೈವರ್ ಜತೆ ಚಿತ್ರೀಕರಣದ ಸ್ಥಳಕ್ಕೆ ಹೋಗುವುದು  ಮಾಮೂಲಾಗಿದೆ. ಚಿತ್ರೀಕರಣ ಇಲ್ಲದ ದಿನ ೮.೩೦ಕ್ಕೆ  ಪತ್ನಿ ಅರ್ಚನಾ, ಮಗ ಅರ್ಜುನ್, ಮಗಳು ನಿಹಾರಿಕಾ ಜತೆ ಕುಳಿತ ತಿಂಡಿ ತಿನ್ನುತ್ತೇನೆ. ಅದರ  ನಂತರ ಆವತ್ತಿನ ಕಾರ್ಯಗಳು ಆರಂಭವಾಗುತ್ತದೆ’ ಎಂದು ಅವರು ದಿನಚರಿ ವಿವರಿಸಲು ಶುರುವಿಟ್ಟರು.

ನಟರಾಗಿದ್ದಾಗ ವರ್ಷಕ್ಕೆ ೮-೯ ಚಿತ್ರದಲ್ಲಿ  ಅಭಿನಯಿಸುತ್ತಿದ್ದ  ರಮೇಶ್, ನಿರ್ದೇಶಕರಾದ ನಂತರ ೧-೨ ಸಿನಿಮಾ ಮಾತ್ರ ಮಾಡುತ್ತಿದ್ದಾರೆ. ಇದುವರೆಗೆ ನಾನಾ ಭಾಷೆಗಳ ೧೨೦ಕ್ಕೂ ಅಕ ಚಿತ್ರದಲ್ಲಿ  ಅಭಿನಯಿಸಿರುವ ಅವರು,  ಈವರೆಗಿನ ಜೀವನದ ಬಹುಪಾಲು ದಿನಗಳನ್ನು  ಚಿತ್ರೀಕರಣದಲ್ಲೇ ಕಳೆದಿದ್ದಾರೆ. ಈ ವರ್ಷ ೬ ಚಿತ್ರಗಳಲ್ಲಿ  ಕಾಣಿಸಿಕೊಳ್ಳಲಿರುವ ಅವರು, ಬೆಳಿಗ್ಗೆ  ೬.೧೫ ಚಿತ್ರೀಕರಣದ ಸ್ಥಳಕ್ಕೆ ಹೋದರೆ, ಮತ್ತೆ  ಮನೆ ತಲುಪುವುದು ರಾತ್ರಿ ೯.೩೦ಕ್ಕೆ. ಚಿತ್ರೀಕರಣವಿಲ್ಲದ ಸಮಯದಲ್ಲಿ  ಬೆಳಿಗ್ಗೆ  ೧೦.೩೦ಗೆ ತಾವು ಮಾಡುತ್ತಿರುವ ಚಿತ್ರದ ಕುರಿತು ಸಂಬಂತರೊಂದಿಗೆ ಚರ್ಚೆ ನಡೆಸುತ್ತಾರೆ. ದಿನಕ್ಕೆ ೪ ಪತ್ರಿಕೆಗಳನ್ನು  ತಪ್ಪದೇ  ಓದುವ ಹವ್ಯಾಸವಿದೆ. ಜತೆಗೆ  ಕನ್ನಡ, ಇಂಗ್ಲೀಷ್ ಕಾದಂಬರಿಗಳನ್ನು ಇಷ್ಟಪಡುತ್ತಾರೆ. ಮಧ್ಯಾಹ್ನ ೮-೧೦ನಿಮಿಷ ನಿದ್ದೆ  ಮಾಡುವುದೆಂದರೆ ರಮೇಶ್‌ಗೆ ಪಂಚ ಪ್ರಾಣವಂತೆ. ನಂತರ ಸ್ವಲ್ಪ  ಹೊತ್ತು  ಟಿವಿ ನೋಡುತ್ತಾರೆ. ೩.೩೦ರಿಂದ ಚಿತ್ರದ ಕುರಿತು ಮತ್ತೆ ಚರ್ಚೆ ಆರಂಭಿಸಿ, ೫.೩೦ ವೇಳೆಗೆ ಫ್ರೀ ಆಗುತ್ತಾರೆ. ಸಂಜೆ ಕತ್ತಲಾದ ನಂತರ ಮಗ ಅರ್ಜುನ್ ಜತೆ ಕ್ರಿಕೆಟ್, ಪತ್ನಿ-ಮಕ್ಕಳ ಜತೆ ವಿಹಾರ…

ಒಂದು ಚಿತ್ರ  ಮುಗಿದ ನಂತರ ಕುಟುಂಬದ ಜತೆ  ನಾಲ್ಕಾರು ದಿನ ದೂರದೂರಿಗೆ ಪ್ರವಾಸಕ್ಕೆ ಹೋಗುವುದು ಅವರ ರೂಢಿ. ಅಪ್ಪ-ಅಮ್ಮ, ಸಹೋದರರೆಲ್ಲ  ಮನೆಗೆ ಸಮೀಪದಲ್ಲೆ  ಇದ್ದಾರೆ. ಬಿಡುವಿನ ವೇಳೆಯಲ್ಲಿ  ಅವರ ಮನೆಗೆ ಹೋಗುತ್ತೇನೆ ಎನ್ನುತ್ತಾರೆ. ಹಿರಿಯ ನಾಗರೀಕರಿಗಾಗಿ ಇರುವ ‘ಡಿಗ್ನಿಟಿ ಫೌಂಡೇಷನ್’ ಹಾಗೂ  ಬುದ್ದಿಮಾಂಧ್ಯ ಮಕ್ಕಳ ಸಂಸ್ಥೆಯಾದ ‘ಮಾನಸ’ಕ್ಕೆ ರಾಯಭಾರಿಯಾಗಿರುವ ಇವರು, ಅರ್ಥಪೂರ್ಣ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತಾರೆ. ಜತೆಗೆ, ಶಾಲಾ ಕಾರ್ಯಕ್ರಮಗಳನ್ನೂ ಅಟೆಂಟ್ ಮಾಡುತ್ತಾರೆ. ಚಿತ್ರೀಕರಣದ ಸಮಯದಲ್ಲಿ  ಮಾತ್ರ ಅಭಿಮಾನಿಗಳಿಗೆ ಭೇಟಿಯ ಅವಕಾಶ. ಕಾರಿನಲ್ಲಿ  ಪ್ರಯಾಣ ಮಾಡುವಾಗ ಪರಿಚಿತರು, ಸ್ನೇಹಿತರು, ಅಭಿಮಾನಿಗಳಿಂದ ಬಂದಿರುವ ಇ-ಮೇಲ್, ಮೊಬೈಲ್ ಸಂದೇಶವನ್ನು ಪರಿಶೀಲಿಸಿ ಉತ್ತರ ನೀಡುತ್ತಾರೆ. ಯಾರೇ ಫೋನ್ ಮಾಡಿದರೂ ಕೂಡ, ಸ್ವತಃ  ಅವರೇ ರಿಸೀವ್ ಮಾಡಿ ಮಾತನಾಡುತ್ತಾರೆ. ಪ್ರಯಾಣದ ಸಮಯ ಡಿವಿಡಿ ನೋಡಲು, ಅಧ್ಯಯನಕ್ಕೆ ಮೀಸಲು.

‘ಹುಟ್ಟಿ-ಬೆಳೆದಿದ್ದೆಲ್ಲ  ಬೆಂಗಳೂರಿನಲ್ಲಾದರೂ, ೪ನೇ ತರಗತಿವರೆಗೆ  ಓದಿದ್ದು   ತಮಿಳುನಾಡಿನ ‘ಕುಂಬಕೋಣಂ’ನಲ್ಲಿರುವ ಅಜ್ಜಿಮನೆಯಲ್ಲಿ. ತಮಿಳಿನಲ್ಲಿ  ರಮೇಶ್ ಅಂತಾ ಇನ್ನೊಬ್ಬ  ನಟರಿದ್ದರು. ಹಾಗಾಗಿ ನನ್ನ  ಹೆಸರಿನ ಹಿಂದೆ ‘ಅರವಿಂದ್’ ಸೇರ್ಪಡೆ ಆಯಿತು. ಅದು ಹೇಗೆ, ಯಾರಿಂದ ಸೇರ್ಪಡೆಯಾಯಿತು ಎಂದು ನನಗೂ ಸರಿಯಾಗಿ ಗೊತ್ತಿಲ್ಲ.  ಅಲ್ಲಿ ಅರವಿಂದ್ ಎಂದು ಜನಪ್ರಿಯನಾದೆ. ಕನ್ನಡದಲ್ಲಿ  ರಮೇಶ್ ಅರವಿಂದ್ ಎಂದೇ ಪರಿಚಿತನಾದೆ’ ಎಂದು ಮಾತು ರಮೇಶ್ ಮುಗಿಸಿದರು.

ಜನ್ಮ ಕುಂಡಲಿ
ಮೂಲ ಹೆಸರು-ಜಿ.ರಮೇಶ್
ಜನ್ಮ ದಿನಾಂಕ-ಸೆ.೧೦, ೧೯೬೪
ಮೂಲ ಸ್ಥಳ-ಬೆಂಗಳೂರು
ವಿದ್ಯಾಭ್ಯಾಸ-ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ಮೌನಗೀತೆ(ಜನಪ್ರಿಯವಾಗಿದ್ದು  ‘ಸುಂದರ ಸ್ವಪ್ನ’ ಚಿತ್ರದ ಮೂಲಕ)
ಇಷ್ಟದ  ಸಿನಿಮಾ-ಲಗಾನ್, ಭೂತಯ್ಯನ ಮಕ್ಕಳು
ಇಷ್ಟದ ನಟ/ನಟಿ-ಕಮಲ್‌ಹಾಸನ್


Read Full Post »

Rajendra Karanth

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪ
ಣೆಯೇ  ದೊರೆಯೇ?
ನವಿಲೂರು ಮನೆಯಿಂದ ನುಡಿಯೊಂದು ತಂದಿಹೆನು
ಬಳೆಯ ತೊಡಿಸುವುದಿಲ್ಲ  ನಿಮಗೆ…

ಹಣ್ಣು-ಹಣ್ಣು  ಗಡ್ಡದ, ಬಿಳಿ ತಲೆಕೂದಲಿನ,  ಬಗಲಿನಲ್ಲೊಂದು ಬಳೆಯ  ಗಂಟು ಹೊತ್ತಿರುವ ೯೫ರ ಪ್ರಾಯದ ಮುದುಕ ರಂಗ ಪ್ರವೇಶಿಸಿದ್ದಾನೆ.

‘ಯಾಕೆ ಹಂಗ್ ನೋಡೀರಿ? ಗುರ್ತು ಸಿಕ್ಕಲಿಲ್ಲವ್ರಾ-ಅದು ನಿಮ್ಮ  ತೆಪ್ಪಲ್ಲ  ಬುಡಿ…ಈ ಸಿನಿಮಾ ಟಿವಿಯವರು ನಂಗೆ ಫ್ಯಾನ್ಸಿ  ಡ್ರೆಸ್ ತೊಡಿಸಿ ಯಕ್ಷಗಾನದ ಕೋಡಂಗಿ ಹಂಗ್ ಮಾಡಿಬುಟ್ಟವ್ರೆ ಅಂತೀನಿ..ಬಡವ…ಊಂ ಈ ಬಡ ಬಳೆಗಾರ ಚೆನ್ನಯ್ಯ ಇದ್ದದ್ದೇ  ಹಿಂಗೆ ಸಾಮಿ…ಇಂಗ್ಲೆಂಡೂ, ಅಮೆರಿಕ, ದುಬಯ್ಯಿ…ಕನ್ನಡದ ಮಂದಿ ಇರೋ ಕಡೆಯಲ್ಲ  ನಮ್ಮ  ಊರು ಶಾನೇ ಫೆಮಸ್ಸು…

ಕವಿ ಕೆ.ಎಸ್ ನರಸಿಂಹ ಸ್ವಾಮಿಗಳ ಕಲ್ಪನೆಯ ಕೂಸಾದ ‘ಬಳೆಗಾರ ಚೆನ್ನಯ್ಯ’ ಪಟ ಪಟ ಮಾತನಾಡುತ್ತಿದ್ದರೆ, ಇಡೀ ರಂಗಭೂಮಿಯ ತುಂಬೆಲ್ಲ  ಚಪ್ಪಾಳೆಯ ಝೇಂಕಾರ ಮೊಳಗಿತ್ತು. ‘ಮೈಸೂರು ಮಲ್ಲಿಗೆ’ ಎಂಬ ಚೆಂದದ ನಾಟಕವೊಂದು ಸದ್ದು-ಗದ್ದಲವಿಲ್ಲದೇ ಆರಂಭವಾಗಿಬಿಟ್ಟಿತ್ತು.

ಮಲ್ಲಿಗೆಯ ಕವಿ ಅಂತಲೇ ನಾಡಿಗೆ ಚಿರಪರಿಚಿತರಾದ ಕೆ.ಎಸ್ ನರಸಿಂಹಸ್ವಾಮಿಗಳ  ಬದುಕು-ಬರಹದ ಮೇಳೈಕೆಯಿರುವ ನಾಟಕವದು. ಅಲ್ಲಿ  ನರಸಿಂಹ ಸ್ವಾಮಿಗಳ ಕವಿತೆಯ ಜತೆಯಲ್ಲೇ, ಬದುಕು ಬಿಚ್ಚಿಕೊಳ್ಳುತ್ತಾ  ಹೋಗುತ್ತದೆ. ಇಡೀ ನಾಟಕವನ್ನು  ಎರಡು ಘಟ್ಟಗಳನ್ನಾಗಿ ವಿಗಂಡಿಸಲಾಗಿದೆ. ಈ ನಾಟಕದ ಸೂತ್ರಧಾರನಾದ ಚೆನ್ನಯ್ಯ, ಕವಿಯ ಮರಿಮಗಳು ಮತ್ತು ಆಕೆಯ ಮೊಮ್ಮಕ್ಕಳನ್ನು ನವಿಲೂರಿನಲ್ಲಿ  ಭೇಟಿಯಾಗುತ್ತಾನೆ. ಅವರೆದುರು ಕವಿ ಬದುಕಿದ್ದ  ದಿನಗಳನ್ನು ನೆನಪಿಸಿಕೊಳ್ಳುತ್ತಾನೆ. ಕವಿಯ ಕುರಿತಾಗಿ ಕಥೆಯನ್ನು ಹೇಳಲು ಶುರುವಿಡುತ್ತಾನೆ. ಚೆನ್ನಯ್ಯನ ನೆನಪುಗಳೇ ಇಲ್ಲಿನ ಕಥಾವಸ್ತು. ‘ಮನೆಯೆದುರಿಗಿನ ಮಲ್ಲಿಗೆಯ ಮರವಿಲ್ಲ, ಸಿಹಿ ನೀರಿನ ಬಾವಿಯೂ ಇಲ್ಲ. ಆದರೆ ನವಿಲೂರಿನ ರಸ್ತೆ ಮಾತ್ರ ಬದಲಾಗಿಲ್ಲ! ನಾನು ಬಿದ್ದು  ಕಾಲು ಮುರಿದುಕೊಂಡಿದ್ದ  ರಸ್ತೆಯ ನಡುವಣ ಗುಂಡಿ ಮಾತ್ರ ೫೦ವರ್ಷಗಳ ನಂತರವೂ ಹಾಗೆ ಇದೆ’ ಎಂಬ ಚೆನ್ನಯ್ಯನ ಮಾತು ಪ್ರೇಕ್ಷಕರನ್ನು ನಗೆಗಡಲಲ್ಲಿ  ತೇಲಿಸುತ್ತದೆ. ಕುಡಿಯಲು ಪೆಪ್ಸಿ  ತಂದಿಡುವ ಮೊಮ್ಮಕ್ಕಳು…ಬೆಲ್ಲ , ನೀರು ಕೊಡ್ರವೌ  ಎಂಬ ಚೆನ್ನಯ್ಯನ ಉತ್ತರ…ಹಿಂದಿನ-ಇಂದಿನ ತರೆಮಾರುಗಳಲ್ಲಾದ ಪರಿವರ್ತನೆಯ ತುಲನೆಯಲ್ಲೇ  ಮೊದಲಾರ್ಧ ಕಳೆದು ಹೋಗುತ್ತದೆ.

ಇಲ್ಲಿ  ನರಸಿಂಹ ಸ್ವಾಮಿಗಳಿಗೆ ಹದಿನಾರರ ಪ್ರಾಯ. ಪ್ರೀತಿಯ ಹುಂಬುತನ. ನವಿಲೂರಿನ ಚೆಂದದ ಹುಡುಗಿ ಶಾನುಬೋಗರ ಮಗಳ ಮೇಲೆ ಕವನ ಕಟ್ಟುವ ತವಕ! ಕೊಂಚ ನಗು, ಸ್ವಲ್ಪ  ಸಂತಸ…ಬರಹಗಾರನೊಬ್ಬನ  ಹುಂಬುತನ, ಹುಚ್ಚುತನ…ಎಲ್ಲವೂ ಇಲ್ಲಿದೆ.

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ
ಚಿತ್ರದ ಹೂವಿತ್ತು-ಪದುಮಳು
ಹಾಕಿದ ಹೂವಿತ್ತು.

ಸೀತಮ್ಮನ್ನನ್ನು  ಮದುವೆಯಾದ ಕವಿ ಮಾವನ ಬಂದಾಗ ಹುಟ್ಟುವ ಈ ಚೆಂದದ ಕವಿತೆ ಪ್ರೇಕ್ಷಕರನ್ನು ಆನಂದದ ಅಲೆಯಲ್ಲಿ  ತೇಲಿಸುತ್ತಿರುವಾಗಲೇ ಮೊದಲಾರ್ಧದ ಮುಕ್ತಾಯಕ್ಕೆ ಬಂದಿರುತ್ತದೆ.

cennayya-2***

ನಾಟಕದ ನಿಜವಾದ ಕಥೆ ಆರಂಭವಾಗುವುದೇ ದ್ವಿತೀಯಾರ್ಧದಿಂದ. ಕವಿ, ಶಾನುಭೋಗರ ಮಗಳಾದ ಸೀತಮ್ಮನನ್ನು  ವರಿಸಿದ್ದಾರೆ. ಪುಟ್ಟ  ಬಾಡಿಗೆ ಮನೆಯಲ್ಲಿ  ಅರೆ ಹೊಟ್ಟೆ-ಬಟ್ಟೆಯೊಂದಿಗೆ ಸಂಸಾರದ ನೌಕೆ ಸಾಗುತ್ತಿದೆ. ಕವಿಯ ಮಗ, ಮಗಳು, ಹೆಂಡತಿ, ಸಂಸಾರ…ಇದರ ಸುತ್ತವೇ ಸಾಗುವ ಕಥೆ, ಕನಿಷ್ಠ  ಮೂರು ಸಲವಾದರೂ  ಪ್ರೇಕ್ಷಕನ ಕಣ್ಣಲ್ಲಿ  ನೀರು ಜೀನುಗುವಂತೆ ಮಾಡುತ್ತದೆ.

ಸ್ವಂತ ಅನ್ನುವುದು ಏನಿದೆ ಚೆನ್ನಯ್ಯ? ‘ನಾನು’ ಅನ್ನೋದೆ ಬಾಡಿಗೆ…ಎಂಬ ಕವಿಯ ಹತಾಶೆಯ ಮಾತು ಕರುಳನ್ನು ಕಿವಿಚುತ್ತದೆ. ಗಂಡನ ಮನೆಯಿಂದ ತವರು ಮನೆಗೆ ಬರುವ ಮೀನಾಳ ದೃಶ್ಯ, ರೈಲಿನ ಪಯಣದೊಂದಿಗೆ ಅಂತ್ಯ ಕಂಡಾಗ ಕೈಯಿ  ನಮಗೆ ಗೊತ್ತಿಲ್ಲದಂತೆ ಕರವಸ್ತ್ರವನ್ನು ತಡಕಾಡುತ್ತಿರುತ್ತದೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ  ಬರುವಳು ಹೊದ್ದು  ಮಲಗು ಮಗುವೇ ಜೋ ಜೋ ಜೋ…

ನಿನ್ನ ಮಗನ ಕುರಿತಾಗಿ ಬರೆದಿರುವ ಕವನ. ಈ ವಾರ ಸುಧಾದಲ್ಲಿ  ಬರತ್ತೆ…ಮಗ ಅನಂತುವಿನ ಬಳಿ ಕವಿ ಹೇಳುವ ಮಾತು, ಅಪ್ಪ-ಮಗನ ಶೀತಲ ಸಮರ, ಸಿಟ್ಟು  ಮಾಡಿಕೊಂಡು ಹೋಗುವ ಅನಂತುವಿನ ದೃಶ್ಯ ಮತ್ತೆ ಕಣ್ಣಲ್ಲಿ  ನೀರು ಬರಿಸುತ್ತದೆ.

‘ಶೆಟ್ರೆ ಒಂದೈದು ಸಾವಿರ ಬೇಕಿತ್ತು. ಈ ಕವನಗಳಿಗೆ ಅಷ್ಟು  ಬೆಲೆಯಿದೆಯಾ…’ಹೆಂಡತಿಯ ಔಷಗೋಸ್ಕರ ಕವನವನ್ನು ಮಾರಲು ಹೊರಟ ಕವಿಯ ಬದುಕಿನ ದೃಶ್ಯ ಎಲ್ಲರ ಕಣ್ಣಂಚಿನಲ್ಲೂ  ನೀರಿಳಿಸುತ್ತದೆ.   ಸಮಗ್ರ ಕಾವ್ಯವನ್ನು ೫,೦೦೦ ರೂ.ಗೆ ಮಾರಿ, ಶೆಟ್ಟ್ರೆ, ಸೂಕ್ತ ಸಮಯದಲ್ಲಿ  ಉಪಕಾರ ಮಾಡಿದ್ರಿ  ಅಂತೇಳಿ ಬರುವ ಕವಿ…

ಬರೆದಿದ್ದನ್ನು  ವಿಮರ್ಶೆ ಮಾಡಿ, ಹೀಗೆ ಬರೆಯಬೇಕಿತ್ತು ಅನ್ನುವವರು…ಎಂಬ ನರಸಿಂಹಸ್ವಾಮಿಗಳ ಮಾತಿನಲ್ಲಿ  ವಿಮರ್ಶಕರ ಕುರಿತಾಗಿನ ಸಿಟ್ಟಿದೆ. ಹೆಂಡತಿಯನ್ನೇ ನಿಜವಾದ ವಿಮರ್ಶಕಿ ಎಂದು ಹೇಳುವಲ್ಲಿ  ಪ್ರೀತಿಯ ಸೊಬಗಿದೆ. ನೋವಿನ ನಡುವೆಯೂ  ಪ್ರೇಕ್ಷಕರನ್ನು ಒಂಚೂರು ನಗಿಸುವ ಯತ್ನ ಖಂಡಿತವಾಗಿಯೂ ನಡೆದಿದೆ!

ಹೌದು, ಬೆಲೆ ಕಟ್ಟಲಾಗದ ಕವಿತೆಗಳನ್ನು ಬರೆದ ಮಲ್ಲಿಗೆಯ ಕವಿಯ ಬದುಕಿನ ಮತ್ತೊಂದು ಮುಖ ಅಲ್ಲಿದೆ. ಪೈಸೆ-ಪೈಸೆಗೂ  ಪರದಾಡಿದ, ದುಃಖವಾಗದೇ ಕವಿತೆ ಹುಟ್ಟತ್ತಾ  ಎನ್ನುತ್ತಲೇ  ನೋವನ್ನು  ನುಂಗಿಕೊಂಡ, ಬಾಡಿಗೆ ಒಂಚೂರು ಹೆಚ್ಚಾಯಿತೆಂದಾಗ ಮನೆಗಳನ್ನು ಬದಲಾಯಿಸುತ್ತಲೇ ಕಾಲ ಕಳೆದ ಕೆ.ಎಸ್.ನ ಬದುಕಿನಲ್ಲಿದ್ದ  ವ್ಯಥೆಯನ್ನು ಚೆಂದವಾಗಿ ಸೆರೆಹಿಡಿದವರು ರಾಜೇಂದ್ರ ಕಾರಂತರು.

ದೀಪವೂ ನಿನ್ನದೆ, ಗಾಳಿಯೂ ನಿನ್ನದೇ
ಆರದಿರಲಿ ಬೆಳಕು…

ನನ್ನ  ಅತ್ಯಂತ ಇಷ್ಟದ ಹಾಡು ರಂಗದಲ್ಲಿ  ಕೇಳಿಸುವಾಗ, ನರಸಿಂಹ ಸ್ವಾಮಿಗಳ ತೊಡೆಯ ಮೇಲೆ ಪತ್ನಿ ಸೀತಮ್ಮ  ಕೊನೆಯುಸಿರೆಳೆದಿರುತ್ತಾರೆ. ನಾಟಕ ಅಂತ್ಯಕ್ಕೆ ಬಂದು ನಿಲ್ಲುತ್ತದೆ.  ಇಡೀ ನಾಟಕ, ಮತ್ತೆ-ಮತ್ತೆ  ನೋಡಬೇಕು ಅನ್ನಿಸುವಷ್ಟರ  ಮಟ್ಟಿಗೆ ಗೆಲುವು ಸಾಸಿದೆ. ‘ನೀವು ನೋಡಿ ಬನ್ನಿ’ ಅಂತಾ ನಮ್ಮ ಗೆಳೆಯರನ್ನು ಒತ್ತಾಯ ಮಾಡಿ ಕಳುಹಿಸುವಷ್ಟರ  ಮಟ್ಟಿಗೆ ಸೊಗಸಾಗಿದೆ. ನಾನಂತೂ, ನನ್ನ ಸುಮಾರು ಗೆಳೆಯರನ್ನು ಕಳುಹಿಸಿದ್ದೇನೆ. ನೀವು ಹೋಗಿ ಬರುವಿರಿ ತಾನೇ?!

ಡಾ. ಬಿ.ವಿ ರಾಜಾರಾಮ್ ನೇತೃತ್ವದ ಕಲಾಗಂಗೋತ್ರಿ ತಂಡ ‘ಮೈಸೂರು ಮಲ್ಲಿಗೆಯ’ ೧೦೦ನೇ ಪ್ರದರ್ಶನದ ಹೊಸ್ತಿಲಿನಲ್ಲಿರುವಾಗಲೇ,  ದ.ರಾ ಬೇಂದ್ರೆ  ಬದುಕು-ಬರಹ ಆಧಾರಿತ ‘ಗಂಗಾವತರಣ’ಕ್ಕೆ ಮಿತ್ರ ರಾಜೇಂದ್ರ ಕಾರಂತರು ಸಜ್ಜಾಗಿದ್ದಾರೆ.

ಘಮ ಘಮಿಸ್ತಾವ ಮಲ್ಲಿಗೆ
ನೀ ಹೊರಟ್ಟಿದ್ದೆಲಿಗೆ…

ಬೇಂದ್ರೆ ಬರೆದ ಮಲ್ಲಿಗೆ ಜಾಡು ಹಿಡಿದು, ಹಿಂದಿನ ಕವಿಗಳನ್ನು  ಮತ್ತೆ ಮತ್ತೆ  ನೆನಪಿಸಲು ಹೊರಟಿರುವ ಕಾರಂತರು ಗೆಲ್ಲುತ್ತಾರೆ ಎಂಬುದರಲ್ಲಿ  ಯಾವುದೇ ಅನುಮಾನವಿಲ್ಲವಾದರೂ, ಅವರ ಯತ್ನಕ್ಕೆ ಜಯಸಿಗಲಿ ಎಂದು ಹಾರೈಸುವುದು ನಮ್ಮ ಕರ್ತವ್ಯ ಅಲ್ವಾ?

(ಮೈಸೂರು ಮಲ್ಲಿಗೆಯ ಪ್ರದರ್ಶನ ಯಾವತ್ತು, ಎಲ್ಲಿದೆ ಎಂಬುದನ್ನು ತಿಳಿಯಲು ಡಾ.ಬಿ.ವಿ ರಾಜಾರಾಂ-೯೪೪೮೦೬೯೬೬೭ ಅವರನ್ನು ಸಂಪರ್ಕಿಸಬಹುದು)

Read Full Post »