Feeds:
ಲೇಖನಗಳು
ಟಿಪ್ಪಣಿಗಳು

Archive for ಫೆಬ್ರವರಿ, 2013

ಪೇಪರ್‌ನಲ್ಲಿ ಇದ್ದವರೆಲ್ಲ ಚಾನೆಲ್‌ಗಳಿಗೆ ಹೋಗಿದ್ದಿರಲ್ಲ. ಅಲ್ಲಿ ನಿಮಗೇನು ಕೆಲಸ? ಹಾಗಂತ ಎದುರಿಗೆ ಸಿಕ್ಕ ತುಂಬಾ ಜನ ಕೇಳುತ್ತಿರುತ್ತಾರೆ. ನಾನು ದೃಶ್ಯ ಮಾಧ್ಯಮ ಸೇರುವ ಮೊದಲು ಇದೇ ಪ್ರಶ್ನೆಯನ್ನು ಪತ್ರಿಕೆಯಿಂದ ವಲಸೆ ಹೋದ ವಿಕಾಸ್, ಸುಧ್ವನ ಮೊದಲಾದ ಗೆಳೆಯರಿಗೆ ಕೇಳಿದ್ದೆ. ಹಾಗೆ ನೋಡಿದರೆ ದೃಶ್ಯ ಮಾಧ್ಯಮ ಅನ್ನುವುದು ನಿಂತಿರುವುದೇ ಬರವಣಿಗೆಯಲ್ಲಿ. ಪತ್ರಿಕೆಗೆ ಬರೆದಿದ್ದಕ್ಕಿಂತ ಹೆಚ್ಚು ನಾವಿಲ್ಲ ಬರೆಯುತ್ತೇವೆ. ಆದರೆ ಇಲ್ಲಿನ ಬರವಣಿಗೆಯಿಂದ ಪತ್ರಿಕೆಯಷ್ಟು ಗುರತಿಸಿಕೊಳ್ಳಲು ಸಾಧ್ಯವಿಲ್ಲ.

ಸುದ್ದಿ ವಾಹಿನಿಗಳಿಗೆ ಬಂದರೆ ಇಲ್ಲಿನ ಹೆಚ್ಚು ಕಾರ್ಯಕ್ರಮಗಳು ಸ್ಕ್ರಿಪ್ಟ್ ಆಧಾರಿತವಾಗಿರುತ್ತವೆ. ಒಂದು ಗಂಟೆಗೊಮ್ಮೆ ಬರುವ ಸುದ್ದಿಗಳನ್ನು ಸುದ್ದಿ ವಾಚಕರಿಗೆ ಬರೆದುಕೊಡಲಾಗಿರುತ್ತದೆ. ಹೆಚ್ಚಿನ ಸುದ್ದಿ ವಾಚಕರು ಬರೆದು ಕೊಟ್ಟಿದ್ದನ್ನೇ ಓದುತ್ತಾರೆ ಮತ್ತು ಓದಬೇಕು ಎಂಬುದು ಇಲ್ಲಿನ ನಿಯಮ. ಇದರ ಹೊರತಾಗಿ ನಡೆಯುವ ಚರ್ಚೆಗಳು ಅಥವಾ ಲೈವ್ ಡಿಸ್ಕಷನ್ಸ್ ಎಂದು ಏನು ಕರೆಯುತ್ತೇವೊ, ಅದಕ್ಕೆ ಮಾತ್ರ ವಾರ್ತಾ ವಾಚಕರೇ ಸಿದ್ಧತೆ ನಡೆಸಿ ಪಾಯಿಂಟ್‌ಗಳನ್ನು ಬರೆದುಕೊಂಡಿರುತ್ತಾರೆ. ಇನ್ನೂ ಕಾರ್ಯಕ್ರಮ ವಿಭಾಗದಿಂದ ಪ್ರಸಾರವಾಗುವ ಅರ್ಧ ಗಂಟೆ/ಒಂದು ಗಂಟೆಯ ಹೆಚ್ಚಿನ ಕಾರ್ಯಕ್ರಮಗಳು ಬರವಣಿಗೆ ಆಧರಿಸಿ ಇರುತ್ತದೆ. ಬರಹದ ಮೇಲೆ ಇಡೀ ಕಾರ್ಯಕ್ರಮ ವಿನ್ಯಾಸಗೊಂಡಿರುತ್ತದೆ. ಆದರೆ ಎಲ್ಲೂ ಬರಹಗಾರ ಕಾಣಿಸಿಕೊಳ್ಳುವುದಿಲ್ಲ. ಎಂಡ್ ಟೈಟಲ್‌ನಲ್ಲಿ ಬರಹಗಾರನಿಗೆ ಕಾಣಿಸಿಕೊಳ್ಳುವ ಅವಕಾಶವಿದ್ದರೂ ನಾನಂತೂ ಹೆಚ್ಚಿನ ಕಾರ್ಯಕ್ರಮಗಳಿಗೆ ಎಂಡ್ ಟೈಟಲ್ ಹಾಕಿಸುವುದಿಲ್ಲ.

ನಾನು ವೈಯಕ್ತಿಕವಾಗಿ ದೃಶ್ಯ ಮಾಧ್ಯಮದ ಬರವಣಿಗೆ ರೂಪ ನೋಡಿದ್ದು ಸೇತುರಾಂ ಮೂಲಕ. ಅವರು ‘ಅನಾವರಣ’ ಧಾರವಾಹಿ ಮಾಡುವ ಮೊದಲು ಮಂಥನದ ಸುಮಾರು ೧೦ ಸಂಚಿಕೆಗಳ ಸ್ಕ್ರಿಪ್ಟ್‌ನ್ನು ನನಗೆ ಕೊಟ್ಟಿದ್ದರು. ಆವತ್ತು ಅದರ ತಲೆಬುಡ ನನಗೆ ಅರ್ಥವಾಗಿರಲಿಲ್ಲ! ಯಾಕಂದರೆ ಪೇಪರ್‌ನ ಬರವಣಿಗೆ ಸ್ವರೂಪಕ್ಕೂ, ದೃಶ್ಯ ಮಾಧ್ಯಮದ ಬರವಣಿಗೆ ಸ್ವರೂಪಕ್ಕೂ ಬಹಳ ವ್ಯತ್ಯಾಸವಿದೆ. ಅದನ್ನು ಮತ್ತೆ ವಿಗಂಡಿಸಿದರೆ ಮನರಂಜನೆ ವಾಹಿನಿಗಳ ಬರವಣಿಗೆಗೂ, ಸುದ್ದಿ ವಾಹಿನಗಳ ಬರವಣಿಗೆಗೂ ತುಂಬಾ ವ್ಯತ್ಯಾಸವಿದೆ. ಸಿರಿಯಲ್‌ಗಳು ನಿಂತಿರುವುದೇ ಸ್ಪ್ರಿಪ್ಟ್ ಮೇಲೆ ಎಂದು ಎಲ್ಲ ವಾಹಿನಿಗಳೂ ಹೇಳಿಕೊಳ್ಳುತ್ತವೆ ಎಂಬುದು ನಿಜ. ಆದರೆ ದುರಂತವೆಂಬಂತೆ ಆ ಗೌರವ ಯಾವತ್ತೂ ಬರಹಗಾರನಿಗೆ ದಕ್ಕುವುದಿಲ್ಲ! ಪರಮೇಶ್ವರ್ ಗುಂಡ್ಕಲ್, ವಿನಾಯಕ ತದ್ದಲಸೆಯಂಥ ಒಂದಷ್ಟು ಕಥೆಗಾರರು, ಬರಹದ ಮೌಲ್ಯ ಗೊತ್ತಿದವರೂ ಇವತ್ತು ಮನರಂಜನೆ ವಾಹಿನಿ ಒಳಹೊಕ್ಕಿರುವುದರಿಂದ ತಕ್ಕ ಮಟ್ಟಿಗೆ ಇವತ್ತು ಮನರಂಜನೆ ವಾಹಿನಿಗಳು ಬರಹಗಾರರನ್ನು ಗುರುತಿಸುತ್ತಿವೆ.

ದೃಶ್ಯ ಮಾಧ್ಯಮದ ದೊಡ್ಡ ದುರಂತವೆಂದರೆ ಇದು ಒಬ್ಬರಿಂದ ನಿಯಂತ್ರಣಗೊಳಿಸಲು ಸಾಧ್ಯವಿಲ್ಲ. ಉದಾಹರಣೆಗೆ ಒಂದು ಧಾರಾವಾಹಿಗೆ ಒಂದು ಅದ್ಭುತ ಕಥೆಯಿದೆ. ಡೈಲಾಗ್ ಅದ್ಭುತವಿದೆ. ಆದರೆ ನಾಯಕಿ ಪಾತ್ರಕ್ಕೆ ಆಯ್ಕೆಯಾದವಳಿಗೆ ಆ ಮಟ್ಟಕ್ಕೆ ಅಭಿನಯಿಸಲು ಬರುವುದಿಲ್ಲ. ಆಗ ಬರಹಗಾರ ಬರೆದಿದ್ದೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಸರಿ. ನನ್ನ ಈ ವಾದವನ್ನು ಕೆಲವರು ಒಪ್ಪುವುದಿಲ್ಲ. ನಿಮ್ಮ ತಪ್ಪು ಸಮರ್ಥಿಸಿಕೊಳ್ಳಲು ನುಣುಚಿಕೊಳ್ಳುವಿರಿ ಎನ್ನುತ್ತಾರೆ. ಆದರೆ ಸಿರಿಯಲ್ ಅಥವ ಒಂದು ಅರ್ಧ ಗಂಟೆ ಕಾರ್ಯಕ್ರಮದಲ್ಲಿ ‘ಮೇಕಿಂಗ್ ಅನ್ನುವುದು’ ಅತ್ಯಂತ ಮಹತ್ವದ್ದು.

ಅದ್ಭುತವಾದ ಅಡುಗೆ ಸಿದ್ಧವಿದೆ. ಆದರೆ ಬಡಿಸುವವನ ಮೈ-ಕೈ ಎಲ್ಲ ಗಲೀಜಾಗಿದೆ. ಅಡುಗೆಯ ಘಮ ಮೂಗಿಗೆ ಬಡಿಯುತ್ತಿದ್ದರೂ ನಮಗೆ ತಿನ್ನಲು ಒಂಥರ ವಾಕರಿಕೆ ಅಲ್ವಾ? ದೃಶ್ಯ ಮಾಧ್ಯಮ ಕೂಡ ಒಂಥರ ಹಾಗೆ. ಕೆಟ್ಟ ಕಥೆ, ಕೆಟ್ಟ ಡೈಲಾಗ್ ಆದ್ರೆ ಅದ್ಭುತ ಪಾತ್ರವರ್ಗ. ಆಗಲೂ ಒಂದು ಸಿರಿಯಲ್ ಕ್ಲಿಕ್ ಆಗುತ್ತದೆ. ಯಾಕಂದರೆ ಒಬ್ಬ ಸಾಮಾನ್ಯ ನೋಡುಗನ ಮನಸ್ಸಿನಲ್ಲಿ ಅಚ್ಚಿಳಿಯದೆ ಉಳಿಯುವುದು ಪಾತ್ರಗಳು ಮತ್ತು ಕಥೆ ಮಾತ್ರ. ಅದ್ಭುತವಾಗಿದ್ದರೆ ಕೆಲವೊಮ್ಮೆ ಪಾತ್ರಗಳ ಆಡುವ ಮಾತು ಕೂಡ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಪಾತ್ರಧಾರಿಗಳು, ಕ್ಯಾಮೆರ, ವಿಷ್ಯುವಲ್ ಎಡಿಟಿಂಗ್, ನಿರ್ದೇಶನ ಎಲ್ಲವೂ ಸೇರಿ ಒಂದು ಕಾರ್ಯಕ್ರಮ/ಧಾರವಾಹಿ/ಸಿನಿಮಾ ಸಿದ್ಧಗೊಳ್ಳುವುದು. ಯೋಗರಾಜ್ ಭಟ್ಟರಂಥ ನಿರ್ದೇಶಕರು, ಜಯಂತ್ ಕಾಯ್ಕಿಣಿಯಂಥ ಸಾಹಿತಿಗಳು ಇದ್ದಾಗ ನಟ/ನಟಿ, ಕಥೆಯನ್ನು ಹೊರತಾಗಿ ಒಂದು ಹಂತಕ್ಕೆ ಅದ್ಭುತ ಎನ್ನಿಸುವ ಒಂದು ಸಿನಿಮಾ ಹೊರಬರುತ್ತದೆ. ಅದು ಅವರ ವೈಯಕ್ತಿಕ ತಾಕತ್ತು ಅಷ್ಟೆ. ಅಮೀರ್ ಖಾನ್ ಏಕಾಂಗಿಯಾಗಿ ಒಂದು ಸಿನಿಮಾ ಗೆಲ್ಲಿಸಬಹುದು. ಅದು ಆತನ ವೈಯಕ್ತಿಕ ತಾಕತ್ತು. ಆದರೆ ಇಡೀ ದೃಶ್ಯ ಮಾಧ್ಯಮ ಅನ್ನುವುದು ಒಂದು ತಂಡದ ಕೆಲಸ. ಇಲ್ಲಿ ಎಲ್ಲವೂ ಸಮತೂಕದಲ್ಲಿ ಹೋಗಬೇಕು. ಇದು ದೃಶ್ಯ ಮಾಧ್ಯಮದ ಸವಾಲು ಮತ್ತು ಅದ್ಭುತ ಎರಡೂ ಹೌದು.

ಪತ್ರಿಕೆಯಲ್ಲಿ ನಾನೊಂದು ಕಥೆ ಬರೆದರೆ ಅದಕ್ಕೆ ನಾನೇ ಸೂತ್ರಧಾರ. ಅದರ ಚೆನ್ನಾಗಿ ಬಂದರೂ, ಕೆಟ್ಟದಾಗಿ ಬಂದರೂ ಎರಡಕ್ಕೂ ನಾನೇ ನೇರ ಹೊಣೆ. ಆದರೆ ದೃಶ್ಯ ಮಾಧ್ಯಮದಲ್ಲಿ ಹಾಗಲ್ಲ. ಇಲ್ಲಿ ಎಲ್ಲದಕ್ಕೂ ಎಲ್ಲರೂ ಹೊಣೆ. ದುರಂತವೆಂದರೆ ಒಬ್ಬರ ತಲೆ ಮೇಲೆ ಮತ್ತೊಬ್ಬರು ಗೂಬೆ ಕೂರಿಸಿ ನುಣುಚಿಕೊಳ್ಳಲು ದೃಶ್ಯ ಮಾಧ್ಯಮ ಉತ್ತಮ ವೇದಿಕೆಯಾಗಿಬಿಟ್ಟಿದೆ. ಅದೇ ಕಾರಣಕ್ಕೆ ಕೆಲವು ನಿರ್ದೇಶಕರು ಅವರೇ ಸ್ವಂತವಾಗಿ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದುಕೊಳ್ಳುವುದು.

ನಾನು ವೈಯಕ್ತಿಕವಾಗಿ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಾಗ ಅನೇಕರು ‘ಪೇಪರ್‌ಗೆ ಬರೆದಂಗೆ ಇಲ್ಲಿ ಬರೆಯುತ್ತೀಯಾ’ ಅಂತ ಹಿಯ್ಯಾಳಿಸಿದರು. ನಾನು ತೀರಾ ತಲೆಕೆಡಿಸಕೊಳ್ಳಲಿಲ್ಲ. ಕಾರಣವಿಷ್ಟೆ. ಹಾಗೆ ಹೇಳಿವದರು ಎಷ್ಟು ಬರೆದಿದ್ದಾರೆ ಎಂಬುದು ಬಲು ಮುಖ್ಯವಾಗುತ್ತದೆ. ಪುಗ್ಸಟ್ಟೆ ಸಲಹೆ ಕೊಡುವವರು, ಆಡಿಕೊಳ್ಳುವವರಿಗೆ ಬರವಣಿಗೆಯ ಮೌಲ್ಯ ಗೊತ್ತಾಗಲು ಸಾಧ್ಯವಿಲ್ಲ. ಒಬ್ಬ ಬರಹಗಾರನಿಗೆ ಮಾತ್ರ ಬರವಣಿಗೆಯ ಮೌಲ್ಯ ಗೊತ್ತಾಗಲು ಸಾಧ್ಯ. ‘ಓರ್ವ ಬರೆಯುವ ಸಂಪಾದಕರಿದ್ದರೆ ಪತ್ರಿಕೆ ಅದ್ಭುತವಾಗಿ ಮೂಡಿ ಬರಲು’ ಹಾಗಂತ ನಾನು ಸದಾ ಹೇಳುತ್ತಿರುತ್ತೇನೆ. ಕಾರಣವಿಷ್ಟೆ, ಬರೆಯುವ ಸಂಪಾದಕರು ಸುದ್ದಿಮನೆಯೊಳಗಿರುವ ಬರಹಗಾರರನ್ನು ಗುರುತಿಸಿ ಬರೆಸಬಲ್ಲರು. ಒಂದು ಮುಕ್ತ ಚರ್ಚೆಗೆ ವೇದಿಕೆ ಒದಗಿಸಬಲ್ಲರು.

ಚೂರು ವೈಯಕ್ತಿಕ ವಿಚಾರಕ್ಕೆ ಬಂದರೆ ವಿಜಯ ಕರ್ನಾಟಕದ ಸೇರಿದ ಆರಂಭದ ದಿನಗಳಲ್ಲಿ ನನ್ನ ಹೆಚ್ಚಿನ ಬರಹಗಳು ಕೆಲವರಿಂದ ತಿರಸ್ಕೃತಗೊಳ್ಳುತ್ತಿದ್ದವು. ಕೊನೆಗೆ ಆವತ್ತು ಸಂಪಾದಕ ಸ್ಥಾನದಲ್ಲಿ ಕುಳಿತ ವಿಶ್ವೇಶ್ವರ ಭಟ್ಟರ ಬಳಿ ನೇರವಾಗಿ ನನ್ನ ಬರಹಗಳನ್ನು ತೆಗೆದುಕೊಂಡು ಹೋದೆ. ಬಹುಶಃ ಆವತ್ತಿನಿಂದ ಇವತ್ತಿನವರೆಗೂ ನಾನು ನೇರವಾಗಿ ಸಂಪಾದಕರಿಗೆ ನನ್ನ ಬರಹ ಕಳಿಸುತ್ತೇನೆ ಮತ್ತು ತಿರಸ್ಕೃತಗೊಳ್ಳುವುದು ತೀರಾ ವಿರಳ. ಯಾಕೆಂದರೆ ಭಟ್ಟರು ಬರಹದ ದೃಷ್ಟಿಕೋನ ನೋಡುವ ಬಗೆ ನಿಜಕ್ಕೂ ಅದ್ಭುತ.

ಎಲ್ಲರೂ ಮಡೆಸ್ನಾನದ ವಿರುದ್ಧ ಬರೆದಾಗ ನಾನು ಮಡೆಸ್ನಾನ ಸಮರ್ಥಿಸಿ ಬರೆದೆ. ಎಲ್ಲರೂ ವಿರುದ್ಧ ಮಾತನಾಡುತ್ತಿದ್ದಾರೆ, ನಾನೊಬ್ಬ ಪರ ಮಾತನಾಡಿದರೆ ನನಗೆ ಹೆಚ್ಚು ಪ್ರಚಾರ ಸಿಗಬಹುದು ಎನ್ನುವ ದುರುದ್ದೇಶದಿಂದ ಅದನ್ನು ಬರೆದಿರಲಿಲ್ಲ. ಬದಲಾಗಿ ಅಲ್ಲಿನ ಅನೇಕ ಸ್ಥಳೀಯ ಮಿತ್ರ ಅಭಿಪ್ರಾಯ ಒಟ್ಟಿಗೆ ಸೇರಿಸಿ ಬರೆದೆ. ಒಂದು ವಿಚಾರಕ್ಕೆ ಪರ ಮತ್ತು ವಿರೋಧ ಎಂಬ ೨ ಮುಖಗಳು. ಭಟ್ಟರ ಮುಂದೆ ಬರಹವನ್ನಿಟ್ಟು ನಾನು ಹೇಳಿದ್ದು ಇದೇ ಮಾತನ್ನು. ‘ಏನಾದ್ರೂ ಆಗಲಿ ಧೈರ್ಯ ಮಾಡಿ ಇದೊಂದು ಮುಖವನ್ನು ಪ್ರಕಟಿಸೋಣ’ ಎಂದರು. ನೀವೂ ನಂಬುತ್ತೀರೋ, ಬಿಡುತ್ತಿರೊ ಗೊತ್ತಿಲ್ಲ, ಆ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ನಿಜಕ್ಕೂ ನನ್ನ ಪಾಲಿಗೆ ದಾಖಲೆ. ಬಹುಶಃ ಬಹುತೇಕ ಪತ್ರಿಕೆಗಳು ಮಡೆಸ್ನಾನದ ಪರವಾದ ಬರಹ ಪ್ರಕಟಿಸಲು ಹಿಂಜರಿಯುತ್ತಿದ್ದವು. ಇಲ್ಲಿ ಪರ, ವಿರೋಧದ ಪ್ರಶ್ನೆಯಲ್ಲ. ಒಂದು ವಿಚಾರದ ಇನ್ನೊಂದು ಮುಖವನ್ನು ಪರಿಚಯಿಸುವ ಅಗತ್ಯವಿತ್ತು.

ಈ ಕೆಲಸ ದೃಶ್ಯ ಮಾಧ್ಯಮದಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಒಬ್ಬನೇ ಕುಳಿತು ಏನು ಮಾಡಲು ಸಾಧ್ಯವಿಲ್ಲ. ಬರಹಗಾರನಿಗೂ ಪಾತ್ರವರ್ಗಕ್ಕೂ ಪರಿಚಯವೇ ಇರುವುದಿಲ್ಲ. ನಿರ್ದೇಶಕರೊಬ್ಬರಿಗೆ ಬಿಟ್ಟು ಬೇರೆಯವರಿಗೆ ಬರೆಯುತ್ತಿರುವವರು ಯಾರು ಎಂಬುದೇ ಗೊತ್ತಿರುವುದಿಲ್ಲ. ಹಾಗಂತ ಇಲ್ಲಿ ಬರಹಗಾರನೇ ಶ್ರೇಷ್ಠ, ಉಳಿದವರು ನಿಕೃಷ್ಟ ಎಂದು ವಾದಿಸುತ್ತಿಲ್ಲ. ಇಲ್ಲಿ ಎಲ್ಲರೂ ಮುಖ್ಯ. ಅಹಂ ಬಂತು ಎಂದರೆ ಇಡೀ ಮಾಧ್ಯಮ ಹಾಳಾಗುತ್ತದೆ. ಇದೇ ಕಾರಣಕ್ಕೆ ಓರ್ವ ನಿಜವಾದ ಬರಹಗಾರ, ಬರಹವನ್ನು ಪ್ರೀತಿಸುವವನು ದೃಶ್ಯ ಮಾಧ್ಯಮಕ್ಕೆ ಬರೆಯಲು ಹಿಂದೇಟು ಹಾಕುತ್ತಾನೆ. ಹಾಗಾಗಿಯೇ ಬರಹಗಾರರಿಗೆ ದೃಶ್ಯ ಮಾಧ್ಯಮದಲ್ಲಿ ಬೇಡಿಕೆ ಹೆಚ್ಚಿದೆ. ಸ್ಕ್ರಿಪ್ಟ್ ಬರೆಯುವವರು ಸಂಖ್ಯೆ ಕಡಿಮೆಯಿದೆ. ಇದು ನನ್ನ ವೈಯಕ್ತಿಕ ಅನಿಸಿಕೆಯಷ್ಟೆ. ಚರ್ಚೆಗೆ ಅವಕಾಶವಿದೆ.

Read Full Post »

೬ ತಿಂಗಳ ಹಿಂದೆ ಮೊಬೈಲ್‌ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ಸಂದೇಶದ ಸಾಲು ಹೀಗಿತ್ತು. “ಸದನದಲ್ಲಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆಯ ಕಾವು ತಣಿದಿದೆ. ಹಾಗಂತ ಮಾಧ್ಯಮಗಳಲ್ಲಿ ಆ ದೃಶ್ಯವನ್ನು ಮರುಪ್ರಸಾರ ಮಾಡುವುದು ನಿಂತಿಲ್ಲ. ನಮ್ಮ ದೃಶ್ಯಮಾಧ್ಯಮಗಳು ಸವದಿ ವೀಕ್ಷಿಸಿದ ೨ ನಿಮಿಷದ ವೀಡಿಯೊವನ್ನು ಕಾಲು-ಬಾಲ ಸೇರಿಸಿ ರಾಜ್ಯದ ೧೨ ಕೋಟಿ ಜನತೆಗೆ, ೧೨ ತಾಸುಗಳ ಕಾಲ ಉಣಬಡಿಸಿವೆ”. ಘಟನೆಯನ್ನು ಮಾಧ್ಯಮಗಳು ಬಿತ್ತರಿಸಿದ ರೀತಿ ಕುರಿತು ಚರ್ಚೆಯಾಗಿತ್ತು. ರಾಷ್ಟ್ರೀಯ ವಾಹಿನಿಗಳೂ ವೀಡಿಯೊವನ್ನು ಸಂಪೂರ್ಣವಾಗಿ ಬ್ಲರ್ ಮಾಡಿ ಬಿತ್ತರಿಸಿದವು. ಆದರೆ ನಮ್ಮ ಕನ್ನಡದ ಬಹುತೇಕ ವಾಹಿನಿಗಳು ಸವದಿ ನೋಡಿದ ವೀಡಿಯೊದ ಮೂಲ ತುಣಕನ್ನು ಪ್ರದರ್ಶಿಸಿ ಸಾಮರ್ಥ್ಯ ಮೆರೆದವು. ಸವದಿ, ನೋಡಿದ್ದು, ಹೇಳಿದ್ದು, ನೋಡದೇ ಉಳಿದ್ದಿದ್ದು ಎಲ್ಲವನ್ನೂ ಬಿತ್ತರಿಸಿದವು!

ಗೆಳೆಯ ಶ್ರೀವತ್ಸ ಜೋಷಿಯವರು ಬಹಳ ಬೇಸರದಿಂದ ಒಂದು ಸಂದೇಶ ಕಳುಹಿಸಿದ್ದರು. ‘ನಮ್ಮ ಕನ್ನಡದ ಸುದ್ದಿವಾಹಿನಿಗಳು ಮಾತ್ರ ಹೀಗಾ? ಅಥವಾ ಬೇರೆ ಭಾಷೆಯ ಸುದ್ದಿವಾಹಿನಿಗಳು ಕೂಡ ಹೀಗೇನಾ?’ ಇದು ಜೋಷಿಯವರ ಪ್ರಶ್ನೆ. ಟಿಆರ್‌ಪಿ ಬೆನ್ನತ್ತಿ ನೋಡುಗನನ್ನು ಮರೆತ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ತೆಲುಗು ಸುದ್ದಿವಾಹಿನಿಗಳು. ನಂತರದ ಸ್ಥಾನ ಕನ್ನಡಕ್ಕೆ! ಇದಕ್ಕೂ ಒಂದು ಕಾರಣವಿದೆ. ಈ ಭಾಷೆಗಳಲ್ಲಿ ಅಸ್ತಿತ್ವದಲ್ಲಿರುವ ಸುದ್ದಿವಾಹಿನಿಗಳು ಮತ್ತು ಅವುಗಳ ನಡುವಿನ ಪೈಪೋಟಿ ಈ ಎಲ್ಲ ದುರಂತಗಳಿಗೂ ಪ್ರಮುಖ ಕಾರಣ.

ಸಾಮಾಜಿಕ ಜವಬ್ದಾರಿ ಹೊತ್ತಿರುವ ಸಾರ್ವಜನಿಕ ವಾಹಿನಿಗಳು ಈ ಪರಿ ಕೀಳುಮಟ್ಟಕ್ಕೆ ಇಳಿಯಬಹುದಾ ಎಂದರೆ, ತಕ್ಷಣ ವಾಹಿನಿಗಳಿಂದ ಬರುವ ಉತ್ತರ ಅಜಿತ್ ಬರೆದಂತೆ ಟಿಆರ್‌ಪಿ. ಅಜಿತ್ ಅವರು ವಿವರಿಸಿದಂತೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅನ್ನುವ ಮಾಯಾಜಿಂಕೆ. ಇದು ಇಡೀ ದೃಶ್ಯಮಾಧ್ಯಮವನ್ನು ಆಳುತ್ತಿದೆ. ಎಷ್ಟು ಜನ ನಮ್ಮ ವಾಹಿನಿ ನೋಡಿದರು ಎಂಬುದನ್ನು ಸೂಚಿಸುವ ಈ ರೇಟಿಂಗ್, ಜಾಹೀರಾತು ದೃಷ್ಟಿಯಿಂದ ವಾಹಿನಿಗಳಿಗೆ ಅಗತ್ಯ. ಹೆಚ್ಚು ರೇಟಿಂಗ್ ಇರುವ ವಾಹಿನಿಗೆ ಹೆಚ್ಚು ಜಾಹೀರಾತು ಸಹಜವಾಗಿಯೇ ಬರುತ್ತೆ. ಹೀಗಾಗಿಯೇ ಪ್ರತಿ ವಾಹಿನಿ ನಂಬರ್ ಒನ್ ಪಟ್ಟಕ್ಕಾಗಿ ಗುದ್ದಾಟ ನಡೆಸುವುದು. ಇವತ್ತು ಮಾಧ್ಯಮ ಉದ್ಯಮವಾಗಿದೆ. ಇಲ್ಲಿ ಬರುವ ಲಾಭವನ್ನೇ ಮಾಲೀಕರು ಕೇಳುತ್ತಾರೆ. ಆದರ್ಶ, ಸಮಾಜ ಸೇವೆ…ಇವೆಲ್ಲವೂ ನಂತರದ ಮಾತು.

ಹಾಗೆ ನೋಡಿದ್ರೆ ಕಳೆದ ಒಂದು ವರ್ಷದಿಂದ ಸುದ್ದಿವಾಹಿನಿಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅದೆಷ್ಟೆ ಹರಸಾಹಸ ಮಾಡಿದರೂ ರಿಮೋಟ್‌ನ್ನು ಒಂದು ಚಾನೆಲ್‌ಗೆ ಸ್ಥಿರಗೊಳಿಸಲು ಯಾವ ವಾಹಿನಿಯಿಂದಲೂ ಸಾಧ್ಯವಾಗುತ್ತಿಲ್ಲ. ಸುದ್ದಿವಾಹಿನಿ ಮತ್ತು ಮನರಂಜನೆ ವಾಹಿನಿಗಳಿಗೆ ಬಹಳ ವ್ಯತ್ಯಾಸವಿದೆ. ಮನರಂಜನ ವಾಹಿನಿಗಳನ್ನು ಜಿಇಸಿ ಎನ್ನುತ್ತೇವೆ. ಇವು ಟಿಆರ್‌ಪಿ ವಿಷಯದಲ್ಲಿ ಸುದ್ದಿವಾಹಿನಿಗಳಿಗಿಂತ ೫-೬ ಪಟ್ಟು ಎತ್ತರದಲ್ಲಿವೆ. ಇದಕ್ಕೆ ಬಹುಮುಖ್ಯ ಕಾರಣ ದಿನವಿಡಿ ಓಡುವ ಸಿರಿಯಲ್‌ಗಳು. ಪ್ರತಿನಿತ್ಯ ಕನ್ನಡದಲ್ಲಿ ಕನಿಷ್ಠ ೫೦ ಸಿರಿಯಲ್‌ಗಳು(೬ ವಾಹಿನಿಗಳಿಂದ ತಲಾ ೧೦ ಸಿರಿಯಲ್‌ಗಳ ಲೆಕ್ಕದಲ್ಲಿ!)ಬಿತ್ತರಗೊಳ್ಳುತ್ತವೆ. ಇದರ ಹೊರತಾಗಿ ಸಿನಿಮಾ, ರಿಯಾಲಿಟಿ ಶೋಗಳ ಅಬ್ಬರ. ಇವನ್ನು ನೋಡದೇ ಅಳಿದುಳಿದ ನೋಡುಗರನ್ನು ಸುದ್ದಿವಾಹಿನಿಗಳು ಬಾಚಿಕೊಳ್ಳಬೇಕು. ಇದಕ್ಕೆ ೬-೮ ವಾಹಿನಿಗಳ ಗುದ್ದಾಟ.

ಶೇ.೭೦ರಷ್ಟು ಮಹಿಳೆಯರು ಸುದ್ದಿವಾಹಿನಿಗಳನ್ನು ನೋಡುವುದಿಲ್ಲ. ಉಳಿದ ಶೇ.೩೦ರಷ್ಟು ಮಹಿಳೆಯರು ಈ ಹಿಂದೆ ನೋಡುತ್ತಿದ್ದರು. ಆದರೆ ಈಗ ಸುದ್ದಿವಾಹಿನಿಗಳು ತಮ್ಮ ಅಬ್ಬರದಿಂದ ಅವರನ್ನೂ ಕಳೆದುಕೊಂಡಿವೆ. ಒಂದಷ್ಟು ಪುರುಷರು ಮತ್ತು ಯುವಕರು ಸುದ್ದಿಗಾಗಿ, ಪ್ರಸ್ತುತದ ವಿದ್ಯಾಮಾನಗಳ ಜ್ಞಾನಕ್ಕಾಗಿ ಸುದ್ದಿವಾಹಿನಿಗಳನ್ನು ಆಶ್ರಯಿಸಿದ್ದಾರೆ. ಇವರನ್ನು ಹಿಡಿದುಕೊಳ್ಳಲು ಎಲ್ಲ ಸುದ್ದಿವಾಹಿನಿಗಳ ಹರಸಾಹಸ! ಇವರನ್ನು ಹಿಡಿಯಲು ಪ್ರತಿ ನಿತ್ಯ ನಾವು ಮೊದಲು ಸುದ್ದಿ ಕೊಟ್ಟೆವು, ನಾವು ಅತ್ಯಂತ ವೇಗವಾಗಿ ಸುದ್ದಿಕೊಟ್ಟೆವು, ನಾವು ಬ್ರೇಕಿಂಗ್ ನ್ಯೂಸ್ ಕೊಟ್ಟೆವು ಅಂತಾ ಪ್ರತಿ ಸುದ್ದಿವಾಹಿನಿಯೂ ಬೊಬ್ಬೆ ಹೊಡೆಯುತ್ತಿರುತ್ತದೆ. ಆದರೆ ಇವೆಲ್ಲ ದೃಶ್ಯಮಾಧ್ಯಮದಲ್ಲಿ ದುಡಿಯುವವರ ಭ್ರಮೆ. ಇದರಿಂದ ಟಿಆರ್‌ಪಿ ಮೇಲೆ ಆಗುವ ಪರಿಣಾಮ ಅಲ್ಪ. ಯಾಕಂದ್ರೆ ಯಾವೊಬ್ಬ ವೀಕ್ಷಕನೂ ಇವತ್ತು ೨೪*೭ ಸುದ್ದಿವಾಹಿನಿಯನ್ನು ಪಟ್ಟು ಹಿಡಿದು ನೋಡುವುದಿಲ್ಲ. ಯಾವುದೋ ಧಾರವಾಹಿಯ ನಡುವೆ, ರಿಯಾಲಿಟಿ ಷೋನಲ್ಲಿ ಜಾಹೀರಾತು ಬಂದಾಗ ನೋಡುಗನ ದೃಷ್ಟಿ ೨೪*೭ ಕಡೆ ಹೊರಳುತ್ತದೆ. ಅದಕ್ಕಿಂತ ಹೆಚ್ಚಾಗಿ ಒಂದು ವಾಹಿನಿಯಲ್ಲಿ ಬಿತ್ತರಗೊಂಡ ಬ್ರೇಕಿಂಗ್ ನ್ಯೂಸ್ ಒಂದೇ ನಿಮಿಷ ಕಳೆಯುವುದರೊಳಗೆ ಎಲ್ಲ ವಾಹಿನಿಗಳಲ್ಲೂ ಬಂದಿರುತ್ತದೆ. ಡೆಸ್ಕ್‌ನಲ್ಲಿ ಕುಳಿತ ಭಾಷಾಂತರ ಬರದವನೊಬ್ಬ ತಪ್ಪು ಬ್ರೇಕಿಂಗ್ ಸುದ್ದಿ ಕೊಡುತ್ತಾನೆ. ಉಳಿದ ಎಲ್ಲ ವಾಹಿನಿಗಳಲ್ಲೂ ಕಾಪಿ-ಪೇಸ್ಟ್ ರೂಪವಾದ ಆ ತಪ್ಪು ಬ್ರೇಕಿಂಗ್ ಓಡುತ್ತ ಇರುತ್ತದೆ. ಇಂಥ ಹತ್ತಿಪ್ಪತ್ತು ಜೀವಂತ ಉದಾಹರಣೆಗಳು ಸಿಗುತ್ತವೆ!

ಪ್ರಜ್ಞಾವಂತ ನೋಡುಗರಿಲ್ಲ. ಒಳ್ಳೆ ಕಾರ್ಯಕ್ರಮ ಕೊಟ್ಟರೆ ನೋಡುವುದಿಲ್ಲ ಎಂಬುದು ಮಾಧ್ಯಮದ ಮಂದಿಗಳಾದ ನಮಗೆ ನಾವೇ ತುಂಬಿಕೊಂಡಿರುವ ಭ್ರಮೆ. ಇದಕ್ಕೆ ೨ ಜೀವಂತ ಉದಾಹರಣೆಗಳಿವೆ. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಜಯಪ್ರಕಾಶ್ ಶೆಟ್ಟಿ ಮತ್ತು ಪ್ರತಿಮಾಭಟ್ ಅವರು ಮೊದಲಿಗೆ ಒಂದು ತಾಸುಗಳ ‘ಬ್ರೇಕ್‌ಫಾಸ್ಟ್’ ನ್ಯೂಸ್ ನಡೆಸಿಕೊಡುತ್ತಿದ್ದರು. ಅದಕ್ಕೆ ೯-೧೦ ಪಾಯಿಂಟ್ ಜಿಆರ್‌ಪಿ ಬಂದ ದಾಖಲೆ ಇದೆ. ಇದೇ ನ್ಯೂಸ್‌ನಲ್ಲಿ ಯುಗಾದಿಗೆ ಕೈಬರಹ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದಕ್ಕೆ ಎಷ್ಟು ಪ್ರತಿಕ್ರಿಯೆ ಬಂದಿರಬಹುದು ಹೇಳಿ? ಬರೋಬ್ಬರಿ ೨,೦೦೦ ಎಂಟ್ರಿ. ಕಾರಣಾಂತರಗಳಿಂದ ಬ್ರೇಕ್‌ಫಾಸ್ಟ್ ನ್ಯೂಸ್ ಅರ್ಧ ಗಂಟೆಗೆ ಇಳಿಯಿತು. ಟಿಆರ್‌ಪಿ ಕುಸಿಯಿತು. ಆದರೆ ಪ್ರಜ್ಞಾವಂತ ನೋಡುಗ ಒಳ್ಳೆ ಕಾರ್ಯಕ್ರಮ ಕೊಟ್ಟರೆ ನೋಡುತ್ತಾನೆ ಎಂಬುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಡ ಅನ್ನಿಸುತ್ತದೆ.

ಅಮಿರ್‌ಖಾನ್ ಸ್ಟಾರ್‌ವಾಹಿನಿಯಲ್ಲಿ ನಡೆಸಿಕೊಟ್ಟ ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಕಾರಣವಿಷ್ಟೆ, ಒಂದು ಸುದ್ದಿವಾಹಿನಿಯಲ್ಲಿ ಮಾಡಬಹುದಾದ ಕಾರ್ಯಕ್ರಮವನ್ನು ಅಮೀರ್‌ಖಾನ್ ಜಿಇಸಿಯಲ್ಲಿ ನಡೆಸಿಕೊಟ್ಟರು. ಈ ಕಾರ್ಯಕ್ರಮ ಕೂಡ ೪-೫ ಟಿಆರ್‌ಪಿ ಗಳಿಸಿತ್ತು.

ನನಗಂತೂ ಇವತ್ತಿಗೂ ನ್ಯೂಸ್ ಅಂದಕೂಡಲೆ ಕಣ್ಮುಂದೆ ಬರುವುದು ಈಟಿವಿಯ ಅಗ್ರ ರಾಷ್ಟ್ರೀಯ ವಾರ್ತೆ. ಕನ್ನಡದ ಸುದ್ದಿ ಜಗತ್ತಿಗೊಂದು ಚೆಂದದ ಸ್ವರೂಪ ಕೊಟ್ಟಿದ್ದು ಈಟಿವಿ. ಇದೀಗ ನಮ್ಮೊಂದಿಗೆ ಪ್ರತಿನಿಧಿ ಶ್ರೀ…ಗಳು ನೇರಸಂಪರ್ಕದಲ್ಲಿದ್ದಾರೆ. ಸನ್ಮಾನ್ಯ ಶ್ರೀಶ್ರೀಗಳು ದೂರವಾಣಿ ಸಂಪರ್ಕದಲ್ಲಿದ್ದಾರೆ…ನಿಮ್ಮ ಭಾಷಣ ಕೇಳಲು ನಾವ್ಯಾಕೆ ನ್ಯೂಸ್ ನೋಡಬೇಕು ಹೇಳಿ?

ಯಡಿಯೂರಪ್ಪ ಪರಪ್ಪನ ಅಗ್ರಹಾರದಲ್ಲಿ ಯಾವ ಸೋಪು ಬಳಸಿದ್ರು ಅಂತಾ ಒಂದು ವಾಹಿನಿಯ ವರದಿಗಾರ ನೇರ ಪ್ರಸಾರ ನೀಡುತ್ತಿರುತ್ತಾನೆ. ಇನ್ನೊಂದು ವಾಹಿನಿಯವನು ಯಡಿಯೂರಪ್ಪ ತಲೆಗೆ ಸ್ನಾನ ಮಾಡಿದ್ರೊ, ಇಲ್ಲವೊ??! ಮಾಡಿದ್ದರೆ ಯಾವ ಶಾಂಪೂ ಬಳಸಿರಬಹುದು ಎಂಬ ಕುರಿತು ಕಥೆ ಕಟ್ಟಿ ಹೇಳುತ್ತಿರುತ್ತಾನೆ! ಬಹುಶಃ ಅರ್ಧ ಗಂಟೆಯ ಸುದ್ದಿಯನ್ನು ಯಾವುದೇ ಖರ್ಚಿಲ್ಲದೆ ತುಂಬಿಸಲಿಕ್ಕೋಸ್ಕರವೇ ಈ ಲೈವ್‌ಚಾಟ್ ಎಂಬ ದುರಂತ ಹುಟ್ಟಿದ್ದಿರಬೇಕು! ಖಂಡಿತಾ ವರದಿಗಾರನೊಬ್ಬ ಚೆಂದವಾಗಿ ವಿವರಣೆ ಕೊಟ್ಟರೆ, ಅದು ಕೇಳಲು ಸೊಗಸಾಗಿ ಇರುತ್ತದೆ. ಜೊತೆಗೆ ಆ ವಿವರಣೆ ಮಿತಿಯಲ್ಲಿದ್ದರೆ ಚೆಂದ. ಇದರಲ್ಲಿ ಸುದ್ದಿ ಓದುವ ನಿರೂಪಕರ ಪಾಲು ಇರುತ್ತದೆ. ಇವರು ಎಷ್ಟು ಅದ್ಭುತವಾಗಿ ಪ್ರಶ್ನೆ ಕೇಳುತ್ತಾರೊ, ಅಷ್ಟು ಅದ್ಭುತವಾಗಿ ಲೈವ್‌ಚಾಟ್ ಬರುತ್ತದೆ. ಇಲ್ಲವಾದರೆ ಯಡಿಯೂರಪ್ಪ ಬಳಸಿದ ಬೆಡ್‌ಶಿಟ್, ಬಕೆಟ್, ಬ್ರಶ್ ಇತ್ಯಾದಿಗಳು. ಇದನ್ನು ನೋಡಲು ನಾವೆಲ್ಲ ಸುದ್ದಿವಾಹಿನಿ ನೋಡಬೇಕೆ ಎಂಬ ಪ್ರಶ್ನೆ ಪ್ರತಿಯೊಬ್ಬ ನೋಡುಗನಲ್ಲೂ ಮೂಡುತ್ತದೆ.

ನಮ್ಮೂರಿನ ಬಹುತೇಕ ಮನೆಗಳಲ್ಲಿ ಸಂಜೆ ಯಶಸ್ವಿಯಾಗಿ ಓಡುವುದು ‘ಜಿ’, ‘ಸ್ಟಾರ್’ನಂಥ ಹಿಂದಿ ವಾಹಿನಿ. ಅದರ ಹೊರತಾಗಿ ಒಂದಷ್ಟು ಧಾರವಾಹಿಗಳು. ಇದರಿಂದ ವೀಕ್ಷಕರನ್ನು ಸುದ್ದಿವಾಹಿನಿಯತ್ತ ಡೈವರ್ಟ್ ಮಾಡುವುದು ಅಷ್ಟು ಸುಲಭದ ಮಾತೇನಲ್ಲ. ಹಾಗಾಗಿಯೇ ಪ್ರತಿವಾರವೂ ಸುದ್ದಿವಾಹಿನಿ ನೋಡುವ ವೀಕ್ಷಕರ ಸಂಖ್ಯೆ ಕುಸಿಯುತ್ತಿರುವುದು. ಜೊತೆಗೆ ಹೊಸತಾಗಿ ಬಂದ ಸುದ್ದಿವಾಹಿನಿಗಳಿಗೆ ಖಾಯಂ ನೋಡುಗರು ಹಂಚಿಹೋಗುತ್ತಾರೆ. ಖಂಡಿತವಾಗಿಯೂ ಹೇಳುತ್ತೇನೆ ಟಿಆರ್‌ಪಿ ಹೆಸರಿನಲ್ಲಿ ಬಟ್ಟೆ ಬಿಚ್ಚುವ ಹಲವು ಕಾರ್ಯಕ್ರಮಕ್ಕೆ ಅಂತಿಮವಾಗಿ ಬರುವ ರೇಟಿಂಗ್ ೦.೫-೧. ಅದು ಒಂದು ಒಳ್ಳೆ ಕಾರ್ಯಕ್ರಮಕ್ಕೂ ಬರುತ್ತೆ. ಕೆಲವಕ್ಕೆ ಅದ್ಭುತ ಟಿಆರ್‌ಪಿ ಬರುತ್ತೆ. ಅದು ವಿಚಾರ, ಘಟನೆ ಆಧಾರಿತವಾಗಿರುತ್ತದೆ.

ಹಾಗಂತ ಸುದ್ದಿವಾಹಿನಿಗಳು ಒಳ್ಳೆ ಕಾರ್ಯಕ್ರಮ ಮಾಡುತ್ತಿಲ್ಲ, ಪೂರ್ತಿಯಾಗಿ ಕೆಟ್ಟ ಕಾರ್ಯಕ್ರಮವನ್ನು ನೀಡುತ್ತಿವೆ ಎನ್ನುತ್ತಿಲ್ಲ. ಖೈದಿ, ಅಮ್ಮದಂಥ ಒಳ್ಳೆ ಕೆಲ ಒಳ್ಳೆ ಕಾರ್ಯಕ್ರಮಗಳು ಬರುತ್ತವೆ. ಆದರೆ ಇದಕ್ಕಿಂತ ಹೆಚ್ಚಾಗಿ ಯಾರದ್ದೋ ಸಂಸಾರ ಒಡೆದ ಚರ್ಚೆಗಳು, ಎಲ್ಲೊ ನ್ಯಾಯಪಂಚಾಯ್ತಿ ಮಾಡಬೇಕಾದ ವಿಚಾರಗಳು ವಾಹಿನಿಗಳ ಕಟಕಟೆಗೆ ಬಂದು ನಿಲ್ಲುವುದು ದುರಂತ. ದರ್ಶನ್, ವಿಜಯ್ ಸಂಸಾರದ ಸರಕನ್ನು ವಾಹಿನಿಗಳಲ್ಲಿ ತಂದರೆ ತೊಂದರೆಯಿಲ್ಲ. ಯಾಕೆಂದರೆ ಅವರು ಸಾಮಾಜಿಕವಾಗಿ ಗುರುತಿಸಿಕೊಂಡವರು. ಅವರ ವಿಚಾರ ಚರ್ಚೆಗೆ ಯೋಗ್ಯವಾಗಿದೆ. ಆದರೆ ಅದೇ ದಾಟಿಯನ್ನು ಎಲ್ಲ ಸಂಸಾರಗಳಿಗೂ ಅನುಸರಿಸುವುದು ಸೂಕ್ತವಲ್ಲ.

ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಕೇವಲ ಸರಕು ಮಾತ್ರ ನಿರ್ಣಾಯಕವಲ್ಲ. ಕಾರ್ಯಕ್ರಮದ ಪ್ರಮೋಷನ್ ಕೂಡ ಮುಖ್ಯ. ಈ ವಾಹಿನಿಯಲ್ಲಿ ಇಂಥದ್ದೊಂದು ಒಳ್ಳೆ ಕಾರ್ಯಕ್ರಮ ಬರುತ್ತಿದೆ ಅನ್ನುವುದು ಜನರಿಗೆ ತಲುಪಬೇಕು. ಅದಕ್ಕೆ ಕಾಯಬೇಕು. ಅಷ್ಟು ಪುರುಸೊತ್ತು ನಮ್ಮ ವಾಹಿನಿಗಳಿಗಿಲ್ಲ. ಆಜ್‌ತಕ್ ಅಂತೊಂದು ಹಿಂದಿ ಸುದ್ದಿವಾಹಿನಿ ಇದೆ. ಅದು ದೇಶದಲ್ಲೇ ನಂಬರ್ ಒನ್ ಸುದ್ದಿವಾಹಿನಿ. ಅದು ಹಿಂದಿ ವಾಹಿನಿ. ಅದರ ವಿಸ್ತಾರ ಹೆಚ್ಚಿದೆ ಅನ್ನೋದು ಮಾತ್ರ ಅದರ ಯಶಸ್ಸಿಗೆ ಕಾರಣವಲ್ಲ. ಜೊತೆಗೆ ಅಲ್ಲಿನ ಕಾರ್ಯಕ್ರಮಗಳ ನಿರ್ಮಾಣ, ಇದನ್ನೇ ಪಕ್ಕಾ ದೃಶ್ಯಮಾಧ್ಯಮದ ಭಾಷೆಯಲ್ಲಿ ಹೇಳುವುದಾದರೆ, ಮೇಕಿಂಗ್ ಅನ್ನುವುದು ಕೂಡ ಮಹತ್ವದ್ದು. ಒಂದು ಕಾರ್ಯಕ್ರಮ ಹೇಗಿರಬೇಕು ಅನ್ನುವುದನ್ನು ಪ್ರತಿಯೊಬ್ಬ ಕನ್ನಡದ ಪತ್ರಕರ್ತ ಆಜ್‌ತಕ್‌ನ್ನು ನೋಡಿ ಕಲಿಯಬೇಕಿದೆ.

ಟಿಆರ್‌ಪಿಯನ್ನು ಸಂಭ್ರಮಿಸಬೇಕು ನಿಜ. ಆದರೆ, ಸಾವಿನ ಮನೆಯಲ್ಲಿ ಟಿಆರ್‌ಪಿ ಸಂಭ್ರಮ ಸರಿಯಲ್ಲ ಅಲ್ವಾ? ನನ್ನ ಪತ್ರಿಕೋದ್ಯಮದ ವೃತ್ತಿ ಜೀವನ ಆರಂಭವಾಗಿದ್ದೆ ಟ್ಯಾಬ್ಲಯ್ಡ್ ಪತ್ರಿಕೆಯೊಂದರಿಂದ. ಗೆಳೆಯ ಸಂಕ್ರಾಂತಿ ಸತೀಶ್ ಒಂದು ವರದಿ ತಂದಿದ್ದರು. ಧಾರವಾಹಿ ನಟಿಯೊಬ್ಬಳಿಗೆ ಅನೈತಿಕ ಸಂಬಂಧವಿದೆ ಎಂಬ ಆ ಸುದ್ದಿಯನ್ನು ಡೆಸ್ಕ್‌ನಲ್ಲಿ ಕುಳಿತ ಮಹಾಶಯನೊಬ್ಬ ತೀರಾ ಆಕೆಯ ಹಾಸಿಗೆಗೆ ಹೋಗಿ ನೋಡಿ ಬಂದವನಂತೆ ಬರೆದ. ಆ ಹೆಣ್ಣುಮಗಳು ನೇರವಾಗಿ ಕಛೇರಿಗೆ ಗಂಟುಮೂಟೆ ಸಮೇತವಾಗಿ ಬಂದಳು. ‘ನಿಮ್ಮ ಪತ್ರಿಕೆಯ ವರದಿಯ ಫಲಶೃತಿಯಾಗಿ ಗಂಡ ನನ್ನನ್ನು ಕುತ್ತಿಗೆ ಹಿಡಿದು ಹೊರದಬ್ಬಿದ್ದಾನೆ. ನನಗೀಗ ಆಶ್ರಯ ಕೊಡಿ’ ಹಾಗಂತ ಹೆಣ್ಣುಮಗಳು ಕಣ್ಣೀರು ಸುರಿಸುತ್ತಿದ್ದಾಳೆ. ‘ವಾರಕ್ಕೊಂದು ಸುದ್ದಿ ತರೋ ಭರದಲ್ಲಿ ತಪ್ಪು ಮಾಡಿದೆ. ಒಂದು ಹೆಣ್ಣಿನ ಶಾಪಕ್ಕೆ ಬಲಿಯಾದೆ’ ಅನ್ನುತ್ತ ಗೆಳೆಯ ಬೇಸರದಿಂದ, ಆಕೆಗೆ ಮುಖ ತೋರಿಸಲಾಗದ ಸ್ಥಿತಿಯಲ್ಲಿ ಒಳಗೆ ಬಂದು ಅಡಗಿ ಕುಳಿತ್ತಿದ್ದ. ನನಗೆ ಸುದ್ದಿವಾಹಿನಿಗಳಲ್ಲಿ ಬರುವ ಕೆಲ ಚರ್ಚೆಗಳನ್ನು ನೋಡಿದಾಗಲೆಲ್ಲ ಆ ಘಟನೆ ಕಾಡುತ್ತದೆ. ಟಿಆರ್‌ಪಿ ಬರುತ್ತೆ ಅಂತ ಸುದ್ದಿವಾಹಿನಿಗಳು ಅಂಥ ಟ್ಯಾಬ್ಲಾಯ್ಡ್‌ಗಳಂತೆ ಆಗಬೇಕಾ?

Read Full Post »