Feeds:
ಲೇಖನಗಳು
ಟಿಪ್ಪಣಿಗಳು

Archive for ಜುಲೈ, 2010

ಬಡತನ, ಯಜಮಾನನ ಶಸ್ತ್ರ ಚಿಕಿತ್ಸೆಗೂ ಹಣ ಇಲ್ಲ. ಇಂಥ ಸ್ಥಿತಿಯಲ್ಲಿ ಮಗಳಿಗೆ ಮೆಡಿಕಲ್ ಸೀಟು ಸಿಕ್ಕಿದೆ. ಚಿಕಿತ್ಸೆಗೆ ಹಣ ಹೊಂದಿಸುವುದೋ, ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವುದೋ ಎಂದು ದಾರಿ ಕಾಣದೆ ಕಂಗಾಲಾಗಿದೆ ತುಮಕೂರು ಜಿಲ್ಲೆ ನಿಡಸಾಲೆಯ ಬಡ ಕುಟುಂಬ.

ಮಂಡ್ಯ ಜಿಲ್ಲೆ  ಕೆ.ಎಂ. ದೊಡ್ಡಿಯ ಪಿಯು ಕಾಲೇಜಿನ ವಿದ್ಯಾರ್ಥಿ ಜೆ.ಎಂ. ಸುಪ್ರಿಯಾಗೆ ವೈದ್ಯೆಯಾಗುವ ಆಸೆ. ಆದರೆ, ಆಕೆಯ ದಾರಿಯಲ್ಲಿ ಬರೀ ಕಲ್ಲು ಮುಳ್ಳು. ಕಾರಣ, ಆಕೆಯ ತಂದೆ ಜಯರಾಂಗೆ ಮಗಳಿಗೆ ಮೆಡಿಕಲ್ ಶಿಕ್ಷಣ ಕೊಡಿಸುವ ಶಕ್ತಿ ಇಲ್ಲ. ಅವರು ಮಾಡುತ್ತಿರುವುದು ಗಾರೆ ಕೆಲಸ. ಜತೆಗೆ, ಕಾಯಿಲೆ ಬೆನ್ನಿಗಿದೆ. ಮಗಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಅವರ ಬಯಕೆಗೆ ತಕ್ಕಂತೆ ಮಗಳು ಉತ್ತಮ ಅಂಕ ಗಳಿಸಿ, ಮೆರಿಟ್ ಸೀಟ್ ಪಡೆದಿದ್ದಾಳೆ. ಆದರೆ, ಹಣ ಹೊಂದಿಸಲಾಗದೆ ಕುಟುಂಬ ಪರದಾಡುತ್ತಿದೆ.

ಜಯರಾಂ ಈಗಾಗಲೇ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ದುಡಿದು ಹಣ ಹೊಂದಿಸೋಣ ಎಂದರೆ ಕೈ ಮುರಿದಿದೆ. ಸುಪ್ರಿಯಾಳ ತಾಯಿ ರತ್ನಮ್ಮ ಅವರ ಕೆಲಸವೇ ಕುಟುಂಬಕ್ಕೆ ಆಸರೆ.  ೩೦-೪೦ ಕಿ.ಮೀ ದೂರದ ಸರಕಾರಿ ಪದವಿಪೂರ್ವ ಕಾಲೇಜಿಗೆ  ಮನೆಯಿಂದಲೇ ಪ್ರಯಾಣಿಸಿ ದ್ವಿತೀಯ ಪಿಯುಸಿಯಲ್ಲಿ  ಶೇ.೮೦ರಷ್ಟು  ಅಂಕ ಪಡೆದ ಸುಪ್ರಿಯಾ, ಸಿಇಟಿಯಲ್ಲಿ  ಗಳಿಸಿದ್ದು  ೨,೪೬೬ನೇ  ರ್ಯಾಂಕ್‌. ರಾಯಚೂರಿನ ನವೋದಯ ವೈದ್ಯ ಕಾಲೇಜಿನಲ್ಲಿ  ಮೆರಿಟ್ ಸೀಟು ಲಭಿಸಿದೆ.

‘ಎಂಬಿಬಿಎಸ್ ವ್ಯಾಸಂಗಕ್ಕೆ ವಾರ್ಷಿಕ ೧ ಲಕ್ಷ ರೂ. ಅಗತ್ಯವಿದೆ. ಸ್ನೇಹಿತರು, ಪರಿಚಿತರ ಬಳಿ ಸಾಲ ಮಾಡಿ ತಂದೆ ಸ್ವಲ್ಪ  ಹಣ ಸೇರಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಲ್ಲನಾಯಕನಹಳ್ಳಿಯಲ್ಲಿ  ಸ್ವಂತ ಮನೆಯಿತ್ತು. ಅಪ್ಪಾಜಿಯ ಶಸ್ತ್ರ ಚಿಕಿತ್ಸೆಗೆ ಅದನ್ನು  ಮಾರಿ,ಬಾಡಿಗೆ ಮನೆಯಲ್ಲಿದ್ದೇವೆ. ಇನ್ನೊಂದು ಹಂತದ ಕೌನ್ಸೆಲಿಂಗ್ ನಂತರ ಕಾಲೇಜಿಗೆ ಪ್ರವೇಶ ಪಡೆಯಬೇಕು. ನೆರವಿಗಾಗಿ ಎಲ್ಲ  ಕಡೆ ಪ್ರಯತ್ನ ಪಡುತ್ತಿದ್ದೇವೆ’ ಎನ್ನುತ್ತಾರೆ ಸುಪ್ರಿಯಾ.

‘ಬಿಡುವಿನ ವೇಳೆಯಲ್ಲಿ  ಕೆಲಸ ಮಾಡುತ್ತ ಪಿಯುಸಿ ಮುಗಿಸಿದ್ದೇನೆ. ಕಾಲೇಜು ಹತ್ತಿರದಲ್ಲಿದ್ದರೆ ಇನ್ನೂ ಹೆಚ್ಚು ಅಂಕ ಗಳಿಸುತ್ತಿದ್ದೆ. ತಂದೆ-ತಾಯಿಯ ಕೂಲಿ ಹಣದಲ್ಲಿ  ಬದುಕು ಸಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಓದುತ್ತಿರುವ ತಮ್ಮನ ವಿದ್ಯಾಭ್ಯಾಸವೂ ನಡೆಯಬೇಕಿದೆ’ ಎಂದು ಸುಪ್ರಿಯಾ ಕಣ್ಣುಗಳಲ್ಲಿ ನೀರಾಡುತ್ತದೆ. ಆರ್ಥಿಕ ನೆರವು ನೀಡಲು ಇಚ್ಛಿಸುವವರು ಅವರ ಸಂಬಂಧಿ ಲತಾ (೯೬೮೬೨ ೨೭೩೮೧) ಅವರನ್ನು ಸಂಪರ್ಕಿಸಬಹುದು.

(೨೪-೦೭-೨೦೧೦ರಂದು ವಿಜಯ ಕರ್ನಾಟಕದಲ್ಲಿ ಪ್ರಕಟಿತ)

Read Full Post »

ಅನೈತಿಕ ಸಂಬಂಧಗಳು ನಮ್ಮ  ಸಮಾಜದಲ್ಲಿ ಹಿಂದೆಯೂ  ಇತ್ತು. ಈಗಲೂ  ಇದೆ. ಗಂಡು-ಹೆಣ್ಣು  ಎಂಬ ಭಿನ್ನ ಸೃಷ್ಟಿಗೆ ಜೀವ ಇರುವವರೆಗೂ ಇರುತ್ತದೆ. ಆದರೆ ಸಂಬಂಧಗಳ ಸ್ವರೂಪ ಬದಲಾಗುತ್ತಿರುತ್ತದೆ. ದೇವದಾಸಿ ಪದ್ಧತಿ ಈಗಿಲ್ಲ. ಗೆಜ್ಜೆ  ಕಟ್ಟುವ ಮನೆತನಗಳು ಕಾಣುವುದಿಲ್ಲ. ಮಾಲೆಯರು ಎಂಬ ಜಾತಿಯನ್ನು ಅಸ್ಪೃಶ್ಯವಾಗಿ ಕಾಣುವ ಸ್ಥಿತಿಯಿಂದ ದೂರ ಸಾಗಿ ಬಂದಿದ್ದೇವೆ. ಹಾಗಂತ ಅನೈತಿಕ ಸಂಬಂಧಗಳು ಕಡಿಮೆಯಾಗಿಲ್ಲ. ಹಳ್ಳಿಯಿಂದ ಪೇಟೆಗೆ ಬಂದು ಮೊಕ್ಕಾಂ ಹೂಡಿರುವ ಮಂದಿಯ ಬೆನ್ನಲ್ಲೇ ಈ ಸಂಬಂಧಗಳು ಅಪಾರ್ಟ್‌ಮೆಂಟ್‌ನ ಮಂಚವನ್ನೇರಿವೆ. ಲಿವಿಂಗ್ ಟುಗೇದರ್ ಮೊದಲಾದ ಹೊಸ ಶಬ್ದಗಳೊಂದಿಗೆ ಮೈದಳೆದು ನಿಂತಿವೆ. ಈ ಹೊಸ ಸ್ವರೂಪವೇ ಕವಲು ಕಾದಂಬರಿಯ ಜೀವಾಳ.

ಧಮಶ್ರಿ, ತಬ್ಬಲಿ ನಿನಾದೇ ಮಗನೆ, ಮಂದ್ರ…ಮೊದಲಾದ ಕಾದಂಬರಿಗಳಿಗೆ ಹೋಲಿಸಿದರೆ ಕವಲು ಸಪ್ಪೆ ಅನ್ನಿಸುತ್ತದೆ. ಆದರೆ ಈ ಹೋಲಿಕೆ ಎಷ್ಟರ ಮಟ್ಟಿಗೆ  ಸಮಂಜಸ ಅನ್ನುವುದು ಮುಖ್ಯ ಪ್ರಶ್ನೆ. ‘ಒಂದು ಕಾದಂಬರಿ ಬರೆದ ನಂತರ ನಾನು ಆ ವಿಚಾರದಿಂದ ಹೊರಬರುತ್ತೇನೆ’ ಹಾಗಂತ ಭೈರಪ್ಪನವರು ಸಾವಿರಾರು ಸಲ ಹೇಳಿದ್ದಾರೆ. ಖಂಡಿತಾ ಒಂದು ಆವರಣದಿಂದ ಭೈರಪ್ಪ  ಹೊರಬಂದಿದ್ದಾರೆ. ಮಂದ್ರದ ಛಾಯೆ ಇಲ್ಲಿಲ್ಲ. ಭೈರಪ್ಪನವರು ಕವಲು ಮೂಲಕ ಜಗಿದು ರಸ ಬತ್ತಿರುವ ಹಳಸಲನ್ನೇ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಒಪ್ಪುವಂಥ ಮಾತು. ಪದೇ ಪದೇ ಅನೈತಿಕ ಲೈಂಗಿಕ ಚಟುವಟಿಕೆಯನ್ನು ವಿವರಿಸುವ ದೃಶ್ಯಗಳು ಕಾದಂಬರಿಯಲ್ಲಿ  ಬರುತ್ತದೆ. ಆದರೆ ಅದು ಹಳೆಯದಾ?

ನಾವು ಕಥೆಯಲ್ಲಿ  ಇದು ಹಳೆಯದು, ಇದು ಹೊಸತು, ಸಮಕಾಲೀನ ಎಂದು ವಿಗಂಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಕಾಲ ಎಷ್ಟೇ  ಬದಲಾದರೂ ಸೆಕ್ಸ್  ಎಂಬುದು ಸೆಕ್ಸೇ. ಗಂಡಸು , ಗಂಡಸೇ. ಹೆಂಗಸು ಹೆಂಗಸೇ. ಪ್ರಾಕೃತಿಕ ಸೃಷ್ಟಿಗಳಿಗೆ ಕಾಲ ಬದಲಾಗಿದ್ದು  ಗೊತ್ತಾಗುವುದಿಲ್ಲ! ಮಲಗುವ ಕೊಣೆ ಹೊಸದಾದರೆ, ನಮ್ಮ  ಸೆಕ್ಸ್  ಹೊಸತು ಎಂಬ ಭಾವನೆ ಮೂಡಬಹುದು. ಆದರೆ, ಅದು ಹೊಸತಾಗಿರಲು ಸಾಧ್ಯವಿಲ್ಲ. ಗಂಡಸಿನ ಜೊತೆಗೆ ಮಲಗುವ ಹುಡುಗಿ ಬದಲಾದರೂ, ಅಲ್ಲಿ  ನಡೆಯುವ ಕ್ರಿಯೆ ಹಳತೇ ಅಲ್ಲವೇ?! ಹೀಗೇ ಆಲೋಚಿಸುತ್ತಾ ಹೋದರೆ ನಮಗೆ ಹೊಸತು ಸಿಗುವುದೇ ಕಷ್ಟವಾಗುತ್ತದೆ.

ಮಾಸ್ತಿ, ಜಯಂತ್ ಕಾಯ್ಕಿಣಿ, ಅನಂತಮೂರ್ತಿ…ಯಾರದ್ದೇ ಕಥೆಗಳನ್ನು ಓದಿ. ಅಲ್ಲಿ  ನಡೆಯುವ ಕ್ರಿಯೆಗಳೆಲ್ಲ  ಹಳತೆ. ಸನ್ನಿವೇಶ ಹೊಸತು. ಪಾತ್ರಗಳು ಹೊಸತು. ನಿರೂಪಣೆ ಹೊಸತು. ನನಗಂತೂ ಈ ಸಲ ಭೈರಪ್ಪನವರು ಹೊಸ ಸ್ವರೂಪದಲ್ಲಿ  ಕಾಣಿಸಿಕೊಂಡಿದ್ದಾರೆ. ಅದು ನನ್ನ ಪೂರ್ವ ನಿರ್ಧಾರಿತ ಭಾವನೆಗಳು, ಸಿದ್ದಾಂತಗಳಿಂದ ಅಲ್ಲ.  ಕವಲು, ಭೈರಪ್ಪನವರ ಈ ಹಿಂದಿನ ಕಾದಂಬರಿಗಳಂತೆ ತರ್ಕಕ್ಕೆ ಹೆಚ್ಚಿನ ಒತ್ತು ಕೊಡುವುದಿಲ್ಲ. ಬದಲಾಗಿ ಕಥೆಗೆ ಪ್ರಾಮುಖ್ಯತೆ ನೀಡುತ್ತದೆ. ಈ ಕಾದಂಬರಿ ಒಂತರಹ ಧಾರವಾಹಿಯಂತೆ ಭಾಸವಾಗುತ್ತದೆ. ಇಲ್ಲಿ  ೨ ಟ್ರ್ಯಾಕ್‌ಗಳಿವೆ. ಒಂದು ಉದ್ಯಮಿ ಜಯ್‌ಕುಮಾರ್ ಕುಟುಂಬದ ಕಥೆ. ಇನ್ನೊಂದು ಪ್ರಾಧ್ಯಾಪಕಿ ಇಳಾ ಮತ್ತು ಆಕೆಯ ಗಂಡ ವಿನಯ್‌ಚಂದ್ರರ ಕಥೆ. ಒಂದು ಕಡೆ ಗಂಡಸು ದುರ್ಬಲಿ. ಇನ್ನೊಂದೆಡೆ ಹೆಂಗಸು ದುರ್ಬಲಿ. ಒಂದೆಡೆ ಮಂಗಳೆ ಎಂಬ ಆಧುನಿಕ ಸೂಳೆ ಜಯ್‌ಕುಮಾರ್ ಕುಟುಂಬವನ್ನು ಆಳುತ್ತಾಳೆ. ಇನ್ನೊಂದೆಡೆ ಇಳಾಗೆ ಸೊಪ್ಪು ಹಾಕದ ವಿನಯ್‌ಚಂದ್ರ, ಆಕೆಯ ಮೇಲೆ ಅಧಿಕಾರ ಚಲಾಯಿಸುತ್ತಾನೆ.

ಮಂಗಳೆಗೆ ಮದುವೆಗೆ ಮೊದಲೇ ಅನೈತಿಕ ಸಂಬಂಧವಿರುತ್ತದೆ. ಇಳಾಗೆ ಮದುವೆಯ ನಂತರ ಶುರುವಾಗುತ್ತದೆ. ನಾನು ಮೊದಲಿಗೆ ೨ ಟ್ರ್ಯಾಕ್‌ನ್ನು  ಓದುತ್ತಾ ಹೋದೆ. ಕೊನೆಗೆ ಕುತೂಹಲ ತಾಳಲಾಗದೆ ಮಂಗಳೆಯ ಟ್ರ್ಯಾಕ್‌ನ್ನು ಪೂರ್ತಿ ಓದಿ, ತದನಂತರ ಇಳಾ ಕಥೆ ಓದಲು ಆರಂಭಿಸಿದೆ. ಅಷ್ಟರ ಮಟ್ಟಿಗೆ ನನಗೆ ಕಥೆ ಇಷ್ಟವಾಯಿತು.

ಕಥೆಯ ನಿರೂಪಣೆ ಕುರಿತು ಕೆಮ್ಮುವಂತಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿ, ಲೀವಿಂಗ್ ಟುಗೆದರ್ ಎಂಬ ಪರಿಕಲ್ಪನೆಯ ಬೆನ್ನತ್ತಿ ಹೋಗಿದ್ದಾರೆ ಲೇಖಕರು. ಆಧುನಿಕ ಜೋಡಿಗಳು ಸಮಾಜಕ್ಕೆ  ಸೊಪ್ಪು ಹಾಕದೇ  ಇರಬಹುದು. ಮದುವೆ ಎಂಬ ಬಂಧನ ಅವರಿಗೆ ಬೇಡವಾಗಿರಬಹುದು. ಆದರೆ ಬೆಳೆದ ಮಗು, ತನ್ನ  ಅಪ್ಪ  ಯಾರು ಎಂಬುದುನ್ನು ತಾಯಿಯ ಬಳಿ ಕೆಳುವುದಿದೆಯಲ್ಲ, ಅದನ್ನು ಕಾದಂಬರಿ ಸಾರುತ್ತದೆ. ಈ ಟುಗೆದರ್ ಸಂಬಂಧಗಳು ಚಿರಾಯುವಾಗಿ ಉಳಿದರೆ ಖಂಡಿತಾ ಸಮಸ್ಯೆಯಿಲ್ಲ. ಆದರೆ, ಗೆಟ್ ಟುಗೇದರ್ ಎಂಬಂಥ ಸಂಬಂಧಗಳಾಗಿ ಬಿಟ್ಟರೆ ತುಂಬಾ ಕಷ್ಟವಾಗುತ್ತದೆ. ಚರ್ಮ ಸುಕ್ಕುಗಟ್ಟುವವರೆಗೆ, ಯೌವ್ವನ ಇಳಿಯುವವರೆಗೆ ಎಲ್ಲವೂ ಚೆಂದವಾಗಿರುತ್ತದೆ. ಸಮಸ್ಯೆ ಆರಂಭವಾಗುವುದು ನಂತರದ ಬದುಕಿನಲ್ಲಿ. ಕಾದಂಬರಿ ಮುಗಿಯುವ ಹೊತ್ತಿಗೆ ಮಂಗಳೆಯ ಮಗ ತೇಜಸ್ಸು  ತನ್ನ  ಅಪ್ಪ  ಯಾರು ಎಂದು ಪೀಡಿಸಲು ಶುರು ಮಾಡುತ್ತಾನೆ. ಪ್ರಪಂಚದ ಪರಿವೇ ಇಲ್ಲದ ಮಗು ಹಾದರಕ್ಕೆ ಅರ್ಥ ಏನು ಎಂದು ತಾಯಿ ಬಳಿ ಕೇಳುತ್ತದೆ. ಆಗ ಓದುಗನಿಗೆ ಅರ್ಥವಾಗುತ್ತದೆ ಈ ಸಂಬಂಧಗಳ ಹಣೆ ಬರಹ!

ಇದೊಂದು ಮಹಿಳಾ ವಿರೋಧಿ ಕಾದಂಬರಿ ಅಂತಾ ಅದ್ಯಾಕೆ ಎಲ್ಲ  ಬೊಬ್ಬೆ  ಹೊಡೆಯುತ್ತಿದ್ದಾರೋ ನನಗಂತೂ ಅರ್ಥವಾಗುವುದಿಲ್ಲ. ಇಲ್ಲಿ  ಜಯಕುಮಾರ್ ಎಂಬ ಉದ್ಯಮಿಯ ಮರ್ಯಾದೆಯನ್ನು ಎಷ್ಟು  ಕಳೆಯಲು ಸಾಧ್ಯವೋ ಅಷ್ಟನ್ನು  ಕಳೆದಿದ್ದಾರೆ ಲೇಖಕರು.  ವೈಜಯಂತಿ ಎಂಬ ಜಯಕುಮಾರ್ ಮೊದಲ ಹೆಂಡತಿಗೆ ಬೇಕಾದಷ್ಟು  ಗೌರವ, ಮನ್ನಣೆ ಸಿಕ್ಕದೆ. ಮಂಗಳೆ, ಇಳಾ, ಮಾಲಾ ಕೆರೂರ್, ಚಿತ್ರಾ ಹೊಸೂರ್ ಇತ್ಯಾದಿ ಮಹಿಳಾವಾದಿಗಳಿಗೆ ಸಾಕಷ್ಟು  ಜಾಡಿಸಿದ್ದಾರೆ ಎಂಬುದು ನಿಜ. ಅದರ ಬೆನ್ನಲ್ಲೇ ವೈಜಯಂತಿಗೆ, ಅವರ ಮಗಳು ಪುಟ್ಟಕ್ಕನಿಗೆ, ವಿನಯ್‌ಚಂದ್ರರ ಮಗಳಿಗೆ ಗೌರವ ಧಕ್ಕಿದೆ. ಬಹುಶಃ  ಇವರೆಲ್ಲ  ಮಹಿಳೆಯರು ಅಲ್ಲವೆಂದು ಕಾಣತ್ತೆ. ಅಥವಾ ಸೀರೆಯುಟ್ಟ  ಸಂಸ್ಕಾರಯುತ ಮಹಿಳೆಯರಿಗೆ ಗೌರವ ಸಿಕ್ಕಿದೆ,  ಅವರು ಈ ಕಾಲದ ಮಹಿಳೆಯರಲ್ಲ  ಎಂಬ ವಾದವೂ ಆಗಿರಬಹುದು ನಮ್ಮ ವಿಮರ್ಶಕ ಕಂ ವಿಮರ್ಶಕಿಯರದ್ದು!

ಮಹಿಳೆಯರನ್ನು ಜರಿದಷ್ಟೇ ಪುರುಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಾಡ್ಜ್‌ನಲ್ಲಿ  ವೇಶ್ಯೆಯರೊಂದಿಗೆ ಸಿಕ್ಕಿ  ಬೀಳುವ ಜಯಕುಮಾರ್ ಪುರುಷನಲ್ಲವೇ? ಮಹಿಳೆಯರನ್ನು ಬೇಕೆಂದಾಗಲೆಲ್ಲ  ಭೋಗಿಸುವ ಸರಕಾರಿ ಅಧಿಕಾರಿ ಪ್ರಭಾಕರ ಗಂಡಸಲ್ಲವೇ? ವಿನಯಚಂದ್ರನ ದರ್ಪಕ್ಕೆ ಸಮನಾಗಿ ಮಂಗಳೆಯ ಅಧಿಕಾರಶಾಹಿತ್ವ ನಿಲ್ಲುತ್ತದೆ. ಎಲ್ಲೂ  ಕಾದಂಬರಿ ಏಕಮುಖವಾಗಿ ಸಾಗುವುದಿಲ್ಲ. ಸ್ನಾತಕೋತ್ತರ ಪದವಿ ಪಡೆದು ವ್ಯವಸ್ಥಿತ ಸೂಳೆಗಾರಿಕೆಗಿಳಿಯುವ ಬುದ್ಧಿವಂತರ ಕುರಿತು ಹೇಳಿದ್ದಾರೆ. ಹಾಗಂತ ಎಲ್ಲೂ  ಯಾವುದನ್ನೂ  ವಿರೋಧಿಸುವುದಿಲ್ಲ. ಮಂಗಳೆ ಮಾಡಿದ್ದು  ತಪ್ಪು  ಎಂದು ಲೇಖಕರು ಯಾವ ಕಾರಣಕ್ಕೂ ಹೇಳಲು ಇಷ್ಟಪಡುವುದಿಲ್ಲ. ಶೇಖರನ ಪಾತ್ರದ ಮೂಲಕ ಜಯಕುಮಾರ್ ವೇಶ್ಯೆಯ ಬಳಿ ಹೋಗಲು ಉತ್ತೇಜನ ಕೊಡುತ್ತಾರೆ. ಪ್ರಭಾಕರನ ಮೂಲಕ ಮಂಗಳೆಗೆ ನೈತಿಕ ಧೈರ್ಯ ತುಂಬುತ್ತಾರೆ. ಹೀಗಿರುವಾಗ ತನ್ನ  ಅಮ್ಮನ ಕುರಿತು ಬೇರೆ ಮೂಲಗಳಿಂದ ತಿಳಿದ ತೇಜಸ್, ಅಂತಿಮವಾಗಿ ಅಪ್ಪನ ಕುರಿತು ಕೇಳುವುದು ಅದ್ಯಾವ ಲೆಕ್ಕಾಚಾರದಲ್ಲಿ  ತಪ್ಪಾಗುತ್ತದೆ?

ಆಧುನಿಕ ಸಮಾಜದ ಅಪಾರ್ಟ್‌ಮೆಂಟ್‌ಗಳಲ್ಲಿ , ಕಂಪನಿಗಳಲ್ಲಿ, ಐಷಾರಾಮಿ ವರ್ಗದಲ್ಲಿ, ಪಟ್ಟಣದಲ್ಲಿ, ವಲಸೆ ಹೋದ ದೇಶೀಯ ಮೂಲದ ವ್ಯಕ್ತಿಗಳಲ್ಲಿ ಆಗುತ್ತಿರುವ ಮಾನಸಿಕ, ನೈತಿಕ ಬದಲಾವಣೆಗಳನ್ನು ಈ ಕಾದಂಬರಿ ಬಿಂಬಿಸುತ್ತದೆ. ಮಂಗಳೆ ಅನೈತಿಕ ಸಂಬಂಧ ಶುರುವಾಗುವುದು ಅಪಾರ್ಟ್‌ಮೆಂಟ್‌ನ ಮಂಚದ ಮೇಲೆ. ಅಪಾರ್ಟ್‌ಮೆಂಟ್, ನಮ್ಮ  ಸಮಾಜಕ್ಕೆ ಈ ಶತಮಾನದ ಕೊಡುಗೆ. ಹಾಗಾಗಿ ಕಾದಂಬರಿ ಸಮಕಾಲೀನವಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿನ ಯಾವ ಪಾತ್ರಗಳಲ್ಲೂ  ತಾವು ಮಾಡುತ್ತಿರುವುದು ತಪ್ಪು, ಅಪರಾಧ ಎಂಬ ಭಾವನೆ ಬರುವುದಿಲ್ಲ. ಸೆಕ್ಸ್, ಅನೈತಿಕ ಸಂಬಂಧ ಸಹಜ ಅನ್ನಿಸುತ್ತದೆ. ಜತೆಯಾಗಿದ್ದವಳು ಕೈಕೊಟ್ಟ  ತಕ್ಷಣ  ಇನ್ನೊಂದು ಮದುವೆಗೆ, ಅಥವಾ ಮತ್ತೊಬ್ಬಳನ್ನು ಇಟ್ಟುಕೊಳ್ಳಲು ಎಲ್ಲರೂ  ಯಾವ ಮುಜುಗರವೂ ಇಲ್ಲದೇ ತಯಾರಾಗುತ್ತಾರೆ. ಇವೆಲ್ಲ ಸಮಕಾಲೀನ ಬದಲಾವಣೆಗಳಲ್ಲವೆ?

ಪ್ರಕೃತಿ ಪುರುಷ. ಹಾಗಂತ ಮೊನ್ನೆ ಗೆಳತಿಯೊಬ್ಬಳು ಹೇಳುತ್ತಿದ್ದಳು. ಆಕೆ ಕೂಡ ಇವತ್ತಿನವಳು. ಇಂಗ್ಲೀಷ್ ಕಾದಂಬರಿ ಓದುವವಳು. ಇದು ಆಕೆಯೊಬ್ಬಳ ಅಭಿಪ್ರಾಯವಲ್ಲ. ಪ್ರಕೃತಿಯ ಅಲಿಖಿತ ನಿಯಮ. ಪಾಶ್ಚಾತ್ಯ ದೇಶಗಳಲ್ಲಿ  ಇಂಥ ಭಾವನೆಯಿಲ್ಲ. ಅಲ್ಲಿ  ಸ್ತ್ರೀ, ಪುರುಷ ಸಮಾನ ಎಂದು ಭಾಮಿನಿಯರು ಹೇಳಬಹುದು. ಅಥವಾ ಅದು ಸತ್ಯವೂ ಆಗಿರಬಹುದು. ಆದರೆ, ಮಗುವೊಂದು ತಾಯಿಯೆದುರು ಅಪ್ಪ  ಯಾರು ಎಂದು ಕೇಳಿದಾಗ ಆ ತಾಯಿ ಮಗುವನ್ನು ಎದುರಿಸುವ, ಅದೇ ಪ್ರಶ್ನೆಯನ್ನು ಅಪ್ಪನ ಬಳಿ ಹೇಳಿದಾಗ ಆತ ಅದನ್ನು  ಎದುರಿಸುವ ಬಗೆಯನ್ನು ಸುಮ್ಮನೆ ಕಲ್ಪಿಸಿಕೊಳ್ಳಿ…ಅದನ್ನೇ ಕಾದಂಬರಿ ಸಾರುತ್ತದೆ.

ಕಡೆಯದಾಗಿ ಸೆಕ್ಸ್  ಎಂಬ ಪದವನ್ನು  ಗೂಗಲ್ ಸರ್ಚ್‌ನಲ್ಲಿ  ಹುಡುಕಾಟ ನಡೆಸುವುದರಲ್ಲಿ  ಭಾರತ ದ್ವಿತೀಯ ಸ್ಥಾನ ಪಡೆದಿದೆ. ವಿಯೆಟ್ನಾಂ ಮೊದಲ ಸ್ಥಾನದಲ್ಲಿದೆಯಂತೆ ಹಾಗಂತ ಮೊನ್ನೆ ಬಂದ ಸುದ್ದಿಯನ್ನು ನೋಡಿರಬಹುದು. ಅಂದಹಾಗೆ ಇದು ಸಮಕಾಲೀನ ಬೆಳವಣಿಗೆ!

Read Full Post »

ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ದುಡ್ಡು  ಕೊಟ್ಟು  ನೋಡಬೇಕು ಅನ್ನಿಸುವುದಿಲ್ಲ. ಯಾಕಂದ್ರೆ ದುಡ್ಡಿಗೆ ತಕ್ಕದಾದ ಚಿತ್ರಗಳು ತೆರೆ ಮೇಲೆ ಬರುವುದು ತೀರಾ ವಿರಳವಾಗಿದೆ! ಬೆಂಗ್ಳೂರಿಗೆ ಬಂದ ಮೇಲೆ ಈವರೆಗೆ ೪ ಚಿತ್ರ ನೋಡಿದ್ದೇನೆ. ೩ ಅತ್ಯದ್ಭುತ ಚಿತ್ರಗಳು! ಮೊದಲನೆ ಚಿತ್ರ ವಾಯುಪುತ್ರ! ಗೆಳೆಯರ ಒತ್ತಾಸೆಗೆ ಹೋಗಿದ್ದು. ಆದ್ರೂ ನನ್ನ  ಜೇಬಿನಿಂದ ೯೦ ರೂ. ನಷ್ಟವಾಯಿತು. ೨ನೇ ಚಿತ್ರ ಮನಸಾರೆ. ಮನಸಾರೆಯಾಗಿ ಖುಷಿ ಕೊಟ್ಟ  ಚಿತ್ರ. ಕಥೆ ಹಳೆಯದಾದರೂ, ಹೇಳಿಕೊಂಡು ಹೋದ ರೀತಿ ಹೊಸತಾಗಿತ್ತು. ಹುಚ್ಚರ  ನಡುವೆ ಪ್ರೇಮ ಅರಳಿಸುವ ಯತ್ನವನ್ನು  ಯೋಗರಾಜ್ ಭಟ್ ಮಾಡಿದ್ದರು. ಕನ್ನಡದಲ್ಲಿ  ತಲೆ ಖರ್ಚು ಮಾಡುವ ಬೆರಳೆಣಿಕೆ ನಿರ್ದೇಶಕರ ಸಾಲಿನಲ್ಲಿ  ಭಟ್ಟರು ಒಬ್ಬರು. ‘ತುಂಬಾ ಆಫರ್‌ಗಳು ಬರ್‍ತಾವೆ. ಆದ್ರೆ ನಾನು ೧.೫-೨ವರ್ಷಕ್ಕೊಂದು ಚಿತ್ರವನ್ನು ಮಾತ್ರ ಮಾಡುವುದು…’ಹಾಗಂತ ಭಟ್ಟರು ಒಂದ್ಸಲ  ಹೇಳಿದ್ದರು. ಆ ಪರಿ  ತಲೆಕೆಡಿಸಿಕೊಂಡು ಮಾಡುವುದಕ್ಕೆ  ಇರಬೇಕು ಭಟ್ಟರ  ಚಿತ್ರಗಳು ಕನಿಷ್ಠ  ೫೦ದಿನವಾದರೂ ಓಡುತ್ತವೆ. ಒಂದು ಬಾರಿ ಆರಾಮವಾಗಿ ನೋಡುವ ಹಾಗಿರುತ್ತದೆ.

ಈ ವಾರ  ಭರ್ಜರಿಯಾಗಿ ೨ ಚಿತ್ರ ನೋಡಿಬಂದೆ. ಯಾವುದನ್ನೂ  ನೋಡಬೇಕು ಅಂದುಕೊಂಡು ನೋಡಿದ್ದಲ್ಲ. ಅಚಾನಕ್ಕಾಗಿ, ಗೆಳೆಯರ ಒತ್ತಾಸೆಗೆ ಹೋಗಿದ್ದು. ೨ ಚಿತ್ರಕ್ಕೂ  ನಾನು ಟಿಕೆಟ್ ತೆಗೆದುಕೊಳ್ಳಲಿಲ್ಲ. ಆದ್ರೂ ಜೇಬಿಗೆ  ೬೦-೭೦ ರೂ. ಕತ್ತರಿ ಬಿತ್ತು! ಮೊದಲು ನೋಡಿದ್ದು  ೨ನೇ ಮದ್ವೆ. ಹೇಳಿಕೊಳ್ಳಬಹುದಾದ ಕಥೆಯಿಲ್ಲ  ಅನ್ನುವುದಕ್ಕಿಂತ, ಹುಚ್ಚು  ರೀತಿಯ ಕಥೆ ಇದೆ ಅಂತಲೇ ಹೇಳಬಹುದು. ಗಂಡ, ಹೆಂಡ್ತಿಯನ್ನು  ಹಾದಿಗೆ ತರಲಿಕ್ಕೆ ಮತ್ತೊಬ್ಬಳನ್ನು  ತಂದಿಟ್ಟುಕೊಳ್ಳುವ ಯತ್ನ ಮಾಡುತ್ತಾನೆ. ಹೆಂಡ್ತಿ, ಗಂಡನನ್ನು  ಹಾದಿಗೆ ತರಲಿಕ್ಕೆ ಅದೇ ಯತ್ನ  ಮಾಡುತ್ತಾಳೆ. ಚಿತ್ರ ಮುಗಿಯುವ ವೇಳೆಗೆ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ಮಕ್ಕಳಲ್ಲಿ  ಕ್ಷಮೆ ಕೇಳುತ್ತಾರೆ. ಇಷ್ಟೆ  ಚಿತ್ರದ ಕಥೆ. ಇಡೀ ಚಿತ್ರ ನಿಂತಿರುವುದು ಸಂಭಾಷಣೆ ಮೇಲೆ ಎಂಬುದರಲ್ಲಿ  ೨ ಮಾತಿಲ್ಲ. ಹೊಟ್ಟೆ  ಹುಣ್ಣು  ಮಾಡಿಕೊಂಡು ನಗಬಹುದಾದಷ್ಟು  ಡೈಲಾಗ್‌ಗಳು ಸಿನಿಮಾದಲ್ಲಿದೆ. ಆದ್ರೂ, ಅಂಥ ಜೋಕ್‌ಗಳನ್ನು ರಾಜೇಂದ್ರ ಕಾರಂತರು ಬರೆದರಾ ಎಂಬ ಅನುಮಾನ ಶುರುವಾಗುತ್ತದೆ. ಆರಂಭದಲ್ಲಿ  ಹಾಸ್ಯ ನಗಿಸುತ್ತದೆ. ಆದ್ರೆ ಚಿತ್ರ ಸಾಗಿದಂತೆ ವಿಪರೀತ ಅನ್ನಿಸಲು ಶುರುವಾಗುತ್ತದೆ. ಸುವಾಹಿಸಿನಿ ಪ್ರೇಮ್ ಮಂಚದ ಅಡಿಗೆ ಮಲಗಿ ಓಲೆ ಹುಡುಕುವ, ಅನಂತ್‌ನಾಗ್ ಜೆನ್ನಿಫರ್ ಇಬ್ಬರ ಕೆಲವು ದೃಶ್ಯಗಳು ತೀರಾ ಅಸಹ್ಯವೆನಿಸುತ್ತದೆ. ನಗಿಸುವ ಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗಂಡ-ಹೆಂಡತಿಯ ಹುಚ್ಚಾಟ ಮುಗಿಯುವ ಹೊತ್ತಿಗೆ ಪ್ರೇಕ್ಷಕ  ಹುಚ್ಚನಾಗದಿದ್ದರೆ  ಸಾಕು. ಹಾಗಿದೆ ದ್ವಿತಿಯಾರ್ಧ!

ಕೃಷ್ಣನ್ ಲವ್‌ಸ್ಟೋರಿ ಸಕ್ಕತಾಗಿದೆ ಅಂತಾ ತುಂಬಾ ಮಂದಿ  ಹೊಗಳಿದರು. ಯಾವ ಅರ್ಥದಲ್ಲಿ  ಅದು ಸಕ್ಕತ್ ಸಿನಿಮಾ ಅಂತಾ ಗೊತ್ತಾಗುತ್ತಿಲ್ಲ.  ಮೊದಲಾರ್ಧ ತಕ್ಕ ಮಟ್ಟಿಗೆ ಪರ್‍ವಾಗಿಲ್ಲ. ಮಾಮೂಲಿ ಪ್ರೇಮ ಕಥೆ. ಹುಡುಗಿ ಒಲ್ಲೆ ಅಂದ್ರು, ಹುಡುಗ ಬಿಡಲೊಲ್ಲೆ  ಅನ್ನುತ್ತಾನೆ. ಇಲ್ಲೂ  ಕಥೆಯ ಕೊರತೆ. ಸಾಮಾನ್ಯ ಪ್ರೇಕ್ಷಕನೂ ಊಹಿಸಬಹುದಾದ ಕಥೆ. ಚಿತ್ರದ ನಾಯಕ ಕೃಷ್ಣ, ನಾಯಕಿ ಗೀತಾಳನ್ನು ಗೆಲ್ಲುತ್ತಾನೆ. ನಾನು ಯಾರನ್ನು  ಲವ್ ಮಾಡಲ್ಲ  ಎಂಬ ಹುಡುಗಿ, ಕೃಷ್ಣನ ಒಂದೇ-ಒಂದು ಸಹಾಯಕ್ಕೆ ಬಿದ್ದು  ಹೋಗುತ್ತಾಳೆ. ಲವ್ ಶುರುವಾಗುವ ಹೊತ್ತಿಗೆ ಮೊದಲಾರ್ಧ ಮುಗಿಯುತ್ತದೆ. ಗೀತಾ, ಕೃಷ್ಣನಿಂದ ದೂರವಾಗುತ್ತಾಳೆ. ಅದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಆದ್ರೂ ನಿರ್ದೇಶಕರು ಅದನ್ನು  ಸಸ್ಪೆನ್ಸ್  ಎಂದು ಭಾವಿಸಿ  ಕೊನೆಯವರೆಗೂ ಕಾಯ್ದುಕೊಂಡು ಬಂದಿದ್ದಾರೆ!

ಅಮ್ಮನ  ಚೀಟಿ ಸಾಲ ಒಂದುವರೆ ಲಕ್ಷ  ತೀರಿಸಲು ನಾಯಕಿ ಶ್ರೀಮಂತನಾದ ನರೇಂದ್ರ  ಜೊತೆ ಓಡಿಹೋಗುತ್ತಾಳೆ. ಅವನು ಮೊದಲಿನಿಂದಲೂ ಆಕೆಯನ್ನು ಗೆಲ್ಲುವ ಯತ್ನ ಮಾಡುತ್ತಿರುತ್ತಾನೆ. ಕೃಷ್ಣನ ಎದುರು ನಾನೇ ಅವಳನ್ನು ಗೆಲ್ಲುವುದು ಎಂಬ ಸವಾಲನ್ನು  ಹಾಕಿರುತ್ತಾನೆ. ದ್ವೀತಿಯಾರ್ಧದ  ಅನೇಕ ದೃಶ್ಯಗಳನ್ನು ‘ಮನಸಾರೆ’ ಚಿತ್ರದಿಂದ ಕಟ್-ಪೇಸ್ಟ್  ಮಾಡಿದಂತಿದೆ ನಿರ್ದೇಶಕರು! ನಾಯಕಿ ಗೀತಾ ಹುಚ್ಚಿಯಂತೆ ಆಡುವುದನ್ನು ನೋಡಿದರೆ ಮತ್ತೊಮ್ಮೆ ಮನಸಾರೆ ಚಿತ್ರ ನೆನಪಾಗುತ್ತದೆ. ಕ್ಯಾಮೆರಾ ಕೆಲಸದ ಕುರಿತು ಕೆಮ್ಮುವಂತಿಲ್ಲ. ಅಜಯ್‌ ನಾಯಕನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ೨ ಹಾಡುಗಳು ಚೆನ್ನಾಗಿವೆ. ಆದ್ರೂ  ಕಥೆ ಹೇಳಿಕೊಂಡು ಹೋದ ರೀತಿ ಯಾಕೊ ಇಷ್ಟವಾಗಲಿಲ್ಲ. ಸುಮಾರು ಸಲ ಚಿತ್ರ ಬೋರ್ ಅನ್ನಿಸತ್ತೆ.

ಸಿನಿಮಾ ಅನ್ನೊಂದು ಟೀಂ ವರ್ಕ್. ಕಥೆಗಾರ, ಸಂಭಾಷಣೆಕಾರ, ನಿರ್ದೆಶಕ ಹಾಗೂ ನಿರ್ಮಾಪಕರ ನಡುವಿನ ಹೊಂದಾಣಿಕೆಯೇ ಚಿತ್ರದ ಜೀವಾಳ. ಎಷ್ಟೋ ಸಲ  ಸಂಭಾಷಣೆಕಾರರಿಗೆ ಗೊತ್ತಿಲ್ಲದೆ ಡೈಲಾಗ್‌ಗಳು ಬದಲಾಗಿ ಬಿಟ್ಟಿರುತ್ತವೆ. ಕಥೆಯನ್ನು ತಿರುಚಿರುತ್ತಾರೆ. ನಿರ್ದೇಶಕರು ದುಡ್ಡು  ಹಾಕುವ ನಿರ್ಮಾಪಕನ ಒತ್ತಡಕ್ಕೆ ಒಳಗಾಗಿ ಕೆಲ ದೃಶ್ಯಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಿರ್ದೇಶಕನಲ್ಲಿ  ಕಲಾ ಜಾಗೃತಿಯ ಜೊತೆಗೆ ನಾಯಕತ್ವ  ಗುಣವೂ ಇರುವುದು ಅನಿವಾರ್ಯ. ತಂಡವನ್ನು ನಡೆಸಿಕೊಂಡು ಹೋಗಬಲ್ಲ ನಿರ್ದೇಶಕನ ಚಿತ್ರ ಗೆಲ್ಲುತ್ತದೆ.

ಹೌದು, ನನ್ನಂತೆಯೇ ದುಡ್ಡು  ಕೊಟ್ಟ  ಅನೇಕರು  ಚಿತ್ರಕ್ಕೆ, ಕಥೆಗೆ, ಸಂಭಾಷಣೆಗೆ ಉಗಿಯುತ್ತಾರೆ. ಅದೆಷ್ಟೆ  ತೆರೆ ಮರೆಯಲ್ಲಿ  ಕೆಲಸ ಮಾಡಿದರೂ, ಬೆಳವಣಿಗೆ ಬೇಕು ಅಂದ್ರೆ ಮುಂದೊಂದು ದಿನ ಹೆಸರು ಹಾಕಿಕೊಂಡು ಕಣಕ್ಕೆ ಇಳಿಯಲೇ ಬೇಕು. ತೋಪಾಗಲಿ, ಯಶಸ್ವಿಯಾಗಲಿ ಎಲ್ಲದನ್ನು ಸಹಿಸಿಕೊಳ್ಳಬೇಕು ಅಂದುಕೊಳ್ಳುವ ಹೊತ್ತಿಗೆ ನಿದ್ದೆ ಕೈಬೀಸಿ ಕರೆಯುತ್ತಿತ್ತು!

Read Full Post »