Feeds:
ಲೇಖನಗಳು
ಟಿಪ್ಪಣಿಗಳು

Archive for ಡಿಸೆಂಬರ್, 2008

‘ತಬ್ಬಲಿಯು  ನೀನಾದೆ ಮಗನೇ’ ಎಂಬ ಕೃತಿಯನ್ನು ಓದಲು ಸೂಚಿಸಿದ ಬ್ಲಾಗ್ ಮಿತ್ರರಿಗೆ ಧನ್ಯವಾದ ಹೇಳುತ್ತಾ ಮಾತು ಆರಂಭಿಸುತ್ತಿದ್ದೇನೆ. ಅಜ್ಜ, ಮೊಮ್ಮಗನ ತರ್ಕ ಸರಣಿಯಲ್ಲಿ  ಇಡೀ ಭರತಭೂಮಿಯ ಆಚಾರ-ವಿಚಾರಗಳನ್ನು  ಪ್ರತಿನಿಸುವ ಕೃತಿ ತಬ್ಬಲಿ ನೀನಾದೆ.  ಆ ಕೃತಿಯನ್ನು  ಓದದ ಈ ತಲೆಮಾರಿನ ಎಲ್ಲಾ  ಯುವಕರು  ಒಮ್ಮೆ  ಓದಲೇ ಬೇಕು ಎಂಬ ಪ್ರೀತಿಪೂರ್ವಕ ಆಗ್ರಹ ನನ್ನದು. ನಮ್ಮ ಹೆಮ್ಮಯ ಭಾರತದ ಚಿಂತನಾ ಲಹರಿಯನ್ನು ಅರ್ಥೈಸಿಕೊಳ್ಳಲಿಕ್ಕೋಸ್ಕರವಾದರೂ ನೀವು ಆ ಕಾದಂಬರಿಯನ್ನು ಓದಬೇಕು.

ಪುಣ್ಯಕೋಟಿ ತಳಿಯ ಹಸುವಿನ ವರ್ಣನೆಯೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಮೊದಲ ೧೦-೧೫ ಪುಟಗಳು  ಸ್ವಲ್ಪ   ಬೋರ್ ಅನ್ನಿಸುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಕಾದಂಬರಿಕಾರರ ಮೊದಲ ಪುಟಗಳು ತುಂಬಾ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಮುಂದೆ ಹೋದಂತೆ ಕಾದಂಬರಿ ಸೊರಗುತ್ತಾ ಹೋಗುತ್ತದೆ. ಆದರೆ ಭೈರಪ್ಪನವರು ಅಂತಹ ಲೇಖಕರಿಗೆ ತದ್ವಿರುದ್ಧ  ಅಂದರೂ ತಪ್ಪಗಲಾರದು. ಕಾದಂಬರಿ ಅಂತ್ಯ ಭಾಗಕ್ಕೆ ತಲುಪಿ ಮುಗಿದಿದ್ದರೂ, ಮುಗಿಯಿತು ಅನ್ನಿಸುವುದಿಲ್ಲ ಅವರ ಕೃತಿಗಳು. ಅದರಲ್ಲೂ ತಬ್ಬಲಿ…‘ಮನೋಭಾವ ಬದಲಿಸಿಕೊಂಡು ಮುಂಬೈಯಿಂದ ವಾಪಾಸು ಬಂದ ಕಾಳಿಂಗನ ಮುಂದಿನ ಬದುಕನ್ನು ಒಂಚೂರು ವಿವರಿಸಬೇಕಿತ್ತು. ಕಾದಂಬರಿ ಅಪೂರ್ಣವಾದಂತೆ ಭಾಸವಾಗುತ್ತಿದೆ ನನಗೆ’ ಎಂದು ರಾಜಾರಾಮನ ಬಳಿ ಹೇಳಿದರೆ, ಅವ  ‘ಮಗಾ ಈಗಲೇ ೩೦೦ ಪುಟ ದಾಟಿದೆ ಸರಿಯಾಗಿ ನೋಡು ಅಂದ!’

ಗೊಲ್ಲ  ವಂಶದ ಕಾಳಿಂಗಜ್ಜನ ಹಟ್ಟಿಯೇ ಕಾದಂಬರಿಯ ಕೇಂದ್ರ. ಅಮೆರಿಕಕ್ಕೆ ಹೋಗಿ ಕೃಷಿ ಪದವಿ ಗಳಿಸಿ ಮನೆಗೆ ಬರುವ ಕಾಳಿಂಗಜ್ಜನ ಮೊಮ್ಮಗ ಮರಿ ಕಾಳಿಂಗನೇ ಕಥಾ ನಾಯಕ.  ಮರಿ ಕಾಳಿಂಗನ ಹೆಂಡತಿ ಹೀಲ್ಡಾ  ಮತ್ತು ಆತನ ಸ್ನೇಹಿತ  ವೆಂಕಟರಮಣ ಕಾದಂಬರಿಯ ಜೀವಾಳ ಅಂತಾ ಅನ್ನಿಸಿದರೂ, ಅಲ್ಲಿ  ಬರುವ ಪ್ರತಿಯೊಂದು ಪಾತ್ರಕ್ಕೂ ಜೀವವಿದೆ. ದೇವಸ್ಥಾನದ ಗಂಟೆಯೂ ಅದರದ್ದೇ  ಆದ ರೀತಿಯಲ್ಲಿ  ಮಾತಾಡುತ್ತದೆ. ಹಾಲು ಕರೆಯುವ ಯಂತ್ರವೂ ಒಂದಿಷ್ಟು  ವಿಚಾರಗಳ ಪ್ರತೀಕದಂತೆ ಭಾಸವಾಗುತ್ತದೆ.

ಗೋವನ್ನು  ತಾಯಿ-ತಂದೆ, ದೇವರು ಎಂದು ನಂಬಿರುವ ಅರುಣಗಿರಿ ಬೆಟ್ಟದ ತಪ್ಪಲಿನ ಕಾಳಿಂಗಜ್ಜ, ಒಲ್ಲದ ಮನಸ್ಸಿನಿಂದ ಮೊಮ್ಮಗ  ಕಾಳಿಂಗನನ್ನು ವಿದ್ಯಾಭ್ಯಾಸ ಮಾಡಿಸುತ್ತಾನೆ. ಆದರೆ ಮೊಮ್ಮಗ ಹಸು ಎಂದರೆ ಹಾಲು ಕೊಡುವ ಸರಕು, ಮಾಂಸ ನೀಡುವ ಪ್ರಾಣಿ ಎಂದು ಭಾವಿಸುತ್ತಾನೆ. ಅಮೆರಿಕೆಯಿಂದ ಮರಳಿದ ನಂತರ ‘ಹೈನೋದ್ಯಮ’ವನ್ನು ಆರಂಭಿಸುತ್ತಾನೆ…ಹುಟ್ಟಿ ಬೆಳೆದ, ಆಡಿ ಕಳೆದ ನಾಡಿನ ಆಚಾರ-ವಿಚಾರಗಳನ್ನು ವಿರೋಸುತ್ತಾನೆ…ಮಾತು ಬರದ ತನ್ನ ತಾಯಿ, ಹಟ್ಟಿಯಲ್ಲಿನ  ಹಸು ಎರಡು ಒಂದೇ ಜಾತಿಯವು ಎಂಬ ನಿಲುವು ತಳೆಯುತ್ತಾನೆ!

ಇಲ್ಲ, ಹೆಚ್ಚು  ವಿವರಿಸಲು ನನಗೆ ಪದಗಳು ದೊರೆಯುತ್ತಿಲ್ಲ. ಹಾಗಾಗಿ ನೀವೊಮ್ಮೆ  ಓದಿಬಿಡಿ!

ನಮ್ಮ ಮನೆಯಲ್ಲೂ ಕೊಟ್ಟಿಗೆಯಿದೆ. ಅಪ್ಪ  ಹಸುವಿನೊಂದಿಗೆ ಗಂಟೆಗಟ್ಟಲೇ ಹರಟುತ್ತಾರೆ. ತೋಟಕ್ಕೆ ಬೇಲಿ ಕಟ್ಟುವುದು, ಗಿಡಕ್ಕೆ  ಗೊಬ್ಬರ  ಹಾಕುವುದು…ಇವೆಲ್ಲಾ  ನನಗೆ ಬಲು ಪ್ರೀತಿಯ ಕೆಲಸ. ಆದರೆ ಹಸು, ಹಾಲು ಕರೆಯುವುದು, ಕೊಟ್ಟಿಗೆ ಕಡೆ ಹೋಗುವುದು…ಇವೆಲ್ಲಾ  ನನಗೆ ಮೊದಲಿನಿಂದಲೂ ಅಲರ್ಜಿ. ನಾಯಿ, ಬೆಕ್ಕು…ಇತ್ಯಾದಿಗಳಿಂದ ನಾನು ಸದಾ ದೂರ.(ಕೆಲವೊಮ್ಮೆ ಮನುಷ್ಯರಿಂದಲೂ!) ಅಪ್ಪ  ಹಸುವಿನೊಂದಿಗೆ ಮಾತಾಡುವುದು ನೋಡಿ ನನಗೆ ನಗು ಬರುತ್ತಿತ್ತು. ನಮ್ಮ  ಮನೆ ವಿಜಯ ಸತ್ತಾಗ ಅಪ್ಪ  ಊಟ ಬಿಟ್ಟಿದ್ದು  ನೊಡಿ, ನಕ್ಕಿದೆ. ಆದರೆ ಈ ಕಾದಂಬರಿ ಓದಿದ ನಂತರ, ಮಾತು ಬರದ ವಿಜಯನ  ಜತೆ ಹರಟೆ ಹೊಡೆಯುವ ಅಪ್ಪನ  ನೆನಪಾಯಿತು.

ನಮ್ಮ ಮನೆಯ ಕೊಟ್ಟಿಗೆಯಲ್ಲಿ  ಈಗ ಒಂದೇ ಕರುವಿದೆ. ಉಳಿದವೆಲ್ಲವನ್ನೂ ನಾನು ಜಗಳ ಹೊಡೆದು ಮಾರಾಟ ಮಾಡಿಸಿದ್ದೇನೆ. ಕೊಟ್ಟಿಗೆ ಕೆಲಸ ನಿಮ್ಮ ಕೈಲಾಗದು, ಡೈರಿಯಿಂದ ಹಾಲು ತೆಗೆದುಕೊಳ್ಳಿ  ಅಂತಾ ಅಪ್ಪನನ್ನು  ಒಪ್ಪಿಸಲು ಹರಸಾಹಸವನ್ನೇ ಮಾಡಿದೆ. ಕೊನೆಗೂ ಒಂದು ಕರುವನ್ನು ಕೊಟ್ಟಿಗೆಯಲ್ಲಿ ಉಳಿಸಿಕೊಂಡರು…ಕಾದಂಬರಿ ಓದುತ್ತಾ ಹೋದ ಹಾಗೆ ಅದೆಲ್ಲಾ  ನೆನಪಾಯಿತು. ಕಣ್ಣಲ್ಲಿ  ನೀರೂರಿತು.

ಪೂಜೆ-ಪುನಸ್ಕಾರ…ಇವೆಲ್ಲವೂ ನಮ್ಮ ಮನೆಯಲ್ಲಿ  ಜೋರಾಗಿಯೇ ಇದೆ. ೧೦-೧೫ ಸಾವಿರ ರೂ. ಖರ್ಚು ಮಾಡಿ ಉಪನಯನ ಮಾಡಿದ್ದು  ವ್ಯರ್ಥವಾಗಬಾರದು ಅಂತಾ   ಜನಿವಾರ ಹಾಕಿದ ೨ ವರ್ಷ ನಿಷ್ಠೆಯಿಂದ ಸಂಧ್ಯಾವಂದನೆ ಮಾಡಿದೆ! ನಂತರ ನಾನದರ  ಸುದ್ದಿಗೂ ಹೋಗಲಿಲ್ಲ. ಆ ಕುರಿತು ಬುದ್ದಿ  ಹೇಳಿದರೂ ಕೇಳದ ನನ್ನನ್ನು  ಒತ್ತಾಯಿಸುವುದನ್ನೇ ಬಿಟ್ಟು ಬಿಟ್ಟರು. ‘ನಮ್ಮ ಹಣೆ ಮೇಲೆ ಬರೆದಿದ್ದು ಆಗತ್ತೆ’ ಅಂತಾ ಅಮ್ಮ  ಯಾವಾಗಲಾದರೂ ಗೊಣಗುತ್ತಿರುತ್ತಾರೆ….ಇದೆಲ್ಲಾ  ಯಾಕೋ ಒಮ್ಮೆಗೆ ನೆನಪಿಗೆ ಬಂತು…ಓದಿದವರು, ವಿದ್ಯಾವಂತರು, ವಿಚಾರವಂತರೆಂಬ ಫೋಸು ಕೊಡುವ ನಾವು  ಹಳ್ಳಿಗರ  ಮುಗ್ದ  ಭಾವನೆಯನ್ನು ಕೊಲ್ಲುವ ಕೆಲಸ ಮಾಡುತ್ತಿದ್ದೇವೆ ಅಂತಾ ನನಗೆ ಅದೆಷ್ಟೋ  ಸಲ ಅನ್ನಿಸುತ್ತದೆ…

ಅಂದಹಾಗೆ  ಇದು ‘ಪ್ರಗತಿ’ ವಿರೋಧಿ  ಕಾದಂಬರಿಯಂತೆ ಮಾರಾಯ್ರೇ!!!

ಇದರ ಬೆನ್ನಿಗೆ  ‘ಸಾರ್ಥ’ ಎಂಬ ಮತ್ತೊಂದು ಕಾದಂಬರಿಯನ್ನು ಓದಿ ಮುಗಿಸಿದೆ. ಇತಿಹಾಸಿಕ ಕಥಾವಸ್ತುವನ್ನು ಹೊಂದಿರುವ ಈ ಕೃತಿ, ‘ಮಂದ್ರ’ಕ್ಕಿಂತಲೂ ಉತ್ತಮವಾಗಿದೆ ಅನ್ನಿಸಿತು ನನಗೆ. ಮನಃಶಾಸ್ತ್ರ, ತತ್ವಶಾಸ್ತ್ರ  ಇಷ್ಟ  ಪಡುವವರು ಓದಲೇ ಬೇಕಾದ ಕೃತಿಯಿದು. ಭಾವನೆಗಳನ್ನು  ಬರಹದ ಸರಕನ್ನಾಗಿಸುವ ಅಭಿಪ್ಸೆಯುಳ್ಳ  ಮಂದಿಗೂ ಈ ಕೃತಿ ಉತ್ತಮ ಆಹಾರ. ಹೀಗೆ ಸುಮ್ಮನೆ  ಓದುತ್ತೇನೆ  ಎನ್ನುವವರಿಗೆ  ಒಂಚೂರು ಬೋರ್ ಅನ್ನಿಸಬಹುದು. ಯಾಕೆಂದರೆ ಕಥಾವಸ್ತುವೇ ವಿಚಾರ ಪ್ರಧಾನವಾಗಿದೆ…

Read Full Post »

ಹಾಯ್ ಪುಟ್ಟಿ,

ಕಡೆಯದಾಗಿ ನಿನ್ನ ಕೈಗೊಂದು ಪತ್ರ ನೀಡಬೇಕು ಅನ್ನಿಸಿದರೂ, ಏನೂ ಬರೆಯಬೇಕು ಅಂತಾ ತೋಚುತ್ತಿಲ್ಲ. ನಿನ್ನ ನೆನಪಿನಲ್ಲಿ ಕಣ್ಣು ಒದ್ದೆ ಮಾಡಿಕೊಂಡು ಮಲಗಿದಾಗ ಒತ್ತರಿಸಿ ಬಂದ ಭಾವಗಳನ್ನೇ ಅಕ್ಷರರೂಪಕ್ಕೆ ಇಳಿಸುತ್ತಿದ್ದೇನೆ. ಗೆಳೆತನ ಪ್ರೀತಿಯಲ್ಲ, ಪ್ರೀತಿಗೊಂದು ಪ್ರತ್ಯೇಕ ಅರ್ಥವಿದೆ ಎಂಬ ಮಾತಿನ ಅರ್ಥ ಇವತ್ತು ಗೊತ್ತಾಗುತ್ತಿದೆ.

ನನ್ನ, ನಿನ್ನ ಗೆಳೆತನಕ್ಕೆ ಸಾಕಷ್ಟು ಇತಿಹಾಸವಿದೆ. ಆದರೂ ನನ್ನ ಭಾವನೆಯನ್ನು ನೀನು ಅರ್ಥಮಾಡಿಕೊಳ್ಳಲಿಲ್ಲ. ಅರ್ಥಮಾಡಿಕೊಂಡಿಲ್ಲ ಎಂಬುದು ನನಗೆ ಅರ್ಥವಾಗಲಿಲ್ಲ! ಹಾಗಾಗಿಯೇ ನೀನಿವತ್ತು ನಮ್ಮಿಬ್ಬರ ಭಾವಲಹರಿಯಾಚೆ ಹೊರಟು ನಿಂತಿರುವೆ. ಮುಂದೇನು ಹೇಳಬೇಕು ಅಂತಾನೇ ತೋಚುತ್ತಿಲ್ಲ…

ಅದೆಷ್ಟೋ ಸಲ ನನ್ನ ಭಾವನೆಗಳು ನನಗೇ ಅರ್ಥವಾಗುವುದಿಲ್ಲ. ಆದರೂ ನೀನು ನನ್ನ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು ಎಂದು ನಾನೇಕೆ ಹಠ ಮಾಡುತ್ತಿದ್ದೇನೆ? ಎಷ್ಟು ಸಲ ಆಲೋಚಿಸಿದರೂ ಉತ್ತರ ಹೊಳೆಯುತ್ತಿಲ್ಲ.

ಜತೆಗಿದ್ದಷ್ಟೂ ದಿನ ನಿನ್ನನ್ನು ಅಣಕಿಸುತ್ತಿದ್ದೆ. ಆಡಿಕೊಳ್ಳುತ್ತಿದೆ. ಹಂಗಿಸುತ್ತಿದ್ದೆ. ನನ್ನ ಅಂತಹ ಮಂಗಚೇಷ್ಟೆಗಳಿಗಾಗಿ ನಾನೀಗ ಯಾರನ್ನು ಹುಡುಕಿಕೊಳ್ಳಲಿ? ಯಾರನ್ನು ಕಲ್ಪಿಸಿಕೊಂಡು ಪುಟ್ಟಿಗೊಂದು ಪತ್ರ ಬರೆಯಲಿ?

‘ನಾನು ಇನ್ನೊಬ್ಬರ ಪಾಲಾಗುತ್ತಿದ್ದೇನೆ’ ಹಾಗಂತ ನೀನು ನಗುತ್ತಲೇ ಹೇಳಿದೆ. ನಾನು ನಿನ್ನನ್ನು ಪೀಡಿಸಿದೆ. ನಿನ್ನ ಜತೆ ಸೇರಿ ನಾನೂ ನಕ್ಕೆ! ನನ್ನ ಹೃದಯದ ನಗುವನ್ನು ಒಳಗೊಳಗೇ ಹಿಡಿದಿಟ್ಟುಕೊಂಡೆ. ಅಷ್ಟೊಂದು ಮುಖವಾಡ ಹಾಕಿಕೊಳ್ಳುವ ಅಗತ್ಯವೇನಿತ್ತು ನನಗೆ? ಮತ್ತದೇ ಕಣ್ಣೀರು, ಹಳೆಯ ನೆನಪುಗಳು, ಎದೆಯಲ್ಲಿ ಮಾಸುತ್ತಿರುವ ಭಾವಗಳು…ಇವಿಷ್ಟು ಬಿಟ್ಟು ಗೀಚಲು ಬೇರೇನೂ ಹೊಳೆಯುತ್ತಿಲ್ಲ. ಗೀಚಿದರೂ ಪ್ರಯೋಜನವಿಲ್ಲ.

ಒಂದು ಹುಡುಗಿಗಾಗಿ ಬದುಕುವಷ್ಟು ಕನಿಷ್ಠ ವ್ಯಕ್ತಿತ್ವ ನನ್ನದಾಗಬೇಕಾ? ಹಾಗೊಂದು ಪ್ರಶ್ನೆ ಕೇಳಿಕೊಂಡಾಗಲೆಲ್ಲಾ ಬದುಕಿಗೊಂದು ಹೊಸ ಚೈತನ್ಯ ಬರುತ್ತದೆ. ಸಾಧನೆ ಮಾಡುವ ಹಂಬಲ ಗರಿಗೆದರಿ ನಿಲ್ಲುತ್ತದೆ. ಆ ಗರಿ ಕಣ್ಣೇದುರಿಗೆ ಕುಣಿದಾಡುತ್ತಿರುವಾಗಲೇ ನಿನ್ನ ಕಳಕೊಂಡ ನೆನಪು ಚಿಮ್ಮುತ್ತದೆ. ನಿನ್ನನ್ನೇ ಪಡೆಯಲಾಗದ ಮೇಲೆ, ಬದುಕಿನಲ್ಲಿ ಸಾಸಿ ಪಡೆಯಲಿಕ್ಕಿನ್ನೇನು ಬಾಕಿ ಉಳಿದಿದೆ? ಎಂಬ ಪ್ರಶ್ನೆ ಕಾಡುತ್ತದೆ.

ದಿನದಲ್ಲಿ ಮೈದಳೆದು ನಿಲ್ಲುವ ಹತ್ತೆಂಟು ಮುಖಗಳು, ನಿಮಿಷ ನಿಮಿಷಕ್ಕೂ ಬದಲಾಗುವ ಚಹರೆಗಳು, ಕ್ಷಣ ಕ್ಷಣಕ್ಕೂ ಕಾಡುವ ದ್ವಂದ್ವ, ಇವುಗಳ ನಡುವೆಯೇ ಪುಟಿದೇಳುವ ಸ್ಥಿರತೆ…ಹೌದು, ಬದುಕೆಂದರೆ ಇವಿಷ್ಟೆ…

ಬದುಕೇ ಅಪೂರ್ಣ ಅನ್ನಿಸುತ್ತಿರುವಾಗ, ಕಾಗದ ಪೂರ್ಣಗೊಳಿಸುವ ವ್ಯವಧಾನ ನನ್ನಲ್ಲಿ ಉಳಿದಿಲ್ಲ. ಸೋ, ಇಲ್ಲಿಗೇ ಪತ್ರ ಮುಗಿಸುತ್ತಿರುವೆ. ಕಡೆಯ ಘಳಿಗೆಯಲ್ಲಿ ಕೈಕೊಟ್ಟು ಹೋಗುತ್ತಿರುವವಳು ಅಂತಾ ಆರೋಪಿಸಿ ಪತ್ರಕೊಟ್ಟ ಅಂತಾ ನೀನು ಮಾತ್ರ ಕಣ್ಣೀರಿಡಬೇಡ ಕೂಸೇ! ನಿನ್ನ ಬದುಕು ಸದಾ ಹಸನಾಗಿರಲಿ…

ಇಂತಿ

Read Full Post »

ಸಾವು

( ಲಘು ಎನ್ನಲಾಗದ, ಗಂಭೀರವೂ ಅಲ್ಲದ ಒಂದು ಪ್ರಬಂಧ ಬರಹ!)

‘ಲಕ್ಕಿಜಡ್ಡಿ  ಸುನೀತಕ್ಕನ ಮಗ ಸತ್ತು ಹೋದ್ನಡ…’ಅಮ್ಮ ಫೋನಿನಲ್ಲಿ  ಅಳುತ್ತಾ ಹೇಳಿದಳು.
‘ಪಾಠಿಚೀಲ ತಗಂಡು ಶಾಲೆಗೆ ಹೊರಟವ ದಡಾರನೆ ಬಿದ್ನಡ, ನೋಡತಂಕ ಜೀವ ಹೋಗಿತ್ತಡ. ಚೆಂದದ ಮಾಣಿ, ಇನ್ನೂ ಮೂರನೇ ಕ್ಲಾಸು…’ಅಮ್ಮ  ಅಳು ಮುಂದುವರಿಸಿದಳು.

‘ಅಮ್ಮ  ಸುಮ್ನಿರೆ ನಾನೇನು ಇಷ್ಟು  ಬೇಗ ಸಾಯದಿಲ್ಲೆ…’

ಯಾವ ಧೈರ್ಯದ ಮೇಲೆ ಅಮ್ಮನಿಗೆ ನಾನು ಆ ಮಾತು ಹೇಳಿದೆ? ಯಾರ ಸಾವು ಯಾವ ಘಳಿಗೆಯಲ್ಲಿ  ಬರುವುದೆಂದು ಬಲ್ಲವರ್ಯಾರು?

ಬದುಕಿನ ಕುರಿತಾಗಿ ನನ್ನಲ್ಲಿರುವ ಕನಸುಗಳು ಬದುಕುವ ಬಲವಾದ ನಂಬಿಕೆ ಹುಟ್ಟಿಸಿವೆಯಾ? ಅಥವಾ ಪಾಪಿ ಚಿರಾಯು ಎಂಬ ಮಾತನ್ನು ನಾನು ಬಲವಾಗಿ ನಂಬುತ್ತಿದ್ದೇನಾ?!
ಏನೋ ಗೊತ್ತಿಲ್ಲ  ಅಮ್ಮನನ್ನು ಸಮಧಾನಗೊಳಿಸಲು ಆ ಘಳಿಗೆಯಲ್ಲಿ  ಹಾಗೆ ಹೇಳಿರಲೂಬಹುದು.

ಭೀಷ್ಮ ,
ಇವ ಇಚ್ಛಾ  ಮರಣಿಯಾಗಿದ್ದನಂತೆ. ಹಾಗಂತ ಅದ್ಯಾವುದೋ ಕಥೆಯಲ್ಲಿ  ಓದಿದ ನೆನಪು. ತನ್ನ ಸಿಂಹಾಸನವನ್ನು ತ್ಯಾಗ ಮಾಡಿ ತಂದೆ ಶಂತನುವನ್ನು ಭೀಷ್ಮ ಮದುವೆ ಮಾಡಿಸಿದ್ದನಂತೆ. ಅದರಿಂದ ಸಂತೋಷಗೊಂಡ ಶಂತನು ಮಗನಿಗೆ ಇಚ್ಛಾಮರಣಿಯಾಗುವ ವರ ಕೊಟ್ಟಿದ್ದನಂತೆ.
ಯುದ್ಧದಲ್ಲಿ  ಸೋತು ರಂಗಭೂಮಿಯಿಂದ ಹೊರನಡೆದ ಭೀಷ್ಮ ಉತ್ತರಾಯಣ ಬರುವವರೆಗೂ ಸಾವನ್ನು ಕೈಯಲ್ಲೇ ಹಿಡಿದಿಟ್ಟುಕೊಂಡಿದ್ದನಂತೆ!

ನನ್ನ  ಅಪ್ಪನಿಗೂ ಇನ್ನೊಂದು ಮದುವೆ ಮಾಡಿಸಿದರೆ ನನಗೂ ಅಂತಹದ್ದೊಂದು ವರ ದೊರಕಬಹುದಾ?! ವರ ದೊರಕದಿದ್ದರೂ ಅಮ್ಮನಿಂದ ಒಂದಿಷ್ಟು   ಬೈಗುಳ, ಸಮಾಜದಿಂದ ಛೀಮಾರಿಯಂತೂ ದೊರಕುತ್ತದೆ. ಅಪ್ಪನೊಬ್ಬ  ನನ್ನ ಬೆನ್ನು  ತಟ್ಟಬಹುದು. ಅದು ಅನಿವಾರ್ಯವಾಗಿ!

ಸುನೀತಕ್ಕನ ಮಗನ ಸಾವಿನ  ಸುದ್ದಿ ಕೇಳಿದ ಸಂಜೆ ಸಾವಿನ ಕುರಿತು ಏನಾದರೂ ಬರೆಯಬೇಕು ಅನ್ನಿಸಿತು. ಎಚ್ಚರವಾದಾಗ ಮಧ್ಯರಾತ್ರಿ ೨.೩೦ ಆಗಿತ್ತು. ಸಾವಿನ ಕುರಿತಾಗಿ ಬರೆಯಬೇಕಾದ ವಿಚಾರ ತಲೆಯಲ್ಲಿ  ಸ್ಪಷ್ಟವಾಗಿ ತಿರುಗಾಡತೊಡಗಿತ್ತು. ಎದ್ದು  ಬರೆಯೋಣವೆಂದರೆ ಕರೆಂಟ್ ಇರಲಿಲ್ಲ. ಬೆಳಕು ಹರಿಯುವುದರೊಳಗೆ ನಾನೇನಾದರೂ ಸತ್ತರೆ? ಎಂಬ ಪ್ರಶ್ನೆ  ತಲೆಯನ್ನು ಕೊರೆಯತೊಡಗಿತು. ಎದೆಯಲೆಲ್ಲಾ  ಒಂತರಹ ಸಂಕಟ ಶುರುವಾಯಿತು. ಪಕ್ಕದಲ್ಲಿ  ಮಲಗಿದ್ದ  ರಾಘುವನ್ನು ಎಬ್ಬಿಸಿ ನನಗಾಗುತ್ತಿರುವ ಸಂಕಟವನ್ನು ಹೇಳಲಾ?

ಪ್ರಯೋಜನವೇನು?

ಭಾವ ರಾತ್ರಿಯಿಡಿ ಸಾವಿನ ಕುರಿತಾಗಿ ಬರೆಯಬೇಕು ಅನ್ನುತ್ತಿದ್ದ  ಎಂದು ರಾಘು ಬಂದವರ ಹತ್ತಿರವೆಲ್ಲಾ ದುಖ ತೋಡಿಕೊಳ್ಳಬಹುದು. ಅಥವಾ ಈ ಮಧ್ಯರಾತ್ರಿಯಲ್ಲಿ  ಆಸ್ಪತ್ರೆಗೆ ಹೋಗೋಣ ಅನ್ನಬಹುದು. ಭಾವನಿಗೆ ಹೀಗಾಗಿದೆ ಅಂತಾ ಯಾರ್‍ಯಾರಿಗೋ ಫೋನ್ ಮಾಡಿ ತಿಳಿಸಬಹುದು. ನನ್ನಿಂದಾಗಿ ಒಂದಿಷ್ಟು  ಜನಕ್ಕೆ ಉಪದ್ರ ಕೊಡಬಹುದು…ಆಲೋಚೆನೆಗೆಲ್ಲಾ  ವಿರಾಮ ಹೇಳಿ ನಿದ್ದೆಗೆ ಜಾರಿದ್ದೆ  ಅಂತಾ ನನಗೆ ಗೊತ್ತಾಗಿದ್ದು  ಬೆಳಿಗ್ಗೆ  ಎದ್ದ ಮೇಲೇನೇ!

ಅಜ್ಜ  ಏಕಾದಶಿ ದಿನ  ಸತ್ತಿದ್ದರಂತೆ. ತಮ್ಮ  ಪರಮಾಪ್ತ ಗೆಳೆಯರಾದ ಖಂಡಿಕದ ಹೆಗಡೆಯವರನ್ನು ಕರೆಸಿ, ‘ಹೆಗಡೆ ನಾನಿನ್ನು ಹೋಗಿ ಬತ್ತಿ’ ಅಂತಾ ಹೇಳಿ ಸತ್ತಿದ್ದರಂತೆ. ಅಜ್ಜಿ  ಕೈಯಿಂದ ಎಣ್ಣೆ ರೊಟ್ಟಿ ಮಾಡಿಸಿಕೊಂಡು, ತಿಂದು ಆದ ನಂತರವೇ  ಅಜ್ಜ  ಕೊನೆಯುಸಿರೆಳೆದಿದ್ದಂತೆ. ಹಾಗಂತ ಅಪ್ಪ  ಯಾವಾಗಲೂ ಕಥೆ ಹೇಳುತ್ತಿರುತ್ತಾರೆ.

ಹೆರಿಡಿಟಿಗೆ ಸಂಬಂದಿಸಿದ ರೋಗಗಳೆಲ್ಲಾ  ಅಜ್ಜನಿಂದ ಮೊಮ್ಮಗನಿಗೋ, ಮೊಮ್ಮಳಿಗೋ ಬರುತ್ತವಂತೆ. ಹಾಗಂತ ವಿಜ್ಞಾನದ ಪಾಠದಲ್ಲಿ  ಓದಿದ ನೆನಪು. ಸಾವು ಕೂಡ ಅಂತಹದ್ದೇ  ಒಂದು ರೋಗವಾಗಿರಬಹುದಾ? ನನಗೂ ಅಜ್ಜನಂತಹದ್ದೆ  ಸಾವು ಬರಬಹುದಾ…?

ಹನುಮಂತ, ಜಾಂಬವ…ಇತ್ಯಾದಿ ಮಹಾಪುರುಷರೆಲ್ಲಾ  ಚಿರಂಜೀವಿಗಳು ಎಂದು ಪುರಾಣದ ಕಥೆಯಿದೆ. ಚಿರಂಜೀವಿ ಅಂದರೆ ಅವರಿಗೆಲ್ಲಾ  ಸಾವೇ ಇಲ್ಲವಂತೆ ಎಂದು ಅಜ್ಜಿ  ಕಥೆ ಹೇಳುತ್ತಿದ್ದಳು. ಹಾಗಾದರೆ ಆ ಹನುಮ ಈಗ ಎಲ್ಲಿದ್ದಾನೆ ಅಜ್ಜಿ  ಅಂತಾ ಕೂತುಹಲದಿಂದ ಕೇಳಿದ್ದೆ.

ಭೂಮಿಯ ಮೇಲೆ ಇದ್ದಾನೆ. ಹಿಮಾಲಯಕ್ಕೆ ಹೋಗಿ ತಪ್ಪಸ್ಸು  ಮಾಡಿದವರಿಗೆಲ್ಲಾ  ದರ್ಶನ ಕೊಡುತ್ತಾನೆ. ಅಂತಹ ಪುಣ್ಯ ನಮಗೆಲ್ಲಾ  ಇಲ್ಲ ಬಿಡು. ನಮ್ಮ  ಪೂರ್ವಜನ್ಮದ  ಪಾಪ ಕಳೆದಿಲ್ಲ  ಬಿಡು. ಪಡೆದುಕೊಂಡು ಬಂದಿದ್ದಷ್ಟನ್ನು ಅನುಭವಿಸಲೇ ಬೇಕು…ಅಜ್ಜಿ  ಅದ್ಯಾವುದೋ ಲೋಕದಲ್ಲಿ  ಮುಳುಗಿ ಗುನುಗುತ್ತಿದ್ದಳು. ಏನು ಅರ್ಥವಾಗದ ನಾನು ತಿರುಗಿ ಪ್ರಶ್ನೆ ಕೇಳಿದರೆ, ತಲೆ ಹರಟೆ ದೇವರ ಕುರಿತಾಗಿ ಹಾಗೆಲ್ಲ  ಪ್ರಶ್ನೆ ಕೇಳಬಾರದು. ಈಗ ಅನುಭವಿಸುತ್ತಿರುವುದೇ ಸಾಕು ಎನ್ನುತ್ತಿದ್ದಳು.

ಕೋತಿ, ನಾನೇನಾದ್ರೂ ಸತ್ತು ಹೋದರೆ…ಗೆಳತಿ ತೀರಾ ಭಾವುಕಳಾದಾಗ ಇಂತಹದ್ದೊಂದು ಪ್ರಶ್ನೆ ಕೇಳುತ್ತಿರುತ್ತಾಳೆ.

ಸತ್ತ ಹನ್ನೆರಡನೇ ದಿನ ನಿನಗಿಷ್ಟವಾದ ಸಿಹಿಯನ್ನು ನಿನ್ನನ್ನು ಸ್ಮರಿಸಿಕೊಂಡು ತಿನ್ನುತ್ತೇನೆ!!!
ಅಲ್ಲ, ಅದು ಹಾಗಲ್ಲ ಕೋತಿ ನಾನು ನಿನ್ನನ್ನು  ಇಷ್ಟು  ಪ್ರೀತಿಸುತ್ತೀನಿ…
ಮತ್ತಿನೇನು? ಯಾರಾದರೂ ಅಷ್ಟೆ , ಸತ್ತವರಿಗೆ ಎಷ್ಟು  ದಿನ ಅಂತಾ ಕಣ್ಣೀರು ಹಾಕುತ್ತಾರೆ. ಒಂದು, ಎರಡು, ಮೂರು ದಿನ…ತಿಂಗಳು…ವರ್ಷ…ಐದು ವರ್ಷ..? ಶ್ರಾದ್ಧ, ವೈದಿಕ…ಇತ್ಯಾದಿಗಳೆಲ್ಲಾ  ಹುಟ್ಟಿಕೊಂಡಿದ್ದು  ಯಾಕೆ ಅಂದುಕೊಡಿದ್ದೀಯಾ? ಸತ್ತವರನ್ನು ವರ್ಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳಲಿಕ್ಕೇ ಅಲ್ಲವೇ?
ಮಗ ಇಲ್ಲ  ಅಂತಾ ಸುನೀತಕ್ಕ  ಒಂದಿಷ್ಟು  ದಿನ ಅಳುತ್ತಾಳೆ. ಊಟ, ನಿದ್ದೆ  ಬಿಡುತ್ತಾಳೆ. ಬರುಬರುತ್ತಾ ಸಹಜ ಸ್ಥಿತಿಗೆ ಮರಳುತ್ತಾಳೆ. ಆಮೇಲೆ ಮಗನ ನೆನಪಾದಾಗಲೆಲ್ಲಾ  ಕಂಬನಿ ಸುರಿಸುತ್ತಾಳೆ. ಮಗನಂತಹದ್ದೇ ಇನ್ನೊಂದು ವಸ್ತು ಕಣ್ಣೇದುರಿಗೆ ಗೋಚರವಾದಗಲೆಲ್ಲಾ  ಬಿಕ್ಕಿಸುತ್ತಾಳೆ.

ನಾನು ಹಾಗೇ. ನೀನು ಸತ್ತರೆ, ನಿನ್ನಂತಹದ್ದೇ ಇನ್ನೊಂದು ಹುಡುಗಿಯನ್ನು ಹುಡುಕಿಕೊಳ್ಳುವವರೆಗೂ ನಿನ್ನನ್ನು ನೆನಪಿಸಿಕೊಂಡು ಅಳುತ್ತೇನೆ!

ಕಟು ಸತ್ಯ ಹೇಳಿದರೆ ಕಣ್ಣೀರು ಸುರಿಸುತ್ತಾ ನನ್ನ  ತೊಡೆಯ ಮೇಲೇ ಮಲಗುತ್ತಾಳೆ ಪಾಪಿ!

ವೈಕುಂಠಕ್ಕೆ ದಾರಿ ಯಾವುದಯ್ಯಾ…ಬೈಕಿನಲ್ಲಿ  ಹೋಗುವಾಗಲೆಲ್ಲಾ  ಗೆಳೆಯ ಈ ಹಾಡನ್ನು ಹಾಡುತ್ತಾನೆ.
ದೊರೆ, ನಾನು ಜೀವವನ್ನು ಎಡಗೈನ, ಕಿರು ಬೆರಳಿನ, ಉಗುರಿನ ತುದಿಯಲ್ಲಿ  ಹಿಡಿದುಕೊಂಡಿದ್ದೇನೆ…
ಯಾವತ್ತಾದರೂ ಸಾಯೋದೇ ಅಲ್ವೇನೋ…ಅವ ಹಾಡು ಮುಂದುವರಿಸುತ್ತಾ ಬೈಕಿನ ವೇಗವನ್ನು ಹೆಚ್ಚಿಸುತ್ತಾನೆ. ಹಾಗಂತ ಇವತ್ತಿನವರೆಗೂ ಅವ ಬೈಕನ್ನು  ಅಪಘಾತಕ್ಕೀಡುಮಾಡಿಲ್ಲ. ನಾನು ಸತ್ತಿಲ್ಲ!

ಹೌದು, ಯಾರು ಯಾವಾಗ ಸಾಯುತ್ತಾರೆ ಎಂದು ಯಾರಿಗೆ ಗೊತ್ತು?

ಅಜ್ಜನನ್ನು ಕೇಳೋಣ ಅಂದುಕೊಂಡರೆ, ಅವ ವರ್ಷಕೊಮ್ಮೆ ಬಂದರೂ ಯಾರ ಜತೆಗೂ ಮಾತಾಡುವುದಿಲ್ಲ…ಅಲ್ಲಲ್ಲ…ಕಾವ್, ಕಾವ್,ಕಾವ್…ಅಂತಾ ಕೂಗುತ್ತಾನೆ. ಅವನ ಭಾಷೆ ನನಗೆ ಅರ್ಥವಾಗುವುದಿಲ್ಲ.

ಇನ್ನು ಹನುಮರಾಯ…?

ಕೆರ್,ಕೆರ್,ಕೆರ್…ಅನ್ನುತ್ತಾನೆ. ಇಂಗ್ಲಿಷಿಗಿಂತಲೂ ಸುಲಭವಾದ ಹನುಮರಾಯನ  ಭಾಷೆ ಕಲಿಯಲು ಇಲ್ಲಿಯವರೆಗೂ ನನ್ನಿಂದ ಸಾಧ್ಯವಾಗಲಿಲ್ಲ!

ಭಿಷ್ಮ ಯಾವ ರೂಪದಲ್ಲಿ  ಬರುತ್ತಾನೆ, ಯಾವ ಭಾಷೆ ಮಾತಾಡುತ್ತಾನೆ ಅಂತಾ ಅಜ್ಜಿಯನ್ನು ಕೇಳಿದರೆ,  ಪೂರ್ವ ಜನ್ಮದ ಕರ್ಮ ಸವೆಯಬೇಕು. ಜಪ ಮಾಡು, ಸಂಧ್ಯಾವಂದನೆ ಮಾಡು ಅನ್ನುತ್ತಾಳೆ. ಅದಕ್ಕಿಂತ ಸುಮ್ಮನಿರುವುದೇ ಲೇಸು!

ಈ ಲೇಖನ ಬರೆದ ನಂತರ ನಾನು ಸತ್ತರೆ…?!

ಲಕ್ಕಿಜಡ್ಡಿ  ಸುನೀತಕ್ಕನ ಕ್ಷಮೆ ಯಾಚಿಸುತ್ತಿದ್ದೇನೆ. ಸತ್ತ ಸುನೀತಕ್ಕನ ಮಗನಿಗೆ ಅಕ್ಷರ ರೂಪದ ಶ್ರದ್ಧಾಂಜಲಿ ಅರ್ಪಿಸಿದ್ದೇನೆ.

Read Full Post »

ನಿಜಕ್ಕೂ ಸಂತಸದ ವಿಚಾರ. ಮುಂಬಯಿ ದಾಳಿ ಕೆಲವರಲ್ಲಾದರೂ ಕೆಚ್ಚು ಹುಟ್ಟಿಸಿದೆ. ಭಯೋತ್ಪಾದಕತೆಯ ವಿರುದ್ದ ಸ್ವಲ್ಪಮಟ್ಟಿಗಾದರೂ ಹೋರಾಡುವ ಛಲವನ್ನು ಹುಟ್ಟುಹಾಕಿದೆ. ಹಾಗಂತ ದೇಶ, ಹೋರಾಟ, ಆಂದೋಲನ…ನನ್ನಂತಹವನ ಮಟ್ಟಿಗೆ ಹೊಸತೇನು ಅಲ್ಲ! ಆದರೂ ನೀಲಾಂಜಲರ ಮೇಲೆ ನಂಬಿಕೆ ಇದೆ. ಹಾಗಾಗಿ ಆ ಹೋರಾಟದಲ್ಲಿ ನಾವು ಭಾಗಿಯಾಗೋಣ…

Read Full Post »

samaadhi-2-edi

ನಮ್ಮ  ನಾಡು ಕಂಡ ವಿಭಿನ್ನ ಯೋಗಿಗಳ ಸಾಲಿನಲ್ಲಿ  ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳು ಅಗ್ರಗಣ್ಯರೆಂದರೂ ತಪ್ಪಾಗಲಾರದು. ಮೂಲತಃ ಮಹಾರಾಷ್ಟ್ರದವರಾದರೂ, ಕರ್ನಾಟಕದ ಏಳಿಗೆಗೆ ಬದುಕನ್ನು ಮುಡುಪಾಗಿಟ್ಟವರು. ಮಲೆನಾಡಿನ ಒಂದಿಷ್ಟು  ಜಾಡ್ಯ ಪದ್ಧತಿಗಳನ್ನು ಹೋಗಲಾಡಿಸಿದವರು. ಕರ್ಮಠ ಸನ್ಯಾಸಿಗಳ ಸಾಲಿಗೆ ಸೇರದೆ, ಸಮಾಜಮುಖಿ ಕಾರ್ಯ ಮಾಡಿದ ಶ್ರೇಷ್ಠರಿಗೀಗ ಜನ್ಮ ಶತಾಬ್ಧಿಯ ಸಂಭ್ರಮ


ಗುಲ್ಬರ್ಗ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಲ್ಲಿ  ೦೭-೧೨-೧೯೦೮ರ ದತ್ತ ಜಯಂತಿ ದಿನದಂದು ಜನಿಸಿದ ಆ ಬಾಲಕನ ಹೆಸರು ಶ್ರೀಧರ. ಕಮಲಾಬಾಯಿ, ನಾರಾಯಣರಾವ್ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀಧರನ ಪ್ರಾಥಮಿಕ ವಿದ್ಯಾಭ್ಯಾಸ ಹೈದರಾಬಾದಿನಿಂದ ಆರಂಭವಾಯಿತು. ಕರ್ಮಠ ಸಂಪ್ರದಾಯಸ್ಥರ ಮನೆಯ ಹುಡುಗನಿಗೆ ಬಾಲ್ಯದಲ್ಲೇ ಸಮರ್ಥ ರಾಮದಾಸರ ಅನುಯಾಯಿ ಸಾಧುಗಳ  ಪರಿಚಯವಾಯಿತು. ಚಿಕ್ಕ ವಯಸ್ಸಿನಲ್ಲೇ ತಾಯಿ ಕಳೆದುಕೊಂಡ ಬಾಲಕ, ಗುಲ್ಬರ್ಗದಲ್ಲಿನ ಚಿಕ್ಕಮ್ಮನ ಮನೆಗೆ ಬಂದ. ಅಲ್ಲಿ  ಒಂದಿಷ್ಟು ಕಾಲ ವಿದ್ಯಾಭ್ಯಾಸ ಮುಂದುವರಿಸಿದ.  ಹೆಚ್ಚಿನ ಕಲಿಕೆಯ ಹಂಬಲದಿಂದ ಪುಣೆಯ ಹಾದಿ ಹಿಡಿದ.

ಪುಣೆಯಲ್ಲಿ  ಓದುತ್ತಿದ್ದಾಗ ಈ ಬಾಲಕನ ಚಿತ್ತ ತಪಸ್ಸಿನತ್ತ  ಹೊರಳಾಡತೊಡಗಿತು. ಸನ್ಯಾಸಿಯಾಗುವ ಹಂಬಲ ಬಲವಾಯಿತು. ಅತಿಯಾಗಿ ಫೇಡಾ ತಿನ್ನುತ್ತಿದ್ದ ಶ್ರೀಧರ, ಫೇಡಾದಲ್ಲಿ  ಹಸುವಿನ ಸಗಣಿ ಬೆರೆಸಿ ತನಗಿಷ್ಟವಾದ ಫೇಡಾ  ಬಿಟ್ಟ  ಹಠಮಾರಿ ಬಾಲಕ. ಅಂತಹ ಬಾಲಕ, ೧೯೨೭ರ ವಿಜಯದಶಮಿಯಂದು ತನ್ನ ಕನಸಿನ  ಸನ್ಯಾಸಲೋಕದತ್ತ ಹೆಜ್ಜೆ ಹಾಕಿಯೇ ಬಿಟ್ಟ. ಗುರು ಯಾರು? ಗುರಿ ಏನು? ನಾನು ಎಲ್ಲಿಗೆ ಹೋಗಲಿ? ಎಂಬಿತ್ಯಾದಿ ಸಂಗತಿಗಳ ಕುರಿತು ಆಲೋಚಿಸದೇ ಪುಣೆಯನ್ನು ತ್ಯಜಿಸಿದ. ಹಾಗೆ ಪುಣೆ ಬಿಟ್ಟವನಿಗೆ, ಯಾರೋ ಹಿರಿಯರು ಸಮರ್ಥ ರಾಮದಾಸರ ಕ್ಷೇತ್ರವಾದ ಸಜ್ಜನಗಢದ ಹಾದಿ ತೋರಿಸಿದರು ಎಂಬುದು  ಅವರ ಜೀವನ ಚರಿತ್ರೆಯಲ್ಲಿ  ದಾಖಲಾಗಿದೆ.

ಛತ್ರಪತಿ ಶಿವಾಜಿಯಂಥ ನಾಯಕರನ್ನು ದೇಶಕ್ಕೆ ದೇಣಿಗೆಯಾಗಿ ನೀಡಿದ ಸಮರ್ಥ ರಾಮದಾಸರ ನಾಡು ಸಜ್ಜನಗಢ. ಅಂತಹ ನಾಡಿಗೆ  ಶ್ರೀಧರ ಕಾಲಿಟ್ಟ. ಅಲ್ಲಿನ ದೇವಾಲಯದ ಕೆಲಸ ಮಾಡುವುದು, ರಾತ್ರಿ ವೇಳೆ ಮಂದಿರದೊಳಗೆ ಕುಳಿತು ಧ್ಯಾನ ಮಾಡುವುದು ಆತನ ದಿನಚರಿಯಾಗಿತ್ತು. ‘ಕೌಪೀನವಂತಃ ಖಲು ಭಾಗ್ಯವಂತಃ’ ಎನ್ನುತ್ತ ಐರಣಿ ಮಹಾರಾಜರು ಕೊಟ್ಟ  ಬಟ್ಟೆಗಳನ್ನು  ತಿರಸ್ಕರಿಸಿದ ಶ್ರಿಧರ ಅಲ್ಲಿ   ಅಕ್ಷರಶಃ ವೈರಾಗಿಯಂತೆ ಬದುಕುತ್ತಿದ್ದ  ಎಂಬುದು ಚರಿತ್ರೆಯ ಪುಟಗಳಿಂದ ತಿಳಿದುಬರುತ್ತದೆ.

ದಿನಕಳೆದಂತೆ ಶ್ರೀಧರನ ಧ್ಯಾನದ ಗಾಢತೆ ಹೆಚ್ಚಾಗತೊಡಗಿತು. ಬಾಲಕ  ಜನರ ಬಾಯಲ್ಲಿ  ಶ್ರೀಧರ ಭಗವಾನ್ ಎಂದು ಪರಿವರ್ತನೆಗೊಂಡರು. ಅಕೃತವಾಗಿ ಗುರು ಮುಖೇನ ಸನ್ಯಾಸತ್ವ ಪಡೆಯದಿದ್ದರೂ ಸನ್ಯಾಸಿಯ ತೇಜಸ್ಸು  ಶ್ರೀಧರರ ದೇಹದಲ್ಲಿ  ರಾರಾಜಿಸತೊಡಗಿತು. ಧಾನ್ಯ, ಪೂಜೆ, ಕೆಲಸ…ಹೀಗೆ ದಿನ ಕಳೆಯುತ್ತಿದ್ದ  ಶ್ರೀಧರರು ಅದೊಮ್ಮೆ ದಿಢೀರನೆ ಮಾಯವಾಗಿ ಬಿಟ್ಟಿದ್ದರು ಅಂತಲೂ ಅವರ ಚರಿತ್ರೆಯಲ್ಲಿ  ಬರುತ್ತದೆ. ನಿಜವಾಗಿಯೂ ಮಾಯವಾಗಿದ್ದರೋ ಅಥವಾ ಭಕ್ತಿಯ ಪರಾಕಾಷ್ಠೆ ತಲುಪಿದ್ದ  ಒಂದಿಷ್ಟು  ಜನ  ಅಂತಹದ್ದೊಂದು ಸುದ್ದಿ  ಹುಟ್ಟಿಸಿದ್ದರೋ ಗೊತ್ತಿಲ್ಲ!  ಅದಾದ ನಂತರ ಶ್ರೀಧರರು ಪವಾಡ ಪುರುಷರು ಎಂಬ ಮಾತುಗಳು ಕೇಳಿ ಬರಲಾರಂಭಿಸಿತು. ಅವರನ್ನು ಹುಡುಕಿಕೊಂಡು ಬರುವ ಮಂದಿಯ ಸಂಖ್ಯೆ ಹೆಚ್ಚಾಯಿತು. ಆ ವೇಳೆಗೆ ಶ್ರೀಧರರು ಸಜ್ಜನಗಢ ತೊರೆದು ದಕ್ಷಿಣದತ್ತ ಮುಖ ಮಾಡಿದರು.

ಸಜ್ಜನಗಢದಿಂದ ಕೊಲ್ಲಾಪುರ ಮಾರ್ಗವಾಗಿ ಉತ್ತರ ಕರ್ನಾಟಕದ ಹಾದಿ ಹಿಡಿದರು. ಮೂಲತಃ ಮಹಾರಾಷ್ಟ್ರದವರಾಗಿದ್ದ  ಶ್ರೀಧರರು ಸಜ್ಜನಗಢ ತೊರೆದ ನಂತರ ಶಾಶ್ವತವಾಗಿ ನಮ್ಮವರಾಗಿಬಿಟ್ಟರು. ‘ಅವರ ಮಾತೃಭಾಷೆ ಮರಾಠಿಯಾಗಿತ್ತು ಎಂಬುದು ಬಹುಶಃ ಅವರಿಗೂ ಮರೆತಿರಬೇಕು’ ಎನ್ನುವಷ್ಟರ ಮಟ್ಟಿಗೆ ಶ್ರೀಧರರು ಕನ್ನಡಿಗರಾದರು. ಸಿರಸಿ ತಾಲೂಕಿನ ಶೀಗೆಹಳ್ಳಿ  ಶ್ರೀಧರರನ್ನು ಕೈಬೀಸಿ ಕರೆಯಿತು. ಅಲ್ಲಿನ ಶ್ರೀಗಳಾದ ಶಿವಾನಂದ ಸ್ವಾಮಿಗಳು ಗುರುಗಳಾಗಿ ಶ್ರೀಧರರ ಬೆನ್ನಿಗೆ ನಿಂತರು.

ಕೆಲ ಕಾಲ ಅಲ್ಲಿ  ನೆಲೆಯೂರಿದ್ದ  ಶ್ರೀಧರರು, ನಂತರ ಸಿರಸಿ, ಸೊರಬ, ಸಾಗರ, ಹೊಸನಗರ ತಾಲೂಕಗಳತ್ತ ಪ್ರವಾಸ ಕೈಗೊಂಡರು. ಅನೇಕ ಕಡೆಗಳಲ್ಲಿ  ಧರ್ಮದ ಕುರಿತು, ಸಾಮಾಜಿಕ ಮೌಢ್ಯತೆಗಳ ಕುರಿತು ಉಪನ್ಯಾಸ ನೀಡಿದರು. ಸ್ವಲ್ಪ  ಕಾಲ ಕೊಡಚಾದ್ರಿಯ ತಪ್ಪಲಲ್ಲಿ  ಧ್ಯಾನಕ್ಕೆ ಕುಳಿತರು. ಕೊನೆಗೆ ಬನವಾಸಿಯ ಮೂಲಕ ಮತ್ತೆ ಶೀಗೆಹಳ್ಳಿಗೆ ಬಂದರು. ಶೀಗೆಹಳ್ಳಿಯ ಶ್ರೀ ಶಿವಾನಂದ ಸ್ವಾಮಿಗಳು, ಕಮಂಡಲ ಕಾವಿ ಬಟ್ಟೆಗಳನ್ನು ಶ್ರೀಧರರಿಗೆ ನೀಡಿ ಸನ್ಯಾಸ ದೀಕ್ಷೆ  ಕೊಟ್ಟರು. ಧರ್ಮಧ್ವಜ ಸ್ಥಾಪಿಸಬೇಕೆಂದು ಆದೇಶವನ್ನಿತ್ತರು. ಈ ಘಟನೆಯ ನಂತರ ಶ್ರೀಧರರು ಮತ್ತೆ ಸಜ್ಜನಗಢದತ್ತ ಸಾಗಿದರು.

ಸಜ್ಜನಗಢದಲ್ಲಿ  ಒಂದಿಷ್ಟು  ಕಾಲ ಕಳೆಯುತ್ತಿದ್ದಂತೆ ಶ್ರೀ ಶಿವಾನಂದರ ದೇಹತ್ಯಾಗದ ಸುದ್ಧಿ  ಶ್ರೀಧರರ ಕಿವಿಗೆ ಬಿತ್ತು. ಅಲ್ಲಿಂದ ಮತ್ತೆ ಶೀಗೆಹಳ್ಳಿಯತ್ತ ಪ್ರಯಾಣ ಬೆಳೆಸಿದರು. ಶ್ರೀಧರರು ಶೀಗೆಹಳ್ಳಿಗೆ ಕಾಲಿಡುವಾಗ ಶಿವಾನಂದರು ಮಕ್ತರಾಗಿ ಎರಡು ವರ್ಷಗಳೇ ಕಳೆದುಹೋಗಿತ್ತು. ಮಠ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಮಠದ ಅಭಿವೃದ್ಧಿಗೆ ಪಣತೊಟ್ಟ  ಶ್ರೀಧರರು ಗುರುಗಳ  ಸಮಾದಿ ನಿರ್ಮಿಸಿದರು. ಆರಾಧನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವಷ್ಟರ  ಮಟ್ಟಿಗೆ ಮಠವನ್ನು ಕಟ್ಟಿ  ಬೆಳೆಸಿದರು. ಮಠದ ಆವರಣದಲ್ಲಿ  ವೇದ, ಸಂಸ್ಕೃತ ಪಾಠಶಾಲೆ ಆರಂಭಿಸಿದರು. ಇಷ್ಟಾಗಿಯೂ ಶ್ರೀಧರರಿಗೆ ಪೂರ್ಣ ಪ್ರಮಾಣದ ಸನ್ಯಾಸತ್ವ ಸ್ವೀಕರಿಸುವ ಕಾಲ ಕೂಡಿ ಬಂದಿರಲಿಲ್ಲ!

ಆವತ್ತು ಶೀಗೆಹಳ್ಳಿಯತ್ತ ಜನರ ಹಿಂಡು-ಹಿಂಡೇ ಧಾವಿಸಿ ಬಂದಿತ್ತು.  ಅಂದಹಾಗೆ ಶೀಗೆಹಳ್ಳಿಯಂಥ ಪುಟ್ಟ  ಊರಿನಲ್ಲಿ ಆ ಪರಿ ಜನ ಸೇರಲು ಒಂದು ಕಾರಣವಿತ್ತು. ಊರೂರು ಸುತ್ತುತ್ತಾ ಧರ್ಮ ಪ್ರಚಾರ ಮಾಡುತ್ತಿದ್ದ  ಯೋಗಿಯೊಬ್ಬರು ಸನ್ಯಾಸ ಸ್ವೀಕರಿಸುತ್ತಾರಂತೆ ಎಂಬ ಸುದ್ಧಿ  ಜನರನ್ನು ಅಲ್ಲಿಗೆ ಎಳೆತಂದಿತ್ತು. ಚಿತ್ರಭಾನು ಸಂವತ್ಸರದ ವಿಜಯ ದಶಮಿಯ(೧೯೪೨) ಶ್ರೀಧರರು , ಹತ್ತಾರು ಗುರುಗಳ ಸಮ್ಮುಖದಲ್ಲಿ  ಶಾಸ್ತ್ರೋಕ್ತವಾದ ಸನ್ಯಾಸ ದೀಕ್ಷೆ ಪಡೆದರು. ‘ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಬ್ರಹ್ಮಚೈತನ್ಯ ಭಗವಾನ್ ಸದ್ಗುರು ಶ್ರೀ  ಶ್ರೀಧರ ಸ್ವಾಮಿ ಮಹಾರಾಜಕೀ ಜೈ’ ಎಂಬ ಜೈಕಾರದ ಸದ್ದು ಎಲ್ಲೆಡೆ ಮೊಳಗಿತು.

‘ಕುಸಿದುಬಿದ್ದಿದ್ದ  ಶೀಗೆಹಳ್ಳಿಯ ಮಠವನ್ನು ಮತ್ತೆ ಕಟ್ಟಿದರು. ಒಂದಿಷ್ಟು  ಕಾಸು ಕೂಡಿಟ್ಟರು. ಈಗ ಶಾಶ್ವತವಾಗಿ ಇಲ್ಲಿಯೇ ಸ್ವಾಮಿಗಳಾಗಿ ಕೂತರು…!’ ಹಾಗಂತ ಆಡಿಕೊಳ್ಳುತ್ತಿದ್ದ ಜನರ ಲೆಕ್ಕಾಚಾರವನ್ನು ತಲೆಕೆಳಗಾಗಿಸಲು ಶ್ರೀಧರರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಪೀಠ, ಸನ್ಯಾಸಿ ಪಟ್ಟ, ಮಠದ ಸಂಪತ್ತು…ಊಹುಂ ಇವ್ಯಾವುದು ಆ ವೈರಾಗಿಯನ್ನು ಆಕರ್ಷಿಸಲೇ ಇಲ್ಲ. ಊರೂರು ಅಲೆಯುವುದು, ಧರ್ಮ ಪ್ರಚಾರ, ದೀನ ದಲಿತರ ಉದ್ದಾರ… ಇತ್ಯಾದಿಗಳನ್ನೇ ದಿನಚರಿಯನ್ನಾಗಿಸಿಕೊಂಡಿದ್ದ  ಶ್ರೀಧರರು, ಭಗವಾನ್ ಅನ್ನಿಸಿಕೊಂಡ ನಂತರವೂ ಶೀಗೆಹಳ್ಳಿಯಲ್ಲಿ  ಉಳಿಯಲಿಲ್ಲ.  ತಮ್ಮ ನಿತ್ಯದ ಸಮಾಜಮುಖಿ  ಬದುಕಿನ ಲೋಕಕ್ಕೆ  ಕಾಲಿಟ್ಟರು.

ಶೀಗೆಹಳ್ಳಿ ಬಿಟ್ಟ  ನಂತರ ಶ್ರೀಗಳು ಮಾಡಿದ್ದು  ಅಕ್ಷರಶಃ  ಸಾಮಾಜಿಕ ಕೆಲಸಗಳನ್ನು. ಮೂಢನಂಬಿಕೆಗಳನ್ನು ಹೋಗಲಾಡಿಸುವುದು, ಅನಾಥರು, ಭಿಕ್ಷುಕರು, ರೋಗಿಗಳ ಜತೆ ಬೆರೆಯುವುದು, ಕೈಲಾಗದ ಅಶಕ್ತರಿಗೆ ಆಶ್ರಯ ಒದಗಿಸಿ ಕೊಡುವುದು, ಶ್ರೀಮಂತರಿಂದ ಬಡವರಿಗೆ ಸಹಾಯ ಒದಗಿಸಿಕೊಡುವುದು…ಇಂತಹದ್ದೇ ಕಾರ್ಯಗಳನ್ನು ಕೈಗೆತ್ತಿಕೊಂಡು ತಮ್ಮ ಸಂಚಾರವನ್ನು ಮುಂದುವರಿಸಿದರು. ಲೋಕ ಸಂಚಾರದಲ್ಲಿ  ನಿರತವಾಗಿದ್ದ  ಶ್ರೀಧರರು  ೧೯೫೩ರ ಸುಮಾರಿಗೆ ಶಿವಮೊಗ್ಗ ಜಿಲ್ಲೆಯ ದಟ್ಟ  ಅರಣ್ಯಗಳ ಸಾಲಿನಲ್ಲಿ  ಒಂದಾಗಿರುವ ಬೆಂಕಟವಳ್ಳಿ  ಕಾನಿಗೆ ಬಂದರು. ಅಲ್ಲಿ  ಪುಟ್ಟದೊಂದು ದುರ್ಗಾದೇವಿಯ ದೇವಸ್ಥಾನವಿತ್ತು. ಅಲ್ಲಿ  ಶ್ರೀಗಳಿಗೆ ಪಾದಪೂಜೆ, ಭಿಕ್ಷಾ ಸೇವೆ ಏರ್ಪಡಿಸಲಾಗಿತ್ತು. ಅದನ್ನು ಸ್ವೀಕರಿಸಿದ ನಂತರ ಮತ್ತೆ ಲೋಕ ಸಂಚಾರ ಮುಂದುವರಿಯಿತು.

೧೯೫೪ ರಲ್ಲಿ  ಮತ್ತೆ ಶ್ರೀಗಳು ವದ್ದಳ್ಳಿಯತ್ತ ಮುಖ ಮಾಡಿದರು. ವದ್ದಳ್ಳಿಯನ್ನೇ ತಮ್ಮ ಧರ್ಮಕಾರ್ಯದ ಕೇಂದ್ರವನ್ನಾಗಿಸಿಕೊಳ್ಳಲು ನಿರ್ಧರಿಸಿದರು. ಅಲ್ಲಿಂದ ನಂತರ ವರದಹಳ್ಳಿಯ ಬೆಳವಣಿಗೆ ಆರಂಭವಾಯಿತು. ಕಲ್ಲು , ಮುಳ್ಳುಗಳ ಕಾಡಿನಲ್ಲೊಂದು ಧರ್ಮಧ್ವಜ ಸ್ಥಾಪನೆಯಾಯಿತು. ಜತೆಗೆ ‘ಶ್ರೀ ಶ್ರೀಧರಾಶ್ರಮ’ ಎಂಬ ಪುಟ್ಟದೊಂದು ಆಶ್ರಮವೂ ನಿರ್ಮಾಣವಾಯಿತು. ದೇವರ ಧಾರ್ಮಿಕ ಕಾರ್ಯಕ್ರಮಗಳು, ದತ್ತಾತ್ರೇಯ ದೇವರ ಆರಾಧನೆಗಳು ಆರಂಭವಾದವು. ಕಾಡಿನ ನಡುಮಧ್ಯದ ಕುಟೀರದತ್ತ ಜನ ಹರಿದು ಬರಲಾರಂಭಿಸಿದರು. ನೀರಿಲ್ಲದ ನಾಡಿನಲ್ಲಿ  ನೀರಿನ ಧಾರೆಯ ಹರಿಯಿತು. ಇವತ್ತಿಗೂ ‘ಶ್ರೀ ಶ್ರೀಧರ ತೀರ್ಥ’ ಎಂಬ ಹೆಸರಿನಡಿಯಲ್ಲಿ  ೨೪ ಗಂಟೆಗಳ ಕಾಲವೂ ಬೆಟ್ಟದ ತುದಿಯಿಂದ ನೀರು ಹರಿದು ಬರುವುದು ಈ ಕ್ಷೇತ್ರದ ವೈಶಿಷ್ಟ್ಯಗಳಲ್ಲಿ  ಒಂದು.

ವಸತಿಗೊಂದು ಖಾಯಂ ಜಾಗವಾದ ಮೇಲೆ ಸ್ವಾಮಿಗಳ ಭಕ್ತ ವ್ಯಾಪ್ತಿಯೂ ಹೆಚ್ಚಾಯಿತು. ಸಮಾಜಮುಖಿ ಯೋಜನೆಗಳು ವಿಸ್ತಾರವಾಗತೊಡಗಿತು. ಆಶ್ರಮ, ಅನಾಥರಿಗೆ, ಅಶಕ್ತರಿಗೆ, ಬಡವರಿಗೆ ಆಶ್ರಯ ತಾಣವಾಯಿತು.  ದುರ್ಬಲರಿಗೆ, ಬೇಡಿ ತಿನ್ನುವವರಿಗೆ ಶ್ರೀಗಳ ನೇತೃತ್ವದಲ್ಲೇ   ಊಟೋಪಚಾರದ ವ್ಯವಸ್ಥೆ  ಆರಂಭವಾಯಿತು. ಹಾಗಂತ ಶ್ರೀಗಳೇನೂ ಶಾಶ್ವತವಾಗಿ ಆಶ್ರಮದಲ್ಲಿ   ಕೂರಲಿಲ್ಲ. ಮತ್ತೆ ಸಂಚಾರ ಕಾರ್ಯ ಮುಂದುವರಿಸಿದರು. ರಾಜ್ಯದ ವಿವಿಧೆಡೆ ಚಾತುರ್ಮಾಸ ವ್ರತ ಆಚರಿಸಿದರು. ಉತ್ತರ ಭಾರತದತ್ತಲೂ ಮುಖ ಮಾಡಿದರು. ಕಾಶಿ, ಉಜ್ಜಯಿನಿ, ಹಿಮಾಲಯದ ತಪ್ಪಲುಗಳನ್ನು ತಿರುಗಿ ಬಂದರು.
ಇಡೀ ಭಾರತದ ಉದ್ದಗಲವನ್ನು ಸಂಚರಿಸಿದ ಶ್ರೀಗಳು ೧೯೬೭ರಲ್ಲಿ  ಮತ್ತೆ ವದ್ದಳ್ಳಿಗೆ ವಾಪಸಾದರು. ನಂತರ ಸತತ ಆರು ವರ್ಷಗಳ ಕಾಲ ಏಕಾಂತ ವ್ರತ ಆಚರಿಸಿ ಧಾನ್ಯ ಮಗ್ನರಾದ ಶ್ರೀಗಳು ೧೯-೪-೧೯೭೩ರಂದು ಇಹಲೋಕವನ್ನು ತ್ಯಜಿಸಿದರು. ಅಲ್ಲಿಂದ ನಂತರ ಶ್ರೀ ಕ್ಷೇತ್ರ ವರದಪುರದಲ್ಲಿ ಶ್ರೀಗಳ ಸಮಾದಿಯೇ ಪೂಜಾ ಕೇಂದ್ರವಾಯಿತು. ಈ ಆಶ್ರಮಕ್ಕೆ ಉತ್ತರಾದಿಕಾರಿಗಳಿಲ್ಲ. ಉತ್ತರಾಕಾದಿರಿ ಪರಂಪರೆಯ ಮಠವೂ ಇದಲ್ಲ! ಅವರಿಲ್ಲದಿದ್ದರ ವದ್ದಳ್ಳಿಯಲ್ಲಿ ಇವತ್ತಿಗೂ ಧಾರ್ಮಿಕ, ಸಾಮಾಜಿಕ ಕಾರ್ಯಗಳು ನಡೆದುಕೊಂಡು ಬರುತ್ತಿದೆ.

Read Full Post »