Feeds:
ಲೇಖನಗಳು
ಟಿಪ್ಪಣಿಗಳು

Archive for ಜನವರಿ, 2016

ಆರ್‌ಎಸ್‌ಎಸ್‌ ಮತ್ತು ಢೋಂಗಿ ಹಿಂದುತ್ವ!

253905_1947032795604_1236060303_32252492_3040003_n

ನಾನು ಯಾವತ್ತು ಖಾಕಿ ಚಡ್ಡಿ ಹಾಕಿಕೊಂಡು ಆರ್‌ಎಸ್‌ಎಸ್‌ನ ನಮಾಜ್‌ ಕಾರ್ಯಕ್ರಮಕ್ಕೆ ಹೋದವನಲ್ಲ. “ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ. ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ. ಇದುವೆ ನವಗಾನ” ಎಂದು ಪ್ರಾರ್ಥನೆ ಮಾಡುವ ಅವಶ್ಯಕತೆಯೂ ಕಾಣಿಸಲಿಲ್ಲ. ಆದ್ರೆ ದುರಾದೃಷ್ಟವಶಾತ್‌ ಆರ್‌ಎಸ್‌ಎಸ್‌ನಲ್ಲಿ ಹಗಲು-ಇರುಳು ದುಡಿಯಯವ ಹಲವು ಮಿತ್ರರು ಬದುಕಿನ ಹಾದಿಯಲ್ಲಿ ಸಿಕ್ಕರು.

ನಂಗೆ ಆರ್‌ಎಸ್‌ಎಸ್‌ ಚಡ್ಡಿ ಕುರಿತು ಅಷ್ಟೇನು ಕಾಳಜಿಯಿಲ್ಲ ಅಥವಾ ಆರ್‌ಎಸ್ಸೆಸ್ಸಿಗರನ್ನು ಚಡ್ಡಿ ಎಂದು ಅಣಗಿಸುವವರನ್ನು ಕಂಡು ಖುಷಿಯೂ ಆಗುವುದಿಲ್ಲ. ಇವಿಷ್ಟು ವಿಚಾರ ಹೇಳಿ ವಿಷಯಕ್ಕೆ ಬರುತ್ತೇನೆ.

ಆರ್‌ಎಸ್‌ಎಸ್‌ ಅಂದ್ರೆ ಖಾಕಿ ಚಡ್ಡಿ. ಕೇಸರಿ ಬಾವುಟ. ಹಿಂದುತ್ವದ ಢಂಗುರ…ಸಂಘದ ವಿರುದ್ಧ ಮಾತಾಡುವ ಹಲವರಿಗೆ ಕಾಣಿಸುವುದು ಇವಿಷ್ಟೆ. ನಂಗೆ ಮೊದ್ಲು ಆರ್‌ಎಸ್‌ಎಸ್‌ ಅಂದ್ರೆ ಕಂಡಿದ್ದು ಬ್ಯಾಟರಾಯನಪುರದಲ್ಲಿನ ನೆಲೆ. ‘ನರೇಂದ್ರ ನೆಲೆ’ ಎಂಬುದು ಆ ಜಾಗದ ಹೆಸ್ರು. ಹಿಂದು ಸೇವಾ ಪ್ರತಿಷ್ಠಾನದ ಅಂಗವಿದು. ಚಿಂದಿ ಆಯುವ ಮಕ್ಕಳು, ಅನಾಥರು, ಅಶಕ್ತ ಮಕ್ಕಳು, ಹರುಕು-ಮುರುಕು ಬಟ್ಟೆ ಹಾಕಿಕೊಂಡು ಬದುಕುವ ಮಕ್ಕಳನ್ನೆಲ್ಲ ಒಟ್ಟು ಹಾಕಿ…(ಹಿಂದುಭಯೋತ್ಪಾದನೆ ಪಾಠ ಮಾಡುವ ಕೇಂದ್ರ ಅನ್ನಬಹುದು ವಿರೋಧಿಗಳು!) ಅವರಿಗೆ ವಸತಿ, ಊಟ, ಪಾಠ ಹೇಳಿಕೊಡುವ ಕೇಂದ್ರವಿದು. ರಾಷ್ಟ್ರಶಕ್ತಿ ಕೇಂದ್ರದ ಗೆಳೆಯ ರಾಜೇಶ್‌ ತಮ್ಮ ಮದುವೆ ನಂತರದ ಬೀಗರೌತಣದ ಊಟವನ್ನು ಇದೇ ಮಕ್ಕಳ ಜೊತೆಗೆ ಮಾಡಿಕೊಂಡಿದ್ದರು. ಅದಕ್ಕು ಮೊದಲೇ ನನಗೆ ನೆಲೆ ಪರಿಚಯವಾಗಿತ್ತು. ೨೦೦೦ನೇ ಇಸವಿಯಲ್ಲಿ ೧೫ ಮಕ್ಕಳಿಂದ ಶುರುವಾದ ನೆಲೆ ಇಂದು ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿನ ೮ ಕೇಂದ್ರ ಹೊಂದಿದೆ. ಸಾವಿರಾರು ಮಕ್ಕಳಿಗೆ ಹೊಸದೊಂದು ಬದುಕು ನೀಡಿದೆ.

ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಅಬಲಾಶ್ರಮ ಕೂಡ ಇದೇ ಆರ್‌ಎಸ್‌ಎಸ್‌ನದ್ದು ಎಂದು ಯಾರಾದ್ರು ಬೊಬ್ಬೆ ಹೊಡಿದಾಗ ನನಗೆ ನೆನಪಾಗುತ್ತದೆ. ಹಾಗೆಯೇ ಖಾಕಿ ಚೆಡ್ಡಿಯ ನೆಪದಲ್ಲಿ ನೆನಪಾಗುವ ಮತ್ತೊಂದು ವಿಚಾರವೆಂದರೆ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಮತ್ತು ಅಲ್ಲಿನ ಕೃಷಿ ಪ್ರಯೋಗಗಳು.

ಬೆಂಗಳೂರಿನ ನಚಿಕೇತ ಮನೋವಿಕಾಸ ಕೇಂದ್ರ ಟ್ರಸ್ಟ್‌ನ ಕುರಿತು ಹೇಳದೆ ಇರಲು ಸಾಧ್ಯವೇ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಪಾಲಿಗೆ ಆರ್‌ಎಸ್‌ಎಸ್‌ ಅಂದ್ರೆ ರಾಷ್ಟ್ರೋತ್ಥಾನ ಪರಿಷತ್‌. ಅಲ್ಲಿನ ಅದ್ಭುತವಾದ ಲೈಬ್ರರಿ. ಅಲ್ಲಿನ ರಕ್ತದಾನ ಕೇಂದ್ರ.

ಹಿಂದು-ಮುಸ್ಲಿಂ ಗಲಾಟೆ ಕಿಚ್ಚು ಹೊತ್ತಿಸುವ ಆರ್‌ಎಸ್‌ಎಸ್‌ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಬೇಕು ಅಂದ್ರೆ, ಕಾರ್ಕಳದ್ದೊ, ಬಂಟ್ವಾಳದ್ದೊ, ಹುಬ್ಬಳ್ಳಿಯದ್ದೋ ಸೇವಾ ಭಾರತಿಗೆ ಭೇಟಿ ನೀಡಲೇಬೇಕು!

ಶಿವಳ್ಳಿಯ ಸಾವಯವ ಕೇಂದ್ರದ ಕೆಲಸದ ಬಗ್ಗೆ ತಿಳಿದುಕೊಳ್ಳಬೇಕು. ಬೆಳಗಾವಿಯ ಅಂಧರ ಸೇವಾ ಕೇಂದ್ರವನ್ನು ನೋಡಬೇಕು. ಎಲ್ಲೋ ಬೆಂಕಿ ಹಚ್ಚಿದ್ರು, ಅದೆಲ್ಲೋ ಧರ್ಮದ ಹೆಸ್ರಲ್ಲಿ ಅವಘಡ ನಡೀತು. ಅದ್ಯಾವುದೋ ಮಸೀದಿ ಉರುಳಿ ಬಿತ್ತು. ಅದೆಲ್ಲೋ ಮುಸ್ಲಿಂರಿಗೆ ಏಟು ಬಿತ್ತು. ಕ್ರೈಸ್ತರ ಮೇಲೆ ದಾಳಿಯಾಯ್ತು. ಆಗೆಲ್ಲ ಚೆಡ್ಡಿಗಳನ್ನು ಕೆದುಕುವವರ ಧ್ವನಿ ಏರುತ್ತದೆ.

ಅಯ್ಯೋ ಆರ್‌ಎಸ್‌ಎಸ್‌ ವಿರೋಧಿಗಳ ಬೈಬಲ್ಲನ್ನೇ ಮರೆತು ಬಿಟ್ಟೆ. ಅದೆ ಕಣ್ರಿ ‘ನಾತೂರಾಂ ಗೋಡ್ಸೆ ಗಾಂಧಿಯನ್ನು ಕೊಂದಿದ್ದು!’ ಅದೇ ಅಲ್ವಾ ಬಹುತೇಕರು ಆರ್‌ಎಸ್‌ಎಸ್‌ ವಿರೋಧಿಸಲು ಕಾರಣ. ಇತ್ತೀಚೆಗೆ ತೀರ ಮಗ್ನನಾಗಿ ಗೋಕಾಕರು ಅನುವಾದಿಸಿದ ಗಾಂಧಿ ಆತ್ಮಕತ್ಯೆ ಸತ್ಯಾನ್ವೇಷಣೆ ಓದುತ್ತಿದ್ದೆ. ಸದ್ಯಕ್ಕೆ ಆಫ್ರಿಕದಲ್ಲಿ ಗಾಂಧಿಜೀ ಹೋರಾಟ, ಅಲ್ಲಿ ಅವರಿಗಿದ್ದ ವಿರೋಧಿಗಳು, ಅವರ ಮೇಲಾದ ದಾಳಿಗಳನ್ನು ವಿವರಿಸುವ ಅಧ್ಯಾಯದಲ್ಲಿದ್ದೀನಿ. ಹೋಗ್ಲಿ ಬಿಡಿ ಗೋಡ್ಸೆ ಗಾಂಧಿಯನ್ನು ಕೊಂದಿದ್ದಾರೆ. ಗೋಡ್ಸೆ ಆರ್‌ಎಸ್‌ಎಸ್ಸಿಗರು. ಹಾಗಾಗಿ ಅದಕ್ಕೆ ಸಂಘವೇ ಕಾರಣ ಒಪ್ಪಿಕೊಳ್ಳೋಣ.

ಈಗ ವಿಷ್ಯಕ್ಕೆ ಬರುತ್ತೇನೆ. ನಾನಿಲ್ಲಿ ಕರ್ನಾಟಕದಲ್ಲಿ ಸಂಘದ ಭಾಗವಾಗಿ ಕೆಲಸ ಮಾಡುತ್ತಿರುವ ಒಂದಷ್ಟು ಸಂಸ್ಥೆಗಳನ್ನು ಹೆಸರಿಸಿದೆ. ಬಹುಶಃ ಇಂಥ ೧೦೦ಕ್ಕೂ ಅಧಿಕ ಸಂಸ್ಥೆಗಳು ನಮ್ಮ ರಾಜ್ಯದಲ್ಲಿವೆ. ದೇಶದಲ್ಲಿ ಅದೆಷ್ಟು ಸಾವಿರ ಘಟಕಗಳಿವೆಯೋ ಗೊತ್ತಿಲ್ಲ.

ನಿಜ ಹಿಂದುತ್ವದಿಂದ ಆರ್‌ಎಸ್‌ಎಸ್‌ನ್ನು ಬೇರೆಯಿಡಲು ಸಾಧ್ಯವಿಲ್ಲ. ನೆನಪಿಡಿ ಹಿಂದುತ್ವ ಎಂಬುದು ಆರ್‌ಎಸ್‌ಎಸ್‌ನ ಒಂದು ಭಾಗವಷ್ಟೆ. ಹೇಗೆ ಸೇವೆ ಎಂಬುದು ಸಂಘದ ಒಂದು ಮಜಲೋ, ಹಾಗೆಯೇ ಸಂಪನ್ಮೂಲ, ಜ್ಞಾನ, ಹಿಂದುತ್ವ ಎಲ್ಲವೂ ಸಂಘದ ಬೇರೆ ಬೇರೆ ಮಜಲುಗಳು.

ಎಲ್ಲೇ ಕೋಮು ಗಲಭೆಯಾದ್ರು ಅದಕ್ಕೆ ಸಂಘವೇ ಕಾರಣ ಎಂಬುದು ಶುದ್ಧ ಹುಚ್ಚುತನ. ನೀವು ಪತ್ರಿಕೆಯಲ್ಲಿ ಆರ್‌ಎಸ್‌ಎಸ್‌ ಪ್ರೇರಿತ ವ್ಯಕ್ತಿಗಳ ಬರಹವನ್ನು ಓದಿ, ಸಂಘದವರು ಹೀಗೆ ಎಂದು ನಿರ್ಧರಿಸಿದರೆ ಅದು ನಿಮ್ಮ ತಪ್ಪು. ಯಾಕಂದ್ರೆ ನಿಜವಾದ ಸಂಘದ ಕಾರ್ಯಕರ್ತ ಯಾವ ಟೀವಿಯಲ್ಲೂ ಬರಲಾರ. ಪತ್ರಿಕೆಯಲ್ಲೂ ಕಾಣಿಸಿಕೊಳ್ಳುವುದಿಲ್ಲ. ತನ್ನ ಪಾಡಿಗೆ ತಾನು ಸೇವೆ ಮಾಡುತ್ತಾನೆ ಮತ್ತು ಸಂಘದ ಸೇವಾ ವಿಭಾಗದಲ್ಲಿ ಎಲ್ಲ ಧರ್ಮದವರು ದುಡಿಯುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಢೋಂಗಿ ಹಿಂದುತ್ವ ಸಂಘದ ಧ್ಯೇಯವಲ್ಲ. ಯಾವತ್ತು ಅದನ್ನು ಸಂಘ ಪ್ರತಿಪಾದಿಸಿಲ್ಲ. ಭಾರತದ ಬದುಕು ಹಿಂದುತ್ವ ಎಂದಿದ್ದು. ಯೋಗ, ಸಾವಯವ ಎಲ್ಲ ನಮ್ಮ ಮೂಲಭೂತ ಅಂಶಗಳು. ಹಿಂದಿನಿಂದ ಬಂದಿದ್ದು ಎಂಬುದನ್ನು ಆರ್‌ಎಸ್‌ಎಸ್‌ ಸಾರಿದ್ದು.

ನಮ್ಮಲ್ಲಿ ಸಾಕಷ್ಟು ಢೋಂಗಿ ಹಿಂದುತ್ವವಾದಿಗಳಿದ್ದಾರೆ. ಅವರೆಲ್ಲ ಎಲೆಕ್ಷನ್‌ಗಾಗಿ ಹಿಂದುತ್ವ ಎನ್‌ಕ್ಯಾಶ್‌ ಮಾಡಿಕೊಳ್ಳುವವರು. ಸೀಟು ಸಿಗುವವರೆಗೆ, ಗೆಲ್ಲುವರೆಗೆ ಹಿಂದುತ್ವ ಬೇಕು ಅವರಿಗೆ. ವೋಟು ಭದ್ರ ಪಡಿಸಿಕೊಳ್ಳಲು ಚುನಾವಣೆ ಹತ್ತಿರ ಬಂದಾಗ ಹಿಂದು ಜಾಗೃತಿ ಸಮಾವೇಶ ಮಾಡಬೇಕು. ಅಲ್ಲಲ್ಲಿ ಕೋಮು ಗಲಭೆ ಹುಟ್ಟುಹಾಕಿ ಮತಗಳನ್ನು ಬಾಚಿಕೊಳ್ಳಬೇಕು. ಇನ್ನೊಂದು ವರ್ಗಕ್ಕೆ ಸಂಘದ ಹೆಸ್ರಲ್ಲಿ ಪ್ರಚಾರ ಬೇಕು. ಬೇರೆ ಧರ್ಮದ ಪರ ಎಂಬುದೆಲ್ಲವನ್ನೂ ವಿರೋಧಿಸಬೇಕು. ಹಾಗಾಗಿಯೇ ಜಲ್ಲಿಕಟ್ಟಿನಲ್ಲಿ ಸಾವಿರಾರು ಮಂದಿಗೆ ಗಾಯವಾಗಿದ್ದು, ಹಲವರು ಸತ್ತಿದ್ದನ್ನು ಮರೆತು, ಜಲ್ಲಿಕಟ್ಟನ್ನು ಸುಪ್ರೀಂಕೋರ್ಟ್‌ ತಡೆಯುತ್ತಿರುವುದೇಕೆ ಎಂಬ ಕನಿಷ್ಟ ವಿವೇಚನೆಯೂ ಇಲ್ಲದೆ ಬೊಬ್ಬೆ ಹೊಡೆಯುತ್ತಾರೆ! ಅಲ್ಲಿಯೆ ಅವರ ಅವಿವೇಕಿತನ ಬಯಲಾಗಿ ಬಿಡುತ್ತದೆ.

ಆದರೆ ಅವುಗಳಿಂದ ಆಚೆ ನಿಂತ ಸಂಘ, ಸಂಘದ ಕಾರ್ಯಕರ್ತರು ವರ್ಷದ ೩೬೫ ದಿನವೂ ಒಂದಿಲ್ಲೊಂದು ಸೇವಾ ಕಾರ್ಯ ಮಾಡುತ್ತ ಇರುತ್ತಾರೆ ಮತ್ತು ನಿಜವಾದ ಸ್ವಯಂಸೇವಕನೊಬ್ಬ ಅವಿವೇಕಿಯಾಗಿ ಬೊಬ್ಬೆ ಹೊಡೆಯಲಾರ. ಇವಿಷ್ಟಕ್ಕು ಜಾಸ್ತಿಯೇನೂ ಹೇಳುವುದಕ್ಕಿಲ್ಲ ಆರ್‌ಎಸ್‌ಎಸ್‌ ಕುರಿತು. ಮಿಕ್ಕಿದ್ದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.

 

 

 

Read Full Post »

10176248_1016426135046467_8592841298822724174_nನಮ್ಮಲ್ಲಿ ಒಂದು ಮಾತಿದೆ. ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದ್ರು, ಅದು ತನ್ನ ಮೂಲ ಬುದ್ಧಿಯಾದ ಉಚ್ಛೆ ಹೊಯ್ಯುವುದನ್ನು ಬಿಡುವುದಿಲ್ಲವಂತೆ! ಹಾಗಾಗಿ ಆಗಾಗ ಕೋಲಾಹಲ ಹುಟ್ಟುಹಾಕಿ, ಚಾಲ್ತಿಯಲ್ಲಿರುವವರನ್ನು ಕಾಲೆಳೆದು, ವಿಮರ್ಶೆ ಮಾಡಿ ಪ್ರಚಾರ ತೆಗೆದುಕೊಳ್ಳುವವರನ್ನು ನಿರ್ಲಕ್ಷ್ಯ ಮಾಡುವುದೇ ಒಳಿತು ಎಂಬುದು ಯಾವತ್ತೋ ಅರ್ಥವಾಗಿಬಿಟ್ಟಿದೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ಕುರಿತ ಇವತ್ತಿನ ಅಷ್ಟಾವಧಾನದಲ್ಲಿಯೂ ಆರ್.ಗಣೇಶ್ ಅದೇ ಮಾತು ಹೇಳಿದ್ರು. ಎಸ್‌ಎಲ್‌ಬಿ ಕಾದಂಬರಿ ವಿಷ್ಯದಲ್ಲಿ ಒಂದಷ್ಟು ವಿಮರ್ಶಕರು ಎಷ್ಟೋ ವರ್ಷದ ಹಿಂದೆ ಹಾಕಿದ ಸವಾಲನ್ನು ಇವತ್ತಿನವರೆಗೂ ಸ್ವೀಕರಿಸಿಲ್ಲವಂತೆ!
ವಿಷ್ಯ ಅದಲ್ಲ. ಅವಧಾನವೆಂಬುದೇ ಒಂಥರ ಜಟಿಲವಾದ, ಸಂಕೀರ್ಣವಾದ ಕಲೆ. ನನಗಂತು ಆರ್.ಗಣೇಶ್ ಅಂದ್ರೆ ಇವತ್ತಿಗೂ ವಿಸ್ಮಯವಾಗಿಯೇ ಕಾಣಿಸುತ್ತಾರೆ. ಅಷ್ಟೆಲ್ಲ ವಿಷಯವನ್ನು ಏಕಕಾಲದಲ್ಲಿ ಮನಸ್ಸಿನಲ್ಲಿ ಇಟ್ಟುಕೊಳ್ಳುವ ಅವರನ್ನು ಮನುಷ್ಯರು ಅಲ್ಲವೇ ಅಲ್ಲ ಅಂತ ಯಾವತ್ತೋ ನಿರ್ಧರಿಸಿಬಿಟ್ಟಿದ್ದೇನೆ(ಅದೊಂಥರ ವಿಶೇಷವಾದ ದೇವಸೃಷ್ಟಿ ಅಂದುಕೊಳ್ಳಿ). ಅಂಥವರ ಅವಧಾನಕ್ಕೆ ಒಂದು ಕಾದಂಬರಿ ವಸ್ತುವಾಗುತ್ತದೆ ಎಂದರೆ? ಅದು ಕಾದಂಬರಿಕಾರನ ಶ್ರೇಷ್ಠತೆಯನ್ನು ತೋರಿಸುತ್ತದೆ.
ಅವಧಾನದಲ್ಲಿ ಸವಾಲಿಗೆ ಬೇಕಾದ ಕನಿಷ್ಟ ಪ್ರಶ್ನೆಗಳನ್ನು ಹುಟ್ಟುಹಾಕುವ ಅರ್ಹತೆಯಾದರೂ ಕಾದಂಬರಿಗೆ ಇರಬೇಕು. ಯಾವುದೋ ಛಂದಸ್ಸಿನಲ್ಲಿ ಒಂದು ಪದ್ಯರಚನೆ ಮಾಡಲು ಬೇಕಾದ ಸರಕಾದರೂ ಕಾದಂಬರಿಯಲ್ಲಿ ಸಿಗಬೇಕು. ಕಾವ್ಯವಾಚನಕ್ಕೆ ಬೇಕಾದ ರಾಗ,ತಾಳಗಳನ್ನು ಹುಟ್ಟುಹಾಕುವ ಸನ್ನಿವೇಶಗಳು ಸಿಗಬೇಕು.
ನಾವೆಲ್ಲ ಕಾದಂಬರಿ ಓದುವುದು ಓರ್ವ ಸಾಮಾನ್ಯ ಓದುಗರಾಗಿ. ಅದ್ರಲ್ಲಿ ಕಂದಪದ್ಯ ಯಾವುದು? ಛಂದಸ್ಸು ಏನಿದೆ? ಕಾವ್ಯ ಸವಾಲಿಗೆ ಯಾವ ರಾಗಗಳು ಸೂಕ್ತವಾಗುತ್ತವೆ ಇವ್ಯಾವುದು ನಮಗೆ ಸಂಗತಿಗಳಾಗುವುದಿಲ್ಲ.
ನಂದು ಒಂಥರ ನಿಯಮಿತ ಓದು. ಒಂದಷ್ಟು ಜನರನ್ನು ಮಾತ್ರ ಓದುತ್ತೇನೆ ಮತ್ತು ಒಂದಷ್ಟೇ ಜನರನ್ನೇ ಓದುತ್ತೇನೆ. ನಂಗೆ ಒಬ್ಬ ಓಶೋನ ೬೦೦ ಕೃತಿಗಳಿವೆ. ಶಿವರಾಮಕಾರಂತರ ವಿಜ್ಞಾನ ಪ್ರಪಂಚ ಸರಣಿ ಮುಗಿಸುವಾಗ ಅರ್ಧ ಆಯುಷ್ಯ ಕಳೆದಿರುತ್ತದೆ! ಎಸ್.ಎಲ್.ಭೈರಪ್ಪನವರ ಅಷ್ಟು ಕಾದಂಬರಿಗಳನ್ನು ಇನ್ನು ಓದಿ ಮುಗಿಸಿಲ್ಲ. ಅದಕ್ಕಿಂತ ಹೆಚ್ಚಾಗಿ ಪರ್ವವನ್ನು ಅರ್ಧಕ್ಕೆ ನಿಲ್ಲಿಸಿದ್ದೇನೆ. ಮೂಲಭಾರತವನ್ನು ಓದಿದ ನಂತರವೇ ಪರ್ವ ಓದುವುದು ಅಂತ ನಿರ್ಧಾರ ಮಾಡಿದ್ದೇನೆ. ನೀವು ನಗಬಹುದು. ಆದರೆ ನನಗೆ ಭೈರಪ್ಪನವರ ಅತ್ಯಂತ ಸಪ್ಪೆ ಕಾದಂಬರಿ ಅನ್ನಿಸಿದ್ದು ಪರ್ವ. ಅದಕ್ಕೆ ಕಾರಣ ನಾನು ಪೂರ್ತಿ ಮಹಾಭಾರತವನ್ನು ಓದದೆ ಇರುವುದು. ಹೀಗಿರುವಾಗ ಸದ್ಯಕ್ಕಂತು ಸಿಕ್ಕಿದ್ದನ್ನೆಲ್ಲ ಓದುತ್ತೇನೆ ಎಂಬ ಭ್ರಮೆಯಲ್ಲಂತೂ ನಾನಿಲ್ಲ.
ಮೊದಲು ಎಸ್‌ಎಲ್‌ಬಿಯನ್ನು ಓದಿದ್ದು ಎರಡನೇ ವರ್ಷದ ಡಿಗ್ರಿಯಲ್ಲಿರುವಾಗ. ನನ್ನ ರೂಮೇಟ್ ವಿಶ್ವಾಸ ಬಹುಶಃ ಉಡುಪಿ ಸೆಂಟ್ರಲ್ ಲೈಬ್ರರಿಯಿಂದ ಆ ಪುಸ್ತಕ ತಂದಿದ್ದ ಅನ್ನಿಸುತ್ತೆ. ಅಲ್ಲಿಯವರೆಗೆ ನನಗೆ ಎಸ್.ಎಲ್.ಭೈರಪ್ಪ ಅಂತ ಓರ್ವ ಲೇಖಕರು ಇದ್ದಾರೆ ಅಂತಲೇ ಗೊತ್ತಿರಲಿಲ್ಲ. ಅದು ಅಂಚು ಕಾದಂಬರಿ. ಅದರಲ್ಲಿನ ಪಾತ್ರಗಳು ಈಗ ದೇವರಾಣೆ ನೆನಪಿಲ್ಲ! ಯಾಕಂದ್ರೆ ೧೦ ವರ್ಷಗಳ ಕೆಳಗೆ ಓದಿದ ಕೃತಿ ಅದು. ಅದರ ನಂತ್ರ ನಂಗೆ ಸಿಕ್ಕಿದ್ದು ಭಿತ್ತಿ. ಅವರ ಆತ್ಮಕಥನ ಓದುವಾಗ ನಾನು ಅಕ್ಷರಶಃ ಭೈರಪ್ಪನವರ ಅಭಿಮಾನಿಯಾಗಿದ್ದೆ.
ಆಮೇಲೆ ಅನ್ವೇಷಣೆ, ಗ್ರಹಣ, ಗೃಹಭಂಗ, ವಂಶವೃಕ್ಷ, ಮಂದ್ರ, ಸಾಕ್ಷಿ, ಸಾರ್ಥ, ಧಮಶ್ರಿ, ತಬ್ಬಲಿ ನೀನಾದೆ ಮಗನೇ, ನೆಲೆ, ಜಲಪಾತ, ಆವರಣ, ಕವಲು, ನಾನೇಕೆ ಬರೆಯುತ್ತೇನೆ ಹಾಗೂ ಸತ್ಯ ಮತ್ತು ಸೌಂದರ್ಯ ಇವುಗಳನ್ನೆಲ್ಲ ಓದಿದೆ. ಇನ್ನು ಒಂದಷ್ಟು ಓದಲು ಬಾಕಿ ಇದೆ.
ನಂಗೆ ಇದುವರೆಗೆ ಅತಿಯಾಗಿ ಕಾಡಿದ್ದು ಮಂದ್ರ. ಅದನ್ನು ಓದುವಾಗ ನನಗೂ ಅತಿಯಾದ ಸೆಕ್ಸ್ ಅಂತ ಅನ್ನಿಸಿದರೂ, ತೀರ ಕಲಾವಿದರ ಜಗತ್ತಿನಲ್ಲಿ ಅದು ಸಹಜ ಅಂತ ಎಷ್ಟೋ ಕಡೆ ಓದಿದ್ದೆ. ಮಂದ್ರ ಓದುವ ಮೊದಲು ಪ್ರೋತಿಮಾ ಬೇಡಿಯ ಜೀವನ ಚರಿತ್ರೆ ಓದಿದ್ದು ಅದಕ್ಕೆ ಕಾರಣವಿರಬಹುದು. ಸಂಗೀತದ ಕನಿಷ್ಟ ಜ್ಞಾನವು ನನಗಿಲ್ಲ. ಹೀಗಾಗಿ ಮಂದ್ರದಲ್ಲಿನ ರಾಗಗಳ ಒಳನೋಟ ನಂಗೆ ಅರ್ಥವಾಗಿರಲಿಲ್ಲ. ಸಾಮಾಜಿಕವಾಗಿ ನೋಡಿದಾಗ ಅಲ್ಲಿನ ಪಾತ್ರಗಳು ಕಾಡಿದ್ದವು. ಅವಧಾನದಲ್ಲಿ ಗಣೇಶರು ಸಂಗೀತದ ರಾಗಗಳಿಗೆ ಭೈರಪ್ಪನವರ ಸಾಲುಗಳನ್ನು ತಾಳೆ ಹಾಕುವಾಗ ಸಂಗೀತದ ಸ್ವಲ್ಪವಾದರು ಜ್ಞಾನ ಪಡೆದು ಮತ್ತೆ ಮಂದ್ರ ಓದಬೇಕು ಅನ್ನಿಸ್ತಿದೆ.
ಇನ್ನೊಂದು ಕಾದಂಬರಿ ಕವಲು. ಅದನ್ನು ಬರೆದ ನಂತರ ಭೈರಪ್ಪನವರೊಂದಿಗೆ ಆರ್‌ವಿ ಟೀಚರ‍್ಸ್ ಕಾಲೇಜಿನಲ್ಲಿ ಒಂದು ಸಂವಾದವಿತ್ತು. ಆವತ್ತಲ್ಲಿ ಭೈರಪ್ಪ ಕಾದಂಬರಿ ವಾಸ್ತವಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಒಂದು ವರದಕ್ಷಿಣೆ ಕಾನೂನು ಹೇಗೆ ಸಮಾಜ ದಿಕ್ಕು ತಪ್ಪಿಸಬಹುದು ಎಂಬುದಕ್ಕೆ ಸಾಕ್ಷಿ ಸಮೇತವಾಗಿ ಮಾತನಾಡಿದರು. ಪಾಶ್ಚತ್ಯ ಜಗತ್ತಿನ ಸಾಂಸಾರಿಕ ತಲ್ಲಣಗಳನ್ನು ವಿವರಿಸಿದರು.
ಭೈರಪ್ಪ ಬಲಪಂಥೀಯರು. ಆರ್‌ಎಸ್‌ಎಸ್‌ನವರು ಅಂತ ಅದೆಷ್ಟೋ ವಿಮರ್ಶಕರು ಬೊಬ್ಬೆ ಹೊಡೆಯುತ್ತಾರೆ. ನಿಜ ಗಣೇಶರು ಹೇಳಿದಂತೆ ನನಗೂ ಕೂಡ ಇವತ್ತಿನವರೆಗೆ ಭೈರಪ್ಪನರಲ್ಲಿ ಯಾವ ಸಿದ್ಧಾಂತವೂ ಕಾಣಿಸಲಿಲ್ಲ. ಯಾಕಂದ್ರೆ ನನ್ನ ಓದನ್ನು ಪಾತ್ರಗಳು ಆವರಿಸಿಕೊಂಡು ಇರುತ್ತವೆ ಹೊರತು ಸಿದ್ಧಾಂತವಲ್ಲ.
ಬೇಸಿಕಲಿ ಈ ವಿಮರ್ಶಕರಿಗೆ ಭೈರಪ್ಪನವರ ಕಾದಂಬರಿಯ ಸರಕು ಬೇಡ. ಅವ್ರ ಹೆಸರಿನಿಂದ ತಮಗೆ ಬರಬಹುದಾದ ಕೀರ್ತಿ ಬೇಕು. ಭೈರಪ್ಪನವರ ವಿರುದ್ಧ ಮಾತನಾಡಿ ಗಿಟ್ಟಿಸಿಕೊಳ್ಳಬಹುದಾದ ಅಕಾಡೆಮಿ ಪ್ರಶಸ್ತಿಗಳು ಬೇಕು. ನಮ್ಮಲ್ಲಿ ಒಂದಷ್ಟು ಪ್ರಶಸ್ತಿಗಳಿವೆ. ಅದನ್ನೇ ನಂಬಿಕೊಂಡು ಜೀವನ ನಡೆಸುವ ಬ್ರೋಕರ್‌ಗಳೂ ಇದ್ದಾರೆ! ನೀವೊಂದು ೨೦ ಸಾವಿರ ನಗದು ಕೊಟ್ಟರೆ ನಿಮ್ಮ ಹೆಸರಿನಲ್ಲಿ ಪುಸ್ತಕ ಪ್ರಕಾಶಿಸಿ, ಆ ಪುಸ್ತಕಕ್ಕೆ ಒಂದಷ್ಟು ಅವಾರ್ಡ್‌ಗಳನ್ನು ಕೊಡಿಸುತ್ತಾರೆ. ಎಲ್ಲ ಮೂಲದಿಂದ ಬರುವ ಹಣ ಅವರಿಗೆ. ಹೆಸರು ಮಾತ್ರ ನಿಮಗೆ! ಇದನ್ನೇ ಜೀವನವನ್ನಾಗಿಸಿಕೊಂಡ ಪ್ರಕಾಶಕರು ಇದ್ದಾರೆ ಎಂದರೆ ನೀವು ನಂಬಬೇಕು! ಹಾಗಾಗಿಯೇ ಭೈರಪ್ಪನವರ ಕೃತಿಗಳಿಗೆ ವಿರುದ್ಧವಾಗಿ ಹತ್ತಿಪ್ಪತ್ತು ಕೃತಿಗಳು ಬರುವುದು ಅನ್ನಿ. ಇವತ್ತು ನೋಡ್ಲಿಕ್ಕೆ ಬೇಕು ಅಂದ್ರೆ ಅವ್ಯಾವ ಕೃತಿಯೂ ಸಿಗಲಿಕ್ಕಿಲ್ಲ. ಲೈಬ್ರರಿ ಸ್ಕೀಂನಲ್ಲಿ ಎಲ್ಲೋ ಕೊಳೆಯುತ್ತ ಇರುತ್ತದೆ!
ಇವತ್ತಿನ ಗಣೇಶರ ಅವಧಾನ ನಮ್ಮ ಓದಿನ ಮಟ್ಟ ಮೀರಿದ್ದು ಎಂಬುದು ಒಂದು ಕಡೆ. ಆದರೆ ಭೈರಪ್ಪನವರನ್ನು ಹೀಗೂ ಒಂದು ಆಯಾಮದಲ್ಲಿ ನೋಡಬಹುದೇ ಎಂಬುದು ಇನ್ನೊಂದು ಕಡೆ. ಯಾಕಂದ್ರೆ ನಾನು ಡಿಗ್ರಿಯಲ್ಲಿದ್ದಾಗ ನನ್ನ ರೂಮೆಟ್ಸ್ ಇಬ್ಬರು ಎಸ್‌ಎಲ್‌ಬಿ ಅಪಾರ ಅಭಿಮಾನಿಗಳು. ಅವರಿಗೆ ಆವತ್ತು ಈ ಸಾಹಿತ್ಯದ ಜಗತ್ತು ಗೊತ್ತಿರಲಿಲ್ಲ. ಈಗಲೂ ಅಷ್ಟೆ. ಅವರು ದುಡುಯುತ್ತಿರುವ ಕ್ಷೇತ್ರವೇ ಬೇರೆ. ಭೈರಪ್ಪನವರ ವಿಚಾರದಲ್ಲಿ ಇಂಥ ಓದುಗರು ಅದೆಷ್ಟೋ ಸಿಗುತ್ತಾರೆ.
ನಾನಿಲ್ಲಿ ಹೇಳಹೊರಟಿರುವುದು ಇಷ್ಟನ್ನೇ. ಅವಧಾನ ಮಾಡ್ಲಿಕ್ಕು ಭೈರಪ್ಪನವರ ಕಾದಂಬರಿ ಶ್ರೇಷ್ಠವಾದುದು. ಇದ್ಯಾವ ಸಾಹಿತ್ಯದ ಲವಲೇಷವೂ ಇಲ್ಲದೇ ಕೇವಲ ಬದುಕಾಗಿ ನೋಡುವುದಿದ್ದರು ತರಕಾರಿ ಮಾರುವ ಸಾಮಾನ್ಯನಿಗೂ ಭೈರಪ್ಪನವರ ಕಾದಂಬರಿಯ ಅದೆಷ್ಟೋ ಪಾತ್ರಗಳು ಕಾಡುತ್ತವೆ ಎಂದಾದರೆ ಓರ್ವ ಬರಹಗಾರನಿಗೆ ಅದಕ್ಕಿಂತ ಶ್ರೇಷ್ಠವಾದ ಬಿರುದು ಇನ್ನು ಯಾವುದಿದೆ? ಬಹುಶಃ ಭಾರತದಲ್ಲಿ ಓರ್ವ ಕಾದಂಬರಿಕಾರನ ಕಾದಂಬರಿಗಳು ಅವಧಾನಕ್ಕೆ ಸರಕಾಗಿದ್ದು ಇದೇ ಮೊದಲು ಅನ್ನಿಸುತ್ತದೆ(ಬೇರೆ ಮಾಹಿತಿ ಇದ್ರೆ ತಿಳಿಸಿ). ಆರ್.ಗಣೇಶರು ಕಾಳಿದಾಸನಿಗೂ, ಎಸ್‌ಎಲ್‌ಬಿಯವರ ಚಿಂತನೆಗೂ ಇರುವ ಸಾಮ್ಯತೆಯನ್ನು ವಿವರಿಸುತ್ತಿದ್ದರು. ಕಾಳಿದಾಸ ಅತ್ಯಂತ ಶ್ರೇಷ್ಠ ಅಂತ ಎಲ್ಲ ಸಂಸ್ಕೃತ ವಿದ್ವಾಂಸರು ಹೇಳುತ್ತಾರೆ. ನಾನು ಕಾಳಿದಾಸನ ಯಾವ ಕೃತಿಯನ್ನು ಈವರೆಗೆ ಓದಿಲ್ಲ. ಅಷ್ಟರ ಮಟ್ಟಿಗಿನ ಸಂಸ್ಕೃತ ನನಗೆ ಗೊತ್ತೂ ಇಲ್ಲ. ಅಂಥ ಕವಿಗೆ ಎಸ್‌ಎಲ್‌ಬಿ ಹೋಲಿಕೆಯಾಗುತ್ತಾರೆ ಅಂದರೆ…ಹೇಳಿಲಿಕ್ಕೆ ಇನ್ನೇನು ಬಾಕಿ ಇದೆ ಅಲ್ವಾ? ಇಂಥ ಅವಧಾನದ ಪರಿಕಲ್ಪನೆ ಯಾರು ಕೊಟ್ಟರೋ ಗೊತ್ತಿಲ್ಲ. ಖಂಡಿತ ಅವರಿಗೊಂದು ನಮಸ್ಕಾರ.

Read Full Post »