Feeds:
ಲೇಖನಗಳು
ಟಿಪ್ಪಣಿಗಳು

Archive for ಡಿಸೆಂಬರ್, 2009

ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ  ನೆಗಡಿ. ಹದಗೆಟ್ಟ  ವಾತಾವರಣದಿಂದ ಹಲವರಿಗೆ ಇದೇ ಕಾಯಿಲೆ ಕಾಡುತ್ತಿದೆಯಂತೆ. ಆದ್ರೂ ನನ್ನ  ಪರಮ ವೈರಿ ಕಾಯಿಲೆಯಲ್ಲಿ  ನೆಗಡಿಗೆ ಮೊದಲ ಸ್ಥಾನ. ನಂತರದ್ದು ಹಲ್ಲುನೋವಿಗೆ! ಆಸ್ಪತ್ರೆ, ಡಾಕ್ಟರ್, ಇಂಜೆಕ್ಷನ್ ಅಂದ್ರೆ ನಂಗೆ ಇವತ್ತಿಗೂ ಭಯ. ೧೦ನೇ ತರಗತಿವರೆಗೂ ನೆಗಡಿ, ಹಲ್ಲುನೋವು ಅನುಭವಿಸಿ ಸುಸ್ತಾಗಿಬಿಟ್ಟಿದ್ದೇನೆ. ಮತ್ತೆ ಅಪರೂಪಕ್ಕೆ ಕಾಣಿಸಿಕೊಂಡ ಈ ನೆಗಡಿಯಿಂದ ಹಳೆಯದೆಲ್ಲ  ಅದ್ಯಾಕೊ ನೆನಪಾಯಿತು.

‘ಸುಬ್ಬಣ್ಣ  ಶಿರಸಿ ಹತ್ರಾ ವಾಜಗದ್ದೆಲಿ ಥಂಡಿಗೆ ಚೋಲೋ ಔಷಧಿ ಕೊಡ್ವ್ತಡ ನೋಡು’ ಅಂತಾ ಯಾರೋ ಹೇಳುತ್ತಿದ್ದರು. ‘ಅಲ್ಲ , ತಾಳಗುಪ್ಪದಲ್ಲಿ  ಥಂಡಿ, ಕಫ ಹೋಪಲೆ ಒಬ್ಬವ ಬಾಳಾ ಒಳ್ಳೇ ಹಳ್ಳಿ  ಔಷಧಿ ಕೊಡ್‌ತ್ನಡ ನೋಡು…’ಮತ್ತ್ಯಾರದ್ದೋ ಸಲಹೆ. ಇದನ್ನೆಲ್ಲ  ಕೇಳಿದ ಅಪ್ಪ, ತಿಂಗಳಿಗೆ ಎರಡು ಸಲ ನನ್ನನ್ನು  ಔಷಧಿಗೆ ಕರೆದುಕೊಂಡು ಹೋಗುತ್ತಿದ್ದ. ಕಫ ಕಟ್ಟಿದಾಗ ನಂಗೆ ನಡೆಯಲು ಆಗುತ್ತಿರಲಿಲ್ಲ. ಆಗೆಲ್ಲ  ಬೆನ್ನ  ಮೇಲೆ ಉಪ್ಪುಚಕ್ಕಿ  ಮಾಡಿಕೊಂಡು, ಅಮ್ಮನಂತೆ ಕಂಕುಳಿನಲ್ಲಿ  ನನ್ನನ್ನು ಹೊತ್ತುಕೊಂಡು ಹೋಗುತ್ತಿದ್ದ ಅಪ್ಪ … ಎಂಬುದು ನೆನಪಾದಾಗ ಅಮ್ಮನಿಗೆ ಪೋನ್ ಮಾಡಿದೆ. ಅವರು ಅಂಗಳದಲ್ಲಿ  ಅಡಿಕೆ ಸಿಪ್ಪೆ  ಮಗಿತಾ ಇದ್ದ…ಅಂದ್ಲು  ಅಮ್ಮ.

ಸುಮಾರು ೫-೬ ವರ್ಷ ಅಸ್ತಮದ ರೀತಿಯ ಕಾಯಿಲೆಗೆ ಔಷಧಿ ಹುಡುಕಿಕೊಂಡು ನಾನು, ಅಪ್ಪ  ತಿರುಗಿದ್ದಕ್ಕೆ ಲೆಕ್ಕವಿಲ್ಲ. ಕಡೆಗೂ, ಆ ಕಾಯಿಲೆ ತಾನಾಗಿಯೇ ಹುಷಾರಾಯಿತು ಹೊರತೂ, ಯಾವ ಔಷಧಿಯೂ ಪ್ರಯೋಜನವಾಗಲಿಲ್ಲ. ಅಪ್ಪನ ಬಗ್ಗೆ  ಬರೆಯುತ್ತಾ ಹೋದರೆ ಬಹುಶಃ  ನನ್ನ  ಪಾಲಿಗೆ ಪುಟಗಳು ಸಾಲದಾಗಬಹುದು. ಅಷ್ಟು  ಪಾಠವನ್ನು ಬದುಕಿಗೆ ಕಲಿಸಿಕೊಟ್ಟಿದ್ದಾನೆ.
ಆಗ, ನನಗೆ ೪ ವರ್ಷವಿರಬೇಕು. ಹಳೆ ಸೊಗೆಯ ಮನೆಯಲ್ಲಿದ್ದೆವು. ಅಮ್ಮನ ಕಾಲಿಗೆ ಪೆಟ್ಟಾಗಿ ಆಸ್ಪತ್ರೆ  ಸೇರಿದ್ದಳು. ಆಗ ಮನೆಯಲ್ಲಿ  ಗಂಜಿಗೂ ಅಕ್ಕಿ ಇರಲಿಲ್ಲ. ಅಂಥ ಸ್ಥಿತಿಯಲ್ಲಿದ್ದ  ಕುಟುಂಬವನ್ನು ಅಪ್ಪ  ಮೇಲಕ್ಕೆತ್ತಿದ ರೀತಿ ನಿಜಕ್ಕೂ ನನ್ನಿಂದ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.

ನಾನು  ೭ ತರಗತಿಗೆ ಬರುವ ಹೊತ್ತಿಗೆ, ನಾವು ಈ ಕಡೆ ಕೇರಿಯಲ್ಲಿ  ಮನೆ ಮಾಡಿದೆವು. ದುರಂತವೆಂದರೆ, ನಮ್ಮ  ದಾಯಾದಿ ಚಿಕ್ಕಪ್ಪನೇ ಮೋಸ ಮಾಡಿದ. ಹಸಿ ಇಟ್ಟಿಗೆ ಗೋಡೆಯ ಮನೆ ಕಟ್ಟಿಸಿ, ಹಳೆ ಮನೆಯ ಜಾಗವನ್ನು  ಬರೆಸಿಕೊಂಡು, ಅಡಿಕೆ ದುಡ್ಡನ್ನೆಲ್ಲ  ನುಂಗಿ ನೀರು ಕುಡಿದ. ಅದೇ ಹೊತ್ತಿಗೆ ಅಪ್ಪ  ಅಲ್ಸರ್‌ನಿಂದ ಹಾಸಿಗೆ ಹಿಡಿದಿದ್ದ. ಇನ್ನೂ ಬದುಕುವುದೇ  ಇಲ್ಲ, ಅವನ ಕಥೆ ಮುಗಿದೇ ಹೋಯಿತು ಅನ್ನುವಂತಾಗಿತ್ತಂತೆ. ನನಗೆ ಆಗ ಅದ್ಯಾವುದೂ ಅರ್ಥವಾಗಲಿಲ್ಲ.  ಶ್ರೀಧರ ಸ್ವಾಮಿಗಳು ಕನಸಿನಲ್ಲಿ  ಅಪ್ಪನಿಗೆ ಆಶೀರ್ವಾದ ಮಾಡಿದರಂತೆ. ಅಲ್ಲಿಂದ ನಂತರ ಅಪ್ಪ  ಸುಧಾರಿಸಿದ್ದಂತೆ. ಹಾಗಂತ ಅಪ್ಪ  ಹೇಳುವುದುಂಟು. ಈ ವಿಷಯ ಬಾಲಿಶ ಅನ್ನಿಸಬಹುದು. ಆದರೆ, ಒಂದು ದಿನ ಇದ್ದಕ್ಕಿದಂತೆ ಮಾತ್ರೆ ಎಸೆದಿದ್ದನ್ನು  ನಾನೇ ನೋಡಿರುವೆ. ಅಲ್ಲಿಂದ ನಂತರ ಮತ್ತೆ ಕೆಜಿ ಲೆಕ್ಕದಲ್ಲಿ  ತಂಬಾಕಿನ ಕವಳ. ಯಾರು, ಎಷ್ಟೇ  ಹೇಳಿದರೂ  ಅಪ್ಪ  ಕವಳದ ವಿಷಯದಲ್ಲಿ  ಇವತ್ತಿನವರೆಗೂ ರಾಜಿಯಾಗಿಲ್ಲ. ಮಾತ್ರೆಯನ್ನೂ ಮತ್ತೆ ಯಾವತ್ತೂ ನುಂಗಲಿಲ್ಲ!

ಇಗೊಂದಷ್ಟು  ದಿನದ ಹಿಂದೆ ಅಪ್ಪನಿಗೆ ಚರ್ಮದ ಅಲರ್ಜಿ ಶುರುವಾಗಿತ್ತು. ತುಂಬಾ ಮಂಕಾಗಿ ಬಿಟ್ಟಿದ್ದ. ನನಗೂ ಆ ನೋವು ತುಂಬಾ ಕಾಡುತ್ತಿತ್ತು. ಔಷಧಿ ತೆಗೆದುಕೊಂಡು ೩ ದಿನದಲ್ಲಿ  ರೋಗ ಹುಷಾರಾಗಬೇಕು ಎಂಬುದು ಅವನ ತತ್ವ! ಹಾಗಾಗಿ ಅವನಿಗೆ ಔಷಧಿ ಕುಡಿಸಲು ಸಾಧ್ಯವೇ ಇಲ್ಲ  ಎಂಬುದು ನನಗೆ ಗೊತ್ತಿತ್ತು. ಆದ್ರೂ ಅವ ನನ್ನನ್ನು ಹೆಗಲ ಮೇಲೆ ಹೊತ್ತು  ಔಷಧಿಗೆ ತಿರುಗಿದ್ದು ನೆನಪಾಯಿತು. ಹಾಗಾಗಿ ಹಠ ಮಾಡಿದೆ. ನನ್ನ  ಹಠಕ್ಕೆ ಔಷಧಿ ತೆಗೆದುಕೊಂಡ ಎಂಬುದು ನಿಜ. ಜೊತೆಗೆ, ಅದನ್ನು ಕುಡಿಯುವುದಿಲ್ಲ  ಎಂಬ ನನ್ನ  ನಂಬಿಕೆಯೂ ನಿಜವಾಯಿತು! ಹಾಗಂತ ಯಾರ್‍ಯಾರೋ ಹೇಳಿದರು ಅಂತಾ, ದಿನಕ್ಕೊಬ್ಬ  ಪಂಡಿತರ ಬಳಿ ಓಡುವುದನ್ನು ಮಾತ್ರ ಅಪ್ಪ  ನಿಲ್ಲಿಸುವುದಿಲ್ಲ! ಕಡೆಗೆ ಅಲರ್ಜಿಯೂ ತಾನಾಗಿಯೇ ಹೋಯಿತು.

ಈಗ ಮತ್ತೆ ಮುಂಚಿನ ಗೆಲುವಿನಲ್ಲಿದ್ದಾನೆ…ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾನೆ. ನನ್ನ ಮಟ್ಟಿಗೆ  ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ. ತಾನೂ ಚಪ್ಪಲಿ  ಹಾಕದೆ ಹೋದರೂ, ನನ್ನ ಮತ್ತು ತಂಗಿಯ ಬೇಡಿಕೆಗಳಿಗೆ ಯಾವತ್ತೂ ಕೊರತೆ ಮಾಡಲಿಲ್ಲ. ಅದರಲ್ಲೂ  ವಿಶೇಷವಾಗಿ ತಂಗಿಗೆ! ಅವ, ತನಗೆ ಹೊಸ ಬಟ್ಟೆ  ತಂದುಕೊಂಡಿದ್ದು  ನಾನಂತೂ ಯಾವತ್ತೂ  ನೋಡಿಲ್ಲ. ಆದ್ರೆ, ದುಡ್ಡು  ಇಲ್ಲದಾಗಲೂ ಸಾಲ ಮಾಡಿ ನಮಗೆ ಬಟ್ಟೆ  ತಂದುಕೊಟ್ಟವ…ಯಾಕೋ ಹಾಗೇ ಸುಮ್ಮನೆ  ಅವನ ಕುರಿತು ಒಂದಷ್ಟು  ಬರೆಯಬೇಕು ಅನ್ನಿಸಿತು. ಮನಸ್ಸು  ಬಂದಾಗ ಮತ್ತೊಂದಿಷ್ಟು  ಬರೆಯುವೆ!

Read Full Post »

ಮೇರಾ ಭಾರತ್ ಮಹಾನ್ ಹೆ!
ಹಾಗಂದಕೂಡಲೇ ನೆನಪಾಗುವವರು ರಾಜೀವ್‌ದೀಕ್ಷಿತ್.
ಸ್ವದೇಶಿ ಹೋರಾಟ, ಬೇವಿನ ಕಡ್ಡಿಯ ಬ್ರೆಷ್, ಖಾದಿ ಚೀಲ, ದೇಶೀಯ ಪೇಸ್ಟ್…ರಾಜಕಾರಣಿಗಳ, ಭ್ರಷ್ಟರ ಕುರಿತ ಕುಚೋದ್ಯ…ಎಲ್ಲವೂ ದೀಕ್ಷಿತರ ಬಗಲಲ್ಲೇ ನೆನಪಾಗುತ್ತದೆ.

ಅಂಥ ರಾಜೀವ್ ದೀಕ್ಷಿತ್ ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಸ್ವದೇಶಿ ಹೋರಾಟ ಹೇಗಿದೆ?
ಊಹುಂ, ಇವೆಲ್ಲ  ನಮ್ಮಂಥವರು ಕೇಳುವ ಪ್ರಶ್ನೆಯಲ್ಲ  ಬಿಡಿ! ಕೇಳಿದರೆ ಮತ್ತೆ  ನಾವು ಒಂದಷ್ಟು  ಮಂದಿಯ ಕೆಗಂಣ್ಣಿಗೆ ಗುರಿಯಾಗುತ್ತೇವೆ.

ನನಗೆ ಬುದ್ದಿ  ಬೆಳವಣಿಗೆಯಾಗುವ ಹೊತ್ತಿಗೆ ಸ್ವದೇಶಿ ಹೋರಾಟ ಉತ್ತುಂಗದಲ್ಲಿತ್ತು. ರಾಜೀವ್ ದೀಕ್ಷಿತರನ್ನು ಅನುಸರಿಸಿ ಎಂಎನ್‌ಸಿ ಕಂಪನಿಗಳ ವಿರುದ್ಧ ಕೂಗಾಡುವವರ, ದೇಶೀಯ ಧ್ವನಿ ಮೊಳಗಿಸುವವರ ಸಂಖ್ಯೆಯೂ ನಮ್ಮ  ರಾಜ್ಯದಲ್ಲಿ  ದೊಡ್ಡದಾಗಿಯೇ ಇತ್ತು. ಹೇಳಿ ಕೇಳಿ ನನಗೂ ಮೊದಲಿನಿಂದ ದೇಶೀಯತೆಯ ಹುಚ್ಚು. ಹೋರಾಟದಿಂದ ಭಾರತದ ಸಮಸ್ಯೆಗಳೆಲ್ಲ  ಬಗೆಹರಿಯುತ್ತದೆ ಎಂಬ ಭ್ರಮೆ! ರಾಜೀವ್ ದೀಕ್ಷಿತ್ ದೇಶದ ಪ್ರಧಾನಿಯಾದರೆ, ಭಾರತದ ಕುರಿತು ನಮ್ಮ  ಕನಸು ನನಸಾಗುತ್ತದೆ ಎಂದು ಬೊಬ್ಬೆ ಹೊಡೆದ ಮಂದಿಯಲ್ಲಿ  ನಾನು ಒಬ್ಬ! ಎಂಜಿಎಂ ಕಾಲೇಜಿನ ರವಿಂದ್ರ ಮಂಟಪದಲ್ಲಿ   ದೀಕ್ಷಿತರ ಭಾಷಣ ಕೇಳಿ, ‘ಸರ್ ನೀವು ಒಂದು ಸಲ ದೇಶದ ಪ್ರಧಾನಿಯಾಗಬೇಕು’ ಅಂತಾ ಅವರ ಕೈಕುಲುಕಿ ಬಂದಿದ್ದನ್ನು  ನೆನಪಿಸಿಕೊಂಡರೆ ಈಗ ನಗು ಬರುತ್ತಿದೆ.

ಈಗ ರಾಜೀವ್ ದೀಕ್ಷಿತ್ ಬಣದ ಸ್ವದೇಶಿ ಹೋರಾಟ ಅಕ್ಷರಶಃ  ಸತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.  ಹೋರಾಟದ ಹೆಸರಿನಲ್ಲಿ  ಯಾರಿಗೋ ಪ್ರಚಾರ ಸಿಗುತ್ತದೆ, ಯಾರೋ ಎಂಎಲ್‌ಎ, ಎಂಪಿ ಸ್ಥಾನಕ್ಕೆ ಟಿಕೆಟ್ ಪಡೆಯುತ್ತಾರೆ…ಅಲ್ಲಲ್ಲ, ಈ ಪಟ್ಟಗಳನ್ನೆಲ್ಲ  ಗಮನದಲ್ಲಿಟುಕೊಂಡೇ ಹೋರಾಟಗಳನ್ನು ಆರಂಭಿಸುತ್ತಾರೆ. ಬಯಸಿದ್ದನ್ನು ಪಡೆಯುತ್ತಾರೆ…ಇವೆಲ್ಲ  ಭಾರತದಲ್ಲಿ  ಮಾಮೂಲು.

ನಿನ್ನೆ  ಬ್ಲಾಗ್ ಗೆಳೆಯನೊಬ್ಬ  ಫೋನ್ ಮಾಡಿ ‘ಲವ್ ಜಿಹಾದ್’ ಕುರಿತು ಮಾತನಾಡಿದಾಗ ಇದೆಲ್ಲ  ನೆನಪಾಯಿತು. ಹಿಂದುತ್ವ, ಸೆಕ್ಯುಲರಿಸಂ, ಕೋಮುವಾದ…ಇವೆಲ್ಲ  ಬ್ಲಾಗ್ ಲೋಕದಲ್ಲೂ  ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸರಕುಗಳಾಗಿವೆ ಎನ್ನುತ್ತಿದ್ದ. ಕೇವಲ ಬ್ಲಾಗ್ ಲೋಕದಲ್ಲಲ್ಲ, ನಮ್ಮ ನಾಡಿನಲ್ಲೂ  ಪ್ರಚಾರ ಗಿಟ್ಟಿಸಿಕೊಡುವ, ಟಿಆರ್‌ಪಿ ಹೆಚ್ಚಿಸಿಕೊಡುವ ಸರಕುಗಳಿವು. ಕೇವಲ ಹಿಂದುತ್ವ ಮಾತ್ರವಲ್ಲ, ಎಲ್ಲಾ  ಬಗೆಯ ವಾದಗಳು, ಸಿದ್ಧಾಂತಗಳೂ ಕೂಡ. (ಇದನ್ನು ಒಪ್ಪುವವರು ಒಪ್ಪಬಹುದು. ಒಪ್ಪದಿದ್ದರೆ ನನ್ನ  ತಕರಾರು, ಜಗಳ ಯಾವುದೂ ಇಲ್ಲ)

ಮದನ್ ಲಾಲ್ ದಿಂಗ್ರಾನ ಕೈಯಿಂದ ರಕ್ತ ಟಪ, ಟಪ ಹನಿಯಾಗುತ್ತಿತ್ತು…ಭಗತ್ ನೇಣಿಗೇರಿದಾಗ ಆತನ ಅಮ್ಮನ ಕಣ್ಣಲ್ಲಿ…
ಇಂಥ ಸಾಕಷ್ಟು  ಉದ್ರೇಕಕಾರಿ ಭಾಷಣ ಕೇಳಿ ಬಿಟ್ಟಾಗಿದೆ! ಭಾಷಣ ಕೇಳುತ್ತಿದ್ದಾಗ ದೇಶದ ವಿರುದ್ಧ  ಮಾತಾಡುವವರಿಗೆ ಎದ್ದು  ಹೋಗಿ ಹೊಡೆಯ ಬೇಕು ಅನ್ನಿಸುತ್ತದೆ. ಅಷ್ಟು  ಸೊಗಸು. ಅದರ ಮಗ್ಗುಲಲ್ಲೆ  ಲವ್-ಜಿಹಾದ್ ಘಟನೆಯನ್ನು ಇನ್ನೊಂದು ಬಗೆಯಲ್ಲಿ  ವಿವರಿಸುವವರು ಸಿಗುತ್ತಾರೆ. ಭಜರಂಗ ದಳದ ಅಡ್ಡೆಯಲ್ಲಿ  ಇತಿಹಾಸದ ಪುಟದಿಂದ ದೇಶದ ವೈಭವ ಹೇಳುವವರನ್ನು  ಅನುಸರಿಸಬೇಕಾ? ನವ ಮಾಧ್ಯಮದಲ್ಲಿ  ಇನ್ನೊಂದು ರೀತಿಯಲ್ಲಿ  ಜನರನ್ನು ಆಕರ್ಷಿಸುವವರನ್ನು  ಒಪ್ಪಬೇಕಾ ಎಂಬುದು ಕಡೆವರೆಗೂ ಅರ್ಥವಾಗದ ವಿಷಯ. ಇದೊಂಥರ ಅಂಬಾನಿ ಸಹೋದರರ ಜಗಳದಂತೆ!

ವಿಷಯ ಅರ್ಥವಾಗದಿದ್ದರು ಕೆಲವೊಮ್ಮೆ  ವಾಸ್ತವದ ಅರಿವಾಗುತ್ತದೆ. ರಾಜೀವ್ ದೀಕ್ಷಿತರ ಪ್ರಭಾವದಿಂದ ರಾಷ್ಟ್ರ  ನಾಯಕರಾಗ ಹೊರಟವರು  ಇವತ್ತಿಗೂ ನಮ್ಮಲ್ಲಿ  ಸಾಕಷ್ಟು  ಮಂದಿಯಿದ್ದಾರೆ. ಇದರಲ್ಲಿ  ನೈಜ ರಾಷ್ಟ್ರ  ಭಕ್ತರ ಸಂಖ್ಯೆ ಎಷ್ಟು? ಮನೆ-ಮಂದಿರ, ಕಾರು, ಬೃಹತ್ ಕಂಪನಿಗಳು-ಎನ್‌ಜಿಒಗಳು ದೇಶದ ಕುರಿತು ಉನ್ನತ ಅಧ್ಯಯನಕ್ಕೆಂದು ನೀಡುವ ಹಣಕ್ಕಾಗಿ ರಾಷ್ಟ್ರದ  ಪುಂಗಿ ಊದುವವರು ಎಷ್ಟು  ಎಂಬುದನ್ನು  ತಿಳಿಯಲು ಸಾಕಷ್ಟು  ವರ್ಷಗಳೇ ಬೇಕಾಗುತ್ತವೆ.

‘ಹುಚ್ಚನ ಮದುವೆಯಲ್ಲಿ  ಉಂಡವನೇ ಜಾಣ’ ಎಂಬಂಥ ಕಥೆ ನಮ್ಮ ದೇಶದ್ದು. ಅವಕಾಶ ಸಿಕ್ಕರೆ ಎಲ್ಲರೂ, ಎಲ್ಲದಕ್ಕೂ ಸಿದ್ಧ. ಅವ ದೇಶಭಕ್ತ, ಇವ ಭ್ರಷ್ಟನಲ್ಲ  ಅಂದುಕೊಳ್ಳುವ  ನಾವು ಪರಮ ಹುಚ್ಚರು. ಮಾನವ ಸ್ವಾರ್ಥಕ್ಕೆ ಎಡ-ಬಲ ಪಂಥಗಳಿಲ್ಲ  ಬಿಡಿ!

ಹಾಗಂತ ಎಲ್ಲರನ್ನೂ ಇದೇ ವರ್ಗಕ್ಕೆ ಸೇರಿಸುವುದು(ಸಿದ್ಧಾಂತಿಗಳನ್ನು) ತಪ್ಪಾಗಬಹುದು. ದೇಶಕ್ಕಾಗಿ  ಸ್ಥಳೀಯ ಮಟ್ಟದಲ್ಲಿ  ಕೆಲಸ ಮಾಡುವ ಸಾಕಷ್ಟು  ಮಂದಿಯಿರಬಹುದು. ಆದರೆ, ದೊಡ್ಡ  ಕಪಟಿಗಳಿಂದಾಗಿ ಅಂಥ ನಿಷ್ಠಾವಂತರ ಮೇಲಿರುವ ಗೌರವವೂ ಬಹುಶಃ ಕಳೆದುಹೊಗಬಹುದು. ಯಾರಾದರೂ ದೇಶದ ಕುರಿತು ಮಾತಾಡುತ್ತಾರೆ ಎಂದರೆ, ಅದರ ಹಿಂದೇನೋ ಮಸಲತ್ತು ಇದೆ ಅನ್ನಿಸಬಹುದು ಅಲ್ವಾ?

Read Full Post »