ಲೈವ್ ಮರ್ಡರ್ ಕಾರ್ಯಕ್ರಮ ವಿರೋಧಿಸಿ ಶ್ರೀವತ್ಸ ಜೋಷಿಯವರು ಫೇಸ್ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದಕ್ಕೆ ವರದಿಗಾರನೊಬ್ಬ ಪ್ರತಿಕ್ರಿಯಿಸಿದ್ದ. ‘ಒಂದು ಒಳ್ಳೆ ಕಾರ್ಯಕ್ರಮ ಹಾಕಿದ್ರೆ ಜನ ನೋಡಲ್ಲ, ನೀವು ಸಾಮಾಜಿಕ ಜಾಲತಾಣದವರು ಹಾಗೆ, ಹೀಗೆ… ಜನಕ್ಕಾಗಿ ಏನು ಮಾಡ್ತೀರಿ’ ಇತ್ಯಾದಿ. ಬಹಳ ಮಜ ಅಂದ್ರೆ ಟಿವಿ ಮಾಧ್ಯಮದಲ್ಲಿ ದುಡಿಯುವ, ಅದಕ್ಕಿಂತ ಮುಖ್ಯವಾಗಿ ದೊಡ್ಡ ಹುದ್ದೆಯಲ್ಲಿ ಕುಳಿತು ಆಳುವ ಅನೇಕರಿಗೆ ಒಳ್ಳೆ ಕಾರ್ಯಕ್ರಮಕ್ಕೆ ಟಿಆರ್ಪಿ ಬರಲ್ಲ ಅನ್ನೊ ತಪ್ಪು ಕಲ್ಪನೆಯಿದೆ.
ಸರಿ ಹಾಗಿದ್ರೆ ಕೆಟ್ಟದ್ದಕ್ಕೆಲ್ಲ ಟಿಆರ್ಪಿ ಬರುತ್ತ ಅನ್ನೋದು ನನ್ನ ಪ್ರಶ್ನೆ. ಹಾಗೊಂದು ವೇಳೆ ನಮ್ಮ ಸುದ್ದಿವಾಹಿನಿಯಲ್ಲಿ ಕುಳಿತವರ ಭ್ರಮೆಯಂತೆ ಕೆಟ್ಟದ್ದಕ್ಕೆ, ಕ್ರೈಂಗೆ, ಅತಿರಂಜನೀಯಕ್ಕೆ ಟಿಆರ್ಪಿ ಬರುವುದೇ ಆಗಿದ್ದರೆ, ಕನ್ನಡದಲ್ಲಿ ಎಲ್ಲ ವಾಹಿನಿಗಳು ನಂಬರ್ ಒನ್ ವಾಹಿನಿಗಳಾಗಿರಬೇಕಿತ್ತು! ಮಜ ಗೊತ್ತ, ಕನ್ನಡದ ಒಂದು ಸುದ್ದಿವಾಹಿನಿಯ ಒಟ್ಟು ಜಿಆರ್ಪಿ ಒಂದು ಧಾರಾವಾಹಿಯ ವಾರದ ಟಿವಿಆರ್ ಆಗಿರುತ್ತೆ. ಒಂದು ರಿಯಾಲಿಟಿ ಶೋನ ತಾಜಾ ಎಪಿಸೋಡ್ಗೆ ಬರುವ ಟಿವಿಆರ್, ಒಂದು ವಾರದ ಬಿಟಿವಿಯದ್ದೊ, ಪಬ್ಲಿಕ್ ಟಿವಿಯದ್ದೊ ಒಟ್ಟಾರೆ ಜಿಆರ್ಪಿ. ನಿಮಗೆ ಹೀಗೆ ಹೇಳಿದ್ರೆ ಅರ್ಥವಾಗಲ್ಲ ಅನ್ನೋದು ನಂಗೆ ಗೊತ್ತು. ಆದ್ರೆ ನಾನಿಲ್ಲಿ ಇದನ್ನು ಉಲ್ಲೇಖ ಮಾಡಿದ್ದು ಇಷ್ಟಕ್ಕೆ, ಖಂಡಿತ ಒಂದು ಧಾರವಾಹಿ, ಸುದ್ದಿ ವಾಹಿನಿಯ ಕ್ರೈಂನಷ್ಟು ಅತಿರಂಜನೀಯವಾಗಿರಲಾರದು. ಕೆಟ್ಟದ್ದಕ್ಕೆ ಟಿಆರ್ಪಿ ಬರುತ್ತೆ ಅಂತಾಗಿದ್ರೆ ಇವತ್ತು ಕನ್ನಡದ ಎಲ್ಲ ಸುದ್ದಿವಾಹಿನಿಗಳು ೧೫೦-೨೦೦ ಜಿಆರ್ಪಿಯಲ್ಲಿ ಇರಬೇಕಿತ್ತು.
ಟಿವಿ೯, ೧೨೦-೧೬೦ ಜಿಆರ್ಪಿಯಲ್ಲಿ ಪ್ರತಿ ವಾರ ಲೀಡ್ನಲ್ಲಿರುತ್ತೆ. ನಂತರದ ಸ್ಥಾನದಲ್ಲಿ ಅಸ್ಥಿರ. ಕನ್ನಡದಲ್ಲಿ ನಂಬರ್.೨ ಎನಿಸಿಕೊಂಡ ವಾಹಿನಿಯ ಗರಿಷ್ಠ ಜಿಆರ್ಪಿ ೬೫ರ ಗಡಿ ದಾಟುವುದಿಲ್ಲ. ಮಿಕ್ಕವೆಲ್ಲ ೩೦, ೧೯, ೧೨ ಈ ಥರ ಜಿಆರ್ಪಿ. ಹಾಗಿದ್ದ ಮೇಲೆ ಒಳ್ಳೆದು ಕೊಟ್ರೆ ಜನ ನೋಡಲ್ಲ, ಕೆಟ್ಟದ್ದಕ್ಕೆ ಟಿಆರ್ಪಿ ಬರುತ್ತೆ ಅಂತ ನೀವು ಯಾವ ಆಧಾರದ ಮೇಲೆ ಹೇಳುವಿರಿ?
ಒಂದು ಕಾಲದಲ್ಲಿ ಟಿವಿ೯ನ ಕ್ರೈಂ ಎಪಿಸೋಡ್ಗೆ ಭರ್ಜರಿ ಟಿಆರ್ಪಿ ಬರುತ್ತಿತ್ತು. ಆಗ ಕನ್ನಡಕ್ಕೆ ನ್ಯೂಸ್ ಚಾನೆಲ್ ಎಂಬ ಪರಿಕಲ್ಪನೆಯೆ ಹೊಸದು. ಟಿವಿ೯ ಕ್ರೈಂನಿಂದ ಯಶಸ್ವಿಯಾಯಿತು ಎಂದು ಮುಂದೆ ಬಂದ ಎಲ್ಲ ಕನ್ನಡದ ಸುದ್ದಿ ವಾಹಿನಿಗಳು ಕ್ರೈಂನ್ನು ಗೆಲುವಿನ ಮಂತ್ರ ಎಂದು ಭಾವಿಸಿಕೊಂಡರು. ಆದ್ರೆ ಟಿವಿ೯ ಸಖತ್ ಚಾಣಾಕ್ಷ. ಅದು ನ್ಯೂಸ್ ಆಧಾರಿತ ಕಾರ್ಯಕ್ರಮಗಳಿಂದಲೇ ಗೆಲುವಿನ ನಗೆ ಬೀರುತ್ತ ಬಂದಿತು. ಕನ್ನಡದ ಮಟ್ಟಿಗೆ ತುಸು ವೃತ್ತಿಪರವಾಗಿ ಕಾಣಿಸುವ ವಾಹಿನಿಯದು. ಯಾಕಂದ್ರೆ ಅದ್ರಲ್ಲಿ ಹೆಚ್ಚಿನದ್ದು ಆಜ್ತಕ್ ವಾಹಿನಿಯ ಕಾಪಿ-ಪೇಸ್ಟ್!
ನೀವು ಕೆಟ್ಟದ್ದನ್ನು, ಕ್ರೈಂನ್ನು ಬಿತ್ತರಿಸಿ ೧೫೦ ಜಿಆರ್ಪಿ ಗಳಿಸಿದ್ದರೆ, ನಿಮ್ಮ ವಾದ ಸರಿ ಅನ್ನಬಹುದಿತ್ತು. ಆದರೆ ಕನ್ನಡದ ಉಳಿದೆಲ್ಲ ವಾಹಿನಿಗಳ ಒಟ್ಟು ಜಿಆರ್ಪಿ ನಂಬರ್ ಒನ್ ವಾಹಿನಿ ಜಿಆರ್ಪಿಗೆ ಸಮನಾಗಿ ನಿಲ್ಲುವುದಿಲ್ಲ.
ನಂಬರ್ ಒನ್ ಧಾರವಾಹಿಯ ಸರಾಸರಿ ಟಿವಿಆರ್ ೭-೮. ಅಂದ್ರೆ ಒಟ್ಟು ೪೨-೪೮ ಜಿಆರ್ಪಿ ಒಂದು ಧಾರವಾಹಿಯಿಂದ ಬರುತ್ತೆ. ಕನ್ನಡದ ೩,೪,೫ನೇ ಸ್ಥಾನದಲ್ಲಿರುವ ನ್ಯೂಸ್ ಚಾನೆಲ್ಗಳು ವಾರವಿಡಿ, ೨೪ ಗಂಟೆಗಳ ಕಾಲ ನಾನ್ಸೆನ್ಸ್ಗಳನ್ನು ಓಡಿಸಿದರೂ,ಅವುಗಳ ವಾರದ ಜಿಆರ್ಪಿ ೩೦ರ ಗಡಿ ದಾಟಲಾರದು! ಇಲ್ಲಿ ಹಲವಾರು ಅಂಶಗಳು ಕಾರಣವಾಗುತ್ತವೆ ಎಂಬುದನ್ನು ಒಪ್ಪಬಹುದಾದರೂ, ಕೆಟ್ಟದ್ದನ್ನು ಮಾತ್ರ ಜನ ನೋಡ್ತಾರೆ. ಕ್ರೈಂ, ರೊಚ್ಚಿಗೆದ್ದಿದ್ದು ಮಾತ್ರ ಜನಕ್ಕೆ ಇಷ್ಟವಾಗುತ್ತೆ ಎಂಬ ಲಾಜಿಕ್ಕು ತಪ್ಪು ಎಂಬುದು ತೀರ ಸ್ಪಷ್ಟವಾಗಿ ಸಾಬೀತಾಗುತ್ತದೆ.
ಕೆಟ್ಟದ್ದನ್ನು ವಿರೋಧಿಸುವ ಜನಕ್ಕೆ ಪರ್ಯಾಯ ಒಳಿತು. ಆ ಸ್ಪೇಸ್ನ್ನು ಆಕ್ರಮಿಸಿಕೊಳ್ಳುವ ಕೆಲಸವನ್ನು ಕನ್ನಡದ ಯಾವ ಸುದ್ದಿ ವಾಹಿನಿಗಳು ಮಾಡುತ್ತಿಲ್ಲ ಎಂಬುದು ದುರಂತ. ಹಾಗಂತ ಯತ್ನ ಮಾಡುವುದೇ ಇಲ್ಲ ಅಂತಲ್ಲ, ತೀರ ಅಪರೂಪ. ಹೀಗೆ ಅಪರೂಪವಾಗಿ ಮಾಡಿದಾಗ ಖಂಡಿತ ಟಿಆರ್ಪಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಒಂದು ಕಾರ್ಯಕ್ರಮದ ಟಿಆರ್ಪಿ ಆಧರಿಸುವ ಅಂಶಗಳು ತುಂಬಾ ಇರುತ್ತವೆ.
ಈ ಟಿಆರ್ಪಿ ಎನ್ನುವುದೇ ಒಂಥರ ಲಾಜಿಕ್ಕಿಲ್ಲದ, ಲೆಕ್ಕಕೆ ಸಿಗದ ಮಾಪನ ಎಂಬುದು ನಂತರದ ಮಾತು ಬಿಡಿ. ಆದರೆ ಮಾರ್ಕೆಟಿಂಗ್ನ ದೃಷ್ಟಿಯಿಂದ, ಜಾಹೀರಾತುದಾರರ ದೃಷ್ಟಿಯಿಂದ ನಾವು ಆ ವ್ಯವಸ್ಥೆಯನ್ನು ಒಪ್ಪಿಕೊಳ್ಳಲೇಬೇಕು.
ತುಂಬ ಜನ ಟಿಆರ್ಪಿ ಬಗ್ಗೆ ಮಾತಾಡುತ್ತಾರೆ. ಆದ್ರೆ ಬಹಳಷ್ಟು ಪತ್ರಕರ್ತರಿಗೆ ಅದರ ಉದ್ದಗಲ ಖಂಡಿತವಾಗಿಯೂ ಗೊತ್ತಿಲ್ಲ. ಪ್ರತಿ ವಾಹಿನಿಯಲ್ಲೂ ಈ ಟಿಆರ್ಪಿಯ ಆಳ-ಅಗಲ ಗೊತ್ತಿರುವುದು ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ. ಟಿಆರ್ಪಿ, ಟಿವಿಆರ್, ಟಿವಿಎಚ್, ಜಿಆರ್ಪಿ, ಟೈಂಸ್ಪೆಂಡ್, ರೀಚು ವಗೈರೆ, ವಗೈರೆಗಳನ್ನು ಅರ್ಥ ಮಾಡಿಕೊಳ್ಳಲು ಹೊರಟರೆ ಖಂಡಿತ ತಲೆ ಹಾಳಾಗುತ್ತದೆ. ಹೀಗಾಗಿ ಒಂದು ವಾಹಿನಿಗೆ ವಾರಕ್ಕೆ ಎಷ್ಟು ಅಂಕ ಬಂತು ಎಂಬುದಷ್ಟೆ ಟಿಆರ್ಪಿ ಎಂಬ ಭ್ರಮೆ ಅನೇಕ ಮಂದಿಯಲ್ಲಿದೆ!
ಹಾಗೆ ನೋಡಿದ್ರೆ ಮನರಂಜನೆ ವಾಹಿನಿಯಲ್ಲಿ ಏನೂ ಇಲ್ಲ. ಯಾಕಂದ್ರೆ ಅಲ್ಲಿ ದಿನ ಹೊಸತನ್ನು ಕೊಡಲು ಸಾಧ್ಯವಿಲ್ಲ. ಆ ಲೆಕ್ಕದಲ್ಲಿ ಮನರಂಜನೆ ವಾಹಿನಿಗಿಂತ ಸುದ್ದಿ ವಾಹಿನಿ ವೀಕ್ಷಕರ ಪ್ರಮಾಣ ಹೆಚ್ಚಿರಬೇಕಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಒಂದು ಆಜ್ತಕ್, ಒಂದು ಟೈಂಮ್ಸ್ ನೌ ವಾಹಿನಿಗಳು ನಂಬರ್ನಲ್ಲಿ ಮನರಂಜನೆ ವಾಹಿನಿಗೆ ಸಡ್ಡು ಹೊಡೆದು ನಿಲ್ಲುತ್ತವೆ. ಆದರೆ ಕನ್ನಡದಲ್ಲಿ ಪರಿಸ್ಥಿತಿ ಹಾಗಿಲ್ಲ. ಕನ್ನಡದಲ್ಲಿ ನಂಬರ್ ಒನ್ ಮನರಂಜನೆ ವಾಹಿನಿ ಅಂಕ ೪೦೦-೫೦೦ ಇದೆ. ನಂಬರ್ಒನ್ ಸುದ್ದಿ ವಾಹಿನಿ ೧೨೦-೧೫೦ರಲ್ಲಿದೆ. ೪ರಿಂದ ೫ ಪಟ್ಟು ವ್ಯತ್ಯಾಸವಿದೆ.
ಇವಿಷ್ಟು ಟಿಆರ್ಪಿ ಎಂಬ ಭಾಷೆಯಲ್ಲಿ ಮಾತಾಡುವವರ ದಾಟಿಯ ಬರಹವಾಯ್ತು.
ಆದ್ರೆ ಇಂದು ಸುದ್ದಿ ವಾಹಿನಿಗಳ ಅವಿವೇಕಿತನ ನೋಡಿ ಜನ ಉಗೀತಾ ಇದ್ದಾರೆ. ಜನವೇಕೆ, ಅದರೊಳಗೆ ಕೆಲಸ ಮಾಡುವ ಮಂದಿಯೇ ಉಗಿದುಕೊಂಡು, ಏನಾದ್ರು ಹಾಳಾಗ್ಲಿ ಹೋಗ್ಲಿ ಸಂಬಳ ಕೊಡ್ತಾರಾ, ಇಲ್ವಾ ಸಾಕು ಎಂದುಕೊಂಡು ಬರುತ್ತಿದ್ದಾರೆ. ಇದು ವಾಸ್ತವವಾಗಿ ಅರ್ಥವಾಗಬೇಕಿರುವುದು ಒಂದು ಸುದ್ದಿ ವಾಹಿನಿ ನಡೆಸುವ ಸಂಪಾದಕರಿಗೆ ಹಾಗೂ ಆಡಳಿತ ಮಂಡಳಿಗೆ. ಯಾರು, ನಿರ್ಧಾರ ತೆಗೆದುಕೊಳ್ಳುವ ಮಟ್ಟದಲ್ಲಿ ಇರುತ್ತಾರೋ, ಅವರಿಗೆ ಅರ್ಥವಾಗಬೇಕು. ಒಬ್ಬ ವರದಿಗಾರನಿಗೆ, ನಿರೂಪಕನಿಗೆ ಬೈದರೆ ಪ್ರಯೋಜನ ಇಲ್ಲ. ಪಾಪ ಅವನ ಕೈಯ್ಯಲ್ಲಿ ಏನು ಇರುವುದಿಲ್ಲ. ಕೊಡುವ ಸಂಬಳಕ್ಕೆ ಮೇಲಿಂದ ಬಂದ ಅಸೈನ್ಮೆಂಟ್ ಮುಗಿಸುತ್ತಾನೆ ಅಷ್ಟೆ. ಅದಕ್ಕೂ ಮೀರಿ ಏನೋ ಯತ್ನ ಮಾಡುವವರಿದ್ದರೂ, ಇಂಡಸ್ಟ್ರಿಯಲ್ಲಿ ಅವರನ್ನು ಅಷ್ಟೆ ವ್ಯವಸ್ಥಿತವಾಗಿ ತುಳಿಯುವ ಮಹಾ’ಸ್ವಾಮಿ’ಗಳದ್ದೆ ಸುವರ್ಣಯುಗ!
ನಿಮಗೆ ಟಿಆರ್ಪಿ ಅಳತೆಗೋಲೆ ಆಥರವಿದೆ. ಕೋಟಿಯಲ್ಲಿ ಸಾವಿರವನ್ನು ಅಳೆಯುವುದು. ಅಂಥದ್ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೈತಿದ್ದಾರೆ ಅಂದ್ರೆ, ಅದನ್ನು ಹೇಗೆ ನಿರ್ಲಕ್ಷ್ಯ ಮಾಡುವಿರಿ ಎಂಬುದು ಅರ್ಥವಾಗುತ್ತಿಲ್ಲ. ಜನಕ್ಕೆ ಬೇಡ, ಇಷ್ಟವಾಗುತ್ತಿಲ್ಲ ಅಂತಾದ್ರೆ, ಅದು ಫ್ಲ್ಯಾಪ್ ಕಾನ್ಸೆಪ್ಟ್ ಎಂದೇ ಅರ್ಥವಲ್ಲವೇ? ಅದನ್ನೇ ಮತ್ತೆ, ಮತ್ತೆ ತೋರಿಸಿದ್ರೆ ಹೇಗೆ ವಾಹಿನಿಯ ನಂಬರ್ ಇಂಪ್ರ್ಯೂ ಆಗುತ್ತೆ.
ಒಬ್ಬ ಸಂಪಾದಕ ಬಂದ ತಕ್ಷಣ ೫೮ ನಂಬರ್ ಇರುವ ಒಂದು ವಾಹಿನಿ ನಾವೇ ನಂಬರ್.೨ ಎಂದು ಜಾಹೀರಾತು ಹಾಕಿಕೊಂಡಿತ್ತಂತೆ. ಜೋರಾಗಿ ನಗು ಬಂತು. ೫ ವರ್ಷದಿಂದ ೫೮ರಲ್ಲೇ ಇದ್ದೀರಿ. ನಾಚ್ಕೆ ಆಗಬೇಕು. ನಿಮ್ಮ ವಾಹಿನಿಗೆ ಎರಡು ಸಲ ನಂಬರ್ ಕೊಟ್ರು, ನಿಮ್ಮ ಒಟ್ಟು ನಂಬರ್, ಮೊದಲ ಸ್ಥಾನದಲ್ಲಿರುವ ವಾಹಿನಿಗೆ ಸರಿಸಮಾಂತರವಾಗುವುದಿಲ್ಲ. ಅಂಥದ್ರಲ್ಲಿ ನೀವು ಅದನ್ನು ಸಂಭ್ರಮಿಸುತ್ತೀರಲ್ಲಾ? ಇದು ನಮ್ಮ ಕನ್ನಡದ ವಾಹಿನಿಗಳ ಮೆಂಟಾಲಿಟಿ ತೋರಿಸುತ್ತೆ. ಅಂದ್ರೆ ಮೇಲಕ್ಕೆ ಹೋಗುವುದು ಹಾಳಾಗ್ಲಿ, ಇದ್ದಲ್ಲಿ ಇದ್ರೆ ಖುಷಿ!
ಒಂದು ಅದ್ಭುತವಾದ ಊಟವಿದೆ. ಅದನ್ನು ಹೇಗೆ ಬಡಿಸುವಿರಿ ಎಂಬುದು ಅತ್ಯಂತ ಮಹತ್ವದಾಗುತ್ತೆ. ಹಾಗೆ ಒಂದು ಒಳ್ಳೆ ಕಾರ್ಯಕ್ರಮ ಮಾಡುವಾಗಲೂ ಅದನ್ನು ಯಾವ ಥರ ನಿರೂಪಿಸುವಿರಿ ಎಂಬುದು ಮಹ್ವತದ್ದು.
ನನಗೊಂತು ಎಷ್ಟೋ ಸಲ ಟಿವಿ೯ ವೃತ್ತಿಪರವಾಗಿ ಬೆಸ್ಟ್ ವಾಹಿನಿಯಂತೆ ಕಾಣಿಸುತ್ತೆ. ಯಾಕಂದ್ರೆ ಅವರಿಗೆ ಜನರ ನಾಡಿಮಿಡಿತ ಅರ್ಥವಾಗಿಬಿಟ್ಟಿದೆ. ಇವತ್ತಿನ ಟ್ರೆಂಡ್ನ್ನು ಟಪ್ ಅಂತ ಸೆರೆ ಹಿಡಿಯುತ್ತಾರೆ. ಅಲ್ಲಿ ಕೆಟ್ಟದ್ದನ್ನು ಎಷ್ಟು ಅದ್ಭುತವಾಗಿ ಕೊಡುತ್ತಿದ್ದರು ಎಂಬುದಕ್ಕೆ ವಾರೆಂಟ್ ಉದಾಹರಣೆ. ಇಡೀ ಶೋ ಸ್ಕ್ರಿಪ್ಟ್ ಕೇಳಬೇಕು ಅನ್ನಿಸುತ್ತಿತ್ತು. ಅದೇ ಥರ ಒಳ್ಳೆದನ್ನು ಕೊಡ್ತಾರೆ. ಎರಡನ್ನು ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡ್ತಾರೆ. ಹಾಗಂತೆ ಅಲ್ಲೂ ಸುದ್ದಿಯನ್ನು ಚೂಯಿಂಗ್ಗಂನಂತೆ ಎಳೆಯುವುದಿಲ್ಲ ಎಂದಲ್ಲ. ಆದ್ರು ಇರುವುದರಲ್ಲಿ ಉತ್ತಮ. ನನ್ನಂತೆ ಸುಮಾರು ಜನಕ್ಕೆ ಅನ್ನಿಸಿರಬೇಕು. ಹಾಗಾಗಿಯೇ ಇವತ್ತಿಗು ಅದು ನಂಬರ್ ಒನ್ ಸುದ್ದಿ ವಾಹಿನಿ.
ಕ್ರೈಂಡೈರಿ ಕೂಡ ಹಾಗೆ ಗೆದ್ದಿದ್ದು ಅದ್ರ ನಿರೂಪಣೆಯಿಂದ, ಸ್ಕ್ರಿಪ್ಟ್ನಿಂದ. ಅಂಥದ್ದೆ ಸೂತ್ರವನ್ನು ಒಳ್ಳೆಯದ್ದಕ್ಕು ಅಳವಡಿಸಿಕೊಂಡರೆ ಗೆಲ್ಲಲ್ಲು ಸಾಧ್ಯವಿಲ್ಲವೆ? ಖಂಡಿತ ೨೪ ಗಂಟೆ ಒಳ್ಳೆದನ್ನೆ ಕೊಡಿ, ಯಾವುದೋ ಸ್ವಾಮಿಗಳ ಪ್ರವಚನ ಹಾಕಿ ಅನ್ನುತ್ತಿಲ್ಲ. ಯಾವುದೋ ಕಿತ್ತೋದ ಸಂಸಾರದ ಡೈವರ್ಸ್ ಚರ್ಚೆ, ಇನ್ನು ಯಾವುದೋ ರಾಜಕಾರಣಿಯ ವಿವಾದ ವಗೈರೆ, ವಗೈರೆ…ಯಾರಿಗೆ ಬೇಕು ಇವೆಲ್ಲ? ಯಾವ ಕಾರಣಕ್ಕಾಗಿ ನಾವು ಅದನ್ನು ನೋಡಬೇಕು? ಅವನ ಕ್ಷೇತ್ರದ ಜನಕ್ಕೆ ಅವನ್ನ ಪರಿಚಯ ಇರಲ್ಲ. ಅಂಥವ್ರನ್ನ ಕರೆದುಕೊಂಡು ಬಂದು ಚರ್ಚೆಗೆ ಕೂರಿಸಿಕೊಳ್ಳುತ್ತಾರೆ. ಕನ್ನಡ ಪದಗಳನ್ನು ನೆಟ್ಟಗೆ ಉಚ್ಚರಿಸಲು ಬರದ ಕನ್ನಡ ಓರಾಟಗಾರರಿಂದ ಕನ್ನಡದ ಪರ ಚರ್ಚೆ! ಪದೇ, ಪದೇ ಸುದ್ದಿವಾಹಿನಿ ಎಂಬುದು ಅನಕ್ಷರಸ್ಥರ, ಅವಿವೇಕಿಗಳ ಸಂತೆ ಎಂಬುದನ್ನು ನಮ್ಮ ಕನ್ನಡದ ಸುದ್ದಿ ವಾಹಿನಿಗಳು ಸಾಬೀತುಗೊಳಿಸುತ್ತಿವೆ!!! ಇವತ್ತಿನ ಟ್ರೆಂಡ್ ನೋಡಿದ್ರೆ, ಮುಂದೊಂದು ದಿನ ಪತ್ರಕರ್ತರಿಗೆ ಯಾರಾದ್ರು ಕಲ್ಲು ಹಿಡಿದು ಹೊಡೆದ್ರು ಅಚ್ಚರಿಯಿಲ್ಲ! ನ್ಯೂಸ್ ಚಾನೆಲ್ ವರದಿಗಾರಿಕೆ ಎಂಬುದು ಖಂಡಿತ ಇವತ್ತು ಅಪಾಯದಮಟ್ಟದಲ್ಲಿದೆ.
ಖಂಡಿತ ಕನ್ನಡಕ್ಕೊಂದು ಒಳ್ಳೆ ಸುದ್ದಿ ವಾಹಿನಿ ಬೇಕಿದೆ. ಏನಾದ್ರು ಒಂದಷ್ಟು ಮಾಹಿತಿ ಕೊಡುವ, ಸುದ್ದಿಯ ಎರಡು ಮುಖಗಳನ್ನು ಎತ್ತಿ ಹಿಡಿಯುವ ಅಂದೆಲ್ಲ ಅಂದುಕೊಳ್ಳುವ ಹೊತ್ತಿಗೆ ಯಾವುದೋ ರಿಯಲ್ ಎಸ್ಟೇಟ್ ಉದ್ಯಮಿಯ, ರಾಜಕಾರಣಿಯ ಇನ್ನೊಂದು ಸುದ್ದಿವಾಹಿನಿ ತಲೆ ಎತ್ತಿಕೊಂಡಿರುತ್ತದೆ. ೨ ಕೋಟಿ ಇದ್ದವನು ಸಿನಿಮಾ ಮಾಡಬಹುದು, ೨೦ ಕೋಟಿ ಇದ್ದವನು ನ್ಯೂಸ್ ಚಾನೆಲ್ ಮಾಡಬಹುದು ಎಂಬಂಥ ಯುಗವಿದು! ದುಡ್ಡು ಅವ್ರದ್ದು, ಕಾಸು ಅವ್ರದ್ದು, ಅಧಿಕಾರ ಅವ್ರದ್ದು. ಒಳ್ಳೆದಾಗ್ಲಿ ಬಿಡಿ. ಟಿವಿ ಆಫ್ ಮಾಡಿ ಸುಖವಾಗಿ ನಿದ್ದೆ ಮಾಡಿ!
Archive for ಸೆಪ್ಟೆಂಬರ್, 2015
ಕೆಟ್ಟದ್ದಕ್ಕೆಲ್ಲ ಟಿಆರ್ಪಿ ಬರುತ್ತಾ?
Posted in ಅವಿಭಾಗೀಕೃತ on ಸೆಪ್ಟೆಂಬರ್ 24, 2015| 1 Comment »
ಬದುಕಿನ ಚೌಕಟ್ಟಿಲ್ಲದ ಚಿತ್ರಗಳು
Posted in ಅವಿಭಾಗೀಕೃತ on ಸೆಪ್ಟೆಂಬರ್ 20, 2015| Leave a Comment »
ಚಿತ್ರದಂತೆ. ಬಿಡಿಸ್ತಾ ಹೋದ್ರೆ ಎಷ್ಟು ದೂರ ಬೇಕಾದ್ರು ಬಿಡಿಸಬಹುದು. ಸಾಕು ಅಂದಾಗ ನಿಲ್ಲಿಸಬಹುದು. ಯಾವುದ್ರಲ್ಲೆ ಆಗ್ಲಿ ನಾವು ಎಲ್ಲಿಗೆ ಚೌಕಟ್ಟನ್ನು ಹಾಕಿಕೊಳ್ತೀವಿ ಅನ್ನೋದು ಮಹತ್ವದ್ದು. ಪ್ರತಿದಿನ ಎಷ್ಟೋ ಅವಮಾನ ಆಗುತ್ತೆ. ನೋವಾಗುತ್ತೆ. ಎಲ್ಲ ಅವಮಾನಕ್ಕು ಉತ್ತರ ಕೊಡ್ತೀವಿ ಅಂತ ಹೋದ್ರೆ ನಮ್ಮ ಕಥೆ ಮುಗೀತು! ಅದೊಂಥರ ಹೈವೆಯಲ್ಲಿ ನೀವು ಚಟಕ್ಕೆ ಬಿದ್ದು ಸಂಬಂಧವೇ ಇಲ್ಲದ ಯಾರನ್ನೋ ಓವರ್ಟೇಕ್ ಮಾಡಿದ ಹಾಗೆ. ಇದ್ರಿಂದ ನನ್ನ ಬದುಕಿಗೆ ಏನು ಪ್ರಯೋಜನ ಇಲ್ಲ ಅನ್ನೋದು ಬಹಳ ದೂರ ಹೋದ ನಂತ್ರ ಅರಿವಾಗುತ್ತೆ.
ನಾವು ಪ್ರತಿಸಲ ನಮ್ಮದೇ ಶ್ರೇಷ್ಠ, ನಾವೇ ಮಹಾನ್ ಬುದ್ದಿವಂತರು, ನಾವೇ ದೊಡ್ಡ ಶ್ರೀಮಂತರು ಅಂದೊಕೊಳ್ತಾ ಇರ್ತಿವಿ. ಸೈಕಲ್ನಲ್ಲಿ ಬದುಕುತ್ತಿದ್ದವನಿಗೆ ಬೈಕ್ ಬಂದಾಕ್ಷಣ ನಾನು ಶ್ರೀಮಂತ ಆಗಿಬಿಟ್ಟೆ ಅನ್ನೋ ಭ್ರಮೆ. ಬೈಕ್ನವನಿಗೆ ಕಾರು ಬಂದ್ರೆ ಭ್ರಮೆ. ಆದ್ರೆ ಸಿಗ್ನಲ್ನಲ್ಲಿ ನಿಂತಾಗ್ಲೆ ಗೊತ್ತಾಗೋದು ನಂದು ತೀರ ಸಣ್ಣ ಕಾರು. ಪಕ್ಕದವನ ಬಳಿ ಬೆಂಜ್ ಇದೆ. ಅದಕ್ಕು ಪಕ್ಕದವನ ಹತ್ರ ಬಿಎಂಡಬ್ಲ್ಯು ಇದೆ. ಈ ಕಡೆ ಪಕ್ಕದವನದ್ದು ಜಾಗ್ವಾರ್ ಕಾರು ಅಂತ!
ತೃಪ್ತಿ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇದೆ. ಮೇಲಿನ ಹೋಲಿಕೆ ಭ್ರಮೆಯನ್ನು ಹೋಗಲಾಡಿಸುತ್ತೆ. ಹಾಗಂತ ಅದಕ್ಕೆ ಹೊಟ್ಟೆಕಿಚ್ಚು ಪಟ್ಟುಕೊಂಡು, ಜಿದ್ದಿಗೆ ತೆಗೆದುಕೊಂಡು ಹೊರಟ್ರೆ ಬದುಕಿನ ಕಥೆ ಮುಗೀತು. ಕೆಲವು ಸಲ ಅವಮಾನ, ನೋವು, ಯಾರೋ ಆಡಿಕೊಂಡಿದ್ದು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತೆ ನಿಜ. ಹಾಗಂತ ಪ್ರತಿ ಅವಮಾನವನ್ನು ಸವಾಲಾಗಿ ತೆಗೆದುಕೊಂಡ್ರೆ ಜೀವನ ಅನ್ನೋದು ಏನೂ ಅರ್ಥವಾಗದೆಯೆ ಮುಕ್ಕಾಲು ಆಯುಷ್ಯ ಕಳೆದು ಹೋಗುತ್ತೆ!
ಬದುಕಿಗೊಂದು ಇತಿಮಿತಿಯಿಲ್ಲ. ನಾವು ಹೇಗೆ ತೆಗೆದುಕೊಳ್ಳುತ್ತೀವೊ ಹಾಗೆ ಅಂತ ಎಷ್ಟೊ ಸಲ ಅಂದುಕೊಳ್ತಾ ಇರ್ತಿನಿ. ಬೆಳಿಗ್ಗೆ ಹೂವಿನ ಆಂಟಿ ಬರ್ತಾಳೆ. ಆಕೆ ಫಸ್ಟ್ಟ್ರಿಪ್ ಬಂದಾಗ ನಂಗಂತು ಬೆಳಗಾಗಿರುವುದಿಲ್ಲ! ತಿಂಗಳಿಗೆ ಒಂದ್ಸಲ ದುಡ್ಡು ಇಸಿದುಕೊಳ್ಳಬೇಕು ಅಂತ ಸೆಕೆಂಡ್ ಟ್ರಿಪ್ ಬರುವಾಗ ಹೂವು ಹಾಕ್ತಾರೆ. ಅಪ್ಪಿ, ತಪ್ಪಿ ನೀವೇನಾದ್ರು ‘ಏನ್ ಆಂಟಿ ಹಳೆ ಹೂ ಹಾಕ್ತೀರಾ? ದೇವ್ರಿಗೆ ಮುಡಿಸೋಕೆ ಮನಸ್ಸು ಬರಲ್ಲ’ ಅಂದ್ರೆ ನಿಮ್ಮ ಕಥೆ ಮುಗೀತು. ಬೆಳಿಗ್ಗೆ ಎದ್ದು ಮಾರ್ಕೆಟ್ಗೆ ಹೋಗಿ ಹೂ ತರೋದ್ರಿಂದ ಹಿಡಿದು, ನಿನ್ನೆ ಮಳೆ ಬಂತು ಇಷ್ಟು ಲಾಸ್ ಆಯ್ತು ಅನ್ನೊವರೆಗಿನ ಕಥೆ! ಬೆಳ್ಳಂಬೆಳಿಗ್ಗೆ ಕರೆಕ್ಟಾಗಿ ಒಂದು ಗಂಟೆ ೨೨ ನಿಮಿಷ ಡಮಾರ್ ಅಂದಿರುತ್ತೆ. ಓಕೆ ಮುಂದೊಂದು ದಿನ ಈಕೆಯ ಕಥೆ ಯಾವುದೋ ಕಥೆಗೊಂದು ಪಾತ್ರ ಆಗುತ್ತೆ ಅಂತ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬೇಕು!’ ಹಳೆ ಹೂವಾದ್ರು ಪರ್ವಾಗಿಲ್ಲ. ನೀವೇ ಗ್ರೇಟ್. ಕೊಡೊ ೭ ರೂಪಾಯಿಗೆ ಸೂಪರ್ ಹೂವು ಹಾಕಿದ್ದೀರಿ’ ಅಂತ ಅಂದುಕೊಂಡು ಏರಿಸಲಾಗದ ಹೂವನ್ನು ಕಸದ ಬುಟ್ಟಿಗೆ ಎಸೆದು, ೧೦ ರೂಪಾಯಿಗೊಂದು ಮಳ ಹೂವು ಖರೀದಿಸಿ ಏರಿಸುವುದು, ಆಂಟಿಗೆ ಕಂಪ್ಲೆಂಟ್ ಮಾಡೋದಕ್ಕಿಂತ ಉತ್ತಮ!
ಅವರವರಿಗೆ ಅವರ ಜಗತ್ತೇ ಶ್ರೇಷ್ಠ. ರಾಮಣ್ಣನ ಅಂಗಡಿ ಹೋದ್ರೆ ‘ಸುಸ್ತಾಗಿ ಹೋಯ್ತು ಸಾರ್. ಈ ಅಂಗಡಿಯೂ ಬೇಡ ಮತ್ತೊಂದು ಬೇಡ. ಯಶವಂತಪುರಕ್ಕೆ ಹೋಗಿ ಮೂಟೆ ಇಳಿಸಿಕೊಂಡು ಬರುವಾಗ ಬೆನ್ನೆಲ್ಲ ಬಿದ್ದು ಹೋಗುತ್ತೆ. ಒಬ್ರೆ ಒದ್ದಾಡೊಕೆ ಆಗಲ್ಲ. ನಾವು ನಿಮ್ಮ ಥರ ಓದಿಕೊಂಡು ಕೆಲಸಕ್ಕೆ ಸೇರಿಕೊಂಡು ಬಿಡಬೇಕಿತ್ತು’ ಅಂತಿರುತ್ತಾರೆ.
‘ನಾವು ದುಡಿಯೋದೆಲ್ಲ ಲಾಭ ಕಂಪನಿಗೆ. ತೀರ ಸಂಬಳವೊಂದನ್ನೇ ನಂಬಿಕೊಂಡ್ರೆ ನಾನು ಈ ಬೆಂಗ್ಳೂರಲ್ಲಿ ಬದುಕೋಕೆ ಆಗಲ್ಲ. ನಾನು ಸ್ವಂತದ್ದು ಏನಾದ್ರು ಮಾಡಬೇಕು’ ಅಂತ ನಾನು ಯೋಚಿಸ್ತಾ ಇರ್ತಿನಿ! ಅಲ್ಲೆಲ್ಲೋ ಹೊಟೆಲ್ಗೆ ಹೋದ್ರೆ, ಅವ್ರಿಗೆ ಬಿಬಿಎಂಪಿ ಚುನಾವಣೆ ತಲೆಬಿಸಿ. ಮೋಸ್ಟ್ಲಿ ಇವ್ರೆ ಈ ದೇಶದ ಎಲ್ಲ ಉಸ್ತುವಾರಿಯನ್ನು ನೋಡಿಕೊಳ್ಳೋದು ಇರಬೇಕು ಅನ್ನೋ ರೇಂಜಿಗೆ ಆಡ್ತಾ ಇರ್ತಾರೆ ಒಂದಷ್ಟು ಜನ. ಈ ಕಡೆ ಸಿನಿಮಾ ಪ್ರೆಸ್ಮೀಟ್ ಹೋದ್ರೆ ಅದೊಂದು ಬೇರೆಯದೆ ಜಗತ್ತು. ಅವ್ರಿಗೆ ಬಿಬಿಎಂಪಿ ಚುನಾವಣೆಯೂ ಬೇಡ, ರಾಮಣ್ಣನ ಕಷ್ಟ ಸುಖವೂ ಬೇಡ. ‘ ಆ ಸಿನಿಮಾ ಹಂಗಿತ್ತು. ಮೊನ್ನೆ ಆ ನಟ ಹಾಗೆ ಅಂದ, ನೀವ್ಯಾಕೆ ಆ ಪ್ರೆಸ್ಮೀಟ್ಗೆ ಬಂದಿಲ್ಲ, ಆ ಹೀರೋಯಿನ್ ಅವನ ಹಿಂದೆ ಬಿದ್ದಿದಾಳಂತೆ ಹೌದಾ, ಆ ನಾಯಕ ಯಾವುದೋ ನಿರ್ದೇಶಕನಿಗೆ ಸಿನಿಮಾ ಮಾಡುತ್ತಿದ್ದಾನಲ್ಲ’ ಎಂಬಿತ್ಯಾದಿ ಮಾತುಗಳು.
ಈ ಕಡೆ ಚಾನೆಲ್ಗೆ ಬಂದ್ರೆ ಅವ್ರಿಗೆ ಇನ್ನೊಂದು ಜಗತ್ತಿನ ಪರಿವೇ ಇಲ್ಲ. ಟಿಆರ್ಪಿ, ರಿಯಾಲಿಟಿ ಶೋ, ನಮ್ಮ ಶೋ ಅದಕ್ಕಿಂತ ಚೆನ್ನಾಗಿತ್ತು ವಗೈರೆ, ವಗೈರೆಗಳು…’ಸಾರ್ ಸೀನ್ ಕಳ್ಸಿ ಸಾರ್, ನಾಳೆ ಆ ಹೀರೋ ಡೇಟ್ ಇಲ್ಲ. ನಾಡಿದ್ದು ಆ ಹೀರೋಯಿನ್ ಡೇಟಿಂಗ್ನಲ್ಲಿ ಇರ್ತಾಳೆ’ ಅಂತ ಸೀರಿಯಲ್ ಮ್ಯಾನೇಜರ್ ಅಳಲು. ಅವನಿಗೆ ಒಂದು ಹೂವಿನ ಆಂಟಿ ಸ್ಟೋರಿ, ಸಿನಿಮಾ ಪ್ರೆಸ್ಮೀಟ್ ಯಾವುದೂ ಮುಖ್ಯ ಅಲ್ಲ. ಆವತ್ತಿನ ದಿನಕ್ಕೆ ಬೇಕಾದ ಸ್ಕ್ರಿಪ್ಟ್ನ ಪ್ರಿಂಟೌಟ್ ನಿರ್ದೇಶಕರಿಗೆ ಕೊಟ್ಟು, ಬೇಕಾದ ಕಲಾವಿದರನ್ನು ಸೆಟ್ಗೆ ತಂದು ಗುಡ್ಡೆ ಹಾಕಿ, ಬರೆದ ಪ್ರಾಪರ್ಟಿಗಳನ್ನು ತಂದು ಹೂತಾಕಿದರೆ ಮ್ಯಾನೇಜರ್ನ ಆವತ್ತಿನ ಜೀವನ ಮುಗೀತು. ನಾನು ಒಂದು ಹತ್ತು ನಿಮಿಷ ಆರಾಮವಾಗಿ ನಿದ್ದೆ ಮಾಡಬಹುದು ಅನ್ನೋದು ಅವನ ಯೋಚನೆ!
‘ಗುರು ಇವತ್ತು ಈ ಕುದುರೆನೆ ಗೆಲ್ಲೋದು. ಅದ್ರ ಮೇಲೆ ದುಡ್ಡು ಹಾಕು. ನಾನು ಎಷ್ಟು ಗೆದ್ದೆ ಗೊತ್ತಾ’ ಬೈಕ್ ಹತ್ತಿ ಆಫೀಸ್ಗೆ ಹೊರಟ್ರೆ ರೇಸ್ಕೋರ್ಸ್ ರೋಡಿನಲ್ಲಿ ಕೇಳುವ ಮಾತು. ಜೆಸಿ ರಸ್ತೆಗೆ ಹೋದ್ರೆ ಅವ್ರಿಗೆ ಕಾರು, ಸೀಟು, ಟಯರ್, ನಟ್ಟು, ಬೋಲ್ಟು ಬಿಟ್ಟು ಬೇರೆ ಪ್ರಪಂಚ ಬೇಡ!
ಪ್ರತಿ ದಿನ ನಾವು ನಮ್ಮದೆ ಆದ ಭ್ರಮೆಯಲ್ಲಿ ಬದುಕ್ತಾ ಇರ್ತಿವಿ. ‘ನಾನು ಇವತ್ತು ಆ ಕೆಲಸ ಮಾಡಿದೆ. ಭಯಂಕರ, ಇವತ್ತು ಇದೊಂದು ಬರೆದುಬಿಟ್ಟೆ ಅದ್ಭುತ. ನಾನೊಬ್ಬ ಮಹಾನ್ ಅಂಕಣಕೋರ. ನನ್ನ ಪತ್ರಿಕೆ ೭ ಲಕ್ಷ ಪ್ರಸರಣ ಇದೆ. ನಂಗಷ್ಟು ಅಭಿಮಾನಿಗಳು ಇದಾರೆ’ ಅಂತೆಲ್ಲ ಬೀಗುತ್ತಾ ಇರ್ತಿವಿ. ‘ಸಾರ್ ಇವತ್ತು ನಿಮ್ಮ ಬರಹ ಅದ್ಭುತ ಬಿಡಿ ಸಾರ್. ಶರ್ಟ್ ಎಲ್ಲಿ ತಗೊಂಡ್ರಿ ಸಾರ್. ಸೂಪರ್ ಆಗಿದೆ. ನೀವು ಹಾಕಿದ ಚೆಡ್ಡಿಯಂತೂ ವಿಶ್ವದ ಹನ್ನೆರಡನೆ ಅದ್ಭುತದಂತಿದೆ’ ಸಹೋದ್ಯೋಗಿಯೊಬ್ಬ ಚೆನ್ನಾಗಿ ರೈಲು ಹತ್ತಿಸಿ ಉಬ್ಬಿಸುತ್ತಿರುತ್ತಾನೆ. ನಾಳೆ ಆಗೋ ಇಂಕ್ರಿಮೆಂಟಿನ ಚಿಂತೆ ಅವನಿಗೆ. ಬಾಸ್ನ ಚೆನ್ನಾಗಿ ಇಟ್ಟುಕೊಳ್ಳದೆ ಹೋದ್ರೆ, ನಾಳೆ ಎಲ್ಲೂ ಕೆಲಸ ಸಿಗದೆ ಹೋದ್ರೆ ನನ್ನ ಬದುಕು, ನನ್ನ ಹೆಂಡ್ತಿ, ಮಕ್ಕಳು ಅನ್ನೋ ಆಲೋಚನೆ. ಹೀಗಾಗಿ ತನ್ನ ತನವನ್ನು ಮಾರಿಕೊಂಡು ಆತ ದಿನ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಾನೆ. ಲಾಭ ಆಗುವ ವ್ಯಕ್ತಿಗಳಿಗೆ ದಿನಕ್ಕೆ ಮೂರು ಸಲ ನಮಸ್ಕಾರ ಹಾಕ್ತಾನೆ. ಮನುಷ್ಯ ಎಷ್ಟು ಸ್ವಾರ್ಥಿ ಅಂದ್ರೆ, ಲಾಭ ಆಗದವರಿಗೆ ಕನಿಷ್ಟ ಒಂದು ನಗುವನ್ನು ಆತ ಬೀರಲಾರ! ಅಲ್ಲೆಲ್ಲೋ ಬೀದರ್ನಲ್ಲಿ ರಸ್ತೆಗೆ ಟಾರ್ ಹಾಕುತ್ತಿರುವ ಲಂಬಾಣಿ ಮಹಿಳೆ ಇದ್ಯಾವುದರ ಪರಿವೇ ಇಲ್ಲದೆ, ಮಗುವಿನ ಕುಂಡೆ ತೊಳಿಸಲು ನೀರಿಲ್ಲದೆ, ಅಂಕಣಕೋರನ ಬರಹ ಹರಿದು ಕುಂಡೆ ಒರೆಸುತ್ತಿರುತ್ತಾಳೆ!
“ನೀನು ಏನಯ್ಯ ನೆಟ್ಟಗೆ ಬರಿಯಕ್ಕೆ ಬರಲ್ಲ, ಅವನ್ನ ನೋಡು ಜಗತ್ತಿನ ಒಂಬತ್ತನೆ ಅದ್ಭುತ ಬರಹಗಾರ. ಅವಳನ್ನು ನೋಡು, ಸ್ಕ್ರೀನ್ ಪ್ಲೆ ಬರೆದ್ರೆ ಹೆಂಗೆ ಇರುತ್ತೆ ಗೊತ್ತಾ? ಬರೆದ್ರೆ ಆಥರ ಬರೀಬೇಕು. ನೀವೆಲ್ಲ ವೇಸ್ಟು’ ಅಂತ ಒಂದು ಫ್ರೇಮ್ನಲ್ಲಿ ಯಾರೋ ಬೈತಾ ಇರ್ತಾರೆ. “ಸಾರ್ ನೀವೆಷ್ಟು ಅದ್ಭುತವಾಗಿ ಬರಿತೀರಿ ಸಾರ್. ನಾನು ನಿಮ್ಮ ಬ್ಲಾಗ್ ಯಾವಾಗ್ಲೂ ಓದ್ತೀನಿ. ಮೊನ್ನೆ ನಿಮ್ಮ ಪುಸ್ತಕ ಸಿಗ್ತು’ ಅಂತ ಇನ್ನೊಂದು ಫ್ರೇಮ್ನಲ್ಲಿ ಮತ್ತೊಬ್ಬ ಹೇಳ್ತಾ ಇರ್ತಾನೆ. ನಾನಂತೂ ಎರಡೂ ಫ್ರೇಮ್ನಲ್ಲೂ ನಕ್ಕು ಥ್ಯಾಂಕ್ಸ್ ಹೇಳ್ತೀನಿ.
‘ಅವನು ಅಷ್ಟಾವಧಾನ ಮಾಡ್ತಾನಂತೆ. ಅವನೆಷ್ಟು ಬುದ್ದಿವಂತ ಇರ್ಬಹುದು. ಅವ್ರು ಶತವಧಾನ ಮುಗಿಸಿ ಸಹಸ್ರಾವಧಾನವನ್ನೂ ಮಾಡಿದ್ರಂತೆ, ಖಂಡಿತ ಜಗತ್ತಿನಲ್ಲಿ ಅವರೇ ಶ್ರೇಷ್ಠರು. ಅವರು ತಲೆಯೊಳಗೆ ಏನಿದೆ ಅಂತ ನೋಡಬೇಕು. ಅವಳು ಹಾಡ್ತಾಳೆ, ಬರಿತಾಳೆ, ಪೇಂಟಿಂಗ್ ಮಾಡ್ತಾಳೆ, ಡ್ಯಾನ್ಸ್ ಗೊತ್ತಿದೆ. ಮಲ್ಟಿ ಟ್ಯಾಲೆಂಟ್. ನಾನು ಅವಳ ಅರ್ಧದಷ್ಟಾದ್ರು ಆಗೋದು ಹೇಗೆ. ನನ್ನ ನೆಚ್ಚಿನ ಬರಹಗಾರರ ಥರ ಕಥೆ ಬರೆಯೋದು ಹೇಗೆ’ ಅಂತ ನನ್ನ ಮನಸ್ಸು ಯೋಚಿಸ್ತಾ ಇರುತ್ತೆ.
ಇಷ್ಟೆಲ್ಲದರ ನಡುವೆ ‘ರೀ ಇಲ್ನೋಡಿ ಪೇಪರು’ ಅಂದ್ರೆ, ನಾನು ಜಗತ್ತಿನ ಏನೋ ವಿಸ್ಮಯದ ಸುದ್ದಿ ಬಂದಿರಬೇಕು ಅಂತ ತಿರುಗ್ತೀನಿ. ಕೊನೆಗೆ ನೋಡಿದ್ರೆ, ‘ಚಿನ್ನದ ರೇಟು ೨೩ ಸಾವಿರಕ್ಕೆ ಬಂದಿದೆಯಂತೆ. ನಾನೊಂದು ನಕ್ಲೇಸ್ ಮಾಡಿಕೊಳ್ಳಬೇಕು’ ಅಂತ ಹೆಂಡ್ತಿಯ ಕಾಮಿಡಿ ಅಪ್ಲಿಕೇಷನ್!
‘ಅಮ್ಮ ತಾಯಿ ೨೯ ಸಾವಿರ ಇದ್ದಾಗ ಮಾಡಿಸಿದ ಅರ್ಧ ಕೆಜಿ ಬಂಗಾರವೇ ವೇಸ್ಟು ಈಗ’ ಅಂತೇನಾದ್ರು ಅಂದ್ರೆ, ಮತ್ತದು ಹೂವಿನ ಆಂಟಿ ಥರ ಒಂದು ಗಂಟೆ ೨೨ ನಿಮಿಷದ ದೃಶ್ಯ. ಅದಕ್ಕಿಂತ ಸೈಲೆಂಟಾಗಿ ಸಂಜೆ ೫ ಗಂಟೆಗೆ ಮಲ್ಲೇಶ್ವರಂ ಹೋಗಿ ಯಾವುದೋ ಆಭರಣದಂಗಡಿಯಲ್ಲಿ ಕಾರ್ಡ್ ಉಜ್ಜಿ, ಸೀರೆಯುಟ್ಟ ಲಲನೆಯರತ್ತ ಕಣ್ಣು ಹಾಯಿಸಿ, ಸಿಟಿಆರ್ನಲ್ಲಿ ಎರಡು ದೋಸೆ ತಿಂದು ಬರೋದೆ ಎಷ್ಟೋ ಸುಖ!
‘ಸಾರ್ ಆ ಮನುಷ್ಯ ಎಷ್ಟು ಸ್ವಾರ್ಥಿ ಅಂದ್ರೆ, ಆಫೀಸ್ಗೆ ಬಂದ ಕೇಕ್ನ್ನು ಮನೆಗೆ ಕಳಿಸಿಬಿಡ್ತಾನೆ. ದ್ರಾಕ್ಷಿ ಬೆಳೆಗಾರರದಿಂದ ಹಣ್ಣು ಪೀಕಿ, ಅದನ್ನು ಆಫೀಸ್ಗೆ ಗೊತ್ತಾಗದಂತೆ ಕಾರಿನ ಡಿಕ್ಕಿಗೆ ಹಾಕಿಸಿದ. ನಾನು ಡಿಕ್ಕಿಗೆ ಹಾಕಿದೆ ಎಂಬ ಕೃತಜ್ಞತೆಗೂ ಒಂದು ಹಣ್ಣು ಕೊಡಲಿಲ್ಲ’ ಅನ್ನುತ್ತಿದ್ರು ಅವ್ರು. ಬದುಕು ಇರೋದೆ ಇಲ್ಲಿ. ಕೋಟಿ ಮಾಡಿದವನ ಪಕ್ಕ ಎರಡು ಕೋಟಿ ಮಾಡಿದವನು ಸಿಗ್ತಾನೆ. ಬುದ್ಧಿವಂತನ ಎದ್ರಿಗೆ ಇನ್ನೊಬ್ಬ ಅತಿ ಬುದ್ಧಿವಂತ. ಅಂದ್ರೆ ಇಂಥ ಹೋಲಿಕೆಗೆ, ಸಮರಕ್ಕೆ ಅಂತ್ಯವಿಲ್ಲ.
ಕನಿಷ್ಠ ಮಾನವೀಯತೆ, ವಾಸ್ತವ ಸ್ಥಿತಿಯ ಅರಿವು, ಎರಡು ಜನವಾದ್ರು ಬದುಕಿದ್ರೆ ಅವನ ಥರ ಬದುಕಬೇಕು ಅನ್ನೋ ಹಾಗೆ ಬದುಕುಬೇಕು ಅಲ್ವಾ? ಬದುಕಿನ ಎಲ್ಲ ಸಮರಗಳು ಕಳೆದು ಈ ಅಂಶ ಅರ್ಥವಾಗುವಾಗ ನಮಗೆ ೬೨ ವರ್ಷದ ಮೂರು ತಿಂಗಳು ಆಗಿರುತ್ತೆ! ಹಾಗಾಗಿಯೇ ಮಠದಲ್ಲಿ, ಸೇವೆ ಮಾಡುವ ಕ್ಷೇತ್ರಗಳಲ್ಲೆಲ್ಲ ನಮಗೆ ತೀರ ವಯಸ್ಸಾದವರೇ ಕಾಣಿಸುವುದು.
ಇವಿಷ್ಟು ಓದಿದ ಮೇಲೆ ಏನು ಸಿಕ್ಕಿಲ್ಲ, ಏನು ಅರ್ಥವಾಗಿಲ್ಲ ಅಂತ ಬೈಕೊಬೇಡಿ. ಯಾಕಂದ್ರೆ ಹೀಗೆ ಬರೆಯುವುದು ನನ್ನ ಬದುಕಿನ ಇನ್ನೊಂದು ಫ್ರೇಂ! ಇಂಥ ಸುಂದರ ಬದುಕಿಗೊಂದು ಜೈಹೋ.