Feeds:
ಲೇಖನಗಳು
ಟಿಪ್ಪಣಿಗಳು

Archive for ಫೆಬ್ರವರಿ, 2009

“ಎಲ್ಲಾ ಭಾರತೀಯರು ಒಟ್ಟಾಗಿ ಒಂದು ಸಲ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ಕೊಚ್ಚಿಕೊಂಡು ಹೋಗುತ್ತಿತ್ತು. ಆವತ್ತು ಇಂಗ್ಲೆಂಡ್ ಅನ್ನೋದು ಭಾರತದ ಒಂದು ಜಿಲ್ಲೆಗೆ ಸಮನಾಗಿತ್ತು. ಆದ್ರೂ ಕೂಡಾ ಭಾರತೀಯರು ಆಂಗ್ಲರ ಗುಲಾಮರಾದರು. ಅದಕ್ಕೆ ಕಾರಣ ಭಾರತದ ಮಣ್ಣು. ಈ ದೇಶದ ಮಣ್ಣು ಅಂತಹದ್ದು. ಈ ಮಣ್ಣಿನಲ್ಲಿ ಮಹಾವೀರ, ಬುದ್ಧ,  ಪತಂಜಲಿಗಳು ಜನಿಸುತ್ತಾರೆಯೇ ಹೊರತು,  ಒಬ್ಬ ಹಿಟ್ಲರ್, ಒಬ್ಬ ಮುಸಲೋನಿಯನ್ನು ಈ ನಾಡು ಜಗತ್ತಿಗೆ ನೀಡಲಾರದು.  ಐದು ಸಾವಿರ ವರ್ಷದ ಇತಿಹಾಸದಿಂದ ಸಾಬೀತಾದ ಮಾತಿದು” ಇಂತಹದ್ದೊಂದು ಸುಂದರ ಸಾಲುಗಳು ಓದಲು ಸಿಕ್ಕಿದ್ದು ಓಶೋ ರಜನೀಶರ “ನನ್ನ ಪ್ರಿಯ ಭಾರತ” ಅನ್ನೋ ಪುಸ್ತಕದಲ್ಲಿ.

ಭಾರತದ ರಸ್ತೆಗಳು ಸರಿಯಿಲ್ಲ, ರಾಜಕಾರಣ ಸರಿಯಿಲ್ಲ, ಮೂಲಭೂತ ವ್ಯವಸ್ಥೆಗಳು ಸರಿಯಿಲ್ಲ…ಹಾಗಂತ ವಾದಿಸುವ ಮಂದಿಯಲ್ಲಿ ನಾನು ಒಬ್ಬ! ಆದರೆ ನನ್ನ ವಾದ ಅದು ಸರಿಯಾದರೆ ಉತ್ತಮವೇನೋ ಅನ್ನುವ ದಾಟಿಯದ್ದು. ಅಮೆರಿಕವನ್ನು, ಜಪಾನ್, ಚೀನಾವನ್ನು…ಮುಂದಿಟ್ಟುಕೊಂಡು ವಾದಿಸುವುದಾದರೆ ನನ್ನ ಲೆಕ್ಕದಲ್ಲಿ ಭಾರತದಲ್ಲಿ ಎಲ್ಲವೂ ಸರಿಯಾಗಿದೆ.  ನನ್ನಲ್ಲಿ ಆ ಪರಿಕಲ್ಪನೆ ಕಟ್ಟಿಕೊಟ್ಟಿದ್ದು ಓಶೋ ಎಂದರೆ ತಪ್ಪಾಗಲಾರದು.  ನಮ್ಮೆಲ್ಲ ಕೂಗುಗಳಿಗಿಂತಲೂ ಭಿನ್ನವಾದ, ನಮಗೆ ಗೊತ್ತಿರದ ಅಥವಾ ಗೊತ್ತಿದ್ದರೂ ಅರ್ಥೈಸಿಕೊಳ್ಳಲಾಗಿರದ, ದಿವ್ಯ, ಭವ್ಯ ಭಾರತದ ವಾಕ್ಚಿತ್ರದಂತಿರುವ ಓಶೋರ ಪುಸ್ತಕ ಸಾಕಷ್ಟು ಜನರ ನಿಲುವುಗಳನ್ನು ಬದಲಿಸುವ ಶಕ್ತಿ ಹೊಂದಿದೆ.

ಶಂಕರಾಚಾರ್ಯರು ಮಂಡನ ಮಿಶ್ರರೊಂದಿಗೆ ಚರ್ಚೆಗಿಳಿಯುತ್ತಾರೆ. ಮಿಶ್ರರ ಹೆಂಡತಿಯೇ ಆ ಚರ್ಚೆಗೆ ಜಡ್ಜು! ವಾದದಲ್ಲಿ ಶಂಕರರು ಗೆಲ್ಲುತ್ತಾರೆ. ಆದರೆ ಅದು ಅರ್ಧ ಗೆಲುವು ಎಂದು ಜಡ್ಜ್ ಆಗಿದ್ದ ಮಿಶ್ರರ ಹೆಂಡತಿ ಭಾರತಿ ಹೇಳುತ್ತಾಳೆ! ಕೊನೆಗೆ ಆಕೆಯೇ ವಾದಕ್ಕಿಳಿಯುತ್ತಾಳೆ. ಶಂಕರರು ಜಯ ಸಾಧಿಸಲಾಗದೇ ಅನುಭವ ಪಡೆದು ಬರುವನೆಂದು ಹೊರಟು ಹೋಗುತ್ತಾರೆ…ತುಂಬಾ ಸುಂದರ ಕಥೆಯದು.

ಶಂಕರರಿಗೆ ಗೆಲುವು ಸಾಧ್ಯವಾಗಲಿಲ್ಲ ಅನ್ನೋದಕ್ಕಿಂತ, ಗೆಲುವಿನ ಬೆನ್ನತ್ತಿ ಹೋಗಲು ಮನಸಾಗಲಿಲ್ಲವಂತೆ… ಹಾಗಂತ ವಾದಿಸುವ  ಓಶೋ, ಆ ಘಟನೆಯನ್ನು ಮತ್ತೊಂದರ ಜತೆ ನಿಲ್ಲಿಸಿ ತುಲನೆ ಮಾಡುವುದಂತೂ ನಿಜಕ್ಕೂ ಅದ್ಬುತ. ಭಾರತ ಜಗತ್ತಿಗೆ ತನ್ನನ್ನು ತಾನು ಗೆಲ್ಲುವುದನ್ನು ಭೋಧಿಸಿದ ರಾಷ್ಟ್ರ. “ಅಲೆಗ್ಸಾಂಡರ್, ಹಿಟ್ಲರ್ ಎಲ್ಲಾ ಜಗತ್ತನ್ನೇ ಗೆಲ್ಲಲು ಹೊರಟರು. ಅವರು ಶ್ರೇಷ್ಠರಲ್ಲ. ಯಾಕೆಂದರೆ ಅವರಿಗೆ ಅವರನ್ನೇ ಜಯಿಸಿಕೊಳ್ಳಲು ಆಗಲಿಲ್ಲ. ಹಾಗೆ ಜಯಿಸಲು ಸಾಧ್ಯವಾಗಿದ್ದಿದ್ದರೆ ಅವರಿಗೆ ಜಗತ್ತನ್ನು ಗೆಲ್ಲಬೇಕು ಅನ್ನಿಸುತ್ತಿರಲಿಲ್ಲ. ಪ್ರಪಂಚದಲ್ಲಿ ರಕ್ತದ ಹೊಳೆ ಹರಿಯುತ್ತಿರಲಿಲ್ಲ. ಮಹಾವೀರ, ಬುದ್ದರು ತಮ್ಮನ್ನು ತಾವು ಗೆದ್ದರು. ಆ ಮುಖೇನ ವಿಶ್ವವನ್ನೇ ಯಾರಿಗೂ ಗೊತ್ತಾಗದಂತೆ ಗೆದ್ದುಬಿಟ್ಟರು. ಅದು ಭಾರತದ ಶ್ರೇಷ್ಠತೆ” ಅನ್ನುತ್ತಾ ಹೋಗುವ ಓಶೋ ಸಾಲುಗಳನ್ನು ಓದುತ್ತಿದ್ದರೆ…ಅಬ್ಬಾ ರೋಮಾಂಚನವದು.

ಬುದ್ದ, ಚೈತನ್ಯ, ಮೀರಾಳ ಕಥೆಗಳು, ಕುರುಡನಾಗಿಯೂ ಘಜ್ನಿಯನ್ನು ಕೊಂದ ಪೃಥ್ವಿರಾಜನ ಕಥೆ…..ಹೀಗೆ ಒಂದರ ಮೇಲೊಂದು ಕಥೆಗಳು. ಎಲ್ಲವೂ ರೋಮಾಂಚನಗೊಳಿಸುವಂತಹವೆ. ಭಾರತ ಯಾಕೆ ವಿಶ್ವದ ಇತರರಿಗಿಂತ ಬಿನ್ನ, ಭಾರತದಲ್ಲಿನ ಆಧ್ಯಾತ್ಮಿಕತೆಯ, ಧ್ಯಾನದ ಮಹಿಮೆ ಏನು? ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಭಾರತಕ್ಕಿರುವ ಅಗಾಧ ಶಕ್ತಿಯಾದರೂ ಏನೂ? ಹೀಗೆ ಹಲವು ವೈಚಾರಿಕ ಸಂಗತಿಗಳ ಭಂಡಾರ ಈ ಪುಸ್ತಕ.

ಹಾಗಂತ, ಭಾರತ ಎಂದಿಗೂ ಹೇಡಿಯಲ್ಲ, ಶಾಂತಿಪ್ರಿಯವಷ್ಟೆ. ಹಿಂಸೆಯ ವಿರೋದಿಯಷ್ಟೆ. ಭಾರತೀಯರೆಲ್ಲರೂ ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ತೊಳೆದು ಹೋಗುತಿತ್ತು, ಇಂಗ್ಲೆಂಡ್ ನಾಶಮಾಡಲು ನಮಗೆ ಅಣುಬಾಂಬ್ ಬೇಕಿರಲಿಲ್ಲ, ಉಚ್ಛೆಯೇ ಸಾಕಿತ್ತು! ಅನ್ನೊ ಈ ಮಾತನ್ನು ಅಲೆಗ್ಸಾಂಡರ್ ವಿರುದ್ದ ಹೋರಾಡಿದ ಪೋರಸ್‌ನ ಉದಾಹರಣೆ ಕೊಟ್ಟು, ಕುರುಡ ಪೃಥ್ವಿರಾಜನ ಕಥೆಯನ್ನು ಹೇಳಿ ವಿವರಿಸುವುದಿದೆಯಲ್ವಾ? ….ಊಹುಂ ಅದನ್ನು ನನಗಂತೂ ಮಾತುಗಳಿಂದ ವಿವರಿಸಲಾಗುತ್ತಿಲ್ಲ.

ಹಾಗಂತ ವಿಶ್ವದ ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು, ನಾವೇ ಶ್ರೇಷ್ಠ ಅಂತಾ ನಿರೂಪಿಸಿಕೊಳ್ಳಲು ಹೊರಟ ಪುಸ್ತಕ ಇದಲ್ಲ. ಎಲ್ಲೂ ಭಾರತದ ವೈಭವವಿಲ್ಲ. ಭಾರತ ಶ್ರೇಷ್ಠ ಅನ್ನೋ ದಾಟಿಯ ಮಾತಿಲ್ಲ. ಸಕಾರಾತ್ಮಕ ಭಾರತದ ಚಿತ್ರಣವಿದೆ,  ಗತಿಸಿಹೋದ ಇತಿಹಾಸದ ಕಥೆಗಳಿವೆ ಅಷ್ಟೆ. ಯೋಗಿಗಳ ಸಾಧುಗಳ ಕಥೆಯಿದೆ. ಆಧ್ಯಾತ್ಮಿಕಥೆಯ ಮಂಥನವಿದೆ. ಇಡೀ ಪುಸ್ತಕದ ತಿರುಳೇ ಆಧ್ಯಾತ್ಮ ಅಂದರೂ ತಪ್ಪಾಗಲಾರದು.

ಓಶೋ ಇಷ್ಟವಾಗೋದು ಅದಕ್ಕೆ. ಯಾವುದೇ ಇಸಂ, ಧರ್ಮ, ಮತಗಳಿಗೆ ಅವಲಂಬಿತವಾಗದೇ, ಯಾವ ವಿಚಾರವನ್ನೂ ತೀರಾ ವೈಭವೀಕರಿಸದೇ, ಶುದ್ದ ಆಧ್ಯಾತ್ಮವನ್ನು ಸರಳವಾಗಿ ಹೇಳುತ್ತಾ ಹೋಗುತ್ತಾರೆ.  ಯಾವುದೇ ಮುಚ್ಚುಮರೆ, ಕಟ್ಟಲೆಗಳ ಕೊಂಡಿಗೆ ಸಿಲುಕಿಕೊಳ್ಳದೆ ವಾಸ್ತವವನ್ನು ಬಿಚ್ಚಿಡುತ್ತಾ ಹೋಗುತ್ತಾರೆ…

“ಜಗತ್ತಿನಲ್ಲಿರೋ ಎಲ್ಲಾ ಧರ್ಮಗಳೂ ಶ್ರೇಷ್ಠ. ಎಲ್ಲದಕ್ಕೂ ಅದರದೇ ಆದ ಸೊಬಗಿದೆ ,ಅದರದೇ ಆದ ದೌರ್ಬಲ್ಯಗಳಿವೆ.  ನಮಗೆ ಪಾಶ್ಚಾತ್ಯ ಸಂಸ್ಕೃತಿ ಬೇಡ ಅಂತೀವಿ ,ಆದ್ರೆ ಪಾಶ್ಚಾತ್ಯರು ಕಂಡು ಹುಡುಕಿದ ಆಧುನಿಕ ಸೌಲಭ್ಯಗಳೆಲ್ಲಾ ಬೇಕು .ಯಾಕೆ ಅಂತ ಕೇಳಿದ್ರೆ  “ಚೆನ್ನಾಗಿರೋದೆಲ್ಲ ಇರ್ಲಿ ಕಣ್ರಿ ಕೆಟ್ಟದಾಗಿರೋದು ಬೇಡ” ಅಂತಾರೆ!
ಟೀವಿ ಭಾರತೀಯ ಸಂಸ್ಕೃತಿ ಅಲ್ಲ ,ಮೊಬೈಲ್ ಭಾರತೀಯ ಸಂಸ್ಕೃತಿ ಅಲ್ಲ, ವಿಡೀಯೋ ಕ್ಯಾಮೆರಾ ಭಾರತೀಯ ಸಂಸ್ಕೃತಿ ಅಲ್ಲ, MP3 ಭಾರತೀಯ ಸಂಸ್ಕೃತಿ ಅಲ್ಲ, ಆದರೂ ಇವು ನಮಗೆ ಬೇಕು . ಆದ್ರೆ ವ್ಯಾಲಂಟೈನ್ಸ್ ಡೇ ಮಾತ್ರ ಬೇಡ!” ಹಾಗಂತ ಸಂದೀಪ್ ಕಾಮತರು ತುಂಬಾ ಚೆಂದದ, ಯೋಚನಾಯೋಗ್ಯವಾದ ಬರಹ ಬರೆದಿದ್ದಾರೆ.

ಕಾಮತ್‌ರಂತೆ ಆಲೋಚನೆ ಮಾಡುವವರು ನಮ್ಮಲ್ಲಿ  ಸಾಕಷ್ಟು ಜನರಿದ್ದಾರೆ. ಆದರೆ, ಅದರ ಬೆನ್ನಲ್ಲೇ ವಿದೇಶಿಯರು ಸಾಕಷ್ಟು  ತಂತ್ರಜ್ಞಾನವನ್ನು ಭಾರತದಿಂದ ಕದ್ದು ಹೋಗಿದ್ದಾರೆ ಅಂತಾ ಆಧಾರಸಹಿತವಾಗಿ ಬರೆದವರೂ ನಮ್ಮ ನಾಡಿನಲ್ಲಿ ಸಿಗುತ್ತಾರೆ. “ಭಾರತದ ಸಾಕಷ್ಟು ಪುಸ್ತಕಗಳು ವಿಶ್ವ ವಿಖ್ಯಾತ ಬ್ರಿಟನ್ ಲೈಬ್ರರಿಯಲ್ಲಿದೆ’”  ಅಂತಾ ಯಾರೋ ಬರೆದ್ದಿದ್ದನ್ನು ನಾನೊಮ್ಮೆ ಓದಿದ್ದೆ. ಚೆನ್ನಾಗಿರೋದೆಲ್ಲ ಇರ್ಲಿ ಅಂತಾ ಅವರು ತೆಗೆದುಕೊಂಡು ಹೋಗಿರಬೇಕು ಅಂದುಕೊಂಡು ಸುಮ್ಮನಾಗಿದ್ದೆ.

ಇನ್ನು, ನಳಂದಾ ವಿಶ್ವವಿದ್ಯಾನಿಲಯಕ್ಕೆ ದಾಳಿಕೋರರು ಬೆಂಕಿ ಇಟ್ಟರು ಎಂದು ಅನೇಕ ಇತಿಹಾಸಕಾರರು ಬರೆಯುತ್ತಾರೆ. ಅದು ಎಷ್ಟರ ಮಟ್ಟಿಗೆ ಸತ್ಯವಾಗಿರಬಹುದು ಎಂದು ನಾನು ಯಾವತ್ತೂ ನನ್ನೊಳಗೆ ಪ್ರಶ್ನಿಸಿಕೊಂಡಿಲ್ಲ. ಹಾಗಾಗಿಯೇ ಎಂಪಿ೩, ಸಿಡಿ ಪ್ಲೇಯರ್…ಇತ್ಯಾದಿಗಳನ್ನು ಪಾಶ್ಚಾತ್ಯರೇ ಕಂಡುಹಿಡಿದದ್ದು ಎಂಬ ಕುರಿತಾಗಿಯೂ ನಾನು ಪ್ರಶ್ನೆ ಮಾಡುವುದಿಲ್ಲ!

ಇನ್ನು ಧರ್ಮದ ವಿಷಯ…ಪ್ರತಿ ಧರ್ಮಕ್ಕೂ ಅದರದ್ದೇ ಆದ ಒಂದು ದೇಶವಿದೆ. ಆ ಧರ್ಮದ ಅನುಯಾಯಿಗಳು, ಆರಾಧಕರು ಎಲ್ಲೆಡೆ ಸಿಗುತ್ತಾರೆ. ಆದರೆ ನಮ್ಮ ಧರ್ಮದ ವಿಷಯ ಹಾಗಲ್ಲ. ನಾವು ಬಾಂಗ್ಲಾ ನಿರಾಶ್ರಿತರಿಗೂ ನೆಲೆ ಕೊಡುತ್ತೇವೆ. ಟಿಬೆಟ್‌ನಿಂದ ವಲಸೆ ಬಂದವರಿಗೂ ಮುಂಡಗೋಡು, ಬೈಲುಕುಪ್ಪೆಗಳಲ್ಲಿ ಮನೆ ಮಾಡಿಕೊಡುತ್ತೇವೆ. ನಮ್ಮ ಹಬ್ಬಗಳ ಜತೆಗೆ ಅವರ ಹಬ್ಬವನ್ನೂ ಸಹೋದರತೆಯಿಂದ ಆಚರಿಸುತ್ತೇನೆ…ಇಷ್ಟರ ಮಟ್ಟಿಗಿನ ವಿಶಾಲ ಮನೋಭಾವ, ಸ್ವಾತಂತ್ರ್ಯ ಬೇರೆ ಯಾವುದಾದರೂ ದೇಶದಲ್ಲಿ ಇದೆಯಾ?( ನನಗೆ ಗೊತ್ತಿಲ್ಲ. ಹಾಗಾಗಿಯೇ ನಿಮ್ಮನ್ನು ಕೇಳಿದ್ದು)

ಇಷ್ಟು ಸ್ವಾತಂತ್ರ್ಯ ಕೊಟ್ಟಾಗಲೂ ನಮ್ಮ ಆಚರಣೆಗಳ ಕುರಿತು ಅಪಹಾಸ್ಯ ಮಾಡುತ್ತಾರೆ, ನಮ್ಮ ಧರ್ಮದ ಹುಳುಕುಗಳನ್ನು ಎತ್ತಿ ಹಿಡಿಯುತ್ತಾರೆ, ನಿಮ್ಮ ಧರ್ಮ ಸರಿಯಿಲ್ಲ, ನಮ್ಮ ಧರ್ಮಕ್ಕೆ ಬನ್ನಿ  ಅಂತಾ ಮಾನಸಿಕವಾಗಿ ದುರ್ಬಲವಾಗಿರುವ ಮಂದಿಯನ್ನು ಆಮಿಷವೊಡ್ಡಿ ಸೆಳೆದುಕೊಳ್ಳುವ ಯತ್ನ ಮಾಡುತ್ತಾರೆ ಎಂದಾದರೆ….ಯಾರಿಗೆ ನೋವಾಗುವುದಿಲ್ಲ ಹೇಳಿ?

ಓಶೋ ಹೇಳಿದಂತೆ ಭಾರತೀಯರ ತಾಳ್ಮೆ ಒಂದು ಹಂತದವರೆಗೆ ಸೀಮಿತ. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು, ನಮ್ಮ ಮನೆಯ ಹೆಣ್ಣುಮಕ್ಕಳ ಮಾನ ತೆಗೆಯಲು ಯತ್ನಿಸುವವರೆಗೂ ನಾವು ಅವರ ವಿರುದ್ಧ  ಸಿಡಿದೇಳಲಿಲ್ಲ. ಪಾಪ ಸಾಯಲಿ, ಅವರು ನಮ್ಮಂತೆ ಮನುಷ್ಯರು, ಅವರದ್ದು ಹೊಟ್ಟೆಪಾಡು.. ಅಂತಾ ಸುಮ್ಮನಿದ್ದೆವು. ಆದ್ರೆ ಯಾವತ್ತು  ರ್ಯಾಂಡ್‌ನಂಥ ದುಷ್ಟ ಅದಿಕಾರಿ ದೇಶದೊಳಗೆ ಕಾಲಿಟ್ಟನೋ, ಆವತ್ತು ಚಾಪೆಕರ್  ಸಹೋದರರು ಸಿಡಿದ್ದೆದರು… ಸ್ಯಾಂಡರ್ಸ್‌ನ ಹೇಯ ಕೃತ್ಯ ನೋಡಲಾಗದ ಭಗತ್, ಆಜಾದ್…ಮೊದಲಾದವರು ಕತ್ತಿ ಹಿಡಿದರು.
ನಮ್ಮ ಹುಳುಕುಗಳನ್ನು ಕೆದಕುವ ಪಾಶ್ಚಾತ್ಯರ ಒಳಹುಳುಕುಗಳನ್ನು ನಾವು ಕೆದಕುವುದು ತಪ್ಪಾ? ಅಷ್ಟಕ್ಕು ಅವರದ್ದು ಎಲ್ಲವೂ ಸರಿಯಾಗಿದೆಯಾ? ನೀವೇ ಹೇಳಿ.

ಕಾಮತರ ಮಾತು ಕೇಳಿ ತುಂಬಾ ಹಿಂದೆ ಬರೆದಿದ್ದ “ನನ್ನ ಪ್ರಿಯ ಭಾರತ” ನೆನಪಾಯಿತು. ಆ ಲೇಖನವನ್ನೆ ಎಡಿಟ್ ಮಾಡಿ ಹಾಕಿದ್ದೇನೆ. “ನನ್ನ ಪ್ರಿಯ ಭಾರತ” ತುಂಬಾ ಸೊಗಸಾದ ಪುಸ್ತಕ. ನಾಡಿನ ಖ್ಯಾತ ಬರಗಾರರ ಸಾಲಿನಲ್ಲಿ ಒಬ್ಬರಾದ  ವಿಶ್ವೇಶ್ವರ ಭಟ್ಟರು ಆ ಪುಸ್ತಕವನ್ನು ಅಷ್ಟೆ ಸೊಗಸಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ನೀವು ಒಮ್ಮೆ ಆ ಪುಸ್ತಕ ಓದಿ…

Read Full Post »

ರಾತ್ರಿ ಆಗಸದಲ್ಲಿ
ಮೋಡಗಳ ಕಪ್ಪು -ಬಿಳುಪಿನಾಟ
ನಡು-ನಡುವೆ
ನಕ್ಷತ್ರಗಳ ಮಲ್ಲಿಗೆಯಂಥ ನಗು

ಬಿದಿಗೆ ಚಂದ್ರಮ
ಸುಮ್ಮನೆ ನೋಡುತ್ತಿದ್ದಾನೆ ಗುಮ್ಮನಂತೆ
ನಡು-ನಡುವೆ ನಗುತ್ತಿದ್ದಾನೆ
ಏನೋ ಅರ್ಥವಾದಂತೆ!

ಇದೆಲ್ಲ  ಕನಸೋ-ನನಸೋ
ನನಗೆ ಅರ್ಥವಾಗುತ್ತಿಲ್ಲ
ಅರ್ಥವಾದರೂ
ಅರ್ಥವಾಯಿತು ಎಂದು ಹೇಳಲಾಗುತ್ತಿಲ್ಲ!

ಕೋಳಿಯ ಕೂಗು ಕಿವಿಗಡಚುತ್ತಿತ್ತು
ನಕ್ಕಿದು ಚಂದ್ರನಲ್ಲ
ಸೂರ್ಯ ಎಂದು ಗೊತ್ತಾದಾಗ
ಬೆಳಗಾಗಿಯೇ ಹೋಗಿತ್ತು!

Read Full Post »

ಅವಳು

ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎಸಿ ರೂಮಿನ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ ‘ಲಗೋರಿ’ ಎಂದು ಕಿರುಚುತ್ತಾ, ಕುಣಿದು ಕುಪ್ಪಳಿಸುತ್ತಿದ್ದ.  ‘ಜುಮುರು ಮಳೆಯಲ್ಲಿ  ನೆನೆಯ ಬೇಡ ಥಂಡಿ ಆಗತ್ತೆ’ ಅಂತಾ ಕೂಗಿ ಹೇಳಲು ತುಟಿ ತೆರೆದರೆ…

ಊಹುಂ ಸ್ವರ ಸಹಕಾರ ನೀಡುತ್ತಿಲ್ಲ…

ಶ್ರವಣನ ‘ಲಗೋರಿ’ ಎಂಬ ಕೂಗು ಕೇಳದಿದ್ದರೆ, ಮತ್ತೆ ಅವಳು ನೆನಪಾಗುತ್ತಿರಲಿಲ್ಲ. ಯಾಕೆಂದರೆ ಅವಳನ್ನು ನೆನಪಿಸಿಕೊಳ್ಳಬೇಕಾದಷ್ಟು ನೆನಪಿಸಿಕೊಂಡು, ಅವಳಿಗಾಗಿ ಸುರಿಸಲು ಸಾಧ್ಯವಿರುವಷ್ಟು ಕಣ್ಣೀರು ಸುರಿಸಿ ಆಗಿದೆ!

ಅವಳನ್ನು ನಾನಿಷ್ಟು  ಬೇಗ ಮರೆಯಬಾರದಿತ್ತು ಅನ್ನಿಸತ್ತೆ ಕೆಲವೊಮ್ಮೆ. ನಾನು ಹಾಗಂದುಕೊಳ್ಳುವುದಕ್ಕೇ ಇರಬೇಕು, ಅವಳು ಆಗಾಗ ಏನೇನೋ ನೆವದಿಂದ ನೆನಪಾಗುವುದು. ಸುಮ್ಮಸುಮ್ಮನೆ ನನ್ನಲ್ಲಿ ಕಣ್ಣೀರು ತರಿಸುವುದು…

***

ಇವನೊಬ್ಬ ಬಿಕನಾಸಿ ಅಪ್ಪ. ಒಂದು ಕೊಡೆ ತಂದು ಕೊಡಲು ಯೋಗ್ಯತೆಯಿಲ್ಲ. ಇವನಿಗ್ಯಾಕೆ ಬೇಕಿತ್ತು ಮಕ್ಕಳು. ಈಗ ಮುರಿದು ಬೀಳತ್ತೋ, ಆಗ ಮುರಿದು ಬೀಳತ್ತೋ ಅನ್ನೋ ಸೋಗೆ ಗುಡಿಸಲು ಕಟ್ಟಿಕೊಳ್ಳಲು  ಇವನಿಗೆ ಈ ಬೆಟ್ಟದ ತಪ್ಪಲೇ ಬೇಕಿತ್ತಾ?

ಜಿಟಿ ಜಿಟಿ ಜಿನುಗುತ್ತಿದ್ದ ಮಳೆಯಲ್ಲೇ ಅಪ್ಪನನ್ನು ಶಪಿಸುತ್ತ ಸಟ ಸಟ ಹೆಜ್ಜೆ ಹಾಕುತ್ತಿದ್ದೆ…

ಕಂಬ್ಳಿ ಕೊಪ್ಪೆ ಹಾಕ್ಕೊಬೇಕಂತೆ!
ಛೀ, ಎಲ್ಲರಿಗೂ ಕೊಡೆಯಿದೆ, ನನಗೆ ಮಾತ್ರ ಕಂಬ್ಳಿ ಕೊಪ್ಪೆ, ಜರಿ ಕೊಪ್ಪೆ…

ನಾನು ಮಳೆಯಲ್ಲಿ ತ್ಯೊಯ್ದರೂ  ಸರಿ, ಕಂಬ್ಳಿ ಕೊಪ್ಪೆ  ಧರಿಸಲಾರೆ ಅಂತಾ ಹಠ ಮಾಡಿಕೊಂಡು ಹೊರಟ್ಟಿದ್ದೆ ಮನೆಯಿಂದ.  ಮನೆಯಿಂದ ಹೊರಡುವಾಗ ಮಳೆ ಬರಲಿಲ್ಲ. ಮನೆ ಸೇರಲು ಹೊರಟಾಗ ಮಳೆ ಬಂತು. ಈಗಲಾದರೂ ಅಪ್ಪನಿಗೆ ಮಗನ ಕಷ್ಟ  ಗೊತ್ತಾಗಲಿ ಅಂದುಕೊಳ್ಳುತ್ತಾ ಹೆಜ್ಜೆ ಹಾಕುತ್ತಿರುವಾಗಲೇ ಯಾರೋ ಕರೆದಂತಾಯಿತು.

ಏ ರವಿ ಅದ್ಯಾವ ಹಾಳಾದ ಹುಡುಗಿ ಕನಸು ಕಾಣುತ್ತಿದ್ಯೋ?! ಆಗಿಂದ ಕರಿತಾ ಇದ್ದಿ.  ಒಂದ್ಸರಿಯೂ ತಿರುಗಿ ನೋಡಲು ಆಯಿಜಿಲ್ಲ್ಯ ನಿಂಗೆ…
ರಶ್ಮಿ, ಏದುಸಿರು ಬಿಡುತ್ತಾ ಗೊಣಗಿದಳು.

‘ಈ ಬಡಪಾಯಿ ಜೀವಕ್ಕೆ ಬದುಕೇ ಭಾರವಾಗಿದೆ.   ಇದಕ್ಕೊಂದು ಮಣಭಾರದ ಹುಡುಗಿ ಬೇಕಾ? ಅಪ್ಪ  ಹೆಂಡತಿ ಕಟ್ಟಿಕೊಂಡು, ಮಕ್ಕಳನ್ನು ಮಾಡಿ ಸಾಕುತ್ತಿರುವ ಸೌಭಾಗ್ಯವೇ ಸಾಕು’ ಹಾಗಂತ ಅನ್ನಿಸಿದರೂ, ಯಾಕೋ ಅವಳ ಹತ್ತಿರ ಅದನ್ನು ಹೇಳಲು ಮನಸ್ಸಾಗಲಿಲ್ಲ. ಏನೂ ಉತ್ತರ ನೀಡದೇ ಸುಮ್ಮನೆ ನನ್ನ ನಡುಗೆ ಮುಂದುವರೆಸಲು ಹೆಜ್ಜೆ ಮುಂದಿಟ್ಟೆ.

ಯಾಕೆ ಕೋಪಾನಾ? ಅಲ್ದೋ ಮಳೆಯಲ್ಲಿ ತೊಯ್ದುಕೊಂಡು ಹೋಗ್ತಾ ಇದ್ಯೆಲ್ಲಾ? ನಾಳೆ ಥಂಡಿ ಜ್ವರ ಬಂದು ಮಲಗಿದರೆ? ಬಾ ಮನೆವರಿಗೆ ಬಿಟ್ಟಿಕ್ಕೆ ಹೋಗ್ತಿ.

ಊಹುಂ, ಉತ್ತರಿಸುವ ತವಕವಿರಲಿಲ್ಲ. ಆದರೂ ಅವಳು ಹಠ ಬಿಡಲಿಲ್ಲ. ಮಳೆಯೂ ನಿಲ್ಲಲಿಲ್ಲ….

ಹಾಗೆ ಗೆಳತಿಯಾದವಳು ರಶ್ಮಿ. ಆವತ್ತು ಅವಳು ನನ್ನ ಉದ್ಧಟತನವನ್ನು ನೋಡಿ ಬಿಟ್ಟು ಹೋಗಿದ್ದರೆ…

ಗೊತ್ತಿಲ್ಲ, ನಾನಿಂದೇನಾಗಿರುತ್ತಿದ್ದೆ ಎಂದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ.

***

ಮಲೆನಾಡು ಅಂದ್ರೆ ಆವತ್ತು ಹಾಗಿತ್ತು. ಊರಲ್ಲಿ  ಹುಡುಗರ ಹಿಂಡು ಹಿಂಡಿತ್ತು.  ಲಗೋರಿ, ಕಣ್ಣಮುಚ್ಚಾಲೆ ಆಟಕ್ಕೆಂದು ದೊಡ್ಡ ತಂಡವೇ ಇತ್ತು. ಆ ಎಲ್ಲಾ ಆಟಗಳು ನನ್ನ ಬದುಕಿನಲ್ಲೆ ಹುದುಗಿ ಹೋಗಿತ್ತಾದ್ದರಿಂದ ನಾನು ಯಾವ ಆಟವನ್ನು ಪ್ರತ್ಯೇಕವಾಗಿ ಆಡಲು ಹೋಗುತ್ತಿರಲಿಲ್ಲ.  ಬಾಲ್ಯದಲ್ಲಿ  ಎಲ್ಲರೊಟ್ಟಿಗೆ ಸೇರಿ ನಾನು ಆಟವಾಡುತ್ತಿದ್ದೆ.  ಆದರೆ ತಿಳಿವಳಿಕೆ ಬಂದ ಮೇಲೆ ನನಗ್ಯಾಕೋ ಆಟಕ್ಕೆ ಹೋಗಲು ಮನಸ್ಸಾಗುತ್ತಿರಲಿಲ್ಲ.

‘ನೀನು ತೊಟ್ಟಿರುವ ಅಂಗಿ ನನ್ನದಾಗಿತು’ ಹಾಗಂತ ಯಾರಾದರೂ ಗಟ್ಟಿಯಾಗಿ ಹೇಳಿದರೆ ಅನ್ನೋ ಭಯ, ಯಾರೋ ತೊಟ್ಟು ಬಿಟ್ಟ  ಅಂಗಿಯನ್ನು ಧರಿಸುವಷ್ಟು  ದರಿದ್ರತೆ ನಮ್ಮ ಮನೆಯಲ್ಲಿದೆಯಲ್ಲಾ ಅನ್ನೋ ನೋವು…

ರಶ್ಮಿಗೆ ಅದ್ಯಾಕೆ ನನ್ನ ಮೇಲೆ ಕನಿಕರ ಉಕ್ಕಿ ಬಂತೋ ಗೊತ್ತಿಲ್ಲ. ಅದೆಲ್ಲಾ  ಬಹುಶಃ  ವಿದಿ ಲೀಲೆ ಇರಬೇಕು! ಆವತ್ತು ಅವಳು ನನ್ನ ನಿರುತ್ತರವನ್ನು ಲಕ್ಷಿಸದೆ  ಛತ್ರಿಯಲ್ಲಿ ಮನೆವರೆಗೂ ಬಿಟ್ಟಳು. ಮನೆ ಬಾಗಿಲವರೆಗೆ  ಬಂದ ಅವಳನ್ನು  ಒಳಗೆ ಬಾ ಎಂದು  ಕರೆಯಲು ಮನಸ್ಸಾಗಲಿಲ್ಲ. ಯಾಕೆಂದರೆ ಕರೆದರೂ ಅವಳಿಗೆ  ಒಂದು ಲೋಟ ಕಾಫಿ ಕೊಡಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಅಂದು ನಮ್ಮ ಮನೆಯಿತ್ತು. ನಾನಂದು ರಶ್ಮಿ ಜತೆ ವರ್ತಿಸಿದ  ವರ್ತನೆ ಕುರಿತಾಗಿ ನನಗೆ  ಆವತ್ತು ಬೇಸರವಾಗಿತ್ತು. ಇವತ್ತಿಗೂ ಬೇಸರವಿದೆ!

ಮರುದಿನ ಬೆಳಗಾಗುವ ವೇಳೆಗೆ ನನ್ನ  ವರ್ತನೆ ಬಗೆಗೆ ತೀರಾ ಬೇಸರವಾಯಿತು. ರಶ್ಮಿ ಹತ್ತಿರ ನನ್ನ ವರ್ತನೆಯ ಕುರಿತಾಗಿ ಕ್ಷಮೆ ಕೇಳಬೇಕು ಅನ್ನಿಸಿತು. ಅವಳ ಮನೆ ಹಾದಿ ಹಿದಿದು ಹೊರಟೆ. ಜುಗ್ಗ ತಿಮ್ಮಣ್ಣ ಭಟ್ಟ ಅವಳಪ್ಪ. ಒಂದಲ್ಲಾ ಒಂದು ಕೊಂಕು ಮಾತನಾಡುವ ಅವನ ಮನೆಗೆ ಹೋಗೋದು ಅಂದ್ರೆ ನನಗೆ ಮೊದಲಿನಿಂದಲೂ ಬೇಸರದ ಸಂಗತಿ. ಆದ್ರೂ ಹೋಗುವುದು ಅನಿವಾರ್ಯವಾಗಿತ್ತು. ನಾನು ಹೋಗುತ್ತಿರುವುದು ರಶ್ಮಿ ಮನೆಗೆ ಹೊರತು, ತಿಮ್ಮಣ್ಣ ಭಟ್ಟನ ಮನೆಗಲ್ಲ ಅಂದುಕೊಂಡು ಹೊರಟೆ….

***

ಎಸಿ ರೂಮಿನಲ್ಲಿ ಕುಳಿತು ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿರುವವನಿಗೆ ಹೆಂಡತಿ ಕಾಫಿ ತಂದಿಟ್ಟದ್ದು ಗೊತ್ತಾಗಲಿಲ್ಲ. ಮನೆಗೆ ಬಂದ ರಶ್ಮಿಯನ್ನು ಕಾಫಿ ಕೊಡದೆ, ಒಳಕ್ಕೂ ಕರೆಯದೆ ಕಳುಹಿಸಿದ ಆ ಕ್ಷಣಗಳೇ ನನೆಪಾಗುತ್ತಿತ್ತು.

ಅವಳ ಮನೆಯತ್ತ ಹೆಜ್ಜೆ ಹಾಕತೊಡಗಿದೆ…

ಅವಳು ಈಗ ನನ್ನನ್ನು ಹೇಗೆ ರಿಸೀವ್ ಮಾಡಿಕೊಳ್ಳಬಹುದು, ನನ್ನ ಮೇಲೆ ಅವಳಿಗೆ ಕೋಪ ಬಂದಿರಬಹುದಾ…
ಇತ್ಯಾದಿಯಾಗಿ ಅವಳ ಕುರಿತಾಗಿ ಆಲೋಚಿಸುತ್ತಲೇ ಹೆಜ್ಜೆ ಹಾಕುತ್ತಿದ್ದೆ… ಗಕ್ಕನೆ ತಲೆಯೆತ್ತಿ ನೋಡಿದಾಗ ನನ್ನ ನಡುಗೆ ತಿಮ್ಮಣ್ಣ ಭಟ್ಟರ ಮನೆ ದಾಟಿ ಮೂರು ಮಾರು ದೂರ ಸಾಗಿತ್ತು. ನನ್ನನ್ನು ನಾನೇ ಶಪಿಸಿಕೊಳ್ಳುತ್ತಾ ಮತ್ತೆ ಹಿಂದಕ್ಕೆ ಬಂದೆ. ಅವಳ ಮನೆಯಂಗಳಕ್ಕೆ ಕಾಲಿಡುವಾಗಲೇ ಭಟ್ಟರ ದರ್ಶನವಾಯಿತು.
ಹೇಗಿದ್ದರೂ ಇನ್ನೊಬ್ಬರಿಂದ ಹೇಳಿಸಿಕೊಳ್ಳುವುದು ನನ್ನ  ಜನ್ಮ ಸಿದ್ದ ಹಕ್ಕು, ಹಾಗಂದುಕೊಂಡೇ ಭಟ್ಟರ ಮನೆಯಂಗಳದೊಳಕ್ಕೆ ಕಾಲಿಟ್ಟೆ. ಪಾಪ ಭಟ್ಟರು ನನ್ನ ಮನಸ್ಸಿನ ಆಲೋಚನೆಗೆ ನಿಜಕ್ಕೂ ಮೋಸ ಮಾಡಲಿಲ್ಲ.

“ಮಳೆಗಾಲ ಶುರುವಾಯಿತು. ನಮ್ಮ ಮನೇಲಿ ಯಾವುದು ಹಳೇ ಬಟ್ಟೆ ಇಲ್ಲೆ ಮಾಣಿ. ನೀ ಬತ್ತೆ ಅಂತಾ ಮುಂಚೇನೆ ಹೇಳಿದ್ರೆ ಹಾವಗೊಲ್ಲ ಯೆಂಕನಿಗೆ ನಾನು ಬಟ್ಟೆ ಕೋಡ್ತಾ ಇರ್ಲೆ” ಭಟ್ಟರ ಮಾತು ಮುಂದುವರೆಯುತ್ತಿತ್ತೇನೋ ಅಷ್ಟೊತ್ತಿಗೆ ರಶ್ಮಿ ಎಂಟ್ರಿ ಆಯಿತು.

‘ಯಾವಾಗ ಬಂದ್ಯೋ, ಆಸ್ರಿಗೆ ಎಂಥಾ ಕುಡಿತೇ…’ಮಲೆನಾಡಿನ  ಸಂಪ್ರದಾಯದಂತೆ ಮಾತು ಶುರುವಿಟ್ಟವಳು. ಭಟ್ಟರ ಎದುರಿಗೆ ಬಂದ ವಿಚಾರ ತಿಳಿಸಲು ಸಾಧ್ಯವಾಗಲಿಲ್ಲ. ತಿಳಿಸುವುದು ಸೌಜನ್ಯ ಅಂತಾನೂ ಅನ್ನಿಸಲಿಲ್ಲ. ಬಂದ ಸಂಕಟಕ್ಕೆ ಒಂದು ಕುಂಟು ನೆವ ಹೇಳಲೇಬೇಕಾದ ಅನಿವಾರ್ಯತೆ ಎದುರಾಯಿತು.

ಹೌದು, ಬಟ್ಟೆ  ಇತ್ತಾ ಎಂದು ಕೇಳಲೇ ಬಂದಿದ್ದೆ. ತಂಗಿಗೆ ಶಾಲೆ ಶುರುವಾಯಿತು. ನಿನ್ನದು ಹಳೆ ಬಟ್ಟೆ  ಯಾವುದಾದರೂ ಇತ್ತೇನೋ ಅಂತಾ ಬಂದೆ. ಸಿಗಬೇಕಾದ ಆತಿಥ್ಯ ಭಟ್ಟರಿಂದ ದಕ್ಕಿತು. ಆಸ್ರಿಗೆ ಎಂಥದು ಬೇಡ….ಅಂದವನೇ  ನನ್ನ ಪಾಡಿಗೆ ನಾನು ಎದ್ದು ಹೊರಟೆ. ಕಣ್ಣಲ್ಲಿ ನೀರು ತುಂಬಿತ್ತು. ಅದು ಅವಳಿಗೂ ಗೊತ್ತಾಗಿತ್ತು. ಏನೂ ಮಾತಾಡದೇ ಅವಳು ಒಳಕ್ಕೆ ನಡೆದಳು.

ಘಟನೆಯನ್ನು ನೆನಪಿಸಿಕೊಳ್ಳುತ್ತಾ ನನ್ನನ್ನು ನಾನೇ ದೂಷಿಸಿಕೊಳ್ಳುತ್ತಾ ಸುಮಾರು ನಮ್ಮೂರಿನ ಅರಳಿಕಟ್ಟೆವರೆಗೆ ಬಂದಿದ್ದೆ. ಅಷ್ಟೊತ್ತಿಗೆ ಅವಳು ನನ್ನನ್ನು ಹಿಂಬಾಲಿಸಿಕೊಂಡು ಬಂದಳು. ಅವಳು ಯಾಕೆ ಅಷ್ಟು  ರಿಸ್ಕು  ತೆಗೆದುಕೊಂಡಳೋ ಗೊತ್ತಿಲ್ಲ. ಯಾಕೆಂದರೆ  ತಪ್ಪು  ನನ್ನದೇ  ಇತ್ತು. ಅವಳಪ್ಪ ಆಡಿದ ಮಾತಿನಲ್ಲೇನೂ ತಪ್ಪಿರಲಿಲ್ಲ.

ಆದರೂ, ಭಟ್ಟರ ವರ್ತನೆ  ಅವಳಿಗೆ ಬೇಸರ ತಂದಿರಬೇಕು, ಹಾಗಾಗಿಯೇ ಬಂದಿರಬೇಕು ಅಂದುಕೊಂಡೆ!

ಆದದ್ದೆಲ್ಲಾ ಒಳಿತಿಗೆ ಅನ್ನೋ  ಹಿಂದಿನವರ ಮಾತು ಅಕ್ಷರಶಃ ನಿಜ.  ತಿಮ್ಮಣ ಭಟ್ಟರು ಆವತ್ತು ಕುಚೋದ್ಯ ನುಡಿಯದಿದ್ದರೆ, ರಶ್ಮಿ ನನ್ನ ಪಾಲಿಗೆ ಖಂಡಿತಾ ಬೆಳಕಾಗುತ್ತಿರಲಿಲ್ಲ ! ನಾನಂದುಕೊಂಡಂತೆ ಅವಳಿಗೆ ಅವಳಪ್ಪನ ವರ್ತನೆ ಬೇಸರ ತರಿಸಿತ್ತು. ಪಾಪ ಹೆಣ್ಣುಮಗಳು ಕಣ್ಣೀರಿಟ್ಟಳು. ಯಾಕೋ ಅವಳ ಗುಣ ನಂಗೆ ತುಂಬಾ ಇಷ್ಟವಾಯಿತು. ನನ್ನ ನೋವು, ನಲಿವುಗಳನ್ನು ಅವಳ ಬಳಿ ಹೇಳಿಕೊಳ್ಳಬೇಕು ಅನ್ನಿಸಿತು. ಆದರೂ ಅದು ಸರಿಯಾದ ಜಾಗವಾಗಿರಲಿಲ್ಲ. ಮಾತನಾಡಲಿಕ್ಕಿದೆ ಬರುತ್ತೀಯಾ?ಹಾಗಂತ  ಹೆಣ್ಣು ಮಗಳೊಬ್ಬಳನ್ನು ಕರೆಯುವುದು ಸರಿಯಲ್ಲ. ಅಷ್ಟಕ್ಕೂ ಕರೆದು ದುಃಖ ತೋಡಿಕೊಳ್ಳಲು ಅವಳೇನೂ ಬಂದುವಲ್ಲ, ಬಳಗವಲ್ಲ. ಹೈಸ್ಕೂಲ್‌ವರೆಗೆ ನನ್ನ ಜೂನಿಯರ್ ಆಗಿದ್ದವಳು, ನನ್ನ ಕುರಿತು ಒಂಚೂರು ತಿಳಿದುಕೊಂಡಿದ್ದವಳು ಅಷ್ಟೆ .  ಹಾಗೆ ಆಲೋಚಿಸುತ್ತಾ  ನನ್ನ ವರ್ತನೆ ಕುರಿತು ಕ್ಷಮೆ ಕೇಳಿದೆ. ನಾನೇಕೆ ಮನೆಗೆ ಕರೆಯಲಿಲ್ಲ  ಎಂಬುದನ್ನೂ ಸಂಕೋಚವಿಲ್ಲದೇ ಹೇಳಿದೆ. ಸರಿ ನೀನ್ನಿನ್ನು ಹೊರಡು ಇಂಥ ಜಾಗದಲ್ಲಿ ನಾನು, ನೀನು ಒಟ್ಟಿಗೆ ಕಂಡರೆ ಜನರ ಬಾಯಲ್ಲಿ ಆಡಿಕೊಳ್ಳುವ ವಸ್ತುವಾಗುತ್ತೇವೆ ಎಂದೆ. ಅರ್ಥವಾಯಿತು ಅವಳಿಗೆ. ನಾಳೆ ಸಂಜೆ ೪ ಗಂಟೆ ಹೊತ್ತಿಗೆ ದೇವಸ್ಥಾನದ ಹತ್ತಿರ ಬಾ ಸುಮ್ಮನೆ ಹರಟೋಣ ಅಂದಳು. ತುಂಬಾ ಖುಷಿಯಾಯಿತು. ಅದೇ ಖುಷಿಯಲ್ಲೆ ಮನೆ ತಲುಪಿದೆ.

***

ಹೆಚ್ಚು ಏಕಾಂಗಿತನ ಬಯಸುತ್ತಿದ್ದವನು ನಾನು. ನನ್ನ ಕಷ್ಟಗಳನ್ನು ನಾನೇ ನುಂಗಿಕೊಳ್ಳಬೇಕು ಹೊರತು,  ಬೇರೆಯವರಲ್ಲಿ  ತೋಡಿಕೊಳ್ಳಬಾರದು ಎಂಬ ನಿಲುವು ನನ್ನದಾಗಿತ್ತು.  ಬದುಕಿನ ಒಂದು ಹಂತದವರೆಗೂ ನನಗೆ ರಶ್ಮಿಯಂತಹ ಆಪ್ತರು ಇಲ್ಲದೇ ಹೋಗಿದ್ದು ನನ್ನ ಆ ನಿಲುವಿಗೆ ಕಾರಣವಾಗಿರಬಹುದು. ಯಾಕೋ ಅವಳ ಹತ್ತಿರ ನನ್ನ ಸಂಕಷ್ಟಗಳನ್ನು ಹೇಳಿಕೊಳ್ಳಬೇಕು ಅನ್ನಿಸಿತ್ತು. ಹಾಗಾಗಿ ಮಾರನೇ ದಿನ ಸಂಜೆ ನಾಲ್ಕು ಗಂಟೆಗೆ ಖುದ್ದಾಗಿ ನಮ್ಮೂರ ಹನುಮಂತನ ಗುಡಿಯ ಸಮೀಪ ಹೋದೆ.

ಊರ ತುದಿಯ ಬೊಮ್ಮನ ಗುಡ್ಡದಲ್ಲಿ ಹನುಮಂತನ ಗುಡಿಯಿದೆ. ಮಧ್ಯಾಹ್ನ ೧೨ ಗಂಟೆ ನಂತರ ಕಪಿಗಳನ್ನು ಬಿಟ್ಟರೆ ಮತ್ತ್ಯಾರೂ  ಹನುಮಂತನನ್ನು ಮಾತಾಡಿಸಲು ಹೋಗುವುದಿಲ್ಲ! ನಮ್ಮೂರಿನ ಜನರಿಗೆ ದೇವರ ಮೇಲೆ ಭಕ್ತಿ ಇಲ್ಲವೆಂದೇನಲ್ಲ. ಆದರೂ   ಸ್ವಂತ ಊರಿನ ದೇವರ ಮೇಲೆ ಒಂತರಹ ಅಸಡ್ಡೆ.  ಪರ ಊರಿನ ಚೌಡಮ್ಮ, ಮಾರಮ್ಮನ  ದರ್ಶನಕ್ಕೆ ಶುಕ್ರವಾರ, ಮಂಗಳವಾರ ತಪ್ಪದೇ ಹೋಗುತ್ತಾರೆ. ಶೆಟ್ಟಿಸರದ ಪೂಜಾರಪ್ಪನಿಗೆ ಶನಿ ದೇವರು ಮೈಮೇಲೆ ಬರುತ್ತೆ ಅಂತಾ ಶನಿವಾರ ಓಡುತ್ತಾರೆ. ಆದರೂ ಆಂಜನೇಯನಿಗೆ ಮಾತ್ರ ಮಲತಾಯಿ ಧೋರಣೆ! ಹಾಗಾಗಿಯೇ ಇರಬೇಕು ಅವಳು ಆ ಸ್ಥಳ ಸೂಚಿಸಿದ್ದು. ಯಾರಾದರೂ ಕಂಡರೆ ದೇವಸ್ಥಾನಕ್ಕೆ ಬಂದಿದ್ದೆ ಅಂತಲೂ ಹೇಳಬಹುದಲ್ಲ!

ನಾನು ದೇವಸ್ಥಾನದ ಬಳಿ ತಲುಪುವಾಗ ಗಂಟೆ ನಾಲ್ಕುಕಾಲು ಕಳೆದಿತ್ತು. ಅವಳು ಆಂಜನೇಯ ಗುಡಿ ಪಕ್ಕದಲ್ಲಿರುವ ಅರಳಿ ಮರದ ಹತ್ತಿರ ಕಾಯುತ್ತಾ ಕುಳಿತಿದ್ದಳು. ಸುಮ್ಮನೆ ಕಿರು ನಗು ಬೀರುತ್ತಾ ಎಂಟ್ರಿ ಕೊಟ್ಟೆ. ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ. ಏನು ಮಾತಾಡಬೇಕೆಂದು ತೋಚದೆ! ಕೊನೆಗೆ ಅವಳೇ ಮಾತಿಗೆ ಶುರುವಿಟ್ಟಳು. ಮಾತು ಆರಂಭವಾಗಿದ್ದು ಕಾಡು ಹರಟೆ ಅಂತಲೇ. ನಂತರ ಸಾಗಿದ್ದು ಬದುಕಿನತ್ತ…ಸುಮಾರು ಎರಡೂವರೆ ತಾಸುಗಳ ಕಾಲದ ಸುದೀರ್ಘ ಮಾತುಕತೆ…

ಅಲ್ಲಿಂದ ಮುಂದೆ ರಶ್ಮಿ ನನ್ನ ಬದುಕಿನ ಅವಿಭಾಜ್ಯ ಅಂಗವಾದಳು. ಪಿಯುಸಿಗೆ ನಿಲ್ಲಿಸಿದ್ದ ನನ್ನ  ಓದನ್ನು ಮುಂದುವರಿಸುವಂತೆ ಪ್ರೇರೇಪಿಸಿದಳು. ಎಷ್ಟೋ ಸಲ ಫೀಜಿಗೆ, ಪುಸ್ತಕಕ್ಕೆ ಅಂತಾ ಅವಳೇ ದುಡ್ಡು ಕೊಟ್ಟಿದ್ದೂ ಇದೆ. ನನ್ನನ್ನು ಐ.ಎ.ಎಸ್ ಆಫೀಸರ್ ಮಾಡಬೇಕೆಂಬ ಕನಸು ಕಂಡಳು. ಆ ನಿಟ್ಟಿನಲ್ಲಿ ಅಧ್ಯಯನ ಮಾಡಲು ಬೇಕಾದ ವ್ಯವಸ್ಥೆಗಳನ್ನೆಲ್ಲಾ  ಒದಗಿಸಿ ಕೊಟ್ಟಳು. ಡಿಗ್ರಿ ಓದಲು ಶುರುವಿಟ್ಟ ನಂತರ ನಾನು  ಸಣ್ಣ ಪುಟ್ಟ ಉದ್ಯೋಗ ಮಾಡಿ ಪುಡಿಗಾಸು ಸಂಪಾದನೆಗೆ  ಶುರುವಿಟ್ಟೆ. ಆದರೂ ನನ್ನ ಬಿ.ಎ ಪದವಿಯ ಮುಕ್ಕಾಲು ಭಾಗ ಹೊಣೆ ಹೊತ್ತವಳು ಅವಳೇ.  ಯಾರ್ಯಾರೋ ಸ್ನೇಹಿತೆಯರದ್ದೆಲ್ಲಾ ಪುಸ್ತಕ ತರಿಸಿಕೊಟ್ಟು, ಅದು ಓದು, ಇದು ಓದು ಅಂತಾ ಒಂದಿಷ್ಟು ಪುಸ್ತಕಗಳನ್ನು ಕೈಗಿಟ್ಟು…ನಿಜಕ್ಕೂ ಯಾವೊದೋ ಜನ್ಮದಲ್ಲಿ  ನನ್ನ ಹತ್ತಿರದ ಬಂಧುವಾಗಿದ್ದಿರಬೇಕು. ನಿತ್ಯ ಸಿಗುತ್ತಿದ್ದಳು. ಗಂಟೆಗಟ್ಟಲೆ ಹರಟುತ್ತಿದ್ದೆವು.

ಬಿ.ಎ ಪದವಿ ಮುಗಿಸಿ ಐ.ಎ.ಎಸ್ ಅಧ್ಯಯನಕ್ಕೆ ಹೈದ್ರಾಬಾದ್‌ಗೆ ಹೋಗಬೇಕೆಂದು ತೀರ್ಮಾನವಾಯಿತು. ಆದರೂ ನನಗೆ ರಶ್ಮಿ ಬಿಟ್ಟು ಬದುಕುವುದು ಅಸಾಧ್ಯ ಅನ್ನಿಸತೊಡಗಿತ್ತು. ಆದಾಗಲೇ ನಾನು ಅವಳನ್ನು ಪ್ರೀತಿಸತೊಡಗಿದ್ದೆ. ಈ ವಿಚಾರವನ್ನು ಅವಳಿಗೆ ತಿಳಿಸಿದೆ.

“ಪ್ರೀತಿ ಪ್ರೇಮವೆಲ್ಲಾ ಬದುಕಿನಲ್ಲಿ ನೆಲೆ ಕಂಡ ನಂತರ. ನೀನು ಮೊದಲು ಬದುಕನ್ನು ಪ್ರೀತಿಸಬೇಕು. ಬದುಕನ್ನು ಪ್ರೀತಿಸುವ ಸ್ಥಿತಿ ನಿನ್ನ ಬದುಕಿನಲ್ಲಿ ಬರಬೇಕಾದರೆ ನಿನ್ನ ಕಾಲ ಮೇಲೆ ನೀನು ನಿಂತುಕೊಳ್ಳಬೇಕು. ನಿನ್ನನ್ನು ಆಡಿಕೊಂಡವರೆಲ್ಲಾ ಗೌರವಿಸುವ ಸ್ಥಿತಿಗೆ ತಲುಪಬೇಕು. ನಾನು ನಿನ್ನ ಜತೆ ಸದಾ ಇರುತ್ತೇನೆ. ಆದರೆ ಸಮಯ ನಿನ್ನ  ಜತೆ ಇರದು. ಹಾಗಾಗಿ ಮೊದಲು ಐ.ಎ.ಎಸ್ ನಂತರ ಪ್ರೀತಿ, ಪ್ರೇಮ…”ಅಂತಾ ನಯವಾಗಿ ನನ್ನ ಮನಸ್ಸನ್ನು ಬದಲಿಸಿ ಹೈದ್ರಾಬಾದ್‌ಗೆ ಕಳುಹಿಸಿದಳು.

***

ಹೈದ್ರಾಬಾದ್ ಸೇರಿದ ನಂತರ ನನ್ನದು ಒಂತರಹ ವನವಾಸದ ಬದುಕು.  ಓದು,ಓದು,ಓದು… ಇದನ್ನು ಬಿಟ್ಟರೆ ಸಮಯ ಸಿಕ್ಕಾಗ ಒಂದಿಷ್ಟು  ಪುಡಿಗಾಸು ಸಂಪಾದನೆ. ಪತ್ರದ ಮೂಲಕ ನನ್ನ ಮತ್ತು ರಶ್ಮಿಯ ಒಡನಾಟ. ಅಪರೂಪಕ್ಕೆ ಫೋನ್. ಆದರೂ ನನ್ನ ಓದು, ಯೋಗಕ್ಷೇಮದ ಕುರಿತಾಗಿ ಅವಳ ಕಾಳಜಿ ಒಂಚೂರು ಕಮ್ಮಿಯಾಗಿರಲಿಲ್ಲ. ಸದಾ ನನಗೆ ಚೈತನ್ಯ ತುಂಬುವುದನ್ನು ಮರೆಯುತ್ತಿರಲಿಲ್ಲ. ಹೀಗೆ ಸಾಗಿತ್ತು ಎರಡು ವರ್ಷ…

ಐ.ಎ.ಎಸ್ ಪಾಸಾಯಿತು. ಪಾಸಾಗುತ್ತಲೇ ಕರ್ನಾಟಕದಲ್ಲೇ  ನೌಕರಿಯೂ ಸಿಕ್ಕಿತು. ಅದೇ ಸಂತಸದಲ್ಲಿ  ಊರಿಗೆ ಮರಳಿದೆ. ರಶ್ಮಿ ಜತೆಗೆ ಮಾತಾಡಲು ಮನ ಹಪಹಪಿಸುತ್ತಿತ್ತು. ಯಾಕೆಂದರೆ ನನ್ನ ಸಾಧನೆಯ ಕುರಿತು ನನಗಿಂತ ಹೆಚ್ಚು ಸಂತಸ ಪಡುವವಳು ಅವಳು. ಐ.ಎ.ಎಸ್ ಪಾಸಾಗಿದ್ದನ್ನು, ಉದ್ಯೋಗ ಸಿಕ್ಕಿದ್ದನ್ನು ಫೋನಿನಲ್ಲೇ ತಿಳಿಸಿದ್ದೆ. ತುಂಬಾ ಖುಷಿ ಪಟ್ಟಳು. ಅವಳಿಗೊಂದು ಜತೆ ಬಟ್ಟೆ ತರುವುದಾಗಿ ಭರವಸೆ ಕೊಟ್ಟಿದ್ದೆ.  ಹನುಮಂತ ಗುಡಿಯ ಅರಳಿಕಟ್ಟೆ ಹತ್ತಿರ ನಾನು ಬರುವ ದಿನ, ಸಮಯ ಎಲ್ಲವನ್ನೂ ತಿಳಿಸಿದ್ದೆ.

ಮನೆಗೆ ಬಂದವನೇ ಓಡಿದ್ದು ಅರಳಿಕಟ್ಟೆಗೆ. ರಶ್ಮಿ ಬಂದಿದ್ದಳು. ಯಾಕೋ ಅವಳ ಮೊಗದಲ್ಲಿ ಗೆಲುವಿರಲಿಲ್ಲ. ಚೆಲ್ಲು ಚೆಲ್ಲು ನಗೆಯಿರಲಿಲ್ಲ. ಸಂಪ್ರದಾಯದಂತೆ ಮಾತಾಡಿಸಿದಳು. ಯಾಕೆ, ನಾನು ನಿನಗಿಂತ ದೊಡ್ಡ ವ್ಯಕ್ತಿ ಆಗುತ್ತೇನೆ ಅಂತಾ ಹೊಟ್ಟೆಕಿಚ್ಚಾ ಎಂದು ಅಣಗಿಸಿದೆ. ಅದಕ್ಕೂ ಅವಳ ಉತ್ತರವಾಗಲಿ, ಕುಚೋದ್ಯವಾಗಲೀ ಇರಲಿಲ್ಲ. ನಾನು ಬಟ್ಟೆ  ಗಿಫ್ಟ್  ಕೊಡುತ್ತಿದ್ದ ಹಾಗೆ ಮದುವೆಗೆ ಅಡ್ವಾನ್ಸ್ ಆಗಿ ಉಡುಗೊರೆ ಕೊಡುತ್ತಿರುವುದಕ್ಕೆ ಧನ್ಯವಾದಗಳು ಅಂತಾ ಕರೆಯೋಲೆ ಕೊಟ್ಟು ಮಾತಿಗೂ ನಿಲ್ಲದೇ ಹೊರಟುಹೋದಳು.

ಊಹುಂ, ಖಂಡಿತಾ ನಾನು ಆ ಶಾಕ್ ಅನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಸ್ವೀಕರಿಸಲೇಬೇಕಿತ್ತು. ಕರೆಯೋಲೆ ಒಳಗೆ ಒಂದು ಪತ್ರ ಇಟ್ಟಿದ್ದಳು. ಅವಳು ಮೊದಲೇ ಮಾವನ ಮಗನ ಪ್ರೀತಿ ಬಲೆಗೆ ಬಿದ್ದಿದ್ದಳಂತೆ. ಆದರೆ ನನ್ನ ಸಾಧನೆಗೆ ಮುಳುವಾಗಬಾರದು ಅಂತಾ ಅದನ್ನು ಮುಚ್ಚಿಟ್ಟು ತನ್ನ ಮದುವೆಯನ್ನು ನನ್ನ ಐ.ಎ.ಎಸ್ ಮುಗಿಯುವವರೆಗೆ ಮುಂದೂಡಿದ್ದಳಂತೆ. ಹಾಗಂತ ಆ ಪತ್ರದಲ್ಲಿತ್ತು…

***

ಮಗ ಬಂದು  ಅಪ್ಪ  ಇವತ್ತು  ಫಿಲ್ಮಂಗೆ ಹೋಗಬೇಕು ಅಂತಾ ಎಬ್ಬಿಸಿದ ಎಚ್ಚರವಾಯಿತು…

ಅವಳ ಮದುವೆಯ ನಂತರವೂ ನಾನು ಅವಳನ್ನು ಸಹೋದರಿ ಅಂತಾ ಸ್ವೀಕರಿಸಬಹುದಿತ್ತು. ಅವಳ ಋಣ ತೀರಿಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಅದಕ್ಕೆ ಮನಸ್ಸು ಒಪ್ಪಲಿಲ್ಲ. ಪ್ರೇಮ ಭಗ್ನದ ಸಿಟ್ಟಿನಿಂದ ಅವಳ ಮದುವೆಗೂ ಹೋಗಲಿಲ್ಲ…

ಅಪ್ಪ ಬೇಗ ರೆಡಿಯಾಗು ಫಿಲಂಗೆ ಸಮಯವಾಯಿತು… ಮಗ ಶ್ರವಣ ಹಠ ಹಿಡಿದ. ಎ.ಸಿ ರೂಮಿನಿಂದ ಬಲವಂತವಾಗಿ ಕದಲಬೇಕಾಯಿತು. ನನ್ನ ಹಳೆ ನೆನಪಿಗೊಂದು ಬ್ರೇಕ್ ಹಾಕಿ ಫಿಲಂಗೆ ಹೊರಟ್ಟಿದ್ದೇನೆ…

(ಸೂಚನೆ:- ೭-೮ ತಿಂಗಳ ಹಿಂದೆ ಬರೆದ ಕಥೆಯಿದು. ಇದನ್ನೊಮ್ಮೆ ಬ್ಲಾಗ್‌ಗೆ ಹಾಕಿದ್ದೆ ಕೂಡಾ! ಮೊನ್ನೆ ಕುಳಿತವನಿಗೆ ಈ ಕಥೆ ತುಂಬಾ ಎಡಿಟ್ ಮಾಡುವ ಮೂಡು ಬಂತು! ಎಡಿಟ್ ಆದ ಕಥೆಯನ್ನು ಮತ್ತೊಮ್ಮೆ ಇಲ್ಲಿಟ್ಟಿದ್ದೇನೆ… )

Read Full Post »

ಸಿಮೆಂಟ್, ಮರಳು ಮಿಶ್ರಣ ಮಾಡುವ ಮಂದಿಯ ಮಕ್ಕಳು, ಮರಳು ರಾಶಿಯ ಮೇಲೆ ಮಲಗಿ ಹಗಲುಗನಸು ಕಾಣುತ್ತಾರೆ. ಬಹು ಅಂತಸ್ತಿನ ಮನೆಗಳನ್ನು ನೋಡಿಯೇ ಬದುಕಿನುದ್ದಕ್ಕೂ  ತೃಪ್ತರಾಗಿಬಿಡುತ್ತಾರೆ. ಚಿಂದಿ ಆಯುವವರು, ವಂಶ ಪರಂಪರೆ ಎಂಬಂತೆ ಆ ವೃತ್ತಿಗೇ ಅಂಟಿಕೊಂಡು ಬಿಡುತ್ತಾರೆ. ಮನೆ ನಿರ್ಮಾಣದ ಗುತ್ತಿಗೆದಾರ ಶ್ರೀಮಂತನಾಗುತ್ತಲೇ ಹೋಗುತ್ತಾನೆ…

ಡ್ಯಾನಿ ಬಾಯ್ಲ್  ಎಂಬ ಬ್ರಿಟಿಷ್ ನಿರ್ದೇಶಕರೊಬ್ಬರ  ಕನಸು ಕಲ್ಪನೆಯ ‘ಸ್ಲಮ್ ಡಾಗ್ ಮಿಲಿಯನೇರ್’ ಚಲನ ಚಿತ್ರ ಬಹುವಿಧವಾಗಿ ಚರ್ಚೆಗೆ ಗುರಿಯಾಗಿದೆ. ಆಸ್ಕರ್ ಪ್ರಶಸ್ತಿಯ ಹತ್ತು ವಿಭಾಗಗಳಲ್ಲಿ  ನಾಮಾಂಕಿತಗೊಂಡಿರುವ ಈ ಚಿತ್ರದ ಕುರಿತು ಹಲವರು ಖ್ಯಾತೆ ತೆಗೆದಿದ್ದಾರೆ. ಚಿಂದಿ ಆಯುವ ಮಂದಿಯ ಬದುಕನ್ನು ಮುಂದಿಟ್ಟುಕೊಂಡು ಭಾರತವನ್ನು ಕಳಪೆಯಾಗಿ ಚಿತ್ರಿಸಲಾಗಿದೆ ಎಂಬುದು ಹಲವರ ಆರೋಪ.

ನಿಜ, ದೇಶ ಭಕ್ತಿಯ ಆಯಾಮದಿಂದ ಅವಲೋಕಿಸಿದಾಗ  ಪ್ರತಿಯೊಬ್ಬ  ಭಾರತೀಯನೂ ಆ ಚಿತ್ರವನ್ನು ಹೀಗಳೆಯಲೇ ಬೇಕು. ಭಾರತದಲ್ಲಿ  ಮಾತ್ರ ಸಮಸ್ಯೆಗಳಿರುವುದಾ? ದೂರದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲಿ  ವಾಸಿಸುವ ಮಂದಿಯೆಲ್ಲಾ  ಸರ್ವ ಸುಖ ಸಂಪನ್ನರಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆಲೋಚಿಸಿದಾಗಲೂ, ಡ್ಯಾನಿ ಬಾಯ್ಲ್  ಕುರಿತಾಗಿನ ಕೋಪ ಉಕ್ಕೇರುತ್ತದೆ. ಆದರೆ ಅದೆಲ್ಲವನ್ನೂ  ಮೀರಿ ನಮ್ಮ  ದೇಶದ ವಾಸ್ತವ ಚಿತ್ರಣವನ್ನು  ಅವಲೋಕಿಸಿದರೆ…

ಅದು ಧಾರಾವಿ. ಮುಂಬಯಿ ಮಹಾನಗರಿಯ ಪಶ್ಚಿಮ ಹಾಗೂ ಕೇಂದ್ರಿಯ ರೈಲ್ವೆ  ತಾಣಗಳ ನಡುವೆ ಇರುವ ಈ ಪ್ರದೇಶದ ಉತ್ತರಕ್ಕೆ ಮಿತಿ ನದಿಯಿದೆ. ಪಶ್ಚಿಮಕ್ಕೆ  ಮಾಹಿಮ್ ಮತ್ತು ಬಾಂದ್ರಾಗಳು ಸಿಗುತ್ತವೆ. ೧೭೫ ಹೆಕ್ಟೇರ್ ವಿಸ್ತೀರ್ಣದ ಈ ಪ್ರದೇಶವು  ದೇಶದ ಒಂದು ವರ್ಗದ ಜನರ ಪ್ರತಿನಿಯಂತಿದೆ. ಸರಿಸುಮಾರು ೬,೦೦,೦೦೦ ಜನ ವಸತಿ ಇರುವ ಪ್ರದೇಶವನ್ನು ಏಷ್ಯಾ ಖಂಡದ ಅತಿ ದೊಡ್ಡ  ಸ್ಲಮ್ ಎಂದು ಗುರುತಿಸಲಾಗಿದೆ.  ಇಲ್ಲಿನ ಮನೆಗಳ ಮಾಸಿಕ ಬಾಡಿಗೆ  ೨೦೦ ರೂ.ಗೂ ಕಡಿಮೆ!   ವಿದೇಶಕ್ಕೆ ಸರಕು ರವಾನಿಸುವ ಈ ಪ್ರದೇಶ  ೬೫೦ ದಶಲಕ್ಷ ಡಾಲರ್ ವಹಿವಾಟು ಹೊಂದಿದೆ ಎಂಬುದೇನೋ ನಿಜವಾದರೂ, ಇಲ್ಲಿ  ವಾಸಿಸುವ ಜನರು ಒಂದು ಹೊತ್ತಿನ  ಅನ್ನಕ್ಕೂ ಪರದಾಡುತ್ತಾರೆ.  ಮೂರು ಹೊತ್ತು ಸಮೃದ್ಧವಾಗಿ ಊಟ ಮಾಡಿ, ಮನೆಯಲ್ಲಿ  ನೆಮ್ಮದಿಯಿಂದ ಮಲಗುವವ ಇಲ್ಲಿನ  ಜನರ ಲೆಕ್ಕದಲ್ಲಿ  ಆಗರ್ಭ ಶ್ರೀಮಂತ!

ವಾಸಿಸಲು ಸೂರಿಲ್ಲ. ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ಇನ್ನು, ಆರೋಗ್ಯದ ಪರಿಕಲ್ಪನೆಯೇ  ಇಲ್ಲಿನ  ಮಂದಿಗೆ ಇದ್ದಂತಿಲ್ಲ.   ಈ ಪ್ರದೇಶದಲ್ಲಿ  ೧,೪೪೦ ಜನರಿಗೆ ಒಂದು ಶೌಚಾಲಯವಿದೆ ಎಂಬುದನ್ನು ಇತ್ತೀಚಿನ ಅಂಕಿ-ಅಂಶಗಳು ಹೆಳುತ್ತವೆ. ಮಳೆಗಾಲ ಬಂತೆಂದರೆ ನೆರೆ ಹಾವಳಿ ತಪ್ಪಿದ್ದಲ್ಲ.  ಬೆಸ್ತರು, ಮುಸ್ಲಿಂರನ್ನೇ ಅಕ ಸಂಖ್ಯೆಯಲ್ಲಿ  ಹೊಂದಿರುವ ಈ ಪ್ರದೇಶಕ್ಕೊಮ್ಮೆ ಕಾಲಿಟ್ಟರೆ ಬದುಕು ಏನೆಂಬುದು ನಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಅಂದಹಾಗೆ, ಈ ಪ್ರದೇಶದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ  ಆ ರೂಪುರೇಷೆಯ ಕರಡು ಪ್ರತಿಗಳೆಲ್ಲಾ  ಸಂಬಂಧಿತ ಕಚೇರಿಗಳ ಕಡತಗಳಲ್ಲೇ ಬಾಕಿ ಉಳಿದಿದೆ!

ಮಾಹೀಮ್ ಕ್ರೀಕ್, ಪರೇಲ್, ದಾದರ್, ಮಾತುಂಗಾ…ಮುಂಬಯಿ ಎಂಬ ಮಹಾನಗರಿಯ ಮೈತುಂಬಾ  ಇಂತಹದ್ದೇ ಕೊಳಗೇರಿ ಪ್ರದೇಶಗಳು ಕಾಣಸಿಗುತ್ತವೆ. ೧೯೫೦ರ ದಶಕಕ್ಕೆ ಹೋಲಿಸಿದರೆ, ಇವತ್ತು ಕೊಳಗೇರಿ ಪ್ರದೇಶಗಳ ಸಂಖ್ಯೆ ಮೂರರಷ್ಟು  ಏರಿಕೆಯಾಗಿದೆ. ೧೯೫೦ರಿಂದ ೧೯೬೮ರ ಅವಯಲ್ಲಿ   ಕೊಳಗೇರಿ ಪ್ರದೇಶದ ಪ್ರಮಾಣ ಶೇ. ೧೮ರಷ್ಟು   ಏರಿಕೆಯಾಗಿದೆ. ೧೯೭೦ರ ದಶಕದಲ್ಲಿ  ಈ ಪ್ರಮಾಣ ಸ್ವಲ್ಪ  ಹೆಚ್ಚಳ ಕಂಡಿತ್ತು. ೧೯೮೫ರವೇಳೆಗೆ ಮುಂಬಯಿ ನಗರದ ಅರ್ಧದಷ್ಟು  ಮಂದಿ ಕೊಳಗೇರಿಗಳಲ್ಲಿ  ಜೀವನ ನಡೆಸುತ್ತಿದ್ದರು. ೧೯೯೦ರ ನಂತರ ಸ್ಲಮ್ ಪ್ರದೇಶದ ಪ್ರಮಾಣ ತುಸು ಇಳಿಕೆಯಾಗಿದೆ. ಮತ್ತೆ ೨೦೦೧ರ ವೇಳೆಯಲ್ಲಿ  ನೋಡಿದರೆ, ಸುಮಾರು ೭೦ ಲಕ್ಷ  ಜನ  ಕೊಳಗೇರಿ ಬದುಕು ನಡೆಸುತ್ತಿರುವುದು ಕಾಣಸಿಗುತ್ತದೆ ಎಂದು ನಗರಾಭಿವೃದ್ಧಿ  ಪ್ರಾಕಾರದ ಅಂಕಿ-ಅಂಶಗಳು ಹೇಳುತ್ತಿವೆ.

ಹೊಸದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರು…ಮೊದಲಾದ ಮಹಾನಗರಿಗಳ ಕಥೆಯೂ ಮುಂಬಯಿಗಿಂತ ಭಿನ್ನವೇನಲ್ಲ. ಬೆಂಗಳೂರಿನ ೨೧೮ ಪ್ರದೇಶಗಳು ಸ್ಲಮ್ ಏರಿಯಾಗಳೆಂದು ಕೊಳಚೆ ನಿರ್ಮೂಲನಾ ಮಂಡಳಿ ಘೋಷಿಸಿದೆ. ಭಾರತದಲ್ಲಿ  ೬೮ ದಶಲಕ್ಷ  ಜನರು ಕೊಳಗೇರಿಗಳಲ್ಲಿ   ಬದುಕು ನಡೆಸುತ್ತಿದ್ದಾರೆ  ಎಂಬುದನ್ನು ಕೇಂದ್ರ ಸರಕಾರವೇ ಒಪ್ಪಿಕೊಂಡಿದೆ. ದೇಶದಲ್ಲಿನ ೨೫ ದಶಲಕ್ಷ  ಮಂದಿಗೆ ವಾಸಿಸಲು ಸೂರಿಲ್ಲ  ಎಂಬ ವರದಿಯನ್ನು  ಯೋಜನಾ ಆಯೋಗ ನೀಡಿದೆ.
ಹಾಗಂತ, ಕೊಳಗೇರಿ ನಿರ್ಮೂಲನೆ ಹೆಸರಲ್ಲಿ  ಬಿಡುಗಡೆಯಾಗುವ ನಿಗೆ, ಯೋಜನೆಗಳಿಗೆ ಯಾವತ್ತೂ ಕೊರತೆಯಾಗಿಲ್ಲ!  ಪ್ರತಿ ಬಜೆಟ್ ಮಂಡಿಸುವ ಸಮಯದಲ್ಲೂ  ನಮ್ಮ  ಜನನಾಯಕರಿಗೆ ಸ್ಲಮ್ ಏರಿಯಾದ ಜನರ ಮೇಲೆ ಪ್ರೀತಿ ಉಕ್ಕುಕ್ಕಿ  ಬರುತ್ತದೆ! ಚುನಾವಣೆ ಬಂದಾಗ ರಾಜಕಾರಣಿಗಳು ಖುದ್ದಾಗಿ ಕೊಳಗೇರಿಗೆ ಹೋಗುತ್ತಾರೆ. ಅಲ್ಲಿ  ಉಳಿಯುವ, ಊಟ ಮಾಡುವ ಪ್ರಹಸನವನ್ನೂ  ನಡೆಸುತ್ತಾರೆ. ಹತ್ತಾರೂ  ಚುನಾವಣೆ ಕಳೆದರೂ, ಸಾಕಷ್ಟು  ಬಜೆಟ್ ಮಂಡನೆಯಾದರೂ, ಹಲವಾರು ಪಕ್ಷಗಳು ಗದ್ದುಗೆ ಏರಿದರೂ ಚಿಂದಿ ಆಯುವ ಮಕ್ಕಳಿಗೆ ಶಾಲೆಯ ಹಾದಿಯೇ ತಿಳಿಯುವುದಿಲ್ಲ. ತುತ್ತು ಅನ್ನಕ್ಕಾಗಿ ಹಪಹಪಿಸುವರ ಸಂಖ್ಯೆಯಲ್ಲಿ  ಯಾವುದೇ ವ್ಯತ್ಯಾಸ ಕಾಣುವುದಿಲ್ಲ.

ಕೊಳಗೇರಿ ಪ್ರದೇಶಗಳು ನಗರದಲ್ಲಿ  ಮಾತ್ರ ಕಾಣ ಸಿಗುತ್ತವೆ, ದೇಶದ ಹಳ್ಳಿಗಳು ಸಮೃದ್ಧವಾಗಿವೆ ಎನ್ನಲೂ  ಸಾಧ್ಯವಿಲ್ಲ.  ದೇಶದ ಅದೆಷ್ಟೋ  ಹಳ್ಳಿಗಳ ತಲೆ ಮೇಲೆ ಸಮಸ್ಯೆಗಳ ಸರಮಾಲೆಯೇ ಇದೆ. ಅಲ್ಲಿನವರ ಬದುಕು ಕೊಳಗೇರಿ ಜನರಿಗಿಂತ ಕನಿಷ್ಠ  ಸ್ಥಿತಿಯಲ್ಲಿದೆ. ಇವೆಲ್ಲದರ ನಡುವೆಯೂ ಒಂದಷ್ಟು  ಸ್ವಯಂಸೇವಕ ಸಂಘಟನೆಗಳು, ಎನ್‌ಜಿಒಗಳು ನಮ್ಮ ಜನರ ಬದುಕಿನ ಮಟ್ಟವನ್ನು  ಸುಧಾರಿಸಲು ಪ್ರಯತ್ನಿಸುತ್ತಿವೆ ಎಂಬುದು ಸಮಾಧಾನದ ಸಂಗತಿ.

ಆದರೂ, ಸಿಮೆಂಟ್, ಮರಳು ಮಿಶ್ರಣ ಮಾಡುವ ಮಂದಿಯ ಮಕ್ಕಳು, ಮರಳು ರಾಶಿಯ ಮೇಲೆ ಮಲಗಿ ಹಗಲುಗನಸು ಕಾಣುತ್ತಾರೆ. ಹಲವು ಅಂತಸ್ತಿನ ಮನೆಗಳನ್ನು ನೋಡಿಯೇ ಬದುಕಿನುದ್ದಕ್ಕೂ  ತೃಪ್ತಿ ಪಡುತ್ತಾರೆ. ದಶಕಗಳು ಕಳೆದರೂ ಅವರಿಗೊಂದು ಶಾಶ್ವತ ನೆಲೆ ಸಿಗಲಾರದು, ಅಥವಾ ಒಂದು ಮನೆ ಕಟ್ಟಿಕೊಳ್ಳುವ  ಮಟ್ಟಕ್ಕೆ  ಅವರು ಬೆಳೆದು ನಿಲ್ಲಲಾರರು. ಚಿಂದಿ ಆಯುವವರು, ವಂಶ ಪರಂಪರೆ ಎಂಬಂತೆ ಆ ವೃತ್ತಿಗೇ ಅಂಟಿಕೊಂಡು ಬಿಡುತ್ತಾರೆ. ಮನೆ ನಿರ್ಮಾಣದ ಗುತ್ತಿಗೆದಾರ ಶ್ರೀಮಂತನಾಗುತ್ತಲೇ ಹೋಗುತ್ತಾನೆ…ಇದನ್ನೆಲ್ಲಾ  ನೋಡಿದಾಗ ‘ಸ್ಲಮ್ ಡಾಗ್ ಮಿಲಿಯನೇರ್’ ಚಿತ್ರದಲ್ಲಿ  ತಪ್ಪೇನಿದೆ ಅನ್ನಿಸುತ್ತದೆ. ನಮ್ಮ ದೇಶದ ನಿರ್ದೇಶಕರೊಬ್ಬರು ಆ ಚಿತ್ರ ಮಾಡಿದ್ದರೆ ಬಹುಶಃ  ನಮ್ಮ ಮಾತಿನ ದಾಟಿ ಬದಲಾಗುತ್ತಿತ್ತೇನೋ! ಆ ಚಿತ್ರವನ್ನು ವಿಭಿನ್ನ ದೃಷ್ಟಿಕೋನದಲ್ಲಿ  ನಾವು ವೀಕ್ಷಣೆ  ಮಾಡಲು ಸಾಧ್ಯವಾಗುತ್ತಿತ್ತೇನೋ ಅಲ್ವಾ?!

Read Full Post »