Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2013

ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದಲ್ಲಿನ ಮೂಢನಂಬಿಕೆಯನ್ನು ತೊಡೆದು ಹಾಕುವ ಮೂಲಕ ಹೊಸದೊಂದು ಕ್ರಾಂತಿ ಮಾಡಲು ಹೊರಟಿದ್ದು ಈಗ ಹಳೆಸುದ್ದಿಯಾಯ್ತು. ಜ್ಯೋತಿಷ್ಯದಿಂದ ಆರಂಭಿಸಿ ಪೂಜೆ ಪುನಸ್ಕಾರಕ್ಕೂ ಸರ್ಕಾರಿ ಪರ್ಮಿಟ್ ಬೇಕು ಎಂಬ ಮುಖ್ಯಮಂತ್ರಿಗಳ ನಿಲುವುವಿಗೆ ಈಗಾಗಲೇ ಪರ-ವಿರೋಧದ ಮಾತುಗಳು ಕೇಳಿಬಂದಿತ್ತು. ಮೂಢನಂಬಿಕೆ ಪ್ರತಿಬಂಧಕ ವಿದೇಯಕದ ಕರಡು ಸಿದ್ಧವಾಗಿದೆ. ಮೂಢ ನಂಬಿಕೆಗಳಿಗೆ ಕಡಿವಾಣ ಖಂಡಿತ ಸ್ವಾಗತಾರ್ಹ. ಆದರೆ ಯಾವುದು ಮೂಢ ಎಂಬುದು ಇಲ್ಲಿ ಬಹುಮುಖ್ಯ ಪ್ರಶ್ನೆ.

ಸ್ವಾಮೀಜಿಗಳ ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಜ್ಯೋತಿಷ್ಯ, ಪೂಜಾ ಸಾಮಾಗ್ರಿಗಳ ಮಾರಾಟ ಇವೆಲ್ಲವೂ ಮೂಢತೆಯ ಪಟ್ಟಿಯಲ್ಲಿ ಸೇರುವ ಅಪಾಯವಿದೆ. ಕಪಟ ಜ್ಯೋತಿಷ್ಯಗಳಿಂದ ಇವತ್ತು ಇಡೀ ಜ್ಯೋತಿಷ್ಯ ಜಗತ್ತು ಒಂದು ರೀತಿ ಸುಳ್ಳಿನ ಕಂತೆ ಅನ್ನಿಸಿರುವುದು ನಿಜ. ಹಾಗಂತ ಜ್ಯೋತಿಷ್ಯವನ್ನು ಮೂಢತೆಯ ಪಟ್ಟಿಗೆ ಸೇರಿಸುವುದು ತೀರಾ ಹಾಸ್ಯಾಸ್ಪದವಾಗುತ್ತದೆ. ಯಾಕೆಂದರೆ ಜ್ಯೋತಿಷ್ಯದಲ್ಲಿ ಪದವಿ ನೀಡುವ ವ್ಯವಸ್ಥೆ ಇದೆ. ಅರ್ಥಾತ್ ಎಂಜಿನಿಯರಿಂಗ್, ವೈದ್ಯಕೀಯ ಪದವಿಗಳಿದ್ದಂತೆ ಜ್ಯೋತಿಷ್ಯ ಎಂಬುದು ಕೂಡ ಒಂದು ವ್ಯವಸ್ಥಿತ ಕಲಿಕೆಯ ವಿಚಾರ.

ನಾವೇನು ಅಂಕಗಣಿತದ ಸೂತ್ರಗಳನ್ನು ನೋಡುತ್ತೇವೋ ಅಂಥ ಹತ್ತಾರು ಸೂತ್ರಗಳ ಸಮ್ಮಿಲನವೇ ಜ್ಯೋತಿಷ್ಯ ಅನ್ನಿಸಿಕೊಳ್ಳುತ್ತದೆ. ಗ್ರಹ, ನಕ್ಷತ್ರ, ಪಂಚಾಂಗ, ತಿಥಿ, ವಾರ, ರಾಶಿ…ಹೀಗೆ ಹಲವಾರು ಅಂಶಗಳನ್ನು ಜ್ಯೋತಿಷ್ಯ ಜಗತ್ತು ಹೊಂದಿದೆ. ನಾವೇನು ಇವತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಮಾತನಾಡುತ್ತೇವೋ, ಅಂಥ ಎಲ್ಲ ಸೂರ್ಯ-ಚಂದ್ರ, ನಕ್ಷತ್ರಗಳ ಕುರಿತು ಜ್ಯೋತಿಷ್ಯ ಜಗತ್ತು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಮಾತನಾಡಿದೆ. ಜ್ಯೋತಿಷ್ಯದಲ್ಲಿ ಗ್ರಹಗಣಿತ ಎಂಬ ಒಂದು ವಿಭಾಗವಿದೆ. ಗ್ರಹಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ಲೆಕ್ಕಿಸಿ ಅದರ ಆಧಾರದ ಮೇಲೆ ಫಲ ಹೇಳುವುದು. ಇದನ್ನು ನೋಡಿದರೆ ಜ್ಯೋತಿಷ್ಯದ ಹಿಂದೆ ನಿಂತಿರುವ ಗಣಿತ ಅರ್ಥವಾಗುತ್ತದೆ. ಜ್ಯೋತಿಷ್ಯದಲ್ಲೂ ಹಲವು ವಿಧಗಳಿವೆ. ಹಸ್ತ ಸಾಮುದ್ರಿಕದಲ್ಲಿ ಲೆಕ್ಕಾಚಾರವಿಲ್ಲದೇ ಹಸ್ತ ನೋಡಿ ಹೇಳುತ್ತಾರೆ. ಅದೊಂದನ್ನು ಇಟ್ಟುಕೊಂಡು ಇಡೀ ಜ್ಯೋತಿಷ್ಯ ಜಗತ್ತು ಮೂಢ ಎಂದು ಪರಿಗಣಿಸಲು ಹೊರಟರೆ, ವಿಜ್ಞಾನವೂ ಕೂಡ ಮೂಢವೇ.ಬಹುಶಃ ಈ ಹೇಳಿಕೆ ನಿಮಗೆ ಹುಚ್ಚುತನ ಎನ್ನಿಸಬಹುದು. ಆದರೆ ಇಡೀ ವೈಜ್ಞಾನಿಕ ಜಗತ್ತಿನಲ್ಲಿ ಇರುವಷ್ಟು ಪರಮ ಮೂಢತೆ ನಿಮಗೆ ಮತ್ತೆಲ್ಲೂ ಸಿಗುವುದಿಲ್ಲ.

ನಾವು ಪರಮಾಣು ಆವಿಷ್ಕಾರವಾಗುವರೆಗೂ ಅಣುವೇ ಒಂದು ವಸ್ತುವಿನ ಅಂತಿಮ ರೂಪ ಎಂದು ನಂಬಿಕೊಂಡು ಕುಳಿತಿದ್ದೆವು. ಅಣುವಿನ ಕುರಿತು ಸಹಸ್ರಾರು ವಿಜ್ಞಾನಿಗಳು ಲಕ್ಷಾಂತರ ಪ್ರಮೇಯಗಳನ್ನು(ಥೇರಂ)ಮಂಡಿಸಿದರು. ಆದರೆ ಯಾವತ್ತೂ ಅಣುವನ್ನು ವಿಭಜಿಸಿ ಪರಮಾಣು ಸೃಷ್ಟಿಸಬಹುದು ಎಂಬುದು ನಿಜವಾಯಿತೋ, ಅಂದು ಅಣು ಆಧಾರಿತ ಅನೇಕ ಸಿದ್ದಾಂತಗಳು ಬಿದ್ದುಹೋದವು. ಇವತ್ತು ಪರಮಾಣುವನ್ನು ವಿಭಜಿಸಿ ಎಲೆಕ್ಟ್ರಾನ್‌ಗಳ ಜಗತ್ತಿನಲ್ಲಿದ್ದೇವೆ. ಅರ್ಥಾತ್ ನಾವು ಎಷ್ಟೋ ಶತಮಾನದವರೆಗೂ ಅಣುವೇ ಒಂದು ವಸ್ತುವಿನ ಅಂತಿಮ ರೂಪ ಎಂಬ ಮೂಢತೆಯಲ್ಲಿ ಬದುಕಿದ್ದೆವು ಅಲ್ವಾ?

ನೀವು ಗಣಿತದ ಪ್ರಪಂಚಕ್ಕೆ ಹೊಕ್ಕರೆ ಇಂಥ ಸಾವಿರಾರು ಸಿದ್ಧಾಂತಗಳು ಸಿಗುತ್ತವೆ. ಒಬ್ಬ ವಿಜ್ಞಾನಿ, ಗಣಿತಜ್ಞ ಒಂದು ಸಿದ್ಧಾಂತವನ್ನು ಮಂಡಿಸಿರುತ್ತಾನೆ. ಅದನ್ನು ೫೦-೬೦ ವರ್ಷದವರೆಗೂ ವಿಜ್ಞಾನ ಜಗತ್ತು ಸತ್ಯ ಎಂದು ನಂಬಿಕೊಂಡಿರುತ್ತದೆ. ಆದರೆ ಅದೇ ಸೂತ್ರದ ಮೇಲೆ ಧೀರ್ಘ ಅಧ್ಯಯನ ಮಾಡಿದ ಮತ್ತೊಬ್ಬ, ಅದೇ ಸಿದ್ಧಾಂತವನ್ನು ಸುಳ್ಳು ಎಂದು ಸಾಬೀತುಪಡಿಸುತ್ತಾನೆ. ಇದನ್ನು ವಿಜ್ಞಾನ ಜಗತ್ತು ಯಾವತ್ತೂ ಮೂಢನಂಬಿಕೆ ಎಂದು ಒಪ್ಪಿಕೊಳ್ಳುವುದಿಲ್ಲ. ಅದು ಆವತ್ತಿನ ಕಾಲಕ್ಕಿದ್ದ ಸೂತ್ರಗಳು, ಸಿದ್ಧಾಂತಗಳ ಆಧಾರದ ಮೇಲೆ ಸತ್ಯವಾಗಿತ್ತು ಎಂಬುದನ್ನೇ ವಾದಿಸುತ್ತದೆ.

ಯಸ್, ನಾನೀಗ ಹೇಳಲು ಹೊರಟ್ಟಿದ್ದು ಅದೇ ವಿಚಾರವನ್ನು. ಜ್ಯೋತಿಷ್ಯ ಅನ್ನುವುದು ಕೂಡ ಆವತ್ತಿನ ಗ್ರಹಗತಿಗೆ, ಆವತ್ತಿನ ಕಾಲಮಾನಕ್ಕೆ ಸರಿಯಾಗಿಯೇ ಇತ್ತು! ಜ್ಯೋತಿಷ್ಯ ಎಂದರೆ ಕವಡೆ ಹಾಕಿ, ರುದ್ರಾಕ್ಷಿ ಹಿಡಿದು ಟೀವಿ ಮುಂದೆ ಬೊಗಳೆ ಬಿಡುವ ಒಂದು ವರ್ಗವೆಂದು ನಿವ್ಯಾಕೆ ಪರಿಗಣಿಸುವಿರಿ? ಆ ಜಗತ್ತು ತುಂಬಾ ವಿಶಾಲವಾಗಿದೆ. ಆರ್ಯಭಟ, ಭಾಸ್ಕರಾಚಾರ್ಯರಂಥ ಶ್ರೇಷ್ಠರು ರಚಿಸಿದ ಕೃತಿಗಳು ಅದರ ಹಿಂದಿವೆ. ನಂಬಿಕೆ, ಮೂಢನಂಬಿಕೆ ಎಂಬುದನ್ನು ವಿವರಿಸುವುದೇ ಬಲು ಸವಾಲಿನ ಕೆಲಸ. ನನಗೆ ಸತ್ಯ ಎಂದು ಕಂಡಿದ್ದು ಇನ್ನೊಬ್ಬನಿಗೆ ಸುಳ್ಳಾಗಿ ಕಾಣಿಸುತ್ತದೆ. ಅಂತಿಮವಾಗಿ ಸಾಮಾಜಿಕವಾಗಿ ಸತ್ಯ ಅನ್ನಿಸುವುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ. ದೇವರು, ಧರ್ಮ, ಆಧ್ಯಾತ್ಮದ ವಿಚಾರಗಳು ಕೂಡ ಹಾಗೆ. ಇವೆಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರಗಳು. ನಿಮ್ಮ ಈಶ್ವರ ಹೀಗೆ ಇದ್ದಾನೆ ಎಂಬುದನ್ನು ನಿರೂಪಿಸಿ, ಗಣಪತಿಗೆ ಸೊಂಡಿಲು ಇದೆ ಎಂದು ನೀವು ಹೇಗೆ ಸಾಬೀತುಪಡಿಸುವಿರಿ ಎಂದರೆ ಬಹುಶಃ ಉತ್ತರ ಸಿಗಲಾರದು. ಹಾಗಂದ ಮಾತ್ರಕ್ಕೆ ಕೋಟ್ಯಂತರ ಜೀವಿಗಳು ನಂಬಿಕೆಯನ್ನು ಮೂಢ ಎಂದು ತೆಗೆದು ಹಾಕಲು ಆಗುವುದಿಲ್ಲ.

ಸಾರಾಯಿ ಕುಡಿದರೆ ಆರೋಗ್ಯಕ್ಕೆ ಹಾನಿಕರ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೂ ಅದನ್ನು ಸೇವಿಸುವವರು ಅನೇಕರಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಬೀಡಿ, ಸಿಗರೇಟು ಮಾರಾಟಕ್ಕೆ ನಿಬಂಧನೆ ಇರಬಹುದು, ಆದರೆ ಸೇದಲು ಯಾವುದೇ ನಿಬಂಧನೆ ಇಲ್ಲ. ದೇವರು, ಧರ್ಮದ ವಿಚಾರದಲ್ಲಿ ಕೆಲವರಿಗೆ ಮೋಸ ಆಗಬಹುದು. ಇದನ್ನು ಬಳಸಿಕೊಂಡು ಮೋಸ ಮಾಡುವವರು ಇರಬಹುದು. ಹಾಗಂತ ಇಡೀ ವ್ಯವಸ್ಥೆಯನ್ನೇ ತೆಗೆದು ಹಾಕುವುದು ಥರವಲ್ಲ.

ಖಂಡಿತ ಒಂದಷ್ಟು ಮೂಢತೆ ಸಮಾಜದಿಂದ ದೂರವಾಗಬೇಕು. ದೇವರ ಹೆಸರಿನಲ್ಲಿ ಅಮಾಯಕ ಜೀವಿಗಳನ್ನು ಬಲಿಪಶು ಮಾಡುವವರಿಗೆ ಶಿಕ್ಷೆಯಾಗಬೇಕು. ಒಂದಷ್ಟು ವಿಚಾರದಲ್ಲಿ ಜನ ಜಾಗೃತರಾಗಬೇಕು. ಆಡಳಿತ ಯಂತ್ರದಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಹಾಗಂತ ಎಲ್ಲ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ತರುವ ಯತ್ನವಾಗಬಾರದು. ಪೂಜೆ-ಪುನಸ್ಕಾರಗಳಿಗೆ ಕಡಿವಾಣ ಹಾಕುವ ಹುನ್ನಾರವಾಗಬಾರದು. ಯಾಕೆಂದರೆ ಆಗ ಜನ ಜಾಗೃತರಾಗುವ ಬದಲು ಮಸೀದಿ, ಚರ್ಚುಗಳನ್ನು ಈ ಇಲಾಖೆಯ ಅಧೀನಕ್ಕೆ ತನ್ನಿ ಎಂಬ ಗಲಾಟೆಯೇ ದೊಡ್ಡದಾಗುತ್ತದೆ!

ಸಿದ್ದರಾಮಯ್ಯನವರಿಗೆ ಇನ್ನೊಂದು ವಿಚಾರ ಗೊತ್ತಿರಲಿಕ್ಕಿಲ್ಲ. ಇವತ್ತು ಧಾರ್ಮಿಕ ಕೇಂದ್ರವೇ ಇಲ್ಲದ ಜಾಗ ಪ್ರಪಂಚದ ಯಾವ ಮೂಲೆಯಲ್ಲಿ ಹುಡುಕಿದರೂ ಸಿಗುವುದಿಲ್ಲ. ಮಸೀದಿಯಾಗಲೀ, ಚರ್ಚ್ ಆಗಲಿ ಅಥವ ಅವರ ನಂಬಿಕೆಯ ಕೇಂದ್ರವಾಗಲಿ ಪ್ರತಿ ದೇಶದ ಪ್ರತಿ ಹಳ್ಳಿಯಲ್ಲೂ ಇದ್ದೇ ಇದೆ. ವಾರಕ್ಕೊಂದು ದಿನವಾದರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ. ಕೆಲ ರಾಷ್ಟ್ರಗಳಲ್ಲಿ ಈ ಸಾಮೂಹಿಕ ಪ್ರಾರ್ಥನೆ ಕೂಡ ಕಡ್ಡಾಯ ಎಂಬಂತಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲೇ ಬೇಕಾದವರು ಮಾತ್ರ ದೇವರನ್ನು ನಂಬಬಹುದು. ಬೇಡವಾದವರು ದೇವರನ್ನು ನಿಂದಿಸಬಹುದು. ನಿಂದನೆ ಕೃತಿ ಬರೆಯಬಹುದು. ದೇವತೆಗಳನ್ನು ಬೆತ್ತಲೆ ಮಾಡಿ ಚಿತ್ರ ಬಿಡಿಸಬಹುದು!

ಅಯ್ಯೊ, ಎಲ್ಲಕ್ಕಿಂತ ಮುಖ್ಯವಾಗಿ ಹೇಳಲು ಮರೆತ್ತಿದ್ದೆ. ರಾಜಕಾರಣಕ್ಕಿಂತ ದೊಡ್ಡ ಮೂಢನಂಬಿಕೆ ಇನ್ಯ್ನಾವುದಿದೆ ಹೇಳಿ! ಜನರ ನಂಬಿಕೆಯಂತೆ ಜನಪ್ರತಿನಿಧಿಗಳು ಇದ್ದಿದ್ದರೆ ಇವತ್ತು ನಮ್ಮ ದೇಶ ಎಷ್ಟೋ ಉತ್ಕೃಷ್ಟ ಸ್ಥಿತಿಯಲ್ಲಿ ಇರುತ್ತಿತ್ತು ಅಲ್ವಾ?!!!

Read Full Post »

‘ಅಯ್ಯೋ ಪತ್ರಿಕೆಗಳಿಗೆ ಲೇಖನ ಕಳಿಸೋಕೆ ಬೇಜಾರಾಗುತ್ತೆ. ನಾವು ಬರೆದಿದ್ದು ಒಂದಾದ್ರೆ, ಅವ್ರು ಅದನ್ನು ಎಡಿಟ್ ಮಾಡಿ ಪ್ರಕಟಿಸೋದೇ ಮತ್ತೊಂದು’ ಹಾಗಂತ ಸುಮಾರು ಜನ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ‘ಲೇಖನ ಎಷ್ಟು ಚೆನ್ನಾಗಿದ್ರು ಸುಮ್‌ಸುಮ್‌ನೆ ಎಡಿಟ್ ಮಾಡ್ತಾರೆ. ಅರ್ಥವಿಲ್ಲದ ಸಂಗತಿಗಳನ್ನು ಲೇಖನದಲ್ಲಿ ತುರುಕುತ್ತಾರೆ. ನಾವು ಬರೆದಿರುವ ಲೇಖನ ಹೋಗಿ ಅದೊಂದು ಹೊಸ ಲೇಖನದ ಥರ ಆಗಿರುತ್ತೆ. ಅದ್ಕೆ ನಾವ್ಯಾಕೆ ಬರೆಯಬೇಕು’ ಅನ್ನುವವರು ಬಹಳಷ್ಟು ಜನರಿದ್ದಾರೆ.
ಖಂಡಿತ ನಿಮ್ಮ ಗೋಳು-ಸಂಕಟಗಳು ಯಾವುದೂ ಸುಳ್ಳಲ್ಲ. ಯಾಕಂದ್ರೆ ಸುದ್ದಿಮನೆಯಲ್ಲಿ ಒಂದು ಬರಹ ಬರೆಯುವುದಕ್ಕಿಂತ, ಒಬ್ಬರು ಬರೆದಿರುವುದನ್ನು ಸಂಪಾದಿಸುವುದು ಅಥವ ಎಡಿಟ್ ಮಾಡುವುದು ಬಲು ಕಷ್ಟದ ಕೆಲಸ. ಕಷ್ಟ ಅನ್ನುವುದಕ್ಕಿಂತ ಇದು ಬಲು ನಾಜೂಕಿನ ಕೆಲಸ. ಹಲವು ಉಪಸಂಪಾದಕರು ಅಥವ ಕಾಪಿ ಎಡಿಟರ್‌ಗಳಿಗೆ ಬರಹಗಾರನೊಬ್ಬನಿಗೆ ನೋವಾಗದಂತೆ ಎಡಿಟ್ ಮಾಡಲು ಬರುವುದಿಲ್ಲ. ಎಷ್ಟೋ ಸಲ ಎಡಿಟ್ ಮಾಡಿದ್ದು ಚೆನ್ನಾಗಿದ್ದರೂ, ಬರಹಗಾರನಿಗೆ ತಿದ್ದುಪಡಿ ಕುರಿತು ತೃಪ್ತಿ ಇರುವುದಿಲ್ಲ. ಇನ್ನು ಕೆಲವು ವಿ‘ಚಿತ್ರ’ ಸಂಪಾದಕ/ಉಪಸಂಪಾದಕರುಗಳು ಇರುತ್ತಾರೆ. ಚೆನ್ನಾಗಿರುವ ಬರಹದಲ್ಲಿಯೂ ಅವರಿಗೇನಾದ್ರೂ ಕಡ್ಡಿ ಆಡಿಸಲೇ ಬೇಕು! ಯಾಕಂದ್ರೆ ಅವ್ರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಿಕೊಳ್ಳಬೇಕಲ್ಲ! ಅದಕ್ಕಾಗಿಯೇ ಎಡಿಟ್ ಮಾಡುತ್ತಾರೆ. ಅದು ಎಷ್ಟು ಕೆಟ್ಟದಾಗಿರುತ್ತದೆ ಎಂದರೆ, ಅದಕ್ಕಿಂತ ಬರಹಗಾರನೊಬ್ಬ ಬರೆದ ಮೂಲ ಲೇಖನವನ್ನು ಪ್ರಕಟಿಸಿದರೆ ಎಷ್ಟೊ ಉತ್ತಮವಾಗಿರುತ್ತೆ. ಕಥೆ, ಕವನದ ಸಾಲುಗಳಿಗೂ ಕತ್ತರಿ ಪ್ರಯೋಗ ಮಾಡುವ ಅಸಾಸುರರೂ ಸುದ್ದಿಮನೆಯಲ್ಲಿ ಇದ್ದಾರೆ ಎಂದರೆ ನೀವು ನಂಬಬೇಕು.
ಒಬ್ಬ ಬರಹಗಾರ ಬರೆದ ವಿಚಾರಕ್ಕೆ ಚ್ಯುತಿ ಬರದಂತೆ ಎಡಿಟ್ ಮಾಡುವುದು ಅತ್ಯಗತ್ಯ. ನಂತರ ಎಡಿಟ್ ಮಾಡಿದ್ದು ಬರಹಗಾರನಿಗೆ ನೋವು ಉಂಟು ಮಾಡಬಾರದು. ಈ ಅಂಶವನ್ನು ಪಾಲಿಸುವುದು ತುಂಬಾ ಕಷ್ಟ. ಎಷ್ಟೋ ಸಲ ಎಡಿಟ್ ಮಾಡಿದ್ದು ಚೆನ್ನಾಗಿದ್ದರೂ ಬರಹಗಾರನಿಗೆ ಮಾತ್ರ ತಾನು ಬರೆದಿದ್ದೇ ಚೆನ್ನಾಗಿತ್ತು ಅನ್ನಿಸುತ್ತಿರುತ್ತೆ. ಇಂಥ ಸಂದರ್ಭದಲ್ಲಿ ಬರಹಗಾರನನ್ನು ತೃಪ್ತಿಪಡಿಸೋದು ತುಂಬಾ ಕಷ್ಟ. ಬರಹಗಾರನಿಗೆ ಖುಷಿಯಾಗುವಂತೆ ಎಡಿಟ್ ಮಾಡಬಲ್ಲ ಸಂಪಾದಕರು, ಉಪಸಂಪಾದಕರು ಬಹಳ ವಿರಳ. ನಾನು ಡಿಗ್ರಿ ಓದುತ್ತಿದ್ದಾಗ ಹಿರಿಯ ಪತ್ರಕರ್ತ ಮಿತ್ರರಾದ ಸುಧೀಂದ್ರ ಕಂಚಿತೋಟ ಅವರು ‘ಗರ್ವ’ ಎಂಬ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ಆಗೆಲ್ಲ ನಮಗೆ ಬರವಣಿಗೆಯ ವಿಪರೀತ ಹುಚ್ಚು. ಸುಮ್ಮನೆ ಕಾಲೇಜು ಗೆಳತಿಯ ಒಂದು ಕಾಲ್ಪನಿಕ ಲೇಖನ ಬರೆದು ಕಳಿಸಿದ್ದೆ. ಅದು ಪತ್ರಿಕೆಯಲ್ಲಿ ಎಡಿಟ್ ಆಗಿ ಪ್ರಕಟವಾಯಿತು. ಎಡಿಟಿಂಗ್ ಎಷ್ಟು ಸುಂದರವಾಗಿತ್ತೆಂದರೆ, ಛೇ ನಾನು ಹೀಗೆ ಬರೆಯಬಹುದಿತ್ತಲ್ಲ ಅಂತ ಅನ್ನಿಸಿಬಿಟ್ಟಿತ್ತು. ನಾನು ನನ್ನ ಲೇಖನದಲ್ಲಿ ನೋಡಿದ ಅತ್ಯುತ್ತಮ ಎಡಿಟಿಂಗ್ ಅದು. ನನ್ನ ಬರಹಕ್ಕೆ ಒಂಚೂರು ಚ್ಯುತಿ ಬರದಂತೆ ಲೇಖನಕ್ಕೊಂದು ಹೊಸ ಆಯಾಮ ಕೊಟ್ಟಿದ್ದರು. ಆ ಲೇಖನವನ್ನು ನಾನು ಇವತ್ತಿಗೂ ಎತ್ತಿಟ್ಟುಕೊಂಡಿದ್ದೇನೆ. ದುರಾದೃಷ್ಟವಶಾತ್ ಕಂಚಿತೋಟರಂಥ ಸಂಪಾದಕರು ಮುದ್ರಣ ಮಾಧ್ಯಮದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ.
ನನ್ನ ಪತ್ರಿಕೋದ್ಯಮ ವೃತ್ತಿ ಬದುಕು ಶುರುವಾಗಿದ್ದು ‘ಓಮನಸೆ’ ಪತ್ರಿಕೆಯಿಂದ. ನಾನು ಆ ಪತ್ರಿಕೆ ಸೇರಿದಾಗ ಇದ್ದಿದ್ದು ಶರತ್ ಕಲ್ಕೋಡ್ ಮತ್ತು ಗೆಳೆಯ ರವಿ ಅಜ್ಜಿಪುರ. ಟ್ರಾನ್ಸ್‌ಲೇಷನ್ ಆಗ ನನ್ನ ಪಾಲಿಗೆ ಹೊಸತು. ಟ್ರಾನ್ಸ್‌ಲೆಟ್ ಮಾಡಿದ ಲೇಖನವನ್ನು ರವಿ ಅಜ್ಜಿಪುರ ತಿದ್ದುತ್ತಿದ್ದರು. ಬಹುಶಃ ನಾನು ಕಂಡ ಮತ್ತೊಬ್ಬ ಒಳ್ಳೆಯ ಎಡಿಟರ್ ಅಂದ್ರೆ ಅಜ್ಜಿಪುರ. ಟ್ರಾನ್ಸ್‌ಲೇಟ್ ಮಾಡಿದ ಲೇಖನವನ್ನು ಅದೆಷ್ಟು ಸೊಗಸಾಗಿ ಆ ಪತ್ರಿಕೆಯ ಭಾಷೆಗೆ ತಿದ್ದುತ್ತಿದ್ದರು ಅಂದ್ರೆ, ಅದನ್ನು ಮತ್ತೊಮ್ಮೆ ಓದಬೇಕು ಅನ್ನಿಸುತ್ತಿತ್ತ್ತು. ಹೆಚ್ಚಾಗಿ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕರ ಸ್ಥಾನದಲ್ಲಿ ಕುಳಿತವರು ಸಾಮಾನ್ಯ ಬರಹಗಾರನ ಬರಹವನ್ನು ನೋಡುವುದಿಲ್ಲ. ಉಪ ಸಂಪಾದಕರು, ಆ ಪುಟದ ಮುಖ್ಯಸ್ಥರುಗಳೇ ಲೇಖನ ತಿದ್ದಿ, ತೀಡುತ್ತಾರೆ.
ಇಂಥ ಸಮಯದಲ್ಲಿ ಹಲವು ಎಡವಟ್ಟುಗಳು ಆಗುತ್ತವೆ ಎಂಬುದು ಒಂದು ಆಯಾಮವಾದರೆ, ಕೆಲ ಲೇಖಕರು ಅತ್ಯಂತ ಕೆಟ್ಟದಾಗಿ ಬರೆದು ಕಳುಹಿಸುತ್ತಾರೆ ಎಂಬುದು ಸುಳ್ಳಲ್ಲ. ಯಾವುದೇ ಒಂದು ಪುಟಕ್ಕೆ ಅದರದ್ದೇ ಆದ ಇತಿಮಿತಿಗಳಿರುತ್ತವೆ. ಇಂಥದ್ದೆ ವಿಚಾರದ ಲೇಖನಗಳನ್ನು ಪ್ರಕಟಿಸಬೇಕು ಎಂಬ ನಿಲುವು ಇರುತ್ತದೆ. ಲೇಖಕರು ಕಳುಹಿಸಿದ ಲೇಖನಕ್ಕೂ, ಆ ಪುಟದ ಧೋರಣೆಗೂ ಎಷ್ಟೋ ಸಲ ಸಂಬಂಧವೇ ಇರುವುದಿಲ್ಲ. ಆದಾಗ್ಯೂ ಅಂಥ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಉದಾಹರಣೆಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರೆಯುವವರು ವಿರಳ. ಆಗ ಯಾರೋ ಒಬ್ಬ ಬರೆದಿರುತ್ತಾನೆ. ಅದಕ್ಕೂ ಪುಟಕ್ಕೂ ಸಂಬಂಧವಿಲ್ಲದಿದ್ದರೂ, ಲೇಖನಕ್ಕೂ ರಿಯಲ್‌ಎಸ್ಟೇಟ್‌ಗೂ ಸ್ವಲ್ಪ ಸಾಮ್ಯತೆ ಇರುತ್ತೆ. ಅಂಥ ಸಮಯದಲ್ಲಿ ಆ ಬರಹವನ್ನು ಹಾಕಲೇಬೇಕಾಗುತ್ತದೆ. ಪ್ರಕಟಿಸಿದರೆ ಮಾತ್ರ ಮುಂದಿನ ವಾರಕ್ಕೆ ಆತನಿಂದ ಅದೇ ಪುಟಕ್ಕೆ ಇನ್ನೊಂದು ಆಹಾರ ನಿರೀಕ್ಷಿಸಬಹುದು! ಇದು ಸುದ್ದಿ ಮನೆಯ ಒಳಗೆ ಕುಳಿತವರ ಸಮಸ್ಯೆ. ಆಗ ನಮಗೆ ಎಷ್ಟೋ ಸಲ ಅನ್ನಿಸುತ್ತೆ, ಇದಕ್ಕಿಂತ ಹೊಸ ಲೇಖನ ಬರೆಯುವುದೇ ಲೇಸು ಅಂತ. ಆದ್ರೂ ನಾವು ತಾಳ್ಮೆಯಿಂದ, ಜಾಣ್ಮೆಯಿಂದ ಅದನ್ನು ಎಡಿಟ್ ಮಾಡಿ ಹಾಕುತ್ತೇವೆ.
ಬರೆಯುವವರಲ್ಲಿ ಅನೇಕರಿಗೆ ತಾವು ಯಾವ ಪುಟಕ್ಕೆ ಬರೆಯುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. ‘ಇದನ್ನು ನಿಮ್ಮ ಪತ್ರಿಕೆಯ ಯಾವುದಾದರೂ ಪುಟಕ್ಕೆ ಪರಿಗಣಿಸಿ’ ಎಂದು ಬರೆದು ಕಳುಹಿಸಿರುತ್ತಾರೆ. ಇಂಥ ಬರಹಗಳು ಅತಿಯಾಗಿ ತಲೆ ಕೆಡಿಸುತ್ತವೆ. ಬರೆಯುವ ಕುರಿತು ಇನ್ನೊಮ್ಮೆ ಮಾತನಾಡೋಣ. ಹೀಗೆ ತಲೆ ಕೆಡಿಸಿದ ಒಂದು ಲೇಖನ ಎಡಿಟ್ ಮಾಡಿಬಿಟ್ಟರೆ, ಮುಂದಿನ ಲೇಖನದ ಕಥೆ ಗೋವಿಂದ! ಇದೊಂಥರ  ಮೇಷ್ಟ್ರು, ಮನೆಯಲ್ಲಿ ಹೆಂಡ್ತಿ ಜೊತೆ ಜಗಳ ಆಡಿಕೊಂಡು ಬಂದು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದಂತೆ ಸರಿ.
ಸುಂಧೀಂದ್ರ ಭಟ್ಟರು ಅಂತೊಬ್ಬರು ಉಪಸಂಪಾದಕರಿದ್ದಾರೆ. ಅವರು ಬಹಳ ಹಿಂದೆ ಅಂಗಿಯ ಬಗ್ಗೆ ಒಂದು ಲೇಖನ ಬರೆದು ಪತ್ರಿಕೆಯೊಂದಕ್ಕೆ ಕಳುಹಿಸಿದ್ದರು. ಅದು ಪ್ರಕಟವಾಗಿರಲಿಲ್ಲ. ೪ ತಿಂಗಳು ಬಿಟ್ಟು ಮತ್ತೆ ಅದೇ ಲೇಖನವನ್ನು ಅದೇ ಪತ್ರಿಕೆಗೆ ಕಳುಹಿಸಿದರು. ಈ ಸಲ ಲೇಖನ ಪ್ರಕಟವಾಯ್ತು. ನಮಗೆ ಅಚ್ಚರಿಯ ಮೇಲೆ ಅಚ್ಚರಿ. ಕೊನೆಗೆ ಗೊತ್ತಾಗಿದ್ದು ಏನಂದ್ರೆ, ೨ನೇ ಸಲ ಲೇಖನ ಕಳುಹಿಸಿದಾಗ ಆ ಪುಟದ ಮುಖ್ಯಸ್ಥರು ಬದಲಾಗಿದ್ದರು! ಕೆಲವೊಮ್ಮೆ ಹೀಗೂ ಆಗುತ್ತೆ!!! ಒಬ್ಬರು ರಿಜೆಕ್ಟ್ ಮಾಡಿದ ಲೇಖನವನ್ನು ಮೊತ್ತೊಬ್ಬರು ಚೆಂದವಾಗಿ ಎಡಿಟ್ ಮಾಡಿ ಹಾಕಬಹುದು.
ಬರೆಯುವವರು ಆ ಪುಟದ ಮಿತಿ, ಅಲ್ಲಿನ ವಿಚಾರಗಳು, ಸಿದ್ದಾಂತ/ಧ್ಯೇಯಗಳನ್ನು ಗಮನಿಸಿ ಬರೆಯಬೇಕು ಮತ್ತು ಬರೆಯಲೇಬೇಕು. ಯಾಕಂದ್ರೆ ಪತ್ರಿಕೆ ಅದನ್ನು ಅಪೇಕ್ಷಿಸುತ್ತದೆ. ಇದಕ್ಕೆ ನಿಮ್ಮ ಸಹಮತವಿಲ್ಲದಿದ್ದರೆ, ನೀವು ಬರೆಯದಿದ್ದರಾಯ್ತು ಅಷ್ಟೆ!  ಎಲ್ಲ ಸಲವು ಉಪಸಂಪಾದಕರದ್ದೇ ತಪ್ಪು ಅನ್ನಲು ಸಾಧ್ಯವಿಲ್ಲ. ಹೆಚ್ಚಿನ ಸಲ ಬರಹಗಾರರ ತಪ್ಪುಗಳು ಇರುತ್ತೆ. ಕೆಲವು ಸಲ ಉಪಸಂಪಾದಕರ ತಪ್ಪಿರುತ್ತೆ. ಲೇಖನ ಸಂಪಾದಿಸುವ ಸಂಪಾದಕರುಗಳು ಸಾಕಷ್ಟಿದ್ದಾರೆ. ಆದರೆ ಲೇಖನವೊಂದನ್ನು ಅದ್ಭುತವಾಗಿಸಬಲ್ಲ ಸಂಪಾದಕರು ತೀರಾ ವಿರಳ ಎಂಬುದನ್ನು ಮೊದಲೇ ಹೇಳಿದೆ. ಆದರೆ ನೀವು ನಿರಂತರವಾಗಿ ಬರೆಯುತ್ತಿದ್ದರೆ, ನಾಲ್ಕಾರು ಸಲ ನಿಮ್ಮ ಹೆಸರು ಪತ್ರಿಕೆಯಲ್ಲಿ ಪ್ರಕಟವಾದರೆ ನಂತರ ನಿಮ್ಮ ಲೇಖನಗಳಿಗೆ ಕತ್ತರಿ ಪ್ರಯೋಗ ನಿಧಾನವಾಗಿ ಕಡಿಮೆಯಾಗುತ್ತದೆ. ಯಾಕೆಂದರೆ ನಿಮ್ಮ ಬರವಣಿಗೆ ಮೇಲೆ ಅವರಿಗೆ ನಂಬಿಕೆ ಬರುತ್ತದೆ. ಹೀಗಾಗಿ ಬರೆಯುವುದನ್ನು ನಿಲ್ಲಿಸಬೇಡಿ. ಬರೆಯುತ್ತಿರುವ ವೇದಿಕೆಯ ಇತಿಮಿತಿಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಲೇಖನ ತಿದ್ದುವವರು ಸ್ವಲ್ಪ ಕಾಳಜಿ ಇಟ್ಟು ಎಡಿಟ್ ಮಾಡಲಿ.

Read Full Post »