Feeds:
ಲೇಖನಗಳು
ಟಿಪ್ಪಣಿಗಳು

Archive for ಆಗಷ್ಟ್, 2015

ಉಡುಪಿಯೆಂಬ ಆನೆಕಾಲಿನಂಥ ಊರಲ್ಲಿ…!

udupiಜಯಂತ್ ಕಾಯ್ಕಿಣಿ ಗೋಕರ್ಣದ ಸಮುದ್ರ ತೀರದಂಚಿನ ಅನುಭವ, ಮುಂಬೈ ಶಹರೆಯ ಸವಿನೆನಪುಗಳನ್ನು ಕಥೆಯಾಗಿಸಿರುವುದನ್ನು ಓದುವಾಗ ಬಾಯಂಚಿನಲ್ಲಿ ಒಂದು ಬಗೆಯ ನೀರು ಬರುತ್ತೆ. ಚಿತ್ತಾಲರ ಕಥೆಗಳನ್ನು ಓದುವಾಗಲೆಲ್ಲ ಘಟ್ಟದ ಕೆಳಗಿನ ಚಿತ್ರಣ ಕಣ್ಮುಂದೆ ಕಾಡುತ್ತೆ. ತೇಜಸ್ವಿಯ ಮೂಡಿಗೆರೆ ನಮ್ಮನ್ನೆಲ್ಲ ಮಲೆನಾಡಿನಲ್ಲಿ ಪ್ರಯಾಣ ಬೆಳೆಸುತ್ತೆ. ಬರೆಯುವ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಜಾಗ ಕಾಡುವುದು, ಅವರು ಅದರ ಕುರಿತು ಆಗಾಗ ಬರೆಯುವುದು, ಸಾಧ್ಯವಿದ್ದಲೆಲ್ಲ ಆ ಊರನ್ನು ತುರುಕಿ ಸಂಭ್ರಮಿಸುವುದು ಸುಳ್ಳಲ್ಲ. ಹಾಗೆ ನನ್ನ ಪಾಲಿಗು ಸದಾ ಎದೆಭಾರವೆನಿಸುವ ಊರು ’ಉಡುಪಿ’.
ಬಹುಶಃ ನಾನು ನನ್ನೂರನ್ನು ಅಷ್ಟೊಂದು ಮಿಸ್ ಮಾಡಿಕೊಂಡೆ ಅನ್ನಿಸಲ್ಲ. ಆದ್ರೆ ಉಡುಪಿ ಎಂದಾಗ ಒಂಚೂರು ಎದೆಭಾರವಾಗುತ್ತೆ. ಯಾರೊ ಉಡುಪಿ-ಮಣಿಪಾಲದ ಹೆಸರು ಎತ್ತಿದರೆ ಕಿವಿ ನೆಟ್ಟಗಾಗುತ್ತೆ. ಅಂಥದ್ದೇನಿದೆ ಆ ಊರಲ್ಲಿ? ಅಷ್ಟ ಮಠಗಳ ಒಣ ಒಳ ಜಗಳ, ಜಾತ್ಯಾತೀತತೆ ವಾದ-ವಿವಾದ, ಮಣಿಪಾಲದ ಕತ್ತಲ ರಾತ್ರಿಯ ಪಬ್ಬು-ಬಾರುಗಳು, ಮಲ್ಪೆಯ ಸಮುದ್ರ ತೀರ, ಸಂತೆಕಟ್ಟೆಯ ಒಣ ಮೀನಿನ ವಾಸನೆ…ಉಡುಪಿಯೆಂದರೆ ಹೊರಜಗತ್ತಿನ ಸಾಕಷ್ಟು ಜನರ ಕಣ್ಣಿನಂಚಿಗೆ ಬರುವುದು ಇವಿಷ್ಟು ಮಾತ್ರ!
ಆದ್ರೆ ಉಡುಪಿಯನ್ನೇ ದೇಹವಾಗಿಸಿಕೊಂಡು, ಮಲ್ಪೆ ಸಮುದ್ರದ ಬಿಸಿ ಗಾಳಿಯಲ್ಲಿ ಉಸಿರಾಡಿ ಮರಳ ರಾಶಿಯಲ್ಲಿ ಹೊರಳಾಡಿದ ನನ್ನಂಥ ಅದೆಷ್ಟೊ ಮಲೆನಾಡಿನ ಹುಡುಗರ ಪಾಲಿಗೆ ಉಡುಪಿಯೆಂದೊಡನೆ ಬಿಚ್ಚಿಕೊಳ್ಳುವ ಅನುಭವ ಸಾವಿರಾರು!
ನಿಟ್ಟೂರು, ಸಂಪೆಕಟ್ಟೆ, ನಗರ, ಹೊಸನಗರದವರೆಲ್ಲ ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿಗೆಂದು ಘಟ್ಟದ ಕೆಳಗೆ ಇಣುಕಿದರೆ ಮೊದಲು ಕಾಣುವ ನಗರಿಯೇ ಉಡುಪಿ. ಸಾಗರ, ಸಿದ್ದಾಪುರದ ಮಂದಿ ಬಾಳೆಬರೆ ಘಾಟಿ ದಾಟಿ ಹೊಸಂಗಡಿ ಹವಾ ತೆಗೆದುಕೊಂಡು ಕಲಿಯಲು ಹೋಗುವುದು ಕೂಡ ಉಡುಪಿ-ಮಣಿಪಾಲಕ್ಕೆ.
ಅಂದ್ಹಾಗೆ ಮಣಿಪಾಲದಿಂದ ಜೋರಾಗಿ ’ಕೂಹೂ’ ಎಂದರೆ ಉಡುಪಿಗೆ ಕೇಳಿಸುತ್ತೆ. ಉಡುಪಿ ಬೋರ್ಡ್ ಹಾಕಿಕೊಂಡು ಇರುವ ಎಂಜಿಎಂ, ಯುಪಿಎಂಸಿ ಕಾಲೇಜು, ಇಂದ್ರಾಳಿಯೆಲ್ಲ ಒಂಧರ್ಥದಲ್ಲಿ ಇರೋದು ಮಣಿಪಾಲದಲ್ಲಿ. ಇಂದ್ರಾಳಿ ಏರು ಹತ್ತಿದರೆ ಮಣಿಪಾಲ ಸಿಗುತ್ತದೆ. ಎಷ್ಟೋ ಸಲ ನಾವೆಲ್ಲ ಪೆಟ್ಟು ಮುಗಿಸಿ ತಡರಾತ್ರಿಯಲ್ಲಿ ಮಣಿಪಾಲದಿಂದ ಉಡುಪಿಗೆ ಕಾಲ್ನಡಿಗೆಯಲ್ಲಿ ಹೋಗಿದ್ದು ಇದೆ.
’ಅರೆ ಪೆಟ್ಟು!’
ಬಹುಶಃ ಈಗೊಂದು ೧೦ ವರ್ಷದ ಕೆಳಗೆ ನೀವು ಕರಾವಳಿ ಭಾಷೆಯಲ್ಲಿ ಪೆಟ್ಟು ಎಂದರೆ ಬೇರೆಯದೆ ಅರ್ಥ ಬರುತ್ತಿತ್ತು. ’ಉಡುಪಿ-ಮಂಗಳೂರು ಅಂಡರ್‌ವರ್ಲ್ಡ್ ಅಡ್ಡವಂತೆ. ಮುಂಬೈ-ದುಬೈನಲ್ಲಿ ಇರುವ ಡಾನ್‌ಗಳು, ಶೆಟ್ಟರೆಲ್ಲ ಉಡುಪಿಗೆ ಆಗಾಗ ಬರುತ್ತಾರಂತೆ! ಅಲ್ಲಿ ಬದುಕುವುದು ಬಹಳ ಕಷ್ಟವಂತೆ’ ಎಂಬ ಮಾತು ಕೇಳುತ್ತಿತ್ತು. ಆದರೆ ನಾವೆಲ್ಲ ಓದುವ ಹೊತ್ತಿಗೆ ಆ ಪೆಟ್ಟಿನ ಪರಿಭಾಷೆ ಬದಲಾಗಿತ್ತು. ಅಂಥ ದೊಡ್ಡ ಮಟ್ಟದ ಹೊಡೆದಾಟ, ರೌಡಿಸಂ ಎಲ್ಲ ಅಕ್ಷರಶಃ ನಿಶಬ್ಧವಾಗಿತ್ತು. ಎಲ್ಲೊ ವರ್ಷಕ್ಕೊಂದು ಗ್ಯಾಂಗ್‌ವಾರ್ ಆದರೆ ಕರಾವಳಿಯ ಸಂಜೆಯ ಪತ್ರಿಕೆಗಳಿಗೆ ಹಬ್ಬದೂಟ!
ಮತ್ತೆ ಪೆಟ್ಟು ಅಂದ್ರೆ ಎಂಥದ್ದು ಮಾರಾಯ್ರೆ?
’ನಿಮಗೆಂಥ ಮಂಡೆಪೆಟ್ಟಾ?!’ ನೀವು ಉಡುಪಿಯ ಸುತ್ತಮುತ್ತಲಿನ ಜನರ ಬಾಯಲ್ಲಿ ದಿನಕ್ಕೆ ಕನಿಷ್ಟ ಹತ್ತು ಸಲ ಈ ಎಂಬ ಪದವನ್ನು ಕೇಳುತ್ತೀರಿ! ಅಂದಹಾಗೆ ನಾನು ಹೇಳಲಿಕ್ಕೆ ಹೊರಟಿರುವುದು ಈ ಮಂಡೆಪೆಟ್ಟಿನ ವಿಚಾರವೂ ಅಲ್ಲ ಮಾರಾಯ್ರೆ!
ಒಮ್ಮೆ ಅಮ್ಮ ಮನೆಯಿಂದ ಫೋನ್ ಮಾಡಿದಾಗ ’ಪೆಟ್ಟಲ್ಲಿ ಇದ್ದಿ. ಆಮೇಲೆ ಫೋನ್ ಮಾಡ್ತಿ’ ಅಂದು ಬಿಟ್ಟೆ. ಆವತ್ತು ಕೆಲಸ ಕೆಟ್ಟುಹೋಗಿತ್ತು ನೋಡಿ. ಉಡುಪಿಗೆ ಹೋಗಿ ಮಗ ಹಾಳಾಗಿ ಬಿಟ್ಟ. ಪೆಟ್ಟು, ಹೊಡೆದಾಟ ಎಂಬಿತ್ಯಾದಿ ಶುರು ಮಾಡಿಬಿಟ್ಟ ಎಂದು ಅಮ್ಮ ದಂಗಾಗಿ ಹೋಗಿದ್ದರು. ನಿಜ, ಬದುಕಿನಲ್ಲಿ ಹಾಳಾಗಲೇಬೇಕು ಎಂದು ನಿರ್ಧರಿಸಿದವರಿಗೂ ಈ ಉಡುಪಿ-ಮಣಿಪಾಲಕ್ಕಿಂತ ಒಳ್ಳೆ ಜಾಗ ಸಿಗಲಿಕ್ಕಿಲ್ಲ. ಮಣಿಪಾಲದ ಎಂಡ್‌ಪಾಯಿಂಟ್‌ನ್ನು ಅವರೆಲ್ಲ ಮರೆಯಲ್ಲಿಕ್ಕಿಲ್ಲ! ಆದ್ರೆ ಇದೇ ಉಡುಪಿ ನನ್ನಂಥ ಲಕ್ಷಾಂತರ ಮಂದಿಯ ಬದುಕನ್ನು ಉದ್ದಾರ ಮಾಡಿದೆ ಎಂಬಷ್ಟು ಕೃತಜ್ಞ ನಾನು.
ಭಾಸ್ಕರ ಭಟ್ರು, ಪ್ರಭಾಕರ್ ಭಟ್ರು, ರಮೇಶ, ರಾಜಾ, ಡಯಾನ ಕ್ಯಾಟೆರಿಂಗ್…ಪೆಟ್ಟಿಗೆ ಸೈ ಎನಿಸಿಕೊಂಡ ಹೆಸರುಗಳಿವು. ಬಹುಶಃ ಈ ಕ್ಯಾಟೆರಿಂಗ್ ಅನ್ನೋ ಪದ ಕಿವಿಗೆ ಬಿದ್ದ ಮೇಲೆ ಪೆಟ್ಟಿನ ಅರ್ಥ ತಿಳಿದಿರಬಹುದು. ಮದುವೆ, ಉಪನಯನದಿಂದ ಹಿಡಿದು ಬೊಜ್ಜದವರೆಗೆ ಎಲ್ಲ ಬಗೆಯ ಕಾರ್ಯಕ್ರಮಗಳಿಗೂ ’ಊಟ ಬಡಿಸುವ ವ್ಯವಸ್ಥೆ’ಯನ್ನು ಕರಾವಳಿ ಭಾಷೆಯಲ್ಲಿ ಸ್ವಚ್ಛಂದವಾಗಿ ’ಪೆಟ್ಟು’ ಎನ್ನುತ್ತಾರೆ.
ಈ ಪೆಟ್ಟಿನ ಜೊತೆಯಲ್ಲೆ ಅಂಟಿಕೊಂಡ ಮತ್ತೊಂದು ವಿಸ್ಮಯ ಕೊಂಕಣಿ ಹುಡುಗಿಯರು! ಕೊಂಕಣಿ ಹುಡುಗಿಯರ ವಿಚಾರ ಬಂದಾಗ ರಥಬೀದಿಯನ್ನು ಇಲ್ಲಿಗೆ ಎಳೆದು ತರದಿರಲು ಸಾಧ್ಯವೇ ಇಲ್ಲ. ’ಅಷ್ಟ ಮಠಗಳ ಕಟ್ಟೆಯ ಮೇಲೆ ಕುಳಿತು ಲೈನ್ ಹೊಡೆಯುವುದು’ ಎಂಬ ಪರಿಕಲ್ಪನೆಯನ್ನು ನಮಗೆಲ್ಲ ಕಲಿಸಿದ್ದೆ ಈ ಕೊಂಕಣಿ ಹುಡುಗಿಯರು.
ಎಲ್ಲ ಸರಿ ಈ ಪೆಟ್ಟಿಗೂ ಕೊಂಕಣಿ ಹುಡುಗಿಯರಿಗೂ ಏನು ಸಂಬಂಧ? ಇದೊಂಥರ ಉಡುಪಿ-ಮಣಿಪಾಲದ ಬಾಂಧವ್ಯವಿದ್ದಂತೆ! ಇಡೀ ಉಡುಪಿ-ಮಣಿಪಾಲವನ್ನು ಪೂರ್ತಿಯಾಗಿ ಜಾಲಾಡಿದರೆ ಹೆಚ್ಚು ಸಿಗುವುದು ಮಾಧ್ವರು ಮತ್ತು ಕೊಂಕಣಿಗರು. ರಥಬೀದಿ ಬಿಟ್ಟರೆ ಸಿಗುವುದು ವೆಂಕಟರಮಣಸ್ವಾಮಿ ದೇವಸ್ಥಾನ.
’ಉಡುಪಿ ಹೋಟೆಲ್‌ಗಳು’ ವಿಶ್ವದಲ್ಲೇ ಜನಪ್ರಿಯ. ಆದ್ರೆ ನೀವು ನಿಜವಾಗ್ಲು ಅಲ್ಲಿನ ಊಟದ ರುಚಿ ನೋಡಬೇಕು ಅಂದ್ರೆ ಉಡುಪಿ-ಮಣಿಪಾಲದ ಯಾವುದಾದ್ರೊಂದು ಮದ್ವೆ ಊಟ ಮಾಡಬೇಕು. ರಥಬೀದಿಯ ಕೃಷ್ಣಾಪುರ, ಪುತ್ತಿಗೆ ಮಠದ ಛತ್ರದಿಂದ-ಅಂಬಲ್ಪಾಡಿ ದೇವಸ್ಥಾನ, ಹೈವೆಯ ಶ್ಯಾಮಿಲಿವರೆಗೆ, ಪಿಪಿಸಿ ಬಳಿಯ ಎಲ್‌ವಿಟಿ-ಅಂಬಾಗಿಲಿನ ಎಲ್‌ವಿಟಿವರೆಗೆ, ಇಂದ್ರಾಳಿಯ ಶಾರದಾ ಕಲ್ಯಾಣಮಂಪದಿಂದ-ಉದ್ಯಾವರ, ಹಿರಿಯಡ್ಕದವರೆಗೆ…ಒಂಥರ ಬೆಂಗಳೂರಿನಲ್ಲಿ ಬಾರ್‌ಗಳು ಸಿಕ್ಕಂತೆ ಉಡುಪಿ-ಮಣಿಪಾಲದಲ್ಲಿ ಕಲ್ಯಾಣ ಮಂಟಪಗಳು ಸಿಗುತ್ತವೆ.
ಒಂದು ಕಾಲದಲ್ಲಿ ನಮ್ಮನ್ನೆಲ್ಲ ಹೊಟ್ಟೆ ಹೊರೆದಿದ್ದು, ಸಾಕಿದ್ದು ಇದೇ ಕಲ್ಯಾಣ ಮಂಟಪಗಳು ಮತ್ತು ಪೆಟ್ಟು. ಮಲೆನಾಡಿನಿಂದ ಉಡುಪಿಗೆಂದು ನಾವೆಲ್ಲ ಓದಲಿಕ್ಕೆ ಬರುತ್ತಿದ್ದಿದ್ದಕ್ಕೆ ಪ್ರಮುಖ ಕಾರಣ ಉಡುಪಿಯಲ್ಲಿ ಶಿಕ್ಷಣ ತುಂಬಾ ಅಗ್ಗ ಮತ್ತು ಅದ್ಭುತ. ಈಗೊಂದು ೧೦ ವರ್ಷದ ಕೆಳಗೆ ಮಲೆನಾಡಿನ ಪ್ರತಿ ಮನೆಯಲ್ಲೂ ಬಡತನ. ಇವತ್ತಿನಂತೆ ಪ್ರಿಕೆಜಿ-ಎಲ್‌ಕೆಜಿಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಮಕ್ಕಳನ್ನು ಓದಿಸುವ ಸ್ಥಿತಿಯಲ್ಲಿ ಯಾರು ಇರಲಿಲ್ಲ ಮತ್ತು ಅಷ್ಟು ಹುಚ್ಚರು ಆಗಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆ ಫಲಿತಾಂಶ ಬರದಿದ್ದರೆ ’ಮನೆಯಲ್ಲಿ ಸಗಣಿ ತೆಗೆದುಕೊಂಡು, ಸೋಗೆ ಬಾಚಿಕೊಂಡು’ ಇರು ಮಗನೆ ಎನ್ನುತ್ತಿದ್ದರು. ಆಗ ನಮಗೆಲ್ಲ ಕಾಣಿಸುತ್ತಿದ್ದಿದ್ದು ಉಡುಪಿಯ ಅಷ್ಟಮಠಗಳು ನೀಡುವ ಉಚಿತ ವಸತಿ ಮತ್ತು ಕೃಷ್ಣಮಠದ ಉಚಿತ ಊಟ. ನಾವೆಲ್ಲ ಯಾವತ್ತು ಅದಕ್ಕೆ ಚಿರಋಣಿಗಳು.
ನೀವು ಇದನ್ನು ಒಪ್ಪದಿರಬಹುದು. ಇದಕ್ಕೆ ಜಾತಿಯ ಲೇಪ ಅಂಟಿಸಿ ಗಲಾಟೆ ಮಾಡಬಹುದು. ಆದ್ರೆ ನಾನು ಮಾತ್ರ ತುಂಬಾ ನೋವಿನಿಂದ ಹೇಳ್ತೀನಿ. ಕೆಳವರ್ಗದವರಿಗೆ ಪ್ರತಿ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಉಚಿತ ಹಾಸ್ಟೆಲ್‌ಗಳಿವೆ. ಆದರೆ ಮೇಲ್ವರ್ಗದ ಒಬ್ಬ ಬಡ ಜಾಣ ಓದ್ತೀನಿ ಅಂದ್ರೆ ಆತನಿಗಿರುವ ಆಸರೆ ಉಡುಪಿ ಮತ್ತು ಉಜಿರೆಗಳು ಮಾತ್ರ. ಇದು ನುಂಗಲು ಕಹಿಯಾದ್ರು ಇವತ್ತಿಗೂ ಸತ್ಯ. ಬಹುಶಃ ನನ್ನಲ್ಲಿ ಉಡುಪಿ ಎಂಬುದು ಇವತ್ತಿಗೂ ಎದೆಯಲ್ಲಿ ಭಾರ ಹುಟ್ಟು ಹಾಕುವುದಕ್ಕೆ ಇದು ಒಂದು ದೊಡ್ಡ ಕಾರಣ.
ಹೋಗ್ಲಿ ಬಿಡಿ ನಾವು ಹುಡುಗಿ, ಲೈನು, ರಥಬೀದಿಯಲ್ಲಿದ್ದಾಗ ಇಂಥ ಗಂಭೀರ ವಿಷಯಗಳು ಬೇಡ! ನಮಗೆಲ್ಲ ಪೆಟ್ಟು ಎಂಬುದು ಪಾರ್ಟ್‌ಟೈಂ ಜಾಬ್. ಫುಲ್‌ಟೈಂ ಸಂಪಾದನೆಯ ಮಾರ್ಗ. ಸತ್ಯವಾಗಲು ನಾನಂತು ಪಿಪಿಸಿಯಲ್ಲಿ ಡಿಗ್ರಿಯ ೫,೫೦೦ರೂ ಶುಲ್ಕವನ್ನು ಮೂರು ವರ್ಷವೂ ಈ ಪೆಟ್ಟಿನ ಸಂಪಾದನೆಯಿಂದಲೆ ತುಂಬಿರುವೆ. ನನ್ನಂಥ ಹಲವರದ್ದು ಇದೇ ಕಥೆ. ಆವತ್ತು ಮಧ್ಯಾಹ್ನದ ಊಟ ಬಡಿಸಿದ್ರೆ ೧೧೦ರೂ. ಕೊಡುತ್ತಿದ್ದರು. ರಾತ್ರಿ ಊಟಕ್ಕೂ ಸುಮಾರು ಇಷ್ಟೆ ಹಣ. ಬೆಳಿಗ್ಗೆ ತಿಂಡಿಗೆ ೪೦-೫೦ರೂ. ನಾವೆಲ್ಲ ಬೆಳಿಗ್ಗೆ ತಿಂಡಿ ಬಡಿಸಲು ಹೋಗುತ್ತಿದ್ದಿದ್ದು ರಜಾದಿನಗಳಲ್ಲಿ ಮಾತ್ರ. ಕಾಲೇಜು ೪.೩೦ಕ್ಕೆ ಮುಗಿಯುತ್ತಿದ್ದರಿಂದ ರಾತ್ರಿ ಊಟ ಬಡಿಸುವುದು ಸಮಸ್ಯೆ ಆಗುತ್ತಿರಲಿಲ್ಲ.
ಆದ್ರೆ ದೊಡ್ಡ ಸವಾಲು ಇದ್ದಿದ್ದು ಮಧ್ಯಾಹ್ನದ ಪೆಟ್ಟಿನಲ್ಲಿ. ನಮಗೆ ಪಿಪಿಸಿಯಲ್ಲಿ ಮಧ್ಯಾಹ್ನನದ ಕೊನೆ ಅವಧಿ ವಾರದಲ್ಲಿ ೩ ದಿನ ರಮೇಶಣ್ಣನ ಸಂಸ್ಕೃತ ಕ್ಲಾಸು. ಹೀಗಾಗಿ ಶೇ.೬೫ ಅಂಟೆಡೆನ್ಸ್‌ಗಿಂತ ಮಿಕ್ಕೆಲ್ಲ ಕ್ಲಾಸುಗಳೆಲ್ಲ ಬಂಕು. ಇನ್ನು ಊಟದ ನಂತರದ ಮೊದಲ ಅವಧಿ ಕೃಷ್ಣಮೂರ್ತಿಯವರ ಇಂಗ್ಲಿಷ್. ಪೆಟ್ಟು ಇರಲಿ, ಇರದಿರಲಿ ಅವರ ಕ್ಲಾಸ್‌ಗೆ ಹೋಗಿದ್ದು ಅಷ್ಟರಲ್ಲೆ ಇದೆ ಬಿಡಿ! ಸಮಸ್ಯೆಯಾಗುತ್ತಿದ್ದಿದ್ದು ಒಂದೊಂದು ಸಲ ಇವರೆಡು ಅವಧಿಯಲ್ಲಿ ಒಂದು ರಾಘು ಸರ್ ಗಣಿತ ಅಥವಾ ಎ.ಪಿ.ಭಟ್ಟರ ಫಿಸಿಕ್ಸ್ ಬಂದುಬಿಡುತ್ತಿತ್ತು. ಇನ್ನೂ ಮಜ ಅಂದ್ರೆ, ನಾವು ಈ ಕ್ಲಾಸ್‌ಗೂ ಬಂಕ್ ಹಾಕಿ ಪೆಟ್ಟಿಗೆ ಹೋಗುತ್ತಿದ್ದೆವು. ಯಾವುದೋ ಊಟದ ಪಂಕ್ತಿಯಲ್ಲಿ ನಡುಮಧ್ಯದಲ್ಲಿ ರಾಘು ಸಾರ್ ಪ್ರತ್ಯಕ್ಷ! ಅಲ್ಲಿಗೆ ನಮ್ಮ ಕಥೆ ಫಿನಿಷ್. ಮುಂದಿನ ಕ್ಲಾಸ್‌ನಲ್ಲಿ ನನಗೊಂದು ಪ್ರಶ್ನೆ ಕಟ್ಟಿಟ್ಟ ಬುತ್ತಿ! ಜೊತೆಗೆ ನಿನ್ನೆ ಪೆಟ್ಟಿಗೆ ಹೋಗಿದ್ದಕ್ಕೆ ಒಂದಷ್ಟು ಟಾಂಟ್! ಇದು ಮೂರು ವರ್ಷಗಳಲ್ಲಿ ಅದೆಷ್ಟು ಸಲ ಆಗಿದೆಯೋ ಗೊತ್ತಿಲ್ಲ. ರಮೇಶಣ್ಣ ಕೊಠಡಿಗೆ ಕರೆದು ಅದೆಷ್ಟು ಸಲ ಬೈದಿದ್ದಾರೊ ಲೆಕ್ಕವಿಲ್ಲ!
ಕಾಲೇಜು ದಿನಗಳು ಅಂದ್ರೆ ಹಾಗೆ. ಪ್ರತಿಯೊಬ್ಬರಿಗು ಅವರ ಕಲ್ಪನೆಯ, ಕನಸಿನ ಒಂದೊಂದು ಹುಡುಗಿ. ಕೆಲವರಿಗೆ ೩-೪! ನಮಗೆ ನಾವೇ ಅಂದುಕೊಂಡು ಯಾರ‍್ಯಾರನ್ನೋ ಲವ್ ಮಾಡುವುದು. ಇಂಥವರಿಗೆ ವೇದಿಕೆ ರಥಬೀದಿ. ಆವತ್ತಿನ ಕಾಲಕ್ಕೆ ಹೆಚ್ಚಾಗಿ ಚೆಂದ ಇರುತ್ತಿದ್ದಿದ್ದು, ಸ್ವಲ್ಪ ಮಾಡ್ ಆಗಿ ಬರುತ್ತಿದ್ದವರಲ್ಲಿ ಹೆಚ್ಚಿನವರು ಕೊಂಕಣಿ ಹುಡುಗಿಯರು. ಊರಿಗೆ ಬಂದವನು ನೀರಿಗೆ ಬರದೇ ಇರುವನೆ ಎನ್ನುವಂತೆ ಎಲ್‌ವಿಟಿಗೆ ಬಂದು ವೆಂಕಟರಮಣನಿಗೆ ಕೈಮಗಿದವರು ರಥಬೀದಿಗೆ ಬರದೇ ಇರುವರಾ?! ನಮ್ಮ ಹುಡುಗರು ಆ ಹುಡುಗಿಯರನ್ನು ನೋಡಲಿಕ್ಕೆ ಅಂತ ಅಷ್ಟ ಮಠದ ಕಟ್ಟೆಯ ಮೇಲೆ ಒಂದೊಂದು ಖಾಯಂ ಜಾಗ ಮಾಡಿಕೊಂಡಿರುತ್ತಿದ್ದರು. ಆ ಹುಡುಗಿಯರಿಗೂ ಇವರು ಲೈನ್ ಹಾಕುವುದು, ಕಿಚಾಯಿಸುವುದು ಎಲ್ಲವೂ ಗೊತ್ತಿರುತ್ತಿತ್ತು(ಇದು ಸಕ್ಸಸ್ ಆಗಿ ರಿಯಲ್ ಲವ್ ಆಗಿದ್ದು ಬೆರಳೆಣಿಕಯಷ್ಟು ಮಾತ್ರ)ಪ್ರತಿದಿನ ಸಂಜೆ ಎಲ್ಲ ಮಠಗಳು ಎದುರು ಒಂದಷ್ಟು ಹುಡುಗರು ಈ ರೀತಿ ನೋಡಲು ಸಿಗುತ್ತಿದ್ದರು. ನಮಗೆಲ್ಲ ಈ ಹುಡುಗ-ಹುಡುಗಿಯರ ಸಂಜ್ಞೆಯ ಸಂಭಾಷಣೆ ನೋಡುವುದೇ ಖುಷಿ. ಯಾಕಂದ್ರೆ ನನ್ನ ಹುಡುಗಿ ಇದ್ದಿದ್ದು ರಥಬೀದಿಯಿಂದ ೨೦ ಕಿಲೋಮೀಟರ್ ದೂರದಲ್ಲಿ! ಆಕೆ ಒಂದು ದಿನವೂ ರಥಬೀದಿಗೆ ಬಂದಿದ್ದನ್ನು ನಾ ಕಾಣಲಿಲ್ಲ!!!
ಕೊಂಕಣಿ-ಮಾಧ್ವ, ಹುಡುಗಿ-ಪೆಟ್ಟು…ಉಡುಪಿಯೆಂದರೆ ಇವಿಷ್ಟೇನಾ? ಖಂಡಿತ ಇಲ್ಲ. ಇದರಾಚೆಗಿನ ಉಡುಪಿ ಸಾಕಷ್ಟಿದೆ ಮತ್ತು ಸುಂದರವಾಗಿದೆ. ವಿದ್ಯಾರ್ಥಿ ಜೀವನವೇ ಒಂದು ರೀತಿಯಲ್ಲಿ ಬದುಕಿನ ಸುವರ್ಣಯುಗ. ಮದುವೆಯಾಗಿ, ಲೈಫ್‌ನಲ್ಲೊಂದು ಹೆಂಡ್ತಿ ಬಂದು, ದಿನ ನಿತ್ಯದ ಜಂಜಾಟದ ನಡುವೆ ಮನಸ್ಸಿಗೇನಾದ್ರು ಒಂಚೂರು ರಿಲ್ಯಾಕ್ಸ್ ನೀಡುವುದು ಅಂತಿದ್ದರೆ, ಈ ದಿನಗಳ ನೆನಪು ಮಾತ್ರ.
ಉಡುಪಿಯ ಸೊಳ್ಳೆ ಮತ್ತು ಜನರ ಬಗ್ಗೆ ಹೇಳಲೇ ಬೇಕು. ಇಲ್ಲಿ ಅತ್ಯಂತ ಉಪದ್ರವಿ ಎಂದರೆ ಸೊಳ್ಳೆಗಳು. ಇಲ್ಲಿನ ಸೆಕೆಗೋ ಅಥವಾ ನಗರಸಭೆಯ ಅಸಡ್ಡೆಯಿಂದಾದ ಕೊಳಕಿಗೋ ಉಡುಪಿಯಲ್ಲಿ ವಿಪರೀತ ಸೊಳ್ಳೆ. ನಿಮಗೆ ಉಡುಪಿಗೆ ಕಾಲಿಟ್ಟ ತಕ್ಷಣ ಭಯ ಹುಟ್ಟಿಸುವ ಸಂಗತಿಯೆಂದರೆ ಇಲ್ಲಿನ ’ಆನೆಕಾಲು ರೋಗ’ ಪೀಡಿತರು. ಅವರ ಕಾಲನ್ನೊಮ್ಮೆ ನೀವು ನೋಡಿದ್ರೆ ಖಂಡಿತಾ ಉಡುಪಿಯಲ್ಲಿ ಇರೋದು ಬೇಡ ಅನ್ನಿಸುತ್ತೆ. ಎದೆ ಝಲ್ ಅನ್ನಿಸುತ್ತೆ. ಅದನ್ನು ಬಿಟ್ಟರೆ, ಉಡುಪಿಯಲ್ಲಿದ್ದು ವರ್ಷಕ್ಕೊಮ್ಮೆ ಮಲೇರಿಯಾ ಬರಲಿಲ್ಲ ಅಂದ್ರೆ ಆ ವ್ಯಕ್ತಿಯ ಹುಟ್ಟಿನಲ್ಲೇ ಏನೋ ದೋಷವಿದೆ ಎಂದರ್ಥ! ಅಷ್ಟರ ಮಟ್ಟಿಗೆ ಸೊಳ್ಳೆಗಳು ಈ ಅವಳಿ ನಗರವನ್ನು ಆಳುತ್ತವೆ.
ಅತ್ಯಂತ ನಿರುಪದ್ರವಿಗಳೆಂದರೆ ಇಲ್ಲಿನ ಜನ. ನಮ್ಮ ಅದಮಾರು ಮಠದಿಂದ ಪಿಪಿಸಿಗೆ ಸುಮಾರು ೫ ನಿಮಿಷದ ಹಾದಿ. ಆ ಹಾದಿ ಒಂಥರ ಕೊಂಕಣಿ ಓಣಿ. ಜಪಾನ್ ಸೂರ್ಯ ಮುಳಗದ ನಾಡಂತೆ. ಹಾಗೆ ಈ ಗಲ್ಲಿ ಸೂರ್ಯಕಿರಣ ಮನೆಯೊಳಗೆ ಪ್ರವೇಶಿಸದ ನಾಡು! ಈ ಮನೆಗಳ ಬಾಗಿಲು ತೆರೆಯುವುದು ಬಹುಶಃ ನವರಾತ್ರಿ ಶಾರಾದದೇವಿ ಉತ್ಸವವಂದು ಮಾತ್ರ. ಮಿಕ್ಕ ದಿನಗಳಲ್ಲಿ ಆ ಮನೆಗಳಲ್ಲಿ ಜನ ಇದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಬಹುಶಃ ಇಲ್ಲಿನ ಜನ ಜೀವನ ಪೂರ್ತಿ ದುಡ್ಡು ಉಳಿಸಿ ಮದ್ವೆಗೆ ಖರ್ಚು ಮಾಡುತ್ತಾರೇನೋ ಎಂದು ಎಷ್ಟೋ ಸಲ ನನಗನ್ನಿಸಿದ್ದಿದೆ. ಹಾಗೆ ಮಾಡಿದ ಮದ್ವೆಯಲ್ಲಿ ಇವತ್ತಿನಂತೆ ಡೈವರ್ಸ್ ಆಗದಿದ್ದರೆ, ಮದ್ವೆ ಮಾಡಿದವ ಅಪ್ಪ-ಅಮ್ಮ ಬಚಾವ್. ಇಲ್ಲವಾದ್ರೆ ಜೀವನ ಪೂರ್ತಿ ಮಾಡಿದ ಸೇವಿಂಗ್ ಯಜ್ಞ ’ಸ್ವಾಹಾ!’
ಏಕಾದಶಿ, ಜೀವನದ ಹಸಿವನ್ನೆಲ್ಲ ನೀಗಿಸುವ ದಿನ. ಯಾಕಂದ್ರೆ ಏಕಾದಶಿ ದಿನ ಕೃಷ್ಣ ಮಠದಲ್ಲಿ ಊಟವಿಲ್ಲ. ಆವತ್ತು ನಾವೆಲ್ಲ ಜೈಲಿನಿಂದ ಬಿಡುಗಡೆಯಾದ ಹಕ್ಕಿಯಂತೆ. ಒಂದು ಗುಟುಕಿನಲ್ಲಿ ೨೦-೩೦ ಚಪಾತಿ ತಿಂದು ಕಾಮತ್ ಹೊಟೇಲ್‌ನ ಅನ್‌ಲಿಮಿಟೆಡ್ ಊಟಕ್ಕೆ ಕತ್ತರಿ ಹಾಕಿಸಿದ ಶಾಪ ಖಂಡಿತ ಇವತ್ತಿಗೂ ನಮ್ಮ ಮೇಲಿದೆ! ಕಿದಿಯೂರು, ಮಿತ್ರಸಮಾಜ, ರಥಬೀದಿಯ ಆಚಾರ್ಯ ದರ್ಶಿನಿ ಮರೆಯಲಾಗದ ಬುತ್ತಿಗಳು.
ಊಹುಂ, ಉಡುಪಿಯೆಂದರೆ ಇವಿಷ್ಟೆ ಅಲ್ಲ. ಈ ಕಥೆಯೂ ಕರಾವಳಿ ಜನರ ’ಉದಯವಾಣಿ ಪತ್ರಿಕೆ ಇದ್ಹಂಗೆ! ಇಲ್ಲಿನ ಜನಕ್ಕೆ ಉದಯವಾಣಿ ಪತ್ರಿಕೆ ಇಲ್ಲದೆ ಖಂಡಿತ ಇವತ್ತಿಗೂ ಬೆಳಗಾಗುವುದಿಲ್ಲ. ಇದ್ನೆಲ್ಲ ಹೇಳಲು ಕುಳಿತರೆ ಪದಗಳು ಸಿಗೋದಿಲ್ಲ. ಸಮುದ್ರದ ನೀರಿನಂತೆ ಮೊಗೆದಷ್ಟು ಮುಗಿಯದ ಈ ನಗರಿಯಲ್ಲಿ ರಥಬೀದಿಯ ಉತ್ಸವ ನನ್ನಂಥವನ ಪಾಲಿಗೆ ಸದಾ ಕಣ್ಣಂಚಿನಲ್ಲಿ ಉಳಿಯುತ್ತೆ…

Read Full Post »

ಪೋರ್ನ್‌ ಬ್ಯಾನ್‌ ರಾಷ್ಟ್ರೀಯ ವಿಪತ್ತು ಎಂಬಂತೆ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಫೇಸ್ಬುಕ್‌, ವಾಟ್ಸಪ್‌ನಲ್ಲಿ ಒಂದಷ್ಟು ಜೋಕುಗಳು ಹರಿದಾಡುತ್ತಿವೆ. ಪರ-ವಿರೋಧದ ನಿಲುವುಗಳು ಇದ್ದೇ ಇದೆ! ನೀವು ಯಾವುದೇ ಸೆಕ್ಸ್‌ ವೀಡಿಯೋ ನೋಡಿದ್ರೂ, ಅದು ಸಹಜವಾಗಿದ್ದಲ್ಲ, ಸಂಪಾದನೆಗೊಂಡ ಆವೃತಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಕ್ಯಾಮೆರ ಫ್ರೇಮ್‌ಗಳು, ಬದಲಾಗುವ ಸ್ಥಳಗಳು, ಮ್ಯೂಸಿಕ್‌ನಲ್ಲಿನ ವ್ಯತ್ಯಯಗಳು ಎಲ್ಲವೂ ಕೂಡ ಇದೊಂದು ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋನಂತೆ ಎಡಿಟೆಡ್‌ ಆವೃತಿ ಮತ್ತು ಪೂರ್ತಿ ಸ್ಕ್ರಿಪ್ಟೆಡ್‌ ಎಂಬುದನ್ನು ಸೂಚಿಸುತ್ತದೆ.
ಜಗತ್ತಿಗೆ ಚಲಿಸುವ ಚಿತ್ರಗಳ ಪರಿಕಲ್ಪನೆ ಬಂದಾಗಿನಿಂದ ಈ ಪೊರ್ನೊಗ್ರಫಿಯ ಇತಿಹಾಸ ಸಿಗುತ್ತೆ. ಅಂದ್ರೆ ೧೮೯೦ರ ದಶಕದಿಂದಲೆ ಈ ಉದ್ಯಮ ಆರಂಭವಾಗಿದ್ದು ಎಂಬ ಅನುಮಾನದಿಂದ ಗೂಗಲ್‌ನಲ್ಲಿ ಇಂಥ ಚಿತ್ರಗಳು ಎಲ್ಲಿ ತಯಾರಾಗುತ್ತವೆ, ಹೇಗೆ ತಯಾರಾಗುತ್ತವೆ, ಇವುಗಳ ಹಕ್ಕಿಕತ್ತು ಏನು ಎಂಬ ಕುರಿತು ಒಂದಷ್ಟು ದಿನದ ಹಿಂದೆ ಸುಮ್ಮನೆ ಜಾಲಾಡಿದ್ದೆ.
ಈ ಪೋರ್ನ್‌ ವೀಡಿಯೋ ಉತ್ಪಾದಕ ಪ್ರೊಡೆಕ್ಷನ್‌ ಹೌಸ್‌ಗಳು ಮುಖ್ಯವಾಗಿ ಬೇರು ಬಿಟ್ಟಿರುವುದು ಯೂರೋಪ್‌ ಮತ್ತು ಅಮೆರಿಕದಲ್ಲಿ. ಒಂದು ಅಂದಾಜಿನ ಪ್ರಕಾರ ೨೦೧೨ರವೇಳೆಗೆ ಈ ನೀಲಿಚಿತ್ರ ಜಗತ್ತಿನ ವಾರ್ಷಿಕ ಆದಾಯ ೧೫-೨೦ ಶತಕೋಟಿ ಡಾಲರ್‌. ಅಮೆರಿಕದ ೨ ಪ್ರಮುಖ ವೆಬ್‌ಸೈಟ್‌ಗಳು ವರ್ಷಕ್ಕೆ ಸುಮಾರು ೪ ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆಸುತ್ತಿವೆ. ಅಲ್ಲಿಗೆ ಇದೊಂದು ವ್ಯವಸ್ಥಿತ ಉದ್ಯಮ ಎಂಬುದನ್ನು ಖಾತ್ರಿಪಡಿಸಿಕೊಂಡು ಇಂಟರ್‌ನೆಟ್‌ನಲ್ಲಿ ಜಾಲಾಡುತ್ತ ಹೋದಾಗ ನನಗೆ ಇಂಗ್ಲಿಷ್‌ನ ೨ ಅತ್ಯದ್ಭುತ ಲೇಖನ ಸಿಕ್ಕಿತ್ತು.
ಮುಖ್ಯವಾಗಿ ಅಮೆರಿಕದ ಸ್ಯಾನ್‌ ಫೆರ್ನಾಂಡೊ ವ್ಯಾಲಿ ಇಂಥ ಚಿತ್ರಗಳನ್ನು ಉತ್ಪಾದಿಸುವ ಅತಿ ಹೆಚ್ಚು ಪ್ರೊಡೆಕ್ಷನ್‌ ಹೌಸ್‌ಗಳನ್ನು ಹೊಂದಿರುವ ಅಡ್ಡ. ಅಲ್ಲಿಗೆ ಭೇಟಿ ನೀಡುವ ಲೇಖಕಿಯೊಬ್ಬಳು ಅಲ್ಲಿನ ಇಡೀ ಜಗತ್ತನ್ನು ವಿವರಿಸಿ ಒಂದು ಅದ್ಭುತವಾದ ಲೇಖನ ಬರೆಯುತ್ತಾಳೆ. ಇಡೀ ಪೋರ್ನ್‌ ಜಗತ್ತು ಒಂದು ಹಾಲಿವುಡ್‌ ಸಿನಿಮಾ ಉದ್ಯಮದಂತೆ ಎಂಬುದನ್ನು ಆಕೆ ಬರೆಯುತ್ತಾಳೆ. ಅಲ್ಲೊಬ್ಬ ನಿರ್ದೇಶಕ ಇರುತ್ತಾನೆ, ಆತನಿಗೆ ಸಹಾಯಕರು ಇರುತ್ತಾರೆ. ಸ್ಕ್ರಿಪ್ಟ್‌ ಇರುತ್ತೆ. ಕಾಲ್‌ಶೀಟ್‌ ಕೊಟ್ಟ ಸಮಯಕ್ಕೆ ಪೋರ್ನ್‌ ಮಾಡೆಲ್‌ಗಳು ಬರುತ್ತಾರೆ. ಶೂಟಿಂಗ್‌ ಮುಗಿಸಿಕೊಂಡು ಹೋಗುತ್ತಾರೆ ಎಂಬುದರಿಂದ ಹಿಡಿದು ಯಾವ್ಯಾವ ಫ್ರೇಮ್‌ಗಳು ಎಲ್ಲಿ, ಹೇಗೆ ಶೂಟ್ ಆಗುತ್ತೆ ಎಂಬುದನ್ನು ಆಕೆ ವಿವರಿಸುತ್ತಾಳೆ.
ಇದಿಷ್ಟು ಕಾನೂನಿನ ಅಂಗೀಕೃತ ಚೌಕಟ್ಟಿನಲ್ಲಿ ನಡೆಯುವ ನೀಲಿ ಚಿತ್ರ ಉದ್ಯಮದ ಕಥೆ. ಅಂದ್ರೆ ಈ ಚಿತ್ರ ನಿರ್ಮಾಣ ಸಂಸ್ಥೆಗಳು ಅಮೆರಿಕ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಇಲ್ಲಿ ಬರುವ ನಟ, ನಟಿ, ನಿರ್ದೇಶಕರೆಲ್ಲರಿಗೆ ಸಂಭಾವನೆ ಕೊಡುತ್ತವೆ. ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ಇದೊಂದು ಹೊಟ್ಟೆ ಪಾಡಿನ ಉದ್ಯಮ. ಕನ್ನಡದಲ್ಲಿ ದಿನಕ್ಕೆ ೫೦ ಧಾರಾವಾಹಿಗಳು ಓಡುವಂತೆ ಅಲ್ಲಿಯೂ ದಿನಕ್ಕೆ ನೂರಾರು ಪೋರ್ನ್‌ ಚಿತ್ರಗಳ ಶೂಟಿಂಗ್‌ ನಡೆಯುತ್ತದೆ. ವೆಬ್‌ಸೈಟ್‌, ಡಿವಿಡಿ, ಪ್ರಿಂಟ್‌ ಮುಂತಾದ ಮಾಧ್ಯಮಗಳ ಮೂಲಕ ಅವು ಬಿತ್ತರಗೊಳ್ಳುತ್ತವೆ. ಅದ್ರಿಂದ ಸಂಸ್ಥೆ ಆದಾಯ ಗಳಿಸುತ್ತದೆ. ಹೀಗಾಗಿ ಇಲ್ಲಿ ದುಡ್ಡಿಗಾಗಿ ಅಥವಾ ಚಪಲ ತೀರಿಸಿಕೊಳ್ಳಲು ಇಷ್ಟ ಇದ್ದವರು ಮಾತ್ರ ಕೆಲಸ ಮಾಡುತ್ತಾರೆ.
ಆದರೆ ಇದೇ ಜಗತ್ತಿನ ಇನ್ನೊಂದು ಮುಖವಿದೆ. ಅದು ಮಾಫಿಯ ಜಗತ್ತು. ತೆರಿಗೆ ರಹಿತವಾಗಿ, ಕಾನೂನುಬಾಹೀರವಾಗಿ ನಡೆಯುವ ಜಗತ್ತಿದು. ಇಲ್ಲಿ ಹೆಣ್ಣುಮಗಳೊಬ್ಬಳಿಗೆ ಡ್ರಗ್‌ ನೀಡಿಯೋ, ಕಿಡ್ನಾಪ್‌ಮಾಡಿಯೋ, ಬೆದರಿಕೆಯಿಂದಲೊ ನೀಲಿ ಚಿತ್ರಗಳು ತಯಾರಾಗುತ್ತವೆ. ಯಾವುದೋ ಹೊಟೇಲ್‌ನಲ್ಲಿ, ಬಚ್ಚಲು ಮನೆಯಲ್ಲಿ ಸಿಸಿ ಕ್ಯಾಮೆರ ಇಟ್ಟು ಶೂಟಾದ ಅಸ್ಪಷ್ಟವಾದ, ಲೈಟಿಂಗ್‌ ಇಲ್ಲದ, ಎಡಿಟಿಂಗ್ ಇಲ್ಲದ ವೀಡಿಯೋಗಳು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತವೆ! ಇದೊಂದು ಅಪಾಯಕಾರಿ ಪ್ರಪಂಚ. ಅನೇಕ ಹೆಣ್ಣುಮಕ್ಕಳ ಬದುಕನ್ನು ಬೀದಿಗೆ ತರುವ ಪ್ರಪಂಚ. ಇದ್ರಿಂದ ಸರ್ಕಾರಕ್ಕೆ ನಯಾ ಪೈಸೆ ಆದಾಯವೂ ಬರುವುದಿಲ್ಲ. ಅಮೆರಿಕ ಸರ್ಕಾರ ಇಂಥವರನ್ನು ಹಿಡಿದು, ಹಿಡಿದು ಬುಟ್ಟಿಗೆ ತುಂಬುತ್ತಿದೆ.
ನಾನು ಮೇಲೆ ಮಾತಾಡಿದ ಅಮೇರಿಕದ ಇಂಡಸ್ಟ್ರಿಯಂತೆ ಜಗತ್ತಿನ ಉಳಿದ ದೇಶಗಳ ಉದ್ಯಮವಿದೆ. ಆದ್ರೆ ನೀವು ಏಷ್ಯಾಕ್ಕೆ ಬಂದ್ರೆ ಅದೊಂಚೂರು ಭಿನ್ನವಾಗಿದೆ. ಇಲ್ಲಿ ಅನೇಕ ರಾಷ್ಟ್ರಗಳಲ್ಲಿ ದಟ್ಟ ದರಿದ್ರವಾದ ಬಡತನವಿದೆ ಮತ್ತು ಸಿಂಗಲ್‌ ಮಾಮ್‌, ಸೂಳೆಗಾರಿಕೆ ಎಂಬ ಸಂಸ್ಕೃತಿ ಹೆಚ್ಚಾಗಿದೆ. ಹೀಗಾಗಿ ಈ ಸಂಸ್ಕೃತಿಯವರು ಹೊಟ್ಟೆಪಾಡಿಗಾಗಿ, ದುಡ್ಡಿನ ಆಮಿಷಕ್ಕಾಗಿ, ಬದುಕಿನ ಅನಿವಾರ್ಯತೆಗಾಗಿ ನೀಲಿ ಚಿತ್ರ ಜಗತ್ತಿನೊಳಗೆ ಒಂದಾಗಿದ್ದಾರೆ.
ಇವಿಷ್ಟು ಹಾರ್ಡ್‌ಕೋರ್‌ ಪೋರ್ನ್‌ ಕಥೆ! ಭಾರತ ಇವತ್ತೊಂದು ಸಂಕೀರ್ಣ ಸ್ಥಿತಿಯಲ್ಲಿದೆ. ಸಹಸ್ರಮಾನದ ತಲೆಮಾರು ಅಥವಾ ಮಿಲೇನಿಯಂ ಜನರೇ‍ಷನ್‌ ಎಂದು ಕರೆಸಿಕೊಳ್ಳುವ ಇಂದಿನ ಯುವ ಸಮುದಾಯ ಒಂದು ರೀತಿ ಅತಂತ್ರ ಸ್ಥಿತಿಯಲ್ಲಿದೆ. ಆಕಡೆ ಪೂರ್ತಿಯಾಗಿ ಪಾಶ್ಚಾತ್ಯ ಸಂಸ್ಕೃತಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಈಕಡೆ ಭಾರತೀಯಯಾಗಿ ಉಳಿಯುವ ಇರಾದೆಯೂ ಇಲ್ಲ. ವೇಗಯುತವಾಗಿ ಐಷಾರಾಮಿತನ ಬರಬೇಕು, ಬದುಕನ್ನು ಎಂಜಾಯ್‌ ಮಾಡಿಬಿಡಬೇಕು ಎಂಬ ಚಪಲ. ಹಾಗಂತ ಪೂರ್ತಿಯಾಗಿ ಪಾಶ್ಚಾತ್ಯರಂತೆ ಅಪ್ಪ-ಅಮ್ಮ, ಗಂಡ, ಸಂಸಾರ, ಸಮಾಜವನ್ನು ಬಿಟ್ಟು ಏಕಾಂಗಿಯಾಗುವ ನಿಲ್ಲುವ ಧೈರ್ಯವಿಲ್ಲ( ನಮ್ಮಲ್ಲಿ ಬಹಳ ಜನಕ್ಕೆ ಪಾಶ್ಚತ್ಯರೆಲ್ಲ ಮೂರು ಬಿಟ್ಟವರಂತೆ ಬದುಕುತ್ತಾರೆ ಎಂಬ ಬಹುದೊಡ್ಡ ತಪ್ಪು ಕಲ್ಪನೆಯಿದೆ. ಶೇ. ೩೦-೪೦ರಷ್ಟು ಪಾಶ್ಚಾತ್ಯರು ಮಾತ್ರ ಹಾಗೆ ಬದುಕುವುದು. ಉಳಿದ ೬೦-೭೦ರಷ್ಟು ಮಂದಿ ಶುದ್ಧವಾಗಿ ಭಾರತೀಯರಂತೆ ಸಂಸಾರ, ಸಂಬಂಧ ಎಂಬ ಸಂಕೋಲೆಯಲ್ಲಿನ ಬದುಕನ್ನು ಇಷ್ಟಪಡುವವರು. ಅವರ ಚಿಂತನೆ, ಬದುಕಿನ ಶೈಲಿಯಲ್ಲಿ ಒಂಚೂರು ವ್ಯತ್ಯಾಸವಿರುತ್ತದೆ. ಆದರೆ ಬದುಕಿನ ಮೂಲ ಉದ್ದೇಶ ನಮ್ಮ ದೇಶದಂತೆ ಇದೆ).
ಇಂಥ ಒಂದು ಸಂದಿಗ್ಧ ಸ್ಥಿತಿ ಹುಟ್ಟು ಹಾಕಿರುವುದೇ ಕಾರ್ಪೊರೇಟ್‌ ಹಾದರಿಕೆ! ಬಹುಶಃ ಈ ಪದ ಬಳಕೆ ತಪ್ಪಾಗಬಹುದು. ಯಾಕಂದ್ರೆ ಒಬ್ಬ ಓಶೋ, ಭೈರಪ್ಪನವರನ್ನು ಓದಿಕೊಂಡ ನಾನಂತೂ ಸೆಕ್ಸ್‌ನ್ನು ಅಸಹ್ಯ, ತಪ್ಪು, ಕಾನೂನು ಬಾಹೀರ ಎಂಬ ರೀತಿಯಲ್ಲಿ ಮಾತನಾಡಲಾರೆ. ಆದ್ರೆ ಯಾವುದೋ ಆಮಿಷಕ್ಕೆ ಒಳಗಾಗಿ ಸೆಕ್ಸ್‌ನ್ನು, ದೇಹವನ್ನು ಮಾರಿಕೊಳ್ಳುವ ಪ್ರಕ್ರಿಯೆಗೆ ನಾನಂತೂ ಹಾದರಿಕೆ ಎಂತಲೇ ಕರೆಯುತ್ತೇನೆ. ಸ್ವಯಂ ಇಚ್ಛೆಯಿಂದ, ಪ್ರೀತಿಯಿಂದ ದೈಹಿಕ ಸಂಬಂಧ ಇಟ್ಟುಕೊಂಡಿದ್ದರೆ ಅದು ಬೇರೆಯ ಮಾತು ಹಾಗೂ ಅವರ ಬದುಕಿನ ಸ್ವತಂತ್ರವದು.
ಸಾಫ್ಟ್‌ವೇರ್‌, ಮಾಧ್ಯಮ ಸೇರಿದಂತೆ ಕಾರ್ಪೊರೇಟ್‌ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಗೆಳೆಯರು ಮಾತಾಡುವುದನ್ನು ಕೇಳಿದ್ದೇನೆ. ‘ಅದೊಂದು ಹುಡುಗಿಯಿಂದ ಇಡೀ ಆಫೀಸ್‌ ಹಾಳಾಗಿದೆ. ಆ ಹುಡುಗಿ ಬಂದವಳೆ ಎಷ್ಟು ಬೇಗ ಬೆಳೆಯುತ್ತಿದ್ದಾಳೆ. ತಲೆಯಲ್ಲಿ ಎರಡಕ್ಷರವಿಲ್ಲದಿದ್ದರೂ ಎದೆಯೊಳಗಿನ ಎರಡಕ್ಷರಗಳು ಕೆಲಸ ಮಾಡುತ್ತಿವೆ’ ಇಂಥ ಹತ್ತಾರು ಮಾತುಗಳನ್ನು ನಿತ್ಯವೂ ಕೇಳುತ್ತಿರುತ್ತೇವೆ. ಇಂಥ ಹುಡುಗಿಯರಿಂದ ನಿಜವಾದ ಪ್ರತಿಭಾವಂತ ಕಳೆದು ಹೋಗಿರುತ್ತಾನೆ. ತನ್ನ ತನವನ್ನು ಪೂರ್ತಿಯಾಗಿ ಕಳೆದುಕೊಂಡು ಕೆಲಸ ಮಾಡುತ್ತಿರುತ್ತಾನೆ. ಇದೆಲ್ಲ ಎಷ್ಟು ದಿನ ನಡೆಯುತ್ತೆ ಎಂಬುದು ನಂತರದ ಮಾತು. ಆದ್ರೆ ನಡೆದಷ್ಟೆ ದಿನದಲ್ಲಿ ಬೇರೆಯವರು ಅನುಭವಿಸುವ ನೋವು, ಯಾತನೆ ದೊಡ್ಡದಿದೆ.
ಪೋರ್ನ್‌ ಜಗತ್ತಿಗಿಂತ ಭಯಾನಕವಾದ ಜಗತ್ತೊಂದು ಇಲ್ಲಿ ನಿರ್ಮಾಣವಾಗುತ್ತಿದೆ. ನಿಜವಾಗಿಯೂ ಪ್ರತಿಭೆ ಹೊಂದಿದ್ದು ಬೆಳವಣಿಗೆ ಬೇರೆ. ಅಂಥ ಬೆಳವಣಿಗೆಗಳು ಕಣ್ಣಿಗೆ ಸ್ಪಷ್ಟವಾಗಿಯೂ ಕಾಣುತ್ತದೆ. ಯಾರಿಗೂ ಕಾಣದಂತೆ ಕತ್ತಲಿನಲ್ಲಿ ನಡೆದ ಬೆಳವಣಿಗೆಗಳು, ಮನಸ್ಸಿಗಂತೂ ಅರ್ಥವಾಗುತ್ತದೆ! ಇದ್ರಿಂದ ಹುಡುಗರು ಮಾತ್ರವಲ್ಲ, ಪ್ರತಿಭಾವಂತ ಅನೇಕ ಹುಡುಗಿಯರು ವ್ಯಥೆ ಪಡುತ್ತಿದ್ದಾರೆ.
ಸರಿ, ತಪ್ಪುಗಳ ನಿರ್ಣಯ ಕಷ್ಟ. ಒಂದು ಅಧಿಕಾರ, ದುಡ್ಡಿಗಾಗಿ ತಮ್ಮನ್ನು ತಾವು ಕದ್ದು-ಮುಚ್ಚಿ ಮಾರಿಕೊಳ್ಳುವವರಿಗಿಂತ ತೀರ ‘ನನ್ನ ಹೊಟ್ಟೆಪಾಡೇ ಇದು’ ಅಂತ ಒಪ್ಪಿಕೊಂಡು, ಪೂರ್ತಿ ಬಿಚ್ಚಿ ಬೆತ್ತಲಾಗಿ ನಿಲ್ಲುವವರೇ ಉತ್ತಮರು ಅನ್ನಿಸುತ್ತಾರೆ. ನಾನು ಯಾವಾಗ್ಲೂ ಹೇಳ್ತಾ ಇರ್ತಿನಿ ಈ ಹಾಕಿಸಿಕೊಳ್ಳುವ ಪ್ರಕ್ರಿಯೆ ಹಾಕಿಸಿಕೊಂಡವಳು ಮತ್ತು ಹಾಕಿದವನಿಗೆ ಮಾತ್ರ ಗೊತ್ತಿರುತ್ತೆ ಅಂತ! ಒಂದು ನಾಗರೀಕತೆಯ ಅಂತ್ಯವಾಗಬೇಕಾಗಿದ್ದು ಅನಾಗರೀಕತೆಯಲ್ಲೇ! ಅಂದ್ರೆ ಮನುಷ್ಯರಿಗೆ ಒಂದು ಹಂತದಲ್ಲಿ ಬಟ್ಟೆ ತೊಡುವುದು ಗೊತ್ತಿರಲಿಲ್ಲ. ಅದರ ವ್ಯುತ್ಕ್ರಮ ರೂಪವಾಗಿ ಮುಂದೊಂದು ದಿನ ಗೊತ್ತಿದ್ದು ಬಟ್ಟೆ ತೊಡಲಾಗದ ಸಮಾಜವು ನಿರ್ಮಾಣವಾಗುತ್ತೆ. ಅದೇ ಈ ಪ್ರಸ್ತುತ ನಾಗರೀಕತೆಯ ಅಂತ್ಯ!
ಅಂದಹಾಗೆ ಸೆಕ್ಸ್‌ ಎಂಬುದು ನನ್ನ ಪ್ರಕಾರ ಭಾರತದ ಮಟ್ಟಿಗೆ ತೀರ ವೈಯಕ್ತಿಕವಾಗಿದ್ದು. ನೀವು ಎಲ್ಲರಲ್ಲಿಯೂ ತೋರಿಸಿಕೊಳ್ಳಲಾಗದೆ ತೀರ ಗೌಪ್ಯತೆಯಿಂದ ನಿಮ್ಮ ದಾಂಪತ್ಯದ ಸಂಬಂಧವನ್ನು ಕಾಪಾಡಿಕೊಳ್ಳುವುದು ಅದ್ರಿಂದ ಮಾತ್ರ. ಯಾವತ್ತು ಅದು ಮುಕ್ತವಾಗುತ್ತೋ ಆವತ್ತು ಒಂದು ನಾಯಿಗು, ದನಕ್ಕು, ಮನುಷ್ಯನಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಆಗ ಬಟ್ಟೆ ಹಾಕಿಕೊಂಡು ಬದುಕುವುದು, ಈ ಪೋರ್ನು ಬ್ಯಾನ್‌ ಎಂಬ ರಾಷ್ಟ್ರೀಯ ವಿಪತ್ತು ಯಾವುದು ಇರುವುದಿಲ್ಲ! ಅಕ್ರಮಕ್ಕೆ ಕಡಿವಾಣ ಹಾಕುವುದು ಅವಶ್ಯ ಕೆಲಸ. ಮೋದಿ ಮಾಡಿದ್ದು ಅದನ್ನೆ. ಅಂದಹಾಗೆ ಅದಕ್ಕಿಂತ ಮುಂಚೆ ಒಬಾಮಾ ಈ ಕೆಲಸ ಮಾಡಿದ್ದಾರೆ. ಯಾಕೆ ಎಲ್ಲ ಪೋರ್ನ್ ತಾಣಗಳಿಗೂ ಕಡಿವಾಣ ಬಿದ್ದಿಲ್ಲ ಎಂಬುದಕ್ಕೂ ಇದೇ ಉತ್ತರ. ಅಮೆರಿಕ ಕೊಟ್ಟ ಪಟ್ಟಿಯನ್ನೇ ಭಾರತ ಭಟ್ಟಿಯಿಳಿಸಿದೆ ಜೊತೆಗೊಂದಿಷ್ಟು ಭಾರತೀಯ ವೆಬ್‌ಸೈಟ್‌ಗಳನ್ನು ಸೇರಿಸಿ. ಉದ್ಯಮವಾಗಿ ನಡೆಯುವ ನೀಲಿಚಿತ್ರಕ್ಕೆ ಅವಕಾಶ ನೀಡಿದೆ. ಮೋದಿಗೆ ಜೈ! ಇದನ್ನು ವಿರೋಧಿಸಿ ಟೌನ್‌ಹಾಲ್‌ನಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿದ್ರೆ ಅವರಿಗಂತೂ ಮೊದಲು ಜೈ!!!

Read Full Post »