Feeds:
ಲೇಖನಗಳು
ಟಿಪ್ಪಣಿಗಳು

Archive for ಜುಲೈ, 2011

ಮಾಧ್ಯಮ ಅಂದ್ರೆ ಜನಕ್ಕೆ ಒಂಥರ ಕುತೂಹಲ. ಪತ್ರಿಕೆಯಲ್ಲೋ, ಟಿವಿಯಲ್ಲೋ ಕೆಲ್ಸ ಮಾಡೊ ಮಂದಿ ಸಿಕ್ಕರಂತೂ ಕೆಲವರ ಪಾಲಿಗೆ ಹಬ್ಬ. ತಮ್ಮಲ್ಲಿರೋ ಎಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆದ್ರೆ ಅದು ನಮ್ಮ ಪಾಲಿಗೆ ಎಷ್ಟೋ ಸಲ ಕಿರಿಕಿರಿ. ಅವ್ರ ಪ್ರಶ್ನೆಗಳಿಗೆ ಉತ್ತರಿಸುವುದು ಖಂಡಿತ ಬೇಸರದ ಸಂಗತಿಯಲ್ಲ. ಆದ್ರೆ ನಮ್ಮ ಉತ್ತರವನ್ನು ಅವ್ರಿಗೆ ಅರ್ಥ ಮಾಡಿಸೋದು ಇದೆಯಲ್ಲ, ಅದಕ್ಕಿಂತ ದೊಡ್ಡ ತಲೆನೋವು ಮತ್ತೊಂದಿಲ್ಲ. ಅನೇಕ ಬ್ಲಾಗ್ ಗೆಳೆಯರು ಸಿಕ್ಕಾಗಲೆಲ್ಲ ಅದೇ ಪ್ರಶ್ನೆ ಕೇಳ್ತಾರೆ. ಅವ್ರಿಗೆಲ್ಲ ಉತ್ತರ ಇಲ್ಲಿದೆ!

ಪತ್ರಿಕೆಯಲ್ಲಿ ಕೆಲ್ಸ ಮಾಡೋದು ಅಂದಾಕ್ಷಣ ಜನ ಕೇಳೋ ಮೊದಲ ಪ್ರಶ್ನೆಯೇ ನೀವು ದಿನ ಬರಿತೀರಾ? ೨ನೇ ಪ್ರಶ್ನೆ ಯಾವ ಅಂಕಣ ಬರುತ್ತೀರಾ ಮತ್ತು ಯಾವ ಪುಟದಲ್ಲಿ ಪ್ರಕಟವಾಗುತ್ತೆ? ೩ನೇ ಪ್ರಶ್ನೆ ಅಲ್ಲಿ ಏನು ಕೆಲಸವಿರುತ್ತೆ? ೪ನೇ ಪ್ರಶ್ನೆ ತುಂಬಾ ಮಜವಾಗಿರುತ್ತೆ. ಅದ್ನ ಆಮೇಲೆ ಹೇಳ್ತೀನಿ!

ಖಂಡಿತ ಪತ್ರಿಕೆಯಲ್ಲಿ ಕೆಲಸ ಮಾಡುವ ಒಂದಷ್ಟು ಮಂದಿ ದಿನ ಬರೆಯುತ್ತಾರೆ. ಹಾಗೂ ಮತ್ತೊಂದಷ್ಟು ಮಂದಿ ಯಾವತ್ತೂ ಬರೆಯಲ್ಲ! ಹೆಚ್ಚಾಗಿ ಎಲ್ಲ ದಿನಪತ್ರಿಕೆಗಳಲ್ಲೂ ಪುಟಗಳಿಗೆ ಅನ್ವಯವಾಗಿ ಸಿಬ್ಬಂದಿಗಳ ವಿಭಾಗಗಳಿರುತ್ತೆ. ನಗರ, ರಾಜ್ಯ, ದೇಶ/ವಿದೇಶ, ವಾಣಿಜ್ಯ, ಕ್ರೀಡೆ, ಸಂಪಾದಕೀಯ, ವಿಶೇಷ…ಇತ್ಯಾದಿ ಪುಟಗಳನ್ನು ನಾವು ನಿತ್ಯವೂ ಕಾಣುತ್ತೇವೆ. ಇದರ ಹೊರತಾಗಿ ಪುರವಣಿಗಳು. ಅದು ಲವಲವಿಕೆ, ಕೃಷಿ ಸಂಪದ, ಕರ್ನಾಟಕ ದರ್ಶನ…ಇತ್ಯಾದಿಗಳು. ಇದಕ್ಕೆ ತಕ್ಕಂತೆ ವಿಭಾಗಗಳಿರುತ್ತವೆ.

ಮುಖ್ಯವಾಗಿ ಜನರಲ್ ಡೆಸ್ಕ್ ಅಥವಾ ಏಜೆನ್ಸಿ. ಈ ವಿಭಾಗದ ಕೆಲಸ ಇಂಟರ್‌ನೆಟ್, ಪಿಟಿಐ, ಯುಎನ್‌ಐ ಮೊದಲಾದ ಏಜೇನ್ಸಿಗಳಿಂದ ಬರುವ ಸುದ್ದಿಯನ್ನು ಕನ್ನಡಕ್ಕೆ ಭಾಷಾಂತರಿಸುವುದು. ಪಿಟಿಐ, ಯುಎನ್‌ಐ ಮೊದಲಾದವು ನಿರಂತರವಾಗಿ ಸುದ್ದಿ ನೀಡ್ತಾ ಇರುತ್ತವೆ. ಇದನ್ನು ಪಡೆಯಲು ಚಂದಾದಾರಿಕೆ ಬೇಕು. ಪ್ರತಿ ಪತ್ರಿಕೆ ಪಿಟಿಐ, ಯುಎನ್‌ಐ ಹೊಂದಿರುತ್ತೆ. ಇನ್ನೂ ನೆಟ್‌ನಲ್ಲಿ ಐಬಿಎನ್, ಟೈಮ್ಸ್, ಎನ್‌ಡಿಟಿವಿ ಮೊದಲಾದವುಗಳ ವೈಬ್‌ಸೈಟ್ ಇವೆ. ಅವೆಲ್ಲ ದಿನದ ೨೪ ಗಂಟೆಗಳ ಸುದ್ದಿ ನೀಡುತ್ತಲೇ ಇರುತ್ತವೆ.

ಇದನ್ನೆಲ್ಲ ಜನರೆಲ್ ಡೆಸ್ಕ್‌ನ ಮುಖ್ಯಸ್ಥರು, ಉಪಸಂಪಾದಕರು/ಹಿರಿಯ ಉಪಸಂಪಾದಕರುಗಳಿಗೆ ಹಾಕುತ್ತಾರೆ. ಅವ್ರು ಅದನ್ನ ಭಾಷಾಂತರಿಸಿ ಸುದ್ದಿ ರೂಪದಲ್ಲಿ ಬರೆದುಕೊಡುತ್ತಾರೆ. ಹೀಗೆ ಬರೆಸಿದ ಸುದ್ದಿ ದೇಶ/ವಿದೇಶ ಅಥವಾ ಏಜೆನ್ಸಿ ಪುಟದಲ್ಲಿ ಪ್ರಕಟವಾಗುತ್ತೆ. ಉಪ ಸಂಪಾದಕರುಗಳು ಬರೆದ ಎಲ್ಲ ಸುದ್ದಿ ಪ್ರಕಟವಾಗುತ್ತೆ ಅನ್ನೋಕೆ ಸಾಧ್ಯವಿಲ್ಲ. ಸುದ್ದಿ ಪ್ರಕಟಣೆ ಜಾಹೀರಾತು ಆಧರಿಸಿರುತ್ತೆ. ಜಾಹೀರಾತು ಜಾಸ್ತಿ ಇದ್ದರೆ ಕಡಿಮೆ ಸುದ್ದಿಗಳು. ಇಲ್ಲ ಅಂದ್ರೆ ಜಾಸ್ತಿ ಸುದ್ದಿ. ಎಲ್ಲ ಪ್ರಮುಖ ಸುದ್ದಿಗಳನ್ನು ಬರೆಸಿರುತ್ತಾರೆ. ಪುಟದ ಜಾಗ ಆಧರಿಸಿ ನಂತರ ಸುದ್ದಿ ಪರಿಷ್ಕರಣೆ ಆಗುತ್ತೆ. ಒಬ್ಬ ಉಪಸಂಪಾದಕ ಸಾಮಾನ್ಯವಾಗಿ ದಿನಕ್ಕೆ ೬-೮ ಸುದ್ದಿ ಭಾಷಾಂತರ ಮಾಡುತ್ತಾನೆ. ಅಂದಹಾಗೆ ಹೀಗೆ ಬರೆದ ಸುದ್ದಿಗಳ ಜೊತೆ ಅವರ ಹೆಸ್ರು ಬರಲ್ಲ.

ಇನ್ನು ವರದಿಗಾರರ ತಂಡ ದಿನದ ಪ್ರಮುಖ ಬೆಳವಣಿಗೆಗಳ(ರಾಜಕೀಯ, ಸಾಮಾನ್ಯ, ಸಾಹಿತ್ಯ…)ಸುದ್ದಿಯನ್ನು ತಂದು ರಾಶಿ ಹಾಕುತ್ತೆ. ಇಲ್ಲೂ ಹಾಗೆ ವರದಿಗಾರರಿಗೆ ಮುಖ್ಯ ವರದಿಗಾರರು ಅಸೈನ್ ಮಾಡುತ್ತಾರೆ. ಇದರ ಹೊರತಾಗಿ ವರದಿಗಾರರೇ ಸ್ವಯಂ ಇಚ್ಛೆಯಿಂದ ಮಾಡುವ ವಿಶೇಷ ವರದಿಗಳು. ಅಸೈನ್ ಮಾಡಿದ ವರದಿಗಳಿಗೆ ಹೆಸರು ಬರುಲ್ಲ. ವಿಶೇಷ ವರದಿಯೊಂದಿಗೆ ವರದಿಗಾರನ ಹೆಸರು ಪ್ರಕಟವಾಗುತ್ತೆ.

ಇನ್ನೂ ವರದಿಗಾರರು ಮಾಡಿ ತಂದ ಸುದ್ದಿಗಳು ನೇರವಾಗಿ ಪುಟದಲ್ಲಿ ಪ್ರಕಟವಾಗುಲ್ಲ. ಇದನ್ನು ಪರಿಷ್ಕರಿಸಲು ಒಂದು ಉಪ/ಹಿರಿಯ ಉಪ ಸಂಪಾದಕರ ತಂಡ ಇರುತ್ತೆ. ಇದನ್ನು ಸಾಮಾನ್ಯವಾಗಿ ಸ್ಟೇಟ್ ಡೆಸ್ಕ್ ಅಂತಾರೆ. ದಿನದ ಪ್ರಮುಖ ರಾಜಕೀಯ ವರದಿಗಳು, ನಗರಕ್ಕೆ ಸಂಬಂಧಿತ ಮಹತ್ವದ ವರದಿಗಳು ಎಡಿಟ್ ಆಗುವುದು ಈ ವಿಭಾಗದಲ್ಲಿ. ಹೀಗಾಗಿ ಇಲ್ಲಿ ಹಿರಿಯ ಉಪಸಂಪಾದಕರು ಇರುತ್ತಾರೆ. ಇಲ್ಲಿನ ಸುದ್ದಿಗಳು ನಗರ ಮತ್ತು ರಾಜ್ಯ ಪುಟದಲ್ಲಿ ಬಳಕೆಯಾಗುತ್ತೆ. ದಿನಕ್ಕೆ ೩೦-೪೦ ವರದಿ ಬಂದಿರುತ್ತೆ. ಎಲ್ಲವೂ ಪ್ರಕಟವಾಗುಲ್ಲ. ಇಲ್ಲೂ ಆಯ್ಕೆ, ಕತ್ತರಿ ಪ್ರಯೋಗಗಳು ನಡೆಯುತ್ತವೆ.

ಎಲ್ಲ ಪ್ರತಿಕೆಗಳೂ ಮಂಗಳೂರು, ಹುಬ್ಬಳಿ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಲ್ಲಿ ಆವೃತ್ತಿ ಹೊಂದಿವೆ. ಇದರ ಹೊರತಾಗಿ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ವರದಿಗಾರರನ್ನು ಹೊಂದಿರುತ್ತವೆ. ಇಲ್ಲಿನ ಪ್ರಮುಖ ಸುದ್ದಿಗಳನ್ನು ಆಯಾ ಆವೃತ್ತಿಯವರು ಮುಖ್ಯ ಕಚೇರಿಗೆ(ಬೆಂಗಳೂರಿಗೆ)ಕಳುಹಿಸುತ್ತಾರೆ. ದಿನದ ಪ್ರಮುಖ ಸುದ್ದಿಗಳ ಪಟ್ಟಿ ಎಲ್ಲ ಜಿಲ್ಲೆಗಳಿಂದ ಬೆಳಿಗ್ಗೆ ಬರುತ್ತೆ. ಮತ್ತೆ ಪುನಃ ಮಧ್ಯಾಹ್ನ ಹಾಗೂ ಸಂಜೆ ಬರುತ್ತೆ. ಇಲ್ಲಿನ ಪ್ರಮುಖ ಸುದ್ದಿಗಳ ಆಯ್ಕೆ ಮತ್ತು ಎಡಿಟ್ ಜವಬ್ದಾರಿ ಬ್ಯೂರೊ ಡೆಸ್ಕ್‌ನದ್ದು. ಇದಕ್ಕೆ ಒಬ್ಬ ಸಮನ್ವಯಕಾರ ಕೂಡ ಇರ್ತಾನೆ. ಇಲ್ಲಿನ ಸುದ್ದಿಗಳು ರಾಜ್ಯ ಪುಟದಲ್ಲಿ ಹೊಗುತ್ತೆ.

ಇನ್ನೂ ಗ್ರಾಮಾಂತರ, ಕ್ರೀಡೆ, ವಾಣಿಜ್ಯ, ವಿಶೇಷಕ್ಕೆ ಪ್ರತ್ಯೇಕ ತಂಡವಿರುತ್ತೆ. ಸಂಪಾದಕೀಯ ಮತ್ತು ಅದರ ಪಕ್ಕದ ಪುಟಕ್ಕೆ ಪ್ರತ್ಯೇಕ ತಂಡವಿರುತ್ತೆ. ಸಂಪಾದಕೀಯದ ಎದುರಿನ ಪುಟವನ್ನು ಒಪೆಡ್ ಎನ್ನಲಾಗುತ್ತೆ. ಈ ಪುಟವನ್ನು ಬೇರೆ-ಬೇರೆ ಪತ್ರಿಕೆಗಳು ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತವೆ.
ಇದೆಲ್ಲ ಪ್ರತಿನಿತ್ಯದ ಪುಟಗಳ ಕಥೆ.

ಪುರವಣಿಗಳಿಗೇ ಪ್ರತ್ಯೇಕ ತಂಡ. ವಾರದ ದಿನಗಳಲ್ಲಿ ಪುರವಣಿ ಪುಟ ತುಂಬಿಸುವುದು ಆ ವಿಭಾಗಗಳ ಕೆಲಸ. ಅಲ್ಲೂ ಕೃಷಿಗೆ ಬೇರೆ, ಸಾಪ್ತಾಹಿಕಕ್ಕೆ ಬೇರೆ ಅಂತಾ ಭಿನ್ನ ತಂಡಗಳು ಇರುತ್ತವೆ. ಪ್ರತಿ ಸುದ್ದಿಮನೆಯಲ್ಲಿ ದಿನ ಸಂಜೆ ೬ ಗಂಟೆಗೆ ಹೊತ್ತಿಗೆ ಒಂದು ಸಭೆ ನಡೆಯುತ್ತೆ. ಅದ್ರಲ್ಲಿ ಪ್ರಧಾನ ಸಂಪಾದಕರು, ಸುದ್ದಿ ಸಂಪಾದಕರು ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಭಾಗವಹಿಸುತ್ತಾರೆ. ದಿನದ ಪ್ರಮುಖ ಸುದ್ದಿಗಳ ಕುರಿತು ಚರ್ಚೆ ನಡೆಸುತ್ತಾರೆ. ನಂತರ ಮುಖಪುಟಕ್ಕೆ ಹೋಗುವ ಸುದ್ದಿಗಳನ್ನು ಅಲ್ಲಿ ನಿರ್ಧರಿಸುತ್ತಾರೆ. ಅದೇ ಹೊತ್ತಿಗೆ ಜಾಹೀರಾತು ವಿಭಾಗದವರು ಕರಡು ನೀಡುತ್ತಾರೆ. ಮುಖ ಪುಟದ ಸುದ್ದಿಗಳ ಹೊರತಾಗಿ ಇತರೆ ಪುಟದಲ್ಲಿ ಹೋಗಬೇಕಾದ ಪ್ರಮುಖ ಸುದ್ದಿಗಳ ನಿರ್ಧಾರವೂ ಅಲ್ಲೆ ಆಗುವುದು.

ಸುದ್ದಿಮನೆಯಲ್ಲಿ ಪ್ರತಿ ನಿತ್ಯದ ಪುಟಗಳ ವಿನ್ಯಾಸ ಶುರುವಾಗುವುದು ಸಂಜೆ ೭ರ ನಂತರ. ವಿಭಾಗದ ಮುಖ್ಯಸ್ಥರು ಇಂತಿಂಥ ಸುದ್ದಿಗಳು ಪುಟದಲ್ಲಿ ಹೋಗಬೇಕು ಎಂದು ಪಟ್ಟಿ ಕೊಡುತ್ತಾರೆ. ಅದನ್ನು ಆಧರಿಸಿ ಉಪ/ಹಿರಿಯ ಉಪಸಂಪಾದಕ ಪುಟ ವಿನ್ಯಾಸ ಮಾಡಿಸಲು ಕೂರುತ್ತಾನೆ. ಕೆಲ ಪತ್ರಿಕೆಗಳಲ್ಲಿ ಪ್ರತಿ ಪುಟಕ್ಕೂ ವಿನ್ಯಾಸಕಾರರಿರುತ್ತಾರೆ. ಇನ್ನು ಕೆಲವು ಕಡೆ ಉಪಸಂಪಾದಕರೇ ಪುಟ ವಿನ್ಯಾಸವನ್ನೂ ಮಾಡಿಕೊಳ್ಳುತ್ತಾರೆ. ಸಿದ್ಧವಾದ ಸುದ್ದಿಗಳನ್ನು ಪುಟಕ್ಕೆ ಕೂರಿಸುತ್ತಾರೆ. ಸುದ್ದಿಯನ್ನು ಕುಗ್ಗಿಸುವ, ಹಿಗ್ಗಿಸುವ ಕಸರತ್ತು ಇಲ್ಲಿ ನಡೆಯುತ್ತೆ. ಇಲ್ಲಿ ಸಿದ್ಧವಾದ ಪುಟವನ್ನು ವಿಭಾಗ ಮುಖ್ಯಸ್ಥರು, ನಂತರ ಸುದ್ದಿ ಸಂಪಾದಕರು ನೋಡುತ್ತಾರೆ. ಪುರುಸೊತ್ತು ಇದ್ದರೆ ಸಂಪಾದಕರೂ ಕಣ್ಣಾಡಿಸುತ್ತಾರೆ. ಎಲ್ಲ ಮುಗಿದು ಸುಮಾರು ರಾತ್ರಿ ೯.೩೦ ಹೊತ್ತಿಗೆ ಪುಟ ಪ್ರಿಂಟ್‌ಗೆ ಹೋಗುತ್ತೆ.

ಮುಖಪುಟವನ್ನು ಕೆಲವು ಕಡೆ ಸಂಪಾದಕರು ಖುದ್ದು ನಿಂತು ವಿನ್ಯಾಸ ಮಾಡಿಸುತ್ತಾರೆ. ಇನ್ನು ಕೆಲವೆಡೆ ಸುದ್ದಿ ಸಂಪಾದಕರು ನೋಡಿಕೊಳ್ಳುತ್ತಾರೆ. ೬ ಗಂಟೆಯ ಸಭೆಯ ನಂತರ ಬಂದ ಪ್ರಮುಖ ಸುದ್ದಿಗಳನ್ನು ವಿಭಾಗ ಮುಖ್ಯಸ್ಥರು, ಸುದ್ದಿ ಸಂಪಾದಕರು ಅವಲೋಕಿಸಿ ನಿರ್ಧರಿಸುತ್ತಾರೆ. ಎಲ್ಲ ವಿಭಾಗಳ ಅವಲೋಕಿತ ಪ್ರಮುಖ ಸುದ್ದಿ ಮುಖಪುಟವನ್ನು ನಿರ್ಧಾರ ಮಾಡುತ್ತೆ. ನಗರ/ ಗ್ರಾಮಾಂತರ ಅಂತಾ ೨ ಪ್ರತ್ಯೇಕ ಆವೃತ್ತಿ. ಗ್ರಾಮಾಂತರ ಆವೃತ್ತಿ ೯-೯.೩೦ ಪ್ರಿಂಟ್‌ಗೆ ಹೋಗುತ್ತೆ. ನಂತರದ ಪ್ರಮುಖ ಸುದ್ದಿಗಳ ಅಪ್‌ಡೇಟ್‌ನೊಂದಿಗೆ ನಗರದ ಆವೃತ್ತಿ ರಾತ್ರಿ ೧೨-೧ ಗಂಟೆ ಹೊತ್ತಿಗೆ ಪ್ರಿಂಟ್ ಹೋಗುತ್ತೆ. ಇದು ಪತ್ರಿಕೆ ಅವಲಂಬಿಸಿ ಇರುತ್ತೆ. ಹೀಗಾಗಿಯೇ ಎಷ್ಟೋ ಸಲ ಪ್ರಮುಖ ಸುದ್ದಿಗಳು ನಗರದಲ್ಲಿ ಮಾತ್ರ ಬರುವುದು.
ಇಷ್ಟಾದ್ರು ನಿಮ್ಮ ಅನುಮಾನಗಳು ಬಗೆಹರಿದಿಲ್ಲ ಅಂತಾ ಗೊತ್ತು. ಇಲ್ಲಿ ಎಲ್ಲರೂ ಯಾಕೆ ಅಕಂಣಕಾರರು ಆಗಿರುವುದಿಲ್ಲ, ಸಾಮಾನ್ಯನೊಬ್ಬ ಬರೆದ ಬರಹಗಳು ಯಾಕೆ ಪ್ರಕಟವಾಗುವುದಿಲ್ಲ ಇತ್ಯಾದಿಗಳನ್ನು ಇನ್ನೊಂದು ಸಲ ನೋಡೋಣ…

Read Full Post »