Feeds:
ಲೇಖನಗಳು
ಟಿಪ್ಪಣಿಗಳು

Archive for ಮಾರ್ಚ್, 2016

ಸೆಲ್ಫಿಯಾಚೆಯ ನಗ್ನತೆ!

2015-01-21-povertyphilippines2

ಇತ್ತೀಚಿನ ದಿನದಲ್ಲಿ ಈ ಫೇಸ್‌ಬುಕ್‌ಗೆ ಬರೋದಕ್ಕೆ ಭಯ ಆಗ್ತಿದೆ. ಬೇನಾಮಿ ಹೆಸರಿನಲ್ಲಿ ಬರುವ ರಿಕ್ವೆಸ್ಟ್‌ಗಳ ಹಾವಳಿ ಒಂದು ಕಡೆಯಾದ್ರೆ, ಇನ್‌ಬಾಕ್ಸ್‌ಗೆ ನೂರಾರು ಸಂದೇಶಗಳು. ಒಂದೆಡೆ ಸೆಕ್ಸ್‌ಚಾಟ್‌ಗೆ ಹಪಹಪಿಸುವ ಜನ. ನಗ್ನ ದೇಹದ ಚಿತ್ರಕ್ಕೆ ಹಾತೊರೆಯುವವರು ಇನ್ನೊಂದೆಡೆ. ನಾವು ಪ್ರತಿಕ್ರಿಯಿಸಬೇಕು ಅಂತಿಲ್ಲ. ಅವರ ಪಾಡಿಗೆ ಅವರು ಕೇಳುತ್ತಲೆ ಇರ್ತಾರೆ. ಅವರ ಕಾಮ ದಾಹ ತಣಿಸಲು ಹೆಣ್ಣುಬೇಕು. ಹೆಣ್ಣು ಅಂದ್ರೆ ಬೋಗದ ಸರಕು. ರಾತ್ರಿಯ ರಾಣಿ. ಅವಳ ಭಾವನೆಗಳು, ನೋವು ಸಂಕಟಗಳನ್ನು ಕೇಳುವ ವ್ಯವಧಾನ ಯಾರಿಗೂ ಇಲ್ಲ. ಈ ವರ್ಚ್ಯುವಲ್ ಜಗತ್ತಿನಲ್ಲಿ ಅದು ಯಾರಿಗೂ ಬೇಕಿಲ್ಲ. ಇದಕ್ಕೆ ತುಪ್ಪ ಸುರಿದಂತೆ ನಗ್ನ ದೇಹದೊಂದಿಗಿನ ಸೆಲ್ಫಿ ಈಗಿನ ಟ್ರೆಂಡ್.

***

ಫಿಲಿಫೈನ್ಸ್!

ಏಷ್ಯಾ ಖಂಡದ ಒಂದು ಪುಟ್ಟ ದ್ವೀಪವಿದು. ಹಸಿವು, ಬಡತನ ಇವತ್ತಿಗೂ ಇಲ್ಲಿ ಪ್ರಸ್ತುತ. ಯಾಕಂದ್ರೆ ಈ ದೇಶಕ್ಕೆ ತನ್ನದು ಅಂತೊಂದು ಗಟ್ಟಿಯಾದ ಆದಾಯದ ಮೂಲವಿಲ್ಲ. ಇಂಥ ದೇಶದಲ್ಲಿ ಈಗ ೩೨ ವರ್ಷದ ಹಿಂದೆ ಜನಿಸಿದವಳು ನಾನು.

ಇಲ್ಲಿ ಹಲವು ಪುಟ್ಟ, ಪುಟ್ಟ ದ್ವೀಪಗಳಿವೆ. ಅದರ ಅಂಚಿನಲ್ಲಿ ನಗರಗಳು. ಹಾಗಂತ ಅವ್ಯಾವುವು ಮಹಾನಗರಗಳಾಗಿ ಬೆಳೆದಿಲ್ಲ. ಅನೇಕರಿಗೆ ಉದ್ಯೋಗ ನೀಡುವ, ಹಸಿವು ನೀಗಿಸುವ ಕೇಂದ್ರಗಳಾಗಿಲ್ಲ. ಚರ್ಚಿಗೆ ಹೋಗುವವರು ಹಾಗೂ ಚರ್ಚಿಗೆ ಹೋಗದವರು ಎಂಬ ಎರಡೇ ಜಾತಿ ಇಲ್ಲಿ.

ನಾನು ಚಿಕ್ಕವಳಿದ್ದಾಗಲೆ ಅಮ್ಮನ್ನ ಕಳೆದುಕೊಂಡೆ. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ ಅಜ್ಜಿ-ತಾತ ಕೂಡ ದೂರವಾದ್ರು. ನಮ್ಮದೇ ಬೀದಿಯಲ್ಲಿದ್ದ ಆಂಟಿ ಮನೆಯಲ್ಲಿ ಬೆಳೆದೆ. ಅಪ್ಪನ್ನ ಬಗ್ಗೆ ತಿಳಿದುಕೊಳ್ಳಲಿಕ್ಕೆ ನನ್ನಮ್ಮ ಸಿಂಗಲ್ ಮಾಮ್!

ಇದೆಲ್ಲ ಹೇಳೊ ಮೊದ್ಲು ಈ ದ್ವೀಪದ ಸಂಬಂಧಗಳ ಬಗ್ಗೆ ಹೇಳಿಬಿಡ್ತೀನಿ. ಇಲ್ಲಿ ಆರೇಂಜ್ ಮ್ಯಾರೇಜ್ ಎಂಬ ಕಲ್ಪನೆಯೇ ಇಲ್ಲ. ಎಲ್ಲರೂ ಅವರವರ ಹುಡುಗನ್ನ ಅವರವರೇ ಆರಿಸಿಕೊಳ್ಳೋದು ಹೆಚ್ಚು. ಎಲ್ಲೋ ನೂರರಲ್ಲಿ ಒಂದೆರಡು ಮದುವೆಗಳು ಮಾತ್ರ ಕುಟುಂಬದವರಿಂದ ನಿಶ್ಚಿತವಾಗಿ ಆಗುತ್ತೆ. ೧೪-೧೬ ವರ್ಷಕ್ಕೆ ಇಲ್ಲಿನ ಹುಡುಗಿ ಸಂಬಂಧದ ಬಲೆಯಲ್ಲಿ ಬೀಳ್ತಾಳೆ. ಇಲ್ಲಿ ಹುಡುಗಿಯರು ಜಾಸ್ತಿ ಓದಲ್ಲ. ೧೮-೨೦ ವರ್ಷಕ್ಕೆ ಮದ್ವೆ ಆಗುತ್ತೆ. ಒಂದಷ್ಟು ಸಂಬಂಧಗಳು ಮದ್ವೆಗೆ ಮುಂಚೆಯೆ ಮುರಿದು ಬಿಡುತ್ತೆ. ಇನ್ನೊಂದಷ್ಟು ಮದ್ವೆವರೆಗೂ ತಲುಪುತ್ತೆ.

ಇಲ್ಲಿನ ಗಂಡಸರಿಗೆ ಸಂಸಾರದ ಬಗ್ಗೆ, ಸಂಬಂಧಗಳ ಬಗ್ಗೆ ಜಾಸ್ತಿ ಕಾಳಜಿಯಿಲ್ಲ. ಅದಕ್ಕಿಂತ ಮುಖ್ಯವಾಗಿ ಒಂದು ಉದ್ಯೋಗ ಅಂತಿಲ್ಲ. ಒಂದಷ್ಟು ಜನ ಮೀನು ಮಾರುತ್ತಾರೆ. ಇನ್ನೊಂದಷ್ಟು ಜನ ಅದು-ಇದು ಸಣ್ಣಪುಟ್ಟ ಕೆಲಸ ಮಾಡ್ತಾರೆ. ಕೆಲವ್ರು ಕೃಷಿನೂ ಮಾಡ್ತಾರೆ. ಆದ್ರೆ ಪಟ್ಟಣ್ಣವಾಸಿಗಳಲ್ಲಿ ದೊಡ್ಡ ಓದು, ದೊಡ್ಡ ಉದ್ಯೋಗ ಅಂತಿರೋದು ಕಡಿಮೆ. ಆವತ್ತಿನ ದುಡಿಮೆ ಆವತ್ತಿನ ಊಟ ಅನ್ನೋ ಸ್ಥಿತಿ.

ನಾಲ್ಕಾರು ಸಲ ಅನುಭವಿಸಿದ ನಂತ್ರ ಅವನಿಗೆ ಹುಡುಗಿ ಬೇಜಾರು ಬರುತ್ತೆ. ಅದಕ್ಕಿಂತ ಒಂದು ಸಂಸಾರ, ಒಂದು ಸೂರು ಅಂತ ಕಟ್ಟಿಕೊಳ್ಳಲು ಕೈಯಲ್ಲಿ ಏನು ಇರಲ್ಲ. ಮದ್ವೆ ಹೊತ್ತಿಗೆ ವರಾತ ತೆಗಿತಾನೆ. ಹುಡುಗಿ ಜೋರಿದ್ರೆ ಮದ್ವೆ ಆಗುತ್ತೆ. ಆದ್ರೆ ಮದ್ವೆ ಮರುದಿನದಿಂದ ಅವನು ಹೆಂಡ್ತಿಗೆ ಹೊಡೆಯಲು ಶುರು ಮಾಡ್ತಾನೆ. ಕುಡಿತಾನೆ. ಬೇರೆ ಹುಡುಗಿಯರ ಸಹವಾಸ ಆರಂಭಿಸ್ತಾನೆ. ಹೀಗೆಲ್ಲ ಆಗುವಾಗ್ಲು ನಿದ್ದೆ ಬರದ ರಾತ್ರಿಯಲ್ಲಿ ಹೆಂಗಸರಿಗೆ ೨-೩ ಮಕ್ಕಳು ಆಗುತ್ತೆ. ಕೆಲವರು ಮದ್ವೆಗೆ ಮುಂಚಿನ ಸಂಬಂಧದಲ್ಲಿ ಮಕ್ಕಳು ಮಾಡಿಕೊಂಡು, ನಂಬಿದ ಹುಡುಗನಿಂದ ಮೋಸ ಹೋಗಿ ಸಿಂಗಲ್ ಮಾಮ್ ಪಟ್ಟ ಕಟ್ಟಿಕೊಳ್ತಾರೆ. ಬಲವಂತವಾಗಿ ಮದ್ವೆ ಆದವರು ೬-೭ ವರ್ಷ ಸಂಸಾರ ಮಾಡಿ, ಆತನಿಂದ ಹೊಡೆತ ತಿಂದು, ಅವನ ಜೊತೆ ಬದುಕಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿ ಮಕ್ಕಳನ್ನು ಕಟ್ಟಿಕೊಂಡು ಸಿಂಗಲ್ ಮಾಮ್ ಆಗಿ ಹೊರಬೀಳ್ತಾರೆ. ಇದೆಲ್ಲ ಆಗೋ ಹೊತ್ತಿಗೆ ಆಕೆಗೆ ಅಬ್ಬಬ್ಬ ಅಂದ್ರೆ ೨೫-೨೭ ವರ್ಷ ಆಗಿರುತ್ತೆ. ಬದುಕು ಬಟಾನು ಬಯಲಿಗೆ ಬಂದಿರುತ್ತೆ. ಅವಳೊಬ್ಬಳೆ ಸಾಲದು ಎಂಬಂತೆ ೧,೨,೩ ವರ್ಷದ ೨-೩ ಮಕ್ಕಳು ಬೇರೆ ಅವಳ ಹೆಗಲಿನಲ್ಲಿ.

***

ಲೊಪೇಜ್ ವಿಕಿ ನನ್ನ ಹೆಸ್ರು. ಸಂಬಂಧಿಗಳಿಲ್ಲದೆ ಅನಾಥವಾಗಿದ್ದ ನಾನು ೧೮ನೇ ವರ್ಷದಲ್ಲಿ ನನ್ನ ಹುಡುಗನ್ನ ಹುಡುಕಿಕೊಂಡೆ. ಮದ್ವೆನೂ ಆಯ್ತು. ಮದ್ವೆಗೆ ಮೊದಲೆ ಬಸಿರಾಗಿದ್ದೆ. ಮದ್ವೆಯಾಗಿ ೫ ವರ್ಷ ಸಂಸಾರದ ನಡೆದಿತ್ತು. ೨ ಮಕ್ಕಳು ಆಗಿದ್ದವು. ೩ನೇ ಮಗು ಹೊಟ್ಟೆಯಲ್ಲಿತ್ತು. ಆಗ ೫ ತಿಂಗಳು ನನಗೆ.

ಹೇಳಿದ್ನಲ್ಲ ಎಲ್ಲ ಟಿಪಿಕಲ್ ಗಂಡಸರಂತೆ ಇವನು. ಆದ್ರು ಹೊಡೆತ ತಿನ್ನುತ್ತಲೇ ೫ ವರ್ಷ ಸಾಗಿಸಿದ್ದೆ. ಯಾಕೋ ಸಾಕು ಇವನ ಸಹವಾಸ ಅನ್ನಿಸ್ತು. ಅಲ್ಲಿಂದ ಹೊರಬಿದ್ದೆ. ಬದುಕಿನ ನೋವು-ಸಂಕಟ ಅರ್ಥವಾಗಿತ್ತು. ಕಣ್ಣಲ್ಲಿ ನೀರಿತ್ತು.

ಮನೆಯಿಂದ ಹೊರಗೆ ಬಿದ್ದೆ. ಇಲ್ಲಿ ಅಷ್ಟು ಸುಲಭದಲ್ಲಿ ತಿಂಗಳ ಖರ್ಚಿಗೆ ಸಾಕಾಗುವಷ್ಟು ಕೆಲಸ ಸಿಗಲ್ಲ. ಹೀಗೆ ಮನೆಯಿಂದ ಹೊರಬಿದ್ದು ವರ್ಷಾನುಗಟ್ಟಲೆ ಕೆಲಸ ಹುಡುಕುತ್ತಿರುವವರು, ಹಸಿವಾದವರು ಅನೇಕರು ಇರ್ತಾರೆ. ಅವರು ಏನು ಕೆಲಸ ಹೇಳಿದ್ರು ಮಾಡ್ತಾರೆ. ಅಂಥ ಸಮುದ್ರಕ್ಕೆ ಅನಿವಾರ್ಯವಾಗಿ ಬಿದ್ದೆ. ನನಗಿಂತ ಹೆಚ್ಚಾಗಿ ನನ್ನ ಪುಟ್ಟ ಮಕ್ಕಳ ಹೊಟ್ಟೆಯಲ್ಲಿ ಹಸಿವಿತ್ತು. ಜೊತೆಗೆ ಹೊಟ್ಟೆಯೊಳಗಿದ್ದ ಮಗುವಿನ ಉಸಿರಿತ್ತು. ಆದ್ರೆ ಯಾವ ಕಾರಣಕ್ಕು ನಾನು ನನ್ನ ನಂಬಿಕೆಯ ಜೊತೆ, ನೈತಿಕತೆಯ ಜೊತೆ ಸೋಲಬಾರದು ಅಂತ ಗಟ್ಟಿಯಾಗಿ ನಿರ್ಧಾರ ಮಾಡಿಕೊಂಡಿದ್ದೆ.

ಬೆಳಿಗ್ಗೆ ೩ ಗಂಟೆಗೆ ಎದ್ದು ಮೀನು ಮಾರೋರಿಗೆ ಹೋಗಿ ಸಹಾಯ ಮಾಡಿದೆ. ಯಾರ‍್ಯಾರ ಮನೆಯಲ್ಲಿ ಬಟ್ಟೆ ತೊಳೆಯೋದು ಇದೆ? ಕ್ಲೀನ್ ಮಾಡೋದಿದೆ ಅಂತ ಹುಡುಕಿಕೊಂಡು ಹೊರಟೆ. ಹಾಗಂತ ಇಲ್ಲಿ ಕ್ಲೀನ್ ಮಾಡೋದು, ಬಟ್ಟೆ ತೊಳೆಯೋದು ಎಲ್ಲ ನಮ್ಮ ಹೊಟ್ಟೆ ತುಂಬಿಸುವ ಉದ್ಯೋಗವಲ್ಲ. ಆದ್ರು ಬಸುರಿಯಾಗಿದ್ದರಿಂದ ಹೆರಿಗೆವರೆಗೂ ಈ ಕೆಲಸ ಮಾಡಲೇ ಬೇಕಾಯ್ತು.

ಹೀಗೆ ಕೆಲಸ ಹುಡುಕಿದಾಗ ಸಿಗಲ್ಲ. ಪುಟ್ಟ ಮಕ್ಕಳು ಇರುತ್ತವೆ. ಅವಕ್ಕೆ ಹಾಲು ಕುಡಿಸೋಕೆ ದುಡ್ಡು ಇರಲ್ಲ. ಆಗ ಅನೇಕ ಹೆಂಗಸ್ರು ದಾರಿ ತಪ್ಪಿ ಬಿಡ್ತಾರೆ. ದುಡ್ಡು ಕೊಡ್ತಾರೆ ಅಂದ್ರೆ ತಮ್ಮ ದೇಹದ ಭಾಗಗಳನ್ನು ಮಾರಾಟಕ್ಕಿಡ್ತಾರೆ. ಹಾಗಾಗಿ ಇಲ್ಲಿನ ಹೆಣ್ಣುಮಕ್ಕಳು ಬೇರೆ ದೇಶದವರಿಗೆ ಕಾಮದ ಸರಕು. ಫೇಸ್‌ಬುಕ್‌ನಲ್ಲಿ ಪಿಂಗ್ ಮಾಡಿ, ಯಾರಾದ್ರು ದುಡ್ಡು ಕೊಟ್ಟರೆ, ನಗ್ನ ಚಿತ್ರ ನೀಡಿ ದುಡ್ಡು ಕೊಟ್ಟವರನ್ನ ಖುಷಿಪಡಿಸಿ ಇವರ ಹೊಟ್ಟೆ ತುಂಬಿಸಿಕೊಳ್ಳೋದು ಇಲ್ಲಿನ ಅನೇಕರ ಹೊಟ್ಟೆಪಾಡು. ಎಲ್ಲರೂ ಹೀಗಲ್ಲ. ಆದ್ರೆ ಅಂಥ ಕೆಲವರಿಂದ ಈ ದೇಶದ ಎಲ್ಲ ಹೆಣ್ಣುಮಕ್ಕಳು ಸೆಕ್ಸ್ ಚಾಟ್‌ಗೆ ತೆರೆದುಕೊಂಡವರು ಅಂತ ಬೇರೆಯವರು ಭಾವಿಸಿಬಿಡ್ತಾರೆ.

***

ಇನ್ನು ಹೆಚ್ಚು ದಿನ ಕೆಲಸ ಮಾಡಿದ್ರೆ ಹಸಿವು ನೀಗಲ್ಲ ಅನ್ನಿಸ್ತು. ಮಗುಗೆ ಒಂದು ೪ ತಿಂಗಳು ಆಗ್ತಾ ಇದ್ದ ಹಾಗೆ ಹೊರಟೆ. ಇಲ್ಲಿನ ಒಂದು ಸಮಾಧಾನ ಸಂಗತಿ ಅಂದ್ರೆ ಒಂದಷ್ಟು ಏಜೆನ್ಸಿಗಳು ವಿದೇಶದಲ್ಲಿ ಕೆಲಸ ಕೊಡಿಸುತ್ತವೆ. ಹಾಗೆ ಕೆಲಸ ಕೊಡಿಸುವ ಒಂದು ಏಜೆನ್ಸಿಗೆ ಹೋಗಿ ನನ್ನ ಅರ್ಜಿ ಎಲ್ಲ ಪ್ರೊಸೆಸ್ ಮಾಡಿಸಿದೆ. ನಾನು ವಿದೇಶದಲ್ಲಿ ಕೆಲಸ ಮಾಡ್ಲಿಕ್ಕೆ ಅರ್ಹ ಅಂತ ಸರ್ಟಿಫಿಕೆಟ್ ಸಿಕ್ತು. ಆದ್ರೆ ಪ್ರೊಸೆಸಿಂಗ್ ಫೀ ಕೊಡ್ಲಿಕ್ಕೆ ಹಣ ಇರಲಿಲ್ಲ. ನೀವು ಅಲ್ಲಿ ಹೋಗಿ ಕೆಲಸಕ್ಕೆ ಸೇರಿ. ನಿಮ್ಮ ೫ ತಿಂಗಳ ಸಂಬಳದಲ್ಲಿ ಸ್ವಲ್ಪ ಸ್ವಲ್ಪ ನಮ್ಮ ಹಣ ಕಟ್ ಮಾಡಿಕೊಳ್ತೀವಿ ಅಂತ ಏಜೆನ್ಸಿಯವರು ಸಹಾಯ ಮಾಡಿ ಪುಣ್ಯಕಟ್ಟಿಕೊಂಡ್ರು.

ಮಕ್ಕಳನ್ನು ಇಲ್ಲೇ ಆಂಟಿ ಮನೇಲಿ ಬಿಟ್ಟೆ. ಪುಟ್ಟ ಮಗುನು ಬಿಟ್ಟು ಸಿಂಗಪುರಕ್ಕೆ ಹೊರಟೆ. ಅಲ್ಲಿ ಸಿಕ್ಕಿದ್ದು ಮನೆಯೊಂದರಲ್ಲಿ ಪುಟ್ಟ ಕಂದನನ್ನು ನೋಡಿಕೊಳ್ಳುವ ಕೆಲಸ. ಬದುಕು ಹೇಗಿರುತ್ತೆ ನೋಡಿ. ನನ್ನ ಪುಟ್ಟ ಕಂದನ್ನ ಬಿಟ್ಟು, ಯಾರೋ ದುಡ್ಡು ಕೊಡ್ತಾರೆ ಅಂತ ಇನ್ನೊಬ್ಬರ ಮನೆ ಕಂದನ ನೋಡಿಕೊಳ್ಳುವ ಕೆಲಸ!

ವರ್ಷ ಆಗುವ ಹೊತ್ತಿಗೆ ಎಲ್ಲವೂ ಅಂದುಕೊಂಡಂತೆ ಆಯ್ತು. ಕೈಯಲ್ಲಿ ಸ್ವಲ್ಪ ದುಡ್ಡು ಸೇರ‍್ತು. ಪ್ರತಿ ತಿಂಗಳು ಮಕ್ಕಳಿಗೆ ಅಂತ ಊರಿಗೆ ಇಲ್ಲಿಂದಲೇ ದುಡ್ಡು ಕಳಿಸ್ತಾ ಇದ್ದೆ. ವರ್ಷ ಆದಮೇಲೆ ಎಲ್ಲ ಮಕ್ಕಳನ್ನು ಕರೆದುಕೊಂಡು ಬಂದು ಇಲ್ಲಿ ಸೆಟೆಲ್ ಆದೆ. ಇಲ್ಲಿಗೆ ಬಂದು ೯ ವರ್ಷವಾಯ್ತು.

***

ನಗೊಂದು ಜೊತೆ ಬೇಕು. ನನ್ನ ಭಾವನೆಗಳನ್ನು ಹಂಚಿಕೊಳ್ಳಬೇಕು. ಬದುಕಿನಲ್ಲಿ ಬರಿ ನೋವೇ. ಇನ್ನಾದ್ರು ಚೂರು ಖುಷಿಪಡಬೇಕು ಅಂತ ಫೇಸ್‌ಬುಕ್‌ಗೆ ಬಂದೆ. ಒಂದಷ್ಟು ಜನರನ್ನು ಸ್ನೇಹಿತರನ್ನಾಗಿಸಿಕೊಂಡೆ. ಅವರ ಜೊತೆ ಮಾತಾಡುತ್ತ ನೋವನ್ನು ಮರೆತೆ. ಹೀಗೆ ಇಂಗ್ಲೆಂಡ್‌ನವನೊಬ್ಬ ಸ್ನೇಹಿತನಾದ. ೬ ತಿಂಗಳ ಚಾಟ್‌ನಲ್ಲಿ ಇಬ್ಬರು ಕಷ್ಟ-ಸುಖ ಹೇಳಿಕೊಂಡು ಫ್ರೆಂಡ್ಸ್ ಆದ್ವಿ. ನಾವಿಬ್ರು ಮದ್ವೆನೂ ಆಗಬೇಕು ಅಂತ ನಿರ್ಧಾರ ಮಾಡಿದ್ವಿ.

ನನ್ನ ಇಂಗ್ಲೆಂಡ್ ಕರೆಸಿಕೊಳ್ತೀನಿ, ಹಾಗೆ ಹೀಗೆ ಅಂತೆಲ್ಲ ಕಥೆ ಹೇಳಿದ್ದ ಅವ ೬ ತಿಂಗಳ ಬಳಿಕ ಬೇರೆಯದೆ ವರಾತ ತೆಗೆದ. ವೀಸಾಕ್ಕೆ ದುಡ್ಡು ಕೊಡು ಅಂತೆಲ್ಲ ಕೇಳಿದ. ಯಾಕೊ ಅನುಮಾನ ಬಂತು. ಕೊನೆಗೆ ಅವನ ನಿಜ ಬಣ್ಣ ಬಯಲಾಯ್ತು. ಅವನು ಫೇಕ್. ಅವನಿಂದ ನಂಗೇನು ನಷ್ಟ ಆಗ್ಲಿಲ್ಲ. ಬದುಕಿನ ಹಾದಿಯಲ್ಲಿ ತುಂಬಾ ಜನ ದೇಹದ ಸುಖಕ್ಕೆ ಕೇಳಿದ್ರು. ಕೊಡೋದಿದ್ರೆ ೫ ತಿಂಗಳ ಮಗು ಹೊಟ್ಟೆಯಲ್ಲಿದ್ದಾಗ್ಲೆ ಕೊಟ್ಟು ಬದುಕಿನಲ್ಲಿ ಸೆಟೆಲ್ ಆಗ್ತಿದ್ದೆ. ಆವಾಗ್ಲೆ ಹೇಳಿದ್ನಲ್ಲ ನಾನು ಬದುಕಿನಲ್ಲಿ ಸೋಲಬಾರದು ಅಂತ ನಿರ್ಧಾರ ಮಾಡಿದ್ದೆ. ಅದಕ್ಕೆ ಅಲ್ಲಿಂದ ಈ ಸಿಂಗಪುರದವರೆಗೆ ಬಂದೆ.

ಆತನಿಂದ ನಂಗೇನು ಆಗ್ಲಿಲ್ಲ. ಬಟ್ ಭಾವನೆಗಳ ಮೇಲೆ ಸಮಾಧಿ ಕಟ್ಟಿದ. ನಂಬಿಕೆಗಳನ್ನು ಘಾಸಿಗೊಳಿಸಿದ. ಗಂಡಸಿನ ಕುರಿತು ಮತ್ತೆ ಚಿಗುರಿದ್ದ ನಂಬಿಕೆಗೆ ಕೊಳ್ಳಿ ಇಟ್ಟ. ಹಾಗಂತ ನಾನೇನು ಗಂಡಸಿನ ವಿರೋಧಿಯಲ್ಲ.

ನಗ್ನವಾದವಳು ಬೇಕು. ಸುಖ ಕೊಡಬೇಕು. ಖುಷಿಪಡಿಸಬೇಕು. ಸುಮಾರು ೫ ವರ್ಷದಲ್ಲಿ ಮೊದಲು ೨ ವರ್ಷ ಬಿಟ್ಟು ನಂತರದ ೩ ವರ್ಷ ಗೊಂಬೆಯಂಥೆ ನಿಂತು ಆ ಕೆಲಸ ಮಾಡಿದ್ದೇನೆ. ಮತ್ತೆ ಅದನ್ನು ಮಾಡಲು ಮನಸ್ಸಿಲ್ಲ. ಕೊನೆಯದಾಗಿ ಒಂದೇ ಮಾತು. ನಗ್ನತೆ ನಾವು ಹುಟ್ಟುತ್ತಲೆ ನಮ್ಮ ಜೊತೆ ಬಂದಿರುತ್ತೆ. ನೆನಪಿಟ್ಟುಕೊಳ್ಳಿ. ಕಣ್ತುಂಬಿಕೊಳ್ಳಿ. ಒಂದು ಹೆಣ್ಣು ನಗ್ನವಾಗದೆ ನೀವ್ಯಾರು ಹುಟ್ಟಲ್ಲ. ಎಂಜಾಯ್ ಸೆಲ್ಫಿ ವಿತ್ ನ್ಯೂಡ್. ಥ್ಯಾಂಕ್ಸ್

(ಭಾವಾನುವಾದ)

 

 

 

 

 

Read Full Post »

maxresdefault.jpgಗಾಂಧೀಜಿಯವರ ಆತ್ಮಕತೆ ‘ಸತ್ಯಾನ್ವೇಷಣೆ’ ಓದುತ್ತಿದ್ದೆ. ಗೋಡ್ಸೆ ಗಾಂಧಿಯನ್ನು ಕೊಂದ ಎಂಬ ಕಾರಣಕ್ಕೆ ಗೋಡ್ಸೆ ಬಳಗವನ್ನು ವಿರೋಧಿಸುವ ಒಂದಷ್ಟು ಜನ. ಗೋಡ್ಸೆ ವಿರೋಧಿಗಳು ಎಂಬ ಕಾರಣಕ್ಕೆ ಗಾಂಧಿಯವರನ್ನು ಜರಿಯುವ ಮತ್ತೊಂದಷ್ಟು ಜನ. ಈ ಸಂಘರ್ಷದಲ್ಲಿ ಗಾಂಧೀಜಿ ಆಲೋಚನೆಗಳು ಕಳೆದು ಹೋದವೇನೋ ಎಂದು ಆಲೋಚಿಸುವ ಹೊತ್ತಿಗೆ ಪ್ರಧಾನಿ ಮೋದಿ ‘ಸ್ಟಾರ್ಟಪ್‌ ಇಂಡಿಯಾ’ಕ್ಕೆ ಕರೆ ಕೊಟ್ಟಿದ್ದಾರೆ.

ದಕ್ಷಿಣಾಫ್ರಿಕದಲ್ಲಿ ತಮ್ಮ ಮಗನಿಗೆ ವಿದ್ಯಾಭ್ಯಾಸ ಕೊಡಿಸಲು ಗಾಂಧೀಜಿ ಹೆಣಗುತ್ತಾರೆ. ಗುಜರಾತಿ ಭಾಷೆಯಲ್ಲಿಯೇ ಅವನ ವಿದ್ಯಾಭ್ಯಾಸ ನಡೆಯಬೇಕು ಎಂಬುದು ಅವರ ಬಯಕೆ. ಕೊನೆಗೆ ಅದು ಸಾಧ್ಯವಾಗುವುದಿಲ್ಲ. ಆಗ ಗಾಂಧೀಜಿ ಹೀಗೆ ಬರೆಯುತ್ತಾರೆ: “ಗುಲಾಮಗಿರಿಯ ಕೋಟೆಗಳಾಗಿರುವ ಸ್ಕೂಲು ಕಾಲೇಜುಗಳನ್ನು ತೊರೆದು ಬನ್ನಿ. ಗುಲಾಮಗಿರಿಯ ಸಂಕೋಲೆಗಳೊಡನೆ ಅಕ್ಷರ ಜ್ಞಾನವನ್ನು ಸಂಪಾದಿಸುವುದರ ಬದಲು, ಸ್ವಾತಂತ್ರ್ಯಕ್ಕಾಗಿ ಕಲ್ಲು ಒಡೆಯುತ್ತಾ ಅನಕ್ಷರಸ್ಥರಾಗಿ ಉಳಿಯುವುದು ಉತ್ತಮ”.

ಯಾಕೊ, ಗಾಂಧೀಜಿಯವರ ಈ ಸಾಲುಗಳು ತುಂಬಾ ಕಾಡುತ್ತಿವೆ. ಇಂದಿನ ಶಿಕ್ಷಣ ವ್ಯವಸ್ಥೆ ಒಂದು ರೀತಿ ಪ್ರಾಡಕ್ಟ್‌ಗಳನ್ನು ಹುಟ್ಟುಹಾಕುವ ಸಂಸ್ಥೆಯಾಗಿ ಕಾಣಿಸುತ್ತಿದೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಬೇರಿಂಗ್‌ ಉತ್ಪಾದಿಸುವ ಕಂಪನಿಯಲ್ಲೋ, ಆಪ್‌ ತಯಾರಿಸುವ ಸಂಸ್ಥೆಯಲ್ಲೋ, ಮೆಮೊರಿ ಚಿಪ್‌ಗಳಲ್ಲಿ ಪ್ರೋಗ್ರಾಂ ತುರುಕುವ ಜಗತ್ತಿನಲ್ಲೋ, ಸಾಮಾನ್ಯರ ರಕ್ತ ಹೀರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೋ ಗುಲಾಮಗಿರಿಗೆ ಸಜ್ಜಾಗಿ ಒಂದಷ್ಟು ಪ್ರಾಡಕ್ಟ್‌ಗಳು ಹೊರಬರುತ್ತವೆ.

ಈ ಸಾಲುಗಳು ನಿಮಗೆ ರುಚಿಸದೆ ಇರಬಹುದು. ನಾವು ನಮ್ಮ ಇಚ್ಛೆಯಿಂದ ಕೋರ್ಸ್‌ ಮಾಡಿದ್ದೇವೆ. ನೀವೇಕೆ ಅದನ್ನು ಗುಲಾಮಗಿರಿ ಎನ್ನುವಿರಿ? ಎಂದು ಪ್ರಶ್ನಿಸಬಹುದು. ಫೈನ್‌, ನೀವು ಕೋರ್ಸನ್ನು ಇಚ್ಛೆಯಿಂದಲೇ ಮಾಡಿದ್ದೀರಿ. ಆದರೆ ಕೋರ್ಸ್‌ ಮುಗಿಸಿದ ಶೇ.೭೦ರಷ್ಟು ಮಂದಿಯನ್ನು ಕೇಳಿನೋಡಿ. ಅವರ್ಯಾರು ಇಚ್ಛೆಯಂತೆ ಕೆಲಸ ಮಾಡುತ್ತಿರುವುದಿಲ್ಲ! ಶಿಕ್ಷಣಕ್ಕಾಗಿ ಮಾಡಿದ ಸಾಲ ತೀರಿಸಲಿಕ್ಕೋ, ದಿನನಿತ್ಯದ ಬದುಕಿಗಾಗಿಯೋ ತಾವು ಮಾಡಿದ ಕೋರ್ಸ್‌ನಲ್ಲಿ ಉತ್ತಮ ಸಂಬಳ ಸಿಗಬಹುದಾದ ಕೆಲಸ ಮಾಡುತ್ತಿರುತ್ತಾರೆ. ಹಾಗಂತ ನಾನು ಹೇಳುತ್ತಿಲ್ಲ. ಕೆಲಸ ಮಾಡುವ ಹಲವರು ಹೇಳುತ್ತಾರೆ! ‘ಅದೇ ಲೈಫು ಗುರು. ಅದೇ ಆಫೀಸು, ಅದೇ ಕೆಲಸ’ ಎಂದು ನಿರುತ್ಸಾಹದಿಂದ ಹೇಳುವವರೇ ನಮ್ಮಲ್ಲಿ ಹೆಚ್ಚು ಬಿಟ್ಟರೆ, ವಾವ್‌ ಅದ್ಭುತವಾದ ಕೆಲಸ. ದಿನ ಕಳೆದಿದ್ದೆ ಗೊತ್ತಾಗುವುದಿಲ್ಲ ಎಂಬುವವರು ಕಡಿಮೆ.

ಇಂಥ ಹೊತ್ತಿನಲ್ಲಿ ಮೋದಿ ‘ಮೇಕ್‌ ಇನ್‌ ಇಂಡಿಯಾ’ ಕನಸು ಘೋಷಿಸಿದ್ದಾರೆ. ಸ್ಟಾರ್ಟಪ್‌ಗಳಿಗೆ ಹೊಸ ಯೋಜನೆ ಅನೌನ್ಸ್‌ ಮಾಡಿದ್ದಾರೆ. ಅದೆನೇನೋ ವಿನಾಯಿತಿಗಳು. ನೀವು ನಿಮ್ಮ ಬುದ್ಧಿ ಉಪಯೋಗಿಸಿ ಸ್ವಂತ ಕೆಲಸ ಮಾಡಿ. ಖುಷಿಪಡಿ. ಸಾಕಷ್ಟು ಗಳಿಕೆ ಮಾಡಿರಿ. ನಿಜಕ್ಕು ಭಾರತ ಹೆಮ್ಮೆಪಡುವ ಕೆಲಸ. ಮತ್ತೊಂದಷ್ಟು ಬೇರಿಂಗ್‌ ಉತ್ಪಾದನೆ ಕಂಪನಿಗಳು, ತರತರೇವಾರಿ ಪ್ರೊಗ್ರಾಂಗಳನ್ನು ಬರೆದು ಸಾಫ್ಟ್‌ವೇರ್‌ ಹುಟ್ಟುಹಾಕುವ ಸಂಸ್ಥೆಗಳು, ಆನ್‌ಲೈನ್‌ ಆರ್ಡರ್‌ ಮಾಡಿದರೆ ಡೋರ್‌ ಡಿಲೆವರಿ ಕೊಡುವ ಸ್ಟಾರ್ಟಪ್‌ಗಳು ಹುಟ್ಟುತ್ತವೆ.

ಇನ್‌ ಬಿಟ್ವೀನ್‌ ಮಲ್ಲೇಶ್ವರಂನ ೯ನೇ ಕ್ರಾಸ್‌ನಲ್ಲಿ ಸಿಂಚು ದೋಸೆ ಅಂತೊಂದು ಕೈಗಾಡಿ ದೋಸೆ ಸೆಂಟರ್‌ ಇದೆ. ಆಟೋದಲ್ಲಿ ೯೯ ಥರದ ದೋಸೆ ಮಾಡುತ್ತಾನೆ. ಅವರ ಬುಟ್ಟಿಯಲ್ಲಿ ಬೇಬಿಕಾರ್ನ್‌, ಸ್ವೀಟ್‌ ಕಾರ್ನ್‌, ಪನ್ನೀರ್‌, ಚೀಸು ಸೇರಿ ೧೪ ಐಟಂಗಳಿದೆ. ನಮಗೆ ಗಣಿತದಲ್ಲಿ ಫರ್ಮ್ಯುಟೇಷನ್‌ ಮತ್ತು ಕಾಂಬಿನೇಷನ್‌ ಅಂತೊಂದು ಪಾಠವಿತ್ತು. ಅದನ್ನು ಆತ ಅದೆಷ್ಟು ಚೆನ್ನಾಗಿ ಬಳಿಸಿಕೊಂಡಿದ್ದಾನೆ ಎಂದರೆ, ಕೇವಲ ೧೫ ಐಟಂಗಳಿಂದ ೯೯ ದೋಸೆ ಮಾಡುತ್ತಾನೆ.

ಮೊನ್ನೆ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ(ಎಕನಾಮಿಕ್‌ ಟೈಮ್ಸ್‌) ಒಂದು ವರದಿ ಮಾಡಿತ್ತು. ನಮ್ಮ ದೇಶದಲ್ಲಿ ಶೇ.೮೦ರಷ್ಟು ಸ್ಟಾರ್ಟಪ್‌ಗಳು ಮೊದಲ ವರ್ಷದ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳುತ್ತಿಲ್ಲ ಎಂದು!

ಮೈಸೂರು-ಹುಣಸೂರು ಹೈವೆಯ ಹೂಟಗಳ್ಳಿಯಲ್ಲಿ ಪ್ರಿಯದರ್ಶಿನಿ ಅಂತೊಂದು ಹೊಟೆಲ್‌ ಇದೆ. ಅಲ್ಲಿ ಸಂಕ್ರಾಂತಿ ಪ್ರಯುಕ್ತ ಸದಸ್ಯರಿಗೆ ಏನೋ ಸ್ಪರ್ಧೆ. ೨೫ ಕೆಜಿ ಅಕ್ಕಿ ಗೆಲ್ಲುವ ಅವಕಾಶ ಎಂದಿತ್ತು. ನಂಗೆ ಸಖತ್‌ ಇಷ್ಟ ಆಯ್ತು. ಅಕ್ಕಿ ಗೆಲ್ಲುವ ಅವಕಾಶ. ವಾವ್‌ ಅನ್ನಿಸ್ತು. ಫಿಜ್ಜಾ ಜೊತೆ ಬರ್ಗರ್‌ ಫ್ರಿ ಎಂಬ ಕಾಲದಲ್ಲಿ ಭತ್ತದ ಕೃಷಿಕನ ಪರವಾಗಿ ಆಲೋಚಿಸಿ ಅಕ್ಕಿಯನ್ನು ಬಹುಮಾನವಾಗಿ ಇಟ್ಟ ಆ ಹೊಟೆಲ್‌ ಕುರಿತು ತುಂಬಾ ಖುಷಿಯಾಯ್ತು.

ಸ್ಟಾರ್ಟಪ್‌ಗಳ ಬಗ್ಗೆ ಮಾತಾಡುತ್ತಿದ್ವಿ. ಅದೇ ನನ್ನ ಹಾಗೆ ಅಲ್ಲಿ ದುಡಿಯುವುದು ಗುಲಾಮಿತನ, ಇಲ್ಲಿ ಕೆಲಸ ಮಾಡುವುದು ಕಷ್ಟ ಅಂತ ಆಲೋಚಿಸಿ ಉಮೇದಿನಲ್ಲಿ ಸ್ಟಾರ್ಟಪ್‌ ಮಾಡುವ ಮನಸ್ಸುಗಳು ಸಾಕಷ್ಟಿವೆ. ಒಂದಷ್ಟಕ್ಕೆ ಹೂಡಿಕೆದಾರರು ಸಿಗುತ್ತಾರೆ. ಅಷ್ಟಾಗಿಯೂ ವರ್ಷಕ್ಕೆ ಯಶಸ್ಸಾಗುವುದು ಶೇ.೨೦ರಷ್ಟು ಸ್ಟಾರ್ಟಪ್‌ಗಳು ಮಾತ್ರ. ಕಾರಣ ಮಾರುಕಟ್ಟೆಯನ್ನು ಆವರಿಸಿರುವ ದೊಡ್ಡ ಬಂಡವಾಳಗಾರರು ಹಾಗೂ ಅವರು ಮಾರುಕಟ್ಟೆಯನ್ನೇ ಬಾಚಿಕೊಂಡು ನೀಡುತ್ತಿರುವ ಸ್ಪರ್ಧೆ.

ಸಿಂಚು ದೋಸೆ ಕಥೆಗಿನ್ನು ಲಿಂಕ್‌ ಸಿಕ್ಕಿಲ್ಲ . ಅದೇ ಕಥೆ ಮುಂದುವರಿಸುತ್ತ ಅಲ್ಲಿಂದ ಮುಂದೆ ಸಾಗಿದರೆ ಸಿಗುವ ಸಾಯಿರಾಂ ಚಾಟ್ಸ್‌ ಸೆಂಟರ್‌ ಬಗ್ಗೆ ಹೇಳ್ತೀನಿ. ಮಲ್ಲೇಶ್ವರಂ ೧೫ ಕ್ರಾಸ್‌ನಲ್ಲಿರುವ ಸಾಯಿರಾಂನಲ್ಲೂ ೯೯ ವಿಧದ ಚಾಟ್ಸ್‌ಗಳಿವೆ ಮತ್ತು ಎಲ್ಲವೂ ಬಾಯಲ್ಲಿ ನೀರೂರಿಸುವವು. ಅಲ್ಲಿಂದ ಕಾರ್ಡ್‌ ರಸ್ತೆಗೆ ಬಂದರೆ ಅಜ್ಜನೊಬ್ಬ ಖರ್ಜೂರ, ದ್ರಾಕ್ಷಿ ಮಾರುತ್ತಾನೆ. ಅಲ್ಲಿಗೆ ಬರುವ ಪೊಲೀಸ್‌ ಪೇದೆ ೨೦೦ ರೂ. ಮಾಮೂಲು ಕೊಡಲ್ಲ ಎಂದ ಅಜ್ಜನನ್ನು ತಳಿಸಿ ಅಂಗಡಿ ಎತ್ತಂಗಡಿ ಮಾಡುತ್ತಾನೆ. ಬೀಟ್‌ ಪೊಲೀಸ್‌ನೊಬ್ಬ ಹಾದಿಯಲ್ಲಿ ಟೈಪ್‌ ರೈಟ್‌ ಮಾಡುವ ವೃದ್ಧನನ್ನು ತಳ್ಳಿಸಿದ ದೃಶ್ಯ ಕೆಲ ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಅಂಥ ಅದೆಷ್ಟು ಘಟನೆಗಳು ನಿತ್ಯವೂ ನಡೆಯುತ್ತವೆಯೋ ಗೊತ್ತಿಲ್ಲ.

ನಾವೀಗ ಆನ್‌ಲೈನ್‌ ಯುಗದಲ್ಲಿದ್ದೇವೆ. ಕುಳಿತಲ್ಲೇ ಎಲ್ಲವೂ ಆಗಬೇಕು. ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಭಾರತ ಹಳ್ಳಿಗಳ, ಕೃಷಿಪರ ರಾಷ್ಟ್ರ. ಅದೆಷ್ಟೆ ನಗರೀಕರಣವಾದರೂ, ಬೆಂಗಳೂರಿನ ಎಷ್ಟೋ ಹಳ್ಳಿ ಮೂಲೆಗಳು ಸೈಟ್‌ಗಳಾಗಿ ಬದಲಾದರು ಭಾರತದಲ್ಲಿ ಹಳ್ಳಿಯ ಪ್ರಮಾಣ ಶೇ.೬೫ಕ್ಕಿಂತ ಕಡಿಮೆಯೇನೂ ಆಗಿಲ್ಲ. ನಮ್ಮ ಆರ್ಥಿಕತೆ ಬೆನ್ನುಲುಬೇ ಕೃಷಿ.

೯೯ ದೋಸೆಗಳಲ್ಲಿ ಎಲ್ಲವೂ ತರಕಾರಿಯದ್ದೆ. ಪನ್ನೀರ್‌ ಮತ್ತು ಚೀಸ್‌ ಎರಡು ಇವತ್ತಿನದ್ದು. ಅವನದು ಅದೇ ಗೋಳು. ಸರ್‌ ಪೋಲಿಸ್ರಿಗೆ ದುಡ್ಡು ಕೊಟ್ಟೇ ಮುಗಿಯೋದಿಲ್ಲ. ಅಧಿಕಾರಿಗಳು ನೆಮ್ಮದಿಯಿಂದ ವ್ಯಾಪಾರ ಮಾಡೋಕೆ ಬಿಡಲ್ಲ. ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳು ಹಾಳಾಗಲಿ, ಬಾಡಿಗೆ ಪಡೆದು ಅಂಗಡಿ ನಡೆಸುವವರು ಮಾಮೂಲಿ ಕೊಡಬೇಕು. ಇಲ್ಲ ಅಂದ್ರೆ ದಬ್ಬಾಳಿಕೆ ಮಾಡ್ತಾರೆ.

ಅದೇನೋ ಸ್ಟಾರ್ಟಪ್‌, ವಿನಾಯಿತಿಗಳು…ಇಷ್ಟೆಲ್ಲದರ ನಡುವೆ ವರ್ಷಕ್ಕೆಶೇ. ೮೦ ಕಂಪನಿ ಬಾಗಿಲು ಹಾಕುತ್ತವೆ. ಇನ್‌ ಬಿಟ್ವೀನ್‌ ರಾಮಣ್ಣ ದಿನಕ್ಕೆ ೨೦೦ರೂ. ಪೊಲೀಸರಿಗೆ ಮಾಮೂಲಿ ಕೊಟ್ಟೂ ಅಂಗಡಿ ನಡೆಸುತ್ತಾನೆ. ಆ ೨೦೦ ರೂ. ದುಡಿಯಲು ಇಡಬಹುದಾದ ಬೇರೆ ಉತ್ಪನ್ನಗಳ ಕುರಿತು ಆಲೋಚಿಸುತ್ತಾನೆ. ೭ ಗಂಟೆಗೆ ಅಂಗಡಿ ಬಾಗಿಲು ತೆಗೆಯುವವನು, ಪೊಲೀಸ್‌ ಮಾಮೂಲಿ ಹೆಚ್ಚಾದಾಗ ೬ ಗಂಟೆಗೆ ಬಾಗಿಲು ತೆರೆಯುತ್ತಾನೆ. ಯಾಕಂದ್ರೆ ಅಂಗಡಿ ಬಿಟ್ಟು ಮತ್ತೊಂದು ಉದ್ಯೋಗ ರಾಮಣ್ಣನಿಗೆ ಗೊತ್ತಿಲ್ಲ. ಸಿಂಚು ದೋಸೆ ಪಾಯಿಂಟ್‌ನದ್ದು ಅದೇ ಕಥೆ.

ಇಷ್ಟೆಲ್ಲದರ ನಡುವೆ ನಿಮ್ಮ ಸಮಸ್ಯೆ ಏನು ಎನ್ನುವಿರಾ? ನಾವು ರೊಟ್ಟಿ ತಿನ್ನುವ, ದೋಸೆ ತಿನ್ನುವ ಉದ್ಯಮ ಹೆಚ್ಚಿಸಬೇಕು. ಹಾಗಿದ್ರೆ ದೇಶವಿಡಿ ಹೊಟೆಲ್‌ನೇ ಮಾಡಿಬಿಡಿ ಅನ್ನಬಹುದು ನೀವು. ಅದಲ್ಲ ಹೇಳುತ್ತಿರುವ ವಿಷಯ. ವಾಹನ ಬಳಕೆ ಹೆಚ್ಚಾಗುತ್ತಿದೆ. ಹಾಗಾಗಿ ಬೇರಿಂಗ್‌ ಕಂಪನಿಗಳು ಬೇಕು. ಹಾಗೆಯೆ ಕೃಷಿ ಉತ್ಪನ್ನ ಆಧಾರಿತ ಪ್ರಾಡಕ್ಟ್‌ಗಳ ಬಳಕೆಯೂ ಹೆಚ್ಚಾಗುವ ಉದ್ದಿಮೆಗಳು ಬರಬೇಕು. ಮೊಬೈಲ್‌, ಇಂಟರ್‌ನೆಟ್‌, ಸಾಫ್ಟ್‌ವೇರ್‌ನಿಂದ ದೇಶಕ್ಕೆ ಲಾಭವಿಲ್ಲ ಎಂದಲ್ಲ. ಆದರೆ ಅಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದ ಟೊಮೆಟೊ, ಬಾಳೆಕಾಯಿಯನ್ನು ರೈತ ಕಣ್ಣೀರಿಡುತ್ತ ರಸ್ತೆಗೆಸುಯುವಾಗ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಕರುಳು ಕಿವುಚುತ್ತದೆ.

ಖಂಡಿತ ಒಬ್ಬ ರಾಮಣ್ಣನಿಗೆ ನೀವು ಯಾವ ವಿನಾಯಿತಿಯನ್ನು ಕೊಡುವುದು ಬೇಡ. ಜೊತೆಗೆ ಆತ ನಾನಾ ಕಡೆ ಬ್ರ್ಯಾಂಚ್‌ಗಳನ್ನು ಮಾಡಲಾರ. ಅಧಿಕಾರಿಗಳ ದಬ್ಬಾಳಿಕೆಯಿಲ್ಲದೆ ನೆಮ್ಮದಿಯಿಂದ ವ್ಯಾಪಾರ ಮಾಡಲು ಬಿಡಿ. ಮಿಕ್ಕಿದ್ದು ಆತನಿಗೆ ಗೊತ್ತಿದೆ. ಹಾಗೆಯೇ ನೀವು ಸ್ಟಾರ್ಟಪ್‌ ಹೆಸರಿನಲ್ಲಿ ಒಂದಿಷ್ಟು ಕೃಷಿ ಆಧಾರಿತ, ನಮ್ಮ ನೆಲದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಬಲ್ಲ ಉದ್ದಿಮೆಯನ್ನು ಉತ್ತೇಜಿಸಿ. ಡೋರ್‌ ಡಿಲೆವರಿ ನೀಡುವ ಫಿಜ್ಜಾ ಕೇಂದ್ರಗಳು ಬೇಡ. ಎಳನೀರು, ಮಜ್ಜಿಗೆ ಡೋರ್‌ ಡಿಲೆವರಿ ಸಿಗಲಿ. ಈಗಿರುವ ಸ್ವಾಲವಂಬಿ ಕೇಂದ್ರಗಳು, ಗ್ರಾಮೀಣಾಭಿವೃದ್ಧಿ ಕೇಂದ್ರಗಳಿಗೆ ಇನ್ನಷ್ಟು ಜೀವ ತುಂಬಿ. ಆಗ ಖಂಡಿತ ಬೆಂಗಳೂರಿನಂಥ ನಗರದಲ್ಲಿ ಕಸ ನಿರ್ವಹಣೆ ಹೇಗೆ ಎಂಬ ಸಮಸ್ಯೆಯೇ ಬರುವುದಿಲ್ಲ.

ಇದ್ರಲ್ಲಿ ಖಂಡಿತ ಸಂಸ್ಕೃತಿ, ಸನಾತನತೆ ಯಾವ ಬೂದಿಯೂ ಇಲ್ಲ. ನಮ್ಮ ನೆಲದ ಮಂದಿ ಖುಷಿಯಾಗಿರಬಹುದೆಂಬುದಷ್ಟೆ ಆಶಯ. ಒಬ್ಬ ಗಾಂಧೀಜಿ ಶಾಖಾಹಾರದ ಕುರಿತು ಆಳವಾಗಿ ಅಧ್ಯಯಿನಿಸಿ ಇಂಗ್ಲೆಂಡ್‌, ದಕ್ಷಿಣಾಫ್ರಿಕಗಳಲ್ಲೂ ಸಸ್ಯಾಹಾರಿ ಉತ್ತೇಜನದ ಕೆಲಸ ಮಾಡಿದ್ದು ಇದೇ ಕಾರಣಕ್ಕೆ. ಆದರೆ ಅಂಥ ಗಾಂಧಿಯನ್ನು ಬದಿಗಿಟ್ಟ ನಾವು ಗೋಡ್ಸೆ, ಪಂಥ, ರಾಜಕೀಯದ ಗಾಂಧಿಯನ್ನುಮಾತ್ರ ಉಳಿಸಿಕೊಂಡಿದ್ದೇವೆ. ನಾನಿಲ್ಲಿ ಒಂದು ಬೆಂಗಳೂರಿನ ವ್ಯಾಪಾರಿಗಳ ಕಥೆಯನ್ನು ಉದಾಹರಿಸಿದ್ದೇನೆ. ಇದು ನಮ್ಮ ದೇಶದ ಎಲ್ಲ ಮೂಲೆಯ ಸಣ್ಣ ವ್ಯಾಪಾರಿ, ಉದ್ದಿಮೆದಾರರ ಕಥೆಯೂ ಹೌದು.

 

Read Full Post »

ಇನ್ನೆಷ್ಟು ದಿನ ಕಿವಿ ಮೇಲೆ ಹೂವಿಡ್ತೀರಾ?!

1kannada-news-channel

ಇದು ಇಂಟರ್‌ನೆಟ್ ಜಗತ್ತು. ಒಂದು ಸುದ್ದಿ, ಮಾಹಿತಿ ಮಾಧ್ಯಮಗಳಿಗಿಂತ ಮೊದಲು ಮೊಬೈಲ್‌ನಿಂದ ಓದುಗನ ಕೈಸೇರುತ್ತಿದೆ. ಜನ ಟಿವಿ ನೋಡ್ತಾರೋ, ಪೇಪರ್ ಓದ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಕೈಯ್ಯಲ್ಲಿರೋ ಮೊಬೈಲ್‌ನಿಂದ ಆಗಾಗ ಜಾಲತಾಣಗಳನ್ನು ಜಾಲಾಡುತ್ತಾರೆ. ನಗರವಾಸಿಗಳು ಮಾತ್ರ ಈ ಇಂಟರ್‌ನೆಟ್ ಜಗತ್ತಿನಲ್ಲಿ ಬದುಕೋರು ಅನ್ನೋ ಟ್ರೆಂಡ್ ಬದ್ಲಾಗ್ತಿದೆ. ಹಳ್ಳಿ ಮೂಲೆಯವನಿಗೂ ಸ್ಮಾರ್ಟ್‌ಫೋನ್ ಬಳಕೆ ಗೊತ್ತಾಗಿದೆ. ಹೀಗಿರುವಾಗ ನಮ್ಮ ಮಾಧ್ಯಮಗಳು ಅದೆಷ್ಟು ಎಚ್ಚರವಾಗಿದ್ದರು ಸಾಕಾಗಲಾರದು.
ಹೀಗೆಲ್ಲ ಸ್ಪರ್ಧೆ ಎದುರಾಗಿರುವಾಗಲು ನಮ್ಮ ಒಂದಷ್ಟು ಮಾಧ್ಯಮಗಳು ಮತ್ತಷ್ಟು ಬೇಜವಬ್ದಾರಿಯುತವಾಗುತ್ತಿರುವುದು ಬೇಸರದ ಸಂಗತಿ. ಜಾಲತಾಣದಲ್ಲಿ ಜಾಲಾಡುವಷ್ಟು ಜಾಣತನವಿರುವ ವ್ಯಕ್ತಿ ಖಂಡಿತ ವಿವೇಕಿ. ಆತನಿಗೆ ಒಂದು ಸುದ್ದಿಯನ್ನು ಕ್ರಾಸ್‌ಚೆಕ್ ಮಾಡಿ ಅದರ ಹಿನ್ನೆಲೆಯನ್ನು ಹುಡುಕುವಷ್ಟು ವಿವೇಚನೆ ಇರುತ್ತದೆ. ಇಂತಿಪ್ಪ ಕಾಲದಲ್ಲೂ ನೀವು ನಿಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು, ಸ್ಟೋರಿಗಳನ್ನು ಮಾಡಿಕೊಂಡು ಯಾರ ಕಿವಿ ಮೇಲೆ ಹೂವು ಇಡಲು ಹೊರಟಿರುವಿರಿ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.
ಮಾಧ್ಯಮ ಜಾಹೀರಾತು ಆಧಾರಿತ. ಪತ್ರಿಕೆಯೋ, ಟಿವಿಯೋ ಉಳಿಯಬೇಕಾದರೆ ಅದಕ್ಕೆ ಜಾಹೀರಾತು ಬೇಕು. ಪೇಯ್ಡ್ ನ್ಯೂಸ್‌ಗಳು ಬರುತ್ತವೆ ಎಂಬುದನ್ನೆಲ್ಲ ನಾವೆಲ್ಲ ಒಪ್ಪಿಕೊಂಡಿದ್ದೇವೆ. ಜಪಾನಿ ತೈಲದ ಜಾಹೀರಾತನ್ನು ಇದೇ ಒಂದು ದೃಷ್ಟಿಯಿಂದ ಸಹಿಸಿಕೊಂಡಿದ್ದೇವೆ! ಇಷ್ಟಾಗಿಯೂ ನಿಮ್ಮ ಒಂದಷ್ಟು ಬೇಜವಬ್ದಾರಿತನಕ್ಕೆ ಕೊನೆಯೆಂದು ಎಂಬುದಕ್ಕೆ ಮಾತ್ರ ಉತ್ತರ ಸಿಗುತ್ತಿಲ್ಲ.
ಹಿಂಗೆಲ್ಲ ಮಾತಾಡಿದ್ರೆ ನಾನು ಮಾಧ್ಯಮ ಜಗತ್ತಿನ ಜವಬ್ದಾರಿತನಕ್ಕೆ ರಾಯಭಾರಿಯಂತೆ ವರ್ತಿಸುತ್ತೇನೆ ಎಂದು ಒಂದಷ್ಟು ಜನ ಉರಿದುಕೊಳ್ತಾರೆ ಅಂತ ಗೊತ್ತು ಬಿಡಿ. ಆ ಹುದ್ದೆಯ ಕನಸು, ಭ್ರಮೆ ಎರಡು ಇಲ್ಲ. ಯಾವ ಮೀಡಿಯಾ ಯಾರ ಒಡೆತನದ್ದು? ಅಲ್ಲಿ ಯಾರ ಸುದ್ದಿ ಬರುತ್ತೆ, ಯಾರದ್ದು ಬರಲ್ಲ ಎನ್ನುವುದೆಲ್ಲ ಇವತ್ತು ಗುಟ್ಟಾಗಿ ಉಳಿದಿಲ್ಲ ಅಥವಾ ಓದುಗ ಅದನ್ನು ಬಯಸುವುದೂ ಇಲ್ಲ. ಆದ್ರೆ ಅದು ಸೃಷ್ಟಿಸಿರುವ ದುರಂತ ಪರದೇಶಿಗಳ ಮೇಲೆ ಮಾಧ್ಯಮಗಳ ಆಕ್ರಮಣ. ಜಾಹೀರಾತು ಎಂಬ ಹೆಸರಿನಲ್ಲೋ, ಪೇಯ್ಡ್ ಎಂಬ ಸ್ಪೇಸ್‌ನಿಂದಲೋ ದುಡ್ಡಿದ್ದವರು ಮಾಧ್ಯಮಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ. ಒಂದಷ್ಟು ಜನರ ಸುದ್ದಿಯನ್ನು ಯಾವ ಲೆಕ್ಕದಲ್ಲಿ ಅಳೆದು ತೂಗಿದರು ಹಾಕಲು ಸಾಧ್ಯವಿಲ್ಲ. ನಾಟಿ ವೈದ್ಯದಿಂದ ಅರಣ್ಯ ನಾಶ ಎನ್ನುವವರು, ಕೆಲವರ ರೆಸಾರ್ಟ್‌ನಿಂದಾಗುವ ಲೂಟಿ ಕುರಿತು, ಕಾರ್ಪೊರೇಟ್ ಆಸ್ಪತ್ರೆಗಳ ಸುಲಿಗೆ ಕುರಿತು ಮಾತನಾಡಲಾರರು! ಅವರು ಇಂಥದ್ದೇ ವಿಷಯದ ಕುರಿತು ಮಾತನಾಡಬೇಕು, ಇಂಥದ್ದನ್ನು ಮಾತನಾಡಬಾರದು ಎನ್ನಲು ನಾವ್ಯಾರು ಅಲ್ಲ. ಅವರ ಸ್ಪೇಸ್, ಅಧಿಕಾರ, ಅವರ ವಿವೇಚನೆ.
ವಿಷ್ಯ ಅದಲ್ಲ. ನೋಡಿದ್ರೆ ಗೊತ್ತಾಗುತ್ತೆ ಈ ಸುದ್ದಿಯಲ್ಲಿ ಏನು ಹುರುಳಿಲ್ಲ, ಇದು ಒಂದು ಮುಖದ ಸುದ್ದಿ ಅಂತ. ಆದ್ರು ನೀವು ಯಾರಿಗೂ ಕೇರ್ ಎನ್ನದೆ ಅಂಥದ್ದನ್ನೇ ಪ್ರಕಟಿಸ್ತೀರಿ. ನೋಡುಗ ಮುರ್ಖ ಅಂತ ನೀವೇ ನಿರ್ಧಾರ ಮಾಡಿಬಿಡ್ತೀರಿ! ನಿಮ್ಮ ಧೈರ್ಯವನ್ನು ಮೆಚ್ಚಲೇ ಬೇಕು. ಈ ನಡುವೆ ಮಾಧ್ಯಮಗಳಿಗೆ ಸುದ್ದಿಯ ಕೊರತೆ ಇದೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ತೀರ ೧೦-೨೦ರೂ. ಸಂಪಾದಿಸುವ ದುರ್ಬಲರ ಮೇಲೆ ಸವಾರಿ ನಡೆಸಿ, ಯಾರದ್ದೋ ಸಂಸಾರದ ಸಮಸ್ಯೆಯ ಸಂಧಾನ ನಡೆಸಿ ನೀವು ಸಾಮಾಜಿಕ ಕಾಳಜಿ ಮೆರೆಯುತ್ತಿರುವುದನ್ನು ನೋಡುಗ/ಓದುಗರಾದ ನಾವೆಲ್ಲ ನೋಡಿ, ಓದಿ ಭೇಷ್ ಎನ್ನಬೇಕು! ಸಂಭ್ರಮಿಸಬೇಕು.
’ಪತ್ರಿಕೆಗೆ ಬರೆಯೋದು ಹೇಗೆ?’ ಪುಸ್ತಕ ತಲುಪಿಸುವ ನಿಟ್ಟಿನಲ್ಲಿ ಸುಮಾರಷ್ಟು ಪತ್ರಿಕೋದ್ಯಮ ಕಾಲೇಜಿಗೆ ಹೋಗಿಬಂದೆ. ನಿರೀಕ್ಷಿತ ಫಲಿತಾಂಶ. ’ನಿಮ್ಮ ಮಾಧ್ಯಮದ ಹುಚ್ಚಾಟದ ಬಗ್ಗೆ ಬರೆಯಿರಿ’ ಸರ್ ಎಂಬ ಬಿಟ್ಟಿ ಸಲಹೆಯನ್ನು ತುಂಬ ಜನ ಕೊಟ್ಟರು. ’ಸರ್, ನಾವು ನಮ್ಮ ಮಕ್ಕಳಿಗೆ ಬಿ.ಎಡ್ ಮಾಡಿ ಎನ್ನುತ್ತಿದ್ದೇವೆ, ಪ್ರಾಧ್ಯಾಪಕರಾಗಿ ಎನ್ನುತ್ತೇವೆ ಹೊರತು ಪತ್ರಕರ್ತರಾಗಿ ಎನ್ನುವುದಿಲ್ಲ’ ಅಂತಾನು ಸುಮಾರಷ್ಟು ಜನ ಹೇಳಿದ್ರು. ಕೇಳುವಾಗ ಒಂದು ರೀತಿ ಪಿಚ್ಚೆನಿಸಿತು. ಅಲ್ಲ ಪತ್ರಿಕೋದ್ಯಮದ ಕಾಲೇಜುಗಳೇ ಪತ್ರಕರ್ತರಾಗಬೇಡಿ ಎನ್ನುತ್ತಿದ್ದಾರೆ ಅಂದ್ರೆ, ನಾವೆಂಥ ದುಸ್ಥಿತಿ ಸೃಷ್ಟಿಸಿಟ್ಟಿದ್ದೇವೆ? ಇದನ್ನೆಲ್ಲ ಸರಿ ಮಾಡುವವರು ಯಾರು? ಖಂಡಿತ ಯಾರ ಬಳಿಯೂ ಉತ್ತರವಿಲ್ಲ.
ಮೊನ್ನೆ ನಾಗೇಶ್ ಹೆಗಡೆಯವರ ಮನೆಯಲ್ಲಿ ಕುಳಿತಾಗ ಇದನ್ನೇ ಚರ್ಚಿಸ್ತಾ ಇದ್ವಿ. ನಾಗೇಶ್ ಹೆಗಡೆ, ನಿರಂಜನ ವಾನಳ್ಳಿ, ಶಿವಾನಂದ ಕಳವೆ, ಎಚ್.ಆರ್.ಶ್ರೀಶ ಇವರೆಲ್ಲ ನನಗಂತು ಸದಾ ಸಕಾರಾತ್ಮಕ ಪತ್ರಿಕೋದ್ಯಮದ ರಾಯಭಾರಿಗಳಂತೆ ಕಾಣಿಸುತ್ತಾರೆ. ತುಂಬ ವರ್ಷಗಳಿಂದ ಅವರೆಲ್ಲ ಸೃಜನಶೀಲ ಪತ್ರಿಕೋದ್ಯಮ ನಿರ್ಮಾಣದ ಕೆಲಸಗಳು, ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಾಲವೇ ಉತ್ತರಿಸಬೇಕು ಇದಕ್ಕೆಲ್ಲ ಅಂತ ನಾಗೇಶ್ ಹೆಗಡೆಯವರು ತಮ್ಮದೇ ಒಂದಷ್ಟು ಉದಾಹರಣೆಗಳೊಂದಿಗೆ ಹೇಳಿದಾಗ ಇನ್ನಷ್ಟು ಆತಂಕವಾಯ್ತು. ನಿಜ, ಇವತ್ತಿನ ದಿನದಲ್ಲಿ ಯಾರು ಯಾರನ್ನು ತಿದ್ದಲು ಸಾಧ್ಯವಿಲ್ಲ.
ಸಮಸ್ಯೆಯೆಂದ್ರೆ ಇವತ್ತು ಸುಮಾರಷ್ಟು ಜನ ’ಪತ್ರಿಕೋದ್ಯಮ ಅಂದ್ರೆ ಭ್ರಷ್ಟರ ಕೂಪ’ ಎಂಬ ಸಾರ್ವತ್ರಿಕ ತೀರ್ಮಾನಕ್ಕೆ ಬಂದಿರುವುದು. ’ಪತ್ರಕರ್ತರಿಗೇನು ಬಿಡಿ. ಯಾರನ್ನಾದ್ರು ಹೆದರಿಸಿ, ಬೆದರಿಸಿ ಬದುಕಿ ಬಿಡ್ತೀರ’ ಅಂತ ಎಷ್ಟೋ ಗೆಳೆಯರು ಹೇಳುತ್ತಾ ಇರ್ತಾರೆ. ಒಂದು ಕಾಲದಲ್ಲಿ ಪೀತ ಪತ್ರಿಕೋದ್ಯಮ ಉತ್ತುಂಗದಲ್ಲಿತ್ತು. ಸುದ್ದಿ ವಾಹಿನಿಗಳು ಬಂದಾಗ್ಲು ಜನ ಹೆದರುತ್ತ ಇದ್ದರು. ಆದರೆ ಇವತ್ತು ಕಾಲ ಹಾಗಿಲ್ಲ. ಯಾರದ್ದಾದ್ರು ನೆಗೆಟೀವ್ ಸುದ್ದಿ ಮಾಡ್ತೀವಿ ಅಂದ್ರೆ ಅವನೇ ಖುದ್ದಾಗಿ ಮಾಹಿತಿ ಕೊಡ್ತಾನೆ! ನಂಗೊಂದಿಷ್ಟು ಪ್ರಚಾರ ಆದ್ರು ಸಿಕ್ತು ಅಂತಾನೆ. ದುಡ್ಡು ಕೊಟ್ಟು ಒಂದು ಸುದ್ದಿ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಆತನಾದ್ರು ಎಷ್ಟು ಪತ್ರಿಕೆ, ಟಿವಿಗೆ ಅಂತ ದುಡ್ಡು ಕೊಡಬಲ್ಲ?! ಇನ್ ಬಿಟ್ವೀನ್ ಪೇಯ್ಡ್ ಸ್ಲಾಟ್‌ಗಳ ದರ ಟಿವಿಯಲ್ಲಿ ಗಣನೀಯವಾಗಿ ಕುಸಿದಿದೆ! ಇಷ್ಟರ ನಡುವೆಯೂ ಹಣ ಕೊಟ್ಟು ಮಾಧ್ಯಮಗಳನ್ನು ತೆಕ್ಕೆಯಲ್ಲಿ ಇಟ್ಟುಕೊಳ್ಳುವ ಒಂದಷ್ಟು ಕೋಟ್ಯಾಧಿಪತಿಗಳು ಇರಬಹುದು. ಹಾಗಂತ ಆ ದುಡ್ಡಿಗೆ ಎಲ್ಲ ಪತ್ರಕರ್ತರು ವಾರಾಸುದಾರರಲ್ಲ. ಒಂದಷ್ಟು ಮಂದಿ ಮಾತ್ರ.
ಅದಕ್ಕಿಂತ ಮಿಗಿಲಾಗಿ ದುರಂತ ಹುಟ್ಟು ಹಾಕುತ್ತಿರುವುದು ಸುದ್ದಿಯ ಮೂಲಗಳು. ಸ್ಪರ್ಧೆ ಹೆಚ್ಚಾದಾಗ ಪ್ರತಿ ಪತ್ರಕರ್ತನಿಗು ಸುದ್ದಿ ಬೇಕು. ಬೇರೆಯವರಿಗಿಂತ ಮೊದಲು ಸುದ್ದಿ ನೀಡಬೇಕೆಂಬ ಹಂಬಲ. ಹಾಗಾಗಿ ಎಲ್ಲ ಪತ್ರಕರ್ತರು ಒಂದಷ್ಟು ಸುದ್ದಿ ಸೋರ್ಸ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಇವತ್ತು ಆ ಸೋರ್ಸ್‌ಗಳೆ ಮಾಧ್ಯಮದ ಹಾದಿ ತಪ್ಪಿಸುವ ಕೇಂದ್ರಗಳಾಗಿವೆ. ತನಗೆ ಆಗದ ಯಾವನೋ ಬಗ್ಗೆಯೋ ಒಂದಷ್ಟು ದಾಖಲೆಗಳೊಂದಿಗೆ ಮಾಹಿತಿ ಕೊಡ್ತಾನೆ. ಸ್ಟೋರಿ ಫೈಲ್ ಮಾಡಲೇಬೇಕಾದ ಒತ್ತಡದಲ್ಲಿರುವ ಪತ್ರಕರ್ತ ಆ ಸುದ್ದಿಯನ್ನು ಕ್ರಾಸ್‌ಚೆಕ್ ಮಾಡುವ ಗೋಜಿಗೂ ಹೋಗುವುದಿಲ್ಲ.
ಮೊನ್ನೆ ಒಂದು ಪತ್ರಿಕೆ ತೀರ ಹಾಸ್ಯಾಸ್ಪದವಾಗಿ ಎಲ್‌ಇಡಿ ಬಲ್ಬ್ ವಿಷಕಾರಿ ಎಂದು ಬರೆದ ಸುದ್ದಿಯ ಕುರಿತು ಟಿ.ಜಿ.ಶ್ರೀನಿಧಿ ಹೇಳ್ತಾ ಇದ್ರು. ನಾಗೇಶ್ ಹೆಗಡೆ ಕೂಡ ಅದೇ ವಿಚಾರ ಪ್ರಸ್ತಾಪ ತೆಗೆದ್ರು. ಇದೇ ಇವತ್ತಿನ ದುರಂತ. ಖಂಡಿತ ಎಲ್ಲ ಪತ್ರಕರ್ತರು ಎಲ್ಲ ವಿಷಯದಲ್ಲಿ ನಿಪುಣರಲ್ಲ. ಅದರಲ್ಲು ವಿಜ್ಞಾನ, ವಾಣಿಜ್ಯ ಎಲ್ಲ ತುಸು ಜ್ಞಾನ ಬೇಡುವ ವಿಷಯಗಳು. ಅಂಥ ಸಂದರ್ಭದಲ್ಲಿ ಶ್ರೀನಿಧಿಯವರಿಗೋ, ನಾಗೇಶ್ ಹೆಗಡೆಯವರಿಗೋ, ಪವನಜಗೋ ಅಥವಾ ವಿಜ್ಞಾನ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿದ ಯಾರಿಗೋ ಕಾಲ್ ಮಾಡಿದ್ರೆ ವಿಷಯ ಸ್ಪಷ್ಟಪಡಿಸ್ತಾರೆ. ನಾನಂತು ಖುದ್ದಾಗಿ ಈ ಕೆಲಸ ಮಾಡುತ್ತಿದ್ದೆ. ಇವತ್ತು ಯಾವುದೋ ಒಂದು ಹೊಸ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸುವಾಗ, ಇಂಟರ್‌ನೆಟ್ ಸ್ಪೇಸ್‌ನಲ್ಲಿ ಏನಾದ್ರು ಗೊತ್ತಾಗದೆ ಹೋದ್ರೆ ಶ್ರೀನಿಧಿ, ಪವನಜರಿಗೆ ಕರೆ ಮಾಡಿ ತಲೆ ತಿನ್ನುತ್ತೇನೆ. ಯಾಕಂದ್ರೆ ಅವರೆಲ್ಲ ನಿತ್ಯವೂ ಆ ವಿಷಯದಲ್ಲಿ ಅಪ್‌ಡೇಟ್ ಮತ್ತು ಆಸಕ್ತಿಯುಳ್ಳವರು.
ಪ್ರತಿ ವರದಿಗಾರನಿಗೂ ಆಫೀಸು ಮೊಬೈಲ್ ಕೊಟ್ಟು, ಕರೆನ್ಸಿ ಕೊಟ್ಟಿರುತ್ತೆ. ದಿನದಲ್ಲಿ ಒಂದು ಸುದ್ದಿ ಕ್ರಾಸ್‌ಚೆಕ್ ಮಾಡಿಕೊಳ್ಳಲು ಬೇಕಾದ ೧೦ ನಿಮಷ ಸಮಯವಂತೂ ಇದ್ದೇ ಇರುತ್ತೆ. ಸಮಸ್ಯೆ ಅಂದ್ರೆ ಪತ್ರಕರ್ತರು ತಮ್ಮ ಮೂಗಿನ ನೇರಕ್ಕೆ ಯೋಚಿಸಿ ತಾವು ಬರೆದಿದ್ದೆ ಸರಿ ಎಂದು ಆಲೋಚಿಸುವುದು. ಬರೆದು ತಪ್ಪಾದ ನಂತರವೂ ಅದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ತಾವು ಎಷ್ಟು ಜನರ ಹಾದಿ ತಪ್ಪಿಸಿದ್ದೇವೆ ಎಂಬ ಅರಿವಿಲ್ಲದೆ ತಾವು ಬರೆದಿದ್ದೆ ಸರಿ ಎಂದು ವಾದಿಸುತ್ತ ಇರುತ್ತಾರೆ! ಒಂದು ನೆಗೆಟೀವ್ ಸ್ಟೋರಿ ಮಾಡುವಾಗ ಇರುವ ಆತುರ, ಕಾತುರತೆ ಅದರ ಇನ್ನೊಂದು ಮಗ್ಗಲನ್ನು ಅವಲೋಕಿಸುವಾಗ, ತಮ್ಮ ತಪ್ಪು ಅರಿತುಕೊಳ್ಳುವಾಗ ಇರುವುದಿಲ್ಲ. ಒಳ್ಳೆ ಸ್ಟೋರಿಗೆ ಮೆಸೇಜ್ ಹಾಕಿದ್ರೆ ಥ್ಯಾಂಕ್ಸ್ ಹೇಳುವವರು, ತಪ್ಪು ಮಾಡಿದಾಗ ತೋರಿಸಿದ್ರೆ ಸೌಜನ್ಯಕ್ಕು ಒಂದು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೊನ್ನೆ ಯಾರೋ ಹೇಳ್ತಾ ಇದ್ರು. ತಪ್ಪು ಒಪ್ಪಿಕೊಂಡ್ರೆ ದಡ್ಡರಾಗುತ್ತೇವೆ ಅಥವಾ ಸಣ್ಣವರಾಗಿ ಬಿಡುತ್ತೇವೆ ಎಂಬ ಭಯವೋ ಏನೋ ಗೊತ್ತಿಲ್ಲ!
ನಾನು ವಿಜಯಕರ್ನಾಟಕದಲ್ಲಿದ್ದಾಗ ಯಾವುದೋ ಪದ ತಪ್ಪು ಬರೆದಿದ್ದಕ್ಕೆ ಶ್ರೀಶ ಸರ್ ಕರೆದು ಹೇಳಿದ್ರು, ನೋಡು ಇನ್ನು ೧೦ ವರ್ಷ ಬಿಟ್ಟು ಯಾರೋ ಪೇಪರ್ ತೆಗೆದು ನೋಡುವವನು ಇದನ್ನೇ ಸರಿ ಅಂತ ಭಾವಿಸಿ ಅಭ್ಯಾಸ ಮಾಡ್ತಾನೆ. ಅವನ್ನ ಮಿಸ್‌ಲೀಡ್ ಮಾಡಿದ ಹಾಗಾಯ್ತು. ಅದಕ್ಕೆ ಬರೆಯೋ ಮೊದ್ಲು ಎರಡೆರಡು ಸಲ ಖಾತ್ರಿ ಮಾಡಿಕೊಳ್ಳಿ ಎಂದು. ಬಹುಶಃ ಇವತ್ತು ಹಾಗೆ ತಿದ್ದುವ ಹಿರಿಯರು ಇಲ್ಲ, ತಿದ್ದುಪಡಿಯನ್ನು ಪಾಸಿಟೀವ್ ಆಗಿ ಸ್ವೀಕರಿಸಿ ಸರಿ ಮಾಡಿಕೊಳ್ಳುವ ಕಿರಿಯರ ಪ್ರಮಾಣವೂ ಕಡಿಮೆ ಇದೆ.
ಜಾಹೀರಾತು, ಆದಾಯ ಇದೆಲ್ಲ ಹೊರತಾಗಿ ಪತ್ರಕರ್ತರ ಬೇಜವಬ್ದಾರಿತನ, ಅರ್ಧಂಬರ್ಧ ತಿಳುವಳಿಕೆ, ನಾನು ಸಣ್ಣವನಾಗಿ ಬಿಡುತ್ತೇನೆ ಎಂಬ ಈಗೋ, ಅವರನ್ನು ಕೇಳಬಾರದು, ಇವರ ಹತ್ರ ಹೇಳಿಸಿಕೊಳ್ಳಬಾರದೆಂಬ ಚೌಕಟ್ಟುಗಳೇ ಎಷ್ಟೋ ಸಲ ಅಭಾಸಯುತ ಸುದ್ದಿಗೆ, ವರದಿಗೆ ಕಾರಣವಾಗುತ್ತೆ. ಅದನ್ನು ತಪ್ಪಿಸುವ ಪ್ರಯತ್ನವನ್ನಾದರು ಒಂದಷ್ಟು ಪತ್ರಕರ್ತರು ಮಾಡಬಹುದೇನೊ. ಒನ್ಸ್ ಅಗೈನ್ ಅವರ ಸ್ಪೇಸ್, ಅವರ ಅಧಿಕಾರ. ನಾವೇನು ಮಾಡಬೇಕೋ ಅದನ್ನು ನಾವು ಮಾಡ್ತಾ ಹೋಗಬೇಕು ಅಷ್ಟೆ…

Read Full Post »