ಈವರೆಗೆ ಬದುಕಿನಲ್ಲಿ ಸಿಕ್ಕವರನ್ನು, ಕಳೆದುಕೊಂಡವರನ್ನು ನಿನ್ನೆ ಸುಮ್ಮನೆ ಲೆಕ್ಕ ಹಾಕುತ್ತಿದೆ. ಈ ಜೀವನ ಒಂತರಹ ಕೂಡುವ, ಕಳೆಯುವ ಲೆಕ್ಕದಂತೆ ಅನ್ನಿಸತೊಡಗಿದೆ. ಒಂದಷ್ಟು ಮಂದಿಯನ್ನು ಗಳಿಸುತ್ತೇವೆ, ಅದರ ಬೆನ್ನಲ್ಲೇ ಮತ್ತೊಂದಷ್ಟು ಮಂದಿಯನ್ನು ಕಳೆದುಕೊಳ್ಳುತ್ತೇವೆ. ಇಡೀ ಪ್ರಯಾಣದುದ್ದಕ್ಕೂ ಈ ಪ್ರಕ್ರಿಯೆ ಮರುಕಳಿಸತ್ತೆ. ಹಾಗಂತ ಇಲ್ಲಿ ಶಾಶ್ವತವಾಗಿ ಜತೆಗುಳಿಯುವವರು ತೀರಾ ವಿರಳ. ಬೇರೆಯವರ ಕಥೆ ಹಾಳಾಗಲಿ, ನಮ್ಮ ಚಿಂತನೆ, ನಿಲುವುಗಳೇ ಶಾಶ್ವತವಾಗಿ ನಮ್ಮ ಜತೆಗೆ ಉಳಿಯುವುದಿಲ್ಲ! ನನ್ನ ಇಂದಿನ ಜೀವನದ ಪಥ, ೨ ವರ್ಷ ಕಳೆಯುವುದರೊಳಗೆ ಬದಲಾಗಿರತ್ತೆ. ಕಾಲ, ಪರಿಸ್ಥಿತಿಗೆ ಅನುಗುಣವಾಗಿ ನಾವು ಸಾಕಷ್ಟು ಸಲ ಬದಲಾಗುತ್ತೇವೆ ಅಲ್ವಾ?!
‘ಬದಲಾವಣೆ ಜಗದ ನಿಯಮ’ ಹಾಗಂತ ಭಗವಾನ್ ಶ್ರೀಕೃಷ್ಣ ಹೇಳಿಹೋಗಿದ್ದಾನಂತೆ. ಆ ಕಾರಣಕ್ಕಾಗಿಯೇ ನಾವು ಆಗಾಗ ಬದಲಾಗುತ್ತಿರುತ್ತೇವೆ. ಈ ಬದಲಾವಣೆಗೆ ಕೆಲವೊಮ್ಮೆ ಕಾರಣ ಸಿಗತ್ತೆ. ಇನ್ನು ಹಲವು ಸಲ ಕಾರಣ ಸೃಷ್ಟಿಸಿಕೊಂಡು ಬದಲಾಗುತ್ತೇವೆ! ಜತೆಗಿದ್ದವರು ದೂರವಾಗುತ್ತಾರೆ. ದೂರವಿದ್ದವರು ಕಾರಣವಿಲ್ಲದೆ ಹತ್ತಿರವಾಗಿಬಿಡುತ್ತಾರೆ. ಬೀದಿಯಲ್ಲಿ ನಿಂತು ಜಗಳ ಆಡಿಕೊಂಡವರು ಅನಿರೀಕ್ಷಿತವಾಗಿ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುವಷ್ಟು ಸ್ನೇಹಿತರಾಗಿ ಬಿಡುತ್ತಾರೆ…ಅಬ್ಬಬ್ಬ ಇಲ್ಲಿ ಯಾವುದನ್ನೂ ನಿರೀಕ್ಷಿಸಲು ಸಾಧ್ಯವೇ ಇಲ್ಲ.
ಒಂದನೇ ತರಗತಿಯಲ್ಲಿ ಬೆಂಚಿನ ಸಹಪಾಠಿಗಳಾಗಿದ್ದವರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಅಂತಾನೇ ಗೊತ್ತಿಲ್ಲ. ಅದರ ಕಥೆ ಒತ್ತಟ್ಟಿಗಿರಲಿ, ಮೊನ್ನೆ, ಮೊನ್ನೆ ಡಿಗ್ರಿಯಲ್ಲಿ ಜತೆಗೆ ಕುಳಿತ್ತಿದ್ದ ಮಿತ್ರರೂ ಇಂದು ಅಪರಿಚಿತರು. ಯಾವಾಗಲೋ ಒಂದು ಸಲ ಸಿಗುತ್ತಾರೆ. ನಗುತ್ತಾರೆ, ಮಾತಾಡುತ್ತಾರೆ…ಅಲ್ಲಿಗೆ ಮುಗಿಯಿತು ಆ ಅಧ್ಯಾಯ. ಅವನ/ಅವಳ ಪರಿಚಯದಿಂದ ನನಗೇನು ಲಾಭ ಎಂದು ಆಲೋಚಿಸುವ ಮಟ್ಟಿಗೆ ಇವತ್ತಿನ ಸಮಾಜ ಬದಲಾಗಿ ಬಿಟ್ಟಿದೆ ಅಂದ್ರೆ ಬಹುಶಃ ತಪ್ಪಾಗಲಾರದು. ಯಾರಾದರೂ ಸುಮ್ಮನೆ ಮಾತಾಡಿಸಿದರೂ ಅನುಮಾನ. ಇವ ನನ್ನಿಂದ ಯಾವುದೋ ಕೆಲಸ ಬಯಸುತ್ತಿದ್ದಾನೆ ಎಂಬ ಭಾವನೆ! ಅದಕ್ಕೆ ಸರಿಯಾಗಿ ಮಾತಾಡಿಸುವ ಮಂದಿಯೂ ಅಷ್ಟಕ್ಕೆ ಸಿಮೀತರಾಗಿಬಿಟ್ಟಿದ್ದಾರೆ.
ಹುಟ್ಟಿನ ಹಿಂದೆ ಗೊತ್ತಿಲ್ಲ, ಸಾವಿನ ಮುಂದೆ ತಿಳಿದಿಲ್ಲ. ಬದುಕುವ ಮೂರು ದಿನಕ್ಕೆ ಒಂದೇ ಗಲ್ಲಿಯಲ್ಲಿ ಹತ್ತೆಂಟು ಬಣ. ನೂರೆಂಟು ನಾಯಕರು. ‘ನನ್ನದೇನು ಕಮ್ಮಿ’ ಎನ್ನುವವರು. ಅದರಿಂದ ಸಾದಿಸುವುದು ಏನನ್ನೂ ಎಂದು ಅವರಿಗೂ ಗೊತ್ತಿಲ್ಲ! ಆದ್ರೂ ಅವರದ್ದೊಂದು ಬಣ. ಕುರ್ಚಿಬೇಕು. ಅಕಾರ ಬೇಕು. ಜೈಕಾರ ಹಾಕುವವರಿರಬೇಕು. ಗಾಳಿ ಬೀಸುವ ಮಂದಿ ಜತೆಗಿರಬೇಕು…ಮನುಷ್ಯನ ಈ ಬಯಕೆಗಳಿಗೊಂದು ಸಲಾಮ್ ಅನ್ನಲ್ಲೇ ಬೇಕು. ಒಬ್ಬೊಬ್ಬರಿಗೆ ಒಂದೊಂದು ತರಹದ ಬಯಕೆ. ಹಾಗಾಗಿ ಮೇಲಿನವರ ಬಯಕೆಗಳನ್ನು ಯಾವ ಕಾರಣದಿಂದಲೂ ತಪ್ಪು ಅನ್ನಲು ಸಾಧ್ಯವಿಲ್ಲ ಅಥವಾ ಅವರೆಲ್ಲ ನನ್ನ ಚಿಂತನೆಯ ಮೂಗಿನ ನೇರಕ್ಕೆ ಬದುಕಬೇಕು ಎಂದು ಆಶಿಸುವುದು ಸರಿಯಿಲ್ಲ. ಯಾಕಂದ್ರೆ ಇಂಥದನ್ನು ಬರೆದು ನಾನು ಏನನ್ನು ಸಾದಿಸುತ್ತೇನೆ ಎಂದು ನನಗೂ ಗೊತ್ತಿಲ್ಲ!
ಈ ಸಮಾಜದಲ್ಲಿ ಪರಿಹರಿಸಲು ಸಾಧ್ಯವೇ ಇಲ್ಲದ ಒಂದಷ್ಟು ಸಮಸ್ಯೆಗಳಿವೆ. ‘ಇದು ಸಮಸ್ಯೆಯೇ ಅಲ್ಲ’ ಎಂದು ನಾವು ಭಾವಿಸುಕೊಳ್ಳುವುದೇ ಅದಕ್ಕೆ ಉತ್ತಮ ಪರಿಹಾರ. ಸಮಸ್ಯೆಯೊಂದನ್ನು ನಾವು ಗಂಭೀರ ಎಂದು ಭಾವಿಸಿದರೆ ಮಾತ್ರ ತಾನೇ ಅದು ಗಂಭೀರವಾಗವುದು?!
ಕೋಡ್ಸರ ಅನಾಮಿಕ ಬ್ಲಾಗ್ ಮಾಡುತ್ತಾನೆ, ಬೇರೆಯವರನ್ನು ಪುಗಸಟ್ಟೆ ಬೈಯ್ಯುತ್ತಾನೆ ಎಂದು ಭಾವಿಸಿ ಕುಳಿತವರು ಇವತ್ತಿಗೂ ಸಾಕಷ್ಟು ಮಂದಿ ಇದ್ದಾರೆ. ಅವರಲ್ಲಿ ಹಲವರಿಗೆ ಸಮಜಾಯಿಷಿ ಕೊಟ್ಟು ಸಾಕಾಗಿದೆ. ನಾನು ಬೇರೆ ಯಾರೋ ಹಿರಿಯರನ್ನು ಅನಾಮಿಕವಾಗಿ/ ಹೆಸರು ಹೇಳಿಕೊಂಡು ಬೈಯ್ಯುವುದರಿಂದ, ಅವರ ಒಂದು ಕೂದಲು ಅಲ್ಲಾಡುವುದಿಲ್ಲ ಎಂದು ೪ ವರ್ಷಗಳ ಹಿಂದೆಯೇ ಅರ್ಥವಾಗಿದೆ. ನಾನಲ್ಲ, ರಾಜ್ಯದ ಮುಖ್ಯಮಂತ್ರಿಗಳಿಂದಲೂ ಕೆಲವರ ವಿರುದ್ಧ ಏನೂ ಹರಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಬೈಗುಳ ಹಲವರ ಪಾಲಿಗೆ ಹೊಗಳಿಕೆ! ಇವಿಷ್ಟು ಎಲ್ಲರಿಗೂ ಅರ್ಥವಾದರೆ ಬಹುಶಃ ಅನಾಮಿಕ ಬ್ಲಾಗ್ಗಳ ಹಾವಳಿ ಇರುತ್ತಿರಲಿಲ್ಲವೇನೋ. ಹೆಸರು ಯಾರದ್ದೋ, ಬಸಿರು ಯಾರದ್ದೋ ಎಂಬಂತೆ ಯಾರೋ ಮಾಡುವ ತಪ್ಪಿಗೆ ಅನುಮಾನಕ್ಕೆ/ಅವಮಾನಕ್ಕೆ ಗುರಿಯಾಗುವವರು ಮತ್ತ್ಯಾರೋ. ಇಂಥ ಅನುಭವ ಬದುಕಿನಲ್ಲಿ ಸಾಕಷ್ಟು ಸಲ ಆಗುತ್ತಿರತ್ತೆ. ಹಾಗಾಗಿ ಇದು ಕೂಡ ನನ್ನ ಪಾಲಿಗೆ ಸಮಸ್ಯೆಯಲ್ಲ…!
ಕೆಲವೊಮ್ಮೆ ಎಲ್ಲವೂ ಬೇಸರ ತರಿಸುತ್ತದೆ. ಯಾವುದೂ ಬೇಡ ಅನ್ನಿಸುತ್ತದೆ. ಅವೆಲ್ಲ ಆ ಕ್ಷಣಕ್ಕೆ ಸೀಮಿತ. ಯಾವುದನ್ನೂ ಬೇಡ ಎಂದು ಶಾಶ್ವತವಾಗಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಕಂಡ ಕನಸುಗಳು ನನಸಾದ ಹೊರತೂ ಸಮಾಧಾನವಿಲ್ಲ. ಅಂದುಕೊಂಡಿದ್ದು ಸಿಗುವವರೆಗೂ ತೃಪ್ತಿಯಿಲ್ಲ. ಹಾಗಾಗಿ ಕ್ಷಣಾರ್ಧದಲ್ಲಿ ಬದುಕು ಮಾಮೂಲಿ ಹಾದಿಯನ್ನು ಹಿಡಿದುಬಿಡುತ್ತದೆ….ಇಂಥ ಬದುಕಿನ ಪಯಣಕ್ಕೊಂದು ಜೈ ಹೋ…!!!
ವಿನಾಯಕ್ ಸರ್,
ಒಳ್ಳೆಯ ಬರಹ ಪ್ರತಿಯೊಬ್ಬ ಮನುಷ್ಯನ ಒಳ ಬೇಗುದಿಯನ್ನು ಸಮರ್ಥವಾಗಿ ಹೊರಹಾಕಿದ್ಡಿರಿ. .ಬರಹದ ಕಡೆಯ ಸಾಲುಗಳ೦ತು ಎಲ್ಲರೂ ಯೂಚಿಸುವ೦ತೆ ಮಾಡುತ್ತದೆ . ನನಗೆ ತು೦ಬಾ ಇಷ್ಟವಾಯಿತು …
Yes Sir, Its true..
jai ho..
ರೂಪಾ ಮೇಡಂ
ಧನ್ಯವಾದಗಳು,
ವಿಕಾಸ್ ಸಾರು
ಜೈ ಹೋ…