Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಕ್ರಿಯೇಟಿವ್ ಪೇಜ್’ Category

60698_10151105350039403_322647882_nಮನುಷ್ಯನಿಗೆ ಎಷ್ಟೇ ಉತ್ಸಾಹವಿದ್ರು, ಒಂದು ಹಂತದಲ್ಲಿ ಅದು ಕುಸಿದುಹೋಗುತ್ತೆ. ಅಯ್ಯೋ ಸಾಕು ಅನ್ನಿಸಿಬಿಡುತ್ತೆ. ಅದು ನನ್ನಂತ ಸೋಮಾರಿಗಂತು ಬಲುಬೇಗ ನಿದ್ದೆ! ಜೀವನದಲ್ಲಿ ಅತ್ಯಂತ ಸುಖವಾದ ಕೆಲಸ ಅಂದ್ರೆ ನಿದ್ದೆ. ಒಂಥರ ಬದುಕಿದ್ದು ಸಾಯುವ ಸ್ಥಿತಿ. ಹಾಗಾಗಿಯೇ ಸಾವಿಗೆ ಚಿರನಿದ್ರೆ ಅಂತ ಇಟ್ಟಿರಬೇಕು. ನೀವು ಎಚ್ಚರವಿದ್ದಾಗ ದೇಹದ ಯಾವ ಜಾಗಕ್ಕೆ ವಿಶ್ರಾಂತಿ ಸಿಕ್ಕರು, ಮನಸ್ಸು ಮಾತ್ರ ಏನಾದ್ರು ಒಂದು ಆಲೋಚನೆ ಮಾಡ್ತಾ ಇರುತ್ತೆ. ಅದಕ್ಕೆ ವಿಶ್ರಾಂತಿ ಕೊಡಬಲ್ಲದ್ದು ನಿದ್ದೆ ಮಾತ್ರ!

ಆ ಕಡೆ ಸಾಹಿತ್ಯ ಸಮ್ಮೇಳನದ ಗದ್ದಲ. ಫೇಸ್‌ಬುಕ್‌ನಲ್ಲಿ ಜೋಶಿಯವರ ಚಂಡೆ-ಮದ್ದಳೆ! ಅದ್ರಿಂದ ಲಿಂಕ್‌ ತೆಗೆದುಕೊಂಡು ನೀವು ಶ್ರೀವತ್ಸ ಜೋಶಿಯವರ ಫೇಸ್‌ಬುಕ್‌ ಪ್ರೊಫೈಲ್‌ಗೆ ಭೇಟಿ ಕೊಟ್ಟರೆ ಕಾಣೋದು ‘ಬತ್ತದ ತೆನೆ ಮತ್ತು ಅದರ ಕೆಳಗೆ ಬತ್ತದ ಉತ್ಸಾಹ, ಎಲ್ಲರಲಿ ಇರಲಿ’ ಎಂಬ ಸಾಲು. ಅದ್ನ ನೋಡಿ ನೀವು ಈ ಪುಣ್ಯಾತ್ಮ ಯಾವುದೋ ರೈತ ಇರಬೇಕು ಅಥವಾ ಯಾವುದೋ ಕೃಷಿ ಸಮೂಹದ ಕಾರ್ಯಕರ್ತ ಇರಬೇಕು ಅಂದುಕೊಂಡ್ರೆ ಯಾಮಾರಿದ್ರಿ. ಅವರು ಮೂಲತಃ ರೈತರಾಗಿರಬಹುದು, ಅವರ ಹೆಸರಿನಲ್ಲಿ ಗದ್ದೆಯೂ ಇರಬಹುದು. ಆದ್ರೆ ಅವರೀಗ ಮಾಡುತ್ತಿರುವುದು ಸಾಫ್ಟ್‌ವೇರ್‌ ಕೃಷಿ. ಅಮೆರಿಕದ ಐಬಿಎಂನಲ್ಲಿ ಯಾವುದೋ ಹಿರಿಯ ಹುದ್ದೆಯಲ್ಲಿದ್ದಾರೆ ಅಂತಷ್ಟೆ ಗೊತ್ತು.

ವಿಷ್ಯ ಅದಲ್ಲ, ಮಾತಾಡಬೇಕಿರುವುದು ಈ ಬತ್ತದ ಉತ್ಸಾಹ ಬಗ್ಗೆ! ಈ ಅನಿವಾಸಿ ಭಾರತೀಯರಿಗೆ ಭಾರತ ಅನ್ನೋದು ಒಂಥರ ಕ್ರೇಜ್‌(ಹೆಂಗಸರಿಗೆ ತವರು ಮನೆಗೆ ಹೋಗುವಾಗ ಆಗುವ ಖುಷಿಯಂತೆಯೂ ಇರಬಹುದು!) ಅವರು ವಿದೇಶದಿಂದ ಬರುವಾಗಲೇ ಒಂದು ಟೈಂಟೇಬಲ್‌ ಹಾಕಿಕೊಂಡು ಬಂದಿರುತ್ತಾರೆ. ನಾವೆಲ್ಲ ಪರೀಕ್ಷೆಗೆ ಕರೆಕ್ಟಾಗಿ ೭ ದಿನ ಇರುವಾಗ ಟೈಂ ಟೇಬಲ್‌ ಹಾಕಿಕೊಂಡು ಓದ್ತಾ ಇದ್ವಲ್ಲ, ಅದೇ ಥರ! ಈ ಶ್ರೀವತ್ಸ ಜೋಶಿ ಬರುವಾಗಲೂ ಇಂಥದ್ದೆ ಒಂದು ಟೈಂಟೇಬಲ್ಲು ಹಾಕಿಕೊಂಡು ಬಂದಿರುತ್ತಾರೆ. ಅದ್ರಲ್ಲಿ ಒಂದು ಭಾಗ ನಮ್ಮ ನಾಡಿನ ಪತ್ರಿಕಾ ಕಚೇರಿಗಳಿಗೆ ಭೇಟಿ ಇರುತ್ತೆ. ಹಿಂಗೆ ಒಂದ್ಸಲ ಅವರ ಟೈಂ ಟೇಬಲ್‌ ಪ್ರಕಾರ ನಮ್ಮ ದಟ್ಸ್‌ ಕನ್ನಡ ಶ್ಯಾಮ್‌ ಕರೆದುಕೊಂಡು ಬಂದಾಗ ಪರಿಚಿತವಾದ್ರು ಜೋಶಿಯವ್ರು. ಆಮೇಲೆ ಒಂದೆರಡು ಸಲ ಸಿಕ್ಕಿರಬೇಕು.

ಫೇಸ್‌ಬುಕ್‌ನ್ನು ಅರ್ಥಪೂರ್ಣವಾಗಿ, ವಿಚಾರಪೂರ್ಣವಾಗಿ ಇಡಬಲ್ಲ ಜೊತೆಗೆ ಆಗಾಗ ನಗಿಸಬಲ್ಲ ಹಾಸ್ಯಧಾರಿಗಳಲ್ಲಿ ಜೋಶಿ ಕೂಡ ಒಬ್ಬರು. ಕೆಲವೊಮ್ಮೆ ಅವರ ವಿಚಾರಗಳು ತೀರಾ ಗಂಭೀರವಾಗಿ ಇರುತ್ತವೆ. ನಂತರ ಹೋಗುವ ಚರ್ಚೆ ಮತ್ತು ಬರುವ ಕಮ್ಮೆಂಟ್‌ಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಈ ಫನ್‌ ಮಾಡುವುದು ಒಂದು ಬಗೆಯ ಕಲೆ. ನವೀನ್‌ ಸಾಗರ ಮತ್ತು ಶ್ರೀವತ್ಸ ಜೋಶಿಗೆ ನೀವು ನಿರ್ಜೀವವಾದ, ಅತ್ಯಂತ ಗಟ್ಟಿಯಾದ ಕಬ್ಬಿಣ್ಣದ ಸುತ್ತಿಗೆ ಬೇಕಾದ್ರೂ ಕೊಡಿ, ಅದ್ರಿಂದಲೇ ನಗು ತರಿಸುತ್ತಾರೆ!

‘ಸಾರ್‌ ನೀವು ಸಂಸ್ಕೃತ ಎಲ್ಲಿ ಕಲಿತ್ತಿದ್ದು’ ಅಂತ ಜೋಶಿಯವರಿಗೆ ಕೇಳಿದೆ.

‘ಅಷ್ಟೆಲ್ಲ ಸೀನ್ ಇಲ್ಲಾ ಸಾರ್. ಎಂಟನೆಯಿಂದ ಸೆಕೆಂಡ್ ಪಿಯುವರೆಗೆ ಸಂಸ್ಕೃತ ಒಂದು ಸಬ್ಜೆಕ್ಟ್. ಆಮೇಲೂ ಸ್ವಲ್ಪ ಟಚ್ ಇಟ್ಕೊಂಡೆ ಅಷ್ಟೇ’ ಅಂದ್ರು.

ಆದ್ರೂ ನಿಮ್ಮ ಸಂಸ್ಕೃತ ಜ್ಞಾನ ಚೆನ್ನಾಗಿದೆ. ಆಮೇಲೆ ಆಸಕ್ತಿಯಿಂದ ಅಧ್ಯಯನ ಮಾಡಿದ್ರಾ ಅಂತ ಮತ್ತೊಂದು ಪ್ರಶ್ನೆ.

‘ಎಸ್ಸೆಸ್ಸೆಲ್ಸಿವರೆಗೂ ಕನ್ನಡಮಾಧ್ಯಮದಲ್ಲಿ ಶಿಕ್ಷಣ ಆದ್ದರಿಂದ ಕನ್ನಡ+ಸಂಸ್ಕೃತ ಭಾಷೆಗಳ ಮೇಲೆ ಪ್ರೌಢಿಮೆಗೆ ಕಾರಣವಾಯಿತು. ಮತ್ತೊಂದೆಂದರೆ ನನಗೆ ಯಾವುದೇ ಭಾಷೆಯಾಗಲೀ ಅದರ ಬಗ್ಗೆ ಆಸಕ್ತಿ ಹೆಚ್ಚು. ಕನ್ನಡದೊಂದಿಗೆ ಅದನ್ನು ಕಂಪೇರ್ ಮಾಡಿನೋಡೋದು ಇತ್ಯಾದಿ ಮಾಡ್ತಿರ್ತೇನೆ’ ಇದು ಅವರ ಪ್ರತ್ಯುತ್ತರ.

ಮೂಲತಃ ಕಾರ್ಕಳದವರಾದ ಜೋಶಿಯವರು ಆಗಾಗ ಪತ್ರಿಕೆಗಳಲ್ಲಿ ಪ್ರಯೋಗವಾಗುವ ತಪ್ಪು ಪದಗಳನ್ನು ಹುಡುಕಿ ಜಾಡಿಸುತ್ತಿರುತ್ತಾರೆ. ಶತಾವಧಾನಿ ಗಣೇಶರ ಸಹಸ್ರಾವಧಾನವಾದಾಗ ಒಂದರ್ಥದಲ್ಲಿ ಜೋಶಿಯವರು ಅದ್ವಾನಿಗಳಾಗಿದ್ದರು! ಬಹುಶಃ ಆಗ ಅವರು ಮಲಗಿದ್ದು ಸುಳ್ಳು. ಇಲ್ಲಿ ಹಗಲು ಅವಧಾನ ಆಗುವಾಗ ಅವರಿಗಲ್ಲಿ ರಾತ್ರಿ. ಅವಧಾನ ಮುಗಿಸಿಕೊಂಡು ಸಾವಧಾನವಾಗಿ ಆಫೀಸ್‌ಗೆ ಹೋಗುತ್ತಿದ್ದರು ಅನ್ನಿಸುತ್ತೆ.

ನಾವೆಲ್ಲ ಫೇಸ್‌ಬುಕ್‌ನಲ್ಲಿ ಒಂದು ಫೋಸ್ಟ್‌ ಹಾಕಿ ಬಿಟ್ಟುಬಿಡುತ್ತೇವೆ. ಕೊನೆಗೊಮ್ಮೆ ನೆನಪಾದಾಗ ನೋಡುತ್ತೇವೆ. ನಾನಂತು ಪೋಸ್ಟ್‌ ಹಾಕಿದಮೇಲೆ ಬರುವ ಕಮ್ಮೆಂಟ್‌ಗಳಿಗೆ ಉತ್ತರ ನೀಡಲಾಗದಷ್ಟು ಸೋಮಾರಿ! ಆದ್ರೆ ಜೋಶಿಯವರು ಆ ಪೋಸ್ಟ್‌ನ ಪೂರ್ತಿ ಚರ್ಚೆಯಲ್ಲಿ ಇರುತ್ತಾರೆ ಮತ್ತು ೧೨೦ ಕಮ್ಮೆಂಟ್‌ನಲ್ಲಿ ಒಂದು ೪೦ ಕಮ್ಮೆಂಟ್‌ ಅವರದ್ದೇ ಇರುತ್ತೆ!

ಜೋಶಿಯವರು ಶೇರ್‌ ಮಾಡುವ ಎಷ್ಟೋ ವಿಚಾರಗಳನ್ನು ನಮ್ಮ ನಾಡಿನ ಪತ್ರಿಕೆಗಳು ಎತ್ತಾಕಿಕೊಂಡು ಲೇಖನ ಮಾಡಿ ಪ್ರಕಟಿಸಿದ್ದನ್ನು ನಾನು ಗಮನಿಸಿರುವೆ. ಆಗೆಲ್ಲ ಓಹೊ ಇದನ್ನು ಜೋಶಿಯವರು ಆವತ್ತೆ ಫೇಸ್‌ಬುಕ್‌ನಲ್ಲಿ ಹಾಕಿದ್ದರು ಅಂದುಕೊಳ್ಳುತ್ತಿರುತ್ತೇನೆ. ಅವರು ಯಾವ ವಿಷಯ ಹಂಚಿಕೊಂಡರು ಅದಕ್ಕೊಂದು ಸವಿಸ್ತಾರವಾದ ವಿವರಣೆ ಹಾಕಿರುತ್ತಾರೆ ಮತ್ತು ಅದು ತುಂಬಾ ಮೌಲ್ಯಯುತವಾಗಿ ತಿಳಿದುಕೊಳ್ಳುವಂತೆ ಇರುತ್ತೆ. ಅಲ್ಲಿಗೆ ಅವರು ಫೇಸ್‌ಬುಕ್‌ ಎಂಬ ಜಾಲತಾಣವನ್ನು ತಮ್ಮ ನಿತ್ಯದ ಕೆಲಸದಂತೆ ತುಂಬಾ ಶ್ರದ್ಧಾ-ಭಕ್ತಿಯಿಂದ ನಿಭಾಯಿಸುತ್ತಾರೆ ಎಂಬುದು ದಿಟವಾಯ್ತು!

ಜೋಶಿ ಕಂಡ್ರೆ ನಮ್ಮಲ್ಲಿ ಸುಮಾರಷ್ಟು ಜನಕ್ಕೆ ಆಗಲ್ಲ. ಯಾಕಂದ್ರೆ ಅವರು ತಪ್ಪಿದ್ರೆ ಸೀದಾ-ಸಾದಾವಾಗಿ ಹೇಳಿಬಿಡುತ್ತಾರೆ ಮತ್ತು ಸಾರ್ವಜನಿಕವಾಗಿ ಶೇರ್‌ ಮಾಡುತ್ತಾರೆ. ಇದನ್ನು ತಮಗೆ ಮಾಡಿದ ಅಪಮಾನ ಅಂತ ಕೆಲವರು ಅಂದುಕೊಳ್ಳುತ್ತಾರೇನೋ! ಆದ್ರೆ ಬಹುಶಃ ಜೋಶಿಯವರಿಗೆ ನೋವು ಮಾಡುವ ಉದ್ದೇಶ ಇರಲಿಕ್ಕಿಲ್ಲ. ಹೀಗೆ ಕಾಮಿಡಿ ಮಾಡುವ, ಫನ್‌ ಮಾಡುವ ಕೆಲ ಕ್ಯಾರೆಕ್ಟರ್‌ಗಳನ್ನು ನೋಡಿದ್ದೇನೆ, ತಮ್ಮಿಂದ ಬೇರೆಯವರಿಗೆ ನೋವಾಯ್ತು ಅನ್ನಿಸಿದ್ರು ಅವ್ರು ತುಂಬಾ ಹರ್ಟ್‌ ಆಗ್ತಾರೆ. ಬೇರೆಯವರಲ್ಲಿ ನಗು ಕಾಣುವವರಿಗೆ ಯಾವತ್ತೂ ನೋವು ರುಚಿಸದು.

ಜೋಶಿಯವರ ಹಳೆಗನ್ನಡ ಜ್ಞಾನ ನೋಡಿದ್ರೆ ಹೊಟ್ಟೆ ಉರಿಯುತ್ತೆ! ಇಷ್ಟೆಲ್ಲದರ ನಡುವೆ ನೀವು ಐಬಿಎಂಗೆ ಹೋಗ್ತೀರೋ ಇಲ್ವೋ?! ಅಂದ್ರೆ, ಅವರು ಆಫೀಸನಲ್ಲಿ ಇದ್ದುಕೊಂಡೆ ಫೇಸ್‌ಬುಕ್‌ ಮೆಂಟೈನ್‌ ಮಾಡುತ್ತಿರುತ್ತಾರೆ. ಆದ್ರೆ ಕೆಲವು ಅಂಕಣಕಾರರ ಥರ ತಮ್ಮ ಲೇಖನವನ್ನು ಬೇರೆಯವರ ಬಳಿ ಬರೆಸಿ ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಳ್ಳುವುದು ಸುಳ್ಳು!!! ಯಾಕಂದ್ರೆ ಇಡೀ ಚರ್ಚೆಯಲ್ಲಿ ಜೋಶಿಯವರು ಭಾಗಿಯಾಗಿರುತ್ತಾರೆ ಮತ್ತು ಪರೀಕ್ಷಿಸಲೆಂದು ಪಿಂಗ್‌ ಮಾಡಿದ್ರೆ ಉತ್ತರ ಕೊಡ್ತಾರೆ!

ವಾಸ್ತವವಾಗಿ ಶ್ರೀವತ್ಸ ಜೋಶಿಯವರು ಎಂಜಿನಿಯರ್‌. ಅವ್ರು ತಂತ್ರಜ್ಞಾನದ ಬಗ್ಗೆ, ಸಾಫ್ಟ್‌ವೇರ್‌ ಬಗ್ಗೆ ಬರೆಯಬೇಕು. ಆದ್ರೆ ಅವ್ರು ಅದ್ರ ಹೊರತಾಗಿದ್ದನ್ನು ಬರೀತಾರೆ. ನಂಗೆ ಅವ್ರು ಇಷ್ಟವಾಗುವುದು ಇದೇ ಕಾರಣಕ್ಕೆ. ಸಂಸ್ಕೃತಕ್ಕು-ಸಾಫ್ಟ್‌ವೇರ್‌ಗೂ ಸಂಬಂಧವೇ ಇಲ್ಲ. ಸಾಫ್ಟ್‌ವೇರ್‌ ವೃತ್ತಿ. ಸಾಹಿತ್ಯ ಪ್ರವೃತ್ತಿ. ಸಾಕಷ್ಟು ಜನಕ್ಕೆ ಕಥೆ, ಕವಿತೆ ಪ್ರವೃತ್ತಿಯಾಗಿರುತ್ತದೆ. ಗಂಭೀರವಾದ ಸಾಹಿತ್ಯದತ್ತ ಒಲವು ಇರುವುದಿಲ್ಲ. ಆದ್ರೆ ಇವ್ರು ಅದಕ್ಕೆ ತುಸು ತದ್ವಿರುದ್ಧ.

ಕೆಲವೊಮ್ಮೆ ಅವ್ರು ತೀರಾ ಕಿರಿಕಿರಿ ಅನ್ನಿಸಬಹುದು. ಈ ಮನುಷ್ಯ ಏನಪ್ಪ ಬೇರೆ ಕೆಲಸವೇ ಇಲ್ಲವಾ ಅನ್ನಿಸಬಹುದು. ಹಾಗಂದುಕೊಂಡ್ರೆ ಅದು ನಮ್ಮ ತಪ್ಪು. ಯಾಕಂದ್ರೆ ಅವ್ರು ಯಾರನ್ನು ಬನ್ನಿ, ನನ್ನ ಫೇಸ್‌ಬುಕ್‌ ನೋಡಿ ಅಂತ ಕರೆದಿಲ್ಲ. ಅದಕ್ಕಿಂತ ಮುಖ್ಯವಾಗಿ ಅನಾವಶ್ಯವಾಗಿ ಯಾರನ್ನು ಟ್ಯಾಗ್‌ ಮಾಡುವುದಿಲ್ಲ. ಬೇಡ ಅಂದ್ರೆ ನೀವು ಅವರನ್ನು ಬ್ಲಾಕ್‌ ಮಾಡಬಹುದು. ನೀವು ಬ್ಲಾಕ್‌ ಮಾಡಿದ್ದೀರಾ ಎಂಬ ಕಾರಣಕ್ಕೆ ಅವರ ಫೇಸ್‌ಬುಕ್‌ ಅಪ್‌ಡೇಟ್‌ ನಿಲ್ಲುತ್ತದೆ ಎಂದು ನನಗಂತೂ ಅನ್ನಿಸುವುದಿಲ್ಲ!

ನಾವೆಲ್ಲ ‘ಕೊಳಗದೊಳಗಿನ ಕಪ್ಪೆಗಳು’ ಅಂತ ನಾನು ಎಷ್ಟೋ ಸಲ ಅಂದುಕೊಳ್ಳುತ್ತೀರುತ್ತೇನೆ. ನಮಗೆ ನಮ್ಮ ಜಗತ್ತೇ ದೊಡ್ಡದು. ನಾವೇ ಬುದ್ಧಿವಂತರು. ಆದ್ರೆ ಆ ಜಗತ್ತಿನಿಂದ ಹೊರಬಂದ್ರೆ ನಮಗಿಂತ ಅದೆಷ್ಟು ಬುದ್ಧಿವಂತರು ಇಲ್ಲಿದ್ದಾರೆ. ಅದರ ಅರಿವು ಜೋಶಿಯವರಿಗಿದೆ. ಯಾಕಂದ್ರೆ ಅವ್ರು ಆರ್‌.ಗಣೇಶ್‌ರಂಥ ಶ್ರೇಷ್ಠರನ್ನು ಕಂಡವರು. ಹಾಗಾಗಿ ನೀವು ಏನೇ ಕೆಲಸ ಹೇಳಿದ್ರು ಕೂಡ ಜೋಶಿಯವರು ಖುಷಿಯಿಂದ ಮಾಡಿಕೊಡುತ್ತಾರೆ ಮತ್ತು ಅದರಿಂದ ಯಾವುದೇ ಲಾಭ ಅಪೇಕ್ಷಿಸುವುದಿಲ್ಲ. ಹಾಗಾಗಿಯೇ ತೀರಾ ಕಮರ್ಷಿಯಲ್ಲಾಗಿ, ಸುಮ್ಮನೆ ಏನೇನೋ ಬರೆದು ಸಮಯ ಹಾಳು ಮಾಡುವುದಕ್ಕಿಂತ ಕೈಯ್ಯಲ್ಲಿರುವ ೩ ಪುಟ ಟ್ರಾನ್ಸ್‌ಲೇಷನ್‌ ಮಾಡಿದ್ರೆ ದುಡ್ಡು ಬರುತ್ತೆ ಎಂದುಕೊಳ್ಳುವ ನನಗೂ ಕೂಡ, ಆ ಟ್ರಾನ್ಸ್‌ಲೆಷನ್‌ ತುಸು ಹೊತ್ತು ಬದಿಗಿಟ್ಟು ಜೋಶಿಯವರ ಬಗ್ಗೆ ಹೀಗೆಲ್ಲ ಬರೆಯಬೇಕು ಅನ್ನಿಸಿದ್ದು.

ಕನ್ನಡ, ತುಳು, ಕೊಂಕಣಿ, ಇಂಗ್ಲೀಶ್, ಹಿಂದಿ, ಸಂಸ್ಕೃತ, ತೆಲುಗು ಮತ್ತು ತಮಿಳು – ಇವಿಷ್ಟು ಭಾಷೆಗಳು ಬರುತ್ತವೆ. ಇಷ್ಟೆಲ್ಲ ಆಗಿ ಅವರ ಜೋಶಿಯವರ ಮಾತೃಭಾಷೆ ಮರಾಠಿ!!!

ಜೋಶಿಯವರೆ ನಿಮ್ಮ ಬತ್ತದ ಉತ್ಸಾಹ ಬರಗಾಲದಲ್ಲೂ ‘ಪಂಚ(ಚ್‌)’ರ್‌ ಆಗದೆ ಇರಲಿ…https://www.facebook.com/srivathsa.joshi?fref=ufi

Read Full Post »

ಹಾಯ್ ಪುಟ್ಟಿ,
ಎಕ್ಸ್‌ಟ್ರೀಮ್ಲಿ, ಎಕ್ಸ್‌ಟ್ರೀಮ್ಲಿ ಸ್ವಾರಿ ಕಣೆ! ನಿಂಗೊಂದು ಪತ್ರ ಬರಿದೆ ವರ್ಷಗಳೆ ಕಳೆದು ಹೋಗಿತ್ತು ನೋಡು. ಮದ್ವೆ ಆದ್ಮೇಲೆ ಹುಡುಗ್ರು ಕಳೆದು ಹೋಗ್ತಾರೆ ಅನ್ನೋ ನಿನ್ನ ಮಾತಿಗು, ನಾನು ಪತ್ರ ಬರಿದೆ ಇರೋದಕ್ಕೂ ಸರಿ ಹೋಗಿತ್ತು. ಹಾಗಂತ ನಿನ್ನ ಮೇಲೆ ನಂಗೆ ಪ್ರೀತಿ ಕಡಿಮೆ ಆಗಿದೆ ಅಂತಲ್ಲ. ಮದ್ವೆಗು ಮೊದ್ಲು ನಿನ್ನ ಎಷ್ಟು ಪ್ರೀತಿಸುತ್ತಿದ್ನೊ, ಈಗ ಅದಕ್ಕಿಂತ ಒಂಚೂರು ಜಾಸ್ತಿನೆ ಪ್ರೀತಿಸ್ತೀನಿ. ಈ ಮಾತು ಕೇಳಿ ನೀನು ’ಹನ್ನೊಂದು ಗಂಟೆ ಶಿವಮೊಗ್ಗ ಟ್ರೈನ್ ಹೋಯ್ತು’ ಅಂದುಕೊಂಡು ಇರ್ತಿಯ ಅಂತ ನಂಗೆ ಖಚಿತವಾಗಿ ಗೊತ್ತು. ಆದ್ರೂ ಪತ್ರ ಯಾಕೆ ಬರೆದಿಲ್ಲ ಅಂದ್ರೆ, ಈಗ ದಿನ ಎದುರಿಗೆ ಸಿಕ್ತಿಯಲ್ವಾ ಅದ್ಕೆ!
ಆದ್ರು ಪತ್ರದ ಸವಿಯೇ ಬೇರೆ ಬಿಡು! ಹಾಗಾಗಿ ನಿನ್ನ ಹಕ್ಕೋತ್ತಾಯದ ಮೇರೆಗೆ ಈ ಪತ್ರ. ಲೈಫ್ ಸಿಕ್ಕಾಪಟ್ಟೆ ಬ್ಯೂಸಿ ಆಗಿದೆ. ಈ ಹಾಳಾದ ಸಂಸಾರ ಅಂತ ಆದ್ಮೇಲೆ ನಿಜವಾಗ್ಲೂ ಕಳೆದು ಹೋಗಿಬಿಟ್ಟಿದ್ದೀನಿ. ಹಿಂದೆ ಆಗಿದ್ರೆ ನಾನೊಬ್ಬನೆ. ಹೆಂಗೆ ಬದುಕಿದ್ರು ಕಳೀತಿತ್ತು. ’ಉಂಡ್ಯ, ತಿಂದ್ಯ, ಮಲಗಿದ್ಯ…ಅದೆಲ್ಲಕ್ಕಿಂತ ಹೆಚ್ಚಾಗಿ ಸ್ನಾನ ಮಾಡಿ ದೇವರ ಪೂಜೆ ಮಾಡಿದ್ಯ’ ಅಂತ ಕೇಳೋರು ಯಾರು ಇರಲಿಲ್ಲ! ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬಂದ್ರು ನಡೆಯುತ್ತಿತ್ತು. ಬರದೆ ಇದ್ರು ಓಕೆ, ಓಕೆ.
ಅದ್ಕೆ ಕಣೆ ನಾನು ನಿಂಗೆ ಯಾವಾಗ್ಲೂ ರೇಗಿಸುವುದು ’ನೀ ಊರಿಗೆ ಹೋದ ನಮ್ಮ ಮನೆ ಮಹಡಿ ಮೇಲೆ ಬಾವುಟ ಹಾರಿಸಿ ಸ್ವತಂತ್ರ ದಿನಾಚರಣೆ ಆಚರಿಸುತ್ತೀನಿ. ಬಂದವರಿಗೆಲ್ಲ ಬೋಂದಿ ಲಾಡು ಕೊಡ್ತೀನಿ’ ಅಂತ! ಈ ಸ್ವತಂತ್ರ ದಿನಾಚರಣೆ, ಗಾಂಧಿ ಜಯಂತಿ ಮಜವೇ ಬೇರೆ ಬಿಡು. ಶಾಲೆಯಲ್ಲಿ ತಿಂದ ಬೋಂದಿ ಲಾಡಿನ ರುಚಿ, ನಿನ್ನ ಕೈಯಡುಗೆಯ ರುಚಿ ಎರಡು ಒಂದೆ ಅಂತ ಅರ್ಥವಾಗುವುದು ನೀನು ಊರಿಗೆ ಹೋದಾಗಲೆ!
ಅಯ್ಯೊ ನೋಡು ಈ ಪುರಾಣದಲ್ಲಿ ವೆರಿ ವೆರಿ ಇಂಪಾರ್ಟೆಂಟ್ ವಿಚಾರವನ್ನೆ ಮರೆತುಬಿಟ್ಟೆ. ಅಂದಹಾಗೆ ನಿಮ್ಮಪ್ಪ ಜೋಯ್ಸರು ಆರಾಮ ಇದಾರಾ?! ಛೇ, ಆಗೆಲ್ಲ ನಾನು ಜೋಯ್ಸರನ್ನ ಏಕವಚನದಲ್ಲಿ ಆರಾಮವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಈಗ ಹಾಗಾಗಲ್ಲ. ಯಾಕಂದ್ರೆ ಅವ್ರು ತಮ್ಮ ಮಗಳನ್ನು ’ತನು,ಮನದಿಂದ’ ಧಾರೆ ಎಳೆದು ಕೊಟ್ಟಿದ್ದಾರೆ. ಧನವನ್ನು ಮಾತ್ರ ಕೊಡದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೆ! ಹೋಗ್ಲಿ ಬಿಡು ಯಾರು ಕೊಟ್ಟ ದುಡ್ಡು ಎಷ್ಟು ದಿನ ಬರುತ್ತೆ ಅಲ್ವಾ? ಆದ್ರೂ ಕೊಟ್ಟಿದ್ರೆ ಕಾಫಿಪುಡಿ ಖರ್ಚಿಗೆ ಆಗ್ತಾ ಇತ್ತೇನಪ್ಪ! ಅವ್ರು ನಂಗೆ ಅಂತ ಕೊಡೋದು ಬೇಡವಾಗಿತ್ತು. ಮಗಳ ಸುಖ-ದುಃಖ, ಶಾಂತಿ, ನೆಮ್ಮದಿಗೆ ಅಂತ ಕೊಟ್ಟಿದ್ರೆ ಸಾಕಾಗಿತ್ತು. ಹಿಂಗೆಲ್ಲ ಜೋರಾಗಿ ಅಂದುಬಿಟ್ರೆ ನಾಳೆಯಿಂದ ನೀನು ಮನೆಯಲ್ಲಿ ಕಾಫಿ ಮಾಡೋದನ್ನೆ ನಿಲ್ಲಿಸಿಬಿಡ್ತಿಯ!
ಇವತ್ತು ಸುಮ್ಮನೆ ನಿಂಗೆ ಬರೆದ ಹಳೆಯ ಪತ್ರಗಳು, ನೀನು ಅದ್ಕೆ ಬರೆದ ಉತ್ತರಗಳನ್ನು ಜಾಲಾಡುತ್ತ ಕುಳಿತ್ತಿದ್ದೆ. ಅಬ್ಬಬ್ಬ ಆವತ್ತೆಲ್ಲ ಅದೆಷ್ಟು ಕನಸುಗಳು ನಮ್ಮಿಬ್ಬರದ್ದು. ನಮ್ಮಿಬ್ಬರ ಜೋಡಿ ಅಂದ್ರೆ ಜಗತ್ತಿನಲ್ಲಿ ಸ್ವರ್ಗಕ್ಕೆ ಮೂರೆ ಗೇಣು. ಮೊಬೈಲ್ ಇಲ್ಲದ ಕಾಲದಲ್ಲಿ, ಇಂಟರ್‌ನೆಟ್ ಕಾಣದ ಯುಗದಲ್ಲಿ ನಾವಿಬ್ಬರು ಅಂದೆಂಥ ಅದ್ಭುತವಾದ ಲವ್ ಮಾಡಿಬಿಟ್ವಿ. ಈಗ ನೆನಪಿಸಿಕೊಂಡ್ರೆ ಒಂಥರ ಥ್ರಿಲ್ ಆಗುತ್ತೆ. ಇನ್‌ಲ್ಯಾಂಡ್ ಲೆಟರ್‌ನಿಂದ ಇಷ್ಟೊಂದು ಅದ್ಭುತವಾದ ಲವ್ ಸಾಧ್ಯವ ಅನ್ನಿಸುತ್ತೆ. ಟಿಫನ್ ಬಾಕ್ಸ್‌ನಿಂದ, ನೋಟ್‌ಬುಕ್‌ನಿಂದ…ಇನ್ನು ಎಂಥೆಂಥವುಗಳಿಂದಲೋ ಲವ್ ಆಗುತ್ತಂತೆ. ಅಂಥದ್ರಲ್ಲಿ ನಮ್ಮ ಇನ್‌ಲ್ಯಾಂಡ್ ಲೆಟರ್ ಮಹಾ ಅಲ್ಲ ಬಿಡು!
ಅಂದ್ಹಾಗೆ ನಿಮ್ಮ ತೀರ್ಥಹಳ್ಳಿ ಹೇಗಿದೆ? ತುಂಗಾನದಿಯಲ್ಲಿ ನೀರಿದೆ ತಾನೆ? ನೆನಪಿದ್ಯ ನಿಂಗೆ, ನಾನು ಲವ್ ಮಾಡಲ್ಲ ಅಂದಿದ್ದಕ್ಕೆ ನೀನು ನೀರಿಲ್ಲದ ನದಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು! ಹಾಗೇನಾದ್ರು ಆಗಿದ್ರೆ ನನ್ನ ಬದುಕಿನಲ್ಲಿ ಎಂಥೆಂಥ ಕಾಮಿಡಿ ಸೀನ್‌ಗಳೆಲ್ಲ ಮಿಸ್ ಆಗ್ತಿತ್ತು. ಅದ್ಯಾಕೊ ನನಗೆ ಇವತ್ತಿಗು ನಿಮ್ಮೂರು ತೀರ್ಥಹಳ್ಳಿ ವಂಡರ್‌ಫುಲ್ ಕಣೆ. ನೀನು ಹುಟ್ಟಿದ ಊರು ಅಂತಲ್ಲ, ನಿನ್ನ ತವರೂರು ಅಂತಾನೂ ಅಲ್ಲ. ಆದ್ರೂ ತೀರ್ಥಳ್ಳಿ ಅಂದ್ರೆ ಏನೋ ಒಂಥರ ಟಚ್ಚಿ, ಟಚ್ಚಿ!
ನೀನು ಇಲ್ಲಿ ನನ್ನ ಪಕ್ಕದಲ್ಲಿ ಕುಳಿತಿದಿಯಲ್ವಾ? ಸೋ, ನಾನು ಪತ್ರನ ಮತ್ತೆ ನಿನ್ನ ಅಡ್ರೆಸ್‌ಗೆ ಪೋಸ್ಟ್ ಮಾಡಲ್ಲ. ಈಗ ನಿಂದು-ನಂದು ಒಂದೆ ಅಡ್ರೆಸ್! ಆಗಾಗ ಡೋರ್ ನಂಬರ್ ಮಾತ್ರ ಬದ್ಲಾಗ್ತ ಇರುತ್ತೆ. ಹಾಗಾಗಿ ಇಲ್ಲೇ ಪತ್ರ ಓದಿ ನನ್ನ ಒಂದು ರೂಪಾಯಿ ಉಳಿತಾಯ ಮಾಡು. ಮತ್ತೆ ಮನೆ ಕಡೆ ಎಲ್ಲ ಆರಾಮಲ್ವಾ?
ಸರಿ ಕಣೆ ಆಫೀಸ್‌ಗೆ ಟೈಂ ಆಯ್ತು. ಪುರುಸೊತ್ತು ಆದಾಗ ಇನ್ನೊಂದು ಪತ್ರ ಬರಿತೀನಿ. ಅಲ್ಲಿವರೆಗೂ ಹ್ಯಾಪಿ ಇಂಡಪೆಂಡೆನ್ಸ್ ಡೆ. ನಾನು ಈ ಸಿಲಿಕಾನ್ ಸಿಟಿಗೆ ಬಂದು ಶಾನೆ ಇಂಪ್ರ್ಯೂ ಆಗಿದೀನಿ ಕಣೆ. ಮೊದ್ಲಿನ ಥರ ಗುಗ್ಗು ಅಲ್ಲ. ಪೆದ್ದು ಅಲ್ಲ. ನೀಟಾಗಿ ಡ್ರೆಸ್ ಮಾಡಿಕೊಂಡು ಆಫೀಸ್‌ಗೆ ಹೋಗ್ತೀನಿ. ಅದ್ಕೆ ಪತ್ರದ ತುಂಬೆಲ್ಲ ಇಷ್ಟೊಂದು ಇಂಗ್ಲಿಷ್ ಪದಗಳು.
ಸರಿ ಬರ‍್ಲಾ? ಬರಬೇಡ ಅಂದ್ರು ಸಂಜೆ ಗ್ಯಾರೆಂಟಿ ಬರ್ತಿನಿ! ಅಲ್ಲಿವರೆಗೂ ನಿಂಗೆ ಮತ್ತೊಮ್ಮೆ ಹ್ಯಾಪಿ ಇಂಡಪೆಂಡೆನ್ಸ್ ಡೆ.
ಇಂತಿ
ನಿನ್ನ ಪುಟ್ಟ

Read Full Post »

‘ಹಿಂದಿರುಗಿ ನೋಡಿದರೆ ಬದುಕು ಯಾವತ್ತೂ ಖುಷಿ ಕೊಡಬೇಕು. ನೆನಪುಗಳು ನಗು ತರಿಸಬೇಕು. ಫಿಸಿಕ್ಸ್, ಕೆಮಿಸ್ಟ್ರಿ ಯಾವುದೂ ಬದುಕನ್ನು ಕಲಿಸಲ್ಲ ಕಣೋ. ಏನಿದ್ರು ಅನುಭವ ಮಾತ್ರ ಬದುಕಿನ ಜೊತೆ ಶಾಶ್ವತವಾಗಿ ಉಳಿಯೋದು. ಬದುಕಿನುದ್ದಕ್ಕೂ ಬರೋದು’ ಹಾಗಂತ ಹೇಳಿದ್ದು ನನ್ನ ಕೆಮಿಸ್ಟ್ರಿ ಲೆಕ್ಚರ್ ಸೋಮಯಾಜಿ. ‘ಥೂ, ಡಿಗ್ರಿಯಲ್ಲಿದ್ದೇನೆ ಅಂದುಕೊಳ್ಳಲಿಕ್ಕೆ ನಾಚಿಕೆಯಾಗುತ್ತೆ. ಒಳ್ಳೆ ಎಲಿಮೆಂಟ್ರಿ ಸ್ಕೂಲ್ ಮಕ್ಕಳ ಥರ ಕಿವಿಚಟ್ಟೆ ಹಿಡಿದು ಬುದ್ಧಿ ಹೇಳ್ತಾರಪ್ಪ ಇವ್ರು’ ಅಂತಾ ನಾನು ಅವರನ್ನು ಸಾಕಷ್ಟು ಸಲ ಬೈದುಕೊಂಡಿದ್ದಿದೆ. ಸೋಮಯಾಜಿ ಅಂದ್ರೆ ಇಡೀ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಒಂಥರ ಗೌರವ ಭಾವ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋದಕ್ಕೆ ಅವರು ಜೀವಂತ ನಿದರ್ಶನ. ಕರೆಕ್ಟಾಗಿ ಮೂರುವರೆ ಅಡಿ ಎತ್ತರವಿದ್ದರು. ಪಾಠ ಮಾತ್ರ ಅದ್ಭುತ. ಅವರ ಕ್ಲಾಸ್‌ಗೂ ಬಂಕ್ ಹಾಕುತ್ತಿದೆ. ಅದಕ್ಕಾಗಿಯೇ ಅವರು ನನಗೆ ಕಿವಿ ಹಿಡಿದು ಬುದ್ಧಿ ಹೇಳುತ್ತಿದ್ದರು ಅನ್ನೋದು ನಂತರದ ಮಾತು ಬಿಡಿ!

ಅದ್ಯಾಕೊ ಗೊತ್ತಿಲ್ಲ ಸೋಮಯಾಜಿ ಅವರಿಗೆ ನನ್ನ ಕಂಡರೆ ಬಹಳ ಇಷ್ಟ. ಹಾಗಾಗಿಯೇ ಸ್ಟಾಫ್‌ರೂಂಗೆ ಹೋದಾಗಲೆಲ್ಲ ಕೆಮಿಸ್ಟ್ರಿಯಿಂದ ಹೊರತಾದ ಸಾಕಷ್ಟು ಫಿಲಾಸಫಿ ಹೇಳುತ್ತಿದ್ದರು. ಅವರು ಹೇಳಿದ್ದರಲ್ಲಿ ಒಂದಷ್ಟು ಗೋಲ್ಡನ್ ವರ್ಡ್ಸ್‌ಗಳು ಇವತ್ತಿಗೂ ನನ್ನ ಕಿವಿಯಲ್ಲಿ ಗುಂಯ್ ಅನ್ನುತ್ತಿದೆ. ಅವರು ಹೇಳಿದ ಹಾಗೆ ನಾನು ಕಲಿತ ಕೆಮಿಸ್ಟ್ರಿ, ಮ್ಯಾಥ್ಸ್, ಫಿಸಿಕ್ಸ್ ಯಾವೂದು ಬದುಕಿನಲ್ಲಿ ಎಳ್ಳುಕಾಳಷ್ಟು ಪ್ರಯೋಜನಕ್ಕೆ ಬರಲಿಲ್ಲ. ಕಲಿತಿದ್ದು ಒಂದು, ಆಯ್ದುಕೊಂಡಿದ್ದು ಮತ್ತೊಂದು ವೃತ್ತಿ. ಹಿಂದಿರುಗಿ ನೋಡಿದ್ರೆ ಬದುಕು ತುಂಬಾ ಮಜಾ ಅನ್ನಿಸುತ್ತಿದೆ. ಜೊತೆಗಿದ್ದ, ಒಂದೇ ಬೆಂಚಿನಲ್ಲಿ ಕೀಟಲೆ ಮಾಡಿದ್ದ, ಬಳಪ, ಚಾಕಲೇಟ್‌ಗಳಿಗಾಗಿ ಜಗಳವಾಡಿದ್ದ ದೋಸ್ತಿಗಳಲೆಲ್ಲ ಇವತ್ತು ಏನೇನೋ ಆಗಿದ್ದಾರೆ. ಯಾವ್ಯಾವುದೋ ಕ್ಷೇತ್ರದಲ್ಲಿದ್ದಾರೆ. ಕೆಲವರ ಪರಿಚಯ ಇನ್ನು ಉಳಿದಿದೆ. ಕೆಲವರು ಫೇಸ್‌ಬುಕ್, ಆರ್ಕುಟ್‌ನಂಥ ಸಾಮಾಜಿಕ ತಾಣದಲ್ಲಿ ದೋಸ್ತಿಗಳು ಅನ್ನೋದು ನಿಜ. ಆದರೆ ಅವರ ಕುರಿತು ಪ್ರೊಫೈಲ್‌ನಲ್ಲಿ ಇರುವಷ್ಟೇ ಮಾಹಿತಿ ಮಾತ್ರ ನಮ್ಮ ಬಳಿಯಿರುತ್ತೆ. ಇದರ ಹೊರತಾಗಿ ಅವರ ಜೊತೆಗಿನ ಹಳೆ ದಿನಗಳ ನೆನಪಷ್ಟೇ ಬಾಕಿ ಉಳಿದಿದೆ!

ಹಳೆ ಗೆಳೆಯರು ಎಲ್ಲೋ ಅಚಾನಕ್ಕಾಗಿ ಸಿಕ್ಕಿಬಿಡುತ್ತಾರೆ. ಹುಡುಗರಾಗಿದ್ದರೆ, ಏನೋ ಮಗ, ಏನ್ ಸಮಾಚಾರ…ಇತ್ಯಾದಿ ಮಾತು. ಹುಡುಗಿಯರಾಗಿದ್ದರೆ ಶಿಸ್ತುಬದ್ಧ ಮಾತು. ಹೆಚ್ಚಿನವರಿಗೆ ಮದುವೆ ಆಗಿರುತ್ತೆ. ಪಕ್ಕದಲ್ಲಿ ಗಂಡ ಇರುತ್ತಾನೆ…ಹೀಗಾಗಿ ಹಳೆ ಪರಿಚಯ ಅಂತಾ ಜಾಸ್ತಿ ಕ್ಲೋಸ್ ಆಗಿರಲು ಸಾಧ್ಯವಿಲ್ಲ. ಇನ್ನೂ ಕೆಲವರಿಗೆ ಮಕ್ಕಳು-ಮರಿಯಾಗಿರುತ್ತೆ. ನಾವು ಕಾರಿಡಾರ್‌ನಲ್ಲಿ ನಿಂತು ಲೈನ್ ಹಾಕಿದ್ದು ನಿಜವಾದ್ರೂ, ಅವೆಲ್ಲ ಒಂಥರ ಮೈ ಆಟೋಗ್ರಾಫ್ ಚಿತ್ರದ ಕಥೆ ಇದ್ದಂಗೆ! ಅರೆ, ನಾವೆಲ್ಲ ಎಷ್ಟು ದೊಡ್ಡವರು ಆಗಿ ಬಿಟ್ಟಿದ್ದೇವೆ. ಮದುವೆ ಆಗಿ ಹೋಗಿದೆ. ಬದುಕಿಗೊಂದು ಶಿಸ್ತಿನ ದಿನಚರಿ. ಬೆಳಿಗ್ಗೆ ೯ ಗಂಟೆಯಾದ್ರೆ ‘ರೀ ತಿಂಡಿಗಾಯು’ ಅಂತಾ ಹೆಂಡ್ತಿ ಎಬ್ಬಿಸುತ್ತಾಳೆ. ರಾತ್ರಿ ೮-೯ಗಂಟೆಯೊಳಗೆ ಗೂಡು ಸೇರಿಕೊಳ್ಳಬೇಕು. ಬರಲಿಲ್ಲ ಅಂದ್ರೆ ಗಾಬರಿ, ಆ ಕಡೆಯಿಂದ ೮-೧೦ ಕರೆಗಳು…! ಚೆಂದದ ಹುಡುಗಿ ಎದುರಿಗಿದ್ದಾಳೆ ಅಂತಾ ರಾಜರೋಷವಾಗಿ ನೋಡುವ ಹಾಗಿಲ್ಲ. ಯಾಕಂದ್ರೆ ನಾವು ಅಂಕಲ್ ಎಂದು ಜಗತ್ತಿಗೆ ಗೊತ್ತಿದೆ! ಇದ್ನೆಲ್ಲ ಜಾಸ್ತಿ ಬರೆದರೂ ಇದೇನಪ್ಪ ಬರೀ ಹುಡುಗಿಯರ ಮಾತು ಅಂತೆಲ್ಲ ಅಪಾರ್ಥವಾಗಿ, ಅದೊಂದು ದೊಡ್ಡ ಇಷ್ಯು ಆಗಿ..ಉಸ್ಸಪ್ಪೊ ಟಾಪಿಕ್ ಚೇಂಜ್…ಸೀನ್ ಕಟ್

ಎಲ್ಲಿ ಫಿಸ್ಸಿಕ್ಸು, ಎಲ್ಲಿ ಸಿನಿಮಾ? ಎಲ್ಲಿ ಸೀರಿಯಲ್? ಸಿನಿಮಾ ಬರಯಲೇ ಬೇಕು ಎಂದು ಹಠಕ್ಕೆ ಬಿದ್ದು ಕೆಲ ಮಹಾನುಭವರಿಗೆ ಪುಗ್ಸಟ್ಟೆ ೬೨-೬೫ ದೃಶ್ಯಗಳನ್ನು ಬರೆದುಕೊಟ್ಟಿದ್ದು, ಸೀರಿಯಲ್ ಕಥೆ ಹೆಣೆದಿದ್ದು, ಅದು ರಿಜೆಕ್ಟ್ ಆಗಿದ್ದು..ನಮ್ಮತ್ರ ಸ್ಟೋರಿ ಲೈನ್ ತೆಗೆದುಕೊಂಡು ಬೇರೆಯವರು ಕಥೆ ಮಾಡಿಕೊಂಡಿದ್ದು…ಎಲ್ಲರ ಬದುಕಿನಲ್ಲೂ ಇದೆಲ್ಲ ಮಾಮೂಲು ಅನ್ನಿಸುತ್ತಿದೆ…ಆಫ್ ದಿ ರೆಕಾರ್ಡ್ ಮಾತಾಡಿದ್ರೆ ಫೀಲ್ಡ್‌ನಲ್ಲಿ ಇಂಥ ಅದೆಷ್ಟೋ ಕಥೆಗಳು ಸಿಗುತ್ತವೆ ಎಂದು ಗೊತ್ತಾಗಿದ್ದು ಯೋಗರಾಜ್ ಭಟ್ಟರು ತಮ್ಮ ಹಳೆ ಕಥೆಗಳನ್ನು ಹರವಿಕೊಂಡು ಹರಟೆಗೆ ಕುಳಿತಾಗ…ಅವೆಲ್ಲ ಕಥೆಗಳನ್ನು ಅವ್ರು ತಮ್ಮ ಪ್ರತಿ ಸಿನಿಮಾದಲ್ಲಿ ಒಂದೊಂದು ದೃಶ್ಯವಾಗಿ ತರುತ್ತಾರೆ. ಇವತ್ತು ಎತ್ತರದಲ್ಲಿರುವ ಕೆಲವರ ಕಥೆ ಕೇಳಿದ್ರೆ ನಮ್ಮ ಲೈಫು ಸಾವಿರ ಪಾಲು ಉತ್ತಮ. ಅವರಷ್ಟು ಅವಮಾನ, ಅಸಹಾಯಕತೆ ಯಾವುದೂ ನಮಗೆ ಎದುರಾಗಿಲ್ಲ. ಯಾಕಂದ್ರೆ ಇವತ್ತು ಕಾಲ ಬದಲಾಗಿದೆ. ಅವಕಾಶಗಳು ಸಾಕಷ್ಟು ಇವೆ…ಎಲ್ಲಕ್ಕಿಂತ ಹೆಚ್ಚಾಗಿ ಒಂದು ಫೀಲ್ಡ್‌ಗೆ ಕಾಲಿಡುವ ಮೊದಲು, ವ್ಯಕ್ತಿಯನ್ನು ಭೇಟಿ ಮಾಡುವ ಮೊದಲು ಆ ಕುರಿತು ಮಾಹಿತಿ ನೀಡುವ ಗೆಳೆಯರಿದ್ದಾರೆ.

ಹಾಗಂತ ಬದುಕಿಗೆ ಮಿತಿಯಿಲ್ಲ. ಮಿತಿ ಇರಬಾರದು ಕೂಡ. ೧೦ ರೂಪಾಯಿ ಇದ್ದ ಕಾಲಕ್ಕೆ ೧೦೦ರೂಪಾಯಿ ಇದ್ದರೆ ಏನಾದ್ರು ಮಾಡಬಹುದಿತ್ತು ಅನ್ನಿಸುತ್ತಿತ್ತು. ೧೦೦ ರೂಪಾಯಿ ಬಂದ ಕಾಲಕ್ಕೆ ಜಗತ್ತು ೧೦೦೦ರೂಪಾಯಿ ಹಿಂದೆ ಓಡುತ್ತಿತ್ತು. ಇದು ಕೊನೆಗೆ ಲಕ್ಷವಾಯ್ತು. ೧೦ ಲಕ್ಷಕ್ಕೆ ಬಂತು. ಈಗ ಬೆಂಗಳೂರಿನಲ್ಲಿ ಒಂದು ಕೋಟಿ ರೂಪಾಯಿ ಇದ್ದರೆ ಏನಾದ್ರು ಮಾಡಬಹುದಿತ್ತು ಅನ್ನಿಸುತ್ತಿದೆ. ‘ದೋಸ್ತಾ ಬದುಕಿನ ಜರ್ನಿ ಸೈಕಲ್‌ನಿಂದ ಶುರು. ಹೈಸ್ಕೂಲ್‌ನಲ್ಲಿ ಹೊಸ ಸೈಕಲ್ ತಗಂಡು ಹೊಡೆಯುವ ಮಜವೇ ಬೇರೆ. ನಂತ್ರ ಬೈಕು ಬಂತು. ಹೊಸ ಬೈಕ್ ತೆಗೆದುಕೊಂಡಾಗ ಅದೇನು ಖುಷಿ. ಈಗ ಕಾರು ಬೇಕು ಅನ್ನಿಸುತ್ತಿದೆ. ಇಷ್ಟಕ್ಕೆ ಮುಗೀತು ಅಂದುಕೊಳ್ಳಬೇಡ. ಕಾರು ಬಂದ ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಬಯಕೆ ಶುರುವಾಗುತ್ತೆ’ ಹಿಂಗೆ ಹರಟೆ ಹೊಡೆಯುತ್ತಿದ್ದಾಗ ಗೆಳೆಯ ಶ್ರೀನಿಧಿ ಹೇಳಿದ ಮಾತು. ನೂರಕ್ಕೆ ನೂರರಷ್ಟು ನಿಜವಾದ ಮಾತು.

li

ಸ್ವಲ್ಪ ಹುಚ್ಚುತನ ಅನ್ನಿಸಬಹುದು. ಆದ್ರೂ ನಿಜ. ಇತ್ತೀಚೆಗೆ ಯಾವುದಾದ್ರೂ ಫುಟ್‌ಪಾತ್‌ನಲ್ಲಿ ದಿನವಿಡೀ ಮಲಗಬೇಕು ಅನ್ನಿಸ್ತಾ ಇದೆ. ಮರಳಿನ ಮೇಲೆ ಮಲಗಿದ್ರೂ ಬರೋದು ಅದೇ ನಿದ್ದೆ. ಬಂಗಾರದ ಮಂಚದ ಮೇಲೆ ಮಲಗಿದ್ರೂ ಬರೋದು ಅದೇ ನಿದ್ದೆ. ಮಲಗಿದ ಮೇಲೆ ನನಗಂತೂ ದೇವರಾಣೆ ಮಲಗಿದ ಜಾಗ, ಕಚ್ಚಿದ ಸೊಳ್ಳೆ ಯಾವುದೂ ಗೊತ್ತಿರಲ್ಲ. ಎಷ್ಟರ ಮಟ್ಟಿಗೆ ಅಂದ್ರೆ, ನನ್ನ ಹೆಂಡ್ತಿ ‘ರಾತ್ರಿ ನೀವು ಮಲಗಿದ್ದಾಗ ನಿಮ್ಮ ಮೀಸೆ ಕಟ್ಟು ಮಾಡಿದ್ದೆ’ ಅಂತ ನನ್ನ ಆಗಾಗ ರೇಗಿಸ್ತಾ ಇರ್ತಾಳೆ. ಒಂದ್ಸಲ ಮೀಸೆ ಕಟ್ಟು ಮಾಡಿದ್ಲೇನೋ ಅನ್ನೋ ಸಣ್ಣ ಅನುಮಾನ ಕೂಡ ಇದೆ! ಹೋಗ್ಲಿ ಬಿಡಿ…ಹೊಸ ಸೀನ್ ಏನು ಅಂದ್ರೆ, ದಿನಕ್ಕೆ ೧೦-೧೫ ಸಾವಿರ ಶುಲ್ಕ ವಿಧಿಸುವ, ಬೆಳ್ಳಿ ತಟ್ಟೆಯಲ್ಲಿ ಊಟೋಪಚಾರ ಮಾಡುವ ತಾಜ್‌ನಂಥ ಐಷಾರಾಮಿ ಹೋಟೆಲ್‌ನಲ್ಲಿ ನಾಲ್ಕಾರು ರಾತ್ರಿ ಕಳೆದಿದ್ದೇನೆ. ಅಲ್ಲಿನ ಐಷಾರಾಮಿ ಜಗತ್ತಿನ ಅನುಭವ ಆಗಿದೆ. ಆದ್ರೆ ಯಾವತ್ತೂ ಫುಟ್‌ಪಾತ್ ಮೇಲೆ, ಮರಳು ರಾಶಿ ಮೇಲೆ ಮಲಗಿಲ್ಲ. ಅಲ್ಲಿನ ಅನುಭವ ಇವತ್ತಿಗೂ ಆಗಿಲ್ಲ.

ಒಂದೊಮ್ಮೆ ಮಲಗಿದ್ರೆ, ಆಕ್ಸಿಡೆಂಟ್ ಸಿನಿಮಾದ ಥರ ಯಾವುದಾದ್ರೂ ವಾಹನ ಮೈಮೇಲೆ ಹರಿದು ಬಿಟ್ರೆ? ನಾಯಿಯೋ, ಇಲಿಯೋ, ಕುಡಿದ ಅಮಲಿನಲ್ಲಿರುವ ಮನುಷ್ಯರೋ ರಾತ್ರಿ ಬಂದು ಮೈಮೇಲೆ ಉಚ್ಚೆ ಹೊಯ್ದು ಬಿಟ್ಟರೆ? ಖಂಡಿತಾ ಫುಟ್‌ಪಾತ್ ಮೇಲೆ ಒಂದು ರಾತ್ರಿ ಮಲಗೋದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಫುಟ್‌ಪಾತ್ ಮೇಲೆ ಬದುಕುವ ಮಂದಿಯನ್ನು ತುಚ್ಛವಾಗಿ ನೋಡುವುದು, ಅವರನ್ನು ಹೀಯಾಳಿಸುವುದು, ಅವರ ಎದುರು ನಮ್ಮ ದೊಡ್ಡಸ್ತಿಕೆ ಮೆರೆಯುವುದು ತುಂಬಾ ಸುಲಭದ ಮಾತು. ಆದ್ರೆ ಅವರಂತೆ ಒಂದು ದಿನ ಕಳೆಯುವುದು..ಊಹುಂ, ಬಿಲ್‌ಕುಲ್ ಸಾಧ್ಯವಿಲ್ಲದ ಮಾತು. ಯಾಕಂದ್ರೆ ನಾವೆಲ್ಲ ಸದಾ ಎತ್ತರದ್ದನ್ನು ಆಲೋಚಿಸುತ್ತೇವೆ ಹೊರತು, ಕೆಳಗಿನದ್ದನಲ್ಲ…ಫಾರ್ ಎ ಚೇಂಜ್ ಫುಟ್‌ಪಾತ್‌ನಲ್ಲಿ ಮಲಗುವ ಆಲೋಚನೆ ಮಾಡಿನೋಡಿ ಸಾಕು!

ಈಗೊಂದು ತಿಂಗಳ ಹಿಂದೆ ಒಂದು ಕಾರ್ಯಕ್ರಮದ ಸಲುವಾಗಿ ಒಂದು ವಾರಗಳ ಕಾಲ ಉತ್ತರ ಕರ್ನಾಟಕಕ್ಕೆ ಹೋಗಿದ್ದೆ. ನನ್ನ ಬದುಕಿನಲ್ಲಿ ಫಸ್ಟ್ ಟೈಂ ಆ ಭಾಗಕ್ಕೆ ಹೋಗಿದ್ದು..ಈ ಮೊದಲನೆಯ ಅನುಭವಗಳೆಲ್ಲ ತುಂಬಾ ಖುಷಿ ಕೊಡುತ್ತವೆ ನೋಡಿ. ಮೊದಲ ಸಲ ರೈಲು ನೋಡಿದ್ದು ಬೀರೂರಿನಲ್ಲಿ..ಉದ್ದನೆಯ ಬೋಗಿಯ ರೈಲು ನೋಡಿ ಖುಷಿಯೋ, ಖುಷಿ. ನಾವೆಲ್ಲ ಲೈಫ್‌ಲ್ಲಿ ರೈಲು ಹತ್ತಲು ಸಾಧ್ಯವಿಲ್ಲ. ಇದು ಶ್ರೀಮಂತರ ವಾಹನ ಎಂದು ಸಿಕ್ಕಾಪಟ್ಟೆ ಬೇಸರಪಟ್ಟುಕೊಂಡಿದ್ದೆ. ನನ್ನ ಜನರಲ್ ನಾಲ್ಡೇಜ್ ಸಿಕ್ಕಾಪಟ್ಟೆ ಕಡಿಮೆ. ಹೀಗಾಗಿ ರೈಲು ಉಳಿದೆಲ್ಲ ವಾಹನಗಳಿಗಿಂತ ಅತಿ ಕಡಿಮೆ ದರದ ಪ್ರಯಾಣ ಸೇವೆ ನೀಡುತ್ತದೆ ಅಂತಾ ಗೊತ್ತಾಗಿದ್ದು ಈಗೊಂದು ೪-೫ ವರ್ಷದ ಹಿಂದೆ.

ವಿಮಾನ ಸಿಕ್ಕಾಪಟ್ಟೆ ಸ್ಪೀಡ್ ಹೋಗುತ್ತೆ. ಎರಡೂವರೆ ಗಂಟೆಯಲ್ಲಿ ಮುಂಬೈ ತಲುಪುತ್ತೇವೆ…ವಾವ್ಹ್, ವಿಮಾನ ಸೂಪರ್ ಅನ್ನಿಸಿತ್ತು ಮೊದಲ ಸಲ ಪುಣೆಗೆ ಹೋದಾಗ. ‘ಕೋಡ್ಸರ ಹೆಂಗಿತ್ರಿ ವಿಮಾನ ಪ್ರಯಾಣ’ ಅಂತಾ ವಿಶ್ವೇಶ್ವರ ಭಟ್ಟರು ಕೇಳಿದ್ದು, ಖುಷಿ-ಖುಷಿಯಿಂದ ಉತ್ತರ ಕೊಟ್ಟಿದ್ದು ಎಲ್ಲವೂ ಹಸಿ-ಹಸಿಯಾಗಿರುವಾಗ ದೆಲ್ಲಿಗೆ ಹೋಗುವ ಭಾಗ್ಯ ಬಂತು. ವಿಮಾನದ ಮತ್ತೊಂದು ಮುಖ ಪರಿಚಯ ಆಯ್ತು. ಡಿಸೆಂಬರ್ ತಿಂಗಳು. ಮಂಜಿನ ಹವಾ. ಬೆಂಗಳೂರು ನಿಲ್ದಾಣದಲ್ಲಿ ಸುಮಾರು ೪ ಗಂಟೆ ತಡವಾಗಿ ವಿಮಾನ ಹೊರಡ್ತು. ಆ ಕಡೆಯಿಂದ ಬರುವಾಗ ೫ ಗಂಟೆ ವೇಟಿಂಗ್! ಕೆಎಸ್‌ಆರ್‌ಟಿಸಿ ಬಸ್ಸಾಗಿದ್ರೆ, ಡಿಪೊ ಮ್ಯಾನೇಜರ್ ಹತ್ರ ಗಲಾಟೆ ಮಾಡಿಯಾದ್ರೂ ಬಸ್ಸು ಹೊರಡಿಸಬಹುದಿತ್ತು. ಆದ್ರೆ ಅದು ವಿಮಾನ! ಅಲ್ಲಿರುವವರೆಲ್ಲ ಸಿಕ್ಕಾಪಟ್ಟೆ ಡೀ‘ಸೆಂಟ್’ ಮಂದಿ. ಗಲಾಟೆ ಮಾಡಿದ್ರೆ ಸೆಕ್ಯುರಿಟಿ ಕರೆದು ಹೊರಗೆ ಕಳುಹಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ವಿಮಾನ ಯಾಕೆ ತಡ ಎಂಬುದನ್ನು ಟೆಕ್ನಿಕಲ್ ಭಾಷೆಯಲ್ಲಿ ವಿವರಿಸುತ್ತಾರೆ. ನಾವು ತಿರುಗಿ ಪ್ರಶ್ನೆ ಕೇಳಿದ್ರೆ ಉತ್ತರ ಕೊಡಲು ಆ ಹುಡುಗಿಗೆ ಗೊತ್ತಿರಲ್ಲ..ಇದೊಂಥರ ನಾವು ಕಾಲ್‌ಸೆಂಟರ್ ಮಂದಿ ಹತ್ರ ನಮ್ಮ ಮೊಬೈಲ್ ಸೇವೆ ಸರಿಯಿಲ್ಲ ಎಂದು ಸುಮ್ಮನೆ ಜಗಳ ಮಾಡಿದ ಹಾಗೆ! ಅದಕ್ಕಿಂತ ಸುಮ್ಮನಿರುವುದೇ ಲೇಸು ಅಲ್ವಾ?

ಅಬ್ಬಬ್ಬ ತಿರುಗಿ ನೋಡಿದ್ರೆ ಲೈಫು ಎಷ್ಟು ಸುಂದರ! ಆಫೀಸ್‌ನಲ್ಲಿ ನನಗಿಂತ ಕೊನೆಗೆ ಬಂದವನಿಗೆ ನನಗಿಂತ ಹೆಚ್ಚು ಸಂಬಳ. ನನಗಿಂತ ಕಿರಿಯವನಿಗೆ ಒಳ್ಳೆ ಹುದ್ದೆ! ಹೀಗೆಲ್ಲ ದಿನವೂ ಅನ್ನಿಸುತ್ತೆ. ಆದ್ರೆ ನನಗಿಂತ ಕಡಿಮೆ ಸಂಬಳದಲ್ಲಿ ಹೆಚ್ಚು ಕೆಲಸ ಮಾಡುವವರು, ಹಗಲಿರುಳು ಆಫೀಸ್‌ಗಾಗಿ ದುಡಿಯುವವರು, ಆಫೀಸ್ ಬಿಟ್ಟು ಬೇರೆ ಜಗತ್ತು ಗೊತ್ತಿಲ್ಲದವರು…ಇವ್ರನ್ನೆಲ್ಲ ನೋಡಿದಾಗ ನಾವೇ ಬೆಟರ್ ಅನ್ನಿಸುತ್ತೆ. ಮತ್ತೊಂದಷ್ಟು ಕನಸುಗಳು ಗರಿಗೆದರುತ್ತವೆ. ಲೈಫ್‌ನಲ್ಲಿ ಒಂದು ಸಿನಿಮಾ ಮಾಡಬೇಕು, ಮತ್ತಷ್ಟು ಪುಸ್ತಕ ಬರೆಯಬೇಕು, ಇನ್ನೊಂದಷ್ಟು ಅನುಭವ ಪಡೆಯಬೇಕು, ಕೆಲವಷ್ಟು ದೇಶ ಸುತ್ತಬೇಕು, ಇನ್ನೊಂದಷ್ಟು ಸ್ಲಂ ಜಗತ್ತನ್ನು ನೋಡಬೇಕು…ಅಂತ್ಯವಿಲ್ಲದ ಜರ್ನಿ. ಲೈಫ್‌ನಲ್ಲಿ ಒಂದೇ ಸಾಕು ಅನ್ನಿಸುವ ಏಕೈಕ ಸಂಗತಿ ಅಂದ್ರೆ “ಹೆಂಡ್ತಿ ಮಾತ್ರ!!!” ಇದನ್ನ ನನ್ನ ಹೆಂಡ್ತಿ ನೋಡಿದ್ರೆ ನಾಳೆ ನನ್ನ ಮಾರ್ನಿಂಗ್ ಕಾಫಿ ಕಟ್! ಅವಳಿಗೆ ಗೊತ್ತು ಬೆಳಿಗ್ಗೆ ಕಾಫಿ ಕೊಡದೆ ಇದ್ದರೆ ನನ್ನ ಅಬ್ಬರ ಫುಲ್ ಬಂದ್ ಆಗುತ್ತೆ ಅಂತಾ! ಅಳವನ್ನು ಸಮಾಧಾನ ಮಾಡಿ, ‘ಸಂಜೆ ಒಂದು ಮಸಾಲೆ ಪುರಿ ತಂದುಕೊಡುತ್ತೇನೆ ಕಂದಾ’ ಅಂತಾ ಮಾಲಿಷ್ ಮಾಡಿ ಕಾಫಿ ಕುಡಿಯುವ ಹೊತ್ತಿಗೆ…ಒನ್ಸ್ ಅಗೈನ್ ಲೈಫ್ ಈಸ್ ಬ್ಯೂಟಿಫುಲ್ ಅನ್ನಿಸಲು ಶುರುವಾಗಿರುತ್ತೆ!

Read Full Post »

ಹಾಯ್ ಕೋತಿ,

ಈ ಸುಡುಗಾಡು ಕಾಂಕ್ರಿಟು ಜಂಗಲ್ಲಿಗೆ ಬಂದ ಮೇಲೆ ಮೊಬೈಲು, ಮೆಸೇಜು, ಇಮೇಲ್, ಜಿಟಾಕ್‌ಗಳ ಭರಾಟೆಯಲ್ಲಿ ಪತ್ರ ಬರೆಯೋದೆ ಮರೆತು ಹೋದಂತಾಗಿತ್ತು ನೋಡು. ಇವತ್ತು ಬೆಳಿಗ್ಗೆ ಇಂಟರ್‌ನೆಟ್‌ನಲ್ಲೊಂದು ಪ್ರೇಮಪತ್ರ ನೋಡಿದಾಗ ನೆನಪಾಗಿದ್ದು ನನ್ನ ಡಿಗ್ರಿಯ ದಿನಗಳು. ನಿಂಗೆ ಪತ್ರ ಬರೆದು ಅಂಚೆ ಡಬ್ಬಿಯಲ್ಲಿ ಹಾಕೋದು ಅಂದ್ರೆ ನನಗಾವಾಗ ಎಲ್ಲಿಲ್ಲದ ಖುಷಿ. ನಮ್ಮಿಬ್ಬರ ಆರಂಭದ ಪ್ರೀತಿಗೆ ಸೇತುವೆ “ಇಂಗ್ಲೆಂಡ್‌ಲೆಟರ್” ಅಲ್ವಾ?! ಅದು ಇಂಗ್ಲೆಂಡ್ ಲೆಟರ್ ಅಲ್ಲ, ಇನ್‌ಲ್ಯಾಂಡ್ ಲೆಟರ್ ಎಂದು ತಿಳಿಯದಷ್ಟೂ ಗುಗ್ಗು ನಾನಾಗಿದ್ದೆ. ನೆಟ್‌ವರ್ಕ್ ಇಲ್ಲದ ಊರಿನಲ್ಲಿ ಹುಟ್ಟಿಕೊಂಡ ನಾನು, ನಿನ್ನ ಜೊತೆ ಮಾತಾಡಬೇಕು ಅಂದ್ರೆ, ಪತ್ರ ಮಾತ್ರ ಸಾಧನವಾಗಿತ್ತು.

ಭಾರತ್ ಸಂಚಾರ ನಿಗಮ್‌ನ ದೂರವಾಣಿ ಮನೆಯಲ್ಲಿ ಇತ್ತಾದರೂ, ವಾರದಲ್ಲಿ ಆರು ಮುಕ್ಕಾಲು ದಿನ ಸರಿಯೇ ಇರುತ್ತಿರಲಿಲ್ಲ. ಇನ್ನುಳಿದ ಕಾಲು ದಿನ ಫೋನು ಅಮ್ಮನನ್ನು ಬಿಟ್ಟು ಅಲ್ಲಾಡುತ್ತಿರಲಿಲ್ಲ! ಓದು-ಬರಹದ ಜುಗುಪ್ಸೆ ಹುಟ್ಟಿದ್ದ ದಿನದಲ್ಲೂ ಬೇಸರವಿಲ್ಲದೆ ನಿನಗೆ ಪತ್ರ ಬರೆದಿದ್ದೆ ಗೊತ್ತಾ? ನಿನಗೆ ಪತ್ರ ಬರೆಯಲು ಶುರುವಿಟ್ಟರೆ ಈಗಲೂ ನನ್ನ ಕಣ್ಣುಗಳು ಅರಳುತ್ತವೆ.

ಎಂಥೆಥ ಮಜ-ಮಜವಾಗಿರುವ ಪತ್ರಗಳನ್ನು ಬರೆದಿದ್ದೆ ಅಲ್ವಾ? ಅವಷ್ಟನ್ನೂ ಡಿಟಿಪಿ ಮಾಡಿಸಿ, ಸಿಡಿಯಲ್ಲಿ ಹಾಕಿಟ್ಟುಕೊಂಡಿದ್ದೇನೆ. ಹಾಗೆ ನೋಡಿದ್ರೆ, ನನಗೆ ಪತ್ರ ಬರೆದು ಅಭ್ಯಾಸವೇ ಇರಲಿಲ್ಲ. ಪತ್ರಕ್ಕಿರಬೇಕಾದ ರೀತಿ-ರಿವಾಜುಗಳೆಲ್ಲ ಗೊತ್ತಿರಲಿಲ್ಲ. ಅಂಥ ಸಮಯದಲ್ಲಿ ನನಗೆ ಪತ್ರ ಬರೆಯುವ ಚಟ ಕಲಿಸಿದ ಪಾಪಿ ನೀನು! ನನಗಿನ್ನೂ ಚೆನ್ನಾಗಿ ನೆನಪಿದೆ. ಆವತ್ತು ಜನವರಿ ಹತ್ತು. ನನ್ನ ೨೧ನೇ ಹುಟ್ಟುಹಬ್ಬ. ತುಂಗೆ ನದಿ ತಟದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆಯಂತೆ ಎಂದು ಊರೆಲ್ಲ ಸುದ್ದಿಯಾಗಿತ್ತು. ಕಾಲೇಜಿಗೆ ಹೊರಟ್ಟಿದ್ದ ನಾನು, ಮಾನಸಿ, ವರ್ಷಾ…ಕ್ಲಾಸ್‌ಗೆ ಬಂಕ್ ಹಾಕಿ ರಮೇಶ್-ಸುಹಾಸಿನಿ ಜೋಡಿಯನ್ನು ನೋಡಲು ಬಂದ್ವಿ. ಅಂದಹಾಗೆ ನೀನು ನನಗೆ ಮೊದ್ಲು ನೋಡಲು ಸಿಕ್ಕಿದ್ದು ಭೀಮನಕಟ್ಟೆಯಲ್ಲಿ ಕಣೋ. ತುಂಗೆಯಾಚೆಗಿನ ಗದ್ದೆಯಲ್ಲಿ ನಡೆಯುವ ಶೂಟಿಂಗ್ ನೋಡಲು ದೋಣಿ ಹತ್ತಿದ್ವಿ. ಗಿಳಿ ಹಸಿರು ಬಣ್ಣದ ಶರ್ಟ್, ಆಗಿನ್ನು ಚಿಗುರುತ್ತಿದ್ದ ಮೀಸೆ, ಬಾಚದ ಕೂದಲಿನ ನಿನ್ನನ್ನು ನೋಡಿದ್ರೆ, ಎಂಥವರಿಗೂ ರೇಜಿಗೆ ಹುಟ್ಟುತ್ತಿತ್ತು. ಈ ಸಿನಿಮಾ ಮಂದಿಯೇ ಹಾಗಿರಬೇಕು ಅನ್ನಿಸುತ್ತಿತ್ತು. ಮೊದಲ ಸಲ ನಿನ್ನನ್ನು ನೋಡಿದಾಗ, ಮುಂದೊಂದು ದಿನ ನನಗೂ, ನಿನಗೂ ಲವ್ ಶುರುವಾಗಬಹುದು ಎಂಬ ಕನಸು ಕೂಡ ಇರಲಿಲ್ಲ!

ನೀವು ಇದೇ ಊರಿನವರಾ ಮ್ಯಾಮ್? ಇಲ್ಲಿ ಒಳ್ಳೆ ದೇವಸ್ಥಾನ ಎಲ್ಲಿದೆ? ನದಿ ಪಕ್ಕ ವಿಶಾಲವಾದ ಬಯಲು ಎಲ್ಲಾದ್ರು ಇದೆಯಾ ಅಂತಾ ನೀನು ಕೇಳಿದಾಗ, ಅಯ್ಯೋ ಕರ್ಮವೆ ಇವನೊಬ್ಬ “ಬಯಲು” ಗಿರಾಕಿ ಅಂದುಕೊಂಡಿದ್ದೆ! ನಮ್ಮಲ್ಲಿ “ಬಯಲು ಕಡೆ ಹೋಗುವುದು” ಅಂದ್ರೆ ಬೇರೇನೆ ಅರ್ಥವಿದೆ! ನೀನೊಬ್ಬ ಕಥೆಗಾರ, ನಿರ್ದೇಶಕ ಅನ್ನುವ ಕಲ್ಪನೆಯೂ ನನಗೆ ಇರಲಿಲ್ಲ. ಆಮೇಲೆ ಸಿನಿಮಾದಲ್ಲಿ ಲೋಕೆಷನ್ ಹೇಗಿರಬೇಕು, ಕ್ಯಾಮೆರಾ ವರ್ಕ್‌ನಿಂದ ಚಿತ್ರದ ಗುಣಮಟ್ಟ ಹೇಗೆ ಉತ್ತಮವಾಗತ್ತೆ ಅಂತೆಲ್ಲ ಒಂದು ದಿನ ನೀನು ವಿವರಿಸಿದೆ. ಆಗಲೆ ನನಗೆ ಗೊತ್ತಾಗಿದ್ದು ನೀನು ಆವತ್ತು ದೇವಸ್ಥಾನ ಮತ್ತು ಬಯಲನ್ನು ಯಾಕೆ ಕೇಳಿದೆ ಎಂದು. ಎಷ್ಟೋ ಸಲ ಹಾಗೆ ಆಗುತ್ತೆ ಕಣೊ. ನಮಗೆ ಎದುರುಗಡೆಯವರ ಮಾತಿನ ಅರ್ಥ ಗೊತ್ತಾಗದೆ, ಅಪಾರ್ಥ ಮಾಡಿಕೊಂಡು ಬಿಡುತ್ತೇವೆ. ಆಮೇಲೆ ಆಗಬಾರದ್ದೆಲ್ಲ ಆಗುತ್ತೆ. ಇನ್ನೊಬ್ಬರು ಯಾವ ದೃಷ್ಟಿಕೋನದಲ್ಲಿ ಮಾತಾಡುತ್ತಿರಬಹುದು ಎಂದು ನಮಗೆ ಅರ್ಥ ಆಗುವ ಹಾಗಿದ್ರೆ ಎಷ್ಟು ಚೆನ್ನಾಗಿತ್ತು ಅಲ್ವಾ? ನನ್ನ-ನಿನ್ನ ನಡುವಣ ಅದೆಷ್ಟೋ ಜಗಳಕ್ಕೆ ಬ್ರೇಕ್ ಬಿದ್ದಿರುತ್ತಿತ್ತು ಅಲ್ವಾ? ಹೋಗ್ಲಿ ಬಿಡು, ಜಗಳ ಆಡುವುದರಲ್ಲೂ ಒಂಥರ ಮಜವಿದೆ.

ಅಯ್ಯಯ್ಯಪ್ಪ, ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಈಗ ಮೈಯೆಲ್ಲ ಬೆವರುತ್ತೆ. ನನ್ನ-ನಿನ್ನ ಪ್ರೀತಿಗೆ ಭರ್ತಿ ೭ ವರ್ಷ ತುಂಬಿದೆ. “ನಿಮ್ಮೂರು ಸೂಪರ್ ಕಣೆ. ನಿನ್ನಂಥ ಚೆಂದದ ಹುಡುಗಿಯನ್ನು ಹುಟ್ಟುಹಾಕಿದ ಊರು ಅಂತಾ ಸೂಪರ್ ಅಂದಿದ್ದಲ್ಲ! ನಿಮ್ಮ ಮನೆ ಹತ್ರ ಇರೋ ತುಂಗಾನದಿ, ಪಕ್ಕದಲ್ಲಿರೋ ದೇವಸ್ಥಾನ, ನದಿಯಾಚೆಗಿನ ಹಚ್ಚಹಸಿರಿನ ಗದ್ದೆಗಳು, ಬಾವಿಯ ಸಿಹಿ ಸಿಹಿಯಾದ ನೀರು, ನಿಮ್ಮಪ್ಪ ಡಬ್ಬ ಜೋಯ್ಸ, ನಿಮ್ಮೂರಿನ ಮುಗ್ಧ ಮನಸಿನ ಜನಗಳು, ನಿನ್ನಂಥ ಗಯ್ಯಾಳಿ ಹುಡುಗಿಯರು…ಇದ್ನೆಲ್ಲ ಕಂಡು ಸೂಪರ್ ಅಂದಿದ್ದು ಗೊತ್ತಾಯ್ತ?” ಎಂದು ನೀನು ನನ್ನನ್ನು ರೇಗಿಸಿದ್ದು ನೆನಪಿದ್ಯಾ? ಆವತ್ತೆ ಅಲ್ವಾ ನಾನು ನಿನಗೆ ಪ್ರಪೋಸ್ ಮಾಡಿದ್ದು, ನೀನು ನಿನ್ನ ಬದುಕಿನ, ಕನಸುಗಳ ಕುರಿತು ಹೇಳಿಕೊಂಡಿದ್ದು. ಅಬ್ಬ ಅದೊಂತು ನನಗೆ ಯಾವತ್ತು ಮರೆಯಲಾಗದ ಕ್ಷಣ.

ಅಲ್ಲಿಂದ ನಂತರದ್ದೆಲ್ಲ ಒಂಥರಹ ಸಿನಿಮಾವೆ. ಹಾಗೆ ನೋಡಿದ್ರೆ, ನನ್ನ-ನಿನ್ನ ಪ್ರೀತಿಯೇ ನೀನು ಸ್ವತಂತ್ರವಾಗಿ ನಿರ್ದೇಶನ ಮಾಡಿದ ಮೊದಲ ಸಿನಿಮಾ! ನೀನು ನಮ್ಮ ಮನೆಗೆ ಬಂದಿದ್ದು, ನಮ್ಮಪ್ಪ/ನಿಮ್ಮ ಮಾವ ಡಬ್ಬ ಜೋಯ್ಸರ ಜೊತೆ ಮಾತಾಡಿದ್ದು, ಅವರನ್ನ ಒಪ್ಪಿಸಿದ್ದು, ನಾನು ಬೆಂಗಳೂರಿಗೆ ಬಂದಿದ್ದು, ಕೆಲಸ ಹಿಡಿದಿದ್ದು…ಅಷ್ಟಕ್ಕೂ ನಿರ್ದೇಶಕ ನೀನೇ ಕಣೊ.

ಹೌದು ಕಣೋ ನಾನು ಎಲ್ಲದರಲ್ಲೂ ನಿಧಾನ. ಅದ್ಕೆ ಅಲ್ವಾ ನೀನು ನಂಗೆ “ಡಕೋಟ ಎಕ್ಸ್‌ಪ್ರೆಸ್” ಅಂತಾ ಹೆಸರಿಟ್ಟಿದ್ದು. ಡ್ರೆಸ್ ಮಾಡಿಕೊಳ್ಳಲು ಶುರು ಮಾಡಿದ್ರೆ ಮುಕ್ಕಾಲು ಗಂಟೆ, ಸ್ನಾನಕ್ಕೆ ಹೊರಟರೆ ಒಂದೂವರೆ ಗಂಟೆ ಎಂದು ಯಾವಾಗ್ಲೂ ಸಿಡುಕುತ್ತಿಯಾ ಅಲ್ವಾ? ನಿನ್ನ ಹಾಗೆ ೫ ನಿಮಿಷದಲ್ಲಿ ತುಳಸಿ ನೀರು ಪ್ರೋಕ್ಷಣ್ಯ ಮಾಡಿಕೊಂಡ ರೀತಿ ಸ್ನಾನ ಮಾಡೋಕೆ ನನಗೆ ಬರಲ್ಲ. ಇಸ್ತ್ರಿ ಇಲ್ಲದ ಶರ್ಟು, ಬಾಚಣಿಗೆ ಕಾಣದ ಕೂದಲಿನೊಂದಿಗೆ ಗೊರಬನ ರೀತಿ ಬದುಕು ಸಾಧ್ಯವಿಲ್ಲ. ನಿನ್ನ ಸಿಗರೇಟು ಸೇದುವ ಚಟ ಬಿಡಿಸಿದೆ. ಆದ್ರೆ ಡ್ರೆಸ್‌ಸೆನ್ಸ್ ಕಲಿಸುವಲ್ಲಿ ಸೋತು ಹೋಗಿದ್ದೇನೆ. ನೀನು ಫೌಡರು, ಸೆಂಟು ಹಾಕಿದ್ದನ್ನು ನೋಡಲೇ ಇಲ್ಲ. ನಾಯಕಿಗೆ ಇಂಥ ಮೇಕಪ್ ಇರ‍್ಲಿ, ಈ ಸೀರೆ ಚೆಂದ ಅನ್ನುವ ನಿನಗೆ, ನನ್ನ-ನಿನ್ನ ಮೇಕಪ್ಪು, ಡ್ರೆಸ್‌ಗಳ ಕುರಿತು ಕಾಳಜಿಯೇ ಇಲ್ಲ ಹೋಗೊ. ಬರೀ ಮುಖವಾಡದ ಬದುಕು ನಿಂದು. ಐ ಹೇಟ್ ಯೂ ಹಂಡ್ರೆಡ್ ಟೈಮ್ಸ್….

ಎಲ್ಲಿದ್ದ ಬದುಕು, ಎಲ್ಲಿಗೆ ಬಂದು ನಿಂತಿದೆ ಅಲ್ವಾ? ಇನ್ನು ಮದ್ವೆ, ಮಕ್ಕಳು, ಸಂಸಾರ…ಕಲ್ಪಿಸಿಕೊಂಡ್ರೆ ಮೈ ಜುಂ ಅನ್ನುತ್ತೆ. ಆದ್ರೂ ಇವತಲ್ಲ ನಾಳೆ ಮದ್ವೆ ಆಗಲೇ ಬೇಕು. ಪಾತ್ರೆ ತೊಳಿಯುವ ವಿಷಯಕ್ಕೆ, ಬಟ್ಟೆ ಇಸ್ತ್ರಿಗೆ, ಸ್ನಾನಕ್ಕೆ ನಿನ್ನ ಜೊತೆ ದಿನ ಜಗಳ ಆಡಲೇ ಬೇಕು. ಹೋಗ್ಲಿ ಬಿಡು, ನಿನ್ನ ಜೊತೆಗಿನ ಜಗಳ, ಈ ಆಫೀಸಿನಲ್ಲಿ ಮಾಡುವ ಅರ್ಥವಿಲ್ಲದ ಕೆಲಸದಷ್ಟು ಕೆಟ್ಟದ್ದೇನಲ್ಲ! ಅದು ಯಾವುದೋ ಕ್ಲೈಂಟು, ಯಾವುದೋ ಪ್ರಾಜೆಕ್ಟು! ಅದರಿಂದ ಯಾರಿಗೆ ಲಾಭ, ಯಾರಿಗೆ ಉಪಯೋಗ ಅಂತ ದೇವರಾಣೆ ಪ್ರೊಗ್ರಾಮ್ಸ್ ಬರಿಯೋ ನನಗೂ ಗೊತ್ತಿಲ್ಲ. ಅವ್ರು ದುಡ್ಡು ಕೊಡ್ತಾರೆ, ನಾವು ಕೆಲಸ ಮಾಡ್ತಿವಿ ಅಷ್ಟೆ. ಮ್ಯಾನೇಜರ್ ಯಾಕೊ ಕರಿತಿದಾರೆ ಬಾಯ್ ಕಣೋ. ಮತ್ತೆ ಸಿಗ್ತೀನಿ. ನಿನಗೆ ಈವರೆಗೆ ೨೪ ಪತ್ರ ಬರೆದಿರುವೆ. ಇದು ೨೫ನೇ ಪತ್ರ. ಮತ್ತೆ ಮನಸ್ಸಾದಾಗ ಇನ್ನೊಂದು ಪತ್ರ ಬರೆಯುವೆ. ಪೋಸ್ಟ್ ಮಾಡೋಕೆ ಟೈಂ ಇಲ್ಲ. ಸೋ, ಟೈಪ್ ಮಾಡಿದ ಈ ಪತ್ರವನ್ನು ಇಮೇಲ್ ಮೂಲಕವೇ ಕಳುಹಿಸುತ್ತಿರುವೆ. ಕ್ಷಮೆ ಇರಲಿ. ಟೇಕ್ ಕೇರ್, ಟಾಟಾ….

ಇಂತಿ ನಿನ್ನ ಡಕೋಟ ಎಕ್ಸ್‌ಪ್ರೆಸ್.

Read Full Post »

ಆಗ ಪ್ರಥಮ ಬಿಎಸ್ಸಿಯಲ್ಲಿದ್ದೆ. ಉಡುಪಿಯ ಜಿಲ್ಲಾ  ಗ್ರಂಥಾಲಯದಿಂದ ಹೊತ್ತು ತಂದ ಆ ಪುಸ್ತಕದ ಹೆಸರು  “ಹುಚ್ಚು  ಮನಸ್ಸಿನ ಹತ್ತು ಮುಖಗಳು”. ಅಲ್ಲಿಯವರೆಗೂ ಸಾಹಿತ್ಯದ ಘಮಟೂ ಇರಲಿಲ್ಲ. ಬರವಣಿಗೆ ಅಂದರೆ ಏನೆಂದು ಗೊತ್ತಿರಲಿಲ್ಲ.  ಪತ್ರಿಕೆ ಓದುತ್ತಿದ್ದೆ. ಕಥೆಗಳ ಗೀಳಿತ್ತು. ಕಾದಂಬರಿ, ಗಂಭೀರ ಪುಸ್ತಕ ಓದುತ್ತಿರಲಿಲ್ಲ.  ಹೈಸ್ಕೂಲ್-ಕಾಲೇಜುಗಳಲ್ಲಿ  ಸಾಕಷ್ಟು  ಭಾಷಣ ಬಿಗಿದು, ಅನೇಕ ಬಹುಮಾನ ಗೆದ್ದಿದ್ದು  ನಿಜ. ಕೆಲವೆಡೆ “ಬಹುನಾಮ” ಲಭಿಸಿದ್ದು  ಸುಳ್ಳಲ್ಲ! ಹಾಗಂತ ಯಾವುದೂ ಅಧ್ಯಯನ ಮಾಡಿ ಸಿದ್ಧಪಡಿಸಿದ ಭಾಷಣಗಳಲ್ಲ. ಬಾಯಿಗೆ ಬಂದಂತೆ ಬುರುಡೆ ಬಿಟ್ಟಿದ್ದು! ಹಾಳೂರಲ್ಲಿ  ಉಳಿದವನೇ ಜಾಣ ಎಂಬಂತೆ, ನನಗೆ ಬಹುಮಾನ ಕೊಡುವುದು ಅನೇಕ ತೀರ್ಪುಗಾರರಿಗೆ ಅನಿವಾರ್ಯವಾಗಿತ್ತು ಅನ್ನಿಸುತ್ತದೆ.

ಶಿವರಾಮ ಕಾರಂತರ ‘ಹುಚ್ಚು  ಮನಸಿನ..’ ಕೃತಿ ಬದುಕಿಗೆ ಹೊಸ ಆಯಾಮ ನೀಡಿತು. ಅವರ ಬದುಕಿನ ಅನುಭವಗಳು ನನ್ನಲ್ಲಿ  ಒಂದು ರೀತಿ ಹೊಟ್ಟೆಕಿಚ್ಚು  ಹುಟ್ಟಿಸಿತು. ಅಬ್ಬ  ಪುಣ್ಯಾತ್ಮ ರು! ಬದುಕಿದ ೯೫ ವರ್ಷಗಳಲ್ಲಿ  ಅದೆಷ್ಟು  ಕ್ಷೇತ್ರಗಳಲ್ಲಿ   ಕೈಯಾಡಿಸಿದರು ಅಂದುಕೊಂಡೆ. ಯಕ್ಷಗಾನದಿಂದ ವಿಜ್ಞಾನ ಪ್ರಪಂಚದವರೆಗೆ, ಸಿನಿಮಾದಿಂದ ರಾಜಕೀಯದವರೆಗೆ…ಬದುಕಿದರೆ ಕಾರಂತರಂತೆ ಬದುಕಬೇಕೆಂಬ  ಹುಚ್ಚುತನಕ್ಕೆ ಬಿದ್ದು  ಬರೆಯಲು ಶುರುವಿಟ್ಟೆ!  ಅವರ ಬದುಕಿನ ಶೇ.೧೦ರಷ್ಟು  ಅನುಭವ ಪಡೆಯುವುದೂ ಕಷ್ಟದಾಯಕ ಎಂದು ಈಗೀಗ ಅರ್ಥವಾಗುತ್ತಿದೆ. ಆದ್ರೂ ಬರವಣಿಗೆ ನನ್ನ  ಪಾಲಿಗೆ ಒಂದಷ್ಟು  ವಿಶಿಷ್ಠ  ಅನುಭವ ನೀಡಿದೆ.

ಅಂದು ಬರೆದ ಬರಹಗಳಿಂದಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಲಭಿಸಿತು. ಮಾತುಗಾರಿಕೆ ಚೆನ್ನಾಗಿ ಇದೆ ಎಂದು ಭಾವಿಸಿ ದೃಶ್ಯ ಮಾಧ್ಯಮದ ಕನಸು ಕಟ್ಟಿಕೊಂಡು ಬಂದೆ. ಅದಕ್ಕಾಗಿ ಬರೆದ ಪರೀಕ್ಷೆಗಳು, ಎದುರಿಸಿದ ಇಂಟರ್‌ವ್ಯೂಗಳು ಸಾಕಷ್ಟು.  ವಾಹಿನಿಗಳಲ್ಲಿ  ಅವಕಾಶ ಲಭಿಸಬೇಕಾದರೆ “ತಲೆ ಅಥವಾ…. “ಇರಬೇಕು ಎಂಬುದು ಇತ್ತೀಚಿನ ಗಾದೆ. ಅವೆರೆಡೂ ನನಗೆ ಇಲ್ಲವಾದ್ದರಿಂದ ಆ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಗಲಿಲ್ಲ. ಆ ಕುರಿತು ಇವತ್ತು ಖಂಡಿತ ಒಂಚೂರು ಬೇಸರವಿಲ್ಲ.

ಮುದ್ರಣ ಮಾಧ್ಯಮ ಕೈಬೀಸಿ ಕರೆಯಿತು. ಈಗ ಬರೆಯುವುದೇ ಕಾಯಕವಾಗಿದೆ. ಮಾತು ಮರೆತಂತಾಗಿದೆ. ಹಾಗಂತ ಪತ್ರಿಕೆಗೆ ಬರೆಯುವುದಕ್ಕೂ  ಬ್ಲಾಗ್‌ನಲ್ಲಿ  ಗೀಚುವುದಕ್ಕೂ  ತುಂಬಾ ವ್ಯತ್ಯಾಸವಿದೆ. ಪತ್ರಿಕೆಗಾಗಿ ದಿನ ಬರೆಯುವುದು ರೂಢಿಯಾಗಿದೆ. ಆದಾಗ್ಯೂ ಬ್ಲಾಗ್‌ಗಾಗಿ ವಾರಕ್ಕೊಂದು ಬರಹ ಬರೆಯುವುದು ಕಷ್ಟದ ಕಾಯಕ. ಅದೆಷ್ಟೊ  ಬರಹಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಅದನ್ನು  ಪೂರ್ತಿಗೊಳಿಸಲು ಎಷ್ಟು  ದಿನಗಳಾದರೂ  ಮನಸು ಬರುವುದೇ ಇಲ್ಲ. ಕಥೆ ಬರೆಯುವಾಗ ನನಗೆ ಈ ಸಮಸ್ಯೆ  ಸಹಜ. ಇತ್ತೀಚೆಗಂತೂ ವರ್ಷಕ್ಕೊಂದು ಕಥೆ ಬರೆಯುವುದು ಕಷ್ಟವಾಗಿದೆ. (ಯೋಗರಾಜ್ ಭಟ್ಟರು  ೧.೫- ೨ ವರ್ಷಕ್ಕೊಂದು ಚಿತ್ರ ಮಾಡಿದರೂ, ಗೆಲ್ಲುವಂತ ಚಿತ್ರ ಮಾಡುತ್ತಾರೆ. ಹಾಗೆ ನನ್ನ ಕಥೆಗಳೂ ಕೂಡ ಎಂದು ನನಗೆ ನಾನೇ ಸಮಧಾನ ಹೇಳಿಕೊಳ್ಳಬೇಕಷ್ಟೆ!!!)

ನಿಜ, ಓದು, ಬರೆಯಲು ಇಂಬು ನೀಡುತ್ತದೆ. ಹಾಗಾಗಿ ಕಳೆದ ನಾಲ್ಕಾರು ತಿಂಗಳಿನಿಂದ ಮತ್ತೆ ಓದಲು ಶುರುವಿಟ್ಟಿದ್ದೇನೆ. ಅನುಭವಕ್ಕಾಗಿ ಪತ್ರಿಕೋದ್ಯಮ ಆಯ್ದುಕೊಂಡಿದ್ದು. ನನ್ನ  ನಿರೀಕ್ಷೆ  ಸುಳ್ಳಾಗಲಿಲ್ಲ.  ವೃತ್ತಿ, ನನ್ನ  ಪಾಲಿಗೆ ಸಾಕಷ್ಟು  ಭಿನ್ನ  ಅನುಭವ ನೀಡಿದೆ. ಅನಾಥಾಲಯದಿಂದ ಪಂಚತಾರ ಹೋಟೆಲ್‌ಗಳವರೆಗೂ ಕರೆದುಕೊಂಡು ಹೋಗಿದೆ. ಅನೇಕ ಬಗೆಯ ವ್ಯಕ್ತಿಗಳ ಭೇಟಿ ಅವಕಾಶ ನೀಡಿದೆ. ಅನೇಕ ಸ್ನೇಹಿತರನ್ನು  ದೊರೆಕಿಸಿಕೊಟ್ಟಿದೆ. ಆಶ್ರಮದಿಂದ ಸಿನಿಮಾವರೆಗಿನ ಪ್ರಪಂಚದಲ್ಲಿ  ಬದುಕುತ್ತಿರುವ ಅನೇಕ ಗೆಳೆಯರನ್ನು  ಸಂಪಾದಿಸಿಕೊಟ್ಟಿದೆ. ಅಷ್ಟರಮಟ್ಟಿಗೆ ನನ್ನ ಕೆಲಸಕ್ಕೆ ಋಣಿ.

ನ್ಯೂನತೆ, ಕೊರತೆಗಳು ಪ್ರತಿಯೊಂದು ಕ್ಷೇತ್ರದಲ್ಲೂ  ಸಹಜ. ಸಮಸ್ಯೆ ಎಂಬುದು ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಗರಿಕನವರೆಗೂ ಇದೆ. ಅದರ ಮೀತಿ, ಅವರ ವ್ಯಾಪ್ತಿಗೆ ಸಮನಾಗಿ ಹರಡಿರುತ್ತದೆಯಷ್ಟೆ. ಹಾಗೆ, ಪತ್ರಿಕೋದ್ಯಮದ ಕುರಿತು ಇವತ್ತು ಎಲ್ಲೆಡೆ ಸಾಕಷ್ಟು  ಚರ್ಚೆಯಾಗುತ್ತಿದೆ. ಆ ಚರ್ಚೆಗಳು ಸಕರಾತ್ಮಕವಾದ ಫಲಿತಾಂಶ ನೀಡಿದರೆ, ಅದು ಖಂಡಿತ ಒಳ್ಳೆ ಬೆಳವಣಿಗೆ. ಹೊರಗಿನವರ ಚರ್ಚೆ, ಕೂಗಾಟದಿಂದ ಉದ್ಯಮದ ಒಳಗೆ  ಏನೂ ಬದಲಾವಣೆ ಸಾಧ್ಯವಿಲ್ಲ  ಎಂಬುದನ್ನು ರಾಡಿಯಾ-ಪತ್ರಿಕೋದ್ಯಮ ಹಗರಣ ಸಾಬೀತುಪಡಿಸಿದೆ. ಹಾಗಾಗಿಯೇ ಕೆಲವರು ಮುಸುಕು ಧರಿಸಿಕೊಂಡು ಪತ್ರಿಕೋದ್ಯಮದ, ಪತ್ರಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ ಅನ್ನಿಸುತ್ತದೆ! ಅಂಥ ಅನಾಮಧೇಯ ದಾಳಿ ಎಷ್ಟೇ ನಿಖರವಾಗಿದ್ದರೂ, ಅದಕ್ಕೆ ಬೆಲೆಯಿಲ್ಲ  ಎಂಬುದು ನನ್ನ ವೈಯಕ್ತಿಕ ನಿಲುವು. ಸಮಾಜದ ಕುರಿತು ಅಷ್ಟೆಲ್ಲ  ಮುತುವರ್ಜಿ, ಕಾಳಜಿ ಇರುವವರು ಮುಸುಕು ಬಿಚ್ಚಿಟ್ಟು  ಯಾಕೆ ದಾಳಿ ಮಾಡಬಾರದು? ಮುಂದೊಂದು ದಿನ ಇವರು ಬೈದ ವ್ಯಕ್ತಿಗಳ ಜೊತೆಗೆ ಕೆಲಸ ಮಾಡಬೇಕಾದ ಪ್ರಮೇಯ ಬರಬಹುದೆಂಬ ಅಳಕು ಇರಬಹುದಾ? ಹೋಗ್ಲಿ  ಬಿಡಿ. ಆ ಚರ್ಚೆಯಿಂದ ನಮಗೇನು ಪ್ರಯೋಜನವಿಲ್ಲ. ವರ್ಲ್ಡ್‌ಪ್ರೆಸ್, ಬ್ಲಾಗ್‌ಸ್ಪಾಟ್‌ಗಳು ಅಂತರ್ಜಾಲದಲ್ಲಿ  ಪುಗ್ಸಟ್ಟೆ  ಜಾಗ ನೀಡಿವೆ. ಹಾಗಾಗಿ ನನ್ನಂತೆ ಏನು ಬೇಕಾದರೂ ಗೀಚಿಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಹಾಗಾಗಿ ಅನಾಮಿಕರ ಬ್ಲಾಗ್‌ಗಳನ್ನು ತೆಗೆಳುವುದು  ಸರಿಯಲ್ಲ. ನಮಗೆ ಸರಿ ಕಾಣದಿದ್ದರೆ  ಆ ಕಡೆ ತಲೆ ಹಾಕುವುದು ಬೇಡ ಎಂಬ ನಿರ್ಧಾರ ಮಾಡಿದ್ದೇನೆ.

ವ್ಯವಸ್ಥೆ  ಅಂತರಾಳ ಅರ್ಥವಾದಂತೆ ಬರವಣಿಗೆಗೆ ಕಡಿವಾಣ ಬೀಳುತ್ತದೆ. ಯಾರ ಕುರಿತು, ಯಾವುದರ ಕುರಿತು ಬರೆದರೆ ಏನಾಗಬಹುದು ಎಂದು ಮನಸ್ಸು  ಯೋಚನೆ ಮಾಡುತ್ತದೆ. ಆಗೊಂದು ಟ್ಯಾಬ್ಲಾಯ್ಡ್‌ನಲ್ಲಿ  ಕೆಲಸ ಮಾಡುತ್ತಿದ್ದೆ. ವರದಿಗಾರರೊಬ್ಬರು ಪೋಲೀಸ್ ಇನ್ಸ್‌ಪೆಕ್ಟರ್ ಒಬ್ಬರ ಕುರಿತು ಸುದ್ದಿ  ತಂದಿದ್ದರು. ಅದನ್ನು ನೋಡಿದ ಸಂಪಾದಕರು ‘ಲೋ ಬೋ..ಮಗನೆ, ಇವನು ನನ್ನ  ಫ್ರೆಂಡು ಅನ್ನುವುದು ಗೊತ್ತಿಲ್ಲವ ನಿನಗೆ…ಲೋ…’ ಎನ್ನುತ್ತ ವರದಿಯನ್ನು ಕಸದ ಬುಟ್ಟಿಗೆ ಬಿಸಾಡಿದರು. ಆವತ್ತೆ ಈ ಉದ್ಯಮದ ಉದ್ದಗಲ ಅರ್ಥವಾಗಿ ಬಿಟ್ಟಿತ್ತು. ಇಲ್ಲಿನ ಕುರಿತು ಇಟ್ಟುಕೊಂಡ  ಕನಸು ಕಲ್ಪನೆಗಳು ಸತ್ತು ಹೋಗಿತ್ತು. ಇವಿಷ್ಟರ  ಹೊರತಾಗಿ ಮತ್ತೇನು ಹೇಳಲಾರೆ. ಇಂದಿನ ಉದ್ಯಮದ ಸ್ಥಿತಿಯ ಕುರಿತು ನನ್ನ ವಯೋಮಾನದ ಅನೇಕ ಗೆಳೆಯರಲ್ಲಿ  ಬೇಸರವಿದೆ. ಅದು ನಾವೆಲ್ಲ  ಒಟ್ಟಾಗಿ ಸೇರಿದಾಗ ಮಾತನಾಡಿಕೊಳ್ಳಲು ಸೀಮಿತ. ನೀವುಗಳು, ನಿಮ್ಮ ಕಚೇರಿಯಲ್ಲಿ, ವ್ಯವಸ್ಥೆಯಲ್ಲಿ  ನಡೆಯುವ ಘಟನೆಗಳನ್ನು ಇತರರೆದುರು ಹೇಳಿಕೊಳ್ಳಲು ಹೇಗೆ ಇಷ್ಟಪಡುವುದಿಲ್ಲವೊ, ಹಾಗೆ ನಾವುಗಳು ಕೂಡ. ಇದನ್ನು ವೃತ್ತಿ ಗೌರವ ಎಂದು ಭಾವಿಸಿಕೊಳ್ಳಿ.

ಇಷ್ಟಕ್ಕೂ ಮೀರಿ ಅನ್ನಿಸಿದ್ದನ್ನು ಸಾಕಷ್ಟು  ಸಲ ನೇರವಾಗಿ ಹೇಳಿದ್ದೇನೆ ಮತ್ತು ಹೇಳುತ್ತೇನೆ. ಯಾಕಂದ್ರೆ ನನಗೆ ಬರವಣಿಗೆ ಕನಸು ಕಟ್ಟಿಕೊಟ್ಟಿದ್ದೆ ಶಿವರಾಮ ಕಾರಂತರು. ವಾಸ್ತವಕ್ಕೆ ಅವರೆಷ್ಟು  ಹತ್ತಿರವಾಗಿದ್ದರೂ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ನನ್ನ ಬ್ಲಾಗ್‌ನಿಂದ ಕೆಲವರ ಮನಸ್ಸಿಗೆ ನೋವಾಗಿರಬಹುದು. ಅವೆಲ್ಲವೂ ವಾಸ್ತವವೇ ಆಗಿರುವುದರಿಂದ ಆ ಕುರಿತು ರಾಜಿ ಪ್ರಶ್ನೆಯಿಲ್ಲ. ನೀನು ಬರೆದದ್ದು ತಪ್ಪು  ಎಂದು ಸೂಕ್ತ ದಾಖಲೆಗಳೊಂದಿಗೆ ಮನವರಿಕೆ ಮಾಡಿಕೊಟ್ಟರೆ, ಖಂಡಿತ ನಾನು ಅದನ್ನು ತಿದ್ದಿಕೊಳ್ಳುತ್ತೇನೆ.

ಬರವಣಿಗೆಯೆಂಬುದು, ಸಂತೆ ಮಾರುಕಟ್ಟೆಯ ಮೀನಿನಂಗಡಿ ಇದ್ದಂತೆ. ಮಾರುಕಟ್ಟೆ  ಒಳ ಹೊಕ್ಕಂತೆ ಒಳ್ಳೊಳ್ಳೆ ಮೀನುಗಳು ಕಾಣಿಸುತ್ತವೆ. ಕೆಲವರಿಗೆ ಬಂಗಡೆ ಇಷ್ಟವಾದರೆ, ಮತ್ತೆ ಹಲವರಿಗೆ ಸಿಗಡಿ ಮೀನು ರುಚಿಯಾಗಬಹುದು. ಹೀಗಾಗಿ ನನ್ನ ಪಾಲಿಗೆ ಯಾವತ್ತೂ ನಾನು ಚೆನ್ನಾಗಿ ಬರೆಯುತ್ತೇನೆ ಎಂಬ ಅಹಂಕಾರ, ಭ್ರಮೆಯಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಬರವಣಿಗೆ ಎಂಬುದು ವಿಶಾಲ ಜಗತ್ತಿನ ಪುಟ್ಟದ್ದೊಂದು ಭಾಗ. ಅಲ್ಲಿಂದ ಹೊರ ಬಂದರೆ ಅದ್ಭುತವಾಗಿ ಕ್ರಿಕೆಟ್ ಆಡುವ ಸಚಿನ್ ಕಾಣುತ್ತಾನೆ, ನಟನೆ ಮಾಡುವ ಅಮಿರ್ ಖಾನ್ ಕಣ್ಣು ಕುಕ್ಕಿಸುತ್ತಾನೆ. ಕೈಕಾಲುಗಳಿಲ್ಲದೆ  ಸಾಧನೆ ಮಾಡಿದ ಶ್ರೀಧರ್ ರಾಮಾನುಜಂರಂಥ ಅನೇಕ ಮಂದಿ ಕಣ್ಣೆದುರು ಬರುತ್ತಾರೆ. ಆಗೆಲ್ಲ  ನಾನು ‘ಕೊಳಗದೊಳಗಿನ ಕಪ್ಪೆ’ ಅನ್ನಿಸಿ ಬಿಡುತ್ತದೆ. ಸಾಸಬೇಕಾಗಿದ್ದು  ಸಾಕಷ್ಟಿದೆ. ಕಟ್ಟಿಕೊಂಡ ಕನಸುಗಳು ಬತ್ತಿಲ್ಲ ಮತ್ತು ಬತ್ತುವುದಿಲ್ಲ. ಬೇರೆಯವರ ಪಾಲಿಗೆ ನಾನು ಹೇಗೆ ಅನ್ನಿಸಿದ್ದೇನೊ ಗೊತ್ತಿಲ್ಲ. ಅದನ್ನು ಕೇಳಿ ತಿಳಿದುಕೊಳ್ಳುವ ಹಂಬಲವೂ ಇಲ್ಲ…

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು  ಕೇಳಿದಿರಿ ಅಲ್ಲಿ  ನೀವು
ಇಂದು ನಾ ಹಾಡಿದರು ಅಂದಿನಂತೆ ಕುಳಿತು ಕೇಳುವಿರಿ
ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೆ ಬಿರುದು ಸಮ್ಮಾನ….

ಹೌದು, ನನ್ನ ಹಾಡಿಗೆ ಭರ್ತಿ ಮೂರು ತುಂಬಿದೆ. ಹಾಗೆ ನೋಡಿದರೆ, ನಾನು ಹಾಡಲು ಶುರುವಿಟ್ಟಿದ್ದು  ನನಗಾಗಿ, ನನ್ನ  ಬೇಸರ ಕಳೆದುಕೊಳ್ಳಲಿಕ್ಕಾಗಿ, ಅನ್ನಿಸಿದ್ದನ್ನು ನನ್ನೆದುರಿಗೆ ನಾನೇ ಹೇಳಿಕೊಳ್ಳಲಿಕ್ಕಾಗಿ. ಆ ಕಾರಣಕ್ಕಾಗಿಯೇ ನನಗೆ ಯಾವತ್ತೂ  ಬರವಣಿಗೆ ಎಂಬುದು ಒಂದು ರೀತಿಯ ಅಕ್ಷರ ವಿಹಾರ. ಅಂಥದ್ದೊಂದು ವಿಹಾರದಲ್ಲಿ  ಭಾಗಿಯಾಗಿ ಹರಸಿದ, ಪ್ರೋತ್ಸಾಹಿಸಿದ, ಕಾಲೇಳೆದ, ಕಿವಿ ಹಿಂಡಿದ ಎಲ್ಲ  ಬ್ಲಾಗ್ ಓದುಗರಿಗೂ ಧನ್ಯವಾದಗಳು…

Read Full Post »

ನನ್ನ ಸಿಟ್ಟಿಗೆ ಅನಾಮತ್ ಆರು ಹೆಣಗಳು ಉರುಳಿದ್ದವು! ಯಾವತ್ತೊ ಆ ಕೊಲೆಗಳು ನಡೆಯಬೇಕಿತ್ತು. ಪಾಪ ಬಡ ಜೀವ ಬದುಕಿಕೊಳ್ಳಲಿ ಅಂತಾ ಬಿಟ್ಟಿದ್ದೆ. ಅದೇ ನಾನು ಮಾಡಿದ ದೊಡ್ಡ  ತಪ್ಪು  ನೋಡಿ. ಅದಕ್ಕೆ ಪ್ರಾಯಶ್ಚಿತ ಎಂಬಂತೆ ಭಕ್ತಿಗೀತೆ, ಭಾವಗೀತೆ, ಪಾಪ್ ಗೀತೆ, ಪಾಪಿ ಗೀತೆ…ಇತ್ಯಾದಿಗಳನ್ನೆಲ ಕಿವಿಗೆ ಕೇಳಿಸುತ್ತಿದ್ದ  ನನ್ನ  ಅಮೂಲ್ಯವಾದ ಸ್ಪೀಕರ್ ಬಲಿ ಕೊಡಬೇಕಾಯಿತು.

ಸಿಸ್ಟಮ್‌ನಲ್ಲಿ  ಹಾಡು ಕೇಳುತ್ತಾ, ಏನೋ ಬರೆಯುತ್ತಾ ಕುಳಿತಿದ್ದೆ. ತಕ್ಷಣ ಸ್ಪೀಕರ್ ಆಫ್ ಆಯಿತು. ಅರೆ ಹೊಸ ಸ್ಪೀಕರ್, ಇದಕ್ಕೆ ಏನು ರೋಗ ಬಂತಪ್ಪ   ಅಂತಾ ನೋಡಿದ್ರೆ… ಸ್ಪೀಕರ್ ಒಳಗೆ ೨ ಜಿರಲೆಗಳು ವಿಜಯೋತ್ಸವ ಆಚರಿಸುತ್ತಿದ್ದವು. ಮೈಯೆಲ್ಲ  ಉರಿದು ಹೋಯಿತು. ಪಾಪ ಬದುಕಿಕೊಳ್ಳಲಿ ಅಂತಾ ಬಿಟ್ಟರೆ ಈ ರೀತಿ ಮಾಡೋದಾ ಎನ್ನುತ್ತಾ ಸ್ಪೀಕರ್ ಬಿಚ್ಚಲು ಹೋದ್ರೆ…ಹೂಂ, ಏನು ಮಾಡಿದ್ರು ಆ ಸ್ಪೀಕರ್‌ನ ಓಪನ್ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿ  ಜಿರಲೆಗಳು ನುಸುಳಲಿಕ್ಕೆ ಜಾಗವೇ ಇಲ್ಲ. ಅದ್ಹೇಗೆ ಒಳಹೊಕ್ಕು ಸ್ಪೀಕರ್ ವೈರ್‌ನ್ನು ಹರಿದು ತಿಂದವು ಅನ್ನುವುದೇ ಅರ್ಥ ಆಗ್ಲಿಲ್ಲ. ಹೋಗ್ಲಿ  ಕರೆಂಟ್ ಹೊಡೆದಾದ್ರು ಸಾಯಬಾರದಿತ್ತಾ?! ವೈರ್ ತಿಂದು ನಗು ಬಿರುತ್ತಿವೆ ಹುಚ್ಚು ಮುಂಡೆವು. ಮೈ ಉರಿಯದೇ ಇರತ್ತಾ ಹೇಳಿ?!

ಟೆಸ್ಟರ್, ಸ್ಕ್ರೂ ಡ್ರೈವರ್ ಸೆಟ್ ತರಬೇಕು ಅಂತಾ ತುಂಬಾ ದಿನದಿಂದ ಅಂದುಕೊಳ್ಳುತ್ತಿದ್ದೆ. ಆದ್ರೆ ಅವುಗಳಿಗೆ ಇರೋದು ಚೂರುಪಾರು ಕೆಲಸ. ಹಾಗಾಗಿ ಮೇಲುಗಡೆ ಓನರ್ ಮನೆಯಿಂದ ಸ್ಕ್ರೂಡ್ರೈವರ್ ತಂದು ಕೆಲಸ ಮುಗಿಸುತ್ತಿದ್ದೆ! ಇವತ್ತು ಹೇಗಾದ್ರು ಮಾಡಿ ಜಿರಲೆ ಹೊರ ತೆಗೆದು ಕೊಲೆ ಮಾಡ್ಲೆ  ಬೇಕು ಅಂತಾ ನಿರ್ಧಾರ ಮಾಡಿ ಆಗಿತ್ತು. ಹಾಗಾಗಿ ಅಂಗಡಿ ಹೋಗಿ ಸ್ಕ್ರೂ  ಡ್ರೈವರ್ ಸೆಟ್ ತಂದೆ.

ಎಷ್ಟು  ಕಸರತ್ತು ಮಾಡಿದ್ರು ಸ್ಪೀಕರ್ ಓಪನ್ ಆಗ್ಲಿಲ್ಲ. ಮೈ ಉರಿ ಇಳಿಯಲಿಲ್ಲ. ತಣ್ಣೀರು ಸ್ನಾನ ಮಾಡಿದ್ರೆ ಇಳಿಯುತ್ತಿತ್ತೇನೊ, ಆದ್ರೆ ಬೆಳಿಗ್ಗೆಯೆ ಬಿಸಿ ನೀರು ಸ್ನಾನ ಮಾಡಿ ಆಗಿತ್ತು. ದಿನಕ್ಕೊಂದು ಸ್ನಾನ ಮಾಡೋದೆ ಕಷ್ಟದಲ್ಲಿ. ಇನ್ನು  ೨ನೇ ಸ್ನಾನ? ಛೇ, ಎಲ್ಲಾದ್ರೂ ಉಂಟೆ!

ಕ್ರಿಮಿನಲ್ ಐಡಿಯಾ ಆಲೋಚಿಸುತ್ತಿರುವಾಗ ನಮ್ಮ ಓನರ್ ಎಂಟ್ರಿ ಆಯ್ತು. ಹೀಗೆಲ್ಲ  ಆಯ್ತು  ಅಂತಾ ವಿವರಿಸುವಾಗ ಅವರು ರೂಂನಲ್ಲಿ   ಆಶ್ರಯ ಪಡೆದಿರುವ ಜಿರಲೆಗಳ ಸಂಹಾರ ಮಾಡುವ ಐಡಿಯಾ ಕೊಟ್ಟರು. ನಮ್ಮ  ಪಕ್ಕದ ಮನೆಯಲ್ಲೂ  ಜಿರಲೆ ಕಾಟ ಇತ್ತಂತೆ. ಲಕ್ಷ್ಮಣ ರೇಖೆ ಪ್ರಭಾವದಿಂದ ಎಲ್ಲಾ  ಮಾಯವಂತೆ. ಅಷ್ಟೊತ್ತಿಗೆ ನಂಗೆ ಮಾರ್ಟಿನ್ ಜಾಹೀರಾತು ನೆನಪಾಯಿತು. ವಿಲ ವಿಲ ಒದ್ದಾಡುವ ಜಿರಲೆ ಕಣ್ಣು  ಮುಂದೆ ಬಂತು. ನನ್ನ ಸ್ಪೀಕರ್ ತಿಂದ ಜಿರಲೆ ಬಡ್ಡಿ  ಮಗನನ್ನು ಹಾಗೆ ಒದ್ದಾಡಿಸಿ ಸಾಯಿಸಬೇಕು, ಅದನ್ನು ಬೇರೆ ಜಿರಲೆಗಳು ನೋಡಿ ಭಯ ಪಟ್ಟು  ಕಾಲು ಕೀಳಬೇಕು ಅನ್ನುವ ಯೋಚನೆ ಬಂತು. ಮತ್ತೆ ಅಂಗಡಿ ಕಡೆ ಓಡಿದೆ.

ಅವನೊಬ್ಬ ಎಡವಟ್ಟು  ಸೇಟು. ಅವನ ಕೆಲ ಉಚ್ಚಾರಣೆಗಳು ಬಹಳ ಮಜ ಇರತ್ತೆ. ಈಸ್ಪ್ರೆ  ಬೇಕಾ ಅಂದ? ಹೂಂ ಜಿರಲೆ ಸಾಯಿಸೊ ಈಸ್ಪ್ರೆನೇ ಕೊಡಪ್ಪ  ಅಂದೆ. ಆಮೇಲೆ ಶುರುವಾಯಿತು ಆಪರೇಷನ್ ಜಿರಲೆ ಕಂ ರೂಂ ಕ್ಲೀನಿಂಗ್. ಇಡೀ ರೂಂಗೂ ಒಂದ್ಸಲ ಹಿಡಿ(ಪೊರಕೆ) ಮುಟ್ಟಿಸಬೇಕು ಅಂದುಕೊಳ್ಳುತ್ತಾ ೭-೮ತಿಂಗಳೇ ಕಳೆದಿತ್ತು. ಜಿರಲೆ ಸಾಯಿಸುವ ನೆವದಲ್ಲಿ  ರೂಂ ಕ್ಲೀನ್ ಮಾಡಿದ್ದು  ನಂಗೆ ಗೊತ್ತೆ ಆಗಲಿಲ್ಲ! ಸ್ಪ್ರೆ  ಮಾಡಿದ ತಕ್ಷಣ ಜಿರಲೆ ಸಾಯದೆ ಇರೋದನ್ನ  ಕಂಡು ಸ್ಪ್ರೆ  ಮೇಲೆ ಸ್ವಲ್ಪ  ಅನುಮಾನ. ಜಿರಲೆ ಕೊಲ್ಲುವುದು ನಂಗೆ ದೊಡ್ಡ  ಕೆಲಸ ಅಲ್ಲ. ಆದ್ರೆ ಕೊಂದ ಜಿರಲೆಯನ್ನು ರೂಂನಿಂದ ಹೊರಗೆ ಹಾಕುವುದು ನನ್ನ ಕೈಯಲ್ಲಿ  ಆಗದ ಕೆಲಸ. ಹಾಗಾಗಿಯೇ ಎಷ್ಟೋ  ದಿನ ಪಾತ್ರೆ ತೊಳೆಯುವಾಗ ಜಿರಲೆ ಕಂಡ್ರು ಸುಮ್ಮನೆ ಬಿಟ್ಟಿದ್ದು. ಪಾಪ ಬಡ ಜೀವ ಅನ್ನೊ  ಮೃದು ಭಾವ ತಳೆದಿದ್ದು!

ಸ್ಪ್ರೆ ಹಾಕಿದ ತಕ್ಷಣ ಜಿರಲೆ ಸಾಯಲಿಲ್ಲ.  ಒಂದೆರಡು ಜಿರಲೆಯನ್ನು ಹಿಡಿಯಿಂದ ಬಡಿದು ಸಾಯಿಸಿದೆ. ಕ್ರಮೇಣ ಎಲ್ಲೆಲ್ಲೊ  ಇದ್ದ  ಜಿರಲೆಗಳು ನಿಧಾನವಾಗಿ ಒದ್ದಾಡುತ್ತಾ  ಮುಖ್ಯ ವೇದಿಕೆ ಬಂದವು. ಆಮೇಲೆ ಸ್ಪ್ರೆ ಮೇಲೆ ನಂಬಿಕೆ ಹುಟ್ಟಿದ್ದು. ಸ್ಪ್ರೆ  ಮಾಡಿದ ಸುಮಾರು ಅರ್ಧ ಗಂಟೆವರೆಗೂ ಜಿರಲೆಗಳು ಒದ್ದಾಡುತ್ತವೆ. ನಂತರ ನಿಧಾನ ಸಾಯುತ್ತವೆ(ನಿಮ್ಮ ಮಾಹಿತಿಗೆ!).
ಮುಖ್ಯ ಅಪರಾಯನ್ನು ಕೊಲ್ಲೋಕ್ಕೆ ಮರೆತು ಹೋಗಿತ್ತು. ಸ್ಪೀಕರ್ ಒಳಗೆ ನಲಿಯುತ್ತಿದ್ದ ಜಿರಲೆಗಳಿಗೂ ಮಾರ್ಟಿನ್ ಅಮೃತ ಸಿಂಚನವಾಯಿತು. ಆದ್ರೆ ಅವು ಸತ್ತವೊ, ಇಲ್ಲವೊ ಗೊತ್ತಾಗಲಿಲ್ಲ. ಅಂಗಡಿಯವನಿಗೆ ಕೊಟ್ಟು  ಸ್ಪೀಕರ್ ಬಿಚ್ಚಿಸಿದ ಮೇಲೆ ಫಲಿತಾಂಶ ತಿಳಿಯುತ್ತೆ. ಸದ್ದು  ಕೇಳಿಸದ ಕಾರಣ ಆ ಜಿರಲೆಗಳು ಸತ್ತಿವೆ ಅಂದುಕೊಂಡಿದ್ದೇನೆ.

ಸಿಪಿಯು ಒಳಗೂ ಜಿರಲೆ ಹೊಕ್ಕರೆ ಎಂಬ ಭಯದಿಂದ, ಅದನ್ನು ಬಿಚ್ಚಿ ಒಳಗಿನ ಧೂಳನ್ನೆಲ್ಲ  ತೆಗೆದಿರುವೆ. ರೂಂನಲ್ಲಿನ ಎಲ್ಲಾ  ಜಿರಲೆಗಳು ನಾಶವಾಗಿವೆ. ಮತ್ತೆ ಪ್ರವೇಶಿಸಬಾರದೆಂಬ ಕಾರಣಕ್ಕೆ ಪ್ರಮುಖ ದ್ವಾರಗಳಲ್ಲಿ  ಲಕ್ಷ್ಮಣ ರೇಖೆ ಎಳೆದಿದ್ದೇನೆ. ಇಷ್ಟೆಲ್ಲ  ಮುಗಿಯುವಾಗ ಗಂಟೆ ೧ದಾಟಿತ್ತು. ಅಡುಗೆ ಮಾಡಿ ಆಫೀಸ್‌ಗೆ ಹೋಗಬೇಕು ಎಂದು ನೆನಪಾಯಿತು. ಎಲ್ಲ  ಸಟಪಟನೆ ಜೋಡಿಸಿ ಕುಕ್ಕರ್ ಕೂಗಿಸಿ ಊಟಕ್ಕೆ ರೆಡಿಯಾಗುವಾಗ ಮತ್ತೆರಡು ಜಿರಲೆಗಳು ವಿಲವಿಲ ಒದ್ದಾಡುತ್ತಿದ್ದವು. ಮಾನಿಟರ್ ಒಳಗೂ ಸ್ಪ್ರೆ  ಮಾಡಿದ್ದೆ. ಅಲ್ಲಿನ ಜಿರಲೆಗಳು ಹೊರಬಂತೊ ಏನೋ ಗೊತ್ತಿಲ್ಲ. ಆದ್ರೂ ಸಿಕ್ಕ  ಸಣ್ಣ  ಜಾಗದಲ್ಲೇ  ತೂರಿಕೊಳ್ಳುವ ವಿಷ್ಯದಲ್ಲಿ  ಜಿರಲೆಗಳು ಮನುಷ್ಯರಿಗಿಂತ ಜೋರು!

ಜಿರಲೆ ನೆವದಿಂದ ರೂಂ ಕ್ಲೀನ್ ಆಗಿದೆ. ಇಲ್ಲ  ಅಂದ್ರೆ, ಇನ್ನೂ  ಆರು ತಿಂಗಳು ಬೇಕಿತ್ತು ಕೆಲ ಜಾಗದ ಧೂಳು ಹೋಗಲು! ಟೆಸ್ಟರ್ ಕಂ ಸ್ಕ್ರೂ ಸೆಟ್ ಮನೆಗೆ ಬಂದಿದೆ. ಸಿಪಿಯು ಕ್ಲೀನ್ ಆಗಿದೆ. ಬಂಗಾರದಂಥ ಸ್ಪೀಕರ್ ಮಾತ್ರ ಹಾಳಾಯಿತು. ತಿಂಡಿ ಆದ ತಕ್ಷಣ ಮತ್ತೆ ಮಲಗುತ್ತಿದ್ದ  ನನ್ನಂಥ ಶುದ್ಧ  ಸೋಮಾರಿಗೊಂದು ಕೆಲಸ ಕೊಟ್ಟು, ದಿನವನ್ನು  ಕ್ರಿಯಾಶೀಲವಾಗಿಸಿದ, ಒಂದು ಬರಹಕ್ಕೆ ಆಹಾರ ಒದಗಿಸಿದ ಜಿರಲೆಗೆ ಹೃತ್ಪೂರ್ವಕ ಧನ್ಯವಾದ ಹೇಳದಿರಲು ಮನಸ್ಸು ಒಪ್ಪುತ್ತಿಲ್ಲ!

Read Full Post »

ಅದ್ಯಾಕೊ ಗೊತ್ತಿಲ್ಲ  ಅಪ್ಪನ ಕುರಿತು ಅಕ್ಷರ ಬರೆಯುವ ಮಕ್ಕಳು ಕಡಿಮೆ(ಅಮ್ಮನಿಗೆ ಹೋಲಿಸಿದರೆ!). ಅಪ್ಪ  ಕುಡಿಯುತ್ತಿದ್ದನೆಂಬ ಕೋಪವೋ, ಹೊಡೆಯುತ್ತಿದ್ದನೆಂಬ ಸಿಟ್ಟೊ  ಅಥವಾ ಅಮನ್ನನ್ನು ಬೀದಿಗೆ ನಿಲ್ಲಿಸಿದ್ದನೆಂಬ ಜಿಗುಪ್ಸೆಯೋ! ಹೌದು, ಕೆಲವರ ಬದುಕಿನಲ್ಲಿ  ಅಪ್ಪನದ್ದು  ವಿಲ್ಲನ್ ಪಾತ್ರ. ಮಕ್ಕಳ ಕುರಿತಾಗಿ ಅಮ್ಮನಿಗಿರುವಷ್ಟು  ಪ್ರೀತಿ, ಬದ್ದತೆ ಅಪ್ಪನಿಗಿರುವುದಿಲ್ಲ. ಕುಡಿತ, ಜೂಜಾಟ, ಪರ ಸ್ತ್ರೀ  ಸಂಗದ ಮೂಲಕ ಹೆಂಡತಿಯನ್ನು ಬೀದಿಗೆ ತಳ್ಳುವ, ಮಕ್ಕಳ ಭವಿಷ್ಯವನ್ನು ಕೈಯ್ಯಾರೆ ಕೊಲ್ಲುವ ಅದೆಷ್ಟೋ  ಅಪ್ಪಂದಿರನ್ನು  ನಾವೆಲ್ಲ  ಕಣ್ಣಾರೆ ಕಂಡಿರುತ್ತೇವೆ. ಅಂಥ ಸಂದಿಗ್ಧ  ಸಮಯದಲ್ಲಿ  ಸಂಸಾರವನ್ನು ನಿಭಾಯಿಸಿಕೊಂಡು, ಮಕ್ಕಳನ್ನು ಬೆಳೆಸುವ ತಾಯಂದಿರ ಕುರಿತು ಸಹಜವಾಗಿ ಮಕ್ಕಳಿಗೆ ಪ್ರೀತಿ ಮೂಡುತ್ತದೆ. ಹಾಗಂತ ಎಲ್ಲಾ  ಅಪ್ಪಂದಿರು ಅದೇ  ರೀತಿ ಇರುತ್ತಾರೆ ಎನ್ನಲು ಸಾಧ್ಯವಿಲ್ಲ.

ಅಪ್ಪನ ಕುರಿತು ಹೆಣ್ಣು ಮಕ್ಕಳಿಗೆ ಹೆಚ್ಚು  ಪ್ರೀತಿಯಂತೆ. ಅಮ್ಮನ ಮೇಲೆ ಗಂಡು ಮಕ್ಕಳಿಗೆ ಒಲವು ಜಾಸ್ತಿಯಂತೆ. ಮಲೆನಾಡಿನಲ್ಲಿ  ಬೆಳೆದ ನನ್ನ  ಹಾಗೂ ನನ್ನಂಥ ಅದೆಷ್ಟೊ  ಹುಡುಗರಿಗೆ ಅಪ್ಪನ ಮೇಲೆ ಹಿಡಿಯಷ್ಟು  ಪ್ರೀತಿ ಹೆಚ್ಚು! ಈಗೊಂದು ೧೫-೨೦ ವರ್ಷದ ಕೆಳಗೆ ಮಲೆನಾಡು ಎಂಬುದು ಒಂತರಹ ಘನ-ಘೋರ ಕಾಡಿನಂತಿತ್ತು. ನಮ್ಮೂರಿನ  ಮಟ್ಟಿಗೆ ಹೆಂಗಸರದ್ದು  ಸೌಮ್ಯ ಸ್ವಭಾವ. ಮನೆಗೆ ಏನಾದ್ರು ಆಪತ್ತು ಬಂದರೆ ಎದುರಿಸುವ ಚೈತನ್ಯ ಕಡಿಮೆ. ಇನ್ನು, ಗಂಡಸರು ಕೂಡ ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳುವಷ್ಟು  ಕ್ರೂರಿಗಳಲ್ಲ. ಸಂಸಾರದಲ್ಲಿ  ಯಜಮಾನನ ಪೀಠ ಅಲಂಕರಿಸಿದ ಆವತ್ತಿನ ಅಪ್ಪಂದಿರ ಕಥೆ, ಇವತ್ತಿನಷ್ಟು  ಉತ್ತಮವಾಗಿರಲಲ್ಲಿ. ಈಗ ಮನೆಗೊಬ್ಬರು ಮಹಾನಗರಿ ಸೇರಿದ್ದಾರೆ. ಉದ್ಯೋಗ ಗಿಟ್ಟಿಸಿ ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ನಮ್ಮೂರಿನ ಕೇರಿಗಳಲ್ಲಿ  ಬಡತನ ಮಾಯವಾಗುತ್ತಿದೆ. ಸೋಗೆ ಗುಡಿಸಲಿನ ಜಾಗದಲ್ಲಿ  ಹಂಚಿನ ಮನೆಗಳು ತಲೆಯೆತ್ತಿವೆ. ಕಟ್ಟಿಗೆ ಓಲೆಯನ್ನು ಸಿಲಿಂಡರ್ ಗ್ಯಾಸ್ ಆಕ್ರಮಿಸಿದೆ. ಒಟ್ಟಿನಲ್ಲಿ  ಹೇಳೋದಾದರೆ, ಮಲೆನಾಡಿನ ಜೀವನ ಮಟ್ಟ  ಸುಧಾರಿಸಿದೆ.

ಆವತ್ತು ಸೊಗೆ ಮನೆ, ಸೀಮೆ ಎಣ್ಣೆಯ ಚಿಮಣಿ ಬುರುಡೆ, ಮಣ್ಣಿನ ನೆಲ…ಇವೆಲ್ಲ  ಮಾಮೂಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಒಟ್ಟಿಗಿರಲಿ, ಮನೆ ಮಂದಿಗೆ ತುತ್ತು ಊಟ ಒದಗಿಸುವುದೇ ಸವಾಲಿನ ಕೆಲಸವಾಗಿತ್ತು. ಅಡಿಕೆ ಮಂಡಿಗೆ ಹೋದ ಅಪ್ಪ, ಚಿಪ್ಳಿ  ಸುಬ್ರಾಯರು(ಮಂಡಿ ಯಜಮಾನ) ಹಣ ಕೊಡುವವರೆಗೂ ಮನೆಗೆ ಬರುತ್ತಿರಲ್ಲಿಲ್ಲ. ರಾತ್ರಿ ೯-೧೦ ಗಂಟೆಗೆ ಅಪ್ಪ  ಮನೆಗೆ ಮರಳಿದ ನಂತರ ಅಮ್ಮನಿಂದ ಗಂಜಿ ತಯಾರಿಕೆ. ಮುಂಚಿತವಾಗಿ  ಅಡುಗೆ ಮಾಡಲು ಅಕ್ಕಿಯೇ ಇರುತ್ತಿರಲಿಲ್ಲ! ಶಾಲೆ ಸಮಯ ಬಂತೆಂದರೆ, ಅಪ್ಪನ ಸ್ಥಾನದಲ್ಲಿರುವವರ ಬವಣೆ ಹೇಳುವುದು ಬೇಡ. ಸರಕಾರಿ ಶಾಲೆಗೆ ತೆರಬೇಕಾದ ೩೦ರೂ. ಶುಲ್ಕ  ಹೊಂದಿಸುವುದು ನಮ್ಮೂರಿನ ಅನೇಕ ಮಂದಿಗೆ ಸಾಹಸವಾಗಿತ್ತು. ಆವತ್ತಿನ ಆರ್ಥಿಕ ಸ್ಥಿತಿ ಹಾಗಿತ್ತು.

ಇಂಥ ಸ್ಥಿತಿಯಲ್ಲೂ  ಯಾವ ಅಪ್ಪನೂ ಮಕ್ಕಳಿಗೆ ಕೊರತೆ ಮಾಡುತ್ತಿರಲಿಲ್ಲ. ಪಾಠಿ ಚೀಲ, ಪುಸ್ತಕ, ಪೆನ್ನು, ಕೊಡೆ…ಮಕ್ಕಳು ಕೇಳಿದ್ದನ್ನೆಲ್ಲ  ಕೊಡಿಸುತ್ತಿದ್ದರು. ಡಾಕ್ಟರು, ಎಂಜಿನಿಯರ್ ಓದುತ್ತೇನೆಂದ ಮಕ್ಕಳಿಗೆ, ಅದೇ ಕೋರ್ಸ್ ಕೊಡಿಸಿದರು. ಅಪ್ಪ  ಯಾರ ಬಳಿ ಸಾಲ ಮಾಡಿ ಬಂದಿದ್ದಾನೆ ಎಂಬುದು ಅಮ್ಮನಿಗೆ ಮಾತ್ರ ಗೊತ್ತಿರುತ್ತಿತ್ತು. ಅಪ್ಪನ ಕಾಲಲ್ಲಿ  ಯಾವತ್ತೂ ಚಪ್ಪಲಿಯನ್ನು  ಕಾಣಲಿಲ್ಲ. ಆದ್ರೆ ಮಗ ಚಪ್ಪಲಿ ಇಲ್ಲದೆ ಹೋದರೆ ಶಾಲೆಯಲ್ಲಿ  ನಗೆಯಾಡುತ್ತಾರೆ ಎಂಬ ಭಾವ ಅಪ್ಪನನ್ನು  ಕಾಡದೇ ಬಿಟ್ಟಿಲ್ಲ.  ಹೊಸ ಪ್ಯಾಂಟ್ ನಂಗೆ ಮಾತ್ರನಾ, ನಿಂಗೆ ತಂದುಕೊಳ್ಳಲ್ಯಲ ಅಂದ್ರೆ, ‘ಅಯ್ಯೊ  ಅಪ್ಪಿ  ಆನು ಮತ್ತೊಂದು ಮದ್ವೆ  ಆಗಕನಾ? ನೀವೆಲ್ಲ  ಪ್ಯಾಟೆ ಶಾಲಿಗೆ ಹೋಪವು. ಘನಾಗಿ ಬಟ್ಟೆ   ಹಾಕ್ಕಂಡು ಚೆಂದವಾಗಿ ಹೋಗಕ್ಕು. ಇಲ್ಲೆ  ಅಂದ್ರೆ  ನೋಡಿದವರೆಲ್ಲ  ನಗೆಯಾಡುತ್ತಾ’ ಅಂತಲೇ ನೋವು ನುಂಗಿ ಕೊಳ್ಳುತ್ತಿದ್ದ  ಹೊರತು, ದುಡ್ಡಿಲ್ಲ  ಎಂಬುದನ್ನು  ತೋರಿಸಿಕೊಳ್ಳುತ್ತಿರಲಿಲ್ಲ. ಇದು  ಮಲೆನಾಡಿನ ಅಪ್ಪನೊಬ್ಬನ ಮನೋಭಾವ.

ಇವತ್ತು  ನಮ್ಮೂರಿನ ಆರ್ಥಿಕ ಸ್ಥಿತಿ ಬದಲಾಗಿದೆ. ಆದ್ರೆ  ಅಪ್ಪಂದಿರು ಬದಲಾಗಿಲ್ಲ. ನಮ್ಮೂರ ರಾಮಚಂದ್ರಣ್ಣ  ಸಾಯುವವರೆಗೂ ಚಪ್ಪಲಿ, ಪ್ಯಾಂಟು ಹಾಕಿದ್ದನ್ನು  ಯಾರೂ ನೋಡಲಿಲ್ಲ. ನನ್ನ  ಅಪ್ಪನಿಗೆ, ಇವತ್ತಿಗೂ ತನ್ನ ಸ್ವಂತಕ್ಕಾಗಿ ದುಡ್ಡು  ಕೊಟ್ಟು  ಬಟ್ಟೆ  ಖರೀದಿಸಿಯೇ ಗೊತ್ತಿಲ್ಲ.  ಪಂಚೆ ಹರಿದಂತೆಲ್ಲ  ಹೋಲಿಗೆ ಹಾಕಿ ಸಂಭ್ರಮಿಸುವುದು ಅವನಿಗೆ ಮಾಮೂಲಾಗಿ ಬಿಟ್ಟಿದೆ! ಹಾಗಂತ ಅಪ್ಪ  ಜಿಪುಣ ಎನ್ನಲು ಸಾಧ್ಯವಿಲ್ಲ.  ದುಡ್ಡಿನ ಮೌಲ್ಯದ ಕುರಿತು ಅವನಿಗಿರುವಷ್ಟು  ಕಾಳಜಿ, ಅನುಭವ ಈ ತಲೆಮಾರಿನವರಾದ ನಮಗೆ ಬರಲು ಸಾಧ್ಯವೇ ಇಲ್ಲ. ಇನ್ನೂ , ಇವತ್ತಿನ ಮಕ್ಕಳಿಗೂ ಕೂಡ ಅಂಥ ಅಪ್ಪಂದಿರು ಬಹುಶಃ  ಸಿಗಲಾರರು ಅಲ್ವಾ?!

Read Full Post »

ತುಂಬಾ ದಿನಗಳಾಗಿತ್ತು ಏನ್ನನ್ನೂ  ಓದದೆ. ಯಾಕೋ ಇತ್ತೀಚೆಗೆ ಓದು ತುಂಬಾ ಬೇಜಾರನ್ನಿಸುತ್ತಿದೆ. ದೂರದ ಬೆಟ್ಟ  ನುಣ್ಣಗೆ ಅನ್ನುವ ಹಾಗೆ, ಬರಗಾರರನ್ನು ಹತ್ತಿರದಿಂದ ನೋಡಬಾರದು! ಯಾಕಂದ್ರೆ ಅವರನ್ನು ನೋಡಿದ ನಂತರ ಅವರ ಬರವಣಿಗೆ ಇಷ್ಟವಾಗುವುದು ತುಂಬಾ ಕಷ್ಟ. ಲವ್ ಜಿಹಾದ್ ಕುರಿತು ಪುಂಖಾನು-ಪುಂಖವಾಗಿ ಬರೆದು, ತೃಷೆ ತೀರಿಸಿಕೊಳ್ಳಲು ಯಾವ ಧರ್ಮದ ಹೆಣ್ಣು ಮಗಳಾದ್ರು ಸರಿ ಎನ್ನುವ ಜಾತಿಯ ಬರಹಗಾರರ ಪ್ರಮಾಣ ನಮ್ಮಲ್ಲಿ ಹೆಚ್ಚಾಗುತ್ತಿದೆ! ವ್ಯಕ್ತಿಯ ಯೋಗ್ಯತೆ ಗೊತ್ತಾದಾಗ, ಎಷ್ಟೇ ಕಷ್ಟಪಟ್ಟರೂ ಅವರ ಬರವಣಿಗೆ ಓದಲು ನನ್ನ ಮಟ್ಟಿಗಂತೂ ಸಾಧ್ಯವಿಲ್ಲ. ಆದ್ರೂ, ಓಶೋರಂಥ ತೀರಾ ಬೆರಳೆಣಿಕೆ ಮಂದಿ ಅವೆಲ್ಲವನ್ನೂ ಮೀರಿ ಬರೆಯುತ್ತಾರೆ! ಅಕ್ಷರ ರಕ್ಕಸರನ್ನು ಓದಲು ಕುಳಿತರೆ ಕಣ್ಣಿಂದ ನೋಡಿದ್ದೆಲ್ಲ  ಮರೆತು ಹೋಗುವಷ್ಟು  ಸೊಗಸು ಶೈಲಿ.

ಖಂಡಿತವಾಗಿಯೂ ಓದಿದಷ್ಟೂ  ಬರವಣಿಗೆ ಅಭಿವೃದ್ಧಿಯಾಗುತ್ತದೆ. ಹೊಸ-ಹೊಸ ಆಲೋಚನೆಗಳು ಹುಟ್ಟುತ್ತವೆ. ಕಥೆ-ಕಾದಂಬರಿಗಳನ್ನು ಬರಹಗಾರನ ಹೆಸರನ್ನು ಹೊರಗಿಟ್ಟು  ಓದಬಹುದು. ಓದಬೇಕು ಕೂಡ. ಆದ್ರೂ ಕೂಡ ಓದಲು ಮನಸ್ಸಿರಲಿಲ್ಲ.  ಎಸ್.ಎಲ್ ಭೈರಪ್ಪ, ಓಶೋ, ಕಾರಂತರು…ಈ ಮೂವರು ಬರಹಗಾರರನ್ನು ಓದಲು ನನ್ನ ಪಾಲಿಗೆ ಮೂಡು ಬೇಕಿಲ್ಲ. ಉಳಿದವರ ಬರಹ ಓದಲು ಮಾನಸಿಕ ವೇದಿಕೆ ಅಗತ್ಯ. ಈ ಸಲದ ಸೋಮಾರಿತನಕ್ಕೆ ಅದು ಹುಸಿಯಾಗಿದೆ! ಸುಶ್ರುತನ ಬಳಿ ಪರ್ವ ತೆಗೆದುಕೊಂಡು ಬಹುಶಃ  ೬ ತಿಂಗಳು ಕಳೆದಿದೆ. ಇನ್ನೂ ೪೦೦ ಪುಟ ಓದಲು ಬಾಕಿಯಿದೆ!

ಇಂತಿಪ್ಪೊ  ನನ್ನನ್ನು, ಛಂದ ಪುಸಕ್ತ ಮತ್ತೆ ಮೊದಲಿನ ಓದಿಗೆ ಶುರು ಹಚ್ಚಿದೆ. ವಸುಧೇಂದ್ರರ ‘ರಕ್ಷಕ ಅನಾಥ’ ಕೃತಿಯನ್ನು ಒಂದೂವರೆ ದಿನದಲ್ಲಿ  ಓದಿ ಮುಗಿಸಿದ್ದೇನೆ. ಈ ಕೃತಿ ವಸುಧೇಂದ್ರರ ಬರವಣಿಗೆ ತಾಕತ್ತನ್ನು ಮತ್ತಷ್ಟು ಹೆಚ್ಚಿಸಿದೆ ಅಂದರೆ ಬಹುಶಃ ತಪ್ಪಾಗಲಾರದು. ಅವರ ಸಾಫ್ಟ್‌ವೇರ್ ಕಚೇರಿಯ ಚಟುವಟಿಕೆಗಳ ಕುರಿತಾದ ಬರಹಗಳು ಹೊಟ್ಟೆ  ಹುಣ್ಣಾಗುವಷ್ಟು  ನಗಿಸುತ್ತವೆ. ಬಾಸ್ ಸಂದೀಪನ ಸಂಸ್ಕೃತಿ ಪರಿಚಯಿಸುವ ಹುಚ್ಚು  ನೆನಪಿಸಿಕೊಂಡಾಗಲೆಲ್ಲ  ನಗು ಉಕ್ಕುಕ್ಕಿ ಬರುತ್ತದೆ. ಇಂಗ್ಲೆಂಡ್‌ನ ದಂಪತಿಗಳು ಲೇಖಕರ ಕಚೇರಿಗೆ ಭೇಟಿ ನೀಡುತ್ತಾರೆ. ಯಾವುದೋ  ಪ್ರಾಜೆಕ್ಟ್  ಕುರಿತು ನಿರ್ಧಾರ ತೆಗೆದುಕೊಳ್ಳಲು ಅವರು ಬಂದಿರುತ್ತಾರೆ. ಸಭೆ ನಡೆಯುತ್ತಿರುವಾಗ ಇಲಿಯೊಂದು ಪ್ರವೇಶಿಸುವ ದೃಶ್ಯ ಸಖತ್ ಮಜವಾಗಿದೆ. ಇಲಿಗೆ ಹೆದರುವ ಈ ಮಂದಿ ಭಾರತವನ್ನು ಶತಮಾನಗಳ ಕಾಲ ಆಳಿದ್ದು  ಹೌದಾ? ಎನ್ನುವ ಸಂದೀಪನ ಪ್ರಶ್ನೆ ಎಲ್ಲರನ್ನೂ  ಚಿಂತನೆಗೆ ಹಚ್ಚಿಸುತ್ತದೆ.

ಇನ್ನೂ ರಿಸೆಷನ್ ಪರಿಣಾಮದಿಂದ ಸಾಫ್ಟ್‌ವೇರ್ ಕಚೇರಿಯಲ್ಲಾಗುವ ತಲ್ಲಣವನ್ನು, ಹೇಳಲು ಸಾಧ್ಯವಿಲ್ಲದಷ್ಟು  ಸೊಗಸಾಗಿ ವಿವರಿಸುತ್ತಾರೆ ವಸುಧೇಂದ್ರ. ಉದ್ಯೋಗ ಕಡಿತಕ್ಕೆ ಮುಂದಾಗುವ ಬಾಸ್, ಅದಕ್ಕೆ ಲೇಖಕರು ನೀಡುವ ಕೆಲ ಐಡಿಯಾಗಳು ಮಸ್ತಾಗಿವೆ. ವೆಚ್ಚ  ಕಡಿತಕ್ಕೆ ಮುಂದಾದ ಬಾಸ್, ಗುರುವಾರದ ಊಟಕ್ಕೆ ಕತ್ತರಿ ಹಾಕುತ್ತಾನೆ. ರಾಯರ ವಾರದಂದು ಉಪವಾಸವಿರಬೇಕು ಎಂಬ ಸಂದೇಶ ನೀಡುತ್ತಾನೆ. ಆವತ್ತು ಸಂಜೆ ಕಚೇರಿಯಲ್ಲಿ  ಯಾವೊಬ್ಬ  ಉದ್ಯೋಗಿಯೂ ಕಾಣುವುದಿಲ್ಲ. ಭಯಗೊಂಡ ಬಾಸ್ ಸಂದೀಪ ಹಾಗೂ ಲೇಖಕರು ಸಹೊದ್ಯೋಗಿಗಳನ್ನು  ಹುಡುಕಿಕೊಂಡು ಹೊರಟಾಗ ಕಚೇರಿಯಲ್ಲೊಂದು ಭಜನಾ ಮಂಡಳಿ ಆರಂಭವಾಗಿರುತ್ತದೆ! ಕೀ ಬೋರ್ಡ್, ಮೌಸ್ ಬಿಟ್ಟ  ಮಂದಿ ರಾಯರ ಭಜನೆಗಳನ್ನು ಹಾಡುತ್ತಿರುತ್ತಾರೆ. ಈ ಸನ್ನಿವೇಶವನ್ನು ಕಣ್ಣೆದೆರಿಗೆ ನಿಲ್ಲುವಂತೆ ವರ್ಣಿಸಿದ್ದಾರೆ ಲೇಖಕರು. ಈ ಲೇಖನ ಓದಿದ ನಂತರವೂ ನಗು ಬಾರದವರ ಕುರಿತು ನಾವು ಅನುಮಾನಿಸಬೇಕಾಗುತ್ತದೆ! ಅಷ್ಟೊಂದು ಸೊಗಸಾಗಿದೆ  ಬರಹ.

ಪುಸಕ್ತ ಮಾರಾಟದ ಕುರಿತ ವಸುಧೇಂದ್ರರ ಅನುಭವಗಳು, ದ್ರೌಪದಿಗೆ ಕೃಷ್ಣ ಸೀರೆ ನೀಡಿದ ಕುರಿತ ಅನುಮಾನ ನಮ್ಮನ್ನು ಗಂಭೀರವಾದ ಚಿಂತನೆಗೆ ಹಚ್ಚುತ್ತದೆ. ೫ ರೂ. ಕಡಿಮೆಯಿದೆ ಎಂದು ಕುರುಡನ ತಂದೆಗೆ ಪುಸಕ್ತ ನೀಡದ ಒಂದು ಘಟನೆ ಕಣ್ಣಲ್ಲಿ  ನೀರು ತರಿಸುತ್ತದೆ. ನಮ್ಮ  ವ್ಯಾಪಾರಿ ಬುದ್ಧಿಯ, ಘಟನೆಯ ನಂತರ ಪಶ್ಚಾತಾಪ ಪಡುವ ಎಷ್ಟೋ ಮಂದಿಯ ಜಾಣತನವನ್ನು ವಿವರಿಸುತ್ತದೆ. ಟೋಟ್ಟಲಿ  ನಾನು ಇತ್ತೀಚೆಗೆ ಓದಿದ ಒಂದು ಅತ್ಯುತ್ತಮ ಕೃತಿ(ಇತ್ತೀಚೆಗೆ ಏನು ಓದಿಲ್ಲ  ಎಂಬುದು ಇದಕ್ಕೆ ಕಾರಣವಿರಬಹುದು!)ಹಾಗೂ ನೀವೆಲ್ಲ  ಕೊಂಡು ಓದಲೇ ಬೇಕಾದ ಕೃತಿ ಅಂದುಕೊಳ್ಳುತ್ತೇನೆ. ನಮ್ಮಮ್ಮ, ಯುಗಾದಿ ನಂತರ ಲೇಖಕರು ಅಷ್ಟೆ  ತೂಕದ ಮತ್ತೊಂದು ಕೃತಿ ಕೊಟ್ಟಿದ್ದಾರೆ  ಎಂದರೆ ಬಹುಶಃ  ತಪ್ಪಾಗಲಾರದು. ಸಾಫ್ಟ್‌ವೇರ್ ಎಂಬ ಸೋಜಿಗದ ಜಗತ್ತಿನ ನಡುವೆಯೂ ಸ್ಟಾಲ್‌ನಲ್ಲಿ  ನಿಂತು ತೀರಾ ಮಾರ್ವಾಡಿ ಬುದ್ಧಿಯೊಂದಿಗೆ ಪುಸಕ್ತ ಮಾರುವ ವಸುಧೇಂದ್ರರ ಸಾಹಿತ್ಯ ಪ್ರೀತಿಗೊಂದು ಸಲಾಂ.

ಈಗ ಪರ್ವ ಹಿಡಿದು ಕುಳಿತ್ತಿದ್ದೇನೆ. ೧೪ ತಾಸುಗಳ ನಿದ್ದೆಗೆ ತಕ್ಕ ಮಟ್ಟಿನ ಕಡಿವಾಣ ಹಾಕಲು ಯತ್ನಿಸುತ್ತಿದ್ದೇನೆ! ಕಥೆಯೊಂದನ್ನು ಬರೆಯದೇ ಇವತ್ತಿಗೆ ಸರಿಯಾಗಿ ಒಂದು ವರ್ಷವಾಯ್ತು. ಇನ್ನೂ ಬರವಣಿಗೆಯಲ್ಲೂ  ತೀರಾ ಸೋಮಾರಿತನ. ಈ ಖಾಯಿಲೆಗಳಿಂದ ಯಾವತ್ತು ಮುಕ್ತಿ ಪಡೆಯುತ್ತೇನೊ ಗೊತ್ತಿಲ್ಲ!

Read Full Post »

ಅಡುಗೆ ಮಾಡಲು ಬೇಸರವಾಗಿದೆ ಎಂದು ಹೋಟೆಲ್‌ಗೆ ಹೋದ್ರೆ, ಬರಪೀಡಿತ ಪ್ರದೇಶದಲ್ಲಿ  ಆಹಾರ ಪೊಟ್ಟಣಕ್ಕಾಗಿ ಕ್ಯೂ ನಿಂತಿರುತ್ತಾರಲ್ಲ, ಥೇಟು ಅದೇ ರೀತಿಯ ವಾತಾವರಣ ದರ್ಶಿನಿಗಳೆದುರು! ಬಿಲ್ ಪಡೆಯಲು ಕ್ಯೂ, ಐಟಂ ಕೊಳ್ಳಲು ಮುತ್ತಿಗೆ. ಅಲ್ಲಿ  ನಿಲ್ಲುವುದಕ್ಕಿಂತ ಮನೆಯಲ್ಲಿ  ಪಾತ್ರೆ ತೊಳೆದು ಅಡುಗೆ ಮಾಡುವುದೇ ಲೇಸು ಅನ್ನಿಸಿಬಿಡುತ್ತದೆ ಎಷ್ಟೊ  ಸಲ! ಇನ್ನು  ಬಿಎಂಟಿಸಿ ಬಸ್ಸಿನ ಕಥೆ ಹೇಳುವುದೇ ಬೇಡ. ಐದೈದು ನಿಮಿಷಕ್ಕೊಂದು ಬಸ್ಸು  ಬುರುಬುರು ತಿರುಗುತ್ತದೆ ಎಂಬುದೇನೋ ನಿಜ. ಆದ್ರೂ, ಒಂದೂ ಬಸ್ಸು  ಯಾವತ್ತೂ  ಖಾಲಿಯಿರುವುದಿಲ್ಲ. ನಮ್ಮೂರಲ್ಲಿ  ದಿನಕ್ಕೆ ಒಂದೇ ಸಲ ಬಸ್ಸು  ಬಂದ್ರು, ಮಲಗುವಷ್ಟು  ಜಾಗ ಇರುತ್ತಪ್ಪೊ! ಇತ್ತೀಚೆಗೆ ದುಬಾರಿಯುತ ವಜ್ರ ಬಸ್ಸಲ್ಲೂ  ಹೌಸ್‌ಫುಲ್. ಈ ರಗಳೆಯೇ ಬೇಡ ಬೈಕ್ ಖರೀದಿಸಿ ಬಿಡೋಣ ಅಂದ್ರೆ, ಮೈಸೂರು ರಸ್ತೆಯ ಘನಘೋರ ಟ್ರಾಫಿಕ್ ಕಣ್ಣೆದುರಿಗೆ ಬರುತ್ತದೆ. ಎಂ.ಜಿ ರಸ್ತೆ  ನೆನಪು ಮಾಡಿಕೊಂಡ್ರೆ ಮೈ ನಡುಗುತ್ತದೆ. ಅಂಥ ರಸ್ತೆಗಳನ್ನೆಲ್ಲ  ನೆನಪಿಸಿಕೊಂಡು ಬಿಎಂಟಿಸಿ ಬಸ್ಸಿನತ್ತಲೇ  ಹೆಜ್ಜೆ  ಹಾಕುವುದು ಅನಿವಾರ್ಯ. ಹೋಗ್ಲಿ  ಕಾರು…

ಹೌದು, ಕಾರು ಕೊಳ್ಳುವುದೇನೋ ಸುಲಭ. ಆದ್ರೆ ಅದರ ನಿರ್ವಹಣೆ…ಮಹಾನಗರಿಯ ಅಲಂಕಾರ ಪ್ರಿಯ ಹುಡುಗಿಯೊಬ್ಬಳನ್ನು ಕಟ್ಟಿಕೊಂಡಷ್ಟು, ಜಾತಿ ನಾಯಿಯೊಂದನ್ನು ಸಾಕಿದಷ್ಟೇ ಕಷ್ಟದ ಕಾಯಕ!

ಸಂಜೆ ಬೇಜಾರಾಗುತ್ತಿದೆ ಎಂದು ಪಾರ್ಕ್‌ನತ್ತ ಹೆಜ್ಜೆ  ಹಾಕಿದರೆ, ನಮ್ಮೂರಿನಲ್ಲಿ  ವರ್ಷಕ್ಕೊಮ್ಮೆ  ನಡೆಯುವ ಜಾತ್ರೆ, ತೇರಿಗೆ ಸೇರುವಷ್ಟು  ಜನ ಪ್ರತಿ ನಿತ್ಯ ಸಂಜೆ ಉದ್ಯಾನವನದಲ್ಲಿ  ಬೀಡು ಬಿಟ್ಟಿರುತ್ತಾರೆ. ಕುಳಿತುಕೊಳ್ಳಲು ಒತ್ತಟ್ಟಿಗಿರಲಿ, ನೆಮ್ಮದಿಯಿಂದ ನಿಂತುಕೊಳ್ಳಲು ಜಾಗವಿರುವುದಿಲ್ಲ. ಜಗಳವಿಲ್ಲದೆ ಆಟೋರಿಕ್ಷಾ  ಇಳಿದ ದಿನವೇ ಇಲ್ಲ.  ಹಾಡುಹಗಲೇ ದುಪ್ಪಟ್ಟು  ಹಣ ಕೇಳ್ತಾರೆ. ಮೂರು ಜನ ಹತಿದ್ರೆ ಒಂದುವರೆ ಪಟ್ಟು  ಬಾಡಿಗೆ ಕೊಡಿ ಅಂತಾರೆ. ಮನೆ, ಮುಖ್ಯರಸ್ತೆಯಲ್ಲೇ  ಇರಬೇಕು. ಒಂಚೂರು ಒಳಗಡೆ ಪ್ರದೇಶಕ್ಕೆ ಬರಲ್ಲ  ಹಲವು ಆಟೋ ಚಾಲಕರು. ಇದನ್ನೆಲ್ಲ  ಪ್ರಶ್ನಿಸಲು ಹೋದ್ರೆ, ಬೀದಿಯಲ್ಲೇ  ಜಗಳಕ್ಕೆ ಬರ್‍ತಾರೆ. ಈ ಕುರಿತು ಪೋಲಿಸರಿಗೆ ದೂರು ನೀಡಿದರೆ, ಅಯ್ಯೊ  ಅವರ ಕಥೆ ಮತ್ತೊಂದು ರೀತಿ.  ಮೆಜಸ್ಟಿಕ್‌ನಲ್ಲಿ  ನಿಂತು ಮೈಮಾರಿಕೊಳ್ಳುವ ಸೂಳೆಯಿಂದ ಸಾರ್ವಜನಿಕರೆದುರೇ  ಮಾಮೂಲಿ ಪೀಕುವ ಈ ಮಂದಿ, ಇನ್ಯಾರನ್ನು ಬಿಟ್ಟಾರು ಅಲ್ವಾ?!

ಪಾನಿಪುರಿ ಮಾರುವವರು, ಪುಟ್‌ಪಾತ್ ವ್ಯಾಪಾರಿಗಳ ಕೈಯಲ್ಲಿ  ಮಾಮೂಲಿ ಪೀಕುವ ಪೋಲಿಸರು ನಿತ್ಯವೂ ಕಾಣುತ್ತಾರೆ. ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುವ ಇನ್ಸ್‌ಪೆಕ್ಟರ್‌ಗಳನ್ನು  ನೋಡಿದಾಗ, ಪ್ಯಾದೆಗಳು ೫-೧೦ ರೂ. ಜೇಬಿಗಿಳಿಸುವುದು ತಪ್ಪು ಅನ್ನಿಸುತ್ತಿಲ್ಲ. ಅಷ್ಟರ ಮಟ್ಟಿಗೆ  ವ್ಯವಸ್ಥೆಯೆಂಬುದು ನಮ್ಮ  ಮನಸ್ಸನ್ನು ಬದಲಿಸಿ ಬಿಟ್ಟಿದೆ. ಟಿಕೆಟ್ ಕೊಡದೇ ಹಣ ಜೇಬಿಗಿಳಿಸುವ ಬಿಎಂಟಿಸಿ ನಿರ್ವಾಹಕರುಗಳ ಬಳಿ ಜಗಳ ಆಡುವುದು ಬಿಟ್ಟುಬಿಟ್ಟಿದ್ದೇನೆ. ‘ಸಾರ್ ೧೧ ವರ್ಷ ಆಯಿತು ಈ ಇಲಾಖೆ ಸೇರಿ. ೧೩ ಸಾವಿರ ಸಂಬಳ ಬರ್‍ತಾ ಇದೆ. ನಾನು ಒಂದು ರೂಪಾಯಿ ಮೋಸ ಮಾಡಲ್ಲ, ಮೇಲಿನ ಅಕಾರಿಗಳಿಗೂ ನಯಾಪೈಸೆ ಕೋಡೊಲ್ಲ’ ಎನ್ನುತ್ತಿದ್ದ  ನಮ್ಮ  ಏರಿಯಾದ ಕಂಡಾಕ್ಟರ್. ಹೌದು, ನಾವು ಮೋಸ ಮಾಡಿದರೆ ಮೇಲಿನವರಿಗೆ ಪಾಲು ಕೊಡುವುದು ಅನಿವಾರ್ಯ. ಹಾಗಾಗಿಯೇ ಒಬ್ಬ  ಭ್ರಷ್ಟನಿಂದ, ರಾಜಕಾರಣಿಯಿಂದ ಇಡೀ ವ್ಯವಸ್ಥೆಯೇ ಭ್ರಷ್ಟವಾಗುವುದು.

ಕಿಟಾರನೆ ಕಿರುಚುವ, ಅರೆ-ಬರೆ ಕನ್ನಡದಲ್ಲಿ  ಮಾತಾಡುವ ಕೆಲ ರೇಡಿಯೋ ಜಾಕಿಗಳಿಗೆ ಅದ್ಯಾವ ಪುಣ್ಯಾತ್ಮರು ಉತ್ತಮವಾಗಿ ವಾಗ್ಮಿಗಳು ಎಂಬ ಸರ್ಟಿಫಿಕೆಟ್ ಕೊಟ್ಟಿದ್ದಾರೋ ಆ ದೇವರೇ ಬಲ್ಲ. ಇನ್ನೂ ತೆಲುಗು, ತಮಿಳು ಮಿಶ್ರಿತ ಕನ್ನಡ ಮಾತಾಡುವವರು ಬೇಡ ಬೇಡ ಅಂದ್ರು ಕಾಲಿಗೆ ಒಡಾಯುತ್ತಾರೆ! ರಾತ್ರಿ ಎಂಟರ ನಂತರ ಮಹಾನಗರಿಯ ಬೀದಿಗಿಳಿಯಲು ವಾಕರಿಕೆ ಬರುತ್ತದೆ. ಮಹಾನಗರಿಯ ಎಲ್ಲಾ  ಮುಖ್ಯ ಗಲ್ಲಿಯಲ್ಲೂ  ಸೂಳೆಯರು ಸಾಲುಗಟ್ಟಿ  ನಿಂತಿರುತ್ತಾರೆ. ಅದಕ್ಕಿಂತ ಬೇಸರದ ಸಂಗತಿ ಎಂದರೆ, ಖಾಕಿ ತೊಟ್ಟ  ಬೀಟ್  ಪ್ಯಾದೆಗಳ ಎದುರೇ ವಹಿವಾಟು ಕುದುರಿಸುವ ದೃಶ್ಯಗಳು. ಇವರಿಬ್ಬರಲ್ಲಿ  ತಪ್ಪಿತಸ್ಥರು ಯಾರು ಎಂಬುದೇ ಅರ್ಥವಾಗುವುದಿಲ್ಲ! ಇಷ್ಟೆಲ್ಲದರ ನಡುವೆಯೂ ಮಹಾನಗರಿಯ ಜೀವನ ಅನಿವಾರ್ಯವಾಗಿ ಬಿಟ್ಟಿದೆ.  ಇಲ್ಲಿ  ಬಿಡಾರ ಹೂಡುವ ಮಂದಿಯ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಆದ್ರೂ ಟೋಟ್ಟಲೀ ಬೆಂಗಳೂರು ಸಖತ್ ಬೋರಿಂಗ್ ಮಗಾ!!!

Read Full Post »

ನಮ್ಮ  ಸಮಾಜದಲ್ಲಿ  ಕಳ್ಳರ್‍ಯಾರು, ಪೋಲಿಸರ್‍ಯಾರು ಅಂತಾ ಪತ್ತೆ ಹಚ್ಚುವುದು, ಎದುರಿಗೆ ನಿಂತವರಲ್ಲಿ  ಒಳ್ಳೆಯವರ್‍ಯಾರು, ಕೆಟ್ಟವರ್‍ಯಾರು ಎಂದು ಗುರುತಿಸುವಷ್ಟೇ ಕಷ್ಟದ ಕೆಲಸ. ಖಾಕಿ ತೊಟ್ಟವರೆಲ್ಲ  ಪೋಲಿಸರು ಎಂದು ಭಾವಿಸಿದರೆ,  ಗರಿ-ಗರಿ ಖಾದಿ ತೊಟ್ಟವರನ್ನು ಒಳ್ಳೆಯವರೆಂದು ಭಾವಿಸಿ ಮೋಸ ಹೋದ ಕುರಿಗಳ ಸಾಲಿಗೆ ನಾವೂ ಸೇರಿಬಿಡುತ್ತೇವೆ! ಅದೇನೆ ಇರಲಿ, ಕಥೆ ಏನಪ್ಪ  ಅಂದ್ರೆ, ನಾನು ಮೊನ್ನೆ ರಾತ್ರಿ ೮ಗಂಟೆ ನಂತರ ಮೆಜಸ್ಟಿಕ್ ಸುತ್ತ-ಮುತ್ತ ಒಂದು ರೌಂಡ್ ಹಾಕಿ ಬಂದೆ. ಬೆಂಗಳೂರಿಗೆ ಬಂದು ೩ ವರ್ಷ ಆಯಿತು ಅಂತಾ ಹೇಳಿಕೊಳ್ಳಲು ನನಗೆ ನಿಜಕ್ಕೂ ನಾಚಿಕೆಯಾಗತ್ತೆ. ಗಾಂ ನಗರವನ್ನೇ  ನಾನಿನ್ನು  ಸರಿಯಾಗಿ ನೋಡಿಲ್ಲ. ಅಸೈನ್‌ಮೆಂಟ್ ಇದ್ದಾಗ ಹೊರಗಡೆ ಹೋಗುವುದು ಬಿಟ್ಟರೆ, ಮತ್ತೆ ತಿರುಗಾಡುವುದು ಬಹಳ ಕಡಿಮೆ. ಹಾಗಾಗಿಯೇ ಇವತ್ತಿಗೂ ಲಾಲ್‌ಬಾಗ್ ಸರಿಯಾಗಿ ಗೊತ್ತಿಲ್ಲ. ವಿಶ್ವೇಶ್ವರಯ್ಯ  ಮ್ಯೂಸಿಯಂ ಅಂತಾ ಒಂದಿದೆಯಂತೆ ಎಂದು ಕೇಳಿದ್ದೇನಷ್ಟೆ!

ಮೊನ್ನೆ ಮೆಜೆಸ್ಟಿಕ್‌ನಲ್ಲಿ  ಟ್ರಾಫಿಕ್ ಜಾಮ್ ಆಗಿತ್ತು. ಅಲ್ಲಿ  ಟ್ರಾಫಿಕ್ ಜಾಮ್ ಆದ್ರೆ, ಕ್ಲಿಯರ್ ಆಗಲು ಎಷ್ಟು  ಹೊತ್ತು ಬೇಕಾಗಬಹುದೆಂಬ ಸ್ಪಷ್ಟವಾದ ಅರಿವಿದೆ. ಯಾಕೆಂದ್ರೆ, ಈ ಹಿಂದೆ ೩-೪ ಸಲ ಗಂಟೆಗಟ್ಟಲೆ  ಬಸ್ ಒಳಗೆ ಕುಳಿತು ಜಪ ಮಾಡಿದ್ದಿದೆ. ಹಗಲಾದ್ರೆ ಆಚೆ-ಈಚೆ ತಿರುಗಾಡೋ ಚೆಂದದ ಹುಡುಗಿಯರಿಗೆ ಲೈನ್ ಹಾಕಿಕೊಂಡಾದ್ರೂ ಹೊತ್ತು ಕಳೆಯಬಹುದಿತ್ತು! ಆದ್ರೆ, ರಾತ್ರಿ ಅದು ಸಾಧ್ಯವಿಲ್ಲ  ಅಂದುಕೊಳ್ಳುವ ಹೊತ್ತಿಗೆ ನ್ಯಾಷನಲ್ ಮಾರ್ಕೇಟ್ ನೆನಪಿಗೆ ಬಂತು. ಅದನ್ನು  ನಾನು ಕೇಳಿದ್ದೆ, ಆದ್ರೆ ಕಣ್ಣಾರೆ ನೋಡಿರಲಿಲ್ಲ. ಯಾಕೆ ಇವತ್ತು ಆ ಕೆಲಸ ಮಾಡಬಾರದು ಅಂದುಕೊಂಡು ಗೆಳಯನಿಗೆ ಫೋನ್ ಮಾಡಿದ್ರೆ, ಅವನಿಗೆ ಸರಿಯಾಗಿ ಅಡ್ರೆಸ್ ಹೇಳಲಿಕ್ಕೆ ಬರುವುದಿಲ್ಲ. ಯಾಕಂದ್ರೆ ಅವ ಸೂಚಿಸುತ್ತಿರುವ ಲ್ಯಾಂಡ್ ಮಾರ್ಕ್‌ಗಳ್ಯಾವುದೂ ನನಗೆ ಪರಿಚಯವಿಲ್ಲ! ಕಾನಿಷ್ಕ ಹೋಟೆಲ್, ಸ್ವಪ್ನ ಬುಕ್ ಹೌಸ್ ಎರಡೇ ಗಾಂದಿನಗರದಲ್ಲಿ  ನನಗೆ ಗೊತ್ತಿರುವುದು. ನನ್ನ  ಹತ್ತಿರ ಬೈಸಿಕೊಳ್ಳುತ್ತಲೇ ಅಡ್ರೆಸ್ ಹೇಳಿದ ಅವ.

ಹರಸಾಹಸ ಮಾಡಿಕೊಂಡು ನ್ಯಾಷನಲ್ ಮಾರ್ಕೇಟ್ ಕಡೆ ಹೆಜ್ಜೆ ಹಾಕಿದೆ. ಜೀನ್ಸ್  ಪ್ಯಾಂಟ್ ಧರಿಸಿದ್ದರಿಂದ, ಕಿಸೆಯೊಳಗಿನ ಮೊಬೈಲನ್ನೂ ಯಾರು ಖದಿಯಲು ಸಾಧ್ಯವಿಲ್ಲ  ಎಂಬ ಧೈರ್ಯ. ಆದ್ರೂ, ಈ ಬೆಂಗಳೂರಲ್ಲಿ  ಮೊಬೈಲ್ ಖದಿಯುವವರ  ಕಥೆ ರೋಮಾಂಚನಕಾರಿಯಾಗಿದೆ. ಅದನ್ನ ಮತ್ತೊಮ್ಮೆ ಹೇಳ್ತಿನಿ. ನ್ಯಾಷನಲ್ ಮಾರ್ಕೇಟ್‌ನ ದರ್ಶನ ಪಡೆದು, ವಾಪಸ್ ಹೊರಟಾಗ…ಈ ರಸ್ತೆ ಯಾವ ಕಡೆ ಹೋಗಿ ಸೇರಿಬಹುದು ಎಂಬ ಕುತುಹಲ ಶುರುವಾಯಿತು. ನಾನು ಅಪರಿಚಿತ ಸ್ಥಳಕ್ಕೆ ಹೋದ್ರೆ, ಅಕ್ಕ-ಪಕ್ಕದ ರಸ್ತೆಗಳತ್ತ ಒಮ್ಮೆ ಕಣ್ಣಾಡಿಸಿ ಬರುತ್ತೇನೆ. ಮುಂದಿನ ಸಲ ಗೆಳೆಯರಿಗೆ ಫೋನ್ ಮಾಡಿ ಮತ್ತೆ ಬೈಸಿಕೊಳ್ಳುವ ಸಾಹಸ ಬೇಡ ಎಂಬ ಉದ್ದೇಶದಿಂದ. ನಾನು ಅಂದಾಜಿಸಿದಂತೆ ಅದು ಮೈಸೂರ್ ಬ್ಯಾಂಕ್-ಮೆಜೆಸ್ಟಿಕ್ ನಡುವಣ ರಸ್ತೆಯಾಗಿತ್ತು. ಜನತಾ ಬಜಾರ್‌ನಿಂದ ಒಳಗೆ ಹೋದ್ರೆ, ಆನಂದ್ ರಾವ್ ಸರ್ಕಲ್‌ನಿಂದ ನೆಟ್ಟಗೆ ಹೊರಟರೆ ಗಾಂ ನಗರ ಸಿಗತ್ತೆ ಅಂತಾ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಾ, ಎಲ್ಲೋ ನೋಡುತ್ತಾ ಹೆಜ್ಜೆ  ಹಾಕುತ್ತಿದೆ…ಬರ್ತಿಯೇನಪ್ಪ  ಅಂದ್ಲು  ಒಬ್ಬಳು ಹುಡುಗಿ…ಅಲ್ಲಲ್ಲ  ಆಂಟಿ! ಒಂದು ಕ್ಷಣ ನನಗೆ ಏನು ಅರ್ಥವಾಗಲಿಲ್ಲ. ಆಮೇಲೆ ಗೊತ್ತಾಯಿತು, ನಾನು ಬೆಂಗಳೂರಿನ ಪರಿಶುದ್ಧ ಕೆಂಪು ಬೀದಿಯಲ್ಲಿ  ಹೋಗುತ್ತಿದ್ದೇನೆ ಅಂತಾ.

ಪ್ರತಿ ಸಲ ಹಬ್ಬಕ್ಕೆ ಹೊರಟಾಗ್ಲೂ  ಮೆಜೆಸ್ಟಿಕ್ ಬಳಿ ಟ್ರಾಫಿಕ್ ಜಾಮ್ ಆಗಿರತ್ತೆ. ಹಾಗಾಗಿ ಮೈಸೂರು ಬ್ಯಾಂಕ್ ಬಳಿ ಇಳಿದು, ಅಲ್ಲಿಂದ ನಡೆದು ಹೋಗುವುದು ಅಭ್ಯಾಸವಾಗಿದೆ. ಆ ರಸ್ತೆ ಒಂತರಹ ಸೂಳೆಯರ ಬೀದಿ ಅನ್ನೋದು  ೨ ವರ್ಷದ ಹಿಂದೆ  ಗೊತ್ತಾಗಿತ್ತು. ಆದ್ರೆ ಗಾಂನಗರದ ಗಲ್ಲಿಯಲ್ಲೂ  ಈ ದಂಧೆ ನಡೆಯತ್ತಾ ಅಂತಾ ಯೋಚಿಸುತ್ತಿರುವಾಗ…ಎದುರಿಗೊಬ್ಬ  ಪೋಲಿಸ್ ಪ್ಯಾದೆ ಕಂಡ. ಅವನೆದುರಿಗೆ ಆಕೆ ರಾಜಾರೋಷವಾಗಿ ವ್ಯಾಪಾರ ಕುದುರಿಸುತ್ತಿದ್ದಳು. ಇದನ್ನೆಲ್ಲ  ೨ ನಿಮಿಷ ಸುಮ್ಮನೆ ನಿಂತು ನೋಡಿದೆ…ಅದಕ್ಕೆ ನನಗೆ ಕಳ್ಳರು ಮತ್ತು ಪೋಲಿಸರ ನಡುವಣ ವ್ಯತ್ಯಾಸ ಅರ್ಥವಾಗದೆ ಇದ್ದಿದ್ದು. ಇನ್ನೂ ಸಾಕಷ್ಟು  ಕಾರಣ, ಘಟನೆಗಳಿಂದಾಗಿ ನನಗೆ ಪೋಲಿಸ್ ಮತ್ತು ಕಳ್ಳರನ್ನು  ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಅವೆಲ್ಲವನ್ನೂ  ಇಲ್ಲಿ  ವಿವರಿಸಲು ಸಾಧ್ಯವಿಲ್ಲ…ಅಂದುಕೊಳ್ಳುವ ಹೊತ್ತಿಗೆ ನಮ್ಮೂರಿನ ಅವಾಂತರದ ಅಶೋಕಣ್ಣ  ನೆನಪಾದ. ಅವನಿಗೆ ನಾನು ಈ ಹೆಸರಿಡಲು ಒಂದು ಕಾರಣವಿದೆ.

ನಾನು ಉಡುಪಿಯಲ್ಲಿ  ಡಿಗ್ರಿ ಓದ್ತಾ ಇರೋವಾಗ ಎಂ.ಎಫ್ ಹುಸೇನ್ ಭಾರತ ಮಾತೆಯ ಬೆತ್ತಲು ಚಿತ್ರ ಬಿಡಿಸಿದ್ದ. ಅದನ್ನ  ಗಿರೀಶ್ ಕಾರ್ನಾಡ್ ಎಂಬ ಮಹಾಶಯರೊಬ್ಬರು ಸಮರ್ಥಿಸಿಕೊಂಡಿದ್ದರು. ಕಲಾವಿದನಿಗೆ ಆ ಹಕ್ಕಿದೆ ಎಂದಿದ್ದರು. ನಿಮ್ಮ ಹೆಂಡತಿಯದ್ದೋ, ಸಹೋದರಿಯದ್ದೋ ಬೆತ್ತಲೆ ಚಿತ್ರ ಬರೆದರೆ, ಆಗ ಕಲೆಯನ್ನು ಸ್ವಾಗತಿಸುವಿರಾ ಎಂಬ ಪ್ರಶ್ನೆಯಿಟ್ಟು  ಒಂದು ಲೇಖನ ಬರೆದಿದ್ದೆ. ಅದನ್ನು ಹೊಸದಿಗಂತ ಪತ್ರಿಕೆ ಪ್ರಕಟಿಸಿತ್ತು. ಇದರ ನಡುವೆ, ಅಲ್ಲಿನ ಎಬಿವಿಪಿ ಘಟಕದವರು ಕಾರ್ನಾಡ್ ಹೇಳಿಕೆ ವಿರೋಸಿ ಉಡುಪಿ ಸಿಟಿ ಬಸ್ ಬಸ್‌ಸ್ಟ್ಯಾಂಡ್‌ನಲ್ಲಿ  ಪ್ರತಿಭಟನಾ ಸಭೆ ಆಯೋಜಿಸಿದ್ದರು. ನನ್ನ  ಲೇಖನ ಓದಿದ ಹಿರಿಯರೊಬ್ಬರು ಆ ಸಭೆಗೆ ಬನ್ನಿ, ಮಾತಾಡಿ ಅಂತಾ ಕರೆದಿದ್ದರು. ಹಾಗಾಗಿ ನಾನು ಹೋಗಿದ್ದೆ. ಸಭೆ ಸುತ್ತಲು ಪೋಲಿಸ್ ಕಾವಲಿತ್ತು. ನಿಂತು ಮಾತಾಡುತ್ತಿದ್ದ  ಹಿರಿಯರ ಜತೆ ನಾನಿದ್ದೆ. ಇದನ್ನ ನಮ್ಮೂರಿನ ಅಶೋಕಣ್ಣ  ನೋಡಿ ಬಿಟ್ಟಿದ್ದಾನೆ. ಅವನು ಎಲ್ಲಿಗೋ ಅಡುಗೆಗೆ ಅಂತಾ ಹೊರಟವನಂತೆ! ನೋಡಿಕೊಂಡು ಸುಮ್ಮನಿರಲಿಲ್ಲ. ಮನೆಗೆ ಹೋಗಿ ವರದಿ ಒಪ್ಪಿಸಿದ್ದಾನೆ.

ಸವಿತಕ್ಕ  ನಿಮ್ಮನೆ ಮಾಣಿ ಉಡುಪಿ ಬಸ್‌ಸ್ಟಾಂಡಲ್ಲಿ  ಇದ್ದಿದ್ದ. ಅವನ ಸುತ್ತಲೂ ಪೋಲಿಸ್ರು ಇದ್ದಿದ್ವಪ್ಪ  ಎಂಬ ಅವನ ಅನುಮಾನಯುತ ಮಾತು ಕೇಳಿದ ಅಮ್ಮ, ಬೆವರುತ್ತ ಪೋನ್ ಮಾಡಿದಳು. ‘ಅಪಿ ಎಂಥದಾ ಪೋಲಿಸರ ಜತೆ ಇದ್ದಿದ್ಯಡಲಾ, ಏನಾತ ನಿಂಗೆ?!’  ನನಗೆ ಏನು ಅರ್ಥವಾಗ್ಲಿಲ್ಲ. ಕೊನೆಗೆ ಅಮ್ಮನೇ ವಿಷಯ ವಿವರಿಸಿದಳು…ಹುಂ, ಹೌದೆ ಅಮ, ಒಂದು ಹುಡುಗಿಗೆ ಚುಡಾಯಿಸಿದ್ದಕ್ಕೆ  ಪೋಲಿಸರು ಎಳ್ಕಂಡು ಹೋಗಿದ್ದ ಅಂತಾ ಅಮ್ಮನಿಗೆ ರೈಲು ಹತ್ತಿಸಿದರೂ, ಕೊನೆಗೆ ವಾಸ್ತವ ವಿವರಿಸಿ ಸಮಾಧಾನ ಪಡಿಸುವಾಗ ಸುಸ್ತಾಗಿದ್ದೆ. ಆದ್ರೂ ಅಮ್ಮನಿಗೆ ನನ್ನ ಮೇಲೆ ನಂಬಿಕೆ ಬಂದಂತೆ ಕಾಣಲಿಲ್ಲ! ಅಷ್ಟರ  ನಂತರ ಅವಾಂತರ ಅಶೋಕಣ್ಣನಾದ.

ಅವನೇನಾದ್ರೂ ನಾನು ಗಾಂಧಿ ನಗರದ ಗಲ್ಲಿಯಲ್ಲಿ ನಿಂತಿದ್ದನ್ನು  ನೋಡಿದ್ರೆ ಅನ್ನೋ  ತಲೆಹರಟೆ ಪ್ರಶ್ನೆಯೊಂದು ಮನದೊಳಗೆ ಉದ್ಭವವಾಯಿತು! ಅವನೇ ಬೇಕು ಅಂತೇನಿಲ್ಲ…ಊರು ಕಡೆಯ ಯಾರೂ ನೋಡಿದ್ರೂ ಸಾಕಿತ್ತು…ಅಂದುಕೊಳ್ಳುವಾಗ ನನ್ನ ಉಡುಪಿ ರೂಮಿನ ಗೆಳೆಯ ವಿಶ್ವಾಸನಿಗಾದ ಇಂಥದ್ದೇ ಒಂದು ಅವಾಂತರ ನೆನಪಾಯಿತು. ನಗು ಉಕ್ಕಿ ಬಂತು, ಟ್ರಾಫಿಕ್ಕು ಕ್ಲಿಯರ್ ಆಗಿರಬಹುದೆಂಬ ಆಲೋಚನೆಯೂ ಶುರುವಾಯಿತು. ಮತ್ತೆ  ಮೆಜೆಸ್ಟಿಕ್ ಕಡೆಗೆ ಹೆಜ್ಜೆ ಹಾಕಿದೆ. ಅಂದುಕೊಂಡಂತೆ, ಬಸ್‌ಗಳು ಬುರುಗುಡುತ್ತ ಓಡಲು ಶುರುವಿಟ್ಟಿದ್ದವು…

Read Full Post »

Older Posts »