ಅದು ಉಡುಪಿ ರಥಬೀದಿಯಲ್ಲಿರುವ ಮಠವೊಂದರ ಜಗುಲಿ. ಅಷ್ಟಮಠದಲ್ಲಿನ ಶ್ರೀಗಳೊಬ್ಬರು ಶಂಕರಾಚಾರ್ಯರಿಗೆ ಬಹಿರಂಗವಾಗಿ ಬೈದರಂತೆ ಎಂಬಂಥ ಸುದ್ದಿ ಬಿಸಿ ಬಿಸಿ ಚರ್ಚೆಯಾಗುತ್ತಿತ್ತು. ‘ಸ್ವಾಮಿಜಿನಕ್ಳು ಪೂರ ಅಂಚ ಮಾಂತ ಪಾತೆರೆಗ್ ಇದ್ದಿಯತ್ತ ಮಾರಾಯ(ಸ್ವಾಮಿಗಳು ಆ ರೀತಿ ಮಾತನಾಡಬಾರದು)’ ಹಾಗಂತ ಕೆಲವರು ಹೇಳುತ್ತಿದ್ದರು. ‘ಅಡ್ಡ ನಾಮದಕ್ಲೇಗ್ ಅಂಚಾನೆ ಪಣೊಡ್ಯ. ಇದ್ಯಾಂಡ್ ಅಕ್ಲೇಗ್ ಬುದ್ದಿ ಬರ್ಪುರಿ…(ಅಡ್ಡ ನಾಮದವರಿಗೆ ಆ ರೀತಿಯೇ ಹೇಳಬೇಕು, ಇಲ್ಲವೆಂದರೆ ಅವರಿಗೆ ಬುದ್ಧಿ ಬರುವುದಿಲ್ಲ)’ ಎಂದು ಮತ್ತೊಂದಷ್ಟು ಮಂದಿ ಹೇಳುತ್ತಿದ್ದರು. ಇಂಥ ವಾದ-ವಿವಾದ ರಥಬೀದಿಗೆ ಹೊಸತೇನಲ್ಲ. ಸುಮಾರು ೫ ವರ್ಷಗಳ ಕಾಲ ನಾವೆಲ್ಲ ಇಂಥ ಅದೆಷ್ಟೋ ಅರ್ಥವಿಲ್ಲದ ಚರ್ಚೆಗಳನ್ನು ನೋಡಿದ್ದೇವೆ. ಮಠದಲ್ಲಿ ಬಿಟ್ಟಿಯಾಗಿ ಹಾಕಿದ ಭೂರಿ ಭೋಜನ ಕರಗುವವರೆಗೂ ಕೆಲವರು ಇಂಥ ಈ ವಾದ-ವಿವಾದಲ್ಲಿ ಮಗ್ನರಾಗಿರುತ್ತಾರೆ! ಬಹುಶಃ ಅಡ್ಡ ನಾಮದ ಮಠಗಳಿಗೆ ಭೇಟಿ ಕೊಟ್ಟರೆ, ಅಲ್ಲೂ ಇಂಥದ್ದೆ ಚರ್ಚೆ ನಡೆಯುತ್ತಿರಬಹುದೆಂದು ಭಾವಿಸಿ ಸುಮ್ಮನಾಗುತ್ತಿದ್ದೆವು.
ಹೌದು, ಮಠ-ಮಠಗಳ ನಡುವಣ ಈ ಕಲಹ ಹೊಸತೇನಲ್ಲ. ಇತ್ತೀಚೆಗಷ್ಟೆ ಓಂಕಾರೇಶ್ವರ ಮಠದ ಉತ್ತರಾಧಿಕಾರಿ ನೇಮಕಕ್ಕಾಗಿ ಸಮಾಜದ ೨ ಪ್ರತಿಷ್ಠಿತ ಮಠಗಳು ಬೀದಿಗಿಳಿದು ಹೊಡೆದಾಡಿದ್ದನ್ನು ನಾವೆಲ್ಲ ಕಂಡಿದ್ದೇವೆ. ದೇವಸ್ಥಾನವೊಂದರ ಪಾರುಪತ್ಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಮಠಗಳ ಕುರಿತು ಸಾಕಷ್ಟು ಓದಿದ್ದೇವೆ. ನಮ್ಮ ಈ ಮಠಾಧೀಶರಿಗೆಲ್ಲ ಅದೇನಾಗಿದೆಯೋ ಅರ್ಥವಾಗುತ್ತಿಲ್ಲ. ಒಂದು ಕಾಲದಲ್ಲಿ ಅನೇಕ ಸಂಸಾರಗಳ ನಡುವಣ ಕಲಹ ಬಗೆಹರಿಸುವುದು, ಆಸ್ತಿ ವಿವಾದಕ್ಕಾಗಿ ನಡೆಯುತ್ತಿದ್ದ ಹೊಡೆದಾಟ ತಪ್ಪಿಸುವುದು ಮೊದಲಾದ ಕಾರ್ಯಗಳನ್ನು ನಮ್ಮ ಸ್ವಾಮಿಜಿಗಳು ಮಾಡುತ್ತಿದ್ದರು. ಮಠಗಳು ಎಂದರೆ ನ್ಯಾಯಪೀಠಗಳಂತಿದ್ದವು. ಪಂಚಾಯ್ತಿಯಲ್ಲಿ ಬಗೆಹರಿಯದ ಕಲಹಗಳನ್ನು ಸ್ವಾಮಿಜಿಗಳ ಬಳಿ ಪರಿಹರಿಸಿಕೊಳ್ಳಬಹುದು ಎಂಬಂಥ ನಂಬಿಕೆ ಇತ್ತು.
ಆದರೆ ಇವತ್ತು?!
ಸ್ವಾಮೀಜಿಗಳ ಸಮಸ್ಯೆ, ಹೊಡೆದಾಟ, ಕಲಹ ಬಗೆಹರಿಸಲು ನ್ಯಾಯಾಲಯ, ಆರಕ್ಷಕರು ಬೇಕಾಗಿದ್ದಾರೆ. ಸ್ವಾಮೀಜಿಗಳ ಬೆನ್ನಿಗೆ ರಾಜಕಾರಣಿ ಇಲ್ಲ ಎಂದಾದರೆ, ಆ ಜನಾಂಗ ಕೆಲಸಕ್ಕೆ ಬಾರದೆಂಬ ಸ್ಥಿತಿ! ಮಂತ್ರಿ ಮಹೋದಯರು ಮಠಕ್ಕೆ ಭೇಟಿ ನೀಡದಿದ್ದರೆ, ಅದಕ್ಕಿಂತ ಹೆಚ್ಚಾಗಿ ಅನುದಾನ ಘೋಷಿಸದಿದ್ದರೆ, ನಮ್ಮ ಮಠಾಧೀಶರಿಗೆ ಎಲ್ಲಿಲ್ಲದ ಬೇಸರ. ನಿಜ, ಕಾಲಕ್ಕೆ ತಕ್ಕಂತೆ ಮಠಗಳು, ಸ್ವಾಮೀಜಿಗಳೂ ಬದಲಾಗಬೇಕು. ಆದರೆ ಆ ಬದಲಾವಣೆ ಎಲ್ಲಿಯವರೆಗೆ ಬೇಕು ಮತ್ತು ಯಾವ ತರಹದ್ದಾಗಿರಬೇಕು ಎಂಬುದು ಮುಖ್ಯವಾದ ಪ್ರಶ್ನೆ.
ನಮ್ಮಲ್ಲಿ ಸ್ವಾಮೀಜಿಗಳು ಮತ್ತು ಮಠಗಳ ಕುರಿತು ವಿಪರೀತ ನಂಬಿಕೆ. ಸ್ವಾಮೀಜಿಗಳ ಕೈಯಿಂದ ಸಿಕ್ಕ ಅಕ್ಕಿ ಕಾಳು ಮಂತ್ರಾಕ್ಷತೆ. ನೀರು ತೀರ್ಥ…ಈ ನಂಬಿಕೆಗೂ ಒಂದು ಕಾರಣವಿದೆ. ಮಠಾಧೀಶರು ಎಂದರೆ ದೇವರ ಮತ್ತೊಂದು ಅವತಾರ ಎಂಬಂತೆ ಆರಾಸುತ್ತೇವೆ. ಯಾಕಂದ್ರೆ ಅವತ್ತಿನ ಕಾಲದಲ್ಲಿ ಈ ಮಠಾಶರ ಜೀವನ ಶೈಲಿಯೇ ಹಾಗಿತ್ತು. ಮಠ ಅಂದಕೂಡಲೆ ನನಗಂತೂ ನೆನಪಿಗೆ ಬರುವುದು ಸಾಗರ ತಾಲೂಕಿನ ವರದಹಳ್ಳಿ ಸಮೀಪ ನೆಲೆಸಿದ್ದ ಶ್ರೀಧರ ಸ್ವಾಮಿಗಳ ಕುರಿತು ಅಪ್ಪ ಹೇಳುತ್ತಿದ್ದ ಕಥೆಗಳು. ಅವರು ಮೂರೇ ತುತ್ತು ಊಟ ಮಾಡುತ್ತಿದ್ದರಂತೆ. ಅದಕ್ಕೆ ಅಪ್ಪ ಹೇಳಿದ ಕಾರಣ ತುಂಬಾ ಚೆನ್ನಾಗಿದೆ. ಸ್ವಾಮಿಗಳು ಎಲ್ಲಾ ಗುಣದಿಂದ ಮುಕ್ತಿ ಹೊಂದಿರಬೇಕು ಎಂಬ ಕಲ್ಪನೆ ನಮ್ಮ ಧರ್ಮದ್ದು. ಆಹಾರ ಅತಿಯಾಗಿ ಸೇವಿಸಿದರೆ ಸ್ವಾಭಾವಿಕವಾಗಿ ರಜೋ ಮತ್ತು ತಮೋ ಗುಣಗಳು ದೇಹವನ್ನು ಅಂಟಿಕೊಳ್ಳುತ್ತವೆ. ಆಲಸ್ಯ ಬರುತ್ತದೆ. ಹಾಗಾಗಿ ಹಿಂದಿನ ಕಾಲದ ಸನ್ಯಾಸಿಗಳು ಮೂರೇ ತುತ್ತು ಊಟ ಮಾಡುತ್ತಿದ್ದದ್ದು…ವಾಹ್! ವೈಜ್ಞಾನಿಕವಾಗಿಯೂ ಒಪ್ಪಬಹುದಾದ ಪರಿಕಲ್ಪನೆ ಇದು.
ಭಿಕ್ಷುಕರಿಗೆ, ಬಡವರಿಗೆ ಕೈಮೊಗೆದು ಹಣ್ಣು-ಹಂಪಲು, ಕಂಬಳಿ, ಚಾಪೆ ಕೊಡುತ್ತಿದ್ದ ಶ್ರೀಧರರ ಕುರಿತು ಕೇಳಲು ನನಗೆ ಇವತ್ತಿಗೂ ಆಸಕ್ತಿ. ಅಪ್ಪ , ಭಕ್ತಿಯ ಪರಾಕಾಷ್ಠೆಯಲ್ಲಿ ಅವರನ್ನು ಹೊಗಳುತ್ತಿದ್ದಾರೇನೋ ಅನ್ನಿಸುತ್ತಿತ್ತು. ಆದರೆ, ಇಂಥ ಶ್ರೀಧರರ ಕುರಿತು ಇನ್ನೋರ್ವ ಯತಿಗಳಾದ ಸಚ್ಚಿದಾನಂದರು ಬರೆದ ಪುಸ್ತಕ ನಿಜಕ್ಕೂ ಅದ್ಭುತವಾಗಿದೆ. ಇವತ್ತು ನಮ್ಮ ಮಠಗಳು ಭಿಕ್ಷುಕರಿಗೆ ಹಣ್ಣು ಕೊಡುವುದಿರಲಿ, ಹತ್ತಿರಕ್ಕೂ ಸೇರಿಸುವುದಿಲ್ಲ. ಸ್ವಾಮೀಜಿಗಳಿಗೆ/ಅವರ ಪರಿವಾರಕ್ಕೆ ಸೇವಿಸಲು ದುಡ್ಡು ಕೊಟ್ಟು ಹಣ್ಣು ತರಬೇಕಾದ ಸ್ಥಿತಿಯಿದೆ. ಹೀಗಿರುವಾಗ ಅವರಾದರೂ ಹೇಗೆ ಹಣ್ಣು ಹಂಪಲು ಕೊಟ್ಟಾರು ಹೇಳಿ?! ಇವತ್ತಿನ ಯತಿಗಳೊಬ್ಬರು ಭಿಕ್ಷುಕರನ್ನು ಹತ್ತಿರಕ್ಕೆ ಕರೆದು ಹಣ್ಣು/ಊಟ ಕೊಟ್ಟ ನಿದರ್ಶನ ಎಲ್ಲಾದರೂ ಇದೆಯಾ? ಹಸು, ನಾಯಿಗಳಂಥ ಪ್ರಾಣಿಗಳಿಗೂ ತೀರ್ಥ ಕುಡಿಸಿದ ದಾಖಲೆ ಸಿಗಬಹುದಾ? ಶ್ರೀಧರರ ಜೀವನ ಚರಿತ್ರೆಯೊಂದಿಗೆ ಇಂದಿನ ಸ್ಥಿತಿ ಅವಲೋಕಿಸಿದರೆ ನಿಜಕ್ಕೂ ಬೇಸರವಾಗುತ್ತದೆ.
ಸ್ವಾಮೀಜಿಗಳಿಗೆ ಅಡ್ಡ-ಉದ್ದ-ಸಾಷ್ಟಾಂಗ ನಮಸ್ಕಾರ ಮಾಡುವ ಪದ್ಧತಿ ನಮ್ಮಲ್ಲಿದೆ. ಅವರ ಪಾದ ತೊಳೆದು ಪೂಜೆ ಮಾಡುವ ಭಕ್ತರೂ ಇದ್ದಾರೆ. ಶ್ರೀಗಳು ಎಂದರೆ ಎಲ್ಲವನ್ನೂ ಜಯಿಸಿ ನಿಂತವರು, ಅವರಿಗೆ ರಾಗ-ದ್ವೇಷಗಳಿಲ್ಲ, ಯಾವುದೇ ಆಕ್ಷೇಪಾರ್ಹ ಗುಣಗಳಿಲ್ಲ, ನಿರ್ಲಿಪ್ತದ ಮತ್ತೊಂದು ರೂಪವೇ ಸನ್ಯಾಸ ಎಂಬಂಥ ನಂಬಿಕೆ ನಮ್ಮಲ್ಲಿದೆ. ಮನುಷ್ಯನಲ್ಲಿ ಇರಬಹುದಾದ ಯಾವ ಗುಣವೂ ಅವರಲ್ಲಿ ಕಾಣುವುದಿಲ್ಲ. ಹಾಗಾಗಿ ಸಾಮಾನ್ಯರಿಗಿಂತ ಶ್ರೀಗಳು ಶ್ರೇಷ್ಠರಾಗುತ್ತಾರೆ. ಆ ಕಾರಣಕ್ಕಾಗಿಯೇ ನಾವು ಸ್ವಾಮೀಜಿಗಳ ಪಾದ ತೊಳೆಯುತ್ತೇವೆ. ಅವರಿಗೆ ಶಿರಬಾಗಿ ಶರಣು ಹೋಗುತ್ತೇವೆ. ಅವರು ನೀಡಿದ ಅಕ್ಕಿ ಕಾಳನ್ನೂ ಮಂತ್ರಾಕ್ಷತೆ ಎಂದು ಭಾವಿಸಿ ಸ್ವೀಕರಿಸುತ್ತೇವೆ.
ಇಂದಿನ ಬಹುತೇಕ ಸ್ವಾಮೀಜಿಗಳಿಗೂ ಮನುಷ್ಯರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ ಅನ್ನಿಸುತ್ತಿದೆ. ರಾಗ-ದ್ವೇಷಗಳಿಲ್ಲ ಎಂದಾದ ಮೇಲೆ ಮಠ-ಮಠಗಳ ನಡುವೆ ಕಲಹ ಯಾಕೆ ಏರ್ಪಾಡಾಗುತ್ತದೆ ಅಲ್ವಾ? ಮಠಾಧೀಶರು ಆಸ್ತಿ ವಿವಾದಕ್ಕಾಗಿ, ಪೀಠಾಧಿಪತಿಗಳ ನೇಮಕಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾದ ಸ್ಥಿತಿ ಏಕೆ ಎದುರಾಗುತ್ತದೆ? ಇದನ್ನೆಲ್ಲ ನೋಡಿದಾಗ ಶ್ರೀಗಳಲ್ಲಿ ಸಾಮಾನ್ಯರಿಗಿಂತ ಅತೀತವಾದ ಯಾವ ಗುಣವೂ ನನಗಂತೂ ಕಾಣುತ್ತಿಲ್ಲ. ಹಾಗಂದ ಮೇಲೆ ಅವರಿಗ್ಯಾಕೆ ಕಾಲಿಗೆ ಬೀಳಬೇಕು? ಪಾದ ತೊಳೆದು ಪೂಜಿಸಬೇಕು? ಪಲ್ಲಕ್ಕಿ ಮೇಲೆ ಮೆರವಣಿಗೆ ಮಾಡಬೇಕು ಎಂಬಿತ್ಯಾದಿಯಾಗಿ ಕೇಳಿದರೆ ಕರ್ಮಠರು ನಮ್ಮ ಮೇಲೆ ಎಗರಿ ಬೀಳುತ್ತಾರೆ. ಪತ್ರಕರ್ತರು, ಬುದ್ಧಿಜೀವಿಗಳು ಎಲ್ಲಾ ಹೀಗೆ…ಅಂದುಬಿಡುತ್ತಾರೆ!
ಸ್ವಾಮೀಜಿಗಳ ಕುರಿತು ಮಾತನಾಡುವುದೇ ಒಂದು ಕಾಲದಲ್ಲಿ ಮಹಾಪರಾಧವಾಗಿತ್ತು. ಶ್ರೀಗಳು ಮುನಿಸಿಕೊಂಡು ಪೀಠದಲ್ಲಿ ಕುಳಿತು ಶಾಪ ಕೊಟ್ಟರೆ, ಆ ಪಾಪ ಎಲ್ಲಿಗೆ ಹೋದರೂ ಪರಿಹಾರವಾಗುವುದಿಲ್ಲ ಎನ್ನುತ್ತಿದ್ದರು ನಮ್ಮ ಕಡೆ. ‘ಹರ ಮುನಿದರೆ ಹರಿ ಕಾಯುವನು, ಹರಿ ಮುನಿದರೆ ಗುರು ಕಾಯುವನು, ಗುರು ಮುನಿದರೆ…?’ ಎಂಬ ಮಾತು ಕೂಡ ಇತ್ತು. ರಾಜಕಾರಣಿಗಳ ಬೆನ್ನು ಬಿದ್ದಿರುವ, ಭರ್ತಿ ಕಾಣಿಕೆ ಹಾಕುವವರಿಗೆ ಮನತುಂಬ ಹರಸುವ ಒಂದಷ್ಟು ಸ್ವಾಮೀಜಿಗಳನ್ನು ಕಂಡಾಗ, ಅವರ ಪಾಪವನ್ನೇ ಯಾರಾದ್ರೂ ಪರಿಹರಿಸಬೇಕಿದೆಯೇನೋ ಅನ್ನಿಸುತ್ತದೆ.
ಚಾತುರ್ಮಾಸ ವ್ರತದಲ್ಲಿ ಭಕ್ತರಿಗೆ ಧರ್ಮೋಪದೇಶವಿರುತ್ತದೆ. ಒಮ್ಮೆ ಆ ಉಪದೇಶ ಕೇಳಲು ಹೋಗಿ ನೋಡಿ…ದಿಟ್ಟೊ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರ ಭಾಷಣವಿದ್ದಂತೆ! ಇನ್ನು ಮೊದಲಿನ ಹಾಗೆ ಅಧ್ಯಯನ ಮಾಡುವ, ಪೂಜೆ ಪುನಸ್ಕಾರ ಮಾಡುವ, ಧರ್ಮ ಕಾರ್ಯದಲ್ಲಿ ಮಗ್ನರಾಗಿರುವ ಯತಿಗಳ ಪ್ರಮಾಣವೂ ಕಡಿಮೆ. ಸಿನಿಮಾದಿಂದ ಹಿಡಿದು ಎಲ್ಲಾ ಬಗೆಯ ಅಂಗಡಿ ಮುಗ್ಗಟ್ಟುಗಳ ಉದ್ಘಾಟನೆಗೂ ಮಠಾಧೀಶರು ಲಭ್ಯವಿದ್ದಾರೆ!
ಹಾಗಂತ ಎಲ್ಲರೂ ಹೀಗೆಯೇ ಎನ್ನಲು ಸಾಧ್ಯವಿಲ್ಲ. ಸ್ವಾಮೀಜಿಗಳು ಪೂರ್ತಿಯಾಗಿ ‘ಮಠ ಹತ್ತಿ ಹೋಗಿದ್ದಾರೆ’ ಎಂಬ ವಾದ ಸರಿಯಲ್ಲ. ಧರ್ಮದಿಂದ ದೂರ ಹೊರಟವರನ್ನು ವಾಪಸ್ ತರುವ ಯತ್ನ ಮಾಡುತ್ತಿರುವಂಥ ಹರಿಹರಪುರದ ಶ್ರೀಗಳಂಥವರೂ ಇದ್ದಾರೆ. ‘ಸ್ವಾಮೀಜಿ ಮಠದ ಕುರಿತು ಏನಾದ್ರು ಬರೆಯಬಹುದಾ’ ಅಂತಾ ಕೇಳಿದ್ರೆ, ‘ನಾವು ಪ್ರಚಾರದಿಂದ ದೂರ’ ಎಂದು ಖಡಕ್ ಆಗಿ ಹೇಳುವ ಅಂತ ಶ್ರೀಗಳು ಸಿಗುವುದು ಅಪರೂಪ.
ಮಗಳ/ಮಗನ ಮದ್ವೆ ಮಾಡುತ್ತೇನೆ, ಮಕ್ಕಳಿಗೆ ಓದಿಗೆ ದುಡ್ಡು ಬೇಕು, ಕ್ಯಾನ್ಸರ್ ಚಿಕಿತ್ಸೆಗೆ ನೆರವು…ಹೀಗೆ ಯಾರು ಬಂದರೂ ಯಾವತ್ತೂ ಬರಿಗೈನಲ್ಲಿ ಕಳುಹಿಸದ ಪೇಜಾವರ ಶ್ರೀಗಳು ಕೆಲವಷ್ಟು ಕಾರಣಕ್ಕೆ ಇಷ್ಟವಾಗುತ್ತಾರೆ. ‘ಏ ಪೆರಂಪಳ್ಳಿ…’ಎಂದು ಶಿಷ್ಯರನ್ನು ಕೂಗುತ್ತಾ ಇರುವ ಪೇಜಾವರು ಶ್ರೀಗಳು ಮಠದಲ್ಲಿ ಇದ್ದಾರೆ ಎಂದರೆ, ನೆರವು ಕೇಳಿಕೊಂಡು ಬರುವ ಮಂದಿ ತಪ್ಪಿದ್ದಲ್ಲ ಎಂದೇ ಅರ್ಥ. ಇದೇ ಪೇಜಾವರರು, ಜನ ಬೆಂಬಲ ನೀಡಲಿಲ್ಲ ಎಂಬ ಕಾರಣ ನೀಡಿ ಪಟ್ಟು ಹಿಡಿದ ನಾಗಾರ್ಜುನ ಹೋರಾಟವನ್ನು ದಿಢೀರನೆ ಕೈಬಿಟ್ಟಿದ್ದನ್ನು ನೆನಪಿಸಿಕೊಂಡರೆ ಬೇಜಾರಾಗುತ್ತದೆ. ಶತಮಾನದಷ್ಟು ಹಳೆಯದಾದದ ೨ ಏಕಾದಶಿ ಕಾಳಗ ನಿಲ್ಲಿಸದಿದ್ದಾಗ ದುಃಖವಾಗುತ್ತದೆ. ಮಠಾಧೀಶರು ಸಮುದ್ರ ದಾಟುವುದು ಸರಿಯಲ್ಲ ಎಂಬ ಇವರ ವಾದವನ್ನು ಯಾವ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಸಮುದ್ರದಲ್ಲಿ ಈಜುವುದು, ಡ್ರಂ ಬಾರಿಸುವುದು, ತೆಂಗಿನ ಮರ ಹತ್ತುವುದು ಎಲ್ಲವೂ ಸರಿ ಎಂದಾದರೆ, ಧರ್ಮ ಪ್ರಚಾರಕ್ಕಾಗಿ ಸಮುದ್ರ ದಾಟುವುದರಲ್ಲಿ ತಪ್ಪೇನಿದೆ? ಯತಿಗಳೊಬ್ಬರು ಅಧಿಕೃತ ಮ…ಳು, ಅನಧಿಕೃತ ಪ…ರನ್ನು ಹೊಂದಬಹುದಾ ಎಂಬ ಪ್ರಶ್ನೆಗೆ ಉಗ್ರ ಹೋರಾಟದ ನಡೆಸುತ್ತೇವೆ ಎಂಬ ಉತ್ತರ ಬಂದಿತ್ತು. ಹೋರಾಟ ಎಲ್ಲಿ ನಡೆಯುತ್ತಿದೆಯೋ ಆ ಕೃಷ್ಣನೇ ಬಲ್ಲ!
ಇಲ್ಲಿ ಸಮುದ್ರ ದಾಟುವುದು ಮತ್ತು ಅದರ ಹಿಂದಿನ ನಂಬಿಕೆ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿಲ್ಲ ಅಥವಾ ಯಾರನ್ನೂ ಸಮರ್ಥಿಸುತ್ತಿಲ್ಲ. ಅದಕ್ಕಿಂತ ದೊಡ್ಡ ಪ್ರಮಾದಗಳು ನಡೆಯುತ್ತಿರುವಾಗ, ಇಂಥ ಕಾರಣಕ್ಕಾಗಿ ಹೋರಾಟ ಮಾಡುವುದು ಎಷ್ಟು ಸಮಂಜಸ ಎಂಬುದಷ್ಟೆ ಇದರ ಹಿಂದಿನ ಆಶಯ. ಇದೇ ಸಮುದ್ರದ ನೆವ ಇಟ್ಟುಕೊಂಡು ಪೇಜಾವರ ಶ್ರೀಗಳಿಂದ ಅಷ್ಟ ಮಠದ ಯಾವ ಯತಿಗಳೂ ಪುತ್ತಿಗೆ ಪರ್ಯಾಯದ ಮೆರವಣಿಗೆ/ದರ್ಬಾರಿನಲ್ಲಿ ಭಾಗವಹಿಸಲಿಲ್ಲ. ಯತಿಗಳು ತೀರಾ ಸಣ್ಣ ಮಕ್ಕಳಂತೆ ಹಠ ಹಿಡಿಯುವುದು ಸರಿಯಾ? ಇದರಿಂದ ಭಕ್ತ ಸಮೂಹಕ್ಕೆ ಸಿಗುವ ಸಂದೇಶವಾದರೂ ಏನು?
ಯಾರ ಮಾತನ್ನು ಕೇಳದ ಸ್ಥಿತಿಯಲ್ಲಿ ನಮ್ಮ ಅನೇಕ ಮಠಗಳಿವೆ. ರಾಜಾಕಾರಣಿಗಳು, ಸಾಹಿತಿಗಳು, ಮಾಧ್ಯಮದ ಮಂದಿಗೆಲ್ಲ ಕಾಲ ಕಾಲಕ್ಕೆ ತೀರ್ಥ-ಪ್ರಸಾದ ನೀಡಿ ಸಂಭಾಳಿಸುವುದು ನಮ್ಮ ಅನೇಕ ಯತಿಗಳಿಗೆ ಕರಗತವಾಗಿದೆ. ಹೀಗಾಗಿ ಈ ಬರಹ ಹೊಸ ಅಲೆಯನ್ನು ಮೂಡಿಸುತ್ತದೆ ಎಂಬ ಭ್ರಮೆಯಂತೂ ಖಂಡಿತ ಇಲ್ಲ. ಇಷ್ಟಾದರೂ ಜನ ಪಾದ ತೊಳೆದು ಸಾಷ್ಟಾಂಗ ನಮಸ್ಕಾರ ಮಾಡುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ನಿಜಕ್ಕೂ ಭಾರತೀಯರ ಔದಾರ್ಯತೆ ಮತ್ತು ನಂಬಿಕೆ ದೊಡ್ಡದು…
ಮಠಗಳು ಈಗಿನ ನಮ್ಮ ಸಮಾಜಕ್ಕೆ ಬೇಕೆ ಎನ್ನುವದು ಯಕ್ಷಪ್ರಶ್ನೆಯಾಗಿದೆ. ಮಠಗಳು ಇಲ್ಲದೆ ಹೋದರೆ, ಸಾಮಾನ್ಯ ಜನರಲ್ಲಿಯ ಧಾರ್ಮಿಕ ಆಚರಣೆಗಳು ನಿಂತು ಹೋಗಬಹುದು. ಆದರೆ, ಮಠಗಳಿಂದಾಗಿಯೆ ಧಾರ್ಮಿಕ ದಂಭಾಚಾರವೂ ಬೆಳೆಯುತ್ತಿದೆ. ಒಟ್ಟಿನಲ್ಲಿ ಮಠಗಳಲ್ಲಿ ಬದಲಾವಣೆಯಾಗುವದು ಅವಶ್ಯವಿದೆ. ನಿಮ್ಮ ಲೇಖನ ವಿಚಾರಪೂರ್ಣವಾಗಿದೆ.
ಮಠಗಳು ಜಾತಿ ರಾಜಕಾರಣದ ರಾಜಧಾನಿಗಳಾಗಿವೆ. ಸಮಾಜವನ್ನು ಜಾತಿಗಳ ಆಧಾರದ ಮೇಲೆ ವಿಘಟಿಸುವದರಲ್ಲಿ ಮಠಗಳ ಪಾತ್ರ ದೊಡ್ಡದು
ಮಾರ್ಮಿಕ ಚಿಂತನೆ.