ಈ ಬರಹದಿಂದ ಎಳ್ಳು ಕಾಳಷ್ಟೂ ಪ್ರಯೋಜನವಿಲ್ಲ ಎಂಬುದು ಖಚಿತವಾಗಿ ಗೊತ್ತಿದ್ದರೂ, ಇದನ್ನು ಬರೆಯದೇ ಇರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಇತ್ತಿಚೇಗಂತೂ ಬ್ಲಾಗ್ ಲೋಕಕ್ಕೆ ಕಾಲಿಡಲು ಮನಸ್ಸಾಗುತ್ತಿಲ್ಲ. ಕೆ.ಎನ್ ವರ್ಡ್ಪ್ರೆಸ್ ತಾಣ ಕ್ಲಿಕ್ ಮಾಡಿದರೆ, ಸೆಕ್ಸ್, ಅನಾಮಧೇಯ ಬ್ಲಾಗ್ಗಳೇ ಕಣ್ಣಿಗೆ ರಾಚುತ್ತಿದೆ.
ಬ್ಲಾಗ್ ಲೋಕದಲ್ಲಿ ವಿವಾದ ಹುಟ್ಟುಹಾಕಿದ, ವೈಯಕ್ತಿಕ ನಿಂದನೆಗೆ ಶುರು ಮಾಡಿದ ಮೊದಲಿಗ ಎಂಬ ಆರೋಪ ನನ್ನ ಮೇಲೆ ಆವತ್ತಿನಿಂದ ಈವತ್ತಿನವರೆಗೂ ಇದೆ! ನಿಜ, ಕೆಲ ಮಂದಿಯ ಕುರಿತಾದ ಅಸಮಧಾನವನ್ನು ನಾನು ಬ್ಲಾಗ್ನಲ್ಲಿ ತೊಡಿಕೊಂಡಿದ್ದಿದೆ. ಹಾಗಂತ ನಾನು ನನ್ನ ವೈಯಕ್ತಿಕ ಉದ್ದೇಶದಿಂದ ಯಾರನ್ನು ಬೈದಿಲ್ಲ. ನನ್ನ ಬೈಗುಳ ಅಥವಾ ನೋವಿನ ಹಿಂದೆ ನನ್ನಂಥ ಸಾಕಷ್ಟು ಜನರ ನೋವು ಖಂಡಿತವಾಗಿಯೂ ಇತ್ತು. ಬೈದು ಬ್ಲಾಗ್ನ ಹಿಟ್ಸ್ ಹೆಚ್ಚಿಸಿಕೊಳ್ಳುವ ಅವಶ್ಯಕತೆ, ತೆವಲು ನನಗಂತೂ ಇಲ್ಲ. ಯಾಕೆಂದರೆ ಬೈಯ್ಯುವುದರಿಂದ ಅಪಾಯಗಳೇ ಹೆಚ್ಚು. ನನ್ನ ಗಮನಕ್ಕೆ ಬಾರದೇ ನನ್ನ ವೈಯಕ್ತಿಕ ಲಾಭಕ್ಕೆ ಬೈದದ್ದು ಇದ್ದಲ್ಲಿ ಖಂಡಿತವಾಗಿಯೂ ನಾನಂತೂ ಕ್ಷಮೆ ಯಾಚಿಸಲು ಸಿದ್ಧ.
ನಾವು ಯಾರನ್ನೇ ಬೈದರೂ, ಅದರಿಂದ ಆತನ ಸುತ್ತಲಿನ ವ್ಯವಸ್ಥೆಯಲ್ಲಿ ಸ್ವಲ್ಪವಾದರೂ ಬದಲಾಗಬಹುದು ಎಂಬ ಆಶಯಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇನ್ನು ರಾಷ್ಟ್ರೀಯ ವಿಚಾರದಲ್ಲಿ ಮಾತ್ರ ಯಾವತ್ತೂ ರಾಜಿಯಿಲ್ಲ. ಈ ವಿಷಯದಲ್ಲಿ ನಾನು ಬೊಬ್ಬೆ ಹೊಡೆದ ಕೂಡಲೇ ವ್ಯವಸ್ಥೆ ಸರಿಯಾಗುವುದಿಲ್ಲ ಎಂಬುದು ಖಂಡಿತವಾಗಿಯೂ ಗೊತ್ತಿದೆ. ಆದರೂ ಇದೂ ಒಂಥರ ತೆವಲೇ ಬಿಡಿ!
ಕುಂಕುಮ ಇಟ್ಟು, ದೇಶದ ಪರ ಮಾತಾಡಿ, ಖಾದಿ ತೊಟ್ಟ ಕೂಡಲೇ ಅವರೆಲ್ಲ ಸಂಘದವರಿರಬೇಕು ಎಂದು ಭಾವಿಸುವ ನಮ್ಮ ಸಮಾಜದ ಮನೋರೋಗವನ್ನು ಯಾರಿಂದಲೂ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಅಂತವರ ಕುರಿತು ತಲೆಕೆಡಿಸಿಕೊಳ್ಳುವುದು ಇಲ್ಲ. ಯಾಕೆಂದರೆ ಹಾಗೆ ಬೊಬ್ಬೆ ಹೊಡೆಯುವ ವಿಚಾರವಾದಿಗಳ ಕಾರ್ಯಕ್ರಮ, ದೀಪ ಬೆಳಗುವ ಮೂಲಕವೇ ಉದ್ಘಾಟನೆಯಾಗುತ್ತದೆ. ದೇವಸ್ಥಾನದ ಸಂಪ್ರದಾಯದ ವಿರುದ್ಧ ಬೊಬ್ಬೆ ಹೊಡೆಯುವವರೇ, ದೇವಾಲಯಕ್ಕೆ ಹೋಗಿ ಮೊದಲು ಅಡ್ಡ ಬೀಳುವುದು! ಮಾತಾಡುವುದು ಮಾತ್ರ ನಾವಿನ್ನು ಗೊಡ್ಡು ಸಂಪ್ರದಾಯದಲ್ಲಿದ್ದೇವೆ, ನಮ್ಮ ಧರ್ಮ, ಆಚರಣೆಗಳು ಸರಿಯಿಲ್ಲ, ಬುದ್ದನಲ್ಲಿರುವುದು, ಮಹಮ್ಮದ್ ಬರೆದ ಖುರಾನಿನಲ್ಲಿರುವುದೇ ಸರಿಯಿದೆ ಅಂತಾ! ವಿಪರ್ಯಾಸವೆಂದರೆ, ಹಾಗೆ ಮಾತಾಡುವ ಮಂದಿ ಯಾವತ್ತೂ ಮತಾಂತರವಾಗುವುದಿಲ್ಲ! ಎಷ್ಟಂದರೂ ನಮ್ಮ ದೇಶದಲ್ಲಿ ‘ಉಪದೇಶ’ ಅನ್ನುವುದು ಮಾಡಲಿಕ್ಕಾಗಿಯೇ ಇಟ್ಟ ವಸ್ತು ತಾನೇ?!
ಸೆಕ್ಸ್ ಕುರಿತಾಗಿ, ನಿಮ್ಮ ಬ್ಲಾಗ್ನಲ್ಲಿ ಬರೆದಕೊಂಡರೆ, ಅದನ್ನು ವಿರೋಸುವ ಹಕ್ಕು ನಮಗಿಲ್ಲ. ಅಲ್ಲಿ ಯಾರದ್ದೋ ಬಟ್ಟೆ ಬಿಚ್ಚಿಸಿದ್ದಕ್ಕೆ ನಾವು ಮೈ ಪರಚಿಕೊಳ್ಳುವುದರಲ್ಲಿ ಅರ್ಥವೂ ಇಲ್ಲ. ಅಂತಹದ್ದನ್ನು ಓದದೇ ಇರುವುದೊಂದೇ ಇಂಥ ಸಮಸ್ಯೆಗೆ ಪರಿಹಾರ ಎಂಬುದು ನಿಜ. ನಮ್ಮ ಸಮಾಜದ ದುರಂತವೆಂದರೆ, ಒಂದು ಒಳ್ಳೆ ವಿಚಾರಯುತ ಪತ್ರಿಕೆ ಓಡುವುದಿಲ್ಲ. ಆದರೆ,‘ಪೋಲಿ’ನ್ಯೂಸ್ಗಳ ಪ್ರಸರಣ ಸಂಖ್ಯೆ ಊಹೆಗೂ ನಿಲುಕದಷ್ಟು! ಅದೇ ಟ್ರೆಂಡು ಬ್ಲಾಗ್ ಲೋಕದಲ್ಲೂ ಶುರುವಾಗಿದೆ. ಹಾಗಂತ ನೀವು ನನ್ನದೋ, ಅಥವಾ ಬೇರೆಯವರದ್ದೋ ಬ್ಲಾಗ್ ಓದಿ ಎಂದು ಖಂಡಿತಾ ಕರೆಯುತ್ತಿಲ್ಲ. ಅಂಥ ಕೊಳಕು ಬ್ಲಾಗ್ಗಳಿಗೆ ಭೇಟಿ ಕೊಡಬೇಡಿ. ಹಿಟ್ಸ್ ಕಮ್ಮಿಯಾದಂತೆ ಅವರ ಬರವಣಿಗೆ ಆಸಕ್ತಿ ತಾನಾಗಿಯೇ ಕಮ್ಮಿಯಾಗಬಹುದು. ಅಂಥ ಬ್ಲಾಗ್ಗಳ ಬಾಗಿಲು ಮುಚ್ಚಬಹುದೇನೋ ಎಂಬುದು ನನ್ನ ಆಶಯ!
ಇನ್ನು ಪತ್ರಿಕೆ, ಮಾಧ್ಯಮಗಳು, ಕೆಲ ವ್ಯಕ್ತಿಗಳ ಕುರಿತ ವಿಮರ್ಶೆ…ಅನಾಮಧೇಯ ಹೆಸರಲ್ಲಿ ಬೈದರೆ, ‘ಕೈಲಾಗದವರು ಮೈ ಪರಚಿಕೊಂಡಿದ್ದಾರೆ’ ಅಂತಲೇ ಅಂದುಕೊಳ್ಳುವುದು ಅನಿವಾರ್ಯ. ಅಲ್ಲದೇ ಮಾಧ್ಯಮ ಲೋಕದಲ್ಲಿ ಅಭಿವೃದ್ಧಿ ಪರ ವಿಷಯಗಳಿಗೆ ಬೆಂಬಲ ನೀಡುವವರು, ಆದರ್ಶಗಳನ್ನು ಅಳವಡಿಸಿಕೊಂಡು ಬದುಕುತ್ತಿರುವವರು ಈಗಲೂ ಇದ್ದಾರೆ ಎಂಬುದನ್ನು ಮರೆಯಬಾರದು. ಮಾಧ್ಯಮದ ಕುರಿತಾಗಿ ಕಾಳಜಿಯುಳ್ಳ ಅನಾಮಧೇಯರಿಂದ, ಇಲ್ಲಿನ ಒಳ್ಳೆ ವ್ಯಕ್ತಿಗಳನ್ನು ಪರಿಚಯಿಸುವ ಯತ್ನ ಯಾಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ನಮಗೆ ಆ ಬ್ಲಾಗ್ಗಳ ಹಿಂದಿರುವ ಉದ್ದೇಶ ಅರ್ಥವಾಗಿಬಿಡುತ್ತದೆ.
ಈಗ ಜೀವ ಪಡೆದಿರುವ ವಿಮರ್ಶಕಿಗೂ, ನಿಮಗೂ ಏನಾದರೂ ಸಂಬಂಧವಿದೆಯಾ?! ಹಾಗಂತ ಕೆಲ ಮಿತ್ರರು ಕೇಳಲು ಶುರುವಿಟ್ಟಿದ್ದಾರೆ!ಆಕೆಗೂ, ನನಗೂ ಯಾವ ಬಗೆಯ ನೈತಿಕ, ಅನೈತಿಕ ಸಂಬಂಧಗಳೂ ಇಲ್ಲ ಮಾರಾಯ್ರೆ. ನಾನು ಬೈಯ್ಯವುದಾದರೆ ನೇರವಾಗಿಯೇ ಬೈಯ್ಯುತ್ತೇನೆ. ಹೊಗಳುವುದಾದರೂ ಕೂಡ. ಯಾರದ್ದೋ ತೆವಲಿಗೆ, ಹಾದರಕ್ಕೆ ಹುಟ್ಟುವ ಅನಾಮಧೇಯ ಬ್ಲಾಗ್ಗಳಿಗೂ, ಹಾದರವನ್ನೇ ಜೀವಾಳವನ್ನಾಗಿಸಿಕೊಂಡಿರುವ ನಮ್ಮ ಕೆಲ ಟ್ಯಾಬ್ಲಾಯ್ಡ್ ಪತ್ರಿಕೆಗಳಿಗೂ ಒಂಚೂರು ವ್ಯತ್ಯಾಸವಿಲ್ಲ ಎಂಬುದು ನನ್ನ ನಿಲುವು. ಹಾಗಾಗಿ ಹಾದರಕ್ಕೆ ಹುಟ್ಟಿದ ಮಂದಿ ಜತೆಗೆ ಸ್ನೇಹ ಕೂಡ ಖಂಡಿತಾವಾಗಿಯೂ ಇಲ್ಲ. ಮಿತ್ರರು ಕೇಳಿದರು ಎಂಬ ಕಾರಣಕ್ಕೆ ಈ ಬರಹ ಬರೆಯಲಿಲ್ಲ. ‘ಕುಂಬಳಕಾಯಿ ಕದ್ದವನೇ ಹೆಗಲೆಲ್ಲ ಬೂದಿ ಅಂದರೆ, ನೀವ್ಯಾಕೆ ಹೆಗಲು ಕೊಡವಿಕೊಂಡಿದ್ದೀರಿ’ ಅನ್ನಬೇಡಿ, ಈ ಬರಹ ಅನೇಕ ದಿನಗಳ ಹಿಂದೆ ಬರೆಯಬೇಕು ಅಂದುಕೊಂಡಿದ್ದೆ. ಆದರೆ, ತಣ್ಣಗಿರುವ ಬ್ಲಾಗ್ ಲೋಕದಲ್ಲಿ ಮತ್ತೆ ವಿವಾದ ಬೇಡ ಅನ್ನಿಸಿ ಸುಮ್ಮನಾದೆ. ಈಗ ಅದಕ್ಕೆ ಮತ್ತೆ ಮೂಹೂರ್ತ ಕೂಡಿ ಬಂದಿದೆ…!

ಹುಯ್ಯೋ, ಹುಯ್ಯೋ ಮಳೆರಾಯ
ಅಲ್ಲಿ ಮತ ಎಣಿಕೆ ನಡೆಯುತ್ತಿದ್ದರೆ, ಇಲ್ಲಿ ಪುಟ ಎಣಿಕೆ! ಚುನಾವಣೆ ಫಲಿತಾಂಶವನ್ನು ಎಷ್ಟು ಸೊಗಸಾಗಿ ನೀಡಬಹುದೆಂಬ ಲೆಕ್ಕಾಚಾರ ಪ್ರತಿ ಸುದ್ದಿಮನೆಯಲ್ಲಿ. ಒಂದು ಕಾಲದಲ್ಲಿ ಚುನಾವಣಾ ಫಲಿತಾಂಶ ಪತ್ರಿಕೆಗಳಿಗೆ ಬಹು ದೊಡ್ಡ ಸುದ್ದಿಯಾಗಿತ್ತು. ಓದುಗ, ಪತ್ರಿಕೆಗಳಲ್ಲಿ ಬರುವ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆದರೆ ಈಗ ಹಾಗಲ್ಲ. ಮತ ಏಣಿಕೆ ಆರಂಭವಾಗುತ್ತಿದ್ದಂತೆ ಸುದ್ದಿ ವಾಹಿನಿಗಳಲ್ಲಿ ಲೈವ್ ರಿಸಲ್ಟ್, ಬಿಸಿ ಬಿಸಿ ಚರ್ಚೆ! ಫಲಿತಾಂಶಕ್ಕಾಗಿ ಮರುದಿನ ಬೆಳಿಗ್ಗೆ ಬರುವ ಪತ್ರಿಕೆಯನ್ನು ಕಾಯುವ ಅನಿವಾರ್ಯತೆಯೇ ಇಲ್ಲ…