Entries from June 2009

ಸೋತ ಪ್ರೀತಿಗೆ ಸಾಕ್ಷಿಯಾಗುವ ಸಿಟ್ಟು !

June 28, 2009 · 3 Comments

ನಿನ್ನೆ ಅದ್ಯಾಕೊ ಹಳೆಯ ಡೈರಿಯನ್ನು ಹರವಿಕೊಂಡು ಕುಳಿತ್ತಿದ್ದೆ. ಅವಳ ನೆನಪು ಮರೆಯಾಗಿಯೇ ಹೋಯಿತು ಅನ್ನುವಷ್ಟರಲ್ಲಿ  ಮತ್ತೆ ನೆನಪಾದಳು! ಡೈರಿಯ ನೆವವಿಲ್ಲದಿದ್ದರೆ ಅವಳ ನೆನಪಾಗುತ್ತಿರಲಿಲ್ಲ…ಅಲ್ಲಲ್ಲ… ಅವಳ ನೆನಪು  ಮರುಕಳಿಸಲು ಶುರುವಾದ್ದರಿಂದಲೇ  ಡೈರಿಯ ಪುಟ ತಿರುವಿಹಾಕಿದ್ದು!  ನಿಜ ಹೇಳಬೇಕೆಂದರೆ, ಅವಳು ಮತ್ತೆ, ಮತ್ತೆ ನೆನಪಾಗುತ್ತಿರಲಿ ಎಂಬ ಉದ್ದೇಶದಿಂದ  ದಪ್ಪ ದಪ್ಪನೆಯ ಅಕ್ಷರದಲ್ಲಿ  ಅವಳ ಹೆಸರನ್ನು ಡೈರಿಯಲ್ಲಿ  ಬರೆದಿಟ್ಟಿರುವುದು!

ನಾನು ಅವಳನ್ನು ಪ್ರೀತಿಸಿದೆ, ಹಾಗಂತ ಅವಳು ನನ್ನನ್ನು ಪ್ರೀತಿಸಬೇಕಾಗಿತ್ತು  ಎಂಬ ಹಠವೇನಿರಲಿಲ್ಲ. ಆದರೂ, ಅವಳು ನನ್ನನ್ನು ಪ್ರೀತಿಸಲಿಲ್ಲ  ಎಂಬ ಸಿಟ್ಟು! ನನ್ನಲ್ಲಿ  ಏನು ಕೊರತೆಯಿತ್ತು  ಎಂದು ಅವಳು ಹೇಳಲಿಲ್ಲ. ನಾನು ಅವಳನ್ನು ಕೇಳಲಿಲ್ಲ…

ಅವಳಿಗೂ ಅವಳದ್ದೇ ಆದ ಕನಸು, ಕಲ್ಪನೆಗಳಿವೆ. ನಾನು ಹೇಗೆ ನನ್ನ  ಮೂಗಿನ ನೇರಕ್ಕೆ ಸರಿಯಾಗಿ ಆಲೋಚನೆ ಮಾಡುತ್ತೇನೋ, ಅದೇ ತರಹ ಅವಳು, ಅವಳ ಮೂಗಿನ ನೇರಕ್ಕೆ ಸರಿಯಾಗಿ ಆಲೋಚಿಸುತ್ತಾಳೆ…ಇವೆಲ್ಲವೂ ನನಗೆ ಅರ್ಥವಾಗುತ್ತದೆ. ಆದರೂ ಅವಳ ಕುರಿತಾಗಿ ಕೋಪ. ನಾನಷ್ಟು  ಹತ್ತಿರದವನಾಗಿದ್ದರೂ, ಬೇರೆಯವನ ಸಂಗಡ…ಮತ್ತದೇ ಆಲೋಚನೆ!
ಆಕೆ ಇನ್ನು  ಕೈಗೆ ಸಿಗುವುದಿಲ್ಲ  ಎಂಬುದು ಖಾತ್ರಿಯಾಗಿದೆ.  ಹಾಗಂತ,  ಆಕೆ ಸಿಕ್ಕರೂ ಸಿಗಬಹುದೆಂಬ ಪುಟ್ಟ  ಕನಸು ಮಾತ್ರ ಮನಸಿನಿಂದ ದೂರವಾಗಿದೆ ಎನ್ನಲು ಸಾಧ್ಯವಿಲ್ಲ!  ಪಾಪದ ಹುಡುಗಿ, ಚೆಂದದ ಹುಡುಗಿ, ಮುದ್ದು ಮುದ್ದಾದ ಹುಡುಗಿ…ಹಾಗಂತ ಅವಳ ಕುರಿತಾಗಿ ಕಲ್ಪನೆಯೊಂದು  ಒಡಮೂಡುವ ಹೊತ್ತಿನಲ್ಲೇ, ಪಾಪಿ, ಮೋಸಗಾರ್ತಿ…ನನ್ನೊಳಗಣ ಸಿಟ್ಟು  ಜಾಗೃತವಾಗಿಬಿಡುತ್ತದೆ!

ಇದು ಒಂತರಹ ಖಾಯಿಲೆಯಾಗಿರಬಹುದೆಂದು ಡಾಕ್ಟರ್ ಬಳಿ ಹೋದರೆ, ಅವರು ನಿಮಗ್ಯಾವುದೇ ರೋಗವಿಲ್ಲ  ಎನ್ನುತ್ತಾರೆ. ಜಾತಕದಲ್ಲೂ  ದೋಷ ಕಾಣುತ್ತಿಲ್ಲ  ಎಂಬುದು ಜ್ಯೋತಿಷಿಗಳ ಉತ್ತರ! ಹಾಗಾದರೆ ನನ್ನ  ಸಮಸ್ಯೆಗೆ ಪರಿಹಾರ ಸೂಚಿಸುವ ಶಕ್ತಿ ಇರುವುದು ಅವಳಿಗೆ ಮಾತ್ರವಾ?! ಹಾಗಂದುಕೊಳ್ಳುವ ಹೊತ್ತಿಗೆ ಮನಸು ಮತ್ತ್ಯಾವುದೋ ಲಹರಿಗೆ ಹೋಗಿ ಬಿಡುತ್ತದೆ…ಈ ಜಗತ್ತಿನಲ್ಲಿ   ಇವಳೊಬ್ಬಳೇ  ವಿಶ್ವ ಸುಂದರಿಯಾ?

ಛೇ, ಹಾಗಂತ ಅವಳು ಯಾವತ್ತೂ  ನನ್ನಲ್ಲಿ   ಹೇಳಿಕೊಂಡಿಲ್ಲ.  ನಾನೇ ಅವಳನ್ನು  ವಿಶ್ವ ಸುಂದರಿ, ನನ್ನ  ಕನಸು-ಕಲ್ಪನೆಗಳ ರಾಣಿ…ಅಂತೆಲ್ಲ  ಭಾವಿಸಿಕೊಂಡಿದ್ದು!  ಆದರೂ ಅವಳ ಮೇಲೆ ನಾನು ಸುಮ್ಮ ಸುಮ್ಮನೆ  ರೇಗುವುದೇಕೆ? ಪ್ರೀತಿಯ ಹಿಂದೆ ಸಿಟ್ಟು, ದ್ವೇಷ ಇರತ್ತೆ ಅಂತಾ ಬಲ್ಲವರು ಹೇಳುತ್ತಾರೆ…ಆದರೂ ನನಗಂತೂ ಉತ್ತರ ಸಿಗುತ್ತಿಲ್ಲ! ನನ್ನೆಲ್ಲ  ಸಮಸ್ಯೆಗಳನ್ನು  ಮತ್ತೆ  ಅವಳ ಬಳಿ ತೆಗೆದುಕೊಂಡು ಹೋದರೆ ಪರಿಹಾರ ಸಿಗಬಹುದು ಅನ್ನಿಸುತ್ತಿದ್ದರೂ, ಅದಕ್ಕೆ ಮನಸ್ಸು  ಒಪ್ಪುತ್ತಿಲ್ಲ.

ಹಾಗಾಗಿ, ಎಲ್ಲವೂ ಹಾಗೇ ಸುಮ್ಮನೆ…ಅಲ್ವಾ?!

(ವಿ.ಸೂ:-ಸಿಂಪ್ಲಿ ಸಿಟಿಗಾಗಿ ಹಾಗೆ ಸುಮ್ಮನೆ ಬರೆದ ಸ್ವಕಲ್ಪಿತ  ಹಳೆ ಬರಹ)

Categories: ಕ್ರಿಯೇಟಿವ್ ಪೇಜ್

ಅಪ್ಪ, ಅಮ್ಮಂದಿರಲ್ಲದ ಅನಾಮಧೇಯ ಮಂದಿಗೆ…

June 24, 2009 · 8 Comments

ಈ ಬರಹದಿಂದ ಎಳ್ಳು ಕಾಳಷ್ಟೂ  ಪ್ರಯೋಜನವಿಲ್ಲ  ಎಂಬುದು ಖಚಿತವಾಗಿ ಗೊತ್ತಿದ್ದರೂ, ಇದನ್ನು  ಬರೆಯದೇ ಇರಲು ನನ್ನಿಂದ ಸಾಧ್ಯವಾಗುತ್ತಿಲ್ಲ.  ಇತ್ತಿಚೇಗಂತೂ ಬ್ಲಾಗ್ ಲೋಕಕ್ಕೆ ಕಾಲಿಡಲು ಮನಸ್ಸಾಗುತ್ತಿಲ್ಲ. ಕೆ.ಎನ್ ವರ್ಡ್‌ಪ್ರೆಸ್ ತಾಣ ಕ್ಲಿಕ್ ಮಾಡಿದರೆ, ಸೆಕ್ಸ್, ಅನಾಮಧೇಯ ಬ್ಲಾಗ್‌ಗಳೇ ಕಣ್ಣಿಗೆ  ರಾಚುತ್ತಿದೆ.

ಬ್ಲಾಗ್ ಲೋಕದಲ್ಲಿ  ವಿವಾದ ಹುಟ್ಟುಹಾಕಿದ, ವೈಯಕ್ತಿಕ ನಿಂದನೆಗೆ ಶುರು ಮಾಡಿದ ಮೊದಲಿಗ ಎಂಬ ಆರೋಪ ನನ್ನ  ಮೇಲೆ ಆವತ್ತಿನಿಂದ ಈವತ್ತಿನವರೆಗೂ ಇದೆ! ನಿಜ, ಕೆಲ ಮಂದಿಯ ಕುರಿತಾದ ಅಸಮಧಾನವನ್ನು ನಾನು ಬ್ಲಾಗ್‌ನಲ್ಲಿ  ತೊಡಿಕೊಂಡಿದ್ದಿದೆ. ಹಾಗಂತ ನಾನು ನನ್ನ  ವೈಯಕ್ತಿಕ ಉದ್ದೇಶದಿಂದ ಯಾರನ್ನು ಬೈದಿಲ್ಲ. ನನ್ನ  ಬೈಗುಳ ಅಥವಾ ನೋವಿನ ಹಿಂದೆ ನನ್ನಂಥ ಸಾಕಷ್ಟು  ಜನರ ನೋವು ಖಂಡಿತವಾಗಿಯೂ ಇತ್ತು. ಬೈದು ಬ್ಲಾಗ್‌ನ ಹಿಟ್ಸ್  ಹೆಚ್ಚಿಸಿಕೊಳ್ಳುವ ಅವಶ್ಯಕತೆ, ತೆವಲು ನನಗಂತೂ ಇಲ್ಲ. ಯಾಕೆಂದರೆ ಬೈಯ್ಯುವುದರಿಂದ ಅಪಾಯಗಳೇ ಹೆಚ್ಚು. ನನ್ನ  ಗಮನಕ್ಕೆ ಬಾರದೇ ನನ್ನ  ವೈಯಕ್ತಿಕ ಲಾಭಕ್ಕೆ ಬೈದದ್ದು ಇದ್ದಲ್ಲಿ  ಖಂಡಿತವಾಗಿಯೂ ನಾನಂತೂ ಕ್ಷಮೆ ಯಾಚಿಸಲು ಸಿದ್ಧ.

ನಾವು ಯಾರನ್ನೇ ಬೈದರೂ, ಅದರಿಂದ ಆತನ ಸುತ್ತಲಿನ ವ್ಯವಸ್ಥೆಯಲ್ಲಿ  ಸ್ವಲ್ಪವಾದರೂ ಬದಲಾಗಬಹುದು ಎಂಬ ಆಶಯಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇನ್ನು ರಾಷ್ಟ್ರೀಯ ವಿಚಾರದಲ್ಲಿ  ಮಾತ್ರ ಯಾವತ್ತೂ ರಾಜಿಯಿಲ್ಲ. ಈ ವಿಷಯದಲ್ಲಿ   ನಾನು ಬೊಬ್ಬೆ ಹೊಡೆದ ಕೂಡಲೇ ವ್ಯವಸ್ಥೆ  ಸರಿಯಾಗುವುದಿಲ್ಲ  ಎಂಬುದು ಖಂಡಿತವಾಗಿಯೂ ಗೊತ್ತಿದೆ. ಆದರೂ ಇದೂ ಒಂಥರ ತೆವಲೇ ಬಿಡಿ!

ಕುಂಕುಮ ಇಟ್ಟು, ದೇಶದ ಪರ ಮಾತಾಡಿ, ಖಾದಿ ತೊಟ್ಟ  ಕೂಡಲೇ ಅವರೆಲ್ಲ  ಸಂಘದವರಿರಬೇಕು ಎಂದು ಭಾವಿಸುವ ನಮ್ಮ  ಸಮಾಜದ ಮನೋರೋಗವನ್ನು ಯಾರಿಂದಲೂ  ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಅಂತವರ ಕುರಿತು ತಲೆಕೆಡಿಸಿಕೊಳ್ಳುವುದು ಇಲ್ಲ. ಯಾಕೆಂದರೆ ಹಾಗೆ ಬೊಬ್ಬೆ ಹೊಡೆಯುವ ವಿಚಾರವಾದಿಗಳ ಕಾರ್ಯಕ್ರಮ, ದೀಪ ಬೆಳಗುವ ಮೂಲಕವೇ ಉದ್ಘಾಟನೆಯಾಗುತ್ತದೆ. ದೇವಸ್ಥಾನದ ಸಂಪ್ರದಾಯದ ವಿರುದ್ಧ  ಬೊಬ್ಬೆ ಹೊಡೆಯುವವರೇ, ದೇವಾಲಯಕ್ಕೆ ಹೋಗಿ ಮೊದಲು ಅಡ್ಡ  ಬೀಳುವುದು! ಮಾತಾಡುವುದು ಮಾತ್ರ ನಾವಿನ್ನು ಗೊಡ್ಡು  ಸಂಪ್ರದಾಯದಲ್ಲಿದ್ದೇವೆ, ನಮ್ಮ ಧರ್ಮ, ಆಚರಣೆಗಳು ಸರಿಯಿಲ್ಲ, ಬುದ್ದನಲ್ಲಿರುವುದು, ಮಹಮ್ಮದ್ ಬರೆದ ಖುರಾನಿನಲ್ಲಿರುವುದೇ ಸರಿಯಿದೆ ಅಂತಾ! ವಿಪರ್ಯಾಸವೆಂದರೆ, ಹಾಗೆ ಮಾತಾಡುವ ಮಂದಿ ಯಾವತ್ತೂ ಮತಾಂತರವಾಗುವುದಿಲ್ಲ!  ಎಷ್ಟಂದರೂ ನಮ್ಮ  ದೇಶದಲ್ಲಿ  ‘ಉಪದೇಶ’ ಅನ್ನುವುದು ಮಾಡಲಿಕ್ಕಾಗಿಯೇ ಇಟ್ಟ  ವಸ್ತು ತಾನೇ?!

ಸೆಕ್ಸ್  ಕುರಿತಾಗಿ, ನಿಮ್ಮ ಬ್ಲಾಗ್‌ನಲ್ಲಿ ಬರೆದಕೊಂಡರೆ, ಅದನ್ನು  ವಿರೋಸುವ ಹಕ್ಕು  ನಮಗಿಲ್ಲ.  ಅಲ್ಲಿ  ಯಾರದ್ದೋ ಬಟ್ಟೆ  ಬಿಚ್ಚಿಸಿದ್ದಕ್ಕೆ ನಾವು ಮೈ ಪರಚಿಕೊಳ್ಳುವುದರಲ್ಲಿ  ಅರ್ಥವೂ ಇಲ್ಲ.  ಅಂತಹದ್ದನ್ನು ಓದದೇ ಇರುವುದೊಂದೇ ಇಂಥ ಸಮಸ್ಯೆಗೆ ಪರಿಹಾರ ಎಂಬುದು ನಿಜ. ನಮ್ಮ  ಸಮಾಜದ ದುರಂತವೆಂದರೆ, ಒಂದು ಒಳ್ಳೆ  ವಿಚಾರಯುತ ಪತ್ರಿಕೆ ಓಡುವುದಿಲ್ಲ.  ಆದರೆ,‘ಪೋಲಿ’ನ್ಯೂಸ್‌ಗಳ ಪ್ರಸರಣ ಸಂಖ್ಯೆ ಊಹೆಗೂ ನಿಲುಕದಷ್ಟು! ಅದೇ ಟ್ರೆಂಡು ಬ್ಲಾಗ್ ಲೋಕದಲ್ಲೂ  ಶುರುವಾಗಿದೆ. ಹಾಗಂತ ನೀವು ನನ್ನದೋ, ಅಥವಾ ಬೇರೆಯವರದ್ದೋ ಬ್ಲಾಗ್ ಓದಿ ಎಂದು ಖಂಡಿತಾ ಕರೆಯುತ್ತಿಲ್ಲ.  ಅಂಥ ಕೊಳಕು ಬ್ಲಾಗ್‌ಗಳಿಗೆ ಭೇಟಿ ಕೊಡಬೇಡಿ. ಹಿಟ್ಸ್  ಕಮ್ಮಿಯಾದಂತೆ ಅವರ ಬರವಣಿಗೆ ಆಸಕ್ತಿ  ತಾನಾಗಿಯೇ ಕಮ್ಮಿಯಾಗಬಹುದು. ಅಂಥ ಬ್ಲಾಗ್‌ಗಳ ಬಾಗಿಲು ಮುಚ್ಚಬಹುದೇನೋ ಎಂಬುದು  ನನ್ನ ಆಶಯ!

ಇನ್ನು ಪತ್ರಿಕೆ, ಮಾಧ್ಯಮಗಳು, ಕೆಲ ವ್ಯಕ್ತಿಗಳ ಕುರಿತ ವಿಮರ್ಶೆ…ಅನಾಮಧೇಯ ಹೆಸರಲ್ಲಿ  ಬೈದರೆ, ‘ಕೈಲಾಗದವರು ಮೈ ಪರಚಿಕೊಂಡಿದ್ದಾರೆ’ ಅಂತಲೇ ಅಂದುಕೊಳ್ಳುವುದು ಅನಿವಾರ್ಯ. ಅಲ್ಲದೇ ಮಾಧ್ಯಮ ಲೋಕದಲ್ಲಿ  ಅಭಿವೃದ್ಧಿ ಪರ ವಿಷಯಗಳಿಗೆ ಬೆಂಬಲ ನೀಡುವವರು, ಆದರ್ಶಗಳನ್ನು ಅಳವಡಿಸಿಕೊಂಡು ಬದುಕುತ್ತಿರುವವರು ಈಗಲೂ ಇದ್ದಾರೆ ಎಂಬುದನ್ನು ಮರೆಯಬಾರದು. ಮಾಧ್ಯಮದ ಕುರಿತಾಗಿ ಕಾಳಜಿಯುಳ್ಳ  ಅನಾಮಧೇಯರಿಂದ, ಇಲ್ಲಿನ ಒಳ್ಳೆ ವ್ಯಕ್ತಿಗಳನ್ನು ಪರಿಚಯಿಸುವ ಯತ್ನ ಯಾಕೆ ನಡೆಯುತ್ತಿಲ್ಲ  ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ನಮಗೆ ಆ ಬ್ಲಾಗ್‌ಗಳ ಹಿಂದಿರುವ ಉದ್ದೇಶ ಅರ್ಥವಾಗಿಬಿಡುತ್ತದೆ.

ಈಗ ಜೀವ ಪಡೆದಿರುವ ವಿಮರ್ಶಕಿಗೂ, ನಿಮಗೂ ಏನಾದರೂ ಸಂಬಂಧವಿದೆಯಾ?! ಹಾಗಂತ  ಕೆಲ ಮಿತ್ರರು ಕೇಳಲು ಶುರುವಿಟ್ಟಿದ್ದಾರೆ!ಆಕೆಗೂ, ನನಗೂ ಯಾವ ಬಗೆಯ ನೈತಿಕ, ಅನೈತಿಕ ಸಂಬಂಧಗಳೂ ಇಲ್ಲ  ಮಾರಾಯ್ರೆ. ನಾನು ಬೈಯ್ಯವುದಾದರೆ ನೇರವಾಗಿಯೇ ಬೈಯ್ಯುತ್ತೇನೆ. ಹೊಗಳುವುದಾದರೂ ಕೂಡ. ಯಾರದ್ದೋ ತೆವಲಿಗೆ, ಹಾದರಕ್ಕೆ ಹುಟ್ಟುವ ಅನಾಮಧೇಯ ಬ್ಲಾಗ್‌ಗಳಿಗೂ, ಹಾದರವನ್ನೇ  ಜೀವಾಳವನ್ನಾಗಿಸಿಕೊಂಡಿರುವ ನಮ್ಮ ಕೆಲ ಟ್ಯಾಬ್ಲಾಯ್ಡ್  ಪತ್ರಿಕೆಗಳಿಗೂ  ಒಂಚೂರು ವ್ಯತ್ಯಾಸವಿಲ್ಲ  ಎಂಬುದು ನನ್ನ  ನಿಲುವು. ಹಾಗಾಗಿ ಹಾದರಕ್ಕೆ ಹುಟ್ಟಿದ ಮಂದಿ ಜತೆಗೆ  ಸ್ನೇಹ ಕೂಡ ಖಂಡಿತಾವಾಗಿಯೂ  ಇಲ್ಲ.  ಮಿತ್ರರು ಕೇಳಿದರು ಎಂಬ ಕಾರಣಕ್ಕೆ ಈ ಬರಹ ಬರೆಯಲಿಲ್ಲ. ‘ಕುಂಬಳಕಾಯಿ ಕದ್ದವನೇ ಹೆಗಲೆಲ್ಲ  ಬೂದಿ ಅಂದರೆ, ನೀವ್ಯಾಕೆ ಹೆಗಲು ಕೊಡವಿಕೊಂಡಿದ್ದೀರಿ’ ಅನ್ನಬೇಡಿ, ಈ ಬರಹ ಅನೇಕ ದಿನಗಳ ಹಿಂದೆ ಬರೆಯಬೇಕು ಅಂದುಕೊಂಡಿದ್ದೆ.  ಆದರೆ, ತಣ್ಣಗಿರುವ ಬ್ಲಾಗ್ ಲೋಕದಲ್ಲಿ  ಮತ್ತೆ ವಿವಾದ ಬೇಡ ಅನ್ನಿಸಿ ಸುಮ್ಮನಾದೆ. ಈಗ ಅದಕ್ಕೆ ಮತ್ತೆ ಮೂಹೂರ್ತ ಕೂಡಿ ಬಂದಿದೆ…!

Categories: ಚಿಂತನ ಚಾವಡಿ

ಶಾಪ ಶಕುಂತಲೆಗಲ್ಲ!

June 21, 2009 · 5 Comments

IND0704B

ಮಳೆಗಾಲ ಶುರುವಾದರೆ
ಬರೀ ಮೋಡದ ಮುಸುಕು
ಚಾದರ ಹೊದ್ದು ಮಲಗಿದರೆ
ಏಳಲು ಒಪ್ಪುವುದಿಲ್ಲ  ಮನಸು

ಮೋಡದ ಪೊರೆ ಸರಿದಾಗ
ಮಬ್ಬುಗತ್ತಲಿನ ಬೆಳಕು ಹೊರಗೆ
ಸರಿಸಲಾಗದ ಪೊರೆಯ
ಕತ್ತಲಿನ ಥಳಕು ಸದಾ ನನ್ನೊಳಗೆ

ಮನೆಯಂಗಳದ ಹೊಳೆಯಲ್ಲಿ
ಮನದಂಗಳದ ಪ್ರವಾಹಕ್ಕೆ ಬೆಲೆಯಿಲ್ಲ
ಅವಳಿಗಾಗಿ ಅತ್ತರೆ ಪ್ರಯೋಜನವೂ ಇಲ್ಲ
ಅಳದಿರಲು ಅದ್ಯಾಕೋ ಹೃದಯ ಒಪ್ಪುತ್ತಿಲ್ಲ!

ದೂರ್ವಾಸರ ಶಾಪ ಶಕುಂತಲೆಗಲ್ಲ
ದುಶ್ಯಂತನಿಗೆ ಎಂದು ಅರ್ಥವಾಗದ ಕವಿ
ತನಗೆ ತೋಚಿದ್ದನ್ನೇ ಗೀಚಿಬಿಟ್ಟಿದ್ದಾನಲ್ಲ
ಎಂದಾಗ ಸಿಟ್ಟಾಗಿದ್ದ  ಮೋಡದೊಳಗಣ ರವಿ!

Categories: ಕವಿತೆ

ಎಂಆರ್‌ಪಿಗೆ ಕಿಮ್ಮತ್ತಿಲ್ಲ, ಮಾಪನ ಇಲಾಖೆಗೂ ಅಧಿಕಾರವಿಲ್ಲ!

June 16, 2009 · 3 Comments

ವಿನಾಯಕ ಕೋಡ್ಸರ, ವಿಕ ಸುದ್ದಿಲೋಕ
ಬೆಂಗಳೂರು: ಬಸ್ ನಿಲ್ದಾಣ, ಹಾಲು ಮಾರಾಟ ಕೇಂದ್ರ ಸೇರಿದಂತೆ ಬಹುತೇಕ ದಿನಸಿ ಸರಕು ಉತ್ಪನ್ನ  ಮಾರಾಟ ತಾಣಗಳಲ್ಲಿ  ಗರಿಷ್ಠ ಮಾರಾಟ ಬೆಲೆಗೆ(ಎಂಆರ್‌ಪಿ) ಕವಡೆ ಕಿಮ್ಮತ್ತಿಲ್ಲ!  ಇಂಥ ಪ್ರಕರಣದಿಂದ ಗ್ರಾಹಕನಿಗೆ ಕಾನೂನು ರೀತ್ಯಾ ನ್ಯಾಯ ಒದಗಿಸಬೇಕಾದ ಕಾನೂನು ಮಾಪನ ಇಲಾಖೆಗೆ ವ್ಯಾಪಾರಿಗಳ ಪರವಾನಿಗೆ ರದ್ದು ಮಾಡುವ ಅಧಿಕಾರವೇ ಇಲ್ಲ!

ರಾಜ್ಯದ ಬಹುತೇಕ ಬಸ್, ರೈಲ್ವೆ ನಿಲ್ದಾಣದ ಅಂಗಡಿಗಳು, ರಾತ್ರಿ ಬಾಗಿಲು ತೆರೆದಿರುವ  ಚಿಲ್ಲರೆ ವ್ಯಾಪಾರ ಕೇಂದ್ರಗಳ ಉತ್ಪನ್ನಗಳಿಗೆ ಎಂಆರ್‌ಪಿಗಿಂತ ಒಂದು ರೂಪಾಯಿ ದುಬಾರಿ!  ಈ  ಅನ್ಯಾಯವನ್ನು  ಗ್ರಾಹಕ ಪ್ರಶ್ನಿಸಿದರೆ, ‘ಬಸ್ ಸ್ಟಾಂಡ್‌ನಲ್ಲಿ  ನಿಮಗ್ಯಾರು ಎಂಆರ್‌ಪಿಗೆ ಕೊಡ್ತಾರೆ, ಬೇಕಾದರೆ ತೆಗೆದುಕೊಳ್ಳಿ, ಬೇಡವಾದರೆ ಬಿಟ್ಟುಹೋಗಿ’ ಎಂಬ ದರ್ಪದ ಬೈಗುಳ ವರ್ತಕನಿಂದ ಕಟ್ಟಿಟ್ಟ  ಬುತ್ತಿ!

ಪ್ಯಾಕೆಟ್ ಮಾಡಿದ ಸರಕುಗಳಲ್ಲಿ  ತೂಕ ಅಥವಾ ಗಾತ್ರ, ಉತ್ಪಾದಕರ ಹೆಸರು ಮತ್ತು ವಿಳಾಸ, ಸರಕು ಪ್ಯಾಕ್ ಮಾಡಿದ ದಿನಾಂಕ, ಎಂಆರ್‌ಪಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಗ್ರಾಹಕ ಸರಕು ಕಾಯ್ದೆ  ೨೦೦೬ರ ಅಡಿಯಲ್ಲಿ , ಗ್ರಾಹಕ ಉಪಯೋಗಿ ಸರಕನ್ನು  ‘ಎಂಆರ್‌ಪಿ’ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಹುದೇ ಹೊರತು, ಅಕ ಬೆಲೆಗೆ ಮಾರಾಟ ಮಾಡುವಂತಿಲ್ಲ.  ಎಂಆರ್‌ಪಿ ಉಲ್ಲಂಘನೆ ಕಾನೂನುರೀತ್ಯಾ ಅಪರಾಧ. ಒಂದೊಮ್ಮೆ ಕಂಪನಿ, ದರ ಪರಿಷ್ಕರಣೆ ಮಾಡಿದರೂ, ಹಳೆಯ ಉತ್ಪನ್ನಕ್ಕೆ ಆ ಪರಿಷ್ಕರಣೆ ಅನ್ವಯಿಸುವುದಿಲ್ಲ.

‘ಎಂಆರ್‌ಪಿ ಉಲ್ಲಂಘಿಸಿರುವವರ ವಿರುದ್ಧ  ಈಗಾಗಲೇ ಸಾಕಷ್ಟು  ಹೋರಾಟ ನಡೆಸಿದ್ದೇವೆ. ಇಂಥ ವರ್ತಕರಿಗೆ ಕಾನೂನು ಮಾಪನ ಇಲಾಖೆ ದಂಡ ಹಾಕಬೇಕು. ನಂತರವೂ ವಂಚನೆ ಮುಂದುವರಿದರೆ ಹೆಚ್ಚು  ಹಣ ದಂಡ ವಿಸಿ, ವರ್ತಕನ ಮಾರಾಟ ಪರವಾನಿಗೆ ರದ್ದುಪಡಿಸಬೇಕು. ಇಲಾಖೆ ಮೊದಲ ಹಂತದಲ್ಲಿ  ೫೦೦ರೂ. ದಂಡ ವಿಸುತ್ತದೆ. ನಂತರ ವರ್ತಕನಿಂದ ಅಕಾರಿಗಳ ಕೈಬಿಸಿಯಾಗುತ್ತದೆ. ಹೀಗಾಗಿ  ಪ್ರಕರಣ ಅಲ್ಲಿಗೆ ಮುಚ್ಚಿಹೋಗುತ್ತದೆ. ಎರಡನೇ ಹಂತದಲ್ಲಿ   ದಂಡ ವಿಸಿ, ಪರವಾನಿಗೆ ರದ್ದುಪಡಿಸಿದ ದಾಖಲೆಯೇ ರಾಜ್ಯದಲ್ಲಿ  ಕಾಣಿಸುವುದಿಲ್ಲ. ಚಿಲ್ಲರೆ ವ್ಯಾಪಾರಿಗಳು  ಖರೀದಿಸಿದ ಸರಕಿಗೆ ರಸೀದಿ ನೀಡಲು ನಿರಾಕರಿಸುತ್ತಾರೆ. ಹೀಗಾಗಿ,  ಅನ್ಯಾಯದ ವಿರುದ್ಧ  ಗ್ರಾಹಕರು ನ್ಯಾಯಾಲಯಕ್ಕೂ ಮೊರೆ ಹೋಗುವುದು ಕಷ್ಟಸಾಧ್ಯ’ ಎನ್ನುತ್ತಾರೆ  ರಾಜ್ಯ ಬಳಕೆದಾರರ ವೇದಿಕೆ ಮುಖಂಡ ಮಾವೆಂಸ ಪ್ರಸಾದ್.

ಅಧಿಕಾರ ಕೊಡಿ

‘ಅಂಗಡಿಗಳ ಪರವಾನಿಗೆ ರದ್ದು  ಪಡಿಸುವ ಅಕಾರ ಇರುವುದು ಸರಕಾರಕ್ಕೆ ಮಾತ್ರ. ಕಾನೂನು ಉಲ್ಲಂಘನೆ ಮಾಡುತ್ತಿರುವ ವ್ಯಾಪಾರ ಕೇಂದ್ರಗಳ ಮೇಲೆ ನಿತ್ಯವೂ ದಾಳಿ ನಡೆಯುತ್ತಿದೆ. ಆದರೆ ಎರಡನೇ ಹಂತದ ದಾಳಿ ನಡೆಸುವ ವೇಳೆಗೆ ವರ್ತಕರು ಜಾಗೃತರಾಗಿಬಿಡುತ್ತಾರೆ. ಎರಡನೇ ಹಂತದಲ್ಲಿ   ಗರಿಷ್ಠ  ೨,೦೦೦ ರೂ. ದಂಡ ವಿಧಿಸಿದ ನಂತರವೂ ನಡೆಯುವ ಅನ್ಯಾಯಕ್ಕೆ  ಸರಕಾರವೇ ಪರಿಹಾರ ಒದಗಿಸಬೇಕು ಅಥವಾ ವರ್ತಕನ ಪರವಾನಿಗೆ ರದ್ದುಪಡಿಸುವ ಅಧಿಕಾರವನ್ನು ಇಲಾಖೆಗೆ ನೀಡಬೇಕು. ಇಲಾಖೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಾರೆ ಎಂಬ ಆರೋಪ ಆಧಾರ ರಹಿತ’ಎನ್ನುತ್ತಾರೆ ರಾಜ್ಯ ಕಾನೂನು ಮಾಪನ ಇಲಾಖೆ ಹಿರಿಯ ಅಧಿಕಾರಿಗಳು.

ಹಾಲಿಗೆ ಫ್ರೀಜೀಂಗ್ ಛಾರ್ಜ್ ಕೊಡಬೇಡಿ

ಎಂಆರ್‌ಪಿಯಲ್ಲಿ  ಬೃಹತ್ ವಂಚನೆ ನಡೆಯುವುದು ಹಾಲು, ಮೊಸರು ಹಾಗೂ ಫ್ರಿಜ್‌ನಲ್ಲಿ  ಸಂಗ್ರಹಿಸುವ ಉತ್ಪನ್ನಗಳಲ್ಲಿ.  ನಂದಿನಿ ಸೇರಿದಂತೆ, ಬಹುತೇಕ  ಹಾಲಿನ ಮೇಲೆ ವರ್ತಕರು ಎಂಆರ್‌ಪಿಗಿಂತ ೫೦ಪೈಸೆ ಅಥವಾ ೧ ರೂ. ಅಕ ಹಣವನ್ನು  ಗ್ರಾಹಕರಿಂದ ತೆಗೆದುಕೊಳ್ಳುತ್ತಾರೆ. ಕೇಳಿದರೆ ಫ್ರೀಜೀಂಗ್ ಛಾರ್ಜ್ ಅನ್ನುತ್ತಾರೆ.  ವಾಸ್ತವವಾಗಿ ಇದು ಕಾನೂನು ಬಾಹಿರ. ಉತ್ಪನ್ನ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಕಂಪನಿಗಳು ವರ್ತಕರಿಗೆ  ಪ್ರತ್ಯೇಕ ಕಮಿಷನ್ ನೀಡುತ್ತವೆ. ಎಂಆರ್‌ಪಿಗಿಂತ ಅಧಿಕ ಬೆಲೆ ತೆಗೆದುಕೊಳ್ಳುವವರ ವಿರುದ್ಧ  ಇಲಾಖೆಗೆ ದೂರು ನೀಡಿದರೆ ತಕ್ಷಣ ದಾಳಿ ನಡೆಸುತ್ತೇವೆ. ಬಸ್ ನಿಲ್ದಾಣದ ವರ್ತಕರ ವಂಚನೆ ಕುರಿತು ಸಾರಿಗೆ ಇಲಾಖೆ ಜತೆ ಶೀಘ್ರದಲ್ಲಿ  ಮಾತುಕತೆ ನಡೆಸುತ್ತೇವೆ ಎಂದು  ಕಾನೂನು ಮಾಪನ ಇಲಾಖೆ  ಉಪ ಆಯುಕ್ತರು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

(ವಿ.ಸೂ:-ಇದು ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ವರದಿ. ನಮ್ಮಲ್ಲಿ, ಬಸ್‌ ಸ್ಟ್ಯಾಂ‌ಡ್‌, ಬೀಡಾ ಅಗಂಡಿಯಲ್ಲಿ ಕುಳಿತು ಸಮಸ್ಯೆ ಹೇಳುವವರು ಹೆಚ್ಚು ಹೊರತು, ಸಮಸ್ಯೆ ಕುರಿತಾಗಿ ಸಂಬಂಧಿತ ಇಲಾಖೆಗೆ ದೂರು ನೀಡುವವರು ವಿರಳ. ಅದನ್ನೇ ಕಾನೂನು ಮಾಪನ ಇಲಾಖೆ ಆಯುಕ್ತರು ಕೂಡ ಹೇಳುತ್ತಿದ್ದರು. ಇದು ಗ್ರಾಹಕ ಸಂಬಂಧಿ ಸಮಸ್ಯೆಯಾಗಿರುವುದರಿಂದ ಪತ್ರಿಕೆಯಲ್ಲಿ ಪ್ರಕಟಗೊಂಡರೂ ಕೂಡ ಬ್ಲಾಗಿಗೆ ಹಾಕಿದ್ದೇನೆ…ಮುಂದಿನ ನಿರ್ಧಾರ ನಿಮ್ಮದು…)

Categories: ಕ್ರಿಯೇಟಿವ್ ಪೇಜ್