ಸೈಬಿರಿಯನ್ ಕುಟುಂಬದಲ್ಲಿ ಹುಟ್ಟಿದ ಕೈಗಳಿಲ್ಲದ ವ್ಯುಜಿಕ್ಗಾಗಿ ಹೆತ್ತವರು ಸಾಕಷ್ಟು ಕಣ್ಣೀರಿಡುತ್ತಾರೆ. ಅನೇಕ ವೈದ್ಯರ ಬಳಿ ತೋರಿಸುತ್ತಾರೆ. ಮಗನಿಗೆ ಕೈ ಬರಲಿ ಅಂತಾ ಹಲವು ದೇವರ ಮೊರೆ ಹೋಗುತ್ತಾರೆ. ಆದರೆ ಇವ್ಯಾವುದು ಪ್ರಯೋಜನಕ್ಕೆ ಬರುವುದಿಲ್ಲ. ಶಾಶ್ವತವಾಗಿ ಕೈಗಳು ಬರುವುದಿಲ್ಲ ಎಂದು ಗೊತ್ತಾದಾಗ ಈತನ ತಾಯಿ ಬಿಕ್ಕಿ-ಬಿಕ್ಕಿ ಅಳುತ್ತಾಳೆ. ಮೊದಲಿಗೆ ತಂದೆ ತಾಯಿಗಳ ಬದುಕು ಈತನ ಸೇವೆಗಾಗಿಯೇ ಮುಡುಪಾಗುತ್ತೆ. ಹೆತ್ತವರು ಕಂದಮ್ಮನನ್ನು ಬಿಟ್ಟು ಕದಲುವುದಿಲ್ಲ. ಈತನ ಎಲ್ಲಾ ಸೇವೆಯನ್ನು ಮಾಡುತ್ತಾರೆ. ಮಗನ ಅವಸ್ಥೆ ನೋಡಿ ಆಗಾಗ ಬಿಕ್ಕುತ್ತಾರೆ.
ನಂಬಲಿಕ್ಕೆ ಕಷ್ಟವಾಗಬಹುದು. ಆದ್ರೆ ನಂಬಲೇ ಬೇಕು. ಕೈಗಳಿಲ್ಲದ ಈತ ಬರೆದ ಈ ಪುಸ್ತಕ ಬರೋಬ್ಬರಿ ೨೦೦ ಪುಟವಿದೆ. ಅಮೆಜಾನ್ ಅಂತರ್ಜಾಲ ತಾಣದಲ್ಲಿ ಪುಸ್ತಕ ಪಿಡಿಎಫ್ ಇಡಿ-ಇಡಿಯಾಗಿ ಲಭ್ಯವಿದೆ. ಈ ಪುಸ್ತಕ ೨೦೧೦ರಲ್ಲಿ ಪ್ರಕಟವಾಗುತ್ತೆ.
Posted in ಚಿಂತನ ಚಾವಡಿ | 2 Comments »
ಚಂಪಾ ಷಷ್ಠಿಯ ವೇಳೆ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಮಡೆ ಸ್ನಾನ ಸೇವೆ ರದ್ದು ಮಾಡಬಾರದು ಎಂದು ಪಟ್ಟು ಹಿಡಿದಿದ್ದು ಸ್ಥಳೀಯರು. ಮಡೆಸ್ನಾನಕ್ಕೆ ಅವಕಾಶ ಕೊಡಬೇಕು. ಇಲ್ಲವಾದರೆ ರಥ ಕಟ್ಟುವುದಿಲ್ಲ ಎಂದು ಹಠ ಹಿಡಿದವರು ಮಲೆಕುಡಿಯ ಜನಾಂಗದವರು. ಮೇಲ್ಜಾತಿಯವರ ಉಂಡ ಎಂಜಲು ಎಲೆಯಲ್ಲಿ ಕೆಳಜಾತಿಯವರು ಉರುಳುತ್ತಾರೆ. ಹೀಗಾಗಿ ಮಡೆಸ್ನಾನ ವಿರೋಧಿಸುತ್ತೇವೆ ಎಂಬುವವರು ಇದನ್ನು ಸ್ಪಷ್ಟವಾಗಿ ಗಮನಿಸಬೇಕು…
ತಂಬಾಕು ಸೇವನೆ ಆರೋಗ್ಯ ಹಾನಿಕರ…ಹಾಗಂತ ಸಿಗರೇಟು ಪ್ಯಾಕಿನ ಮೇಲೆ ದಪ್ಪ ಅಕ್ಷರದಲ್ಲಿ ಬರೆದಿರುತ್ತದೆ. ಸಿಗರೇಟು ಸೇದುವ ಎಲ್ಲರೂ ಕೂಡ ಅದನ್ನು ಓದಿರುತ್ತಾರೆ. ಆದಾಗ್ಯೂ ಧೂಮಪಾನ ಬಿಡುವುದಿಲ್ಲ. ಇದಕ್ಕೂ ಮಜ ಎಂದರೆ, ಕ್ಯಾನ್ಸರ್ಗೆ ಔಷಧ ನೀಡುವ ವೈದ್ಯನಿಗೂ ಸಿಗರೇಟಿನ ಚಟವಿರುವುದು!
ಅಯ್ಯೊ, ನೀವು ತಿನ್ನುವ ದ್ರಾಕ್ಷಿಯಲ್ಲಿ ರಾಸಾಯನಿಕ ಇರುವುದಿಲ್ಲವಾ? ಈಗಿನ ಆಹಾರಗಳು ಕಲುಷಿತ ಅಲ್ಲವಾ? ಸಾವಿಗೆ ಕಾರಣವಿಲ್ಲ. ತಂಬಾಕು ಸೇವನೆಯೂ ಸಾವಿಗೊಂದು ಮಾರ್ಗವಾಗಬಹುದು. ಹಾಗಂತ ಸೇವಿಸಿದವರಿಗೆಲ್ಲ ಕ್ಯಾನ್ಸರ್ ಬರುತ್ತದೆ ಎನ್ನಲು ಸಾಧ್ಯವಿಲ್ಲ ಅನ್ನೋದು ಸಿಗರೇಟು ಸೇದುವ ಒಕ್ಕೂಟದ ಸಮರ್ಥನೆ! ಇನ್ನೂ ಆಲ್ಕೊಹಾಲಿನ ವಿಷಯವೂ ಹಾಗೆ, ಆರೋಗ್ಯಕ್ಕೆ ಹಾನಿ ಎಂಬುದು ತಿಳಿದಿದ್ದರೂ ಸೇವಿಸುತ್ತಾರೆ. ಅದರಿಂದ ಅವರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ! ಬದುಕಿನ ಒತ್ತಡ ಕಡಿಮೆಯಾಗುತ್ತದೆಯಂತೆ!
ಹೌದು, ಇದರಂತೆ ಮಡೆಸ್ನಾನ ಎಂಬುದು ಕೂಡ. ಎಂಜಲೆಲೆಯ ಮೇಲೆ ಉರುಳಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಬ್ರಾಹ್ಮಣರು ಊಟ ಮಾಡಿದ ಎಂಜಲು ಎಲೆಯ ಮೇಲೆ ದಲಿತರು, ಕೆಳವರ್ಗದವರು ಉರುಳಾಡುತ್ತಾರೆ. ಹಾಗಾಗಿ ಮಡೆಸ್ನಾನ ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಇದೊಂದು ಪೂರ್ವಾಗ್ರಹ ಪೀಡಿತ ಕೂಗು. ಮಡೆಸ್ನಾನದಲ್ಲಿ ಎಲ್ಲ ಜನಾಂಗದವರು ಎಂಜಲು ಎಲೆಯ ಮೇಲೆ ಉರುಳುತ್ತಾರೆ. ಇದು ಅರಿವಾಗಬೇಕಾದರೆ, ಹಾಗೆ ಕೂಗುವವರು ಕುಕ್ಕೆಗೆ ಹೋಗಿ ನೋಡಿ ಬರಬೇಕು. ನಾಗನಿಗೆ ಪ್ರಸಿದ್ಧವಾಗಿರುವ ಕುಕ್ಕೆ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಸಮಯದಲ್ಲಿ ೩ ದಿನಗಳ ಕಾಲ ವಿಶೇಷ ಪೂಜೆ ನಡೆಯುತ್ತದೆ. ಈ ವೇಳೆಯಲ್ಲಿ ಮಡೆಸ್ನಾನ ಎಂಬ ವಿಶಿಷ್ಠ ಸೇವೆ ನಡೆಯುತ್ತದೆ.
ಇದಕ್ಕೆ ೫೦೦ ವರ್ಷಗಳ ಇತಿಹಾಸವಿದೆ ಎಂಬುದು ಬಲ್ಲವರ ಮಾತು. ದೇವಳದಲ್ಲಿ ಅನೇಕ ಕೆಲಸ ನಿಭಾಯಿಸುವ ಮಲೆಕುಡಿಯ ಜನಾಂಗದಿಂದಲೇ ಈ ಸೇವೆ ಆರಂಭವಾಗಿದ್ದು ಎಂಬುದು ಕೆಲವರ ವಾದ. ಸಂತಾನ ಪ್ರಾಪ್ತಿ, ಚರ್ಮ ಸಂಬಂಧಿ ರೋಗಗಳಿಗೆ ನಾಗ ಪ್ರಸಿದ್ಧ ದೇವರು. ಅದಕ್ಕೆ ವೈಜ್ಞಾನಿಕ ಕಾರಣ ಇಲ್ಲವಾಗಿರಬಹುದು. ಆದರೆ ಅನಾದಿ ಕಾಲದಿಂದಲೂ ನಮ್ಮ ನಂಬಿಕೆ. ನಾಗದೋಷವಿದ್ದರೆ ಸಂತಾನ ಪ್ರಾಪ್ತಿ ಆಗುವುದಿಲ್ಲ. ನಾಗನ ತೊಂದರೆಯಿಂದ ಕಜ್ಜಿ, ತುರಿಕೆ ಮತ್ತು ಇತರೆ ಚರ್ಮ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬ ಬಲಾಢ್ಯ ನಂಬಿಕೆ ಗ್ರಾಮೀಣ ಭಾಗದಲ್ಲಿ ಇದೆ. ಇದರ ವಿಮೋಚನೆಗಾಗಿ ಮಡೆಸ್ನಾನ ಹುಟ್ಟಿರಬಹುದು.
ಹಾಗಾಗಿಯೇ ಚಂಪಾ ಷಷ್ಠಿಯಂದು ನಡೆಯುವ ಈ ಸೇವೆ ರದ್ದಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು. ಮಡೆಸ್ನಾನಕ್ಕೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದು ರಥ ಕಟ್ಟದೆ ಕುಳಿತ್ತಿದ್ದು. ಸರಕಾರದ ನಿಷೇಧ ವಾಪಸ್ ತೆಗೆಸಿ, ೬೦೦ಕ್ಕೂ ಹೆಚ್ಚು ಭಕ್ತರು ಸೇವೆ ಸಲ್ಲಿಸಿದ್ದು. ಮೇಲ್ಜಾತಿ ಎಂಜಲು ಎಲೆಯಲ್ಲಿ ಕೆಳಜಾತಿಯವರು ಉರುಳುತ್ತಾರೆ. ಹೀಗಾಗಿ ಮಡೆಸ್ನಾನ ವಿರೋಧಿಸುತ್ತೇವೆ ಎಂಬುದು ಕೆಲವರ ವಾದ. ಈ ಸಂಪ್ರದಾಯ ಮುಂದುವರಿಯಬೇಕು. ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ನಿನ್ನೆ ಪಟ್ಟು ಹಿಡಿದಿದ್ದು ಮಲೆಕುಡಿಯ ಜನಾಂಗದವರು ಹೊರತು, ಮೇಲ್ಜಾತಿಯವರಲ್ಲ ಎಂಬುದು ಇಲ್ಲಿ ಪ್ರಮುಖ ಅಂಶವಾಗುತ್ತದೆ.
ಕಷ್ಟಗಳ ನಿವಾರಣೆಗೆ ಹರಕೆ ಹೊತ್ತುಕೊಳ್ಳುವುದು ಭಾರತೀಯ ಸಂಪ್ರದಾಯದಲ್ಲಿನ ಅವಿಭಾಜ್ಯ ಅಂಗ. ಈ ಹರಕೆಗಳಲ್ಲಿ ಹಲವು ವಿಧ. ಪ್ರದೇಶದಿಂದ ಪ್ರದೇಶಕ್ಕೆ, ಆಚರಣೆಗಳಿಗೆ ಅನುಗುಣವಾಗಿ ಹರಕೆಗಳು ಭಿನ್ನ. ಆರಾಧನೆಯೂ ವಿಚಿತ್ರ. ಒಂದೊಂದು ಭಾಗದಲ್ಲಿ ಒಂದೊಂದು ದೈವದ ಪ್ರಭಾವ ಹೆಚ್ಚು. ಇನ್ನೂ ಒಂದೊಂದು ಜಾತಿಗೂ ಅದರದ್ದೆ ಆದ ದೇವರಿದೆ. ಅವರದ್ದೇ ಆದ ಮಠಗಳಿವೆ. ಹೀಗಾಗಿ ಎಲ್ಲರ ದೈವ ಆರಾಧನೆಯೂ ಏಕೀಕೃತವಾಗಿರಬೇಕು ಎಂದು ಭಾರತದಂಥ ರಾಷ್ಟ್ರದಲ್ಲಿ ಬಯಸುವುದು ತಪ್ಪು. ನೀವು ಉಡುಪಿಗೆ ಬಂದರೆ ಅಲ್ಲೊಂದು ವಿಶಿಷ್ಠ ಆಚರಣೆ ಇದೆ. ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಖಾಲಿ ನೆಲದ ಮೇಲೆ ಊಟ ಮಾಡುವುದು. ಹೆಚ್ಚಾಗಿ ಶನಿವಾರ ನೆಲದ ಮೇಲೆ ಊಟ ಮಾಡುವ ಅನೇಕರು ಇಲ್ಲಿ ಕಾಣ ಸಿಗುತ್ತಾರೆ. ಮುಖ್ಯಪ್ರಾಣನಿಗೆ ಇದೊಂದು ರೀತಿಯ ಸೇವೆಯಂತೆ. ಬಾಳೆ ಎಲೆಯಲ್ಲಿ ಊಟ ಮಾಡುವವರ ನಡುವೆಯೇ ಬರಿ ನೆಲದ ಮೇಲೆ ಊಟ ಮಾಡುವ ಅನೇಕರು ಸಿಗುತ್ತಾರೆ. ಉತ್ತರ ಕರ್ನಾಟಕ, ಮಲೆನಾಡು ಭಾಗದಿಂದ ಹೋದವರಿಗೆ ಇದೊಂದು ರೀತಿಯ ಮುರ್ಖ ಆಚರಣೆ ಅನ್ನಿಸುತ್ತದೆ. ಆದರೆ, ದಕ್ಷಿಣಕನ್ನಡದ ಮಂದಿ ಜಾತಿ, ಅಂತಸ್ತಿನ ಭಿನ್ನತೆಯಿಲ್ಲದೆ ಈ ಸೇವೆ ಸಲ್ಲಿಸುತ್ತಾರೆ. ಅದು ಅಲ್ಲಿನ ನಂಬಿಕೆ. ಅಂದಹಾಗೆ ಇದೊಂದು ಸೇವೆಯಷ್ಟೆ. ಅಷ್ಟ ಮಟ್ಟದ ಸೇವಾ ಪಟ್ಟಿಯಲ್ಲಿ ಈ ಸೇವೆಯಿಲ್ಲ. ಇದಕ್ಕೆ ಯಾವುದೇ ರೀತಿಯ ಶುಲ್ಕವಿಲ್ಲ.
ಹಾಗೆ ಮಡೆಸ್ನಾನದ ವಿಚಾರ. ಇದೊಂದು ತೀರಾ ವೈಯಕ್ತಿಕ ಮಟ್ಟದ ಸೇವೆ. ಕುಕ್ಕೆಯ ಸೇವೆಗಳ ಪಟ್ಟಿಯಲ್ಲಿ ಇದರ ಹೆಸರಿಲ್ಲ. ಜೊತೆಗೆ ಇದಕ್ಕೆ ಎಂದು ವಿಶೇಷ ಪೂಜೆಯೂ ಇಲ್ಲ. ವೈಯಕ್ತಿಕವಾಗಿ ನಿಮಗೆ ನಂಬಿಕೆ ಇದ್ದರೆ ಈ ಸೇವೆ ಸಲ್ಲಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಯಾವುದೋ ಕಷ್ಟ ಪರಿಹಾರಕ್ಕಾಗಿ ಹರಕೆ ಹೊತ್ತವರೇ ಈ ಸೇವೆ ಮಾಡುವುದು. ಅವರು ಅಂದುಕೊಂಡಿದ್ದು ಸಿದ್ಧಿಸಿದೆ ಎಂಬ ಕಾರಣಕ್ಕಾಗಿ ದೇವರಿಗೆ ತಿರುಗಿ ಅವರು ಅರ್ಪಿಸುವ ಕಾಣಿಕೆಯ ವರ್ಗದಲ್ಲಿ ಮಡೆಸ್ನಾನವನ್ನು ಸೇರಿಸಬಹುದು. ಆತನಿಗೆ ಒಳಿತು ಆಗದೆ ಸುಮ್ಮನೆ ಈ ಕಾಣಿಕೆ ನೀಡುತ್ತಾನಾ?
ನೀವು ಮಲೆನಾಡಿಗೆ ಬಂದರೆ ಯಕ್ಷಿ, ಚೌಡಿ, ಭೂತದಂಥ ಒಂದಷ್ಟು ಗ್ರಾಮ್ಯದೇವತೆಗಳಿವೆ. ಕರಾವಳಿಯಲ್ಲಿ ಪಂರ್ಜುಲಿ, ಕಲ್ಲುಕುಟುಕ ಎಂಬುದಾಗಿದೆ. ಈ ದೇವತೆಗಳಿಗೆ ಕುರಿ, ಕೋಳಿಯ ಬಲಿಯಾಗಬೇಕು. ರಕ್ತದ ಅಭಿಷೇಕ ಮಾಡಬೇಕು. ದೀಪಾವಳಿಯಲ್ಲಿ ತೆಂಗಿನಕಾಯಿ ಒಡೆಯುವ ಒಂದು ವರ್ಗವಿದ್ದರೆ, ಕೋಳಿ ಬಲಿ ಕೊಡುವ ಮತ್ತೊಂದು ವರ್ಗವಿದೆ. ಎರಡನ್ನು ಈ ದೇವರು ಸ್ವೀಕರಿಸುತ್ತದೆಯೋ, ಬಿಡುತ್ತದೆಯೊ ನಂತರದ ಪ್ರಶ್ನೆ. ಆದರೆ ಇದು ಅಲ್ಲಿನ ನಂಬಿಕೆ. ದೀಪಾವಳಿಗೆ ಕೋಳಿ ಬಲಿಯಾಗದಿದ್ದರೆ ಅನಾರೋಗ್ಯ, ತೊಂದರೆ ಉಂಟಾಗುತ್ತದೆ ಎಂಬ ಭಯ ಇವತ್ತಿಗೂ ಇದೆ. ಆಕಸ್ಮಿಕವಾಗಿ ಮನೆಯಲ್ಲಿ ಯಾರಿಗಾದರು ಜ್ವರ ಬಂದರೆ, ಅದು ಯಕ್ಷಿಯ ಸಮಸ್ಯೆಯೆಂದು ಭಾವಿಸುವವರು ಈಗಲೂ ಪ್ರಸ್ತುತ.
ಬೆಂಗಳೂರಿನಲ್ಲಿ ಕಾರ್ಯಸಿದ್ಧಿ ಆಂಜನೇಯ ಅಂತ ಒಂದು ದೇವಾಲಯವಿದೆ. ಇಲ್ಲಿ ಏನಾದರೂ ಅಂದುಕೊಂಡು ಕಾಯಿ ಕಟ್ಟಿದರೆ, ಅಂದುಕೊಂಡಿದ್ದು ಸಿದ್ಧಿಸುತ್ತದೆಯಂತೆ. ನಮ್ಮಂಥ ತಲೆಹರಟೆಗಳು ಭಾರತದಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಆಗಲಿ ಎಂದು ಕಾಯಿ ಕಟ್ಟುತ್ತೇವೆ! ಅದು ಸಿದ್ಧಿಸುವುದಿಲ್ಲ. ದೇವರ ಪರೀಕ್ಷೆ ಮಾಡಬಾರದು ಎಂದು ಪುರೋಹಿತರ ಆದೇಶ ಬರುತ್ತದೆ! ಹಾಗಂತ ಒಂದು ಇಷ್ಟಾರ್ಥ ಸಿದ್ಧಿಸಿಲ್ಲ ಅಂತಾ ಈ ಪದ್ಧತಿ ಸರಿಯಿಲ್ಲ ಅನ್ನಲು ಸಾಧ್ಯವಿಲ್ಲ ಅಲ್ಲವೆ? ಒಮ್ಮೆ ಸರಿಯಿಲ್ಲದಿದ್ದರೆ ಪ್ರತಿನಿತ್ಯ ನೂರಾರು ಮಂದಿ ಅಲ್ಲಿ ಕಾಯಿ ಕಟ್ಟುತ್ತಿದ್ದರಾ?
ಅಸಹ್ಯ ಅನ್ನಿಸುವ ಈ ಸೇವೆ ಮಾಡದಿದ್ದರೆ ಏನಾಗುತ್ತದೆ ಅನ್ನಬಹುದು ನೀವು. ಬೆಂಗಳೂರಿನ ಕೃಷಿ ಮಾರುಕಟ್ಟೆ ಬಳಿ ಒಂದು ಮೈದಾನವಿದೆ. ಬಕ್ರೀದ್ ಹಿಂದಿನ ಅಲ್ಲಿ ಹೋದರೆ ನೀವು ಕಂಗಾಲಾಗಿ ನಿಲ್ಲುತ್ತೀರಿ. ಅಲ್ಲಿನ ಕೂಗುವ ಕುರಿಗಳನ್ನು ಕಂಡು ಕರುಳು ಕರಗುತ್ತದೆ. ಹಾಗಂತ ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಕುರಿ ಕಡಿಯುವುದನ್ನು ನಿಷೇಧಿಸಿ ಅಂತಾ ಬೀದಿಗೆ ಇಳಿಯುವುದಿಲ್ಲ. ಬದಲಾಗಿ ಗೋ ಹತ್ಯೆ ನಿಷೇಧ ವಿರೋಧಿಸಿ ಬೀದಿಗಿಳಿಯುತ್ತೇವೆ. ಟೌನ್ಹಾಲ್ ಎದುರು ಗೋಮಾಂಸ ತಿಂದು ಪ್ರತಿಭಟಿಸುತ್ತೇವೆ. ಇಲ್ಲಿ ಮಾನವೀಯತೆ ಆರಿ ಹೋಗುತ್ತದೆ. ಯಾಕೆಂದರೆ ಅವೆಲ್ಲ ಪ್ರತಿಭಟಿಸಲು ಸಾಧ್ಯವಿಲ್ಲ ಮೂಕಪ್ರಾಣಿಗಳು…
ಹೌದು, ಬಕ್ರೀದ್ ದಿನ ಕುರಿ ಕಡಿಯುವುದು ಮುಸ್ಲಿಂರ ನಂಬಿಕೆ. ದೀಪಾವಳಿಗೆ ಕೋಳಿ ಬಲಿ ಹಿಂದುಗಳ ಸಂಪ್ರದಾಯ. ಹಾಗೆ, ಮಡೆಸ್ನಾನ ದಕ್ಷಿಣ ಕನ್ನಡದ ನಂಬಿಕೆ. ಅದನ್ನು ವಿರೋಧಿಸುವುದಾದರೆ, ಕುರಿ, ಕೋಳಿ ಬಲಿಯನ್ನೂ ನಿಲ್ಲಿಸಿ. ಇದು, ಮಡೆಸ್ನಾನಕ್ಕಿಂತ ಹೇಯಕೃತ್ಯವಲ್ಲವೇ? ಗೋಮಾಂಸ ತಿನ್ನುವುದು ಅವರ ಆಹಾರ ಪದ್ದತಿ. ಹಾಗಾಗಿ ಅದು ಸಮರ್ಥನೀಯ ಅಂತಾದರೆ, ಮಡೆಸ್ನಾನವೂ ಅವರ ನಂಬಿಕೆ. ಅದಕ್ಕೆ ನೀವೇಕೆ ಪುಗ್ಸಟ್ಟೆ ಕಲ್ಲು ಎಸೆಯುತ್ತೀರಿ?
ಯಾವತ್ತೂ ಹಾಗೆ, ಹುಚ್ಚಾಸ್ಪತ್ರೆಯ ಒಳಗೆ ಕುಳಿತವನಿಗೆ ಹೊರಗಿನವರು ಹುಚ್ಚರು. ಹೊರಗೆ ಕುಳಿತವನಿಗೆ ಒಳಗಿನವ. ನಮ್ಮ ಬುದ್ಧಜೀವಿಗಳ ಕಥೆಯೂ ಹಾಗೆ. ಇಲ್ಲಿ ಕುಳಿತ ಮಂದಿಗೆ ಕುಕ್ಕೆ ಸುಬ್ರಮಣ್ಯದಲ್ಲಿ ಉರುಳುವವರೆಲ್ಲ ಅನಕ್ಷರಸ್ಥರು. ಅವಿದ್ಯಾವಂತರು. ಅವರ ಅಂಕಪಟ್ಟಿಯನ್ನೆಲ್ಲ ತರಿಸಿ ಪರಿಶೀಲನೆ ನಡೆಸಿದ್ದಾರೆ ನೋಡಿ ಇವರುಗಳು!
ಅಂದಹಾಗೆ ಈ ಪದ್ದತಿ ಜೆಡಿಎಸ್, ಕಾಂಗ್ರೆಸ್ ಪಕ್ಷವಿದ್ದ ಕಾಲದಲ್ಲೂ ಇತ್ತು. ಆಗ ಯಾರೂ ಗಲಾಟೆ ಮಾಡಲಿಲ್ಲ. ಈಗ ಇದ್ದಕ್ಕಿಂದ್ದಂತೆ ಕೆಲವರಿಗೆ ಮಾನವೀಯತೆ ಉಕ್ಕಿದ್ದೇಕೆ? ಅಸಹ್ಯ ಅಂತಾ ಕೆಲವರು ಬೀದಿಗಿಳಿದಿದ್ದು ಯಾಕೆ? ಆವತ್ತು ಅದು ಸಹ್ಯವಾಗಿತ್ತಾ ಇವರುಗಳ ಪಾಲಿಗೆ ಎಂದರೆ, ಮತ್ತದೆ ಬ್ರಾಹ್ಮಣ, ದಲಿತ ಅಂತಾ ಮೂಗು ತುರಿಸುತ್ತಾರೆ. ಮೇಲ್ಜಾತಿ-ಕೆಳಜಾತಿ ಅಂತಾ ಕೆರೆದುಕೊಳ್ಳುತ್ತಾರೆ!
ಒಬ್ಬರೊ, ಇಬ್ಬರೋ ಸೇವೆ ಮಾಡಿದ್ದರೆ ಒಪ್ಪಬಹುದಾದ ಮಾತು. ಇವರು ಹೇಳಿದ ಹಾಗೆ ಮೇಲ್ಜಾತಿಯ ಹುನ್ನಾರ ಅನ್ನಬಹುದಿತ್ತು. ಆದರೆ ಸಾವಿರಾರು ಮಂದಿ ಈ ಸೇವೆ ಮಾಡಿದ್ದಾರೆ. ಅವರ್ಯಾರಿಗೂ ಈ ಸೇವೆ ಯಾಕೆ ಅಸಹ್ಯ ಅನ್ನಿಸಲಿಲ್ಲ. ಈ ಎಲ್ಲ ಸಾವಿರಾರು ಮಂದಿಯೂ ಅನಕ್ಷರಸ್ಥರಾ? ಅವಿದ್ಯಾವಂತರ? ಕಳೆದ ವರ್ಷ ನ್ಯಾಯಾಧೀಶರೊಬ್ಬರು ಮಡೆಸ್ನಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅವರು ಬಹುಶಃ ಅನಕ್ಷರಸ್ಥರಿರಬೇಕು. ಅಥವಾ ಮೇಲ್ಜಾತಿಯ ಪಿತೂರಿಯಿಂದ ಅವರು ಹಾಗೆ ಮಾಡಿರಬೇಕು!
ಬೆಂಗಳೂರಿನಲ್ಲಿ ಕುಳಿತು ಸುಮ್ಮನೆ ಮೈಉಜ್ಜಿಕೊಂಡರೆ ಯಾವ ಬದಲಾವಣೆಯೂ ಆಗುವುದಿಲ್ಲ. ಕೆಲವರಿಗೆ ಮೈಉಜ್ಜಿಕೊಂಡ ಆಧಾರದಲ್ಲಿ ಒಂದಿಷ್ಟು ಪ್ರಶಸ್ತಿಗಳು ಬರುತ್ತವೆ ಎಂಬುದನ್ನು ಹೊರತುಪಡಿಸಿ(ಅದು ಬರುವುದಿಲ್ಲ, ಕೊಡಿಸುವ ಏಜೆಂಟರಿಗೆ ಕಮಿಷನ್ ನೀಡಿ ಪಡೆಯವುದು!)ಹರಕೆ ಹೊತ್ತುಕೊಂಡವರು, ಯಾರು ನಿಷೇಧ ಹೇರಿದರೂ ಆ ಸೇವೆ ಸಲ್ಲಿಸುತ್ತಾರೆ. ಹರಕೆ ತೀರಿಸದಿದ್ದರೆ ಕೆಡುಕಾಗುತ್ತದೆ ಎಂಬ ಆಂತರಿಕ ಭಯ ಅವರಲ್ಲಿರುತ್ತದೆ. ಜೊತೆಗೆ ಹರಕೆ ಕಟ್ಟಿಕೊಂಡ ನಂತರ ಒಳ್ಳೆಯದಾಗಿದೆ ಎಂಬ ನಂಬಿಕೆ ಇರುತ್ತದೆ. ಹಾಗಾಗಿ ಇಲ್ಲಿ ಜಾತಿ ಹೆಸರಲ್ಲಿ ಮೈಪರಚಿಕೊಳ್ಳುವುದರಲ್ಲಿ ಅರ್ಥವಿಲ್ಲ…
ಕೆಲವರಿಗೆ ಸಿಗರೇಟು, ಹೆಂಡ ಮಾನಸಿಕ ನೆಮ್ಮದಿ ನೀಡುವ ಸಾಧನಗಳು. ಕುಳಿತು ಕುಡಿಯುವ ಬಾರು ಮುಖ್ಯವಾಗುವುದಿಲ್ಲ. ಅದು ಮಾರುಕಟ್ಟೆಯ ಬಾರು ಆಗಿರಬಹುದು, ಪಂಚತಾರಾ ಹೊಟೇಲಿನ ಬಾರು ಅಗಿರಬಹುದು. ಅವರ ಶಕ್ತಿಗೆ ಅನುಗುಣವಾದ, ಅಗತ್ಯಕ್ಕೆ ತಕ್ಕ ಜಾಗದಲ್ಲಿ ಕುಡಿಯುತ್ತಾರೆ. ಮಾನಸಿಕ ನೆಮ್ಮದಿ ಪಡೆಯುತ್ತಾರೆ. ಹಾಗೆಯೇ ದೇವರು, ಸೇವೆಗಳು ಕೂಡ. ಇದಕ್ಕೆ ಮತ್ತೆ ಜಾತಿ ಲೇಪ ಕಟ್ಟಿ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಒಬ್ಬರ ನಂಬಿಕೆಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಥರವಲ್ಲ…
(ವಿಂಡೋಸ್ ೭ ಹಾಕಿಕೊಂಡು ಕನ್ನಡ ಕುಟ್ಟಲು ಕಷ್ಟಪವುತ್ತಿದ್ದೇನೆ. ಅಕ್ಷರದೋಷಗಳಿರಬಹುದು. ಕ್ಷಮೆ ಇರಲಿ…)
Posted in ಚಿಂತನ ಚಾವಡಿ | 7 Comments »
ಬರೆಯದೆ ಸಿಕ್ಕಾಪಟ್ಟೆ ದಿನಗಳಾಗಿದೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಜಿಗಿದಿರುವುದಕ್ಕೆ ಇದು ಮೊದಲ ಸಾಕ್ಷಿಯಾ ಅಂತಾ ಮಾತ್ರ ಕೇಳಬೇಡಿ! ಹಲವಾರು ದಿನಗಳಿಂದ ಏನು ಬರೆಯದ ನಿಧಿ, ಸುಶ್ರುತ, ವಿಕಾಸ್ರಂಥ ಒಂದಷ್ಟು ಬ್ಲಾಗ್ ಗೆಳೆಯರು ನನಗೆ ಸಾಥ್ ನೀಡುತ್ತಿದ್ದಾರೆ! ಹಾಗಾಗಿ ಇದು ದೃಶ್ಯ ಮಾಧ್ಯಮದ ಅಡ್ಡ-ಉದ್ದ ಪರಿಣಾಮವಲ್ಲ. ಅದ್ಯಾಕೊ ಬರೆಯಲು ಮನಸ್ಸಾಗುತ್ತಿಲ್ಲ. ಬರೆಯಲು ಮನಸ್ಸಾಗುತ್ತಿಲ್ಲ ಅನ್ನೋ ವಿಷಯವನ್ನೇ ಇಟ್ಟುಕೊಂಡು ಮತ್ತೆ ಬರೆಯಲು ಶುರುವಿಟ್ಟಿದ್ದೇನೆ!
ಬೆಂಗಳೂರು ಬೋರಾಗುತ್ತಿದೆ ಎಂಬ ರಾಗವನ್ನು ಮತ್ತೆ ಎಳೆಯುವಂತಿಲ್ಲ. ಮತ್ತ್ಯಾಕೆ ಇನ್ನೂ ಇಲ್ಲೇ ಇದ್ದೀರಾ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಉತ್ತರವಿದ್ದರೂ, ಅದನ್ನು ಹುಡುಕಾಡುವ ಸ್ಥಿತಿಯಿಲ್ಲ. ಇನ್ನೂ, ಕೆಲಸ ಬೇಜಾರು ಬಂದಿದೆ ಅಂತೇನಾದ್ರು ತಗಾದೆ ತೆಗೆದ್ರೆ, ನಾನೇ ಸರಿಯಿಲ್ಲ ಎಂಬ ತೀರ್ಮಾವನ್ನು ಸಮಾಜ ತೆಗೆದುಕೊಂಡು ಬಿಡುತ್ತದೆ. ಹೀಗಾಗಿ ಆ ವಿಚಾರದಲ್ಲಿ ಚೂರು ಕೆಮ್ಮುವಂತಿಲ್ಲ. ಇವೆರಡನ್ನು ಬಿಟ್ಟು ಸರಿಯಿಲ್ಲ ಅಂತಾ ಆರೋಪಿಸಲು ಮತ್ತ್ಯಾವ ವಿಚಾರವೂ ಸಿಗುತ್ತಿಲ್ಲ. ಒಟ್ನಲ್ಲಿ ಕನ್ನಡ ರಾಜ್ಯೋಸ್ತ(ತ್ಸ)ವದ ಶುಭ ಸಂದರ್ಭದಲ್ಲಿ ಬದುಕು ಟೋಟ್ಟಲಿ ಅಯೊಮಯ!
ಹೌದು, ಬದುಕು ಒಂದು ರೀತಿ ಸಂಕೀರ್ಣ ಅನ್ನಿಸುತ್ತಿದೆ ಅಥವಾ ನಾವು ಬದುಕುವ ರೀತಿಯೆ ಸಂಕೀರ್ಣಗೊಂಡಿದೆ. ನಮ್ಮೂರಲ್ಲಿ ಮಳೆಗಾಲ ಬಂತು ಅಂದ್ರೆ ೬ ತಿಂಗಳು ವಾಹನ ಸಂಚಾರವಿಲ್ಲ. ಜೀವ ಹೋಗುತ್ತೆ ಅಂದ್ರೆ ಹತ್ತಿರದಲ್ಲಿ ಆಸ್ಪತ್ರೆಯಿಲ್ಲ. ಅಡುಗೆ ಮಾಡಲು ಬೇಜಾರು ಅಂತಾ ಹೊಟೆಲ್ಗೆ ಹೋಗಲು ಸಾಧ್ಯವಿಲ್ಲ. ಇನ್ನೂ, ಇರೋ ಮೂರು ಮತ್ತೊಂದು ಗೇಣು ಜಾಗಕ್ಕೆ ನೂರೆಂಟು ಮಂದಿಯ ರಗಳೆ…ಹೀಗೆಲ್ಲ ಆಲೋಚಿಸಿ ನಾವೆಲ್ಲ ನಗರಗಳತ್ತ ಮುಖ ಮಾಡಿದ್ದು. ಅಂದುಕೊಂಡ ಹಾಗೆ ನಗರ ಎಂಬುದು ನಮ್ಮ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಿರುವುದು ಸುಳ್ಳಲ್ಲ. ಆದ್ರೆ ಈ ನಗರದಲ್ಲೂ ಅದರದ್ದೆ ಆದ ಒಂದಷ್ಟು ಸಮಸ್ಯೆಗಳಿವೆ. ಇವೆಲ್ಲ ಅರಿವಾಗುವುದು ಮನೆಗೆ ನೆಂಟರು ಬಂದಾಗ ನೀರು ಬರದೇ ಇದ್ದಾಗ, ಆಫೀಸಿಗೆ ತಡವಾಗಿ ಹೊರಟಾಗ ಟ್ರಾಫಿಕ್ ಜಾಮ್ ಆದಾಗ!
ನಿನ್ನೆ ನಾವು ಗೆಳೆಯರೊಂದಷ್ಟು ಜನ ಪಟಾಕಿ ಹೊಡೆಯುವ ಕುರಿತು ಮಾತನಾಡುತ್ತಿದ್ದೆವು. ನನಗೆ ಈ ಬೆಂಗಳೂರಿನ ಕುರಿತು ಅತಿಯಾಗಿ ಸಿಟ್ಟು ಬಂದಿದ್ದು ಈ ಸಲದ ದೀಪಾವಳಿಯಲ್ಲಿ ಇಲ್ಲಿನ ಪಟಾಕಿ ಹಾವಳಿ ನೋಡಿದಾಗ. ಯಾರದ್ದೊ ಮನೆಯಲ್ಲಿ ಹಚ್ಚಿದ ರಾಕೆಟ್ಟು ಇನ್ನ್ಯಾರದ್ದೊ ಮನೆ ಬಾಗಿಲಿಗೆ ಹೋಗಿ ಬೀಳುತ್ತದೆ. ಇದರ ಅರಿವು ಇರುವ ಬಿಇ, ಎಬಿಎಂ…ವಗೈರೆ,ವಗೈರೆ ಪದವೀಧರರುಗಳು ಪಟಾಕಿ ಹೊಡೆಯವುದು ಮಾತ್ರ ಬಿಡುವುದಿಲ್ಲ. ನಡು ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತವೆ. ಅವರೆಲ್ಲರಿಗೂ ತೊಂದರೆ ಕೊಟ್ಟು, ಎಲ್ಲರನ್ನೂ ತಡೆದು ನಿಲ್ಲಿಸಿಯಾದರೂ ಪಟಾಕಿ ಸರ ಹಚ್ಚಿ ವಿಕೃತ ಸಂತೋಷ ಅನುಭವಿಸುವುದು ನಗರ ಜೀವನಕ್ಕೆ ಸಾಕ್ಷಿ ಇರಬಹುದೆ?
ಊರಲ್ಲಿನ ಪಟಾಕಿ ಗಮ್ಮತ್ತು ಬೇರೆ. ರಾಕೆಟ್ನಲ್ಲಿ ಥರ-ಥರದ ಪ್ರಯೋಗಳು. ಬಾಟಲಿಯಲ್ಲಿ ರಾಕೆಟ್ ಇಡುವುದು, ತೆಂಗಿನಕಾಯಿ ಗರಟೆಯಲ್ಲಿ ರಾಕೆಟ್ ಇಡುವುದು, ಸುರುಸುರು ಕಡ್ಡಿಯನ್ನು ತಿರುಗಿಸಿ-ತಿರುಗಿಸಿ ಎಸೆಯುವುದು, ಬೇಲಿಯ ಗೂಟಕ್ಕೆ ಸರ ಪಟಾಕಿ ಹಚ್ಚುವುದು, ನೆಲಚಕ್ರವನ್ನು ಉರುಳಿಸಿ ಬಿಡುವುದು. ವಾಲೆಗರಿಯನ್ನು ಕೈಯಲ್ಲಿ ಹಿಡಿದು ಹೊಡೆಯುವುದು…ಪಟಾಕಿಯೊಂದಿಗೆ ಮಾಡಿದ ಪ್ರಯೋಗಗಳಿಗೆ ಲೆಕ್ಕವಿಲ್ಲ. ಅಂಥದ್ದೆ ಪ್ರಯೋಗಗಳು ಇಲ್ಲಿ ನಡೆದರೆ ಸಿಟ್ಟು ಬರುತ್ತದೆ. ಕಾರಣವಿಷ್ಟೆ ಊರಲ್ಲಿ ಒಬ್ಬ ಮಲಗುವಷ್ಟು ಜಾಗ, ಇಲ್ಲಿ ೩ ಕುಟುಂಬಗಳಿಗೆ ಆಸರೆ. ಇದು ನಗರದ ಮತ್ತೊಂದು ಮುಖ.
ಇನ್ನೂ ಕಚೇರಿಗಳಲ್ಲಂತೂ ಮನುಷ್ಯತ್ವ ಅನ್ನುವುದು ಕಳೆದುಹೋಗುತ್ತಿದೆ. ಪಕ್ಷ ರಾಜಕೀಯವಿದ್ದಂತೆ, ಆಫೀಸ್ಗಳಲ್ಲಿ ಬಣ ರಾಜಕೀಯ. ಬಹುಶಃ ಇದು ಪತ್ರಿಕೋದ್ಯಮದಿಂದ-ಸಾಫ್ಟ್ವೇರ್ವರೆಗೆ ಯಾವುದೇ ಕ್ಷೇತ್ರವನ್ನು ಬಿಟ್ಟಂತಿಲ್ಲ. ಯಾರಾದರು ಒಬ್ಬರನ್ನು ಇಷ್ಟಪಟ್ಟು ಮಾತನಾಡಿಸಿದರೆ ಮತ್ತೊಬ್ಬರಿಗೆ ಬೇಸರ. ಯಾರ ಜೊತೆಗಾದರು ಹೆಚ್ಚು ಸ್ನೇಹ ಬೆಳೆಸಿದರೆ, ಅದಕ್ಕೆ ಸಂಬಂಧಗಳ ತಳುಕು. ದಿನ ಕಳೆದಂತೆ ಅದೊಂದು ವಿಕೃತ ಸಂತೋಷದ ವಸ್ತುವಾಗಿಬಿಡುತ್ತದೆ. ನಮಗೆ, ಯಾರೊಂದಿಗಾದರೂ ಸಂಬಂಧ ಕಲ್ಪಿಸಿ ಮಾತನಾಡಿದರೆ, ನಮ್ಮ ಪಾಲಿಗದು ಮಜ ತೆಗೆದುಕೊಳ್ಳುವ ವಿಷಯವಾಗಿಬಿಡುತ್ತದೆ.
ಯಾರು ಎಷ್ಟು ದಿನ ಬದುಕುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದಾಗ್ಯೂ ಬದುಕಿದಷ್ಟು ದಿನ ಬದ್ಧ ವೈರಿಗಳಂತೆ ಆಡುವುದನ್ನು ಬಿಡುವುದಿಲ್ಲ. ಏನೊ ದೊಡ್ಡ ವಿಚಾರಕ್ಕೆ ಇವರುಗಳ ಮುನಿಸಿರಬಹುದೇ ಎಂದರೆ, ಊಹುಂ ಖಂಡಿತ ಇಲ್ಲ. ಆಫೀಸಿನಲ್ಲಿ ನಾನು ಹೇಳಿದ ಕಂಪನಿಯ ನೀರು ಬಾಟಲಿ ತರಿಸಲಿಲ್ಲ, ನಾನು ಹೇಳಿದ ವಿನ್ಯಾಸದ ಪೊರಕೆ(ಹಿಡಿಸುಡಿ) ತಂದಿಲ್ಲ. ಬದಲಾಗಿ ಅವರ ಗುಂಪಿನ ಮಾತು ಮೇಲಾಗಿದೆ ಎಂಬ ವಿಷಯಕ್ಕೆ ಕಿತ್ತಾಟ! ಅವನು ನನಗಿಂತ ಮೊದಲು ಇವನ್ನನ್ನು ಮಾತನಾಡಿಸಿದ ಎಂಬ ಕಾರಣಕ್ಕೆ ಹಗೆ. ಇದರಿಂದ ಲಾಭವೇನು ಎಂದರೆ ಯಾರಲ್ಲೂ ಉತ್ತರವಿಲ್ಲ. ಹಿಂದೆಲ್ಲ ರಾಜರ ಗೋರಿ ಮೇಲೆ ಶ್ರೀಯುತರು ಕ್ರಿ.ಶ ಇಷ್ಟರಿಂದ-ಇಷ್ಟವರೆಗೆ…ಸಾಮ್ರಾಜ್ಯವನ್ನು ಆಳಿದರು ಎಂದು ಇರುತ್ತಿತ್ತಂತೆ. ಮುಂದೆ ಕೆಲವರ ಗೋರಿಗೆ ಹಾಗೆ ಕೆತ್ತಿಸಬೇಕು. ಶ್ರೀಯುತರು ಈ ಬಣವನ್ನು ಇಷ್ಟರಿಂದ-ಇಷ್ಟರವರೆಗೆ…ಆಗಲಾದರೂ ಅವರ ಹಗೆತನಕ್ಕೆ ಅರ್ಥ ಬರಬಹುದು!
ತಂತ್ರಜ್ಞಾನ ವೃದ್ಧಿ ಎಂಬುದು ಈ ಬಣ ಕಾಳಗಕ್ಕೆ ತುಪ್ಪ ಸುರಿಯುತ್ತಿವೆ. ಇಬ್ಬರ ನಡುವೆ ಜಗಳ ತಂದಿಡಲು ವೇದಿಕೆಯಾಗುತ್ತಿವೆ. ಪತ್ರಿಕೋದ್ಯಮದ ಕುರಿತು ಪುಂಖಾನುಪುಂಖವಾಗಿ ಉಪದೇಶದ ಶಂಖ ಊದುವ ಒಂದಷ್ಟು ಬ್ಲಾಗ್ಗಳು ಬಣ ರಾಜಕೀಯದಲ್ಲಿ ಮುಳುಗಿ ಹೋಗಿವೆ. ಒಂದು ಗುಂಪಿನವರು ಮಾಡುವ ಹಾದರ ಅಲ್ಲಿ ಸುದ್ದಿಯಾಗುವುದಿಲ್ಲ. ಜೊತೆಗೆ ಬೇನಾಮಿ ಪ್ರತಿಕ್ರಿಯೆಗಳು. ಆಫೀಸಿನಲ್ಲಿ ಹಗೆತನವಿರುವವರ ಹೆಸರಿನಲ್ಲಿ ಕಮ್ಮೆಂಟ್ ದಾಖಲಿಸುವುದು. ವಾಸ್ತವವಾಗಿ ಅದರ ಅರಿವು ಆ ವ್ಯಕ್ತಿಗೆ ಇರುವುದೇ ಇಲ್ಲ. ಯಾರದ್ದೊ ಮೇಲ್ ಐಡಿ ನಕಲು ಮಾಡಿ ಜಗಳ ಹಚ್ಚಿಹಾಕುವುದು ಇತ್ತೀಚಿನ ದಿನಗಳಲ್ಲಿ ವಿಪರೀತವಾಗುತ್ತಿದೆ.
ಯಾವುದಾದರು ಅಷ್ಟೆ, ನಾವು ಸಮಸ್ಯೆ ಅಂದುಕೊಂಡರೆ ಮಾತ್ರ ಅದು ಸಮಸ್ಯೆಯಾಗುತ್ತದೆ. ಅದು ಸಮಸ್ಯೆಯೇ ಅಲ್ಲ, ಅವರು ಮಾತನಾಡಿದ್ದು ನಮಗೆ ಕೇಳಿಸಲೇ ಇಲ್ಲ ಅಂದುಕೊಂಡರೆ, ಅದು ಸಮಸ್ಯೆಯಾಗುವುದಿಲ್ಲ. ನಾವು ಕೂಡ ಅದೇ ಸಿದ್ಧಾಂತ ಅಳವಡಿಸಿಕೊಂಡರೆ ಮಾತ್ರ ಬದುಕಲು ಸಾಧ್ಯ. ಇಲ್ಲವಾದರೆ ಯಾರದ್ದೊ ಸಮಸ್ಯೆಗೆ ನಾವು ಅನಾಸಿನ್ ತಿನ್ನಬೇಕಾದ ದೃಶ್ಯ ಎಂಬಲ್ಲಿಗೆ ಇವತ್ತಿನ ಪ್ರಸಂಗ ಪೂರ್ಣಗೊಳ್ಳುತ್ತದೆ!
Posted in ಚಿಂತನ ಚಾವಡಿ | 2 Comments »
ಬದುಕು ನಿಂತ ನೀರಾಗಬಾರದು. ಹರಿಯುವ ನದಿಯಾಗಬೇಕು ಅಂತಾರೆ ಬಲ್ಲವರು. ೪-೫ ವರ್ಷ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೆ, ಸ್ವಾಭಾವಿಕವಾಗಿ ಅದು ನಮಗೆ ಬೇಸರ ತರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಒಂದೇ ಕಡೆ ಅಂಟಿಕೊಂಡರೆ ಬದುಕಿನ ಒಂದಷ್ಟು ಅನುಭವಗಳನ್ನು ಕಳೆದುಕೊಳ್ಳುತ್ತೇವೆ. ಹೀಗೆಲ್ಲ ಯೋಚಿಸಿ ಕೆಲಸದಲ್ಲೊಂದು ಪುಟ್ಟ ಬದಲಾವಣೆ ಮಾಡಿಕೊಂಡಿದ್ದೇನೆ. ಸುಮಾರು ೪ ವರ್ಷಗಳಿಂದ ಕೈಹಿಡಿದು ನಡೆಸಿದ್ದ ಮುದ್ರಣ ಮಾಧ್ಯಮದಿಂದ, ದೃಶ್ಯ ಮಾಧ್ಯಮದತ್ತ ಹೆಜ್ಜೆ ಹಾಕಿದ್ದೇನೆ. ಅದಕ್ಕೂ, ಇದಕ್ಕೂ ಏನು ವ್ಯತ್ಯಾಸ ಅಂತಾ ಬಹಳಷ್ಟು ಮಂದಿಕೇಳಿದ್ದಾರೆ. ಅಲ್ಲ, ಅಂಥ ಒಳ್ಳೆ ಪತ್ರಿಕೆ ಬಿಟ್ಟು ಇಲ್ಲಿಗ್ಯಾಕೆ ಬಂದ್ರಿ ಅನ್ನುವ ದಾಟಿಯಲ್ಲಿ ಮಾತಾಡಿದವರೂ ಇದ್ದಾರೆ.
ಕೆಟ್ಟ ಬಾಸಿನ ಕಾಟ ತಾಳಲಾರದೆ ಬಿಟ್ಟಿದ್ದೇನೆ ಅಂದವರಿಗೂ ಕೊರತೆಯಿಲ್ಲ! ಇಲ್ಲಿ ಒಂದು ಸ್ಪಷ್ಟೀಕರಣ ಕೊಡಬೇಕಿದೆ. ಕೆಟ್ಟ ಬಾಸಿನ ಕಾಟ ಅಂದವರು ಹೆಸರಿಸಿರುವ ವ್ಯಕ್ತಿ, ನನಗೆ ಯಾವತ್ತೂ ಬಾಸ್ ಆಗಿರಲಿಲ್ಲ. ಬಾಸಿಸಂ ಸಂಸ್ಕೃತಿ ಒಪ್ಪಿಕೊಂಡು ಕೆಲಸ ಮಾಡಬೇಕಾದ ಯಾವ ಅನಿವಾರ್ಯತೆಯೂ ನನಗಂತೂ ಇಲ್ಲ. ಜಗತ್ತು ಸಾಕಷ್ಟು ವಿಶಾಲವಾಗಿದೆ ಅಂತಾ ನಂಬಿದವನು. ಅವರ ಜೊತೆಗೆ ನನ್ನ ನಂಟು ಇವತ್ತಿಗೂ ಚೆನ್ನಾಗಿದೆ. ಬೇರೆಯವರ ಪಾಲಿಗೆ ಅವರು ಹೇಗೋ ಗೊತ್ತಿಲ್ಲ.
ಕೆಲಸ ಬದಲಿಸಿದ್ದರಿಂದ ಒಂದಷ್ಟು ಲಾಭವಾಗಿದೆ. ಒಂದಷ್ಟು ನಷ್ಟವಾಗಿದೆ. ಮುಖ್ಯವಾಗಿ ನನ್ನ ನಿತ್ಯದ ೧೪ ತಾಸಿನ ನಿದ್ದೆಗೆ ಕಡಿವಾಣ ಬಿದ್ದಿದೆ. ವಿಶ್ರಾಂತಿಯ ಸಮಯ ೧೨ ತಾಸಿಗೆ ಇಳಿಕೆಯಾಗಿದೆ! ಇದೆಲ್ಲ ಪುರಾಣ ಸುಮ್ನೆ ಡೈರಿಯಲ್ಲಿ ಗೀಚಿಕೊಳ್ಳಿ, ಇಲ್ಲಿ ಯಾಕೆ ಹೇಳುವಿರಿ ಅನ್ನಬಹುದು ನೀವು! ದೃಶ್ಯ ಮಾಧ್ಯಮ ಹೇಗಿರಬಹುದು ಎಂಬ ಪರಿಕಲ್ಪನೆ ನಮ್ಮಲ್ಲಿ ಸಾಕಷ್ಟು ಜನರಿಗೆ ಇಲ್ಲ. ಅಲ್ಲಿ ಕಾಲಿಡುವವರೆಗೂ ನನಗೂ ಇರಲಿಲ್ಲ. ಹಾಗಾಗಿ ಒಂದಷ್ಟು ಬರಯಬೇಕು ಅನ್ನಿಸಿದೆ.
೨೪*೭ ಎಂಬುದೇ ಒಂದು ರೀತಿಯ ಧಾವಂತದ ಬದುಕು. ಏನನ್ನಾದರೂ ಬ್ರೇಕ್ ಮಾಡುತ್ತ ಇರಬೇಕು. ಏನು ಸಿಗದಿದ್ದರೆ ಕೊನೆಗೆ ಯಾರ ಸಂಸಾರವನ್ನಾದರೂ ಬ್ರೇಕ್ ಮಾಡಬೇಕು! ಮುದ್ರಣ ಮಾಧ್ಯಮದ ರೀತಿಯಲ್ಲಿನ ಪುರುಸೊತ್ತು ಎಂಬ ಪದ ಇಲ್ಲಿಲ್ಲ. ಹಾಗಂತ ಕಚೇರಿಯ ವೇಳೆಯಲ್ಲಿ ಒತ್ಲಾ ಹೊಡೆಯುವವರಿಗೂ ಈ ಜಗತ್ತಿನಲ್ಲಿ ಕೊರತೆಯಿಲ್ಲ ಅನ್ನೋದು ನಂತರದ ಮಾತು ಬಿಡಿ!
ಪೇಪರ್ಗಳು ಈ ಸ್ಪರ್ಧೆಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಮುಖ್ಯವಾದ ಸುದ್ದಿಗಳು ಯಾವತ್ತೂ ತಪ್ಪಿ ಹೋಗೋದಿಲ್ಲ. ಒಂದು ಪತ್ರಿಕೆಯಲ್ಲಿ, ಇನ್ನೊಂದು ಪತ್ರಿಕೆಯಿಂದ ಮಿಸ್ ಆದ ಸುದ್ದಿಗಳ ಪಟ್ಟಿ ಮಾಡಿ, ಮಿಸ್ ಮಾಡಿದವನು ಮುಖ್ಯಸ್ಥರಿಗೆ ಬೇಡದ ವ್ಯಕ್ತಿಯಾಗಿದ್ದರೆ, ಅವನಿಗೊಂದಷ್ಟು ಉಗಿದು ಕೈತೊಳೆದುಕೊಳ್ಳುವುದು ಮುದ್ರಣ ಮಾಧ್ಯಮದ ಸಂಸ್ಕೃತಿ.
ಆದ್ರೆ ಇಲ್ಲಿ ಹಾಗಾಗುವುದಿಲ್ಲ. ಮತ್ತೊಂದು ವಾಹಿನಿಯಲ್ಲಿ ಬರುತ್ತಿರುವುದನ್ನು ಕದ್ದಾದರೂ ಬ್ರೇಕಿಂಗ್ ಅಂತಾ ಪ್ರಕಟಿಸುತ್ತೇವೆ. ಕನ್ನಡದ ಎಲ್ಲಾ ಸುದ್ದಿ ವಾಹಿನಿಗಳು ಹೆಚ್ಚಾಗಿ ರಾಷ್ಟ್ರೀಯ ವಾಹಿನಿಗಳಿಂದ ಯಥಾವತ್ತಾಗಿ ಕದಿಯಲ್ಪಡುತ್ತವೆ. ಈ ಪದ ಉಪಯೋಗಿಸಲು ಖಂಡಿತ ಕಾರಣವಿದೆ. ಅಲ್ಲಿ ಬರುತ್ತಿರುವ ಸುದ್ದಿಯನ್ನು ತೆಗೆದುಕೊಂಡರೆ, ಅದು ಕಳ್ಳತನವಾಗುವುದಿಲ್ಲ. ಆದ್ರೆ ದೃಶ್ಯಗಳನ್ನೂ ಭಟ್ಟಿ ಇಳಿಸಿದಾಗ, ಅದನ್ನು ಕಳ್ಳತನ ಅನ್ನದೆ ಬೇರೆ ಪದ ಬಳಸುವುದು ಸೂಕ್ತವಲ್ಲ! ಎಷ್ಟೋ ಸಲ ಕೃಪೆ ಅನ್ನುವ ಪದ ಕೂಡ ಬಾರದಿರುವುದು ಇದಕ್ಕೆ ಮುಖ್ಯ ಕಾರಣ.
ಇನ್ನು ತಪ್ಪು ಸುದ್ದಿ, ಅಜರುದ್ದೀನ್ ಮಗ ಸತ್ತೇ ಹೋದ ಅಂತಾ ಕೆಲವಷ್ಟು ವಾಹಿನಿಗಳು ಬಿತ್ತರಿಸಿದವು. ವಾಸ್ತವವಾಗಿ ಬೈಕ್ನಲ್ಲಿ ಅವನ ಹಿಂದೆ ಕುಳಿತವ ಸತ್ತಿದ್ದ. ಯಾರೋ ಟ್ರಾನ್ಸ್ಲೇಷನ್ ಬಾರದ ಕಾಪಿ ಎಡಿಟರ್ ಒಬ್ಬ, ಆಂಗ್ಲವಾಹಿನಿ ನೋಡಿ ಅಜರುದ್ದಿನ್ ಮಗನೇ ಸತ್ತ ಎಂದು ಮಾಡಿರುತ್ತಾನೆ! ಸುದ್ದಿ ನೋಡಲು ಪುರುಸೊತ್ತು ಇಲ್ಲದ ಸುದ್ದಿ ವಿಭಾಗದ ಮುಖ್ಯಸ್ಥ ಅದನ್ನೇ ಕಳುಹಿಸಿರುತ್ತಾನೆ. ಇಂಥ ೫೦-೧೦೦ ತಪ್ಪುಗಳು ಪ್ರತಿನಿತ್ಯ ಎಲ್ಲಾ ವಾಹಿನಿಗಳಲ್ಲೂ ಸಿಗುತ್ತವೆ! ಇಲ್ಲಿ ಸುದ್ದಿಯನ್ನು ಖಾತ್ರಿಪಡಿಸಿಕೊಳ್ಳುವಷ್ಟು ಸಮಯವಿಲ್ಲ. ನಾವು ಬರೆದ ಸುದ್ದಿಯನ್ನು ಮತ್ತೊಮ್ಮೆ ನಾವೇ ಓದುವಷ್ಟು ವ್ಯವಧಾನ ಯಾರಿಗೂ ಇಲ್ಲ. ಹಾಗಾಗಿ ತಪ್ಪುಗಳು ಸಹಜ. ಅಕ್ಷರ ದೋಷಗಳು ಮಾಮೂಲು.
ಇನ್ನೂ, ಕನ್ನಡ ವಾಹಿನಿಗಳಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ನದ್ದೇ ಅಬ್ಬರ ಹೆಚ್ಚು! ಸಾಮಾನ್ಯ ಕನ್ನಡ ಪದಗಳನ್ನೂ ಇಂಗ್ಲಿಷ್ನಲ್ಲೇ ಹೇಳುತ್ತಾರೆ. ಬಹುಶಃ ಈ ಕಾಲದ ಜನಕ್ಕೆ ಇಂಗ್ಲಿಷ್ ಅರ್ಥವಾಗುತ್ತೆ ಅನ್ನೋ ಕಾರಣವಿರಬಹುದು!
ಅದಕ್ಕಿಂತ ಮಜ ನಿರೂಪಕರದ್ದು. ತೆರೆಯ ಮೇಲೆ ಬರುವ ನಿರೂಪಕರು ವೀಕ್ಷಕರ ಪಾಲಿಗೆ ಹೀರೋಗಳು, ಬುದ್ಧಿವಂತರು! ವಾಸ್ತವವಾಗಿ ಅಲ್ಲಿ ಅವರ ಬುದ್ಧಿವಂತಿಕೆ ಸಾಸಿವೆ ಕಾಳಿನಷ್ಟು ಇರುವುದಿಲ್ಲ. ಕಾಪಿ ಎಡಿಟರ್ಗಳು ನಿರೂಪಣೆ ಬರೆದುಕೊಟ್ಟಿರುತ್ತಾರೆ. ಪರದೆಯ ಮೇಲೆ ಅದು ಬರುತ್ತದೆ. ಅದನ್ನು ನೋಡಿ ಓದುವುದಷ್ಟೇ ನಿರೂಪಕರ ಕೆಲಸ. ಹೀಗೆ ಬರೆದಿದ್ದನ್ನು ಸ್ಪಷ್ಟವಾಗಿ, ತಪ್ಪಿಲ್ಲದೆ, ಒಮ್ಮೆ ಬರವಣಿಗೆಯಲ್ಲಿ ತಪ್ಪಿದ್ದರೂ ಅದನ್ನು ಸರಿಪಡಿಸಿಕೊಂಡು ಓದುವವ ಉತ್ತಮ ನಿರೂಪಕನಾಗುತ್ತಾನೆ. ನಮ್ಮ ಕನ್ನಡದ ದುರಂತವೆಂದರೆ, ಎಷ್ಟೋ ನಿರೂಪಕರಿಗೆ ಕನ್ನಡ ಓದಲು ಬರುವುದಿಲ್ಲ. ಒತ್ತಕ್ಷರಗಳ ಕಥೆ ಹಾಳಾಗಲಿ, ಸರಳ ಕನ್ನಡವನ್ನು ತಪ್ಪು ಓದುತ್ತಾರೆ. ಕಾಪಿ ಎಡಿಟರ್ ತಪ್ಪು ಬರೆದುಕೊಟ್ಟಿದ್ದರೆ, ಅದನ್ನೇ ಓದಿ ಬರುತ್ತಾರೆ! ಸುದ್ದಿಯ ಜ್ಞಾನ, ಅದರ ಹಿನ್ನೆಲೆ ಏನು ಎಂದು ಹೆಚ್ಚಿನ ನಿರೂಪಕರಿಗೆ ಗೊತ್ತಿರುವುದಿಲ್ಲ. ಆದರೆ ದುರಂತ ನೋಡಿ, ಅವರೇ ಸ್ಟಾರ್ಗಳು!
ಖಂಡಿತ ಯಾರೂ ಸರ್ವಜ್ಞರಲ್ಲ. ಸ್ವತಃ ನಾನು ಕೂಡ ಒಂದೆರಡು ಸಲ ತಪ್ಪು ಮಾಡಿದ್ದೇನೆ. ಆದ್ರೆ ಒಂದು ಸಲ ಮಾಡಿದ ತಪ್ಪು ನನ್ನಿಂದ ಸಾಮಾನ್ಯವಾಗಿ ಮರುಕಳಿಸುವುದಿಲ್ಲ. ಅಷ್ಟರ ಮಟ್ಟಿಗಿನ ಎಚ್ಚರಿಕೆ ವಹಿಸುತ್ತೇನೆ. ಇದಕ್ಕೆ ಕಾರಣವೂ ಇದೆ. ನಾನು ವಿಕೆಯಲ್ಲಿದ್ದಾಗ ಮುಖ್ಯಸ್ಥರೊಬ್ಬರು ಒಂದು ಒಳ್ಳೇ ಮಾತು ಹೇಳಿದ್ದರು. ಪತ್ರಿಕೆ ಎಂಬುದು ಟ್ರೆಂಡ್ ಸೆಟ್ ಮಾಡುತ್ತದೆ. ಇನ್ನು ೧೦ ವರ್ಷದ ನಂತರ ಯಾವುದೋ ಪದಕ್ಕಾಗಿ ಒಬ್ಬ ಪತ್ರಿಕೆ ತೆಗೆಯುತ್ತಾನೆ. ನೀವು ತಪ್ಪು ಬರೆದಿದ್ದರೆ, ಅವ ಅದನ್ನೇ ಸರಿಯಿದೆ ಅಂತಾ ಸ್ವೀಕರಿಸುತ್ತಾನೆ. ಒಟ್ನಲ್ಲಿ ಒಂದು ಭಾಷೆಯನ್ನು ಹಾದಿ ತಪ್ಪಿಸಿದಂತೆ ಆಗುತ್ತದೆ ಅನ್ನುವ ಅವರ ಮಾತು ಇವತ್ತಿಗೂ ನನ್ನ ಕಿವಿಯಲ್ಲಿದೆ. ಹಾಗೆ ನೋಡಿದ್ರೆ ಬ್ಲಾಗ್ನಲ್ಲೇ ನನ್ನಿಂದ ಹೆಚ್ಚು ಅಕ್ಷರದೋಷಗಳಾಗುವುದು. ಇಲ್ಲಿ ಹೆಚ್ಚಾಗಿ ಆಡುಭಾಷೆ ಬಳುಸುವುದು ಅದಕ್ಕೆ ಕಾರಣ.
ಇಷ್ಟೆಲ್ಲದರ ನಡುವೆಯೂ ಇಲ್ಲಿ ಕೆಲಸ ಮಾಡುವುದು ಒಂದು ರೀತಿ ಮಜವಾದ ಅನುಭವ. ನಮ್ಮ ಕೆಲಸದ ವೇಗ ಗೊತ್ತಾಗುತ್ತದೆ. ಸೋಮಾರಿಗಳಾಗಿದ್ದವರು ಚುರುಕಾಗುತ್ತಾರೆ. ಆದ್ರೂ ಸದ್ಯಕ್ಕೆ ಕ್ರೀಡೆಯಲ್ಲಿ ಕಳೆದುಹೋಗಿರುವ ನಾನು, ಮೊದಲಿನಷ್ಟೇ ಸೋಮಾರಿತನ ಉಳಿಸಿಕೊಂಡಿದ್ದೆನೆ!!!
Posted in ಚಿಂತನ ಚಾವಡಿ | 6 Comments »
ಬೋಫೋರ್ಸ್, ಕಾಮನ್ವೆಲ್ತ್, ೨ಜಿ ಹಗರಣದಂಥ ಭ್ರಷ್ಟತೆಯ ಬ್ರಹ್ಮಾಂಡದಲ್ಲಿ ಮುಳುಗಿರುವ ಕಾಂಗ್ರೆಸ್ಗೆ ಅಣ್ಣಾ ಹಜಾರೆ ಬಾಯಿ ಮುಚ್ಚಿಸುವುದು ಅವಶ್ಯವಾಗಿದೆ. ಹೀಗಾಗಿಯೇ ಯುಪಿಎ ಮೈತ್ರಿಕೂಟ ಹಜಾರೆಯವರನ್ನು ಹೋರಾಟಕ್ಕಿಳಿಯುವ ಮೊದಲೇ ಬಂಧಿಸಿ, ವ್ಯವಸ್ಥಿತ ರೀತಿಯಲ್ಲಿ ಇಡೀ ಹೋರಾಟವನ್ನು ಹಳ್ಳ ಹಿಡಿಸುವ ಹುನ್ನಾರ ನಡೆಸಿದ್ದು. ಆದರೆ ಈ ಸಲ ಸರಕಾರದ ಲೆಕ್ಕಾಚಾರ ತಲೆ ಕೆಳಗಾಗಿದೆ. ಹಜಾರೆ ತಮ್ಮ ಪಟ್ಟು ಸಡಿಲಗೊಳಿಸುವ ರೀತಿ ಕಾಣುತ್ತಿಲ್ಲ. ಜೊತೆಗೆ ದೇಶದಾದ್ಯಂತ ಸಹಸ್ರಾರು ಮಂದಿ ಹಜಾರೆ ಬೆಂಬಲಿಸಿ ಹೋರಾಟಕ್ಕೆ ಇಳಿದಿದ್ದಾರೆ.
ನಮ್ಮ ದೇಶದ ಬಹು ದೊಡ್ಡ ದುರಂತವದು. ಸಹಸ್ರಾರು ಜನ ಮೈದಾನಕ್ಕಿಳಿದು ಘೋಷಣೆ ಕೂಗುತ್ತಾರೆ ನಿಜ. ಆದರೆ ಯಾಕೆ ಅವರು ಮೈದಾನದಲ್ಲಿ ಇದ್ದಾರೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ! ಹೀಗಾಗಿ ವಾರ ಕಳೆಯುವುದರೊಳಗೆ ಹೋರಾಟದ ಕಿಚ್ಚು ಆರಿ ಹೋಗುತ್ತದೆ. ಹೋರಾಟಗಾರರು ಚದುರಿ ಹೋಗುತ್ತಾರೆ. ಕೊನೆಗೆ ಅನಿವಾರ್ಯವಾಗಿ ಅಂಥ ಹೋರಾಟದ ಮುಂದಾಳತ್ವ ವಹಿಸಿದವರು ಶರಣಾಗುವ ಸ್ಥಿತಿ ಬರುತ್ತದೆ.
ಜನ್ ಲೋಕಪಾಲ್, ಅಂಥ ಹೋರಾಟವಾಗಬಾರದು. ಖಂಡಿತವಾಗಿಯೂ ವಾರ, ಹದಿನೈದು ದಿನಕ್ಕೆ ಮುಗಿಯುವ ಸತ್ಯಾಗ್ರಹವಲ್ಲವಿದು. ಹಜಾರೆ ಹೇಳಿದ ಹಾಗೆ ಇದನ್ನು ನಾವು ದ್ವಿತೀಯ ಸ್ವತಂತ್ರ ಸಂಗ್ರಾಮ ಎಂದು ಭಾವಿಸಬೇಕಾದ ಅನಿವಾರ್ಯತೆಯಿದೆ.
“ಜನ್ ಲೋಕಪಾಲ್” ಎಂಬುದು ಸದ್ಯಕ್ಕೆ ಒಂದು ಮಸೂದೆ. ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರಗೊಂಡರೆ ಕಾಯ್ದೆಯಾಗುತ್ತದೆ. ಭ್ರಷ್ಟಾಚಾರ ವಿರೋಧಿ ಕಾನೂನು ರೂಪಿಸಲು ಸಿದ್ಧವಾಗಿರುವ ಮಸೂದೆಯೇ ಈ ಜನ್ ಲೋಕಪಾಲ್. ಸಂಸತ್ತಿನ ಮೇಲ್ಮನೆ ಹಾಗೂ ಕೆಳಮನೆಗಳಲ್ಲಿ ಅಂಗೀಕಾರಗೊಂಡರೆ, ಚುನಾವಣೆ ಆಯೋಗದಂತೆ “ಲೋಕಪಾಲ್” ಎಂಬ ಪ್ರತ್ಯೇಕ ಸ್ವತಂತ್ರ ಆಯೋಗ ತಲೆ ಎತ್ತುತ್ತದೆ.
ಇಂಥದ್ದೊಂದು ಕಾನೂನಿಗಾಗಿ ೧೯೬೮ರಲ್ಲೇ ಧ್ವನಿ ಎದ್ದಿತ್ತು. ಮುರಾರ್ಜಿ ದೇಸಾಯಿವರ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಶಾಂತಿಭೂಷಣ್, ಲೋಕಪಾಲ್ನ್ನು ರೂಪಿಸಿದವರು. ೧೯೬೮-೬೯ನೇ ಲೋಕಸಭೆ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗಿದ್ದು ನಿಜ. ಆದರೆ ರಾಜ್ಯಸಭೆ ಇದಕ್ಕೆ ಅಡ್ಡಗಾಲಾಯ್ತು. ಹೀಗಾಗಿ ಲೋಕಪಾಲ್ ಕನಸಾಗಿಯೇ ಉಳಿಯಿತು.
೧೯೭೧,೭೭,೮೫,೮೯,೯೬,೨೦೦೧,೨೦೦೫ ಮತ್ತು ೨೦೦೮ರಲ್ಲಿ ಪುನಃ ಉಭಯ ಸದನಗಳಲ್ಲಿ ಈ ಮಸೂದೆ ಚರ್ಚೆಗೆ ಬಂದಿದೆ. ಆದಾಗ್ಯೂ ಅಂಗೀಕಾರವಾಗಲಿಲ್ಲ.
೨೦೧೦ರಲ್ಲಿ ಮತ್ತೆ ಈ ಕಾಯ್ದೆಗಾಗಿ ಧ್ವನಿ ಎದ್ದಿದ್ದು ನಿಜ. ಆಗ ಸರಕಾರ ಇದರ ಕರಡು ರಚನೆಗೆ ಮುಂದಾಯ್ತು. ೨೦೧೧ರಲ್ಲಿ ಗಾಂಧಿವಾದಿಯಾಗಿರುವ ಅಣ್ಣಾ ಹಜಾರೆ, ಈ ಮಸೂದೆ ಅಂಗೀಕಾರವಾಗಲೇ ಬೇಕು ಅಂತಾ ಉಪವಾಸ ಸತ್ಯಾಗ್ರಹ ಕುಳಿತರು. ಮಾಧ್ಯಮಗಳು ಹಾಗೂ ಸಹಸ್ರಾರು ಬೆಂಬಲಿಗರನ್ನು ಇದು ಆಕರ್ಷಿಸಿತು. ಬಾಬಾ ರಾಮ್ದೇವ್, ಸ್ವಾಮಿ ಅಗ್ನಿವೇಶ್, ರವಿಶಂಕರ್ ಗೂರೂಜಿ ಸೇರಿದಂತೆ ಅನೇಕರು ಅಣ್ಣಾಗೆ ಬೆಂಬಲವಾಗಿ ನಿಂತರು. ೪ ದಿನಗಳ ಉಪವಾಸದ ಬಳಿಕ ಮಸೂದೆಯನ್ನು ೨೦೧೧ರ ಮುಂಗಾರು ಅಧಿವೇಶನದಲ್ಲಿ ಮಂಡಿಸುವುದಾಗಿ ಮನ್ಮೋಹನ್ ಸಿಂಗ್ ಹೇಳಿಕೆ ನೀಡಿದರು. ಅದಕ್ಕೆ ಒಪ್ಪಿದ ಅಣ್ಣಾ ಆ.೧೬ ಡೆಡ್ಲೈನ್ ಕೊಟ್ಟರು. ಗಡುವು ಮುಗಿದ ಕಾರಣ ಅಣ್ಣಾ ಮತ್ತೆ ಬೀದಿಗಿಳಿದಿದ್ದಾರೆ.
ಸರಕಾರ ಹಾಗೂ ನಾಗರೀಕ ಸಮೂಹದ ದೃಷ್ಟಿಯನ್ನು ಒಟ್ಟುಗೂಡಿಸಿ ಮಸೂದೆಯ ಕರಡು ರಚಿಸುವ ಪ್ರಹಸನವೂ ನಡೆದಿದೆ. ಕ್ಯಾಬಿನೆಟ್ನ ೫ ಸಚಿವರು ಹಾಗೂ ಅಣ್ಣಾ ಬಳಗದ ೫ ಮಂದಿಯನ್ನು ಸೇರಿಸಿ ಒಂದು ಸಮಿತಿ ರಚಿಸಲು ಸರಕಾರ ಮುಂದಾಯ್ತು. ಸಮಿತಿ ರಚನೆಯೂ ಆಯ್ತು. ಆದರೆ ಇಲ್ಲಿ ಒಮ್ಮತ ಬರಲಿಲ್ಲ. ಸರಕಾರ ತನ್ನ ಪಟ್ಟು ಬಿಡಲಿಲ್ಲ.
ಈಗಿನ ಪ್ರಸ್ತಾಪದಂತೆ ಮಸೂದೆ ಅಂಗೀಕಾರಗೊಂಡರೆ, ರಾಜ್ಯದಲ್ಲಿ ಲೋಕಾಯುಕ್ತವಿರುವಂತೆ ಕೇಂದ್ರದಲ್ಲಿ ಲೋಕಪಾಲ್ ಆಯೋಗ ತಲೆ ಎತ್ತಲಿದೆ. ಸಂಪೂರ್ಣ ಸ್ವಾಯತ್ತತೆ ಪಡೆಯಲಿರುವ ಈ ಆಯೋಗ, ಕ್ಯಾಬಿನೆಟ್ ಕಾರ್ಯಾಲಯ ಹಾಗೂ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ಇರುತ್ತದೆ. ಪರಿಣಾಮವಾಗಿ ಸರಕಾರ ಹಾಗೂ ಮಂತ್ರಿಗಳಿಂದ ಈ ಆಯೋಗ ಸ್ವತಂತ್ರವಾಗಿರುತ್ತದೆ.
ಆಯೋಗದ ಸದಸ್ಯರನ್ನು ನ್ಯಾಯಮೂರ್ತಿಗಳು, ಸ್ವಚ್ಛ ದಾಖಲೆ ಹೊಂದಿರುವ ಐಎಎಸ್ ಅಧಕಾರಿಗಳು, ಖಾಸಗಿ ನಾಗರೀಕರು ಮತ್ತು ಸಂವಿಧಾನಿಕ ಪ್ರಾಧಿಕಾರಗಳಿಂದ ಆಯ್ಕೆ ಮಾಡಬೇಕು. ಈ ಆಯ್ಕೆ ಪಾರದರ್ಶಕವಾಗಿರಬೇಕು. ಆಯ್ಕೆ ಸಮಿತಿ, ಅಂತಿಮ ಪಟ್ಟಿಯನ್ನು ವೀಡಿಯೊ ರೆಕಾರ್ಡ್ ಮಾಡಿ, ನಂತರ ಸಾರ್ವಜನಿಕರಿಗೆ ನೀಡಬೇಕು. ಸಿವಿಸಿಯಂಥ ಈಗಿರುವ ಭ್ರಷ್ಟಾಚಾರ ನಿಯಂತ್ರಣ ಅಂಗಗಳನ್ನು ಲೋಕಪಾಲ್ದೊಂದಿಗೆ ವೀಲಿನಗೊಳಿಸಬೇಕು. ಯಾವುದೇ ಅಧಿಕಾರಿಗಳು, ನ್ಯಾಯಮೂರ್ತಿಗಳು ಹಾಗೂ ರಾಜಕರಾಣಿಗಳನ್ನು ಯಾರ ಅನುಮತಿಯೂ ಇಲ್ಲದೇ ವಿಚಾರಣೆಗೆ ಒಳಪಡಿಸುವ, ಅವರ ಸಂಪತ್ತು ತನಿಖೆ ನಡೆಸುವ ಸ್ವತಂತ್ರ ಈ ಆಯೋಗಕ್ಕೆ ಇರುತ್ತದೆ.
೨೦೧೦ರಲ್ಲಿ ರಚಿತವಾದ ಕರಡು ಮಸೂದೆಗೂ, ೧೯೬೯ರ ಮೂಲ ಮಸೂದೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಸಾರ್ವಜನಿಕರ ದೂರ ಅನುಸರಿಸಿ ದಾಳಿ ನಡೆಸುವ ಹಕ್ಕು ಲೋಕಪಾಲ್ಗೆ ಇಲ್ಲ. ರಾಜ್ಯಸಭೆ ಅಧ್ಯಕ್ಷರು ಅಥವಾ ಲೋಕಸಭೆ ಸ್ಪೀಕರ್ಗಳಿಂದ ಬಂದ ದೂರನ್ನು ಮಾತ್ರ ತನಿಖೆ ನಡೆಸಬಹುದು ಅನ್ನುತ್ತಿದೆ ೨೦೧೦ರ ಕರಡು. ಹಾಗಂದ ಮೇಲೆ ಖಂಡಿತವಾಗಿಯೂ ನಮಗೆ ಲೋಕಪಾಲ್ ಅಗತ್ಯವೇ ಇಲ್ಲ! ೧೯೬೯ರ ಮಸೂದೆ ಪ್ರಕಾರ, ಸಾರ್ವಜನಿಕ ದೂರುಗಳನ್ನೂ ತನಿಖೆ ನಡೆಸುವ ಹಕ್ಕು ಲೋಕಪಾಲ್ಗೆ ಇದೆ. ಇನ್ನೊಂದು ಪ್ರಮುಖ ಅಂಶವೆಂದರೆ, ೨೦೧೦ರ ಕರಡು ಅನ್ವಯ ಎಫ್ಐಆರ್ ದಾಖಲಿಸುವ ಹಕ್ಕು ಈ ಆಯೋಗಕ್ಕೆ ಇಲ್ಲ! ಯಾವುದೇ ಪೋಲೀರ್ಸ ಪವರ್ ಇರುವುದಿಲ್ಲ. ಸಿಬಿಐಗೂ ಲೋಕಪಾಲ್ಗೂ ಸಂಬಂಧವೇ ಇಲ್ಲ! ಈ ರೀತಿ ಅನುಕೂಲ ಸಿಂಧು ಕರಡನ್ನು ಸರಕಾರ ರಚಿಸಿಕೊಂಡಿದೆ. ಆಯೋಗವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿದೆ. ಹೀಗಾದರೆ ಖಂಡಿತ ನಮಗೆ ಲೋಕಪಾಲ್ ಬೇಕಿಲ್ಲ.
ಇನ್ನೂ ಜೂನ್.೨೩,೨೦೧೧ರಂದು ಸರಕಾರ ಬಿಡುಗಡೆಗೊಳಿಸಿದ ಲೋಕಪಾಲ್ ಕರಡು ಪ್ರತಿಗೂ, ಮೂಲಕ್ಕೂ ತಾಳೆಯೇ ಇಲ್ಲ! ಪ್ರಧಾನ ಮಂತ್ರಿಯನ್ನು ಪ್ರಶ್ನಿಸುವ ಹಕ್ಕು ಲೋಕಪಾಲ್ಗೆ ಇಲ್ಲ ಅನ್ನುತ್ತಿದೆ ಸರಕಾರ! ಕಳೆದ ಮಾರ್ಚ್ನಿಂದ ಇದರ ವಿರುದ್ಧ ಹೋರಾಟ ಶುರುವಾಗಿದೆ. ಅಣ್ಣಾ ಜೊತೆಗೆ ಸಹಸ್ರಾರು ಮಂದಿ ಕೈಜೋಡಿಸಿದ್ದಾರೆ. ಕಪಿಲ್ ಸಿಬಾಲ್, ಪಿ.ಚಿದಂಬರಂರಂಥ ಎಡಬಡಂಗಿಗಳನ್ನು ಹೊಂದಿರುವ ಕರಡು ರಚನಾ ಸಮಿತಿಯಿಂದ ನಾವು ಏನನ್ನು ನೀರಿಕ್ಷಿಸಲು ಸಾಧ್ಯವಿಲ್ಲ. ಆ ಸಮಿತಿಯ ಸದಸ್ಯರಾಗಿರುವ ಶಾಂತಿಭೂಷಣ್, ಪ್ರಶಾಂತ್ಭೂಷಣ್, ಸಂತೋಷ್ ಹೆಗ್ಡೆಯವರಂಥ ಹಿರಿಯರು ಯಾರಿಗೂ ಮಣಿಯಬಾರದು. ರಾಜ್ಯ ಬಿಜೆಪಿಯ ಪ್ರಕರಣದಲ್ಲಿ ಈ ಹಿಂದೊಮ್ಮೆ ಇದ್ದಕ್ಕಿದ್ದಂತೆ ಅಡ್ವಾಣಿ ಅಣ್ಣನಾದಂತೆ, ಈ ಸಲ ಸಂತೋಷ್ ಹೆಗ್ಡೆ ಬಳಗಕ್ಕೆ ಮತ್ತೆ ಯಾರಾದ್ರು ಸಹೋದರರಾಗದಿದ್ದರೆ ಸಾಕು!
ಒತ್ತಡಕ್ಕೆ ಮಣಿದು ಜನಲೋಕಪಾಲ್ ಅಂಗೀಕಾರಕ್ಕೆ ಸರಕಾರ ಸಜ್ಜಾಗಬಹುದು. ಆದರೆ, ಅದರ ಹಿಂದೆ ಒಂದಷ್ಟು ಷರತ್ತುಗಳನ್ನು ಖಂಡಿತವಾಗಿಯೂ ವಿಧಿಸುತ್ತದೆ. ಲೋಕಾಯುಕ್ತದಂತೆ, ಲೋಕಪಾಲ್ ಆಯೋಗವನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಮುಖ್ಯವಾಗಿ ರಾಜ್ಯಸಭೆ ಅಧ್ಯಕ್ಷ ಹಾಗೂ ಲೋಕಸಭೆಯ ಸ್ಪೀಕರ್ ನೀಡಿದ ದೂರುಗಳನ್ನು ಮಾತ್ರ ತನಿಖೆ ನಡೆಸುವ ಹಕ್ಕು ನೀಡಲು ಸರಕಾರ ಮುಂದಾಗಿದೆ. ಈ ಇಬ್ಬರೂ ಸರಕಾರದ ಕೈಗೊಂಬೆಗಳಾಗಿರುತ್ತಾರೆ. ಹೀಗಾಗಿ ಮಸೂದೆಯನ್ನು ಇಂಥ ದುರಂತದಿಂದ ತಪ್ಪಿಸುವುದು ನಮ್ಮ ಮುಂದಿರುವ ನೈಜ ಸವಾಲು…
Posted in ಚಿಂತನ ಚಾವಡಿ | 1 Comment »
ಮಾಧ್ಯಮ ಅಂದ್ರೆ ಜನಕ್ಕೆ ಒಂಥರ ಕುತೂಹಲ. ಪತ್ರಿಕೆಯಲ್ಲೋ, ಟಿವಿಯಲ್ಲೋ ಕೆಲ್ಸ ಮಾಡೊ ಮಂದಿ ಸಿಕ್ಕರಂತೂ ಕೆಲವರ ಪಾಲಿಗೆ ಹಬ್ಬ. ತಮ್ಮಲ್ಲಿರೋ ಎಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆದ್ರೆ ಅದು ನಮ್ಮ ಪಾಲಿಗೆ ಎಷ್ಟೋ ಸಲ ಕಿರಿಕಿರಿ. ಅವ್ರ ಪ್ರಶ್ನೆಗಳಿಗೆ ಉತ್ತರಿಸುವುದು ಖಂಡಿತ ಬೇಸರದ ಸಂಗತಿಯಲ್ಲ. ಆದ್ರೆ ನಮ್ಮ ಉತ್ತರವನ್ನು ಅವ್ರಿಗೆ ಅರ್ಥ ಮಾಡಿಸೋದು ಇದೆಯಲ್ಲ, ಅದಕ್ಕಿಂತ ದೊಡ್ಡ ತಲೆನೋವು ಮತ್ತೊಂದಿಲ್ಲ. ಅನೇಕ ಬ್ಲಾಗ್ ಗೆಳೆಯರು ಸಿಕ್ಕಾಗಲೆಲ್ಲ ಅದೇ ಪ್ರಶ್ನೆ ಕೇಳ್ತಾರೆ. ಅವ್ರಿಗೆಲ್ಲ ಉತ್ತರ ಇಲ್ಲಿದೆ!
ಪತ್ರಿಕೆಯಲ್ಲಿ ಕೆಲ್ಸ ಮಾಡೋದು ಅಂದಾಕ್ಷಣ ಜನ ಕೇಳೋ ಮೊದಲ ಪ್ರಶ್ನೆಯೇ ನೀವು ದಿನ ಬರಿತೀರಾ? ೨ನೇ ಪ್ರಶ್ನೆ ಯಾವ ಅಂಕಣ ಬರುತ್ತೀರಾ ಮತ್ತು ಯಾವ ಪುಟದಲ್ಲಿ ಪ್ರಕಟವಾಗುತ್ತೆ? ೩ನೇ ಪ್ರಶ್ನೆ ಅಲ್ಲಿ ಏನು ಕೆಲಸವಿರುತ್ತೆ? ೪ನೇ ಪ್ರಶ್ನೆ ತುಂಬಾ ಮಜವಾಗಿರುತ್ತೆ. ಅದ್ನ ಆಮೇಲೆ ಹೇಳ್ತೀನಿ!
ಖಂಡಿತ ಪತ್ರಿಕೆಯಲ್ಲಿ ಕೆಲಸ ಮಾಡುವ ಒಂದಷ್ಟು ಮಂದಿ ದಿನ ಬರೆಯುತ್ತಾರೆ. ಹಾಗೂ ಮತ್ತೊಂದಷ್ಟು ಮಂದಿ ಯಾವತ್ತೂ ಬರೆಯಲ್ಲ! ಹೆಚ್ಚಾಗಿ ಎಲ್ಲ ದಿನಪತ್ರಿಕೆಗಳಲ್ಲೂ ಪುಟಗಳಿಗೆ ಅನ್ವಯವಾಗಿ ಸಿಬ್ಬಂದಿಗಳ ವಿಭಾಗಗಳಿರುತ್ತೆ. ನಗರ, ರಾಜ್ಯ, ದೇಶ/ವಿದೇಶ, ವಾಣಿಜ್ಯ, ಕ್ರೀಡೆ, ಸಂಪಾದಕೀಯ, ವಿಶೇಷ…ಇತ್ಯಾದಿ ಪುಟಗಳನ್ನು ನಾವು ನಿತ್ಯವೂ ಕಾಣುತ್ತೇವೆ. ಇದರ ಹೊರತಾಗಿ ಪುರವಣಿಗಳು. ಅದು ಲವಲವಿಕೆ, ಕೃಷಿ ಸಂಪದ, ಕರ್ನಾಟಕ ದರ್ಶನ…ಇತ್ಯಾದಿಗಳು. ಇದಕ್ಕೆ ತಕ್ಕಂತೆ ವಿಭಾಗಗಳಿರುತ್ತವೆ.
ಮುಖ್ಯವಾಗಿ ಜನರಲ್ ಡೆಸ್ಕ್ ಅಥವಾ ಏಜೆನ್ಸಿ. ಈ ವಿಭಾಗದ ಕೆಲಸ ಇಂಟರ್ನೆಟ್, ಪಿಟಿಐ, ಯುಎನ್ಐ ಮೊದಲಾದ ಏಜೇನ್ಸಿಗಳಿಂದ ಬರುವ ಸುದ್ದಿಯನ್ನು ಕನ್ನಡಕ್ಕೆ ಭಾಷಾಂತರಿಸುವುದು. ಪಿಟಿಐ, ಯುಎನ್ಐ ಮೊದಲಾದವು ನಿರಂತರವಾಗಿ ಸುದ್ದಿ ನೀಡ್ತಾ ಇರುತ್ತವೆ. ಇದನ್ನು ಪಡೆಯಲು ಚಂದಾದಾರಿಕೆ ಬೇಕು. ಪ್ರತಿ ಪತ್ರಿಕೆ ಪಿಟಿಐ, ಯುಎನ್ಐ ಹೊಂದಿರುತ್ತೆ. ಇನ್ನೂ ನೆಟ್ನಲ್ಲಿ ಐಬಿಎನ್, ಟೈಮ್ಸ್, ಎನ್ಡಿಟಿವಿ ಮೊದಲಾದವುಗಳ ವೈಬ್ಸೈಟ್ ಇವೆ. ಅವೆಲ್ಲ ದಿನದ ೨೪ ಗಂಟೆಗಳ ಸುದ್ದಿ ನೀಡುತ್ತಲೇ ಇರುತ್ತವೆ.
ಇದನ್ನೆಲ್ಲ ಜನರೆಲ್ ಡೆಸ್ಕ್ನ ಮುಖ್ಯಸ್ಥರು, ಉಪಸಂಪಾದಕರು/ಹಿರಿಯ ಉಪಸಂಪಾದಕರುಗಳಿಗೆ ಹಾಕುತ್ತಾರೆ. ಅವ್ರು ಅದನ್ನ ಭಾಷಾಂತರಿಸಿ ಸುದ್ದಿ ರೂಪದಲ್ಲಿ ಬರೆದುಕೊಡುತ್ತಾರೆ. ಹೀಗೆ ಬರೆಸಿದ ಸುದ್ದಿ ದೇಶ/ವಿದೇಶ ಅಥವಾ ಏಜೆನ್ಸಿ ಪುಟದಲ್ಲಿ ಪ್ರಕಟವಾಗುತ್ತೆ. ಉಪ ಸಂಪಾದಕರುಗಳು ಬರೆದ ಎಲ್ಲ ಸುದ್ದಿ ಪ್ರಕಟವಾಗುತ್ತೆ ಅನ್ನೋಕೆ ಸಾಧ್ಯವಿಲ್ಲ. ಸುದ್ದಿ ಪ್ರಕಟಣೆ ಜಾಹೀರಾತು ಆಧರಿಸಿರುತ್ತೆ. ಜಾಹೀರಾತು ಜಾಸ್ತಿ ಇದ್ದರೆ ಕಡಿಮೆ ಸುದ್ದಿಗಳು. ಇಲ್ಲ ಅಂದ್ರೆ ಜಾಸ್ತಿ ಸುದ್ದಿ. ಎಲ್ಲ ಪ್ರಮುಖ ಸುದ್ದಿಗಳನ್ನು ಬರೆಸಿರುತ್ತಾರೆ. ಪುಟದ ಜಾಗ ಆಧರಿಸಿ ನಂತರ ಸುದ್ದಿ ಪರಿಷ್ಕರಣೆ ಆಗುತ್ತೆ. ಒಬ್ಬ ಉಪಸಂಪಾದಕ ಸಾಮಾನ್ಯವಾಗಿ ದಿನಕ್ಕೆ ೬-೮ ಸುದ್ದಿ ಭಾಷಾಂತರ ಮಾಡುತ್ತಾನೆ. ಅಂದಹಾಗೆ ಹೀಗೆ ಬರೆದ ಸುದ್ದಿಗಳ ಜೊತೆ ಅವರ ಹೆಸ್ರು ಬರಲ್ಲ.
ಇನ್ನು ವರದಿಗಾರರ ತಂಡ ದಿನದ ಪ್ರಮುಖ ಬೆಳವಣಿಗೆಗಳ(ರಾಜಕೀಯ, ಸಾಮಾನ್ಯ, ಸಾಹಿತ್ಯ…)ಸುದ್ದಿಯನ್ನು ತಂದು ರಾಶಿ ಹಾಕುತ್ತೆ. ಇಲ್ಲೂ ಹಾಗೆ ವರದಿಗಾರರಿಗೆ ಮುಖ್ಯ ವರದಿಗಾರರು ಅಸೈನ್ ಮಾಡುತ್ತಾರೆ. ಇದರ ಹೊರತಾಗಿ ವರದಿಗಾರರೇ ಸ್ವಯಂ ಇಚ್ಛೆಯಿಂದ ಮಾಡುವ ವಿಶೇಷ ವರದಿಗಳು. ಅಸೈನ್ ಮಾಡಿದ ವರದಿಗಳಿಗೆ ಹೆಸರು ಬರುಲ್ಲ. ವಿಶೇಷ ವರದಿಯೊಂದಿಗೆ ವರದಿಗಾರನ ಹೆಸರು ಪ್ರಕಟವಾಗುತ್ತೆ.
ಇನ್ನೂ ವರದಿಗಾರರು ಮಾಡಿ ತಂದ ಸುದ್ದಿಗಳು ನೇರವಾಗಿ ಪುಟದಲ್ಲಿ ಪ್ರಕಟವಾಗುಲ್ಲ. ಇದನ್ನು ಪರಿಷ್ಕರಿಸಲು ಒಂದು ಉಪ/ಹಿರಿಯ ಉಪ ಸಂಪಾದಕರ ತಂಡ ಇರುತ್ತೆ. ಇದನ್ನು ಸಾಮಾನ್ಯವಾಗಿ ಸ್ಟೇಟ್ ಡೆಸ್ಕ್ ಅಂತಾರೆ. ದಿನದ ಪ್ರಮುಖ ರಾಜಕೀಯ ವರದಿಗಳು, ನಗರಕ್ಕೆ ಸಂಬಂಧಿತ ಮಹತ್ವದ ವರದಿಗಳು ಎಡಿಟ್ ಆಗುವುದು ಈ ವಿಭಾಗದಲ್ಲಿ. ಹೀಗಾಗಿ ಇಲ್ಲಿ ಹಿರಿಯ ಉಪಸಂಪಾದಕರು ಇರುತ್ತಾರೆ. ಇಲ್ಲಿನ ಸುದ್ದಿಗಳು ನಗರ ಮತ್ತು ರಾಜ್ಯ ಪುಟದಲ್ಲಿ ಬಳಕೆಯಾಗುತ್ತೆ. ದಿನಕ್ಕೆ ೩೦-೪೦ ವರದಿ ಬಂದಿರುತ್ತೆ. ಎಲ್ಲವೂ ಪ್ರಕಟವಾಗುಲ್ಲ. ಇಲ್ಲೂ ಆಯ್ಕೆ, ಕತ್ತರಿ ಪ್ರಯೋಗಗಳು ನಡೆಯುತ್ತವೆ.
ಎಲ್ಲ ಪ್ರತಿಕೆಗಳೂ ಮಂಗಳೂರು, ಹುಬ್ಬಳಿ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಲ್ಲಿ ಆವೃತ್ತಿ ಹೊಂದಿವೆ. ಇದರ ಹೊರತಾಗಿ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ವರದಿಗಾರರನ್ನು ಹೊಂದಿರುತ್ತವೆ. ಇಲ್ಲಿನ ಪ್ರಮುಖ ಸುದ್ದಿಗಳನ್ನು ಆಯಾ ಆವೃತ್ತಿಯವರು ಮುಖ್ಯ ಕಚೇರಿಗೆ(ಬೆಂಗಳೂರಿಗೆ)ಕಳುಹಿಸುತ್ತಾರೆ. ದಿನದ ಪ್ರಮುಖ ಸುದ್ದಿಗಳ ಪಟ್ಟಿ ಎಲ್ಲ ಜಿಲ್ಲೆಗಳಿಂದ ಬೆಳಿಗ್ಗೆ ಬರುತ್ತೆ. ಮತ್ತೆ ಪುನಃ ಮಧ್ಯಾಹ್ನ ಹಾಗೂ ಸಂಜೆ ಬರುತ್ತೆ. ಇಲ್ಲಿನ ಪ್ರಮುಖ ಸುದ್ದಿಗಳ ಆಯ್ಕೆ ಮತ್ತು ಎಡಿಟ್ ಜವಬ್ದಾರಿ ಬ್ಯೂರೊ ಡೆಸ್ಕ್ನದ್ದು. ಇದಕ್ಕೆ ಒಬ್ಬ ಸಮನ್ವಯಕಾರ ಕೂಡ ಇರ್ತಾನೆ. ಇಲ್ಲಿನ ಸುದ್ದಿಗಳು ರಾಜ್ಯ ಪುಟದಲ್ಲಿ ಹೊಗುತ್ತೆ.
ಇನ್ನೂ ಗ್ರಾಮಾಂತರ, ಕ್ರೀಡೆ, ವಾಣಿಜ್ಯ, ವಿಶೇಷಕ್ಕೆ ಪ್ರತ್ಯೇಕ ತಂಡವಿರುತ್ತೆ. ಸಂಪಾದಕೀಯ ಮತ್ತು ಅದರ ಪಕ್ಕದ ಪುಟಕ್ಕೆ ಪ್ರತ್ಯೇಕ ತಂಡವಿರುತ್ತೆ. ಸಂಪಾದಕೀಯದ ಎದುರಿನ ಪುಟವನ್ನು ಒಪೆಡ್ ಎನ್ನಲಾಗುತ್ತೆ. ಈ ಪುಟವನ್ನು ಬೇರೆ-ಬೇರೆ ಪತ್ರಿಕೆಗಳು ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತವೆ.
ಇದೆಲ್ಲ ಪ್ರತಿನಿತ್ಯದ ಪುಟಗಳ ಕಥೆ.
ಪುರವಣಿಗಳಿಗೇ ಪ್ರತ್ಯೇಕ ತಂಡ. ವಾರದ ದಿನಗಳಲ್ಲಿ ಪುರವಣಿ ಪುಟ ತುಂಬಿಸುವುದು ಆ ವಿಭಾಗಗಳ ಕೆಲಸ. ಅಲ್ಲೂ ಕೃಷಿಗೆ ಬೇರೆ, ಸಾಪ್ತಾಹಿಕಕ್ಕೆ ಬೇರೆ ಅಂತಾ ಭಿನ್ನ ತಂಡಗಳು ಇರುತ್ತವೆ. ಪ್ರತಿ ಸುದ್ದಿಮನೆಯಲ್ಲಿ ದಿನ ಸಂಜೆ ೬ ಗಂಟೆಗೆ ಹೊತ್ತಿಗೆ ಒಂದು ಸಭೆ ನಡೆಯುತ್ತೆ. ಅದ್ರಲ್ಲಿ ಪ್ರಧಾನ ಸಂಪಾದಕರು, ಸುದ್ದಿ ಸಂಪಾದಕರು ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಭಾಗವಹಿಸುತ್ತಾರೆ. ದಿನದ ಪ್ರಮುಖ ಸುದ್ದಿಗಳ ಕುರಿತು ಚರ್ಚೆ ನಡೆಸುತ್ತಾರೆ. ನಂತರ ಮುಖಪುಟಕ್ಕೆ ಹೋಗುವ ಸುದ್ದಿಗಳನ್ನು ಅಲ್ಲಿ ನಿರ್ಧರಿಸುತ್ತಾರೆ. ಅದೇ ಹೊತ್ತಿಗೆ ಜಾಹೀರಾತು ವಿಭಾಗದವರು ಕರಡು ನೀಡುತ್ತಾರೆ. ಮುಖ ಪುಟದ ಸುದ್ದಿಗಳ ಹೊರತಾಗಿ ಇತರೆ ಪುಟದಲ್ಲಿ ಹೋಗಬೇಕಾದ ಪ್ರಮುಖ ಸುದ್ದಿಗಳ ನಿರ್ಧಾರವೂ ಅಲ್ಲೆ ಆಗುವುದು.
ಸುದ್ದಿಮನೆಯಲ್ಲಿ ಪ್ರತಿ ನಿತ್ಯದ ಪುಟಗಳ ವಿನ್ಯಾಸ ಶುರುವಾಗುವುದು ಸಂಜೆ ೭ರ ನಂತರ. ವಿಭಾಗದ ಮುಖ್ಯಸ್ಥರು ಇಂತಿಂಥ ಸುದ್ದಿಗಳು ಪುಟದಲ್ಲಿ ಹೋಗಬೇಕು ಎಂದು ಪಟ್ಟಿ ಕೊಡುತ್ತಾರೆ. ಅದನ್ನು ಆಧರಿಸಿ ಉಪ/ಹಿರಿಯ ಉಪಸಂಪಾದಕ ಪುಟ ವಿನ್ಯಾಸ ಮಾಡಿಸಲು ಕೂರುತ್ತಾನೆ. ಕೆಲ ಪತ್ರಿಕೆಗಳಲ್ಲಿ ಪ್ರತಿ ಪುಟಕ್ಕೂ ವಿನ್ಯಾಸಕಾರರಿರುತ್ತಾರೆ. ಇನ್ನು ಕೆಲವು ಕಡೆ ಉಪಸಂಪಾದಕರೇ ಪುಟ ವಿನ್ಯಾಸವನ್ನೂ ಮಾಡಿಕೊಳ್ಳುತ್ತಾರೆ. ಸಿದ್ಧವಾದ ಸುದ್ದಿಗಳನ್ನು ಪುಟಕ್ಕೆ ಕೂರಿಸುತ್ತಾರೆ. ಸುದ್ದಿಯನ್ನು ಕುಗ್ಗಿಸುವ, ಹಿಗ್ಗಿಸುವ ಕಸರತ್ತು ಇಲ್ಲಿ ನಡೆಯುತ್ತೆ. ಇಲ್ಲಿ ಸಿದ್ಧವಾದ ಪುಟವನ್ನು ವಿಭಾಗ ಮುಖ್ಯಸ್ಥರು, ನಂತರ ಸುದ್ದಿ ಸಂಪಾದಕರು ನೋಡುತ್ತಾರೆ. ಪುರುಸೊತ್ತು ಇದ್ದರೆ ಸಂಪಾದಕರೂ ಕಣ್ಣಾಡಿಸುತ್ತಾರೆ. ಎಲ್ಲ ಮುಗಿದು ಸುಮಾರು ರಾತ್ರಿ ೯.೩೦ ಹೊತ್ತಿಗೆ ಪುಟ ಪ್ರಿಂಟ್ಗೆ ಹೋಗುತ್ತೆ.
ಮುಖಪುಟವನ್ನು ಕೆಲವು ಕಡೆ ಸಂಪಾದಕರು ಖುದ್ದು ನಿಂತು ವಿನ್ಯಾಸ ಮಾಡಿಸುತ್ತಾರೆ. ಇನ್ನು ಕೆಲವೆಡೆ ಸುದ್ದಿ ಸಂಪಾದಕರು ನೋಡಿಕೊಳ್ಳುತ್ತಾರೆ. ೬ ಗಂಟೆಯ ಸಭೆಯ ನಂತರ ಬಂದ ಪ್ರಮುಖ ಸುದ್ದಿಗಳನ್ನು ವಿಭಾಗ ಮುಖ್ಯಸ್ಥರು, ಸುದ್ದಿ ಸಂಪಾದಕರು ಅವಲೋಕಿಸಿ ನಿರ್ಧರಿಸುತ್ತಾರೆ. ಎಲ್ಲ ವಿಭಾಗಳ ಅವಲೋಕಿತ ಪ್ರಮುಖ ಸುದ್ದಿ ಮುಖಪುಟವನ್ನು ನಿರ್ಧಾರ ಮಾಡುತ್ತೆ. ನಗರ/ ಗ್ರಾಮಾಂತರ ಅಂತಾ ೨ ಪ್ರತ್ಯೇಕ ಆವೃತ್ತಿ. ಗ್ರಾಮಾಂತರ ಆವೃತ್ತಿ ೯-೯.೩೦ ಪ್ರಿಂಟ್ಗೆ ಹೋಗುತ್ತೆ. ನಂತರದ ಪ್ರಮುಖ ಸುದ್ದಿಗಳ ಅಪ್ಡೇಟ್ನೊಂದಿಗೆ ನಗರದ ಆವೃತ್ತಿ ರಾತ್ರಿ ೧೨-೧ ಗಂಟೆ ಹೊತ್ತಿಗೆ ಪ್ರಿಂಟ್ ಹೋಗುತ್ತೆ. ಇದು ಪತ್ರಿಕೆ ಅವಲಂಬಿಸಿ ಇರುತ್ತೆ. ಹೀಗಾಗಿಯೇ ಎಷ್ಟೋ ಸಲ ಪ್ರಮುಖ ಸುದ್ದಿಗಳು ನಗರದಲ್ಲಿ ಮಾತ್ರ ಬರುವುದು.
ಇಷ್ಟಾದ್ರು ನಿಮ್ಮ ಅನುಮಾನಗಳು ಬಗೆಹರಿದಿಲ್ಲ ಅಂತಾ ಗೊತ್ತು. ಇಲ್ಲಿ ಎಲ್ಲರೂ ಯಾಕೆ ಅಕಂಣಕಾರರು ಆಗಿರುವುದಿಲ್ಲ, ಸಾಮಾನ್ಯನೊಬ್ಬ ಬರೆದ ಬರಹಗಳು ಯಾಕೆ ಪ್ರಕಟವಾಗುವುದಿಲ್ಲ ಇತ್ಯಾದಿಗಳನ್ನು ಇನ್ನೊಂದು ಸಲ ನೋಡೋಣ…
Posted in ಚಿಂತನ ಚಾವಡಿ | 8 Comments »
ಹಾಯ್ ಕೋತಿ,
ಈ ಸುಡುಗಾಡು ಕಾಂಕ್ರಿಟು ಜಂಗಲ್ಲಿಗೆ ಬಂದ ಮೇಲೆ ಮೊಬೈಲು, ಮೆಸೇಜು, ಇಮೇಲ್, ಜಿಟಾಕ್ಗಳ ಭರಾಟೆಯಲ್ಲಿ ಪತ್ರ ಬರೆಯೋದೆ ಮರೆತು ಹೋದಂತಾಗಿತ್ತು ನೋಡು. ಇವತ್ತು ಬೆಳಿಗ್ಗೆ ಇಂಟರ್ನೆಟ್ನಲ್ಲೊಂದು ಪ್ರೇಮಪತ್ರ ನೋಡಿದಾಗ ನೆನಪಾಗಿದ್ದು ನನ್ನ ಡಿಗ್ರಿಯ ದಿನಗಳು. ನಿಂಗೆ ಪತ್ರ ಬರೆದು ಅಂಚೆ ಡಬ್ಬಿಯಲ್ಲಿ ಹಾಕೋದು ಅಂದ್ರೆ ನನಗಾವಾಗ ಎಲ್ಲಿಲ್ಲದ ಖುಷಿ. ನಮ್ಮಿಬ್ಬರ ಆರಂಭದ ಪ್ರೀತಿಗೆ ಸೇತುವೆ “ಇಂಗ್ಲೆಂಡ್ಲೆಟರ್” ಅಲ್ವಾ?! ಅದು ಇಂಗ್ಲೆಂಡ್ ಲೆಟರ್ ಅಲ್ಲ, ಇನ್ಲ್ಯಾಂಡ್ ಲೆಟರ್ ಎಂದು ತಿಳಿಯದಷ್ಟೂ ಗುಗ್ಗು ನಾನಾಗಿದ್ದೆ. ನೆಟ್ವರ್ಕ್ ಇಲ್ಲದ ಊರಿನಲ್ಲಿ ಹುಟ್ಟಿಕೊಂಡ ನಾನು, ನಿನ್ನ ಜೊತೆ ಮಾತಾಡಬೇಕು ಅಂದ್ರೆ, ಪತ್ರ ಮಾತ್ರ ಸಾಧನವಾಗಿತ್ತು.
ಭಾರತ್ ಸಂಚಾರ ನಿಗಮ್ನ ದೂರವಾಣಿ ಮನೆಯಲ್ಲಿ ಇತ್ತಾದರೂ, ವಾರದಲ್ಲಿ ಆರು ಮುಕ್ಕಾಲು ದಿನ ಸರಿಯೇ ಇರುತ್ತಿರಲಿಲ್ಲ. ಇನ್ನುಳಿದ ಕಾಲು ದಿನ ಫೋನು ಅಮ್ಮನನ್ನು ಬಿಟ್ಟು ಅಲ್ಲಾಡುತ್ತಿರಲಿಲ್ಲ! ಓದು-ಬರಹದ ಜುಗುಪ್ಸೆ ಹುಟ್ಟಿದ್ದ ದಿನದಲ್ಲೂ ಬೇಸರವಿಲ್ಲದೆ ನಿನಗೆ ಪತ್ರ ಬರೆದಿದ್ದೆ ಗೊತ್ತಾ? ನಿನಗೆ ಪತ್ರ ಬರೆಯಲು ಶುರುವಿಟ್ಟರೆ ಈಗಲೂ ನನ್ನ ಕಣ್ಣುಗಳು ಅರಳುತ್ತವೆ.
ಎಂಥೆಥ ಮಜ-ಮಜವಾಗಿರುವ ಪತ್ರಗಳನ್ನು ಬರೆದಿದ್ದೆ ಅಲ್ವಾ? ಅವಷ್ಟನ್ನೂ ಡಿಟಿಪಿ ಮಾಡಿಸಿ, ಸಿಡಿಯಲ್ಲಿ ಹಾಕಿಟ್ಟುಕೊಂಡಿದ್ದೇನೆ. ಹಾಗೆ ನೋಡಿದ್ರೆ, ನನಗೆ ಪತ್ರ ಬರೆದು ಅಭ್ಯಾಸವೇ ಇರಲಿಲ್ಲ. ಪತ್ರಕ್ಕಿರಬೇಕಾದ ರೀತಿ-ರಿವಾಜುಗಳೆಲ್ಲ ಗೊತ್ತಿರಲಿಲ್ಲ. ಅಂಥ ಸಮಯದಲ್ಲಿ ನನಗೆ ಪತ್ರ ಬರೆಯುವ ಚಟ ಕಲಿಸಿದ ಪಾಪಿ ನೀನು! ನನಗಿನ್ನೂ ಚೆನ್ನಾಗಿ ನೆನಪಿದೆ. ಆವತ್ತು ಜನವರಿ ಹತ್ತು. ನನ್ನ ೨೧ನೇ ಹುಟ್ಟುಹಬ್ಬ. ತುಂಗೆ ನದಿ ತಟದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆಯಂತೆ ಎಂದು ಊರೆಲ್ಲ ಸುದ್ದಿಯಾಗಿತ್ತು. ಕಾಲೇಜಿಗೆ ಹೊರಟ್ಟಿದ್ದ ನಾನು, ಮಾನಸಿ, ವರ್ಷಾ…ಕ್ಲಾಸ್ಗೆ ಬಂಕ್ ಹಾಕಿ ರಮೇಶ್-ಸುಹಾಸಿನಿ ಜೋಡಿಯನ್ನು ನೋಡಲು ಬಂದ್ವಿ. ಅಂದಹಾಗೆ ನೀನು ನನಗೆ ಮೊದ್ಲು ನೋಡಲು ಸಿಕ್ಕಿದ್ದು ಭೀಮನಕಟ್ಟೆಯಲ್ಲಿ ಕಣೋ. ತುಂಗೆಯಾಚೆಗಿನ ಗದ್ದೆಯಲ್ಲಿ ನಡೆಯುವ ಶೂಟಿಂಗ್ ನೋಡಲು ದೋಣಿ ಹತ್ತಿದ್ವಿ. ಗಿಳಿ ಹಸಿರು ಬಣ್ಣದ ಶರ್ಟ್, ಆಗಿನ್ನು ಚಿಗುರುತ್ತಿದ್ದ ಮೀಸೆ, ಬಾಚದ ಕೂದಲಿನ ನಿನ್ನನ್ನು ನೋಡಿದ್ರೆ, ಎಂಥವರಿಗೂ ರೇಜಿಗೆ ಹುಟ್ಟುತ್ತಿತ್ತು. ಈ ಸಿನಿಮಾ ಮಂದಿಯೇ ಹಾಗಿರಬೇಕು ಅನ್ನಿಸುತ್ತಿತ್ತು. ಮೊದಲ ಸಲ ನಿನ್ನನ್ನು ನೋಡಿದಾಗ, ಮುಂದೊಂದು ದಿನ ನನಗೂ, ನಿನಗೂ ಲವ್ ಶುರುವಾಗಬಹುದು ಎಂಬ ಕನಸು ಕೂಡ ಇರಲಿಲ್ಲ!
ನೀವು ಇದೇ ಊರಿನವರಾ ಮ್ಯಾಮ್? ಇಲ್ಲಿ ಒಳ್ಳೆ ದೇವಸ್ಥಾನ ಎಲ್ಲಿದೆ? ನದಿ ಪಕ್ಕ ವಿಶಾಲವಾದ ಬಯಲು ಎಲ್ಲಾದ್ರು ಇದೆಯಾ ಅಂತಾ ನೀನು ಕೇಳಿದಾಗ, ಅಯ್ಯೋ ಕರ್ಮವೆ ಇವನೊಬ್ಬ “ಬಯಲು” ಗಿರಾಕಿ ಅಂದುಕೊಂಡಿದ್ದೆ! ನಮ್ಮಲ್ಲಿ “ಬಯಲು ಕಡೆ ಹೋಗುವುದು” ಅಂದ್ರೆ ಬೇರೇನೆ ಅರ್ಥವಿದೆ! ನೀನೊಬ್ಬ ಕಥೆಗಾರ, ನಿರ್ದೇಶಕ ಅನ್ನುವ ಕಲ್ಪನೆಯೂ ನನಗೆ ಇರಲಿಲ್ಲ. ಆಮೇಲೆ ಸಿನಿಮಾದಲ್ಲಿ ಲೋಕೆಷನ್ ಹೇಗಿರಬೇಕು, ಕ್ಯಾಮೆರಾ ವರ್ಕ್ನಿಂದ ಚಿತ್ರದ ಗುಣಮಟ್ಟ ಹೇಗೆ ಉತ್ತಮವಾಗತ್ತೆ ಅಂತೆಲ್ಲ ಒಂದು ದಿನ ನೀನು ವಿವರಿಸಿದೆ. ಆಗಲೆ ನನಗೆ ಗೊತ್ತಾಗಿದ್ದು ನೀನು ಆವತ್ತು ದೇವಸ್ಥಾನ ಮತ್ತು ಬಯಲನ್ನು ಯಾಕೆ ಕೇಳಿದೆ ಎಂದು. ಎಷ್ಟೋ ಸಲ ಹಾಗೆ ಆಗುತ್ತೆ ಕಣೊ. ನಮಗೆ ಎದುರುಗಡೆಯವರ ಮಾತಿನ ಅರ್ಥ ಗೊತ್ತಾಗದೆ, ಅಪಾರ್ಥ ಮಾಡಿಕೊಂಡು ಬಿಡುತ್ತೇವೆ. ಆಮೇಲೆ ಆಗಬಾರದ್ದೆಲ್ಲ ಆಗುತ್ತೆ. ಇನ್ನೊಬ್ಬರು ಯಾವ ದೃಷ್ಟಿಕೋನದಲ್ಲಿ ಮಾತಾಡುತ್ತಿರಬಹುದು ಎಂದು ನಮಗೆ ಅರ್ಥ ಆಗುವ ಹಾಗಿದ್ರೆ ಎಷ್ಟು ಚೆನ್ನಾಗಿತ್ತು ಅಲ್ವಾ? ನನ್ನ-ನಿನ್ನ ನಡುವಣ ಅದೆಷ್ಟೋ ಜಗಳಕ್ಕೆ ಬ್ರೇಕ್ ಬಿದ್ದಿರುತ್ತಿತ್ತು ಅಲ್ವಾ? ಹೋಗ್ಲಿ ಬಿಡು, ಜಗಳ ಆಡುವುದರಲ್ಲೂ ಒಂಥರ ಮಜವಿದೆ.
ಅಯ್ಯಯ್ಯಪ್ಪ, ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಈಗ ಮೈಯೆಲ್ಲ ಬೆವರುತ್ತೆ. ನನ್ನ-ನಿನ್ನ ಪ್ರೀತಿಗೆ ಭರ್ತಿ ೭ ವರ್ಷ ತುಂಬಿದೆ. “ನಿಮ್ಮೂರು ಸೂಪರ್ ಕಣೆ. ನಿನ್ನಂಥ ಚೆಂದದ ಹುಡುಗಿಯನ್ನು ಹುಟ್ಟುಹಾಕಿದ ಊರು ಅಂತಾ ಸೂಪರ್ ಅಂದಿದ್ದಲ್ಲ! ನಿಮ್ಮ ಮನೆ ಹತ್ರ ಇರೋ ತುಂಗಾನದಿ, ಪಕ್ಕದಲ್ಲಿರೋ ದೇವಸ್ಥಾನ, ನದಿಯಾಚೆಗಿನ ಹಚ್ಚಹಸಿರಿನ ಗದ್ದೆಗಳು, ಬಾವಿಯ ಸಿಹಿ ಸಿಹಿಯಾದ ನೀರು, ನಿಮ್ಮಪ್ಪ ಡಬ್ಬ ಜೋಯ್ಸ, ನಿಮ್ಮೂರಿನ ಮುಗ್ಧ ಮನಸಿನ ಜನಗಳು, ನಿನ್ನಂಥ ಗಯ್ಯಾಳಿ ಹುಡುಗಿಯರು…ಇದ್ನೆಲ್ಲ ಕಂಡು ಸೂಪರ್ ಅಂದಿದ್ದು ಗೊತ್ತಾಯ್ತ?” ಎಂದು ನೀನು ನನ್ನನ್ನು ರೇಗಿಸಿದ್ದು ನೆನಪಿದ್ಯಾ? ಆವತ್ತೆ ಅಲ್ವಾ ನಾನು ನಿನಗೆ ಪ್ರಪೋಸ್ ಮಾಡಿದ್ದು, ನೀನು ನಿನ್ನ ಬದುಕಿನ, ಕನಸುಗಳ ಕುರಿತು ಹೇಳಿಕೊಂಡಿದ್ದು. ಅಬ್ಬ ಅದೊಂತು ನನಗೆ ಯಾವತ್ತು ಮರೆಯಲಾಗದ ಕ್ಷಣ.
ಅಲ್ಲಿಂದ ನಂತರದ್ದೆಲ್ಲ ಒಂಥರಹ ಸಿನಿಮಾವೆ. ಹಾಗೆ ನೋಡಿದ್ರೆ, ನನ್ನ-ನಿನ್ನ ಪ್ರೀತಿಯೇ ನೀನು ಸ್ವತಂತ್ರವಾಗಿ ನಿರ್ದೇಶನ ಮಾಡಿದ ಮೊದಲ ಸಿನಿಮಾ! ನೀನು ನಮ್ಮ ಮನೆಗೆ ಬಂದಿದ್ದು, ನಮ್ಮಪ್ಪ/ನಿಮ್ಮ ಮಾವ ಡಬ್ಬ ಜೋಯ್ಸರ ಜೊತೆ ಮಾತಾಡಿದ್ದು, ಅವರನ್ನ ಒಪ್ಪಿಸಿದ್ದು, ನಾನು ಬೆಂಗಳೂರಿಗೆ ಬಂದಿದ್ದು, ಕೆಲಸ ಹಿಡಿದಿದ್ದು…ಅಷ್ಟಕ್ಕೂ ನಿರ್ದೇಶಕ ನೀನೇ ಕಣೊ.
ಹೌದು ಕಣೋ ನಾನು ಎಲ್ಲದರಲ್ಲೂ ನಿಧಾನ. ಅದ್ಕೆ ಅಲ್ವಾ ನೀನು ನಂಗೆ “ಡಕೋಟ ಎಕ್ಸ್ಪ್ರೆಸ್” ಅಂತಾ ಹೆಸರಿಟ್ಟಿದ್ದು. ಡ್ರೆಸ್ ಮಾಡಿಕೊಳ್ಳಲು ಶುರು ಮಾಡಿದ್ರೆ ಮುಕ್ಕಾಲು ಗಂಟೆ, ಸ್ನಾನಕ್ಕೆ ಹೊರಟರೆ ಒಂದೂವರೆ ಗಂಟೆ ಎಂದು ಯಾವಾಗ್ಲೂ ಸಿಡುಕುತ್ತಿಯಾ ಅಲ್ವಾ? ನಿನ್ನ ಹಾಗೆ ೫ ನಿಮಿಷದಲ್ಲಿ ತುಳಸಿ ನೀರು ಪ್ರೋಕ್ಷಣ್ಯ ಮಾಡಿಕೊಂಡ ರೀತಿ ಸ್ನಾನ ಮಾಡೋಕೆ ನನಗೆ ಬರಲ್ಲ. ಇಸ್ತ್ರಿ ಇಲ್ಲದ ಶರ್ಟು, ಬಾಚಣಿಗೆ ಕಾಣದ ಕೂದಲಿನೊಂದಿಗೆ ಗೊರಬನ ರೀತಿ ಬದುಕು ಸಾಧ್ಯವಿಲ್ಲ. ನಿನ್ನ ಸಿಗರೇಟು ಸೇದುವ ಚಟ ಬಿಡಿಸಿದೆ. ಆದ್ರೆ ಡ್ರೆಸ್ಸೆನ್ಸ್ ಕಲಿಸುವಲ್ಲಿ ಸೋತು ಹೋಗಿದ್ದೇನೆ. ನೀನು ಫೌಡರು, ಸೆಂಟು ಹಾಕಿದ್ದನ್ನು ನೋಡಲೇ ಇಲ್ಲ. ನಾಯಕಿಗೆ ಇಂಥ ಮೇಕಪ್ ಇರ್ಲಿ, ಈ ಸೀರೆ ಚೆಂದ ಅನ್ನುವ ನಿನಗೆ, ನನ್ನ-ನಿನ್ನ ಮೇಕಪ್ಪು, ಡ್ರೆಸ್ಗಳ ಕುರಿತು ಕಾಳಜಿಯೇ ಇಲ್ಲ ಹೋಗೊ. ಬರೀ ಮುಖವಾಡದ ಬದುಕು ನಿಂದು. ಐ ಹೇಟ್ ಯೂ ಹಂಡ್ರೆಡ್ ಟೈಮ್ಸ್….
ಎಲ್ಲಿದ್ದ ಬದುಕು, ಎಲ್ಲಿಗೆ ಬಂದು ನಿಂತಿದೆ ಅಲ್ವಾ? ಇನ್ನು ಮದ್ವೆ, ಮಕ್ಕಳು, ಸಂಸಾರ…ಕಲ್ಪಿಸಿಕೊಂಡ್ರೆ ಮೈ ಜುಂ ಅನ್ನುತ್ತೆ. ಆದ್ರೂ ಇವತಲ್ಲ ನಾಳೆ ಮದ್ವೆ ಆಗಲೇ ಬೇಕು. ಪಾತ್ರೆ ತೊಳಿಯುವ ವಿಷಯಕ್ಕೆ, ಬಟ್ಟೆ ಇಸ್ತ್ರಿಗೆ, ಸ್ನಾನಕ್ಕೆ ನಿನ್ನ ಜೊತೆ ದಿನ ಜಗಳ ಆಡಲೇ ಬೇಕು. ಹೋಗ್ಲಿ ಬಿಡು, ನಿನ್ನ ಜೊತೆಗಿನ ಜಗಳ, ಈ ಆಫೀಸಿನಲ್ಲಿ ಮಾಡುವ ಅರ್ಥವಿಲ್ಲದ ಕೆಲಸದಷ್ಟು ಕೆಟ್ಟದ್ದೇನಲ್ಲ! ಅದು ಯಾವುದೋ ಕ್ಲೈಂಟು, ಯಾವುದೋ ಪ್ರಾಜೆಕ್ಟು! ಅದರಿಂದ ಯಾರಿಗೆ ಲಾಭ, ಯಾರಿಗೆ ಉಪಯೋಗ ಅಂತ ದೇವರಾಣೆ ಪ್ರೊಗ್ರಾಮ್ಸ್ ಬರಿಯೋ ನನಗೂ ಗೊತ್ತಿಲ್ಲ. ಅವ್ರು ದುಡ್ಡು ಕೊಡ್ತಾರೆ, ನಾವು ಕೆಲಸ ಮಾಡ್ತಿವಿ ಅಷ್ಟೆ. ಮ್ಯಾನೇಜರ್ ಯಾಕೊ ಕರಿತಿದಾರೆ ಬಾಯ್ ಕಣೋ. ಮತ್ತೆ ಸಿಗ್ತೀನಿ. ನಿನಗೆ ಈವರೆಗೆ ೨೪ ಪತ್ರ ಬರೆದಿರುವೆ. ಇದು ೨೫ನೇ ಪತ್ರ. ಮತ್ತೆ ಮನಸ್ಸಾದಾಗ ಇನ್ನೊಂದು ಪತ್ರ ಬರೆಯುವೆ. ಪೋಸ್ಟ್ ಮಾಡೋಕೆ ಟೈಂ ಇಲ್ಲ. ಸೋ, ಟೈಪ್ ಮಾಡಿದ ಈ ಪತ್ರವನ್ನು ಇಮೇಲ್ ಮೂಲಕವೇ ಕಳುಹಿಸುತ್ತಿರುವೆ. ಕ್ಷಮೆ ಇರಲಿ. ಟೇಕ್ ಕೇರ್, ಟಾಟಾ….
ಇಂತಿ ನಿನ್ನ ಡಕೋಟ ಎಕ್ಸ್ಪ್ರೆಸ್.
Posted in ಕ್ರಿಯೇಟಿವ್ ಪೇಜ್ | 2 Comments »
ನನಗಿನ್ನೂ ಚೆನ್ನಾಗಿ ನೆನಪಿದೆ. ಕರ್ಕಿಕೊಪ್ಪ ಹೈಸ್ಕೂಲ್ನ ಸಿಮೆಂಟ್ ಕಟ್ಟೆಯದು. ಸುಮಾರು ೪೦೦-೫೦೦ ಜನ ಕೂರಬಹುದಾದ ಆ ಉದ್ದನೆಯ ಕಟ್ಟೆ , ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಲ್ಲ ವೇದಿಕೆಯಾಗಿತ್ತು. ವಾರ್ಷಿಕೋತ್ಸವವನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಕ್ರಮಗಳೂ ಅಲ್ಲೆ ನಡೆಯುತ್ತಿದ್ದವು. ನನಗೆ ಭವ್ಯ ಭಾರತ ಕಂಡಿದ್ದು ಅದೇ ಕಟ್ಟೆಯಲ್ಲಿ. ವಿದ್ಯಾನಂದ ಶೈಣೆಯವರು ಭಾರತದ ಕುರಿತು ವಿವರಿಸುತ್ತ ಹೋದಂತೆ ಮೈಯಲ್ಲೊಂದು ರೀತಿ ರೋಮಾಂಚನ. ಹಿಂದಿನ ಸಾಲಿನಲ್ಲಿ ಗಲಾಟೆ ಮಾಡುತ್ತ ಕುಳಿತಿರುತ್ತಿದ್ದ ನಾವೆಲ್ಲ ಆವತ್ತು ಅಕ್ಷರಶಃ ಮೌನಿಗಳಾಗಿದ್ದೆವು. ವಿದ್ಯಾನಂದರ ವಾಗ್ಜರಿಯ ಕುರಿತು ಹೇಳಬೇಕಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅವರು ಹೇಳುವಾಗ ಭಾರತ ಶ್ರೇಷ್ಠ ಎಂದು ಯಾವ ಚರ್ಚೆಯೂ ಇಲ್ಲದೆ ಒಪ್ಪಿಕೊಂಡಾಗಿತ್ತು.
ಆಗ ಅವರು ನಮ್ಮ ನಾಡಿನ ಭೂಪಟ ಇಟ್ಟುಕೊಂಡು ‘ಭಾರತ ದರ್ಶನ’ ಮಾಡುತ್ತಿದ್ದರು. ನಮ್ಮೂರಿನ ಪಕ್ಕದ ಕೆಳದಿ, ಇಕ್ಕೇರಿಯಿಂದ ಹಿಡಿದು, ಅಮರನಾಥ, ಕಾಶಿಯವರೆಗೂ ಶೆಣೈಯವರ ಮಾತು ಹಾದುಹೋಗಿತ್ತು. ಬಹುಶಃ ಭಾರತದ ಕುರಿತು ನನ್ನಲ್ಲಿ ಒಂದು ಭವ್ಯ ಕಲ್ಪನೆ ಹುಟ್ಟಿಸಿದ್ದು ಅಂದಿನ ಭಾರತ ದರ್ಶನ. ಅಲ್ಲಿಂದ ನಂತರ ಓದಲು ಸಿಕ್ಕಿದ್ದು ಓಶೋ, ಭೈರಪ್ಪನವರಂಥ ಲೇಖಕರು. ಅಥವ ನಾನು ಓದಿದ್ದು ಅಂಥ ಸಾಹಿತ್ಯಗಳನ್ನು. ಆಗೆಲ್ಲ ಕೇಸರಿ, ಹಸಿರು, ಕೆಂಪು ಪಂಗಡಗಳ ಪರಿಚಯವಿರಲಿಲ್ಲ. ಇದೆಲ್ಲ ನಮ್ಮ ಧ್ವಜದ ಬಣ್ಣ ಎಂದು ಭಾವಿಸಿದ್ದೆ!
ಒಂದರ್ಥದಲ್ಲಿ ನೋಡಿದರೆ ಇಲ್ಲಿನ ಬಹುತೇಕ ಆಚರಣೆಗಳಿಗೆ ಒಂದು ಸೂಕ್ತ ಕಾರಣವಿತ್ತು. ಒಂದು ದಿಕ್ಕಿನಲ್ಲಿ ಭಾರತ ಮೌಢ್ಯರ ನಾಡು ಎಂದು ಕರೆಸಿಕೊಂಡಿದೆ. ಆದರೆ ಇದೇ ನಾಡು ವಿಜ್ಞಾನದ ವೈಭವ ಮೆರದ ನಾಡು ಎಂಬ ಕೀರ್ತಿಯನ್ನೂ ಗಳಿಸಿದೆ. ‘ವಿವಿಧತೆಯಲ್ಲಿ ಏಕತೆ’ ಕಂಡ ನಾಡು ಎಂದು ಸಮಾಜ ವಿಜ್ಞಾನದ ಪುಸ್ತಕದಲ್ಲಿ ಆಗಾಗ ಓದುತ್ತಿದ್ದೆವು. ನೂರೆಂಟು ಜಾತಿಗಳು, ಹತ್ತಾರು ಧರ್ಮಗಳು, ಎಲ್ಲ ಧರ್ಮದ ಹಬ್ಬಗಳಿಗೂ ರಜೆಗಳು ಸಿಗುವುದು ಬಹುಶಃ ನಮ್ಮಲ್ಲಿ ಮಾತ್ರ. ಈಗೀಗ ರಜೆ ಸಿಗುವುದು ಮಾತ್ರ ನಮಗೆ ಮಹತ್ವದ್ದು. ಉಳಿದಿದ್ದೆಲ್ಲ ನಗಣ್ಯ!
ಭಾರತ, ಪಾಶ್ಚತ್ಯರ ಕಣ್ಣು ಕುಕ್ಕಿದ್ದು ಇಂಥ ವೈಶಿಷ್ಟ್ಯಗಳಿಂದ. ಅಪರೂಪಗಳಿಂದ. ಇಕ್ಕೇರಿಗೆ ಬಂದ ವಿದೇಶಿ ಹೆಣ್ಣು ಮಗಳಿಗೆ ಬಸವನ ಅಡಿಗೆ ನುಸಿಯುವುದು ಒಂದು ರೀತಿಯ ಥ್ರಿಲ್.(ನಮಗೆ ಚಿಕ್ಕವರಾಗಿದ್ದ ಇದು ಒಂದು ರೀತಿ ಥ್ರಿಲ್ ಆಗಿತ್ತು. ಬುದ್ದಿ ಬಂದ ನಂತರವಲ್ಲ!) ಗೋಕರ್ಣದ ಲಿಂಗವನ್ನು ಕೈಯಿಂದ ಮುಟ್ಟುವುದು ಅಂದರೆ ಒಂದು ರೀತಿ ರೋಮಾಂಚನ. ಅವರ ಕಣ್ಣಲ್ಲಿ ಭಾರತ ಎಂದರೆ ಒಂದು ಅದ್ಭುತ. ಅಲ್ಲಿಂದ ಬಂದ ಹೆಣ್ಣುಮಗಳು ಸೀರೆಯುಟ್ಟು ಸಂಭ್ರಮಿಸುತ್ತಾಳೆ. ಮಲ್ಲಿಗೆ ಮುಡಿದು ಫೋಟೊ ತೆಗಿಸಿಕೊಳ್ಳುತ್ತಾಳೆ. ಯುವಕರು ಮಡಿಯುಟ್ಟು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಪಂಚೆ ತೊಟ್ಟು , ಅಂಗಿ ಬಿಚ್ಚಿ ಉಡುಪಿಯ ಕೃಷ್ಣನ ರಥವನ್ನೆಳೆಯುತ್ತಾರೆ. ನಮ್ಮಲ್ಲಿ ಒಂದಷ್ಟು ಜನಕ್ಕೆ ಇದೆಲ್ಲ ಒಂದು ವರ್ಗಕ್ಕೆ ಮೀಸಲಾದ ಆಚರಣೆ. ಇನ್ನೊಂದಷ್ಟು ಮಂದಿಗೆ ಇದನ್ನೆಲ್ಲ ಮಾಡುವವರು ಮೂಢರಾಗಿ ಕಾಣುತ್ತಾರೆ!
ಅವರು ಸಂಭ್ರಮಿಸುವ ಆಚರಣೆಗಳು ನಮಗೆ ಮೂಢ ಎನ್ನಿಸುತ್ತಿವೆ. ಹಾಗಂತ ಅವರು ಸಂಭ್ರಮಿಸುತ್ತಾರೆ ಎಂಬ ಕಾರಣಕ್ಕಾಗಿ ನಾವದನ್ನು ಒಪ್ಪಿಕೊಳ್ಳಬೇಕು ಎಂದೇನಲ್ಲ. ಅವರು ಮುಂದುವರಿದ ಜನ ಕುಡಿಯುತ್ತಾರೆ, ಕುಣಿಯುತ್ತಾರೆ ಎಂದು ನಾವು ಅವರನ್ನು ಅನುಸರಿಸುತ್ತಿದ್ದೇವೆ. ಹಲವಾರು ವಾದಗಳ ಸೋಗಿನಲ್ಲಿ ಪಶ್ಚಿಮದ ರಾಷ್ಟ್ರಗಳತ್ತ ಬೊಟ್ಟು ಮಾಡಿ ತೋರಿಸುತ್ತೇವೆ. ಆದರೆ ಅವೆಲ್ಲವುಗಳಿಂದ ಜಿಗುಪ್ಸೆಗೊಂಡಿರುವ ಪಾಶ್ಚಾತ್ಯರು ನಮ್ಮನ್ನು ಅನುಸರಿಸುತ್ತಾರೆ, ಇಲ್ಲಿ ಬಂದು ಕಲಿಯುತ್ತಾರೆ ಎಂಬುದನ್ನು ಮುಚ್ಚಿಡುತ್ತಿದ್ದೇವೆ.
ಹುಡುಗಿಯೊಬ್ಬಳು ಯಾರನ್ನೊ ಕಟ್ಟಿಕೊಂಡು ಓಡಿ ಹೋದಳು ಅಂದಾಗ ದೊಡ್ಡ ಚರ್ಚೆಯಾಗುತ್ತಿತ್ತು. ಹುಡುಗನೊಬ್ಬ ಬಾರ್ನಲ್ಲಿ ಕಾಣಿಸಿಕೊಂಡರೆ ಅಪರಾಧವೆಂಬಂತೆ ಇತ್ತು. ನಡು ರಸ್ತೆಯಲ್ಲಿ ಹುಡುಗ, ಹುಡುಗಿ ಕೈ ಹಿಡಿದು ಓಡಾಡಿದರೆ ಅದೇನೋ ಒಂದು ರೀತಿಯ ಭಾವ. ತೀರಾ ಹಿಂದೇನಲ್ಲ, ಸುಮಾರು ೧೫-೨೦ ವರ್ಷಗಳ ಹಿಂದಿನ ಚಿತ್ರಣವಿದು. ಹುಡುಗಿ ಹಣೆಗೆ ಇಟ್ಟುಕೊಳ್ಳಲಿಲ್ಲ ಎಂದರೆ ಹೆತ್ತವರು ಕೆಂಡದಂತಾಗುತ್ತಿದ್ದರು. ಬೆಳಿಗ್ಗೆ ಎದ್ದ ತಕ್ಷಣ, ಸಂಜೆ ಕಾಲು ತೊಳೆದ ನಂತರ ದೇವರಿಗೆ ನಮಸ್ಕಾರ ಹಾಕಬೇಕಿತ್ತು. ಈಗೀಗ ಆ ಎಲ್ಲ ಆಚರಣೆಗಳು ಕಣ್ಣಿಗೆ ಕಾಣುವುದು ತೀರಾ ಅಪರೂಪ.
ನಾವು ಪಾಶ್ಚಾತ್ಯ ಸಂಸ್ಕೃತಿಗೆ ತೀರಾ ಹತ್ತಿರದಲ್ಲಿದ್ದೇವೆ ಅನ್ನಿಸುತ್ತದೆ. ವಿದೇಶದಲ್ಲಿ ೧೬ನೆ ವಯಸ್ಸಿಗೆ ಮಕ್ಕಳು ಸ್ವತಂತ್ರ ಗಳಿಸುತ್ತಾರಂತೆ. ಅಲ್ಲಿಂದ ನಂತರ ಅವರ ಲೈಂಗಿಕ ಸಂಬಂಧಗಳಿಗೆ ಯಾವುದೇ ಬಗೆಯ ಕಡಿವಾಣವಿಲ್ಲ. ಹುಡುಗ/ಹುಡುಗಿ ಇಷ್ಟಪಟ್ಟರೆ ಮುಗಿಯಿತು. ಹುಡುಗನ ಕೋಣೆಗೆ ಹುಡುಗಿ ಯಾವುದೇ ಭಯವಿಲ್ಲದೆ ಬರಬಹುದಂತೆ. ಹಾಗಂತ ಭೈರಪ್ಪನವರು ‘ಕವಲು’ ಸಂವಾದದಲ್ಲಿ ಹೇಳಿದ್ದರು. ನಮ್ಮ ದೇಶದ ಈಗಿನ ಸ್ಥಿತಿ ಅದಕ್ಕಿಂತ ಭಿನ್ನವಾಗಿಲ್ಲ. ಕಾಲೇಜು ಮೆಟ್ಟಿಲು ಹತ್ತಿದಾಗಲೇ ಸಂಬಂಧಗಳು ಗರಿಗೆದರತೊಡಗಿವೆ. ಹುಡುಗಿಗೆ ಹುಡುಗನ ಕೋಣೆಗೆ ಬರಲು ತುಸು ಭೀತಿಯಿದೆ. ಆದರೆ ಆತನೊಂದಿಗೆ ಟ್ರಿಪ್ ಹೋಗಲು, ಲಾಡ್ಜ್ನಲ್ಲಿ ಉಳಿಯಲು ಯಾವುದೇ ಮುಜುಗರವಿಲ್ಲ ಮತ್ತು ಏನು ಅನ್ನಿಸುವುದಿಲ್ಲ.
ನಿಜ, ಸಂಸ್ಕೃತಿ ಪ್ರಿಯರು ಎಲ್ಲ ವಿಚಾರಗಳಿಗೂ ಹುಡುಗಿಯರನ್ನೇ ಗುರಿಯಾಗಿಸುತ್ತಾರೆ. ಆಕೆ ಅಡುಗೆ ಮನೆಯಲ್ಲಿ ಸೌಟು ಹಿಡಿದುಕೊಂಡು ಇರಬೇಕು ಎಂಬಂತೆ ಮಾತಾಡುತ್ತಾರೆ. ಆಕೆಗೆ ಸ್ವತಂತ್ರ ಇಲ್ಲವೆ, ಕನಸುಗಳು ಇಲ್ಲವೆ, ಈ ಎಲ್ಲ ಬಗೆಯ ಕಡಿವಾಣಗಳು ಹುಡುಗರಿಗೇಕೆ ಇಲ್ಲ? ಸ್ವಾತಂತ್ರ ನಂತರದ ಭಾರತದಲ್ಲಿ ಹಲವರನ್ನು ಇಂಥ ಪ್ರಶ್ನೆಗಳು ಕಾಡಿವೆ. ಪರಿಣಾಮವಾಗಿ ದೇಶದಲ್ಲಿ ಅನೇಕ ಮಹಿಳಾವಾದಿಗಳು, ಸ್ತ್ರೀಸಂವೇದನಾಶೀಲರ ಜನನವಾಗಿದೆ!
ಹಾಗೆ ನೋಡಿದರೆ ಸ್ತ್ರೀ ಎಂಬ ಪದವೇ ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬ. ಒಂದು ಕುಟುಂಬದ ಸಾಂಸಾರಿಕ ಹೊಣೆಗಾರಿಕೆ ಹೊತ್ತವಳು ಆಕೆ. ಮಗು ತಂದೆಗಿಂತ ತಾಯಿಯ ಮಡಿಲಿನಲ್ಲೇ ಹೆಚ್ಚಾಗಿ ಬೆಳೆಯುವುದು. ಆ ಕಾರಣಕ್ಕಾಗಿ ಗಂಡು ದುಡಿಯುವ ಯಂತ್ರವಾದರೆ, ಹೆಣ್ಣು ಮನೆ ನೋಡಿಕೊಳ್ಳುವ ಜವಬ್ದಾರಿ ಹೊತ್ತಳು. ಗಂಡ ಸತ್ತಾಗ ಹೆಣ್ಣಿನ ತಲೆ ಬೋಳಿಸುವುದು, ಬಾಲ್ಯ ವಿವಾಹ ಮಾಡಿ ಬೇಗ ಗಂಡ ಸತ್ತರೆ ಆಕೆಯನ್ನು ಒಂಟಿಯಾಗಿಸುವುದು ಮೊದಲಾದ ಒಂದಷ್ಟು ಆಚರಣೆಗಳು ಖಂಡಿತವಾಗಿಯೂ ಮೂಢ. ಅಂಥ ಬೆರಳೆಣಿಕೆಗಳಿಂದ ಇಡೀ ಭಾರತವೇ ಸರಿಯಿಲ್ಲ ಎಂದು ನಿರ್ಧರಿಸಿಬಿಟ್ಟೆವು.
ಹುಡುಗಿಯೇ ಕುಡಿಯುತ್ತಾಳಂತೆ, ಪಬ್ನಲ್ಲಿ ಕಾಣಿಸಿಕೊಳ್ಳುತ್ತಾಳಂತೆ. ನಾವು ಕುಡಿಯದಿದ್ದರೆ ಅವಮಾನ ಎಂಬ ಮಾತು ಇತ್ತೀಚೆಗೆ ಹುಡುಗರ ಕಡೆಯಿಂದ ಕೇಳಿ ಬರುತ್ತಿದೆ! ದೂರದ ಅಮೆರಿಕ, ಯೂರೋಪ್ಗಳಲ್ಲಿ ಹಿಂದೆ ಕಾಣುತ್ತಿದ್ದ ಸನ್ನಿವೇಶಗಳೆಲ್ಲ ಇಂದು ನಮ್ಮ ನಾಡಿನಲ್ಲಿ ಕಾಣಿಸಿಕೊಳ್ಳುತ್ತಿದೆ. ನಮಗೆ ಯಾವುದೂ ಕೂಡ ಅಸಹ್ಯ, ಅಸಹಜ ಅನ್ನಿಸುತ್ತಿಲ್ಲ. ಎಲ್ಲವನ್ನೂ ಸ್ವಾಭಾವಿಕವಾಗಿ ಸ್ವೀಕರಿಸುತ್ತಿದ್ದೇವೆ. ಹಾಗಾಗಿ ಭಾರತದಲ್ಲಿ ಶ್ರೇಷ್ಠ ಅಂದುಕೊಳ್ಳಲು ಇನ್ನು ಕೆಲ ವರ್ಷಗಳಲ್ಲಿ ಏನು ಇರುವುದಿಲ್ಲ. ನಮ್ಮದು ಎಂಬ ಸ್ವಂತ ಗುರುತೇ ಇಲ್ಲದ ನಾಡು ಇದಾಗಲಿದೆ. ಇನ್ನು ಮುಂದೆ ಭಾರತ ದರ್ಶನ ಮಾಡುವುದಾರೆ, ನಮ್ಮಲ್ಲಿ ಇಷ್ಟು ಭ್ರಷ್ಟರಿದ್ದಾರೆ, ಇಷ್ಟು ಅತ್ಯಾಚಾರಿಗಳಿದ್ದಾರೆ, ಇಷ್ಟು ಕುಡುಕರಿದ್ದಾರೆ, ಇಷ್ಟು ವಿಚ್ಛೇದನಗಳಾಗಿವೆ ಎಂಬ ಅಂಕಿ-ಅಂಶ ಕಲೆ ಹಾಕಬೇಕು! ಪಬ್ಬು, ಬಾರುಗಳನ್ನು ವರ್ಣಿಸಬೇಕು. ನೋಟುಗಳ ರಾಶಿ ಸುರಿಯುವ ಎಂಎನ್ಸಿ ಕಂಪನಿಗಳ ಕಾಂಕ್ರೀಟು ಕಟ್ಟಡ ತೋರಿಸಬೇಕು. ಕಾಡುಗಳು, ನದಿಗಳು, ಬೆಟ್ಟಗಳು ಎಲ್ಲವೂ ಕಾಣೆಯಾಗುತ್ತಿವೆ. ಅದನ್ನೆಲ್ಲ ಕಾಣುವ ಮೊದಲು ವಿದ್ಯಾನಂದರು ಹೊರಟು ಹೋದರು. ಆದರೆ ಅವರ ಮಾತಿನ ಗುಂಗಿನಲ್ಲಿ ಇರುವ ನಾವು ಅನಿವಾರ್ಯವಾಗಿ ಎಲ್ಲವನ್ನೂ ನೋಡಬೇಕಿದೆ ಮತ್ತು ಒಪ್ಪಿಕೊಳ್ಳಬೇಕಿದೆ ಹಾಗೂ ಒಪ್ಪಿಕೊಂಡಾಗಿದೆ…
Posted in ಚಿಂತನ ಚಾವಡಿ | 2 Comments »
ಹುಡುಗಿ, ಲವ್ವು, ಫೀಲು, ಸೆಕ್ಸು…ಕಥೆ ಅಂತಾ ಬರೆಯಲು ಕುಳಿತರೆ ಮತ್ತದೇ ಪದಗಳು ಉದುರುತ್ತವೆ. ಬೋಳಿಮಗನದ್ದು, ಈ ವಯಸ್ಸೇ ಹಾಗೆ ಅಂದುಕೊಳ್ಳುವ ಹೊತ್ತಿಗೆ ನೆನಪಾದಳು ಅಕ್ಕಯ್ಯ.
ಆವತ್ತು ಶ್ರಾವಣಿ ಬಸ್ಸಿನಲ್ಲಿ ಸಿಗದೇ ಹೋಗಿದ್ದರೆ, ಅವಳ ಪಕ್ಕದಲ್ಲೇ ಕುಳಿತ ನನ್ನೊಂದಿಗೆ ಮಾತನಾಡದಿದ್ದರೆ ಬಹುಶಃ ಅಕ್ಕಯ್ಯ ನೆನಪಾಗುತ್ತಿರಲಿಲ್ಲ! ಮಾಲಕ್ಕ ಅಲಿಯಾಸ್ ಅಕ್ಕಯ್ಯನ ಕುರಿತೊಂದು ಕಥೆ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.
ಪಟೇಲ್ ಪರಮಣ್ಣ!
ಹತ್ತೂರು ಸೀಮೆಯಲ್ಲಿ ಚಿರಪರಿಚಿತ ಹೆಸರು. ಪಟೇಲ್ ಪರಮಣ್ಣ ಗೊತ್ತಿಲ್ಲವಾದರೂ, ಆತನ ಹೆಂಡತಿ ಬಡ್ಡಿ ಭವಾನಮ್ಮನ ಹೆಸರು ಕೇಳದ ಓಣಿಗಳೇ ಹತ್ತೂರು ಸೀಮೆಯಲಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಭವಾನಮ್ಮನ ವಹಿವಾಟುಗಳಿಂದಲೇ ಪಟೇಲ್ ಪರಮಣ್ಣನ ಹೆಸರು ನಾಲ್ಕಾರು ಜನರ ಬಾಯಿಯಲ್ಲಿ ಹರಿದಾಡಿದ್ದು. ಇಂಥ ದಂಪತಿಗಳ ೧೮ ಮಕ್ಕಳಲ್ಲಿ ಪ್ರಥಮ ಸುಪುತ್ರಿಯೇ ನಮ್ಮ ಈ ಅಕ್ಕಯ್ಯ.
“ಈ ಮಾಣಿಯೊಂದು ಯಾವಾಗ್ಲೂ ತಿರುಗ್ತಾ ಇರ್ತಾ. ಸುಡುಗಾಡು ಮನ್ನ್ಯಾಥ ಒಂದು ದಿನ ಕೆಲಸಕ್ಕೆ ಬಂದ್ರೆ, ಮೂರು ದಿನ ಬರದಿಲ್ಲೆ. ನಮ್ಮ ಮನೆ ಮಳ್ಳು ಅಮ್ಮಂಗೆ ಇದೆಲ್ಲ ಎಂಥೂ ಗೊತಾಗ್ತಲ್ಲೆ…”ಇಂಥದ್ದೊಂದು ಸುಪ್ರಭಾತ ಪರಮಯ್ಯನ ಮನೆ ಕೊಟ್ಟಿಗೆಯಲ್ಲಿ ಕೇಳಿದರೆ, ಅದು ಅಕ್ಕಯ್ಯನ ಸಂಗೀತ ಎಂದು ಯಾರಿಗೂ ಹೇಳಬೇಕಿಲ್ಲ. ಪಕ್ಕದ ಮನೆ ಸುಮನತ್ತೆ ಕಳೆದ ೧೮ ವರ್ಷಗಳಿಂದ ಅಕ್ಕಯ್ಯನ ಈ ಹಾಡು ಕೇಳುತ್ತಲೇ ಇದ್ದಾಳೆ. ಒಂದೊಮ್ಮೆ, ಬೆಳಿಗ್ಗೆ ೬.೬೦ಕ್ಕೆ ಸರಿಯಾಗಿ ಈ ಸುಪ್ರಭಾತ ಕೇಳದೇ ಹೋದರೆ, ಆವತ್ತು ಅಕ್ಕಯ್ಯನಿಗೆ ಮೈ ಹುಷಾರಿಲ್ಲ ಅಂತಾ ನಾವು ಅಂದುಕೊಳ್ಳಬೇಕಿತ್ತು.
“ಅಕ್ಕಯ್ಯಂಗೆ ೮ ವರ್ಷ ಇರಕಿದ್ರೆ ಮದ್ವೆ ಆಗಿತ್ತು. ಇಲ್ಲೆ ಪಡೆಗೋಡು ಹತ್ರಾ ಲಿಂಗದಹಳ್ಳಿಗೆ ಕೊಟ್ಟಿದ್ದ. ಮದ್ವೆ ಆಗಿ ಮೂರೇ ವರ್ಷಕ್ಕೆ ಗಂಡ ಸತ್ತು ಹೋದ. ಆಮೇಲೆ ಭವಾನಮ್ಮ, ಅಕ್ಕಯ್ಯನ ಮನೆಗೆ ಕರೆದುಕೊಂಡು ಬಂದು ಇಟ್ಕಂಡ. ಆವತ್ತಿನಿಂದ ಇವತ್ತಿನವರೆಗೂ ಅಕ್ಕಯ್ಯ ಒಂದೇ ತರ ಇದ್ದ. ಕೊಟ್ಟಿಗೆ ಕೆಲ್ಸ, ಅಡುಗೆ ಮನೆ…ಇದಿಷ್ಟೆ ಅವಳ ದಿನಚರಿ. ಯಾರ ಮನೆಗೂ ಹೋಗದಿಲ್ಲೆ. ಯಾರ ಹತ್ರಾನೂ ಮಾತಾಡದಿಲ್ಲೆ. ಒಂದು ಹೊಸ ಬಟ್ಟೆ, ಹೊಸ ಸೀರೆ ಉಟ್ಟಿದ್ದನ್ನ ಆನಂತೂ ನೋಡಲ್ಲೆ”ಆವತ್ತು ಅಕ್ಕಯ್ಯನ ಕುರಿತು ಇವಿಷ್ಟು ಹೇಳಿದ ಅಮ್ಮ, ಮತ್ಯಾವತ್ತೂ ಅವಳ ಬಗ್ಗೆ ಹೇಳಲೇ ಇಲ್ಲ.
*******
ನನ್ನ ಹೆಸರು ಶ್ರಾವಣಿ. ಊರು ಚಿಕ್ಕಮಗಳೂರು ಜಿಲ್ಲೆಯ ಕಳಸ. ಕಳೆದ ೫-೬ ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ಸದ್ಯಕ್ಕೆ ಸಾಫ್ಟ್ವೇರ್ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್. ವಾಟ್ ಅಬೌಟ್ ಯೂ?
ಹೌದು, ಆವತ್ತು ಎನ್.ಆರ್ ಪುರದಲ್ಲಿ ಪರಿಚಿತವಾಗಿದ್ದು ಇದೇ ಶ್ರಾವಣಿ. ಶಾರದೆಯನ್ನು ನೋಡುವ ಸಲುವಾಗಿ ಶಿವಮೊಗ್ಗದಿಂದ ಶೃಂಗೇರಿಗೆ ಹೊರಟ್ಟಿದ್ದೆ. ಹೆಬ್ಬಾವು ಹರಿದಂತಿರುವ ತಿರುವುಗಳು, ಹಣ್ಣಿಲ್ಲದೆ ಸೊರಗಿರುವ ನೇರಳೆ ಮರಗಳು, ಕರಡವಿಲ್ಲದೆ ಬೋಳು-ಬೋಳಾಗಿರುವ ಬ್ಯಾಣಗಳು, ಹಳೆ ಪೊರೆ ಕಳಚಿ ಹೊಸ ಹಸಿರಿನೊಂದಿಗೆ ಮೈದಳೆದು ನಿಂತಿರುವ ಮರಗಳ ನಡುವೆಯೇ ಬಸ್ಸು ಸಾಗುತ್ತಿತ್ತು. ಕಿಟಕಿಯಾಚೆಗಿನ ಪ್ರಪಂಚವನ್ನು ನೋಡುತ್ತಿದ್ದವನಿಗೆ ಪಕ್ಕದಲ್ಲೊಂದು ಸುಂದರವಾದ ಹುಡುಗಿ ಕುಳಿತಿದ್ದಾಳೆಂದು ಗೊತ್ತಾಗಿದ್ದು ಬಸ್ಸು ಎನ್.ಆರ್ ಪುರವನ್ನು ಪ್ರವೇಶಿಸಿದಾಗ.
ನನ್ನ ಹೆಸರು ಸಂಜಯ್. ನಾನೂ ಕೂಡ ಕಳೆದೆರಡು ವರ್ಷಗಳಿಂದ ಬೆಂಗಳೂರಲ್ಲೇ ಇದ್ದೇನೆ. ನಿಮ್ಮಷ್ಟು ಒಳ್ಳೆ ಉದ್ಯೋಗದಲಿಲ್ಲ. ಹೊಟ್ಟೆ ಪಾಡಿನ ಕೆಲಸ. ಊರಿಗೆ ಬಂದಿದ್ದೆ. ಹಾಗೆ ಶಾರದಾಂಬೆಯ ದರ್ಶನ ಮಾಡಿಕೊಂಡು ಹೋಗೋಣ ಅಂತಾ ಶೃಂಗೇರಿ ಕಡೆ ಹೊರಟ್ಟಿದ್ದೇನೆ…
ಉಭಯ ಕುಶಲೋಪಚರಿಯೊಂದಿಗೆ ಇಬ್ಬರ ಮಾತುಕತೆ ಆರಂಭವಾಯಿತು. ಬಸ್ಸು ದೂರ ಸಾಗುತ್ತಾ ಹೋದಂತೆ ನಮ್ಮ ಸ್ನೇಹ ಗಟ್ಟಿಯಾಗುತ್ತಾ ಹೋಯಿತು.
ಹೌದು, ತುಂಬಾ ಒಳ್ಳೇ ಕೆಲಸ! ನಾವು ಯಾರಿಗಾಗಿ ಪ್ರಾಜೆಕ್ಟ್ ಮಾಡ್ತಾ ಇದ್ದೀವಿ, ಇದರಿಂದ ಯಾರಿಗೆ ಉಪಯೋಗ ಅನ್ನೋದು ಎಷ್ಟೋ ಸಲ ನಮಗೂ ಗೊತ್ತಿರುವುದಿಲ್ಲ. ನಿಜ, ಕೈ ತುಂಬಾ ಸಂಬಳ ಬರತ್ತೆ. ಒಂತರಹ ಹೈಟೆಕ್ ಕೂಲಿ. ನಾವು ಹೊಟ್ಟೆ ಪಾಡಿಗೇ ದುಡಿಯುವುದು ಕಣ್ರೀ…
ಮುಖದಲ್ಲಿನ ಅಸಹನೆಯ ಗೆರೆಗಳ ನಡುವೆಯೇ ಸಣ್ಣದೊಂದು ನಗು ಮಿಣುಕಾಡಿತ್ತು. ಆ ನಗುವಿನ ಹಿಂದಿರಬಹುದಾದ ನೋವಿನ ಸುಳಿವೂ ನನಗೆ ಸಿಕ್ಕಿರಲಿಲ್ಲ. ಸಹಜವಾಗಿ ಹುಡುಗಿ ಇಷ್ಟವಾಗಿ ಬಿಟ್ಟಿದ್ದಳು. ಆಂಟಿಯಾಗಿರಬಹುದೆಂಬ ಕಲ್ಪನೆಯೂ ಮನಸ್ಸಿಗೆ ಬರಲಿಲ್ಲ! ಆಂಟಿ ಎಂದು ಸುಳಿವು ನೀಡಬಹುದಾದ ಯಾವ ಲಕ್ಷಣಗಳೂ ಕಾಣಿಸಲೂ ಇಲ್ಲ!
ಶೃಂಗೇರಿ ಮಠ, ಮಠ, ಮಠ. ಇಳಿರಿ ಇದೇ ಲಾಸ್ಟ್ ಸ್ಟಾಪ್…
ಬಸ್ಸಿನ ಆ ಹುಡುಗನ ಕೂಗು ಕಿವಿಗಡಚತೊಡಗಿತು.
ಫಸ್ಟ್ ಟೈಂ ಬರ್ತಾ ಇರೋದಾ?
ಅಂತಾ ಅವಳು ಇಳಿಯಲು ಅಣಿಯಾದಾಗ ನಾನು ಭ್ರಮಾ ಲೋಕದಿಂದ ಹೊರಬಂದಾಗಿತ್ತು.
ಶಾರದೆ ದರ್ಶನ, ವಿದ್ಯಾರಣ್ಯರ ಉದ್ಯಾನವನ, ಊಟ…ಇವೆಲ್ಲ ಮುಗಿಯುವಾಗ ಶ್ರಾವಣಿ ನನ್ನ ಬದುಕಿನ ಅವಿಭಾಜ್ಯ ಅಂಗ ಅನ್ನಿಸಿಬಿಟ್ಟಿದ್ದಳು. ಹಠ ಮಾಡಿ ಕಳಸದ ಬಳಿಯಿರುವ ಅವಳ ಮನೆಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಆಕೆ ಗೆಳತಿಯಾಗಿದ್ದಳು.
ಹೊಸಕೆರೆಹಳ್ಳಿ ರಿಂಗ್ರೋಡ್ನಲ್ಲಿರುವ ಮಂತ್ರಿ ಅಪಾರ್ಟ್ಮೆಂಟ್ಲ್ಲಿ ನನ್ನ ಮನೆಯಿದೆ. ಬೆಂಗ್ಳೂರಿಗೆ ಬಂದ ಮೇಲೆ ಕಾಂಟ್ಯಾಕ್ಟ್ ಮಾಡ್ತೀನಿ. ಮೊಬೈಲ್ ನಂಬರ್ ಕೊಟ್ಟಿರಿ…
ಅಂತಾ ಬಸ್ ನಿಲ್ದಾಣದವರೆಗೆ ಬಂದು ಬಿಟ್ಟುಕೊಟ್ಟಳು.
ಹಸಿರು-ಬಿಳಿ ಬಣ್ಣದ ಸಹಕಾರ ಸಾರಿಗೆ ಬಸ್ಸು ಶಿವಮೊಗ್ಗೆಯ ಹಾದಿ ಹಿಡಿದು ಹೊರಟಾಗ, ಕಿಟಕಿಯಾಚೆಗಿನ ಪ್ರಪಂಚದಲ್ಲಿ ಮತ್ತೆ ಕನಸುಗಳಿಗೆ ರೆಕ್ಕೆ-ಪುಕ್ಕ ಬಂದಂದಿತ್ತು.
***
ಅಕ್ಕಯ್ಯನ ಗಂಡ ಸತ್ತ ಮೇಲೆ, ಬಡ್ಡಿ ಭವಾನಮ್ಮ ಮಗಳನ್ನ ಮನೆಗೆ ತಂದಿಟ್ಟುಕೊಂಡಳು. ಅವಳ ಪಾಲಿಗೆ ಗಂಡನ ಮನೆ ಕಡೆಯಿಂದ ಬರಬೇಕಿದ್ದ ದುಡ್ಡು, ಒಡವೆಗಳನ್ನೆಲ್ಲ ಸೀರೆ ಸೆರೆಗಿನಲ್ಲಿ ಕಟ್ಟಿಕೊಂಡು ಬಂದಳು. ಕತ್ತಲೆಯ ಕೋಣೆಯಲ್ಲಿದ್ದ ಕಪಾಟಿನಲ್ಲಿ ಅಕ್ಕಯ್ಯನ ಆಸ್ತಿಯನ್ನು ಭದ್ರವಾಗಿಟ್ಟು ಬೀಗ ಜಡಿದಳು. ಮನೆಯಲ್ಲಿದ್ದ ಅಂಥದ್ದೆ ಮತ್ತೊಂದು ಕತ್ತಲೆ ಗೂಡಿನಲ್ಲಿ ಅಕ್ಕಯ್ಯನಿಗೂ ಒಂದು ಹಾಸಿಗೆ ಹಾಸಿ ಕೊಟ್ಟಳು. ಗಂಡ, ಸಂಸಾರ ಇತ್ಯಾದಿ ಪದಗಳ ಅರ್ಥ ತಿಳಿಯುವ ಮೊದಲೇ ಮಾಲಕ್ಕನ ಬದುಕು ಸತ್ತು ಹೋಗಿತ್ತು. ಉಸಿರಾಡುವ ದೇಹ ಮಾತ್ರ ಉಳಿದಿತ್ತು ಎಂಬುದು ಎಲ್ಲರಿಗೂ ತಿಳಿಯಲು ಬಹಳ ದಿನ ಬೇಕಾಗಲಿಲ್ಲ.
ಗಂಡ ಸತ್ತ ಮೇಲೆ ಮನೆ, ಕೊಟ್ಟಿಗೆ ಕೆಲಸ ಹಾಸಿಗೆ ಇವಿಷ್ಟೆ ಅವಳ ಬದುಕಾಯಿತು. ನಾಲ್ಕಾರು ಜನ ಸೇರಿದ ಜಾಗದಲ್ಲಿ ಅಕ್ಕಯ್ಯ ಕಾಣಿಸಿಕೊಳ್ಳುತ್ತಿರಲಿಲ್ಲ. ಮನೆಗೆ ಯಾರಾದ್ರು ಬಂದರೆ ಮೊದ-ಮೊದಲು ಮಾತಾಡುತ್ತಿದ್ದಳು. ಅವರಿವರ ಸುದ್ದಿ ಕೇಳುತ್ತಿದ್ದಳು. ಕ್ರಮೇಣ ಅದು ಕಡಿಮೆಯಾಯಿತು. ಗೌರಿ ದನ, ಬೆಳ್ಳಿ ಎಮ್ಮೆ, ಕರಿ ಕುನ್ನಿ ಜತೆಗೆ ಮಾತಾಡಲು ಅಕ್ಕಯ್ಯ ಶುರುವಿಟ್ಟಳು. ಭಾಷೆ ಬರುವ ಮನುಷ್ಯನಿಗೇ ತನ್ನ ಮಾತು ಅರ್ಥವಾಗುತ್ತಿಲ್ಲ. ಅಂದಮೇಲೆ ಈ ಮೂಕ ಪ್ರಾಣಿಗಳಿಗೆ ಎಲ್ಲಿಂದ ಅರ್ಥವಾಗಬೇಕು ಅಂತಾ ಬಹುಶಃ ಒಂದು ದಿನ ಅಕ್ಕಯ್ಯನಿಗೆ ಅನ್ನಿಸಿರಬೇಕು. ಕೊನೆಗೆ ಆ ಪ್ರಾಣಿಗಳ ಜತೆ ಮಾತಾಡುವುದನ್ನೂ ನಿಲ್ಲಿಸಿ ಬಿಟ್ಟಳು. ತನ್ನಷ್ಟಕ್ಕೆ ತಾನೇ ಮಾತಾಡಲು, ಹಲುಬಲು ಶುರುವಿಟ್ಟಳು.
ಖಾಯಿಲೆ ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯಾ ಅನ್ನುತ್ತಾರೆ ಮಲೆನಾಡಿನಲ್ಲಿ. ಆದರೆ ಅದು ಅಕ್ಕಯ್ಯನ ವಿಚಾರದಲ್ಲಿ ಸುಳ್ಳು. ಕಳೆದ ೧೮ ವರ್ಷಗಳಿಂದ ಅಕ್ಕಯ್ಯ ಮೈಗೆ ಹುಷಾರಿಲ್ಲೆ ಎಂದು ಆಸ್ಪತ್ರೆಗೆ ಹೋಗಿದ್ದನ್ನು ಯಾರೂ ನೋಡಲಿಲ್ಲ. ನಾಲ್ಕಾರು ದಿನ ಹಾಸಿಗೆ ಹಿಡಿದು ಮಲಗಿದ್ದನ್ನು ಯಾರೂ ಕಾಣಲಿಲ್ಲ. ಬೆಳಿಗ್ಗೆ ೬.೬೦ಕ್ಕೆ ಕೊಟ್ಟಿಗೆಯಲ್ಲಿ ಸುಪ್ರಭಾತ ಕೇಳಿಲಿಲ್ಲ ಎಂದಾದರೆ, ಆವತ್ತು ಅಕ್ಕಯ್ಯನಿಗೆ ಹುಷಾರಿಲ್ಲದೇ ಇರಬಹುದು ಎಂಬುದು ನಮ್ಮ ಊಹೆಯಷ್ಟೆ. ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹುಚ್ಚರು, ಬೇಡುವವರು, ಅಕ್ಕಯ್ಯನಂಥವರಿಗೆಲ್ಲ ರೋಗಗಳೇ ಬರುವುದಿಲ್ಲವೋ ಅಥವಾ ರೋಗ ಬಂದರೂ ಕೇಳುವವರು ಯಾರು ಇಲ್ಲ ಎಂದು ನಿರ್ಧರಿಸಿ ಹೇಳಿಕೊಳ್ಳುವುದಿಲ್ಲವೋ ಗೊತ್ತಿಲ್ಲ. ಖಾಯಿಲೆ ಎಂಬುದು ಮನಸ್ಸಿಗೋ ದೇಹಕ್ಕೋ ಎಂಬ ಅನುಮಾನವನ್ನು ಹುಟ್ಟಿಸಿ ಬಿಡುತ್ತಾರೆ ಇವರೆಲ್ಲ.
ಒಂದಂತು ಸತ್ಯ. ಮನುಷ್ಯನಿಗೆ ತನ್ನೊಳಗಿದ್ದನ್ನು ಯಾರಿಗಾದ್ರೂ ಹೇಳಿಕೊಳ್ಳಬೇಕು ಅಂತಾ ತುಂಬಾ ಅನ್ನಿಸತ್ತೆ. ಯಾರೂ ತನ್ನನ್ನೂ ಕೇಳುತ್ತಿಲ್ಲ ಎಂಬ ಭಾವ, ಅವರೊಳಗಿನ ಎಲ್ಲಾ ನೋವನ್ನು ಹಿಡಿದಿಟ್ಟುಕೊಳತ್ತೆ. ಇಷ್ಟೆಲ್ಲದರ ನಡುವೆಯೂ ಅಕ್ಕಯ್ಯ ಅಪರೂಪಕ್ಕೆ ಪಕ್ಕದ ಮನೆ ಸುಮನತ್ತೆ ಜತೆ ಮಾತಾಡುತ್ತಾಳೆ. ಆವಾಗಾವಾಗ ಏನೇನೋ ಹಲುಬುತ್ತಾಳೆ. ಸುಮನತ್ತೆ ಅದೆಷ್ಟನ್ನು ಕೇಳಿಸಿಕೊಳ್ಳುತ್ತಾಳೋ, ಅದೆಷ್ಟನ್ನು ಅರ್ಥ ಮಾಡಿಕೊಳ್ಳುತ್ತಾಳೋ ಯಾರಿಗೂ ಗೊತ್ತಿಲ್ಲ. ಅಡುಗೆ ಮಾಡಲು ಬೇಜಾರು ಬಂದಾಗ ಅಕ್ಕಯ್ಯ ಚೂರು ಪಾರು ಆಸೆ(ಪದಾರ್ಥ) ಕೇಳುವುದು ಈ ಸುಮನತ್ತೆ ಬಳಿಯೇ!
ಹಾಗೆ ನೋಡಿದ್ರೆ, ಪಟೇಲರ ಮನೆ, ಹತ್ತೂರಲ್ಲಿಯೇ ಶ್ರೀಮಂತ ಕುಟುಂಬ ಎನ್ನಬಹುದು. ಪಟೇಲರ ಮಗನ ಮದ್ವೆ ಮೆರವಣಿಗೆಯನ್ನು ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ೨ ಸಾವಿರ ಜನ ಆಗಿತ್ತು. ಮದ್ವೆಗೆ ೧೦ ಲಕ್ಷ ರೂ ಖರ್ಚಾಯಿತು ಅಂತಾ ಭವಾನಮ್ಮ ಹತ್ತೂರು ಸೀಮೆ ತುಂಬಾ ದರ್ಪದಿಂದ ಡಂಗುರ ಸಾರಿಕೊಂಡು ಹೋಗಿದ್ದು ಎಲ್ಲರಿಗೂ ನೆನಪಿದೆ. ಆದ್ರೆ ಆ ಸಂಭ್ರಮದಲ್ಲೂ ಅಕ್ಕಯ್ಯ ಹಳೆ ಸೀರೆಯುಟ್ಟು ಮನೆಯೊಳಗೆ ಕುಳಿತಿದ್ದು ಯಾರ ಕಣ್ಣಿಗೂ ಬಿದ್ದಂತಿಲ್ಲ. ಬಿದ್ದರೂ ಅದು ನಮ್ಮ ಜನರಿಗೆ ಚರ್ಚೆಯ ವಿಷಯ ಅನ್ನಿಸಿದಂತಿಲ್ಲ.
ಅಕ್ಕಯ್ಯನಿಗೂ ಸಂತೋಷವಾಗಿದ್ದಿದೆ. ತಮ್ಮ ವೆಂಕಟನ ಮದ್ವೆ ಸಂಭ್ರಮದ ಕುರಿತು ಸುಮನತ್ತೆ ಬಳಿ ಕೇಳಿ ತಿಳಿದುಕೊಂಡಿದ್ದಾಳೆ. ತಾನೂ ಸಂಭ್ರಮ ಪಟ್ಟಿದ್ದಾಳೆ. ಆದ್ರೂ ಅದೆಷ್ಟು ಕರೆದರೂ ಮದ್ವೆ ಮನೆಗೆ ಬರಲು ಮಾತ್ರ ಒಪ್ಪಿರಲಿಲ್ಲ. ಗಂಗೆ ದನ, ಬೆಳ್ಳಿ ಎಮ್ಮೆಗೆ ಅಕ್ಕಚ್ಚು ಕೊಟ್ಟು, ಹುಲ್ಲು ಹಾಕಿಕೊಂಡು ಮನೆ ಕಾಯ್ದುಕೊಂಡು ಇರುತ್ತೇನೆ ಅಂದಳು. “ಅಕ್ಕ ಅದೆಲ್ಲ ದಿನ ಇರ್ತು’ ಬಾ ಎಂದ ತನ್ನ ಸಹೋದರಿಯರ ಕರೆಗೆ ಕಿವಿಗೊಡಲಿಲ್ಲ. “ಅಯ್ಯೋ ಮದ್ವೆ ಮನೆಲಿ ಎಂತಾ ನೋಡದು ಇರ್ತೆ? ಯಂಗೆ ನೋಡ ವಯಸ್ಸಲ” ಅಂದು ಬಿಟ್ಟಳು. ಅಕ್ಕಯ್ಯನ ಈ ಮಾತಿನ ಹಿಂದೆ, ಅವಳ ಹಳೆಯ ಬದುಕಿನ ನೆನಪುಗಳಿರಬಹುದೆ?
***
ಕರೆಯದಿದ್ದರೂ ಇನ್ನೊಮ್ಮೆ ಅವಳನ್ನು ಭೇಟಿ ಮಾಡಬೇಕು ಅಂದುಕೊಂಡವ, ಈ ಶನಿವಾರ ಸಾಯಂಕಾಲ ಮನೆಗೆ ಬರಬೇಕೆಂಬ ಅವಳ ಕರೆಯನ್ನು ನಿರಾಕರಿಸಲು ಸಾಧ್ಯವೇ ಇರಲಿಲ್ಲ! ಆರಂತಸ್ತಿನ ಅರ್ಪಾಟ್ಮೆಂಟ್. ಸಂಬಳಕ್ಕೆ ತಕ್ಕದಾದ ಬಂಗಲೆ ಅಂದುಕೊಳ್ಳುತ್ತಾ ಒಳ ಹೊಕ್ಕವನಿಗೆ ಮಲೆನಾಡಿನ ಆತಿಥ್ಯವೇ ದೊರೆಯಿತು. ಹುಡುಗಿಯೊಬ್ಬಳ ಸೌಂದರ್ಯ ಹೆಚ್ಚಿಸಬಹುದಾದ ಅತಿ ಮುದ್ದಾದ ನಗುವಿನೊಂದಿಗೆ ಮನೆಯೊಳಗೆ ಬರ ಮಾಡಿಕೊಂಡಳು.
ಏನ್ ಮೇಡಂ ಒಬ್ಬರಿಗೆ ಇಷ್ಟು ದೊಡ್ಡ ಮನೆಯಾ? ಸಾಫ್ಟ್ವೇರ್ ಮಂದಿಯ ಅರ್ಪಾಟ್ಮೆಂಟ್ ಕುರಿತು ಸಾಕಷ್ಟು ಕಥೆಗಳಲ್ಲಿ ಓದಿದ್ದೆ. ಈಗ ಪ್ರತ್ಯಕ್ಷವಾಗಿ ನೋಡಿದೆ!
ಹೌದು, ಅವನಿಂದ ದೂರವಾದ ಮೇಲೆ ನನಗೂ ಹಾಗೆ ಅನ್ನಿಸುತ್ತಿದೆ…
ಆಕೆ ತೀರಾ ಸ್ವಾಭಾವಿಕವಾಗಿ ಹೇಳುತ್ತಿದ್ದರೂ ನನ್ನ ಉಸಿರು ನಿಂತಂತಾಯಿತು. ಧಾರಾಕಾರ ಮಳೆಯನ್ನು ಎದುರಿಸಲಾಗದ ಗುಲಾಬಿಯ ಪಕ್ಕಗಳು ಬಿಡಿ ಬಿಡಿಯಾಗಿ ಬಿದ್ದಂತೆ, ಪ್ರೀತಿಯೆಂಬ ಕನಸಿನ, ಕಲ್ಪಿತ ಗೋಪುರವೊಂದು ಕುಸಿದು ಬಿದ್ದಿತ್ತು.
ನಾನು ಯಾವಾಗ್ಲೂ ಹೀಗೇ ನೋಡಿ. ಮನೆಗೆ ಬಂದವರಿಗೆ ಉಪಚಾರ ಮಾಡುವ ಬದಲು, ನನ್ನ ಕಥೆ ಹೇಳಿಕೊಳ್ಳಲು ಶುರುಮಾಡುತ್ತೇನೆ. ಹಾಗಾಗಿಯೇ ಇರಬೇಕು ಅಮ್ಮ ನನಗೆ ವಾಚಾಳಿ ಅಂತಾ ಬೈಯ್ಯುವುದು. ಅಂದಹಾಗೆ ಕುಡಿಯಲಿಕ್ಕೆ ಏನು ತೆಗೆದುಕೊಳ್ಳುತ್ತೀರಾ?
ಒಂದ್ ಪೆಗ್ ಬೀಯರ್…ಅಲ್ಲಲ್ಲ ನೀರು
ಸಾವರಿಸಿಕೊಳ್ಳುತ್ತಾ ಹೇಳಿದೆ.
ಸ್ವಾರಿ ನಾನು ರಂ ಮಾತ್ರ ಕುಡಿಯೋದು. ಬೀಯರ್ ಇಲ್ಲ. ಬೇಕಾದ್ರೆ ತರಿಸಿಕೊಡಬೇಕು.
ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತೀರಲ್ಲ ಮೇಡಂ?!
ಹೌದು, ಬದುಕು ಅದೊಂದನ್ನು ತುಂಬಾ ಚೆನ್ನಾಗಿ ಕಲಿಸಿಕೊಟ್ಟಿದೆ. ಬೇರೆಯವರನ್ನು ನಗಿಸಿದ್ರೂ ಒಂದರ್ಥದಲ್ಲಿ ನಮ್ಮ ನೋವು ಮರೆಯತ್ತೆ ಅಲ್ವಾ?!
ಊಟದವರೆಗೂ ಇಂಥ ಒಗಟು ಸಂಭಾಷಣೆಗಳು ನಡೆಯುತ್ತಲೆ ಇದ್ದವು. ಊಟ ರೆಡಿ ಮಾಡಿ ಪೇಪರ್ ಹಾಸಿದಳು. ಫ್ರಿಜ್ ಒಳಗೆ ಇಟ್ಟ ಎರಡು ಬಾಟಲಿಗಳನ್ನು ತಂದು ಗ್ಲಾಸ್ಗೆ ಒಂದಷ್ಟು ರಂ ಸುರಿದಳು.
ಗಂಟೆ ೯ ದಾಟಿದೆ. ನಾನು ಹೊರಡ್ತೀನಿ. ನೀವು ಡ್ರಿಂಕ್ಸ್ ಮುಗಿಸಿ ಊಟ ಮಾಡಿ. ನನಗೆ ಕುಡಿಯೋ ಅಭ್ಯಾಸವಿಲ್ಲ…
ನೋ…ನೋ…ನೀವು ಹೋಗೊ ಹಾಗಿಲ್ಲ. ಕುಡಿಯೋದು ಬೇಡ. ನನ್ನ ಜೊತೆ ಸುಮ್ಮನೆ ಕುಳಿತುಕೊಳ್ಳಿ. ಡೋಂಟ್ ವರಿ. ನಾನೇನು ಓವರ್ ಲೋಡ್ ಆಗಲ್ಲ. ಎರಡಲ್ಲ, ೪ ಬಾಟಲಿ ಏರಿಸಿದರೂ ಮನಸನ್ನು ಕಂಟ್ರೋಲ್ನಲ್ಲಿಟ್ಟುಕೊಳ್ಳುವ ಶಕ್ತಿ ನನಗಿದೆ. ಪ್ಲೀಸ್ ನಿಮ್ಮ ಹತ್ರಾ ತುಂಬಾ ಮಾತಾಡ್ಲಿಕ್ಕಿದೆ.
ತೀರಾ ಸಿನಿಮಾಗಳಲ್ಲಿ ನೋಡುತ್ತಿದ್ದ ದೃಶ್ಯ ಕಣ್ಣೆದುರಿಗೆ ನಡೆಯುತ್ತಿದೆ ಅಂದುಕೊಳ್ಳುತ್ತಾ ಮುಜುಗರದಿಂದ ಕೂತರು, ಮುಂದೇನಾಗಬಹುದೆಂಬ ಕುತುಹಲವಿತ್ತು. ೪-೫ ಸಿಪ್ ಕುಡಿದು ಮುಗಿದಿರಬೇಕು.
ನೀವು ಟೇಸ್ಟ್ ನೋಡೋದಾದ್ರೆ ನೋಡಿ. ರಂ ಹುಡುಗಿಯರಿಗಾಗಿಯೇ ಇರೋ ಡ್ರಿಂಕ್ಸ್. ಗಂಡಸರ್ಯಾರು ಲೈಕ್ ಮಾಡಲ್ಲ. ನೀವು ಕುಡಿತದ ವಿಚಾರದಲ್ಲಿ ಹೆಂಗಸರ ಥರ ಆಡ್ತಾ ಇದ್ದಿರಿ. ಸೋ ಒಂದ್ಸಲ ಟೇಸ್ಟ್ ನೋಡಿ…
ಅದರಲ್ಲಿ ಅಂಥದ್ದು ಏನಿರಬಹುದು ಎಂಬ ಕುತುಹಲವಿತ್ತು. ಆದ್ರೂ ಅವಳಾಗಿಯೇ ಆಹ್ವಾನ ನೀಡಲಿ ಎಂದು ಕಾಯುತ್ತಿದೆ.
ನಂದು ಲವ್ ಮ್ಯಾರೇಜ್. ವಿಕ್ರಮ್ ಅಂತಾ ನನ್ನ ಕಲೀಗ್ಗಾಗಿದ್ದ. ಮದ್ವೆಗೆ ಮುಂಚೆ ತುಂಬಾ ಚೆನ್ನಾಗಿಯೇ ಇದ್ದ…
೨ ಸಿಪ್ ಏರಿಸಿದ ನನಗೆ ನಿಜಕ್ಕೂ ತಲೆ ಗಿರ್ ಅನ್ನುತ್ತಿತ್ತೊ ಅಥವಾ ಕುಡಿದರೆ ತಲೆ ಗಿರ್ ಅನ್ನುತ್ತೆ ಅನ್ನೋ ಸ್ನೇಹಿತರ ಮಾತು ಕೇಳಿ ನಾನಾಗಿಯೇ ತಲೆ ಗಿರ್ ಅನ್ನಿಸಿಕೊಂಡಿದ್ದೆನೊ ಗೊತ್ತಿಲ್ಲ. ಒಟ್ಟಲ್ಲಿ ಕಣ್ಣೆದುರಿಗಿನ ಲೋಕವೆಲ್ಲ ತೇಲಿದಂತೆ ಭಾಸವಾಗುತ್ತಿತ್ತು!
ಐದೇ ನಿಮಿಷಕ್ಕೆ ಸರಿಯಾದೆ. ನಾನು ಮಾತು ಮುಗಿಸುವವರೆಗೂ ಕುಡಿಯಬೇಡಿ ಅಂತಾ ಆಜ್ಞೆ ನೀಡಿ ಮುಂದುವರಿಸಿದಳು.
ಅವನ ಕುಡಿತ, ಬೈಗುಳ ಎಲ್ಲಾ ಸಹಿಸಿಕೊಂಡಿದ್ದೆ. ಈ ಮದ್ವೆ, ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಆದ್ರೂ ಹಠ ಮಾಡಿ ಗಂಟು ಹಾಕಿಕೊಂಡಿದ್ದೆ. ಹಾಗಾಗಿ ಏನು ಬಂದರೂ ಎದುರಿಸಬೇಕು. ಸಮಾಜದಲ್ಲಿ ತಲೆ ತಗ್ಗಿಸುವ ಹಾಗಾಗಬಾರದು ಎಂಬ ಭಾವನೆಯಲ್ಲಿ ನಾಲ್ಕಾರು ತಿಂಗಳು ದೂಡಿದೆ. ಇವತ್ತು ಸರಿ ಹೋಗಬಹುದು, ನಾಳೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅನೇಕ ರಾತ್ರಿ ಕಳೆದೆ. ಆವತ್ತು ಆ ಹಡ್ಬೆಯನ್ನು ಹಾಸಿಗೆಗೆ ಕರೆ ತಂದಾಗ ರೇಗಿ ಹೋಯಿತು. ಲೋ ರ್ಯಾಸ್ಕಲ್, ಮದ್ವೆಗೆ ಮುಂಚೇನೆ ನಿಂಗೆ ಬೇಕಾದ ಸುಖವನ್ನೆಲ್ಲ ಕೊಟ್ಟಿದ್ನಲ್ಲೊ. ಅದ್ಕೆ ಇವತ್ತು ಸರಿಯಾದ ಪ್ರತಿಫಲ ಕೊಟ್ಟೆ ಬಿಡು ಅಂತಾ ರಾತ್ರಿಯಿಡಿ ಅತ್ತುಬಿಟ್ಟೆ. ಅಳು ನನ್ನನ್ನು ಬಿಟ್ಟು ಮತ್ತೆ ಯಾರಿಗೂ ಕೇಳಿಸಲಿಲ್ಲ. ಮರು ದಿನವೇ ಅಲ್ಲಿಂದ ಹೊರಟು ಬಂದೆ. ಡೈವರ್ಸ್ ಕೊಡು. ನಿನಗೆ ಕೊಡಬೇಕಾದ ಪರಿಹಾರ ಬಿಸಾಡುತ್ತೇನೆ ಅಂದ. ನಾನೇನು ಸೂಳೆಯಲ್ಲ ನಿನಗೆ ಸಾಕು ಅನ್ನಿಸಿದಾಗ ಪರಿಹಾರ ಪಡೆದು ಹೋಗಲು ಅಂತಾ ಹೇಳಿ ಬಂದವಳು ಮತ್ತೆ ಮುಖ ತೋರಿಸಲಿಲ್ಲ. ಇವತ್ತಿಗೆ ೪ ವರ್ಷ ಕಳೆಯಿತು.
ಒಂದು ಪೆಗ್ನ್ನು ಗಟ ಗಟನೆ ಕುಡಿದು ಅಳು ಶುರುವಿಟ್ಟಳು. ಸುಮಾರು ೨೦ ನಿಮಿಷ ಅತ್ತಿರಬೇಕು.
***
ಶ್ರಾವಣಿ ಪರಿಚಯವಾಗಿ ಒಂದು ವರ್ಷ ಕಳೆದಿತ್ತು. ಆವತ್ತು ರಾತ್ರಿ ೯.೩೦ರ ಸಮಯ. ಅಮ್ಮನ ಕರೆ. ಕುಡಿಯುತ್ತಾ ಕುಳಿತವನಿಗೆ ಅಮ್ಮನ ಕರೆ ರೀಸಿವ್ ಮಾಡಲು ಅದ್ಯಾಕೊ ಪಾಪ ಬೀತಿ ಕಾಡುತ್ತಿತ್ತು. ಮತ್ತೆ, ಮತ್ತೆ ರಿಂಗ್ ಆಗುವುದನ್ನು ನೋಡಲು ಆಗಲಿಲ್ಲ. ಫೋನ್ ತೆಗೆದೆ. “ಅಕ್ಕಯ್ಯ ಸತ್ತು ಹೋದ. ಪಾಪ ಹೆಣದ ಮೇಲೆ ಕೊಳ್ಳಿ ಇಡಕು ಮಕ್ಕಳು ಮರಿ ಯಾರೂ ಇಲ್ಲೆ. ಕಡಿಗೆ ಎಂಕ್ಟೇಶನೆ(ಅಕ್ಕಯ್ಯನ ತಮ್ಮ)ಕರ್ಮ ಹಿಡಿದ” ಅಮ್ಮ ಗೊಣಗುತ್ತಿದ್ದರೆ ತಲೆ ಗಿರ್ ಅನ್ನುತ್ತಿತ್ತು.
ತಕ್ಷಣ ಶ್ರಾವಣಿಗೆ ಕಾಲ್ ಮಾಡಿದೆ. “ಡೀಯರ್ ಇವತ್ತು ಗುರುವಾರ ಅಲ್ವೆನೊ. ಸೋ ಆಫೀಸ್ನಲ್ಲೆ ಇದೀನಿ. ಅಮೆರಿಕದ ಕ್ಲೈಂಟು ತಲೆ ತಿಂತಾ ಇದಾರೆ. ಆಮೇಲೆ ನಾನೇ ಮಾಡ್ತೀನಿ. ಬಾಯ್. ಟೇಕ್ ಕೇರ್” ಕಟ್ ಮಾಡಿದಳು.
ಉಳಿದಿದ್ದ ಅರ್ಧ ಸಿಪ್ ಬೀಯರ್ನ್ನು ಗಟ-ಗಟನೆ ಕುಡಿದು ಮುಗಿಸಿದೆ. ಮಹಾನಗರಿಯ ನಾನಾ ಅರ್ಪಾಟ್ಮೆಂಟ್ಗಳ ಭವ್ಯ ಬಂಗಲೆಯೊಳಗಿರಬಹುದಾದ ಅಕ್ಕಯ್ಯನಂಥ ಅನೇಕರತ್ತ ಮನಸು ಹೊರಳಿತು. ಶ್ರಾವಣಿಯ ಮುಂದಿನ ಬದುಕಿನ ದಿನಗಳನ್ನು ಕಲ್ಪಿಸಿಕೊಂಡು ಸಣ್ಣಗೆ ಭಯ ಉಂಟಾಯಿತು. ಫೋನು, ಬೀಯರ್, ಆಫೀಸುಗಳ ಜತೆಗೆ ಬೆಳ್ಳಿ ಎಮ್ಮೆ, ಗೌರಿ ದನ, ಅಕ್ಕಯ್ಯನ ಮಾತು ಎಲ್ಲವೂ ನೆನಪಾಗಿ ಕಣ್ಣಲ್ಲಿ ೨ ಹನಿ ನೀರು ಜಿನುಗಿತು.
(ಈ ಕಥೆಯಲ್ಲಿ ಸಿಕ್ಕಾಪಟ್ಟೆ ಅಕ್ಷರದೋಷಗಳಿವೆ. ತಿದ್ದಲು ಪ್ರಯತ್ನಪಟ್ಟು ಸುಸ್ತಾದೆ. ಕಥೆಯನ್ನು ಓದಿ ಕುಡಿತದ ಕುರಿತ ಅನೇಕ ತಾಂತ್ರಿಕ ದೋಷಗಳನ್ನು ತಿದ್ದಿಕೊಟ್ಟ ಗೆಳೆಯರಿಗೆ ಧನ್ಯವಾದಗಳು. ಇನ್ಮೇಲೆ ಕಥೆ ಬರೆಯಲಿಕ್ಕಾದ್ರು ಕುಡಿಯಬೇಕಪ್ಪೊ!!!)
Posted in ಕಥೆ-ವ್ಯಥೆ! | 8 Comments »




ಅಂತಿಮ ಕ್ಷಣದವರೆಗಿನ ಕುತೂಹಲಗಳು ಯಾವತ್ತೂ ಚೆಂದ. ಇಲ್ಲವಾದರೆ ಅದೊಂಥರ ಒನ್ ಸೈಡ್ ಮ್ಯಾಚ್ನಂತಾಗುತ್ತದೆ. ನನ್ನ ಪಾಲಿಗೆ ಮೊದಲ ಪುಸ್ತಕದ ಹೆರಿಗೆ ಅಕ್ಷರಶಃ ರೋಮಾಂಚನ ಪಂದ್ಯವಾಗಿತ್ತು. ಕಾರ್ಯಕ್ರಮದ ಹಿಂದಿನ ದಿನದ ಸಂಜೆವರೆಗೂ ಪುಸ್ತಕ ಬಿಡುಗಡೆಯಾಗತ್ತೊ, ಇಲ್ಲವೊ ಎಂಬ ಅನುಮಾನವಿತ್ತು! ಪುಸ್ತಕ ಬಿಡುಗಡೆಯಾಗುವುದು ನಿಕ್ಕಿ ಎಂದು ಶನಿವಾರ ಸಂಜೆ ೭ ಗಂಟೆಗೆ ತೀರ್ಮಾನವಾಗಿ, ಭಾನುವಾರ ಬೆಳಿಗ್ಗೆ ೧೧.೧೫ಕ್ಕೆ ಪುಸ್ತಕವೂ ಹೊರಬಂತು. ಒಂದೆಡೆ ಕಾರ್ಯಕ್ರಮಕ್ಕೆ ಬಂದವರನ್ನು ಕಂಡು ಖುಷಿಯಾದರೆ, ಇನ್ನೊಂದೆಡೆ ಕಾರ್ಯಕ್ರಮಕ್ಕೆ ಬಂದೇ ಬರ್ತೀವಿ ಅಂದವರೆಲ್ಲ ಕಾಣುತ್ತಿಲ್ಲವಲ್ಲ ಎಂಬ ಬೇಸರ.
‘ನನ್ನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಗಿಂತ ಅತಿಥಿಗಳೇ ಬೇಗ ಬರ್ತಾರೆ’ ಎಂಬ ಪ್ರಕಾಶಕರಾದ ಗೌರಿ ಸುಂದರ್ ಮಾತು ನಿಜವಾಗಿತ್ತು. ಜಿ.ವೆಂಕಟಸುಬ್ಬಯ್ಯ, ಎನ್.ಎಸ್ ಲಕ್ಷಿನಾರಾಯಣ ಭಟ್ಟರು, ಎಚ್.ಎಸ್ ದೊರೆಸ್ವಾಮಿ ಎಲ್ಲರಿಗಿಂತ ಮೊದಲು ಬಂದವರು. ಹಾಗಾಗಿ ಅವರೊಂದಿಗೆ ಸುಮಾರಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿತು. ಇವರೆಲ್ಲರ ಕುರಿತು ಕೇಳಿದ್ದೆ ಹೊರತು, ಹತ್ತಿರದಿಂದ ಮಾತನಾಡಿರಲಿಲ್ಲ. ವೆಂಕಟಸುಬ್ಬಯ್ಯನವರಂತೂ ತೀರಾ ಆಪ್ತರಂತೆ ಹೆಗಲ ಮೇಲೆ ಕೈಯಿಟ್ಟು ಮಾತಾಡಿಸಿದರು ವಯಸ್ಸು, ಪಾಂಡಿತ್ಯಗಳ ಅರಿವಿಲ್ಲದೆ. ನಿಂಘಟು ತಜ್ಞ, ಹಿರಿಯ ಸಾಹಿತಿಯೊಬ್ಬರೊಂದಿಗೆ ಮಾತಾಡುತ್ತಿದ್ದೇನೆ ಎಂಬ ಪರಿವೂ ನನಗೂ ಇರಲಿಲ್ಲ. ನನ್ನ ಪಾಲಿಗೆ ಇದೊಂದು ವಿಸ್ಮಯ ಕ್ಷಣ.
ಕಾರ್ಯಕ್ರಮದ ಕುರಿತು ತೀರಾ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ . ವಸುಧೇಂದ್ರ, ಲಕ್ಷ್ಮಿನಾರಾಯಣ್ ಭಟ್, ಸಿ.ಎನ್ ರಾಮಚಂದ್ರನ್, ವಿಜಯಾ ಸುಬ್ಬುರಾಜ್ ವೇದಿಕೆಯಲ್ಲಿದ್ದರು ಮತ್ತು ಮಾತನಾಡಿದರು. ಪುಸ್ತಕಕ್ಕೆ ಚೆಂದದ ಮುಖಪುಟ ರಚಿಸಿ ಕೊಟ್ಟ ಎಂ.ಡಿ ಮಂಜುನಾಥ್, ಚಿತ್ರ ಬಿಡಿಸಿಕೊಟ್ಟ ರಾಜೇಶ್ ಪುಜಾರ್ ಇಬ್ಬರೂ ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲಿಲ್ಲ. ಮುನ್ನುಡಿ ಬರೆದುಕೊಟ್ಟ ನಾಗೇಶ್ ಹೆಗಡೆ ಬಿಡುಗಡೆಗೆ ಬರಲಾರೆ ಎಂದು ಮೊದಲೇ ಹೇಳಿದ್ದರು. ಪುಸ್ತಕ ಬರೆಯುವದರಲ್ಲಿ ನನ್ನ ಶ್ರಮವಿದೆ ನಿಜ. ಆದರೆ ಪುಸ್ತಕ ಮುದ್ರಣಗೊಳ್ಳುವುದರ ಹಿಂದೆ ಈ ಗೆಳೆಯರ ಶ್ರಮವೂ ಇದೆ. ಹಾಗಾಗಿ ಇವರಿಗೆ ಧನ್ಯವಾದ ಹೇಳಲೇ ಬೇಕು.
ಯಾರಿಗೂ ವೈಯಕ್ತಿಕವಾಗಿ ಸಂಪರ್ಕಿಸಿ, ಕರೆ ಮಾಡಿ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಬ್ಲಾಗ್, ಮೇಲ್ಗಳನ್ನು ನೋಡಿ ಅನೇಕ ಗೆಳೆಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಎಲ್ಲರಿಗೂ ಥ್ಯಾಂಕ್ಸು. ಇನ್ನು ಅನೇಕರು ಕುಳಿತ ಜಾಗದಿಂದಲೇ ಶುಭ ಹಾರೈಸಿದ್ದಾರೆ. ಖಂಡಿತ ಅವರ ಶುಭ ಹಾರೈಕೆಗಳಿಗೂ ಕೃತಜ್ಞ. ನನಗೆ ಯಾವ ಜವಬ್ದಾರಿಯನ್ನೂ ನೀಡದೆ, ಎಲ್ಲವನ್ನೂ ನಿರ್ವಹಿಸಿದ ಸುಂದರ ಹಾಗೂ ಕಣ್ವ ಪ್ರಕಾಶನದ ಎಲ್ಲ ಗೆಳೆಯರಿಗೂ ಥ್ಯಾಂಕ್ ಹೇಳಬೇಕು. ಕಾರ್ಯಕ್ರಮದ ಕುರಿತು ಎಲ್ಲ ಕಡೆ ಪ್ರಚಾರ ನೀಡಿದ ಗೆಳೆಯ ಸುಶ್ರುತ, ವಿಕಾಸ್, ನಿಧಿ, ಅವಧಿ ಎಲ್ಲರಿಗೂ ಧನ್ಯವಾದಗಳು. ಅಂದಹಾಗೆ ಅನೇಕರು ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ. ನವ ಕರ್ನಾಟಕ ಮತ್ತು ಅಂಕಿತದಲ್ಲಿ ಲಭ್ಯವಿದೆಯಂತೆ.
Posted in ಚಿಂತನ ಚಾವಡಿ | 11 Comments »
