ಟೋಪಿ ವಹಿವಾಟು ಕುರಿತು…

ಲೇಖನದ ಮೇಲೆ ಡಬ್ಬಲ್‌ ಕ್ಲಿಕ್‌ ಮಾಡಿ…!!!

Add comment January 28, 2010

ನೆಗಡಿ, ಅಪ್ಪ, ಮತ್ತೊಂದಿಷ್ಟು…

ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ  ನೆಗಡಿ. ಹದಗೆಟ್ಟ  ವಾತಾವರಣದಿಂದ ಹಲವರಿಗೆ ಇದೇ ಕಾಯಿಲೆ ಕಾಡುತ್ತಿದೆಯಂತೆ. ಆದ್ರೂ ನನ್ನ  ಪರಮ ವೈರಿ ಕಾಯಿಲೆಯಲ್ಲಿ  ನೆಗಡಿಗೆ ಮೊದಲ ಸ್ಥಾನ. ನಂತರದ್ದು ಹಲ್ಲುನೋವಿಗೆ! ಆಸ್ಪತ್ರೆ, ಡಾಕ್ಟರ್, ಇಂಜೆಕ್ಷನ್ ಅಂದ್ರೆ ನಂಗೆ ಇವತ್ತಿಗೂ ಭಯ. ೧೦ನೇ ತರಗತಿವರೆಗೂ ನೆಗಡಿ, ಹಲ್ಲುನೋವು ಅನುಭವಿಸಿ ಸುಸ್ತಾಗಿಬಿಟ್ಟಿದ್ದೇನೆ. ಮತ್ತೆ ಅಪರೂಪಕ್ಕೆ ಕಾಣಿಸಿಕೊಂಡ ಈ ನೆಗಡಿಯಿಂದ ಹಳೆಯದೆಲ್ಲ  ಅದ್ಯಾಕೊ ನೆನಪಾಯಿತು.

‘ಸುಬ್ಬಣ್ಣ  ಶಿರಸಿ ಹತ್ರಾ ವಾಜಗದ್ದೆಲಿ ಥಂಡಿಗೆ ಚೋಲೋ ಔಷಧಿ ಕೊಡ್ವ್ತಡ ನೋಡು’ ಅಂತಾ ಯಾರೋ ಹೇಳುತ್ತಿದ್ದರು. ‘ಅಲ್ಲ , ತಾಳಗುಪ್ಪದಲ್ಲಿ  ಥಂಡಿ, ಕಫ ಹೋಪಲೆ ಒಬ್ಬವ ಬಾಳಾ ಒಳ್ಳೇ ಹಳ್ಳಿ  ಔಷಧಿ ಕೊಡ್‌ತ್ನಡ ನೋಡು…’ಮತ್ತ್ಯಾರದ್ದೋ ಸಲಹೆ. ಇದನ್ನೆಲ್ಲ  ಕೇಳಿದ ಅಪ್ಪ, ತಿಂಗಳಿಗೆ ಎರಡು ಸಲ ನನ್ನನ್ನು  ಔಷಧಿಗೆ ಕರೆದುಕೊಂಡು ಹೋಗುತ್ತಿದ್ದ. ಕಫ ಕಟ್ಟಿದಾಗ ನಂಗೆ ನಡೆಯಲು ಆಗುತ್ತಿರಲಿಲ್ಲ. ಆಗೆಲ್ಲ  ಬೆನ್ನ  ಮೇಲೆ ಉಪ್ಪುಚಕ್ಕಿ  ಮಾಡಿಕೊಂಡು, ಅಮ್ಮನಂತೆ ಕಂಕುಳಿನಲ್ಲಿ  ನನ್ನನ್ನು ಹೊತ್ತುಕೊಂಡು ಹೋಗುತ್ತಿದ್ದ ಅಪ್ಪ … ಎಂಬುದು ನೆನಪಾದಾಗ ಅಮ್ಮನಿಗೆ ಪೋನ್ ಮಾಡಿದೆ. ಅವರು ಅಂಗಳದಲ್ಲಿ  ಅಡಿಕೆ ಸಿಪ್ಪೆ  ಮಗಿತಾ ಇದ್ದ…ಅಂದ್ಲು  ಅಮ್ಮ.

ಸುಮಾರು ೫-೬ ವರ್ಷ ಅಸ್ತಮದ ರೀತಿಯ ಕಾಯಿಲೆಗೆ ಔಷಧಿ ಹುಡುಕಿಕೊಂಡು ನಾನು, ಅಪ್ಪ  ತಿರುಗಿದ್ದಕ್ಕೆ ಲೆಕ್ಕವಿಲ್ಲ. ಕಡೆಗೂ, ಆ ಕಾಯಿಲೆ ತಾನಾಗಿಯೇ ಹುಷಾರಾಯಿತು ಹೊರತೂ, ಯಾವ ಔಷಧಿಯೂ ಪ್ರಯೋಜನವಾಗಲಿಲ್ಲ. ಅಪ್ಪನ ಬಗ್ಗೆ  ಬರೆಯುತ್ತಾ ಹೋದರೆ ಬಹುಶಃ  ನನ್ನ  ಪಾಲಿಗೆ ಪುಟಗಳು ಸಾಲದಾಗಬಹುದು. ಅಷ್ಟು  ಪಾಠವನ್ನು ಬದುಕಿಗೆ ಕಲಿಸಿಕೊಟ್ಟಿದ್ದಾನೆ.
ಆಗ, ನನಗೆ ೪ ವರ್ಷವಿರಬೇಕು. ಹಳೆ ಸೊಗೆಯ ಮನೆಯಲ್ಲಿದ್ದೆವು. ಅಮ್ಮನ ಕಾಲಿಗೆ ಪೆಟ್ಟಾಗಿ ಆಸ್ಪತ್ರೆ  ಸೇರಿದ್ದಳು. ಆಗ ಮನೆಯಲ್ಲಿ  ಗಂಜಿಗೂ ಅಕ್ಕಿ ಇರಲಿಲ್ಲ. ಅಂಥ ಸ್ಥಿತಿಯಲ್ಲಿದ್ದ  ಕುಟುಂಬವನ್ನು ಅಪ್ಪ  ಮೇಲಕ್ಕೆತ್ತಿದ ರೀತಿ ನಿಜಕ್ಕೂ ನನ್ನಿಂದ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.

ನಾನು  ೭ ತರಗತಿಗೆ ಬರುವ ಹೊತ್ತಿಗೆ, ನಾವು ಈ ಕಡೆ ಕೇರಿಯಲ್ಲಿ  ಮನೆ ಮಾಡಿದೆವು. ದುರಂತವೆಂದರೆ, ನಮ್ಮ  ದಾಯಾದಿ ಚಿಕ್ಕಪ್ಪನೇ ಮೋಸ ಮಾಡಿದ. ಹಸಿ ಇಟ್ಟಿಗೆ ಗೋಡೆಯ ಮನೆ ಕಟ್ಟಿಸಿ, ಹಳೆ ಮನೆಯ ಜಾಗವನ್ನು  ಬರೆಸಿಕೊಂಡು, ಅಡಿಕೆ ದುಡ್ಡನ್ನೆಲ್ಲ  ನುಂಗಿ ನೀರು ಕುಡಿದ. ಅದೇ ಹೊತ್ತಿಗೆ ಅಪ್ಪ  ಅಲ್ಸರ್‌ನಿಂದ ಹಾಸಿಗೆ ಹಿಡಿದಿದ್ದ. ಇನ್ನೂ ಬದುಕುವುದೇ  ಇಲ್ಲ, ಅವನ ಕಥೆ ಮುಗಿದೇ ಹೋಯಿತು ಅನ್ನುವಂತಾಗಿತ್ತಂತೆ. ನನಗೆ ಆಗ ಅದ್ಯಾವುದೂ ಅರ್ಥವಾಗಲಿಲ್ಲ.  ಶ್ರೀಧರ ಸ್ವಾಮಿಗಳು ಕನಸಿನಲ್ಲಿ  ಅಪ್ಪನಿಗೆ ಆಶೀರ್ವಾದ ಮಾಡಿದರಂತೆ. ಅಲ್ಲಿಂದ ನಂತರ ಅಪ್ಪ  ಸುಧಾರಿಸಿದ್ದಂತೆ. ಹಾಗಂತ ಅಪ್ಪ  ಹೇಳುವುದುಂಟು. ಈ ವಿಷಯ ಬಾಲಿಶ ಅನ್ನಿಸಬಹುದು. ಆದರೆ, ಒಂದು ದಿನ ಇದ್ದಕ್ಕಿದಂತೆ ಮಾತ್ರೆ ಎಸೆದಿದ್ದನ್ನು  ನಾನೇ ನೋಡಿರುವೆ. ಅಲ್ಲಿಂದ ನಂತರ ಮತ್ತೆ ಕೆಜಿ ಲೆಕ್ಕದಲ್ಲಿ  ತಂಬಾಕಿನ ಕವಳ. ಯಾರು, ಎಷ್ಟೇ  ಹೇಳಿದರೂ  ಅಪ್ಪ  ಕವಳದ ವಿಷಯದಲ್ಲಿ  ಇವತ್ತಿನವರೆಗೂ ರಾಜಿಯಾಗಿಲ್ಲ. ಮಾತ್ರೆಯನ್ನೂ ಮತ್ತೆ ಯಾವತ್ತೂ ನುಂಗಲಿಲ್ಲ!

ಇಗೊಂದಷ್ಟು  ದಿನದ ಹಿಂದೆ ಅಪ್ಪನಿಗೆ ಚರ್ಮದ ಅಲರ್ಜಿ ಶುರುವಾಗಿತ್ತು. ತುಂಬಾ ಮಂಕಾಗಿ ಬಿಟ್ಟಿದ್ದ. ನನಗೂ ಆ ನೋವು ತುಂಬಾ ಕಾಡುತ್ತಿತ್ತು. ಔಷಧಿ ತೆಗೆದುಕೊಂಡು ೩ ದಿನದಲ್ಲಿ  ರೋಗ ಹುಷಾರಾಗಬೇಕು ಎಂಬುದು ಅವನ ತತ್ವ! ಹಾಗಾಗಿ ಅವನಿಗೆ ಔಷಧಿ ಕುಡಿಸಲು ಸಾಧ್ಯವೇ ಇಲ್ಲ  ಎಂಬುದು ನನಗೆ ಗೊತ್ತಿತ್ತು. ಆದ್ರೂ ಅವ ನನ್ನನ್ನು ಹೆಗಲ ಮೇಲೆ ಹೊತ್ತು  ಔಷಧಿಗೆ ತಿರುಗಿದ್ದು ನೆನಪಾಯಿತು. ಹಾಗಾಗಿ ಹಠ ಮಾಡಿದೆ. ನನ್ನ  ಹಠಕ್ಕೆ ಔಷಧಿ ತೆಗೆದುಕೊಂಡ ಎಂಬುದು ನಿಜ. ಜೊತೆಗೆ, ಅದನ್ನು ಕುಡಿಯುವುದಿಲ್ಲ  ಎಂಬ ನನ್ನ  ನಂಬಿಕೆಯೂ ನಿಜವಾಯಿತು! ಹಾಗಂತ ಯಾರ್‍ಯಾರೋ ಹೇಳಿದರು ಅಂತಾ, ದಿನಕ್ಕೊಬ್ಬ  ಪಂಡಿತರ ಬಳಿ ಓಡುವುದನ್ನು ಮಾತ್ರ ಅಪ್ಪ  ನಿಲ್ಲಿಸುವುದಿಲ್ಲ! ಕಡೆಗೆ ಅಲರ್ಜಿಯೂ ತಾನಾಗಿಯೇ ಹೋಯಿತು.

ಈಗ ಮತ್ತೆ ಮುಂಚಿನ ಗೆಲುವಿನಲ್ಲಿದ್ದಾನೆ…ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾನೆ. ನನ್ನ ಮಟ್ಟಿಗೆ  ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ. ತಾನೂ ಚಪ್ಪಲಿ  ಹಾಕದೆ ಹೋದರೂ, ನನ್ನ ಮತ್ತು ತಂಗಿಯ ಬೇಡಿಕೆಗಳಿಗೆ ಯಾವತ್ತೂ ಕೊರತೆ ಮಾಡಲಿಲ್ಲ. ಅದರಲ್ಲೂ  ವಿಶೇಷವಾಗಿ ತಂಗಿಗೆ! ಅವ, ತನಗೆ ಹೊಸ ಬಟ್ಟೆ  ತಂದುಕೊಂಡಿದ್ದು  ನಾನಂತೂ ಯಾವತ್ತೂ  ನೋಡಿಲ್ಲ. ಆದ್ರೆ, ದುಡ್ಡು  ಇಲ್ಲದಾಗಲೂ ಸಾಲ ಮಾಡಿ ನಮಗೆ ಬಟ್ಟೆ  ತಂದುಕೊಟ್ಟವ…ಯಾಕೋ ಹಾಗೇ ಸುಮ್ಮನೆ  ಅವನ ಕುರಿತು ಒಂದಷ್ಟು  ಬರೆಯಬೇಕು ಅನ್ನಿಸಿತು. ಮನಸ್ಸು  ಬಂದಾಗ ಮತ್ತೊಂದಿಷ್ಟು  ಬರೆಯುವೆ!

4 comments December 20, 2009

ಇವರ ಹಾದರಕ್ಕೆ ದೇಶವೆಂಬುದೂ ಚಾದರ!

ಮೇರಾ ಭಾರತ್ ಮಹಾನ್ ಹೆ!
ಹಾಗಂದಕೂಡಲೇ ನೆನಪಾಗುವವರು ರಾಜೀವ್‌ದೀಕ್ಷಿತ್.
ಸ್ವದೇಶಿ ಹೋರಾಟ, ಬೇವಿನ ಕಡ್ಡಿಯ ಬ್ರೆಷ್, ಖಾದಿ ಚೀಲ, ದೇಶೀಯ ಪೇಸ್ಟ್…ರಾಜಕಾರಣಿಗಳ, ಭ್ರಷ್ಟರ ಕುರಿತ ಕುಚೋದ್ಯ…ಎಲ್ಲವೂ ದೀಕ್ಷಿತರ ಬಗಲಲ್ಲೇ ನೆನಪಾಗುತ್ತದೆ.

ಅಂಥ ರಾಜೀವ್ ದೀಕ್ಷಿತ್ ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಸ್ವದೇಶಿ ಹೋರಾಟ ಹೇಗಿದೆ?
ಊಹುಂ, ಇವೆಲ್ಲ  ನಮ್ಮಂಥವರು ಕೇಳುವ ಪ್ರಶ್ನೆಯಲ್ಲ  ಬಿಡಿ! ಕೇಳಿದರೆ ಮತ್ತೆ  ನಾವು ಒಂದಷ್ಟು  ಮಂದಿಯ ಕೆಗಂಣ್ಣಿಗೆ ಗುರಿಯಾಗುತ್ತೇವೆ.

ನನಗೆ ಬುದ್ದಿ  ಬೆಳವಣಿಗೆಯಾಗುವ ಹೊತ್ತಿಗೆ ಸ್ವದೇಶಿ ಹೋರಾಟ ಉತ್ತುಂಗದಲ್ಲಿತ್ತು. ರಾಜೀವ್ ದೀಕ್ಷಿತರನ್ನು ಅನುಸರಿಸಿ ಎಂಎನ್‌ಸಿ ಕಂಪನಿಗಳ ವಿರುದ್ಧ ಕೂಗಾಡುವವರ, ದೇಶೀಯ ಧ್ವನಿ ಮೊಳಗಿಸುವವರ ಸಂಖ್ಯೆಯೂ ನಮ್ಮ  ರಾಜ್ಯದಲ್ಲಿ  ದೊಡ್ಡದಾಗಿಯೇ ಇತ್ತು. ಹೇಳಿ ಕೇಳಿ ನನಗೂ ಮೊದಲಿನಿಂದ ದೇಶೀಯತೆಯ ಹುಚ್ಚು. ಹೋರಾಟದಿಂದ ಭಾರತದ ಸಮಸ್ಯೆಗಳೆಲ್ಲ  ಬಗೆಹರಿಯುತ್ತದೆ ಎಂಬ ಭ್ರಮೆ! ರಾಜೀವ್ ದೀಕ್ಷಿತ್ ದೇಶದ ಪ್ರಧಾನಿಯಾದರೆ, ಭಾರತದ ಕುರಿತು ನಮ್ಮ  ಕನಸು ನನಸಾಗುತ್ತದೆ ಎಂದು ಬೊಬ್ಬೆ ಹೊಡೆದ ಮಂದಿಯಲ್ಲಿ  ನಾನು ಒಬ್ಬ! ಎಂಜಿಎಂ ಕಾಲೇಜಿನ ರವಿಂದ್ರ ಮಂಟಪದಲ್ಲಿ   ದೀಕ್ಷಿತರ ಭಾಷಣ ಕೇಳಿ, ‘ಸರ್ ನೀವು ಒಂದು ಸಲ ದೇಶದ ಪ್ರಧಾನಿಯಾಗಬೇಕು’ ಅಂತಾ ಅವರ ಕೈಕುಲುಕಿ ಬಂದಿದ್ದನ್ನು  ನೆನಪಿಸಿಕೊಂಡರೆ ಈಗ ನಗು ಬರುತ್ತಿದೆ.

ಈಗ ರಾಜೀವ್ ದೀಕ್ಷಿತ್ ಬಣದ ಸ್ವದೇಶಿ ಹೋರಾಟ ಅಕ್ಷರಶಃ  ಸತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.  ಹೋರಾಟದ ಹೆಸರಿನಲ್ಲಿ  ಯಾರಿಗೋ ಪ್ರಚಾರ ಸಿಗುತ್ತದೆ, ಯಾರೋ ಎಂಎಲ್‌ಎ, ಎಂಪಿ ಸ್ಥಾನಕ್ಕೆ ಟಿಕೆಟ್ ಪಡೆಯುತ್ತಾರೆ…ಅಲ್ಲಲ್ಲ, ಈ ಪಟ್ಟಗಳನ್ನೆಲ್ಲ  ಗಮನದಲ್ಲಿಟುಕೊಂಡೇ ಹೋರಾಟಗಳನ್ನು ಆರಂಭಿಸುತ್ತಾರೆ. ಬಯಸಿದ್ದನ್ನು ಪಡೆಯುತ್ತಾರೆ…ಇವೆಲ್ಲ  ಭಾರತದಲ್ಲಿ  ಮಾಮೂಲು.

ನಿನ್ನೆ  ಬ್ಲಾಗ್ ಗೆಳೆಯನೊಬ್ಬ  ಫೋನ್ ಮಾಡಿ ‘ಲವ್ ಜಿಹಾದ್’ ಕುರಿತು ಮಾತನಾಡಿದಾಗ ಇದೆಲ್ಲ  ನೆನಪಾಯಿತು. ಹಿಂದುತ್ವ, ಸೆಕ್ಯುಲರಿಸಂ, ಕೋಮುವಾದ…ಇವೆಲ್ಲ  ಬ್ಲಾಗ್ ಲೋಕದಲ್ಲೂ  ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸರಕುಗಳಾಗಿವೆ ಎನ್ನುತ್ತಿದ್ದ. ಕೇವಲ ಬ್ಲಾಗ್ ಲೋಕದಲ್ಲಲ್ಲ, ನಮ್ಮ ನಾಡಿನಲ್ಲೂ  ಪ್ರಚಾರ ಗಿಟ್ಟಿಸಿಕೊಡುವ, ಟಿಆರ್‌ಪಿ ಹೆಚ್ಚಿಸಿಕೊಡುವ ಸರಕುಗಳಿವು. ಕೇವಲ ಹಿಂದುತ್ವ ಮಾತ್ರವಲ್ಲ, ಎಲ್ಲಾ  ಬಗೆಯ ವಾದಗಳು, ಸಿದ್ಧಾಂತಗಳೂ ಕೂಡ. (ಇದನ್ನು ಒಪ್ಪುವವರು ಒಪ್ಪಬಹುದು. ಒಪ್ಪದಿದ್ದರೆ ನನ್ನ  ತಕರಾರು, ಜಗಳ ಯಾವುದೂ ಇಲ್ಲ)

ಮದನ್ ಲಾಲ್ ದಿಂಗ್ರಾನ ಕೈಯಿಂದ ರಕ್ತ ಟಪ, ಟಪ ಹನಿಯಾಗುತ್ತಿತ್ತು…ಭಗತ್ ನೇಣಿಗೇರಿದಾಗ ಆತನ ಅಮ್ಮನ ಕಣ್ಣಲ್ಲಿ…
ಇಂಥ ಸಾಕಷ್ಟು  ಉದ್ರೇಕಕಾರಿ ಭಾಷಣ ಕೇಳಿ ಬಿಟ್ಟಾಗಿದೆ! ಭಾಷಣ ಕೇಳುತ್ತಿದ್ದಾಗ ದೇಶದ ವಿರುದ್ಧ  ಮಾತಾಡುವವರಿಗೆ ಎದ್ದು  ಹೋಗಿ ಹೊಡೆಯ ಬೇಕು ಅನ್ನಿಸುತ್ತದೆ. ಅಷ್ಟು  ಸೊಗಸು. ಅದರ ಮಗ್ಗುಲಲ್ಲೆ  ಲವ್-ಜಿಹಾದ್ ಘಟನೆಯನ್ನು ಇನ್ನೊಂದು ಬಗೆಯಲ್ಲಿ  ವಿವರಿಸುವವರು ಸಿಗುತ್ತಾರೆ. ಭಜರಂಗ ದಳದ ಅಡ್ಡೆಯಲ್ಲಿ  ಇತಿಹಾಸದ ಪುಟದಿಂದ ದೇಶದ ವೈಭವ ಹೇಳುವವರನ್ನು  ಅನುಸರಿಸಬೇಕಾ? ನವ ಮಾಧ್ಯಮದಲ್ಲಿ  ಇನ್ನೊಂದು ರೀತಿಯಲ್ಲಿ  ಜನರನ್ನು ಆಕರ್ಷಿಸುವವರನ್ನು  ಒಪ್ಪಬೇಕಾ ಎಂಬುದು ಕಡೆವರೆಗೂ ಅರ್ಥವಾಗದ ವಿಷಯ. ಇದೊಂಥರ ಅಂಬಾನಿ ಸಹೋದರರ ಜಗಳದಂತೆ!

ವಿಷಯ ಅರ್ಥವಾಗದಿದ್ದರು ಕೆಲವೊಮ್ಮೆ  ವಾಸ್ತವದ ಅರಿವಾಗುತ್ತದೆ. ರಾಜೀವ್ ದೀಕ್ಷಿತರ ಪ್ರಭಾವದಿಂದ ರಾಷ್ಟ್ರ  ನಾಯಕರಾಗ ಹೊರಟವರು  ಇವತ್ತಿಗೂ ನಮ್ಮಲ್ಲಿ  ಸಾಕಷ್ಟು  ಮಂದಿಯಿದ್ದಾರೆ. ಇದರಲ್ಲಿ  ನೈಜ ರಾಷ್ಟ್ರ  ಭಕ್ತರ ಸಂಖ್ಯೆ ಎಷ್ಟು? ಮನೆ-ಮಂದಿರ, ಕಾರು, ಬೃಹತ್ ಕಂಪನಿಗಳು-ಎನ್‌ಜಿಒಗಳು ದೇಶದ ಕುರಿತು ಉನ್ನತ ಅಧ್ಯಯನಕ್ಕೆಂದು ನೀಡುವ ಹಣಕ್ಕಾಗಿ ರಾಷ್ಟ್ರದ  ಪುಂಗಿ ಊದುವವರು ಎಷ್ಟು  ಎಂಬುದನ್ನು  ತಿಳಿಯಲು ಸಾಕಷ್ಟು  ವರ್ಷಗಳೇ ಬೇಕಾಗುತ್ತವೆ.

‘ಹುಚ್ಚನ ಮದುವೆಯಲ್ಲಿ  ಉಂಡವನೇ ಜಾಣ’ ಎಂಬಂಥ ಕಥೆ ನಮ್ಮ ದೇಶದ್ದು. ಅವಕಾಶ ಸಿಕ್ಕರೆ ಎಲ್ಲರೂ, ಎಲ್ಲದಕ್ಕೂ ಸಿದ್ಧ. ಅವ ದೇಶಭಕ್ತ, ಇವ ಭ್ರಷ್ಟನಲ್ಲ  ಅಂದುಕೊಳ್ಳುವ  ನಾವು ಪರಮ ಹುಚ್ಚರು. ಮಾನವ ಸ್ವಾರ್ಥಕ್ಕೆ ಎಡ-ಬಲ ಪಂಥಗಳಿಲ್ಲ  ಬಿಡಿ!

ಹಾಗಂತ ಎಲ್ಲರನ್ನೂ ಇದೇ ವರ್ಗಕ್ಕೆ ಸೇರಿಸುವುದು(ಸಿದ್ಧಾಂತಿಗಳನ್ನು) ತಪ್ಪಾಗಬಹುದು. ದೇಶಕ್ಕಾಗಿ  ಸ್ಥಳೀಯ ಮಟ್ಟದಲ್ಲಿ  ಕೆಲಸ ಮಾಡುವ ಸಾಕಷ್ಟು  ಮಂದಿಯಿರಬಹುದು. ಆದರೆ, ದೊಡ್ಡ  ಕಪಟಿಗಳಿಂದಾಗಿ ಅಂಥ ನಿಷ್ಠಾವಂತರ ಮೇಲಿರುವ ಗೌರವವೂ ಬಹುಶಃ ಕಳೆದುಹೊಗಬಹುದು. ಯಾರಾದರೂ ದೇಶದ ಕುರಿತು ಮಾತಾಡುತ್ತಾರೆ ಎಂದರೆ, ಅದರ ಹಿಂದೇನೋ ಮಸಲತ್ತು ಇದೆ ಅನ್ನಿಸಬಹುದು ಅಲ್ವಾ?

1 comment December 10, 2009

ಹಳ್ಳಿ ಹುಡುಗರಿಗೆ ಮದ್ವೆಯಿಲ್ಲಂತೆ!

ಈಗೊಂದು ೧೦-೧೨ ವರ್ಷದ ಕೆಳಗಿನ ಮಾತಿದು. ಹಳ್ಳಿ  ಹುಡುಗಿಯರಿಗೆ,  ೩೦ರ ಗಡಿ ದಾಟಿದವರಿಗೆ ಗಂಡು ಇಲ್ಲ  ಅಂತಾಗಿತ್ತು. ಮಹಾರಾಷ್ಟ್ರ, ಪುಣೆಯಂಥ ದೂರದೂರಿಗೆ ಹೆಣ್ಣು  ಕೊಡುವ ಅನಿವಾರ್ಯತೆ ಮಲೆನಾಡಿಗರಿಗೆ ಎದುರಾಗಿತ್ತು. ಹೆಣ್ಣು ಹೆತ್ತವರು, ಅಂತೂ ಮಗಳು ದಾಟಿ ಹೋದ್ಲಪ್ಪೋ  ಅನ್ನೋ  ತರಹ ಮಾತಾಡುತ್ತಿದ್ದರು. ಹುಡುಗ ಎಂಜಿಯರ್ ಆದ್ರೆ ಒಂತರಹ ವರದಕ್ಷಿಣೆ, ಡಾಕ್ಟರ್ ಆದ್ರೆ ಮತ್ತೊಂದು ತರಹ ದಕ್ಷಿಣೆ…ಒಟ್ಟಲ್ಲಿ  ಹೆಣ್ಣು  ಮಕ್ಕಳಿಗೆ ಬದುಕೇ ಅಸಹೀಯ ಅನ್ನಿಸುವಂತ ವಾತಾವರಣವಿತ್ತು ಅನ್ನೋದಂತೂ ಸುಳ್ಳಲ್ಲ.

ಒನ್ಸ್  ಎಗೈನ್, ಆ ಕಾಲ ಮರುಕಳಿಸಿದೆ. ಹುಡುಗಿ ಸ್ಥಾನದಲ್ಲಿ  ಹುಡುಗನಿದ್ದಾನೆ! ‘ಹಳ್ಳಿಯಲ್ಲಿದ್ದ  ಹುಡುಗನಿಗೆ ಮದ್ವೆಯಿಲ್ಲ  ಅಂತಾಗಿದೆ.  ೬-೭ ಎಕರೆ ತೋಟ, ಜೀಪು, ಬೈಕ್ ಇದ್ದರೂ  ಈಗ ಹುಡುಗಿ ಸಿಗ್ತಾ ಇಲ್ಲ’ ಹಾಗಂತ ಪೂತ್ತೂರು ಕಡೆ ಸ್ನೇಹಿತರೊಬ್ಬರು ಮೊನ್ನೆ ಹೇಳುತ್ತಿದ್ದರು. ಮದ್ವೆಯಾಗಲಿ ಅಂತಾನೇ ಪಟ್ಟಣ್ಣಕ್ಕೆ ಕಾಲಿಟ್ಟ  ಹೆಗಡೆ, ಭಟ್ಟರ  ಮಕ್ಕಳಿಗೂ ಕೊರತೆಯಿಲ್ಲ! ಈ ಪರಿಸ್ಥಿತಿ ನೋಡಿ ನಗಬೇಕಾ, ಅಳಬೇಕಾ ಅಂತಾ ನನಗಂತೂ  ಅರ್ಥವಾಗುತ್ತಿಲ್ಲ.

ಮಲೆನಾಡಿನ ಮಂದಿಗೆ ಮದ್ವೆ ಎಂಬುದು ಸಿಕ್ಕಾಪಟ್ಟೆ  ಮಹತ್ವದ ಘಟ್ಟ! ಹೆತ್ತವರಿಗೆ ಮಕ್ಕಳ ಮದ್ವೆ ಎಂಬುದು ಭಯಂಕರ ಚಿಂತೆಯ ವಿಷ್ಯ. ಮದ್ವೆಯೇ ಬದುಕಿನ ಶ್ರೇಷ್ಠ  ಸಾಧನೆ ಎಂದು ಭಾವಿಸಿ ಕುಳಿತವರಿಗೆ ನಮ್ಮೂರು ಕಡೆ ಕೊರತೆಯಿಲ್ಲ ಬಿಡಿ. ಗಂಡು-ಹೆಣ್ಣು  ಎಂಬ ಭಿನ್ನ  ಸೃಷ್ಟಿಯಿಂದ ಇವರೆಲ್ಲ  ಹೀಗಾದ್ರೋ, ಅಥವಾ ಇಂಥವರನ್ನು ನೋಡಿಯೇ ಭಿನ್ನ ಸೃಷ್ಟಿಯಾಯಿತು ನನಗಂತೂ ಗೊತ್ತಿಲ್ಲ! ನನ್ನ ಪಾಲಿಗೆ, ಈ ಪ್ರಪಂಚದಲ್ಲಿ  ಮುಗಿಯದಷ್ಟು  ನೋಡಬಹುದಾದ ಅಂಶಗಳಿವೆ.  ಬೆನ್ನತ್ತಿ ಹೋದಷ್ಟು  ವಿಸ್ತಾರವಾಗುವ  ಕ್ಷೇತ್ರಗಳಿವೆ. ಕಾಲ ಕಳೆದಂತೆ ಕನಸುಗಳು ದೊಡ್ಡದಾಗುತ್ತಿವೆ. ಎಲ್ಲರೂ ಮದ್ವೆಗೆ ಮೋದ್ಲು  ನನ್ನ  ಹಾಗೆ ಮಾತಾಡುತ್ತಾರಂತೆ!!!

ನಮ್ಮ ಗುಂಪಿನ ಗೆಳೆಯನೊಬ್ಬ  ಮದ್ವೆಯಾದ ಅಂದ್ರೆ, ಆತ ಕೈಗೆ ಸಿಗುವುದು ಕಷ್ಟ! ಸಾಮಾಜಿಕ ಕಾರ್‍ಯಕ್ರಮಗಳಲ್ಲಿ  ಕಾಣಿಸುವುದಿಲ್ಲ. ರಾತ್ರಿ ಎಂಟರ ಮೇಲೆ ಎಲ್ಲೂ  ನಿಲ್ಲುವುದಿಲ್ಲ! (ಬಹುತೇಕರ ಈ ‘ಶೋ’ಗಳೆಲ್ಲ ಮದ್ವೆಯಾಗಿ ೧-೨ವರ್ಷದ ತನಕ ಮಾತ್ರ ಎಂಬುದು ನಂತರದ ಮಾತು ಬಿಡಿ!)ಈ ಕಥೆಗಳೆಲ್ಲ  ಒತ್ತಟ್ಟಿಗಿರಲಿ. ಆದ್ರೆ, ಪ್ರತಿ ಸಲ ಹಳ್ಳಿ ಎಂಬುದು ಶೋಷಣೆ ವಸ್ತುವಾಗುತ್ತಿರುವ ಕುರಿತು ಚಿಂತಿಸಲೇಬೇಕಿದೆ.

೪-೬ ಎಕರೆ ಹೊರಗಿರಲಿ, ೨ ಎಕರೆ ಆಸ್ತಿಯಿದ್ದರೂ, ಹಳ್ಳಿಗಿಂತ ಉತ್ತಮವಾದ ಬದುಕು ಎಲ್ಲೂ  ಸಿಗುವುದಿಲ್ಲ. ದಿನದಲ್ಲಿ  ೧೦-೧೨ ತಾಸು ಕಚೇರಿಯಲ್ಲಿ  ಇರಬೇಕು ಎಂಬ ನಿಯಮ ಯಾವ ಕೃಷಿಕನಿಗೂ ಇಲ್ಲ. ೩೬೫ ದಿನವೂ ಕಚೇರಿಗೆ ಹೋಗಬೇಕು, ಸಂಬಳ ಕಡಿತವಾಗತ್ತೆ ಎಂಬ ಗೋಳು ರೈತನಿಗಿಲ್ಲ. ಯಾವುದೋ ಯಜಮಾನನ ಕೆಳಗೆ ದುಡಿಯಬೇಕು, ಆತ ಕೊಟ್ಟಾಗ ಮಾತ್ರ ರಜೆ ತೆಗೆದುಕೊಳ್ಳಬೇಕು ಎಂಬ ಸಮಸ್ಯೆಗಳಿಲ್ಲ. ವಾರದಲ್ಲಿ  ಒಂದೇ ದಿನ ಹೆಂಡತಿ ಜತೆ ಕಾಲ ಕಳೆಯುವ ಅವಕಾಶ ಎಂಬುದಂತೂ ಹಳ್ಳಿಯಲ್ಲಿ  ಕಾಣಿಸುವುದಿಲ್ಲ.

ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಮಹಾನಗರಿಯ ಮನೆಗಳನ್ನು ನೋಡವುದೇ ಬೇಡ ಬಿಡಿ. ನೆಂಟರಿಲ್ಲ, ಸ್ನೇಹಿತರಿಲ್ಲ…ಬಹುಶಃ ಭೂಮಿಯಲ್ಲಿದ್ದೂ, ಮಂಗಳ ಗ್ರಹದಂತೆ ಬುದುಕು ಅವರದ್ದು. ಅವರಿಗಿಂತ ಹೆಚ್ಚಾಗಿ, ಹುಟ್ಟುವ ಮಕ್ಕಳಿಗಾಗಿ ದುಡಿಯುವವರು. ಭವಿಷ್ಯದ ಕುರಿತು ವಿಶಾಲ ಚಿಂತನೆಯುಳ್ಳವರು. ಹಾಗಾಗಿ ಅಂತವರ ಕುರಿತು ಕೆಮ್ಮುವಂತಿಲ್ಲ!  ಇಂಥ ದೂರದೃಷ್ಟಿ  ಹೊಂದಿರುವ ಸಂಸಾರಗಳಲ್ಲೇ  ಬಹುಬೇಗ ಬಿರುಕು ಕಾಣಿಸಿಕೊಳ್ಳುವುದನ್ನು ದುರಂತ ಎನ್ನಬಹುದೇ?!

ಇವತ್ತು ಅನೇಕ ಮಲೆನಾಡಿನ ಹಳ್ಳಿಗಳನ್ನು ನೋಡಿದರೆ ಬೇಜಾರಾಗುತ್ತಿದೆ. ನಮ್ಮೂರಿನಂಥ ಅನೇಕ ಊರುಗಳು ನಿವೃತ್ತರ ಕೇರಿಗಳಾಗಿವೆ. ಸ್ಥಿತಿ ಹೀಗಿರುವಾಗ ಹಳ್ಳಿ  ಹುಡುಗರಿಗೆ ಹೆಣ್ಣಿಲ್ಲವಂತೆ! ಹಾಗಾದರೆ ಊರಿನಲ್ಲಿ  ಉಳಿದುಕೊಳ್ಳುವವರು ಯಾರು ಎಂಬುದು ಬಹುದೊಡ್ಡ  ಪ್ರಶ್ನೆ.  ಈ ಪ್ರಶ್ನೆಗೆ ಉತ್ತರಿಸಬೇಕಾದವರು  ಮಹಾನಗರಿಯಲ್ಲಿ  ಠಿಕಾಣಿ ಹೂಡಿರುವ ನಾವುಗಳು. ಆದರೆ, ನಾವಿಂದು ನಿರುತ್ತರದ ಸ್ಥಿತಿ ತಲುಪಿದ್ದೇವೆ. ಸ್ಥಿತಿ ಹೀಗೇ ಮುಂದುವರಿದರೆ ಬಹುಶಃ  ನಮ್ಮೂರಿನ ಕೇರಿಗಳು ಬರಿ ನೆನಪಾಗಿ ಉಳಿಯಬಹುದಾ…?

8 comments November 19, 2009

ಟಿಪ್ಪು ಎಕ್ಸ್‌ಪ್ರೆಸ್

ಮೈಸೂರಿಗೆ ಹೋಗುವ ಪ್ರಯಾಣಿಕರಿಗೆ ಗಾಡಿ ನಂಬರ್ ೬೯೯೦, ಟಿಪ್ಪು ಎಕ್ಸ್‌ಪ್ರೆಸ್ ಗಾಡಿಯು ಪ್ಲಾಟ್‌ಫಾರ್ಮ್ ನಂಬರ್ ೯ಕ್ಕೆ ಶೀಘ್ರದಲ್ಲಿ ಬಂದು ಸೇರುವ ನಿರೀಕ್ಷೆಯಿದೆ. ಮೈಸೂರು ಜಾನೆವಾಲಿಯೇ…
ಕಂಪ್ಯೂಟರ್‌ನ ಆ ಹುಡುಗಿ ಅರೆಬೆಂದ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ವದರುತ್ತಲೇ ಇದ್ದಳು.

೨.೧೫ಕ್ಕೆ  ಹೊರಡಬೇಕಿದ್ದ ರೈಲು,  ಇನ್ನೂ ಬಂದಿಲ್ಲ. ಸೂಪರ್ ಎಕ್ಸ್‌ಪ್ರೆಸ್ ಅಂತೆ! ಟಿಕೆಟ್ ದರ, ಉಳಿದವುಗಳಿಗಿಂತ ೧೦ರೂಪಾಯಿ ಜಾಸ್ತಿ. ಒಂದು ದಿನವೂ  ಸಮಯಕ್ಕೆ ಸರಿಯಾಗಿ ಬಂದ ದಾಖಲೆಯೇ ಇಲ್ಲ…ಹಾಗಂತ ಮಂಡ್ಯ ಕಡೆಯ ಗೌಡರೊಬ್ಬರು ತಮ್ಮ ಅಳಲನ್ನು ನನ್ನ ಹತ್ತಿರ ಹೇಳುತ್ತಿದ್ದರು. ನನ್ನ ಮನಸ್ಸು  ಬೇರೆ ಕಡೆ ಕೇಂದ್ರಿಕೃತವಾಗಿದ್ದರೂ, ಅವರ ಅಳಲನ್ನು ಕೇಳಿದಂತೆ ನಟಿಸುತ್ತಾ ಇರುವಾಗ, ದೃಷ್ಟಿ ಮೇಲುಗಡೆ ಹಾಯಿತು.

ಹೆಂಗಸೊಬ್ಬಳು ಏನೋ ವ್ಯವಹಾರ ಕುದುರಿಸುತ್ತಿದ್ದಾಳೆ. ಗಂಡಸು ಅವಳ ಜತೆ ಮಾತಾಡುತ್ತಿದ್ದಾನೆ. ಅವಳು ‘ಐದು’ ಎಂದು ಬೆರಳಿನಲ್ಲಿ ತೋರಿಸುತ್ತಿದ್ದರೆ, ಅವ ‘ಮೂರು’ ಅನ್ನುತ್ತಿದ್ದಾನೆ.

೭-೮ ನಿಮಿಷ ಚರ್ಚೆ ನಡೆದ ನಂತರ ಅವರಿಬ್ಬರ ವಹಿವಾಟು ಮುಗಿಯಿತು. ಅವ ಮುಂದೆ ಹೋದ. ಅವಳು ಅವನ ಹಿಂದೆ…೪೦೦ ರೂಪಾಯಿಗೆ ವ್ಯಾಪಾರ ಕುದುರಿದೆ ಎಂದು ಸ್ಪಷ್ಟವಾದರೂ, ಆ ಹಣ ಎಷ್ಟು  ತಾಸಿನ ಸುಖಕ್ಕೆ  ಎಂಬುದು…

ಚುಕು ಬುಕು, ಚುಕು ಬುಕು…

ರೈಲು ಬಂದೇ ಬಿಟ್ಟಿದೆ. ಸೀಟು ಹಿಡಿಯಲು  ಜನ ಓಡುತ್ತಿದ್ದಾರೆ. ಹೆಂಗಸು, ಗಂಡಸು, ಹುಡುಗ, ಹುಡುಗಿ ಇವ್ಯಾವುದರ ಪರಿವೂ  ಅವರಿಗಿಲ್ಲ. ಜಾಗ, ಕಿಟಿಕಿ ಪಕ್ಕದ ಸೀಟು ಇವಿಷ್ಟೇ  ಅವರ  ಆಲೋಚನೆ.

ಹುಬ್ಬಳ್ಳಿಯಿಂದ  ಮೈಸೂರು ಕಡೆಗೆ ಹೋಗುವ ಗಾಡಿ ನಂಬರ್   ೬೯೯೦, ಟಿಪ್ಪು   ಎಕ್ಸ್‌ಪ್ರೆಸ್  ಗಾಡಿಯು  ಪ್ಲಾಟ್‌ಫಾರ್ಮ್ ನಂಬರ್ ೯ರಿಂದ  ೨.೧೫ಕ್ಕೆ  ಹೊರಡಲಿದೆ…

ಮೊಬೈಲ್‌ನಲ್ಲಿ  ಸಮಯ ೨.೩೦ ಎಂದು ತೋರಿಸುತ್ತಿದೆ. ನನ್ನ ಮೊಬೈಲ್‌ನ ಗಡಿಯಾರವೇ ಸರಿಯಿಲ್ಲ  ಇರಬೇಕು ಅಂದುಕೊಳ್ಳುತ್ತಾ  ಜಾಗ ಹಿಡಿದು ಗಟ್ಟಿಯಾಗಿ ಕುಳಿತೆ.  ದೃಷ್ಟಿ ,  ನಾನು ತೊಟ್ಟಿದ್ದ  ಕುರ್ತಾದ  ಕಡೆಗೆ  ಹಾದು ಹೋಯಿತು. ಕುರ್ತಾದ ಬಣ್ಣ  ಮಾಸಿದೆ. ಆದರೂ  ಎಲ್ಲೂ  ಹೊಲಿಗೆ ಬಿಟ್ಟಿಲ್ಲ. ಇನ್ನು  ಆರು ತಿಂಗಳಿಗೇನೂ ತೊಂದರೆ ಇಲ್ಲ. ಒಂದು ಕಾಲದಲ್ಲಿ   ಯಾರೋ  ತೊಟ್ಟು  ಬಿಟ್ಟಿದ್ದ  ಹಳೇ ಬಟ್ಟೆ  ಹಾಕಿಕೊಂಡು ಬದುಕುತ್ತಿದ್ದವನು, ಇವತ್ತು ನನ್ನ  ಸಂಪಾದನೆಯಲ್ಲಿ   ಸ್ವಂತ ಬಟ್ಟೆ  ತೊಡುವಷ್ಟರ  ಮಟ್ಟಿಗೆ  ಬೆಳೆದು ನಿಂತಿದ್ದೇನೆ…ಖುಷಿಯ ಭಾವ ಮನವನ್ನು  ಆವರಿಸಿತ್ತು.

‘ಏ ಪುಣ್ಯಾತ್ಮ  ಬಟ್ಟೆಗೊಂದು  ಇಸ್ತ್ರಿ  ಹಾಕುವ ಅಭ್ಯಾಸ ಮಾಡ್ಕ್ಯ ಮಾರಾಯ. ಇಲ್ಲೆ  ಅಂದ್ರೆ  ಯಾವ ಹುಡುಗಿಯೂ  ಸಿಗದಿಲ್ಲೆ  ನೋಡು  ನಿಂಗೆ  ಆಮೇಲೆ’ ಎಂಬ ಅವಳ ಹಿತವಚನ ಅದ್ಯಾಕೊ  ನೆನಪಿಗೆ  ಬಂತು.

ಬಟ್ಟೆ  ಕೊಳೆಯಾಗಲಿ, ಆಗದೇ  ಇರಲಿ  ವಾರಕ್ಕೊಂದು ಸಲ ಬಟ್ಟೆ   ತೊಳೆಯುವುದು  ಕಳೆದ ೮ ವರ್ಷಗಳಿಂದ ಅಭ್ಯಾಸವಾಗಿಬಿಟ್ಟಿದೆ. ಇನ್ನೂ  ಇಸ್ತ್ರಿ…ಎರಡೋ-ಮೂರೋ  ತಿಂಗಳಿಗೆ ಅಗಸನ ಬಳಿ ಬಟ್ಟೆ  ಕೊಟ್ಟಾಗ  ಇಸ್ತ್ರಿಯಾಗಿಯೇ ಬರುತ್ತದೆ! ಇಸ್ತ್ರಿ   ಹಾಕುವುದರಿಂದ ನನಗೇನೂ ಸಮಧಾನ ಸಿಗುವುದಿಲ್ಲ. ಹುಡುಗಿ ನೋಡುತ್ತಾಳೆಂದು  ಇಸ್ತ್ರಿ  ಹಾಕುವ ಅಭ್ಯಾಸವಂತೂ  ಇಲ್ಲವೇ ಇಲ್ಲ.

ಯಾರೂ  ಸಿಗದೇ  ಹೋದರೆ  ನೀನೇ  ಇದ್ಯಲ್ಲ   ಬಿಡು!
ಹೋಗ ನಿಂದು ಬರೇ ಇದೇ ಆತು. ಏನೋ  ಪಾಪ ಅಂತಾ ಹೇಳಿದ್ರೆ…ಈಗಿನ ಕಾಲದ ಹುಡುಗಿಯರ ಬಗ್ಗೆ  ನಿಂಗೆ ಗೊತ್ತಿಲ್ಲೆ. ಸೆಂಟು, ಬಟ್ಟೆ, ಬೈಕಿಗೆ  ಮರುಳಾಗದು ಜಾಸ್ತಿ  ಗೋತಾತ.ಹೋಗಿ, ಹೋಗಿ ಇದ್ನೆಲ್ಲ  ನಾನು ನಿನ್ನ  ಹತ್ರಾ ಹೇಳ್‌ತ್ನಲ, ನನ್ನ  ಕರ್ಮ…

ಹಲೋ  ಎಕ್ಸ್‌ಕ್ಯೂಸ್‌ಮಿ, ಸ್ವಲ್ಪ  ಆ ಕಡೆ  ಸರಿತೀರಾ?
ಏನೋ  ಆಲೋಚನೆಯಲ್ಲಿದ್ದೆ. ಇವಳ್ಯಾವಳೋ  ಬಂದಳು… ಓ ನಾನು ಕುಳಿತಿರುವುದು  ರೈಲಿನಲ್ಲಿ, ನನ್ನ  ಸ್ವಂತ ಕಾರಿನಲ್ಲಲ್ಲ  ಎಂಬುದು ಸಟಕ್ಕನೆ  ನೆನಪಾಯಿತು. ಅವಳ ಕಡೆ ತಿರುಗದೇ  ಸುಮ್ಮನೆ  ಸರಿದೆ.  ಎದುರುಗಡೆ ಕುಳಿತ್ತಿದ್ದ  ಮೂರು ಹುಡುಗರು  ಅವಳನ್ನು ಕದ್ದು ಕದ್ದು  ನೋಡುತ್ತಿದ್ದರಿಂದ , ಪಕ್ಕದಲ್ಲಿ   ಕುಳಿತ ಹುಡುಗಿ ಚೆಂದವಾಗಿದ್ದಾಳೆ  ಎಂಬುದು ಖಾತ್ರಿಯಾಯಿತು.

ಮೊದಲ  ಸಲ  ರೈಲನ್ನು  ನೋಡಿದ್ದು  ಬೀರೂರಿನಲ್ಲಿ.  ರೈಲು  ಶ್ರೀಮಂತರ ವಾಹನ ಎಂಬ ಭಾವನೆಯಿತ್ತು. ದುಡಿಮೆಗೋಸ್ಕರ  ಬೆಂಗಳೂರಿಗೆ ಬಂದ ಮೇಲೆ  ಗೊತ್ತಾಯಿತು ರೈಲೆಂಬುದು ಬಡವರ ವಾಹನ ಅಂತಾ!

ಸ್ವಾಮಿ ದೇವನೆ  ಲೋಕ ಪಾಲನೆ….
ಹಾಡು ತೀರಾ ಕಕರ್ಶವಾಗಿತ್ತು. ರೈಲು ಗಾಡಿಯಲ್ಲಿ  ಅದೆಲ್ಲ  ಮಾಮೂಲು. ನಾನಂದುಕೊಂಡಂತೆ ಅವ ಕುರುಡ.
ಛೇ, ನಾನು ನನ್ನದೇ  ಕಷ್ಟ  ಅಂದುಕೊಳ್ಳುತ್ತೇನೆ. ನನಗಿಂತ ಕಷ್ಟದಲ್ಲಿ  ಇರುವವರು  ಅದೆಷ್ಟು  ಮಂದಿ  ಇಲ್ಲಿ  ಇದ್ದಾರೆ  ಅಲ್ವಾ?  ನನ್ನ  ಕಷ್ಟಕ್ಕೆ  ನಾನು ಹೇಳಿಕೊಳ್ಳುವ ಸಮಾಧಾನವಿದು. ಅವಳನ್ನು  ಸಮಾಧಾನ ಮಾಡಲು ಬಳಸುವ ಅಸ್ತ್ರ  ಕೂಡ ಇದೆ!

ಕಣ್ಣಲ್ಲಿ  ನೀರು  ಜಿನುಗಿದಂತಾಯಿತು. ಎಷ್ಟು   ಜನರಿಗೆಂದು  ಕಣ್ಣೀರು ಇಡುವುದು? ಬೆಂಗಳೂರಿನ  ಬೀದಿ, ಬೀದಿಗಳಲ್ಲಿ  ಇಂಥ ಮಂದಿ ಸಿಗುತ್ತಾರೆ. ಕೈಯಲ್ಲಿರುವ  ಎರಡು  ಕಾಸು ಅವರ ಡಬ್ಬಿಗೆ  ಹಾಕಿ  ಸಮಾಧಾನಪಟ್ಟುಕೊಳ್ಳುವುದನ್ನು ಬಿಟ್ಟರೆ, ಮತ್ತ್ಯಾವುದೇ ಪರಿಹಾರವಿಲ್ಲ  ದೇಶದ ಈ ಸಮಸ್ಯೆಗೆ. ಹೋಟೆಲ್‌ನಲ್ಲಿ   ತಿಂಡಿ ತಿನ್ನುತ್ತಿರುವಾಗ ಬಂದು  ಕೈಯೊಡ್ಡುತ್ತಾರೆ ಕೆಲವರು. ಕರುಳು  ಕರಗಿದಂತಾಗುತ್ತದೆ.

ನಾವು ಕೆಲವೊಮ್ಮೆ,  ಕೆಲವುದಕ್ಕೋಸ್ಕರ, ಕೆಲವರೆದುರು ಕೈಯೊಡ್ಡಿ  ನಿಲ್ಲುತ್ತೇವೆ…ಪ್ರಕೃತಿಯ  ನಿಯಮವೇ  ಹಾಗಿರಬೇಕು  ಅಲ್ವಾ?

***
ಊಹುಂ, ನಿದ್ದೆ  ಬರುತ್ತಿಲ್ಲ…ಅವಳು, ಅವಳ ಬದುಕನ್ನು ಕಟ್ಟಿಕೊಳ್ಳಲಿಕ್ಕೋಸ್ಕರ ಕೈಗೆಟುಕದಷ್ಟು  ದೂರದ ಜಾಗಕ್ಕೆ  ಹಾರಿ ಹೋಗಿದ್ದಾಳೆ.

ನನಗೆ  ಬೇಜಾರಾದಾಗ  ಕಾಟ ಕೊಡಲು ಯಾರೂ ಇಲ್ಲ. ಅವಳೇ  ಹೇಳಿದಂತೆ  ಬೇರೆ  ಯಾರಾದರೂ ಸಿಗಬಹುದು. ಆದರೆ  ಪ್ರಯತ್ನ ಮಾಡಲು  ಮನಸ್ಸಾಗುತ್ತಿಲ್ಲ. ಎಷ್ಟು  ದಿನ ಅಂತಾ  ಅವಳ ಮೇಲೆ  ಅವಲಂಬಿತವಾಗುವುದು. ಒಂದಲ್ಲ  ಒಂದು ದಿನ ಅವಳು  ಗಂಡನ ಮನೆ ಸೇರುತ್ತಾಳೆ. ಎಷ್ಟಂದರೂ,  ಅತಿಯಾದ ನಿರೀಕ್ಷೆ  ಅಪಾಯ ಎಂಬ ತತ್ವದಲ್ಲಿ  ನಂಬಿಕೆ  ಇಟ್ಟವ ನಾನು!

ಚೆಂದದ ಗಾಳಿ ಬೀಸುತ್ತಿದೆ. ಮಳೆ  ಬರುವ ಎಲ್ಲ  ನಿರೀಕ್ಷೆಯೂ  ಆಗಸದಲ್ಲಿ  ಗೋಚರವಾಗುತ್ತಿದೆ. ಅಂಥದ್ದೊಂದು  ವಾತಾವರಣವನ್ನು  ಆಸ್ವಾದಿಸಲು  ಫುಟ್ ಬೋರ್ಡ್ ಮೇಲೆ  ಹೋಗಿ  ಕೂರಬೇಕು ಎಂಬುದು ತಟ್ಟನೆ  ಮನಸ್ಸಿಗೆ  ಹೊಳೆಯಿತು.

ರೈಲು ಚಾಮರಾಜನಗರ ದಾಟಿದೆ. ತಂಪು ವಾತಾವರಣ, ಹಚ್ಚ  ಹಸುರಿನ ಗದ್ದೆ, ಅಲ್ಲಲ್ಲಿ  ಸಕ್ಕರೆ ಕಬ್ಬಿನ ಬಿಳಿ ಬಿಳಿಯಾದ ಹೂವುಗಳು…ಮನೆ, ಮಲೆನಾಡು, ಬಾಲ್ಯ…ಎಲ್ಲವೂ ಒಟ್ಟೊಟ್ಟಿಗೆ ನೆನಪಾಯಿತು.

ಮೊಬೈಲ್‌ನಲ್ಲಿ   ಮೆಸೇಜ್. ರಾಘುವಿನದ್ದು. ‘ಅಣ್ಣಾ  ದೊರೆ ಎಲ್ಲಿದ್ದೆ? ಮೈಸೂರು ರೈಲನ್ನೇ  ಹತ್ತಿದ್ದೆ  ತಾನೇ?’
ಹಿಂದೊಮ್ಮೆ  ಮೈಸೂರು ಬದಲು ಕೋಲಾರದ ರೈಲುಗಾಡಿ ಹತ್ತಿ ಹೋಗಿದ್ದೆ. ಹಾಗಾಗಿ ನನ್ನ  ಕುರಿತು ಇನ್ನೂ  ಅನುಮಾನ ಅವನಿಗೆ! ಬದುಕಿನಲ್ಲಿ  ಎಷ್ಟೋ  ಸಲ  ರೈಲಲ್ಲ , ಹಳಿಯೇ ತಪ್ಪಿಹೋಗಿದೆ…

ವಿಮಾನವೊಂದು ಆಗಸದಲ್ಲಿ  ಬುರ್ ಎನ್ನುತ್ತಿತ್ತು. ರೈಲಿಗೆ  ಪ್ರತಿರ್ಸ್ಪಯಾಗಿ ಹಾರಿ ಬರುತ್ತಿದ್ದಂತಿತ್ತು. ನೋಡು-ನೋಡುತ್ತಿದ್ದಂತೆಯೇ  ವಿಮಾನ ಮುಂದಕ್ಕೆ, ರೈಲು ಹಿಂದಕ್ಕೆ. ಕಣದಲ್ಲಿ  ಉಳಿದುಕೊಳ್ಳಲಾಗದಷ್ಟು  ಹಿಂದಕ್ಕೆ. ಎಷ್ಟಂದರೂ  ರೈಲು ಬಡವರ ಪಾಲಿನ ವಾಹನ. ಹಾಗಾಗಿ  ಹಾಸಿಗೆ ಇದ್ದಷ್ಟಕ್ಕೆ  ಕಾಲು ಚಾಚಿದೆ. ಅದ್ಯಾಕೋ ಬದುಕಿನ ಅನಿವಾರ್ಯತೆ, ಅಸಹಾಯಕತೆ…ಎಲ್ಲವೂ  ನೆನಪಾಯಿತು.

ಸಟಕ್ಕನೆ ರೈಲಿಗೊಂದು ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತೆ. ಅಲ್ಲ , ಆ ಕಡೆಯಿಂದ  ಬರುವ  ಆ ರೈಲಿಗೆ  ಜಾಗಕೊಡಲು  ಇದು ನಿಂತಿದ್ದು  ಯಾಕೆ? ಬೇಕಾದರೆ  ಅದೇ  ಜಾಗ ಕೊಡುತ್ತಿತ್ತು…
ಆ ಕಡೆಯಿಂದ  ಬರುವ ರೈಲು ಕೂಡ  ಹೀಗೇ  ಆಲೋಚಿಸಿ ಹೊರಟುಬಿಟ್ಟರೆ?!

ಅಪಘಾತ, ಸಾವಿರಾರು ಜನರ ಸಾವು…
ಬದುಕಿನಲ್ಲೂ  ಎಷ್ಟೋ  ಸಲ ಹೀಗೆ  ಆಗತ್ತೆ ಅಲ್ವಾ? ಅವ ದಾರಿ ಕೊಡಲಿ  ಎಂದು ನಾನು, ನಾನು ದಾರಿ  ಬಿಡಲಿ  ಎಂದು ಅವ…ಪ್ರತಿಷ್ಠೆ…

ಆದ್ರೂ  ಇದು ‘ಟಿಪ್ಪು  ಫಾಸ್ಟ್   ಎಕ್ಸ್‌ಪ್ರೆಸ್’. ಉಳಿದವುಗಳಿಗಿಂತ ೧೦ ರೂಪಾಯಿ ಹೆಚ್ಚು  ಎಂಬ ಯಜಮಾನರ ಅಳಲು!
ಹತ್ತಿರವಿದ್ದು  ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ
ಕವಿ ಬರೆದ ಸಾಲು ನೆನಪಿಗೆ ಬಂತು. ಬಹುಶಃ,  ಕವಿ ತನ್ನ  ಸ್ವಂತ  ಅನುಭವದಿಂದ  ಈ ಸಾಲುಗಳನ್ನು  ಬರೆದಿರಬೇಕು!
***
ಮದ್ದೂರ್  ವಡೆ, ಮದ್ದೂರೊಡೆ
ಮಳೆ ಬಂದು ನಿಂತಿದೆ. ಮಣ್ಣು  ‘ಘಮ್’ ಎನ್ನುತ್ತಿದೆ. ರೈಲಿನಿಂದ ಜಿಗಿದು ಗದ್ದೆಯಲ್ಲಿ  ಕುಣಿದು-ಕುಪ್ಪಳಿಸಬೇಕು ಅನ್ನಿಸುತ್ತಿದೆ. ಹಾಗೊಮ್ಮೆ  ಜಿಗಿದುಬಿಟ್ಟರೆ  ರೈಲು ನನಗೋಸ್ಕರ  ಕಾಯುವುದಿಲ್ಲ. ನೋಡುವ ಜನ ಕೂಡ  ಇವನ್ಯಾರೋ  ಹುಚ್ಚ  ಅಂದುಕೊಳ್ಳುತ್ತಾರೆ. ಎಷ್ಟಂದರೂ  ಬಾಲ್ಯದ  ಆ ಮಜವೇ  ಬೇರೆ ಬಿಡಿ.
ಚುಕು ಬುಕು, ಚುಕು ಬುಕು…ರೈಲು  ಮದ್ದೂರು ನಿಲ್ದಾಣದಿಂದ  ಜಾಗ ಖಾಲಿ ಮಾಡಲು  ಸಜ್ಜಾಗಿತ್ತು. ಸಮಯ ಬಂದಾಗ  ಒಂದು  ನಿಲ್ದಾಣದಿಂದ  ಜಾಗ  ಖಾಲಿ ಮಾಡಲೇ ಬೇಕು. ಇನ್ನೊಂದು  ನಿಲ್ದಾಣದತ್ತ  ಹೆಜ್ಜೆ  ಹಾಕಲೇ ಬೇಕು.

ತೊಡಲು ಬಟ್ಟೆ , ನೆಮ್ಮದಿಯಾಗಿ ಮೂರು ಹೊತ್ತು  ಊಟ ಸಿಕ್ಕರೆ  ಸಾಕು, ೧೦೦ರೂಪಾಯಿ ಲೆಕ್ಕಾಚಾರ, ಕನಸುಗಳು…ಎಲ್ಲವೂ  ವಿಸ್ತಾರವಾಗುತ್ತಾ  ಹೋಗುತ್ತಿದೆ. ರೈಲಿಗೊಂದು  ಗುರಿಯಿದೆ.  ನನಗೊಂದು ಗುರಿಯಿಲ್ಲ. ಹಾಕಿಕೊಂಡ  ಗುರಿಯನ್ನು  ತಲುಪುತ್ತಾ  ಹೋದಂತೆ, ಗುರಿಯ  ವಿಸ್ತೀರ್ಣವೂ  ಹೆಚ್ಚಾಗುತ್ತಾ ಹೋಗುತ್ತದೆ. ಅದು ರೈಲು. ನಾನಿಲ್ಲಿ   “ನಾನು”!

ನಿಜ, ನಂದೂ  ಫಾಸ್ಟ್  ಎಕ್ಸ್‌ಪ್ರೆಸ್. ಕೆಲವರದ್ದು  ಪ್ಯಾಸೆಂಜರ್, ಇನ್ನು  ಕೆಲವರದ್ದು  ಸೂಪರ್ ಫಾಸ್ಟ್. ಅವರವರ  ಸಾಮರ್ಥ್ಯಕ್ಕೆ ತಕ್ಕಂತೆ  ವೇಗ  ಹೆಚ್ಚಾಗುತ್ತದೆ. ‘ಅತಿಯಾದ ವೇಗ ಅಪಘಾತಕ್ಕೆ ಕಾರಣ’ ಆ ಸಂಚಾರಿ ನಿಯಮ ನಮ್ಮ  ಬದುಕಿಗೂ ಅನ್ವಯವಾಗುತ್ತದೆ. ಹಲವು ಸಲ  ಲೆಕ್ಕಾಚಾರ  ತಪ್ಪಿ  ಎಡವಿಬೀಳುತ್ತೇವೆ. ಕೆಲವೊಮ್ಮೆ  ಏನೂ  ಲೆಕ್ಕಾಚಾರವೇ ಇಲ್ಲದೇ  ಗೆದ್ದು  ಬಿಡುತ್ತೇವೆ!

ಫುಟ್‌ಬೋರ್ಡ್  ಬೋರು  ಬಂದಿತ್ತು.  ಬ್ಯಾಗ್ ಇಟ್ಟಿದ್ದ  ಸೀಟಿನೆಡೆಗೆ ಹೋಗಿ ಕುಳಿತುಕೊಳ್ಳುವ  ಮನಸ್ಸಾಯಿತು.
ಕಾಫಿ, ಕಾಫಿ….ದೋಸೆ, ದೋಸೆ…

ಅಬ್ಬ  ಅದೆಷ್ಟು  ಹುಡುಗರು…ಇನ್ನೊಬ್ಬರ  ಹೊಟ್ಟೆ  ತುಂಬಿಸುವ ಮೂಲಕ  ತಮ್ಮ  ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ಅವರು ಜೀವನವನ್ನೆಲ್ಲ  ರೈಲು ಗಾಡಿಯಲ್ಲೇ  ಕಳೆದುಬಿಡುತ್ತಾರೆ. ಅಲ್ಲಿ  ಸಿಗುವ ಮೂರು ಕಾಸನ್ನೇ  ಆಶ್ರಯಿಸಿಕೊಂಡು  ಬದುಕುತ್ತಾರೆ. ಅವರಿಗೆ  ಯಾವುದೇ  ಕನಸುಗಳೇ  ಇಲ್ಲವಿರಬೇಕು. ಅಥವಾ ಇರುವಷ್ಟಕ್ಕೆ ತೃಪ್ತಿಪಟ್ಟುಕೊಂಡು  ಬದುಕುವ ಮನೋಭಾವದವರು ಅವರಾಗಿರಬೇಕು!

ಮತ್ತೆ  ಗಕ್ಕನೆ  ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತಾ ಅಕ್ಕಪಕ್ಕದವರು ಮಾತಾಡುತ್ತಿದ್ದಾರೆ. ಈ ರೈಲಿಗೆ ‘ಸ್ವಾಭಿಮಾನ’ ಎಂಬುದೇ ಇಲ್ಲ. ಸೂಪರ್ ಫಾಸ್ಟ್   ಎಕ್ಸ್‌ಪ್ರೆಸ್, ಅದು ಕೂಡ ಟಿಪ್ಪು  ಎಕ್ಸ್‌ಪ್ರೆಸ್! ಟಿಪ್ಪುವಿಗೆ  ಅವಮಾನ  ಮಾಡಲಿಕ್ಕೋಸ್ಕರವೇ  ಸೃಷ್ಟಿಯಾಗಿರುವ ರೈಲು ಗಾಡಿಯಿದು. ಆ  ಸಲವೂ  ಕ್ರಾಸಿಂಗ್ ಅಂತಾ ಮತ್ತೊಂದು ರೈಲಿಗೆ ದಾರಿ ಬಿಟ್ಟು  ಕೊಟ್ಟಿತ್ತು. ಈ ಸಲವೂ…

ಸ್ವಾಭಿಮಾನವಿಲ್ಲದ  ಗಾಡಿ ಎಂದು ಬೈದುಕೊಳ್ಳುತ್ತ  ಕೆಳಗಿಳಿದರೆ  ನಾಗನಹಳ್ಳಿ  ಅಂತಾ ಬೋರ್ಡ್ ಕಾಣುತಿತ್ತು.  ನದಿಯೊಂದು ಹರಿಯುತ್ತಿದೆ. ತುಂಬಾ ಖುಷಿಯಾಯಿತು. ನದಿ  ದಡದ  ಮೇಲೆ ಹೋಗಿ  ಸ್ವಲ್ಪ  ಹೊತ್ತು  ಕುಳಿತೆ.

ನದಿ, ಬೆಟ್ಟ , ಗುಡ್ಡ….ಮಲೆನಾಡಿನಲ್ಲಿ  ಬದುಕಿದವರಿಗೆಲ್ಲ  ಇದರ ಸೊಬಗು ಗೊತ್ತಾಗುತ್ತದೆ. ಬೆಂಗಳೂರಿನ ಕೆಲ ಮಂದಿಗೆ ಬದುಕಿನ  ಬೇಸರ ಕಳೆಯಲು ಪಬ್, ಬಾರ್, ವೇಶ್ಯಾವಾಟಿಕೆ ಗೃಹಗಳಿರುವಂತೆ ಮಲೆನಾಡಿನಲ್ಲಿ  ಪ್ರಕೃತಿ ಮಾತೆಯ ಸೊಬಗಿದೆ.

ನಾನೂರಕ್ಕೆ  ವ್ಯಾಪಾರ ಕುದುರಿಸಿಕೊಂಡ ಹೋದ  ಆಕೆ  ನೆನಪಾದಳು. ಅಬ್ಬ  ಎಂಥಾ  ದುಸ್ತರವಾದ ಬದುಕದು. ನಿತ್ಯವೂ ದುಡ್ಡು  ಕೊಡುವ ಯಾರ ಜತೆಗೋ…

ನನಗೆ  ದುಸ್ತರ ಅನ್ನಿಸುವುದು ಅವಳಿಗೆ ಮಾಮೂಲು. ನನ್ನದು ಅವಳಿಗೆ ದುಸ್ತರ ಅನ್ನಿಸಬಹುದು…
ಚುಕು ಬುಕು…ತಿರುಪತಿ  ಎಕ್ಸ್‌ಪ್ರೆಸ್…

ಟಿಪ್ಪು  ಸೂಪರ್ ಫಾಸ್ಟ್   ಎಕ್ಸ್‌ಪ್ರೆಸ್  ಎದುರು  ದರ್ಪದಿಂದ  ಹೋಗುತ್ತಿದ್ದಾಗ,  ‘ಕ್ರಾಸಿಂಗ್’ ಎಂಬ ನೆಪದಲ್ಲಿ   ಆ ರೈಲು ಗಾಡಿಯನ್ನು  ಮೆರೆದಾಡಲು ಬಿಟ್ಟ  ಟಿಪ್ಪುವಿನ  ಮೇಲೆ ಕೋಪ  ಬರುತ್ತಿತ್ತು.

ಚುಕು ಬುಕು…
ನನ್ನ ಈ ಆಲೋಚನೆಗಳ ಯಾವ ಪರಿವೂ ಇಲ್ಲದಂತೆ ‘ಟಿಪ್ಪು  ಎಕ್ಸ್‌ಪ್ರೆಸ್’ ಎಂಬ ರೈಲು ಗಾಡಿ ತನ್ನ  ಪ್ರಯಾಣ ಮುಂದುವರಿಸಿತ್ತು. ಕಣ್ಣು  ಮುಚ್ಚಿ  ಬಿಡುವುದರೊಳಗೆ ಮೈಸೂರು  ರೈಲ್ವೇ  ನಿಲ್ದಾಣ ಬಂದುಬಿಟ್ಟಿದೆ.

ಅಂದಹಾಗೆ  ಅವಳು?!
ಬದುಕಿನ ಪ್ರಯಾಣದಲ್ಲಿದ್ದಾಳೆ. ಫೋನ್, ಇ-ಮೇಲ್ ಸಂದೇಶವಿಲ್ಲದೇ  ೨-೩ವಾರವೇ ಕಳೆದಿದೆ. ಅವಳ ಪ್ರಯಾಣಕ್ಕೆ  ನಾನೇ ದಾರಿ ಬಿಟ್ಟಿದ್ದೇನೆ. ಯಾಕೆಂದರೆ ಅವಳನ್ನು ಅಡ್ಡಗಟ್ಟುವ  ಯಾವ ಹಕ್ಕು  ನನಗಿಲ್ಲ.  ಒಮ್ಮೆ  ಹಠ  ಹಿಡಿದು ಅಡ್ಡಗಟ್ಟಿದರೆ?
ಅಪಘಾತ, ಸಾವು, ನೋವು…

ಮೌನವಾಗಿ  ದಾರಿ ಬಿಟ್ಟುಕೊಟ್ಟ   ಟಿಪ್ಪುವಿಗಿಂತ  ಭಿನ್ನವಾಗೇನಿಲ್ಲ   ನನ್ನ  ಕಥೆ ಕೂಡ!

(ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಕಥೆ)

9 comments October 26, 2009

ಕೂಡೋ, ಕಳೆಯುವ ಲೆಕ್ಕದಲ್ಲಿ…

ಈವರೆಗೆ ಬದುಕಿನಲ್ಲಿ  ಸಿಕ್ಕವರನ್ನು, ಕಳೆದುಕೊಂಡವರನ್ನು ನಿನ್ನೆ ಸುಮ್ಮನೆ ಲೆಕ್ಕ ಹಾಕುತ್ತಿದೆ. ಈ ಜೀವನ ಒಂತರಹ ಕೂಡುವ, ಕಳೆಯುವ ಲೆಕ್ಕದಂತೆ ಅನ್ನಿಸತೊಡಗಿದೆ. ಒಂದಷ್ಟು  ಮಂದಿಯನ್ನು  ಗಳಿಸುತ್ತೇವೆ, ಅದರ ಬೆನ್ನಲ್ಲೇ  ಮತ್ತೊಂದಷ್ಟು  ಮಂದಿಯನ್ನು ಕಳೆದುಕೊಳ್ಳುತ್ತೇವೆ. ಇಡೀ ಪ್ರಯಾಣದುದ್ದಕ್ಕೂ  ಈ ಪ್ರಕ್ರಿಯೆ ಮರುಕಳಿಸತ್ತೆ. ಹಾಗಂತ ಇಲ್ಲಿ  ಶಾಶ್ವತವಾಗಿ ಜತೆಗುಳಿಯುವವರು ತೀರಾ ವಿರಳ. ಬೇರೆಯವರ ಕಥೆ ಹಾಳಾಗಲಿ, ನಮ್ಮ  ಚಿಂತನೆ, ನಿಲುವುಗಳೇ ಶಾಶ್ವತವಾಗಿ ನಮ್ಮ  ಜತೆಗೆ ಉಳಿಯುವುದಿಲ್ಲ! ನನ್ನ ಇಂದಿನ ಜೀವನದ ಪಥ, ೨ ವರ್ಷ ಕಳೆಯುವುದರೊಳಗೆ ಬದಲಾಗಿರತ್ತೆ. ಕಾಲ, ಪರಿಸ್ಥಿತಿಗೆ  ಅನುಗುಣವಾಗಿ ನಾವು ಸಾಕಷ್ಟು  ಸಲ ಬದಲಾಗುತ್ತೇವೆ ಅಲ್ವಾ?!

‘ಬದಲಾವಣೆ ಜಗದ ನಿಯಮ’ ಹಾಗಂತ ಭಗವಾನ್ ಶ್ರೀಕೃಷ್ಣ  ಹೇಳಿಹೋಗಿದ್ದಾನಂತೆ. ಆ ಕಾರಣಕ್ಕಾಗಿಯೇ ನಾವು ಆಗಾಗ ಬದಲಾಗುತ್ತಿರುತ್ತೇವೆ. ಈ ಬದಲಾವಣೆಗೆ ಕೆಲವೊಮ್ಮೆ  ಕಾರಣ ಸಿಗತ್ತೆ. ಇನ್ನು ಹಲವು ಸಲ ಕಾರಣ ಸೃಷ್ಟಿಸಿಕೊಂಡು ಬದಲಾಗುತ್ತೇವೆ! ಜತೆಗಿದ್ದವರು ದೂರವಾಗುತ್ತಾರೆ. ದೂರವಿದ್ದವರು ಕಾರಣವಿಲ್ಲದೆ ಹತ್ತಿರವಾಗಿಬಿಡುತ್ತಾರೆ. ಬೀದಿಯಲ್ಲಿ  ನಿಂತು ಜಗಳ ಆಡಿಕೊಂಡವರು ಅನಿರೀಕ್ಷಿತವಾಗಿ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುವಷ್ಟು  ಸ್ನೇಹಿತರಾಗಿ ಬಿಡುತ್ತಾರೆ…ಅಬ್ಬಬ್ಬ  ಇಲ್ಲಿ  ಯಾವುದನ್ನೂ  ನಿರೀಕ್ಷಿಸಲು ಸಾಧ್ಯವೇ ಇಲ್ಲ.

ಒಂದನೇ ತರಗತಿಯಲ್ಲಿ  ಬೆಂಚಿನ ಸಹಪಾಠಿಗಳಾಗಿದ್ದವರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ  ಅಂತಾನೇ ಗೊತ್ತಿಲ್ಲ. ಅದರ ಕಥೆ ಒತ್ತಟ್ಟಿಗಿರಲಿ, ಮೊನ್ನೆ, ಮೊನ್ನೆ ಡಿಗ್ರಿಯಲ್ಲಿ  ಜತೆಗೆ ಕುಳಿತ್ತಿದ್ದ  ಮಿತ್ರರೂ ಇಂದು ಅಪರಿಚಿತರು. ಯಾವಾಗಲೋ ಒಂದು ಸಲ ಸಿಗುತ್ತಾರೆ. ನಗುತ್ತಾರೆ, ಮಾತಾಡುತ್ತಾರೆ…ಅಲ್ಲಿಗೆ ಮುಗಿಯಿತು ಆ ಅಧ್ಯಾಯ. ಅವನ/ಅವಳ ಪರಿಚಯದಿಂದ ನನಗೇನು ಲಾಭ ಎಂದು  ಆಲೋಚಿಸುವ ಮಟ್ಟಿಗೆ  ಇವತ್ತಿನ ಸಮಾಜ ಬದಲಾಗಿ ಬಿಟ್ಟಿದೆ ಅಂದ್ರೆ ಬಹುಶಃ ತಪ್ಪಾಗಲಾರದು. ಯಾರಾದರೂ ಸುಮ್ಮನೆ  ಮಾತಾಡಿಸಿದರೂ ಅನುಮಾನ. ಇವ ನನ್ನಿಂದ ಯಾವುದೋ ಕೆಲಸ ಬಯಸುತ್ತಿದ್ದಾನೆ ಎಂಬ ಭಾವನೆ! ಅದಕ್ಕೆ ಸರಿಯಾಗಿ ಮಾತಾಡಿಸುವ ಮಂದಿಯೂ ಅಷ್ಟಕ್ಕೆ ಸಿಮೀತರಾಗಿಬಿಟ್ಟಿದ್ದಾರೆ.

ಹುಟ್ಟಿನ ಹಿಂದೆ ಗೊತ್ತಿಲ್ಲ, ಸಾವಿನ ಮುಂದೆ ತಿಳಿದಿಲ್ಲ. ಬದುಕುವ ಮೂರು ದಿನಕ್ಕೆ ಒಂದೇ ಗಲ್ಲಿಯಲ್ಲಿ  ಹತ್ತೆಂಟು ಬಣ. ನೂರೆಂಟು ನಾಯಕರು. ‘ನನ್ನದೇನು ಕಮ್ಮಿ’ ಎನ್ನುವವರು. ಅದರಿಂದ ಸಾದಿಸುವುದು ಏನನ್ನೂ  ಎಂದು ಅವರಿಗೂ ಗೊತ್ತಿಲ್ಲ! ಆದ್ರೂ  ಅವರದ್ದೊಂದು ಬಣ.  ಕುರ್ಚಿಬೇಕು. ಅಕಾರ ಬೇಕು. ಜೈಕಾರ ಹಾಕುವವರಿರಬೇಕು. ಗಾಳಿ ಬೀಸುವ ಮಂದಿ ಜತೆಗಿರಬೇಕು…ಮನುಷ್ಯನ ಈ ಬಯಕೆಗಳಿಗೊಂದು ಸಲಾಮ್ ಅನ್ನಲ್ಲೇ  ಬೇಕು. ಒಬ್ಬೊಬ್ಬರಿಗೆ ಒಂದೊಂದು ತರಹದ ಬಯಕೆ. ಹಾಗಾಗಿ ಮೇಲಿನವರ ಬಯಕೆಗಳನ್ನು ಯಾವ ಕಾರಣದಿಂದಲೂ ತಪ್ಪು  ಅನ್ನಲು ಸಾಧ್ಯವಿಲ್ಲ  ಅಥವಾ  ಅವರೆಲ್ಲ  ನನ್ನ ಚಿಂತನೆಯ ಮೂಗಿನ ನೇರಕ್ಕೆ ಬದುಕಬೇಕು ಎಂದು ಆಶಿಸುವುದು ಸರಿಯಿಲ್ಲ. ಯಾಕಂದ್ರೆ ಇಂಥದನ್ನು ಬರೆದು ನಾನು ಏನನ್ನು ಸಾದಿಸುತ್ತೇನೆ ಎಂದು ನನಗೂ ಗೊತ್ತಿಲ್ಲ!

ಈ ಸಮಾಜದಲ್ಲಿ  ಪರಿಹರಿಸಲು ಸಾಧ್ಯವೇ ಇಲ್ಲದ ಒಂದಷ್ಟು  ಸಮಸ್ಯೆಗಳಿವೆ. ‘ಇದು ಸಮಸ್ಯೆಯೇ ಅಲ್ಲ’ ಎಂದು ನಾವು ಭಾವಿಸುಕೊಳ್ಳುವುದೇ ಅದಕ್ಕೆ ಉತ್ತಮ ಪರಿಹಾರ. ಸಮಸ್ಯೆಯೊಂದನ್ನು  ನಾವು ಗಂಭೀರ ಎಂದು ಭಾವಿಸಿದರೆ ಮಾತ್ರ ತಾನೇ ಅದು ಗಂಭೀರವಾಗವುದು?!
ಕೋಡ್ಸರ ಅನಾಮಿಕ ಬ್ಲಾಗ್ ಮಾಡುತ್ತಾನೆ, ಬೇರೆಯವರನ್ನು ಪುಗಸಟ್ಟೆ  ಬೈಯ್ಯುತ್ತಾನೆ ಎಂದು ಭಾವಿಸಿ ಕುಳಿತವರು ಇವತ್ತಿಗೂ ಸಾಕಷ್ಟು  ಮಂದಿ ಇದ್ದಾರೆ. ಅವರಲ್ಲಿ  ಹಲವರಿಗೆ ಸಮಜಾಯಿಷಿ ಕೊಟ್ಟು  ಸಾಕಾಗಿದೆ. ನಾನು ಬೇರೆ ಯಾರೋ ಹಿರಿಯರನ್ನು ಅನಾಮಿಕವಾಗಿ/ ಹೆಸರು ಹೇಳಿಕೊಂಡು ಬೈಯ್ಯುವುದರಿಂದ, ಅವರ ಒಂದು ಕೂದಲು ಅಲ್ಲಾಡುವುದಿಲ್ಲ  ಎಂದು ೪ ವರ್ಷಗಳ ಹಿಂದೆಯೇ ಅರ್ಥವಾಗಿದೆ. ನಾನಲ್ಲ, ರಾಜ್ಯದ ಮುಖ್ಯಮಂತ್ರಿಗಳಿಂದಲೂ ಕೆಲವರ ವಿರುದ್ಧ  ಏನೂ ಹರಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ  ಬೈಗುಳ ಹಲವರ ಪಾಲಿಗೆ ಹೊಗಳಿಕೆ! ಇವಿಷ್ಟು  ಎಲ್ಲರಿಗೂ ಅರ್ಥವಾದರೆ ಬಹುಶಃ ಅನಾಮಿಕ ಬ್ಲಾಗ್‌ಗಳ ಹಾವಳಿ ಇರುತ್ತಿರಲಿಲ್ಲವೇನೋ. ಹೆಸರು ಯಾರದ್ದೋ, ಬಸಿರು ಯಾರದ್ದೋ ಎಂಬಂತೆ ಯಾರೋ ಮಾಡುವ ತಪ್ಪಿಗೆ  ಅನುಮಾನಕ್ಕೆ/ಅವಮಾನಕ್ಕೆ ಗುರಿಯಾಗುವವರು ಮತ್ತ್ಯಾರೋ. ಇಂಥ ಅನುಭವ ಬದುಕಿನಲ್ಲಿ  ಸಾಕಷ್ಟು  ಸಲ ಆಗುತ್ತಿರತ್ತೆ. ಹಾಗಾಗಿ ಇದು ಕೂಡ ನನ್ನ ಪಾಲಿಗೆ ಸಮಸ್ಯೆಯಲ್ಲ…!

ಕೆಲವೊಮ್ಮೆ  ಎಲ್ಲವೂ ಬೇಸರ ತರಿಸುತ್ತದೆ. ಯಾವುದೂ ಬೇಡ ಅನ್ನಿಸುತ್ತದೆ. ಅವೆಲ್ಲ ಆ ಕ್ಷಣಕ್ಕೆ ಸೀಮಿತ. ಯಾವುದನ್ನೂ ಬೇಡ ಎಂದು ಶಾಶ್ವತವಾಗಿ ಕೈಕಟ್ಟಿ  ಕೂರಲು ಸಾಧ್ಯವಿಲ್ಲ. ಕಂಡ ಕನಸುಗಳು ನನಸಾದ ಹೊರತೂ ಸಮಾಧಾನವಿಲ್ಲ. ಅಂದುಕೊಂಡಿದ್ದು  ಸಿಗುವವರೆಗೂ ತೃಪ್ತಿಯಿಲ್ಲ. ಹಾಗಾಗಿ ಕ್ಷಣಾರ್ಧದಲ್ಲಿ  ಬದುಕು ಮಾಮೂಲಿ ಹಾದಿಯನ್ನು ಹಿಡಿದುಬಿಡುತ್ತದೆ….ಇಂಥ ಬದುಕಿನ ಪಯಣಕ್ಕೊಂದು ಜೈ ಹೋ…!!!

3 comments October 3, 2009

ನಾನು ಲೈನು ಹಾಕಿದ ಹುಡುಗಿ!

ಬರೆದಿದ್ದೇ, ಬರೆದು, ಬರೆದು ಬೇಜಾರಾಗಿದೆ. ಹೊಸತೇನಾದ್ರು…ಅಂತಾ ಆಲೋಚಿಸುತ್ತಿದ್ದಾಗ ಸಿಕ್ಕವಳು ಲೈನು ಹಾಕಿದ ಆ ಹುಡುಗಿ! ಇವಳು ವಾಸ್ತವವೋ, ಕಲ್ಪನೆಯೋ ಅಂತಾ ಮಾತ್ರ ಯಾವ ಕಾರಣಕ್ಕೂ ಕೇಳಬೇಡಿ! ನಾನು ಲೈನು ಹೊಡೆಯುತ್ತಿದೆ ಎಂದರೆ, ನನ್ನ  ಶೇ.೯೦ರಷ್ಟು  ಮಿತ್ರರು ನಂಬಲಿಕ್ಕಿಲ್ಲ. ಆ ಪರಿ ಒಳ್ಳೆ  ಹುಡುಗ  ಈ ಕೋಡ್ಸರ!

ನನ್ನ ಪಾಲಿಗೆ ಡಿಗ್ರಿಯ ಮೂರು ವರ್ಷದ ಬದುಕು ಸಿಕ್ಕಾಪಟ್ಟೆ  ಮಸ್ತ್. ಓದುವುದೊಂದನ್ನು ಬಿಟ್ಟು  ಉಳಿದಿದ್ದೆಲ್ಲಾ  ಮಾಡಿದ್ದೇನೆ! ಮಠ, ಕಾಲೇಜು, ದುಡಿಮೆ…ಇವಿಷ್ಟೆ  ನನ್ನ  ಆಗಿನ ಪ್ರಪಂಚ. ನನ್ನದೇ ದುಡಿಮೆ. ನನ್ನದೇ ಖರ್ಚು. ಹಾಗಾಗಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಉಡುಪಿಯಲ್ಲಿ  ಓದುವ ಬಹುತೇಕರ ಹಣೆಬರಹ ಹೀಗೆ.  ಹಾಗಂತ, ಕಾರಿಡಾರ್‌ನಲ್ಲಿ  ನಿಂತು ಹುಡುಗಿಯರನ್ನು ಚುಡಾಯಿಸುವವರ ಗುಂಪಿನಲ್ಲಿ, ಪುಗಸಟ್ಟೆ  ಜಗಳ ಆಡಿಕೊಳ್ಳುವವರ ಗ್ಯಾಂಗ್‌ನಲ್ಲಿ, ಚಾಲುಕ್ಯಕ್ಕೆ ಹೋಗಿ ಸಿಗರೇಟು ಎಳೆಯುವ, ಪೂಲ್‌ಗೆ ಹೋಗಿ ಸ್ನೂಕರ್ ಆಡುವವರ ತಂಡದಲ್ಲಿ…ಊಹುಂ, ಎಲ್ಲೂ  ಕಾಣಿಸಿಕೊಳ್ಳಲಿಲ್ಲ.

ಗೋವಿಂದ ಕಲ್ಯಾಣ ಮಂಟಪ, ಶಾಮಿಲಿ, ಅಂಬಲ್ಪಾಡಿ ದೇವಸ್ಥಾನ…ಎಲ್ಲೇ  ಬಡಿಸುವುದು ಇದ್ದರೂ  ನಾವೊಂದಿಷ್ಟು  ಮಠದ ಹುಡುಗರು ಹಾಜರ್. ಅದಕ್ಕೆ ತಕ್ಕಂತೆ ಬೆಳಿಗ್ಗೆ  ಅಂತಿಮ ಅವ ಸಂಸ್ಕೃತ, ಮಧ್ಯಾಹ್ನ ಮೊದಲನೆ ಪಿರಿಯಡ್ ಇಂಗ್ಲೀಷ್. ಈ ಹುಡುಗರು ಕ್ಲಾಸಿಗೆ ಬಂಕ್ ಹಾಕಿ ಬಡಿಸಲು ಹೋಗುತ್ತಾರೆ ಅನ್ನೋದು ಪಿಪಿಸಿಯ ಎಲ್ಲಾ  ಅಧ್ಯಾಪಕರಿಗೂ ಗೊತ್ತಿತ್ತು. ಇನ್ನೂ ಮಜ ಅಂದ್ರೆ, ಕೆಲವು ಸಲ ಪಂಕ್ತಿ ನಡುವೆ ಲೆಕ್ಚರ್‌ಗಳು ಪ್ರತ್ಯಕ್ಷ! ಮೊದಲೆಲ್ಲ  ಭಯ ಆಗ್ತಿತ್ತು. ಆಮೇಲೆ ಮಾಮೂಲು. ಶೇ.೬೦ರಷ್ಟು  ಹಾಜರಿ ಉಳಿಸಿಕೊಂಡು ಉಳಿದೆಲ್ಲ  ತರಗತಿಗಳಿಗೂ ಬಂಕ್! ಸದಾ ನನಗೆ ಬೈಯ್ಯುವ ಮ್ಯಾಥ್ಸ್  ರಾಘು ಸರ್, ನನ್ನನ್ನು  ತಿಗಣೆಯಂತೆ ಕಾಡಿದ ಸೋಮಯಾಜಿ ಸರ್‌ಗಳ ಕಣ್ಣಿಗೇ ಬೀಳುತ್ತಿದೆ.

ಒಂತರಹ ಮಜವಾದ ಬದುಕು ಅದು. ಎಲ್ಲಾ  ಪ್ರಾಧ್ಯಾಪಕರು ನನಗೆ ಸಿಕ್ಕಾಪಟ್ಟೆ  ಬೈಯ್ಯುತ್ತಿದ್ದರು. ಸಾಮರ್ಥ್ಯಕ್ಕೆ ತಕ್ಕಷ್ಟು  ಅಂಕ ತೆಗೆಯಲ್ಲ, ಸರಿಯಾಗಿ ಓದಲ್ಲ  ಎಂಬುದಷ್ಟೆ  ಕಾರಣ. ೫ನೇ ಕ್ಲಾಸಿನಿಂದ ಸ್ವಂತದ ಖರ್ಚಿಗೆ ದುಡಿಕೊಳ್ಳುವುದು ರೂಡಿಯಾಗಿಬಿಟ್ಟಿತ್ತು. ಅದಕ್ಕಿಂತ ಹೆಚ್ಚಾಗಿ ದುಡಿಕೊಳ್ಳುವುದು ನನ್ನ ಪಾಲಿಗೆ ಅನಿವಾರ್ಯವಾಗಿತ್ತು. ಲಕ್ಷಗಟ್ಟಲೆ ಇನ್‌ವೆಸ್ಟ್  ಮಾಡಿ ಡಾಕ್ಟರ್, ಎಂಜಿನಿಯರ್ ಆದ್ರೆ, ೨೩ ವರ್ಷ ಕಷ್ಟಪಟ್ಟರೆ ಉಳಿದ ಬದುಕು ಸಂತೋಷವಾಗಿರತ್ತೆ ಅನ್ನೋದು ನಿಜ. ಆದ್ರೆ, ನನ್ನ  ಪಾಲಿಗೆ ಹಣಕ್ಕಿಂತ ಅನುಭವ, ವ್ಯಕ್ತಿತ್ವಗಳೇ ಬದುಕು. ಖಾಲಿ ಹಣ  ಸಂಪಾದನೆಗೆ ಎಂಜಿನಿಯರಿಂಗ್ ಪದವಿಯೇ ಬೇಕು ಅಂತೇನೂ ಇಲ್ಲ. ಇರೋ ಮೂರು ದಿನದಲ್ಲಿ  ಸಾಧ್ಯವಾದಷ್ಟು  ಹೊಸ ಕ್ಷೇತ್ರಗಳನ್ನು ಪರಿಚಯ ಮಾಡಿಕೊಳ್ಳಬೇಕು ಅನ್ನೋ ಹಂಬಲ. ಆ ಕಾರಣಕ್ಕಾಗಿಯೇ ಪತ್ರಿಕೋದ್ಯಮ ಆಯ್ದುಕೊಂಡಿದ್ದು. ಕೆಲಸವಿಲ್ಲದೆ, ಕೆಲಸವಿದ್ದರೂ ಸಂಬಳವಿಲ್ಲದೆ, ಸಂಬಳವಿದ್ದರೂ  ಬಾಡಿಗೆ ಕಟ್ಟಲು ಸಾಕಾಗದ ಒಂದು ವರ್ಷದ ನರಯಾತನೆಯ ನಡುವೆಯೂ ಈ ವೃತ್ತಿಯಲ್ಲಿ  ಉಳಿದುಕೊಂಡಿದ್ದು. ನಮ್ಮ ಮನೆಯವರಿಗೆ ನನ್ನ ಆಯ್ಕೆ ಇವತ್ತಿಗೂ ಇಷ್ಟವಿಲ್ಲ.

ಲವ್, ಫೀಲು…ಆ ಕಾಲದಲ್ಲಿ  ನನ್ನ  ಬದುಕಿನ ಕುರಿತು ನನಗೆ ಭರವಸೆಯಿರಲಿಲ್ಲ. ನನ್ನ ಬಗಲಿಗೆ ಇನ್ನೊಬ್ಬಳನ್ನು ಕಟ್ಟಿಕೊಂಡು ಅವಳ ಕನಸು ಕಸಿದುಕೊಳ್ಳಲು…ಈಗಲೂ ಸುತರಾಂ ಇಷ್ಟವಿಲ್ಲ. ಹಾಗಾಗಿಯೇ ನಾನು ಹುಡುಗಿ ಅನ್ನೋ ವಿಷಯದಿಂದ ಸ್ವಲ್ಪ  ದೂರ. ಈ ವಿಷಯದಲ್ಲಿ  ಅನೇಕ ಗೆಳೆಯರು ನನ್ನನ್ನು ಆಡಿಕೊಳ್ಳುತ್ತಾರೆ. ನನಗೆ ಒಂಚೂರು ಬೇಜಾರಿಲ್ಲ. ಅದಕ್ಕಿಂತ ಹೆಚ್ಚಾಗಿ ಹುಡುಗಿ, ಚೆಂದ, ಫೀಲಿಂಗು…ಇವೆಲ್ಲ  ಅವರವರ ಅಭಿರುಚಿ. ಈಗ ಇಷ್ಟವಾದವಳು ಇನ್ನೊಂದೆರಡು ವರ್ಷದ ನಂತರ ಇಷ್ಟವಾಗುತ್ತಾಳೆ ಅನ್ನಲು ಸಾಧ್ಯವಿಲ್ಲ. ಕೆಲ ಸಲ ಕೆಲವರು ಕಾರಣವಿಲ್ಲದೆಯೂ ಇಷ್ಟವಾಗಬಹುದು.

ಆದ್ರೂ ನೋಟ್ಸ್ ವಿಷಯಕ್ಕೆ ಹುಡುಗಿಯರೇ ಬೇಕು! ಇಂಟರ್‌ನಲ್‌ಗೆ ಮೂರುದಿನ ಮುಂಚೆ ನರ್ಮದಾ, ರಂಜನಿ, ರಂಜಿತಾ…ಮೂವರಲ್ಲಿ  ಯಾರಾದ್ರೂ ನೋಟ್ಸ್  ಕೊಟ್ಟಿಲ್ಲ  ಅಂದ್ರೆ ನಮ್ಮ  ಕಥೆ ಡಮಾರ್! ನಮ್ಮ  ಕ್ಲಾಸಲ್ಲಿ  ೨೪ ಹುಡುಗರು. ೮೫ ಹುಡುಗಿಯರು. ಹಾಗಾಗಿ ಅದೆಷ್ಟೊ  ಹುಡುಗಿಯರ ಹೆಸರು, ಪರಿಚಯ ಕಡೆವರೆಗೂ ಆಗಲಿಲ್ಲ. ನನಗೆ ಚೆನ್ನಾಗಿ ಪರಿಚಯವಿದ್ದದ್ದು, ನಾನು ಸರಿಯಾಗಿ ಮಾತಾಡಿದ್ದು ಈ ಮೂರು ಹುಡುಗಿಯರ ಹತ್ತಿರ ಮಾತ್ರ. ಈಗ ನರ್ಮದಾ ಮಾತ್ರ ಕಾಂಟ್ಯಾಕ್ಟ್‌ನಲ್ಲಿ  ಇದಾಳೆ. ಉಳಿದಿಬ್ಬರಿಗೆ ಮದ್ವೆ ಆಗಿ, ಮಕ್ಕಳೂ ಆಗಿರಬಹುದು. ಇದರಲ್ಲಿ  ಹುಡುಗಿಯರು ತುಂಬಾ ಫಾಸ್ಟ್. ಅವರಲ್ಲದಿದ್ದರೂ, ಅವರ ಹೆತ್ತವರು!

ಅಂದಹಾಗೆ ನಾನು ಲೈನು ಹಾಕಿದ ನನಗಿಂತ ಜೂನಿಯರ್ ಆಗಿದ್ದ ನೀಲಾವರದ ಆ ಹುಡುಗಿ ಹೆಸರು…?!(ನನ್ನ  ಮುಂದಿನ ಕಥೆಯಲ್ಲಿ  ಗ್ಯಾರಂಟಿ ಅವಳ ಹೆಸರನ್ನೇ ಬಳಸುತ್ತೇನೆ!!!)

8 comments September 23, 2009

ಈ ಯೋಗಿ ಬದುಕಿನಲ್ಲಿ ದೇವರಿಗೆ ಜಾಗವಿಲ್ಲ !

‘ಸಿನಿಮಾ ಉದ್ಯಮ ಬದುಕಿಗೆ ಕಲಿಸಿದ ಪಾಠ ಅಪಾರ. ಇಲ್ಲಿ  ಸಾಕಷ್ಟು  ನೋವು ಅನುಭವಿಸಿದ್ದೇನೆ. ಉಡಾಫೆತನ ಮಾಡಿಕೊಂಡು ಒದೆ ತಿಂದಿರುವೆ. ತುಂಬಾ ಬೇಸರವಾಗಿ ಎರಡು ಸಲ ಉದ್ಯಮವನ್ನು ಬಿಟ್ಟು  ಕಾರ್ಪೊರೇಟ್ ಜಗತ್ತಿನೆಡೆ ಹೆಜ್ಜೆ ಹಾಕಿದ್ದೆ. ಶ್ರಮಕ್ಕೆ ತಕ್ಕ ಗೆಲುವು ಸಂಪಾದಿಸಲು ಬಹಳ ಕಾಲ ಕಾಯಬೇಕಾಯಿತು…’ ಎಂದು ಮಾತು ಆರಂಭಿಸಿದವರು ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್.

ಚಿತ್ರೀಕರಣವಿದ್ದರೆ, ಸಿನಿಮಾ ಪ್ರಂಪಚವೇ ಅವರಿಗೆ ಸರ್ವಸ್ವ. ಅದಿಲ್ಲವಾದರೆ,  ೭ರಿಂದ ೯ ಗಂಟೆಯೊಳಗೆ ಏಳುತ್ತಾರೆ. ನಿತ್ಯದ ಕಾರ್ಯಗಳು ಮುಗಿದ ನಂತರ ಸಿನಿಮಾ ಗೀತೆ ರಚನೆಯಲ್ಲಿ  ಮಗ್ನ. ಕೆಲವೊಮ್ಮೆ  ಓದಿನೊಂದಿಗೆ ಬಿಜಿ. ಇವುಗಳ ನಡುವೆ ತಮ್ಮ  ಪುಟಾಣಿ ಮಗು ಪುನರ್ವಸು ಜತೆಗೆ ಆಟ. ಮಧ್ಯಾಹ್ನ ಊಟದ ನಂತರ ಸಿನಿಮಾ ಚರ್ಚೆ.
೧೯೯೪ರಲ್ಲಿ  ಬೆಳದಿಂಗಳ ಬಾಲೆ ಚಿತ್ರದ ಮೂಲಕ ಸಿನಿಮಾಕ್ಕೆ ಕಾಲಿಟ್ಟ  ಭಟ್ಟರು,  ಒಂದೂವರೆಯಿಂದ ಎರಡು ವರ್ಷಕ್ಕೊಂದು ಚಿತ್ರ ಮಾಡುತ್ತಾರೆ. ಹಾನಗಲ್ ತಾಲೂಕಿನ ತಿಳುವಳ್ಳಿ  ಇವರ ಹುಟ್ಟೂರು. ೨ ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುವುದು ರೂಢಿ. ಅಣ್ಣ, ಅತ್ತಿಗೆಯ ಸಂಸಾರ  ಜತೆಗಿದೆ. ಅತ್ತೆ, ಮಾವ ಕೂಡ ಮಗಳು-ಅಳಿಯನ ಮನೆಯಲ್ಲಿದ್ದಾರೆ. ಹೀಗಾಗಿ ಮಹಾನಗರಿಯಲ್ಲೂ  ಇವರದ್ದು  ಅವಿಭಕ್ತ ಕುಟುಂಬ.

‘ನಾನು ಓದಿದ್ದು ಬಿ.ಎ., ಎಂ.ಎ ಮತ್ತು ಎಲ್‌ಎಲ್‌ಬಿಗಳಿಗೆ ಒಂದೊಂದು ವರ್ಷ ಪ್ರಯತ್ನ ಮಾಡಿದೆ. ಯಾವುದೂ ಪೂರ್ಣವಾಗಲಿಲ್ಲ. ಸಿನಿಮಾ ಪ್ರಪಂಚ ಪ್ರವೇಶಿಸಿದೆ. ಒಂದು ಹಂತದವರೆಗೂ ನನಗೆ ಕನ್ನಡ ಚಿತ್ರೋದ್ಯಮದ ಪರಿಚಯವಿರಲಿಲ್ಲ. ಪರಿಣಾಮವಾಗಿ ಸಾಕಷ್ಟು  ಸಲ ಅವಮಾನ ಅನುಭವಿಸಿದೆ. ಈಗ ಕಥೆ ಬಗೆಗಿನ ಚರ್ಚೆಯಲ್ಲೇ ಆರು ತಿಂಗಳ ಬದುಕು ಕಳೆದು ಹೋಗುತ್ತದೆ. ಸಿನಿಮಾ ಗೀತೆ ಜತೆಗೆ ಕವನವನ್ನೂ ಬರೆಯುತ್ತೇನೆ’ ಎಂದು ಭಟ್ಟರು ನಗುತ್ತಾರೆ.

ಹಿಂದಿ ಘಜಲ್‌ಗಳೆಂದರೆ ಅವರಿಗೆ ತುಂಬಾ ಇಷ್ಟ. ಮನಸು ಬಂದ್ರೆ ಹಾಡುವುದಂಟು. ಕೀ ಬೋರ್ಡ್ ಜತೆಗೆ ನಿಕಟ ನಂಟು. ದೇವರಿಗೂ ಈ ಯೋಗಿಗೂ ಯಾವುದೇ  ಸಂಬಂಧವಿಲ್ಲವಂತೆ. ಟಿವಿ, ರೆಡಿಯೋ, ಗಡಿಯಾರ ಮೊದಲಾದ ಉಪಕರಣಗಳನ್ನು ಬಿಚ್ಚುವುದರಲ್ಲಿ  ಇವರು ನಿಸ್ಸಿಮರು. ಲೀಗ್ ಮಟ್ಟದಲ್ಲಿ  ವಾಲಿಬಾಲ್ ಆಡಿದ ಅನುಭವವಿದೆ. ಕುಟುಂಬದೊಂದಿಗೆ ಪ್ರವಾಸ ಹೋಗೋದು, ಚಿತ್ರೀಕರಣ ಸ್ಥಳ ಹುಡುಕಾಟ ಮಾಮೂಲು. ರಾತ್ರಿ ೧೦.೩೦-೨ಗಂಟೆಯೊಳಗೆ ನಿದ್ದೆಗೆ ಜಾರುತ್ತಾರೆ.

‘ಬಹಳ ಹಿಂದೆ ವಿಭಿನ್ನ ರೀತಿಯಲ್ಲಿ  ವಿದ್ಯುತ್ ಉತ್ಪಾದನೆಯ ಕುರಿತು ಊರ ಹುಡುಗರ ಜತೆ ಕೆಲಸ ಮಾಡಿದ್ದೆ. ಈ ದೃಶ್ಯ ಮನಸಾರೆ ಚಿತ್ರದಲ್ಲಿ  ಬರುತ್ತೆ. ಜಪಾನಿ ಭಾಷೆಯ ಅಕಿರೊ ಕುರುಸೋವಾ.  ಹಿಂದಿಯ ಹೃಷಿಕೇಷ್ ಮುಖರ್ಜಿ ನನ್ನಿಷ್ಟದ ನಿರ್ದೇಶಕರು. ಸದ್ಯದಲ್ಲೇ  ನಿರ್ಮಾಪಕನಾಗುವ ಇರಾದೆಯಿದೆ. ಸ್ವಂತ ಬ್ಯಾನರ್‌ನಡಿ ಇನ್ನಷ್ಟು  ಚಿತ್ರಗಳು ಬರಲಿವೆ’ ಎಂದು ಮಾತು ಮುಗಿಸಿದರು ಭಟ್ಟರು.

1 comment September 10, 2009

ಈ ಹುಡುಗೀಯರು ಹೀಗ್ಯಾಕೆ?

ಹುಡುಗೀಯರು ಹೀಗ್ಯಾಕೆ ಅಂತಾ ಬರೆಯುವುದು ಸರಿಯಾ ಅಥವಾ ಹುಡುಗರು ಯಾಕಿಂಗಾಡ್ತಾರೆ ಎಂದು ಬರೆಯುವುದು ಸೂಕ್ತವಾ ಎಂಬ ಗೊಂದಲ ನನ್ನಲ್ಲಿದೆ. ಆದ್ರೂ ಎರಡು ತರಹ ಬರೆಯುವುದೂ ಶಾನೇ ಡೇಂಜರ್. ಯಾಕಂದ್ರೆ ಫೆಮಿನಿಸ್ಟ್  ಸಂಘಟನೆಗಳು, ಯುವಕ ಮಂಡಳಿ ಸದಸ್ಯರುಗಳಿಗೆ ಈ ಬರಹ ಓದಿ ನೋವಾಗಬಹುದು! ಹಾಗಂತ, ನನ್ನ ಬರಹ ಹಿಡಿದುಕೊಂಡು  ಗಾಂ ಪ್ರತಿಮೆ ಎದುರು ಯಾರೂ ಹೋರಾಟ ನಡೆಸುವುದಿಲ್ಲ  ಎಂಬುದಂತೂ ಗ್ಯಾರಂಟಿ. ಅಯ್ಯೋ ಸಿವಾ, ಏನೋ ಬರೆಯಕ್ಕೆ ಹೊಂಟಿದ್ದು ಏನೇನು ಆಗಕ್ ಹತ್ತೈತಿ! ಇಲ್ಲ, ಟ್ರ್ಯಾಕ್ ತಪ್ಪಿಲ್ಲ. ಹಾಗಾಗಿ  ನೇರವಾಗಿ ವಿಷ್ಯಕ್ಕೆ ಬರುತ್ತಿದ್ದೇನೆ.

ವಿಷ್ಯ  ಏನಪ್ಪಾ  ಅಂತಂತಂದ್ರೆ…ಈ ಹುಡುಗೀಯರು ಯಾಕೆ ಹೀಗೆ  ಅಂತಾ!  ಹುಡುಗೀಯರಿಗೆ ಏನಾಗಿದೆ ಅನ್ನೋದಕ್ಕಿಂತ, ಆಗಲಿಕ್ಕೆ  ಉಳಿದಿರುವುದೇನು ಎಂಬುದು ಮುಖ್ಯವಾದ ಪ್ರಶ್ನೆ. ಅಲ್ಲ , ಈ ಬೆಂಗಳೂರಲ್ಲಿ  ನಮ್ಮ ‘ನಾರಿ’ಗಳಿಗೆ ಸ್ವಂತ ಐಡೆಂಟಿಟಿ ಇಲ್ಲವೇನೋ ಅನ್ನಿಸ್ತಾ ಇದೆ. ಹಿಂದೆಲ್ಲ  ಸ್ಯಾರಿ ಉಡ್ತಾ ಇದ್ದರಂತೆ. ಹಾಗಾಗಿ ‘ಭಾರತೀಯ ನಾರಿ’ ಎಂಬ ವಿಶೇಷಣ ಸ್ತ್ರೀ ಸಮುದಾಯಕ್ಕೆ ಇತ್ತಂತೆ. ಇವತ್ತು  ಒಂದಷ್ಟು (ಬೆಂಗಳೂರಿನ ಮಟ್ಟಿಗೆ  ಈ ಪ್ರಮಾಣ ಶೇ.೬೦ಕ್ಕಿಂತ ಜಾಸ್ತಿ ಇರಬಹುದು)ಹುಡುಗೀಯರು ಬಾರ್‌ನಲ್ಲಿ  ಕೂತು…ಅಲ್ಲಲ್ಲ…ಮನೆ, ಹಾಸ್ಟೆಲ್‌ನಲ್ಲಿ  ಕೂತು ಕುಡಿತಾರೆ. ಇನ್ನೂ  ಕೆಲವರು ಐಷಾರಾಮಿ ಹೋಟೆಲ್‌ಗೆ ಹೋಗಿ ಎರಡು ಪೆಗ್ ಏರಿಸುತ್ತಾರೆ. ಸಿಗರೇಟು ಸೇದ್ತಾರೆ, ಹುಡುಗರಂತೆ ಡ್ರೆಸ್ ಮಾಡಿಕೊಳ್ಳುತ್ತಾರೆ…

‘ಲೋ ಯಪ್ಪ  ಸುಮ್ನಿಕಿರೋ, ನೀನೇನು ಸಂಸ್ಕೃತಿ ಗುತ್ತಿಗೆ ತಗಂಡಿಯೇನು? ಹುಡುಗ್ರು ಏನು ಬೇಕಾದ್ರು ಮಾಡಬಹುದು, ನಾವು ಹುಡುಗೀಯರು ಮಾಡಂಗಿಲ್ಲ  ಅನ್ನಾಕೆ ಇದೇನು ತಾಲಿಬಾನಾ?!’

ಹೋಯ್ ಅಕ್ಕೋರೆ ನಿಮ್ಮ ಕೂಗು ನಂಗೆ ಶೆರಿಯಾಗಿಯೇ ಕೇಳಿಸ್ತಾ  ಐತಿ. ನಾನು ಈಗ ಹೇಳಾಕ್ ಹೊಂಟಿರೋ ಈಸ್ಯ ಕೂಡ ಅದೇನೆ. ಓಸಿ ಸಮಾಧಾನ ಮಾಡ್ಕಂಡು ಓದ್ತೀರಾ?!

ಅಡುಗೆ ಮನೆಯಲ್ಲಿ  ಸೌಟು ಹಿಡಿದುಕೊಂಡೇ ಬದುಕಬೇಕಾ ಎಂಬ ಹಠಮಾರಿತನದೊಂದಿಗೆ ಹೆಣ್ಣು  ನಾಲ್ಕು ಗೋಡೆಗಳ ನಡುವಣ ಹೊಸ್ತಿಲನ್ನು ದಾಟಿ ಹೊರಬಂದಿದ್ದಾಳೆ. ಆದರೆ ಈಗ ಆಗಿರುವ ಪರಿಣಾಮವೇನು?

ಓ ಮರೆತೇ  ಹೋಗಿತ್ತು ಕ್ಷಮಿಸಿ…ವ್ಯತ್ಯಾಸ ಯಾಕೆ ಎಂಬ ಪ್ರಶ್ನೆಯಿಂದಲೇ ನಮ್ಮ  ಫೆಮಿನಿಸ್ಟ್  ಸಂಘಟನೆಗಳು ಹುಟ್ಟಿದ್ದು ಅಲ್ವಾ?! ಅಂದಹಾಗೆ ಇದರ ಲಾಭ ಆಗಿದ್ದು  ಯಾರಿಗೆ?!

ಮಹಾನಗರಿಯಲ್ಲಿ  ಪಟ್ಟಿ  ಮಾಡಬಹುದಾದಷ್ಟು  ಐಷಾರಾಮಿ ಹೋಟೆಲ್‌ಗಳಿವೆ. ಅದರಲ್ಲಿ  ಅರ್ಧದಷ್ಟು  ಹೋಟೆಲ್‌ನಲ್ಲಿ  ಮೊಣಕಾಲನ್ನೂ ಆವರಿಸಿದ ಬಟ್ಟೆ  ತೊಟ್ಟ  ಚೆಂದದ ಹುಡುಗೀಯರು ಹಲವಾರು ಹುದ್ದೆ  ನಿಭಾಯಿಸುತ್ತಿದ್ದಾರೆ. ಇಲ್ಲಿ  ‘ಆತಿಥೋದ್ಯಮ’ ಎಂಬ ಪದವಿಗಿಂತ ಮೊಣಕಾಲಿಗಿಂತ ಚಿಕ್ಕದಾದ ಬಟ್ಟೆ  ತೊಡುವುದೇ ಮುಖ್ಯವಾದ ವಿಷಯ. ಅದಕ್ಕೆ  ಒಪ್ಪದವರಿಗೆ ಕೆಲಸವಿಲ್ಲ.

ಬಹುತೇಕ ಕಂಪನಿಗಳು ಸಾರ್ವಜನಿಕ ಸಂಪರ್ಕ ಅಕಾರಿ, ಪತ್ರಿಕಾ ಸಂಪರ್ಕ ಅಕಾರಿಗಳನ್ನು ನೇಮಿಸಿಕೊಳ್ಳುತ್ತವೆ. ೩೫ರ ಪ್ರಾಯದ ಒಳಗಿನ ಚೆಂದದ, ಚೆಲ್ಲು, ಚೆಲ್ಲು  ಮಾತನಾಡುವ ಹುಡುಗಿಗೆ ಮಾತ್ರ ಆದ್ಯತೆ. ೪೦ರ ಪ್ರಾಯದ ಆಂಟಿಯರಿಗೆ ಅವಕಾಶವಿಲ್ಲ. ವಯಸ್ಸು ಆಗುತ್ತಿದ್ದಂತೆ ಆ ಚೆಂದದ ಹುಡುಗಿಗೂ ಗೇಟ್ ಪಾಸ್ ಲಭ್ಯ. ಹಾಗಾಗಿಯೇ ಅವುಗಳು ಕೂತು ಊಟ ಮಾಡಲು ಸಾಕಾಗುವಷ್ಟು  ಸಂಬಳ, ನಾನಾ ಬಗೆಯ ಸೌಕರ್ಯ ಒದಗಿಸುವುದು. ಅಷ್ಟೆಲ್ಲ  ಸಿಗಬೇಕಾದ್ರೆ ಮೊಣಕಾಲಿಗಿಂತ ಮೇಲಿನ ಡ್ರೆಸ್  ಹಾಕಿದರೆ, ಚೆಲ್ಲು, ಚೆಲ್ಲಾಗಿ ಹಲ್ಲು  ಕಿರಿದರೆ ಆಗುವ ನಷ್ಟವಾದರೂ ಏನು ಅಲ್ವಾ?! ಅಡುಗೆ ಮನೆಯಲ್ಲಿ  ಸೌಟು  ಹಿಡಿದ್ರೆ  ಇಷ್ಟೆಲ್ಲ  ಸೌಕರ್ಯ ಸಿಗತ್ತಾ?!

ಈ ಟ್ರೆಂಡ್ ಇವತ್ತು ಮಾಧ್ಯಮವನ್ನೂ ಆವರಿಸಿದೆ. ವಿಶೇಷವಾಗಿ ಆಂಗ್ಲ  ಭಾಷೆಯ ವಾಹಿನಿಗಳಲ್ಲಿ  ಸೌದಂರ್ಯವೇ ಮುಖ್ಯವಾದ ಅರ್ಹತೆ.  ಪ್ರತಿ ಎಂಎನ್‌ಸಿ ಕಂಪನಿಯಲ್ಲಿ  ಸ್ವಾಗತಕಾರಿಣಿಯಾಗಿ ಹುಡುಗಿ/ಹುಡುಗ ಇರುತ್ತಾರೆ. ವಿಮಾನದಲ್ಲೂ  ಇದೇ ರೀತಿಯ ವ್ಯವಸ್ಥೆಯಂತೆ. ನಾನಿನ್ನು  ವಿಮಾನ ಹತ್ತಿಲ್ಲ. ಹಾಗಾಗಿ ಆ ಕುರಿತು ಮಾತಿಲ್ಲ.

ನಾನಿಲ್ಲಿ  ಹುಡುಗರಿಗೆ ಅವಕಾಶ ಸಿಗುತ್ತಿಲ್ಲ  ಎಂಬ ದಾಟಿಯಲ್ಲಿ  ಮಾತನಾಡುತ್ತಿಲ್ಲ. ನೈಜವಾಗಿ ಅರ್ಹತೆ ಇದ್ದವನು ಅವಕಾಶ ಪಡದೇ ಪಡೆಯುತ್ತಾನೆ ಎಂಬುದು ನನ್ನ  ನಿಲುವು. ಹುಡುಗಿಯ ಸ್ಥಿತಿಯ ಕುರಿತು, ಹುಡುಗಿ ಬಳಕೆಯಾಗುತ್ತಿರುವ ಪರಿಯ ಕುರಿತಾಗಿ ಹೇಳುತ್ತಿರುವೆ ಅಷ್ಟೆ. ನಾವು ‘ಸ್ತ್ರೀ’ಗೆ ವಿಶೇಷ ಗೌರವ ಕೊಡುವ ಸಂಪ್ರದಾಯದವರು. ಆಕೆ ಒಂದು ಮಗುವಿಗೆ ಮೊದಲ ಗುರು. ಒಂದು ಮಗುವಿನಿಂದ ಒಂದು ಸಮಾಜ. ಹಾಗಾಗಿ ಸಮಾಜಕ್ಕೂ ಆಕೆಯೇ ಮೊದಲ ಗುರು. ಹಾಗಾಗಿ ನಮ್ಮಲ್ಲಿ  ತಾಯಿಗೆ ಪೂಜನೀಯ ಸ್ಥಾನ. ತಾಯಿಯೇ ಹೆಂಡ ಕುಡಿಯುತ್ತಾಳೆ ಎಂದರೆ, ಆ ಮನೆಯ ಪರಿಸ್ಥಿತಿಯನ್ನು  ಒಮ್ಮೆ  ಕಲ್ಪಿಸಿಕೊಂಡು ನೋಡಿ. ಆ ಮನೆಯಲ್ಲಿ  ಹುಟ್ಟುವ ಮಗು ಏನಾಗಬಹುದು ಎಂದು ಆಲೋಚಿಸಿ. ತಂದೆ ಹೆಂಡ ಕುಡಿಯುವುದು ಹಲವಾರು ಕುಟುಂಬಗಳಲ್ಲಿ  ಸಹಜ. ಗಂಡು  ಮಾಡುವುದನ್ನು ನಾನ್ಯಾಕೆ ಮಾಡಬಾರದು ಎಂದು ಈ ವಿಚಾರದಲ್ಲೂ  ವಾದಿಸುವವರಿಗೆ…ಯಾಕೆ ಮಾಡಬಾರದಾಗಿತ್ತು ಎಂಬುದು ನಿಮ್ಮ  ಮಕ್ಕಳು ಬೆಳೆದ ನಂತರ ನಿಮಗೆ ಅರಿವಾಗುತ್ತದೆ ಎಂಬುದಷ್ಟೇ  ಉತ್ತರ.

ಇನ್ನೂ ‘ಶೀಲ’ ಎಂಬುದು ಮನಸ್ಸಿಗೆ ಸಂಬಂಸಿದ್ದ  ಅಥವಾ ದೇಹಕ್ಕಾ  ಎಂಬುದು ನನಗಂತೂ ಗೊತ್ತಿಲ್ಲ. ಆದರೆ ನಮ್ಮ  ಸಮಾಜದಲ್ಲಿ  ಶೀಲ ಕೂಡ ಗಂಭೀರ ವಿಚಾರ. ಹುಡುಗರು ಯಾರ ಜತೆಗೆ ಬೇಕಾದರೂ ಮಲಗಬಹುದು, ನಾವು…ಖಂಡಿತಾ ನೀವು ಮಲಗುತ್ತೀರಾ ಎಂದಾದರೆ, ಕಾತುರತೆಯಿಂದ ಕಾದು ಕುಳಿತವರು ಬಹಳಷ್ಟು  ಮಂದಿ ಇದ್ದಾರೆ. ಚರ್ಮ ಸುಕ್ಕುಗಟ್ಟುವರೆಗೂ ನಿಮಗೆ ಸಾಕಷ್ಟು  ಅವಕಾಶವಿದೆ! ಆವತ್ತಿನ ದೇವದಾಸಿ ಪದ್ದತಿ, ಇವತ್ತು ‘ಬಾಯ್‌ಫ್ರೆಂಡ್’ ಸಂಸ್ಕೃತಿಯಾಗಿ ಬದಲಾಗಿದೆ…ಅಲ್ಲಲ್ಲ…ಹೈಟೆಕ್ ಆಗಿದೆ! ಹುಡುಗರ ಜತೆ ಸುತ್ತುವ, ಬೀದಿ ಬದಿಯಲ್ಲಿ  ಬೈಕ್ ನಿಲ್ಲಿಸಿಕೊಂಡು ‘ಲವ್’ ಎಂಬ ಹೆಸರಲ್ಲಿ  ಹರಟೆ ಹೊಡೆಯುವ ೨-೩ ಹುಡುಗಿಯರನ್ನು ಒಂದೂವರೆ ವರ್ಷಗಳ ಸುಮ್ಮನೆ ಗಮನಿಸಿ. ಆಕೆ ಕನಿಷ್ಟ  ೩ ಬಾಯ್‌ಫ್ರೆಂಡ್‌ಗಳನ್ನು ಬದಲಿಸುತ್ತಿರುತ್ತಾಳೆ. ಆಕೆ ಬದಲಿಸುತ್ತಾಳೋ ಅಥವಾ ಹುಡುಗ ಆಕೆಯನ್ನು ಬದಲಿಸುತ್ತಾನೋ ಎಂಬುದು ನನಗಂತೂ ಗೊತ್ತಿಲ್ಲ.  ಇದು ತಮಾಷೆಗೆ ಹೇಳಿದ್ದಲ್ಲ. ನಮ್ಮ ಮನೆ ಬಳಿಯಿರುವ ಹುಡುಗಿಯರ ಪಿ.ಜಿ ನೋಡಿದ ನಂತರ ನಿಮಗೆ ಈ ಪ್ರಯೋಗದ ಕುರಿತು ಹೇಳುತ್ತಿರುವೆ. ದುಡ್ಡು  ಖರ್ಚು ಮಾಡಲು ಹುಡುಗ ಸಿದ್ಧನಿದ್ದರೆ, ಹುಡುಗಿ ಸುಲಭವಾಗಿ ಸಿಗುತ್ತಾಳೆ ಎಂಬುದು ನನಗೆ ಅನ್ನಿಸಿದೆ. ವೆಶ್ಯಾ ಗೃಹಗಳಿಗೆ ಹೋಗಿ ಭಯದಲ್ಲಿ  ಮಜಾ ತೆಗೆದುಕೊಳ್ಳುವುದಕ್ಕಿಂತ, ಇದೇ  ಸುಲಭ ಎಂದು ಮಹಾನಗರಿಯ ಸಾಕಷ್ಟು  ಹುಡುಗರು ನಿರ್ಧರಿಸಿದಂತಿದೆ!

ಮನೆ ಪಕ್ಕದ ಪಿ.ಜಿ ತೋರಿಸಿದಾಗ ರೂಮಿನ ಗೆಳೆಯ ರಾಜಾರಾಮ, ನಾನಂತೂ ಕೆಲಸದಲ್ಲಿ  ಇರೋ ಹುಡುಗಿಯನ್ನ ಮದ್ವೆ ಆಗಲ್ಲ  ಅನ್ನುತ್ತಿದ್ದ. ಮಹಾನಗರಿಯ ಹುಡುಗಿಯನ್ನು ಇವತ್ತು ಸಾಕಷ್ಟು  ಪ್ರಜ್ಞಾವಂತ ಹುಡುಗರು ತಿರಸ್ಕರಿಸುವ ಮಟ್ಟಕ್ಕೆ ನಮ್ಮ  ವ್ಯವಸ್ಥೆ ಬಂದು ನಿಂತಿದೆ. ಪಟ್ಟಣ್ಣ  ಸೇರಿದ ಹುಡುಗಿಗೆ ಎಷ್ಟು  ಜನರ ಜತೆ ಸಂಬಂಧ ಇರಬಹುದು ಎಂದು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಕೆಲಸ, ಹಣದ ಅನಿವಾರ್ಯತೆ, ಸ್ವತಂತ್ರ್ಯ…ಇವೆಲ್ಲವೂ ನಿಮ್ಮ  ವೈಯಕ್ತಿಕ ವಿಚಾರ. ನಾನಿಲ್ಲಿ  ಸಮಾಜದ ಸ್ಥಿತಿಯನ್ನು ಹೇಳಿದ್ದೇನೆ ಅಷ್ಟೆ. ಹಾಸ್ಯ, ಗಂಭೀರವಾಗಿ ಲೇಖನ ಉದ್ದವಾಗಿದೆ. ನೀವು ಸಂಸ್ಕೃತಿಗೆ ಬದ್ಧರಾಗಿಯೇ ಇರಬೇಕು ಎಂಬ ಹಠ ನನ್ನದೇನಲ್ಲ. ಯಾಕೆಂದರೆ ಅಮ್ಮ  ಹೇಳಿದಂತೆ ನಾನೇನು ಈ ವರ್ಗದ ಯಾವ ಹುಡುಗಿಯನ್ನೂ ಮದ್ವೆಯಾಗಬೇಕಿಲ್ಲ. ಕಂಡವರ ಮನೆ ಹೆಣ್ಣು ಮಕ್ಕಳು ಏನಾದರೂ ನನಗೇನು ತಲೆಬಿಸಿಯಿಲ್ಲ. ಇದು ನನ್ನ ಅಂತಿಮ ನಿರ್ಧಾರ.

‘ಅಣಾ ಬೆಂಗಳೂರಿಗೆ ಬರ‍್ಲಾ, ಎಂಥಾದ್ರು ಜಾಬ್ ಇದ್ದ’ ಅಂತಾ ಊರಿನ ಹುಡುಗಿಯೊಬ್ಬಳು ಮುಗ್ಧವಾಗಿ ಕೇಳಿದ್ದಕ್ಕೆ ಇಷ್ಟೆಲ್ಲ  ಬರೆಯಬೇಕಾಯಿತು…

(ವಿ.ಸೂ:-ಮಹಾನಗರಿಯ ಹುಡುಗಿಯರೆಲ್ಲ ಹೀಗೆ ಎಂಬ ಅರ್ಥವಲ್ಲ. ಆದರೆ, ಬಹುತೇಕರು ಹೀಗಾಗುತ್ತಿದ್ದಾರೆ ಎಂಬುದನ್ನು ಈ ಲೇಖನ ಹೇಳಲು ಹೊರಟಿದೆ…)

11 comments August 11, 2009

ಅರ್ಕಾವತಿ ತಟ, ಟಿವಿ ೯, ಶಿವಪ್ರಸಾದ್…

ನೀರಿನ ಕುರಿತಾಗಿ ಜಾಗೃತಿ ಮೂಡಿಸುವ ಯತ್ನವನ್ನು  ಹಿರಿಯರಾದ ಶ್ರೀ ಪಡ್ರೆ, ರಾಧಾಕೃಷ್ಣ ಭಡ್ತಿಯವರು ದಶಕಗಳಿಂದಲೂ ಮಾಡುತ್ತಿದ್ದಾರೆ. ಅನೇಕ ಪತ್ರಿಕೆಗಳು, ಪತ್ರಕರ್ತರು ನೀರಿನ ಜಾಡು ಹಿಡಿದುಹೊರಡುವ ಮೂಲಕ ಹಿರಿಯರ ಆ ಯತ್ನಕ್ಕೆ ಜೀವ ತುಂಬುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಕಳೆದ ಒಂದೂವರೆ ವರ್ಷದಿಂದ ಕೆರೆ ಏರಿಯ ಮೇಲೆ ಓಡಾಡುತ್ತಿರುವ ಬೆಂಗಳೂರು ವಿಜಯದ ಉಸ್ತುವಾರಿ ಹಾಗೂ ಹಿರಿಯ ಸಹದ್ಯೋಗಿ ಮಿತ್ರರಾದ ಕೆರೆ ಮಂಜಣ್ಣ  ಅಲಿಯಾಸ್ ಆರ್.ಮಂಜುನಾಥ್ ಖಂಡಿತಾ ಅದೇ ಸಾಲಿಗೆ ಸೇರುತ್ತಾರೆ.

ಅರ್ಕಾವತಿ ನದಿ ತಟದಲ್ಲಿ  ಸಂಚರಿಸಿ ಬಂದಿರುವ ಮಂಜುನಾಥ್,  ಈಗ ಬ್ಲಾಗ್ ಲೋಕದಲ್ಲೂ  ವಿಹರಿಸುತ್ತಿದ್ದಾರೆ. ಅರ್ಕಾವತಿ, ಕೆರೆಗಳ ಕುರಿತಾದ ಚರ್ಚೆ, ಕೆರೆ ಅಭಿವೃದ್ಧಿ  ಪರ ನಿರ್ಣಯ ಹಾಗೂ ಕಾಮಗಾರಿಗಳ ಕುರಿತಾದ ಸುದ್ದಿಗಳನ್ನು ಬ್ಲಾಗ್‌ನಲ್ಲಿ  ಲಗತ್ತಿಸುತ್ತಿದ್ದಾರೆ. ಅಂದಹಾಗೆ, ಅರ್ಕಾವತಿ ತಟದಲ್ಲಿ ನೀವು  ಒಂದ್ಸಲ ವಾಕ್ ಹೋಗಿ ಮಂಜುನಾಥ್ ಅವರ ಪ್ರಯತ್ನಕ್ಕೊಂದು ಪ್ರತಿಕ್ರಿಯೆಯ ಬೆಂಬಲ ಸೂಚಿಸಿ ಬನ್ನಿ.

ಟಿವಿ  ೯ ವಾಹಿನಿಯನ್ನು ಬೈಯ್ಯುವವರ ಸಂಖ್ಯೆಗೇನೂ  ಕೊರತೆಯಿಲ್ಲ.  ಆದರೆ, ಒಂದು ವಿಶೇಷ ಕಾರ್ಯಕ್ರಮವನ್ನು ಟಿವಿ ೯ ಮಾಡುವಷ್ಟು  ಚೆಂದವಾಗಿ ಕನ್ನಡದ ಬೇರೆ ಸುದ್ದಿ ವಾಹಿನಿಗಳು ಮಾಡುವುದಿಲ್ಲ. ಅದಕ್ಕೆ  ಸಾಕ್ಷಿ  ಮೊನ್ನೆಯ ಕಾರ್ಗಿಲ್ ವಿಜಯೋತ್ಸವ. ಕಾರ್ಗಿಲ್ ಯುದ್ಧ  ಭೂಮಿಗೆ ಭೇಟಿಯಿತ್ತ ಬೆರಳೆಣಿಕೆ ಭಾರತೀಯ ವಾಹಿನಗಳ ಪೈಕಿ ಟಿವಿ ನೈನ್ ಕೂಡ ಒಂದು. ಆ ಇಡೀ ಸರಣಿ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಚಲನ ಚಿತ್ರ ಲೋಕದ ಅಮೃತ ಮಹೋತ್ಸವ ಸಮಯದಲ್ಲಿ  ಮಾಡಿದ ವಿಶೇಷ ಕಾರ್ಯಕ್ರಮ ಕೂಡ ತುಂಬಾ ಚೆನ್ನಾಗಿತ್ತು. ಇನ್ನು ಸುದ್ದಿಯ ವಿಷಯ…ಇಂಗ್ಲಿಷ್ ವಾಹಿನಿಗಳನ್ನು ಅವಲೋಕಿಸಿದರೆ, ಟಿವಿ ೯ ಖಂಡಿತಾ ಉತ್ತಮ ವಾಹಿನಿ. ಟಿವಿ ೯ನಲ್ಲಿ  ಪ್ರಕಟಗೊಂಡ ಸುದ್ದಿಗಳನ್ನೇ ಒಂದು ಗಂಟೆ ನಂತರ ಬಿತ್ತರಿಸುವ ಕನ್ನಡದ ಕೆಲ ಕ್ರಿಯಾಶೀಲರಿಗೆ ಹೋಲಿಸಿದರೂ, ಖಂಡಿತಾ ಚಾನೆಲ್ ೯ಕ್ಕೆ ಅಗ್ರಸ್ಥಾನ. ಕೆಲ ಸುದ್ದಿಗಳ ಕುರಿತಾಗಿ  ನನ್ನದೂ ತಕರಾರಿದೆ. ಆದರೆ, ನನಗೆ ದೃಶ್ಯ ಮಾಧ್ಯಮದ ಅನುಭವವಿಲ್ಲದ ಕಾರಣ, ಆ ಸುದ್ದಿ  ಹಾಗಿರಬೇಕಿತ್ತು, ಹೀಗಿರಬೇಕಿತ್ತು ಅಂತಾ ಪುಗ್ಸಟ್ಟೆ  ಸಲಹೆ ನೀಡುವುದಿಲ್ಲ.

ಅಂದಹಾಗೆ ಮೊನ್ನೆಯ ಕಾರ್ಗಿಲ್ ಸರಣಿ ರೂವಾರಿ ಶಿವಪ್ರಸಾದ್‌ರದ್ದು  ಬ್ಲಾಗ್ ಇದೆ ಎಂಬುದು ಕೆಲವರಿಗೆ ಗೊತ್ತಿರಬಹುದು. ಶಿವಪ್ರಸಾದರ ವಿಚಾರಧಾರೆಗಳಿಗಾಗಿ ಇಲ್ಲಿಗೊಮ್ಮೆ ಭೇಟಿ ನೀಡಿ.

ಕೆರೆ, ನೀರು, ಅಬಿವೃದ್ಧಿ  ಪರ ವಿಚಾರಗಳನ್ನು ಬರೆದ ತಕ್ಷಣ  ವ್ಯವಸ್ಥೆ  ಬದಲಾಗುತ್ತದೆ ಎನ್ನಲು ಸಾಧ್ಯವಿಲ್ಲ. ಪೋಲಿ ಸುದ್ದಿಗಳಿಗೋ, ಸೆಕ್ಸ್  ಬ್ಲಾಗ್‌ಗಳಿಗೋ ದೊರೆಯುವಷ್ಟು  ಬೆಂಬಲ ಇಂಥವುಗಳಿಗೆ ದೊರೆಯುವುದಿಲ್ಲ  ಎಂಬ ಸತ್ಯ ಬರೆಯುವವರಿಗೂ ಗೊತ್ತಿದೆ. ಆದರೆ ಇದೆಲ್ಲದರ ನಡುವೆ ಬರೆದವರಿಗೆ ಆತ್ಮ ಸಂತೃಪ್ತಿ ಸಿಗುತ್ತದೆ ಎಂಬುದಂತೂ ನಿಜ. ಅಂದಹಾಗೆ ಇಂಥವುಗಳನ್ನು ಪರಿಚಯಿಸುವುದು ನನ್ನ ಪಾಲಿಗೆ ಆತ್ಮ ಸಂತೃಪ್ತಿ ನೀಡುವ ವಿಷಯ…ಓದುವುದು ನಿಮಗೆ…?!

2 comments July 29, 2009

Previous Posts


ನೋಟೀಸ್ ಬೋರ್ಡ್

ಎಚ್ಚರಿಕೆ!! ಈ ಬ್ಲಾಗಿನ ಯಾವತ್ತೂ ಬರಹಗಳು ಕಳುವಾಗದಂತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯಲ್ಲಿ ಹರಕೆ ಹೊತ್ತುಕೊಳ್ಳಲಾಗಿದೆ!!!

ಇಡ್ಲಿ, ವಡೆ, ಚೌ-ಚೌ ಬಾತ್‌…

ಹೊಚ್ಚ ಹೊಸತು....

ಹಾಡು ಹಳೆಯದಾದರೇನು…!

ಪ್ರತಿಕ್ರಿಯಿಸಿದವರು

Iranna Shettar on ನೆಗಡಿ, ಅಪ್ಪ, ಮತ್ತೊಂದಿಷ್ಟು…
bhargav gn on ಹಳ್ಳಿ ಹುಡುಗರಿಗೆ ಮದ್ವೆಯಿಲ್…
MANOJ on ನೆಗಡಿ, ಅಪ್ಪ, ಮತ್ತೊಂದಿಷ್ಟು…
ದಿವ್ಯಾ on ಟಿಪ್ಪು ಎಕ್ಸ್‌ಪ್ರೆಸ್
ರಾಜೇಶ ನಾಯ್ಕ on ನೆಗಡಿ, ಅಪ್ಪ, ಮತ್ತೊಂದಿಷ್ಟು…

ಇಲ್ಲಿಗೂ ಒಮ್ಮೆ ಹೋಗಿ ಬನ್ನಿ...

ಇಲ್ಲಿಗೆ ವಾಕಿಂಗ್ ಬಂದವರು