ಟಿಪ್ಪು ಎಕ್ಸ್‌ಪ್ರೆಸ್

October 26, 2009 · 5 Comments

ಮೈಸೂರಿಗೆ ಹೋಗುವ ಪ್ರಯಾಣಿಕರಿಗೆ ಗಾಡಿ ನಂಬರ್ ೬೯೯೦, ಟಿಪ್ಪು ಎಕ್ಸ್‌ಪ್ರೆಸ್ ಗಾಡಿಯು ಪ್ಲಾಟ್‌ಫಾರ್ಮ್ ನಂಬರ್ ೯ಕ್ಕೆ ಶೀಘ್ರದಲ್ಲಿ ಬಂದು ಸೇರುವ ನಿರೀಕ್ಷೆಯಿದೆ. ಮೈಸೂರು ಜಾನೆವಾಲಿಯೇ…
ಕಂಪ್ಯೂಟರ್‌ನ ಆ ಹುಡುಗಿ ಅರೆಬೆಂದ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ವದರುತ್ತಲೇ ಇದ್ದಳು.

೨.೧೫ಕ್ಕೆ  ಹೊರಡಬೇಕಿದ್ದ ರೈಲು,  ಇನ್ನೂ ಬಂದಿಲ್ಲ. ಸೂಪರ್ ಎಕ್ಸ್‌ಪ್ರೆಸ್ ಅಂತೆ! ಟಿಕೆಟ್ ದರ, ಉಳಿದವುಗಳಿಗಿಂತ ೧೦ರೂಪಾಯಿ ಜಾಸ್ತಿ. ಒಂದು ದಿನವೂ  ಸಮಯಕ್ಕೆ ಸರಿಯಾಗಿ ಬಂದ ದಾಖಲೆಯೇ ಇಲ್ಲ…ಹಾಗಂತ ಮಂಡ್ಯ ಕಡೆಯ ಗೌಡರೊಬ್ಬರು ತಮ್ಮ ಅಳಲನ್ನು ನನ್ನ ಹತ್ತಿರ ಹೇಳುತ್ತಿದ್ದರು. ನನ್ನ ಮನಸ್ಸು  ಬೇರೆ ಕಡೆ ಕೇಂದ್ರಿಕೃತವಾಗಿದ್ದರೂ, ಅವರ ಅಳಲನ್ನು ಕೇಳಿದಂತೆ ನಟಿಸುತ್ತಾ ಇರುವಾಗ, ದೃಷ್ಟಿ ಮೇಲುಗಡೆ ಹಾಯಿತು.

ಹೆಂಗಸೊಬ್ಬಳು ಏನೋ ವ್ಯವಹಾರ ಕುದುರಿಸುತ್ತಿದ್ದಾಳೆ. ಗಂಡಸು ಅವಳ ಜತೆ ಮಾತಾಡುತ್ತಿದ್ದಾನೆ. ಅವಳು ‘ಐದು’ ಎಂದು ಬೆರಳಿನಲ್ಲಿ ತೋರಿಸುತ್ತಿದ್ದರೆ, ಅವ ‘ಮೂರು’ ಅನ್ನುತ್ತಿದ್ದಾನೆ.

೭-೮ ನಿಮಿಷ ಚರ್ಚೆ ನಡೆದ ನಂತರ ಅವರಿಬ್ಬರ ವಹಿವಾಟು ಮುಗಿಯಿತು. ಅವ ಮುಂದೆ ಹೋದ. ಅವಳು ಅವನ ಹಿಂದೆ…೪೦೦ ರೂಪಾಯಿಗೆ ವ್ಯಾಪಾರ ಕುದುರಿದೆ ಎಂದು ಸ್ಪಷ್ಟವಾದರೂ, ಆ ಹಣ ಎಷ್ಟು  ತಾಸಿನ ಸುಖಕ್ಕೆ  ಎಂಬುದು…

ಚುಕು ಬುಕು, ಚುಕು ಬುಕು…

ರೈಲು ಬಂದೇ ಬಿಟ್ಟಿದೆ. ಸೀಟು ಹಿಡಿಯಲು  ಜನ ಓಡುತ್ತಿದ್ದಾರೆ. ಹೆಂಗಸು, ಗಂಡಸು, ಹುಡುಗ, ಹುಡುಗಿ ಇವ್ಯಾವುದರ ಪರಿವೂ  ಅವರಿಗಿಲ್ಲ. ಜಾಗ, ಕಿಟಿಕಿ ಪಕ್ಕದ ಸೀಟು ಇವಿಷ್ಟೇ  ಅವರ  ಆಲೋಚನೆ.

ಹುಬ್ಬಳ್ಳಿಯಿಂದ  ಮೈಸೂರು ಕಡೆಗೆ ಹೋಗುವ ಗಾಡಿ ನಂಬರ್   ೬೯೯೦, ಟಿಪ್ಪು   ಎಕ್ಸ್‌ಪ್ರೆಸ್  ಗಾಡಿಯು  ಪ್ಲಾಟ್‌ಫಾರ್ಮ್ ನಂಬರ್ ೯ರಿಂದ  ೨.೧೫ಕ್ಕೆ  ಹೊರಡಲಿದೆ…

ಮೊಬೈಲ್‌ನಲ್ಲಿ  ಸಮಯ ೨.೩೦ ಎಂದು ತೋರಿಸುತ್ತಿದೆ. ನನ್ನ ಮೊಬೈಲ್‌ನ ಗಡಿಯಾರವೇ ಸರಿಯಿಲ್ಲ  ಇರಬೇಕು ಅಂದುಕೊಳ್ಳುತ್ತಾ  ಜಾಗ ಹಿಡಿದು ಗಟ್ಟಿಯಾಗಿ ಕುಳಿತೆ.  ದೃಷ್ಟಿ ,  ನಾನು ತೊಟ್ಟಿದ್ದ  ಕುರ್ತಾದ  ಕಡೆಗೆ  ಹಾದು ಹೋಯಿತು. ಕುರ್ತಾದ ಬಣ್ಣ  ಮಾಸಿದೆ. ಆದರೂ  ಎಲ್ಲೂ  ಹೊಲಿಗೆ ಬಿಟ್ಟಿಲ್ಲ. ಇನ್ನು  ಆರು ತಿಂಗಳಿಗೇನೂ ತೊಂದರೆ ಇಲ್ಲ. ಒಂದು ಕಾಲದಲ್ಲಿ   ಯಾರೋ  ತೊಟ್ಟು  ಬಿಟ್ಟಿದ್ದ  ಹಳೇ ಬಟ್ಟೆ  ಹಾಕಿಕೊಂಡು ಬದುಕುತ್ತಿದ್ದವನು, ಇವತ್ತು ನನ್ನ  ಸಂಪಾದನೆಯಲ್ಲಿ   ಸ್ವಂತ ಬಟ್ಟೆ  ತೊಡುವಷ್ಟರ  ಮಟ್ಟಿಗೆ  ಬೆಳೆದು ನಿಂತಿದ್ದೇನೆ…ಖುಷಿಯ ಭಾವ ಮನವನ್ನು  ಆವರಿಸಿತ್ತು.

‘ಏ ಪುಣ್ಯಾತ್ಮ  ಬಟ್ಟೆಗೊಂದು  ಇಸ್ತ್ರಿ  ಹಾಕುವ ಅಭ್ಯಾಸ ಮಾಡ್ಕ್ಯ ಮಾರಾಯ. ಇಲ್ಲೆ  ಅಂದ್ರೆ  ಯಾವ ಹುಡುಗಿಯೂ  ಸಿಗದಿಲ್ಲೆ  ನೋಡು  ನಿಂಗೆ  ಆಮೇಲೆ’ ಎಂಬ ಅವಳ ಹಿತವಚನ ಅದ್ಯಾಕೊ  ನೆನಪಿಗೆ  ಬಂತು.

ಬಟ್ಟೆ  ಕೊಳೆಯಾಗಲಿ, ಆಗದೇ  ಇರಲಿ  ವಾರಕ್ಕೊಂದು ಸಲ ಬಟ್ಟೆ   ತೊಳೆಯುವುದು  ಕಳೆದ ೮ ವರ್ಷಗಳಿಂದ ಅಭ್ಯಾಸವಾಗಿಬಿಟ್ಟಿದೆ. ಇನ್ನೂ  ಇಸ್ತ್ರಿ…ಎರಡೋ-ಮೂರೋ  ತಿಂಗಳಿಗೆ ಅಗಸನ ಬಳಿ ಬಟ್ಟೆ  ಕೊಟ್ಟಾಗ  ಇಸ್ತ್ರಿಯಾಗಿಯೇ ಬರುತ್ತದೆ! ಇಸ್ತ್ರಿ   ಹಾಕುವುದರಿಂದ ನನಗೇನೂ ಸಮಧಾನ ಸಿಗುವುದಿಲ್ಲ. ಹುಡುಗಿ ನೋಡುತ್ತಾಳೆಂದು  ಇಸ್ತ್ರಿ  ಹಾಕುವ ಅಭ್ಯಾಸವಂತೂ  ಇಲ್ಲವೇ ಇಲ್ಲ.

ಯಾರೂ  ಸಿಗದೇ  ಹೋದರೆ  ನೀನೇ  ಇದ್ಯಲ್ಲ   ಬಿಡು!
ಹೋಗ ನಿಂದು ಬರೇ ಇದೇ ಆತು. ಏನೋ  ಪಾಪ ಅಂತಾ ಹೇಳಿದ್ರೆ…ಈಗಿನ ಕಾಲದ ಹುಡುಗಿಯರ ಬಗ್ಗೆ  ನಿಂಗೆ ಗೊತ್ತಿಲ್ಲೆ. ಸೆಂಟು, ಬಟ್ಟೆ, ಬೈಕಿಗೆ  ಮರುಳಾಗದು ಜಾಸ್ತಿ  ಗೋತಾತ.ಹೋಗಿ, ಹೋಗಿ ಇದ್ನೆಲ್ಲ  ನಾನು ನಿನ್ನ  ಹತ್ರಾ ಹೇಳ್‌ತ್ನಲ, ನನ್ನ  ಕರ್ಮ…

ಹಲೋ  ಎಕ್ಸ್‌ಕ್ಯೂಸ್‌ಮಿ, ಸ್ವಲ್ಪ  ಆ ಕಡೆ  ಸರಿತೀರಾ?
ಏನೋ  ಆಲೋಚನೆಯಲ್ಲಿದ್ದೆ. ಇವಳ್ಯಾವಳೋ  ಬಂದಳು… ಓ ನಾನು ಕುಳಿತಿರುವುದು  ರೈಲಿನಲ್ಲಿ, ನನ್ನ  ಸ್ವಂತ ಕಾರಿನಲ್ಲಲ್ಲ  ಎಂಬುದು ಸಟಕ್ಕನೆ  ನೆನಪಾಯಿತು. ಅವಳ ಕಡೆ ತಿರುಗದೇ  ಸುಮ್ಮನೆ  ಸರಿದೆ.  ಎದುರುಗಡೆ ಕುಳಿತ್ತಿದ್ದ  ಮೂರು ಹುಡುಗರು  ಅವಳನ್ನು ಕದ್ದು ಕದ್ದು  ನೋಡುತ್ತಿದ್ದರಿಂದ , ಪಕ್ಕದಲ್ಲಿ   ಕುಳಿತ ಹುಡುಗಿ ಚೆಂದವಾಗಿದ್ದಾಳೆ  ಎಂಬುದು ಖಾತ್ರಿಯಾಯಿತು.

ಮೊದಲ  ಸಲ  ರೈಲನ್ನು  ನೋಡಿದ್ದು  ಬೀರೂರಿನಲ್ಲಿ.  ರೈಲು  ಶ್ರೀಮಂತರ ವಾಹನ ಎಂಬ ಭಾವನೆಯಿತ್ತು. ದುಡಿಮೆಗೋಸ್ಕರ  ಬೆಂಗಳೂರಿಗೆ ಬಂದ ಮೇಲೆ  ಗೊತ್ತಾಯಿತು ರೈಲೆಂಬುದು ಬಡವರ ವಾಹನ ಅಂತಾ!

ಸ್ವಾಮಿ ದೇವನೆ  ಲೋಕ ಪಾಲನೆ….
ಹಾಡು ತೀರಾ ಕಕರ್ಶವಾಗಿತ್ತು. ರೈಲು ಗಾಡಿಯಲ್ಲಿ  ಅದೆಲ್ಲ  ಮಾಮೂಲು. ನಾನಂದುಕೊಂಡಂತೆ ಅವ ಕುರುಡ.
ಛೇ, ನಾನು ನನ್ನದೇ  ಕಷ್ಟ  ಅಂದುಕೊಳ್ಳುತ್ತೇನೆ. ನನಗಿಂತ ಕಷ್ಟದಲ್ಲಿ  ಇರುವವರು  ಅದೆಷ್ಟು  ಮಂದಿ  ಇಲ್ಲಿ  ಇದ್ದಾರೆ  ಅಲ್ವಾ?  ನನ್ನ  ಕಷ್ಟಕ್ಕೆ  ನಾನು ಹೇಳಿಕೊಳ್ಳುವ ಸಮಾಧಾನವಿದು. ಅವಳನ್ನು  ಸಮಾಧಾನ ಮಾಡಲು ಬಳಸುವ ಅಸ್ತ್ರ  ಕೂಡ ಇದೆ!

ಕಣ್ಣಲ್ಲಿ  ನೀರು  ಜಿನುಗಿದಂತಾಯಿತು. ಎಷ್ಟು   ಜನರಿಗೆಂದು  ಕಣ್ಣೀರು ಇಡುವುದು? ಬೆಂಗಳೂರಿನ  ಬೀದಿ, ಬೀದಿಗಳಲ್ಲಿ  ಇಂಥ ಮಂದಿ ಸಿಗುತ್ತಾರೆ. ಕೈಯಲ್ಲಿರುವ  ಎರಡು  ಕಾಸು ಅವರ ಡಬ್ಬಿಗೆ  ಹಾಕಿ  ಸಮಾಧಾನಪಟ್ಟುಕೊಳ್ಳುವುದನ್ನು ಬಿಟ್ಟರೆ, ಮತ್ತ್ಯಾವುದೇ ಪರಿಹಾರವಿಲ್ಲ  ದೇಶದ ಈ ಸಮಸ್ಯೆಗೆ. ಹೋಟೆಲ್‌ನಲ್ಲಿ   ತಿಂಡಿ ತಿನ್ನುತ್ತಿರುವಾಗ ಬಂದು  ಕೈಯೊಡ್ಡುತ್ತಾರೆ ಕೆಲವರು. ಕರುಳು  ಕರಗಿದಂತಾಗುತ್ತದೆ.

ನಾವು ಕೆಲವೊಮ್ಮೆ,  ಕೆಲವುದಕ್ಕೋಸ್ಕರ, ಕೆಲವರೆದುರು ಕೈಯೊಡ್ಡಿ  ನಿಲ್ಲುತ್ತೇವೆ…ಪ್ರಕೃತಿಯ  ನಿಯಮವೇ  ಹಾಗಿರಬೇಕು  ಅಲ್ವಾ?

***
ಊಹುಂ, ನಿದ್ದೆ  ಬರುತ್ತಿಲ್ಲ…ಅವಳು, ಅವಳ ಬದುಕನ್ನು ಕಟ್ಟಿಕೊಳ್ಳಲಿಕ್ಕೋಸ್ಕರ ಕೈಗೆಟುಕದಷ್ಟು  ದೂರದ ಜಾಗಕ್ಕೆ  ಹಾರಿ ಹೋಗಿದ್ದಾಳೆ.

ನನಗೆ  ಬೇಜಾರಾದಾಗ  ಕಾಟ ಕೊಡಲು ಯಾರೂ ಇಲ್ಲ. ಅವಳೇ  ಹೇಳಿದಂತೆ  ಬೇರೆ  ಯಾರಾದರೂ ಸಿಗಬಹುದು. ಆದರೆ  ಪ್ರಯತ್ನ ಮಾಡಲು  ಮನಸ್ಸಾಗುತ್ತಿಲ್ಲ. ಎಷ್ಟು  ದಿನ ಅಂತಾ  ಅವಳ ಮೇಲೆ  ಅವಲಂಬಿತವಾಗುವುದು. ಒಂದಲ್ಲ  ಒಂದು ದಿನ ಅವಳು  ಗಂಡನ ಮನೆ ಸೇರುತ್ತಾಳೆ. ಎಷ್ಟಂದರೂ,  ಅತಿಯಾದ ನಿರೀಕ್ಷೆ  ಅಪಾಯ ಎಂಬ ತತ್ವದಲ್ಲಿ  ನಂಬಿಕೆ  ಇಟ್ಟವ ನಾನು!

ಚೆಂದದ ಗಾಳಿ ಬೀಸುತ್ತಿದೆ. ಮಳೆ  ಬರುವ ಎಲ್ಲ  ನಿರೀಕ್ಷೆಯೂ  ಆಗಸದಲ್ಲಿ  ಗೋಚರವಾಗುತ್ತಿದೆ. ಅಂಥದ್ದೊಂದು  ವಾತಾವರಣವನ್ನು  ಆಸ್ವಾದಿಸಲು  ಫುಟ್ ಬೋರ್ಡ್ ಮೇಲೆ  ಹೋಗಿ  ಕೂರಬೇಕು ಎಂಬುದು ತಟ್ಟನೆ  ಮನಸ್ಸಿಗೆ  ಹೊಳೆಯಿತು.

ರೈಲು ಚಾಮರಾಜನಗರ ದಾಟಿದೆ. ತಂಪು ವಾತಾವರಣ, ಹಚ್ಚ  ಹಸುರಿನ ಗದ್ದೆ, ಅಲ್ಲಲ್ಲಿ  ಸಕ್ಕರೆ ಕಬ್ಬಿನ ಬಿಳಿ ಬಿಳಿಯಾದ ಹೂವುಗಳು…ಮನೆ, ಮಲೆನಾಡು, ಬಾಲ್ಯ…ಎಲ್ಲವೂ ಒಟ್ಟೊಟ್ಟಿಗೆ ನೆನಪಾಯಿತು.

ಮೊಬೈಲ್‌ನಲ್ಲಿ   ಮೆಸೇಜ್. ರಾಘುವಿನದ್ದು. ‘ಅಣ್ಣಾ  ದೊರೆ ಎಲ್ಲಿದ್ದೆ? ಮೈಸೂರು ರೈಲನ್ನೇ  ಹತ್ತಿದ್ದೆ  ತಾನೇ?’
ಹಿಂದೊಮ್ಮೆ  ಮೈಸೂರು ಬದಲು ಕೋಲಾರದ ರೈಲುಗಾಡಿ ಹತ್ತಿ ಹೋಗಿದ್ದೆ. ಹಾಗಾಗಿ ನನ್ನ  ಕುರಿತು ಇನ್ನೂ  ಅನುಮಾನ ಅವನಿಗೆ! ಬದುಕಿನಲ್ಲಿ  ಎಷ್ಟೋ  ಸಲ  ರೈಲಲ್ಲ , ಹಳಿಯೇ ತಪ್ಪಿಹೋಗಿದೆ…

ವಿಮಾನವೊಂದು ಆಗಸದಲ್ಲಿ  ಬುರ್ ಎನ್ನುತ್ತಿತ್ತು. ರೈಲಿಗೆ  ಪ್ರತಿರ್ಸ್ಪಯಾಗಿ ಹಾರಿ ಬರುತ್ತಿದ್ದಂತಿತ್ತು. ನೋಡು-ನೋಡುತ್ತಿದ್ದಂತೆಯೇ  ವಿಮಾನ ಮುಂದಕ್ಕೆ, ರೈಲು ಹಿಂದಕ್ಕೆ. ಕಣದಲ್ಲಿ  ಉಳಿದುಕೊಳ್ಳಲಾಗದಷ್ಟು  ಹಿಂದಕ್ಕೆ. ಎಷ್ಟಂದರೂ  ರೈಲು ಬಡವರ ಪಾಲಿನ ವಾಹನ. ಹಾಗಾಗಿ  ಹಾಸಿಗೆ ಇದ್ದಷ್ಟಕ್ಕೆ  ಕಾಲು ಚಾಚಿದೆ. ಅದ್ಯಾಕೋ ಬದುಕಿನ ಅನಿವಾರ್ಯತೆ, ಅಸಹಾಯಕತೆ…ಎಲ್ಲವೂ  ನೆನಪಾಯಿತು.

ಸಟಕ್ಕನೆ ರೈಲಿಗೊಂದು ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತೆ. ಅಲ್ಲ , ಆ ಕಡೆಯಿಂದ  ಬರುವ  ಆ ರೈಲಿಗೆ  ಜಾಗಕೊಡಲು  ಇದು ನಿಂತಿದ್ದು  ಯಾಕೆ? ಬೇಕಾದರೆ  ಅದೇ  ಜಾಗ ಕೊಡುತ್ತಿತ್ತು…
ಆ ಕಡೆಯಿಂದ  ಬರುವ ರೈಲು ಕೂಡ  ಹೀಗೇ  ಆಲೋಚಿಸಿ ಹೊರಟುಬಿಟ್ಟರೆ?!

ಅಪಘಾತ, ಸಾವಿರಾರು ಜನರ ಸಾವು…
ಬದುಕಿನಲ್ಲೂ  ಎಷ್ಟೋ  ಸಲ ಹೀಗೆ  ಆಗತ್ತೆ ಅಲ್ವಾ? ಅವ ದಾರಿ ಕೊಡಲಿ  ಎಂದು ನಾನು, ನಾನು ದಾರಿ  ಬಿಡಲಿ  ಎಂದು ಅವ…ಪ್ರತಿಷ್ಠೆ…

ಆದ್ರೂ  ಇದು ‘ಟಿಪ್ಪು  ಫಾಸ್ಟ್   ಎಕ್ಸ್‌ಪ್ರೆಸ್’. ಉಳಿದವುಗಳಿಗಿಂತ ೧೦ ರೂಪಾಯಿ ಹೆಚ್ಚು  ಎಂಬ ಯಜಮಾನರ ಅಳಲು!
ಹತ್ತಿರವಿದ್ದು  ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ
ಕವಿ ಬರೆದ ಸಾಲು ನೆನಪಿಗೆ ಬಂತು. ಬಹುಶಃ,  ಕವಿ ತನ್ನ  ಸ್ವಂತ  ಅನುಭವದಿಂದ  ಈ ಸಾಲುಗಳನ್ನು  ಬರೆದಿರಬೇಕು!
***
ಮದ್ದೂರ್  ವಡೆ, ಮದ್ದೂರೊಡೆ
ಮಳೆ ಬಂದು ನಿಂತಿದೆ. ಮಣ್ಣು  ‘ಘಮ್’ ಎನ್ನುತ್ತಿದೆ. ರೈಲಿನಿಂದ ಜಿಗಿದು ಗದ್ದೆಯಲ್ಲಿ  ಕುಣಿದು-ಕುಪ್ಪಳಿಸಬೇಕು ಅನ್ನಿಸುತ್ತಿದೆ. ಹಾಗೊಮ್ಮೆ  ಜಿಗಿದುಬಿಟ್ಟರೆ  ರೈಲು ನನಗೋಸ್ಕರ  ಕಾಯುವುದಿಲ್ಲ. ನೋಡುವ ಜನ ಕೂಡ  ಇವನ್ಯಾರೋ  ಹುಚ್ಚ  ಅಂದುಕೊಳ್ಳುತ್ತಾರೆ. ಎಷ್ಟಂದರೂ  ಬಾಲ್ಯದ  ಆ ಮಜವೇ  ಬೇರೆ ಬಿಡಿ.
ಚುಕು ಬುಕು, ಚುಕು ಬುಕು…ರೈಲು  ಮದ್ದೂರು ನಿಲ್ದಾಣದಿಂದ  ಜಾಗ ಖಾಲಿ ಮಾಡಲು  ಸಜ್ಜಾಗಿತ್ತು. ಸಮಯ ಬಂದಾಗ  ಒಂದು  ನಿಲ್ದಾಣದಿಂದ  ಜಾಗ  ಖಾಲಿ ಮಾಡಲೇ ಬೇಕು. ಇನ್ನೊಂದು  ನಿಲ್ದಾಣದತ್ತ  ಹೆಜ್ಜೆ  ಹಾಕಲೇ ಬೇಕು.

ತೊಡಲು ಬಟ್ಟೆ , ನೆಮ್ಮದಿಯಾಗಿ ಮೂರು ಹೊತ್ತು  ಊಟ ಸಿಕ್ಕರೆ  ಸಾಕು, ೧೦೦ರೂಪಾಯಿ ಲೆಕ್ಕಾಚಾರ, ಕನಸುಗಳು…ಎಲ್ಲವೂ  ವಿಸ್ತಾರವಾಗುತ್ತಾ  ಹೋಗುತ್ತಿದೆ. ರೈಲಿಗೊಂದು  ಗುರಿಯಿದೆ.  ನನಗೊಂದು ಗುರಿಯಿಲ್ಲ. ಹಾಕಿಕೊಂಡ  ಗುರಿಯನ್ನು  ತಲುಪುತ್ತಾ  ಹೋದಂತೆ, ಗುರಿಯ  ವಿಸ್ತೀರ್ಣವೂ  ಹೆಚ್ಚಾಗುತ್ತಾ ಹೋಗುತ್ತದೆ. ಅದು ರೈಲು. ನಾನಿಲ್ಲಿ   “ನಾನು”!

ನಿಜ, ನಂದೂ  ಫಾಸ್ಟ್  ಎಕ್ಸ್‌ಪ್ರೆಸ್. ಕೆಲವರದ್ದು  ಪ್ಯಾಸೆಂಜರ್, ಇನ್ನು  ಕೆಲವರದ್ದು  ಸೂಪರ್ ಫಾಸ್ಟ್. ಅವರವರ  ಸಾಮರ್ಥ್ಯಕ್ಕೆ ತಕ್ಕಂತೆ  ವೇಗ  ಹೆಚ್ಚಾಗುತ್ತದೆ. ‘ಅತಿಯಾದ ವೇಗ ಅಪಘಾತಕ್ಕೆ ಕಾರಣ’ ಆ ಸಂಚಾರಿ ನಿಯಮ ನಮ್ಮ  ಬದುಕಿಗೂ ಅನ್ವಯವಾಗುತ್ತದೆ. ಹಲವು ಸಲ  ಲೆಕ್ಕಾಚಾರ  ತಪ್ಪಿ  ಎಡವಿಬೀಳುತ್ತೇವೆ. ಕೆಲವೊಮ್ಮೆ  ಏನೂ  ಲೆಕ್ಕಾಚಾರವೇ ಇಲ್ಲದೇ  ಗೆದ್ದು  ಬಿಡುತ್ತೇವೆ!

ಫುಟ್‌ಬೋರ್ಡ್  ಬೋರು  ಬಂದಿತ್ತು.  ಬ್ಯಾಗ್ ಇಟ್ಟಿದ್ದ  ಸೀಟಿನೆಡೆಗೆ ಹೋಗಿ ಕುಳಿತುಕೊಳ್ಳುವ  ಮನಸ್ಸಾಯಿತು.
ಕಾಫಿ, ಕಾಫಿ….ದೋಸೆ, ದೋಸೆ…

ಅಬ್ಬ  ಅದೆಷ್ಟು  ಹುಡುಗರು…ಇನ್ನೊಬ್ಬರ  ಹೊಟ್ಟೆ  ತುಂಬಿಸುವ ಮೂಲಕ  ತಮ್ಮ  ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ಅವರು ಜೀವನವನ್ನೆಲ್ಲ  ರೈಲು ಗಾಡಿಯಲ್ಲೇ  ಕಳೆದುಬಿಡುತ್ತಾರೆ. ಅಲ್ಲಿ  ಸಿಗುವ ಮೂರು ಕಾಸನ್ನೇ  ಆಶ್ರಯಿಸಿಕೊಂಡು  ಬದುಕುತ್ತಾರೆ. ಅವರಿಗೆ  ಯಾವುದೇ  ಕನಸುಗಳೇ  ಇಲ್ಲವಿರಬೇಕು. ಅಥವಾ ಇರುವಷ್ಟಕ್ಕೆ ತೃಪ್ತಿಪಟ್ಟುಕೊಂಡು  ಬದುಕುವ ಮನೋಭಾವದವರು ಅವರಾಗಿರಬೇಕು!

ಮತ್ತೆ  ಗಕ್ಕನೆ  ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತಾ ಅಕ್ಕಪಕ್ಕದವರು ಮಾತಾಡುತ್ತಿದ್ದಾರೆ. ಈ ರೈಲಿಗೆ ‘ಸ್ವಾಭಿಮಾನ’ ಎಂಬುದೇ ಇಲ್ಲ. ಸೂಪರ್ ಫಾಸ್ಟ್   ಎಕ್ಸ್‌ಪ್ರೆಸ್, ಅದು ಕೂಡ ಟಿಪ್ಪು  ಎಕ್ಸ್‌ಪ್ರೆಸ್! ಟಿಪ್ಪುವಿಗೆ  ಅವಮಾನ  ಮಾಡಲಿಕ್ಕೋಸ್ಕರವೇ  ಸೃಷ್ಟಿಯಾಗಿರುವ ರೈಲು ಗಾಡಿಯಿದು. ಆ  ಸಲವೂ  ಕ್ರಾಸಿಂಗ್ ಅಂತಾ ಮತ್ತೊಂದು ರೈಲಿಗೆ ದಾರಿ ಬಿಟ್ಟು  ಕೊಟ್ಟಿತ್ತು. ಈ ಸಲವೂ…

ಸ್ವಾಭಿಮಾನವಿಲ್ಲದ  ಗಾಡಿ ಎಂದು ಬೈದುಕೊಳ್ಳುತ್ತ  ಕೆಳಗಿಳಿದರೆ  ನಾಗನಹಳ್ಳಿ  ಅಂತಾ ಬೋರ್ಡ್ ಕಾಣುತಿತ್ತು.  ನದಿಯೊಂದು ಹರಿಯುತ್ತಿದೆ. ತುಂಬಾ ಖುಷಿಯಾಯಿತು. ನದಿ  ದಡದ  ಮೇಲೆ ಹೋಗಿ  ಸ್ವಲ್ಪ  ಹೊತ್ತು  ಕುಳಿತೆ.

ನದಿ, ಬೆಟ್ಟ , ಗುಡ್ಡ….ಮಲೆನಾಡಿನಲ್ಲಿ  ಬದುಕಿದವರಿಗೆಲ್ಲ  ಇದರ ಸೊಬಗು ಗೊತ್ತಾಗುತ್ತದೆ. ಬೆಂಗಳೂರಿನ ಕೆಲ ಮಂದಿಗೆ ಬದುಕಿನ  ಬೇಸರ ಕಳೆಯಲು ಪಬ್, ಬಾರ್, ವೇಶ್ಯಾವಾಟಿಕೆ ಗೃಹಗಳಿರುವಂತೆ ಮಲೆನಾಡಿನಲ್ಲಿ  ಪ್ರಕೃತಿ ಮಾತೆಯ ಸೊಬಗಿದೆ.

ನಾನೂರಕ್ಕೆ  ವ್ಯಾಪಾರ ಕುದುರಿಸಿಕೊಂಡ ಹೋದ  ಆಕೆ  ನೆನಪಾದಳು. ಅಬ್ಬ  ಎಂಥಾ  ದುಸ್ತರವಾದ ಬದುಕದು. ನಿತ್ಯವೂ ದುಡ್ಡು  ಕೊಡುವ ಯಾರ ಜತೆಗೋ…

ನನಗೆ  ದುಸ್ತರ ಅನ್ನಿಸುವುದು ಅವಳಿಗೆ ಮಾಮೂಲು. ನನ್ನದು ಅವಳಿಗೆ ದುಸ್ತರ ಅನ್ನಿಸಬಹುದು…
ಚುಕು ಬುಕು…ತಿರುಪತಿ  ಎಕ್ಸ್‌ಪ್ರೆಸ್…

ಟಿಪ್ಪು  ಸೂಪರ್ ಫಾಸ್ಟ್   ಎಕ್ಸ್‌ಪ್ರೆಸ್  ಎದುರು  ದರ್ಪದಿಂದ  ಹೋಗುತ್ತಿದ್ದಾಗ,  ‘ಕ್ರಾಸಿಂಗ್’ ಎಂಬ ನೆಪದಲ್ಲಿ   ಆ ರೈಲು ಗಾಡಿಯನ್ನು  ಮೆರೆದಾಡಲು ಬಿಟ್ಟ  ಟಿಪ್ಪುವಿನ  ಮೇಲೆ ಕೋಪ  ಬರುತ್ತಿತ್ತು.

ಚುಕು ಬುಕು…
ನನ್ನ ಈ ಆಲೋಚನೆಗಳ ಯಾವ ಪರಿವೂ ಇಲ್ಲದಂತೆ ‘ಟಿಪ್ಪು  ಎಕ್ಸ್‌ಪ್ರೆಸ್’ ಎಂಬ ರೈಲು ಗಾಡಿ ತನ್ನ  ಪ್ರಯಾಣ ಮುಂದುವರಿಸಿತ್ತು. ಕಣ್ಣು  ಮುಚ್ಚಿ  ಬಿಡುವುದರೊಳಗೆ ಮೈಸೂರು  ರೈಲ್ವೇ  ನಿಲ್ದಾಣ ಬಂದುಬಿಟ್ಟಿದೆ.

ಅಂದಹಾಗೆ  ಅವಳು?!
ಬದುಕಿನ ಪ್ರಯಾಣದಲ್ಲಿದ್ದಾಳೆ. ಫೋನ್, ಇ-ಮೇಲ್ ಸಂದೇಶವಿಲ್ಲದೇ  ೨-೩ವಾರವೇ ಕಳೆದಿದೆ. ಅವಳ ಪ್ರಯಾಣಕ್ಕೆ  ನಾನೇ ದಾರಿ ಬಿಟ್ಟಿದ್ದೇನೆ. ಯಾಕೆಂದರೆ ಅವಳನ್ನು ಅಡ್ಡಗಟ್ಟುವ  ಯಾವ ಹಕ್ಕು  ನನಗಿಲ್ಲ.  ಒಮ್ಮೆ  ಹಠ  ಹಿಡಿದು ಅಡ್ಡಗಟ್ಟಿದರೆ?
ಅಪಘಾತ, ಸಾವು, ನೋವು…

ಮೌನವಾಗಿ  ದಾರಿ ಬಿಟ್ಟುಕೊಟ್ಟ   ಟಿಪ್ಪುವಿಗಿಂತ  ಭಿನ್ನವಾಗೇನಿಲ್ಲ   ನನ್ನ  ಕಥೆ ಕೂಡ!

(ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಕಥೆ)

→ 5 CommentsCategories: ಕಥೆ-ವ್ಯಥೆ!

ಕೂಡೋ, ಕಳೆಯುವ ಲೆಕ್ಕದಲ್ಲಿ…

October 3, 2009 · 3 Comments

ಈವರೆಗೆ ಬದುಕಿನಲ್ಲಿ  ಸಿಕ್ಕವರನ್ನು, ಕಳೆದುಕೊಂಡವರನ್ನು ನಿನ್ನೆ ಸುಮ್ಮನೆ ಲೆಕ್ಕ ಹಾಕುತ್ತಿದೆ. ಈ ಜೀವನ ಒಂತರಹ ಕೂಡುವ, ಕಳೆಯುವ ಲೆಕ್ಕದಂತೆ ಅನ್ನಿಸತೊಡಗಿದೆ. ಒಂದಷ್ಟು  ಮಂದಿಯನ್ನು  ಗಳಿಸುತ್ತೇವೆ, ಅದರ ಬೆನ್ನಲ್ಲೇ  ಮತ್ತೊಂದಷ್ಟು  ಮಂದಿಯನ್ನು ಕಳೆದುಕೊಳ್ಳುತ್ತೇವೆ. ಇಡೀ ಪ್ರಯಾಣದುದ್ದಕ್ಕೂ  ಈ ಪ್ರಕ್ರಿಯೆ ಮರುಕಳಿಸತ್ತೆ. ಹಾಗಂತ ಇಲ್ಲಿ  ಶಾಶ್ವತವಾಗಿ ಜತೆಗುಳಿಯುವವರು ತೀರಾ ವಿರಳ. ಬೇರೆಯವರ ಕಥೆ ಹಾಳಾಗಲಿ, ನಮ್ಮ  ಚಿಂತನೆ, ನಿಲುವುಗಳೇ ಶಾಶ್ವತವಾಗಿ ನಮ್ಮ  ಜತೆಗೆ ಉಳಿಯುವುದಿಲ್ಲ! ನನ್ನ ಇಂದಿನ ಜೀವನದ ಪಥ, ೨ ವರ್ಷ ಕಳೆಯುವುದರೊಳಗೆ ಬದಲಾಗಿರತ್ತೆ. ಕಾಲ, ಪರಿಸ್ಥಿತಿಗೆ  ಅನುಗುಣವಾಗಿ ನಾವು ಸಾಕಷ್ಟು  ಸಲ ಬದಲಾಗುತ್ತೇವೆ ಅಲ್ವಾ?!

‘ಬದಲಾವಣೆ ಜಗದ ನಿಯಮ’ ಹಾಗಂತ ಭಗವಾನ್ ಶ್ರೀಕೃಷ್ಣ  ಹೇಳಿಹೋಗಿದ್ದಾನಂತೆ. ಆ ಕಾರಣಕ್ಕಾಗಿಯೇ ನಾವು ಆಗಾಗ ಬದಲಾಗುತ್ತಿರುತ್ತೇವೆ. ಈ ಬದಲಾವಣೆಗೆ ಕೆಲವೊಮ್ಮೆ  ಕಾರಣ ಸಿಗತ್ತೆ. ಇನ್ನು ಹಲವು ಸಲ ಕಾರಣ ಸೃಷ್ಟಿಸಿಕೊಂಡು ಬದಲಾಗುತ್ತೇವೆ! ಜತೆಗಿದ್ದವರು ದೂರವಾಗುತ್ತಾರೆ. ದೂರವಿದ್ದವರು ಕಾರಣವಿಲ್ಲದೆ ಹತ್ತಿರವಾಗಿಬಿಡುತ್ತಾರೆ. ಬೀದಿಯಲ್ಲಿ  ನಿಂತು ಜಗಳ ಆಡಿಕೊಂಡವರು ಅನಿರೀಕ್ಷಿತವಾಗಿ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುವಷ್ಟು  ಸ್ನೇಹಿತರಾಗಿ ಬಿಡುತ್ತಾರೆ…ಅಬ್ಬಬ್ಬ  ಇಲ್ಲಿ  ಯಾವುದನ್ನೂ  ನಿರೀಕ್ಷಿಸಲು ಸಾಧ್ಯವೇ ಇಲ್ಲ.

ಒಂದನೇ ತರಗತಿಯಲ್ಲಿ  ಬೆಂಚಿನ ಸಹಪಾಠಿಗಳಾಗಿದ್ದವರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ  ಅಂತಾನೇ ಗೊತ್ತಿಲ್ಲ. ಅದರ ಕಥೆ ಒತ್ತಟ್ಟಿಗಿರಲಿ, ಮೊನ್ನೆ, ಮೊನ್ನೆ ಡಿಗ್ರಿಯಲ್ಲಿ  ಜತೆಗೆ ಕುಳಿತ್ತಿದ್ದ  ಮಿತ್ರರೂ ಇಂದು ಅಪರಿಚಿತರು. ಯಾವಾಗಲೋ ಒಂದು ಸಲ ಸಿಗುತ್ತಾರೆ. ನಗುತ್ತಾರೆ, ಮಾತಾಡುತ್ತಾರೆ…ಅಲ್ಲಿಗೆ ಮುಗಿಯಿತು ಆ ಅಧ್ಯಾಯ. ಅವನ/ಅವಳ ಪರಿಚಯದಿಂದ ನನಗೇನು ಲಾಭ ಎಂದು  ಆಲೋಚಿಸುವ ಮಟ್ಟಿಗೆ  ಇವತ್ತಿನ ಸಮಾಜ ಬದಲಾಗಿ ಬಿಟ್ಟಿದೆ ಅಂದ್ರೆ ಬಹುಶಃ ತಪ್ಪಾಗಲಾರದು. ಯಾರಾದರೂ ಸುಮ್ಮನೆ  ಮಾತಾಡಿಸಿದರೂ ಅನುಮಾನ. ಇವ ನನ್ನಿಂದ ಯಾವುದೋ ಕೆಲಸ ಬಯಸುತ್ತಿದ್ದಾನೆ ಎಂಬ ಭಾವನೆ! ಅದಕ್ಕೆ ಸರಿಯಾಗಿ ಮಾತಾಡಿಸುವ ಮಂದಿಯೂ ಅಷ್ಟಕ್ಕೆ ಸಿಮೀತರಾಗಿಬಿಟ್ಟಿದ್ದಾರೆ.

ಹುಟ್ಟಿನ ಹಿಂದೆ ಗೊತ್ತಿಲ್ಲ, ಸಾವಿನ ಮುಂದೆ ತಿಳಿದಿಲ್ಲ. ಬದುಕುವ ಮೂರು ದಿನಕ್ಕೆ ಒಂದೇ ಗಲ್ಲಿಯಲ್ಲಿ  ಹತ್ತೆಂಟು ಬಣ. ನೂರೆಂಟು ನಾಯಕರು. ‘ನನ್ನದೇನು ಕಮ್ಮಿ’ ಎನ್ನುವವರು. ಅದರಿಂದ ಸಾದಿಸುವುದು ಏನನ್ನೂ  ಎಂದು ಅವರಿಗೂ ಗೊತ್ತಿಲ್ಲ! ಆದ್ರೂ  ಅವರದ್ದೊಂದು ಬಣ.  ಕುರ್ಚಿಬೇಕು. ಅಕಾರ ಬೇಕು. ಜೈಕಾರ ಹಾಕುವವರಿರಬೇಕು. ಗಾಳಿ ಬೀಸುವ ಮಂದಿ ಜತೆಗಿರಬೇಕು…ಮನುಷ್ಯನ ಈ ಬಯಕೆಗಳಿಗೊಂದು ಸಲಾಮ್ ಅನ್ನಲ್ಲೇ  ಬೇಕು. ಒಬ್ಬೊಬ್ಬರಿಗೆ ಒಂದೊಂದು ತರಹದ ಬಯಕೆ. ಹಾಗಾಗಿ ಮೇಲಿನವರ ಬಯಕೆಗಳನ್ನು ಯಾವ ಕಾರಣದಿಂದಲೂ ತಪ್ಪು  ಅನ್ನಲು ಸಾಧ್ಯವಿಲ್ಲ  ಅಥವಾ  ಅವರೆಲ್ಲ  ನನ್ನ ಚಿಂತನೆಯ ಮೂಗಿನ ನೇರಕ್ಕೆ ಬದುಕಬೇಕು ಎಂದು ಆಶಿಸುವುದು ಸರಿಯಿಲ್ಲ. ಯಾಕಂದ್ರೆ ಇಂಥದನ್ನು ಬರೆದು ನಾನು ಏನನ್ನು ಸಾದಿಸುತ್ತೇನೆ ಎಂದು ನನಗೂ ಗೊತ್ತಿಲ್ಲ!

ಈ ಸಮಾಜದಲ್ಲಿ  ಪರಿಹರಿಸಲು ಸಾಧ್ಯವೇ ಇಲ್ಲದ ಒಂದಷ್ಟು  ಸಮಸ್ಯೆಗಳಿವೆ. ‘ಇದು ಸಮಸ್ಯೆಯೇ ಅಲ್ಲ’ ಎಂದು ನಾವು ಭಾವಿಸುಕೊಳ್ಳುವುದೇ ಅದಕ್ಕೆ ಉತ್ತಮ ಪರಿಹಾರ. ಸಮಸ್ಯೆಯೊಂದನ್ನು  ನಾವು ಗಂಭೀರ ಎಂದು ಭಾವಿಸಿದರೆ ಮಾತ್ರ ತಾನೇ ಅದು ಗಂಭೀರವಾಗವುದು?!
ಕೋಡ್ಸರ ಅನಾಮಿಕ ಬ್ಲಾಗ್ ಮಾಡುತ್ತಾನೆ, ಬೇರೆಯವರನ್ನು ಪುಗಸಟ್ಟೆ  ಬೈಯ್ಯುತ್ತಾನೆ ಎಂದು ಭಾವಿಸಿ ಕುಳಿತವರು ಇವತ್ತಿಗೂ ಸಾಕಷ್ಟು  ಮಂದಿ ಇದ್ದಾರೆ. ಅವರಲ್ಲಿ  ಹಲವರಿಗೆ ಸಮಜಾಯಿಷಿ ಕೊಟ್ಟು  ಸಾಕಾಗಿದೆ. ನಾನು ಬೇರೆ ಯಾರೋ ಹಿರಿಯರನ್ನು ಅನಾಮಿಕವಾಗಿ/ ಹೆಸರು ಹೇಳಿಕೊಂಡು ಬೈಯ್ಯುವುದರಿಂದ, ಅವರ ಒಂದು ಕೂದಲು ಅಲ್ಲಾಡುವುದಿಲ್ಲ  ಎಂದು ೪ ವರ್ಷಗಳ ಹಿಂದೆಯೇ ಅರ್ಥವಾಗಿದೆ. ನಾನಲ್ಲ, ರಾಜ್ಯದ ಮುಖ್ಯಮಂತ್ರಿಗಳಿಂದಲೂ ಕೆಲವರ ವಿರುದ್ಧ  ಏನೂ ಹರಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ  ಬೈಗುಳ ಹಲವರ ಪಾಲಿಗೆ ಹೊಗಳಿಕೆ! ಇವಿಷ್ಟು  ಎಲ್ಲರಿಗೂ ಅರ್ಥವಾದರೆ ಬಹುಶಃ ಅನಾಮಿಕ ಬ್ಲಾಗ್‌ಗಳ ಹಾವಳಿ ಇರುತ್ತಿರಲಿಲ್ಲವೇನೋ. ಹೆಸರು ಯಾರದ್ದೋ, ಬಸಿರು ಯಾರದ್ದೋ ಎಂಬಂತೆ ಯಾರೋ ಮಾಡುವ ತಪ್ಪಿಗೆ  ಅನುಮಾನಕ್ಕೆ/ಅವಮಾನಕ್ಕೆ ಗುರಿಯಾಗುವವರು ಮತ್ತ್ಯಾರೋ. ಇಂಥ ಅನುಭವ ಬದುಕಿನಲ್ಲಿ  ಸಾಕಷ್ಟು  ಸಲ ಆಗುತ್ತಿರತ್ತೆ. ಹಾಗಾಗಿ ಇದು ಕೂಡ ನನ್ನ ಪಾಲಿಗೆ ಸಮಸ್ಯೆಯಲ್ಲ…!

ಕೆಲವೊಮ್ಮೆ  ಎಲ್ಲವೂ ಬೇಸರ ತರಿಸುತ್ತದೆ. ಯಾವುದೂ ಬೇಡ ಅನ್ನಿಸುತ್ತದೆ. ಅವೆಲ್ಲ ಆ ಕ್ಷಣಕ್ಕೆ ಸೀಮಿತ. ಯಾವುದನ್ನೂ ಬೇಡ ಎಂದು ಶಾಶ್ವತವಾಗಿ ಕೈಕಟ್ಟಿ  ಕೂರಲು ಸಾಧ್ಯವಿಲ್ಲ. ಕಂಡ ಕನಸುಗಳು ನನಸಾದ ಹೊರತೂ ಸಮಾಧಾನವಿಲ್ಲ. ಅಂದುಕೊಂಡಿದ್ದು  ಸಿಗುವವರೆಗೂ ತೃಪ್ತಿಯಿಲ್ಲ. ಹಾಗಾಗಿ ಕ್ಷಣಾರ್ಧದಲ್ಲಿ  ಬದುಕು ಮಾಮೂಲಿ ಹಾದಿಯನ್ನು ಹಿಡಿದುಬಿಡುತ್ತದೆ….ಇಂಥ ಬದುಕಿನ ಪಯಣಕ್ಕೊಂದು ಜೈ ಹೋ…!!!

→ 3 CommentsCategories: ಕಥೆ-ವ್ಯಥೆ!

ನಾನು ಲೈನು ಹಾಕಿದ ಹುಡುಗಿ!

September 23, 2009 · 7 Comments

ಬರೆದಿದ್ದೇ, ಬರೆದು, ಬರೆದು ಬೇಜಾರಾಗಿದೆ. ಹೊಸತೇನಾದ್ರು…ಅಂತಾ ಆಲೋಚಿಸುತ್ತಿದ್ದಾಗ ಸಿಕ್ಕವಳು ಲೈನು ಹಾಕಿದ ಆ ಹುಡುಗಿ! ಇವಳು ವಾಸ್ತವವೋ, ಕಲ್ಪನೆಯೋ ಅಂತಾ ಮಾತ್ರ ಯಾವ ಕಾರಣಕ್ಕೂ ಕೇಳಬೇಡಿ! ನಾನು ಲೈನು ಹೊಡೆಯುತ್ತಿದೆ ಎಂದರೆ, ನನ್ನ  ಶೇ.೯೦ರಷ್ಟು  ಮಿತ್ರರು ನಂಬಲಿಕ್ಕಿಲ್ಲ. ಆ ಪರಿ ಒಳ್ಳೆ  ಹುಡುಗ  ಈ ಕೋಡ್ಸರ!

ನನ್ನ ಪಾಲಿಗೆ ಡಿಗ್ರಿಯ ಮೂರು ವರ್ಷದ ಬದುಕು ಸಿಕ್ಕಾಪಟ್ಟೆ  ಮಸ್ತ್. ಓದುವುದೊಂದನ್ನು ಬಿಟ್ಟು  ಉಳಿದಿದ್ದೆಲ್ಲಾ  ಮಾಡಿದ್ದೇನೆ! ಮಠ, ಕಾಲೇಜು, ದುಡಿಮೆ…ಇವಿಷ್ಟೆ  ನನ್ನ  ಆಗಿನ ಪ್ರಪಂಚ. ನನ್ನದೇ ದುಡಿಮೆ. ನನ್ನದೇ ಖರ್ಚು. ಹಾಗಾಗಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಉಡುಪಿಯಲ್ಲಿ  ಓದುವ ಬಹುತೇಕರ ಹಣೆಬರಹ ಹೀಗೆ.  ಹಾಗಂತ, ಕಾರಿಡಾರ್‌ನಲ್ಲಿ  ನಿಂತು ಹುಡುಗಿಯರನ್ನು ಚುಡಾಯಿಸುವವರ ಗುಂಪಿನಲ್ಲಿ, ಪುಗಸಟ್ಟೆ  ಜಗಳ ಆಡಿಕೊಳ್ಳುವವರ ಗ್ಯಾಂಗ್‌ನಲ್ಲಿ, ಚಾಲುಕ್ಯಕ್ಕೆ ಹೋಗಿ ಸಿಗರೇಟು ಎಳೆಯುವ, ಪೂಲ್‌ಗೆ ಹೋಗಿ ಸ್ನೂಕರ್ ಆಡುವವರ ತಂಡದಲ್ಲಿ…ಊಹುಂ, ಎಲ್ಲೂ  ಕಾಣಿಸಿಕೊಳ್ಳಲಿಲ್ಲ.

ಗೋವಿಂದ ಕಲ್ಯಾಣ ಮಂಟಪ, ಶಾಮಿಲಿ, ಅಂಬಲ್ಪಾಡಿ ದೇವಸ್ಥಾನ…ಎಲ್ಲೇ  ಬಡಿಸುವುದು ಇದ್ದರೂ  ನಾವೊಂದಿಷ್ಟು  ಮಠದ ಹುಡುಗರು ಹಾಜರ್. ಅದಕ್ಕೆ ತಕ್ಕಂತೆ ಬೆಳಿಗ್ಗೆ  ಅಂತಿಮ ಅವ ಸಂಸ್ಕೃತ, ಮಧ್ಯಾಹ್ನ ಮೊದಲನೆ ಪಿರಿಯಡ್ ಇಂಗ್ಲೀಷ್. ಈ ಹುಡುಗರು ಕ್ಲಾಸಿಗೆ ಬಂಕ್ ಹಾಕಿ ಬಡಿಸಲು ಹೋಗುತ್ತಾರೆ ಅನ್ನೋದು ಪಿಪಿಸಿಯ ಎಲ್ಲಾ  ಅಧ್ಯಾಪಕರಿಗೂ ಗೊತ್ತಿತ್ತು. ಇನ್ನೂ ಮಜ ಅಂದ್ರೆ, ಕೆಲವು ಸಲ ಪಂಕ್ತಿ ನಡುವೆ ಲೆಕ್ಚರ್‌ಗಳು ಪ್ರತ್ಯಕ್ಷ! ಮೊದಲೆಲ್ಲ  ಭಯ ಆಗ್ತಿತ್ತು. ಆಮೇಲೆ ಮಾಮೂಲು. ಶೇ.೬೦ರಷ್ಟು  ಹಾಜರಿ ಉಳಿಸಿಕೊಂಡು ಉಳಿದೆಲ್ಲ  ತರಗತಿಗಳಿಗೂ ಬಂಕ್! ಸದಾ ನನಗೆ ಬೈಯ್ಯುವ ಮ್ಯಾಥ್ಸ್  ರಾಘು ಸರ್, ನನ್ನನ್ನು  ತಿಗಣೆಯಂತೆ ಕಾಡಿದ ಸೋಮಯಾಜಿ ಸರ್‌ಗಳ ಕಣ್ಣಿಗೇ ಬೀಳುತ್ತಿದೆ.

ಒಂತರಹ ಮಜವಾದ ಬದುಕು ಅದು. ಎಲ್ಲಾ  ಪ್ರಾಧ್ಯಾಪಕರು ನನಗೆ ಸಿಕ್ಕಾಪಟ್ಟೆ  ಬೈಯ್ಯುತ್ತಿದ್ದರು. ಸಾಮರ್ಥ್ಯಕ್ಕೆ ತಕ್ಕಷ್ಟು  ಅಂಕ ತೆಗೆಯಲ್ಲ, ಸರಿಯಾಗಿ ಓದಲ್ಲ  ಎಂಬುದಷ್ಟೆ  ಕಾರಣ. ೫ನೇ ಕ್ಲಾಸಿನಿಂದ ಸ್ವಂತದ ಖರ್ಚಿಗೆ ದುಡಿಕೊಳ್ಳುವುದು ರೂಡಿಯಾಗಿಬಿಟ್ಟಿತ್ತು. ಅದಕ್ಕಿಂತ ಹೆಚ್ಚಾಗಿ ದುಡಿಕೊಳ್ಳುವುದು ನನ್ನ ಪಾಲಿಗೆ ಅನಿವಾರ್ಯವಾಗಿತ್ತು. ಲಕ್ಷಗಟ್ಟಲೆ ಇನ್‌ವೆಸ್ಟ್  ಮಾಡಿ ಡಾಕ್ಟರ್, ಎಂಜಿನಿಯರ್ ಆದ್ರೆ, ೨೩ ವರ್ಷ ಕಷ್ಟಪಟ್ಟರೆ ಉಳಿದ ಬದುಕು ಸಂತೋಷವಾಗಿರತ್ತೆ ಅನ್ನೋದು ನಿಜ. ಆದ್ರೆ, ನನ್ನ  ಪಾಲಿಗೆ ಹಣಕ್ಕಿಂತ ಅನುಭವ, ವ್ಯಕ್ತಿತ್ವಗಳೇ ಬದುಕು. ಖಾಲಿ ಹಣ  ಸಂಪಾದನೆಗೆ ಎಂಜಿನಿಯರಿಂಗ್ ಪದವಿಯೇ ಬೇಕು ಅಂತೇನೂ ಇಲ್ಲ. ಇರೋ ಮೂರು ದಿನದಲ್ಲಿ  ಸಾಧ್ಯವಾದಷ್ಟು  ಹೊಸ ಕ್ಷೇತ್ರಗಳನ್ನು ಪರಿಚಯ ಮಾಡಿಕೊಳ್ಳಬೇಕು ಅನ್ನೋ ಹಂಬಲ. ಆ ಕಾರಣಕ್ಕಾಗಿಯೇ ಪತ್ರಿಕೋದ್ಯಮ ಆಯ್ದುಕೊಂಡಿದ್ದು. ಕೆಲಸವಿಲ್ಲದೆ, ಕೆಲಸವಿದ್ದರೂ ಸಂಬಳವಿಲ್ಲದೆ, ಸಂಬಳವಿದ್ದರೂ  ಬಾಡಿಗೆ ಕಟ್ಟಲು ಸಾಕಾಗದ ಒಂದು ವರ್ಷದ ನರಯಾತನೆಯ ನಡುವೆಯೂ ಈ ವೃತ್ತಿಯಲ್ಲಿ  ಉಳಿದುಕೊಂಡಿದ್ದು. ನಮ್ಮ ಮನೆಯವರಿಗೆ ನನ್ನ ಆಯ್ಕೆ ಇವತ್ತಿಗೂ ಇಷ್ಟವಿಲ್ಲ.

ಲವ್, ಫೀಲು…ಆ ಕಾಲದಲ್ಲಿ  ನನ್ನ  ಬದುಕಿನ ಕುರಿತು ನನಗೆ ಭರವಸೆಯಿರಲಿಲ್ಲ. ನನ್ನ ಬಗಲಿಗೆ ಇನ್ನೊಬ್ಬಳನ್ನು ಕಟ್ಟಿಕೊಂಡು ಅವಳ ಕನಸು ಕಸಿದುಕೊಳ್ಳಲು…ಈಗಲೂ ಸುತರಾಂ ಇಷ್ಟವಿಲ್ಲ. ಹಾಗಾಗಿಯೇ ನಾನು ಹುಡುಗಿ ಅನ್ನೋ ವಿಷಯದಿಂದ ಸ್ವಲ್ಪ  ದೂರ. ಈ ವಿಷಯದಲ್ಲಿ  ಅನೇಕ ಗೆಳೆಯರು ನನ್ನನ್ನು ಆಡಿಕೊಳ್ಳುತ್ತಾರೆ. ನನಗೆ ಒಂಚೂರು ಬೇಜಾರಿಲ್ಲ. ಅದಕ್ಕಿಂತ ಹೆಚ್ಚಾಗಿ ಹುಡುಗಿ, ಚೆಂದ, ಫೀಲಿಂಗು…ಇವೆಲ್ಲ  ಅವರವರ ಅಭಿರುಚಿ. ಈಗ ಇಷ್ಟವಾದವಳು ಇನ್ನೊಂದೆರಡು ವರ್ಷದ ನಂತರ ಇಷ್ಟವಾಗುತ್ತಾಳೆ ಅನ್ನಲು ಸಾಧ್ಯವಿಲ್ಲ. ಕೆಲ ಸಲ ಕೆಲವರು ಕಾರಣವಿಲ್ಲದೆಯೂ ಇಷ್ಟವಾಗಬಹುದು.

ಆದ್ರೂ ನೋಟ್ಸ್ ವಿಷಯಕ್ಕೆ ಹುಡುಗಿಯರೇ ಬೇಕು! ಇಂಟರ್‌ನಲ್‌ಗೆ ಮೂರುದಿನ ಮುಂಚೆ ನರ್ಮದಾ, ರಂಜನಿ, ರಂಜಿತಾ…ಮೂವರಲ್ಲಿ  ಯಾರಾದ್ರೂ ನೋಟ್ಸ್  ಕೊಟ್ಟಿಲ್ಲ  ಅಂದ್ರೆ ನಮ್ಮ  ಕಥೆ ಡಮಾರ್! ನಮ್ಮ  ಕ್ಲಾಸಲ್ಲಿ  ೨೪ ಹುಡುಗರು. ೮೫ ಹುಡುಗಿಯರು. ಹಾಗಾಗಿ ಅದೆಷ್ಟೊ  ಹುಡುಗಿಯರ ಹೆಸರು, ಪರಿಚಯ ಕಡೆವರೆಗೂ ಆಗಲಿಲ್ಲ. ನನಗೆ ಚೆನ್ನಾಗಿ ಪರಿಚಯವಿದ್ದದ್ದು, ನಾನು ಸರಿಯಾಗಿ ಮಾತಾಡಿದ್ದು ಈ ಮೂರು ಹುಡುಗಿಯರ ಹತ್ತಿರ ಮಾತ್ರ. ಈಗ ನರ್ಮದಾ ಮಾತ್ರ ಕಾಂಟ್ಯಾಕ್ಟ್‌ನಲ್ಲಿ  ಇದಾಳೆ. ಉಳಿದಿಬ್ಬರಿಗೆ ಮದ್ವೆ ಆಗಿ, ಮಕ್ಕಳೂ ಆಗಿರಬಹುದು. ಇದರಲ್ಲಿ  ಹುಡುಗಿಯರು ತುಂಬಾ ಫಾಸ್ಟ್. ಅವರಲ್ಲದಿದ್ದರೂ, ಅವರ ಹೆತ್ತವರು!

ಅಂದಹಾಗೆ ನಾನು ಲೈನು ಹಾಕಿದ ನನಗಿಂತ ಜೂನಿಯರ್ ಆಗಿದ್ದ ನೀಲಾವರದ ಆ ಹುಡುಗಿ ಹೆಸರು…?!(ನನ್ನ  ಮುಂದಿನ ಕಥೆಯಲ್ಲಿ  ಗ್ಯಾರಂಟಿ ಅವಳ ಹೆಸರನ್ನೇ ಬಳಸುತ್ತೇನೆ!!!)

→ 7 CommentsCategories: ಕ್ರಿಯೇಟಿವ್ ಪೇಜ್

ಈ ಯೋಗಿ ಬದುಕಿನಲ್ಲಿ ದೇವರಿಗೆ ಜಾಗವಿಲ್ಲ !

September 10, 2009 · 1 Comment

‘ಸಿನಿಮಾ ಉದ್ಯಮ ಬದುಕಿಗೆ ಕಲಿಸಿದ ಪಾಠ ಅಪಾರ. ಇಲ್ಲಿ  ಸಾಕಷ್ಟು  ನೋವು ಅನುಭವಿಸಿದ್ದೇನೆ. ಉಡಾಫೆತನ ಮಾಡಿಕೊಂಡು ಒದೆ ತಿಂದಿರುವೆ. ತುಂಬಾ ಬೇಸರವಾಗಿ ಎರಡು ಸಲ ಉದ್ಯಮವನ್ನು ಬಿಟ್ಟು  ಕಾರ್ಪೊರೇಟ್ ಜಗತ್ತಿನೆಡೆ ಹೆಜ್ಜೆ ಹಾಕಿದ್ದೆ. ಶ್ರಮಕ್ಕೆ ತಕ್ಕ ಗೆಲುವು ಸಂಪಾದಿಸಲು ಬಹಳ ಕಾಲ ಕಾಯಬೇಕಾಯಿತು…’ ಎಂದು ಮಾತು ಆರಂಭಿಸಿದವರು ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್.

ಚಿತ್ರೀಕರಣವಿದ್ದರೆ, ಸಿನಿಮಾ ಪ್ರಂಪಚವೇ ಅವರಿಗೆ ಸರ್ವಸ್ವ. ಅದಿಲ್ಲವಾದರೆ,  ೭ರಿಂದ ೯ ಗಂಟೆಯೊಳಗೆ ಏಳುತ್ತಾರೆ. ನಿತ್ಯದ ಕಾರ್ಯಗಳು ಮುಗಿದ ನಂತರ ಸಿನಿಮಾ ಗೀತೆ ರಚನೆಯಲ್ಲಿ  ಮಗ್ನ. ಕೆಲವೊಮ್ಮೆ  ಓದಿನೊಂದಿಗೆ ಬಿಜಿ. ಇವುಗಳ ನಡುವೆ ತಮ್ಮ  ಪುಟಾಣಿ ಮಗು ಪುನರ್ವಸು ಜತೆಗೆ ಆಟ. ಮಧ್ಯಾಹ್ನ ಊಟದ ನಂತರ ಸಿನಿಮಾ ಚರ್ಚೆ.
೧೯೯೪ರಲ್ಲಿ  ಬೆಳದಿಂಗಳ ಬಾಲೆ ಚಿತ್ರದ ಮೂಲಕ ಸಿನಿಮಾಕ್ಕೆ ಕಾಲಿಟ್ಟ  ಭಟ್ಟರು,  ಒಂದೂವರೆಯಿಂದ ಎರಡು ವರ್ಷಕ್ಕೊಂದು ಚಿತ್ರ ಮಾಡುತ್ತಾರೆ. ಹಾನಗಲ್ ತಾಲೂಕಿನ ತಿಳುವಳ್ಳಿ  ಇವರ ಹುಟ್ಟೂರು. ೨ ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುವುದು ರೂಢಿ. ಅಣ್ಣ, ಅತ್ತಿಗೆಯ ಸಂಸಾರ  ಜತೆಗಿದೆ. ಅತ್ತೆ, ಮಾವ ಕೂಡ ಮಗಳು-ಅಳಿಯನ ಮನೆಯಲ್ಲಿದ್ದಾರೆ. ಹೀಗಾಗಿ ಮಹಾನಗರಿಯಲ್ಲೂ  ಇವರದ್ದು  ಅವಿಭಕ್ತ ಕುಟುಂಬ.

‘ನಾನು ಓದಿದ್ದು ಬಿ.ಎ., ಎಂ.ಎ ಮತ್ತು ಎಲ್‌ಎಲ್‌ಬಿಗಳಿಗೆ ಒಂದೊಂದು ವರ್ಷ ಪ್ರಯತ್ನ ಮಾಡಿದೆ. ಯಾವುದೂ ಪೂರ್ಣವಾಗಲಿಲ್ಲ. ಸಿನಿಮಾ ಪ್ರಪಂಚ ಪ್ರವೇಶಿಸಿದೆ. ಒಂದು ಹಂತದವರೆಗೂ ನನಗೆ ಕನ್ನಡ ಚಿತ್ರೋದ್ಯಮದ ಪರಿಚಯವಿರಲಿಲ್ಲ. ಪರಿಣಾಮವಾಗಿ ಸಾಕಷ್ಟು  ಸಲ ಅವಮಾನ ಅನುಭವಿಸಿದೆ. ಈಗ ಕಥೆ ಬಗೆಗಿನ ಚರ್ಚೆಯಲ್ಲೇ ಆರು ತಿಂಗಳ ಬದುಕು ಕಳೆದು ಹೋಗುತ್ತದೆ. ಸಿನಿಮಾ ಗೀತೆ ಜತೆಗೆ ಕವನವನ್ನೂ ಬರೆಯುತ್ತೇನೆ’ ಎಂದು ಭಟ್ಟರು ನಗುತ್ತಾರೆ.

ಹಿಂದಿ ಘಜಲ್‌ಗಳೆಂದರೆ ಅವರಿಗೆ ತುಂಬಾ ಇಷ್ಟ. ಮನಸು ಬಂದ್ರೆ ಹಾಡುವುದಂಟು. ಕೀ ಬೋರ್ಡ್ ಜತೆಗೆ ನಿಕಟ ನಂಟು. ದೇವರಿಗೂ ಈ ಯೋಗಿಗೂ ಯಾವುದೇ  ಸಂಬಂಧವಿಲ್ಲವಂತೆ. ಟಿವಿ, ರೆಡಿಯೋ, ಗಡಿಯಾರ ಮೊದಲಾದ ಉಪಕರಣಗಳನ್ನು ಬಿಚ್ಚುವುದರಲ್ಲಿ  ಇವರು ನಿಸ್ಸಿಮರು. ಲೀಗ್ ಮಟ್ಟದಲ್ಲಿ  ವಾಲಿಬಾಲ್ ಆಡಿದ ಅನುಭವವಿದೆ. ಕುಟುಂಬದೊಂದಿಗೆ ಪ್ರವಾಸ ಹೋಗೋದು, ಚಿತ್ರೀಕರಣ ಸ್ಥಳ ಹುಡುಕಾಟ ಮಾಮೂಲು. ರಾತ್ರಿ ೧೦.೩೦-೨ಗಂಟೆಯೊಳಗೆ ನಿದ್ದೆಗೆ ಜಾರುತ್ತಾರೆ.

‘ಬಹಳ ಹಿಂದೆ ವಿಭಿನ್ನ ರೀತಿಯಲ್ಲಿ  ವಿದ್ಯುತ್ ಉತ್ಪಾದನೆಯ ಕುರಿತು ಊರ ಹುಡುಗರ ಜತೆ ಕೆಲಸ ಮಾಡಿದ್ದೆ. ಈ ದೃಶ್ಯ ಮನಸಾರೆ ಚಿತ್ರದಲ್ಲಿ  ಬರುತ್ತೆ. ಜಪಾನಿ ಭಾಷೆಯ ಅಕಿರೊ ಕುರುಸೋವಾ.  ಹಿಂದಿಯ ಹೃಷಿಕೇಷ್ ಮುಖರ್ಜಿ ನನ್ನಿಷ್ಟದ ನಿರ್ದೇಶಕರು. ಸದ್ಯದಲ್ಲೇ  ನಿರ್ಮಾಪಕನಾಗುವ ಇರಾದೆಯಿದೆ. ಸ್ವಂತ ಬ್ಯಾನರ್‌ನಡಿ ಇನ್ನಷ್ಟು  ಚಿತ್ರಗಳು ಬರಲಿವೆ’ ಎಂದು ಮಾತು ಮುಗಿಸಿದರು ಭಟ್ಟರು.

→ 1 CommentCategories: ಸ್ಟಾರ್‌ ಡೈರಿ

ಈ ಹುಡುಗೀಯರು ಹೀಗ್ಯಾಕೆ?

August 11, 2009 · 11 Comments

ಹುಡುಗೀಯರು ಹೀಗ್ಯಾಕೆ ಅಂತಾ ಬರೆಯುವುದು ಸರಿಯಾ ಅಥವಾ ಹುಡುಗರು ಯಾಕಿಂಗಾಡ್ತಾರೆ ಎಂದು ಬರೆಯುವುದು ಸೂಕ್ತವಾ ಎಂಬ ಗೊಂದಲ ನನ್ನಲ್ಲಿದೆ. ಆದ್ರೂ ಎರಡು ತರಹ ಬರೆಯುವುದೂ ಶಾನೇ ಡೇಂಜರ್. ಯಾಕಂದ್ರೆ ಫೆಮಿನಿಸ್ಟ್  ಸಂಘಟನೆಗಳು, ಯುವಕ ಮಂಡಳಿ ಸದಸ್ಯರುಗಳಿಗೆ ಈ ಬರಹ ಓದಿ ನೋವಾಗಬಹುದು! ಹಾಗಂತ, ನನ್ನ ಬರಹ ಹಿಡಿದುಕೊಂಡು  ಗಾಂ ಪ್ರತಿಮೆ ಎದುರು ಯಾರೂ ಹೋರಾಟ ನಡೆಸುವುದಿಲ್ಲ  ಎಂಬುದಂತೂ ಗ್ಯಾರಂಟಿ. ಅಯ್ಯೋ ಸಿವಾ, ಏನೋ ಬರೆಯಕ್ಕೆ ಹೊಂಟಿದ್ದು ಏನೇನು ಆಗಕ್ ಹತ್ತೈತಿ! ಇಲ್ಲ, ಟ್ರ್ಯಾಕ್ ತಪ್ಪಿಲ್ಲ. ಹಾಗಾಗಿ  ನೇರವಾಗಿ ವಿಷ್ಯಕ್ಕೆ ಬರುತ್ತಿದ್ದೇನೆ.

ವಿಷ್ಯ  ಏನಪ್ಪಾ  ಅಂತಂತಂದ್ರೆ…ಈ ಹುಡುಗೀಯರು ಯಾಕೆ ಹೀಗೆ  ಅಂತಾ!  ಹುಡುಗೀಯರಿಗೆ ಏನಾಗಿದೆ ಅನ್ನೋದಕ್ಕಿಂತ, ಆಗಲಿಕ್ಕೆ  ಉಳಿದಿರುವುದೇನು ಎಂಬುದು ಮುಖ್ಯವಾದ ಪ್ರಶ್ನೆ. ಅಲ್ಲ , ಈ ಬೆಂಗಳೂರಲ್ಲಿ  ನಮ್ಮ ‘ನಾರಿ’ಗಳಿಗೆ ಸ್ವಂತ ಐಡೆಂಟಿಟಿ ಇಲ್ಲವೇನೋ ಅನ್ನಿಸ್ತಾ ಇದೆ. ಹಿಂದೆಲ್ಲ  ಸ್ಯಾರಿ ಉಡ್ತಾ ಇದ್ದರಂತೆ. ಹಾಗಾಗಿ ‘ಭಾರತೀಯ ನಾರಿ’ ಎಂಬ ವಿಶೇಷಣ ಸ್ತ್ರೀ ಸಮುದಾಯಕ್ಕೆ ಇತ್ತಂತೆ. ಇವತ್ತು  ಒಂದಷ್ಟು (ಬೆಂಗಳೂರಿನ ಮಟ್ಟಿಗೆ  ಈ ಪ್ರಮಾಣ ಶೇ.೬೦ಕ್ಕಿಂತ ಜಾಸ್ತಿ ಇರಬಹುದು)ಹುಡುಗೀಯರು ಬಾರ್‌ನಲ್ಲಿ  ಕೂತು…ಅಲ್ಲಲ್ಲ…ಮನೆ, ಹಾಸ್ಟೆಲ್‌ನಲ್ಲಿ  ಕೂತು ಕುಡಿತಾರೆ. ಇನ್ನೂ  ಕೆಲವರು ಐಷಾರಾಮಿ ಹೋಟೆಲ್‌ಗೆ ಹೋಗಿ ಎರಡು ಪೆಗ್ ಏರಿಸುತ್ತಾರೆ. ಸಿಗರೇಟು ಸೇದ್ತಾರೆ, ಹುಡುಗರಂತೆ ಡ್ರೆಸ್ ಮಾಡಿಕೊಳ್ಳುತ್ತಾರೆ…

‘ಲೋ ಯಪ್ಪ  ಸುಮ್ನಿಕಿರೋ, ನೀನೇನು ಸಂಸ್ಕೃತಿ ಗುತ್ತಿಗೆ ತಗಂಡಿಯೇನು? ಹುಡುಗ್ರು ಏನು ಬೇಕಾದ್ರು ಮಾಡಬಹುದು, ನಾವು ಹುಡುಗೀಯರು ಮಾಡಂಗಿಲ್ಲ  ಅನ್ನಾಕೆ ಇದೇನು ತಾಲಿಬಾನಾ?!’

ಹೋಯ್ ಅಕ್ಕೋರೆ ನಿಮ್ಮ ಕೂಗು ನಂಗೆ ಶೆರಿಯಾಗಿಯೇ ಕೇಳಿಸ್ತಾ  ಐತಿ. ನಾನು ಈಗ ಹೇಳಾಕ್ ಹೊಂಟಿರೋ ಈಸ್ಯ ಕೂಡ ಅದೇನೆ. ಓಸಿ ಸಮಾಧಾನ ಮಾಡ್ಕಂಡು ಓದ್ತೀರಾ?!

ಅಡುಗೆ ಮನೆಯಲ್ಲಿ  ಸೌಟು ಹಿಡಿದುಕೊಂಡೇ ಬದುಕಬೇಕಾ ಎಂಬ ಹಠಮಾರಿತನದೊಂದಿಗೆ ಹೆಣ್ಣು  ನಾಲ್ಕು ಗೋಡೆಗಳ ನಡುವಣ ಹೊಸ್ತಿಲನ್ನು ದಾಟಿ ಹೊರಬಂದಿದ್ದಾಳೆ. ಆದರೆ ಈಗ ಆಗಿರುವ ಪರಿಣಾಮವೇನು?

ಓ ಮರೆತೇ  ಹೋಗಿತ್ತು ಕ್ಷಮಿಸಿ…ವ್ಯತ್ಯಾಸ ಯಾಕೆ ಎಂಬ ಪ್ರಶ್ನೆಯಿಂದಲೇ ನಮ್ಮ  ಫೆಮಿನಿಸ್ಟ್  ಸಂಘಟನೆಗಳು ಹುಟ್ಟಿದ್ದು ಅಲ್ವಾ?! ಅಂದಹಾಗೆ ಇದರ ಲಾಭ ಆಗಿದ್ದು  ಯಾರಿಗೆ?!

ಮಹಾನಗರಿಯಲ್ಲಿ  ಪಟ್ಟಿ  ಮಾಡಬಹುದಾದಷ್ಟು  ಐಷಾರಾಮಿ ಹೋಟೆಲ್‌ಗಳಿವೆ. ಅದರಲ್ಲಿ  ಅರ್ಧದಷ್ಟು  ಹೋಟೆಲ್‌ನಲ್ಲಿ  ಮೊಣಕಾಲನ್ನೂ ಆವರಿಸಿದ ಬಟ್ಟೆ  ತೊಟ್ಟ  ಚೆಂದದ ಹುಡುಗೀಯರು ಹಲವಾರು ಹುದ್ದೆ  ನಿಭಾಯಿಸುತ್ತಿದ್ದಾರೆ. ಇಲ್ಲಿ  ‘ಆತಿಥೋದ್ಯಮ’ ಎಂಬ ಪದವಿಗಿಂತ ಮೊಣಕಾಲಿಗಿಂತ ಚಿಕ್ಕದಾದ ಬಟ್ಟೆ  ತೊಡುವುದೇ ಮುಖ್ಯವಾದ ವಿಷಯ. ಅದಕ್ಕೆ  ಒಪ್ಪದವರಿಗೆ ಕೆಲಸವಿಲ್ಲ.

ಬಹುತೇಕ ಕಂಪನಿಗಳು ಸಾರ್ವಜನಿಕ ಸಂಪರ್ಕ ಅಕಾರಿ, ಪತ್ರಿಕಾ ಸಂಪರ್ಕ ಅಕಾರಿಗಳನ್ನು ನೇಮಿಸಿಕೊಳ್ಳುತ್ತವೆ. ೩೫ರ ಪ್ರಾಯದ ಒಳಗಿನ ಚೆಂದದ, ಚೆಲ್ಲು, ಚೆಲ್ಲು  ಮಾತನಾಡುವ ಹುಡುಗಿಗೆ ಮಾತ್ರ ಆದ್ಯತೆ. ೪೦ರ ಪ್ರಾಯದ ಆಂಟಿಯರಿಗೆ ಅವಕಾಶವಿಲ್ಲ. ವಯಸ್ಸು ಆಗುತ್ತಿದ್ದಂತೆ ಆ ಚೆಂದದ ಹುಡುಗಿಗೂ ಗೇಟ್ ಪಾಸ್ ಲಭ್ಯ. ಹಾಗಾಗಿಯೇ ಅವುಗಳು ಕೂತು ಊಟ ಮಾಡಲು ಸಾಕಾಗುವಷ್ಟು  ಸಂಬಳ, ನಾನಾ ಬಗೆಯ ಸೌಕರ್ಯ ಒದಗಿಸುವುದು. ಅಷ್ಟೆಲ್ಲ  ಸಿಗಬೇಕಾದ್ರೆ ಮೊಣಕಾಲಿಗಿಂತ ಮೇಲಿನ ಡ್ರೆಸ್  ಹಾಕಿದರೆ, ಚೆಲ್ಲು, ಚೆಲ್ಲಾಗಿ ಹಲ್ಲು  ಕಿರಿದರೆ ಆಗುವ ನಷ್ಟವಾದರೂ ಏನು ಅಲ್ವಾ?! ಅಡುಗೆ ಮನೆಯಲ್ಲಿ  ಸೌಟು  ಹಿಡಿದ್ರೆ  ಇಷ್ಟೆಲ್ಲ  ಸೌಕರ್ಯ ಸಿಗತ್ತಾ?!

ಈ ಟ್ರೆಂಡ್ ಇವತ್ತು ಮಾಧ್ಯಮವನ್ನೂ ಆವರಿಸಿದೆ. ವಿಶೇಷವಾಗಿ ಆಂಗ್ಲ  ಭಾಷೆಯ ವಾಹಿನಿಗಳಲ್ಲಿ  ಸೌದಂರ್ಯವೇ ಮುಖ್ಯವಾದ ಅರ್ಹತೆ.  ಪ್ರತಿ ಎಂಎನ್‌ಸಿ ಕಂಪನಿಯಲ್ಲಿ  ಸ್ವಾಗತಕಾರಿಣಿಯಾಗಿ ಹುಡುಗಿ/ಹುಡುಗ ಇರುತ್ತಾರೆ. ವಿಮಾನದಲ್ಲೂ  ಇದೇ ರೀತಿಯ ವ್ಯವಸ್ಥೆಯಂತೆ. ನಾನಿನ್ನು  ವಿಮಾನ ಹತ್ತಿಲ್ಲ. ಹಾಗಾಗಿ ಆ ಕುರಿತು ಮಾತಿಲ್ಲ.

ನಾನಿಲ್ಲಿ  ಹುಡುಗರಿಗೆ ಅವಕಾಶ ಸಿಗುತ್ತಿಲ್ಲ  ಎಂಬ ದಾಟಿಯಲ್ಲಿ  ಮಾತನಾಡುತ್ತಿಲ್ಲ. ನೈಜವಾಗಿ ಅರ್ಹತೆ ಇದ್ದವನು ಅವಕಾಶ ಪಡದೇ ಪಡೆಯುತ್ತಾನೆ ಎಂಬುದು ನನ್ನ  ನಿಲುವು. ಹುಡುಗಿಯ ಸ್ಥಿತಿಯ ಕುರಿತು, ಹುಡುಗಿ ಬಳಕೆಯಾಗುತ್ತಿರುವ ಪರಿಯ ಕುರಿತಾಗಿ ಹೇಳುತ್ತಿರುವೆ ಅಷ್ಟೆ. ನಾವು ‘ಸ್ತ್ರೀ’ಗೆ ವಿಶೇಷ ಗೌರವ ಕೊಡುವ ಸಂಪ್ರದಾಯದವರು. ಆಕೆ ಒಂದು ಮಗುವಿಗೆ ಮೊದಲ ಗುರು. ಒಂದು ಮಗುವಿನಿಂದ ಒಂದು ಸಮಾಜ. ಹಾಗಾಗಿ ಸಮಾಜಕ್ಕೂ ಆಕೆಯೇ ಮೊದಲ ಗುರು. ಹಾಗಾಗಿ ನಮ್ಮಲ್ಲಿ  ತಾಯಿಗೆ ಪೂಜನೀಯ ಸ್ಥಾನ. ತಾಯಿಯೇ ಹೆಂಡ ಕುಡಿಯುತ್ತಾಳೆ ಎಂದರೆ, ಆ ಮನೆಯ ಪರಿಸ್ಥಿತಿಯನ್ನು  ಒಮ್ಮೆ  ಕಲ್ಪಿಸಿಕೊಂಡು ನೋಡಿ. ಆ ಮನೆಯಲ್ಲಿ  ಹುಟ್ಟುವ ಮಗು ಏನಾಗಬಹುದು ಎಂದು ಆಲೋಚಿಸಿ. ತಂದೆ ಹೆಂಡ ಕುಡಿಯುವುದು ಹಲವಾರು ಕುಟುಂಬಗಳಲ್ಲಿ  ಸಹಜ. ಗಂಡು  ಮಾಡುವುದನ್ನು ನಾನ್ಯಾಕೆ ಮಾಡಬಾರದು ಎಂದು ಈ ವಿಚಾರದಲ್ಲೂ  ವಾದಿಸುವವರಿಗೆ…ಯಾಕೆ ಮಾಡಬಾರದಾಗಿತ್ತು ಎಂಬುದು ನಿಮ್ಮ  ಮಕ್ಕಳು ಬೆಳೆದ ನಂತರ ನಿಮಗೆ ಅರಿವಾಗುತ್ತದೆ ಎಂಬುದಷ್ಟೇ  ಉತ್ತರ.

ಇನ್ನೂ ‘ಶೀಲ’ ಎಂಬುದು ಮನಸ್ಸಿಗೆ ಸಂಬಂಸಿದ್ದ  ಅಥವಾ ದೇಹಕ್ಕಾ  ಎಂಬುದು ನನಗಂತೂ ಗೊತ್ತಿಲ್ಲ. ಆದರೆ ನಮ್ಮ  ಸಮಾಜದಲ್ಲಿ  ಶೀಲ ಕೂಡ ಗಂಭೀರ ವಿಚಾರ. ಹುಡುಗರು ಯಾರ ಜತೆಗೆ ಬೇಕಾದರೂ ಮಲಗಬಹುದು, ನಾವು…ಖಂಡಿತಾ ನೀವು ಮಲಗುತ್ತೀರಾ ಎಂದಾದರೆ, ಕಾತುರತೆಯಿಂದ ಕಾದು ಕುಳಿತವರು ಬಹಳಷ್ಟು  ಮಂದಿ ಇದ್ದಾರೆ. ಚರ್ಮ ಸುಕ್ಕುಗಟ್ಟುವರೆಗೂ ನಿಮಗೆ ಸಾಕಷ್ಟು  ಅವಕಾಶವಿದೆ! ಆವತ್ತಿನ ದೇವದಾಸಿ ಪದ್ದತಿ, ಇವತ್ತು ‘ಬಾಯ್‌ಫ್ರೆಂಡ್’ ಸಂಸ್ಕೃತಿಯಾಗಿ ಬದಲಾಗಿದೆ…ಅಲ್ಲಲ್ಲ…ಹೈಟೆಕ್ ಆಗಿದೆ! ಹುಡುಗರ ಜತೆ ಸುತ್ತುವ, ಬೀದಿ ಬದಿಯಲ್ಲಿ  ಬೈಕ್ ನಿಲ್ಲಿಸಿಕೊಂಡು ‘ಲವ್’ ಎಂಬ ಹೆಸರಲ್ಲಿ  ಹರಟೆ ಹೊಡೆಯುವ ೨-೩ ಹುಡುಗಿಯರನ್ನು ಒಂದೂವರೆ ವರ್ಷಗಳ ಸುಮ್ಮನೆ ಗಮನಿಸಿ. ಆಕೆ ಕನಿಷ್ಟ  ೩ ಬಾಯ್‌ಫ್ರೆಂಡ್‌ಗಳನ್ನು ಬದಲಿಸುತ್ತಿರುತ್ತಾಳೆ. ಆಕೆ ಬದಲಿಸುತ್ತಾಳೋ ಅಥವಾ ಹುಡುಗ ಆಕೆಯನ್ನು ಬದಲಿಸುತ್ತಾನೋ ಎಂಬುದು ನನಗಂತೂ ಗೊತ್ತಿಲ್ಲ.  ಇದು ತಮಾಷೆಗೆ ಹೇಳಿದ್ದಲ್ಲ. ನಮ್ಮ ಮನೆ ಬಳಿಯಿರುವ ಹುಡುಗಿಯರ ಪಿ.ಜಿ ನೋಡಿದ ನಂತರ ನಿಮಗೆ ಈ ಪ್ರಯೋಗದ ಕುರಿತು ಹೇಳುತ್ತಿರುವೆ. ದುಡ್ಡು  ಖರ್ಚು ಮಾಡಲು ಹುಡುಗ ಸಿದ್ಧನಿದ್ದರೆ, ಹುಡುಗಿ ಸುಲಭವಾಗಿ ಸಿಗುತ್ತಾಳೆ ಎಂಬುದು ನನಗೆ ಅನ್ನಿಸಿದೆ. ವೆಶ್ಯಾ ಗೃಹಗಳಿಗೆ ಹೋಗಿ ಭಯದಲ್ಲಿ  ಮಜಾ ತೆಗೆದುಕೊಳ್ಳುವುದಕ್ಕಿಂತ, ಇದೇ  ಸುಲಭ ಎಂದು ಮಹಾನಗರಿಯ ಸಾಕಷ್ಟು  ಹುಡುಗರು ನಿರ್ಧರಿಸಿದಂತಿದೆ!

ಮನೆ ಪಕ್ಕದ ಪಿ.ಜಿ ತೋರಿಸಿದಾಗ ರೂಮಿನ ಗೆಳೆಯ ರಾಜಾರಾಮ, ನಾನಂತೂ ಕೆಲಸದಲ್ಲಿ  ಇರೋ ಹುಡುಗಿಯನ್ನ ಮದ್ವೆ ಆಗಲ್ಲ  ಅನ್ನುತ್ತಿದ್ದ. ಮಹಾನಗರಿಯ ಹುಡುಗಿಯನ್ನು ಇವತ್ತು ಸಾಕಷ್ಟು  ಪ್ರಜ್ಞಾವಂತ ಹುಡುಗರು ತಿರಸ್ಕರಿಸುವ ಮಟ್ಟಕ್ಕೆ ನಮ್ಮ  ವ್ಯವಸ್ಥೆ ಬಂದು ನಿಂತಿದೆ. ಪಟ್ಟಣ್ಣ  ಸೇರಿದ ಹುಡುಗಿಗೆ ಎಷ್ಟು  ಜನರ ಜತೆ ಸಂಬಂಧ ಇರಬಹುದು ಎಂದು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಕೆಲಸ, ಹಣದ ಅನಿವಾರ್ಯತೆ, ಸ್ವತಂತ್ರ್ಯ…ಇವೆಲ್ಲವೂ ನಿಮ್ಮ  ವೈಯಕ್ತಿಕ ವಿಚಾರ. ನಾನಿಲ್ಲಿ  ಸಮಾಜದ ಸ್ಥಿತಿಯನ್ನು ಹೇಳಿದ್ದೇನೆ ಅಷ್ಟೆ. ಹಾಸ್ಯ, ಗಂಭೀರವಾಗಿ ಲೇಖನ ಉದ್ದವಾಗಿದೆ. ನೀವು ಸಂಸ್ಕೃತಿಗೆ ಬದ್ಧರಾಗಿಯೇ ಇರಬೇಕು ಎಂಬ ಹಠ ನನ್ನದೇನಲ್ಲ. ಯಾಕೆಂದರೆ ಅಮ್ಮ  ಹೇಳಿದಂತೆ ನಾನೇನು ಈ ವರ್ಗದ ಯಾವ ಹುಡುಗಿಯನ್ನೂ ಮದ್ವೆಯಾಗಬೇಕಿಲ್ಲ. ಕಂಡವರ ಮನೆ ಹೆಣ್ಣು ಮಕ್ಕಳು ಏನಾದರೂ ನನಗೇನು ತಲೆಬಿಸಿಯಿಲ್ಲ. ಇದು ನನ್ನ ಅಂತಿಮ ನಿರ್ಧಾರ.

‘ಅಣಾ ಬೆಂಗಳೂರಿಗೆ ಬರ‍್ಲಾ, ಎಂಥಾದ್ರು ಜಾಬ್ ಇದ್ದ’ ಅಂತಾ ಊರಿನ ಹುಡುಗಿಯೊಬ್ಬಳು ಮುಗ್ಧವಾಗಿ ಕೇಳಿದ್ದಕ್ಕೆ ಇಷ್ಟೆಲ್ಲ  ಬರೆಯಬೇಕಾಯಿತು…

(ವಿ.ಸೂ:-ಮಹಾನಗರಿಯ ಹುಡುಗಿಯರೆಲ್ಲ ಹೀಗೆ ಎಂಬ ಅರ್ಥವಲ್ಲ. ಆದರೆ, ಬಹುತೇಕರು ಹೀಗಾಗುತ್ತಿದ್ದಾರೆ ಎಂಬುದನ್ನು ಈ ಲೇಖನ ಹೇಳಲು ಹೊರಟಿದೆ…)

→ 11 CommentsCategories: ಚಿಂತನ ಚಾವಡಿ

ಅರ್ಕಾವತಿ ತಟ, ಟಿವಿ ೯, ಶಿವಪ್ರಸಾದ್…

July 29, 2009 · 2 Comments

ನೀರಿನ ಕುರಿತಾಗಿ ಜಾಗೃತಿ ಮೂಡಿಸುವ ಯತ್ನವನ್ನು  ಹಿರಿಯರಾದ ಶ್ರೀ ಪಡ್ರೆ, ರಾಧಾಕೃಷ್ಣ ಭಡ್ತಿಯವರು ದಶಕಗಳಿಂದಲೂ ಮಾಡುತ್ತಿದ್ದಾರೆ. ಅನೇಕ ಪತ್ರಿಕೆಗಳು, ಪತ್ರಕರ್ತರು ನೀರಿನ ಜಾಡು ಹಿಡಿದುಹೊರಡುವ ಮೂಲಕ ಹಿರಿಯರ ಆ ಯತ್ನಕ್ಕೆ ಜೀವ ತುಂಬುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಕಳೆದ ಒಂದೂವರೆ ವರ್ಷದಿಂದ ಕೆರೆ ಏರಿಯ ಮೇಲೆ ಓಡಾಡುತ್ತಿರುವ ಬೆಂಗಳೂರು ವಿಜಯದ ಉಸ್ತುವಾರಿ ಹಾಗೂ ಹಿರಿಯ ಸಹದ್ಯೋಗಿ ಮಿತ್ರರಾದ ಕೆರೆ ಮಂಜಣ್ಣ  ಅಲಿಯಾಸ್ ಆರ್.ಮಂಜುನಾಥ್ ಖಂಡಿತಾ ಅದೇ ಸಾಲಿಗೆ ಸೇರುತ್ತಾರೆ.

ಅರ್ಕಾವತಿ ನದಿ ತಟದಲ್ಲಿ  ಸಂಚರಿಸಿ ಬಂದಿರುವ ಮಂಜುನಾಥ್,  ಈಗ ಬ್ಲಾಗ್ ಲೋಕದಲ್ಲೂ  ವಿಹರಿಸುತ್ತಿದ್ದಾರೆ. ಅರ್ಕಾವತಿ, ಕೆರೆಗಳ ಕುರಿತಾದ ಚರ್ಚೆ, ಕೆರೆ ಅಭಿವೃದ್ಧಿ  ಪರ ನಿರ್ಣಯ ಹಾಗೂ ಕಾಮಗಾರಿಗಳ ಕುರಿತಾದ ಸುದ್ದಿಗಳನ್ನು ಬ್ಲಾಗ್‌ನಲ್ಲಿ  ಲಗತ್ತಿಸುತ್ತಿದ್ದಾರೆ. ಅಂದಹಾಗೆ, ಅರ್ಕಾವತಿ ತಟದಲ್ಲಿ ನೀವು  ಒಂದ್ಸಲ ವಾಕ್ ಹೋಗಿ ಮಂಜುನಾಥ್ ಅವರ ಪ್ರಯತ್ನಕ್ಕೊಂದು ಪ್ರತಿಕ್ರಿಯೆಯ ಬೆಂಬಲ ಸೂಚಿಸಿ ಬನ್ನಿ.

ಟಿವಿ  ೯ ವಾಹಿನಿಯನ್ನು ಬೈಯ್ಯುವವರ ಸಂಖ್ಯೆಗೇನೂ  ಕೊರತೆಯಿಲ್ಲ.  ಆದರೆ, ಒಂದು ವಿಶೇಷ ಕಾರ್ಯಕ್ರಮವನ್ನು ಟಿವಿ ೯ ಮಾಡುವಷ್ಟು  ಚೆಂದವಾಗಿ ಕನ್ನಡದ ಬೇರೆ ಸುದ್ದಿ ವಾಹಿನಿಗಳು ಮಾಡುವುದಿಲ್ಲ. ಅದಕ್ಕೆ  ಸಾಕ್ಷಿ  ಮೊನ್ನೆಯ ಕಾರ್ಗಿಲ್ ವಿಜಯೋತ್ಸವ. ಕಾರ್ಗಿಲ್ ಯುದ್ಧ  ಭೂಮಿಗೆ ಭೇಟಿಯಿತ್ತ ಬೆರಳೆಣಿಕೆ ಭಾರತೀಯ ವಾಹಿನಗಳ ಪೈಕಿ ಟಿವಿ ನೈನ್ ಕೂಡ ಒಂದು. ಆ ಇಡೀ ಸರಣಿ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಚಲನ ಚಿತ್ರ ಲೋಕದ ಅಮೃತ ಮಹೋತ್ಸವ ಸಮಯದಲ್ಲಿ  ಮಾಡಿದ ವಿಶೇಷ ಕಾರ್ಯಕ್ರಮ ಕೂಡ ತುಂಬಾ ಚೆನ್ನಾಗಿತ್ತು. ಇನ್ನು ಸುದ್ದಿಯ ವಿಷಯ…ಇಂಗ್ಲಿಷ್ ವಾಹಿನಿಗಳನ್ನು ಅವಲೋಕಿಸಿದರೆ, ಟಿವಿ ೯ ಖಂಡಿತಾ ಉತ್ತಮ ವಾಹಿನಿ. ಟಿವಿ ೯ನಲ್ಲಿ  ಪ್ರಕಟಗೊಂಡ ಸುದ್ದಿಗಳನ್ನೇ ಒಂದು ಗಂಟೆ ನಂತರ ಬಿತ್ತರಿಸುವ ಕನ್ನಡದ ಕೆಲ ಕ್ರಿಯಾಶೀಲರಿಗೆ ಹೋಲಿಸಿದರೂ, ಖಂಡಿತಾ ಚಾನೆಲ್ ೯ಕ್ಕೆ ಅಗ್ರಸ್ಥಾನ. ಕೆಲ ಸುದ್ದಿಗಳ ಕುರಿತಾಗಿ  ನನ್ನದೂ ತಕರಾರಿದೆ. ಆದರೆ, ನನಗೆ ದೃಶ್ಯ ಮಾಧ್ಯಮದ ಅನುಭವವಿಲ್ಲದ ಕಾರಣ, ಆ ಸುದ್ದಿ  ಹಾಗಿರಬೇಕಿತ್ತು, ಹೀಗಿರಬೇಕಿತ್ತು ಅಂತಾ ಪುಗ್ಸಟ್ಟೆ  ಸಲಹೆ ನೀಡುವುದಿಲ್ಲ.

ಅಂದಹಾಗೆ ಮೊನ್ನೆಯ ಕಾರ್ಗಿಲ್ ಸರಣಿ ರೂವಾರಿ ಶಿವಪ್ರಸಾದ್‌ರದ್ದು  ಬ್ಲಾಗ್ ಇದೆ ಎಂಬುದು ಕೆಲವರಿಗೆ ಗೊತ್ತಿರಬಹುದು. ಶಿವಪ್ರಸಾದರ ವಿಚಾರಧಾರೆಗಳಿಗಾಗಿ ಇಲ್ಲಿಗೊಮ್ಮೆ ಭೇಟಿ ನೀಡಿ.

ಕೆರೆ, ನೀರು, ಅಬಿವೃದ್ಧಿ  ಪರ ವಿಚಾರಗಳನ್ನು ಬರೆದ ತಕ್ಷಣ  ವ್ಯವಸ್ಥೆ  ಬದಲಾಗುತ್ತದೆ ಎನ್ನಲು ಸಾಧ್ಯವಿಲ್ಲ. ಪೋಲಿ ಸುದ್ದಿಗಳಿಗೋ, ಸೆಕ್ಸ್  ಬ್ಲಾಗ್‌ಗಳಿಗೋ ದೊರೆಯುವಷ್ಟು  ಬೆಂಬಲ ಇಂಥವುಗಳಿಗೆ ದೊರೆಯುವುದಿಲ್ಲ  ಎಂಬ ಸತ್ಯ ಬರೆಯುವವರಿಗೂ ಗೊತ್ತಿದೆ. ಆದರೆ ಇದೆಲ್ಲದರ ನಡುವೆ ಬರೆದವರಿಗೆ ಆತ್ಮ ಸಂತೃಪ್ತಿ ಸಿಗುತ್ತದೆ ಎಂಬುದಂತೂ ನಿಜ. ಅಂದಹಾಗೆ ಇಂಥವುಗಳನ್ನು ಪರಿಚಯಿಸುವುದು ನನ್ನ ಪಾಲಿಗೆ ಆತ್ಮ ಸಂತೃಪ್ತಿ ನೀಡುವ ವಿಷಯ…ಓದುವುದು ನಿಮಗೆ…?!

→ 2 CommentsCategories: ಚಿಂತನ ಚಾವಡಿ

ರಾಯರ ಕೃಪೆಯಿಲ್ಲದೆ ದ್ವಾರಕೀಶ್ ಕೂಡ ಇಲ್ಲ!

July 24, 2009 · Leave a Comment

ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ವ್ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಇಂಥದ್ದೊಂದು ಮಂತ್ರದ ಸಾಲು ಎಚ್‌ಎಸ್‌ಆರ್ ಲೇ ಔಟ್‌ನಲ್ಲಿರುವ ಕನ್ನಡದ ಕುಳ್ಳ ಬಂಗ್ಲೆ ಶ್ಯಾಮರಾವ್ ದ್ವಾರಕನಾಥರ ಮನೆಯಲ್ಲಿ  ಕೇಳಿಬರುತ್ತದೆ.

‘ಈವರೆಗೆ ೩೦೦ಕ್ಕೂ ಅದಿಕ ಸಿನಿಮಾಗಳಲ್ಲಿ  ನಟಿಸಿದ್ದೇನೆ. ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ  ನಿರ್ಮಾಪಕನಾಗಿ ಸರಿಸುಮಾರು ೫೦ ಚಿತ್ರಗಳಲ್ಲಿ  ದುಡಿದಿರುವೆ. ಕೇವಲ ೬ ವರ್ಷಗಳಲ್ಲಿ(೧೯೮೨-೧೯೮೮ರ ಅವಯಲ್ಲಿ) ೧೭ ಚಿತ್ರ ನಿರ್ಮಿಸಿದ್ದೆ. ಈ ವರ್ಷ ೩ ಚಿತ್ರಗಳಲ್ಲಿ  ಕಾಣಿಸಿಕೊಳ್ಳುವೆ. ನಟ,ನಾಯಕ, ನಿರ್ಮಾಪಕ, ನಿರ್ದೇಶಕನಾಗಿ ಚಿತ್ರರಂಗದಲ್ಲಿ  ಬೆಳೆಯಲು ರಾಘವೇಂದ್ರ ಸ್ವಾಮಿಗಳ ಅನುಗ್ರಹವೇ ಕಾರಣ. ರಾಯರಿಲ್ಲದೆ ನಾನಿಲ್ಲ. ಮಂತ್ರಾಲಯದಲ್ಲೊಂದು ಸ್ವಂತ ಮನೆ ಇದೆ. ವರ್ಷಕ್ಕೆ ಸಾಕಷ್ಟು  ಸಲ ರಾಯರ ಸನ್ನಿಧಾನಕ್ಕೆ ಹೋಗುವೆ’ ಎಂದು ಅಕ್ಕಿ ರೊಟ್ಟಿ  ಮತ್ತು ಚಹಾದೊಂದಿಗೆ ಮಾತಿಗೆ ಕುಳಿತರು ದ್ವಾರಕೀಶ್.

ಬೆಳಿಗ್ಗೆ  ೭.೩೦ಕ್ಕೆ ದಿನಪತ್ರಿಕೆ ಓದಿನೊಂದಿಗೆ ಅವರ ದಿನಚರಿ ಆರಂಭವಾಗುತ್ತದೆ. ದಿನಪತ್ರಿಕೆ ಹಾಕುವ ಹುಡುಗನೂ ಇವರ ಅಭಿಮಾನಿ. ಶುಕ್ರವಾರ ಎಲ್ಲ  ಪತ್ರಿಕೆಗಳನ್ನು ಇವರ ಮುಂದಿಟ್ಟು  ಚಿತ್ರರಂಗದ ಕುರಿತು ಸ್ವಲ್ಪ  ಹರಟೆ ಹೊಡೆಯುವುದು ಆ ಹುಡುಗನ ದಿನಚರಿ! ಚಿತ್ರೀಕರಣವಿದ್ದರೆ  ಬೆಳಿಗ್ಗೆ ೭ಗಂಟೆಗೆ ಮನೆ ಬಿಡುತ್ತಾರೆ. ಉಳಿದ ದಿನ ಹೆಂಡ್ತಿ, ಮಗ, ಸೊಸೆ ಜತೆಗೆ ತಿಂಡಿಗೆ ಕುಳಿತರೆ  ಭರ್ತಿಯಾಗಿ ಒಂದು  ಗಂಟೆ ಕಾಲ  ಸಿನಿಮಾ ವಿಮರ್ಶೆ. ೫ ಜನ ಗಂಡು ಮಕ್ಕಳಲ್ಲಿ  ಇಬ್ಬರು ವಿದೇಶದಲ್ಲಿದ್ದಾರೆ.  ಒಬ್ಬ ಮಗನ ಸಂಸಾರ ಇವರ ಜತೆಗಿದೆ. ಕುಟುಂಬದ ಜತೆ ಡೈನಿಂಗ್ ಟೇಬಲ್‌ನಲ್ಲಿ  ಊಟ/ತಿಂಡಿಗೆ ಕುಳಿತರೆ ಸಿನಿಮಾ ಮಾತುಕತೆ ಕಟ್ಟಿಟ್ಟ  ಬುತ್ತಿ. ಮೊಮ್ಮಗಳನ್ನು ಶಾಲೆಗೆ ಡ್ರಾಪ್ ಮಾಡಿ, ಬೆಳಿಗ್ಗೆ   ೯ ಗಂಟೆ ಸುಮಾರಿಗೆ  ಮನೆಯಲ್ಲಿಯೇ ಇರುವ ತಮ್ಮ ಪ್ರತ್ಯೇಕ ಕಚೇರಿಗೆ ಬಂದು ಕೂರುತ್ತಾರೆ. ೯ರಿಂದ ೧೧ರ ಅವ  ಸ್ನೇಹಿತರು, ಅಭಿಮಾನಿಗಳಿಗೆ ಮೀಸಲಿಟ್ಟ  ಸಮಯ. ೧೧.೩೦-೧೨ ಗಂಟೆ ಸುಮಾರಿಗೆ ದೇವರ ಮನೆ ಪ್ರವೇಶಿಸಿದರೆ,  ನಂತರದ ೨೦-೩೦ ನಿಮಿಷ ರಾಯರಿಗೆ ಅರ್ಪಣೆ.

೨.೩೦-೩.೩೦ ನಿದ್ದೆ/ಟಿವಿ ನೋಡುವ ಸಮಯ. ಸಂಜೆ ೪.೩೦-೫ಗಂಟೆಗೆ ಸೆಂಚುರಿ ಕ್ಲಬ್‌ಗೆ ಹೋಗುತ್ತಾರೆ.  ‘ಕ್ಲಬ್ ಎಂದಾಕ್ಷಣ ಗುಂಡು ಹಾಕುವ ಜಾಗ ಅಂತಾ ಅಂದುಕೊಳ್ಳಬೇಡಿ. ಅಲ್ಲಿ  ೬೦ವರ್ಷ ಮೇಲ್ಪಟ್ಟವರೇ ಇರುತ್ತಾರೆ. ಅಲ್ಲಿನ ಗ್ರಂಥಾಲಯಕ್ಕೆ  ಹೋಗುತ್ತೇನೆ. ಅರ್ಧ ಜನ ಓದುತ್ತಿರುತ್ತಾರೆ. ಇನ್ನು ಕೆಲವರು ಕುರ್ಚಿಯಲ್ಲೇ  ನಿದ್ದೆಗೆ ಜಾರಿರುತ್ತಾರೆ. ೭.೩೦-೮ಗಂಟೆ ವೇಳೆಗೆ  ದಿನಸಿ ಖರೀದಿ ಪೂರೈಸಿಕೊಂಡು ಮನೆಗೆ ಮರಳುತ್ತೇನೆ. ಹೆಂಡ್ತಿ  ಧಾರಾವಾಹಿಯಲ್ಲಿ  ಮುಳುಗಿರುತ್ತಾಳೆ. ಅವಳ ಹತ್ತಿರ ರಿಮೋಟ್ ಕಸಿದುಕೊಳ್ಳಲು ನಿತ್ಯವೂ ಜಗಳ ಆಡಬೇಕು. ಅರ್ಧ ಗಂಟೆ ವಾರ್ತೆ ವಿಕ್ಷೀಸುವೆ. ಊಟದ ನಂತರ ಡೈರಿ ಬರೆಯುತ್ತೇನೆ. ನಿತ್ಯವೂ ಡೈರಿ ಬರೆಯುವುದು ಉತ್ತಮ ಹವ್ಯಾಸ. ಇದರಿಂದಾಗಿ ಪ್ಲ್ಯಾಶ್‌ಬ್ಲಾಕ್‌ನ ನೆನಪುಗಳು ಸದಾ ಜತೆಗಿರುತ್ತದೆ. ೯.೩೦ಕ್ಕೆ ಹಾಸಿಗೆ ಏರಿದರೆ ಅರ್ಧ-ಮುಕ್ಕಾಲು ಗಂಟೆ ಚಿತ್ರರಂಗದ ಮಿತ್ರರ ಕರೆಗಳಲ್ಲೇ  ಮಗ್ನನಾಗಿರುವೆ. ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದು ಕಡಿಮೆ. ಮನಸ್ಸಿನ ನೆಮ್ಮದಿ ದೃಷ್ಟಿಯಿಂದ ಏಕಾಂಗಿಯಾಗಿ ಬದುಕುವುದು ಗೆಳೆಯ ರಜನಿಕಾಂತ್ ಕಲಿಸಿದ ಪಾಠ’ ಎನ್ನುತ್ತಾರೆ ಆಪ್ತ ಮಿತ್ರದ ರೂವಾರಿ.

ನಟರು, ಹೆಸರಿದ್ದಾಗ ಅಭಿಮಾನಿಗಳ ಭಯದಿಂದ ಹೊರ ಬರುವುದಿಲ್ಲ. ಹೆಸರು ಹೋದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮನಸ್ಸು ಬರುವುದಿಲ್ಲ. ಹೀಗಾಗಿ ನಾಲ್ಕು ಗೋಡೆಗಳ ನಡುವೆಯೇ ಸಿನಿಮಾ ಮಂದಿಯ ಜೀವನ ಕಳೆದುಹೋಗುತ್ತದೆ. ಈ ಗೊಂದಲದಿಂದ ಹೊರಬಂದು ಸಾಮಾನ್ಯನಂತೆ ಎಲ್ಲರ ಜತೆ ಬದುಕುವವ ನಿಜವಾದ ಕಲಾವಿದ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಇವರು, ಬಂಧು-ಬಳಗದವರ ಮನೆ ಕಾರ್ಯಕ್ರಮಗಳನ್ನು ತಪ್ಪಿಸುವುದಿಲ್ಲ. ಹುಟ್ಟೂರಾದ ಹುಣಸೂರಿಗೆ ವರ್ಷಕ್ಕೊಮ್ಮೆ ಹೋಗುತ್ತಾರೆ. ಮೈಸೂರಿನಲ್ಲಿರುವ ಅಣ್ಣನ ಮನೆಗೆ ಆಗಾಗ ಭೇಟಿ ನೀಡುತ್ತಾರೆ.

‘ಕಲಾವಿದರು ಹಣದ ಹಿಂದೆ ದುಂಬಾಲು ಬೀಳಬಾರದು. ತಮಿಳು/ತೆಲುಗಿನಂತೆ ಉತ್ತಮ ಕಥೆ, ನಿರ್ಮಾಪಕರಿಗೆ ನಾಯಕ/ನಾಯಕಿಯರು ಹೆಚ್ಚಿನ ಆದ್ಯತೆ ನೀಡಬೇಕು.  ಇಲ್ಲವಾದರೆ ಕನ್ನಡ ಸಿನಿಮಾ ಜಗತ್ತು ಕೂಡ ಮರಾಠಿ, ಬಂಗಾಳಿ, ಗುಜರಾತಿ ಚಿತ್ರ ರಂಗದ ರೀತಿಯಲ್ಲಿಯೇ ಮೂಲೆಗುಂಪಾಗಿ ಹೋಗುತ್ತದೆ. ನಾವೆಲ್ಲ ,  ನಮ್ಮ  ಭಾಷೆಯ ಚಿತ್ರ ರಂಗ ಬೆಳೆಯಬೇಕೆಂಬ ಕನಸು ಕಂಡವರು. ಈಗಿನ ಸಿನಿಮಾಗಳನ್ನು ನೋಡಿದರೆ ಬೇಸರವಾಗುತ್ತಿದೆ.  ಸದ್ಯಕ್ಕೆ ಯಾವ ಸಿನಿಮಾವನ್ನೂ ಮಾಡುವ ಇರಾದೆಯಿಲ್ಲ’ ಎಂದು ದ್ವಾರಕೀಶ್ ಮಾತು ಮುಗಿಸುವ ಹೊತ್ತಿಗೆ ಮನೆಗೆ ಅಭಿಮಾನಿಯೊಬ್ಬರ ಆಗಮನವಾಗಿತ್ತು .

ಮೂಲ ಹೆಸರು-ಬಂಗ್ಲೆ  ಶ್ಯಾಮರಾವ್ ದ್ವಾರಕನಾಥ್
ಜನ್ಮ ದಿನಾಂಕ- ೧೯.೦೮.೧೯೪೨
ಮೂಲ ಸ್ಥಳ-ಹುಣಸೂರು(ಮೈಸೂರು ಜಿಲ್ಲೆ)
ವಿದ್ಯಾಭ್ಯಾಸ- ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ವೀರ ಸಂಕಲ್ಪ(೧೯೬೪)
ಇಷ್ಟದ  ನಿರ್ದೇಶಕ-ವಿ.ಶಾಂತಾರಾಮ್(ಹಿಂದಿ)
ಇಷ್ಟದ ನಟ/ನಟಿ-ದಿಲೀಪ್ ಕುಮಾರ್

→ Leave a CommentCategories: ಸ್ಟಾರ್‌ ಡೈರಿ

ಸಮಯವಿದ್ಧಾಗ ಮಗನ ಜತೆ ಕ್ರಿಕೆಟ್ ಆಡುತ್ತಾರೆ!

July 17, 2009 · 5 Comments

ಸಂಜೆ ವೇಳೆಯಲ್ಲಿ  ಬನಶಂಕರಿ ಎರಡನೇ ಹಂತದಲ್ಲಿರುವ ಅರಬಿಂದೋ ಶಾಲೆಯ ಮೈದಾನಕ್ಕೆ ಹೋದರೆ, ನಾಯಕ/ನಿರ್ದೇಶಕ ರಮೇಶ್ ಅರವಿಂದ್ ತಮ್ಮ ಪುಟಾಣಿ ಕಂದ ಅರ್ಜುನ್ ಜತೆ ಬ್ಯಾಟು, ಬಾಲು ಹಿಡಿದು ನಿಂತಿರುತ್ತಾರೆ. ಕ್ರಿಕೆಟ್ ಆಡುತ್ತಾ, ಮಗನ ಹಿಂದೆ ಓಡುತ್ತಿರುತ್ತಾರೆ!  ಚಲನಚಿತ್ರದಲ್ಲಿ  ಡಬ್ಬಲ್ ಆಕ್ಟಿಂಗ್ ಮಾತ್ರ ಮಾಡುತ್ತೇನೆ. ಸಂಸಾರದ ನೌಕೆಯಲ್ಲಿ ಮಗ, ಗಂಡ, ಅಪ್ಪ…ಹಲವಾರು ಪಾತ್ರ ಎಂದು ನಕ್ಕರು ಜಿ.ರಮೇಶ್.

‘ರಾತ್ರಿ ಎಷ್ಟೇ  ತಡವಾಗಿ ಮಲಗಿದರೂ ಕೂಡ, ಪ್ರತಿ ನಿತ್ಯ ಬೆಳಿಗ್ಗೆ  ೬.೧೫ಕ್ಕೆ ಏಳುತ್ತೇನೆ. ೭ಗಂಟೆವರೆಗೂ  ಮನೆಯಲ್ಲಿ  ಬೇರೆ ಯಾರೂ ಎದ್ದಿರುವುದಿಲ್ಲ.  ಈ ವೇಳೆಯಲ್ಲಿ   ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಅಗತ್ಯವಾದ ಯೋಗ, ವ್ಯಾಯಾಮಗಳನ್ನು ಮಾಡುತ್ತೇನೆ.  ಚಿತ್ರೀಕರಣವಿದ್ದರೆ ೬.೩೦-೭ ಗಂಟೆಯೊಳಗೆ ಮನೆ ಬಿಡುತ್ತೇನೆ. ಮನೆಯಿಂದಲೇ ಮೇಕಪ್ ಮಾಡಿಕೊಂಡು ಕಾರಿನಲ್ಲಿ  ಡ್ರೈವರ್ ಜತೆ ಚಿತ್ರೀಕರಣದ ಸ್ಥಳಕ್ಕೆ ಹೋಗುವುದು  ಮಾಮೂಲಾಗಿದೆ. ಚಿತ್ರೀಕರಣ ಇಲ್ಲದ ದಿನ ೮.೩೦ಕ್ಕೆ  ಪತ್ನಿ ಅರ್ಚನಾ, ಮಗ ಅರ್ಜುನ್, ಮಗಳು ನಿಹಾರಿಕಾ ಜತೆ ಕುಳಿತ ತಿಂಡಿ ತಿನ್ನುತ್ತೇನೆ. ಅದರ  ನಂತರ ಆವತ್ತಿನ ಕಾರ್ಯಗಳು ಆರಂಭವಾಗುತ್ತದೆ’ ಎಂದು ಅವರು ದಿನಚರಿ ವಿವರಿಸಲು ಶುರುವಿಟ್ಟರು.

ನಟರಾಗಿದ್ದಾಗ ವರ್ಷಕ್ಕೆ ೮-೯ ಚಿತ್ರದಲ್ಲಿ  ಅಭಿನಯಿಸುತ್ತಿದ್ದ  ರಮೇಶ್, ನಿರ್ದೇಶಕರಾದ ನಂತರ ೧-೨ ಸಿನಿಮಾ ಮಾತ್ರ ಮಾಡುತ್ತಿದ್ದಾರೆ. ಇದುವರೆಗೆ ನಾನಾ ಭಾಷೆಗಳ ೧೨೦ಕ್ಕೂ ಅಕ ಚಿತ್ರದಲ್ಲಿ  ಅಭಿನಯಿಸಿರುವ ಅವರು,  ಈವರೆಗಿನ ಜೀವನದ ಬಹುಪಾಲು ದಿನಗಳನ್ನು  ಚಿತ್ರೀಕರಣದಲ್ಲೇ ಕಳೆದಿದ್ದಾರೆ. ಈ ವರ್ಷ ೬ ಚಿತ್ರಗಳಲ್ಲಿ  ಕಾಣಿಸಿಕೊಳ್ಳಲಿರುವ ಅವರು, ಬೆಳಿಗ್ಗೆ  ೬.೧೫ ಚಿತ್ರೀಕರಣದ ಸ್ಥಳಕ್ಕೆ ಹೋದರೆ, ಮತ್ತೆ  ಮನೆ ತಲುಪುವುದು ರಾತ್ರಿ ೯.೩೦ಕ್ಕೆ. ಚಿತ್ರೀಕರಣವಿಲ್ಲದ ಸಮಯದಲ್ಲಿ  ಬೆಳಿಗ್ಗೆ  ೧೦.೩೦ಗೆ ತಾವು ಮಾಡುತ್ತಿರುವ ಚಿತ್ರದ ಕುರಿತು ಸಂಬಂತರೊಂದಿಗೆ ಚರ್ಚೆ ನಡೆಸುತ್ತಾರೆ. ದಿನಕ್ಕೆ ೪ ಪತ್ರಿಕೆಗಳನ್ನು  ತಪ್ಪದೇ  ಓದುವ ಹವ್ಯಾಸವಿದೆ. ಜತೆಗೆ  ಕನ್ನಡ, ಇಂಗ್ಲೀಷ್ ಕಾದಂಬರಿಗಳನ್ನು ಇಷ್ಟಪಡುತ್ತಾರೆ. ಮಧ್ಯಾಹ್ನ ೮-೧೦ನಿಮಿಷ ನಿದ್ದೆ  ಮಾಡುವುದೆಂದರೆ ರಮೇಶ್‌ಗೆ ಪಂಚ ಪ್ರಾಣವಂತೆ. ನಂತರ ಸ್ವಲ್ಪ  ಹೊತ್ತು  ಟಿವಿ ನೋಡುತ್ತಾರೆ. ೩.೩೦ರಿಂದ ಚಿತ್ರದ ಕುರಿತು ಮತ್ತೆ ಚರ್ಚೆ ಆರಂಭಿಸಿ, ೫.೩೦ ವೇಳೆಗೆ ಫ್ರೀ ಆಗುತ್ತಾರೆ. ಸಂಜೆ ಕತ್ತಲಾದ ನಂತರ ಮಗ ಅರ್ಜುನ್ ಜತೆ ಕ್ರಿಕೆಟ್, ಪತ್ನಿ-ಮಕ್ಕಳ ಜತೆ ವಿಹಾರ…

ಒಂದು ಚಿತ್ರ  ಮುಗಿದ ನಂತರ ಕುಟುಂಬದ ಜತೆ  ನಾಲ್ಕಾರು ದಿನ ದೂರದೂರಿಗೆ ಪ್ರವಾಸಕ್ಕೆ ಹೋಗುವುದು ಅವರ ರೂಢಿ. ಅಪ್ಪ-ಅಮ್ಮ, ಸಹೋದರರೆಲ್ಲ  ಮನೆಗೆ ಸಮೀಪದಲ್ಲೆ  ಇದ್ದಾರೆ. ಬಿಡುವಿನ ವೇಳೆಯಲ್ಲಿ  ಅವರ ಮನೆಗೆ ಹೋಗುತ್ತೇನೆ ಎನ್ನುತ್ತಾರೆ. ಹಿರಿಯ ನಾಗರೀಕರಿಗಾಗಿ ಇರುವ ‘ಡಿಗ್ನಿಟಿ ಫೌಂಡೇಷನ್’ ಹಾಗೂ  ಬುದ್ದಿಮಾಂಧ್ಯ ಮಕ್ಕಳ ಸಂಸ್ಥೆಯಾದ ‘ಮಾನಸ’ಕ್ಕೆ ರಾಯಭಾರಿಯಾಗಿರುವ ಇವರು, ಅರ್ಥಪೂರ್ಣ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತಾರೆ. ಜತೆಗೆ, ಶಾಲಾ ಕಾರ್ಯಕ್ರಮಗಳನ್ನೂ ಅಟೆಂಟ್ ಮಾಡುತ್ತಾರೆ. ಚಿತ್ರೀಕರಣದ ಸಮಯದಲ್ಲಿ  ಮಾತ್ರ ಅಭಿಮಾನಿಗಳಿಗೆ ಭೇಟಿಯ ಅವಕಾಶ. ಕಾರಿನಲ್ಲಿ  ಪ್ರಯಾಣ ಮಾಡುವಾಗ ಪರಿಚಿತರು, ಸ್ನೇಹಿತರು, ಅಭಿಮಾನಿಗಳಿಂದ ಬಂದಿರುವ ಇ-ಮೇಲ್, ಮೊಬೈಲ್ ಸಂದೇಶವನ್ನು ಪರಿಶೀಲಿಸಿ ಉತ್ತರ ನೀಡುತ್ತಾರೆ. ಯಾರೇ ಫೋನ್ ಮಾಡಿದರೂ ಕೂಡ, ಸ್ವತಃ  ಅವರೇ ರಿಸೀವ್ ಮಾಡಿ ಮಾತನಾಡುತ್ತಾರೆ. ಪ್ರಯಾಣದ ಸಮಯ ಡಿವಿಡಿ ನೋಡಲು, ಅಧ್ಯಯನಕ್ಕೆ ಮೀಸಲು.

‘ಹುಟ್ಟಿ-ಬೆಳೆದಿದ್ದೆಲ್ಲ  ಬೆಂಗಳೂರಿನಲ್ಲಾದರೂ, ೪ನೇ ತರಗತಿವರೆಗೆ  ಓದಿದ್ದು   ತಮಿಳುನಾಡಿನ ‘ಕುಂಬಕೋಣಂ’ನಲ್ಲಿರುವ ಅಜ್ಜಿಮನೆಯಲ್ಲಿ. ತಮಿಳಿನಲ್ಲಿ  ರಮೇಶ್ ಅಂತಾ ಇನ್ನೊಬ್ಬ  ನಟರಿದ್ದರು. ಹಾಗಾಗಿ ನನ್ನ  ಹೆಸರಿನ ಹಿಂದೆ ‘ಅರವಿಂದ್’ ಸೇರ್ಪಡೆ ಆಯಿತು. ಅದು ಹೇಗೆ, ಯಾರಿಂದ ಸೇರ್ಪಡೆಯಾಯಿತು ಎಂದು ನನಗೂ ಸರಿಯಾಗಿ ಗೊತ್ತಿಲ್ಲ.  ಅಲ್ಲಿ ಅರವಿಂದ್ ಎಂದು ಜನಪ್ರಿಯನಾದೆ. ಕನ್ನಡದಲ್ಲಿ  ರಮೇಶ್ ಅರವಿಂದ್ ಎಂದೇ ಪರಿಚಿತನಾದೆ’ ಎಂದು ಮಾತು ರಮೇಶ್ ಮುಗಿಸಿದರು.

ಜನ್ಮ ಕುಂಡಲಿ
ಮೂಲ ಹೆಸರು-ಜಿ.ರಮೇಶ್
ಜನ್ಮ ದಿನಾಂಕ-ಸೆ.೧೦, ೧೯೬೪
ಮೂಲ ಸ್ಥಳ-ಬೆಂಗಳೂರು
ವಿದ್ಯಾಭ್ಯಾಸ-ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ಮೌನಗೀತೆ(ಜನಪ್ರಿಯವಾಗಿದ್ದು  ‘ಸುಂದರ ಸ್ವಪ್ನ’ ಚಿತ್ರದ ಮೂಲಕ)
ಇಷ್ಟದ  ಸಿನಿಮಾ-ಲಗಾನ್, ಭೂತಯ್ಯನ ಮಕ್ಕಳು
ಇಷ್ಟದ ನಟ/ನಟಿ-ಕಮಲ್‌ಹಾಸನ್


→ 5 CommentsCategories: ಸ್ಟಾರ್‌ ಡೈರಿ

ಮಲ್ಲಿಗೆಯ ಜಾಡು ಹಿಡಿದು ಹೊರಟವರಿಗೆ…

July 1, 2009 · 6 Comments

Rajendra Karanth

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪ
ಣೆಯೇ  ದೊರೆಯೇ?
ನವಿಲೂರು ಮನೆಯಿಂದ ನುಡಿಯೊಂದು ತಂದಿಹೆನು
ಬಳೆಯ ತೊಡಿಸುವುದಿಲ್ಲ  ನಿಮಗೆ…

ಹಣ್ಣು-ಹಣ್ಣು  ಗಡ್ಡದ, ಬಿಳಿ ತಲೆಕೂದಲಿನ,  ಬಗಲಿನಲ್ಲೊಂದು ಬಳೆಯ  ಗಂಟು ಹೊತ್ತಿರುವ ೯೫ರ ಪ್ರಾಯದ ಮುದುಕ ರಂಗ ಪ್ರವೇಶಿಸಿದ್ದಾನೆ.

‘ಯಾಕೆ ಹಂಗ್ ನೋಡೀರಿ? ಗುರ್ತು ಸಿಕ್ಕಲಿಲ್ಲವ್ರಾ-ಅದು ನಿಮ್ಮ  ತೆಪ್ಪಲ್ಲ  ಬುಡಿ…ಈ ಸಿನಿಮಾ ಟಿವಿಯವರು ನಂಗೆ ಫ್ಯಾನ್ಸಿ  ಡ್ರೆಸ್ ತೊಡಿಸಿ ಯಕ್ಷಗಾನದ ಕೋಡಂಗಿ ಹಂಗ್ ಮಾಡಿಬುಟ್ಟವ್ರೆ ಅಂತೀನಿ..ಬಡವ…ಊಂ ಈ ಬಡ ಬಳೆಗಾರ ಚೆನ್ನಯ್ಯ ಇದ್ದದ್ದೇ  ಹಿಂಗೆ ಸಾಮಿ…ಇಂಗ್ಲೆಂಡೂ, ಅಮೆರಿಕ, ದುಬಯ್ಯಿ…ಕನ್ನಡದ ಮಂದಿ ಇರೋ ಕಡೆಯಲ್ಲ  ನಮ್ಮ  ಊರು ಶಾನೇ ಫೆಮಸ್ಸು…

ಕವಿ ಕೆ.ಎಸ್ ನರಸಿಂಹ ಸ್ವಾಮಿಗಳ ಕಲ್ಪನೆಯ ಕೂಸಾದ ‘ಬಳೆಗಾರ ಚೆನ್ನಯ್ಯ’ ಪಟ ಪಟ ಮಾತನಾಡುತ್ತಿದ್ದರೆ, ಇಡೀ ರಂಗಭೂಮಿಯ ತುಂಬೆಲ್ಲ  ಚಪ್ಪಾಳೆಯ ಝೇಂಕಾರ ಮೊಳಗಿತ್ತು. ‘ಮೈಸೂರು ಮಲ್ಲಿಗೆ’ ಎಂಬ ಚೆಂದದ ನಾಟಕವೊಂದು ಸದ್ದು-ಗದ್ದಲವಿಲ್ಲದೇ ಆರಂಭವಾಗಿಬಿಟ್ಟಿತ್ತು.

ಮಲ್ಲಿಗೆಯ ಕವಿ ಅಂತಲೇ ನಾಡಿಗೆ ಚಿರಪರಿಚಿತರಾದ ಕೆ.ಎಸ್ ನರಸಿಂಹಸ್ವಾಮಿಗಳ  ಬದುಕು-ಬರಹದ ಮೇಳೈಕೆಯಿರುವ ನಾಟಕವದು. ಅಲ್ಲಿ  ನರಸಿಂಹ ಸ್ವಾಮಿಗಳ ಕವಿತೆಯ ಜತೆಯಲ್ಲೇ, ಬದುಕು ಬಿಚ್ಚಿಕೊಳ್ಳುತ್ತಾ  ಹೋಗುತ್ತದೆ. ಇಡೀ ನಾಟಕವನ್ನು  ಎರಡು ಘಟ್ಟಗಳನ್ನಾಗಿ ವಿಗಂಡಿಸಲಾಗಿದೆ. ಈ ನಾಟಕದ ಸೂತ್ರಧಾರನಾದ ಚೆನ್ನಯ್ಯ, ಕವಿಯ ಮರಿಮಗಳು ಮತ್ತು ಆಕೆಯ ಮೊಮ್ಮಕ್ಕಳನ್ನು ನವಿಲೂರಿನಲ್ಲಿ  ಭೇಟಿಯಾಗುತ್ತಾನೆ. ಅವರೆದುರು ಕವಿ ಬದುಕಿದ್ದ  ದಿನಗಳನ್ನು ನೆನಪಿಸಿಕೊಳ್ಳುತ್ತಾನೆ. ಕವಿಯ ಕುರಿತಾಗಿ ಕಥೆಯನ್ನು ಹೇಳಲು ಶುರುವಿಡುತ್ತಾನೆ. ಚೆನ್ನಯ್ಯನ ನೆನಪುಗಳೇ ಇಲ್ಲಿನ ಕಥಾವಸ್ತು. ‘ಮನೆಯೆದುರಿಗಿನ ಮಲ್ಲಿಗೆಯ ಮರವಿಲ್ಲ, ಸಿಹಿ ನೀರಿನ ಬಾವಿಯೂ ಇಲ್ಲ. ಆದರೆ ನವಿಲೂರಿನ ರಸ್ತೆ ಮಾತ್ರ ಬದಲಾಗಿಲ್ಲ! ನಾನು ಬಿದ್ದು  ಕಾಲು ಮುರಿದುಕೊಂಡಿದ್ದ  ರಸ್ತೆಯ ನಡುವಣ ಗುಂಡಿ ಮಾತ್ರ ೫೦ವರ್ಷಗಳ ನಂತರವೂ ಹಾಗೆ ಇದೆ’ ಎಂಬ ಚೆನ್ನಯ್ಯನ ಮಾತು ಪ್ರೇಕ್ಷಕರನ್ನು ನಗೆಗಡಲಲ್ಲಿ  ತೇಲಿಸುತ್ತದೆ. ಕುಡಿಯಲು ಪೆಪ್ಸಿ  ತಂದಿಡುವ ಮೊಮ್ಮಕ್ಕಳು…ಬೆಲ್ಲ , ನೀರು ಕೊಡ್ರವೌ  ಎಂಬ ಚೆನ್ನಯ್ಯನ ಉತ್ತರ…ಹಿಂದಿನ-ಇಂದಿನ ತರೆಮಾರುಗಳಲ್ಲಾದ ಪರಿವರ್ತನೆಯ ತುಲನೆಯಲ್ಲೇ  ಮೊದಲಾರ್ಧ ಕಳೆದು ಹೋಗುತ್ತದೆ.

ಇಲ್ಲಿ  ನರಸಿಂಹ ಸ್ವಾಮಿಗಳಿಗೆ ಹದಿನಾರರ ಪ್ರಾಯ. ಪ್ರೀತಿಯ ಹುಂಬುತನ. ನವಿಲೂರಿನ ಚೆಂದದ ಹುಡುಗಿ ಶಾನುಬೋಗರ ಮಗಳ ಮೇಲೆ ಕವನ ಕಟ್ಟುವ ತವಕ! ಕೊಂಚ ನಗು, ಸ್ವಲ್ಪ  ಸಂತಸ…ಬರಹಗಾರನೊಬ್ಬನ  ಹುಂಬುತನ, ಹುಚ್ಚುತನ…ಎಲ್ಲವೂ ಇಲ್ಲಿದೆ.

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ
ಚಿತ್ರದ ಹೂವಿತ್ತು-ಪದುಮಳು
ಹಾಕಿದ ಹೂವಿತ್ತು.

ಸೀತಮ್ಮನ್ನನ್ನು  ಮದುವೆಯಾದ ಕವಿ ಮಾವನ ಬಂದಾಗ ಹುಟ್ಟುವ ಈ ಚೆಂದದ ಕವಿತೆ ಪ್ರೇಕ್ಷಕರನ್ನು ಆನಂದದ ಅಲೆಯಲ್ಲಿ  ತೇಲಿಸುತ್ತಿರುವಾಗಲೇ ಮೊದಲಾರ್ಧದ ಮುಕ್ತಾಯಕ್ಕೆ ಬಂದಿರುತ್ತದೆ.

cennayya-2***

ನಾಟಕದ ನಿಜವಾದ ಕಥೆ ಆರಂಭವಾಗುವುದೇ ದ್ವಿತೀಯಾರ್ಧದಿಂದ. ಕವಿ, ಶಾನುಭೋಗರ ಮಗಳಾದ ಸೀತಮ್ಮನನ್ನು  ವರಿಸಿದ್ದಾರೆ. ಪುಟ್ಟ  ಬಾಡಿಗೆ ಮನೆಯಲ್ಲಿ  ಅರೆ ಹೊಟ್ಟೆ-ಬಟ್ಟೆಯೊಂದಿಗೆ ಸಂಸಾರದ ನೌಕೆ ಸಾಗುತ್ತಿದೆ. ಕವಿಯ ಮಗ, ಮಗಳು, ಹೆಂಡತಿ, ಸಂಸಾರ…ಇದರ ಸುತ್ತವೇ ಸಾಗುವ ಕಥೆ, ಕನಿಷ್ಠ  ಮೂರು ಸಲವಾದರೂ  ಪ್ರೇಕ್ಷಕನ ಕಣ್ಣಲ್ಲಿ  ನೀರು ಜೀನುಗುವಂತೆ ಮಾಡುತ್ತದೆ.

ಸ್ವಂತ ಅನ್ನುವುದು ಏನಿದೆ ಚೆನ್ನಯ್ಯ? ‘ನಾನು’ ಅನ್ನೋದೆ ಬಾಡಿಗೆ…ಎಂಬ ಕವಿಯ ಹತಾಶೆಯ ಮಾತು ಕರುಳನ್ನು ಕಿವಿಚುತ್ತದೆ. ಗಂಡನ ಮನೆಯಿಂದ ತವರು ಮನೆಗೆ ಬರುವ ಮೀನಾಳ ದೃಶ್ಯ, ರೈಲಿನ ಪಯಣದೊಂದಿಗೆ ಅಂತ್ಯ ಕಂಡಾಗ ಕೈಯಿ  ನಮಗೆ ಗೊತ್ತಿಲ್ಲದಂತೆ ಕರವಸ್ತ್ರವನ್ನು ತಡಕಾಡುತ್ತಿರುತ್ತದೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ  ಬರುವಳು ಹೊದ್ದು  ಮಲಗು ಮಗುವೇ ಜೋ ಜೋ ಜೋ…

ನಿನ್ನ ಮಗನ ಕುರಿತಾಗಿ ಬರೆದಿರುವ ಕವನ. ಈ ವಾರ ಸುಧಾದಲ್ಲಿ  ಬರತ್ತೆ…ಮಗ ಅನಂತುವಿನ ಬಳಿ ಕವಿ ಹೇಳುವ ಮಾತು, ಅಪ್ಪ-ಮಗನ ಶೀತಲ ಸಮರ, ಸಿಟ್ಟು  ಮಾಡಿಕೊಂಡು ಹೋಗುವ ಅನಂತುವಿನ ದೃಶ್ಯ ಮತ್ತೆ ಕಣ್ಣಲ್ಲಿ  ನೀರು ಬರಿಸುತ್ತದೆ.

‘ಶೆಟ್ರೆ ಒಂದೈದು ಸಾವಿರ ಬೇಕಿತ್ತು. ಈ ಕವನಗಳಿಗೆ ಅಷ್ಟು  ಬೆಲೆಯಿದೆಯಾ…’ಹೆಂಡತಿಯ ಔಷಗೋಸ್ಕರ ಕವನವನ್ನು ಮಾರಲು ಹೊರಟ ಕವಿಯ ಬದುಕಿನ ದೃಶ್ಯ ಎಲ್ಲರ ಕಣ್ಣಂಚಿನಲ್ಲೂ  ನೀರಿಳಿಸುತ್ತದೆ.   ಸಮಗ್ರ ಕಾವ್ಯವನ್ನು ೫,೦೦೦ ರೂ.ಗೆ ಮಾರಿ, ಶೆಟ್ಟ್ರೆ, ಸೂಕ್ತ ಸಮಯದಲ್ಲಿ  ಉಪಕಾರ ಮಾಡಿದ್ರಿ  ಅಂತೇಳಿ ಬರುವ ಕವಿ…

ಬರೆದಿದ್ದನ್ನು  ವಿಮರ್ಶೆ ಮಾಡಿ, ಹೀಗೆ ಬರೆಯಬೇಕಿತ್ತು ಅನ್ನುವವರು…ಎಂಬ ನರಸಿಂಹಸ್ವಾಮಿಗಳ ಮಾತಿನಲ್ಲಿ  ವಿಮರ್ಶಕರ ಕುರಿತಾಗಿನ ಸಿಟ್ಟಿದೆ. ಹೆಂಡತಿಯನ್ನೇ ನಿಜವಾದ ವಿಮರ್ಶಕಿ ಎಂದು ಹೇಳುವಲ್ಲಿ  ಪ್ರೀತಿಯ ಸೊಬಗಿದೆ. ನೋವಿನ ನಡುವೆಯೂ  ಪ್ರೇಕ್ಷಕರನ್ನು ಒಂಚೂರು ನಗಿಸುವ ಯತ್ನ ಖಂಡಿತವಾಗಿಯೂ ನಡೆದಿದೆ!

ಹೌದು, ಬೆಲೆ ಕಟ್ಟಲಾಗದ ಕವಿತೆಗಳನ್ನು ಬರೆದ ಮಲ್ಲಿಗೆಯ ಕವಿಯ ಬದುಕಿನ ಮತ್ತೊಂದು ಮುಖ ಅಲ್ಲಿದೆ. ಪೈಸೆ-ಪೈಸೆಗೂ  ಪರದಾಡಿದ, ದುಃಖವಾಗದೇ ಕವಿತೆ ಹುಟ್ಟತ್ತಾ  ಎನ್ನುತ್ತಲೇ  ನೋವನ್ನು  ನುಂಗಿಕೊಂಡ, ಬಾಡಿಗೆ ಒಂಚೂರು ಹೆಚ್ಚಾಯಿತೆಂದಾಗ ಮನೆಗಳನ್ನು ಬದಲಾಯಿಸುತ್ತಲೇ ಕಾಲ ಕಳೆದ ಕೆ.ಎಸ್.ನ ಬದುಕಿನಲ್ಲಿದ್ದ  ವ್ಯಥೆಯನ್ನು ಚೆಂದವಾಗಿ ಸೆರೆಹಿಡಿದವರು ರಾಜೇಂದ್ರ ಕಾರಂತರು.

ದೀಪವೂ ನಿನ್ನದೆ, ಗಾಳಿಯೂ ನಿನ್ನದೇ
ಆರದಿರಲಿ ಬೆಳಕು…

ನನ್ನ  ಅತ್ಯಂತ ಇಷ್ಟದ ಹಾಡು ರಂಗದಲ್ಲಿ  ಕೇಳಿಸುವಾಗ, ನರಸಿಂಹ ಸ್ವಾಮಿಗಳ ತೊಡೆಯ ಮೇಲೆ ಪತ್ನಿ ಸೀತಮ್ಮ  ಕೊನೆಯುಸಿರೆಳೆದಿರುತ್ತಾರೆ. ನಾಟಕ ಅಂತ್ಯಕ್ಕೆ ಬಂದು ನಿಲ್ಲುತ್ತದೆ.  ಇಡೀ ನಾಟಕ, ಮತ್ತೆ-ಮತ್ತೆ  ನೋಡಬೇಕು ಅನ್ನಿಸುವಷ್ಟರ  ಮಟ್ಟಿಗೆ ಗೆಲುವು ಸಾಸಿದೆ. ‘ನೀವು ನೋಡಿ ಬನ್ನಿ’ ಅಂತಾ ನಮ್ಮ ಗೆಳೆಯರನ್ನು ಒತ್ತಾಯ ಮಾಡಿ ಕಳುಹಿಸುವಷ್ಟರ  ಮಟ್ಟಿಗೆ ಸೊಗಸಾಗಿದೆ. ನಾನಂತೂ, ನನ್ನ ಸುಮಾರು ಗೆಳೆಯರನ್ನು ಕಳುಹಿಸಿದ್ದೇನೆ. ನೀವು ಹೋಗಿ ಬರುವಿರಿ ತಾನೇ?!

ಡಾ. ಬಿ.ವಿ ರಾಜಾರಾಮ್ ನೇತೃತ್ವದ ಕಲಾಗಂಗೋತ್ರಿ ತಂಡ ‘ಮೈಸೂರು ಮಲ್ಲಿಗೆಯ’ ೧೦೦ನೇ ಪ್ರದರ್ಶನದ ಹೊಸ್ತಿಲಿನಲ್ಲಿರುವಾಗಲೇ,  ದ.ರಾ ಬೇಂದ್ರೆ  ಬದುಕು-ಬರಹ ಆಧಾರಿತ ‘ಗಂಗಾವತರಣ’ಕ್ಕೆ ಮಿತ್ರ ರಾಜೇಂದ್ರ ಕಾರಂತರು ಸಜ್ಜಾಗಿದ್ದಾರೆ.

ಘಮ ಘಮಿಸ್ತಾವ ಮಲ್ಲಿಗೆ
ನೀ ಹೊರಟ್ಟಿದ್ದೆಲಿಗೆ…

ಬೇಂದ್ರೆ ಬರೆದ ಮಲ್ಲಿಗೆ ಜಾಡು ಹಿಡಿದು, ಹಿಂದಿನ ಕವಿಗಳನ್ನು  ಮತ್ತೆ ಮತ್ತೆ  ನೆನಪಿಸಲು ಹೊರಟಿರುವ ಕಾರಂತರು ಗೆಲ್ಲುತ್ತಾರೆ ಎಂಬುದರಲ್ಲಿ  ಯಾವುದೇ ಅನುಮಾನವಿಲ್ಲವಾದರೂ, ಅವರ ಯತ್ನಕ್ಕೆ ಜಯಸಿಗಲಿ ಎಂದು ಹಾರೈಸುವುದು ನಮ್ಮ ಕರ್ತವ್ಯ ಅಲ್ವಾ?

(ಮೈಸೂರು ಮಲ್ಲಿಗೆಯ ಪ್ರದರ್ಶನ ಯಾವತ್ತು, ಎಲ್ಲಿದೆ ಎಂಬುದನ್ನು ತಿಳಿಯಲು ಡಾ.ಬಿ.ವಿ ರಾಜಾರಾಂ-೯೪೪೮೦೬೯೬೬೭ ಅವರನ್ನು ಸಂಪರ್ಕಿಸಬಹುದು)

→ 6 CommentsCategories: ಕ್ರಿಯೇಟಿವ್ ಪೇಜ್

ಸೋತ ಪ್ರೀತಿಗೆ ಸಾಕ್ಷಿಯಾಗುವ ಸಿಟ್ಟು !

June 28, 2009 · 3 Comments

ನಿನ್ನೆ ಅದ್ಯಾಕೊ ಹಳೆಯ ಡೈರಿಯನ್ನು ಹರವಿಕೊಂಡು ಕುಳಿತ್ತಿದ್ದೆ. ಅವಳ ನೆನಪು ಮರೆಯಾಗಿಯೇ ಹೋಯಿತು ಅನ್ನುವಷ್ಟರಲ್ಲಿ  ಮತ್ತೆ ನೆನಪಾದಳು! ಡೈರಿಯ ನೆವವಿಲ್ಲದಿದ್ದರೆ ಅವಳ ನೆನಪಾಗುತ್ತಿರಲಿಲ್ಲ…ಅಲ್ಲಲ್ಲ… ಅವಳ ನೆನಪು  ಮರುಕಳಿಸಲು ಶುರುವಾದ್ದರಿಂದಲೇ  ಡೈರಿಯ ಪುಟ ತಿರುವಿಹಾಕಿದ್ದು!  ನಿಜ ಹೇಳಬೇಕೆಂದರೆ, ಅವಳು ಮತ್ತೆ, ಮತ್ತೆ ನೆನಪಾಗುತ್ತಿರಲಿ ಎಂಬ ಉದ್ದೇಶದಿಂದ  ದಪ್ಪ ದಪ್ಪನೆಯ ಅಕ್ಷರದಲ್ಲಿ  ಅವಳ ಹೆಸರನ್ನು ಡೈರಿಯಲ್ಲಿ  ಬರೆದಿಟ್ಟಿರುವುದು!

ನಾನು ಅವಳನ್ನು ಪ್ರೀತಿಸಿದೆ, ಹಾಗಂತ ಅವಳು ನನ್ನನ್ನು ಪ್ರೀತಿಸಬೇಕಾಗಿತ್ತು  ಎಂಬ ಹಠವೇನಿರಲಿಲ್ಲ. ಆದರೂ, ಅವಳು ನನ್ನನ್ನು ಪ್ರೀತಿಸಲಿಲ್ಲ  ಎಂಬ ಸಿಟ್ಟು! ನನ್ನಲ್ಲಿ  ಏನು ಕೊರತೆಯಿತ್ತು  ಎಂದು ಅವಳು ಹೇಳಲಿಲ್ಲ. ನಾನು ಅವಳನ್ನು ಕೇಳಲಿಲ್ಲ…

ಅವಳಿಗೂ ಅವಳದ್ದೇ ಆದ ಕನಸು, ಕಲ್ಪನೆಗಳಿವೆ. ನಾನು ಹೇಗೆ ನನ್ನ  ಮೂಗಿನ ನೇರಕ್ಕೆ ಸರಿಯಾಗಿ ಆಲೋಚನೆ ಮಾಡುತ್ತೇನೋ, ಅದೇ ತರಹ ಅವಳು, ಅವಳ ಮೂಗಿನ ನೇರಕ್ಕೆ ಸರಿಯಾಗಿ ಆಲೋಚಿಸುತ್ತಾಳೆ…ಇವೆಲ್ಲವೂ ನನಗೆ ಅರ್ಥವಾಗುತ್ತದೆ. ಆದರೂ ಅವಳ ಕುರಿತಾಗಿ ಕೋಪ. ನಾನಷ್ಟು  ಹತ್ತಿರದವನಾಗಿದ್ದರೂ, ಬೇರೆಯವನ ಸಂಗಡ…ಮತ್ತದೇ ಆಲೋಚನೆ!
ಆಕೆ ಇನ್ನು  ಕೈಗೆ ಸಿಗುವುದಿಲ್ಲ  ಎಂಬುದು ಖಾತ್ರಿಯಾಗಿದೆ.  ಹಾಗಂತ,  ಆಕೆ ಸಿಕ್ಕರೂ ಸಿಗಬಹುದೆಂಬ ಪುಟ್ಟ  ಕನಸು ಮಾತ್ರ ಮನಸಿನಿಂದ ದೂರವಾಗಿದೆ ಎನ್ನಲು ಸಾಧ್ಯವಿಲ್ಲ!  ಪಾಪದ ಹುಡುಗಿ, ಚೆಂದದ ಹುಡುಗಿ, ಮುದ್ದು ಮುದ್ದಾದ ಹುಡುಗಿ…ಹಾಗಂತ ಅವಳ ಕುರಿತಾಗಿ ಕಲ್ಪನೆಯೊಂದು  ಒಡಮೂಡುವ ಹೊತ್ತಿನಲ್ಲೇ, ಪಾಪಿ, ಮೋಸಗಾರ್ತಿ…ನನ್ನೊಳಗಣ ಸಿಟ್ಟು  ಜಾಗೃತವಾಗಿಬಿಡುತ್ತದೆ!

ಇದು ಒಂತರಹ ಖಾಯಿಲೆಯಾಗಿರಬಹುದೆಂದು ಡಾಕ್ಟರ್ ಬಳಿ ಹೋದರೆ, ಅವರು ನಿಮಗ್ಯಾವುದೇ ರೋಗವಿಲ್ಲ  ಎನ್ನುತ್ತಾರೆ. ಜಾತಕದಲ್ಲೂ  ದೋಷ ಕಾಣುತ್ತಿಲ್ಲ  ಎಂಬುದು ಜ್ಯೋತಿಷಿಗಳ ಉತ್ತರ! ಹಾಗಾದರೆ ನನ್ನ  ಸಮಸ್ಯೆಗೆ ಪರಿಹಾರ ಸೂಚಿಸುವ ಶಕ್ತಿ ಇರುವುದು ಅವಳಿಗೆ ಮಾತ್ರವಾ?! ಹಾಗಂದುಕೊಳ್ಳುವ ಹೊತ್ತಿಗೆ ಮನಸು ಮತ್ತ್ಯಾವುದೋ ಲಹರಿಗೆ ಹೋಗಿ ಬಿಡುತ್ತದೆ…ಈ ಜಗತ್ತಿನಲ್ಲಿ   ಇವಳೊಬ್ಬಳೇ  ವಿಶ್ವ ಸುಂದರಿಯಾ?

ಛೇ, ಹಾಗಂತ ಅವಳು ಯಾವತ್ತೂ  ನನ್ನಲ್ಲಿ   ಹೇಳಿಕೊಂಡಿಲ್ಲ.  ನಾನೇ ಅವಳನ್ನು  ವಿಶ್ವ ಸುಂದರಿ, ನನ್ನ  ಕನಸು-ಕಲ್ಪನೆಗಳ ರಾಣಿ…ಅಂತೆಲ್ಲ  ಭಾವಿಸಿಕೊಂಡಿದ್ದು!  ಆದರೂ ಅವಳ ಮೇಲೆ ನಾನು ಸುಮ್ಮ ಸುಮ್ಮನೆ  ರೇಗುವುದೇಕೆ? ಪ್ರೀತಿಯ ಹಿಂದೆ ಸಿಟ್ಟು, ದ್ವೇಷ ಇರತ್ತೆ ಅಂತಾ ಬಲ್ಲವರು ಹೇಳುತ್ತಾರೆ…ಆದರೂ ನನಗಂತೂ ಉತ್ತರ ಸಿಗುತ್ತಿಲ್ಲ! ನನ್ನೆಲ್ಲ  ಸಮಸ್ಯೆಗಳನ್ನು  ಮತ್ತೆ  ಅವಳ ಬಳಿ ತೆಗೆದುಕೊಂಡು ಹೋದರೆ ಪರಿಹಾರ ಸಿಗಬಹುದು ಅನ್ನಿಸುತ್ತಿದ್ದರೂ, ಅದಕ್ಕೆ ಮನಸ್ಸು  ಒಪ್ಪುತ್ತಿಲ್ಲ.

ಹಾಗಾಗಿ, ಎಲ್ಲವೂ ಹಾಗೇ ಸುಮ್ಮನೆ…ಅಲ್ವಾ?!

(ವಿ.ಸೂ:-ಸಿಂಪ್ಲಿ ಸಿಟಿಗಾಗಿ ಹಾಗೆ ಸುಮ್ಮನೆ ಬರೆದ ಸ್ವಕಲ್ಪಿತ  ಹಳೆ ಬರಹ)

→ 3 CommentsCategories: ಕ್ರಿಯೇಟಿವ್ ಪೇಜ್