Feed on
Posts
Comments

ಏನು ಬ್ಯೂಸಿ ಅಂತೀರಾ…ನಮ್ಮ ಮಾತುಗಳು ಆರಂಭವಾಗುವುದೇ ಇಲ್ಲಿಂದ. ಪಿಕ್‌ನಿಕ್‌ಗೆ ಪುರುಸೊತ್ತು ಇದೆ, ಚಲನಚಿತ್ರ ಅಂದ್ರೆ ನಮ್ಮ ಕೆಲಸಗಳೆಲ್ಲಾ ಮರೆತು ಹೋಗತ್ತೆ. ಧಾರಾವಾಹಿ ನೋಡಲು ನಮ್ಮಲ್ಲಿ ಸಾಕಷ್ಟು ಸಮಯವಿದೆ. ಆದ್ರೂ ಒಂದಿಷ್ಟು ಕೆಲಸಗಳಿಗೆ ಮಾತ್ರ ನಮ್ಮದು ಅದೇ ರಾಗ! ಯಾವುದಾದರೂ ಒಳ್ಳೆ ಕೆಲಸ ಮಾಡುತ್ತೇವೆ, ಒಳ್ಳೆ ವಿಚಾರ ಹೇಳುತ್ತೇವೆ ಅಂತಾ ನಮ್ಮ ಈ ಪ್ಯಾಟಿ ಜನರನ್ನು ಕರೆದು ನೋಡಿ ಊಹುಂ ಸುತಾರಾಂ ಅವರಿಗೆ ಪುರುಸೊತ್ತಿರದು!
ಮೊನ್ನೆ ಅದ್ಯಾಕೋ ನನ್ನ ಸಂಚಿ ನಾಗಿ ಕಥೆ ಓದಿದ ವೆಂಕಟ ಲಕ್ಷ್ಮಿಯವರು ಇಂದಿನ ಕತೆಗಾರರ ಕುರಿತಾಗಿ ಮಾತಾಡಲು ಕುಳಿತರು. ಇವತ್ತಿನ ಬರಹಗಾರರಿಗೆಲ್ಲಾ ಪೇಶನ್ಸ್‌ ಇಲ್ಲ. ಕಥೆಗಳೆಲ್ಲಾ ಚಿಕ್ಕದಾಗುತ್ತಿದೆ. ವಿಷಯ ವಿಸ್ತಾರವಾದದ್ದನ್ನು ಆಯ್ದುಕೊಂಡು ನರೇಶನನ್ನು ಚಿಕ್ಕದಾಗಿ ಮಾಡುತ್ತಾರೆ. ನಿಮ್ಮ ಕಥೆಯೂ ಹಾಗೇ ಆಗಿದೆ ಅಂತಾ ಅವರು ಮಾತು ಮುಗಿಸಿದರು. ಆಫ್‌ಕೋರ್ಸ್ ಅದು ನಿಜ ಕೂಡಾ. ಆದರೆ ಅದಕ್ಕಿಂತ ಮುಖ್ಯವಾಗಿ ಕಥೆ ಓದುವ ಮಂದಿಗೆ ಎಷ್ಟು ಪೇಶನ್ಸ್‌ ಇದೆ ಅನ್ನೋದು ಮುಖ್ಯವಾಗತ್ತೆ.
ಶಿವರಾಮ ಕಾರಂತರು ಒಂದು ಕುಚೋದ್ಯ ಹೇಳುತ್ತಿದ್ದರು. ಅವರ ಮೂಕಜ್ಜಿಯ ಕನಸಿಗೆ ಪ್ರಶಸ್ತಿ ಬಂದಾಗ ಅನೇಕ ಕಡೆ ಅವರಿಗೆ ಸನ್ಮಾನ ಆಯಿತಂತೆ. ಸಾಕಷ್ಟು ಜನ ಅವರ ಕಾದಂಬರಿ ಗುಣಗಾನ ಮಾಡಿದರಂತೆ. ಆದ್ರೆ ಅದರಲ್ಲಿ ಮುಕ್ಕಾಲು ಪಾಲು ಜನ ಕಾದಂಬರಿ ಓದದೇ ಗುಣಗಾನ ಮಾಡಿದವರಂತೆ! ಈ ವಿಚಾರವನ್ನು ಕಾರಂತರು ತುಂಬಾ ಸೊಗಸಾಗಿ ಬರೆದುಕೊಳ್ಳುತ್ತಾರೆ.
 ಇತ್ತೀಚೆಗೆ ನನ್ನ ಬರಹವನ್ನು ಸುಮ್‌ಸುಮ್ನೆ ಹೊಗಳುವವರೆ ಹೆಚ್ಚಾಗಿದ್ದಾರೆ. ನಾನು ಬ್ಲಾಗ್‌ ನಿಲ್ಲಿಸುತ್ತೀನಿ ಅಂತಾ ಮೊನ್ನೆ ಚೇತನಕ್ಕಾ ಅದ್ಯಾಕೋ ಗುನುಗುತ್ತಿದ್ದರು. ತಕ್ಷಣ ನನಗೆ ಕಾರಂತರ ಮಾತು ನೆನಪಾಯಿತು. ಒಂದು ಕೃತಿಯನ್ನು, ಬರಹವನ್ನು ಪೂರ್ಣ ಓದದೇ ಹೊಗಳುವ ಟ್ರೆಂಡು ಆವತ್ತಿನಿಂದ ಇವತ್ತಿನವರೆಗೂ ಇದೆ. ಸುದೀರ್ಘ ಬರಹವನ್ನೋ, ಕಥೆಯನ್ನೋ ಬರೆದರೆ ಅದರಲ್ಲೂ ಇಂಟರ್‌ ನೆಟ್, ಬ್ಲಾಗ್‌ಗಳಲ್ಲಿ ಬರೆದರೆ ಖಂಡಿತಾ ಜನ ಓದಲ್ಲ. ಅಂದಹಾಗೆ ಬ್ಲಾಗ್‌ ಎಂಬುದು ನನ್ನ ಮಟ್ಟಿಗಂತೂ ಪ್ರಭಾವಶಾಲಿ ಅನ್ನಿಸುವ ಓದುವ ಮಾಧ್ಯಮವಲ್ಲ.
ಮೊನ್ನೆ ಹೀಗೆ ಪುತ್ತೂರಿನ ಕುಂಟನಿ ನಿವಾಸದಿಂದ ಅಮೆರಿಕದ ಕೆಲ ಮಿತ್ರರ ಬ್ಲಾಗ್‌ವರೆಗೂ ಸುಮ್ನೆ ಒಂದು ವಾಕಿಂಗ್‌ ಹೋಗಿ ಬಂದೆ. ಎಷ್ಟೊಂದು ಅದ್ಬುತ ಬರಹಗಳಿದ್ದವು ಅಂದ್ರೆ ಕೆಲವು ವಾಸ್ತವವಾಗಿ ಚರ್ಚೆಯಾಗಬೇಕಿತ್ತು. ಆದ್ರೆ ಒಂದು ಕಮ್ಮೆಂಟ್ ಕೂಡ ಕೆಲ ಬರಹಗಳಿಗೆ ಇರಲಿಲ್ಲ. ವಾಸ್ತವವಾಗಿ ಬರಹಗಾರ ಜನ ಕಮ್ಮೆಂಟ್ ಮಾಡಲಿ, ಪ್ರತಿಕ್ರಿಯೆ ನೀಡಲಿ ಅಂತಾ ಬರೆಯುವುದಿಲ್ಲ( ನನ್ನಂತಹವನು, ಇತರರ ಕುರಿತು ನನಗೆ ಗೊತ್ತಿಲ್ಲ) ಆದ್ರೂ ಅಂತಹ ಬರಹದ ಕುರಿತು ಕನಿಷ್ಟ ಪಕ್ಷ ಚರ್ಚೆ ನಡೆಸಬೇಕು. ಸಾಹಿತ್ಯವಲಯದಲ್ಲಿ ಒಂದಿಷ್ಟು ವಿಚಾರ ಚರ್ಚೆಯಾಗಬೇಕು( ಯಾಕಂದ್ರೆ ಇಂದಿನ ಸಾಹಿತ್ಯವಲಯ ಜನಪ್ರಿಯ ವಾಗಿರುವುದೇ ಮಾತಿಗಾಗಿ, ಉಪದೇಶಕ್ಕಾಗಿ, ಚರ್ಚೆಗಾಗಿ ಹೊರತು ಕೃತಿಗಾಗಿ, ಕಾರ್ಯಕ್ಕಾಗಿ ಅಲ್ಲ!)
“ಇನ್ನೊಂದು ಸಾಹಿತ್ಯ ಚರಿತ್ರೆ” ಅಂತಾ ಆ ಪುಸ್ತಕದ ಹೆಸರು. ಸುಮತೀಂದ್ರ ನಾಡಿಗರು ಬರೆದ ಪುಸ್ತಕ. ಆಗಿನ ಕಾಲದಲ್ಲಿ ಸಾಹಿತಿಯೊಬ್ಬನ ಕವನ, ಲೇಖನಗಳು ಹೇಗೆ ಚರ್ಚೆಯಾಗುತ್ತಿತ್ತು, ಅನಂತಮೂರ್ತಿ, ಅಡಿಗರಂತಹ ದಿಗ್ಗಜರ ನಡುವೆ ಯಾವ ತರಹ ಒಂದು ವಿಚಾರದ ಕುರಿತಾಗಿ ಚರ್ಚೆ ನಡೆಯುತ್ತಿತ್ತು ಅನ್ನುವುದು ವಿವರಿಸುವ ಅದ್ಬುತ ಪುಸ್ತಕವದು. ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರನೊಬ್ಬ ಹೇಗೆ ವಿಕಸಿತಗೊಳ್ಳುತ್ತಾ ಹೋಗುತ್ತಾನೆ ಎಂಬುದನ್ನು ಆ ಪುಸ್ತಕದಿಂದ ಅರಿತುಕೊಳ್ಳಬಹುದು.
ಯಾವೊಬ್ಬನೂ ಹುಟ್ಟುತಲೇ ಸರ್ವಜ್ಞನಾಗುವುದಿಲ್ಲ. ತಪ್ಪುಗಳನ್ನು ತಿದ್ದಿಕೊಳ್ಳುತ್ತಲೇ ಫ್ರೌಡನಾಗುತ್ತಾ ಹೋಗುತ್ತಾನೆ. ಹಾಗೇ ಬರಹಗಾರನೊಬ್ಬ ಪ್ರೌಡನಾಗಲು ಆತನ ಲೇಖನದ ಮೇಲೆ ನಾವು ಹುಟ್ಟುಹಾಕುವ ಚರ್ಚೆ ಸಹಕಾರಿಯಾಗುತ್ತದೆ. ಜತೆಗೆ ನಮ್ಮ ಚಿಂತನಾ ಲಹರಿಯೂ ವಿಕಸಿತಗೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ಪು.ತಿ.ನ, ಅ.ನಕೃ, ಅಡಿಗ, ಮೊದಲಾದ ಸಾಹಿತಿಗಳ ಕಾಲದಲ್ಲಿ ಸಾಹಿತ್ಯ ಸಮಾಜದ ಚರ್ಚಿತ ವಿಷಯಗಳಲ್ಲಿ ಒಂದಾಗಿದ್ದು (ಲಂಕೇಶ್, ಅನಂತಮೂರ್ತಿ, ತೇಜಸ್ವಿ ಕಾಲದ ಸಾಹಿತ್ಯ ಸಮರವೇ ಬೇರೆ ತರಹದ್ದು!)ಅಂತಾ ನನ್ನಗನ್ನಿಸುತ್ತದೆ.
ಆದರೆ ಇವತ್ತು ನಮ್ಗೆ ಒಂದು ವಿಚಾರದ ಕುರಿತು ಚರ್ಚೆ ಮಾಡುವುದು ಹಾಳಾಗಲೀ, ಬರಹವನ್ನು ಸಂಪೂರ್ಣ ಓದುವಷ್ಟು ಪುರುಸೊತ್ತು ಇಲ್ಲ ಅಲ್ವಾ? ಅಂದಿನ ಜನಾಂಗಕ್ಕೂ ಇಂದಿನ ಪೀಳಿಗೆಗೂ ಇರುವ ವ್ಯತ್ಯಾಸ ಅದೇಷ್ಟು ಅಲ್ವಾ? ಹಾಗಾಗಿಯ ನಾನಂತೂ ಚಿಕ್ಕ ಚಿಕ್ಕ ಕಥೆಯನ್ನೇ ಬರೆಯುವುದು! ಅದು ಕಥೆಯೋ, ಬರಹವೋ ಅಂತಾ ನನಗೂ ಕೆಲವೊಮ್ಮೆ ಅರ್ಥವಾಗುವುದಿಲ್ಲ!

ಸ್ನೇಹಿತರೆ

ನಮ್ಮ ಬಳಗದ ಮತ್ತೊಂದು ಬ್ಲಾಗ್‌ ಆರಂಭವಾಗಿದೆ. ಅದು ರಾಷ್ಟ್ರಶಕ್ತಿ ಕೇಂದ್ರದ ಬ್ಲಾಗ್‌. ದೇಶಕ್ಕಾಗಿ ಏನನ್ನಾದರೂ ಮಾಡುವ ಹಂಬಲವುಳ್ಳ ಯುವ ಪಡೆಯಿಂದಲೇ ಜನಿಸಿದ ಕೇಂದ್ರ ರಾಷ್ಟ್ರಶಕ್ತಿ ಕೇಂದ್ರ. ಬೆಂಗಳೂರಿನಿಂದ ಮುಂದೆ ಜಿಗಣಿ ಅಂತಾ ಒಂದು ಊರಿದೆ. ಅಲ್ಲೊಂದು ಕಂಪನಿ ಡೆಲ್ಫಿ ಆಟೋಮೊಬೈಲ್ಸ್‌. ಅಲ್ಲಿ ದುಡಿಯುವ ಹುಡುಗರ ಪಡೆಯೇ ಈ ರಾಷ್ಟ್ರಶಕ್ತಿ ಕೇಂದ್ರ. ಅಂದಹಾಗೆ ಈ ಸಂಘಟನೆ ಹೊಟ್ಟೆ ತುಂಬಿದವರ ಸಂಘಟನೆಯಲ್ಲ. ಒಂದು ಹೊತ್ತಿನ ಸಂಬಳ ಕಳೆದುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿರುವ ಹುಡುಗರ ಸಂಘಟನೆ. ಕಂಪನಿಯ ಶಿಪ್ಟ್‌ಗಳನ್ನು ಬದಲಿಸಿಕೊಂಡು ಕೇಂದ್ರಕ್ಕಾಗಿ ಸಮಯ ಕೊಡುವ ಹುಡುಗರು ಅವರೆಲ್ಲ. ರಾಜೇಶ್‌ ಅನ್ನುವವರ ಮೇಲುಸ್ತುವಾರಿಯ ಈ ಸಂಘಟನೆಗೆ ಪ್ರತಿಯೊಬ್ಬನೂ ನಾಯಕನೆ. ಸಂಘದ ಕಾರ್ಯಕ್ರಮಗಳ ರೂಪು ರೇಷೆಯ ಹೊಣೆ ಚಕ್ರವರ್ತಿ ಸೂಲಿಬೆಲೆಯವರದ್ದು. ಅಂದಹಾಗೆ ರಾಷ್ಟ್ರಸೇವೆಯ ಇಚ್ಛೆಯುಳ್ಳ ಯಾರು ಬೇಕಾದರೂ ಈ ಸಂಘಟನೆಯ ಸದಸ್ಯರಾಗಬಹುದು. ಇದಕ್ಕೆ ಫೀ ಇಲ್ಲ. ರಾಷ್ಟ್ರಕ್ಕಾಗಿ ಸಮಯ ಕೊಟ್ಟು ಕೆಲಸ ಮಾಡುವ ಮನಸುಗಳೇ ಇಲ್ಲಿನ ಫೀ. ಸಾಧ್ಯವಾದರೆ ನೀವು ನಮ್ಮವರಾಗಿ. ಕೇಂದ್ರದ ಬ್ಲಾಗಿನ ಲಿಂಕ್‌ ಕೊಟ್ಟಿದ್ದೇನೆ.      

                                                                                    ಇಂತಿ                    

                                                                              ವಿನಾಯಕ ಕೋಡ್ಸರ

ಸಂಚಿ ನಾಗಿ ಅಂತಾನೇ ಆಕೆ ನಮಗೆಲ್ಲಾ ಪರಿಚಿತೆ. ರಾಮ ಭಟ್ರ ಮನೆಯ ಕೆಸದಾಕೆ ಅವಳು. ಅವಳ ಕಥೆ ಮಗಳ ಕಥೆಗಿಂತಲೂ ದೊಡ್ಡದು. ಆದ್ರೂ ಮಗಳ ಕಥೆ ಅವಳಗಿಂತಲೂ ದೊಡ್ಡದು! ಕುಂದಾಪುರದ ಕಡೆಯವಳು, ಬಾಬು ಸೇರಿಗಾರನ ಜೊತೆ ಓಡಿಬಂದವಳು ಅಂತಾರೆ ಕೆಲವರು. ಇನ್ನೂ ಕೆಲವರು ನಾಗಿ ಅಂದ್ರೆ ಹುಟ್ಟಾ ಸೂಳೆ ಅಂತಾ ಮೂಗು ಮುರಿತಾರೆ. ಹಾಗಾಗಿ ನಮಗೆಲ್ಲಾ ನಾಗಿ ಅಂದ್ರೆ ಮೊದಲಿಂದಲೂ ಕೂತುಹಲ. ನಾಗಿ ಮ್ಯಾಲೆ ಎಂತಹದೋ ಒಂತರಹ ಗುಮಾನಿ! ಊರಿನ ಜನ ಏನೇ ಆಡಿಕೊಂಡರು ಎಲ್ಲರಿಗೂ ನಾಗಿ ಬೇಕು. ಚಿಕ್ಕ ಪುಟ್ಟ ಕೆಲಸಗಳು ಬಂದಾಗ ಊರ ಜನರ ಬಾಯಲ್ಲಿ ಮೊದಲು ಬರೋ ಹೆಸರು ನಾಗಿಯದ್ದು. ನಿತ್ಯ ಕೆಲಸ ರಾಮ ಭಟ್ರ ಮನೆಯಲ್ಲೇ ಆದರೂ ನಾಗಿ ಯಾವತ್ತು ಯಾರು ಹೇಳಿದ ಕೆಲಸ ನಿರಾಕರಿಸಿದವಳಲ್ಲ. ಮಾಡಿದ ಕೆಲಸಕ್ಕೆ ದುಡ್ಡು ಕೇಳಿದವಳೂ ಅಲ್ಲ. ಬಾಯಿ ತುಂಬಾ ತುಂಬುವ ಹೊಗೆಸೊಪ್ಪಿನ ಒಂದು ಎಲೆ ಅಡಿಕೆ ಕೊಟ್ಟು ಬಿಟ್ಟರೆ ಮುಗೀತು. ಮತ್ತೆ ನಾಗಿಗೆ ದುಡ್ಡು, ಕಾಸು ಏನೂ ಬ್ಯಾಡ. ಹಾಗಾಗಿಯೇ ಇರಬೇಕು ಅವಳಿಗೆ ಸಂಚಿ ನಾಗಿ ಅಂತಾ ಹೆಸರು ಬಂದಿದ್ದು!
ಬೊಮ್ಮನ ಗುಡ್ಡ. ಅದರ ಕೆಳಗೆ ಸೇರಿಗಾರರ ಕೇರಿ. ಅಲ್ಲೆ ಪುಟ್ಟದೊಂದು ಸೋಗೆ ಗುಡಿಸಲು. ನಾಗಿಗೂ ಒಂದು ಗುಡಿಸಲು ಇದೆ ಅಂತಾ ನಮಗೆಲ್ಲಾ ಗೊತ್ತಾಗಿದ್ದು ಆಕೆ ಮನೆ ಹೊದಿಕೆಗೆ ಅಂತಾ ಸೋಗೆ ಕೇಳಲು ಬರುತ್ತಿದ್ದರಿಂದ. ನಾಗಿ ಊರಿನ ಮಂದಿಗೆಲ್ಲಾ ಬೇಕಾದವಳು ಅನ್ನೋದೇನೋ ನಿಜ. ಆದರೆ ಊರಿನ ಮಕ್ಕಳ್ಯಾರೂ ನಾಗಿ ಮನೆ ಕಡೆ ಸುಳಿಯುವ ಹಾಗಿಲ್ಲ! ನಾಗಿ ಮನೆ  ಊರಿನ ನಿಷೇಧಿತ ಪ್ರದೇಶ ಅಂದ್ರೂ ತಪ್ಪಗಲಾರದು. ನಾವೆಲ್ಲಾ ಶಾಲೆಗೆ ಹೋಗುವಾಗ ನಾಗಿ ಮನೆ ಇಲ್ಲೆಲ್ಲೋ ಬರತ್ತಂತೆ ಅಂದುಕೊಂಡು ಹೋಗುತ್ತಿದ್ದೇವು. ನಮ್ಮಂತ ಹುಡುಗರಿಗೆಲ್ಲಾ ನಾಗಿ ಜತೆ ನಾಗಿ ಮನೆಯೂ ಒಂದು ಕುತೂಹಲದ ವಸ್ತು.
ನಮ್ಮ ಜತೆಯೇ ಓದಿದ ಹುಡುಗಿ ಸುಮ. ನಾಗಿ ಮಗಳು ಅಂತಾ ನಮಗೆಲ್ಲಾ ಅವಳ ಮೇಲೆ ಒಂಚೂರು ಕರುಣೆ, ಹಿಡಿಯಷ್ಟು ಪ್ರೀತಿ. ನಾಗಿಗೆ ತದ್ವಿರುದ್ದದ ಸ್ವಭಾವ ಅವಳದ್ದು.  ಬಜಾರಿ ಹೆಣ್ಣು. ಮೇಷ್ಟ್ರಿಗೆಲ್ಲಾ ಎದುರುತ್ತರ ಕೊಡುತ್ತಿದ್ದಳು. ಅಪ್ಪಾ ಗೊತ್ತಿಲ್ಲದ ಮಗಳೇ ಎಷ್ಟು ಸೊಕ್ಕು ನಿನಗೆ ಅಂತಾ ಮೇಷ್ಟ್ರು ಅವಳಿಗೆ ಹೊಡೆಯುತ್ತಿದ್ದರು. ಆವಾಗೆಲ್ಲಾ ನಮಗೆ ಆ ಭಾಷೆಯ ಅರ್ಥ ತಿಳಿತಾ ಇರ್ಲಿಲ್ಲ. ನಾಗಿ ಮಗಳಿಗೆ ಹೊಡೆದರು ಅನ್ನೋದೆ ನಮಗೆ ಖುಷಿ! ಆದ್ರೂ ಒಂದೊಂದ್ಸಾರಿ ಅಯ್ಯೋ ಪಾಪ ಅನ್ನಿಸುತ್ತಿತ್ತು. ಹೆಗಡೆ ಮಗಳು ಏನೂ ಮಾಡಿದರೂ ಹೊಡೆಯದ ಮೇಷ್ಟ್ರು, ನಾಗಿ ಮಗಳಿಗೆ ಮಾತ್ರ ಹೊಡಿತಾರೆ ಅಂತಾ ಸಿಟ್ಟು ಬರುತ್ತಿತ್ತು. ಆದ್ರೆ ಅವಳಿಗೆ ಮಾತ್ರ ಅದ್ಯಾವುದೂ ತಿಳಿಯುತ್ತಲೇ ಇರಲಿಲ್ಲ. ಅದೇ ತುಂಟುತನ, ಅದೇ ಪೆದ್ದುತನ ಅವಳದ್ದು.
ನಿತ್ಯ ಹುಣಸೆ ಬೀಜ, ಪೆರಲೆ ಹಣ್ಣು ತಂದು ಕೊಡುತ್ತಿದ್ದರಿಂದ ನನಗೆ ಸುಮಿ ಬಹಳ ಕೋಸ್ಲ್‌ ಫ್ರೆಂಡ್‌ ಆಗಿಬಿಟ್ಟಿದ್ದಳು! ಆದ್ರೂ ಅವಳ ಜತೆ ಹೆಚ್ಚು ಮಾತಾಡಲು ಹೆದರಿಕೆ. ಯಾರಾದ್ರೂ ನೋಡಿದರೆ ಬೈಯ್ಯುತಾರೆ ಅನ್ನೋ ಭಯ. ಸುಮಾರು ಎಸ್ಸೆಸ್ಸಲ್ಸಿ ಮುಗಿಯುವವರೆಗೂ ಅವಳು ನನ್ನ ಕ್ಲಾಸ್‌ಮೇಟು ಆಗಿದ್ದಳು. ನಾನು ಅಂದ್ರೆ ಅವಳಿಗೆ ತುಂಬಾ ಇಷ್ಟ. ಅವಳ ಮನಸಿನ ನೋವು ನಲಿವು ಎಲ್ಲವನ್ನು ಮುಚ್ಚುಮರೆ ಇಲ್ಲದೆ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಳು. ಹಾಗೇ ಕಥೆ ಹೇಳಬೇಕು ಅನ್ನಿಸಿದಾಗಲೆಲ್ಲಾ ಹುಣಸೆ ಬೀಜದ ನೆವದಲ್ಲಿ ನನ್ನ ಹತ್ತಿರ ಬರುತ್ತಿದ್ದಳು! ಹಾಗೇ ಒಂದು ದಿನ ಸುಮಿ, ನಾಗಿ ಹೇಳಿದ ಕಥೆ ಹೇಳಿದ್ದಳು.
ನಾಗಿ ತಾಯಿ ಕುಂದಾಪುರದಲ್ಲಿ ಸೂಳೆಗಾರಿಕೆ ಮಾಡಿಕೊಂಡು ಬದುಕುತ್ತಿದ್ದವಳಂತೆ. ಒಂದು ಮಗು ಆಗುತ್ತಿದ್ದ ಹಾಗೆ ಮಗಳಿಗೂ ಆ ಸುಳೇಗಾರಿಕೆ ಸೋಂಕು ತಾಗಬಾರದು ಅಂತಾ ಘಟ್ಟ ಹತ್ತಿ ಬಂದವಳು ನಾಗಿ ತಾಯಿ ಅಲಿಯಾಸ್‌ ಐಗಿನ ಮನೆ ಸುಬ್ಬಿ! ಐಗಿನ ಮನೆಯ ಐಯ್ಯನವರ ಮನೆ ಆಳಾಗಿ ಕೆಲಸ ಮಾಡುತ್ತಿದ್ದ ಸುಬ್ಬಿಗೆ ನಾಗಿ ಓದಬೇಕು, ಒಳ್ಳೆ ಹುಡುಗನ್ನ ಹುಡುಕಿ ನಾಗಿಗೊಂದು ಮದ್ವೆ ಮಾಡಬೇಕೆಂಬ ಆಸೆಯಿತ್ತು. ನಾಗಿ ಯಾವುದೇ ಕಾರಣಕ್ಕೂ ತನ್ನಂತೆ ಸೂಳೆ ಅನ್ನಿಸಿಕೊಳ್ಳಬಾರದೆಂಬ ಹಂಬಲವಿತ್ತು. ಹಾಗಾಗಿ ಮಗುವನ್ನು ಇಸ್ಕುಲಿಗೂ ಕಳುಹಿಸಿದಳು. ನಾಗಿ ಆಗೆಲ್ಲಾ ಚೆಂದದ ಚೆಂದನದ ಗೊಂಬೆಯಂತ ಹುಡುಗಿ. ತಾಯಿಗೆ ಮಗಳ ರೂಪದ್ದೇ ಚಿಂತೆ. ಯಾರ ಕಾಮುಕ ಕಣ್ಣಿಗೆ ಮಗಳು ಬೀಳುತ್ತಾಳೋ ಎಂಬುದೇ ಯೋಚನೆಯಾಗಿತ್ತು.  ನಿತ್ಯ ಒಲೆ ಬುಡದಲ್ಲಿ ಕೂತು ಬೆಂಕಿ ಹಚ್ಚಿಸುವಾಗ ಮಗಳಿಗೆ ಬುದ್ದಿವಾದ ಹೇಳುತ್ತಿದ್ದಳು. ಬದುಕಿನ ಕುರಿತಾಗಿ ಕನಸು ಕಟ್ಟಿಕೊಡುತ್ತಿದ್ದಳು.
 ನಾಗಿ ಆಗಿನ್ನು ಹೈಸ್ಕುಲ್‌ ಮೆಟ್ಟಿಲು ಹತ್ತಿದ್ದಳು. ಅದಾಗಲೇ ಒಂದೆರಡು ಮಂದಿ ನಾಗಿ ಹಿಂದೆ ಬಿದ್ದರು. ಹಾಗೆ ಬಿದ್ದವರಲ್ಲಿ ಐಯ್ಯನವರ ಮಗ ರಾಮು, ಹೆಗಡೆಯವರ ಮಗ ಸೋಮು ಇಬ್ಬರು ಅಗ್ರಗಣ್ಯರು. ಆಗತಾನೇ ಯೌವ್ವನ ಮೊಳಕೆಯೊಡೆದಿದ್ದ ನಾಗಿಗೆ ತಾಯಿ ಬಿಟ್ಟು ಮತ್ತೊಬ್ಬ ಸಂಗಾತಿ ಬೇಕಿತ್ತು. ಆ ಇಬ್ಬರು ಕುಬೇರ ಕುವರರು ನಾಗಿಯನ್ನು ಇಂದ್ರಲೋಕದಲ್ಲಿಯೇ ತೇಲಾಡಿಸಿದರು. ಪಟ್ಟಣಕ್ಕೆ ಕರೆದುಕೊಂಡು ಹೋಗಿ ಐಸ್‌ಕ್ರೀಂ ಕೊಡಿಸಿದರು. ಪಿಚ್ಚರ್ ತೋರಿಸಿದರು. ನಾನು ನಿನ್ನನ್ನು ಮದ್ವೆ ಆಗುತ್ತೇನೆ ಅಂತಲೂ ನಂಬಿಸಿದರು. ಕಷ್ಟದಲ್ಲಿ ಬದುಕಿದ ನಾಗಿಗೆ ಆ ಕ್ಷಣಿಕ ಸುಖಗಳೆಲ್ಲಾ ಮೈ ಮರೆಸಿತು. ಬದುಕು ಅಂದ್ರೆ ಇದೆ ಅನ್ನಿಸಿಬಿಟ್ಟಿತ್ತು.
ಆ ಗಳಿಗೆಯನ್ನು ರಾಮು, ಸೋಮು ಇಬ್ಬರೂ ಚೆನ್ನಾಗಿ ಉಪಯೋಗಿಸಿಕೊಂಡರು. ನಾಗಿಯಿಂದ ಪಡೆಯಬೇಕಾದ ಸುಖವನ್ನೆಲ್ಲಾ ಪಡೆದರು. ಹೀಗೆ ದಿನಗಳುರುಳುವಾಗ ಒಂದು ದಿನ ಹೊಟ್ಟೆ ಮುಂದುಬರುತ್ತಿರುವುದರ ಅರಿವು ನಾಗಿಗಾಯಿತು. ಭಯದಿಂದ ನಾಗಿ ಸೋಮು ಬಳಿ ಹೋದರೆ ಅವ ರಾಮುವಿನತ್ತ ಕೈ ತೋರಿದ. ರಾಮು ಸೋಮುವಿನತ್ತ ಕೈ ತೋರಿಸಿದ. ಇಷ್ಟಾಗುವಾಗ ವಿಚಾರ ಸುಬ್ಬಿ ಬಳಿ ಹೋಯಿತು. ಆದರೆ ಅದಾಗಲೇ ನಾಗಿಗೆ ಸೂಳೆ ಪಟ್ಟ ಸಿಕ್ಕಿತ್ತು. ಪಂಚಾಯಿತಿ ಕಟ್ಟೆ ನಾಗಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು. ಅವಳು ಸುಬ್ಬಿ ಮಗಳು ಎಂಬುದನ್ನು ಊರಿಗೂರೇ ಒತ್ತಿ ಒತ್ತಿ ಹೇಳಿತು. ಇದೇ ಕೊರಗಿನಲ್ಲಿ ಸುಬ್ಬಿ ಸತ್ತಳು. ನಂತರ ಬೇಸತ್ತ ನಾಗಿ ಊರು ತ್ಯಜಿಸಿ ನಮ್ಮೂರಿಗೆ ಬಂದಳು ಅಂತಾ ಸುಮಿ ನನಗೆ ಹೇಳಿದಳು. ನಾನು ಎಸ್ಸೆಸ್ಸಲ್ಸಿ ಮುಗಿಸಿ ಮುಂದಿನ ಓದಿಗೋಸ್ಕರ ಊರು ಬಿಟ್ಟೆ. ನಾನು ಊರಿಗೆ ಹೋದಾಗ ಸುಮಿ ಸಿಗಲಿಲ್ಲ. ಸುಮಿ ಊರಲ್ಲಿ ಇದ್ದಾಗ ನಾನು ಹೋಗಲಿಲ್ಲ! ಒಟ್ಟಾರೆ ಆ ಕಥೆ ಹೇಳಿದ ನಂತರ ಸುಮಿ ನನಗೆ ಸರಿಯಾಗಿ ಮಾತಿಗೆ ಸಿಗಲಿಲ್ಲ.
ಶಿವಮೊಗ್ಗದಲ್ಲಿ ಎಂ.ಎ ಓದುತ್ತಿರುವ ನಿಮ್ಮೂರಿನ ಹುಡುಗಿ ಸುಮಾ ನಕ್ಸಲ್‌ ಪಡೆ ಸೇರಿದ್ದಾಳಂತೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದನ್ನು ಖಚಿತಪಡಿಸಿಕೊಳ್ಳಲು ಗಡಿಬಿಡಿಯಿಂದ ಊರಿಗೆ ಓಡಿದ್ದೆ. ಅಷ್ಟು ಕಷ್ಟ ಅನುಭವಿಸಿದರೂ ಎಂದೂ ಸುಮಿ ಕೊಲೆ, ರಕ್ತಪಾತದ ಮಾತಾಡಿದವಳಲ್ಲ. ಬಂದೂಕು ಕಂಡವಳಲ್ಲ. ಆದ್ರೂ ಈಕೆ ಹೇಗೆ ನಕ್ಸಲ್ ಆದಳು ಎಂಬ ಪ್ರಶ್ನೆ ಬಸ್ಸಿನುದ್ದಕ್ಕೂ ನನ್ನನ್ನು ಕಾಡುತ್ತಲೇ ಇತ್ತು. ಇದೇ ಗುಂಗಿನಲ್ಲೇ ಊರು ತಲುಪಿದರೆ, ಊರಲ್ಲಿ ಸೂರ್ಯ ಮೂಡುತ್ತಿರುವಾಗಲೇ ಸ್ಮಶಾನ ಮೌನ ಆವರಿಸಿತ್ತು. ನನ್ನಂತೆ ಸೂಳೆಗಾರಿಕೆ ಮಾಡಿಕೊಂಡು ಬದುಕಿದ್ದರೂ ಒಂಚೂರು ಗೌರವ ಉಳಿಯುತ್ತಿತ್ತು. ಯಾರನ್ನೋ ಕೊಲ್ಲುವ ಹೆಣ್ಣಾಗಲು ಹೋಗಿ ಕೊನೆಗೂ ಜೀವ ತೆತ್ತಳಲ್ಲ ಎಂದು ನಾಗಿ ಒಂದೇ ಸಮನೆ ಕಿರುಚುತ್ತಿದ್ದಳು.
ಆ ದರಿದ್ರಾ ಪ್ರಾಧ್ಯಾಪಕನಿಂದಲೇ ಇವಳ ಬದುಕು ಹಾಳಾಗಿದ್ದು, ಅವನ ಮಗಳು ಮದ್ವೆಯಾಗಿ ಅಮೆರಿಕಾಗೆ ಹೋದಳು. ಅವನ ಮಾತು ಕಟ್ಟಿಕೊಂಡು ಕ್ರಾಂತಿ ಮಾಡಲು ಹೊರಟ ಇವಳು ಸ್ಮಶಾನ ಸೇರಿದಳು.  ಈ ಮುಂಡೆವು ಇನ್ನೂ ಎಷ್ಟು ಮಕ್ಕಳನ್ನು ಹಾಳು ಮಾಡುತ್ತಾವೋ. ಇನ್ಮೇಲೆ ಮಕ್ಕಳನ್ನು ಇಸ್ಕೂಲಿಗೆ ಕಳುಹಿಸಬಾರದು ಎಂದು ಪಕ್ಕದಲ್ಲಿ ಯಾರೋ ಗುನುಗುತ್ತಿದ್ದರೆ, ನನಗೆ ಸುಬ್ಬಿ ಒಲೆ ಮುಂದೆ ಕುಳಿತು ನಾಗಿಗೆ ಮಾಡುತ್ತಿದ್ದ ಉಪದೇಶವನ್ನು ಸುಮಿ ವಿವರಿಸುತ್ತಿದ್ದದ್ದು ನೆನಪಾಗುತ್ತಿತ್ತು.

ಹೋಯ್ ಬಜಾರಿ
ನೀ ಪತ್ರ ಓದಲು ಒಲ್ಲೆ ಅಂದಮೇಲೆ ನಂಗೂ ಪತ್ರ ಬರೆಯಲು ಒಲ್ಲೆ ಅನ್ನಿಸುತ್ತಿದೆ! ನೀನು ಹೇಳಿದ ಹಾಗೇ ಬದುಕಿನ ಎಲ್ಲಾ ಘಟ್ಟಗಳು ಒಂದು ಕ್ರ್‍ಎಜು ಅಷ್ಟೆ. ಅವುಗಳಲ್ಲಿ ಈ ಲವ್ವು ಫೀಲುಗಳು ಒಂದು. ಒಂದು ವಯಸ್ಸಿನಲ್ಲಿ ಪ್ರತಿಯೊಬ್ಬನೂ ತನ್ನ ಚಿಂತನೆ, ಆಲೋಚನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿಯುತ್ತಾನೆ. ಅಪ್ಪ, ಅಮ್ಮ, ಗೆಳೆಯ ಎಲ್ಲಾ ಐಡೆಂಟಿಗಳನ್ನು ಕಳಚಿಕೊಂಡು ಬದುಕಲು ಪ್ರಯತ್ನಿಸುತ್ತಾನೆ. ಒಂದಿಷ್ಟು ದಿನ ಬದುಕಿಯೂ ಬದುಕುತ್ತಾನೆ! ಆ ಮೇಲೆ ಅವನಿಗೆ ತಾನು ಒಂಟಿ ಎಂಬ ಭಾವನೆ ಕಾಡಲು ಶುರುವಿಡತ್ತೆ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಂಗಾತಿ ಬೇಕು ಅನ್ನಿಸತ್ತೆ. ಹಾಗೇ ಶುರುವಾಗುವುದು ಈ ಲವ್ವು, ಫೀಲು. “ಹೆಣ್ಣು ಬಂದು ಮೂರು ದಿನ ಎಮ್ಮೆ ಬಂದು ಆರು ದಿನ’ ಅನ್ನೋ ತರಹದ್ದು ಇದರ ಟೇಸ್ಟು. ಒಂದಷ್ಟು ದಿನಕ್ಕೆ ಹೆಚ್ಚಿನವರಿಗೆ ತಾವು ಆರಿಸಿಕೊಂಡ ಜೀವನದ ಸಂಗಾತಿ ಕೂಡ ಬೋರ್ ಅನ್ನಿಸಿ ಬಿಡುತ್ತಾಳೆ. ಹಾಗಾಗಿಯೇ ಇರಬೇಕು ಕಣೇ ಕೆಲವರು ೬೦ ದಾಟಿದರೂ ೨೦ರ ಕೂಸುಗಳ ಜೊತೆ ಸುತ್ತಲು ಹಾತೊರೆಯುವುದು!
ಇದೊಂದು ತರಹ ವಿಚಿತ್ರ ಸಮಾಜ ಅಲ್ವಾ? ಎಲ್ಲಿ ನೋಡಿದರೂ ಗಂಡು, ಹೆಣ್ಣುಗಳ ಸಂಬಂಧ. ಕೆಲವು ನೈತಿಕವಂತೆ, ಇನ್ನೂ ಕೆಲವು ಅನೈತಿಕವಂತೆ! ಹುಡುಗ, ಹುಡುಗಿ ಒಟ್ಟಿಗೆ ಇದ್ದರು ಅಂದ್ರೆ ಅವರ ನಡುವೆ ಯಾವುದಾದರೂ ಒಂದು ಸಂಬಂಧ ಕಟ್ಟದೇ ಇದ್ದರೆ ನಮಗೆ ಸಮಾಧಾನವೇ ಇಲ್ಲ! ಇನ್ನೂ ನಮ್ಮ ಹಳ್ಳಿಯ ಮನೆಯ ಮಂದಿಗಳು ಇವತ್ತಿಗೂ ಬದುಕು ಅಂದ್ರೆ ಸಂಬಂಧ ಬೆಳೆಸುವುದು, ಮದ್ವೆ, ಸಂಸಾರ…ಇಷ್ಟೆ ಅನ್ನೋ ಜಾಡ್ಯದಲ್ಲೇ ಮುಳುಗಿ ಹೋಗಿದ್ದಾರೆ. ಒಂತರಹ ನಿನ್ನ ಅಪ್ಪ, ಅಮ್ಮಂದಿರಂತೆ! ಆದ್ರೆ ನಮಗೆಲ್ಲಾ ಅವುಗಳಿಗಿಂತ ಭಿನ್ನವಾದದ್ದು ಏನಿದೆ ಎಂದು ಆಲೋಚಿಸುವುದೇ ಒಂದು ಬದುಕು!
ಹೌದಲ್ವಾ ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ? ನನಗಂತೂ ಗೊತ್ತಿಲ್ಲ. ನನ್ನ ಮಟ್ಟಿಗೆ ಬದುಕೆಂಬುದೊಂದು ಮೂಕಜ್ಜಿಯ ಕನಸೇ ಸರಿ. ಹೋಗ್ಲಿ ಬಿಡು ಕೆಲವಷ್ಟು ವಿಚಾರಗಳ ಕುರಿತಾಗಿ ಜಾಸ್ತಿ ಆಲೋಚಿಸಬಾರದಂತೆ. ಹಾಗೆ ಆಲೋಚಿಸಿದರೆ ನಾವು ಹುಚ್ಚರಾಗುತ್ತೇವಂತೆ ಹೊರತು ಸಮಾಜ ಬದಲಾಗದಂತೆ. ಮತ್ತೆ ನಿನ್ನ ಮದ್ವೆ ವಿಚಾರ  ಎಲ್ಲಿಯವರೆಗೆ ಬಂತು? ನನ್ನ ಜೀವನದ ಗೆಳತಿಯಾದ ನೀನು ಬೇರೆಯವರ ಮನೆ ಸೇರುತ್ತೀಯಾ, ನಾನು ನಿನ್ನನ್ನು ಕಳೆದುಕೊಳ್ಳುತ್ತೀನಿ ಅನ್ನೋ ಭಯ ಕಾಡಲು ಶುರುವಿಟ್ಟಿದ್ದೆ ಕಣೇ. ಅಂದಹಾಗೆ ಈ ಬದುಕಿನಲ್ಲಿ ನಾವು ಎಲ್ಲವನ್ನು ಕಳೆದುಕೊಳ್ಳುವುದೇ ಹೊರತು ಗಳಿಸುವುದೇನನ್ನು ಇಲ್ಲ. ಯಾಕಂದ್ರೆ ನಾವು ಬರುವಾಗ ಏನನ್ನು ತರುವುದಿಲ್ಲ. ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದು ನನ್ನ ನಿಲುವು. ಹಾಗಾಗಿಯೇ ನಾನು ನಿನಗೆ ಆವತ್ತೇ ಹೇಳಿದ್ದು, ನೀನು ನನ್ನ ಗೆಳತಿ ಹೊರತು ಮತ್ತೇನೂ ಅಲ್ಲ ಅಂತಾ. ಅದನ್ನು ನೀನು ಖುಷಿಯಿಂದ ಸ್ವೀಕರಿಸಿದ್ದೆ. ಆದ್ರೂ ಜನ ನನ್ನ, ನಿನ್ನ ನೋಡಿ ಏನೇನೋ ಆಡಿಕೊಂಡರು. ನಾನು ನಿನಗೆ ಬರೆದ ಪತ್ರವನ್ನೆಲ್ಲಾ ಪ್ರೇಮ ಪತ್ರ ಅಂತಾ ಕರೆದರು! ಹೋಗ್ಲಿ ಬಿಡು ನಾವು ಬದುಕುವುದು ಆ ಜನಕ್ಕಾಗಿ ಅಲ್ಲ. ನಮಗಾಗಿ. ಮತ್ತೆ ವಿಶೇಷ. ನಂಗೂ ಈಗ ಕೆಲಸದ ಬ್ಯುಸಿ ಕಣೇ! ವರ್ಷಗಳ ನಂತರ ವೃತ್ತಿಯಲ್ಲಿ ಹೌದೋ ಅಲ್ವೋ ಅನ್ನೋ ತರಹ ನೆಲೆ ಕಂಡುಕೊಂಡಿದ್ದೇನೆ. ಪತ್ರಿಕೋದ್ಯಮ ಎಂಬ ಹಾದರದ ದಂಧೆಯಲ್ಲಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿದ್ದೇನೆ. ಅಂದಹಾಗೆ ನಿನಗೆ ಒಂದ್ಸಾರಿ ಈ ಹಾದರ ಲೋಕದ ಕಥೆ ಹೇಳಿದ್ದೆ ಅನ್ಸತ್ತೆ ಅಲ್ವಾ? ಒಂದಿಷ್ಟು ಕಚ್ಚೆ ಹರುಕರ, ಹುಡುಗಿಯರು ಅಂದ್ರೆ ಜೊಲ್ಲು ಸುರಿಸಿ ಅವಕಾಶ ಕೊಡುವ ಒಂದಿಷ್ಟು ತೆವಲು ತೆವಲು ಚೀಫ್‌ಗಳ ಜೀವನ ಚರಿತ್ರೆ ವಿವರಿಸಿದ್ದೆ ಅಲ್ವಾ? ಹೌದು ಕಣೇ ಈ ಫೀಲ್ಡ್‌ ಹಾಗೆ. ಎಷ್ಟೋ ಪತ್ರಕರ್ತ ಮಹಾಶಯರು ಇತರರಿಗೆ ಪುಂಖಾನು ಪುಂಖವಾಗಿ ಉಪದೇಶ ಮಾಡುತ್ತಾರೆ. ತಾವು ಮಾತ್ರ ಮಾಡಬಾರದ ಹಾದರವನ್ನೆಲ್ಲಾ ಮಾಡುತ್ತಾರೆ. ಇಲ್ಲಿ ಪ್ರತಿಭೆಗೆ ಬೆಲೆಯಿಲ್ಲ. ಕ್ರಿಯೇಟಿವಿಟಿಗೆ ಅವಕಾಶವಿಲ್ಲ. ಇಲ್ಲಿ ನೆಲೆಯೂರಲು ಲಾಭಿ ಬೇಕು. ಅದಿಲ್ಲವಾದರೆ ದಷ್ಟಪುಷ್ಟವಾದ ಮೊಲೆ ಬೇಕು. ನನಗಂತೂ ಇಲ್ಲಿನ ಬದುಕು ಸಾಕು ಸಾಕೆನಿಸಿದೆ. ಆದ್ರೂ ಒಂದು ಹುಂಬು!
ಯಾವ ರಾಜಕಾರಣಿಗೂ, ಯಾವ ರೌಡಿಗೂ, ಯಾವ ಲೋಪರ್‌ಗಳಿಗೂ ಕಮ್ಮಿಯಿಲ್ಲದ ಪತ್ರಕರ್ತರು ಅಲ್ಲಲ್ಲ ಪುತ್ರಕರ್ತರು ಇಲ್ಲಿದಾರೆ. ಅವರ ಬಗ್ಗೆ ನಾವೆಲ್ಲಾ ಮಾತಾಡೋದು ಮಹಾಪರಾಧವಾಗತ್ತೆ! ಹಾಗಾಗಿ ನನ್ನ ಮಾತನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಗೊತ್ತು ಗುರಿಯಿಲ್ಲದ ನಮ್ಮ ಬದುಕನ್ನೆಲ್ಲಾ ನೆನಸಿಕೊಂಡರೇನೆ ಮೈ ಜುಂ ಅನ್ನತ್ತೆ. ಎನಿ ವೇ ನೀನು ಮದ್ವೆಯಾಗಿ ಲೈಫಲ್ಲಿ ಬೇಗ ಸೆಟ್ಲ ಆಗಿ ಬಿಡು! ಮದ್ವೆ ಫಿಕ್ಸ್ ಆದರೆ ಕರೆಯೋಕೆ ಮರಿಬ್ಯಾಡ.
ನಿನ್ನ ಮದ್ವೆ ಊಟಕ್ಕೆ ಕಾಯುವವ…

“ಅವ ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಮಲಗುತ್ತಿದ್ದನಂತೆ. ಭಕ್ತರನ್ನು ವಶೀಕರಿಸಲು ಏನೇನೋ ಬಳಸುತ್ತಿದ್ದನಂತೆ. ಗಾಂಜಾ ಮೊದಲಾದ ಮಾದಕ ವಸ್ತುವನ್ನು ಉಪಯೋಗಿಸುತ್ತಿದ್ದನಂತೆ. ಆದರೂ ಸಂನ್ಯಾಸಿಯಂತೆ!” ಅನ್ನೋ ಎಲ್ಲಾ ಅಂತೆಕಂತೆಗಳಿರುವುದು ಓಶೋ ರಜನೀಶನ ಕುರಿತಾಗಿ. ನಾನಂತೂ ಓಶೋವನ್ನೇ ಕಾಣಲಿಲ್ಲ. ಇನ್ನೂ ಅವನ ಚಟುವಟಿಕೆಗಳನ್ನು ಕಾಣುವುದೆಂತು? ಅದೆಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ಓಶೋ ಕುರಿತಾಗಿ ಸಾಕಷ್ಟು ಅಪಸ್ವರವಿದೆ. ಅವನನ್ನು ಸಂತ, ಸಾಧು, ಸಾಧಕ ಎಂಬುದನ್ನು ಎಷ್ಟೋ ಜನ ಒಪ್ಪುವುದಿಲ್ಲ. ಒಪ್ಪಬೇಕು ಅಂತಾನೂ ಅವ ಹೇಳಿಲ್ಲ!
ಅಂತಹ ಓಶೋ ನನಗೆ ಪರಿಚಿತವಾಗಿದ್ದು ನಾಲ್ಕು ವರ್ಷದ ಕೆಳಗೆ ಸ್ತ್ರೀ ಮುಕ್ತಿ-ಹೊಸದೊಂದು ದೃಷ್ಟಿಕೋನ ಎಂಬೊಂದು ಅದ್ಬುತ ಪುಸ್ತಕದಿಂದ. ಗೆಳೆಯ ಅವಧಾನಿಗಳು ಪರಿಚಯಿಸಿಕೊಟ್ಟ ಪುಸ್ತಕವದು. ವೈಚಾರಿಕವಾದ ಸೆಕ್ಸ್ ಪುಸ್ತಕ ಅಂತಾನೇ ಅದನ್ನು ಕರೆಯಬಹುದು. ಸ್ತ್ರೀ ಬದುಕಿನ ಬಗೆಗೆಗೊಂದು ವಿಭಿನ್ನ ಆಯಾಮ ಕಲ್ಪಿಸಿಕೊಡುವ, ಸೆಕ್ಸ್ ಕುರಿತಾಗೊಂದು ವಿಚಿತ್ರ ಬಗೆಯ ಪರಿಕಲ್ಪನೆಯನ್ನು ಕಟ್ಟಿಕೊಡುವ ಪುಸ್ತಕ. “ಮನುಷ್ಯ ಯಾರನ್ನಾದರೂ ಅನುಭೋಗಿಸಬೇಕು ಅನ್ನಿಸಿದರೆ ಅನುಭವಿಸಬಿಡಬೇಕು. ತನ್ನೊಳಗಿನ ತೃಷೆಯನ್ನು, ಆಸೆಯನ್ನು ಕಟ್ಟಿಕೊಂಡಿರಬಾರದು” ಅನ್ನುತಾರೆ ಓಶೋ(ಸೆಕ್ಸ್ ವಿಚಾರದಲ್ಲಿ ಒಂತರಹ ದನಗಳ ತರಹವೇ ಬದುಕಬೇಕೆಂಬ ದಾಟಿಯ ಮಾತುಗಳವು!) ನನಗೇನೋ ಅನುಭವಿಸಬೇಕೆಂದಿದೆ ಆದರೆ ಆಕೆಗೆ ಇರಬೇಕಲ್ಲ? ಅಂತಹ ಭೋಗ ಬಲಾತ್ಕಾರವಾಗದೇ ಅಂದರೆ? ಅವಳ ಸಮ್ಮತಿಯಿಲ್ಲದಿದ್ದರೆ, ಅವಳಿಗೆ ಭೋಗದಲ್ಲಿ ಆಸಕ್ತಿಯಿರದಿದ್ದರೆ ನೀವು ಮೈಮೇಲೆ ಬಿದ್ದು ಅವಳಿಗೆ ಹಪಹಪಿಸುವುದು ವ್ಯರ್ಥ. ಅವಳಿಂದ ನಿಮಗೆ ನೈಜ ಸುಖದ ಅನುಭವವೇ ಸಿಗುವುದಿಲ್ಲ ಎಂಬುದು ಅವರ ವಾದ. ಇದ್ದರೂ ಇರಬಹುದು ನನಗಂತೂ ಸದ್ಯಕ್ಕೆ ಅದರ ಅನುಭವವಿಲ್ಲ!
ಅಲ್ಲಿಂದಲೇ ಪರಿಚಯವಾದದ್ದು ಓಶೋ ಎಂಬೋರ್ವ ಚಿಂತಕ. ಓಶೋ ಅಂತಹ ಪುಸ್ತಕಗಳನ್ನು ಓದಿದಾಗ ಆತನ ಮೇಲಿರುವ ಆಪಾದನೆಗಳೆಲ್ಲಾ ನಿಜವೇನೋ ಅನ್ನಿಸತ್ತೆ(ಇಲ್ಲದಿದ್ದರೂ ಅದು ನಿಜವೇ ಅನ್ನುತ್ತಾರೆ ಹೆಚ್ಚಿನ ಮಂದಿ!)ಆದರೆ ಅವನ ಚಿಂತನೆಯ ವೋಗ ಅಲ್ಲಿಗೆ ನಿಲ್ಲುವುದಿಲ್ಲ. ನಾನು ಇದುವರೆಗೆ ಓದಿದ ಓಶೋ ಬರೆದ ಪುಸ್ತಕಗಳಲ್ಲಿ ಅದ್ಬುತವಾದ ಪುಸ್ತಕ”ಭಜಗೋವಿಂದಂ ಮೂಢಮತೆ”. ಊಹುಂ ಓಶೋ ವೈಚಾರಿಕತನವನ್ನು ಊಹಿಸಲು ಸಾಧ್ಯವಿಲ್ಲ. ಸೆಕ್ಸ್ ಮೊದಲಾದ ಸಮಾಜದಲ್ಲಿನ ಒಂತರಹ ನಿರ್ಬಂಧಿತ ವಿಚಾರದ ಕುರಿತಾಗಿ ಮಾತಾಡುವ ಓರ್ವ ಆಧ್ಯಾತ್ಮದ ಕುರಿತಾಗಿಯೂ ಅಷ್ಟೇ ಫ್ರೌಡವಾಗಿ ಮಾತಾಡಬಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆ ಪರಿ ಉನ್ನತವಾದ ಪುಸ್ತಕವದು. ನಾನು ಓಶೋವನ್ನು ಇಷ್ಟಪಡುವುದು ಅಂತಹ ಚಿಂತನೆಗಳಿಗಾಗಿಯೇ.
ಒಪ್ಪಲು ಸಾಧ್ಯವಿಲ್ಲ, ಆಡುವ ಮಾತೊಂದು ಮಾಡುವ ಕೃತಿ ಇನ್ನೊಂದು ಎಂಬ ಕೆಟಗರಿಯ ಮಂದಿಯನ್ನು ನಾವು ಸ್ವೀಕರಿಸಲು ಸಾಧ್ಯವೇ ಇಲ್ಲ. ಹೌದು ನನಗೆ ಓಶೋ ಇಷ್ಟವಾಗುವುದು ಹಾಗಾಗಿಯೇ. ಅವ ಆಧ್ಯಾತ್ಮದ ನಡುವೆ ಕುರುಡು ಕಟ್ಟಲೆಗಳನ್ನು ತೂರಿಸಲಿಲ್ಲ. ಎಲ್ಲವನ್ನು ಮುಕ್ತವಾಗಿಯೇ ಮಾತನಾಡಿದ. ನಮ್ಮಲ್ಲಿ ಹಲವು ಸಂನ್ಯಾಸಿಗಳಿದ್ದಾರೆ. ಅವರಲ್ಲಿ ಕೆಲವರು ಅನೈತಿಕ ಸಂಬಂಧ ಹೊಂದಿರುವುದರ ಕುರಿತು ಸಾಕಷ್ಟು ಗುಸುಗುಸುವಿದೆ. ಮುಲ್ಲಾಗಳಿದ್ದಾರೆ, ಫಾದರ್‌ಗಳಿದ್ದಾರೆ. ಅವರಲ್ಲಿ ಸಾಕಷ್ಟು ಜನ ಮಾಡಬಾರದ ಹಲ್ಕಾ ಕೆಲಸಗಳನೆಲ್ಲಾ ಮಾಡಿ ಮುಗಿಸಿ ಚರ್ಚ್, ಮಸೀದಿಗೆ ಬಂದು ಒಳ್ಳೆಯ ಉಪದೇಶ ನೀಡುತ್ತಾರೆ! ಎಂದು ಜನ ಮಾತಾಡುವುದನ್ನು ಕೇಳಿದ್ದೇವೆ. ಅರ್ಥಾತ್ ಸೆಕ್ಸ್‌ನಂತಹ ದೇಹಸಹಜವಾದ ಅಭಿರುಚಿಯನ್ನು ತ್ಯಾಗ ಮಾಡುವುದು ಅಷ್ಟು ಸುಲಭದ ಕಾಯಕವಲ್ಲ. ಅದನ್ನು ತ್ಯಾಗಮಾಡಿದ್ದೇವೆ. ನಾವು ಮಹಾನ್ ತ್ಯಾಗಿಗಳು ಎಂಬ ಮುಖವಾಡ ಧರಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ನನಗನ್ನಿಸುತ್ತದೆ. ಹಾಗಾಗಿಯೇ ನಾನು ಓಶೋವನ್ನು ಇಷ್ಟಪಡುತ್ತೇನೆ.
ಸೆಕ್ಸ್ ಮನುಷ್ಯನನ್ನು ಯಾವ ಪರಿ ಕಾಡುತ್ತದೆ ಎಂಬೊಂದನ್ನು ಬೈರಪ್ಪನಪ್ಪವರು “ಮಂದ್ರಾ”ದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಅದನ್ನು ಓದುವಾಗ ಅದೊಂದು ಕೆಟ್ಟ ಕಾದಂಬರಿ ಅನ್ನಿಸತ್ತೆ. ಆದರೆ ಅದನ್ನು ಓದಿ ಸಮಾಜವನ್ನು ನೋಡುವಾಗ ಅದು ವಾಸ್ತವ ಎಂಬ ಅರಿವಾಗತ್ತೆ. ಇನ್ನೂ ಸೆಕ್ಸ್‌ ಎಂಬುದು ಸಂನ್ಯಾಸಿಗಳನ್ನು ಹೇಗೆ ಕಾಡತ್ತೆ ಎಂಬುದನ್ನು ಶಿವರಾಮಕಾರಂತರು “ಕೇವಲ ಮನುಷ್ಯರು” ಕಾದಂಬರಿಯಲ್ಲಿ ಕೆತ್ತಿದ್ದಾರೆ! ಕಪಟ ಸಂನ್ಯಾಸಿಗಳ ಮುಖವಾಡ ಕಳಚಿಟ್ಟಿದ್ದಾರೆ. ಒಳಗೊಂದು ಹೊರಗೊಂದು ಎಂಬ ಆ ಎಲ್ಲಾ ಮರೀಚಿಕೆಯಿಂದ ಓಶೋ ಹೊರನಿಲ್ಲುತ್ತಾರೆ ಅಲ್ಲವೇ?
ಹಾಗಂತ ಓಶೋ ಭೊಗವನ್ನೇ ಪ್ರೋತ್ಸಾಹಿಸಿದರು ಎಂಬುದನ್ನು ನಾನಂತೂ ಒಪ್ಪುವುದಿಲ್ಲ. ಭೊಗಕ್ಕೆ ಕಡಿವಾಣ ಹಾಕಲಿಲ್ಲ. ಕಟ್ಟಲೆ ವಿಧಿಸಲಿಲ್ಲ ಅಷ್ಟೆ. ಭಾರತ ಭೊಗಭೂಮಿಯಲ್ಲ ತ್ಯಾಗಭೂಮಿ ಎಂಬುದನ್ನು ಓಶೋ ಕಣಕಣಗಳಲ್ಲೂ ನಿರೂಪಿಸಿದ್ದಾರೆ. ಬಿಕ್ಷು ರಾಜನಾಗುವುದನ್ನು ಕೇಳಿದ್ದೇವೆ. ಆದರೆ ರಾಜ ಸ್ವಪ್ರೇರಣೆಯಿಂದ ಬಿಕ್ಷುವಾಗುವ ಉದಾಹರಣೆ ಎಲ್ಲಾದರೂ ಇದೆಯಾ? ಇದೆ ಅದು ಭಾರತದಲ್ಲಿ ಮಾತ್ರ ಸಾಧ್ಯವಿದೆ. ರಾಜನಾಗಿದ್ದ ಗೌತಮ ಬುದ್ದನಾದ.  ಬಿಕ್ಷುವಾದ. ಮಹಾವೀರ ಕೂಡಾ ಹಾಗೇ. ಇಂಥ ಅದ್ಬುತ ತ್ಯಾಗ, ಜಗತ್ತಿನಲ್ಲಿ ಬೇರೆಲ್ಲಿದೆ? ಎನ್ನುತ್ತಾರೆ ಓಶೋ. ಸಂತ ಏಕನಾಥರ ತ್ಯಾಗದ ಕುರಿತಾಗಿ ಮಾತನಾಡುತ್ತಾರೆ. ಹಾಗೇ ಮೀರಾಳ ಪ್ರೇಮದ ಕುರಿತಾಗಿಯೂ ಮಾತನಾಡುತ್ತಾರೇ! ಸಂಭೋಗದಿಂದ ಸಮಾಧಿ ತಲುಪುವುದನ್ನೂ ವಿವರಿಸುತ್ತಾರೆ. ಭೋಗಿಗಳಿಗೆ ಭೋಗದಿಂದಲೇ ಧ್ಯಾನ ಸ್ಥಿತಿ ತಲುಪುವುದನ್ನು ಹೇಳುತ್ತಾರೆ. ತ್ಯಾಗಿಗಳಿಗೆ ಬುದ್ದ, ಮಹಾವೀರರ ಹಾದಿ ತೋರಿಸುತ್ತಾರೆ. ಎಂತಹ ಅದ್ಬುತ ಅಲ್ವಾ?
ಹೌದು ಓಶೋ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಮನುಷ್ಯನಲ್ಲ ಅಥವಾ ಸಾಧುವೂ ಅಲ್ಲ. ಅದೊಂದು ಪ್ರತಿಭೆ. ಅದ್ಬುತವಾದೊಂದು ಶಕ್ತಿ. ವಿಚಾರ ಭಂಡಾರ. ಹಾಗಾಗಿ ನಾವು ಆತನನ್ನು ವೈಚಾರಿಕವಾಗಿಯೇ ಸ್ವೀಕರಿಸೋಣ. ಮನುಷ್ಯನ ಬದುಕಿರುವುದು ೧೦೦ ವರ್ಷ. ಅಂತಹ ಬದುಕಿನಲ್ಲಿ ನೀನು ಅದು ಮಾಡಬೇಡ, ಇದನ್ನು ನೋಡಬೇಡ ಎಂದು ಕಟ್ಟುಪಾಡು ವಿಧಿಸುವ ಹಕ್ಕು ಯಾರಿಗೂ ಇಲ್ಲ. ಆದರ್ಶಗಳು ಮನಸಿಗೆ ಆನಂದವನ್ನುಂಟುಮಾಡಬೇಕೇ ಹೊರತು ಅದೊಂದು ಬಂಧನವಾಗಬಾರದು. ನೀನು ನಿನ್ನ ಕೊಣೆಯೊಳಗೆ ಏನಾದರೂ ಮಾಡಿಕೋ. ಅದನ್ನು ಸಮಾಜಕ್ಕೆ ತರಬೇಡ. ನಿನ್ನ ರೋಗಗಳನ್ನೆಲ್ಲಾ ಸಮಾಜಕ್ಕೆ ಅಂಟಿಸಬೇಡ ಎಂದಷ್ಟೇ ಹೇಳಬಹುದು ಹೊರತೂ ಒಬ್ಬ ಇನ್ನೊಬ್ಬನಿಗೆ ಆಜ್ಞೆ ಮಾಡುವ ಹಕ್ಕಿಲ್ಲ. ಹಾಗೆ ಮಾಡಿದರೆ ಒಬ್ಬನ ಸುಂದರವಾದ ಬದುಕನ್ನು ನೀವು ಕಸಿದುಕೊಂಡಂತೆ ಎಂಬುದು ನನ್ನ ನಿಲುವು. ಹಾಗಾಗಿಯೇ ನನಗೆ ಓಶೋ ತುಂಬಾ ಇಷ್ಟವಾಗುವುದು. ಓಶೋ ಕುರಿತು ಆಡಿದಷ್ಟು ಇದೆ ಆದರೆ ಸದ್ಯಕ್ಕೆ ಇಷ್ಟು ಸಾಕು.

ಹಾಯ್ ಕಪೀಶ
ನಾನು ನಿಂಗೆ ಹೊಸ ಹೆಸರಿಟ್ಟಿದ್ದೇನೆ ಅಂತಾ ಕಣ್ಣು ಮಿಟುಕಿಸುತ್ತಿದ್ದೀಯಾ? ನೀನು ಬರೀ ಕಪೀಶ ಅಲ್ಲ. ಕಪೀಶೋತ್ತಮ ಕಪೀಶ! ಅಣ್ಣಾ ದೊರೆಯೆ,  ನನ್ನ ಅಪ್ಪಾ ಜೋಯ್ಸನ್ನ ಸಾರ್ವಜನಿಕವಾಗಿ ಬೈಯ್ಯಬೇಡ ಅಂತಾ ನಾ ನಿಂಗೆ ಎಷ್ಟು ಸಲ ವದರಿದ್ದೀನಿ. ಆದ್ರೂ ನೀನು ಮಾತ್ರ ನಿನ್ನ ಚಾಳಿ ಬಿಟ್ಟಿಲ್ಲ. ಹಾಗಾಗಿ ಇನ್ನು ಮೇಲೆ ನಾನು ನಿನ್ನ ಪತ್ರವನ್ನು ಓದುವುದಿಲ್ಲ ಎಂಬುದಾಗಿ ನಿರ್ಧಾರ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಎದುರಿಗಿರುವ ಎಮ್ಮೆ ಕೋಣಗಳೇ ಸಾಕ್ಷಿ!
ಅದ್ಯಾಕೋ ಇತ್ತೀಚೆಗೆ ನಿನ್ನ ಪತ್ರಗಳು ತುಂಬಾ ಬೇಸರ ಮೂಡಿಸತೊಡಗಿವೆ. ಕಾಂಕ್ರೀಟು ಜಂಗಲ್ಲನ್ನು ಬೈಯ್ಯುವ ತೆವಲನ್ನು ಬಿಟ್ಟು ಮತ್ತೇನೂ ನಿನ್ನ ಪತ್ರದಲ್ಲಿ ಕಾಣುತ್ತಿಲ್ಲ. ಅದನ್ನ ಬಿಟ್ಟರೆ ಇನ್ನೂ ನಿನಗೆ ಗೊತ್ತಿರೋದು ನನ್ನನ್ನು ಅಣಗಿಸಿಸುವುದು ಮಾತ್ರ. ಮೊದಲೆಲ್ಲಾ ನೀನು ಪತ್ರದಲ್ಲಿ ಚೆಂದಚೆಂದದ ಪುಟ್ಟ ಪುಟಾಣಿ ಕಥೆಗಳನ್ನು ಬರೆಯುತ್ತಿದ್ದೆ ಅಲ್ವಾ? ಏ ಈಗ್ಲೂ ಅಂತಹದ್ದೇ ಕಥೆ ಬರೆಯೋ ಪ್ಲೀಸ್.
ನೋಡು ನಮ್ಮಪ್ಪ ಜೋಯ್ಸ್ ಎಂತಹವನೇ ಆಗಿರಬಹುದು. ಆದ್ರೆ ಅವನನ್ನು ಸಾರ್ವಜನಿಕವಾಗಿ ಬೈಯ್ಯುವ ಅಧಿಕಾರ ನಿನಗಿಲ್ಲ. ಇನ್ನೂ ಮುಂದೆ ಮತ್ತೆ ಬೈದೆ ಅಂತಾದರೆ ನಾನಂತೂ ನಿನ್ನನ್ನು ಬಿಲ್‌ಕುಲ್ ಮಾತಾಡಿಸುವುದಿಲ್ಲ. ಏ ಬೆವರ್ಸಿ ಹೋಗೇ ನೀನಲ್ಲದಿದ್ದರೆ ಮತ್ತೊಬ್ಬಳು ಅಂತಾ ನೀನು ಹೇಳೆ ಹೇಳ್ತಿಯಾ ಅಂತಾ ನಂಗೆ ಗೊತ್ತು. ನಾನು ಈ ಸಲ ನಿನ್ನ ಆ ಗೊಡ್ಡು ಬೆದರಿಕೆಗಳಿಗೆಲ್ಲಾ ಬಗ್ಗುವುದಿಲ್ಲ ಎಂಬುದಾಗಿ ಈ ಪತ್ರದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ.
ಡಿಗ್ರಿ ಮುಗಿಸಿ ಮನೆಯಲ್ಲಿ ಕುಳಿತಿರುವ ನನ್ನ ಬದುಕು ನಿಜಕ್ಕೂ ನನಗೆ ಬೇಸರ ಮೂಡಿಸುತ್ತಿದೆ. ಅಪ್ಪಾ, ಅಮ್ಮ ನನ್ನ ಮದುವೆ ಮಾಡಬೇಕು ಅಂತಾ ಒಂದೇ ಸಮನೆ ಹಠ ಹಿಡಿದು ಕುಳಿತಿದ್ದಾರೆ. ನಾನು ಮದುವೆ ಆಗಲಾರೆ ಎಂದು ಕುಳಿತಿದ್ದೇನೆ. ಯಾಕೋ ನನಗೆ ಕೆಲವೊಮ್ಮೆ ಈ ಬದುಕು ಅರ್ಥವೇ ಆಗಲ್ಲ ಮಾರಾಯ. ಮದ್ವೆ ಆದ್ರೆ ನನ್ನ ಇಡೀ ಬದುಕೇ ಮುಗಿಯಿತು ಅನ್ನಿಸುತ್ತಾ ಇದೆ. ಆಫ್‌ಕೋರ್ಸ್ ನಿನ್ನನ್ನೇ ನಾನು ಮದ್ವೆ ಆದ್ರೂ ಕೂಡಾ! ಥೂ ಜೀವನೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಯಾವಾಗ ಸಾಯುತ್ತೇನೋ ಅನ್ನಿಸ್ತಾ ಇದೆ. ಬದುಕಿ ಸಾಧಿಸುವುದಾದರೂ ಏನು ಅಲ್ವಾ?
ಕೆಲವರು ಬದುಕಿನ ಪ್ರತಿ ಕ್ಷಣವನ್ನು ಎನ್‌ಜಾಯ್ ಮಾಡುತ್ತಾರೆ. ಆದರೆ ನನ್ನಿಂದ ಅದು ಸಾಧ್ಯವೇ ಇಲ್ಲ. ಮಾರಾಯ. ಒಮ್ಮೊಮ್ಮೆ ಏನಾದ್ರೂ ಸಾಧಿಸಬೇಕು, ಒಂದಿಷ್ಟು ಹೆಸರು ಮಾಡಬೇಕು ಅನ್ನಿಸತ್ತೆ. ಮತ್ತೆ ಕೆಲವೊಮ್ಮೆ ಸಾಧಿಸಿ ಆಗಬೇಕಾದದ್ದು ಏನು ಅನ್ನಿಸತ್ತೆ. ಸಾಧನೆ ಮಾಡಿದವನು ಸಾಯುತ್ತಾನೆ. ಮಾಡದವನು ಸಾಯುತ್ತಾನೆ ಅಲ್ವಾ?
ನನ್ನ ಪ್ರಶ್ನೆಗಳನ್ನೆಲ್ಲಾ ಕಂಡು ಅರವತ್ತರ ಅರಳು ಮರಳು ನಿನಗೆ ಈಗಲೇ ಶುರುವಾಗಿದೆ ಅಂತಾ ನೀನು ಅಣಗಿಸುತ್ತೀಯಾ ಅಂತಾ ಗೊತ್ತು. ಆದ್ರೂ ನನ್ನ ಸಮಸ್ಯೆಗಳನ್ನು ನಿನ್ನಲ್ಲಿ ಅಲ್ಲದೇ ಮತ್ಯಾರಲ್ಲಿ ಹೇಳಿಕೊಳ್ಳಲಿ ಅಲ್ವಾ? ಮದ್ವೆ ಆಗೋದು, ಸಮಸ್ಯೆ, ಆಗದೇ ಇರೋದು ಸಮಸ್ಯೆ. ನಿನ್ನನ್ನೇ ಮದ್ವೆ ಆಗ್ತೀನಿ ಅಂತಾ ಹಠ ಹಿಡಿದು ಕೂರೋದು ಮತ್ತು ದೊಡ್ಡ ಸಮಸ್ಯೆ. ದೊರೆ ನನ್ನ ಸಮಸ್ಯೆಗೆ ಏನಾದ್ರೂ ಪರಿಹಾರ ಹೇಳೋ ಪ್ಲೀಸ್.
ಪರಿಹಾರಕ್ಕೆ ಕಾಯುತ್ತಾ
             ನಿನ್ನವಳು

ಮೊನ್ನೆ ನನ್ನ ಬರಹಗಳನ್ನೆಲ್ಲಾ ಹರಡಿಕೊಂಡು ಕೂತಿದ್ದಾಗ ಎಂ.ಎಫ್ ಹುಸೇನ್ ಇಶ್ಯೂ ಆದಾಗ ಗಿರೀಶ್ ಕಾರ್ನಾಡ್ ಹುಸೇನ್‌ನನ್ನು ಸಮರ್ಥಿಸಿದ್ದರ ವಿರುದ್ದವಾಗಿ ನಾನು ಕಾರ್ನಾಡರನ್ನು ಕೆದಕಿ ಬರೆದಿದ್ದ ಆರ್ಟಿಕಲ್ ಕಣ್ಣಿಗೆ ಬಿತ್ತು. ನಿಜಕ್ಕೂ ತಬ್ಬಿಬ್ಬಾದೆ. ಓರ್ವ ಜ್ಞಾನ ಪೀಠ ವಿಜೇತ ಸಾಹಿತಿಯೊಬ್ಬನಿಗೆ ಮೀಸೆ ಚಿಗುರದ ನನ್ನಂತಹ ಹುಡುಗ ಹೇಗೆಲ್ಲಾ ಬೈದಿದ್ದೇನಪ್ಪಾ ಅಂತಾ ಬೇಸರವಾಯಿತು.  ಅದಾದ ಎರಡು ದಿನಕ್ಕೆ ಅಕ್ಕಾ, ಅಣ್ಣನ ಹತ್ತಿರ ಅದ್ಯಾವುದೋ ವಿಚಾರಕ್ಕೆ ಬುದ್ದಿಜೀವಿಗಳನ್ನು ಬೈಯಿ ಅಂತಾ ಗೊಣಗುತ್ತಿದ್ದಳು.  ವಯಸ್ಸಿನಲ್ಲಿ, ಅಧ್ಯಯನದಲ್ಲಿ ಜ್ಞಾನದಲ್ಲಿ ನಮಗಿಂತ ಹಿರಿಯರಾದ ಎಡಪಂಥಿಯರನ್ನು ಬೈಯ್ಯುವಾಗ ನಿಜಕ್ಕೂ ನನಗೆ ಬೇಸರವಾಗುತ್ತದೆ. ಆದ್ರೆ ಅವರ ವಿಚಿತ್ರವಾದೊಂದು ವೈಚಾರಿಕತನವನ್ನು, ಅಸಂಬದ್ದ ತರ್ಕವನ್ನು ಕಂಡಾಗ ಬೈಯ್ಯಲೇ ಬೇಕು ಅನ್ನಿಸುತ್ತದೆ. ನಾವು ಬೈದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರಾ? ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಾ? ಊಹುಂ ಖಂಡಿತಾ ಇಲ್ಲ. ಆದರೂ ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಉತ್ತಮ ಅನ್ನೊ ಗಾದೆಯನ್ನು ನೆನಸಿಕೊಂಡು ಬೈಯ್ಯುತ್ತೇನೆ ನಾನಂತು!
ಎಡ, ಬಲ ಇವ್ಯಾವುದಕ್ಕೂ ಒಗ್ಗಿಕೊಂಡವ ನಾನಲ್ಲ. ಆದರೂ ಎಡದವರನ್ನು ಬೈಯ್ಯುವುದು ನನಗೆ ಇತ್ತೀಚೆಗೆ ತೆವಲಾಗಿಬಿಟ್ಟಿದೆ ಅನ್ನಿಸತ್ತೆ ಎಷ್ಟೋ ಸಲ. ಆದರೆ ಮಾತು ಮಾತಿಗೆ ಅನ್ಯರನ್ನು ಓಲೈಸುವ, ತಾವು ಹುಟ್ಟಿರುವುದೇ ಅನ್ಯರ ಓಲೈಕೆಗೆ ಅನ್ನೋ ತರಹ ಆಡುವ ಬುದ್ದಿಜೀವಿಗಳನ್ನು ಕಂಡಾಗ ನನ್ನದು ತೆವಲೇ ಅಲ್ಲ ಅನ್ನಿಸುತ್ತದೆ! ಅನಂತ ಮೂರ್ತಿ, ಕಾರ್ನಾಡ್ ಇತ್ಯಾದಿ ಮಹಾಪುರುಷರಿಗೆ ದೊಡ್ಡ ದೊಡ್ಡ ಇಂಗ್ಲೀಷ್ ಕಾದಂಬರಿಗಳೆಲ್ಲಾ ಅರ್ಥವಾಗತ್ತೆ. ಅದನ್ನು ಇತರರಿಗೆ ಅರ್ಥ ಮಾಡಿಸುವ ಶಕ್ತಿಯೂ ಅವರಿಗಿದೆ. ಆದರೆ ಕೆಲವೊಂದು ವಿಚಾರ ಬಂದಾಗ ಅವರೇಕೆ ಒಂತರಹ ಪೊಸೆಸೀವ್ ಆಗಿಬಿಡುತ್ತಾರೆ? ಅನ್ನುವುದು ನನಗೆ ಅರ್ಥವಾಗದೇ ಎಷ್ಟೋ ಸಲ ಬೈಯ್ಯುತ್ತೇನೆ ಅವರನ್ನು. ಖಂಡಿತಾ ಎಡಪಂಥ ಅವರದ್ದು ಅಂತಾ ಅವರನ್ನು ಬೈಯ್ಯಬೇಕು ಅನ್ನಿಸುವುದಿಲ್ಲ. ಯಾಕಂದರೆ ಬಲ ಚೆಡ್ಡಿವಾದಿಗಳ ಒಳಗುಟ್ಟು ಎಡಕ್ಕಿಂತ ಭಿನ್ನವಾಗಿಲ್ಲ. ಓ ತಾಯಂದಿರೇ, ಸಹೋದರಿಯರೇ….ಇತ್ಯಾದಿಯನ್ನು ಮೇಲ್ನೋಟಕ್ಕೆ ಹೇಳಿ ಒಳಗಡೆಯಿಂದ ಹುಡುಗಿಯರನ್ನು ಹಾಳು ಮಾಡುವ ಕೆಲ ಭಜರಂಗಿಗಳನ್ನು, ಬಾಯಲ್ಲಿ ಉಪದೇಶ ಮಾಡಿ ಒಳಗೆಲ್ಲಾ ಹಲ್ಕಾ ಕೆಲಸ ಮಾಡುವ ಅಪ್ಪಟ್ಟ ಚೆಡ್ಡಿವಾದಿಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿಯೇ ವಿದ್ಯಾರ್ಥಿ ಜೀವನದ ಕೆಲ ಘಳಿಗೆ ನಾನು ಬಲದಲ್ಲಿ ಗುರುತಿಸಿಕೊಂಡರು ನಂತರ ಅವರಿಗೊಂದು ಸಲಾಂ ಹೊಡೆದು ಬಂದಿದ್ದು.
ನಾನು ಇಷ್ಟಪಡುವುದು ಬಲ ವಿಚಾರಧಾರೆಯನ್ನು ಅಷ್ಟೆ. ಇನ್ನು ಬಲದಲ್ಲಿ ಗುರುತಿಸಿಕೊಂಡ ಕೆಲ ಆದರ್ಶನೀಯ ವ್ಯಕ್ತಿಗಳೂ ಇದ್ದಾರೆ. ಇವರು ನನ್ನ ಗುರು ಅಂತಾ ಎದೆ ತಟ್ಟಿ ಹೇಳಿಕೊಳ್ಳಬಹುದಾದ ವ್ಯಕ್ತಿಗಳೂ ಬಲದಲ್ಲಿದ್ದಾರೆ. ನಮ್ಮ ಚಿಂತನೆಯನ್ನು ನಮ್ಮ ವಾದಕ್ಕೆ ಸರಿಯಾಗಿಯೇ ತಿದ್ದಬಲ್ಲ ಜನ ಬಲದಲ್ಲಿದ್ದಾರೆ. ಹಾಗಾಗಿಯೇ ಬಲದ ನಿಲುವುಗಳು ನನಗೆ ಇಷ್ಟವಾಗುವುದು. ಎಲ್ಲಕ್ಕಿಂತ ಮೀಗಿಲಾಗಿ ಬಲದ ಚಿಂತನೆ ವಾಸ್ತವದಿಂದ ದೂರವಾಗಿದ್ದಲ್ಲ. ಎಡದ ಚಿಂತನೆ ಎಷ್ಟೋ ಸಲ ಕಲ್ಪನೆ ಅನ್ನಿಸಿ ಬಿಡತ್ತೆ(ಕ್ಷಮೆ ಇರಲಿ ನಾನು ಎಡದ ಮೂಲನಿಲುವನ್ನು ಅಧ್ಯಯನ ಮಾಡಿಲ್ಲ. ನಮ್ಮ ಸಮಾಜದ ಬುದ್ದಿಜೀವಿಗಳ ವರ್ತನೆ ನೋಡಿ, ಅವರು ಎಡದ ಮೂಲನಿಲುವನ್ನು ಅಭ್ಯಾಸಮಾಡಿರಬಹುದೆಂಬ ಭರವಸೆಯ ಮೇಲೆ ಮಾತಾಡುತ್ತಿದ್ದೇನೆ!)  
ಇತ್ತೀಚೆಗೆ ಬ್ಲಾಗ್‌ಲೋಕದಲ್ಲಿ ಕೋಮುವಾದದ ಕುರಿತಾಗಿ ಚರ್ಚೆಯಾಯಿತು. ಬಹುಶಃ ಕೋಮುವಾದ, ಗೋದ್ರಾ, ಗಾಂಧಿ ಹತ್ಯೆ ಎಂಬತಲೆಬುಡವಿಲ್ಲದ ಬೈಗುಳವನ್ನು ಕೇಳಿ, ಕೇಳಿ ನಮಗೂ ಬೇಸರ ಬಂದಿದೆ. ಬಿಜೆಪಿ ಸಾಚಾ ಪಕ್ಷವಲ್ಲ ಅನ್ನುವುದನ್ನು ನಾನು ಒಪ್ಪುತ್ತೇನೆ. ಅದನ್ನು ಅದರ ರೀತಿಯಲ್ಲೇ ಹೇಳಲಿ. ಒಂದು ಗೋದ್ರಾ ಘಟನೆ ಮುಂದಿಟ್ಟುಕೊಂಡು ನೀವು ರಾಷ್ಟ್ರೀಯ ಪಕ್ಷವನ್ನು ಅಳೆಯುತ್ತೀರಿ ಅಂದರೆ, ಅದು ಕೋಮುವಾದಿ ಪಕ್ಷ ಅನ್ನುತ್ತೀರಿ ಅಂತಾದ್ರೆ ಕಮ್ಯುನಿಸ್ಟ್ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಎಸ್.ಇ.ಜೆಡ್ ಹೆಸರಲ್ಲಿ ನಡೆದಿದ್ದು ನರಮೇಧವಲ್ಲವೇ? ಅಲ್ಲಿ ಸತ್ತವರು ಮನುಷ್ಯರಲ್ಲವೇ? ಅಸ್ಸಾಂ, ಸಿಕ್ಕಿಂಗಳಲ್ಲಿ ನಕ್ಸಲಿಸಂಗೆ ಬಲಿಯಾಗುತ್ತಿರುವವರಿಗೆ ಹೊಣೆ ಯಾರು? ಕಾಶ್ಮೀರದಲ್ಲಿನ ಹಿಂದು ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ಹೊಣೆಗಾರರು ಯಾವ ಕೋಮಿನವರು? ಗೊದ್ರಾ ಒಪ್ಪೊಣ ಆದರೆ ಆ ಗಲಭೆ ಮೊದಲು ಆರಂಭವಾಗಿದ್ದು ಹೇಗೆ ಅನ್ನುವುದನ್ನು ಮಾತನಾಡಿ. ಗೊದ್ರಾ ಘಟನೆಯ ಪೂರ್ಣ ಚಿತ್ರಣ ನೀಡಿ. ನಿಮ್ಮ ಸಿದ್ದಾಂತಕ್ಕೆ ಬೇಕಾದ ಗಲಭೆಯ ಒಂದಿಷ್ಟು ಅಂಶವನ್ನು ಮುಂದಿಟ್ಟುಕೊಂಡು ಮಾತಾಡುತ್ತೀರಿ ಎಂದಾದರೆ ಅದಕ್ಕೆ ವಿರುದ್ದವಾಗಿ ನಾವು ಕೆಟ್ಟದಾಗಿ ಬೈಯ್ಯಲೇ ಬೇಕಾಗುತ್ತದೆ ಅಲ್ಲವೆ? ಇನ್ನೂ ಕಾಂಗ್ರೆಸ್‌ನ ಹಾದರದ ಬಗ್ಗೆ ಮಾತಾಡಲು ಸಾಕಷ್ಟಿದೆ. ನೆಹರು ಚರಿತ್ರೆಯೇ ಬೇಕಾದಷ್ಟಿದೆ. ಅದನ್ನು ನಮ್ಮ ನಾಡಿನ ಕೆಲ ಲೇಖಕರು ಆಧಾರಪೂರ್ಣವಾಗಿಯೇ ಬರೆದಿದ್ದಾರೆ. ಧರ್ಮದ, ಕೋಮುವಿನ ಆಧಾರದಲ್ಲಿ ಬಿಜೆಪಿಯನ್ನು ಬೈಯ್ಯುವ ಹಕ್ಕು ಯಾರಿಗೂ ಇಲ್ಲ. ಹಾದರದಿಂದ, ಭ್ರಷ್ಟತೆಯಿಂದ ಬೇಕಷ್ಟು ಬೈಯ್ಯಿರಿ. ನಿಮಗೆ ಬೈಯ್ಯಲು ಖಂಡಿತಾ ನಾನು ಒಂದಿಷ್ಟು ಅಂಶ ಕೊಡುವೆ!
ಮತ್ತೆ ಶುರುವಾಯಿತು ನನ್ನ ಬೈಗುಳ…..ಮೊದಲೇ ಹೇಳಿದ್ದೆನ್ನಲ್ಲಾ ನಾನ್ಯಾಕೆ ಬೈಯ್ಯುವೇ ಅಂತಾ! ನಂಗು ಬೈದು ಬೈದು ಬೇಸರ ಬಂದಿದೆ. ಇನ್ನೂ ಬೈಯ್ಯಬಾರದು ಅಂದು ಕೊಂಡಿದ್ದೇನೆ. ಏನು ಮಾಡೋದು ಹೇಳಿ ಬೈಯ್ಯುವುದು ನಮ್ಮ ಧರ್ಮ, ಬೈಸಿಕೊಳ್ಳುವುದು ಅವರ ಕರ್ಮ! ಅಂದಹಾಗೆ ಇದು ಬೈಯ್ಯುವುದು ನಮ್ಮ ಕರ್ಮ, ಬೈಸಿಕೊಳ್ಳುವುದು ಅವರ ಧರ್ಮ ಅಂತಾನೂ ಆಗಬಹುದಲ್ಲವೇ?!

ಹಾಯ್ ಕೋತಿ
ನಿನಗೆ ನಾನು ಪತ್ರ ಬರೆಯದೇ ತುಂಬಾ ದಿನಗಳೇ ಆಗಿಹೋಯಿತು ಮಾರಾಯಿತಿ. ಬರೀಬೇಕು ಅಂದುಕೊಂಡಿದ್ದೇ ಏನು ಮಾಡ್ತಿಯಾ ಹೇಳು ನಾನು ಬರೆಯಲಿಕ್ಕೆ ಅಂತಾ ಹೊರಟಾಗಲೆಲ್ಲಾ ನಮ್ಮ ಮನೆ  ಬೆಕ್ಕು ಅಡ್ಡಬಂತು! ನೀನೇ ಹೇಳಿದ್ದೆ ಅಲ್ವಾ ಕೆಲಸಕ್ಕೆ ಮುಂಚೆ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಾ! ಬೆಕ್ಕು ಇಲ್ಲದ ಹೊತ್ತು ನೋಡಿಕೊಂಡು ಬರೆಯೋವಾಗ ಇಷ್ಟುದಿನ ಆಯಿತು ನೋಡು! ಹೋಗ್ಲಿ ಬಿಡು ಆ ಲಾಂಗ್ ಸ್ಟೋರಿಗಳೆಲ್ಲಾ ಈಗ್ಯಾಕೆ? ಮತ್ತೆ  ಹೇಗಿದ್ದಿಯಾ? ಜೋಯ್ಸರು ಹೇಗಿದ್ದಾರೆ?!
 ಅಂದಹಾಗೆ ತುಂಗಾ ನದಿಗೆ ಹಾರಿ ಸಾಯುವ ನಿನ್ನ ಪ್ರಾಜೆಕ್ಟ್ ಏನಾಯಿತು?! ಈ ಕಾಗದ ನಿನ್ನ ಕೈ ಸೇರುವುದರೊಳಗೆ ನೀನು ಸತ್ತ ಸುದ್ದಿ ನನ್ನ ಕಿವಿ ಮುಟ್ಟಿದ್ದರೂ ಅಚ್ಚರಿ ಇಲ್ವೆನೋ ಅಲ್ವೇನೇ?! ಸುಮ್ನೆ ತಮಾಶೆ ಮಾಡಿದೆ ಕಣೇ…ನೀನು ಸತ್ತರೆ ಮತ್ತೆ ನಾನಿನ್ನೆಲ್ಲಿ ಬದುಕಿರುತ್ತೀನಿ ಅಲ್ವಾ?! ಹಾಳಾದ ದುಡಿಮೆ ಅನ್ನೋದು ತುಂಬಾ ಬೇಜಾರು ಬರಿಸಿ ಬಿಟ್ಟಿದೆ ಕಣೇ. ಜೀವನವೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಅದ್ಯಾಕೋ ತಿರ್ಥಹಳ್ಳಿಯ ಕಾಡಲ್ಲಿ ಒಂದಿಷ್ಟು ದಿನ ಹಾಯಾಗಿ ಇರೋಣ ಅಂತಾ ಆಲೋಚನೆ ಮಾಡ್ತಾ ಇದೀನಿ. ಮಲೆನಾಡು ಕಾಡಿನ ಪರಿಚಯವೇ ಮರೆತಂತಾಗಿದೆ. ಏ ನಿನಗೆ ನೆನಪಿದೆಯೇನೇ….ನಾನು ಈ ಹಾಳು ನಗರಕ್ಕೆ ಬರುವ ಮೊದಲು ನಾನು ನೀನು ಗುಡ್ಡ ಸುತ್ತಾ ಇದ್ದಿದ್ದು….ನೆರಳೆ ಹಣ್ಣು, ಮುಳ್ಳು ಹಣ್ಣು, ಪರಗಿ ಹಣ್ಣು ಅಂತೆಲ್ಲಾ ಕಾಡಲ್ಲಿ ಸಿಕ್ಕಸಿಕ್ಕ ಹಣನ್ನೆಲ್ಲಾ ತಿಂತಾ ಇದ್ದಿದ್ದು…ಕೋತಿಗಳ ತರಹ ಕಚ್ಚಾಡ್ತಾ ಇದ್ದಿದ್ದು…ಎಷ್ಟು ಸಖತ್ತಾಗಿ ಇತ್ತು ಅಲ್ವಾ ಆ ದಿನಗಳು? ಇವತ್ತು ನಂಗೆ ಅದೇ ತರಹ ಆಟ ಆಡಬೇಕು ಅನ್ನಿಸ್ತಾ ಇದೆ. ಆದ್ರೆ ಈ ಹಾಳು ಸಮಾಜ ಅದನ್ನ ಒಪ್ಪೋದೇ ಇಲ್ಲ ಕಣೇ…ಅದರಲ್ಲೂ ನಿಮ್ಮೂರಿನ ಆ ಗಯ್ಯಾಳಿಗಳು ನಾವು ಈಗಲೂ ಆಟ ಆಡಿದರೆ ಹುಚ್ಚು ಹಿಡಿದಿದೆ ಇವರಿಗೆ ಅಂತಾ ದೊಡ್ಡ ಸುದ್ದಿ ಹಬ್ಬಿಸಿ ಬಿಡ್ತಾರೆ. ಅದನೆಲ್ಲಾ ನೆನಸಿಕೊಂಡರೆ ಕೋಪ ಬರತ್ತೆ…
 ನಾನು ದೊಡ್ಡವನಾಗಲೇ ಬಾರದಿತ್ತು ಎಸ್ಸೆಸಲ್ಸಿಲೀ ಫೇಲಾಗಬೇಕಿತ್ತು ಅನ್ನಿಸತ್ತೆ ಎಷ್ಟೋ ಸಲ. ನಿನ್ನಜ್ಜಿ ನಿನ್ನಿಂದಲೇ ಆಗಿದ್ದು ಎಲ್ಲಾ, ಓದಬೇಕು ನೀನು, ಹಾಗಾಬೇಕು, ಇದಾಗಬೇಕು ಅಂತೆಲ್ಲಾ ಆವತ್ತು ಪುರಾಣ ನನ್ನ ತಲೆಗೆ ತುರುಕಿದವಳು, ನನ್ನನ್ನು ಕಾಲೇಜು ಮೆಟ್ಟಿಲು ಹತ್ತಿಸಿದವಳು ನೀನೇ ಬೇವರ್ಸಿ! ನಿಂಗೆ ನಿಮ್ಮಪ್ಪನಿಗಿಂತ ಕ್ರೂರ ಗಂಡ ಸಿಗಲಿ, ನಿನ್ನ ಗಂಡ ಕುಡಿಯುವವನು, ಇಸ್ಪೀಟ್ ಆಡುವವನು, ಅದಕ್ಕಿಂತಲೂ ಕ್ರೂರಿಯಾಗಿರಲಿ….ಕತ್ತೆ ನೀನು ನಾನು ಕಾಡಲಿ ಇರಬೇಕು ಅಂದುಕೊಂಡಿದ್ದನ್ನು ಹಾಳು ಮಾಡಿದವಳು….!!!!
 ಮತ್ತೆ ಸಮಾಚಾರ ಜೋಯ್ಸರು ಏನು ಮಾಡ್ತಾ ಇದಾರೆ. ಈಗಂತೂ ಚುನಾವಣೆ…ಜೋಯ್ಸರ ಜ್ಯೋತಿಷ್ಯದ ಬಿಸಿನೆಸ್ ಫುಲ್ ಜೋರಾ? ಸೋಮಯಾಜಿ ನೆಕ್ಸ್ಟ್ ಜ್ಯೋಯ್ಸರೆ ಇರಬೇಕು ಅಲ್ವಾ ಸುಳ್ಳು ಸುಳ್ಳು ಶಕುನ ಹೇಳೋರು…?!ನಿಮ್ಮಪ್ಪ ನಂಗೆ ಹೇಳಿದ ಒಂದೇ ಒಂದೇ ಒಂದು ಸತ್ಯ ಅಂದ್ರೆ ನಿಂಗೆ ಒಬ್ಬ ಲಫಂಗನ ಮಗಳು ಸಿಕ್ತಾಳೆ ಅಂತಾ! ಅದೊಂದು ಮಾತ್ರ ಸಖತ್ತಾಗಿ ಹೇಳಿದಾರೆ ಕಣೇ!

 ನಿನ್ನ ಜೊತೆ ನಿನ್ನ ಗ್ಯಾಂಗ್‌ನಲ್ಲಿ ಉರಿಯುತ್ತಿದ್ದ ಹುಡಿಗಿಯರೆಲ್ಲಾ ಹೇಗಿದಾರೆ ಈಗ? ಏ ಮೊನ್ನೆ ಯಾರೋ ಒಬ್ಬಳು ನಿನ್ನ ಜೊತೆ ಇದ್ದವಳು ಸಿಕ್ಕಿದ್ಲು. ನನ್ನ ನಿನ್ನ ಕ್ಲಾಸ್‌ಮೇಟ್ ಅಂತೆ ಪಿಯುಸಿಲಿ ನಂಗೊಂತು ಚೂರು ಗುರುತು ಸಿಕ್ಕಲಿಲ್ಲ. ಅವಳಾಗಿಯೇ ಮಾತಾಡಿಸಿದಳು ನಿನ್ನ ಹುಡುಗಿ ಫ್ರೆಂಡು ನಾನು ಅಂತಾ! ಏನೋ ಕಾಲೇಜು ಮುಗಿದ ಎಲ್ಲಾ ಮುಗೀತು. ಯಾರದ್ದು ಪರಿಚಯವೂ ಇಲ್ಲ ಏನೂ ಇಲ್ಲ. ನಮ್ಮದೊಂದು ತೀರ ಅವರದೊಂದು ತೀರ ಅಲ್ವಾ? ಅದನೆಲ್ಲಾ ನೆನೆಸಿಕೊಂಡರೆ ಯಾಕೋ ತುಂಬಾ ಬೇಜಾರಾಗತ್ತೆ. ನಮ್ಮ ಜೊತೆ ಕುಣಿದವರು ಕಿತ್ತಾಡಿದವರು ಯಾರು ಕೊನೆಗೆ ಸಿಗೋದೇ ಇಲ್ಲ…ಹೋಗ್ಲಿ ಬಿಡು ನನ್ನ ಜೊತೆ ಆವತ್ತಿಂದಲೂ ಜಗಳ ಆಡುತ್ತಿದ್ದ ನೀನಾದ್ರೂ ಇದಿಯಲ್ವಾ ಅಷ್ಟೆ ಸಮಧಾನ ನಂಗೆ. ಅಯ್ಯೋ ಆಫೀಸ್‌ಗೆ ಲೇಟಾಯಿತು …ಇನ್ನೊಂದು ಸಾರಿ ಮತ್ತೆ ಪತ್ರ ಬರಿತೀನಿ ಆಯಿತಾ…ಅಲ್ಲಿವರೆಗೂ ಬಾಯ್
                       ಕೋತಿಯಲ್ಲದವ

 ಊಹುಂ ಕಥೆ ಬರೆಯಲು ನಾನು ಒಲ್ಲೆ…. ಹಾಗಂದುಕೊಂಡೆ ಗೀಚಿದ ಕಥೆ ಅದು. ನನ್ನ ವಯಸ್ಸನ್ನು ಗುರುತಿಸಬಹುದಾದ ಕಥೆ. ಅದ್ಯಾಕೋ ಅದಕ್ಕೆ ಮರೀಚಿಕೆ ಅಂತಾ ಹೆಸರು ಕೊಡಬೇಕು ಅನ್ನಿಸಿತ್ತು. ಹಾಗೇ ಹೆಸರಿಟ್ಟಿದ್ದೆ.  ಅದೊಂದು ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಕಥೆ ಮೆಚ್ಚಿ ಹಲವು ಪತ್ರಗಳು ಬಂತು.
 ಮರೀಚಿಕೆಯ ಕಥೆ ಆರಂಭವಾಗುವುದೇ ಇಲ್ಲಿಂದ. ಅರೆ ಕಥೆ ಮುಗಿದ ಮೇಲೆ ಮತ್ತೆ ಆರಂಭ……? ಅಂತಾ ನೀವು ಕೇಳಬಹುದು. ಅದು ಕಥೆ. ಇದು….? ಅದರಲ್ಲಿ ಅವಳು ಬರೆದ ಪತ್ರವೂ ಒಂದಿತ್ತು. ಸಾರ್ ನಿಮ್ಮ ಕಥೆಯಲ್ಲಿನ ನಾಯಕಿ ನಾನೇಯೇನೋ ಅನ್ನಿಸುವ ಹಾಗೇ ನೀವು ಕಥೆ ಬರೆದ್ದಿದ್ದೀರಿ.  ರೀಯಲಿ “ಐ ಲೈಕ್ ದಟ್ ಸ್ಟೋರಿ” ಅಂತಾ ಬರೆದಿದ್ದಳು. ಅವಳು ಬರೆದ ಈ ಸಾಲು ಯಾವ ಭಾಷೆಯದು ಅಂತಾ ನನಗೆ ನಿಜಕ್ಕೂ ಆವತ್ತು ಅರ್ಥವಾಗಿರಲಿಲ್ಲ!  ಕೊನೆಗೊಂದು ದಿನ ಅದು ಇಂಗ್ಲೀಷು, ಅದರ ಅರ್ಥ ಹೀಗೆ ಅಂತಾ ಅವಳೇ ಹೇಳಿಕೊಟ್ಟಳು. ಆಮೇಲೆ ಗೊತ್ತಾಗಿದ್ದು ಆ ಪದದ ಅರ್ಥ!
 ಅಂದು ಬರೆದಿದ್ದ ಮರೀಚಿಕೆ ಲವ್, ಫೀಲು ಏನೂ ಗೊತ್ತಿಲ್ಲದೇ ಬರೆದಿದ್ದ ಬಾಲಿಶ ಕಥೆಯಾಗಿತ್ತು. ಸಿನಿಮಾ ನೋಡಿ, ನಾಲ್ಕಾರು ಕಥೆ ಓದಿ ನನ್ನದೇ ಆದ ಒಂದು ಕಲ್ಪನೆಯಲ್ಲಿ ಬರೆದ ಸಿನಿಕತನದ ಕಥೆಯಾಗಿತ್ತು. ಅದು ಹೇಗೆ ಅವಳಿಗೆ ತನ್ನ ಬದುಕಿನ ಕಥೆ ಅನ್ನಿಸಿತೋ, ಅವಳಿಗ್ಯಾಕೆ ಈ ಕಥಾ ನಾಯಕಿ ತಾನೇ ಅನ್ನಿಸಿತೋ ನನಗಂತೂ ಅರ್ಥವಾಗಲಿಲ್ಲ. ಅದನ್ನೇ ವಿಧಿ ಅಂತಾರಂತೆ. ಹಾಗಂತ ಆಮೇಲೆ ಅವಳೇ ಹೇಳಿದ್ದು. 
 ಅವ ಮಲೆನಾಡಿನ ಮಾಣಿ. ಗೊಲ್ಲರ ಹುಡುಗ. ಜಾತಿಯಲ್ಲಿ ಬ್ರಾಹ್ಮಣನಾಗಿದ್ದರೂ, ಬದುಕಿನಲ್ಲಿ, ವೃತ್ತಿಯಲ್ಲಿ ಗೊಲ್ಲನಾಗಿದ್ದ. ಊರಿನ ದನ ಮೇಯಿಸಿಕೊಂಡು, ಊರುಮಂದಿ ಕೊಡುತ್ತಿದ್ದ ದೋಸೆ, ಜೋನಿ ಬೆಲ್ಲ ತಿಂದುಕೊಂಡು ಬದುಕುತಿದ್ದ. ಕಾಡು ಮೇಡು ಸುತ್ತುವುದು, ಚಿಟ್ಟೆ ಹಿಡಿಯುವುದು, ಜೇನಿನ ಗೂಡಿಗೆ ಕಲ್ಲು ಹೊಡೆಯುವುದು, ಊರಿನ ನಾಯಿಗೆ ಕಲ್ಲು ಬಿಸಾಡುವುದು,  ಇಂತಹದ್ದೇ ದಿನಚರಿ ಆ ಮಾಣಿಯದ್ದು. ಯಾರ ಮನೆಯವರು ಯಾವ ಕೆಲಸ ಹೇಳಿದರೂ ಒಲ್ಲೆ ಅಂದ ಮಾಣಿ ಅವ ಅಲ್ಲ. ಹಾಗಾಗಿಯೇ ಊರಿನ ಹೆಂಗಸರಿಗೆಲ್ಲಾ ಅಂವ ಅಂದ್ರೆ ಇಷ್ಟ. ಆದ್ರೂ ಊರವರ ದೃಷ್ಟಿಯಲ್ಲಿ ಅವ ಒಂತರಹ ಕೆಲಸಕ್ಕೆ ಬಾರದವನಾಗಿದ್ದ! ಶಾಲೀ ಕಲಿತ ಮಾಣಿ ಅದಲ್ಲ. ಮಂತ್ರ ಕಲಿ ಅಂತಾ ಮಠಕ್ಕೆ ಬಿಟ್ಟು ಬಂದ್ರೆ ನಮ್ಮ ಮನೆ ಗೌರಿ ದನ ಮಠದಲ್ಲಿ ಇಲ್ಲ,  ಅಂತಾ ಓಡಿಬಂದ ಮಾಣಿ ಅವ. ಅವ ಮರುಳ ಅಲ್ಲದೇ ಮತ್ತಿನೆಂತೂ? ಇದು ಅವನ ಕುರಿತಾಗಿ ಊರವರು ಹಿಂದಿನಿಂದ ಆಡುತ್ತಿದ್ದ ಮಾತು!
 ಶಾಲೇ ಕಲಿತು, ನೌಕ್ರಿ ಹಿಡಿದು, ಕೊನೆಗೂ ಯಾವುದೂ ಬೇಡ ಅಂತಾ ಮನೆ ಸೇರಿ ಬೆಟ್ಟ ಸುತುತ್ತಾ ಬೇಜಾರಾದಗಲೆಲ್ಲಾ ಕಥೆ, ಕವನ ಗೀಚುತ್ತಾ ಬದುಕುತ್ತಿದ್ದವನು ನಾನು. ಚಿಟ್ಟೆ ಹಿಡಿಯುವುದು, ಪೀಟಿ ಹಿಡಿಯುವುದು ನಂಗೂ ಇಷ್ಟವಾಗಿದ್ದರೂ ನಾಯಿಗೆ, ಜೇನಿನ ಗೂಡಿಗೆ ಕಲ್ಲು ಹೊಡೆಯಬಾರದೆಂಬ ತಿಳುವಳಿಕೆಯಿತ್ತು. ಊರವರಿಗೆ ತಿಪ್ಪರಲಾಗ ಹಾಕಿದರೂ ಕೆಲಸ ಮಾಡಿಕೊಡಬಾರದು ಅಂತಾ ನಿರ್ಧರಿಸಿದ್ದ್ದೆ. ನನ್ನ ಬದುಕು ಹಳ್ಳಿ ಗುಗ್ಗು ತರಹದ್ದೆ. ನನ್ನನ್ನು ನೋಡಿ ಆಫೀಸ್‌ಲ್ಲಿ ಎಲ್ಲರೂ ಅಣಗಿಸುತ್ತಿದ್ದರು. ಬೋಳಿ ಮಕ್ಕಳಾ “ಕತ್ತೆ ಬಾಲ ಕುದುರೆ ಜುಟ್ಟು” ನಾನು ಬದುಕೋದೇ ಹೀಗೆ ಅಂತಾ ರೇಗಾಡಿಕೊಂಡು ಮನೆ ಸೇರಿದ ಪ್ರಾಣಿ. ಒಳ್ಳೇ ಮಾಣಿ ಪೇಪರಿಗೆಲ್ಲಾ ಬರೀತಾ ಅನ್ನುತ್ತಿದ್ದರು ಊರವರು ನನ್ನ ಕಂಡು!
 ಹೀಗೆ ಬದುಕು ನಡೆಸುತ್ತಿದ್ದ ಅವನ ಕಣ್ಣು ಚುಚ್ಚಿದ್ದು ರಜೆಗೆ ಅಂತಾ ಅಜ್ಜನ ಊರಿಗೆ ಬಂದಿದ್ದ ತಿಮ್ಮಣ್ಣ ಭಟ್ಟರ ಮೊಮ್ಮಗಳು. ಪಾಪ ಅವ ಬಡಪಾಯಿಪೆದ್ದು . ಅವನಿಗೆಲ್ಲಿ ಗೊತ್ತು ಡಾಕ್ಟರ್‍ ಆದವರು ಡಾಕ್ಟರನ್ನೇ ಇಷ್ಟಪಡಬೇಕು, ರ್‍ಯಾಂಕ್ ಬರುವವರು ರ್‍ಯಾಂಕ್ ಬರುವವರನ್ನೇ ಇಷ್ಟಪಡಬೇಕು ಅನ್ನುವ ಇವತ್ತಿನ ಹೊಸ ರೂಲ್ಸು! ಅವ ಅವಳ ಹಿಂದೆ ಬಿದ್ದ…..ಕೊನೆಗೂ ಬಿದ್ದೇ ಹೋದ…..ಆ ಡಾಕ್ಟರಮ್ಮ ಸತ್ತ್ಲು ಅಂತಾ ಬಿಕ್ಕುತ್ತಾ ಗುಡ್ಡದ ಮೇಲೆ ಗೌರಿ, ಗಂಗೆಯನ್ನು ಮೇಯಿಸುತ್ತಾ ಕಣ್ಣೀರಿಡುತ್ತಲೇ ಸತ್ತ. ಅವ ಕಣ್ಣು ತೆರದಿದ್ದೇ ಒಂದು ಸಲವಾಗಿತ್ತು. ಅದನ್ನು ಅವಳು ಪೂರ್ಣವಾಗಿ ತೆರೆಸ ಬಹುದಿತ್ತು. ಆದರೆ ಅವಳು ಕಣ್ಣನ್ನು ಮಾತ್ರವಲ್ಲ,  ಹೃದಯವನ್ನು ಮುಚ್ಚಿಸಿಬಿಟ್ಟಳು. ಹೀಗೆ ಆ ಕಥೆ ಎಂಡ್ ಮಾಡಿದ್ದೆ,  ಅನ್ನೋದು ನೆನಪು. ನಾಲ್ಕಾರು ಸೀನಿನ ಕಥೆಯದು. ನಗು, ಅಳು ಎಲ್ಲ ಸನ್ನಿವೇಶವನ್ನು ಹಠಕ್ಕೆ ಬಿದ್ದು ಸೃಷ್ಟಿಸಿದ್ದೆ ಅನ್ನಿಸತ್ತೆ. ಅವ ಅವಳಿಗೋಸ್ಕರ ಕೆಲವು ದಿನ ಊರು ಬಿಟ್ಟು ಹೋಗಿದ್ದ. ಹಾಗಾಗಿಯೇ ಇರಬೇಕು ಅದಕ್ಕೆ ನಾನು ಮರೀಚಿಕೆ ಅಂತಾ ಹೆಸರಿಟ್ಟಿದ್ದು.
 ಅರೆ ಅದೇ ಟೈಟಲ್ಲು ಮತ್ತಿಲ್ಯಾಕೆ? ಬೇರೆ ಯಾವ ಹೆಸರು ಸಿಗಲಿಲ್ಲವಾ? ಅಂತಾ ನೀವು ಪ್ರಶ್ನಿಸಬಹುದು. ಅದಕ್ಕೆ ಹೇಳಿದ್ದು ಕಥೆ ಮುಗಿದ ಮೇಲೆ ಆರಂಭವಾಗುವ ಕಥೆಯಿದು ಅಂತಾ! “ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ” ಅನ್ನುವ ತರಹ ಬದುಕಲು ಅಣಿಯಾಗಿದ್ದ ನಾನು ಅವಳಿಗ್ಯಾಕೆ ಇಷ್ಟವಾದೆ? ಎಂದು ನನಗಂತೂ ಅರ್ಥವಾಗಲಿಲ್ಲ! ಅರ್ಥವಾಗದಿದ್ದರೂ ನಾನ್ಯಾಕೆ ತಿರುಗಿ ಅವಳ ಪತ್ರಕ್ಕೆ ಉತ್ತರ ಬರೆದೆ ಅನ್ನುವುದನ್ನೂ ಕೂಡಾ ಅರ್ಥೈಸಿಕೊಳ್ಳಲಾಗದಷ್ಟು ಹೆಡ್ಡ ನಾನು! ಅವಳನ್ನು ಕೇಳಿದ್ದರೆ ಇದನ್ನೂ ವಿಧಿಯಾಟ ಅನ್ನುತ್ತಿದ್ದಳು! ಒಟ್ಟಲ್ಲಿ ನಾನು ಅವಳಿಗೆ ಉತ್ತರ ಬರೆದೆ. ಅವಳು ನನ್ನ ಬೆನ್ನ ಹಿಂದೆ ಬಿದ್ದಳು. ನನ್ನನ್ನು ಪಡೆದೇ ಪಡೆಯುತ್ತೀನಿ ಅಂತಾ ಕೂತಳು. ಮೊದಮೊದಲು ನನಗೂ ಅವಳ ಹಠ ಮಜಾ ಅನ್ನಿಸುತ್ತಿತ್ತು. ನಾನು ಒಂಚೂರು ಅವಳನ್ನು ಬೆಂಬಲಿಸಿದೆ! ಕೊನೆಗೂ ನನ್ನ ದೃಷ್ಟಿ ಕಾಡು ಮೇಡಿನತ್ತ ತಿರುಗಿತು. ಪ್ರೀತಿ, ಪ್ರೇಮ ಎಲ್ಲಾ ಸುಳ್ಳೇ ಸುಳ್ಳು ಅನ್ನಿಸತೊಡಗಿತು. ನಾನು ಅಲ್ಲಿಗೆ ಈ ಕಥೆಯನ್ನು ಎಂಡ್ ಮಾಡಿದೆ.
 ಊಹುಂ ಅವಳು ಬಿಡಲಿಲ್ಲ. ನಾನು ಸಿಗಲಿಲ್ಲ. ಮತ್ತದೇ ಕಥೆ….ಅವಳಿಗೂ ಅವನಿಗೂ ವ್ಯತ್ಯಾಸ ಅಂದ್ರೆ ಅವ ಗೊಲ್ಲ. ಇವಳು ಟೆಕ್ಕಿ. ಇಬ್ಬರೂ ಸೋತರು. ಮರೀಚಿಕೆಯಲ್ಲಿ ಇಬ್ಬರೂ ಸೋತರು. ಮರೀಚಿಕೆ ಬುದ್ದಿಯನ್ನು ಸೋಲಿಸಿತು. ಅಲ್ಲಲ್ಲ ಅವಳ ಭಾಷೆಯಲ್ಲೇ ಹೇಳುವುದಾದರೆ ಅದು ವಿಧಿ! ಆದ್ರೂ ಗೆದ್ದವ ನಾನಲ್ಲವೇ? ಹಾಗಂದುಕೊಂಡರೆ ನೀವು ಸೋತು ಬಿಡುತ್ತೀರಿ! ಹಾಗಾಗಿಯೇ ಅದನ್ನು ಈಗಲೂ ಮರೀಚಿಕೆ ಅಂತಲೇ ಕರೆದ್ದಿದ್ದು.

ನಕ್ಸಲರ ಅಟ್ಟಹಾಸಕ್ಕೆ ಮತ್ತೆರಡು ಹೆಣ ಬಿದ್ದಿದೆ. ಬಿಜೆಪಿಯನ್ನು ಬೆಂಬಲಿಸಬೇಡಿ ಅನ್ನುವ ಕರೆಗೆ ಓಗೊಡಲಿಲ್ಲ ಅಂತಾ ಅವರು ಕೊಲೆ ಮಾಡಿದ್ದಂತೆ! ಅದೇ ಕೊಲೆಯನ್ನು ಭಜರಂಗಿಗಳು, ಹಿಂದುವಾದಿಗಳು ಮಾಡಿದ್ದರೆ ನಮ್ಮ ನಾಡಿನ ಬುದ್ದಿಜೀವಿಗಳ ನಾಡಿಮಿಡಿತ ಏರಿಹೋಗುತ್ತಿತ್ತು! ಅಯ್ಯೋ ಅಮಾಯಕರನ್ನು ಕೊಂದರು…ಕರ್ನಾಟಕ ಮತ್ತೊಂದು ಗುಜಾರಾತ್ ಆಗುತ್ತಿದೆ…ಅಂತೆಲ್ಲಾ ಘ್ನಾನಪೀಠಿಗಳ ಪುಂಗಿ ಶುರುವಾಗುತ್ತಿತ್ತು. ಮಾನವೀಯತೆಯ ಭಾವ ಉಕ್ಕಿ ಉಕ್ಕಿ ಹರಿಯುತ್ತಿತ್ತು! ಆದರೆ ಅದೇ ಕೃತ್ಯವನ್ನು ನಕ್ಸಲೀಯರು ಮಾಡಿದರೆ ಬುದ್ದಿಜೀವಿಗಳ ಭಾವ ಯಾಕೆ ನಿಮಿರುವುದಿಲ್ಲ?!
 ನಾನು ಟ್ಯಾಬ್ಲಾಯ್ಡೊಂದಕ್ಕೆ ವರದಿಗಾರಿಕೆ ಮಾಡುತ್ತಿದ್ದಾಗ ಬೋಜಶೆಟ್ಟರನ್ನು ಮಾತಾಡಿಸಿದ್ದೆ. ಅವರಿಗೆ ಊರಿನಲ್ಲಿ ಬದುಕಲು ನಕ್ಸಲರು ನೀಡುತ್ತಿರುವ ಕಿರುಕುಳವನ್ನು, ಅವರು ಅದನ್ನು ಮೆಟ್ಟಿನಿಲ್ಲುತ್ತಿರುವ ರೀತಿಯನ್ನು ವಿವರಿಸಿದ್ದರು. ಮೊನ್ನೆಯಿಂದ ಅದ್ಯಾಕೋ ಆ ಶೆಟ್ಟರ ನೆನಪೇ ಕಾಡುತ್ತಿದೆ. ಹೆಬ್ರಿಯ ಹಳ್ಳಿಮೂಲೆಯೊಂದರಲ್ಲಿ ಶಾಲೆಯ ಅಧ್ಯಾಪಕರಾಗಿ ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಶೆಟ್ಟರಿಗೆ ಸಮಾಜೋದ್ದಾರಕ ನಕ್ಸಲರು ಮೃತ್ಯುಪಾಶವಾದರು.ಹೆಬ್ರಿಯಂತಹ ಕಾಡುಮೂಲೆಯ ಹಳ್ಳಿಯಲ್ಲಿ ಇದ್ದ ಸಮಸ್ಯೆಗಳಾದರೂ ಏನು? ನಕ್ಸಲಿಸಂ ಅಲ್ಲಿಗೆ ಯಾಕೆ ಬಂದು ವಕ್ಕರಿಸಿತು. ನಕ್ಸಲಿಸಂ ಬಂದ ಮೇಲೆ ಬಗೆಹರಿದ ಸಮಸ್ಯೆಗಳಾದರೂ ಏನು?!…..ಊಹುಂ ಇವ್ಯಾವುದಕ್ಕೂ ನಮ್ಮ ಘ್ನಾನಪೀಠಿಗಳ ಹತ್ತಿರ ಉತ್ತರವಿಲ್ಲ. ಹಳ್ಳಿಮೂಲೆಯ ಸಮಸ್ಯೆಗಳು ಕೇವಲ ಪಶ್ಚಿಮಘಟ್ಟದ ಹಳ್ಳಿಗೆ ಮಾತ್ರ ಸೀಮಿತವಲ್ಲ. ಭಾರತದ ಪ್ರತಿಯೊಂದು ಹಳ್ಳಿಗಳಿಗೂ ಇದೆ. ಅದರ ನಡುವೆ ನಮ್ಮ ನಾಡಿನ ಜನ ಶಾಂತಿಯಿಂದ, ನೆಮ್ಮದಿಯಿಂದ ಜೀವನ ನಡೆಸುತ್ತಾ ಬಂದಿದ್ದಾರೆ. ವಿದ್ಯುತ್ ಇಲ್ಲ, ಶಾಲೆಯಿಲ್ಲ…ಊಹುಂ ಇಂತಹ ಸಮಸ್ಯೆಗಳಿಗೆ ನಮ್ಮವರು ತಲೆಕೆಡಿಸಿಕೊಳ್ಳಲೇ ಇಲ್ಲ. ಅವರಿಗೆ ಚೆನ್ನಾಗಿ ಗೊತ್ತು ಈ ನಾಡಿನಲ್ಲಿ ಒಂದು ಹೊತ್ತಿನ ತುತ್ತು ಕೂಳಿಗೂ ಗತಿಯಿಲ್ಲದವರು ಅನೇಕರಿದ್ದಾರೆ ಎಂದು. ಅವನ್ನೆಲ್ಲಾ ಸರಿಪಡಿಸುತ್ತೇವೆ ಎಂದು ಕಾಡೊಳಗೆ ಹೋಗಿ ಮಂಗನಂತೆ ಕುಳಿತರೆ ಪ್ರಯೋಜನವಿಲ್ಲ ಎಂದು.
 ರಷ್ಯಾದಲ್ಲಿ ಕ್ರಾಂತಿಯಾಯಿತು, ಚೀನಾದಲ್ಲಿ ಅದಾಯಿತು…..ಹಾಗೆ ಭಾರತದಲ್ಲೂ ಇದಾಗತ್ತೆ! ಹೌದು ಆಗತ್ತೆ ಶಾಂತವಾಗಿದ್ದ ಮಲೆನಾಡಿನಲ್ಲಿ ರಕ್ತಹರಿಯತ್ತೆ. ಬುದ್ದಿಜೀವಿಗಳಿಂದ ಕಾಡಿಗೆ ಹೋಗಿ ಕುಳಿತ ಒಂದಿಷ್ಟು ಬಡವರ, ದಲಿತರ, ಪರದೇಶಿಗಳ ಹೆಣ ಬೀಳತ್ತೆ. ಇದನ್ನೆಲ್ಲಾ ಲಾಭವಾಗಿಸಿಕೊಂಡು, ಇದರಿಂದ ಪ್ರಚಾರಗಿಟ್ಟಿಸಿಕೊಂಡು ಹೋರಾಟ ಅದು ಇದು ಅಂತಾ ತಿರುಗಾಡಿ ಹಣಮಾಡುವ ಅಪ್ರತಿಮ ಹೋರಾಟಗಾರರ ಬೊಗಸೆ ತುಂಬತ್ತೆ ಅವರ ಮಕ್ಕಳು ವಿದೇಶಕ್ಕೆ ತೆರಳಲು ಸುಲಭವಾಗತ್ತೆ. ಅಷ್ಟೆ ಆಗುವುದು ಹೊರತು ಮತ್ತೇನೂ ಆಗಲಾರದು ನಾವು ಚೀನಾ ಮಾದರಿಯನ್ನು ಆರಾಧಿಸಲು ಹೊರಟರೆ!
 ಮಲೆನಾಡಿಗೆ ನಕ್ಸಲಿಸಂ ಕಾಲಿಟ್ಟು ಸುಮಾರು ದಶಕಗಳೇ ಕಳೆಯಿತು. ಶೃಂಗೇರಿ, ಕುದ್ರೆಮುಖ ಭಾಗದ ಎಷ್ಟು ಹಳ್ಳಿಗಳು ಉದ್ದಾರವಾಗಿವೆ? ಎಷ್ಟು ಹಳ್ಳಿಗಳಿಗೆ ನಕ್ಸಲರು ರಸ್ತೆ ಮಾಡಿದ್ದಾರೆ.ಎಷ್ಟು ಬಾವಿತೋಡಿದ್ದಾರೆ? ಎಷ್ಟು ಶಾಲೆ ಕಟ್ಟಿಸಿದ್ದಾರೆ? ಎಷ್ಟು ದಲಿತರಿಗೆ ಕೂರಿಸಿ ಊಟಹಾಕುತ್ತಿದ್ದಾರೆ?! ಅಂತಾ ಕೇಳಿದರೆ ಅಯ್ಯೋ ಅದನ್ನೆಲ್ಲಾ ಸರ್ಕಾರ ಮಾಡಬೇಕು! ಅದು ಮಾಡಲೀ ಅಂತಾನೇ ನಾವು ಕಾಡಲ್ಲಿ ಕುಳಿತು ಇಷ್ಟೆಲ್ಲಾ ಹೋರಾಟ ಮಾಡುತ್ತಿರುವುದು! ಅನ್ನುತ್ತಾರೆ ನೂರಕ್ಕೂ ಹೆಚ್ಚು ಜನರಿರುವ ನಕ್ಸಲ್ ತಂಡದವರು. ಅಲ್ಲಾ ಸ್ವಾಮಿ ಬಾವಿತೋಡಲು, ರಸ್ತೆಮಾಡಲು ಸರ್ಕಾರ ಯಾಕೆ ಬೇಕು ನೂರು ಮಂದಿ ಸಾಕಾಗುವುದಿಲ್ಲವೇ?
 ಬನ್ನಿ ನಮ್ಮ ನಾಡಿನಲ್ಲಿ ಒಂದಿಷ್ಟು ಸ್ತ್ರೀಶಕ್ತಿ ಕೇಂದ್ರಗಳಿವೆ. ಸರ್ಕಾರದ ಸಹಾಯವಿಲ್ಲದೇ ಅವು ಮಾಡುತ್ತಿರುವ ಕೆಲಸವನ್ನು ನೋಡಬಹುದು. ನಾಚಿಕೆ ಆಗಬೇಕು ನಕ್ಸಲರಿಗೆ ಒಬ್ಬ ಹೆಣ್ಣು ಮಗಳು ಮಾಡುವ ಕೆಲಸವನ್ನು ಮಾಡಲಾಗದೇ ಷಂಡರಂತೆ ಕಾಡಿಗೆ ಹೋಗಿ ಕುಳಿತುಕೊಳ್ಳಲು. ಅವರನ್ನು ಕಾಡಿಗೆ ಹೋಗುವಂತೆ ಪ್ರೇರೇಪಿಸುವ ಒಂದಿಷ್ಟು ಪ್ರಾಧ್ಯಾಪಕರಿಗೆ, ಬುದ್ದಿಜೀವಿಗಳಿಗೂ, ಹುಳಿ ಹುಳಿ ಸಂಪಾದಕರಿಗೂ ನಾಚಿಕೆಯಾಗಬೇಕಿತ್ತು. ಬುದ್ದಿ ಪರಾಕಾಷ್ಠೆ ಅತಿಯಾದರೇ ಸಮಾಧಿ ಸ್ಥಿತಿ ತಲುಪುತಾರಂತೆ! ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಡುತ್ತಾರಂತೆ! ನಿರ್ಲಿಪ್ತ ಸ್ಥಿತಿ ಅಂತಾರಲ್ಲಾ ಅಂತಹದ್ದೇ ಸ್ಥಿತಿ ತಲುಪುತ್ತಾರಂತೆ ನಮ್ಮ ನಾಡಿನ ಬುದ್ದಿಜೀವಿಗಳು ಅದೇ ಹಂತ ತಲುಪಿದವರು! ಎಲ್ಲವನ್ನು ತ್ಯಜಿಸಿ ನಿಂತಿರುವವರು!ಅವರಿಗೆಲ್ಲಾ ಚೆನ್ನಾಗಿ ಗೊತ್ತು ಈ ಹೋರಾಟದಲ್ಲಿ ಸಾಯುವವರು ಅಮಾಯಕರು ಹೊರತು ತಮ್ಮ ಹೆಂಡಿರು ಮಕ್ಕಳು , ತಾವು ಇಟ್ಟುಕೊಂಡವರು , ಕಟ್ಟಿಕೊಂಡವರು ಸಾಯುವುದಿಲ್ಲ ಅಂತಾ! ಯಾಕೋ ಇದನೆಲ್ಲಾ ನೋಡುತ್ತಿದ್ದರೆ ಶಿವರಾಮ ಕಾರಂತರ ಗೋಂಡಾರಣ್ಯ ಕಾದಂಬರಿ ನೆನಪಿಗೆ ಬರತ್ತೆ. ಇಂತಹವರನ್ನು ನೋಡಿಯೇ ಬಹುಶಃ ಕಾರಂತರು ಆ ಕಾದಂಬರಿ ಬರೆದಿರಬೇಕು!
 ಒಟ್ಟಲ್ಲಿ ಶಾಂತ ಮಲೆನಾಡಿನಲ್ಲಿ ರಕ್ತದೋಕಳಿ, ಅಮಾಯಕರ ಬಲಿ. ಈ ಹೋರಾಟಕ್ಕೆ ಶೀಘ್ರವಾಗಿ ಕಡಿವಾಣ ಹಾಕಲೇಬೇಕಿದೆ. ಬೇರು ಕೀಳದೇಮರ ಕಡಿದ್ರೆ ಪ್ರಯೋಜನವಿಲ್ಲ. ಹಾಗಾಗಿ ಯೂನಿವರ್ಸಿಟಿ ವಿದ್ಯಾರ್ಥಿಗಳನ್ನು ನಕ್ಸರನ್ನಾಗಿ ಪರಿವರ್ತಿಸುವ ಕೆಲ ಪ್ರಾದ್ಯಾಪಕರನ್ನು, ನಾಡಿನಲ್ಲಿ ಕುಳಿತು ನಕ್ಸಲ್ ಪರ ಸಂಪಾದಕೀಯ ಬರೆಯುವ ಕೆಲ ಹುಳಿಹುಳಿ ಸಂಪಾದಕರನ್ನು ಪೊಲೀಸರು ಮೊದಲು ಎನ್‌ಕೌಂಟರ್ ಮಾಡಿದ್ದರೆ ಚೆನ್ನಾಗಿತ್ತು.ಅದೆಲ್ಲಾ ಏನೇ ಇರಲಿ ಸತ್ತ ಬೋಜಶೆಟ್ಟಿಯ ಜೀವಕ್ಕೆ ಬೆಲೆತೆರುವವರು ಯಾರು?ಗುಜಾರಾತ್‌ನಲ್ಲಿ ಸತ್ತವರದ್ದು ಮಾತ್ರ ಜೀವವಾ? ಹೆಬ್ರಿಯವರದ್ದು ನಿರ್ಜಿವವಾ? ಇದೆಲ್ಲಾ ಯಾಕೆ ಅವಕ್ಕೆ….ಅಂದರೆ ಅವಕ್ಕೆ…ಅದೇ ಬಹಿರಂಗವಾಗಿ…ಅಲ್ಲಲ್ಲ ಅಂತರಂಗದಿಂದ ಬರೆಯುತ್ತಾವಲ್ಲ ಹುಳಿ ಹುಳಿ ಸಂಪಾದಕರು, ಬುದ್ದಿಯ ಪರಾಕಾಷ್ಠೆಯಿಂದ ನಿರ್ಲಿಪ್ತ ಸ್ಥಿತಿ ತಲುಪಿರುವವರಿಗೆ ಅರ್ಥವಾಗಲ್ಲ?!(ಹುಳಿ ಅಂದರೆ ಮಲೆನಾಡು ಬಾಷೆಯಲ್ಲಿ ಅಹಂಕಾರಿ ಅಂತಾ ಅರ್ಥ. ಅದನ್ನು ಇಲ್ಲಿ…..?!!!!)

Older Posts »