ಮಲ್ಲಿಗೆಯ ಜಾಡು ಹಿಡಿದು ಹೊರಟವರಿಗೆ…

July 1, 2009 · 1 ಅನಿಸಿಕೆ

Rajendra Karanth

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪ
ಣೆಯೇ  ದೊರೆಯೇ?
ನವಿಲೂರು ಮನೆಯಿಂದ ನುಡಿಯೊಂದು ತಂದಿಹೆನು
ಬಳೆಯ ತೊಡಿಸುವುದಿಲ್ಲ  ನಿಮಗೆ…

ಹಣ್ಣು-ಹಣ್ಣು  ಗಡ್ಡದ, ಬಿಳಿ ತಲೆಕೂದಲಿನ,  ಬಗಲಿನಲ್ಲೊಂದು ಬಳೆಯ  ಗಂಟು ಹೊತ್ತಿರುವ ೯೫ರ ಪ್ರಾಯದ ಮುದುಕ ರಂಗ ಪ್ರವೇಶಿಸಿದ್ದಾನೆ.

‘ಯಾಕೆ ಹಂಗ್ ನೋಡೀರಿ? ಗುರ್ತು ಸಿಕ್ಕಲಿಲ್ಲವ್ರಾ-ಅದು ನಿಮ್ಮ  ತೆಪ್ಪಲ್ಲ  ಬುಡಿ…ಈ ಸಿನಿಮಾ ಟಿವಿಯವರು ನಂಗೆ ಫ್ಯಾನ್ಸಿ  ಡ್ರೆಸ್ ತೊಡಿಸಿ ಯಕ್ಷಗಾನದ ಕೋಡಂಗಿ ಹಂಗ್ ಮಾಡಿಬುಟ್ಟವ್ರೆ ಅಂತೀನಿ..ಬಡವ…ಊಂ ಈ ಬಡ ಬಳೆಗಾರ ಚೆನ್ನಯ್ಯ ಇದ್ದದ್ದೇ  ಹಿಂಗೆ ಸಾಮಿ…ಇಂಗ್ಲೆಂಡೂ, ಅಮೆರಿಕ, ದುಬಯ್ಯಿ…ಕನ್ನಡದ ಮಂದಿ ಇರೋ ಕಡೆಯಲ್ಲ  ನಮ್ಮ  ಊರು ಶಾನೇ ಫೆಮಸ್ಸು…

ಕವಿ ಕೆ.ಎಸ್ ನರಸಿಂಹ ಸ್ವಾಮಿಗಳ ಕಲ್ಪನೆಯ ಕೂಸಾದ ‘ಬಳೆಗಾರ ಚೆನ್ನಯ್ಯ’ ಪಟ ಪಟ ಮಾತನಾಡುತ್ತಿದ್ದರೆ, ಇಡೀ ರಂಗಭೂಮಿಯ ತುಂಬೆಲ್ಲ  ಚಪ್ಪಾಳೆಯ ಝೇಂಕಾರ ಮೊಳಗಿತ್ತು. ‘ಮೈಸೂರು ಮಲ್ಲಿಗೆ’ ಎಂಬ ಚೆಂದದ ನಾಟಕವೊಂದು ಸದ್ದು-ಗದ್ದಲವಿಲ್ಲದೇ ಆರಂಭವಾಗಿಬಿಟ್ಟಿತ್ತು.

ಮಲ್ಲಿಗೆಯ ಕವಿ ಅಂತಲೇ ನಾಡಿಗೆ ಚಿರಪರಿಚಿತರಾದ ಕೆ.ಎಸ್ ನರಸಿಂಹಸ್ವಾಮಿಗಳ  ಬದುಕು-ಬರಹದ ಮೇಳೈಕೆಯಿರುವ ನಾಟಕವದು. ಅಲ್ಲಿ  ನರಸಿಂಹ ಸ್ವಾಮಿಗಳ ಕವಿತೆಯ ಜತೆಯಲ್ಲೇ, ಬದುಕು ಬಿಚ್ಚಿಕೊಳ್ಳುತ್ತಾ  ಹೋಗುತ್ತದೆ. ಇಡೀ ನಾಟಕವನ್ನು  ಎರಡು ಘಟ್ಟಗಳನ್ನಾಗಿ ವಿಗಂಡಿಸಲಾಗಿದೆ. ಈ ನಾಟಕದ ಸೂತ್ರಧಾರನಾದ ಚೆನ್ನಯ್ಯ, ಕವಿಯ ಮರಿಮಗಳು ಮತ್ತು ಆಕೆಯ ಮೊಮ್ಮಕ್ಕಳನ್ನು ನವಿಲೂರಿನಲ್ಲಿ  ಭೇಟಿಯಾಗುತ್ತಾನೆ. ಅವರೆದುರು ಕವಿ ಬದುಕಿದ್ದ  ದಿನಗಳನ್ನು ನೆನಪಿಸಿಕೊಳ್ಳುತ್ತಾನೆ. ಕವಿಯ ಕುರಿತಾಗಿ ಕಥೆಯನ್ನು ಹೇಳಲು ಶುರುವಿಡುತ್ತಾನೆ. ಚೆನ್ನಯ್ಯನ ನೆನಪುಗಳೇ ಇಲ್ಲಿನ ಕಥಾವಸ್ತು. ‘ಮನೆಯೆದುರಿಗಿನ ಮಲ್ಲಿಗೆಯ ಮರವಿಲ್ಲ, ಸಿಹಿ ನೀರಿನ ಬಾವಿಯೂ ಇಲ್ಲ. ಆದರೆ ನವಿಲೂರಿನ ರಸ್ತೆ ಮಾತ್ರ ಬದಲಾಗಿಲ್ಲ! ನಾನು ಬಿದ್ದು  ಕಾಲು ಮುರಿದುಕೊಂಡಿದ್ದ  ರಸ್ತೆಯ ನಡುವಣ ಗುಂಡಿ ಮಾತ್ರ ೫೦ವರ್ಷಗಳ ನಂತರವೂ ಹಾಗೆ ಇದೆ’ ಎಂಬ ಚೆನ್ನಯ್ಯನ ಮಾತು ಪ್ರೇಕ್ಷಕರನ್ನು ನಗೆಗಡಲಲ್ಲಿ  ತೇಲಿಸುತ್ತದೆ. ಕುಡಿಯಲು ಪೆಪ್ಸಿ  ತಂದಿಡುವ ಮೊಮ್ಮಕ್ಕಳು…ಬೆಲ್ಲ , ನೀರು ಕೊಡ್ರವೌ  ಎಂಬ ಚೆನ್ನಯ್ಯನ ಉತ್ತರ…ಹಿಂದಿನ-ಇಂದಿನ ತರೆಮಾರುಗಳಲ್ಲಾದ ಪರಿವರ್ತನೆಯ ತುಲನೆಯಲ್ಲೇ  ಮೊದಲಾರ್ಧ ಕಳೆದು ಹೋಗುತ್ತದೆ.

ಇಲ್ಲಿ  ನರಸಿಂಹ ಸ್ವಾಮಿಗಳಿಗೆ ಹದಿನಾರರ ಪ್ರಾಯ. ಪ್ರೀತಿಯ ಹುಂಬುತನ. ನವಿಲೂರಿನ ಚೆಂದದ ಹುಡುಗಿ ಶಾನುಬೋಗರ ಮಗಳ ಮೇಲೆ ಕವನ ಕಟ್ಟುವ ತವಕ! ಕೊಂಚ ನಗು, ಸ್ವಲ್ಪ  ಸಂತಸ…ಬರಹಗಾರನೊಬ್ಬನ  ಹುಂಬುತನ, ಹುಚ್ಚುತನ…ಎಲ್ಲವೂ ಇಲ್ಲಿದೆ.

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ
ಚಿತ್ರದ ಹೂವಿತ್ತು-ಪದುಮಳು
ಹಾಕಿದ ಹೂವಿತ್ತು.

ಸೀತಮ್ಮನ್ನನ್ನು  ಮದುವೆಯಾದ ಕವಿ ಮಾವನ ಬಂದಾಗ ಹುಟ್ಟುವ ಈ ಚೆಂದದ ಕವಿತೆ ಪ್ರೇಕ್ಷಕರನ್ನು ಆನಂದದ ಅಲೆಯಲ್ಲಿ  ತೇಲಿಸುತ್ತಿರುವಾಗಲೇ ಮೊದಲಾರ್ಧದ ಮುಕ್ತಾಯಕ್ಕೆ ಬಂದಿರುತ್ತದೆ.

cennayya-2***

ನಾಟಕದ ನಿಜವಾದ ಕಥೆ ಆರಂಭವಾಗುವುದೇ ದ್ವಿತೀಯಾರ್ಧದಿಂದ. ಕವಿ, ಶಾನುಭೋಗರ ಮಗಳಾದ ಸೀತಮ್ಮನನ್ನು  ವರಿಸಿದ್ದಾರೆ. ಪುಟ್ಟ  ಬಾಡಿಗೆ ಮನೆಯಲ್ಲಿ  ಅರೆ ಹೊಟ್ಟೆ-ಬಟ್ಟೆಯೊಂದಿಗೆ ಸಂಸಾರದ ನೌಕೆ ಸಾಗುತ್ತಿದೆ. ಕವಿಯ ಮಗ, ಮಗಳು, ಹೆಂಡತಿ, ಸಂಸಾರ…ಇದರ ಸುತ್ತವೇ ಸಾಗುವ ಕಥೆ, ಕನಿಷ್ಠ  ಮೂರು ಸಲವಾದರೂ  ಪ್ರೇಕ್ಷಕನ ಕಣ್ಣಲ್ಲಿ  ನೀರು ಜೀನುಗುವಂತೆ ಮಾಡುತ್ತದೆ.

ಸ್ವಂತ ಅನ್ನುವುದು ಏನಿದೆ ಚೆನ್ನಯ್ಯ? ‘ನಾನು’ ಅನ್ನೋದೆ ಬಾಡಿಗೆ…ಎಂಬ ಕವಿಯ ಹತಾಶೆಯ ಮಾತು ಕರುಳನ್ನು ಕಿವಿಚುತ್ತದೆ. ಗಂಡನ ಮನೆಯಿಂದ ತವರು ಮನೆಗೆ ಬರುವ ಮೀನಾಳ ದೃಶ್ಯ, ರೈಲಿನ ಪಯಣದೊಂದಿಗೆ ಅಂತ್ಯ ಕಂಡಾಗ ಕೈಯಿ  ನಮಗೆ ಗೊತ್ತಿಲ್ಲದಂತೆ ಕರವಸ್ತ್ರವನ್ನು ತಡಕಾಡುತ್ತಿರುತ್ತದೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ  ಬರುವಳು ಹೊದ್ದು  ಮಲಗು ಮಗುವೇ ಜೋ ಜೋ ಜೋ…

ನಿನ್ನ ಮಗನ ಕುರಿತಾಗಿ ಬರೆದಿರುವ ಕವನ. ಈ ವಾರ ಸುಧಾದಲ್ಲಿ  ಬರತ್ತೆ…ಮಗ ಅನಂತುವಿನ ಬಳಿ ಕವಿ ಹೇಳುವ ಮಾತು, ಅಪ್ಪ-ಮಗನ ಶೀತಲ ಸಮರ, ಸಿಟ್ಟು  ಮಾಡಿಕೊಂಡು ಹೋಗುವ ಅನಂತುವಿನ ದೃಶ್ಯ ಮತ್ತೆ ಕಣ್ಣಲ್ಲಿ  ನೀರು ಬರಿಸುತ್ತದೆ.

‘ಶೆಟ್ರೆ ಒಂದೈದು ಸಾವಿರ ಬೇಕಿತ್ತು. ಈ ಕವನಗಳಿಗೆ ಅಷ್ಟು  ಬೆಲೆಯಿದೆಯಾ…’ಹೆಂಡತಿಯ ಔಷಗೋಸ್ಕರ ಕವನವನ್ನು ಮಾರಲು ಹೊರಟ ಕವಿಯ ಬದುಕಿನ ದೃಶ್ಯ ಎಲ್ಲರ ಕಣ್ಣಂಚಿನಲ್ಲೂ  ನೀರಿಳಿಸುತ್ತದೆ.   ಸಮಗ್ರ ಕಾವ್ಯವನ್ನು ೫,೦೦೦ ರೂ.ಗೆ ಮಾರಿ, ಶೆಟ್ಟ್ರೆ, ಸೂಕ್ತ ಸಮಯದಲ್ಲಿ  ಉಪಕಾರ ಮಾಡಿದ್ರಿ  ಅಂತೇಳಿ ಬರುವ ಕವಿ…

ಬರೆದಿದ್ದನ್ನು  ವಿಮರ್ಶೆ ಮಾಡಿ, ಹೀಗೆ ಬರೆಯಬೇಕಿತ್ತು ಅನ್ನುವವರು…ಎಂಬ ನರಸಿಂಹಸ್ವಾಮಿಗಳ ಮಾತಿನಲ್ಲಿ  ವಿಮರ್ಶಕರ ಕುರಿತಾಗಿನ ಸಿಟ್ಟಿದೆ. ಹೆಂಡತಿಯನ್ನೇ ನಿಜವಾದ ವಿಮರ್ಶಕಿ ಎಂದು ಹೇಳುವಲ್ಲಿ  ಪ್ರೀತಿಯ ಸೊಬಗಿದೆ. ನೋವಿನ ನಡುವೆಯೂ  ಪ್ರೇಕ್ಷಕರನ್ನು ಒಂಚೂರು ನಗಿಸುವ ಯತ್ನ ಖಂಡಿತವಾಗಿಯೂ ನಡೆದಿದೆ!

ಹೌದು, ಬೆಲೆ ಕಟ್ಟಲಾಗದ ಕವಿತೆಗಳನ್ನು ಬರೆದ ಮಲ್ಲಿಗೆಯ ಕವಿಯ ಬದುಕಿನ ಮತ್ತೊಂದು ಮುಖ ಅಲ್ಲಿದೆ. ಪೈಸೆ-ಪೈಸೆಗೂ  ಪರದಾಡಿದ, ದುಃಖವಾಗದೇ ಕವಿತೆ ಹುಟ್ಟತ್ತಾ  ಎನ್ನುತ್ತಲೇ  ನೋವನ್ನು  ನುಂಗಿಕೊಂಡ, ಬಾಡಿಗೆ ಒಂಚೂರು ಹೆಚ್ಚಾಯಿತೆಂದಾಗ ಮನೆಗಳನ್ನು ಬದಲಾಯಿಸುತ್ತಲೇ ಕಾಲ ಕಳೆದ ಕೆ.ಎಸ್.ನ ಬದುಕಿನಲ್ಲಿದ್ದ  ವ್ಯಥೆಯನ್ನು ಚೆಂದವಾಗಿ ಸೆರೆಹಿಡಿದವರು ರಾಜೇಂದ್ರ ಕಾರಂತರು.

ದೀಪವೂ ನಿನ್ನದೆ, ಗಾಳಿಯೂ ನಿನ್ನದೇ
ಆರದಿರಲಿ ಬೆಳಕು…

ನನ್ನ  ಅತ್ಯಂತ ಇಷ್ಟದ ಹಾಡು ರಂಗದಲ್ಲಿ  ಕೇಳಿಸುವಾಗ, ನರಸಿಂಹ ಸ್ವಾಮಿಗಳ ತೊಡೆಯ ಮೇಲೆ ಪತ್ನಿ ಸೀತಮ್ಮ  ಕೊನೆಯುಸಿರೆಳೆದಿರುತ್ತಾರೆ. ನಾಟಕ ಅಂತ್ಯಕ್ಕೆ ಬಂದು ನಿಲ್ಲುತ್ತದೆ.  ಇಡೀ ನಾಟಕ, ಮತ್ತೆ-ಮತ್ತೆ  ನೋಡಬೇಕು ಅನ್ನಿಸುವಷ್ಟರ  ಮಟ್ಟಿಗೆ ಗೆಲುವು ಸಾಸಿದೆ. ‘ನೀವು ನೋಡಿ ಬನ್ನಿ’ ಅಂತಾ ನಮ್ಮ ಗೆಳೆಯರನ್ನು ಒತ್ತಾಯ ಮಾಡಿ ಕಳುಹಿಸುವಷ್ಟರ  ಮಟ್ಟಿಗೆ ಸೊಗಸಾಗಿದೆ. ನಾನಂತೂ, ನನ್ನ ಸುಮಾರು ಗೆಳೆಯರನ್ನು ಕಳುಹಿಸಿದ್ದೇನೆ. ನೀವು ಹೋಗಿ ಬರುವಿರಿ ತಾನೇ?!

ಡಾ. ಬಿ.ವಿ ರಾಜಾರಾಮ್ ನೇತೃತ್ವದ ಕಲಾಗಂಗೋತ್ರಿ ತಂಡ ‘ಮೈಸೂರು ಮಲ್ಲಿಗೆಯ’ ೧೦೦ನೇ ಪ್ರದರ್ಶನದ ಹೊಸ್ತಿಲಿನಲ್ಲಿರುವಾಗಲೇ,  ದ.ರಾ ಬೇಂದ್ರೆ  ಬದುಕು-ಬರಹ ಆಧಾರಿತ ‘ಗಂಗಾವತರಣ’ಕ್ಕೆ ಮಿತ್ರ ರಾಜೇಂದ್ರ ಕಾರಂತರು ಸಜ್ಜಾಗಿದ್ದಾರೆ.

ಘಮ ಘಮಿಸ್ತಾವ ಮಲ್ಲಿಗೆ
ನೀ ಹೊರಟ್ಟಿದ್ದೆಲಿಗೆ…

ಬೇಂದ್ರೆ ಬರೆದ ಮಲ್ಲಿಗೆ ಜಾಡು ಹಿಡಿದು, ಹಿಂದಿನ ಕವಿಗಳನ್ನು  ಮತ್ತೆ ಮತ್ತೆ  ನೆನಪಿಸಲು ಹೊರಟಿರುವ ಕಾರಂತರು ಗೆಲ್ಲುತ್ತಾರೆ ಎಂಬುದರಲ್ಲಿ  ಯಾವುದೇ ಅನುಮಾನವಿಲ್ಲವಾದರೂ, ಅವರ ಯತ್ನಕ್ಕೆ ಜಯಸಿಗಲಿ ಎಂದು ಹಾರೈಸುವುದು ನಮ್ಮ ಕರ್ತವ್ಯ ಅಲ್ವಾ?

(ಮೈಸೂರು ಮಲ್ಲಿಗೆಯ ಪ್ರದರ್ಶನ ಯಾವತ್ತು, ಎಲ್ಲಿದೆ ಎಂಬುದನ್ನು ತಿಳಿಯಲು ಡಾ.ಬಿ.ವಿ ರಾಜಾರಾಂ-೯೪೪೮೦೬೯೬೬೭ ಅವರನ್ನು ಸಂಪರ್ಕಿಸಬಹುದು)

→ 1 CommentCategories: ಕ್ರಿಯೇಟಿವ್ ಪೇಜ್

ಸೋತ ಪ್ರೀತಿಗೆ ಸಾಕ್ಷಿಯಾಗುವ ಸಿಟ್ಟು !

June 28, 2009 · 3 ಅನಿಸಿಕೆಗಳು

ನಿನ್ನೆ ಅದ್ಯಾಕೊ ಹಳೆಯ ಡೈರಿಯನ್ನು ಹರವಿಕೊಂಡು ಕುಳಿತ್ತಿದ್ದೆ. ಅವಳ ನೆನಪು ಮರೆಯಾಗಿಯೇ ಹೋಯಿತು ಅನ್ನುವಷ್ಟರಲ್ಲಿ  ಮತ್ತೆ ನೆನಪಾದಳು! ಡೈರಿಯ ನೆವವಿಲ್ಲದಿದ್ದರೆ ಅವಳ ನೆನಪಾಗುತ್ತಿರಲಿಲ್ಲ…ಅಲ್ಲಲ್ಲ… ಅವಳ ನೆನಪು  ಮರುಕಳಿಸಲು ಶುರುವಾದ್ದರಿಂದಲೇ  ಡೈರಿಯ ಪುಟ ತಿರುವಿಹಾಕಿದ್ದು!  ನಿಜ ಹೇಳಬೇಕೆಂದರೆ, ಅವಳು ಮತ್ತೆ, ಮತ್ತೆ ನೆನಪಾಗುತ್ತಿರಲಿ ಎಂಬ ಉದ್ದೇಶದಿಂದ  ದಪ್ಪ ದಪ್ಪನೆಯ ಅಕ್ಷರದಲ್ಲಿ  ಅವಳ ಹೆಸರನ್ನು ಡೈರಿಯಲ್ಲಿ  ಬರೆದಿಟ್ಟಿರುವುದು!

ನಾನು ಅವಳನ್ನು ಪ್ರೀತಿಸಿದೆ, ಹಾಗಂತ ಅವಳು ನನ್ನನ್ನು ಪ್ರೀತಿಸಬೇಕಾಗಿತ್ತು  ಎಂಬ ಹಠವೇನಿರಲಿಲ್ಲ. ಆದರೂ, ಅವಳು ನನ್ನನ್ನು ಪ್ರೀತಿಸಲಿಲ್ಲ  ಎಂಬ ಸಿಟ್ಟು! ನನ್ನಲ್ಲಿ  ಏನು ಕೊರತೆಯಿತ್ತು  ಎಂದು ಅವಳು ಹೇಳಲಿಲ್ಲ. ನಾನು ಅವಳನ್ನು ಕೇಳಲಿಲ್ಲ…

ಅವಳಿಗೂ ಅವಳದ್ದೇ ಆದ ಕನಸು, ಕಲ್ಪನೆಗಳಿವೆ. ನಾನು ಹೇಗೆ ನನ್ನ  ಮೂಗಿನ ನೇರಕ್ಕೆ ಸರಿಯಾಗಿ ಆಲೋಚನೆ ಮಾಡುತ್ತೇನೋ, ಅದೇ ತರಹ ಅವಳು, ಅವಳ ಮೂಗಿನ ನೇರಕ್ಕೆ ಸರಿಯಾಗಿ ಆಲೋಚಿಸುತ್ತಾಳೆ…ಇವೆಲ್ಲವೂ ನನಗೆ ಅರ್ಥವಾಗುತ್ತದೆ. ಆದರೂ ಅವಳ ಕುರಿತಾಗಿ ಕೋಪ. ನಾನಷ್ಟು  ಹತ್ತಿರದವನಾಗಿದ್ದರೂ, ಬೇರೆಯವನ ಸಂಗಡ…ಮತ್ತದೇ ಆಲೋಚನೆ!
ಆಕೆ ಇನ್ನು  ಕೈಗೆ ಸಿಗುವುದಿಲ್ಲ  ಎಂಬುದು ಖಾತ್ರಿಯಾಗಿದೆ.  ಹಾಗಂತ,  ಆಕೆ ಸಿಕ್ಕರೂ ಸಿಗಬಹುದೆಂಬ ಪುಟ್ಟ  ಕನಸು ಮಾತ್ರ ಮನಸಿನಿಂದ ದೂರವಾಗಿದೆ ಎನ್ನಲು ಸಾಧ್ಯವಿಲ್ಲ!  ಪಾಪದ ಹುಡುಗಿ, ಚೆಂದದ ಹುಡುಗಿ, ಮುದ್ದು ಮುದ್ದಾದ ಹುಡುಗಿ…ಹಾಗಂತ ಅವಳ ಕುರಿತಾಗಿ ಕಲ್ಪನೆಯೊಂದು  ಒಡಮೂಡುವ ಹೊತ್ತಿನಲ್ಲೇ, ಪಾಪಿ, ಮೋಸಗಾರ್ತಿ…ನನ್ನೊಳಗಣ ಸಿಟ್ಟು  ಜಾಗೃತವಾಗಿಬಿಡುತ್ತದೆ!

ಇದು ಒಂತರಹ ಖಾಯಿಲೆಯಾಗಿರಬಹುದೆಂದು ಡಾಕ್ಟರ್ ಬಳಿ ಹೋದರೆ, ಅವರು ನಿಮಗ್ಯಾವುದೇ ರೋಗವಿಲ್ಲ  ಎನ್ನುತ್ತಾರೆ. ಜಾತಕದಲ್ಲೂ  ದೋಷ ಕಾಣುತ್ತಿಲ್ಲ  ಎಂಬುದು ಜ್ಯೋತಿಷಿಗಳ ಉತ್ತರ! ಹಾಗಾದರೆ ನನ್ನ  ಸಮಸ್ಯೆಗೆ ಪರಿಹಾರ ಸೂಚಿಸುವ ಶಕ್ತಿ ಇರುವುದು ಅವಳಿಗೆ ಮಾತ್ರವಾ?! ಹಾಗಂದುಕೊಳ್ಳುವ ಹೊತ್ತಿಗೆ ಮನಸು ಮತ್ತ್ಯಾವುದೋ ಲಹರಿಗೆ ಹೋಗಿ ಬಿಡುತ್ತದೆ…ಈ ಜಗತ್ತಿನಲ್ಲಿ   ಇವಳೊಬ್ಬಳೇ  ವಿಶ್ವ ಸುಂದರಿಯಾ?

ಛೇ, ಹಾಗಂತ ಅವಳು ಯಾವತ್ತೂ  ನನ್ನಲ್ಲಿ   ಹೇಳಿಕೊಂಡಿಲ್ಲ.  ನಾನೇ ಅವಳನ್ನು  ವಿಶ್ವ ಸುಂದರಿ, ನನ್ನ  ಕನಸು-ಕಲ್ಪನೆಗಳ ರಾಣಿ…ಅಂತೆಲ್ಲ  ಭಾವಿಸಿಕೊಂಡಿದ್ದು!  ಆದರೂ ಅವಳ ಮೇಲೆ ನಾನು ಸುಮ್ಮ ಸುಮ್ಮನೆ  ರೇಗುವುದೇಕೆ? ಪ್ರೀತಿಯ ಹಿಂದೆ ಸಿಟ್ಟು, ದ್ವೇಷ ಇರತ್ತೆ ಅಂತಾ ಬಲ್ಲವರು ಹೇಳುತ್ತಾರೆ…ಆದರೂ ನನಗಂತೂ ಉತ್ತರ ಸಿಗುತ್ತಿಲ್ಲ! ನನ್ನೆಲ್ಲ  ಸಮಸ್ಯೆಗಳನ್ನು  ಮತ್ತೆ  ಅವಳ ಬಳಿ ತೆಗೆದುಕೊಂಡು ಹೋದರೆ ಪರಿಹಾರ ಸಿಗಬಹುದು ಅನ್ನಿಸುತ್ತಿದ್ದರೂ, ಅದಕ್ಕೆ ಮನಸ್ಸು  ಒಪ್ಪುತ್ತಿಲ್ಲ.

ಹಾಗಾಗಿ, ಎಲ್ಲವೂ ಹಾಗೇ ಸುಮ್ಮನೆ…ಅಲ್ವಾ?!

(ವಿ.ಸೂ:-ಸಿಂಪ್ಲಿ ಸಿಟಿಗಾಗಿ ಹಾಗೆ ಸುಮ್ಮನೆ ಬರೆದ ಸ್ವಕಲ್ಪಿತ  ಹಳೆ ಬರಹ)

→ 3 CommentsCategories: ಕ್ರಿಯೇಟಿವ್ ಪೇಜ್

ಅಪ್ಪ, ಅಮ್ಮಂದಿರಲ್ಲದ ಅನಾಮಧೇಯ ಮಂದಿಗೆ…

June 24, 2009 · 7 ಅನಿಸಿಕೆಗಳು

ಈ ಬರಹದಿಂದ ಎಳ್ಳು ಕಾಳಷ್ಟೂ  ಪ್ರಯೋಜನವಿಲ್ಲ  ಎಂಬುದು ಖಚಿತವಾಗಿ ಗೊತ್ತಿದ್ದರೂ, ಇದನ್ನು  ಬರೆಯದೇ ಇರಲು ನನ್ನಿಂದ ಸಾಧ್ಯವಾಗುತ್ತಿಲ್ಲ.  ಇತ್ತಿಚೇಗಂತೂ ಬ್ಲಾಗ್ ಲೋಕಕ್ಕೆ ಕಾಲಿಡಲು ಮನಸ್ಸಾಗುತ್ತಿಲ್ಲ. ಕೆ.ಎನ್ ವರ್ಡ್‌ಪ್ರೆಸ್ ತಾಣ ಕ್ಲಿಕ್ ಮಾಡಿದರೆ, ಸೆಕ್ಸ್, ಅನಾಮಧೇಯ ಬ್ಲಾಗ್‌ಗಳೇ ಕಣ್ಣಿಗೆ  ರಾಚುತ್ತಿದೆ.

ಬ್ಲಾಗ್ ಲೋಕದಲ್ಲಿ  ವಿವಾದ ಹುಟ್ಟುಹಾಕಿದ, ವೈಯಕ್ತಿಕ ನಿಂದನೆಗೆ ಶುರು ಮಾಡಿದ ಮೊದಲಿಗ ಎಂಬ ಆರೋಪ ನನ್ನ  ಮೇಲೆ ಆವತ್ತಿನಿಂದ ಈವತ್ತಿನವರೆಗೂ ಇದೆ! ನಿಜ, ಕೆಲ ಮಂದಿಯ ಕುರಿತಾದ ಅಸಮಧಾನವನ್ನು ನಾನು ಬ್ಲಾಗ್‌ನಲ್ಲಿ  ತೊಡಿಕೊಂಡಿದ್ದಿದೆ. ಹಾಗಂತ ನಾನು ನನ್ನ  ವೈಯಕ್ತಿಕ ಉದ್ದೇಶದಿಂದ ಯಾರನ್ನು ಬೈದಿಲ್ಲ. ನನ್ನ  ಬೈಗುಳ ಅಥವಾ ನೋವಿನ ಹಿಂದೆ ನನ್ನಂಥ ಸಾಕಷ್ಟು  ಜನರ ನೋವು ಖಂಡಿತವಾಗಿಯೂ ಇತ್ತು. ಬೈದು ಬ್ಲಾಗ್‌ನ ಹಿಟ್ಸ್  ಹೆಚ್ಚಿಸಿಕೊಳ್ಳುವ ಅವಶ್ಯಕತೆ, ತೆವಲು ನನಗಂತೂ ಇಲ್ಲ. ಯಾಕೆಂದರೆ ಬೈಯ್ಯುವುದರಿಂದ ಅಪಾಯಗಳೇ ಹೆಚ್ಚು. ನನ್ನ  ಗಮನಕ್ಕೆ ಬಾರದೇ ನನ್ನ  ವೈಯಕ್ತಿಕ ಲಾಭಕ್ಕೆ ಬೈದದ್ದು ಇದ್ದಲ್ಲಿ  ಖಂಡಿತವಾಗಿಯೂ ನಾನಂತೂ ಕ್ಷಮೆ ಯಾಚಿಸಲು ಸಿದ್ಧ.

ನಾವು ಯಾರನ್ನೇ ಬೈದರೂ, ಅದರಿಂದ ಆತನ ಸುತ್ತಲಿನ ವ್ಯವಸ್ಥೆಯಲ್ಲಿ  ಸ್ವಲ್ಪವಾದರೂ ಬದಲಾಗಬಹುದು ಎಂಬ ಆಶಯಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇನ್ನು ರಾಷ್ಟ್ರೀಯ ವಿಚಾರದಲ್ಲಿ  ಮಾತ್ರ ಯಾವತ್ತೂ ರಾಜಿಯಿಲ್ಲ. ಈ ವಿಷಯದಲ್ಲಿ   ನಾನು ಬೊಬ್ಬೆ ಹೊಡೆದ ಕೂಡಲೇ ವ್ಯವಸ್ಥೆ  ಸರಿಯಾಗುವುದಿಲ್ಲ  ಎಂಬುದು ಖಂಡಿತವಾಗಿಯೂ ಗೊತ್ತಿದೆ. ಆದರೂ ಇದೂ ಒಂಥರ ತೆವಲೇ ಬಿಡಿ!

ಕುಂಕುಮ ಇಟ್ಟು, ದೇಶದ ಪರ ಮಾತಾಡಿ, ಖಾದಿ ತೊಟ್ಟ  ಕೂಡಲೇ ಅವರೆಲ್ಲ  ಸಂಘದವರಿರಬೇಕು ಎಂದು ಭಾವಿಸುವ ನಮ್ಮ  ಸಮಾಜದ ಮನೋರೋಗವನ್ನು ಯಾರಿಂದಲೂ  ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಅಂತವರ ಕುರಿತು ತಲೆಕೆಡಿಸಿಕೊಳ್ಳುವುದು ಇಲ್ಲ. ಯಾಕೆಂದರೆ ಹಾಗೆ ಬೊಬ್ಬೆ ಹೊಡೆಯುವ ವಿಚಾರವಾದಿಗಳ ಕಾರ್ಯಕ್ರಮ, ದೀಪ ಬೆಳಗುವ ಮೂಲಕವೇ ಉದ್ಘಾಟನೆಯಾಗುತ್ತದೆ. ದೇವಸ್ಥಾನದ ಸಂಪ್ರದಾಯದ ವಿರುದ್ಧ  ಬೊಬ್ಬೆ ಹೊಡೆಯುವವರೇ, ದೇವಾಲಯಕ್ಕೆ ಹೋಗಿ ಮೊದಲು ಅಡ್ಡ  ಬೀಳುವುದು! ಮಾತಾಡುವುದು ಮಾತ್ರ ನಾವಿನ್ನು ಗೊಡ್ಡು  ಸಂಪ್ರದಾಯದಲ್ಲಿದ್ದೇವೆ, ನಮ್ಮ ಧರ್ಮ, ಆಚರಣೆಗಳು ಸರಿಯಿಲ್ಲ, ಬುದ್ದನಲ್ಲಿರುವುದು, ಮಹಮ್ಮದ್ ಬರೆದ ಖುರಾನಿನಲ್ಲಿರುವುದೇ ಸರಿಯಿದೆ ಅಂತಾ! ವಿಪರ್ಯಾಸವೆಂದರೆ, ಹಾಗೆ ಮಾತಾಡುವ ಮಂದಿ ಯಾವತ್ತೂ ಮತಾಂತರವಾಗುವುದಿಲ್ಲ!  ಎಷ್ಟಂದರೂ ನಮ್ಮ  ದೇಶದಲ್ಲಿ  ‘ಉಪದೇಶ’ ಅನ್ನುವುದು ಮಾಡಲಿಕ್ಕಾಗಿಯೇ ಇಟ್ಟ  ವಸ್ತು ತಾನೇ?!

ಸೆಕ್ಸ್  ಕುರಿತಾಗಿ, ನಿಮ್ಮ ಬ್ಲಾಗ್‌ನಲ್ಲಿ ಬರೆದಕೊಂಡರೆ, ಅದನ್ನು  ವಿರೋಸುವ ಹಕ್ಕು  ನಮಗಿಲ್ಲ.  ಅಲ್ಲಿ  ಯಾರದ್ದೋ ಬಟ್ಟೆ  ಬಿಚ್ಚಿಸಿದ್ದಕ್ಕೆ ನಾವು ಮೈ ಪರಚಿಕೊಳ್ಳುವುದರಲ್ಲಿ  ಅರ್ಥವೂ ಇಲ್ಲ.  ಅಂತಹದ್ದನ್ನು ಓದದೇ ಇರುವುದೊಂದೇ ಇಂಥ ಸಮಸ್ಯೆಗೆ ಪರಿಹಾರ ಎಂಬುದು ನಿಜ. ನಮ್ಮ  ಸಮಾಜದ ದುರಂತವೆಂದರೆ, ಒಂದು ಒಳ್ಳೆ  ವಿಚಾರಯುತ ಪತ್ರಿಕೆ ಓಡುವುದಿಲ್ಲ.  ಆದರೆ,‘ಪೋಲಿ’ನ್ಯೂಸ್‌ಗಳ ಪ್ರಸರಣ ಸಂಖ್ಯೆ ಊಹೆಗೂ ನಿಲುಕದಷ್ಟು! ಅದೇ ಟ್ರೆಂಡು ಬ್ಲಾಗ್ ಲೋಕದಲ್ಲೂ  ಶುರುವಾಗಿದೆ. ಹಾಗಂತ ನೀವು ನನ್ನದೋ, ಅಥವಾ ಬೇರೆಯವರದ್ದೋ ಬ್ಲಾಗ್ ಓದಿ ಎಂದು ಖಂಡಿತಾ ಕರೆಯುತ್ತಿಲ್ಲ.  ಅಂಥ ಕೊಳಕು ಬ್ಲಾಗ್‌ಗಳಿಗೆ ಭೇಟಿ ಕೊಡಬೇಡಿ. ಹಿಟ್ಸ್  ಕಮ್ಮಿಯಾದಂತೆ ಅವರ ಬರವಣಿಗೆ ಆಸಕ್ತಿ  ತಾನಾಗಿಯೇ ಕಮ್ಮಿಯಾಗಬಹುದು. ಅಂಥ ಬ್ಲಾಗ್‌ಗಳ ಬಾಗಿಲು ಮುಚ್ಚಬಹುದೇನೋ ಎಂಬುದು  ನನ್ನ ಆಶಯ!

ಇನ್ನು ಪತ್ರಿಕೆ, ಮಾಧ್ಯಮಗಳು, ಕೆಲ ವ್ಯಕ್ತಿಗಳ ಕುರಿತ ವಿಮರ್ಶೆ…ಅನಾಮಧೇಯ ಹೆಸರಲ್ಲಿ  ಬೈದರೆ, ‘ಕೈಲಾಗದವರು ಮೈ ಪರಚಿಕೊಂಡಿದ್ದಾರೆ’ ಅಂತಲೇ ಅಂದುಕೊಳ್ಳುವುದು ಅನಿವಾರ್ಯ. ಅಲ್ಲದೇ ಮಾಧ್ಯಮ ಲೋಕದಲ್ಲಿ  ಅಭಿವೃದ್ಧಿ ಪರ ವಿಷಯಗಳಿಗೆ ಬೆಂಬಲ ನೀಡುವವರು, ಆದರ್ಶಗಳನ್ನು ಅಳವಡಿಸಿಕೊಂಡು ಬದುಕುತ್ತಿರುವವರು ಈಗಲೂ ಇದ್ದಾರೆ ಎಂಬುದನ್ನು ಮರೆಯಬಾರದು. ಮಾಧ್ಯಮದ ಕುರಿತಾಗಿ ಕಾಳಜಿಯುಳ್ಳ  ಅನಾಮಧೇಯರಿಂದ, ಇಲ್ಲಿನ ಒಳ್ಳೆ ವ್ಯಕ್ತಿಗಳನ್ನು ಪರಿಚಯಿಸುವ ಯತ್ನ ಯಾಕೆ ನಡೆಯುತ್ತಿಲ್ಲ  ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ನಮಗೆ ಆ ಬ್ಲಾಗ್‌ಗಳ ಹಿಂದಿರುವ ಉದ್ದೇಶ ಅರ್ಥವಾಗಿಬಿಡುತ್ತದೆ.

ಈಗ ಜೀವ ಪಡೆದಿರುವ ವಿಮರ್ಶಕಿಗೂ, ನಿಮಗೂ ಏನಾದರೂ ಸಂಬಂಧವಿದೆಯಾ?! ಹಾಗಂತ  ಕೆಲ ಮಿತ್ರರು ಕೇಳಲು ಶುರುವಿಟ್ಟಿದ್ದಾರೆ!ಆಕೆಗೂ, ನನಗೂ ಯಾವ ಬಗೆಯ ನೈತಿಕ, ಅನೈತಿಕ ಸಂಬಂಧಗಳೂ ಇಲ್ಲ  ಮಾರಾಯ್ರೆ. ನಾನು ಬೈಯ್ಯವುದಾದರೆ ನೇರವಾಗಿಯೇ ಬೈಯ್ಯುತ್ತೇನೆ. ಹೊಗಳುವುದಾದರೂ ಕೂಡ. ಯಾರದ್ದೋ ತೆವಲಿಗೆ, ಹಾದರಕ್ಕೆ ಹುಟ್ಟುವ ಅನಾಮಧೇಯ ಬ್ಲಾಗ್‌ಗಳಿಗೂ, ಹಾದರವನ್ನೇ  ಜೀವಾಳವನ್ನಾಗಿಸಿಕೊಂಡಿರುವ ನಮ್ಮ ಕೆಲ ಟ್ಯಾಬ್ಲಾಯ್ಡ್  ಪತ್ರಿಕೆಗಳಿಗೂ  ಒಂಚೂರು ವ್ಯತ್ಯಾಸವಿಲ್ಲ  ಎಂಬುದು ನನ್ನ  ನಿಲುವು. ಹಾಗಾಗಿ ಹಾದರಕ್ಕೆ ಹುಟ್ಟಿದ ಮಂದಿ ಜತೆಗೆ  ಸ್ನೇಹ ಕೂಡ ಖಂಡಿತಾವಾಗಿಯೂ  ಇಲ್ಲ.  ಮಿತ್ರರು ಕೇಳಿದರು ಎಂಬ ಕಾರಣಕ್ಕೆ ಈ ಬರಹ ಬರೆಯಲಿಲ್ಲ. ‘ಕುಂಬಳಕಾಯಿ ಕದ್ದವನೇ ಹೆಗಲೆಲ್ಲ  ಬೂದಿ ಅಂದರೆ, ನೀವ್ಯಾಕೆ ಹೆಗಲು ಕೊಡವಿಕೊಂಡಿದ್ದೀರಿ’ ಅನ್ನಬೇಡಿ, ಈ ಬರಹ ಅನೇಕ ದಿನಗಳ ಹಿಂದೆ ಬರೆಯಬೇಕು ಅಂದುಕೊಂಡಿದ್ದೆ.  ಆದರೆ, ತಣ್ಣಗಿರುವ ಬ್ಲಾಗ್ ಲೋಕದಲ್ಲಿ  ಮತ್ತೆ ವಿವಾದ ಬೇಡ ಅನ್ನಿಸಿ ಸುಮ್ಮನಾದೆ. ಈಗ ಅದಕ್ಕೆ ಮತ್ತೆ ಮೂಹೂರ್ತ ಕೂಡಿ ಬಂದಿದೆ…!

→ 7 CommentsCategories: ಚಿಂತನ ಚಾವಡಿ

ಶಾಪ ಶಕುಂತಲೆಗಲ್ಲ!

June 21, 2009 · 5 ಅನಿಸಿಕೆಗಳು

IND0704B

ಮಳೆಗಾಲ ಶುರುವಾದರೆ
ಬರೀ ಮೋಡದ ಮುಸುಕು
ಚಾದರ ಹೊದ್ದು ಮಲಗಿದರೆ
ಏಳಲು ಒಪ್ಪುವುದಿಲ್ಲ  ಮನಸು

ಮೋಡದ ಪೊರೆ ಸರಿದಾಗ
ಮಬ್ಬುಗತ್ತಲಿನ ಬೆಳಕು ಹೊರಗೆ
ಸರಿಸಲಾಗದ ಪೊರೆಯ
ಕತ್ತಲಿನ ಥಳಕು ಸದಾ ನನ್ನೊಳಗೆ

ಮನೆಯಂಗಳದ ಹೊಳೆಯಲ್ಲಿ
ಮನದಂಗಳದ ಪ್ರವಾಹಕ್ಕೆ ಬೆಲೆಯಿಲ್ಲ
ಅವಳಿಗಾಗಿ ಅತ್ತರೆ ಪ್ರಯೋಜನವೂ ಇಲ್ಲ
ಅಳದಿರಲು ಅದ್ಯಾಕೋ ಹೃದಯ ಒಪ್ಪುತ್ತಿಲ್ಲ!

ದೂರ್ವಾಸರ ಶಾಪ ಶಕುಂತಲೆಗಲ್ಲ
ದುಶ್ಯಂತನಿಗೆ ಎಂದು ಅರ್ಥವಾಗದ ಕವಿ
ತನಗೆ ತೋಚಿದ್ದನ್ನೇ ಗೀಚಿಬಿಟ್ಟಿದ್ದಾನಲ್ಲ
ಎಂದಾಗ ಸಿಟ್ಟಾಗಿದ್ದ  ಮೋಡದೊಳಗಣ ರವಿ!

→ 5 CommentsCategories: ಕವಿತೆ

ಎಂಆರ್‌ಪಿಗೆ ಕಿಮ್ಮತ್ತಿಲ್ಲ, ಮಾಪನ ಇಲಾಖೆಗೂ ಅಧಿಕಾರವಿಲ್ಲ!

June 16, 2009 · 3 ಅನಿಸಿಕೆಗಳು

ವಿನಾಯಕ ಕೋಡ್ಸರ, ವಿಕ ಸುದ್ದಿಲೋಕ
ಬೆಂಗಳೂರು: ಬಸ್ ನಿಲ್ದಾಣ, ಹಾಲು ಮಾರಾಟ ಕೇಂದ್ರ ಸೇರಿದಂತೆ ಬಹುತೇಕ ದಿನಸಿ ಸರಕು ಉತ್ಪನ್ನ  ಮಾರಾಟ ತಾಣಗಳಲ್ಲಿ  ಗರಿಷ್ಠ ಮಾರಾಟ ಬೆಲೆಗೆ(ಎಂಆರ್‌ಪಿ) ಕವಡೆ ಕಿಮ್ಮತ್ತಿಲ್ಲ!  ಇಂಥ ಪ್ರಕರಣದಿಂದ ಗ್ರಾಹಕನಿಗೆ ಕಾನೂನು ರೀತ್ಯಾ ನ್ಯಾಯ ಒದಗಿಸಬೇಕಾದ ಕಾನೂನು ಮಾಪನ ಇಲಾಖೆಗೆ ವ್ಯಾಪಾರಿಗಳ ಪರವಾನಿಗೆ ರದ್ದು ಮಾಡುವ ಅಧಿಕಾರವೇ ಇಲ್ಲ!

ರಾಜ್ಯದ ಬಹುತೇಕ ಬಸ್, ರೈಲ್ವೆ ನಿಲ್ದಾಣದ ಅಂಗಡಿಗಳು, ರಾತ್ರಿ ಬಾಗಿಲು ತೆರೆದಿರುವ  ಚಿಲ್ಲರೆ ವ್ಯಾಪಾರ ಕೇಂದ್ರಗಳ ಉತ್ಪನ್ನಗಳಿಗೆ ಎಂಆರ್‌ಪಿಗಿಂತ ಒಂದು ರೂಪಾಯಿ ದುಬಾರಿ!  ಈ  ಅನ್ಯಾಯವನ್ನು  ಗ್ರಾಹಕ ಪ್ರಶ್ನಿಸಿದರೆ, ‘ಬಸ್ ಸ್ಟಾಂಡ್‌ನಲ್ಲಿ  ನಿಮಗ್ಯಾರು ಎಂಆರ್‌ಪಿಗೆ ಕೊಡ್ತಾರೆ, ಬೇಕಾದರೆ ತೆಗೆದುಕೊಳ್ಳಿ, ಬೇಡವಾದರೆ ಬಿಟ್ಟುಹೋಗಿ’ ಎಂಬ ದರ್ಪದ ಬೈಗುಳ ವರ್ತಕನಿಂದ ಕಟ್ಟಿಟ್ಟ  ಬುತ್ತಿ!

ಪ್ಯಾಕೆಟ್ ಮಾಡಿದ ಸರಕುಗಳಲ್ಲಿ  ತೂಕ ಅಥವಾ ಗಾತ್ರ, ಉತ್ಪಾದಕರ ಹೆಸರು ಮತ್ತು ವಿಳಾಸ, ಸರಕು ಪ್ಯಾಕ್ ಮಾಡಿದ ದಿನಾಂಕ, ಎಂಆರ್‌ಪಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಗ್ರಾಹಕ ಸರಕು ಕಾಯ್ದೆ  ೨೦೦೬ರ ಅಡಿಯಲ್ಲಿ , ಗ್ರಾಹಕ ಉಪಯೋಗಿ ಸರಕನ್ನು  ‘ಎಂಆರ್‌ಪಿ’ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಹುದೇ ಹೊರತು, ಅಕ ಬೆಲೆಗೆ ಮಾರಾಟ ಮಾಡುವಂತಿಲ್ಲ.  ಎಂಆರ್‌ಪಿ ಉಲ್ಲಂಘನೆ ಕಾನೂನುರೀತ್ಯಾ ಅಪರಾಧ. ಒಂದೊಮ್ಮೆ ಕಂಪನಿ, ದರ ಪರಿಷ್ಕರಣೆ ಮಾಡಿದರೂ, ಹಳೆಯ ಉತ್ಪನ್ನಕ್ಕೆ ಆ ಪರಿಷ್ಕರಣೆ ಅನ್ವಯಿಸುವುದಿಲ್ಲ.

‘ಎಂಆರ್‌ಪಿ ಉಲ್ಲಂಘಿಸಿರುವವರ ವಿರುದ್ಧ  ಈಗಾಗಲೇ ಸಾಕಷ್ಟು  ಹೋರಾಟ ನಡೆಸಿದ್ದೇವೆ. ಇಂಥ ವರ್ತಕರಿಗೆ ಕಾನೂನು ಮಾಪನ ಇಲಾಖೆ ದಂಡ ಹಾಕಬೇಕು. ನಂತರವೂ ವಂಚನೆ ಮುಂದುವರಿದರೆ ಹೆಚ್ಚು  ಹಣ ದಂಡ ವಿಸಿ, ವರ್ತಕನ ಮಾರಾಟ ಪರವಾನಿಗೆ ರದ್ದುಪಡಿಸಬೇಕು. ಇಲಾಖೆ ಮೊದಲ ಹಂತದಲ್ಲಿ  ೫೦೦ರೂ. ದಂಡ ವಿಸುತ್ತದೆ. ನಂತರ ವರ್ತಕನಿಂದ ಅಕಾರಿಗಳ ಕೈಬಿಸಿಯಾಗುತ್ತದೆ. ಹೀಗಾಗಿ  ಪ್ರಕರಣ ಅಲ್ಲಿಗೆ ಮುಚ್ಚಿಹೋಗುತ್ತದೆ. ಎರಡನೇ ಹಂತದಲ್ಲಿ   ದಂಡ ವಿಸಿ, ಪರವಾನಿಗೆ ರದ್ದುಪಡಿಸಿದ ದಾಖಲೆಯೇ ರಾಜ್ಯದಲ್ಲಿ  ಕಾಣಿಸುವುದಿಲ್ಲ. ಚಿಲ್ಲರೆ ವ್ಯಾಪಾರಿಗಳು  ಖರೀದಿಸಿದ ಸರಕಿಗೆ ರಸೀದಿ ನೀಡಲು ನಿರಾಕರಿಸುತ್ತಾರೆ. ಹೀಗಾಗಿ,  ಅನ್ಯಾಯದ ವಿರುದ್ಧ  ಗ್ರಾಹಕರು ನ್ಯಾಯಾಲಯಕ್ಕೂ ಮೊರೆ ಹೋಗುವುದು ಕಷ್ಟಸಾಧ್ಯ’ ಎನ್ನುತ್ತಾರೆ  ರಾಜ್ಯ ಬಳಕೆದಾರರ ವೇದಿಕೆ ಮುಖಂಡ ಮಾವೆಂಸ ಪ್ರಸಾದ್.

ಅಧಿಕಾರ ಕೊಡಿ

‘ಅಂಗಡಿಗಳ ಪರವಾನಿಗೆ ರದ್ದು  ಪಡಿಸುವ ಅಕಾರ ಇರುವುದು ಸರಕಾರಕ್ಕೆ ಮಾತ್ರ. ಕಾನೂನು ಉಲ್ಲಂಘನೆ ಮಾಡುತ್ತಿರುವ ವ್ಯಾಪಾರ ಕೇಂದ್ರಗಳ ಮೇಲೆ ನಿತ್ಯವೂ ದಾಳಿ ನಡೆಯುತ್ತಿದೆ. ಆದರೆ ಎರಡನೇ ಹಂತದ ದಾಳಿ ನಡೆಸುವ ವೇಳೆಗೆ ವರ್ತಕರು ಜಾಗೃತರಾಗಿಬಿಡುತ್ತಾರೆ. ಎರಡನೇ ಹಂತದಲ್ಲಿ   ಗರಿಷ್ಠ  ೨,೦೦೦ ರೂ. ದಂಡ ವಿಧಿಸಿದ ನಂತರವೂ ನಡೆಯುವ ಅನ್ಯಾಯಕ್ಕೆ  ಸರಕಾರವೇ ಪರಿಹಾರ ಒದಗಿಸಬೇಕು ಅಥವಾ ವರ್ತಕನ ಪರವಾನಿಗೆ ರದ್ದುಪಡಿಸುವ ಅಧಿಕಾರವನ್ನು ಇಲಾಖೆಗೆ ನೀಡಬೇಕು. ಇಲಾಖೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಾರೆ ಎಂಬ ಆರೋಪ ಆಧಾರ ರಹಿತ’ಎನ್ನುತ್ತಾರೆ ರಾಜ್ಯ ಕಾನೂನು ಮಾಪನ ಇಲಾಖೆ ಹಿರಿಯ ಅಧಿಕಾರಿಗಳು.

ಹಾಲಿಗೆ ಫ್ರೀಜೀಂಗ್ ಛಾರ್ಜ್ ಕೊಡಬೇಡಿ

ಎಂಆರ್‌ಪಿಯಲ್ಲಿ  ಬೃಹತ್ ವಂಚನೆ ನಡೆಯುವುದು ಹಾಲು, ಮೊಸರು ಹಾಗೂ ಫ್ರಿಜ್‌ನಲ್ಲಿ  ಸಂಗ್ರಹಿಸುವ ಉತ್ಪನ್ನಗಳಲ್ಲಿ.  ನಂದಿನಿ ಸೇರಿದಂತೆ, ಬಹುತೇಕ  ಹಾಲಿನ ಮೇಲೆ ವರ್ತಕರು ಎಂಆರ್‌ಪಿಗಿಂತ ೫೦ಪೈಸೆ ಅಥವಾ ೧ ರೂ. ಅಕ ಹಣವನ್ನು  ಗ್ರಾಹಕರಿಂದ ತೆಗೆದುಕೊಳ್ಳುತ್ತಾರೆ. ಕೇಳಿದರೆ ಫ್ರೀಜೀಂಗ್ ಛಾರ್ಜ್ ಅನ್ನುತ್ತಾರೆ.  ವಾಸ್ತವವಾಗಿ ಇದು ಕಾನೂನು ಬಾಹಿರ. ಉತ್ಪನ್ನ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಕಂಪನಿಗಳು ವರ್ತಕರಿಗೆ  ಪ್ರತ್ಯೇಕ ಕಮಿಷನ್ ನೀಡುತ್ತವೆ. ಎಂಆರ್‌ಪಿಗಿಂತ ಅಧಿಕ ಬೆಲೆ ತೆಗೆದುಕೊಳ್ಳುವವರ ವಿರುದ್ಧ  ಇಲಾಖೆಗೆ ದೂರು ನೀಡಿದರೆ ತಕ್ಷಣ ದಾಳಿ ನಡೆಸುತ್ತೇವೆ. ಬಸ್ ನಿಲ್ದಾಣದ ವರ್ತಕರ ವಂಚನೆ ಕುರಿತು ಸಾರಿಗೆ ಇಲಾಖೆ ಜತೆ ಶೀಘ್ರದಲ್ಲಿ  ಮಾತುಕತೆ ನಡೆಸುತ್ತೇವೆ ಎಂದು  ಕಾನೂನು ಮಾಪನ ಇಲಾಖೆ  ಉಪ ಆಯುಕ್ತರು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

(ವಿ.ಸೂ:-ಇದು ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ವರದಿ. ನಮ್ಮಲ್ಲಿ, ಬಸ್‌ ಸ್ಟ್ಯಾಂ‌ಡ್‌, ಬೀಡಾ ಅಗಂಡಿಯಲ್ಲಿ ಕುಳಿತು ಸಮಸ್ಯೆ ಹೇಳುವವರು ಹೆಚ್ಚು ಹೊರತು, ಸಮಸ್ಯೆ ಕುರಿತಾಗಿ ಸಂಬಂಧಿತ ಇಲಾಖೆಗೆ ದೂರು ನೀಡುವವರು ವಿರಳ. ಅದನ್ನೇ ಕಾನೂನು ಮಾಪನ ಇಲಾಖೆ ಆಯುಕ್ತರು ಕೂಡ ಹೇಳುತ್ತಿದ್ದರು. ಇದು ಗ್ರಾಹಕ ಸಂಬಂಧಿ ಸಮಸ್ಯೆಯಾಗಿರುವುದರಿಂದ ಪತ್ರಿಕೆಯಲ್ಲಿ ಪ್ರಕಟಗೊಂಡರೂ ಕೂಡ ಬ್ಲಾಗಿಗೆ ಹಾಕಿದ್ದೇನೆ…ಮುಂದಿನ ನಿರ್ಧಾರ ನಿಮ್ಮದು…)

→ 3 CommentsCategories: ಕ್ರಿಯೇಟಿವ್ ಪೇಜ್

ಅಂಥ ತಂತ್ರಜ್ಞಾನದ ಲಾಭ ಯಾರಿಗೆ?

May 31, 2009 · 3 ಅನಿಸಿಕೆಗಳು

ಟಿವಿ, ಇಂಟರ್‌ನೆಟ್, ಫೋನ್, ಪತ್ರಿಕೆ, ಆಧುನಿಕ  ರಸ್ತೆ…ಇವ್ಯಾವುದರ ಪರಿವೂ ಇಲ್ಲದ  ಪ್ರಪಂಚದಲ್ಲಿ  ಬದುಕಲು ಹೊರಟ್ಟಿದ್ದೀನಿ. ಹಾಗೆ ಬದುಕಿದರೆ ಏನಾದೀತು ನೋಡಿಯೇ ಬಿಡುವ ಎಂದು…ಎದುರಿಗಿದ್ದ  ಧ್ವನಿ ಪೆಟ್ಟಿಗೆಯನ್ನು  ಎತ್ತಿ  ಪಕ್ಕಕ್ಕಿಟ್ಟರು. ಮೈಕ್ ಇಲ್ಲದೆಯೂ ಎಲ್ಲರಿಗೂ ಕೇಳುವಂತೆ ಮಾತನಾಡಬಹುದೆಂದು ಸಾಬೀತುಪಡಿಸಿಯೇ ಎದ್ದರು…ಮಾತು ಆರಂಭಿಸುವ ಮೊದಲೆ  ಅವರು ಕಾರ್ಯಕ್ರಮ, ಮಾತು, ನಗರದ  ಜಂಜಾಟಗಳಿಂದ ದೂರ ಉಳಿಯುವ ಅವರ ಇಂಗಿತವನ್ನು ಹೇಳಿಬಿಟ್ಟಿದ್ದರು. ಹಾಗಾಗಿಯೇ ಕಾರ್ಯಕ್ರಮದ ನಡು-ನಡುವಿನ ಕೆಲ ಚರ್ಚೆಯಿಂದ ಅವರೂ ಮಾಯವಾಗಿಬಿಟ್ಟಿದ್ದರು!

ನಾಗೇಶ್ ಹೆಗಡೆ,
ಪತ್ರಕೋದ್ಯಮ ಜಗತ್ತಿಗೆ, ವೈಜ್ಞಾನಿಕ ಪ್ರಪಂಚಕ್ಕೆ ಚಿರಪರಿಚಿತ ಹೆಸರು. ಪರಿಸರ ಪರ ಕಾಳಜಿಯುಳ್ಳ  ವ್ಯಕ್ತಿಗಳಲ್ಲಿ  ಮುಂಚೂಣಿಯಲ್ಲಿ  ನಿಲ್ಲುವ  ವ್ಯಕ್ತಿತ್ವ. ಅದೆಲ್ಲಕ್ಕಿಂತ ಹೆಚ್ಚಾಗಿ ಮತ್ತೊಬ್ಬನಿಗೆ ಆದರ್ಶ ಎನ್ನಿಸುವ ವ್ಯಕ್ತಿತ್ವ.  ಜಿ.ಎನ್ ಮೋಹನ್ ಹೇಳಿದಂತೆ, ನಾಗೇಶ್ ಹೆಗಡೆಗೆ  ಪರಿಚಯವೇ ಇಲ್ಲದ ಅನೇಕರು, ನಾಗೇಶ್ ಹೆಗಡೆ  ನನ್ನ  ಗುರುಗಳು ಎಂದು ಹೇಳಿಕೊಳ್ಳುವಂಥ ವ್ಯಕ್ತಿ. ಅಂತಹ ನಾಗೇಶ್ ಹೆಗಡೆ  ಶನಿವಾರ ಸಂಜೆ ಮೇಫ್ಲವರ್‌ನ  ಮೀನು ಮಾರುಕಟ್ಟೆಯಲ್ಲಿ  ಗದ್ದಲ ಮಾಡಲು ಬಂದಿದ್ದರು…ಕ್ಷಮಿಸಿ…ನಾಗೇಶ್ ಹೆಗಡೆಯನ್ನು ನೋಡಲು ಬಂದ  ಕೆಲವರು ಗದ್ದಲ  ಮಾಡಿದರು!

ಮಾತು ಆರಂಭವಾಗಿದ್ದೆ  ಕೆಂಗೇರಿ ಸಮೀಪದ ‘ಮೈತ್ರಿ ಗ್ರಾಮ’ದಿಂದ.  ‘ಆಲೆಮನೆ’ಯೊಂದನ್ನು ಬಿಟ್ಟು  ಮತ್ತೆಲ್ಲ  ಮಲೆನಾಡಿನ ಸೊಬಗು  ಹೆಗಡೆಯವರು ಈಗ ವಾಸಿಸುತ್ತಿರುವ ಆ ಗ್ರಾಮದಲ್ಲಿದೆಯಂತೆ.

ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ  ಮಹಾನಗರಿಯ ತ್ಯಾಜ್ಯವನ್ನು  ತಂದು ಹಾಕುತ್ತಿದ್ದಾರೆ. ಬೀದಿ  ನಾಯಿ  ಕಾಟ ಹೆಚ್ಚಾದರೆ  ಹಳ್ಳಿಗಳು ಅವಕ್ಕೆ  ಆಶ್ರಯ ತಾಣ. ಮಹಾನಗರಿಯಲ್ಲಿ  ಜಾಗ ಗಿಟ್ಟಿಸಲಾಗದ ಬಡ ವರ್ಗದ ಬಿಹಾರಿ, ಗುಜರಾತಿಗಳಿಗೂ  ಈ ಹಳ್ಳಿಗಳೇ ಗತಿ…ಇಂಥ  ವ್ಯವಸ್ಥೆಯ ತಂತ್ರಜ್ಞಾನ  ಯಾರಿಗೆ ಬೇಕಿದೆ ಎಂಬ ಪ್ರಶ್ನೆಯೊಂದಿಗೆ ಆರಂಭವಾದ ಮಾತು ೨೦-೨೫ ನಿಮಿಷಕ್ಕೆ  ಸರಿಯಾಗಿ ಮುಗಿದುಹೋಗಿತ್ತು. ಆ ಪುಟ್ಟ  ಅವಯಲ್ಲಿಯೇ  ೪೦೦ ದಶಲಕ್ಷ  ವರ್ಷಗಳ ವೈಜ್ಞಾನಿಕ ಬೆಳವಣಿಗೆ, ಮಾನವ ಜನ್ಮ  ತಳೆದ ನಂತರದ ತಲ್ಲಣಗಳ  ಕುರಿತು ಸಾಕಷ್ಟು  ಮಾಹಿತಿ ಕೇಳುಗರ ಕಿವಿಯನ್ನು  ಹೊಕ್ಕಿತ್ತು. ಅದೇ ವೇಳೆಯಲ್ಲಿ  ಆ ಮಾಹಿತಿ  ಕೆಲವರ ಕಿವಿಯಿಂದ ಹೊರಬಂದಿರಲೂಬಹುದು ಅನ್ನಿಸಿದ್ದು  ಅನಾವಶ್ಯಕ  ಚರ್ಚೆ ಆರಂಭವಾದಾಗ!
ಅಪಘಾತವಾಗತ್ತೆ  ಅಂದ ಮಾತ್ರಕ್ಕೆ  ಕಾರು ಬೇಡ  ಎನ್ನಲು  ಸಾಧ್ಯವೇ? ಟೊಮೆಟೊ  ದರ ಹೆಚ್ಚಳಕ್ಕೆ ಸಾಫ್ಟ್‌ವೇರ್ ಮಂದಿಯನ್ನು  ದೂಷಿಸುವುದು ಸರಿಯೇ? ವಿಜ್ಞಾನದ  ಪ್ರಗತಿಗೆ ದೇಶಕ್ಕೆ ಮಾರಕ ಎಂದು  ಹೇಗೆ ಹೇಳುತ್ತಿರಿ…

ಇಂಥ ಹತ್ತಾರು ಪ್ರಶ್ನೆಗಳು ಉದುರಿದ್ದು  ನಂತರ  ಶುರುವಾದ ಸಂವಾದದಲ್ಲಿ.  ನ್ಯಾನೊ ಕಾರು ಬದಲಿಗೆ  ಬಸ್ ಯಾಕೆ  ತಯಾರಾಗಲಿಲ್ಲ? ನೈಸ್ ರಸ್ತೆಯಿಂದ, ವೋಲ್ವೊ  ಬಸ್‌ನಿಂದ ಬಡವರಿಗೆ, ವೃದ್ಧರಿಗೆ, ಅಶಕ್ತರಿಗೆ ಸಹಾಯವಾಗುತ್ತಿದೆಯಾ? ತಂತ್ರಜ್ಞಾನದ ಲಾಭ ಪಡೆಯುತ್ತಿರುವವರು ಕಂಪನಿಗಳು, ವಿಮಾ ಸಂಸ್ಥೆಗಳು, ದುಡಿಯಲು ಶಕ್ತಿಯುಳ್ಳ ಯುವಕರು…ಹೆಗಡೆಯವರ  ಈ ಉತ್ತರ  ಬಹುಶಃ  ಕೆಲವರಿಗೆ  ತೃಪ್ತಿದಾಯಕ ಅನ್ನಿಸಿದಂತಿಲ್ಲ. ಹಾಗಾಗಿ ಮತ್ತೆ ಪ್ರಶ್ನೆಗಳು ಏಳುತ್ತಲೇ ಇದ್ದವು!  ಇವತ್ತು ವಿಜ್ಞಾನ ಹಣ ಗಳಿಕೆಯ ಸಾಧನವಾಗುತ್ತಿದೆ ಎಂಬ ಹೆಗಡೆಯವರ ಉತ್ತರಕ್ಕೆ, ದುಗುಡಕ್ಕೆ  ಪ್ರತಿಯಾಗಿ…ಅಲ್ಲ  ಸರ್ ಉತ್ತಮ ತಂತ್ರಜ್ಞಾನದ ಅಭಿವೃದ್ಧಿಗೆ  ಹಣ ಅನಿವಾರ್ಯವಲ್ಲವೆ… ಚರ್ಚೆಯ ಹಾದಿ ತಪ್ಪಿಹೋಗಿತ್ತು.

ವಸುಧೇಂದ್ರರ  ಜಾಣತನದ  ಚಾಕಲೆಟ್  ಹಂಚಿಕೆಯಿಂದ ಬಾಯಿ ಸಿಹಿಯಾಯಿತಾದರೂ,  ಚರ್ಚೆ  ಮಾತ್ರ   ಎಲ್ಲಿಂದಲೋ, ಎಲ್ಲಿಗೋ  ಸಾಗಿ   ಅಂತ್ಯ ಕಂಡಿತು. ‘ಚರ್ಚೆಗಳೂ ಯಾವತ್ತೂ  ಹೀಗೆ.  ಹಾಗಾಗಿಯೇ ಇದು ಫಿಶ್ ಮಾರ್ಕೇಟ್! ನಿಮ್ಮ  ಅಭಿಪ್ರಾಯಗಳನ್ನು ನೀವು ಗಟ್ಟಿಯಾಗಿ ಕಟ್ಟಿಕೊಂಡು  ಹೋಗಿ…’ ಕಾರ್ಯಕ್ರಮದ  ಕೊನೆಗೆ ಜಿ.ಎನ್.ಮೋಹನ್ ಅವರು ಹೇಳಿದ  ಮಾತು ಅಕ್ಷರಶಃ  ನಿಜ ಅಂದುಕೊಳ್ಳುವ ಹೊತ್ತಿಗೆ…ಗೆಳೆಯರೆಲ್ಲ  ಮತ್ತೊಂದು ಸಲ  ಚಹಾ ಕುಡಿಯಲು ಸಜ್ಜಾಗಿದ್ದರು!  ಚಹಾ ತಣಿದು ಹೋಗಿದೆ ಎಂಬ ಕಹಿ  ಸುದ್ದಿಯನ್ನು  ನಮಗೆಲ್ಲ  ಕೊಟ್ಟ   ಸಂದೀಪ್ ಕಾಮತ್, ಯಾರಿಗೂ ಮಾತಿಗೆ ಸಿಗದೇ  ಸದ್ದಿಲ್ಲದೇ  ಎದ್ದು ಹೋಗಿಬಿಟ್ಟರು!!

ಅಂದಹಾಗೆ ನಾಗೇಶ್ ಹೆಗಡೆಯಂಥವರ ಜೊತೆ ಮಾತುಕತೆಗೆ  ಅವಕಾಶ ಕಲ್ಪಿಸಿ, ಚೆಂದದ ಕಾರ್ಯಕ್ರಮ ಆಯೋಜಿಸಿದ ಮೇ ಫ್ಲವರ್‌ಗೆ  ಥ್ಯಾಂಕ್ಸ್…

→ 3 CommentsCategories: ಕ್ರಿಯೇಟಿವ್ ಪೇಜ್

ಕಾಲದ ಮಹಿಮೆ ಮಳೆರಾಯನಿಗೂ…

May 28, 2009 · Leave a Comment

m-2ಹುಯ್ಯೋ, ಹುಯ್ಯೋ  ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ…
ಏಪ್ರಿಲ್-ಮೇ ತಿಂಗಳು ಬರುತ್ತಿದ್ದಂತೆ  ಈ ಸಾಲುಗಳು ನೆನಪಾಗುತ್ತದೆ. ಮಳೆ ಹನಿ ಬಿದ್ದು ,  ನೆಲದಲ್ಲಿನ  ಧೂಳು ಬಡಿದೆದ್ದಾಗ  ಬರುತ್ತಿದ್ದ  ಮಣ್ಣಿನ ಪರಿಮಳ ಈಗಲೂ ಮೂಗಿನ ತುದಿಯಲ್ಲೇ  ಇದ್ದಂತೆ  ಭಾಸವಾಗುತ್ತದೆ. ತುಂಬಿ ಹರಿಯುವ ತುಂಗೆಯಲ್ಲಿ  ಕಾಗದದ ಹಾಯಿ ದೋಣಿ ಬಿಡುವುದೇ  ಒಂತರಹ  ಮಜಾ.  ಜುಮುರು ಮಳೆಯಲ್ಲಿ   ನೆನೆದು, ಮೈ ಒದ್ದೆ  ಮಾಡಿಕೊಳ್ಳುವುದು, ಅಮ್ಮನ  ಬೈಗುಳ, ನೆಗಡಿ, ಶೀತ,  ಪಾಚಿಗಟ್ಟಿ  ಜಾರುವ ನೆಲ, ಸದ್ದಿಲ್ಲದಂತೆ ಕಾಲಿಗಂಟಿಕೊಂಡು ರಕ್ತಹೀರುವ ಉಂಬಳ…ಇವೆಲ್ಲವನ್ನೂ   ಮಳೆಗಾಲದ  ಸೊಬಗಿನ ಸಾಲಿಗೆ ಸೇರಿಸಬಹುದು!
‘ಮುಂಗಾರು ಮಳೆಯೇ ಏನು ನಿನ್ನ  ಹನಿಗಳ ಲೀಲೆ…?’

ಅನಾದಿ ಕಾಲದಿಂದಲೂ  ರೈತಾಪಿ ಮಂದಿ ಮಳೆಗಾಲಕ್ಕೆ ಒಂದು ವಿಶೇಷ ಸ್ಥಾನ ನೀಡುತ್ತಾ ಬಂದಿದ್ದಾರೆ.  ಮಳೆಗೆ ಮುನ್ನ ಸಂಭ್ರಮಿಸುತ್ತಾರೆ. ಮಳೆ  ಬಾರದೇ ಹೋದರೆ ಈಶ್ವರನ ತಲೆ ಮೇಲೆ ನೀರು ಹಾಕಿ(ಮಲೆನಾಡಿನ ಭಾಷೆಯಲ್ಲಿ  ‘ಪರ್ಜನ್ಯ’ ಎಂದು ಕರೆಯಲ್ಪಡುವ  ಈ ನಂಬಿಕೆ ರಾಜ್ಯದ ಬಹುತೇಕ ಕಡೆ ಇದೆ) ಮಳೆ  ಬರಲೆಂದು ದೇವರನ್ನು ಪ್ರಾರ್ಥಿಸುತ್ತಾರೆ. ಮಳೆ ನಿಂತ ನಂತರ ಸಡಗರ ಪಡುತ್ತಾರೆ. ಶ್ರಾವಣ ಬಂದಾಗ ಆರಿದ್ರೆ  ಮಳೆ ಹಬ್ಬವನ್ನು  ಆಚರಿಸುತ್ತಾರೆ! ಆದರೆ ಈ ಬೆಂಗಳೂರಲ್ಲಿ  ಮಳೆ ಬಂದ್ರೆ ಟ್ರಾಫಿಕ್ ಜಾಮು, ಶಾನೇ ಕಿರಿಕ್ಕು ಬಿಡ್ರಿ ಅನ್ನಬಹುದು  ಮಹಾನಗರಿಯ ಮಂದಿ!

ಹೌದು, ಇವತ್ತು ಮಳೆಗಾಲದ ಮಹಿಮೆ ಬದಲಾಗುತ್ತಿದೆ. ‘ಹುಯ್ಯೋ, ಹುಯ್ಯೋ  ಮಳೆರಾಯ’ ಎಂಬ ಸಾಲುಗಳ ಜಾಗವನ್ನು ‘ರೈನ್ ರೈನ್ ಗೊ ಅವೇ…’ ಎಂಬ ಆಂಗ್ಲ  ಕವಿವಾಣಿ  ಆಕ್ರಮಿಸಿದೆ. ಮಹಾನಗರಿಯಲ್ಲಿ  ಮಳೆ ಬಾರದೇ  ಇದ್ದರೇ ಉತ್ತಮ ಎಂಬುವವರ ಸಂಖ್ಯೆಯೇ ಹೆಚ್ಚಿದೆ. ಬಿತ್ತನೆ, ಗದ್ದೆ  ನಾಟಿಯ  ಸಮಯದಲ್ಲಿ  ಮಳೆಯಲ್ಲಿ ಖುಷಿಯಿಂದ ನೆನೆಯುತ್ತಿದ್ದರೆ ಈಗ ಹಲವರಿಗೆ   ಮರೆತು ಹೋಗಿದೆ. ರಸ್ತೆ, ಶಾಲೆಯ ವ್ಯವಸ್ಥೆಯಿಲ್ಲದ ಹಳ್ಳಿಯಲ್ಲಿ ಕುಳಿತು ಕೃಷಿ ಮಾಡುವುದಕ್ಕಿಂತ ಪೇಟೆಯಲ್ಲಿ  ಸುಖವಾಗಿ ಬದುಕುವುದೇ ಲೇಸು ಎಂಬ ಮನೋಭಾವ ಇಂದಿನ ತಲೆಮಾರಿನ ಬಹುತೇಕರದ್ದು.(ನನ್ನನ್ನೂ ಸೇರಿಸಿ!)

ಮಳೆಯಲ್ಲಿ  ಮನೆಯೊಳಗೆ  ಕುಳಿತು  ಬೆಚ್ಚಗೆ  ಗೇರು ಬೀಜವನ್ನು ಸುಟ್ಟು  ತಿನ್ನುವ ಮಂದಿ ಈಗ ಕಡಿಮೆಯಾಗಿದ್ದಾರೆ  ಅನ್ನುವುದಕ್ಕಿಂತ, ಹಲಸಿನ ಬೀಜ, ಗೇರು ಬೀಜ ಸುಡುತ್ತಿದ್ದ  ಕೆಂಡದ ಒಲೆಗಳೇ  ಕಾಣೆಯಾಗುತ್ತಿವೆ ಎನ್ನುವುದೇ ಹೆಚ್ಚು ಸಮಂಜಸ. ಹಳ್ಳಿ ಮನೆಯಲ್ಲಿನ  ಹಲಸಿನ ಹಪ್ಪಳಕ್ಕಿಂತ , ಪಟ್ಟಣದಲ್ಲಿ  ಕುಳಿತು ಗೋಬಿ ಮಂಚೂರಿ, ಪಾನಿಪುರಿ ತಿನ್ನುವುದೇ ರುಚಿ-ರುಚಿ ಅನ್ನಿಸತೊಡಗಿದೆ…

ಮಳೆಗಾಲ ಎಂದರೆ ಮಲೆನಾಡಿನ ಪಾಲಿಗಂತೂ  ಸೂರ್ಯ ಕಾಣಿಸುವುದೇ ಅಪರೂಪವಾಗಿತ್ತು. ಬೆಳಿಗ್ಗೆ  ಸಣ್ಣನೆಯ ಜಿಟಿ ಜಿಟಿ  ಜುಮುರು ಮಳೆ ಆರಂಭವಾದರೆ, ಸೂರ್ಯ ಮುಳುಗಿದ ಮೇಲೂ ಮಳೆ ನಿಲ್ಲುವುದು  ಕಷ್ಟವಾಗಿತ್ತು.  ಒಂದೊಮ್ಮೆ  ಮಳೆ ನಿಂತರೂ, ನಾಲ್ಕಾರು ದಿನ ಮೋಡ  ಕವಿದ  ಚಳಿ-ಚಳಿಯ ವಾತಾವರಣ ಇದೇ ಇರುತ್ತಿತ್ತು. ತಣ್ಣನೆಯ ಗಾಳಿಯಲ್ಲಿ  ಮನೆಯೊಳಗೆ  ಕಂಬಳಿ ಹೊದ್ದು  ಮಲಗಿದರೆ, ಏಳುವುದೇ ಬೇಡ ಅನ್ನಿಸುವಂಥ  ಆಲಸ್ಯದ ಭಾವ ಜತೆಯಾಗುತ್ತಿತ್ತು. ಆದರೆ ಇವತ್ತು ಭಾವನೆಗಳನ್ನು  ಕೆದಕುವ ಆವತ್ತಿನ ತರಹದ ಜಿಟಿ ಜಿಟಿ  ಜುಮುರು ಮಳೆ ಬರುವುದೇ  ಅಪರೂಪವಾಗಿದೆ. ಸಂಜೆ ೪ ಗಂಟೆಗೆ ಆರಂಭದ ದಪ್ಪನೆಯ  ಹನಿಗಳ ಮಳೆ ೭ಗಂಟೆಗೆ ನಿಂತು ಹೋಗಿರುತ್ತದೆ.  ಮರುದಿನ ಬೆಳಿಗ್ಗೆ  ಎದ್ದು  ನೋಡಿದರೆ  ಮಳೆ ಬಂದಿದೆ ಎಂಬ ಸುಳಿವೂ ಕೂಡ ಇರುವುದಿಲ್ಲ.  ಕಾಲ ಬದಲಾಗುತ್ತಿರುವುದು ಬಹುಶಃ ಮಳೆರಾಯನಿಗೂ ಗೊತ್ತಾದಂತಿದೆ!

→ Leave a CommentCategories: ಕ್ರಿಯೇಟಿವ್ ಪೇಜ್

ನ್ಯಾನೊ ತಂತ್ರಜ್ಞಾನದ ದುಷ್ಪರಿಣಾಮವನ್ನೂ ಚಿಂತಿಸಬೇಕಿದೆ..

May 22, 2009 · 5 ಅನಿಸಿಕೆಗಳು

nano image

ಅರ್ಧ  ಕೋಣೆಯಷ್ಟು  ಜಾಗವನ್ನು  ಆಕ್ರಮಿಸುತ್ತಿದ್ದ  ಟಿವಿ ಪೆಟ್ಟಿಗೆ, ಇವತ್ತು  ಯಾವ ಮನೆಯಲ್ಲೂ  ಕಾಣಿಸುವುದಿಲ್ಲ.   ಎಕರೆ ಜಾಗ ತಿನ್ನುತ್ತಿದ್ದ  ಅಂಬಾಸಿಡರ್ ಕಾರು ಕಾಣೆಯಾಗಿದೆ. ಅಂಗೈ ಅಗಲದ ಕಂಪ್ಯೂಟರ್, ಕಿರು ಬೆರಳಿನಷ್ಟು  ದೊಡ್ಡದಾದ ಲ್ಯಾಪ್‌ಟಾಪ್, ಜೇಬಿನಲ್ಲಿ  ತುರುಕಿಕೊಂಡು ಹೋಗಬಹುದಾದ ಫೋನ್, ಆರಡಿ-ಮೂರಡಿ ಜಾಗದಲ್ಲಿ  ನಿಲ್ಲಿಸಬಹುದಾದ ಕಾರು…ನಿಜ, ತಂತ್ರಜ್ಞಾನ  ಎಂಬುದು  ಇವತ್ತು ನಮ್ಮ  ನಿಲುವಿಗೆ ಸಿಗದಷ್ಟು   ಚಿಕ್ಕ  ಉತ್ಪನ್ನಗಳನ್ನು  ಹುಟ್ಟುಹಾಕುತ್ತಿದೆ.

೧ ಲಕ್ಷ ರೂಪಾಯಿ ಮೌಲ್ಯದ ನ್ಯಾನೊ ಕಾರು ಇದೀಗ ಬೀದಿಗಿಳಿದಿದೆ.  ವಾಹನೋದ್ಯಮದಲ್ಲಿ,  ತಾಂತ್ರಿಕ ಜಗತ್ತಿನಲ್ಲಿ  ಒಂದು ಸಂಚಲನ ಉಂಟಾಗಿದೆ. ಕೇವಲ ಹಣದ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡುವುದಾದರೆ, ‘ನ್ಯಾನೊ’ಗೆ  ಯಾವ ವಿಶೇಷತೆಯೂ  ಇಲ್ಲ.   ತಂತ್ರಜ್ಞಾನ  ಇವತ್ತು ಪಾಶ್ಚಾತ್ಯ ಮಂದಿಗೆ ನಿತ್ಯ ಧರಿಸುವ ಅಂಗಿ-ಚಡ್ಡಿ ಇದ್ದಂತೆ! ಹಾಗಾಗಿ, ಅಲ್ಲಿ  ಸೆಕೆಂಡ್ ಹ್ಯಾಂಡ್ ಕಾರಗಳನ್ನು ಕೇಳುವವರೂ ಗತಿಯಿಲ್ಲ!  ದೇಶೀಯ ಮಾರುಕಟ್ಟೆಯಲ್ಲೂ  ಕಡಿಮೆ ದರಕ್ಕೆ  ಸೆಕೆಂಡ್ ಹ್ಯಾಂಡ್ ಕಾರು ಲಭ್ಯ. ಚ್ಕಿಕದು ಎಂಬ ಕಾರಣಕ್ಕೆ  ಆ ಕಾರಿಗೆ ‘ನ್ಯಾನೊ’ ಎಂದು ನಾಮಕರಣ ಮಾಡಿದ್ದಾರೆ. ಆದರೆ ಆ ಕಾರಿಗೂ, ನ್ಯಾನೊ ತಂತ್ರಜ್ಞಾನಕ್ಕೂ  ಸಮಬಂಧವಿಲ್ಲ.

ಬೆಲೆಯನ್ನು  ಬದಿಗಿಟ್ಟು,  ತಾಂತ್ರಿಕ ಕೌಶಲ್ಯವನ್ನು ಎದುರಿಗಿಟ್ಟುಕೊಂಡು ನೋಡಿದಾಗ,  ‘ನ್ಯಾನೊ’ ಎಂಬ ಪದದ ಹಿಂದೆ ಅದ್ಬುತವಿದೆ. ನೂರಾರು ವಿಜ್ಞಾನಿಗಳ ಕನಸು-ಕಲ್ಪನೆಯಿದೆ. ಜತೆಗೆ, ಅವಿರತ ಶ್ರಮವೂ ಇದೆ. ಒಂದು ಮೀಟರ್ ವಿಸ್ತೀರ್ಣದ ವಸ್ತುವನ್ನು, ಒಂದು ಶತಕೋಟಿ ಕಣಗಳನ್ನಾಗಿ ವಿಭಜಿಸಬೇಕು. 10-9, ಗಾತ್ರದಲ್ಲಿ  ವಿಭಜಿಸಬೇಕು. ಆಗ ದೊರೆತ ಕಣವನ್ನು, ವಿಜ್ಞಾನ  ಒಂದು ನ್ಯಾನೊ ಮೀಟರ್ ವಿಸ್ತೀರ್ಣದ ಕಣ  ಎಂದು ಹೆಸರಿಸುತ್ತದೆ. ಒಂದು ಮೀಟರ್ ವಸ್ತುವೇ ಸ್ವಲ್ಪ  ದೂರದಿಂದ ನೋಡಿದರೆ ಕಣ್ಣಿಗೆ ಕಾಣಸಿಗದು. ಅಂತಹದ್ದರಲ್ಲಿ  ಒಂದು ಮೀಟರ್‌ನ ಶತಕೋಟಿ ಭಾಗ…! ಕಣ್ಣಿಗೆ ಕಾಣಿಸುವುದು ಒತ್ತಟ್ಟಿಗಿರಲಿ, ಕಲ್ಪನೆಗೂ ಸಿಗದಷ್ಟು  ಚಿಕ್ಕ  ವಸ್ತು. ಅಷ್ಟು  ಚಿಕ್ಕದಾದ ಕಣಗಳ ಅಧ್ಯಯನ, ಅಭಿವೃದ್ಧಿಯ ವಿ-ವಿಧಾನವೇ ನ್ಯಾನೊ ತಂತ್ರಜ್ಞಾನದ  ಜೀವಾಳ.  ಒಂದು ನ್ಯಾನೊ ಮೀಟರ್ ವಿಸ್ತೀರ್ಣದ ಕಣವನ್ನು ಅಧ್ಯಯನ ಮಾಡುವಷ್ಟು  ನಮ್ಮ  ವಿಜ್ಞಾನ ಅಭಿವೃದ್ಧಿ ಹೊಂದಿಲ್ಲ. ಹಾಗಾಗಿ, ೧೦೦ ನ್ಯಾನೊ ಮೀಟರ್ ವಿಸ್ತೀರ್ಣದ ಕಣಗಳ ಅಧ್ಯಯನ ಅಭಿವೃದ್ಧಿ ನಡೆಯುತ್ತಿದೆ.

ಸಹಸ್ರಾರು ವರ್ಷಗಳ ಹಿಂದೆಯೇ  ಈ ನ್ಯಾನೊ ತಂತ್ರಜ್ಞಾನ ಬಳಕೆಯಾಗುತ್ತಿತ್ತು  ಎಂಬ ಮಾತು ವಿಜ್ಞಾನಲೋಕದಲ್ಲಿ  ಕೇಳಿಬರುತ್ತಿದೆ. ‘ಆಗಿನ ಕಾಲದಲ್ಲಿ  ನ್ಯಾನೊ  ತಂತ್ರಜ್ಞಾನ  ಅಣು, ಪರಮಾಣುಗಳ ಮಟ್ಟದಲ್ಲಿ  ಬಳಕೆಯಾಗುತ್ತಿರಲಿಲ್ಲ, ರಾಸಾಯನಿಕ ಪ್ರಕ್ರಿಯೆಗಳಲ್ಲೂ  ಕಲ್ಪನೆ  ಇರಲಿಲ್ಲ. ಆದರೆ,  ಐತಿಹಾಸಿಕ ಸ್ಮಾರಕಗಳ ಎದುರುಗಡೆ ಸಿಗುವ ಕಬ್ಬಿಣದ ಕಂಬಗಳು, ಪ್ರಾಚ್ಯ ವಸ್ತು ಸಂಗ್ರಹಾಲಯದ ಬಣ್ಣ-ಬಣ್ಣದ  ವಸ್ತುಗಳು, ರಬ್ಬರ್ ಆಧಾರಿತ ಉಪಕರಣಗಳು….ನ್ಯಾನೊ ತಂತ್ರಜ್ಞಾನ ಬಳಕೆಗೆ ಸಾಕ್ಷಿ’ ಎಂಬುದು ನಮ್ಮ ಕೆಲ ವಿಜ್ಞಾನಿಗಳ ವಾದ.
೧೮-೧೯ನೇ ಶತಮಾನ ಅಕ್ಷರಶಃ ವಿಜ್ಞಾನಿಗಳ ಯುಗ.  ಬೆಳಕಿನ ಕುರಿತಾಗಿ, ಅಣುಗಳ, ಭೂಮಿಯ, ರಾಸಾಯನಿಕ ಪ್ರಕ್ರಿಯೆಗಳ ಕುರಿತಾಗಿ ಸಹಸ್ರಾರು ಸಿದ್ಧಾಂತಗಳು ಜನ್ಮ  ತಳೆದಿದ್ದು  ಆ ಕಾಲದಲ್ಲೇ.  ಹಾಗಾಗಿ, ವಿಜ್ಞಾನದ  ಅಭಿವೃದ್ಧಿ  ಪಥವನ್ನು  ಆ ಕಾಲದಿಂದಲೇ ಅವಲೋಕಿಸಿಕೊಂಡು ಬರುವುದು  ವಾಡಿಕೆಯಾಗಿಬಿಟ್ಟಿದೆ! ೧೮೬೭ರಲ್ಲಿ  ಖ್ಯಾತ ಭೌತಶಾಸ್ತ್ರಜ್ಞ  ಜೇಮ್ಸ್  ಕ್ಲರ್ಕ್ ಮ್ಯಾಕ್ಸ್‌ವೆಲ್ ಮುಂದಿಟ್ಟ  ‘ಅಣು ಸಿದ್ದಾಂತ’ ನ್ಯಾನೊ ಕುರಿತು ಪ್ರಾಥಮಿಕ ಕಲ್ಪನೆ ಕಟ್ಟಿಕೊಡುತ್ತದೆ ಎಂದು ನ್ಯಾನೊ ಕುರಿತಾಗಿ ಸಂಶೋಧನೆ ನಡೆಸುತ್ತಿರುವ  ಅನೇಕ ಸಂಶೋಧನಾಕಾರರು ಬರೆಯುತ್ತಾರೆ. ೧೯೧೪ರಲ್ಲಿ  Richard Adolf Zsigmondy  ‘ನ್ಯಾನೊ ಮೀಟರ್’ ಎಂಬ ಪದ ಬಳಸಿದ್ದು  ಕೂಡ ಇತಿಹಾಸದಲ್ಲಿ  ಗಮನೀಯ.  ಒಟ್ಟಿನಲ್ಲಿ  ಮೇಲಣ ವಿಜ್ಞಾನಿಗಳೆಲ್ಲ   ೨೦ನೇ ಶತಮಾನದ ನ್ಯಾನೊ ಯುಗ ಆರಂಭಕ್ಕೆ ನಾಂದಿ ಹಾಡಿದರು ಎಂಬುದಂತೂ ದಿಟ.

ಅಲ್ಲಿಂದ ಮುಂದೆ ಬಂದರೆ, ಅಮೆರಿಕದ ಭೌತವಿಜ್ಞಾನಿ ರಿಚರ್ಡ್ ಫೆಯ್ನ್‌ಮನ್,  ೧೯೫೯ರ ಡಿಸೆಂಬರ್‌ನಲ್ಲಿ  ಅಮೆರಿಕ ಭೌತಶಾಸ್ತ್ರ  ಸೊಸೈಟಿಯಲ್ಲಿ  ನಡೆದ  ಸಭೆಯೊಂದರಲ್ಲಿ  ‘ನ್ಯಾನೊ’ ಎಂಬ ಪದವನ್ನು  ಬಳಸುತ್ತಾರೆ.  ೧೯೭೪ರಲ್ಲಿ  ಟೋಕಿಯೊ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ನೊರಿಯೊ ತನಿಗುಚ್ಚಿ, ‘ನ್ಯಾನೊ ತಂತ್ರಜ್ಞಾನದ’ ಕುರಿತು ಉಲ್ಲೇಖಿಸಿದ್ದು ಕೂಡ ವಿಜ್ಞಾನ ಲೋಕಕ್ಕೆ  ಮಹತ್ವದ  ಮೈಲುಗಲ್ಲು. ಆದರೆ, ನ್ಯಾನೊ ತಂತ್ರಜ್ಞಾನ ವಿಜ್ಞಾನ ಲೋಕದ ಗಮನ ಸೆಳೆದಿದ್ದು  ೧೯೮೦ರ ದಶಕದಲ್ಲಿ .  ೧೯೮೦ರಲ್ಲಿ  ಆವಿಷ್ಕಾರವಾದ ಸ್ಕ್ಯಾನಿಂಗ್ ಟುನೆಲಿಂಗ್ ಮೈಕ್ರೊಸ್ಕೋಪ್(ಎಸ್‌ಟಿಎಂ), ನ್ಯಾನೊ ಕುರಿತು ಹೆಚ್ಚಿನ  ಸಂಶೋಧನೆಗೆ ಸಹಕಾರಿಯಾಯಿತು. ಪರಿಣಾಮವಾಗಿ  ೧೯೮೬ರ ಸುಮಾರಿಗೆ ಕಾರ್ಬನ್ ನ್ಯಾನೊ  ಟ್ಯೂಬ್‌ಗಳ ಆವಿಷ್ಕಾರವಾಯಿತು. ಎಸ್‌ಟಿಎಂ ಆವಿಷ್ಕಾರದ ೬ ವರ್ಷಗಳ ನಂತರ ಅಟೋಮಿಕ್ ಫೋರ್ಸ್ ಮೈಕ್ರೋಸ್ಕೋಪ್‌ಗಳು ಬೆಳಕಿಗೆ ಬಂದವು. ಅಣುಗಳ  ಕುರಿತ ನಿಖರ ಅಧ್ಯಯನ ಆರಂಭವಾಯಿತು. ಅಲ್ಲಿಂದ ಮುಂದೆ ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನೆಗೆ ಸಂಬಂಸಿದಂತೆ ಹತ್ತಾರು ವೈಜ್ಞಾನಿಕ ಸಂಸ್ಥೆಗಳು ಹುಟ್ಟಿಕೊಂಡವು. ನೂರಾರು ವಿಜ್ಞಾನಿಗಳು ಬೆಳಕಿಗೆ ಬಂದರು.

ಆಹಾರ, ಆರೋಗ್ಯ, ವಾಹನ, ಔಷಧ..ನ್ಯಾನೊ ತಂತ್ರಜ್ಞಾನದ  ವ್ಯಾಪ್ತಿ  ಈಗ ಬಹು ವಿಸ್ತಾರವಾಗಿದೆ. ಇವತ್ತು ೮೦೦ಕ್ಕೂ ಅಕ ನ್ಯಾನೊ ಉತ್ಪನ್ನಗಳಿವೆ. ೩ರಿಂದ ೪ ವಾರಕ್ಕೆ  ಒಂದೊಂದು ಹೊಸ ನ್ಯಾನೊ ಉತ್ಪನ್ನ ಹೊರಬರುತ್ತಿದೆ. ಸೆಮಿಕಂಡಕ್ಟರ್, ಟ್ರಾನ್ಸಿಸ್ಟರ್, ರೆಸಿಸ್ಟರ್‌ನಂಥ  ಸೂಕ್ಷ್ಮ  ಉಪಕರಣಗಳ ಜಾಗವನ್ನು  ನ್ಯಾನೊ ಎಂಬ ಪದ  ಆಕ್ರಮಿಸಿದೆ.  ‘ನ್ಯಾನೊ ಮೆಡಿಸಿನ್’ ಇವತ್ತು ಔಷಧ ಜಗತ್ತಿನ ವಿಸ್ಮಯ.  ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ  ‘ನ್ಯಾನೊ’  ಕೊಡುಗೆ ಗಣನೀಯ.  ಡಿಎನ್‌ಎ ಜತೆ, ಚಿನ್ನದ ನ್ಯಾನೊ ಕಣಗಳನ್ನು ಜೋಡಿಸಿ ವಂಶವಾಹಿ ರೋಗಗಳನ್ನು  ಪತ್ತೆ ಮಾಡುತ್ತಾರೆ. ಡಿಎನ್‌ಎ ತಂತ್ರಜ್ಞಾನದಲ್ಲಿ   ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತದೆ. ಔಷಧ ಕ್ಷೇತ್ರದಲ್ಲೂ   ಹೊಸದೊಂದು  ಅಲೆಯನ್ನು ಎಬ್ಬಿಸಿದೆ. ಹಾನಿಗೊಳಗಾಗಿರುವ ನರಗಳ ಮರು ಜೋಡಣೆಗೆ  ನ್ಯಾನೊ ತಂತ್ರಜ್ಞಾನ ಅವಶ್ಯ.

ನ್ಯಾನೊ  ವಿಜ್ಞಾನಕ್ಕೊಂದು ಹೊಸ ಮುನ್ನುಡಿ  ಬರೆಯುತ್ತಿದೆ ಎಂಬುದು ನಿಜ. ಆದರೆ, ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ ಕುರಿತು ಸಾಕಷ್ಟು  ಅಪಸ್ವರಗಳಿವೆ ಎಂಬುದನ್ನೂ ಮರೆಯುವಂತಿಲ್ಲ. ಈ ತಂತ್ರಜ್ಞಾನ ಪರಿಸರಕ್ಕೆ ಮಾರಕ್ಕೆ ಎಂಬ ವಾದವಿದೆ. ವಿಜ್ಞಾನವೇ ಪರಿಸರಕ್ಕೆ ಶತ್ರುವಾದ ಮೇಲೆ, ನ್ಯಾನೊವನ್ನು  ಆರೋಪಿ ಸ್ಥಾನದಲ್ಲಿ  ನಿಲ್ಲಿಸಲು ಸಾಧ್ಯವಿಲ್ಲ!  ನ್ಯಾನೊ ಎಂಬುದು ಮತ್ತೊಂದು ಅಣು ತಂತ್ರಜ್ಞಾನದಂತಾಗಬಹುದು ಎಂಬ ದುಗುಡ ಜಗತ್ತನ್ನು ಕಾಡುತ್ತಿದೆ.  ಅಣುಬಾಂಬ್, ರಾಸಾಯನಿಕ ಅಸ್ತ್ರಗಳು…ಮಾದರಿಯಲ್ಲೇ  ನ್ಯಾನೊ  ಶಸ್ತ್ರಾಸ್ತ್ರಗಳು  ಉತ್ಪಾದನೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಕುರಿತು ಸರಕಾರ ಹಾಗೂ ಕೆಲ ವೈಜ್ಞಾನಿಕ ಸಂಘಟನೆಗಳು ಕಾರ್ಯನಿರತವಾಗಿವೆ.   The National Institute for Occupational Safety and Health(NIOSH ) ನ್ಯಾನೊ ತಂತ್ರಜ್ಞಾನದಿಂದ ಉಂಟಾಗಬಹುದಾದ ಮಾರಕ ಪರಿಣಾಮಗಳ ಹಿಂದೆ ಬಿದ್ದಿದೆ.  ನ್ಯಾನೊ ಕಣಗಳಿಂದ ದೇಹದ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ, ನ್ಯಾನೊ ಲ್ಯಾಬ್‌ಗಳಲ್ಲಿ  ಕೆಲಸ ಮಾಡುವ ವ್ಯಕ್ತಿಗಳನ್ನು ಕಾಡುವ ಆರೋಗ್ಯ ಸಮಸ್ಯೆಗಳೇನು ಎಂಬ ಕುರಿತು  ಸಂಶೋಧನೆ ನಡೆಸುತ್ತಿದೆ.

ಇತ್ತೀಚೆಗೆ ಅಭಿವೃದ್ಧಿಗೊಂಡ  ಕಾಲುಚೀಲಗಳಲ್ಲಿನ(ಸಾಕ್ಸ್)  ಧೂಳು ನಿಯಂತ್ರಣಕ್ಕೆ ಬಳಸುತ್ತಿರುವ ‘ಸಿಲ್ವರ್‌ನ್ಯಾನೊ’ ಕಣಗಳಿಂದ ಕೃಷಿ ತ್ಯಾಜ್ಯ ಕರಗಿಸಲು ಅವಶ್ಯವಾದ ಬ್ಯಾಕ್ಟೀರಿಯಾಗಳು ಸಾಯುತ್ತಿವೆ ಎಂದು  ಸಂಶೋಧನೆಯಿಂದ ತಿಳಿದುಬಂದಿದೆ.  ನ್ಯಾನೊ ಕಣಗಳನ್ನು ಉಸಿರಾಟದ ಮೂಲಕ ಸೇವಿಸುವ ಇಲಿಗಳು ರೋಗಕ್ಕೆ  ತುತ್ತಾಗಿವೆ. ನ್ಯಾನೊ ಕಣಗಳಿಂದ ಶ್ವಾಸಕೋಶ ಹಾಗೂ ಮೆದುಳಿಗೆ ತೊಂದರೆ ಉಂಟಾಗುತ್ತಿದೆ ಎಂದು University of Rochester ನ ಅಧ್ಯಯನ ಹೇಳುತ್ತಿದೆ. Institute of Occupational Medicine in Edinburgh, Scotland,  ನಡೆಸಿರುವ ಅಧ್ಯಯನದ ಪ್ರಕಾರ, ನ್ಯಾನೊ ಉಗಮಕ್ಕೆ  ಕಾರಣವಾದ ಕಾರ್ಬನ್ ನ್ಯಾನೊ ಟ್ಯೂಬ್‌ಗಳಿಂದ ಕೆಲ  ಭೀಕರ ರೋಗಗಳು ಹುಟ್ಟುತ್ತಿವೆ. ಹೀಗಾಗಿ, The Center for Responsible Nanotechnology ಎಂಬ ಕೇಂದ್ರವೊಂದು ನ್ಯಾನೊ  ತಂತ್ರಜ್ಞಾನದ  ಆಗು-ಹೋಗುಗಳನ್ನು ಚರ್ಚಿಸಲು ಸಿದ್ಧವಾಗಿದೆ.

ಅದೇನೆ ಇರಲಿ, ‘ಮೈಕ್ರೊ  ಟು ಮ್ಯಾಕ್ರೊ  ವರ್ಲ್ಡ್’ ಎಂಬ ವಿಜ್ಞಾನದ ಪರಿಭಾಷೆ ಅಕ್ಷರಶಃ  ಬದಲಾಗುತ್ತಿದೆ.  ತಂತ್ರಜ್ಞಾನವನ್ನು  ಚಿಕ್ಕದಾಗಿ ನೀಡಿದಷ್ಟೂ  ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ, ನ್ಯಾನೊ ತಂತ್ರಜ್ಞಾನ ಬಹು ಜನಪ್ರಿಯವಾಗುತ್ತಿದೆ.  ನ್ಯಾನೊ  ಉತ್ಪನ್ನ  ತೀರಾ ಚಿಕ್ಕದಾದರೂ, ಆ ಉತ್ಪನ್ನದ ಹಿಂದಿರುವ ಶ್ರಮ  ದೊಡ್ಡದು.  ಚಿಕ್ಕ  ಉತ್ಪನ್ನಕ್ಕೆ  ಬೇಕಾದ ಬಿಡಿಭಾಗವನ್ನು  ತಯಾರಿಸಲು ವಿಜ್ಞಾನಿಗಳು ಶತಮಾನದಷ್ಟು  ಕಾಲ ವ್ಯಯ ಮಾಡಿದ್ದಾರೆ. ಹಗಲು-ರಾತ್ರಿಗಳನ್ನು ಬದಿಗಿಟ್ಟು  ಸಂಶೋಧನೆ ನಡೆಸಿದ್ದಾರೆ. ಹಾಗಾಗಿ ನ್ಯಾನೊವನ್ನು , ನಾವೆಲ್ಲ  ಇಷ್ಟಪಡಲೇ ಬೇಕು. ಹೊಸ ಉತ್ಪನ್ನಗಳ ಬಳಕೆಯ ಆಧಾರದಿಂದ ವ್ಯಕ್ತಿಯೊಬ್ಬನ  ಶ್ರೀಮಂತಿಕೆ ಅಳೆಯುತ್ತಿದ್ದ  ಕಾಲ ಹೋಗಿದೆ.  ರಾಜರು, ಪಟೇಲರು, ಶ್ಯಾನುಬೋಗರು… ಒಂದಷ್ಟು  ಬೆರಳೆಣಿಕೆ ಮಂದಿ ಮಾತ್ರ ಕಾರಿನ ಯಜಮಾನರು ಎಂಬ ಕಾಲ ಇದಲ್ಲ.  ಒಂದು ಎಕರೆ ಜಾಗದಷ್ಟು  ವಿಶಾಲವಾದ ಅಂಬಾಸಿಡರ್, ಫಿಯೆಟ್ ಕಾರು ಇಟ್ಟುಕೊಂಡ  ಆಗರ್ಭ ಶ್ರೀಮಂತರ  ದರ್ಬಾರು ಈಗಿಲ್ಲ! ಇವತ್ತು ಕಾರು ಕೂಡ ಮಾರುಕಟ್ಟೆಯಲ್ಲಿನ ತರಕಾರಿಗೆ ಸಮನಾಗಿದೆ ಎಂದಾದರೆ, ಅದರ ಹಿಂದೆ ಖಂಡಿತವಾಗಿಯೂ ವಿಜ್ಞಾನದ, ತಂತ್ರಜ್ಞಾನದ  ಕೈವಾಡವಿದೆ.  ತಂತ್ರಜ್ಞಾನ,  ತೀರಾ ಸಾವಿನ ಅಂಚಿನಲ್ಲಿರುವವರನ್ನು ಬದುಕಿಸಬಲ್ಲದು ಎಂಬುದಕ್ಕೆ  ಮಣಿಪಾಲ್, ಜಯದೇವ ಆಸ್ಪತ್ರೆಗಳು ಸಾಕ್ಷಿ.  ಬದುಕಿರುವವನನ್ನೂ ಸಾಯಿಸಬಲ್ಲದು ಎಂಬುದಕ್ಕೆ  ಹಿರೋಶಿಮಾ-ನಾಗಸಾಕಿಗಳ ಮೇಲಣ ದಾಳಿ, ಭೋಪಾಲ್ ಅನಿಲ ದುರಂತಗಳು ಕಣ್ಣೆದುರಿಗಿವೆ. ಹಾಗಾಗಿ  ತಂತ್ರಜ್ಞಾನದ ಎರಡೂ ಆಯಾಮವನ್ನೂ  ಅವಲೋಕಿಸಬೇಕಿದೆ…

(ಈ ಲೇಖನದ  ಪರಿಷ್ಕೃತ  ಮಾದರಿ ವಿಜಯ ಕರ್ನಾಟಕದಲ್ಲಿ  ಪ್ರಕಟಗೊಂಡಿದೆ! ಅದರ ಮೂಲ ಲೇಖನ ಇದು.  ರಿಯಲ್ ಎಸ್ಟೇಟ್  ದರ ಇಳಿಕೆಯಾದರೂ  ಜಾಗದ ಕೊರತೆ ಮಾರಾಯ್ರೆ!!!)

→ 5 CommentsCategories: ಚಿಂತನ ಚಾವಡಿ

ಚುನಾವಣೆ, ಮುಖ ಪುಟ ವಿನ್ಯಾಸ..

May 21, 2009 · 1 ಅನಿಸಿಕೆ

hand of india by teligraphaಅಲ್ಲಿ   ಮತ ಎಣಿಕೆ ನಡೆಯುತ್ತಿದ್ದರೆ, ಇಲ್ಲಿ  ಪುಟ ಎಣಿಕೆ!  ಚುನಾವಣೆ ಫಲಿತಾಂಶವನ್ನು  ಎಷ್ಟು  ಸೊಗಸಾಗಿ  ನೀಡಬಹುದೆಂಬ ಲೆಕ್ಕಾಚಾರ  ಪ್ರತಿ  ಸುದ್ದಿಮನೆಯಲ್ಲಿ.  ಒಂದು ಕಾಲದಲ್ಲಿ  ಚುನಾವಣಾ ಫಲಿತಾಂಶ ಪತ್ರಿಕೆಗಳಿಗೆ ಬಹು ದೊಡ್ಡ  ಸುದ್ದಿಯಾಗಿತ್ತು. ಓದುಗ,  ಪತ್ರಿಕೆಗಳಲ್ಲಿ   ಬರುವ  ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆದರೆ ಈಗ ಹಾಗಲ್ಲ. ಮತ ಏಣಿಕೆ  ಆರಂಭವಾಗುತ್ತಿದ್ದಂತೆ  ಸುದ್ದಿ  ವಾಹಿನಿಗಳಲ್ಲಿ  ಲೈವ್ ರಿಸಲ್ಟ್, ಬಿಸಿ  ಬಿಸಿ  ಚರ್ಚೆ! ಫಲಿತಾಂಶಕ್ಕಾಗಿ  ಮರುದಿನ ಬೆಳಿಗ್ಗೆ   ಬರುವ ಪತ್ರಿಕೆಯನ್ನು ಕಾಯುವ ಅನಿವಾರ್ಯತೆಯೇ ಇಲ್ಲ…

ಹೌದು, ಹಾಗಾಗಿಯೇ ಪುಟ  ವಿನ್ಯಾಸಕ್ಕೆ  ಇವತ್ತು  ಮಹತ್ವ  ಬಂದಿದೆ. ಸುದ್ದಿಗಿಂತ, ಸುದ್ದಿಯನ್ನು  ಎಷ್ಟು  ಸೊಗಸಾಗಿ ನೀಡಬೇಕು, ಪುಟ  ವಿನ್ಯಾಸ  ಹೇಗಿರಬೇಕು ಎಂಬುದೇ ಇವತ್ತು  ಚರ್ಚೆಯ ವಿಷಯ.  ಚುನಾವಣೆ ಫಲಿತಾಂಶ ಬಂದ ಮರುದಿನದ ಪತ್ರಿಕೆಯನ್ನು  ನೀವೆಲ್ಲ   ನೋಡಿರಬಹುದು.  ಇಂಗ್ಲಿಷ್ ಪತ್ರಿಕೆಗಳಿಗೆ ಸೀಮಿತವಾಗಿದ್ದ   ಆರಡಿ-ಮೂರಡಿ  ಗಾತ್ರದ  ತಲೆ ಬರಹ  ಕನ್ನಡ  ಮಾಧ್ಯಮ ಲೋಕವನ್ನೂ  ಆವರಿಸಿದೆ! ಗ್ರಾಫಿಕ್ಸ್, ಪೋಟೊಗಳನ್ನು  ತೂರಿಸಿ  ಪುಟ ವಿನ್ಯಾಸದಲ್ಲಿ   ಆಟ ಆಡುವುದು ಮಾಮೂಲಿಯಾಗಿದೆ.  ಇದು ಉತ್ತಮ ಬೆಳವಣಿಗೆ ಎಂದು ಕೆಲವರು ಹೇಳಿದರೆ, ಸುದ್ದಿ  ಪತ್ರಿಕೆಗಳು ಸುದ್ದಿಗೆ  ಮಹತ್ವ  ನೀಡಬೇಕು  ಎಂದು ವಾದಿಸುವ ಮಂದಿಯೂ  ಇದ್ದಾರೆ. ಆ ಚರ್ಚೆ ನಮಗೆ ಸಂಬಂಸಿದ್ದಲ್ಲ  ಬಿಡಿ!

ಚುನಾವಣೆ ಫಲಿತಾಂಶದ ಮಾರನೇ ದಿನ  ಇಂಗ್ಲಿಷ್ ಪತ್ರಿಕೆಗಳಲ್ಲಿ  ಕೆಲವು ಚೆಂದದ ಮುಖ ಪುಟ ವಿನ್ಯಾಸ  ಕಂಡು ಬಂತು. ನನಗೆ ಅತ್ಯಂತ ಖುಷಿ ಕೊಟ್ಟಿದ್ದು  ‘ದಿ ಟೆಲಿಗ್ರಾಫ್’ ಪತ್ರಿಕೆಯ ಮುಖ ಪುಟ.  “HAND OF INDIA’  ಎಂಬ ತಲೆ ಬರಹದಡಿಯಲ್ಲಿನ  ಆ ಮುಖ ಪುಟದ  ಫೋಟೊವನ್ನು  ಇಲ್ಲಿ  ಹಾಕಿದ್ದೇನೆ.  (HAND OVER INDIA! ಅನ್ನೋ ತಲೆಬರಹ ಕೊಟ್ಟಿದ್ದರೆ  ಇನ್ನೂ  ಸೊಗಸಾಗಿ ಇರುತ್ತಿತ್ತೇನೋ!!!) ಅದನ್ನು  ಬಿಟ್ಟರೆ  ಏಷ್ಯನ್ ಏಜ್ ಪತ್ರಿಕೆಯ ‘KING CONG’ ಎಂಬ ತಲೆ ಬರಹ ಕೂಡ  ಸೊಗಸಾಗಿತ್ತು. ಕನ್ನಡ  ಪತ್ರಿಕೆಗಳ  ಪುಟ ವಿನ್ಯಾಸವೂ ಯಾವ ಇಂಗ್ಲಿಷ್ ಪತ್ರಿಕೆಗಿಂತ ಕಡಿಮೆಯಾಗೇನೂ ಇರಲಿಲ್ಲ…

ಪುಟ ವಿನ್ಯಾಸ ಎಂದರೆ  ಅಡ್ಡ  ಪಟ್ಟಿ, ಉದ್ದ  ಪಟ್ಟಿಯನ್ನು  ನೀಡಿ ಬಣ್ಣದಲ್ಲಿ  ಆಟ ಆಡುವ ವಸ್ತುವಲ್ಲ.  ವಿಷಯಕ್ಕೆ  ತಕ್ಕಂತೆ ಮುಖಚಿತ್ರ ಇರಬೇಕು…ಇದು ನನ್ನ  ವೈಯಕ್ತಿಕ ಅಭಿಪ್ರಾಯ ಅಷ್ಟೆ…

→ 1 CommentCategories: ಕ್ರಿಯೇಟಿವ್ ಪೇಜ್

ಹಾಗೆ ಸುಮ್ಮನೆ ಬರೆದಿದ್ದು…

May 3, 2009 · 2 ಅನಿಸಿಕೆಗಳು

ಹೈಸ್ಕೂಲ್‌ಗೆ ಹೋಗುತ್ತಿದ್ದ  ಕಾಲದಲ್ಲಿ  ಫೆಬ್ರವರಿ-ಮಾರ್ಚ್ ತಿಂಗಳು ಅಂದರೆ ನಮಗೆಲ್ಲ  ಸಂಭ್ರಮದ ಮಾಸ. ಪಾಠವೆಲ್ಲ  ಮುಗಿದಿದ್ದರೂ, ತಪ್ಪದೇ ಶಾಲೆಗೆ ಹೋಗುತ್ತಿದ್ದೆವು. ಪಾಠ ಜೋರಾಗಿ ನಡೆಯುತ್ತಿದ್ದ  ಕಾಲದಲ್ಲೇ  ಶಾಲೆಗೆ ಚಕ್ಕರ್ ಹೊಡೆಯುವ ನಾವು, ಶಾಲೆಯಿಂದ ಬರುವಾಗ ಆಲೆಮನೆ ಸಿಗುತ್ತದೆ ಎಂಬ ಕಾರಣಕ್ಕಾಗಿ  ತುಂಬಾ ಶ್ರದ್ದೆಯಿಂದ  ಶಾಲೆಗೆ  ಹೋಗುತ್ತಿದ್ದೆವು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ!

ರೈತರು ಗದ್ದೆಯಲ್ಲಿ  ಬೆಳೆದ ಕಬ್ಬಿನ ರಸವನ್ನು ತೆಗೆದು ಬೆಲ್ಲ  ಮಾಡುವ ಪ್ರಕ್ರಿಯೆಗೆ ಮಲೆನಾಡಿನ ಭಾಷೆಯಲ್ಲಿ  ‘ಆಲೆಮನೆ’ ಅನ್ನುತ್ತಾರೆ. ಕಬ್ಬನ್ನು ಅರೆಯುವ ಸಾಧನ ಒಂತರಹ ಎತ್ತಿನ ಗಾಡಿಯಂತಹದ್ದು! ಆದರೆ ಈ ಯಂತ್ರ  ಎಳೆಯಲು ಎತ್ತಿಗೆ ಬದಲಾಗಿ ಕೋಣವನ್ನು ಬಳಸುತ್ತಾರೆ. ಅದು ಯಾಕೆ ಎಂಬುದು ನನಗೆ ಇನ್ನೂ  ಅರ್ಥವಾಗಿಲ್ಲ. ತಾರತಮ್ಯತೆ ಹೋಗಲಾಡಿಸುವ ಉದ್ದೇಶದಿಂದ  ಇರಬಹುದು ಅಂದುಕೊಂಡಿದ್ದೇನೆ!

ನಮ್ಮ ಶಾಲೆ ಮತ್ತು ಮನೆಯ ಮಾರ್ಗಮಧ್ಯದಲ್ಲಿ  ಗೀಜಗಾರು ಅಂತಾ ಊರಿದೆ. ಹಕ್ಕಲುದಿಂಬದ ಗದ್ದೆ  ಬಯಲು ಎಂಬ ಪರ್ಯಾಯ ನಾಮವೂ ಅದಕ್ಕಿದೆ! ಆ ಗದ್ದೆ  ಬಯಲಿನ ಒಂದು ಮೂಲೆಯಲ್ಲಿ   ಪ್ರತಿ ವರ್ಷ ಆಲೆಮನೆ ನಡೆಯುತ್ತಿತ್ತು. ಆಲೆ ಕಣ ಅಂತಲೇ ಆ ಜಾಗ ನಮಗೆಲ್ಲ  ಚಿರಪರಿಚಿತ.   ಸುಮಾರು ೧೫-೨೦ ದಿನಗಳ ತನಕ ೪೦-೫೦ ಮನೆಗಳ ಆಲೆಮನೆ ನಡೆಯುತ್ತಿತ್ತು. ಆಹ್ವಾನ ಇರಲಿ, ಇರದೇ ಇರಲಿ ಒಂದಷ್ಟು  ಹುಡುಗರ ಗ್ಯಾಂಗ್ ಸಂಜೆ ೫.೧೫ಕ್ಕೆ ಆಲೆ ಕಣದಲ್ಲಿ  ಹಾಜರ್! ಕಬ್ಬಿನ  ಹಾಲು, ಕೊಪ್ಪರಿಗೆಯಲ್ಲಿ  ಕೊತ ಕೊತ ಕುದಿಯುವ ಬಿಸಿ ಬಿಸಿ ಬೆಲ್ಲ,  ಹಕ್ಕಲುದಿಂಬದ ತಿಮ್ಮನ ಬೈಗುಳ…

ಈ ಸಲ ಊರಿಗೆ ಹೋದಾಗ ವರದಹಳ್ಳಿಗೆ ಹೋಗಿದ್ದೆ. ಅಲ್ಲಿಂದ ಬರುತ್ತಿರುವಾಗ ಹಕ್ಕಲು ದಿಂಬದ ಗದ್ದೆ  ಬಯಲು ಕಣ್ಣಿಗೆ ಬಿತ್ತು. ಆಲೆ ಕಣವಿದ್ದ  ಜಾಗದಲ್ಲಿ  ಹುಲ್ಲು  ಬೆಳೆದು ನಿಂತಿದೆ. ಕೋಣವನ್ನು ಕಟ್ಟಿ  ಹಾಕುತ್ತಿದ್ದ  ಹಟ್ಟಿ  ಕಾಣದಾಗಿದೆ…ಮನೆಗೆ ಬಂದವನೇ ‘ಈ ಸಲ ಆಲೆಮನೆ ಇಲ್ಲಾ’  ಅಂತಾ ಅಮ್ಮನನ್ನು ಕೇಳಿದೆ.  ಕಳೆದ ನಾಲ್ಕಾರು ವರ್ಷದಿಂದ ಯಾರು ಗದೆಯಲ್ಲಿ  ಕಬ್ಬು ಹಾಕುತ್ತಿಲ್ಲ …ಅಮ್ಮ  ಮಾತು ಮುಗಿಸುತ್ತಿದ್ದಂತೆ, ವರದಹಳ್ಳಿಯಲ್ಲಿ  ನಾಳೆ ಆಲೆಮನೆ ಇದೆ. ಕರೆದು ಹೋಗಿದ್ದಾರೆ…ತಂಗಿ ಮಾತಿಗೆ ಶುರುವಿಟ್ಟಳು.

ಕಿವಿ ನೆಟ್ಟಗಾದರು ಬಸ್‌ಗೆ ಟಿಕೆಟ್ ಬುಕ್ ಮಾಡಿಸಿ ಆಗಿಹೋಗಿತ್ತು.  ಟಿಕೆಟ್ ಕ್ಯಾನ್ಸಲ್ ಮಾಡಿಸಬಹುದಾಗಿತ್ತೇನೋ, ಆದರೆ ಸುದ್ದಿ  ಸಂಪಾದಕರಿಗೆ ಫೋನ್ ಮಾಡಿ  ಒಂದು ದಿನ ಹೆಚ್ಚುವರಿ ರಜೆ ಪಡೆಯುವುದು ಶಾನೇ ಕಷ್ಟದ  ಕೆಲಸವಾಗಿತ್ತು. ಹಾಗಾಗಿ ಒಲ್ಲದ  ಮನಸ್ಸಿನಿಂದ ಬೆಂಗಳೂರಿನ ಹಾದಿ ಹಿಡಿದುಬಿಟ್ಟೆ…

ಕೆನ್‌ವೋಲಾಗೆ ಹೋಗಿ ಎರಡು ಲೋಟ ಕಬ್ಬಿನ ಹಾಲು ಕುಡಿದೆ. ಆದರೂ ಸಮಾಧಾನವಾಗಲಿಲ್ಲ.  ನಿತ್ಯವೂ ಆಲೆಮನೆಗೆ ಹೋಗುವ ನಮಗೆ ಬೈಯ್ಯುತ್ತಾ,  ಕೊಪ್ಪರಿಗೆಯಿಂದ ಕೊತ-ಕೊತ ಕುದಿಯುವ ಜೋನಿ ಬೆಲ್ಲವನ್ನು  ಪ್ರೀತಿಯಿಂದ ನೀಡುತ್ತಿದ್ದ   ಹಕ್ಕಲು ದಿಂಬದ ತಿಮ್ಮ, ಎಷ್ಟು  ದುಡ್ಡು  ಕೊಟ್ಟರೂ, ಬೆಂಗಳೂರಿನ ಯಾವ ಕೆನ್‌ವೊಲಾದಲ್ಲೂ  ಸಿಗುವುದೇ  ಇಲ್ಲ  ಅಲ್ವಾ…?

***
ನನಗೆ ಎಚ್ಚರವಾದಾಗ ರೂಮಿನ ಗೆಳೆಯ ಕಂಪ್ಯೂಟರ್ ಬಿಚ್ಚಿಕೊಂಡು  ಧೂಳು ಒರೆಸುತ್ತಾ ಕುಳಿತ್ತಿದ್ದ.  ಇನ್ನು ಜಾಗವಿಲ್ಲ  ಎನ್ನುವಷ್ಟು  ಧೂಳು ಕಂಪ್ಯೂಟರಿನ ಹೊರ ಆವರಣವನ್ನು ಆವರಿಸಿತ್ತು. ಹಾಗಾಗಿಯೇ  ಅವ  ಧೂಳು ಒರೆಸಲು ಶುರುವಿಟ್ಟಿರಬೇಕು ಎಂದುಕೊಳ್ಳುತ್ತಾ, ಬೆಡ್ ಶೀಟ್ ಎಳೆದು ಮಲಗಿದೆ. ಪಕ್ಕನೆ, ಕಂಪ್ಯೂಟರ್ ಒಳಗೆ ಏನಿರಬಹುದೆಂಬ ಕುತೂಹಲ ಉಂಟಾಯಿತು. ಬೆಡ್ ಶೀಟ್ ಬದಿಗಿಟ್ಟು , ಎದ್ದು  ಕುಳಿತೆ.

ಇದು ರ್‍ಯಾಮ್,  ಮದರ್ ಬೋರ್ಡ್…ಅವ ಒಂದೊಂದೇ ಭಾಗ ಪರಿಚಯಿಸಿದ. ಮದರ್ ಬೋರ್ಡು ಕಂಪ್ಯೂಟರಿನ ಜೀವಾಳ. ಕಂಪ್ಯೂಟರ್ ವರ್ಕ್ ಆಗಲು ಪ್ರೋಸೆಸರ್ ಬೇಕು…ಅವ ಹೇಳುತ್ತಾ ಹೋದ, ನಾನು ಕೇಳುತ್ತಾ ಕುಳಿತೆ.  ಕಂಪ್ಯೂಟರ್ ಕೆಲಸ ಮಾಡುವ ರೀತಿ ನೋಡಿದರೆ, ಅದರ ಒಳ ಅಂಗಾಂಗಗಳೆಲ್ಲ  ತೀರಾ ಚಿಕ್ಕದು. ಒಂದು ಅಂಗೈನಷ್ಟು  ಅಗಲದ ಮದರ್‌ಬೋರ್ಡ್‌ಗೆ ಅದೆಷ್ಟು ಶಕ್ತಿಯಿದೆ ಅಲ್ವಾ? ಸಿಲಿಕಾನ್ ಚಿಪ್‌ನಲ್ಲಿ  ಅದೆಷ್ಟು  ಸಾಮರ್ಥ್ಯವಿದೆ. ಅದನ್ನು  ನೋಡಿದರೆ ನಮ್ಮ  ದೇಹದ ಎಷ್ಟೋ  ಅಂಗಾಗಳು  ‘ನ್ಯಾಷನಲ್ ವೇಸ್ಟ್’  ಅನ್ನಿಸದೆ ಇರಲಾರದು!!!

ಮದರ್ ಬೋರ್ಡ್, ಸಿಲಿಕಾನ್ ಚಿಪ್…ಇವುಗಳಲೆಲ್ಲ  ಕೆಪಾಸಿಟರ್, ಟ್ರಾನ್ಸಿಸ್ಟರ್, ರೆಸಿಸ್ಟರ್ ಬಿಟ್ಟು  ನನಗೆ ಮತ್ತೇನೂ ಕಾಣಿಸಲಿಲ್ಲ…ಕ್ಷಮಿಸಿ…ಅವಿಷ್ಟು  ಬಿಟ್ಟು  ಉಳಿದ ಭಾಗಗಳ ಪರಿಚಯ ನನಗಿರಲಿಲ್ಲ!  ನಿತ್ಯ ೧೨ ಗಂಟೆ ನಿದ್ದೆ  ಮಾಡುವ ನನ್ನ  ದಿನಚರಿ ಪೂರ್ಣಗೊಂಡಿರಲಿಲ್ಲ. ಹಾಗಾಗಿ ಮತ್ತೆ ಬೆಡ್‌ಶೀಟ್ ಎಳೆದುಕೊಂಡು ಮಲಗಿದೆ.

ಭೌತಶಾಸ್ತ್ರ(ಫಿಸಿಕ್ಸ್) ನನ್ನ  ಬಲು ಪ್ರಿಯವಾದ ವಿಷಯ. ಅದರಲ್ಲೇ  ಯಾವಾಗಲೂ ಕಡಿಮೆ  ಅಂಕ ಬರುತ್ತಿತ್ತು ಎಂಬ ವಿಚಾರ ಬದಿಗಿರಲಿ ಬಿಡಿ! ವಿಜ್ಞಾನದ ಉಪಯೋಗ ತಿಳಿಸುವ ವಿಷಯವದು. ಕಂಪ್ಯೂಟರ್ ಬಿಡಿ ಭಾಗ ನೋಡಿದ ನಂತರ ,  ಪದವಿಯ ಭೌತಶಾಸ್ತ್ರ  ವಿಜ್ಞಾನ ಜಗತ್ತಿನ ಕಿರು ಬೆರಳಿಗೆ ಸಮಾನವಾದದ್ದು ಅಂತಾ ಅನ್ನಿಸಲು ಶುರುವಾಯಿತು. ಮತ್ತೆ ಬೆಡ್ ಶೀಟ್ ಎಳೆದುಕೊಂಡು ಮಲಗಿದೆ. ಆದರೆ ರೆಸಿಸ್ಟರ್‌ನ ನೆನಪು ನನ್ನ ನಿದ್ದೆಯ  ಕೆಪಾಸಿಟಿಯನ್ನು ಕಡಿಮೆಮಾಡಿಬಿಟ್ಟಿತ್ತು!

ವಿಜ್ಞಾನ ಬರವಣಿಗೆ ಮತ್ತು ಬೋಧನೆ ಇವೆರಡೂ ತುಂಬಾ ಕಷ್ಟದ ವಿಷಯ.  ಎಂಎಸ್‌ಸಿ ಮುಗಿಸಿ, ಭಿನ್ನಾಣದೊಂದಿಗೆ ತರಗತಿಗೆ ಬರುವ ಅದೆಷ್ಟೋ ಮೇಡಂಗಳಿಗೆ ವಿಜ್ಞಾನ ಬೋಧನೆ ಮಾಡಲು ಬರುತ್ತಿರಲಿಲ್ಲ. ಬೋಸಲು ಬರುತ್ತಿರಲಿಲ್ಲ ಅನ್ನುವುದಕ್ಕಿಂತ ಅವರು ಮಾಡುವ ಪಾಠ ನಮಗೆ ಅರ್ಥವಾಗುವುತ್ತಿರಲಿಲ್ಲ  ಅನ್ನುವುದು ಸೂಕ್ತವೇನೋ! ಇನ್ನು, ಎ.ಪಿ ಭಟ್ಟರಂಥ ಪ್ರಾಧ್ಯಾಪಕರು  ನಡು ಮಧ್ಯಾಹ್ನದ  ಅವಯಲ್ಲಿ ತರಗತಿಗೆ ಬಂದರೂ, ನಮ್ಮ  ನಿದ್ದೆ  ಓಡಿಹೋಗುತ್ತಿತ್ತು. ಬಹುಶಃ ಕೆಪಾಸಿಟರ್, ರೆಸಿಸ್ಟರ್ ಅನ್ನುವ ಪದಗಳಾದರೂ ಇವತ್ತು ನನಗೆ ನೆನಪಿದೆ ಅಂದರೆ, ಅದರ ಹಿಂದೆ ಭಟ್ಟರ  ಪಾಠದ ಕೈವಾಡವಿದೆ.

ವಿಜ್ಞಾನ ಬರವಣಿಗೆಯೂ ಹಾಗೆ. ಅನಂತ್ ಚಿನಿವಾರ್, ನಾಗೇಶ್ ಹೆಗಡೆಯಂಥ ಬೆರಳೆಣಿಕೆಯ ಮಂದಿ ಬರೆದ ವೈಜ್ಞಾನಿಕ ಬರಹಗಳು ಮಾತ್ರ ಬಾಯಿ ಚಪ್ಪರಿಸಿಕೊಂಡು ಓದುವಂತೆ ಇರುತ್ತವೆ. ಕನ್ನಡ ಪತ್ರಿಕೆಗಳು ವಿಜ್ಞಾನಕ್ಕೆ  ನೀಡುವ ಆದ್ಯತೆಯೂ ಅಷ್ಟರಲ್ಲಿಯೇ ಇದೆ ಬಿಡಿ!  ಸಾಹಿತಿಕ, ವೈಚಾರಿಕ ಬರಹಗಳೆಲ್ಲ  ಒಂದು ಹಂತದವರೆಗೆ ಓದುಗರಿಗೆ ಇಷ್ಟವಾಗುತ್ತವೆ.  ಆದರೆ ವೈಜ್ಞಾನಿಕ ಬರಹಗಳು ಹಾಗಲ್ಲ. ಈ ಬರಹಗಳಿಗೆ ಸದಾ ಜೀವಂತಿಕೆ ಇರುತ್ತದೆ. ವಿಜ್ಞಾನ ನಿತ್ಯವೂ ನಮ್ಮ ಆಸಕ್ತಿಯನ್ನು ಕೆರಳಿಸುತ್ತದೆ. ಆದಾಗ್ಯೂ ಕನ್ನಡ  ಬರಹ ಜಗತ್ತಿನಲ್ಲಿ  ವೈಜ್ಞಾನಿಕ ಬರಹಗಾರರ ಕೊರತೆ ಎದ್ದು  ಕಾಣುತ್ತಿದೆ ಅಂದುಕೊಳ್ಳುವ ಹೊತ್ತಿಗೆ ನಿದ್ದೆ ಮರುಕಳಿಸಿತ್ತು.

***
ಕಣ್ಣಾ ಮುಚ್ಚೆ, ಗಾಡೆ ಗೂಡೆ, ಉದ್ದಿನ ಹುರುಟೆ…

ಈ ಸಾಲು ಕೇಳುತ್ತಿದ್ದಂತೆ  ನಮ್ಮೆಲ್ಲರ ಆಲೋಚನೆಯೂ  ಒಮ್ಮೆ  ಸವೆದುಹೋದ ಬದುಕಿನ ಪುಟಗಳತ್ತ  ಸಾಗುತ್ತದೆ. ನಾವೆಷ್ಟೇ   ಬೇಡ ಅಂದುಕೊಂಡರೂ ಕೂಡಾ, ಆ ಸಾಲು ನಮ್ಮನ್ನು  ಬಾಲ್ಯಕ್ಕೆ ಕೊಂಡೊಯ್ಯುತ್ತದೆ. ನಾವು ಅಡಗಿ ಕುಳಿತುಕೊಳ್ಳುತ್ತಿದ್ದ  ಹಳೆ ಮನೆಯ ಕೊಣೆಗಳು ನೆನಪಾಗುತ್ತವೆ. ಹಿತ್ತಲಿನ ಅಂಗಳ, ಮುಂಬದಿಯ ಮೂಲೆಗಳ…ಹಿಂದಿನ  ನೆನಪುಗಳೆಲ್ಲ  ಒತ್ತರಿಸಿ ಬರುತ್ತದೆ.

ನಾವೆಲ್ಲ  ಚಿಕ್ಕವರಿದ್ದಾಗ  ಪರೀಕ್ಷೆ ಮುಗಿದು, ಬೇಸಿಗೆ ರಜೆ ಬರುವುದನ್ನೇ ಕಾಯುತ್ತಿದ್ದೆವು!  ಬೇಸಿಗೆ ರಜೆ ಬಂತೆಂದರೆ, ಸಂಭ್ರಮವೋ ಸಂಭ್ರಮ. ಊರು ತುಂಬೆಲ್ಲ  ಹುಡುಗರ ಹಿಂಡು-ಹಿಂಡು! ಮುಗಿಲು ಮುಟ್ಟುವಷ್ಟು  ಗಲಾಟೆ. ( ಆದರೂ, ಮಹಾನಗರಿ ಬಸ್ಸು-ಕಾರುಗಳ  ಘರ್ಜನೆಯ ಎದುರು ನಾವು ಸೋಲನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ) ಊರಿನವರ್‍ಯಾರಿಗೂ ಮಧ್ಯಾಹ್ನ  ನಿದ್ದೆ  ಮಾಡಲು ಬಿಡುತ್ತಿರಲಿಲ್ಲ!  ಪ್ರತಿ ಮನೆಯ ಅಂಗಳವೂ ಆಟದ ಮೈದಾನ.

ಅಡಿಕೆ ಸುಗ್ಗಿಗೆ ಚಪ್ಪರ ಹಾಕುವುದು ಮಲೆನಾಡಿನ ರೂಢಿ. ಅಡಿಕೆ ಮರದ ಕಂಬಗಳನ್ನು ಬಳಸಿ ಮಾಡುತ್ತಿದ್ದ  ಮನೆಯಂಗಳದ ಚಪ್ಪರ, ನಮಗೆಲ್ಲ  ‘ಕಂಬ-ಕಂಬ’ ಎಂಬ ಆಟದ ವೇದಿಕೆಯಾಗಿತ್ತು! ಕಂಬ ಸಿಕ್ಕವರೆಲ್ಲ  ಗೆದ್ದರು, ಸಿಗದವರು  ಔಟ್(ಕಳ್ಳ) ಎಂಬುದು ಆ ಆಟದ ನಿಯಮ. ಹಾಗಾಗಿ ಕಂಬಗಳ ಲೆಕ್ಕಾಚಾರದಿಂದಲೇ ಎಷ್ಟು  ಹುಡುಗರು ಊರಲ್ಲಿ  ಇದ್ದರು  ಎಂಬುದು ತಿಳಿಯುತ್ತಿತ್ತು.

ಅಂದಹಾಗೆ  ಬೇಸಿಗೆ ರಜೆಯಲ್ಲಿ   ನಮ್ಮೂರಿನಲ್ಲಿ  ಆ ಪರಿ ಹುಡುಗರು ಸೇರಲು ಕಾರಣವಿತ್ತು. ಅಜ್ಜಿ  ಮನೆ ಎಂಬ ಮಮತೆಯೊಂದು ಊರನ್ನು ಆವರಿಸಿತ್ತು. ಹೌದು,  ನಾವು ಚಿಕ್ಕವರಿದ್ದಾಗ  ಅಜ್ಜಿ  ಮನೆಗೆ(ಅಮ್ಮನ ತವರು) ಹೋಗುವುದು ಅಂದರೆ ತುಂಬಾ  ಖುಷಿಯ ವಿಚಾರ. ಬೇಸಿಗೆ ರಜೆ, ಅಕ್ಟೋಬರ್ ರಜೆಯಲ್ಲಿ  ಕನಿಷ್ಠ ೧೫ದಿನವಾದರೂ ಅಜ್ಜಿ  ಮನೆಯಲ್ಲಿ  ಉಳಿದು, ಸುತ್ತಾಡಿಕೊಂಡು ಬರುವ ವಾಡಿಕೆ.  ಪರ ಊರಿನ ಮಂದಿ, ಅಜ್ಜಿ  ಮನೆಯನ್ನು ಅರಸಿಕೊಂಡು ನಮ್ಮೂರಿಗೆ ಬರುವಾಗ, ನಾವು ಊರಲ್ಲೇ  ಇರುವುದು. ಅವರು ಮನೆಗೆ ಮರಳುತ್ತಿದ್ದಂತೆ, ನಾವು ನಮ್ಮ  ಅಜ್ಜಿ  ಮನೆ ಕಡೆ ಹೆಜ್ಜೆ ಹಾಕುವುದು…ಇದು ಆವತ್ತಿನ ದಿನ ನಮ್ಮೂರಿನಲ್ಲಿದ್ದ  ಅಲಿಖಿತ ನಿಯಮ!

ಈಗ ನಮ್ಮೂರು ಮೊದಲಿನಂತಿಲ್ಲ.  ಕೇವಲ ನಮ್ಮೂರು ಮಾತ್ರವಲ್ಲ, ರಾಜ್ಯದ ಬಹುತೇಕ ಹಳ್ಳಿಗಳಲ್ಲಿ  ಹಿಂದಿನ ಸಡಗರ, ವೈಭವವಿಲ್ಲ.  ಏಪ್ರಿಲ್-ಮೇ ತಿಂಗಳಲ್ಲಿ  ಅಜ್ಜಿ  ಮನೆಗೆ ಬರುವ ಮಂದಿಯೂ  ಇಲ್ಲ. ಅಜ್ಜಿ  ಮನೆ ಅರಸಿಕೊಂಡು ಹೋಗುವ ಹುಡುಗರೂ ಇಲ್ಲ.  ಅತ್ತೆ, ಮಾವ, ದೊಡ್ಡಾಯಿ…ಇತ್ಯಾದಿ ಪದಗಳೇ ಮರೆತು ಹೋದಂತಾಗುತ್ತಿದೆ. ಇವತ್ತಿನ  ೩-೪ನೇ ತರಗತಿ ಮಕ್ಕಳು  ಅಜ್ಜಿ  ಮನೆಗ ಹೋಗಲು ಬಿಲ್‌ಕುಲ್ ಒಪ್ಪುವುದಿಲ್ಲ.  ಒಪ್ಪುವುದಿಲ್ಲ  ಅನ್ನುವುದಕ್ಕಿಂತ,  ಪಾಲಕರು ಕಳುಹಿಸುವುದಿಲ್ಲ. ಸ್ವಿಮ್ಮಿಂಗ್ ಕ್ಲಾಸು, ಡಿಸ್ಕೊ  ಕ್ಲಾಸು, ಟ್ಯೂಷನ್…ಇತ್ಯಾದಿಗಳನ್ನು ಬಿಟ್ಟು  ಮತ್ತ್ಯಾವ ಕೆಲಸ ಮಾಡಿದರೂ ಟೈಂ ವೇಸ್ಟ್  ಅನ್ನುವ ಪಾಲಕರ ಸಂಖ್ಯೆಯೇ ಹೆಚ್ಚಾಗುತ್ತಿದೆ!

ಉದ್ಯೋಗದ ನಿಮಿತ್ತ  ಮಹಾನಗರಗಳ ಜಾಡು ಹಿಡಿದಿರುವವರಿಗೆ, ಹುಟ್ಟಿ  ಬೆಳೆದ ಮನೆಯನ್ನು  ವರ್ಷಕ್ಕೊಮ್ಮೆ  ಕಾಣುವುದೇ ಕಷ್ಟದ  ಕೆಲಸವಾಗಿದೆ! ವಾಸವಾಗಿರುವ ಮನೆ ಹುಟ್ಟೂರಿನಂತಾದರೆ, ಆಫೀಸು ಒಂತರಹ  ಅಜ್ಜಿಮನೆ!  ಅಂದಹಾಗೆ, ನಾವೆಲ್ಲ  ಪಿಯುಸಿ  ಕಳೆಯುವವರೆಗಾದರೂ, ಅಜ್ಜನ ಮನೆಯಲ್ಲಿ ನ  ಚೆಂದದ ಅತ್ತಿಗೆ ನೋಡಲ್ಕಿಕಾದರೂ ಅಜ್ಜಿ ಮನೆಗೆ ಹೋಗುತ್ತಿದ್ದೆವು ಮಾರಾಯ್ರೆ!
(ಸೂಚನೆ:- ಈ ಮೂರು ಬರಹಗಳು ವಿಜಯ ಕರ್ನಾಟಕದ  ಸಿಂಪ್ಲಿ  ಸಿಟಿ ಪುಟದಲ್ಲಿ   ಪ್ರಕಟಗೊಂಡಿದೆ)

→ 2 CommentsCategories: ಕ್ರಿಯೇಟಿವ್ ಪೇಜ್